ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 28, 2013

ಮೈಸೂರು ಅರಸರ ದೌರ್ಬಲ್ಯ - ಹೈದರಾಲಿಯ ಪ್ರಾಬಲ್ಯ

     ೧೮ನೆಯ ಶತಮಾನದ ಮಧ್ಯಭಾಗ  ಕರ್ನಾಟಕದ ಪಾಲಿಗೆ ಒಂದು ದುರದೃಷ್ಟಕರ ಅವಧಿಯೆನ್ನಬಹುದು. ಮೈಸೂರು ಸಂಸ್ಥಾನ ಅರಾಜಕತೆ ಮತ್ತು ಪಿತೂರಿಗಳಿಗೆ ಒಳಗಾಗಿ ಅಧಿಕಾರ ಕಳೆದುಕೊಂಡದ್ದು ಒಂದೆಡೆಯಾದರೆ, ಬಲಿಷ್ಠ ಸಂಸ್ಥಾನವಾಗಿದ್ದ ಕೆಳದಿ ಸಂಸ್ಥಾನದ ಆಳ್ವಿಕೆ ಸಹ ರಕ್ತಸಿಕ್ತ ಮತ್ತು ದುರಂತ ಅಂತ್ಯ ಕಂಡ ಸಮಯವದು. ಕನ್ನಡಿಗರ ಹೆಮ್ಮೆಯೆನಿಸಿದ್ದ ಈ ಎರಡೂ ಸಂಸ್ಥಾನಗಳ ನಾಶಕ್ಕೆ ಕಾರಣನಾದ ವ್ಯಕ್ತಿ ಒಬ್ಬನೇ! ಆತನೇ ಹೈದರಾಲಿ. ಮೈಸೂರು ಅರಸರ ದೌರ್ಬಲ್ಯ ಹೈದರಾಲಿಯ ಪ್ರಾಬಲ್ಯಕ್ಕೆ ಕಾರಣವಾಯಿತು. ಹೈದರಾಲಿಯ ತಂದೆ ಫತಾಹ್ ಮುಹಮದ್ ಕೋಲಾರದಲ್ಲಿ ಹುಟ್ಟಿದವನಾಗಿದ್ದು, ಕರ್ನಾಟಕದ ನವಾಬರ ಸೈನ್ಯದಲ್ಲಿ ೫೦ ಸೈನಿಕರ ಕಣ್ಗಾವಲು ಪಡೆಯ   ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದು, ನಂತರದಲ್ಲಿ ಮೈಸೂರು ಒಡೆಯರರ ಸೈನ್ಯಕ್ಕೆ ಸೇರಿ ಸೈನ್ಯದಲ್ಲಿ ಉನ್ನತ ಹುದ್ದೆ ಗಳಿಸಿದವನು. ಇವರ ಮೂಲ ವಂಶದ ಬಗ್ಗೆ ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಪರ್ಷಿಯಾ ಮೂಲವಂಶಸ್ಥರೆಂದು ಒಂದು ವರದಿಯಿದ್ದರೆ, ಆಫ್ಘಾನಿಸ್ತಾನದ ಮೂಲದವರೆಂದು, ಅರಬರ ಖುರೇಷಿ ವಂಶಸ್ಥರೆಂದು ಸಹ ಹೇಳುತ್ತಾರೆ. ಫತಾ ಮುಹಮ್ಮದನ ಸೇವೆಯನ್ನು ಮೆಚ್ಚಿ ಒಡೆಯರರು ಬೂದಿಕೋಟೆಯನ್ನು ಆತನಿಗೆ ಜಹಗೀರಾಗಿ ನೀಡಿದ್ದು, ಅವನು ಅಲ್ಲಿನ ನಾಯಕನಾಗಿ ನೇಮಿತಗೊಂಡಿದ್ದನು. ಆ ಸಮಯದಲ್ಲಿ (ಸುಮಾರು ೧೭೧೭-೨೨ರಲ್ಲಿ) ಜನಿಸಿದ ಹೈದರಾಲಿ ಫತಾ ಮುಹಮ್ಮದನ ಐದನೆಯ ಮಗ ಹಾಗೂ ಮೂರನೆಯ ಹೆಂಡತಿಯ ಎರಡನೆಯ ಮಗನಾಗಿದ್ದನು. ಫತಾ ಮುಹಮದ್ ಕಾಳಗವೊಂದರಲ್ಲಿ ಮೃತನಾದ ನಂತರದಲ್ಲಿ ಆರ್ಕಾಟ್ ನವಾಬರ ಸೈನ್ಯಕ್ಕೆ ಸೋದರ ಶಾಬಾಜನೊಂದಿಗೆ ಸೇರಿದ ಹೈದರಾಲಿ ಅಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ. ನಂತರ ಶ್ರೀರಂಗಪಟ್ಟಣಕ್ಕೆ ಬಂದು ಅಲ್ಲಿ ಒಡೆಯರರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಹೈದರನ ಚಿಕ್ಕಪ್ಪನ ಮೂಲಕ ಇಮ್ಮಡಿ ಕೃಷ್ೞರಾಜ ಒಡೆಯರರ ಪ್ರಧಾನ ಅಮಾತ್ಯ, ಸೇನಾಧಿಪತಿ ಮತ್ತು ವಾಸ್ತವಿಕ ಆಳ್ವಿಕೆ ನಡೆಸುತ್ತಿದ್ದ ದೇವರಾಜ ಅರಸು ಮತ್ತು ಅವನ ಸಹೋದರ ನಂಜರಾಜ ಅರಸರ ಪರಿಚಯ ಮಾಡಿಕೊಂಡು, ಒಡೆಯರರ ಸೈನ್ಯದಲ್ಲಿ ಸೇರಿಕೊಂಡರು. ೧೦೦ ಅಶ್ವಾರೋಹಿಗಳು ಮತ್ತು ೨೦೦೦ ಪದಾತಿಗಳ ಮುಖ್ಯಸ್ಥನಾದ ಶಾಬಾಜನ ಕೈಕೆಳಗೆ ಹೈದರ್ ಸೇವೆ ಸಲ್ಲಿಸಿದ.
     ೧೭೪೮ರಲ್ಲಿ ಹೈದರಾಬಾದಿನ ನಿಜಾಮ ಖಮರುದ್ದಿನ್ ಖಾನ್ ಅಸಫ್ ಜಾ೧ ಮೃತನಾದಾಗ ಉತ್ತರಾಧಿಕಾರಕ್ಕಾಗಿ ಆತನ ಮಗ ನಾಸಿರ್ ಜಂಗ್ ಮತ್ತು ದಾಯಾದಿ ಮುಜಫ್ಫರ್ ಜಂಗ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದನ್ನು ಎರಡನೆಯ ಕರ್ನಾಟಕ ಕದನವೆಂದು ಕರೆಯುತ್ತಾರೆ. ಸ್ಥಳೀಯ ಪಾಳೆಯಗಾರರಲ್ಲದೆ ಬ್ರಿಟಿಷರು ಮತ್ತು ಫ್ರೆಂಚರೂ ಸಹ ಇದರಲ್ಲಿ ಭಾಗಿಯಾಗಿದ್ದರು. ನಂಜರಾಜ ಅರಸನ ನಾಯಕತ್ವದಲ್ಲಿ ದೊಡ್ಡ ಮೈಸೂರು ಸೈನ್ಯವೇ ನಾಸಿರ್ ಜಂಗನ ಪರವಾಗಿ ಹೊರಟಿತ್ತು. ದೇವನಹಳ್ಳಿಗೆ ಬಂದು ಮುಜಫ್ಫರ್ ಜಂಗನ ಸೈನ್ಯದ ಹಿಡಿತದಲ್ಲಿದ್ದ ದೇವನಹಳ್ಳಿ ಕೋಟೆಯನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಮೈಸೂರು ಸೈನ್ಯವೂ ಸೇರಿತ್ತು. ಎಂಟು ತಿಂಗಳುಗಳ ಕಾಲ ನಡೆದ ಈ ಕೋಟೆಯ ಯಶಸ್ವಿ ಗ್ರಹಣ ಕಾರ್ಯದಲ್ಲಿ ಹೈದರ್ ಸೋದರರು ತೋರಿದ ಪರಾಕ್ರಮಕ್ಕೆ ಮೆಚ್ಚಿ ಅವರಿಗೆ ಹೆಚ್ಚಿನ ಅಧಿಕಾರ ವಹಿಸಿಕೊಡಲಾಯಿತು. ೧೭೫೫ರ ವೇಳೆಗೆ ಹೈದರಾಲಿ ೩೦೦೦ ಪದಾತಿಗಳ ಮತ್ತು ೧೫೦೦ ಅಶ್ವಾರೋಹಿಗಳ ಪಡೆಯ ನಾಯಕನಾಗಿದ್ದ. ಅಲ್ಲದೆ ತನ್ನ ಗುರಿಯ ಸಾಧನೆಗಾಗಿ ಲೂಟಿಕಾರ್ಯದಲ್ಲೂ ತೊಡಗಿ ತನ್ನ ಬಲವನ್ನು ಮತ್ತು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದನೆಂದು ಹೇಳುತ್ತಾರೆ. ಅದೇ ವರ್ಷ ಆತನನ್ನು ದಿಂಡಿಗಲ್ಲಿನ ಫೌಜುದಾರನನ್ನಾಗಿಯೂ ನೇಮಿಸಲಾಯಿತು. ಆಗ ತನ್ನ ಸೈನ್ಯದ ತರಬೇತಿ ಮತ್ತು ಸಂಘಟನೆಯ ಸಲುವಾಗಿ ಫ್ರೆಂಚ್ ಸಲಹೆಗಾರರನ್ನೂ  ಉಳಿಸಿಕೊಂಡಿದ್ದ. ಜೊತೆಜೊತೆಗೆ ಫ್ರೆಂಚರ ಸೇವೆಯನ್ನೂ ಮಾಡಿದ್ದ ಹೈದರಾಲಿ ಮುಜಫ್ಫರ್ ಜಂಗ್ ಮತ್ತು ಚಂದಾ ಸಾಹೇಬರನ್ನೂ ಭೇಟಿಯಾಗಿದ್ದನೆಂದು ನಂಬಲಾಗಿದೆ. ನವಾಬ  ಮುಹಮ್ಮದ್ ಅಲಿಖಾನ್ ವಲ್ಲಾಜಾನನ್ನು ನಂಬದ ಹೈದರಾಲಿ ಆತನನ್ನು ದ್ವೇಷಿಸತೊಡಗಿದ್ದ. ನಂತರದ ವರ್ಷಗಳಲ್ಲಿ ಬ್ರಿಟಿಷರೊಂದಿಗೆ ಒಳ ಒಪ್ಪಂದಗಳನ್ನು ಮಾಡಿಕೊಳ್ಳಲು ಹೈದರಾಲಿಗೆ ಮುಹಮ್ಮದ್ ಅಲಿಖಾನ್ ವಲ್ಲಾಜಾ ಪರಿಣಾಮಕಾರಿಯಾಗಿ ಅಡ್ಡಿಯಾದನೆಂದು ಹೈದರಾಲಿ ದೂರುತ್ತಿದ್ದ.
     ಹೈದರಾಬಾದಿನ ನಿಜಾಮರಿಂದ ಮತ್ತು ಮರಾಠರಿಂದ ದಾಳಿಗಳಾಗುವ ಸಾಧ್ಯತೆಯಿದ್ದುದರಿಂದ ಹೈದರಾಲಿಯನ್ನು ದೇವರಾಜಅರಸನಿಗೆ ಸಹಾಯ ಮಾಡುವ ಸಲುವಾಗಿ ಕರೆಸಲಾಯಿತು. ಆಗ ಮೈಸೂರಿನ ಸೈನ್ಯ ಅಸ್ತವ್ಯಸ್ತವಾಗಿದ್ದು ಸಂಬಳ ಪಾವತಿ ವಿಷಯದಲ್ಲಿ ದಂಗೆಯೇಳುವ ಹಂತದಲ್ಲಿತ್ತು. ದಾಳಿಗಳಾಗುವ ಅಪಾಯದಿಂದ ದೇವರಾಜಅರಸು ಪಾರಾದ. ಹ್ಶೆದರ್ ಸೈನ್ಯದವರಿಗೆ ಸಂಬಳ ಪಾವತಿಗೆ ವ್ಯವಸ್ಥೆ ಮಾಡಿದ್ದಲ್ಲದೆ ದಂಗೆ ಎಬ್ಬಿಸಲು ಸಂಚು ಮಾಡಿದ್ದವರನ್ನು ಬಂಧಿಸಿದ. ನಂತರ ಮಲಬಾರಿನ ನಾಯರರ ವಿರುದ್ಧದ ದಾಳಿಗಳಿಗೆ ಮೈಸೂರು ಸೈನ್ಯದ ನಾಯಕತ್ವ ವಹಿಸಿದ. ಇದರಲ್ಲಿ ಆತನ ಪಾತ್ರದ ಬಗ್ಗೆ ಮೆಚ್ಚಿದ ಕಿರಿಯ ದೊರೆ ಇಮ್ಮಡಿ ಕೃಷ್ೞರಾಜ ಒಡೆಯರರಿಂದ ಹೈದರಾಲಿಗೆ ಫತಾ ಹೈದರ್ ಬಹಾದುರ್ ಅಥವ ನವಾಬ್ ಹೈದರ್ ಅಲಿಖಾನ್ ಎಂಬ ಬಿರುದಿನೊಂದಿಗೆ ಬೆಂಗಳೂರಿನ ಜಹಗೀರು ಸಹ ಸಿಕ್ಕಿತು. ೧೭೫೮ರಲ್ಲಿ ಮರಾಠರ ಬೆಂಗಳೂರು ಕೋಟೆಯ ಮುತ್ತಿಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ ಹೈದರ್ ೧೭೫೯ರ ಹೊತ್ತಿಗೆ ಪೂರ್ಣ ಮೈಸೂರು ಸೈನ್ಯದ ಹಿಡಿತ ಸಾಧಿಸಿದ್ದ. ಮರಾಠರೊಂದಿಗಿನ ಸತತ ಕಿರುಕುಳಗಳಿಂದಾಗಿ ಮೈಸೂರು ಸಂಸ್ಥಾನದ ಖಜಾನೆ ಹೆಚ್ಚುಕಡಿಮೆ ದಿವಾಳಿಯ ಹಂತದಲ್ಲಿತ್ತು. ಇದರಿಂದಾಗಿ ದೇವರಾಜಅರಸನ ನಿಧನಾನಂತರದಲ್ಲಿ ಮಂತ್ರಿಯಾಗಿದ್ದ ನಂಜರಾಜರಸನನ್ನು ರಾಜಮಾತೆ ಗಡೀಪಾರು ಮಾಡಬೇಕಾದ ಅನಿವಾರ್ಯತೆ ಬಂದೊದಗಿತು. ಆಸ್ಥಾನದಲ್ಲಿ ತನಗಿದ್ದ ಪ್ರಭಾವದಿಂದ ಇದನ್ನು ತನ್ನ ಪರವಾಗಿ ಬಳಸಿಕೊಂಡ ಚಾಣಾಕ್ಷ ಹ್ಶೆದರ್. ಹೈದರಾಲಿ ನಿರಕ್ಷರಕುಕ್ಷಿಯಾಗಿದ್ದರೂ ವ್ಯವಹಾರ ಚತುರ ಮತ್ತು ಚಾಣಾಕ್ಷನಾಗಿದ್ದ. ತನ್ನ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಖಂಡೇರಾವ್ ಎಂಬುವನನ್ನು ನೇಮಿಸಿಕೊಂಡಿದ್ದ. ಖಂಡೇರಾವ್ ಕರಾರುವಾಕ್ಕಾಗಿ ಲೆಕ್ಕಪತ್ರಗಳನ್ನು ಲೆಕ್ಕವಿಡುವ ಪದ್ಧತಿಯಿಂದ ಲೂಟಿ ಮಾಡಿದ ಹಣಕಾಸು, ಆಭರಣಗಳು, ವಸ್ತುಗಳು ಸೇರಿದಂತೆ ಎಲ್ಲದರ ಲೆಕ್ಕಗಳನ್ನು ಸರಿಯಾಗಿ ಇಡುವ ಮತ್ತು ಪರಿಶೀಲನೆ ಮಾಡುವ ರೀತಿಯಿಂದ ಯಾವುದೇ ಕಣ್ಣುತಪ್ಪಿಸುವ, ಮೋಸ ಮಾಡುವ ಅವಕಾಶ ಯಾರಿಗೂ ಇರಲಿಲ್ಲ. ಹೈದರಾಲಿಯ ಸಂಪತ್ತು ವೃದ್ಧಿ ಮತ್ತು ರಕ್ಷಣೆಗೆ ಆತನಿಂದ ಬಹಳ ಉಪಕಾರವಾಗಿದ್ದು, ಆತ ಅಧಿಕಾರದಲ್ಲಿ ಮೇಲೆ ಬರಲು ಇದೂ ಪ್ರಮುಖ ಪಾತ್ರ ವಹಿಸಿತ್ತು.
     ಹೈದರಾಲಿ ಮೇಲೆ ಬರುತ್ತಿದ್ದ ರೀತಿಯಿಂದ ರಾಜಮಾತೆ ಆತಂಕಿತಳಾಗಿದ್ದು, ಹೀಗೆಯೇ ಮುಂದುವರೆದರೆ ಅಧಿಕಾರಚ್ಯುತಿಯಾಗುವ ಸಂಭವ ಆಕೆಗೆ ಕಾಣಿಸುತ್ತಿತ್ತು. ಹೀಗಾಗಿ ೧೭೬೦ರಲ್ಲಿ ಖಂಡೇರಾಯನನ್ನು ಬಳಸಿಕೊಂಡು ಹೈದರನನ್ನು ಹೊರಹಾಕುವ ಸಂಚು ರೂಪಿತವಾಯಿತು. ಹ್ಶೆದರ್ ಅವಸರವಾಗಿ ಶ್ರೀರಂಗಪಟ್ಟಣವನ್ನು ಗೃಹಬಂಧನದಲ್ಲಿದ್ದ ಮಗ ಟಿಪ್ಪುಸುಲ್ತಾನ್ ಸೇರಿದಂತೆ ತನ್ನ ಸಂಸಾರವನ್ನು ಅಲ್ಲೇ ಬಿಟ್ಟು ಓಡಿಹೋಗಬೇಕಾಯಿತು. ಇದರಿಂದ ಹೈದರಾಲಿಗೆ ಹಿನ್ನಡೆಯಾಯಿತು. ತನ್ನ ಸೋದರ ಸಂಬಂಧಿ ಮಕ್ದುಮ್ ಆಲಿಯ ಸಹಕಾರದಿಂದ ಬಲ ವೃದ್ಧಿಸಿಕೊಂಡ ಆತ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರ ಸಹಾಯದಿಂದ ಶ್ರೀರಂಗಪಟ್ಟಣದೆಡೆಗೆ ಧಾವಿಸಿದ. ಆದರೆ, ಅಲ್ಲಿಗೆ ತಲುಪುವ ಮುನ್ನವೇ ೧೧೦೦೦ ಸೈನಿಕರ ಬಲದಿಂದ ಅವನನ್ನು ಎದುರಿಸಿದ ಖಂಡೇರಾಯನ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು. ಗಡೀಪಾರಾಗಿದ್ದ ನಂಜರಾಜರಸನ ಸಹಾಯ ಕೋರಿದ ಹೈದರನಿಗೆ ನಂಜರಾಜರಸ ತನ್ನ ಸೈನ್ಯವನ್ನೂ ಒದಗಿಸಿದ್ದಲ್ಲದೆ ದಳವಾಯಿ ಪಟ್ಟವನ್ನೂ  ವಹಿಸಿಕೊಟ್ಟನು. ಉತ್ತೇಜಿತನಾದ ಹೈದರ್ ಪುನಃ ಶ್ರೀರಂಗಪಟ್ಟಣದ ಮೇಲೇರಿ ಬಂದನು. ಸೈನ್ಯಗಳು ಮುಖಾಮುಖಿಯಾದಾಗ ಹೈದರ್ ನಡೆಸಿದ ಕುತಂತ್ರ ಫಲ ಕೊಟ್ಟಿತು. ಖಂಡೇರಾಯನ ಸೈನ್ಯದ ಪ್ರಮುಖ ಅಧಿಕಾರಿಗಳೊಂದಿಗೆ ಖಂಡೇರಾಯನನ್ನು ಹೈದರಾಲಿಗೆ ಹಿಡಿದುಕೊಡಲು ನಂಜರಾಜರಸನೊಂದಿಗೆ  ಒಪ್ಪಂದವಾಗಿರುವಂತೆ ಸೃಷ್ಟಿಸಿದ ಪತ್ರಗಳು ಖಂಡೇರಾಯನಿಗೆ ತಲುಪುವಂತೆ ಮಾಡಲಾಯಿತು. ಈ ಸಂಚಿನಿಂದ ಭಯಗೊಂಡ ಖಂಡೇರಾವ್ ಶ್ರೀರಂಗಪಟ್ಟಣಕ್ಕೆ ಓಡಿದ. ನಾಯಕನಿಲ್ಲದ ಸೈನ್ಯದೊಂದಿಗೆ ಸೆಣಸುವುದು ಕಷ್ಟವಾಗಲಿಲ್ಲ. ಹೈದರನಿಗೆ ಜಯವಾದ ನಂತರ ನಡೆದ ಮಾತುಕತೆಗಳ ಪರಿಣಾಮವಾಗಿ ಮೈಸೂರಿನ ಸಂಪೂರ್ಣ ಸೈನ್ಯದ ನಿಯಂತ್ರಣ ಹೈದರಾಲಿಗೆ ದಕ್ಕಿತು.
      ಮನೆಯ ಯಜಮಾನನ ಕೃಪೆಯಿಂದ ವಾಸಿಸಲು ಪಡೆದಿದ್ದ ಮನೆಯ ಯಜಮಾನಿಕೆಯನ್ನು ಕ್ರಮೇಣ ಆಶ್ರಯ ಪಡೆದವನೇ ಪಡೆದರೆ ಹೇಗಿರುತ್ತದೋ ಹಾಗೆಯೇ ಇಲ್ಲಿಯೂ ಆಯಿತೆನ್ನಬಹುದು. ದೂರದಲ್ಲಿರುವ ಮತ್ತು ಎದುರಿನಲ್ಲಿರುವ ಶತ್ರುವನ್ನು ಎದುರಿಸಬಹುದು. ಆದರೆ ಜೊತೆಯಲ್ಲೇ ಇದ್ದು ತಂತ್ರ-ಕುತಂತ್ರಗಳಿಂದ ಮೇಲೆ ಬರುವ ಹಿತಶತ್ರುಗಳನ್ನು ಎದುರಿಸುವುದು ಕಷ್ಟವೇ ಸರಿ. ಮೈಸೂರು ಸಂಸ್ಥಾನದ ರಾಜಮಾತೆ ಮತ್ತು ಸಂಸ್ಥಾನಕ್ಕೆ ನಿಷ್ಠರಾದವರು ಎದುರಿಸಿದ್ದ ಪರಿಸ್ಥಿತಿ ಇದೇ ಆಗಿತ್ತು. ಖಂಡೇರಾಯನನ್ನು ವಶಕ್ಕೊಪ್ಪಿಸುವುದೂ ಒಪ್ಪಂದದಲ್ಲಿ ಸೇರಿದ್ದರಿಂದ, ಅವನನ್ನು ವಶಕ್ಕೆ ಪಡೆದ ಹೈದರ್ ಬೆಂಗಳೂರಿನಲ್ಲಿ ಸೆರೆಯಲ್ಲಿರಿಸಿದ. ಖಂಡೇರಾಯನ ಬಂಧನದ ರೀತಿಯ ಬಗ್ಗೆ Maistre de La Tour ತನ್ನ The History of Hyder Shah, Alias Hyder Ali Kan Bahadur  ಎಂಬ ಪುಸ್ತಕದಲ್ಲಿ   ಈ ರೀತಿ ಹೇಳಿದ್ದಾನೆ: By virtue of his power as regent, Hyder spared his life and commuted  his  punishment into that of being shut up in an iron cage in the middle of  the most public place of Bangalore; where it is still to be seen, with the bones of this unhappy favourite, who lived two years in the cage, exposed to the insults of a populace that adored Hyder”.   ಹೈದರ್ ತನ್ನ ರಾಜಕೀಯ ಬಂದಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದ ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಷ್ಟೆ. ಒಟ್ಟಾರೆಯಾಗಿ, ೧೭೬೧ರಲ್ಲಿ ಅನಧಿಕೃತವಾಗಿ ಮೈಸೂರು ಸಂಸ್ಥಾನದ ಆಡಳಿತ ಹೈದರಾಲಿಯ ಕೈಗೆ ಬಂದು ಮೈಸೂರಿನ ಅನಭಿಷಿಕ್ತ ದೊರೆಯಾಗಿ ಆಳತೊಡಗಿದ. ಇದಾದ ಐದು ವರ್ಷಗಳಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ದೇಹಾವಸಾನ ೨೫-೪-೧೭೬೬ರಲ್ಲಿ ಶ್ರೀರಂಗಪಟ್ಟಣದಲ್ಲಿ ಆಯಿತು. ನಂತರದಲ್ಲಿ ಮೈಸೂರು ಸುಲ್ತಾನರ ಆಡಳಿತ ಘೋಷಣೆ ಮಾಡಿ ತನ್ನನ್ನು ಸುಲ್ತಾನ್ ಹೈದರ್ ಅಲಿಖಾನ್ ಎಂದು ಹೆಸರಿಸಿಕೊಂಡ. ಹೈದರಾಬಾದಿನ ನಿಜಾಮರೊಂದಿಗೆ ವ್ಯವಹರಿಸುವಾಗ ಆತ ಎಚ್ಚರಿಕೆಯಿಂದಿರುತ್ತಿದ್ದ, ಏಕೆಂದರೆ ಮುಘಲರ ಅಧಿಕೃತ ಫರ್ಮಾನಿನಂತೆ ದಕ್ಷಿಣ ಭಾರತದ ಎಲ್ಲಾ ಮುಸ್ಲಿಮ್ ಆಡಳಿತದ ಪ್ರದೇಶಗಳಿಗೆ ಹೈದರಾಬಾದ್ ನಿಜಾಮರೇ ಪ್ರಮುಖರೆಂದು ಹೇಳಲಾಗಿತ್ತು. ನಂತರದ ಕೆಲವು ವರ್ಷಗಳಲ್ಲಿ ಉತ್ತರ ಭಾಗದಲ್ಲೂ ತನ್ನ  ರಾಜ್ಯದ ವಿಸ್ತಾರ ಮಾಡಿದ. 
     ವಿಜಯನಗರದ ಸಾಮಂತ ಸಂಸ್ಥಾನವಾಗಿ ೧೩೯೯ರಿಂದ ೧೫೫೩ರವರೆಗೆ ಇದ್ದ ಮೈಸೂರಿನ ಅರಸೊತ್ತಿಗೆ, ಸ್ವತಂತ್ರವಾಗಿ ೧೫೫೩ರಿಂದ ೧೭೬೬ರವರೆಗೆ ವಿಜೃಂಭಿಸಿದ್ದು, ಈ ಕಾಲದಲ್ಲಿ ಕನ್ನಡನಾಡು ವೈಭವಯುತವಾಗಿ ಬೆಳಗಿತ್ತು. ಅನಧಿಕೃತವಾಗಿ ೧೭೬೧ರಲ್ಲಿ ಹೈದರಾಲಿ ಹಿಡಿತಕ್ಕೆ ಬಂದ ಈ ಅರಸೊತ್ತಿಗೆ, ೧೭೬೬ರಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ನಿಧನದೊಂದಿಗೆ ಅದಿಕೃತವಾಗಿ ಆತನ ತೆಕ್ಕೆಗೆ ಬಂದಿತು. ನಂತರ ಒಡೆಯರರ ಉತ್ತರಾಧಿಕಾರಿಗಳು ಸ್ವತಂತ್ರವಾಗಿ ಸಂಸ್ಥಾನದ ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಅವರ ದೌರ್ಬಲ್ಯವಲ್ಲದೇ ಮತ್ತೇನೂ ಅಲ್ಲ. ೧೭೬೧ರಿಂದ ೧೭೯೬ರವರೆಗೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಅಧೀನತೆಯಲ್ಲಿ ಇದ್ದ ಅರಸು ಮನೆತನದವರೆಂದರೆ, ಇಮ್ಮಡಿ ಕೃಷ್ೞರಾಜ ಒಡೆಯರ್ (೧೭೩೪-೧೭೬೬), ನಂಜರಾಜ ಒಡೆಯರ್ (೧೭೬೬-೧೭೭೨), ೭ನೆಯ ಚಾಮರಾಜ ಒಡೆಯರ್(೧೭೭೨-೧೭೭೬) ಮತ್ತು ೮ನೆಯ ಚಾಮರಾಜ ಒಡೆಯರ್(೧೭೭೬-೧೭೯೬). ನಂತರದಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿದ್ದವರೆಂದರೆ, ಮುಮ್ಮಡಿ ಕೃಷ್ೞರಾಜ ಒಡೆಯರ್(೧೭೯೯-೧೮೬೮), ೯ನೆಯ ಚಾಮರಾಜ ಒಡೆಯರ್ (೧೮೮೧-೧೮೯೪), ನಾಲ್ಮಡಿ ಕೃಷ್ೞರಾಜ ಒಡೆಯರ್ (೧೮೯೪-೧೯೪೦) ಮತ್ತು ಜಯಚಾಮರಾಜ ಒಡೆಯರ್(೧೯೪೦-೧೯೫೦).
     ಹೈದರಾಲಿಗೆ ಓದು-ಬರಹ ಬರುತ್ತಿರಲಿಲ್ಲವಾದರೂ ಆತ ಒಬ್ಬ ನಿಪುಣ ಯೋಧ. ಸಂದರ್ಭ, ಪರಿಸ್ಥಿತಿಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಕುಶಲ ಚಾಣಾಕ್ಷ. ಬ್ರಿಟಿಷರ ವಿರುದ್ದವಾಗಿ ಫ್ರೆಂಚರೊಂದಿಗೆ ಕೈಜೋಡಿಸಿದ್ದವನು. ತನ್ನ ಅನುಕೂಲಕ್ಕೆ ತಕ್ಕಂತೆ ಕೆಲವು ಸಂದರ್ಭದಲ್ಲಿ ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಆತನ ಇಚ್ಛೆ ಮಾತ್ರ ಕೈಗೂಡಲಿಲ್ಲ. ಆತ ಪರ್ಷಿಯನ್, ಕನ್ನಡ, ತೆಲುಗು, ಹಿಂದೂಸ್ತಾನಿ, ಮರಾಠಿ ಮತ್ತು ತಮಿಳು ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲವನಾಗಿದ್ದ. ಸಾಂಪ್ರದಾಯಿಕ ಮುಸಲ್ಮಾನರಂತೆ ಗಡ್ಡ ಬಿಡದಿದ್ದ ಆತ ಗಿಡ್ಡ ಮೂಗು, ದಪ್ಪ ಕೆಳತುಟಿ ಹೊಂದಿದ್ದವನಾಗಿದ್ದು, ಸುಂದರನಲ್ಲದಿದ್ದರೂ ಆತ್ಮವಿಶ್ವಾಸ ಅವನಲ್ಲಿ ಎದ್ದು ಕಾಣುತ್ತಿತ್ತು. ಡಿಸೆಂಬರ್ ೧೭೮೨ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಆತನ ಅಂತ್ಯವಾಯಿತು. 
-ಕ.ವೆಂ.ನಾಗರಾಜ್.

3. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)
********************
ದಿನಾಂಕ 12.11.2015ರ ಜನಹಿತ ಪತ್ರಿಕೆಯಲ್ಲಿ ಪ್ರಕಟಿತ:


ಸೋಮವಾರ, ನವೆಂಬರ್ 25, 2013

ಆತ್ಮಾವಲೋಕನ

     "ಛೇ! ಎಂತಹ ಕೆಲಸವಾಯಿತು! ನಾನು ಹೀಗೆ ಮಾಡಬಾರದಿತ್ತು" -ಈ ರೀತಿ ತಮಗೆ ತಾವೇ ಹೇಳಿಕೊಳ್ಳುವ ಘಟನೆಗಳು ಸಾಮಾನ್ಯವಾಗಿ ಎಲ್ಲರ ಬಾಳಿನಲ್ಲಿ ಘಟಿಸುತ್ತಿರುತ್ತವೆ. ಸ್ವಸ್ಥ ಮನಸ್ಥಿತಿಯಲ್ಲಿ ನಡೆದ ಘಟನೆಯನ್ನು/ಪರಿಸ್ಥಿತಿಯನ್ನು ಅವಲೋಕಿಸಿದಾಗ ಮೂಡುವ ಭಾವನೆಗಳಿವು. ಈ ಅವಲೋಕಿಸುವ, ವಿವೇಚಿಸುವ ಶಕ್ತಿ ಮಾನವಜೀವಿಗಳಿಗೆ ಮಾತ್ರ ಅನ್ನುವುದು ವಿಶೇಷ. ಮಾನವ ಪಶು-ಪಕ್ಷಿಗಳಿಗಿಂತ, ಕ್ರಿಮಿ-ಕೀಟಗಳಿಗಿಂತ ಭಿನ್ನವಾಗಿರುವುದು ಈ ವಿಷಯದಿಂದಲೇ. ಒಂದು ಹಸು ತನ್ನ ಹಸಿವು ಹಿಂಗಿಸಿಕೊಳ್ಳುವ ಮುನ್ನ ತಾನು ಸಸ್ಯಾಹಾರಿಯಾಗಿಯೇ ಇರಲೋ, ಮಾಂಸಾಹಾರಿಯಾಗಿರಲೋ ಎಂದು ಯೋಚಿಸುತ್ತಾ ಕೂರುವುದಿಲ್ಲ. ಹಾಗೆಯೇ ಒಂದು ಮಾಂಸಾಹಾರಿ ಪ್ರಾಣಿ ಇನ್ನೊಂದು ಪ್ರಾಣಿಯ ಪ್ರಾಣವನ್ನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ತೆಗೆಯುವುದು ನ್ಯಾಯವೇ ಎಂದು ಚಿಂತಿಸುತ್ತಾ ಕೂರುವುದಿಲ್ಲ. ಈ ಕೆಲಸ ಸರಿಯೋ, ತಪ್ಪೋ ಎಂದು ಯೋಚಿಸುವ, ಯಾವುದೇ ಸಂಗತಿಯನ್ನು ಅದು ಹಾಗೆ ಏಕೆ, ಹೀಗೆ ಏಕಿರಬಾರದು, ಇತ್ಯಾದಿ ತರ್ಕ ಮಾಡುವ ವಿಕಾಸದ ಸ್ಥಿತಿ ಮಾನವನಿಗೆ ಮಾತ್ರ ಲಭ್ಯವಾದ ವರವಾಗಿದೆ.
ಅದು ಏಕೆ ಹೇಗೆಂದು ಭೂತಕಾಲವ ಕೇಳಿ
ಸರಿಯಿಲ್ಲವೆಂದು ವರ್ತಮಾನವ ದೂರಿ |
ಭವಿಷ್ಯವನು ನೆನೆದು ಭಯಪಡುವ ಪರಿಯ
ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ || 
     ವಿವೇಚನೆ ಮಾಡಲು ಜಾಗೃತ ಮನಸ್ಸು ಇರಬೇಕು, ಯಾವುದು ಸರಿ ಎಂದು ತರ್ಕಿಸುವ ಶಕ್ತಿ ಇರಬೇಕು, ಮೇಲಾಗಿ ಅನುಭವಿಯಾಗಿರಬೇಕು, ಸೂಕ್ತ ನಿರ್ಣಯ ತೆಗೆದುಕೊಳ್ಳುವ ಇಚ್ಛೆಯಿರಬೇಕು. ಹೀಗಿದ್ದಲ್ಲಿ ಫಲಿತಾಂಶ ಒಳ್ಳೆಯದಾಗಿರುತ್ತದೆ. ಇಲ್ಲದಿದ್ದಲ್ಲಿ ಮತ್ತು ಮೇಲೆ ತಿಳಿಸಿದ ಯಾವುದೊಂದರಲ್ಲಿ ಕೊರತೆಯಿದ್ದಲ್ಲಿ ಅಷ್ಟರ ಮಟ್ಟಿಗೆ ಫಲಿತಾಂಶವೂ ಭಿನ್ನವಾಗಿರುತ್ತದೆ. ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಅದರ ಮುಂದಿನ ಸಾಧ್ಯಾಸಾಧ್ಯತೆ ಬಗ್ಗೆ ಯೋಚಿಸಿ ಪ್ರಾರಂಭಿಸಿದಲ್ಲಿ ಕೆಲಸದಲ್ಲಿ ಅನಿರೀಕ್ಷಿತ ತೊಡಕುಗಳು ಬಂದಲ್ಲಿ ನಿವಾರಿಸಿಕೊಳ್ಳಲು ಸುಲಭವಾಗುತ್ತದೆ. ಚಿಂತಿಸುವ ಕೆಲಸಕ್ಕೆ ಚಾಲನೆ ಕೊಡುವುದು ಹೃದಯ ಅನ್ನುವುದು ಎಷ್ಟು ಜನರಿಗೆ ತಿಳಿದಿದೆ? ಜ್ಞಾನ ಮತ್ತು ಬುದ್ಧಿ ಹೊರ ತೋರಿಕೆಯವು, ಮೇಲ್ಭಾಗ ಕೇವಲ ಹೊಳೆಯುತ್ತದೆ, ಅದರೆ ಎಲ್ಲಾ ಶಕ್ತಿಯ ಸ್ಥಾನ ಹೃದಯವೇ ಆಗಿದೆ. ಅರಿವು, ಶಕ್ತಿ ಮತ್ತು ಚಟುವಟಿಕೆಗಳನ್ನು ಹೊಂದಿರುವ ಆತ್ಮದ ನೆಲೆ ಇರುವುದು ಮೆದುಳಿನಲ್ಲಲ್ಲ, ಹೃದಯದಲ್ಲಿ. ಮೊದಲು ಹೃದಯ ಏನು ಮಾಡಬೇಕೆಂದು ನಿರ್ಧರಿಸುತ್ತದೆ ಮತ್ತು ನಂತರ ತಲೆಗೆ ಅ ಕೆಲಸ ಹೇಗೆ ಸರಿ ಎಂಬುದನ್ನು ಸಮರ್ಥಿಸಲು ಕಾರಣಗಳನ್ನು ಹುಡುಕಲು ಹೇಳುತ್ತದೆ! ಮಾನವನ ಒಂದು ಸ್ವಭಾವವೆಂದರೆ ತಾನು ಹೊಂದಿರುವ ನಂಬಿಕೆಗಳು, ಅನಿಸಿಕೆಗಳಿಗೆ ಪೂರಕವಾದ ವಿಚಾರಗಳು, ವಾದಗಳನ್ನು ಹುಡುಕುತ್ತಾ ಹೋಗುವುದು. ಈ ಕಾರಣಕ್ಕಾಗಿಯೇ ವಿವಿಧ ಮತಗಳು, ಧರ್ಮಗಳನ್ನು ಅನುಸರಿಸುವವರು ತಮ್ಮದೇ ಸರಿ ಹೇಗೆ ಎಂದು ಸಮರ್ಥಿಸಿಕೊಳ್ಳಲು ಹೆಣಗುತ್ತಲೇ ಇರುತ್ತಾರೆ. ಒಂದಂತೂ ಸತ್ಯ, ದೇವರು ಕೊಟ್ಟಿರುವ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಲು ಅವಕಾಶವಿರುವ ಧರ್ಮವೇ ನಿಜವಾದ ಧರ್ಮ. ಸತ್ಯಾನ್ವೇಷಣೆಗೆ ಇರುವ ನಿಜವಾದ ತೊಡಕೆಂದರೆ ಚಿಂತಿಸುವ ಶಕ್ತಿಯಲ್ಲಿನ, ಗ್ರಹಿಸುವ ಶಕ್ತಿಯಲ್ಲಿನ ಕೊರತೆಯಲ್ಲ, ಕಾಣುವ ಸಂಗತಿಗಳ ವೈಪರೀತ್ಯವಲ್ಲ, ಬದಲಾಗಿ ಹೊಂದಿರುವ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು! ಸತ್ಯಾನ್ವೇಷಣೆಗೆ ಸರಿಯಾದ ದಾರಿಯೆಂದರೆ ಶ್ರವಣ, ಮನನ, ಮಥನಗಳಿಂದ ಮತ್ತು  ಅನುಭವಗಳಿಂದ ಮನಸ್ಸು ಕಂಡುಕೊಳ್ಳುವ ತೀರ್ಮಾನವನ್ನು ಒಪ್ಪುವುದು.   
     ಏನು, ಏಕೆ, ಹೇಗೆ ಎಂಬ ಪ್ರಶ್ನೆಗಳು, ತರ್ಕಗಳಿಂದಲೇ ಇಂದು ವಿಜ್ಞಾನ ವಿಜೃಂಭಿಸಿರುವುದು. ಮಾನವನ ಅತಿ ಕನಿಷ್ಠ ಅಗತ್ಯತೆಯಿಂದ ಹಿಡಿದು ಗಗನಚುಂಬಿ ಕಟ್ಟಡಗಳವರೆಗೆ ಮತ್ತು ಅತ್ಯುನ್ನತ ಧಾರ್ಮಿಕ ನಂಬಿಕೆಗಳವರೆಗೆ, ನಾವು ಈಗ ಏನಾಗಿದ್ದೇವೋ, ಏನೆಲ್ಲಾ ಹೊಂದಿದ್ದೇವೋ ಇವೆಲ್ಲವೂ ಬಂದಿರುವುದು ಮಾನವನ ಸಣ್ಣ ಮೆದುಳಿನ ಚಿಂತನೆಯ, ಮಾನಸಿಕ ಅನ್ವೇಷಣೆಯ ಫಲಗಳು. ನಮ್ಮ ಅದ್ಭುತ ಚಿಂತನೆ ಕೊನೆಗೆ ಎಲ್ಲಿಗೆ ತಲುಪುತ್ತದೆಂದರೆ, ಈ ಬೃಹತ್ ಬ್ರಹ್ಮಾಂಡದಲ್ಲಿ ಮಾನವ ಎಷ್ಟು ಸಣ್ಣವನು ಎಂಬುದರ ಅರಿವಿನಲ್ಲಿ! 
     ವಿವೇಕರಹಿತ ವ್ಯಕ್ತಿ ತಾನು ನಾಶ ಹೊಂದುವುದಲ್ಲದೆ ಇತರರಿಗೂ ಹಾನಿಯುಂಟುಮಾಡುತ್ತಾನೆ. ಇದೇ ತತ್ವ ಒಂದು ಸಮಾಜಕ್ಕೂ, ದೇಶಕ್ಕೂ ಅನ್ವಯವಾಗುತ್ತದೆ. ತಾನು ಹೊಂದಿರುವ ನಂಬಿಕೆಯನ್ನೇ ಇತರರು ಹೊಂದಬೇಕು ಎಂದು ಬಯಸುವ ವ್ಯಕ್ತಿಗಳು, ಧರ್ಮ/ಮತಾವಲಂಬಿಗಳು, ದೇಶಗಳು ವೈಚಾರಿಕತೆಗೆ ಕಂಟಕರಾಗುತ್ತಾರೆ. ಇದು ಸಂಘರ್ಷ, ರಕ್ತಪಾತಗಳಿಗೆ ಎಡೆ ಮಾಡುತ್ತವೆ. ಜೀವಿಮಾತ್ರರಲ್ಲಿ ಯಾರಿಗೂ ಇಲ್ಲದ ವಿಚಾರ ಮಾಡುವ ಶಕ್ತಿಯನ್ನು ಹೊಂದಿರುವ ಏಕೈಕ ಜೀವಿಯಾದ ಮಾನವನ ವೈಚಾರಿಕತೆಗೆ ಅಂಕುಶ ಹಾಕುವ ಯಾವುದೇ ವ್ಯಕ್ತಿಯ, ಸಮಾಜದ, ಧರ್ಮದ, ದೇಶದ ಪ್ರಯತ್ನಗಳು ಮಾನವಕುಲಕ್ಕೆ ಹಾನಿ ಮಾಡುವಂತಹವು ಎಂಬುದು ಪೂರ್ವಾಗ್ರಹ ಪೀಡಿತರಾಗದೆ ವಿವೇಚಿಸುವ ಎಲ್ಲರಿಗೂ ಅರ್ಥವಾಗುವ ಸಂಗತಿ.
     ಸಿಂಹಾವಲೋಕನ ಎಂಬ ಪದವನ್ನು ನಾವು ಕೇಳಿರುತ್ತೇವೆ. ಸಿಂಹ ಸ್ವಲ್ಪ ದೂರ ಸಾಗಿದ ಮೇಲೆ ಹಿಂತಿರುಗಿ ತಾನು ಬಂದ ದಾರಿಯನ್ನು ಒಮ್ಮೆ ವೀಕ್ಷಿಸಿ ಮತ್ತೆ ಗಂಭೀರವಾಗಿ ಮುಂದೆ ಸಾಗುತ್ತದೆ. ಮುಂದೆ ಸಾಗುವ ಮುನ್ನ ಹಿಂದಿನ ದಾರಿಯನ್ನು ಅವಲೋಕಿಸಿ ಮುಂದಿನ ದಾರಿಯನ್ನು ನಿರ್ಧರಿಸಬೇಕು ಎಂಬುದು ಇದರ ಸಾರ. ನಾವು ಸಾಗಿದ ದಾರಿಯನ್ನು ಅವಲೋಕಿಸುವುದಕ್ಕೆ ಆತ್ಮಾವಲೋಕನ ಎನ್ನುತ್ತೇವೆ. ಈ ಆತ್ಮಾವಲೋಕನ ನಮ್ಮ ತಪ್ಪು ನಡೆಗಳನ್ನು ತಿದ್ದಿಕೊಳ್ಳುವುದಕ್ಕೆ, ಮುಂದೆ ತಪ್ಪಾಗದಂತೆ ನೋಡಿಕೊಳ್ಳುವುದಕ್ಕೆ ಅತ್ಯಾವಶ್ಯಕ. ಹರೆಯದ ಹುಮ್ಮಸ್ಸಿನಲ್ಲಿ ಈ ವಿವೇಚನಾಶಕ್ತಿ ಕಡಿಮೆಯಿರುತ್ತದೆ ಅಥವ ಇದ್ದರೂ ಅದಕ್ಕೆ ಕೊಡುವ ಮಹತ್ವ ಕಡಿಮೆ. ಮಧ್ಯವಯಸ್ಸಿನಲ್ಲಿ ಮತ್ತು ಇಳಿ ವಯಸ್ಸಿನಲ್ಲಿ ಈ ಶಕ್ತಿ ಪ್ರಬುದ್ಧಮಾನ ಸ್ಥಿತಿಯಲ್ಲಿರುತ್ತದೆ. ಮಧ್ಯ ವಯಸ್ಸಿನಲ್ಲಿದ್ದಾಗಲೂ ವಿವೇಚನಾಶಕ್ತಿಗೆ ಕೆಲಸ ಕೊಡದಿದ್ದರೆ, ಇಳಿವಯಸ್ಸಿನಲ್ಲಿ ಶೋಕ ಕಟ್ಟಿಟ್ಟ ಬುತ್ತಿಯೇ ಸರಿ. 
ಸಾಲ ಪಡೆದೆವು ನಾವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ಈ ಸಮಾಜದಲ್ಲಿ ಬದುಕುವ ಪ್ರತಿ ಜೀವಿಯೂ ಮೂರು ಋಣಗಳನ್ನು ತೀರಿಸಲೇಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ದೇವಋಣವೆಂದರೆ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಮಾಡಿ ಕಾಣಿಕೆ ಅರ್ಪಿಸುವುದಲ್ಲ. ಪಂಚಭೂತಗಳಿಂದ ಆದ ಈ ಶರೀರದಲ್ಲಿರುವ ಆತ್ಮದ ಸಹಾಯದಿಂದ ಜೀವನ ನಡೆಸಿರುವ ನಾವು ಈ ಪಂಚಭೂತಗಳು -ಭೂಮಿ, ಆಕಾಶ, ನೀರು, ಅಗ್ನಿ, ವಾಯು- ಇವುಗಳನ್ನು ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯ. ಇದು ದೇವ ಋಣವನ್ನು ತೀರಿಸುವ ರೀತಿ. ಅದೇ ರೀತಿ ನಮ್ಮನ್ನು ಪೋಷಿಸಿ ಸಲಹಿದ ಮಾತಾ-ಪಿತೃಗಳು, ಹಿರಿಯರುಗಳ ಸೇವೆ ಮಾಡುವುದು ಪಿತೃಋಣ ತೀರಿಸುವ ಪರಿಯಾದರೆ, ನಮಗೆ ಜ್ಞಾನ ನೀಡಿ ದಾರಿ ತೋರಿದ ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ಸಾಗಿ, ತಿಳಿದ ಜ್ಞಾನವನ್ನು ಇತರರಿಗೆ ಹಂಚುವುದು ಗುರುಋಣ ತೀರಿಸಲು ಸಹಕಾರಿ. ಈ ವೇದಮಂತ್ರ ಗಮನಿಸೋಣ:
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ. ಈ ಕೆಲಸವನ್ನು ನಾವು ಮಾಡುತ್ತಿದ್ದೇವೆಯೇ ಎಂಬುದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. 
     ಅವಲೋಕನದಿಂದ ಸುತ್ತಮುತ್ತಲಿನ ಆಗುಹೋಗುಗಳ ಓರೆಕೋರೆಗಳು ಗೋಚರವಾಗುತ್ತವೆ; ಆತ್ಮಾವಲೋಕನದಿಂದ ಆ ಓರೆಕೋರೆಗಳ ಮೂಲ ನಾವೇ ಆಗಿರುವುದು ತಿಳಿಯುತ್ತದೆ. ಅದು ಹಾಗಿರಬೇಕು, ಅವರು ಹಾಗಿರಬೇಕು, ಇವರು ಹೀಗಿರಬೇಕು ಎಂದು ಇತರರಲ್ಲಿ ಬಯಸುವ ಗುಣಗಳು ಮೊದಲು ನಮ್ಮಲ್ಲಿ ಇವೆಯೇ ಎಂಬುದನ್ನು ನೋಡಿಕೊಳ್ಳಬೇಕು. ನಾವು ಮಾತ್ರ ಬೇರೆ ರೀತಿಯಲ್ಲಿ ಇದ್ದು, ಇತರರು ಮಾತ್ರ ಸರಿಯಾಗಿರಬೇಕು ಎಂದು ಬಯಸುವುದರಲ್ಲಿಯೇ ಲೋಪವಿದೆಯೆಂದು ನಮಗೆ ಅರಿವಾಗುವುದು ಆತ್ಮಾವಲೋಕನದಿಂದ ಮಾತ್ರ. ಸಮಾಜದಲ್ಲಿ ಏನಾದರೂ ಬದಲಾವಣೆಯಾಗಬೇಕೆಂದು ಬಯಸುವುದು ತರವಲ್ಲ. ಬದಲಾಗಬೇಕಾದವರು ನಾವು ಮಾತ್ರ. ನಾವು ಕೇಳಬೇಕಾಗಿರುವುದು ಇತರರ ಮಾತುಗಳನ್ನಲ್ಲ, ನಮ್ಮ ಹೃದಯದ ಮಾತುಗಳನ್ನು! ನಾವು ಬದಲಾದರೆ ಸಮಾಜವನ್ನು ನಾವು ನೋಡುವ ದೃಷ್ಟಿಯೂ ಬದಲಾಗುತ್ತದೆ. ಸಮಾಜದಲ್ಲಿ ಒಳಿತೂ ಇರುತ್ತದೆ, ಕೆಡಕೂ ಇರುತ್ತದೆ. ಒಳಿತಾಗಬೇಕೆಂದು ನಾವು ಬಯಸುವುದಾದರೆ ನಾವು ಒಳ್ಳೆಯ ಸಂಗತಿಗಳನ್ನು ಮಾತ್ರ ಗಮನಿಸಬೇಕು, ಅದಕ್ಕೆ ಮಾತ್ರ ಮಹತ್ವ ಕೊಡಬೇಕು. ವಿವೇಕಾನಂದರ ಈ ಮಾತನ್ನು ನೆನಪಿನಲ್ಲಿಡಬೇಕು: "ಪ್ರಪಂಚ ನಮಗೆ ಏನಾಗಿ ತೋರುವುದೋ ಅದಕ್ಕೆ ಕಾರಣ ನಮ್ಮದೇ ಆದ ನಮ್ಮ ಮನಸ್ಸಿನ ಸ್ಥಿತಿ. ನಮ್ಮ ಯೋಚನೆಗಳು ಸಂಗತಿಗಳನ್ನು ಸುಂದರಗೊಳಿಸುತ್ತವೆ; ನಮ್ಮ ಯೋಚನೆಗಳೇ ಸಂಗತಿಗಳನ್ನು ಕುರೂಪಿಯನ್ನಾಗಿಸುತ್ತವೆ. ಇಡೀ ಪ್ರಪಂಚ ನಮ್ಮ ಮನಸ್ಸುಗಳಲ್ಲೇ ಇದೆ." ಆತ್ಮಾವಲೋಕನ ಮಾಡಿಕೊಳ್ಳೋಣ.
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ನೀನೆ ಮೊದಲಾಗು |
ಬದಲಾಗು ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಇಲ್ಲಿಹುದು ಮೂಢ ||
-ಕ.ವೆಂ.ನಾಗರಾಜ್.
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು]
******************************
28.11.2013ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.

10.09.2014ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಗುರುವಾರ, ನವೆಂಬರ್ 21, 2013

ಶಿಕ್ಷಣ: ದಾರಿ ತಪ್ಪುತ್ತಿದೆಯೇ?

     ಮಾನವ ಜೀವನದಲ್ಲಿ ೧೬ ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ಅವೆಂದರೆ, ೧. ಗರ್ಭಾದಾನ, ೨. ಪುಂಸವನ, ೩. ಸೀಮಂತೋನ್ನಯನ, ೪. ಜಾತಕರ್ಮ, ೫. ನಾಮಕರಣ, ೬. ನಿಷ್ಕ್ರಮಣ, ೭. ಅನ್ನಪ್ರಾಶನ, ೮. ಮುಂಡನ, ೯. ಕರ್ಣವೇಧ, ೧೦. ಉಪನಯನ, ೧೧. ವೇದಾರಂಭ, ೧೨. ಸಮಾವರ್ತನ, ೧೩. ವಿವಾಹ, ೧೪. ವಾನಪ್ರಸ್ಥ, ೧೫. ಸಂನ್ಯಾಸ, ೧೬. ಅಂತ್ಯೇಷ್ಟಿ. ಇವುಗಳಲ್ಲಿ ಮೊದಲ ಮೂರು ಸಂಸ್ಕಾರಗಳು ಹುಟ್ಟುವ ಮುನ್ನದ ಸಂಸ್ಕಾರಗಳಾಗಿದ್ದು, ಇವನ್ನು ಉತ್ತಮ ಸಂತಾನವನ್ನು ಪಡೆಯುವ ಸಲುವಾಗಿ ಆಚರಿಸುತ್ತಾರೆ. ಇನ್ನು ಮೂರು ಸಂಸ್ಕಾರಗಳಾದ ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ ಇವುಗಳು ಎಲ್ಲರಿಗೂ ಕಡ್ಡಾಯವಲ್ಲ. ಈ ಸಂಸ್ಕಾರಗಳು ಅರ್ಹತೆ ಮತ್ತು ಆಸಕ್ತಿಯಿರುವರಿಗೆ ಮಾತ್ರ. ಅಂತ್ಯೇಷ್ಟಿ ಸಂಸ್ಕಾರ ಮೃತರಾದ ನಂತರ ಮಾಡುವಂತಹದು. ಇವುಗಳನ್ನು ಹೊರತುಪಡಿಸಿ ಉಳಿಯುವ ೯ ಸಂಸ್ಕಾರಗಳು ಮಕ್ಕಳಿಗೆ ಸಂಬಂಧಿಸಿದವು. ಮಕ್ಕಳನ್ನು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಈ ಸಂಸ್ಕಾರಗಳಿಗೆ ಹಿಂದೆ ಎಷ್ಟು ಪ್ರಾಧಾನ್ಯತೆಯಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಇಂದಿನ ಅವಸರದ ಪ್ರಪಂಚದಲ್ಲಿ ಮಕ್ಕಳ ಬೆಳವಣಿಗೆಗೆ ಕೊಡಬೇಕಾದಷ್ಟು ಗಮನವನ್ನು ಕೊಡುತ್ತಿದ್ದೇವೆಯೇ ನೋಡೋಣ.
     ಹಿಂದಿನ ಕಾಲದಲ್ಲಿ ಹೆರಿಗೆಗಳನ್ನು ಮನೆಗಳಲ್ಲೇ ಮಾಡುತ್ತಿದ್ದು ಸೂಲಗಿತ್ತಿಯರೆಂದು ಕರೆಯುವ ನಿಪುಣ ಸ್ತ್ರೀಯರು ಈ ಕೆಲಸ ಮಾಡುತ್ತಿದ್ದರು. ಈಗ ಸಾಮಾನ್ಯವಾಗಿ ಆಸ್ಪತ್ರೆಗಳಲ್ಲೇ ನುರಿತ ವೈದ್ಯರು, ದಾದಿಯರು ಮಾಡುತ್ತಾರೆ. ಮಗುವಿಗೆ ಹೆಸರಿಡುವಾಗ ಒಳ್ಳೆಯ ಅರ್ಥ ಕೊಡುವ, ಒಳ್ಳೆಯದನ್ನು ಸೂಚಿಸುವ ಹೆಸರುಗಳನ್ನು ಇಟ್ಟರೆ ಆ ಹೆಸರುಗಳನ್ನು ಕರೆಯುವವರಿಗೆ ಮತ್ತು ಕರೆಸಿಕೊಳ್ಳುವವರಿಗೆ ಹೆಸರಿಗೆ ತಕ್ಕಂತೆ ಇರಲು ಪ್ರೇರಿಸಿದಂತಾಗುತ್ತದೆ. ಕೆಲವರು ಅರ್ಥವೇ ತಿಳಿಯದ ಹೆಸರುಗಳನ್ನೂ ಇಡುವುದನ್ನು ಕಾಣುತ್ತಿದ್ದೇವೆ. ಮಗುವನ್ನು ಮೊದಲ ಸಲ ಹೊರಗೆ ಕರೆದೊಯ್ಯುವಾಗ ನಿಷ್ಕ್ರಮಣ, ತಾಯ ಹಾಲಿನ ಜೊತೆಗೆ ಬೇರೆ ಆಹಾರದ ಅಭ್ಯಾಸ ಪ್ರಾರಂಭದ ಸಮಯದಲ್ಲಿ ಅನ್ನಪ್ರಾಶನ (ಸಾಮಾನ್ಯವಾಗಿ ಹಲ್ಲು ಬರುವ ಸಮಯದಲ್ಲಿ), ಮಗುವಿಗೆ ಸುಮಾರು ಮೂರು ವರ್ಷವಾದಾಗ, ಅಂದರೆ ಮೃದುವಾಗಿದ್ದ ತಲೆಬುರುಡೆ ಸ್ವಲ್ಪ ಗಟ್ಟಿಯಾದಾಗ, ಚೂಡಾಕರ್ಮ, ಕಿವಿ ಚುಚ್ಚುವುದು (ಕಿವಿ ಚುಚ್ಚುವುದರಿಂದ ಹರ್ನಿಯಾ ಸಮಸ್ಯೆ ನಿವೃತ್ತಿಯಾಗುವುದೆಂದು ಶಲ್ಯತಂತ್ರ(ಸರ್ಜರಿ)ದಲ್ಲಿ ಸುಪ್ರಸಿದ್ಧನಾದ ಸುಶ್ರುತನ ಅಭಿಪ್ರಾಯ), ಮುಂತಾದವು ಮಗುವಿಗೆ ಮಾಡಲಾಗುವ ಪ್ರಾರಂಭಿಕ ಸಂಸ್ಕಾರಗಳು.                  
     ಮುಂದಿನ ಹಂತ ಮಗುವಿನ ವಿದ್ಯಾಭ್ಯಾಸಕ್ಕೆ ಅನುವು ಮಾಡುವುದು. ಇಲ್ಲೇ ನಾವು ದಾರಿ ತಪ್ಪುತ್ತಿದ್ದೇವೇನೋ ಅನ್ನಿಸುತ್ತದೆ. ಮೆಕಾಲೆಯ ಶಿಕ್ಷಣನೀತಿಯ ಬಲಿಪಶುಗಳಾಗಿ ವಿಷವರ್ತುಲದಿಂದ ಹೊರಬರಲಾರದೆ ಇದ್ದೇವೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ ೭-೮ ವರ್ಷಗಳಾದಾಗ ಮಗುವಿಗೆ ಉಪನಯನ ಸಂಸ್ಕಾರ ಮಾಡಿ ತಮಗೆ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು ಎಂದರ್ಥ. ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಋಷಿಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕವಾದ ಚಿಹ್ನೆಯಾಗಿರಲಿಲ್ಲ. ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ಅಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಅವರ ಶಕ್ತ್ಯಾನುಸಾರ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದ ನಂತರ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮವೆಂದರೆ ಅರ್ಥವಾದೀತು) ಸಂಸ್ಕಾರ ನಡೆಯುತ್ತದೆ. ಈ ಸಮಯದಲ್ಲಿ ಗುರುವು ತನ್ನ ಶಿಷ್ಯರಿಗೆ ವಿಶೇಷವಾದ ಉಪದೇಶ ನೀಡಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರುವು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
     ಮೇಲಿನದು ಬಹಳ ಹಿಂದಿನ ಕಾಲದ ಮಾತಾಯಿತು. ಹಲವು ದಶಕಗಳ ಹಿಂದಿನ ಸ್ಥಿತಿ ಗಮನಿಸಿದರೆ ಆಗ ಪ್ರತಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿರುತ್ತಿದ್ದವು, ಅವಿಭಕ್ತ ಕುಟುಂಬಗಳಿದ್ದವು, ಟಿವಿ ಇರಲಿಲ್ಲ, ಮನೆಯಲ್ಲಿ ಒಟ್ಟಾಗಿ ಬಾಳುವ ಮನೋಭಾವವಿರುತ್ತಿತ್ತು, ಸಂಬಂಧಗಳಿಗೆ ಮಾನ್ಯತೆಯಿತ್ತು, ನೈತಿಕ ಮೌಲ್ಯಗಳು ಅಷ್ಟಾದರೂ ಇದ್ದವು. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಒಟ್ಟಾಗಿ ಭಜನೆ, ಪ್ರಾರ್ಥನೆ ಮಾಡುವ ಪರಿಪಾಠವಿತ್ತು. ಒಟ್ಟಾರೆಯಾಗಿ ಸಂತೋಷಕ್ಕೆ ಕೊರತೆಯಿರಲಿಲ್ಲ. ಕುಟುಂಬದ ಸದಸ್ಯರು ಯಾರೊಬ್ಬರು ದುರ್ಬಲರಾಗಿದ್ದರೂ ಉಳಿದವರು ಅವರನ್ನು ಕೈಹಿಡಿದು ಎತ್ತುತ್ತಿದ್ದರು. ಹಣದಲ್ಲಿ ಬಡತನವಿದ್ದರೂ ಆತ್ಮಸ್ಥೈರ್ಯಕ್ಕೆ ಬಡತನವಿರಲಿಲ್ಲ.
     ಈಗ ಇಂದಿನ ಕಾಲದ ಶಿಕ್ಷಣದ ಬಗ್ಗೆ ನೋಡೋಣ. ಇಂದಿನ ಮಕ್ಕಳ ಪರಿಸ್ಥಿತಿ ನೋಡಿದರೆ ಮರುಕವಾಗುತ್ತದೆ. ವೈವಾಹಿಕ ಸಂಬಂಧಗಳೇ ಮಹತ್ವ ಕಳೆದುಕೊಳ್ಳುತ್ತಿರುವ, ಇಂದು ಮದುವೆ ಮತ್ತು ನಾಳೆ ವಿಚ್ಛೇದನ ಎಂಬಂತಹದು ಸಾಮಾನ್ಯವಾಗುತ್ತಿರುವ, ಒಪ್ಪಂದ ಆಧಾರದ ಸಂಬಂಧಗಳು ಹೆಚ್ಚುತ್ತಿರುವಾಗ,  ವಿಚ್ಛೇದನದ ಕಾರಣದಿಂದ ಮತ್ತು ಪತಿ-ಪತ್ನಿಯರ ನಡುವಣ ಸಾಮರಸ್ಯದ ಕೊರತೆಯಿಂದ ಅನಾಥಪ್ರಜ್ಞೆಯಿಂದ ನರಳುವ ಮಕ್ಕಳನ್ನು ಕಂಡರೆ ದಿಗಿಲಾಗುತ್ತದೆ. ಮಕ್ಕಳಿಗೆ ಸುಮಾರು ೬ ವರ್ಷಗಳಾಗುವವರೆಗೆ, ಮೆದುಳು ಇನ್ನೂ ಬಲಿಯಬೇಕಾಗಿರುವುದರಿಂದ, ಅವರಿಗೆ ಕಲಿಕೆಯ ಶ್ರಮ ಕೊಡಬಾರದೆಂದು ಮನೋಶಾಸ್ತ್ರಜ್ಞರು ಮತ್ತು ಶಿಕ್ಷಣತಜ್ಞರು ಹೇಳುತ್ತಾರೆ. ಆದರೆ, ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ದುಡಿಯಲು ಹೋಗುವವರಾದರೆ ಇನ್ನೂ ತಾಯ ಮಡಿಲಿನಲ್ಲೇ ಪಿಳಿಪಿಳಿ ಕಣ್ಣು ಬಿಟ್ಟು ಆಟವಾಡಬೇಕಾದ ಮಕ್ಕಳನ್ನೂ ಶಿಶುಕೇಂದ್ರ(ಬೇಬಿ ಕೇರ್)ಗಳಲ್ಲಿ ಬಿಟ್ಟುಹೋಗುತ್ತಾರೆ. ಅಲ್ಲಿ ಮಕ್ಕಳನ್ನು ಸುಧಾರಿಸಲಾಗದೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸುತ್ತಾರೆಂದೂ ದೂರುಗಳಿವೆ. ಒಂದು ಶಿಶುಕೇಂದ್ರದಲ್ಲಂತೂ ಮಕ್ಕಳಿಗೆ ಹರಕುಬಟ್ಟೆ ಹಾಕಿ ಭಿಕ್ಷಾಟನೆಗೆ ಕರೆದೊಯ್ಯಲು ಬಾಡಿಗೆಗೆ ಒದಗಿಸುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿತ್ತು. ಹುಟ್ಟುತ್ತಲೇ ಬೇಬಿ ಸಿಟ್ಟಿಂಗ್, ೨-೩ ವರ್ಷವಾಗುತ್ತಲೇ ಎಲ್.ಕೆ.ಜಿ., ನಂತರ ಯು.ಕೆ.ಜಿ., ನಂತರ ಒಂದನೆಯ ತರಗತಿಗೆ ಮಕ್ಕಳನ್ನು ದಾಖಲಿಸುವುದು (ಅದೂ ಆಂಗ್ಲ ಮಾಧ್ಯಮದ ಶಾಲೆಗಳಿಗೆ) ಕಾಣುತ್ತಿದ್ದೇವೆ. ಶಾಲೆಗಳಲ್ಲೂ 'ಡೇ ಕೇರ್' ಸೌಲಭ್ಯವಿದ್ದು ತಂದೆ/ತಾಯಿ ಕೆಲಸ ಮುಗಿಸಿಕೊಂಡು ಬರುವವರೆಗೂ ಶಾಲೆ ಮುಗಿದ ನಂತರವೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ನಗರಗಳಲ್ಲಿದೆ. ಮೊದಲ ಪಾಠಶಾಲೆಯಾಗಬೇಕಾಗಿದ್ದ ಮನೆಯೇ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವ ಪ್ರಕ್ರಿಯೆಗೆ ಹುಟ್ಟುತ್ತಲೇ ಚಾಲನೆ ಕೊಡುತ್ತಿದೆ. ಮೊದಲ ಪಾಠಶಾಲೆಯೇ ಇಂದಿನ ಮಕ್ಕಳಿಗೆ ಇಲ್ಲ. ಮೊದಲ ಶಿಕ್ಷಕರಾದ ತಾಯಿ-ತಂದೆಯರಿಗೆ ಪುರುಸೊತ್ತೇ ಇಲ್ಲ.
     ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ ಮತ್ತು ತಿರುಚಿದ ಇತಿಹಾಸದ ಕಲಿಕೆ! ನೈತಿಕ ಶಿಕ್ಷಣ, ಮೌಲ್ಯಗಳಿಗೆ ಅಲ್ಲಿ ಅವಕಾಶವೇ ಇಲ್ಲ, ಎಲ್ಲವೂ ವ್ಯವಹಾರ, ಹಣವೇ ಅಳತೆಗೋಲು! ಭಾರತೀಯರು ಮೆಕಾಲೆ ಹಿಂದೆ ನುಡಿದಿದ್ದ ಭವಿಷ್ಯದಂತೆ ಕರಿಚರ್ಮದ ಪಾಶ್ಚಾತ್ಯರಾಗಿದ್ದಾರೆ! ಇಷ್ಟಾಗಿಯೂ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಪ್ರತಿಷ್ಟಿತ ಶಾಲೆಗಳಿಗೆ ಸೇರಿಸುವ ಉದ್ದೇಶವೆಂದರೆ ಮುಂದೆ ತಮ್ಮ ಮಕ್ಕಳು ಡಾಕ್ಟರೋ, ಇಂಜನಿಯರೋ ಆಗಿ ಲಕ್ಷ ಲಕ್ಷ ಸಂಪಾದಿಸಲಿ ಎಂದು! ಶಿಕ್ಷಣವಿಂದು ವ್ಯಾಪಾರವಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣದ ಮೂಲ ಉದ್ದೇಶವೇ ನಾಶವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದ, ಶಿಕ್ಷಕರ ಕೊರತೆಯಿರುವ, ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿನಾಲಿ ಮಾಡುವವರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. 
     ನೈತಿಕ ಶಿಕ್ಷಣವಿಲ್ಲದಿರುವುದರಿಂದ ಮತ್ತು ಎಲ್ಲೆಲ್ಲೂ ಸ್ಪರ್ಧಾತ್ಮಕ ಮನೋಭಾವವಿರುವುದರಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕಡಿಮೆ ಅಂಕ ಬಂದರೆ ಬಯಸಿದ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದರೂ ಮುಂದೆ ನೌಕರಿ ಸಿಗುವ ಸಾಧ್ಯತೆ ಕಡಿಮೆ. ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಬಯಸಿದ ಶಿಕ್ಷಣ ಕೊಡಿಸಬಹುದು, ಬಡವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿರುವುದು ಅನುಮಾನ. ಹೀಗೆ ಶಿಕ್ಷಣದ ಮೂಲ ಉದ್ದೇಶವೇ ಅರ್ಥ ಕಳೆದುಕೊಂಡಿದೆ.      ಮಕ್ಕಳು ಇಂದು ಎಷ್ಟು ಒತ್ತಡದಲ್ಲಿರುತ್ತಾರೆಂದರೆ, ಪರೀಕ್ಷೆಗೆ ಮುನ್ನವೇ ಅಥವ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಬರುವ ಮುನ್ನವೇ ಅಥವ ನಿರೀಕ್ಷಿತ ಫಲಿತಾಂಶ ಬಾರದಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಆತ್ಮಸ್ಥೈರ್ಯವನ್ನೇ ಕಲಿಸದ ಶಿಕ್ಷಣವನ್ನು ಶಿಕ್ಷಣವೆನ್ನಬಹುದೇ? ಇದು ಒಂದು ಮಗ್ಗುಲಾದರೆ ಇನ್ನೊಂದು ಕರಾಳ ಮುಖವೂ ಇದೆ. ಅದೆಂದರೆ ಮಕ್ಕಳು ನೈತಿಕವಾಗಿ ಹಾದಿ ತಪ್ಪುತ್ತಿರುವುದು. ಚಿಕ್ಕ ವಯಸ್ಸಿನಲ್ಲೇ ಸಿಗರೇಟು ಸೇದುವುದು, ಮಾದಕದ್ರವ್ಯಗಳ ಸೇವನೆ, ಡ್ರಗ್ಸ್ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಪೋಷಕರ ನಿರ್ಲಕ್ಷ್ಯವೂ ಇವುಗಳಿಗೆ ಕೊಡುಗೆ ನೀಡಿದೆಯೆಂದರೆ ತಪ್ಪಲ್ಲ. ಹಣ ಕೊಟ್ಟು ಪದವಿ, ಡಾಕ್ಟರೇಟ್ ಕೊಂಡುಕೊಳ್ಳಬಹುದೆನ್ನುತ್ತಾರೆ. ನೈತಿಕತೆ ಕೊಡದ ಶಿಕ್ಷಣ ಒಂದು ಶಿಕ್ಷಣವೇ?
     ಹಾಗಾದರೆ ಇದಕ್ಕೆ ಪರಿಹಾರವೇನು? ಶಿಕ್ಷಣಪದ್ಧತಿಯಲ್ಲಿ ಸೂಕ್ತ ಪರಿವರ್ತನೆಯಾಗದೆ, ಪೋಷಕರ ಮನೋಭಾವ ಬದಲಾಗದೆ ಪರಿಹಾರ ಕಷ್ಟಸಾಧ್ಯ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಭಾರತ ಮೂಲತಃ ಆಧ್ಯಾತ್ಮಿಕ ಪ್ರಧಾನ ದೇಶವಾಗಿದ್ದು, ಆಧ್ಯಾತ್ಮಿಕತೆಗೆ ಬಲ ಬಂದರೆ ಪುನಃ ಪರಿಸ್ಥಿತಿ ಬದಲಾಗಬಹುದು. ವಿವೇಕಾನಂದರು ಹೇಳಿದಂತೆ 'ಕೆಲವೊಮ್ಮೆ ಆಧ್ಯಾತ್ಮಿಕತೆ ಮೇಲುಗೈ ಪಡೆದರೆ, ಕೆಲವೊಮ್ಮೆ ಭೋಗವಾದ ಮೇಲುಗೈ ಪಡೆಯುತ್ತದೆ. ಸಮುದ್ರದ ಅಲೆಗಳಂತೆ ಒಂದನ್ನೊಂದು ಹಿಂಬಾಲಿಸುತ್ತವೆ.' ಹೀಗಾಗಲೆಂದು ಹಾರೈಸೋಣ. ನೈತಿಕತೆಯನ್ನು ಬಲಪಡಿಸುವ, ಆತ್ಮಸ್ಥೈರ್ಯವನ್ನು ಕೊಡುವಂತಹ, ದೇಶ ಹಾಗೂ ಸಮಾಜದ ಹಿತ ಬಯಸುವ ಸತ್ಪ್ರಜೆಗಳನ್ನು ನಿರ್ಮಿಸುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ. ಆ ನಿಟ್ಟಿನಲ್ಲಿ ಜನನಾಯಕರು, ಪೋಷಕರು, ಮನೋಶಾಸ್ತ್ರಜ್ಞರು, ಶಿಕ್ಷಣತಜ್ಞರು ಚಿಂತಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ಕಾಲವೀಗ ಬಂದಿದೆ. 
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣ ಕಾರಣ|
ಆವರಣ ಹೂರಣ ಚೆಂದವಿರೆ ಲಕ್ಷಣ
ಬದುಕು ಸುಂದರ ಪಯಣ ಮೂಢ||
-ಕ.ವೆಂ.ನಾಗರಾಜ್
[ಚಿತ್ರಗಳು: ಅಂತರ್ಜಾಲದಿಂದ ಹೆಕ್ಕಿದವು]
*****************************
8.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.

21.11.2013ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.





ಬುಧವಾರ, ನವೆಂಬರ್ 13, 2013

ಬೆಳ್ತಂಗಡಿ ತಾಲ್ಲೂಕಿನಲ್ಲಿ ನಕ್ಸಲರ ಚಟುವಟಿಕೆ

     ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದಲ್ಲಿ ಸುಮಾರು ೧೪-೧೫ ನಕ್ಸಲರ ಗುಂಪು ಕಂಡು ಬಂದ ಬಗ್ಗೆ ಮತ್ತು ಕೆಲವು ವಾಹನಗಳು, ಆಸ್ತಿ-ಪಾಸ್ತಿಗೆ ಅವರು ಹಾನಿ ಮಾಡಿದ ಬಗ್ಗೆ ದೃಷ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಇದನ್ನು ನೋಡಿ ಸುಮಾರು ೧೦ ವರ್ಷಗಳ ಹಿಂದೆ ಕಡಬದ ವಿಶೇಷ ತಹಸೀಲ್ದಾರ್ ಮತ್ತು ಹೆಚ್ಚುವರಿ ಪ್ರಭಾರೆಯಾಗಿ ಬೆಳ್ತಂಗಡಿಯ ತಹಸೀಲ್ದಾರ್ ಆಗಿ ಕೆಲಸ ಮಾಡಿದ್ದ ಸಂದರ್ಭದಲ್ಲಿ ನಕ್ಸಲ್ ಸಮಸ್ಯೆಯ ಬಗ್ಗೆ ಪರಿಹಾರಕ್ಕಾಗಿ ಶ್ರಮಿಸಿದ ದಿನಗಳು ನೆನಪಾದವು. ಆ ಸಮಯದಲ್ಲಿ ಬೆಳ್ತಂಗಡಿಯ ಗಡಿಯ ಸಮೀಪದ ಕಾರ್ಕಳ ತಾಲ್ಲೂಕಿನ ಈದು ಗ್ರಾಮದಲ್ಲಿ ನಕ್ಸಲರಾದ ಪಾರ್ವತಿ ಮತ್ತು ಹಾಜಿಮಾರ ಎನ್ ಕೌಂಟರ್ ಆಗಿತ್ತು. ಈದು ಗ್ರಾಮಕ್ಕೆ ಹೋಗಬೇಕಾದರೆ ಬೆಳ್ತಂಗಡಿಯ ಗ್ರಾಮಗಳನ್ನು ಹಾದು ಹೋಗಬೇಕಾಗಿತ್ತು. ಎನ್ ಕೌಂಟರ್ ಆಗಿದ್ದ ಸ್ಥಳ ಮತ್ತು ಮನೆಗೆ ನಾನೂ ಭೇಟಿ ಕೊಟ್ಟಿದ್ದೆ. ಅದೊಂದು ಪುಟ್ಟ ಗುಡಿಸಲು ರೀತಿಯ ಮನೆಯಾಗಿತ್ತು.
     ಬೆಳ್ತಂಗಡಿಯ ಕುತ್ಲೂರು, ನಾರಾವಿ, ಮುಂತಾದ ಗ್ರಾಮಗಳಿಗೆ ಹೊಂದಿಕೊಂಡಂತಿದ್ದ ಅಭಯಾರಣ್ಯದ ಪ್ರದೇಶಗಳಲ್ಲಿ ನಕ್ಸಲರ ಚಟುವಟಿಕೆಗಳು ಇದ್ದ ಬಗ್ಗೆ ತಿಳಿದುಬರುತ್ತಿತ್ತು. ನಕ್ಸಲರು ಅರಣ್ಯ ಪ್ರದೇಶಗಳಲ್ಲಿ ಮತ್ತು ಸಮೀಪದ ಸ್ಥಳಗಳಲ್ಲಿ ಇರುವ ಜನರ ಸಮಸ್ಯೆಗಳನ್ನು ನೆಪಮಾಡಿಕೊಂಡು ಜನರನ್ನು ಪ್ರಚೋದಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟುವುದು ಅವರ ಒಂದು ತಂತ್ರ. ಪ್ರಚಲಿತ ಅರಣ್ಯ ಕಾಯದೆ, ಕಾನೂನುಗಳು ಆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ರಸ್ತೆ, ದೀಪ, ಆರೋಗ್ಯ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಅಡ್ಡಿಯಾಗುತ್ತಿದ್ದುದು ಅವರಿಗೆ ವರದಾನವಾದಂತಿತ್ತು. ನಕ್ಸಲರಿಗೆ ಮುಖ್ಯವಾಗಿ ಬೇಕಾಗಿದ್ದುದು ಅಡಗುತಾಣವಾದ್ದರಿಂದ ಅವರುಗಳು ಸಾಮಾನ್ಯವಾಗಿ ಅರಣ್ಯಪ್ರದೇಶಗಳನ್ನೇ ಅದಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಆ ಪ್ರದೇಶದ ಸಮೀಪದಲ್ಲಿ ವಾಸಿಸುವ ಜನರನ್ನು ಹೆದರಿಸಿ ಬಾಯಿಬಿಡದಂತೆ ನೋಡಿಕೊಳ್ಳುತ್ತಾರೆ. ಪೋಲಿಸರಿಗೆ ಮಾಹಿತಿ ನೀಡುತ್ತಾರೆಂದು ಅನುಮಾನ ಕಂಡುಬಂದವರನ್ನು ಹಿಂಸಿಸುತ್ತಾರೆ. ವಿಪರ್ಯಾಸವೆಂದರೆ ಗ್ರಾಮಗಳ ಕೆಲವು ನಿರುದ್ಯೋಗಿ ಯುವಕ-ಯುವತಿಯರು (ಹೆಚ್ಚಿನವರು ಒಂದಲ್ಲಾ ಒಂದು ರೀತಿಯಲ್ಲಿ ಇಂದಿನ ಭ್ರಷ್ಠ ವ್ಯವಸ್ಥೆಯಲ್ಲಿ ನೊಂದವರು) ಅವರೊಂದಿಗೆ ಕೈಜೋಡಿಸಿ ನೆರವಾಗುತ್ತಾರೆ. ನಕ್ಸಲರು ಅರಣ್ಯ ಪ್ರದೇಶಗಳನ್ನು ತಮ್ಮ ರಕ್ಷಣೆಯ ಸಲುವಾಗಿ ಮತ್ತು ನಕ್ಸಲ್ ವಿಚಾರದಿಂದ ಪ್ರಭಾವಿತರಾದವರಿಗೆ ತರಬೇತಿ ಕೊಡಲು ಬಳಸಿಕೊಳ್ಳುತ್ತಾರೆ.
     ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳವರಿಗೆ ಸಹಜವಾಗಿ ಕೆಲವು ಮೂಲಭೂತ ಸಮಸ್ಯೆಗಳಿರುತ್ತವೆ. ರಸ್ತೆ, ದೀಪಗಳು, ಅನಾರೋಗ್ಯದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಕೊರತೆ, ಮುಂತಾದವು ಅವರನ್ನು ಕಾಡುತ್ತವೆ. ಅರಣ್ಯ ಕಾಯದೆಯಂತೆ ಅವರಿಗೆ ಬೇರೆ ಸೌಕರ್ಯ ಕಲ್ಪಿಸಿ ಅಲ್ಲಿಂದ ತೆರವುಗೊಳಿಸುವ ಪ್ರಯತ್ನಗಳು ನಡೆದರೂ ಫಲ ಕಡಿಮೆ. ತಲೆತಲಾಂತರಗಳಿಂದ ಅಲ್ಲಿ ವಾಸಿಸುತ್ತಾ ಬಂದವರನ್ನು ತೆರವುಗೊಳಿಸಲೂ ಆಗದು. ಹಾಗೆಂದು ಹೊಸದಾಗಿ ಅಲ್ಲಿ ಸೇರಿಕೊಂಡವರನ್ನು ಅಲ್ಲಿ ಇರಲು ಅವಕಾಶ ಕೊಡುವುದೂ ಸರಿಯಲ್ಲ. ಹೀಗಾಗಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಸಮೀಕ್ಷೆಯನ್ನು ನಮ್ಮ ಮತ್ತು ಪಂಚಾಯಿತಿ ಸಿಬ್ಬಂದಿಗಳ ನೆರವಿನಿಂದ ಮಾಡಿಸಲಾಯಿತು. ಅವರ ಕುಟುಂಬದ ಸದಸ್ಯರುಗಳ ವಿವರ, ವಿದ್ಯಾಭ್ಯಾಸ, ಉದ್ಯೋಗ, ಹೊಂದಿರುವ ಜಮೀನುಗಳ ವಿವರ, ಆರ್ಥಿಕ ಸ್ಥಿತಿ-ಗತಿಗಳ ಬಗ್ಗೆಯೂ ವಿವರ ಸಂಗ್ರಹಿಸಲಾಯಿತು. ೨೦೦೧ರ ಜನಗಣತಿ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯೂ ನೆರವಿಗೆ ಬಂದಿತು. ಒಟ್ಟು ೨೯೨ ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ವಾಸವಿದ್ದವು. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ನಮ್ಮ ಇಬ್ಬರು ಸಿಬ್ಬಂದಿಗೆ ನಕ್ಸಲರೆಂದು ಹೇಳಿಕೊಂಡಿದ್ದ ಕೆಲವರು ಹೆದರಿಸಿದ್ದರಿಂದ ಅವರು ಹೆದರಿ ಓಡಿಬಂದಿದ್ದರು. ನಂತರ ಪೋಲಿಸ್ ರಕ್ಷಣೆಯನ್ನೂ ಸಿಬ್ಬಂದಿಗೆ ಒದಗಿಸಲಾಗಿತ್ತು. ಅವರುಗಳಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತೂ ವಿವರ ಪಡೆಯಲಾಯಿತು. ಕುತೂಹಲಕರ ವಿಷಯಗಳೂ ತಿಳಿದುಬಂದವು. ಕೆಲವರಿಗೆ ಅರಣ್ಯ ಪ್ರದೇಶದ ಹೊರಗೆ ಬೇರೆ ಸ್ವಂತದ ಮನೆಗಳಿದ್ದವು. ಪಟ್ಟಣದಲ್ಲಿ ವಾಸಿಸುತ್ತಿದ್ದ ಕೆಲವರು ಐಷಾರಾಮಿ ಜೀವನ ನಡೆಸುವವರು, ಕಾರುಗಳನ್ನು ಹೊಂದಿದ್ದವರಾಗಿದ್ದರು. ಆದರೆ ಅವರು ಕಾಡಿನಲ್ಲಿದ್ದ ಮನೆಗಳನ್ನು ಬಿಡಲು ತಯಾರಿರಲಿಲ್ಲ. ಹೆಚ್ಚಿನವರು ಬಡತನದಲ್ಲಿದ್ದವರಾಗಿದ್ದರೂ, ಹೇಳಿಕೊಳ್ಳುವಂತಹ ಆರ್ಥಿಕ ದುಸ್ಥಿತಿ ಇರಲಿಲ್ಲ. ಅಲ್ಲದೆ, ಅವರು ಬಿಳಿಗಿರಿರಂಗನಬೆಟ್ಟದಲ್ಲಿ ವಾಸಿಸುವ ಮೂಲ ಅರಣ್ಯವಾಸಿಗಳಂತೆ ಪಟ್ಟಣದಿಂದ ದೂರವಿದ್ದವರಾಗಿರಲಿಲ್ಲ. ಬೇಕೆಂದಾಗ ಮತ್ತು ಅವಶ್ಯಕತೆಯಿದ್ದಾಗ ಪಟ್ಟಣಕ್ಕೆ ಹೋಗಿ ಬಂದು ಮಾಡುವವರಾಗಿದ್ದರು. ಅರಣ್ಯದಲ್ಲೇ ಇರಲು ಇಷ್ಟಪಡುತ್ತಿದ್ದ ಕಾರಣವೆಂದರೆ ಅಲ್ಲಿ ಅವರಿಗೆ ವ್ಯವಸಾಯ ಮಾಡಲು ಅವಕಾಶವಿರುವುದರೊಂದಿಗೆ ಅರಣ್ಯ ಉತ್ಪತ್ತಿಗಳನ್ನು ಸಂಗ್ರಹಿಸಿ ಅದನ್ನು ಮಾರಿ ಹಣ ಮಾಡಿಕೊಳ್ಳಲು ಅನುಕೂಲವಾಗಿದ್ದುದಾಗಿತ್ತು.
     ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಆ ಪ್ರದೇಶದ ಕುಟುಂಬಗಳಿಗೆ ಮತ್ತು ಅವುಗಳಿಗೆ ಹೊಂದಿಕೊಂಡಂತಿರುವ ಗ್ರಾಮಗಳವರಿಗೆ ಒದಗಿಸಿಕೊಡಲೇಬೇಕಾದ ಸೌಕರ್ಯಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾಧಿಕಾರಿಯವರಾದ ಶ್ರೀ ಅರವಿಂದ ಶ್ರೀವಾಸ್ತವ ಮತ್ತು ಸಹಾಯಕ ಕಮಿಷನರ್ ಶ್ರೀ ಪಂಕಜಕುಮಾರ ಪಾಂಡೆಯವರು ಸಭೆಯ ನೇತೃತ್ವ ವಹಿಸುತ್ತಿದ್ದರು. ಅರಣ್ಯ ಕಾಯದೆ ಅಡ್ಡಿ ಬರುತ್ತಿದ್ದರೂ ರಸ್ತೆಯನ್ನು ತಕ್ಕಮಟ್ಟಿಗಾದರೂ ಉಪಯೋಗಕ್ಕೆ ಬರುವಂತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಕುತ್ಲೂರು, ನಾರಾವಿ ಸೇರಿದಂತೆ ೮-೧೦ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಾಯಿತು. ಸಾಧ್ಯವಾದಷ್ಟು ಅವರು ಅರ್ಜಿ ಸಲ್ಲಿಸಿ ಬಾಕಿ ಉಳಿದಿದ್ದ ಹಲವಾರು ಪ್ರಕರಣಗಳನ್ನು ಸಭೆಗಳಲ್ಲಿಯೇ ಇತ್ಯರ್ಥಪಡಿಸಲಾಯಿತು. ಪಾರ್ವತಿ ಮತ್ತು ಹಾಜಿಮಾರ ಎನ್ ಕೌಂಟರ್ ಬಳಿಕ ಸರ್ಕಾರವೂ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಸರ್ಕಾರದ ಅರಣ್ಯ, ಕಂದಾಯ, ಪಂಚಾಯಿತಿ ಮತ್ತು ಹಣಕಾಸು ಕಮಿಷನರರೂ ಈ ಸಂಪರ್ಕಸಭೆಗಳಲ್ಲಿ ಖುದ್ದಾಗಿ ಭಾಗವಹಿಸಿದ್ದರು. ಸಂಪರ್ಕ ಸಭೆಗಳಲ್ಲಿ ಎಲ್ಲಾ ಕುಟುಂಬಗಳವರಿಗೆ ಉಚಿತವಾಗಿ ಸೋಲಾರ್ ದೀಪ ಮುಂತಾದ ಅಗತ್ಯದ ಪರಿಕರಗಳನ್ನು ಒದಗಿಸಲಾಯಿತು. ಧರ್ಮಸ್ಥಳದ ಶ್ರೀಕ್ಷೇತ್ರದ ವತಿಯಿಂದಲೂ ಸಹಕಾರ ಸಿಕ್ಕಿತ್ತು. ಕುತ್ಲೂರು ಗ್ರಾಮದ ಕೆಲವು ಯುವಕ-ಯುವತಿಯರು ಸಂಪರ್ಕ ಸಭೆಗಳಿಗೆ ಜನರು ಹೋಗಬಾರದೆಂದು ಪ್ರಚೋದಿಸುತ್ತಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ತಾಲ್ಲೂಕಿನ ಒಂದು ಸಂಘ ಅಪರೋಕ್ಷವಾಗಿ ನಕ್ಸಲರಿಗೆ ಸಹಕಾರಿಯಾಗಿದ್ದು, ಬೆಂಬಲಿಸುತ್ತದೆಯೆಂಬ ಮಾತು ಕೇಳಿಬರುತ್ತಿತ್ತು. ಪೋಲಿಸರಿಗೆ ಆ ಕುರಿತು ನಿಗಾ ಇಟ್ಟಿರಲು ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಯಿತು. ಕರೆ ಬಂದಾಗ ಧಾವಿಸಲು ಅನುಕೂಲವಾಗುವಂತೆ ೨ ಸಂಚಾರಿ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಿದ್ದು ಜನರಿಗೆ ಆ ಬಗ್ಗೆ ತಿಳುವಳಿಕೆ ಕೊಡಲಾಗಿತ್ತು.


ಜನಸಂಪರ್ಕ ಸಭೆಗಳ ಮತ್ತು ಹಿರಿಯ ಅಧಿಕಾರಿಗಳ ಪೂರ್ವಭಾವಿ ಸಮಾಲೋಚನೆಯ ದೃಷ್ಯಗಳು

     ನಂತರದಲ್ಲಿ ಹಲವಾರು ವರ್ಷಗಳವರೆಗೆ ಆ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಗಳು ಕಂಡಿರಲಿಲ್ಲ. ಇದೀಗ ಮತ್ತೆ ಚಟುವಟಿಕೆಗಳು ಗರಿಗೆದರಿರುವಂತೆ ತೋರುತ್ತಿದೆ. ಸಮಸ್ಯೆಯ ನಿಜವಾದ ಮೂಲವನ್ನು ಗುರುತಿಸಲು ಹೋದರೆ ಕಾಣಸಿಗುವುದು ಭ್ರಷ್ಠಾಚಾರವೆಂಬ ಪೆಡಂಬೂತ ಮತ್ತು ಅದಕ್ಕೆ ನೀರೆರೆಯುವ ಭ್ರಷ್ಠ ರಾಜಕಾರಣಿಗಳು, ಅಧಿಕಾರಿಗಳು. ವ್ಯವಸ್ಥೆ ಸರಿಯಿದ್ದರೆ, ಭ್ರಷ್ಠಾಚಾರಕ್ಕೆ ಅವಕಾಶವಿಲ್ಲದಿರುತ್ತಿದ್ದರೆ ನಕ್ಸಲ್ ಸಮಸ್ಯೆಯೂ ಸೇರಿದಂತೆ ಬಹುತೇಕ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಕಾಣದಾಗುತ್ತಿದ್ದವು. ಬಹುತೇಕ ನಕ್ಸಲರ ಹಿಡಿತದಲ್ಲಿರುವ ಮತ್ತು ನಕ್ಸಲ್ ವಿಚಾರಗಳಿಂದ ಪ್ರೇರಿತರಾದವರು ಒಂದಲ್ಲಾ ಒಂದು ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರೇ ಆಗಿರುವುದು ಇದಕ್ಕೆ ಸಾಕ್ಷಿ. ನಕ್ಸಲ್ ವಾದಿಗಳಾಗಿ ಅತಂತ್ರವಾಗಿ ಕಾಡುಮೇಡುಗಳಲ್ಲಿ ಅಲೆದು ತಮಗೂ ನೆಮ್ಮದಿಯಿಲ್ಲದೆ, ಇತರರನ್ನೂ ನೆಮ್ಮದಿಯಿಂದಿರಲು ಬಿಡದ, ಅರಾಜಕತೆ ಪ್ರೇರಿಸುವ ಅವರ ಸ್ಥಿತಿಗೆ ನಿಜವಾದ ಕಾರಣವೇ ಈ ಭ್ರಷ್ಠಾಚಾರದ ವ್ಯವಸ್ಥೆ. ಸಣ್ಣದಾಗಲೀ, ದೊಡ್ಡದಾಗಲೀ ಭ್ರಷ್ಠಾಚಾರವನ್ನು ಕಿತ್ತು ಹಾಕಲು ಯುವಜನತೆ ಮುಂದಾಗುವ ಅನಿವಾರ್ಯತೆ ಇಂದು ಇದೆ. ರಾಜಕಾರಣಿಗಳಿಂದಂತೂ ಈ ಕೆಲಸ ಆಗದು. ಅವರನ್ನೂ ನಿಯಂತ್ರಿಸುವ ಶಕ್ತಿ ಯುವಜನತೆಗೆ ಮಾತ್ರ ಇದ್ದು, ಈ ಕೆಲಸ ಮಾಡಲು ಅವರಿಗೆ ಪ್ರೇರಣೆ ಸಿಗಲೆಂದು ಹಾರೈಸೋಣ.
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 5, 2013

ಧರೆ ಹತ್ತಿ ಉರಿದೊಡೆ . . .?

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚರ್ಚೆಗಳು, ಸಿದ್ಧಾಂತಗಳು ಸುತ್ತುತ್ತಿರುತ್ತವೆ. ಈ ಮೂರು ಅಂಶಗಳ ಕುರಿತು ವಿವಿಧ ಸಿದ್ಧಾಂತಗಳು ವಿವಿಧ ಧರ್ಮಗ್ರಂಥಗಳಾದವು, ಅದಕ್ಕನುಸಾರವಾಗಿ ಜಾತಿ, ಮತಗಳು, ಪಂಥಗಳು ಉದಯಿಸಿದವು. ನಮ್ಮ ವಿಚಾರ, ಸಿದ್ಧಾಂತಗಳನ್ನು ಎಲ್ಲರೂ ಒಪ್ಪಬೇಕು ಅನ್ನುವವರು, ನಮ್ಮದೇ ಸರಿ ಅನ್ನುವವರು. ಅದಕ್ಕಾಗಿ ಸಂಘರ್ಷಗಳು, ರಕ್ತಪಾತಗಳು ಹಿಂದಿನಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ಈಗಲೂ ಮುಂದುವರೆಯುತ್ತಿವೆ. ಈ ಮೂರು ಅಂಶಗಳ ಪೈಕಿ ಜೀವಾತ್ಮ ಮತ್ತು ಪರಮಾತ್ಮರ ಬಗ್ಗೆ ಚರ್ಚೆಯಾದಷ್ಟು ಜಡಜಗತ್ತಿನ ಬಗ್ಗೆ ಹೆಚ್ಚು ಚರ್ಚೆಯಾದಂತಿಲ್ಲ. ಈ ಬಗ್ಗೆ ಈ ಇಲ್ಲಿ ಚರ್ಚಿಸೋಣ.
     ನಾವು ಪ್ರಕೃತಿ ಎಂದು ಕರೆಯುವ ಈ ಜಡಜಗತ್ತು ಸೃಷ್ಟಿಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ  ಶೂನ್ಯದಿಂದ ಸೃಷ್ಟಿಸಿದ ಎಂದು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಜಗತ್ತಿನ ಸೃಷ್ಟಿ,  ಸ್ಥಿತಿ, ಲಯಗಳಿಗೆ ಸಾಕ್ಷೀಭೂತನಾಗಿದ್ದು ಈ ಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವವನು ಭಗವಂತನೆನ್ನಬಹುದು. 
     ಮೊದಲೇ ಪ್ರಸ್ತಾಪಿಸಿದಂತೆ ಮೂರು ಅಂಶಗಳು, ಜಗತ್ತು ಅರ್ಥಾತ್ ಪ್ರಕೃತಿ, ಜೀವ ಮತ್ತು ದೇವ, ಇವುಗಳ ಅಸ್ತಿತ್ವದ ರೀತಿ ತರ್ಕಿಸುವವರಿಗೆ, ಜಿಜ್ಞಾಸೆ ಮಾಡುವವರಿಗೆ ಬಹು ದೊಡ್ಡ ಆಯಾಮವನ್ನು ಒದಗಿಸುತ್ತದೆ. ದೇವರು ಎಂಬ ಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತದೆ, ಅದು ಗೋಚರವೋ, ಅಗೋಚರವೋ, ಆಕಾರವೋ, ನಿರಕಾರವೋ, ಏನೋ ಒಂದು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ದೇವರ ಅಸ್ತಿತ್ವವನ್ನು ನಂಬದ ನಾಸ್ತಿಕರೂ ಸಹ ಅಗೋಚರ ನಿಯಂತ್ರಕ ಶಕ್ತಿಯ ಬಗ್ಗೆ ಒಪ್ಪುತ್ತಾರೆ. ಹಾಗಾದರೆ ಅಂತಹದೊಂದು ಇದೆ, ಅದು ಅನಂತ ಮತ್ತು ಅನೂಹ್ಯ, ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದು ಒಪ್ಪಬಹುದು. ಹಾಗೆಯೇ ಜೀವದ ಅಸ್ತಿತ್ವದ ಬಗ್ಗೆ ಸಹ ಹಿಂದೆ ಚರ್ಚಿಸಲಾಗಿದೆ. (ಲೇಖನ: ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!) ಈಗ ಜಡ ಪ್ರಕೃತಿಯ ಬಗ್ಗೆ ಹೇಳುವುದಾದರೆ ಮೇಲೆ ತಿಳಿಸಿದಂತೆ ಅದು ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ ಎಂಬುದನ್ನು ನಾವು ವ್ಶೆಜ್ಞಾನಿಕ ದೃಷ್ಟಿಯಿಂದ ಯೋಚಿಸಿದರೂ ಒಪ್ಪಲೇಬೇಕಾದ ಸಂಗತಿ. ಹೀಗೆ ಜಗತ್ತು, ಜೀವ ಮತ್ತು ದೇವ ಈ ಮೂರೂ ಸಂಗತಿಗಳು ಶಾಶ್ವತ, ಅನಂತವೆಂಬ ವಾದ ಅತ್ಯಂತ ಸಮಂಜಸವಾಗಿ ತೋರುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಮ್ಪವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ. 
     ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
     ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
    ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ. 
     ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಇನ್ನು ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು. ಈ ದೇಹ ಪಂಚಭೂತಗಳಿಂದ -ನೆಲ, ಜಲ, ಆಕಾಶ, ವಾಯು, ಅಗ್ನಿ- ಆದುದು ಎಂಬುದು ಸರ್ವವಿದಿತ. ಈ ಪಂಚಭೂತಗಳಿಂದ ಸೃಷ್ಟಿಯಾದ ದೇಹದಲ್ಲಿರುವ ಜೀವದಿಂದ ಆ ದೇಹಕ್ಕೆ ಅರ್ಥ ಬರುತ್ತದೆ. ಸತ್ತಾಗ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ, ಅದರೊಳಗಿನ ಜೀವಾತ್ಮ ಇನ್ನೊಂದು ರೂಪದಲ್ಲಿ ಅಸ್ತಿತ್ವ ಹೊಂದುತ್ತದೆ. ಪ್ರತಿ ಮಾನವನೂ ಮೂರು ರೀತಿಯ ಋಣಗಳನ್ನು-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ತೀರಿಸಬೇಕೆಂದು ಹೇಳುತ್ತಾರೆ. ಈ ದೇವಋಣವನ್ನು ತೀರಿಸುವುದಾದರೂ ಹೇಗೆ? ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? ಯಾವುದಾದರೂ ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ, ಹರಕೆ ಕಟ್ಟಿಕೊಂಡು ತೀರಿಸುವುದರಿಂದ, ವಜ್ರದ ಕಿರೀಟ, ಚಿನ್ನದ ರಥ ಮಾಡಿಸಿಕೊಡುವುದರಿಂದ, ದೇವರದೇ ಸೃಷ್ಟಿಯಾದ ಹಣ್ಣು, ಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದಷ್ಟೇ ದೇವಋಣ ತೀರುವುದೇ? ವಿಚಾರ ಮಾಡಬೇಕಾದ ಸಂಗತಿಯಿದಲ್ಲವೇ?

ಸಾಲವನು ಪಡೆದಿಹೆವು ಋಣಿಗಳಾಗಿಹೆವು 
ಶರೀರವಿತ್ತ ದೇವಗೆ ಹೆತ್ತರ್ಗೆ ಹೊತ್ತರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||

     ನಿಜ, ಋಣಮುಕ್ತರಾಗದೆ ನಮಗೆ ಮುಕ್ತಿಯಿಲ್ಲ. ಪಂಚಭೂತಗಳಿಂದ, ಅರ್ಥಾತ್ ಪ್ರಕೃತಿಯಿಂದ, ಶರೀರ ಸೃಷ್ಟಿಯಾಗಿದ್ದು, ಪ್ರಕೃತಿಯಿಲ್ಲದಿದ್ದರೆ ಜೀವಗಳ ಉಗಮಕ್ಕೆ ಅವಕಾಶವೆಲ್ಲಿರುತ್ತಿತ್ತು? ಆದ್ದರಿಂದ ನಿಜವಾಗಿ ದೇವಋಣವನ್ನು ತೀರಿಸುವುದೆಂದರೆ ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ಇದೇ ನಮ್ಮ ಧರ್ಮ, ನಿಜವಾಗಿ ಪಾಲಿಸಬೇಕಾಗಿರುವ ಧರ್ಮ. ಆದರೆ, ಇಂದೇನಾಗುತ್ತಿದೆ? ಭೂದಾಹ ಅರಣ್ಯಗಳನ್ನು, ಅರಣ್ಯವನ್ನು ಆಶ್ರಯಿಸಿರುವ ಜೀವಸಂಕುಲವನ್ನು ನಾಶಮಾಡುತ್ತಿದೆ. ಅಂತರ್ಜಲವನ್ನು ನಮ್ಮ ದಾಹವನ್ನು ತಣಿಸಲು ಮಿತಿಮೀರಿ ಹೀರಲಾಗುತ್ತಿದೆ; ಅಂತರ್ಜಲದ ಮೂಲಗಳಾದ ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ. ವಾಯುಮಾಲಿನ್ಯವನ್ನು ಎಗ್ಗಿಲ್ಲದೆ ಮಾಡುತ್ತಾ ಜೀವರಕ್ಷಕ ಓಜೋನ್ ಕವಚವನ್ನು ಛಿದ್ರಗೊಳಿಸಲಾಗುತ್ತಿದೆ. ಹೇಳತೀರದಷ್ಟು ಜಲಮಾಲಿನ್ಯ ಮಾಡಿ ಅನೇಕ ರೋಗ-ರುಜಿನಗಳಿಗೆ ಕಾರಣಕರ್ತರು ನಾವೇ ಆಗಿದ್ದೇವೆ. ಹೀಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಧರೆ ಹತ್ತಿ ಉರಿದೊಡೆ ನಿಲಲಹುದೆ? ಭೂಮಿಯ ಸಮತೋಲನ ತಪ್ಪಿ ಪ್ರಳಯವಾಗಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕಿಲ್ಲ. ನಾವು ಪ್ರಕೃತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು. ನೆಲ, ಜಲ, ವಾಯುಗಳನ್ನು ಸಂರಕ್ಷಿಸಲು ನಾವು ಸಂಕಲ್ಪಿಸಬೇಕು; ಕನಿಷ್ಠ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳ ದೃಷ್ಟಿಯಿಂದಾದರೂ ಈ ಭೂಮಿಯನ್ನು ಕಾಪಾಡಬೇಕಾದುದು, ಯಾವ ಪ್ರಕೃತಿಯಿಂದ ನಮಗೆ ಅರ್ಥ ಬಂದಿದೆಯೋ, ನಾವು ಇದ್ದೇವೆಯೋ, ಆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿಜವಾಗಿ ತೀರಿಸಬೇಕಾಗಿರುವ ದೇವಋಣವೆಂದರೆ ಇದೇ ಹೊರತು ಮತ್ತೊಂದಲ್ಲ. 
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಪ್ರಕೃತಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ!
-ಕ.ವೆಂ.ನಾಗರಾಜ್
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು.]