ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಮಾರ್ಚ್ 26, 2018

ಒಳ್ಳೆಯ ದಿನಗಳು ಬರಲಿವೆ!


     ಹೌದು, ಒಳ್ಳೆಯ ದಿನಗಳು ಬರಲಿವೆ! ಈ ಮಾತನ್ನು ಯಾವುದೇ ರಾಜಕೀಯ ನಾಯಕರನ್ನು ಸಮರ್ಥಿಸಲು ಬರೆಯುತ್ತಿಲ್ಲ ಅಥವ ಈ ಮಾತಿಗೆ ರಾಜಕೀಯ ಮಹತ್ವವನ್ನೂ ಕೊಡಬೇಕಿಲ್ಲ. ನಾನು ಸಹಜವಾದ ವಿಷಯವನ್ನು ಸಹಜವಾಗಿ ಪ್ರಸ್ತಾಪಿಸುವ ಸಲುವಾಗಿ ಈ ವಾಕ್ಯವನ್ನು ಆರಿಸಿಕೊಂಡಿರುವೆ, ಅಷ್ಟೆ. ಪ್ರತಿಯೊಬ್ಬರೂ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದುಕೊಂಡೇ ಜೀವಿಸುತ್ತಾರೆ ಎಂಬುದು ಸತ್ಯ. ಈಗ ಇರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಬಾಳಬೇಕು ಎಂಬುದೇ ಎಲ್ಲರ ಪ್ರಬಲವಾದ ಇಚ್ಛೆಯಾಗಿರುವುದರಿಂದ, ಈಗ ಇರುವ ಕಷ್ಟದ, ದುಃಖದ ಸ್ಥಿತಿಯನ್ನು ಸಹಿಸಿಕೊಂಡು ಮುಂದುವರೆಯುವುದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯಿಂದ! ಒಳ್ಳೆಯ ದಿನಗಳಿಗಾಗಿ ನಮ್ಮ ಪ್ರಯತ್ನ ಅಚಲವಾಗಿದ್ದರೆ, ಸತತವಾಗಿದ್ದರೆ ಆ ದಿನಗಳು ಬಂದೇ ಬರುತ್ತವೆ. 
      ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ!      ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
     ಒಂದು ಅರ್ಥದಲ್ಲಿ ನೋಡಿದರೆ ನಾವು ಬದುಕಿರುವ, ಉಸಿರಾಡುತ್ತಿರುವ ಪ್ರತಿದಿನವೂ ಒಳ್ಳೆಯ ದಿನವೇ! ಏಕೆಂದರೆ ಮತ್ತಷ್ಟು ಒಳ್ಳೆಯದನ್ನು ನೋಡಲು, ಕಾಣಲು ಪ್ರತಿದಿನವೂ ಅವಕಾಶ ಮಾಡಿಕೊಡುತ್ತದೆ. ಕೆಲವು ದಿನಗಳು ಕೆಟ್ಟ, ಕಷ್ಟದ, ದುಃಖದ ದಿನಗಳೆಂದು ನಮಗೆ ಅನ್ನಿಸಬಹುದು. ಒಳ್ಳೆಯ ದಿನಗಳ, ಸಂತೋಷದ ಕ್ಷಣಗಳ ಉತ್ಕಟ ಅನುಭವವಾಗಬೇಕಾದರೆ ದುಃಖ, ಕಷ್ಟಗಳ ಅನುಭವವೂ ಆಗಬೇಕು. ಬೆಳಿಗ್ಗೆ ಎದ್ದಾಗ ನಮ್ಮ ಭುಜಗಳ ಮೇಲೆ ತಲೆ ಇದ್ದರೆ, ಇಂದು ಶುಭದಿನ, ಶುಭವಾಗಲಿದೆ ಎಂದೇ ದಿನವನ್ನು ಪ್ರಾರಂಭಿಸಿದರೆ ಆ ದಿನ ಶುಭವಾಗಿಯೇ ಇರುತ್ತದೆ. 1975-77ರಲ್ಲಿ ಅಂದಿನ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಾಳ ತುರ್ತು ಪರಿಸ್ಥಿತಿ ಹೇರಿ, ಪ್ರಜಾಫ್ರಭುತ್ವಕ್ಕೆ ಕಳಂಕ ತಂದಿದ್ದ ಸಂದರ್ಭದಲ್ಲಿ ಅದೆಷ್ಟು ಅಮಾಯಕರು ಜೀವ ಕಳೆದುಕೊಂಡರೋ, ಕಷ್ಟ-ನಷ್ಟಗಳನ್ನು ಅನಭವಿಸಿದರೋ ಲೆಕ್ಕವಿಲ್ಲ. ಸ್ವತಃ ನಾನೂ ಹಾಸನದ ಜೈಲಿನಲ್ಲಿ ಭಾರತ ರಕ್ಷಣಾ ಕಾಯದೆಯ ಅಡಿಯಲ್ಲಿ ಬಂಧಿಸಲ್ಪಟ್ಟಿದ್ದೆ. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ನನ್ನ ಮೇಲೆ ಹೂಡಲಾಗಿತ್ತು. ನನ್ನನ್ನು ನೌಕರಿಯಿಂದ ತೆಗೆದಿದ್ದರು. ಆಗ ಜೈಲಿನ ಗೋಡೆಯನ್ನು ಒರಗಿಕೊಂಡು ಅನಿಶ್ಚಿತ ಭವಿಷ್ಯದ ಕುರಿತು ಚಿಂತಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡರೆ ಇಂದಿನ ಪ್ರತಿಯೊಂದು ದಿನವೂ ನನಗೆ ಸಂತೋಷದ ದಿನವಾಗಿ ಕಾಣುತ್ತದೆ. ಅಂದಿನ ಕಷ್ಟದ ದಿನಗಳು ಮುಂದೆ ನನ್ನನ್ನು ಮಾನಸಿಕವಾಗಿ ಮತ್ತಷ್ಟು ಬಲಿಷ್ಠನನ್ನಾಗಿ ಮಾಡಿದವು ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಕೆಟ್ಟ ದಿನಗಳನ್ನು ನಿಭಾಯಿಸಬಲ್ಲವನು ಒಳ್ಳೆಯ ದಿನಗಳನ್ನು ಕಾಣಬಲ್ಲ. ಜೀನ್ ಸೈಮನ್ಸ್ ಎಂಬಾಕೆ ಬರೆಯುತ್ತಾಳೆ, "ನನ್ನ ತಾಯಿಯ ಜೀವನ ನರಕವಾಗಿತ್ತು. ಆಕೆ 14 ವರ್ಷದವಳಾಗಿದ್ದಾಗ ನಾಝಿಗಳ ಯಾತನಾಶಿಬಿರದಲ್ಲಿ ಬಂದಿಯಾಗಿದ್ದಳು. ಈಗ ಜೀವನದ ಬಗ್ಗೆ ಅವಳ ಅನಿಸಿಕೆಯೆಂದರೆ, ಭೂಮಿಯ ಮೇಲಿನ ಪ್ರತಿಯೊಂದು ದಿನವೂ ಶುಭದಿನವೇ!" ಮೃತ್ಯುವಿನ ದರ್ಶನ ಮಾಡಿಬಂದು ಬದುಕುಳಿದವರೆಲ್ಲರ ಅನುಭವವೂ ಸಾಮಾನ್ಯವಾಗಿ ಇದೇ ಆಗಿರುತ್ತದೆ.
     ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾವಾದವೇ ಜೀವನ; ಅಯ್ಯೋ, ಎಲ್ಲವೂ ಮುಗಿಯಿತು ಎನ್ನುವ ನಿರಾಶಾವಾದವೇ ಮರಣ. ಆಶಾವಾದಕ್ಕೆ ದುರ್ಯೋಧನ ಉತ್ತಮ ಉದಾಹರಣೆಯಾಗಿದ್ದಾನೆ. ತಾನೊಬ್ಬನೇ ಹಸ್ತಿನಾಪುರವನ್ನು ಆಳಬೇಕು, ಪಾಂಡವರನ್ನು ಸೋಲಿಸಲೇಬೇಕು ಎಂಬ ಛಲದಿಂದ ಕುರುಕ್ಷೇತ್ರದ ಯುದ್ದದಲ್ಲಿ ತೊಡಗಿದ್ದಾಗ, ಅವನ ಕಣ್ಣಮುಂದೆಯೇ ಅವನ ಸಹೋದರರು ಹತರಾದರು, ದ್ರೋಣ, ಭೀಷ್ಮ, ಕರ್ಣರಂತಹ ಅತಿರಥ, ಮಹಾರಥರೆಲ್ಲರೂ ಧರೆಗುರುಳಿದರು. ಆದರೂ ಅವನಿಗೆ ವಿಶ್ವಾಸವಿತ್ತು, ಶಕುನಿ ಇನ್ನೂ ಇದ್ದಾನೆ, ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತಾನೆ. ಸ್ವತಃ ತಾನು ಸಾಯುವವರೆಗೂ ತಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇಟ್ಟುಕೊಂಡೇ ಸತ್ತವನು ಅವನು. ದುರ್ಯೋಧನನ ಜೀವನ ನಮಗೆ ಆದರ್ಶವಲ್ಲದಿದ್ದರೂ, ಅವನ ಎಡೆಬಿಡದ ಆಶಾವಾದ, ಛಲಗಳು ಅನುಕರಣೀಯವಾಗಿವೆ.
     ಕೇವಲ ಆಸೆ, ಭರವಸೆ, ನಿರೀಕ್ಷೆಗಳೇ ನಮ್ಮ ಒಳ್ಳೆಯ ದಿನಗಳ ನಿರೀಕ್ಷೆಗೆ ಸಾಕಾಗುವುದಿಲ್ಲ. ನಮ್ಮ ಒಳ್ಳೆಯ ದಿನಗಳನ್ನು ಬೇರೆ ಯಾರೋ ತಂದುಕೊಡುತ್ತಾರೆ ಎಂದು ನಿರೀಕ್ಷಿಸುವುದೂ ತರವಲ್ಲ. ನಾವು ಯಾರೋ ನಮಗೆ ಒಳ್ಳೆಯ ದಿನಗಳನ್ನು ತಂದುಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಕೈಕಟ್ಟಿ ಕುಳಿತರೆ ಹಿಂದೆ ಉಳಿಯುವವರು, ಭ್ರಮನಿರಸನಕ್ಕೆ ಪಕ್ಕಾಗುವವರು ನಾವೇನೇ. ನಮ್ಮ ಒಳ್ಳೆಯ ದಿನಗಳಿಗಾಗಿ ನಾವೇ ಶ್ರಮಿಸಬೇಕು. ವಿವೇಕಾನಂದರು ಹೇಳಿದಂತೆ, ನಮ್ಮ ಏಳಿಗೆಯ ಶಿಲ್ಪಿಗಳು ನಾವೇ! ಪರದೇಶದ ಒಬ್ಬ ಯಾತ್ರಿಕ ಒಮ್ಮೆ ಒಬ್ಬ ಸನ್ಯಾಸಿಯನ್ನು ಭೇಟಿ ಮಾಡಿದನಂತೆ. ಒಂದು ಸಣ್ಣ ಗುಡಿಸಲಿನಲ್ಲಿದ್ದ ಆ ಸನ್ಯಾಸಿಯ ಹತ್ತಿರ ಇದ್ದುದು ಒಂದು ಚಾಪೆ ಮತ್ತು ಒಂದು ಕುಡಿಯುವ ನೀರಿನ ಪಾತ್ರೆ ಅಷ್ಟೆ. ಆಶ್ಚರ್ಯಗೊಂಡ ಯಾತ್ರಿಕ ಸನ್ಯಾಸಿಯನ್ನು ಕೇಳಿದನಂತೆ: "ಸ್ವಾಮಿ, ನಿಮ್ಮ ಪೀಠೋಪಕರಣಗಳು ಎಲ್ಲಿ?" ಸನ್ಯಾಸಿಯಿಂದ ಮರುಪ್ರಶ್ನೆ ಬಂದಿತು: "ನಿಮ್ಮ ಪೀಠೋಪಕರಣಗಳು ಎಲ್ಲಿ?" ಯಾತ್ರಿಕ ಹೇಳಿದ, "ಸ್ವಾಮಿ, ನಾನೊಬ್ಬ ಯಾತ್ರಿಕ. ನನ್ನ ಪೀಠೋಪಕರಣಗಳು ನನ್ನ ಊರಿನಲ್ಲಿವೆ". ಸನ್ಯಾಸಿ ಹೇಳಿದನಂತೆ, "ನಾನೂ ಒಬ್ಬ ಯಾತ್ರಿಕ!" ಜೀವನದ ಪಾಠ ಇಲ್ಲಿದೆ. ಜನರು ತಾವು ಶಾಶ್ವತವಾಗಿರುತ್ತೇವೆಂದುಕೊಂಡು ಮೂರ್ಖರಂತೆ ಬಾಳುತ್ತಾರೆ. ಅರ್ಥ ಮಾಡಿಕೊಂಡರೆ ನಮ್ಮ ಜೀವನದ ಪ್ರತಿದಿನವೂ ಶುಭದಿನ ಆಗಿರಲೇಬೇಕು! ಎಲ್ಲರಿಗೂ, ಎಲ್ಲಾ ದಿನಗಳೂ ಶುಭದಿನಗಳಾಗಲೆಂದು ಆಶಿಸೋಣ. ನಿಜ ಅಲ್ಲವೇ? ಒಳ್ಳೆಯ ದಿನಗಳು ಖಂಡಿತಾ ಬರಲಿವೆ! ಸ್ವಾಗತಿಸಲು ಸಿದ್ಧರಾಗೋಣ. 
-ಕ.ವೆಂ.ನಾಗರಾಜ್.

ಬುಧವಾರ, ಮಾರ್ಚ್ 21, 2018

ಬಸವಣ್ಣನವರ ಜಾತಿ ಸರ್ಟಿಫಿಕೇಟು!


"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ."
"ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು.
"ಹೇಳಿ ಸಾರ್, ಏನು ಬರೋಣವಾಯಿತು?"
"ಒಂದು ಜಾತಿ ಸರ್ಟಿಫಿಕೇಟ್ ಬೇಕಿತ್ತು. ಕೌಂಟರಿನಲ್ಲಿ ಅರ್ಜಿ ಕೊಟ್ಟೆ. ತೆಗೆದುಕೊಳ್ಳಲಿಲ್ಲ. ತಹಸೀಲ್ದಾರರಿಗೇ ಕೊಡಿ ಅಂದರು. ಅದಕ್ಕೇ ನಿಮಗೇ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ".
ಅರ್ಜಿ ನೋಡಿ ಬೆಚ್ಚಿಬಿದ್ದ ತಹಸೀಲ್ದಾರರು,
"ಏನ್ಸಾರ್ ಇದು? ಬಸವಣ್ಣನವರ ಜಾತಿ ಸರ್ಟಿಫಿಕೇಟಾ? ಯು ಮೀನ್ ಜಗಜ್ಯೋತಿ ಬಸವೇಶ್ವರ?"
"ಯಸ್, ಈ ಮೀನ್ ಜಗಜ್ಯೋತಿ ಬಸವೇಶ್ವರ. ಅವರ ತಂದೆ, ತಾಯಿ ಹೆಸರು, ಅವರ ಜಾತಿಯ ಬಗ್ಗೆ ಅಧಿಕೃತವಾದ ಮಾಹಿತಿ ಇರುವ ಪ್ರಮಾಣಿತ ದಾಖಲೆಗಳು ಎಲ್ಲಾ ಕೊಟ್ಟಿದ್ದೇನೆ. ಇವುಗಳ ಆಧಾರದಲ್ಲಿ ನನಗೆ ಜಾತಿ ಸರ್ಟಿಫಿಕೇಟ್ ಕೊಡಿ".
ದೇಶಾವರಿ ನಗೆ ನಗುತ್ತಾ ತಹಸೀಲ್ದಾರರು,
"ತಮಾಷೆ ಮಾಡ್ತಾ ಇದೀರಾ ಸಾರ್? ಅವರ ಜಾತಿ ಸರ್ಟಿಫಿಕೇಟ್ ಈಗ ಕೊಡೊಕ್ಕಾಗುತ್ತಾ?"
"ಏಕೆ ಕೊಡಕ್ಕಾಗಲ್ಲ? ಸತ್ತು ಹೋದವರಿಗೆ ಯಾವುದೇ ಸರ್ಟಿಫಿಕೇಟ್ ಕೊಡಬಾರದು ಅಂತ ಕಾನೂನು ಇನ್ನೂ ಬಂದಿಲ್ಲ."
"ಹಾಗಲ್ಲಾ ಸಾರ್. ಅಷ್ಟಕ್ಕೂ ನಿಮಗೆ ಹೇಗೆ ಕೊಡೊಕ್ಕಾಗತ್ತೆ? ನಿಮಗೂ ಅವರಿಗೂ ಏನು ಸಂಬಂಧ?"
"ಏನ್ರೀ ಅರ್ಥ? ಬಸವಣ್ಣನವರಿಗೂ ನಮಗೂ ಸಂಬಂಧವಿಲ್ಲ ಅಂದರೆ ಅವರು ಇನ್ನು ಯಾರಿಗೆ ಸಂಬಂಧ? ಬಸವಣ್ಣನವರು ಎಲ್ಲರಿಗೂ ಸಂಬಂಧಪಟ್ಟವರು."
ತಹಸೀಲ್ದಾರರು ಮೌನವಾಗಿ ಕುಳಿತಾಗ ರಾಯರೇ ಮುಂದುವರೆಸಿದರು,
"ನೋಡಿ, ಸರ್ಕಾರ ಲಿಂಗಾಯತರು ಹಿಂದೂಗಳಲ್ಲ, ಅವರೇ ಬೇರೆ ಅಂತ ಬೇರೆ ಧರ್ಮ ಘೋಷಣೆ ಮಾಡಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದೆ. ನಾನು ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅಪೀಲು ಮಾಡಿದ್ದೇನೆ. ಆ ಕೇಸಿಗೆ ಸಂಬಂಧಪಟ್ಟಂತೆ ಬಸವಣ್ಣನವರ ಜಾತಿ ದಾಖಲೆಯೂ ಬೇಕಾಗುತ್ತೆ. ಅದನ್ನು ತಹಸೀಲ್ದಾರರಿಂದ ಪಡೆದುಕೊಳ್ಳಬೇಕು ಎಂಬ ಮನವಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಕೋರ್ಟಿನಿಂದಲೂ ತಮಗೆ ಸೂಚನೆ ಬರುತ್ತೆ. ನಾನೇ ಕೇಳಿದರೆ ಕಿರಿಕಿರಿ ಮಾಡಬಹುದು, ಕೊಡದೇ ಇರಬಹುದು ಎಂಬ ಸತ್ಯವೂ ನನಗೆ ಗೊತ್ತಿದ್ದರಿಂದ ಹೀಗೆ ಮಾಡಿದ್ದೇನೆ. ನನ್ನ ಪ್ರಯತ್ನವನ್ನೂ ಮಾಡೋಣ ಅಂತ ನಿಮ್ಮ ಹತ್ತಿರ ಬಂದಿದ್ದೇನೆ".
"ಸಾರ್, ನಮ್ಮನ್ನು ಮಧ್ಯಕ್ಕೆ ಸಿಕ್ಕಿಸಿಹಾಕುತ್ತಿದ್ದೀರ. ನಾನು ಎಷ್ಟಾದರೂ ನಿಮ್ಮ ಶಿಷ್ಯ. ನಿಮ್ಮಿಂದಲೇ ಪಾಠ ಕಲಿತವನು. ನೀವೇ ಒಂದು ದಾರಿ ತೋರಿಸಿಬಿಡಿ."
"ಬಸವಣ್ಣನವರ ಕಾಲದಲ್ಲಿ ಈಗಿನ ಜಾತಿ ಕಾನೂನು ಇರಲಿಲ್ಲ. ಅದಕ್ಕೇ ಅವರು ಅವರದೇ ಹೊಸಜಾತಿ ಕಟ್ಟಿದರು. ಬೇರೆ ಯಾವುದೇ ಜಾತಿಯವರು ಅವರ ಜಾತಿಗೆ ಸೇರಿಕೊಳ್ಳಲು ಅವಕಾಶವಿತ್ತು. ಸೇರಿಸಿಯೂಕೊಂಡರು. ಈಗ? ನಮ್ಮ ಅಪ್ಪ-ಅಮ್ಮನ ಜಾತಿ ಯಾವುದೋ ಅದೇ ನಮ್ಮ ಜಾತಿ! ಕಲಬೆರಕೆ ಆದರೆ ತಂದೆಯ ಜಾತಿಯೇ ಮಕ್ಕಳದೂ ಜಾತಿ. ಮುಸ್ಲಿಮ್ ಆಗಿಯೋ, ಕ್ರಿಶ್ಚಿಯನ್ ಆಗಿಯೋ ಮತಾಂತರ ಆದರೆ, ಯಾವುದೋ ವಶೀಲಿಬಾಜಿಯಿಂದ ಅವರಿಗೆ ಆ ಜಾತಿ ಸರ್ಟಿಫಿಕೇಟ್ ಕೊಡ್ತೀರಿ. ನನ್ನ ಮಗ ಮಾತೆ ಮಾದೇವಿಯಿಂದ ದೀಕ್ಷೆ ಪಡೆದುಕೊಂಡಿದ್ದಾನೆ ಅಂತ ದಾಖಲೆ ತೋರಿಸಿದರೆ ನೀವು ಅವನಿಗೆ ಲಿಂಗಾಯತ ಅಂತ ಸರ್ಟಿಫಿಕೇಟ್ ಕೊಡ್ತೀರಾ?"
"ಸಾರ್. ಅದೆಲ್ಲಾ ಬಿಟ್ಬಿಡಿ ಸಾರ್. ಈಗ ನಾನು ಏನು ಮಾಡಬಹುದು ಅನ್ನೋದಕ್ಕೆ ದಾರಿ ತೋರ್ಸಿ ಸಾರ್."
"ನೋಡಿ, ಬಸವಣ್ಣನವರು ಬ್ರಾಹ್ಮಣ ಅನ್ನೋದಕ್ಕೆ ದಾಖಲೆ ಇದೆ, ಲಿಂಗಾಯತ ಅನ್ನೋದಕ್ಕೆ ದಾಖಲೆ ಇದೆ. ವೀರಶೈವ ಅನ್ನೋದಕ್ಕೆ ದಾಖಲೆ ಇದೆ. ನಿಮಗೆ ಯಾವ ಸರ್ಟಿಫಿಕೇಟ್ ಕೊಡಬೇಕು ಅನ್ಸುತ್ತೋ ಅದನ್ನು ಕೊಡಿ."
"ಈಗಿನ ಕಾನೂನು ಪ್ರಕಾರ ಬಸವಣ್ಣನವರು ಬ್ರಾಹ್ಮಣ ಅಂತ ಕೊಡೋಕೆ ಅವಕಾಶವಿದೆ. ಹಾಗೆ ಕೊಟ್ಟರೆ ಸಿಎಮ್ ಸಾಹೇಬರು, ಮಿನಿಸ್ಟ್ರು ಪಾಟೀಲರು ಫುಟ್ ಬಾಲ್ ಆಡಿಬಿಡ್ತಾರೆ. ಲಿಂಗಾಯತ ಅಂತ ಕೊಟ್ಟರೆ ವೀರಶೈವರು ಮೇಲೆ ಬೀಳ್ತಾರೆ. ವೀರಶೈವ ಅಂತ ಕೊಟ್ರೆ ಲಿಂಗಾಯತರು ಸುಮ್ಮನಿರ್ತಾರಾ? ಒಟ್ಟಿನಲ್ಲಿ ಜನರ ಕೈಲಿ ಹೊಡೆಸಿಕೊಳ್ಳೋ ಕೆಲಸ."
"ಸರ್ಟಿಫಿಕೇಟ್ ಕೊಡಕ್ಕಾಗಲ್ಲ ಅಂತನಾದರೂ ಕೊಡಿ. ನನಗೆ ಎಂಥದೋ ಒಂದು ಸರ್ಟಿಫಿಕೇಟ್ ಬೇಕು ಅಷ್ಟೆ."
ಸಮಾಲೋಚನೆಗಾಗಿ ಕರೆಸಿದ್ದ ಡೆಪ್ಯುಟಿ ತಹಸೀಲ್ದಾರರು, 'ಎಸಿಯಿಂದ ಕ್ಲಾರಿಫೀಕೇಶನ್ ಪಡೆಯೋಣ ಸಾರ್,'ಎಂದು ಸಲಹೆ ಕೊಟ್ಟರು.
"ಪ್ರಯೋಜನ ಇಲ್ಲಾ ಕಣ್ರೀ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ ಅಂತ ನಮಗೇ ವಾಪಸು ಹಾಕಿಬಿಡ್ತಾರೆ."
ಇವರ ಪೇಚಾಟ ನೋಡಿದ ರಾಯರು, "ನಿಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ನಾನು ನಾಲ್ಕು ದಿನ ಬಿಟ್ಟು ಬರ್ತೇನೆ. ನೀವು ನನಗೆ ಉತ್ತರ ಕೊಡದೇ ಇದ್ದರೂ ಕೋರ್ಟಿಗಂತೂ ಉತ್ತರ ಹೇಳಲೇಬೇಕಾಗುತ್ತೆ. ನಮಸ್ಕಾರ."
ತಹಸೀಲ್ದಾರರು, 'ಈ ದರಿದ್ರ ಸರ್ಕಾರ' ಅಂತ ಏನೋ ಹೇಳಲು ಹೊರಟವರು ತುಟಿ ಕಚ್ಚಿಕೊಂಡು ಸುಮ್ಮನಾದರು. ತಲೆ ಮೇಲೆ ಕೈಹೊತ್ತು ಕುಳಿತರು.
-ಕ.ವೆಂ.ನಾಗರಾಜ್.

ಬುಧವಾರ, ಮಾರ್ಚ್ 7, 2018

ಕುತಂತ್ರಕ್ಕೆ ಬಲಿಯಾದ ವಿಜಯನಗರದ ಅರಸ ರಾಮರಾಯ - Ramaraya, King of Vijayanagar - victim of treachery


     ಯವನರ ಇತಿಹಾಸವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೆಂದರೆ, ಅವರು ನೇರ ಯುದ್ಧಗಳಲ್ಲಿ ಜಯಿಸಿರುವುದು ವಿರಳ. ಕುತಂತ್ರಗಳು, ಮೋಸದ ನಡೆಗಳಿಂದ ಅವರು ಮುನ್ನಡೆಯುವುದಕ್ಕೆ ಸಹಕರಿಸುವ ದ್ರೋಹಿಗಳೂ ದೊಡ್ಡ ಮಟ್ಟದಲ್ಲಿ ಅವರ ಗೆಲುವಿಗೆ ಕಾರಣರು. ದೆಹಲಿಯನ್ನಾಳುತ್ತಿದ್ದ ರಜಪೂತ ದೊರೆ ಪೃಥ್ವೀರಾಜ ಚೌಹಾನನ ಮೇಲಿನ ದ್ವೇಷದಿಂದ ಮಹಮದ್ ಘೋರಿಗೆ ಸಹಾಯ ಮಾಡಿದ್ದವನು ನೆರೆಯ ಕನೌಜದ ರಾಜ ಜಯಚಂದ್ರ. ಹೀಗೆ ಸಹಾಯ ಮಾಡಿದವನಾದರೂ ಉದ್ಧಾರವಾದನೇ? ಇಲ್ಲ, ಆ ಜಯಚಂದ್ರನೂ ಘೋರಿಯಿಂದ ಕೊಲ್ಲಲ್ಪಟ್ಟ. ಇದರ ಪರಿಣಾಮವಾಗಿ ಭಾರತ ಶತಮಾನಗಳವರೆಗೆ ಮೊಘಲರ ಆಳ್ವಿಕೆಗೆ ಒಳಗಾಗಬೇಕಾಯಿತು. ಇತ್ತೀಚಿನ ಹೈದರಾಲಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮೈಸೂರು ಒಡೆಯರರ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸರದಾರನಾಗಿದ್ದವನು ಪರಿಶ್ರಮದಿಂದ ಮುಂದೆ ಬಂದದ್ದೇನೋ ಸರಿ. ಆದರೆ ಆತ ಮೈಸೂರಿನ ಒಡೆಯನಾಗಲು ಪ್ರಯತ್ನಿಸಿದಾಗ ಎಚ್ಚೆತ್ತ ರಾಜಮಾತೆ ಮತ್ತು ನಿಷ್ಠರ ಸಹಾಯದಿಂದ ಸೋತು ಪಲಾಯನ ಮಾಡಬೇಕಾಗಿ ಬಂದಿತು. ಸೋದರ ಸಂಬಂಧಿ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರೊಂದಿಗೆ ಪುನಃ ದಾಳಿ ಮಾಡಿದಾಗ, ಖಂಡೇರಾಯನ ನೇತೃತ್ವದ ಸೈನ್ಯದಿಂದ ಪುನಃ ಸೋತುಹೋಗಿದ್ದ. ಆಗ ಹೈದರಾಲಿಯ ನೆರವಿಗೆ ಬಂದವನು ಒಡೆಯರರ ಸಂಬಂಧಿ, ಗಡೀಪಾರಾಗಿದ್ದ ನಂಜರಾಜ ಅರಸ. ಅವನು ತನ್ನ ಸೈನ್ಯದ ಸಹಾಯವನ್ನೂ ಹೈದರಾಲಿಗೆ ಒದಗಿಸಿದ. ಆ ಸೈನ್ಯದ ಸಹಾಯದೊಂದಿಗೆ ಹೈದರಾಲಿ ಮತ್ತೆ ದಂಡೆತ್ತಿ ಬಂದ.  ಖಂಡೇರಾಯನ ಅಧಿಕಾರಿಗಳೊಂದಿಗೆ ನಂಜರಾಜ ಅರಸ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿರುವಂತೆ ಖಂಡೇರಾಯನನ್ನು ಹಿಡಿದು ಹೈದರಾಲಿಗೆ ಒಪ್ಪಿಸುವಂತೆ ಸೃಷ್ಟಿಸಿದ ನಕಲಿ ಪತ್ರಗಳು ಖಂಡೇರಾಯನಿಗೆ ಸಿಗುವಂತೆ ಹೈದರಾಲಿ ವ್ಯವಸ್ಥೆ ಮಾಡಿದ್ದ. ಇದರಿಂದ ಖಂಡೇರಾಯ ಹೆದರಿ ಓಡಿಹೋಗಿದ್ದ. ನಾಯಕನಿಲ್ಲದ ಸೈನ್ಯವನ್ನು ಹೈದರಾಲಿ ಸುಲಭವಾಗಿ ಸೋಲಿಸಿದ್ದಲ್ಲದೆ ಮೈಸೂರಿಗೆ ಒಡೆಯನೆನಿಸಿದ. ನಂಜರಾಜ ಅರಸ ನೆರವಿಗೆ ಬರದೇ ಇದ್ದಿದ್ದರೆ ಕರುನಾಡಿನಲ್ಲಿ ಹೈದರ್ ಮತ್ತು ಟಿಪ್ಪೂರ ಆಡಳಿತ ಇರುತ್ತಲೇ ಇರಲಿಲ್ಲ. ನಂತರ ಕೆಳದಿ ಸಂಸ್ಥಾನದ ರಾಜಧಾನಿ ಬಿದನೂರಿನ ಮೇಲೆ ದಾಳಿ ಮಾಡಿದಾಗಲೂ ಹೈದರ್ ರಾಣಿ ವೀರಮ್ಮಾಜಿಯಿಂದ ಸೋತಿದ್ದ. ಅದರೆ ನಾಡದ್ರೋಹಿ ಮಂತ್ರಿ ಲಿಂಗಣ್ಣ ಅರಮನೆಯ ರಹಸ್ಯದ್ವಾರದ ರಹಸ್ಯ ತಿಳಿದ ಹೈದರ್ ಆ ಮಾರ್ಗದ ಮೂಲಕ ರಾಣಿ ಮತ್ತು ರಾಜಕುಮಾರನನ್ನು ಸೆರೆಹಿಡಿದು ಅಪಮಾರ್ಗದಲ್ಲಿ ಯಶಸ್ಸು ಗಳಿಸಿದ್ದ. ವಿಜಯನಗರ ಸಾಮ್ರಾಜ್ಯದ ಪತನವೂ ಸಹ ಯವನರು ಹೆಣೆದ ಮೋಸದ ಬಲೆಯ ಕಾರಣದಿಂದ ಆಗಿತ್ತು. ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ ಲಿಂಗಣ್ಣಕವಿಯ ಕೃತಿ 'ಕೆಳದಿ ನೃಪವಿಜಯ'ದಲ್ಲಿ ವಿಜಯನಗರದ ಪತನದ ಸನ್ನಿವೇಶವನ್ನು ವಿವರಿಸಿರುವ ಪರಿ ಹೀಗಿದೆ:   
    "ವ|| ಮತ್ತಮದಲ್ಲದೆ ಯೆಡೆಯೆಡೆಗೆಳ್ತಂದು ದಾಳಿವರಿಯುತಿರ್ದವಿದ್ಧಕರ್ಣರ್ಕಳದಟಂ ಮುರಿದು ಭುಜಬಲ ಪ್ರತಾಪದಿಂ ರಾಜ್ಯಂಗೆಯುತ್ತುಮಿರಲಾ ಕಾಲದೊಳ್ ರಾಮರಾಯರ್ ವಿದ್ಯಾನಗರಿಯಿಂ ತೆರಳ್ದು ತುರುಷ್ಕರ ಮೇಲೆ ದಂಡೆತ್ತಿ ಪೋಗಿರಲ್ ತದ್ರಕ್ತಾಕ್ಷಿ ಸಂವತ್ಸರದ ಮಾಘಮಾಸ ದೊಳ್ ತುರುಷ್ಕ ಸೈನ್ಯಕ್ಕಂ ರಾಯಸೈನ್ಯಕ್ಕಂ ಮಹಾದ್ಭುತಮಾದ ಯುದ್ಧಂ ಪಣ್ಣಿ ರಾಯಸೈನ್ಯಕ್ಕಿದಿರ್ಚಿ ನಿಲಲಶಕ್ಯಮಾಗಿ ಯವನ ಸೈನ್ಯಂ ಮುರಿದು ಹರಿಹಂಚಾಗಲ್ ಬಳಿಕ್ಕಂ ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿಪಾತುಶಾಹನೆನಿಪ ನಿಜಾಮಶಾಹನುಂ ಇವರಿರ್ವರುಂ ಯುದ್ಧರಂಗದೊಳ್ಕೈಗೆಯ್ದು ನಿಂದು ನಿತ್ತರಿಸಲಮ್ಮದೆ ಪಲಾಯನಂ ಬಡೆದಿಂತು ರಾಯಸೈನ್ಯಮಂ ಮುರಿವುದಸಾಧ್ಯಮೆಂದಿರ್ವರ್ ಪಾತುಶಾಹರೊಂದಾಗಿ ಮಂತ್ರಾಲೋಚನೆಯಂ ರಚಿಸಿ ಮಾಯ ತಂತ್ರದಿಂ ಪೊರತು ಗೆಲ್ವುದಸಾಧ್ಯವೆಂದು ನಿಶ್ಚಯಂಗೆಯ್ದು ರಾಯರ ಸಮೀಪದೊಳ್ ಮುಖ್ಯಸೇವಕನಾಗಿ ವರ್ತಿಸುತಿರ್ದ ವಿಜಾಪುರದ ಅಲ್ಲಿ ಅದುಲಪಾತುಶಾಹಂಗೆ ಸಂಧಾನವನೊಡರ್ಚಿಸಿ ಜಾತ್ಯಭಿಮಾನ ಹೇತುಪಂಥಮಂ ಪುಟ್ಟಿಸಿ ಮಂತ್ರಂ ಭಿನ್ನಿಸದಂತು ಸ್ವಜಾತ್ಯಭಿಮಾನದೇವತಾಸಾಕ್ಷಿ ಪೂರ್ವಕವಾಗಿ ಖಡ್ಗಮಂ ಮುಟ್ಟಿಸಿ ಕ್ರಿಯಾಪೂರ್ವಕವಾಗಿ ತಪ್ಪದಂತು ಭಾಷೆಯಂ ತೆಗೆದುಕೊಂಡೀಪ್ರಕಾರದಿಂ ಅಲ್ಲಿ ಅದುಲಶಾಹನನೊಳಗು ಮಾಡಿಕೊಂಡು ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿನಿಜಾಮಶಾಹನುಂ ನಂಬುಗೆಯಾದೊಡೆ ಸಂಧಾನಮುಖದಿಂದೈತಂದು ಕಾಣ್ಬೆವೆಂದು ಹುಸಿಯ ವರ್ತಮಾನಮಂ ಪುಟ್ಟಿಸಿ ನಚ್ಚುಹಾಕಿ ರಾಯರಂ ಮೈಮರೆಸಿ ಸಮಯಸಾಧನೆಯಂ ರಚಿಸಿ ಬಳಿಕ್ಕಂ ವಿಜಾಪುರದ ಅಲ್ಲಿ ಅದುಲಶಾಹನ ಸಂಚಿನ ಮೇಲಾ ಪಾತುಶಾಹರೊಂದಾಗಿ ಮೋಸದ ಮೇಲೆ ಶಾಲಿವಾಹನ ಶಕ ವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘಬಹುಳದಲ್ಲಿ ರಕ್ಕಸದಂಗಡಿಯೆಂಬ ಸ್ಥಳದಲ್ಲಿ ರಾಮರಾಯರಂ ಪಿಡಿದು ಶಿರಶ್ಛೇದನಂಗೈದು ಆ ಶಿರಮಂ ಕಾಶಿಗೆ ಕಳುಹಿತತ್ತತ್ಸ್ಥಾನಂಗಳಿಗೆಲ್ಲಂ ತಾವೇ ಸ್ವತಂತ್ರಕರ್ತು ಗಳಾಗಿರಲಿತ್ತಂ ರಾಯಸಂಸ್ಥಾನಂ ವಿಸ್ಖಲಿತಮಾಗಿ ವಿದ್ಯಾನಗರಂ ಪಾಳಾಗಲಾ ರಾಯರ ಮನೆವಾರ್ತೆ ಬೊಕ್ಕಸದ ಸೇನಬೋವ ಚಿನ್ನಭಂಡಾರದ ನಾರಣಪ್ಪಯ್ಯನೆಂಬಾತನಲ್ಲಿ ನಿತ್ತರಿಸಲಮ್ಮದೆ ಕುಟುಂಬಸಹಿತಂ ತೆರಳ್ದೈತಂದು ಚಿಕ್ಕಸಂಕಣನಾಯಕರ ಪಾದಾರವಿಂದವನಾಶ್ರಯಿಸಲವರ್ಗೆ ಪರಮಾಧಿಕಾರ ಭಾಗ್ಯಂಗಳನಿತ್ತು ಪೋಷಿಸಿದನಂತುಮಲ್ಲದೆಯುಂ . . ."
ಡಾ. ಕೆಳದಿ ಗುಂಡಾಜೋಯಿಸರು ಸರಳಗನ್ನಡದಲ್ಲಿ ಮಾಡಿರುವ ಗದ್ಯಾನುವಾದದ ಭಾಗ:
     "ವ|| ಮತ್ತೆ ಅದೂ ಅಲ್ಲದೆ, ಆಗಾಗ ಬಂದು ದಾಳಿ ಮಾಡುತ್ತಿದ್ದ ತುರುಕರ ಪರಾಕ್ರಮವನ್ನು ಮುರಿದು, ತನ್ನ ಭುಜಬಲಪರಾಕ್ರಮದಿಂದ ರಾಜ್ಯವನ್ನು ರಕ್ಷಿಸುತ್ತಿದ್ದನು. ಆ ಕಾಲದಲ್ಲಿ ರಾಮರಾಯರು ವಿದ್ಯಾನಗರ(ವಿಜಯನಗರ)ದಿಂದ ಹೊರಟು, ತುರುಕರ ಮೇಲೆ ದಂಡೆತ್ತಿ ಹೋಗಿ, ರಕ್ತಾಕ್ಷಿ ಸಂವತ್ಸರದ ಮಾಘಮಾಸದಲ್ಲಿ ತುರುಕರ ಸೈನ್ಯಕ್ಕೂ ಹಾಗೂ ರಾಯರ ಪಡೆಗೂ ಅದ್ಭುತವಾದ ಯುದ್ಧವು ನಡೆದು ರಾಯರ ಸೈನ್ಯದ ಎದುರಿಗೆ ಮುಸಲ್ಮಾನ ಸೈನ್ಯವು ನಿಲ್ಲಲಾರದೆ ಚದುರಿ ಹೋಯಿತು. ಆ ಬಳಿಕ ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ಪಾತುಶಾಹನೆಂದು ಹೆಸರುಳ್ಳ ನಿಜಾಮಶಾಹ ಇವರಿಬ್ಬರೂ ಯುದ್ಧರಂಗದಲ್ಲಿ ಕೈಮಾಡಿದರೂ ನಿಲ್ಲಲಾಗದೆ ಪಲಾಯನ ಮಾಡಿದರು. ಈ ಈರ್ವರೂ ಬಾದುಷಾಹರೂ ಒಂದಾಗಿ ರಾಯರ ಸೈನ್ಯವನ್ನು ಸೋಲಿಸುವುದು ಅಸಾಧ್ಯವೆಂದು ಯೋಚಿಸಿ, ಮೋಸದಿಂದ ಹೊರತು ಬೇರೇನೂ ಉಪಾಯವು ನಡೆಯದೆಂದು ನಿಶ್ಚಯಿಸಿದರು. ರಾಯರ ಸಮೀಪದಲ್ಲಿ ಆಪ್ತ ಸೇವಕನಾಗಿದ್ದ ಬಿಜಾಪುರದ ಅಲ್ಲಿ ಆದುಲಬಾದಷಹನಿಗೆ ಸಂಧಾನದ ಮೂಲಕ ಮನವೊಪ್ಪಿಸಿ, ಜಾತ್ಯಭಿಮಾನಕ್ಕೆ ಕಾರಣವಾದ ಕಟ್ಟಾಣೆಯನ್ನು (ಪಂಥವನ್ನು) ಸೃಷ್ಟಿಮಾಡಿ, ಮಂತ್ರಾಲೋಚನೆಯು ವಿಫಲವಾಗದ ರೀತಿಯಲ್ಲಿ ತಮ್ಮ ಜಾತಿಯ ಅಭಿಮಾನದೇವರ ಸನ್ನಿಧಿಯಲ್ಲಿ, ಸಾಕ್ಷಿ ಪೂರ್ವಕವಾಗಿ ಕತ್ತಿಯನ್ನು ಮುಟ್ಟಿಸಿ, ಕಾರ್ಯವನ್ನು ಪೂರ್ತಿ ಮಾಡಲು ತಪ್ಪದ ರೀತಿಯಲ್ಲಿ ಭಾಷೆಯನ್ನು ತೆಗೆದುಕೊಂಡರು. ಈ ರೀತಿಯಿಂದ ಅಲ್ಲಿ ಆದುಲಶಾಹನನ್ನು ತಮ್ಮೊಳಗೆ ಮಾಡಿಕೊಂಡು ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ನಿಜಾಮಶಾಹ ಇವರಲ್ಲಿ ನಂಬಿಗೆ ಬಂದ ಕೂಡಲೇ ಸಂಧಾನ ಮುಖದಿಂದ ಕರೆತಂದು ಕಾಣುವೆವೆಂದು ಸುಳ್ಳು ಸಮಾಚಾರವನ್ನು ಹುಟ್ಟಿಸಿ, ರಾಯರನ್ನು ಮೈಮರೆಯುವಂತೆ ಮಾಡಿ, ನಂಬಿಸಿ, ಸಮಯಸಾಧನೆಯನ್ನು ಕೈಗೊಂಡರು. ಬಳಿಕ ಬಿಜಾಪುರದ ಅಲ್ಲಿ ಆದುಲಶಾಹನ ಹೊಂಚಿನ ಮೇಲೆ ಬಾದಷಹರೊಂದಾಗಿ, ಮೋಸದಿಂದ ಶಾಲಿವಾಹನ ಶಕವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘ ಬಹುಳದಲ್ಲಿ ರಕ್ಕಸದಂಗಡಿ ಎಂಬ ಸ್ಥಳದಲ್ಲಿ ರಾಮರಾಯರನ್ನು ಹಿಡಿದುಕೊಂಡು ಶಿರಶ್ಚೇದನ ಮಾಡಿದರು. ಆ ತಲೆಯನ್ನು ಕಾಶಿಗೆ ಕಳುಹಿಸಿ, ಆಯಾ ಸ್ಥಾನಗಳಿಗೆಲ್ಲಾ ತಾವೇ ಸ್ವತಂತ್ರರಾಗಿ ಕಾರ್ಯಭಾರವನ್ನು ಕೈಗೊಳ್ಳುತ್ತಾ ಇದ್ದರು. ಈ ಕಡೆಯಲ್ಲಿ ರಾಯರ ಸಂಸ್ಥಾನವು ಹಾಳಾಗಿ ವಿಜಯನಗರವು ಧೂಳೀಪಟವಾಯಿತು. ರಾಯರ ಮನೆವಾರ್ತೆಯಾದ ಬೊಕ್ಕಸದ ಅಧಿಕಾರಿಯೂ, ಸೇನಬೋವನೂ (ಶಾನುಭೋಗನೂ) ಆದ ಚಿನ್ನಭಂಡಾರದ ನಾರಣಪ್ಪಯ್ಯನೆಂಬವನು ಅಲ್ಲಿ ನಿಲ್ಲಲಾರದೆ ಕುಟುಂಬ ಸಹಿತವಾಗಿ ಓಡಿಬಂದು ಚಿಕ್ಕಸಂಕಣ್ಣನಾಯಕರ ಆಶ್ರಯವನ್ನು ಬೇಡಿ ಮೊರೆಹೊಕ್ಕನು. ನಾಯಕನು ಅವರಿಗೆ ಹೆಚ್ಚಿನ ಅಧಿಕಾರವನ್ನು ಇತ್ತು ತನ್ನ ರಾಜ್ಯದಲ್ಲಿ ಪೋಷಿಸುತ್ತಿದ್ದನು."
     ಈ ಲೇಖನದೊಂದಿಗೆ ಇರುವ, ಮುಸ್ಲಿಮ್ ಇತಿಹಾಸಕಾರ ರಫಿಯುದ್ದೀನ್ ಶಿರಾಝಿಯ ಕೃತಿಯಲ್ಲಿ (ಅನುವಾದ-ಅಬ್ದುಲ್ ಗನಿ ಇಮಾರತವಾಲೆ) (Tazkiratul Muluk,  Rafiuddin Shirazi;  translated by Abdul Gani Imaratwale) ಕಂಡುಬರುವ ಚಿತ್ರದಲ್ಲಿ ಯವನರು ರಾಮರಾಯನ ಕೈಕಾಲುಗಳನ್ನು ಕಟ್ಟಿಹಾಕಿ ಶಿರಚ್ಛೇದ ಮಾಡುತ್ತಿರುವ ದೃಷ್ಯವೇ ಭೀಭತ್ಸವಾಗಿದ್ದು, ಅವರ ಕ್ರೂರತೆಯ ದರ್ಶನ ಮಾಡಿಸುತ್ತಿದೆ.
-ಕ.ವೆಂ.ನಾಗರಾಜ್.