ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 16, 2015

ಜನಹಿತ ಪತ್ರಿಕೆಯ 'ಹಿತ-ಸಾಹಿತ್ಯ' ಅಂಕಣದಲ್ಲಿ ಮಿತ್ರ ಕೊಟ್ರೇಶ ಉಪ್ಪಾರರು ನನ್ನ ಕುರಿತು ಬರೆದ ಲೇಖನ


 ನಿಷ್ಠುರವಾದಿ ಆಡಳಿತಗಾರ, ಕವಿ, ಸಾಮಾಜಿಕ ಚಿಂತಕ - ಕ.ವೆಂ.ನಾಗರಾಜ್.

     ಕ.ವೆಂ.ನಾಗರಾಜ್ ಸಾಮಾಜಿಕ ಕಳಕಳಿಯ ಚಿಂತಕ, ವಿಚಾರವಾದಿ, ನ್ಯಾಯ, ನಿಷ್ಠುರವಾದ ವ್ಯಕ್ತಿತ್ತ್ವವುಳ್ಳವರು. ಆಡಳಿತಗಾರರಾಗಿ, ಸಾಮಾಜಿಕ ಚಳವಳಿಗಾರರಾಗಿ, ಸತ್ಸಂಗದ ವಿವೇಕಿಯಾಗಿ, ಸಾಹಿತಿಯಾಗಿ, ಅಂತರ್ಜಾಲ ಬರಹಗಾರರಾಗಿ ಚಿರಪರಿಚಿತವಾದವರು. ಮನೆ ಮನೆ ಕವಿಗೋಷ್ಠಿಯ ಸದಸ್ಯರಾಗಿಯೂ ಮುನ್ನೆಡೆದು ಬಂದವರು. ತಮ್ಮ  ಮೂಢ ಉವಾಚ ಮುಕ್ತಕಗಳ ಮೂಲಕ ಮುಕ್ತ ಕಂಠದಿಂದ ಸಮಾಜದ ಕೊಳೆಯನ್ನು ಕೀಳಲ್ಹೊರಟವರು.
ಬಾಲ್ಯ : ಶ್ರೀಯುತ ಕ.ವೆಂ.ನಾಗರಾಜ್ ರವರು 1951 ಅಕ್ಟೋಬರ್ 7 ರಂದು ತಾಯಿ ಮನೆ ಹಾಸನ ಜಿಲ್ಲೆಯ ಹಳೆಬೀಡಿನಲ್ಲಿ ಜನಿಸಿದರು. ತಂದೆ ಶ್ರೀ ಕೆ.ವೆಂಕಟಸುಬ್ಬರಾವ್, ತಾಯಿ ಶ್ರೀಮತಿ ಸೀತಮ್ಮ.
     ಚಿಕ್ಕಮಗಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡಿದ ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಚಿತ್ರದುರ್ಗದಲ್ಲಿ ಪ್ರೌಢ ಶಿಕ್ಷಣವನ್ನು, ಚಿಕ್ಕಮಗಳೂರಿನಲ್ಲಿ ಪಿಯುಸಿಯನ್ನು ಓದಿದ ಇವರು ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ವಿಜ್ಞಾನ ಪದವಿಯನ್ನು ಪಡೆದರು.
ವೃತ್ತಿ : 1971 ಡಿಸೆಂಬರ್ ನಲ್ಲಿ ಹಾಸನದ ಅಂಛೆ ಕಛೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ನಂತರ 1973 ಮೇ 3 ರಂದು ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಹಾರ ನಿರೀಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡರು.  1998 ರಲ್ಲಿ ಮಂಗಳೂರಿಗೆ ತಹಸಿಲ್ದಾರರಾಗಿ ಬಡ್ತಿ ಹೊಂದಿದರು. ಮುಂದೆ ಮುಜರಾಯಿ ತಹಸಿಲ್ದಾರರಾಗಿ, ಮುನಿಸಿಪಲ್ ತಹಸಿಲ್ದಾರರಾಗಿ, ಎಲೆಕ್ಷನ್ ತಹಸಿಲ್ದಾರರಾಗಿ, ಆಡಳಿತ ತಹಸಿಲ್ದಾರರಾಗಿ, ಪುತ್ತೂರಿನ ಕಡಬದಲ್ಲಿ ವಿಶೇಷ ತಹಸಿಲ್ದಾರರಾಗಿ, ಮಂಗಳೂರಿನಲ್ಲಿ ಪ್ರೋಟೋಕಾಲ್ ತಹಸಿಲ್ದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಹಾಸನ, ಕಲಬುರ್ಗಿ ಜಿಲ್ಲೆಯ ಸೇಡಮ್, ಮೈಸೂರು, ಹೊಳೆನರಸಿಪುರ, ಸಕಲೇಶುರ, ಬೇಲೂರು, ಮಂಗಳೂರು, ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಅರಕಲಗೂಡು, ಶಿವಮೊಗ್ಗ, ಶಿಕಾರಿಪುರ, ಸೊರಬ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸುತ್ತಲೂ ಒಂದು ಕಾರಣವಿದೆ. ಇವರ ನೇರ ನಡೆ-ನುಡಿ ಇವರನ್ನು ಒಂದೆಡೆ ನಿಲ್ಲಲು ಬಿಡಲಿಲ್ಲ ಎನ್ನುವುದಕ್ಕಿಂತಲೂ ಆಯಾ ಭಾಗದ ರಾಜಕೀಯ ವ್ಯವಸ್ಥೆಗೆ ಸಹಿಸಲು ಆಗಲಿಲ್ಲವೆಂದೇ ಹೇಳಬಹುದು. ಆದ್ದರಿಂದಲೇ ಇವರ ಸೇವಾವಧಿಯಲ್ಲಿ 26 ವರ್ಗಾವಣೆಗಳು - ಹೆಚ್ಚಿನವು ರಾಜಕೀಯ ಪ್ರೇರಿತವಾದವು ಎಂಬುದು ಗಮನಾರ್ಹ . ಇವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕಾರಿಪುರದಲ್ಲಿದ್ದಾಗ ಅತ್ಯುತ್ತಮ ಅಧಿಕಾರಿಯೆಂದು ಇಲಾಖೆ ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ನಿಷ್ಠುರವಾದಿ : ಕ.ವೆಂ.ನಾ.ರವರು ನಿಷ್ಠುರ ಅಧಿಕಾರಿಯಾಗಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳು ದೊರೆಯುತ್ತವೆ. ಯಾವುದೇ ಆಸೆ, ಆಕಾಂಕ್ಷೆ, ಸ್ವಾರ್ಥಗಳ ಕಡೆಗೆ ಮುಖ ಮಾಡದೆ ನ್ಯಾಯ, ಧರ್ಮ, ನೀತಿ, ಸಮಾನತೆ ಹಾಗೂ ವೈಚಾರಿಕ ಮನೋಧೋರಣೆ ಹೊಂದಿದ್ದ ಇವರು ರಾಜಕಾರಣಿಗಳಿಗೆ ದುಃಸ್ವಪ್ನವಾಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ರಾಜಕೀಯ ಕುತಂತ್ರತೆಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರೂ ಯಾರಿಗೂ ಸೊಪ್ಪಾಕಲಿಲ್ಲ. ಅಧಿಕಾರಕ್ಕಾಗಿಯೇ ಅಂಗಲಾಚುವ ಪ್ರಸ್ತುತ ಸಂದರ್ಭದಲ್ಲಿ ಕ.ವೆಂ.ನಾ. ನಮಗೆ ವ್ಯತಿರಿಕ್ತವಾಗಿ ನಿಲ್ಲುತ್ತಾರೆ. ಆದ್ದರಿಂದಲೇ 2009ರಲ್ಲಿ ಒಂದು ತಿಂಗಳು ಮುಂದುವರೆದಿದ್ದರೆ ಸಹಾಯಕ ಕಮಿಷನರ್ ಆಗುವ ಅವಕಾಶವಿದ್ದರೂ 3 ವರ್ಷಗಳ ಸೇವೆ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ ಹೊಂದಿದ ಧೀಮಂತ ವ್ಯಕ್ತಿ ಇವರು. ಇದೆ ಇವರ ಜೀವನದ ಆದರ್ಶ.
ಹೋರಾಟಗಾರ : ಕ.ವೆಂ.ನಾ. ಕೇವಲ ಉತ್ತಮ ಆಡಳಿತಗಾರರಷ್ಟೇ ಅಲ್ಲ ನಾಡು-ನುಡಿಯ ಬಗ್ಗೆ, ಸಾಮಾಜಿಕ ತೊಡಕುಗಳ ಬಗ್ಗೆ ಚಿಂತಿಸುವ ಪ್ರಗತಿಪರ ವ್ಯಕ್ತಿ. ಆದ್ದರಿಂದಲೇ 1975 ರಿಂದ 1977ರ ನಡುವೆ ಇಡಿ ದೇಶಾದ್ಯಂತ ತಲೆದೋರಿದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾ.ಸ್ವ. ಸಂಘದ ಕಾರ್ಯಕರ್ತನೆಂದು ಆರೋಪಿಸಿ ಈ ಕಾರಣಕ್ಕೆ ಬಂಧಿಸಿ ವೃತ್ತಿಯಿಂದ ವಜಾಗೊಳಿಸಲಾಯಿತು. ಇದರಿಂದ ಜಿಲ್ಲಾಧಿಕಾರಿಯವರೊಂದಿಗೆ ವಾಗ್ವಾದದ ಪರಿಣಾಮ ಮತ್ತಷ್ಟು ಮೊಕದ್ದಮೆಗಳನ್ನು ಎದುರಿಸಬೇಕಾಗಿ ಬಂದಿತು. ಭಾರತ ರಕ್ಷಣಾ ಕಾಯದೆಯನ್ವಯ 13 ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಯಾವುದೇ ತಪ್ಪು ಮಾಡದಿದ್ದರೂ ಇವರನ್ನು ಒಂದೂವರೆ ವರ್ಷದ ಕಾಲ ಸೇವೆಯಿಂದ ಅಮಾನತ್ತುಗೊಳಿಸಿ ಸತ್ಯಾಸತ್ಯತೆ ಮನಗಂಡು ನಂತರ ವಿಚಾರಣೆ ಕಾಯ್ದಿರಿಸಿ ಗುಲ್ಬರ್ಗಕ್ಕೆ ವರ್ಗಾವಣೆ ಮಾಡಲಾಯಿತು. ಕೆಲವು ಮೊಕದ್ದಮೆಗಳು ವಜಾ ಆದವು. ಉಳಿದ ಪ್ರಕರಣಗಳು ತುರ್ತು ಪರಿಸ್ಥಿತಿ ಹೋದನಂತರದಲ್ಲಿ ಸರ್ಕಾರ ಹಿಂತೆಗೆದುಕೊಂಡಿತು. ಪುನಃ ಹಾಸನಕ್ಕೆ ಮರು ವರ್ಗಾವಣೆಯಾಯಿತು. ಹೀಗೆ ಇವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇತ್ತೀಚೆಗೆ ಇವರ ಜೀವನಗಾಥೆಯನ್ನು ಬಿ-ಟಿವಿ ಪ್ರಸಾರ ಪಡಿಸಿದ ಸಂದರ್ಭದಲ್ಲಿ ಎಲ್ಲವನ್ನೂ ವೀಕ್ಷಿಸಿ ಆಶ್ಚರ್ಯಚಕಿತನಾದೆ. ಇವರ ಬಗ್ಗೆ ಗೌರವ ಹೆಚ್ಚಾಯಿತು.
ಸಾಮಾಜಿಕ ಚಟುವಟಿಕೆ ಮತ್ತು ಸಾಹಿತ್ಯ ಕ್ಷೇತ್ರ : ನಿವೃತ್ತಿಯ ನಂತರ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದಲೇ ಕವಿ ಹರಿಹರಪುರ ಶ್ರೀಧರ್ ಅವರ ಜೊತೆಗೂಡಿ ಪ್ರಸ್ತುತ ಪ್ರಖ್ಯಾತಿ ಪಡೆದಿರುವ ವೇದಭಾರತಿ ಸಂಸ್ಥೆಯನ್ನು ಹುಟ್ಟುಹಾಕಿ ಈ ಸಂಸ್ಥೆಯ ಗೌರವಾಧ್ಯಕ್ಷರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರ್ಜಾಲದಲ್ಲಿ ‘ಕವಿಮನ’ ಹಾಗೂ ‘ವೇದ ಜೀವನ’ ಎಂಬ ತಾಣಗಳನ್ನು ಹೊಂದಿರುವ ಇವರು ಆ ಮೂಲಕ ಸಾವಿರಾರು ಓದುಗರನ್ನು ಪಡೆದಿದ್ದಾರೆ. ಈ ಜಾಲತಾಣಗಳಲ್ಲಿ ಪ್ರಕಟವಾದ ಇವರ ‘ಮೂಢ ಉವಾಚ’ ಹೆಚ್ಚು ಜನಪ್ರಿಯವಾಯಿತು. ಇದೇ 2011ರಲ್ಲಿ ‘ಮೂಢ ಉವಾಚ’ ಎಂಬ ಕೃತಿಯಾಗಿ ಪ್ರಕಟಣೆಯಾಯಿತು. 80 ಪುಟಗಳ ಈ ಕೃತಿಯು 20 ರೂಗಳ ಮುಖ ಬೆಲೆಯನ್ನು ಹೊಂದಿದೆ. 2011ರಲ್ಲಿ ಹಾಸನದ ಶಂಕರಮಠದಲ್ಲಿ ವೇದಸುಧೆ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ಮನೆ ಮನೆ ಕವಿಗೋಷ್ಠಿಯ ವಾರ್ಷಿಕೋತ್ಸವದಲ್ಲಿ ಈ ಕೃತಿಯು ಬಿಡುಗಡೆಯಾಗಿತ್ತು. ಅದೇ ವೇದಿಕೆಯಲ್ಲಿ ನನ್ನ ‘ಮೃತ್ಯುವಿನಾಚೆಯ ಬದುಕು’ ಕವನ ಸಂಕಲನವೂ ಸಹ ಬಿಡುಗಡೆಯಾಗಿತ್ತು.
ಕವಿ ಮನೆತನ : ಕ.ವೆಂ.ನಾ.ರವರು ಕರ್ನಾಟಕದ ಪ್ರಸಿದ್ಧ ಕೆಳದಿ ಕವಿಮನೆತನದರು. ಇವರ ಪೂರ್ವಜ ಕವಿಲಿಂಗಣ್ಣಯ್ಯ ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದರು. ಕವಿಲಿಂಗಣ್ಣಯ್ಯ ರಚಿಸಿದ 'ಕೆಳದಿನೃಪ ವಿಜಯ' ಐತಿಹಾಸಿಕ ಕಾವ್ಯಕೃತಿಯಾಗಿದ್ದು, ಕೆಳದಿ ಇತಿಹಾಸ ಅಧ್ಯಯನಕ್ಕೆ ಪ್ರಮುಖವಾದ ಆಕರ ಗ್ರಂಥವಾಗಿದೆ. 13 ತಲೆಮಾರುಗಳ ವಂಶವೃಕ್ಷ ಇದರಲ್ಲಿ ಲಭ್ಯವಿದೆ. ಪ್ರತಿವರ್ಷ ಕೆಳದಿ ಕವಿ ಕುಟುಂಬದವರು ಒಟ್ಟಿಗೆ ಸೇರುವ ಮೂಲಕ ಸಮಾವೇಶಗಳ ನಡೆಸುತ್ತಾರೆ. ಈ ಕೆಳದಿ ಕವಿ ಮನೆತನದಿಂದ 'ಕವಿಕಿರಣ' ಎಂಬ ಹೆಸರಿನ ಅರ್ಧವಾರ್ಷಿಕ ಪತ್ರಿಕೆಯ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಸಂಪಾದಕರಾಗಿ ಕ.ವೆಂ.ನಾಗರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೆಳದಿ ಕವಿಕುಟುಂಬಗಳು, ಬಂಧುಗಳು ಮತ್ತು ಸ್ನೇಹಿತರ ಸಲುವಾಗಿ ಪ್ರಕಟವಾಗುವ ಪತ್ರಿಕೆಯಾಗಿದ್ದು ಇದುವರೆಗೆ 15 ಸಂಚಿಕೆಗಳು ಪ್ರಕಟವಾಗಿವೆ. ಮುಂದಿನ ಸಂಚಿಕೆ ಡಿಸೆಂಬರ್, 2015ರಲ್ಲಿ ಪ್ರಕಟವಾಗಲಿದೆ.

ಮೂಢ ಉವಾಚ : ಕ.ವೆಂ.ನಾಗರಾಜ್ ರವರು ಪ್ರಗತಿಪರ ಚಿಂತಕರೂ ಹೌದು. ಇವರ ;ಮೂಢ ಉವಾಚ’ ಓದಿದರೆ ಇವರ ಸಮಸಮಾಜದ ದೃಷ್ಟಿಕೋನ ಅರಿವಾಗದೇ ಇರದು. ಡಿ.ವಿ.ಗುಂಡಪ್ಪನವರ ಸುಪ್ರಸಿದ್ಧ ಕೃತಿ ‘ಮಂಕು ತಿಮ್ಮನ ಕಗ್ಗ’ ದಂತೆಯೇ ಸಾಮಾಜಿಕ ಕಳಕಳಿಯನ್ನು ಹೊಂದಿರುವ ‘ಮೂಢ ಉವಾಚ’ ವೂ ಸಹ ಒಂದು ಉತ್ತಮ ಕೃತಿಯಾಗಿದೆ. ಇದರಲ್ಲಿ 250 ಮುಕ್ತಕಗಳಿವೆ. 
ಕೇಳಲೊಲ್ಲದ ಕಿವಿಗೆ ನೀತಿ ಪಾಠವದೇಕೆ?
ತಿನ್ನಲೊಲ್ಲದ ಬಾಯ್ಗೆ ಷಡ್ರಸವದೇಕೆ?
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು
ಪಾತ್ರಾಪಾತ್ರರನರಿತಡಿಯನಿಡು ಮೂಢ ||
***
ಕಣ್ಣಿದ್ದು ಕುರುಡಾಗಿ, ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ, ಕ್ರೂರತ್ವ ತಾನೆರಗಿ
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ ||
ಹೀಗೆ ಇವರ ಮುಕ್ತಕಗಳು ಭ್ರಷ್ಟಾಚಾರ, ಸಮಾಜಿಕ ಜಾಡ್ಯತೆಗಳು, ಕ್ರೋಧ, ಮದ, ಮತ್ಸರಗಳನ್ನು ಅನಾವರಣಗೊಳಿಸುತ್ತವೆ.

ಕವಿ ಸುಬ್ರಹ್ಮಣ್ಯಯ್ಯ-ಒಂದು ಜೀವಗೀತೆ : ಕವಿ ಸುಬ್ರಹ್ಮಣ್ಯಯ್ಯ –ಒಂದು ಜೀವಗೀತೆ ಕೃತಿಯು 2008 ರಲ್ಲಿ ಪ್ರಕಟವಾಗಿದೆ. 60 ಪುಟಗಳನ್ನು ಹೊಂದಿರುವ ಈ ಕೃತಿಯು ಕೆಳದಿ ಕವಿಮನೆತನದ ಹಿರಿಯ ಚೇತನ ಕವಿ ಸುಬ್ರಹ್ಮಣ್ಯಯ್ಯನವರ ಜೀವನ ಕುರಿತದ್ದಾಗಿದೆ.
     ಇದರಲ್ಲಿ ಮಾಸದ ನೆನಪು, ಸಾಗರದ ಚಿಗುರು, ಅಪ್ಪಳಿಸಿದ ಆಘಾತ, ಕೊಪ್ಪಕ್ಕೆ ಸಾಗಿದ ಬಾಳಿನ ತೆಪ್ಪ, ದಾವಣಗೆರೆಗೆ ಪಯಣ, ಕರೆಯಿತು ಶಿವಮೊಗ್ಗ, ಆನಂದ ಲಕ್ಷ್ಮಮ್ಮ, ಸುಬ್ರಹ್ಮಣ್ಯನ ಹೆಗ್ಗಳಿಕೆ, ಆಶು ಕವಿ-ಹಾಸ್ಯಗಾರ ಸುಬ್ಬಣ್ಣ, ಸುಬ್ರಹ್ಮಣ್ಯನ ಪಂಚಾಂಗ ಶ್ರವಣ, ಕಳಚಿದ ಕೊಂಡಿ ಸೇರಿತು, ಜೀವನ ಸಂಧ್ಯಾಕಾಲದಲ್ಲಿ, ಕವಿ ಸುಬ್ರಹ್ಮಣ್ಯನ ವಂಶಾವಳಿ, ಮುಗಿಸುವ ಮುನ್ನ ಎಂಬ ಹದಿನಾಲ್ಕು ಬರಹಗಳು ಇಲ್ಲಿವೆ. ಈ ಎಲ್ಲ ಬರಹಗಳು ಕ.ವೆಂ.ನಾ.ರವರು ಅವರ ತಾತನೊಂದಿಗಿನ ನೆನಪುಗಳನ್ನು, ಅವರ ಹಿನ್ನಲೆಗಳನ್ನು, ಕವಿ ಮನೆತನದ ಕೊಡುಗೆಗಳನ್ನು , ಆ ಕಾಲದ ಕುಟುಂಬ ಬಾಂಧವ್ಯದ ಸುಮಧುರ ಕ್ಷಣಗಳನ್ನು ಅರ್ಥವತ್ತಾಗಿ ಚಿತ್ರಿಸಿದ್ದಾರೆ.

ಆದರ್ಶದ ಬೆನ್ನು ಹತ್ತಿ :  30 ರೂಗಳ ಮುಖಬೆಲೆಯ 100 ಪುಟಗಳ “ಆದರ್ಶದ ಬೆನ್ನು ಹತ್ತಿ”  ಕೃತಿಯು 1975 ರಿಂದ 1977 ಅವಧಿಯ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಕುರಿತ ವಿವರವಾದ ಚಿತ್ರಣಸಾಮಾನ್ಯ ನಾಗರಿಕನೊಬ್ಬ ಎದುರಿಸಿದ ಕಷ್ಟ ನಷ್ಟಗಳ ಅನುಭವ ಕಥನ ಇದಾಗಿದೆ.
    ಈ ಪುಸ್ತಕಕ್ಕೆ ಮುನ್ನುಡಿ ಬರೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಮಟ್ಟದ ಪ್ರಚಾರಕರು, ಕುಟುಂಬ ಪ್ರಬೋಧನ್ ಅಖಿಲ ಭಾರತ ಪ್ರಮಖರೂ ಆದ ಶ್ರೀ ಸು.ರಾಮಣ್ಣನವರು ಈ ಕೃತಿಯ ಬಗ್ಗೆ ಹೀಗೆ ಹೇಳಿದ್ದಾರೆ:  “ಎಮರ್ಜೆನ್ಸಿಯ ಕರಾಳ ದಿನಗಳ ಘಟನಾವಳಿಗಳಲ್ಲಿ ಪ್ರತ್ಯಕ್ಷ್ಯ ಇದ್ದು ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿದವರಲ್ಲಿ ಪ್ರಿಯ ನಾಗರಾಜರಂತಹವರ ಜೊತೆ  ನಾನೂ ಸಹ ಇದ್ದೆ ಎಂಬುದು ಅತ್ಯಂತ ಧನ್ಯತೆಯ ಸಂಗತಿ. ಈ ಪೀಳಿಗೆಯ ತರುಣರಿಗೆ ‘ಎಮರ್ಜೆನ್ಸಿ’ ಗೊತ್ತೇಯಿಲ್ಲ. ಗೊತ್ತಿರುವ ಹಿರಿಯರು ಅದೇಕೋ ಏನೋ ಮರೆತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾಗರಾಜರು ರಚಿಸಿರುವ ಈ ಪುಸ್ತಕವು ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಪಾತ್ರ ಬಹಳ ದೊಡ್ಡದು. ಈ ಪುಸ್ತಕವು ಅನ್ಯಾಯಕ್ಕೆ ತಲೆ ಬಾಗದೆ, ನ್ಯಾಯಕ್ಕಾಗಿ ಬದುಕಬೇಕೆಂಬ ಛಲವನ್ನು ತರುಣರಲ್ಲಿ ಬೆಳೆಸಬಲ್ಲದು. ದೇಶ ನನಗಾಗಿ ಅಲ್ಲ. ನಾನು ದೇಶಕ್ಕಾಗಿ ಎಂಬ ಜೀವನ ರಚನೆ ನಮ್ಮದಾಗಬೇಕಾಗಿದೆ. ಭ್ರಷ್ಟಾಚಾರ ಹಾಗೂ ದುರಾಡಳಿತಗಳ ವಿರುದ್ಧವಾಗಿ ಹೋರಾಡಲು ಬೇಕಾದ ಕಸುವು ನಮ್ಮಲ್ಲಿ ಜಾಗೃತವಾಗಬೇಕಿದೆ. ಅಂತಹದ್ದೊಂದು ಪ್ರೇರಣೆಯನ್ನು ಈ ಪುಸ್ತಕ ನೀಡಲು ಅರ್ಹವಾಗಿದೆ ಎಂಬ ಧೃಢ ಅಭಿಪ್ರಾಯ ನನ್ನದು.”
     ಇದುವರೆಗೂ 600ಕ್ಕೂ ಹೆಚ್ಚು ಇವರ ಲೇಖನಗಳು ರಾಜ್ಯದ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜನಮಿತ್ರದ 'ಚಿಂತನ' ಮತ್ತು ಜನಹಿತದ 'ಜನಕಲ್ಯಾಣ' ಅಂಕಣಗಳು ಹೆಚ್ಚು ಜನಪ್ರಿಯವಾಗಿವೆ. ವಿಕ್ರಮ, ಹೊಸದಿಗಂತಗಳಲ್ಲಿ ವೈಚಾರಿಕ ಲೇಖನಗಳು. ಆಕಾಶವಾಣಿಯಲ್ಲಿ ಇವರ ಹಲವಾರು 'ಚಿಂತನ'ಗಳು ಬಿತ್ತರಗೊಂಡಿವೆ. 
                                                     ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794



ಗುರುವಾರ, ಜೂನ್ 25, 2015

ಪ್ರಜ್ಞಾಚಕ್ಷು ವಿರಜಾನಂದರ ಸಾಧನೆ


      ಮಹರ್ಷಿ ದಯಾನಂದ ಸರಸ್ವತಿಯವರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಹುಟ್ಟು ಕುರುಡರು. ಮೂಲತಃ ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯವರನ್ನು ಕಳೆದುಕೊಂಡಿದ್ದರು. ಅವರ ಅತ್ತಿಗೆ, ಅಣ್ಣ ಈ ಕುರುಡ ಹುಡುಗನನ್ನು 'ಏಕೆ ಈ ಶನಿಯನ್ನು ನಮ್ಮ ತಲೆಗೆ ಕಟ್ಟಿಹೋದರೋ ಅಪ್ಪ, ಅಮ್ಮ, ಇವನು ಎತ್ತಲಾದರೂ ತೊಲಗಿ ಹೋಗಬಾರದೇ' ಎಂದು ಪ್ರತಿನಿತ್ಯವೆನ್ನುವಂತೆ ಹಂಗಿಸುತ್ತಿದ್ದರು, ರೇಗುತ್ತಿದ್ದರು. ಈ ಬಯ್ಗಳವನ್ನು ಇನ್ನು ಸಹಿಸುವುದು ಕಷ್ಟ ಎಂಬ ಸ್ಥಿತಿಗೆ ತಲುಪಿದ ಆ ಬಾಲಕ ಒಂದು ದಿನ ಮನೆಯಿಂದ ಹೊರಟೇಬಿಟ್ಟ. ಆಗ ಆತನಿಗೆ ಕೇವಲ ಎಂಟು ವರ್ಷ. ಒಂದು ಕೈಯಲ್ಲಿ ಲಾಠಿ ಹಿಡಿದುಕೊಂಡು ನಡೆದೇ ನಡೆದ. ಊಹಿಸುವುದೂ ಕಷ್ಟವಾಗುತ್ತದೆ. ಈಗಿನಂತೆ ರಸ್ತೆಗಳಿಲ್ಲದ, ಕಾಡು-ಮೇಡುಗಳಿಂದ ಕೂಡಿದ ಪ್ರದೇಶಗಳಲ್ಲಿ ಕೋಲಿನ ಆಧಾರದಲ್ಲಿ ತಡವರಿಸಿ ನಡೆಯುತ್ತಾ ಸುಮಾರು 2000 ಮೈಲುಗಳಷ್ಟು ದೂರ ಕ್ರಮಿಸಿ ಆತ ತಲುಪಿದ್ದು ಹರಿದ್ವಾರವನ್ನು!  ಕಣ್ಣಿರುವವರು, ಧೃಢಕಾಯರೂ ಆ ರೀತಿ ಕ್ರಮಿಸಲು ಹಿಂಜರಿಯುವ ಕಾಲವದು. ಆ ಅಂಧ ಬಾಲಕ ಅದನ್ನು ಮಾಡಿದ್ದೇ ಒಂದು ದೊಡ್ಡ ಕೆಲಸ. ಆತನ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಆತನ ಬುದ್ಧಿ ಎಷ್ಟು ತೀಕ್ಷ್ಣ ಅಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, 'ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ'. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಅವರ ಅದ್ಭುತ ಗ್ರಹಣ ಶಕ್ತಿಯಿಂದಾಗಿ ಒಂದು ಸಲ ಕೇಳಿದರೆ ಸಾಕು, ಅದು ಅವರಿಗೆ ಮನದಟ್ಟಾಗಿಬಿಡುತ್ತಿತ್ತು. ನಂತರದಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರಾಗಿದ್ದ ಸ್ವಾಮಿ ಪೂರ್ಣಾನಂದರ ಶಿಷ್ಯರಾಗಿ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತರು ಎಂದು ಹೇಳುತ್ತಾರೆ. ಹಿಂದೂ ತತ್ತ್ವದರ್ಶನಗಳ ಮೂಲವಿಚಾರಗಳನ್ನು ಮನನ ಮಾಡಿಕೊಂಡವರು ಅವರು. ಪವಿತ್ರ ಗಾಯತ್ರಿ ಮಂತ್ರವನ್ನು ವರ್ಷಗಳ ಕಾಲ ಪಠಿಸುತ್ತಿದ್ದ ಅವರಿಗೆ ಪ್ರಾಪ್ತವಾದ ದಿವ್ಯದೃಷ್ಟಿಯಿಂದ ಜ್ಞಾನೋದಯವಾಗಿ ಅವರಿಗೆ ಆಧ್ಯಾತ್ಮಿಕ ಉನ್ನತಿ ಮತ್ತು ಮಂತ್ರಗಳಲ್ಲಿ ಸ್ವಾಮಿತ್ವ ದೊರಕಿತು ಎನ್ನಲಾಗಿದೆ. ಇದು ಏನೇ ಇರಲಿ, ಕುರುಡರಾಗಿದ್ದರೂ ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಹೊಂದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು.  ಕಣ್ಣಿರುವವರಿಗೂ ಕಷ್ಟವಾದ ಈ ಜ್ಞಾನ ಪ್ರಜ್ಞಾಚಕ್ಷುವಾಗಿದ್ದ ವಿರಜಾನಂದರಿಗೆ ಲಭ್ಯವಾಗಿತ್ತು.
     ಮೋಕ್ಷ ಸಾಧನೆಗೆ ಮೂರ್ತಿಪೂಜೆಯ ಅಗತ್ಯವಿಲ್ಲವೆಂದು ತಮ್ಮ ಶಿಷ್ಯರಿಗೆ ಹೇಳುತ್ತಿದ್ದ ಅವರು ದೇವರನ್ನು ತಮ್ಮ ಸುತ್ತಮುತ್ತಲಿನಲ್ಲೇ ಎಲ್ಲಾ ಜೀವಿಗಳಲ್ಲಿ, ವಸ್ತುಗಳಲ್ಲಿ, ಸ್ವತಃ ತಮ್ಮ ಹೃದಯಗಳಲ್ಲೇ ಕಾಣಬೇಕೆಂದು, ಅವನನ್ನು ಕೇವಲ ದೇಗುಲಗಳಲ್ಲಿನ ವಿಗ್ರಹಗಳಲ್ಲಿ ಮಾತ್ರ ಕಾಣಲು ಪ್ರಯತ್ನಿಸಬಾರದೆಂದು ಒತ್ತಿ ಹೇಳುತ್ತಿದ್ದರು. ಕಷ್ಟದಲ್ಲಿದ್ದರೂ ವಿರಜಾನಂದರು ವಿನೋದ ಪ್ರವೃತ್ತಿಯವರೂ ಆಗಿದ್ದರು. ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಭಕ್ತರು ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗುತ್ತಾ ಹೋಗುತ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, "ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?" ವಿರಜಾನಂದರು ನಗುತ್ತಲೇ ಹೇಳಿದ್ದರು, "ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಪಕ್ಕಕ್ಕೆ ಸರಿಯೋಕೆ ಆಗ್ತಾ ಇರಲಿಲ್ವಾ?"
     ಅದ್ವಿತೀಯ ಸಂನ್ಯಾಸಿ ದಯಾನಂದ ಸರಸ್ವತಿ ಗುರುವನ್ನು ಅರಸುತ್ತಾ ಸ್ವಾಮಿ ವಿರಜಾನಂದರ ಬಳಿಗೆ ಬಂದಾಗ ದಯಾನಂದರಿಗೆ 36 ವರ್ಷ ವಯಸ್ಸು. ಮಥುರಾದ ವಿಶ್ರಾಂತ್ ಘಾಟಿಗೆ ಹೋಗುವ ದಾರಿಯಲ್ಲಿದ್ದ ವಿರಜಾನಂದರ ಶಾಲೆಯ ಬಳಿಗೆ ಬಂದ ದಯಾನಂದರು ಬಾಗಿಲು ಬಡಿದಿದ್ದರು. ಒಳಗಿನಿಂದ ಒಂದು ಗಂಭೀರ ಧ್ವನಿ ಕೇಳಿಬಂದಿತು, "ಯಾರದು?"
ದಯಾನಂದ: ಗುರುದೇವಾ, ನಾನು ನಿಮ್ಮ ಸೇವಕ. ನನ್ನನ್ನು ದಯಾನಂದ ಸರಸ್ವತಿ ಎಂದು ಕರೆಯುತ್ತಾರೆ.
ವಿರಜಾನಂದ: ನಿನಗೇನು ಬೇಕು?
ದಯಾನಂದ: ಜ್ಞಾನದ ಬೆಳಕಿಗಾಗಿ ನಿಮ್ಮನ್ನು ಹುಡುಕಿಕೊಂಡು ಬಂದಿರುವೆ.
ವಿರಜಾನಂದ: ನಿನಗೆ ವ್ಯಾಕರಣ ಗೊತ್ತಿದೆಯೇ?
ದಯಾನಂದ: ನಾನು ಕೌಮುದಿ ಮತ್ತು ಸಾರಸ್ವತಗಳನ್ನು ಓದಿಕೊಂಡಿದ್ದೇನೆ. (ಎರಡು ಸಂಸ್ಕೃತ ವ್ಯಾಕರಣದ ಪ್ರಸಿದ್ಧ ಗ್ರಂಥಗಳು.)
ವಿರಜಾನಂದ: ಏನು? ಕೌಮುದಿ, ಸಾರಸ್ವತ? ಇಲ್ಲಿಂದ ಹೊರಟು ಹೋಗು. ಆ ಉಪಯೋಗವಿಲ್ಲದ ಪುಸ್ತಕಗಳು! ಅವನ್ನು ಯಮುನಾ ನದಿಯಲ್ಲಿ ಬಿಸಾಕು, ಆಮೇಲೆ ಬಾ. ಆ ನಂತರವೇ ನಾನು ಬಾಗಿಲು ತೆಗೆಯುವೆ.
     ಗುರುವಿನ ಆದೇಶದಂತೆ ದಯಾನಂದರು ನೇರವಾಗಿ ಯಮುನಾ ನದಿಯ ಬಳಿಗೆ ಹೋದರು. ನೂರಾರು ಮೈಲುಗಳು ದೂರ ಪ್ರಯಾಣ ಮಾಡುತ್ತಾ ಅವರು ಈ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ತಂದಿದ್ದರು. ಆದರೆ ಈಗ ಅವುಗಳ ಕುರಿತು ಯಾವುದೇ ವ್ಯಾಮೋಹ ಇಟ್ಟುಕೊಳ್ಳದೆ ನದಿಗೆ ಎಸೆದುಬಿಟ್ಟರು ಮತ್ತು ಗುರುಗಳ ಮನೆಗೆ ಹಿಂತಿರುಗಿ ಬಂದು ಹೇಳಿದರು, "ಗುರುದೇವಾ, ನಿಮ್ಮ ಆದೇಶವನ್ನು ಪಾಲಿಸಿದ್ದೇನೆ." ಶಿಷ್ಯನಿಗಾಗಿ ಗುರುಗಳ ಶಾಲೆಯ ಬಾಗಿಲು ತೆರೆಯಲ್ಪಟ್ಟಿತು.
     ದಯಾನಂದರು ಒಳಗೆ ಪ್ರವೇಶಿಸಿ ನೋಡಿದರೆ ಗುರು ವಿರಜಾನಂದರು ಕೃಷ್ಣಾಜಿನದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಿದ್ದರು. ಕೇವಲ ಚರ್ಮ ಮತ್ತು ಮೂಳೆಗಳು ಕಾಣುತ್ತಿದ್ದ ಕೃಷಕಾಯದ ವಿರಜಾನಂದರ ಮುಖ ತೇಜಸ್ಸಿನಿಂದ ಕೂಡಿತ್ತು. ಆ ವೈರಾಗ್ಯನಿಧಿಯ ಪಾದಗಳಿಗೆ ನಮಿಸಿದ ದಯಾನಂದರ ತಲೆಯ ಮೇಲೆ ಗುರು ಪ್ರೀತಿಪೂರ್ವಕವಾಗಿ ಕೈಯಾಡಿಸಿದರು. ದಯಾನಂದರು ಅಂಧರಾಗಿದ್ದ ಗುರುಗಳ ಕಡೆಗೆ ಆಶ್ಚರ್ಯದಿಂದ ನೋಡಿದರು. ಕುರುಡರಾಗಿದ್ದ ಗುರುಗಳು ಒಂದು ಅಕ್ಷರವನ್ನೂ ಓದಲು ಸಾಧ್ಯವಿರಲಿಲ್ಲ. ಆದರೆ ಅವರು ಜ್ಞಾನಸಮೃದ್ಧತೆಯ ಜೀವಂತ ಪ್ರತಿರೂಪವಾಗಿದ್ದರು ಮತ್ತು ಶಿಷ್ಯರ ಎಲ್ಲಾ ಸಂದೇಹಗಳನ್ನು ವೇದಗಳ, ಎಲ್ಲಾ ಗ್ರಂಥಗಳ ಮಂತ್ರಗಳು, ಉದಾಹರಣೆಗಳೊಂದಿಗೆ ಸಾಧಾರವಾಗಿ ಪರಿಹರಿಸುತ್ತಿದ್ದರು. ಯೋಗ್ಯ ಗುರುಗಳಿಗಾಗಿ 15 ವರ್ಷಗಳಿಂದ ನಡೆಸಿದ್ದ ದಯಾನಂದರ ಹುಡುಕಾಟ ಕೊನೆಗೊಂಡಿತ್ತು. ಗುರುವಿನ ಪಾದತಲದಲ್ಲಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡುಬಿಟ್ಟರು.
     ದಯಾನಂದರ ಅರ್ಪಣಾ ಮನೋಭಾವ, ಕಲಿಯುವ ಆಸಕ್ತಿಗಳು ಅವರನ್ನು ಗುರುವಿನ ಮೆಚ್ಚಿನ ಶಿಷ್ಯರನ್ನಾಗಿಸಿದವು. ದಯಾನಂದರು ಪ್ರತಿದಿನ ಬೆಳಿಗ್ಗೆ ಚಳಿಯಿರಲಿ, ಬಿಸಿಲಿರಲಿ, ಮಳೆಯಿರಲಿ ಯಮುನಾ ನದಿಯಿಂದ ಗುರುಗಳ ಸ್ನಾನಕ್ಕೆ ಮತ್ತು ಇತರ ಉಪಯೋಗಗಳಿಗಾಗಿ ನೀರು ಹೊತ್ತು ತರುತ್ತಿದ್ದರು. ನೆಲವನ್ನು ಗುಡಿಸಿ, ಸಾರಿಸುವ ಕೆಲಸವೂ ಅವರದೇ ಆಗಿತ್ತು. ಯಾವುದೇ ಕೆಲಸವನ್ನೂ ಅಳುಕಿಲ್ಲದೆ, ಹಿಂದೆ ಮುಂದೆ ನೋಡದೆ, ಹಿಂಜರಿಯದೆ ಮಾಡುತ್ತಿದ್ದ ಅವರನ್ನು ಕಂಡರೆ ಗುರುವಿಗೆ ವಿಶೇಷ ಅಕ್ಕರೆಯಿತ್ತು.
     ಒಮ್ಮೆ ವಿರಜಾನಂದರು ಪಾಠ ಹೇಳಿಕೊಡುತ್ತಿದ್ದಾಗ ಯಾವುದೋ ಕಾರಣಕ್ಕೆ ದಯಾನಂದರ ಮೇಲೆ ಸಿಟ್ಟು ಬಂದು ಅವರ ಬೆನ್ನಿನ ಮೇಲೆ ಬಲವಾಗಿ ಹೊಡೆದಿದ್ದರು. ಹಾಗೆ ಹೊಡೆದಿದ್ದರಿಂದ ಕೇವಲ ಚಕ್ಕಳ-ಮೂಳೆಯ ಕೃಷದೇಹಿ ಗುರುವಿನ ಕೈಯಿಗೇ ನೋವಾಯಿತು. ಕೆಲಕ್ಷಣದ ನಂತರ ದಯಾನಂದರು ನಿಧಾನವಾಗಿ ಗುರುಗಳ ಬಳಿಗೆ ಬಂದು ವಿನೀತರಾಗಿ ಹೇಳಿದ್ದರು, "ಗುರುದೇವಾ, ನನ್ನ ದೇಹ ಕಲ್ಲಿನಂತಿದೆ. ನೀವು ಹೊಡೆದರೆ ಅದಕ್ಕೆ ನೋವಾಗುವುದಿಲ್ಲ. ನಿಮ್ಮ ಕೈಗಳಿಗೇ ನೋವಾಗುತ್ತದೆ. ಇನ್ನು ಮುಂದೆ ನನ್ನನ್ನು ಶಿಕ್ಷಿಸಬೇಕಾದಾಗ ನಿಮ್ಮ ಕೈಗಳ ಬದಲಾಗಿ ಒಂದು ಕೋಲಿನಿಂದ ಹೊಡೆಯಿರಿ." ಹೀಗೆ ಹೇಳಿ ಒಂದು ಕೋಲನ್ನು ತಂದುಕೊಟ್ಟಿದ್ದರು. ಅಂದಿನ ಗುರು-ಶಿಷ್ಯರ ಸಂಬಂಧವನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ದಯಾನಂದರ ಕೋರಿಕೆ ವ್ಯರ್ಥವಾಗಲಿಲ್ಲ. ಮುಂದೊಮ್ಮೆ ವಿರಜಾನಂದರು ಸಿಟ್ಟಿನಲ್ಲಿ ದಯಾನಂದರ ಭುಜದ ಮೇಲೆ ಬಲವಾಗಿ ಬಾರಿಸಿದ್ದರು. ಇದನ್ನು ಕಂಡ ಸಹವಿದ್ಯಾರ್ಥಿ ನಯನಸುಖ ಗುರುವಿಗೆ ಹೇಳಿದ್ದ, "ಗುರುದೇವಾ, ಇಂತಹ ದೊಡ್ಡ ಸಂನ್ಯಾಸಿಯನ್ನು ಈ ರೀತಿ ದಂಡಿಸುವುದು ತರವಲ್ಲ. ಅವರನ್ನು ಗೌರವದಿಂದ ಕಾಣಬೇಕು." ಪಾಠ ಮುಗಿದ ಮೇಲೆ ದಯಾನಂದರು ನಯನಸುಖನಿಗೆ ಆಕ್ಷೇಪಿಸಿ ಹೇಳಿದ್ದರು, "ಗುರುದೇವರು ನನಗೆ ದ್ವೇಷದಿಂದ ಹೊಡೆದರೆಂದು ಭಾವಿಸಿರುವೆಯಾ? ಕುಂಬಾರ ಮಣ್ಣನ್ನು ತುಳಿದು ಹದ ಮಾಡಿ ಅದನ್ನು ಸುಂದರ ಮಡಿಕೆಯನ್ನಾಗಿಸುವಂತೆ, ಗುರು ತನ್ನ ಶಿಷ್ಯರನ್ನು ಹೊಡೆದು, ತಿದ್ದಿ ಶಿಷ್ಯರ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಗುರುಗಳಿಗೆ ನೀನು ಆ ರೀತಿ ಮಾತನಾಡಬಾರದಿತ್ತು." ಮುಂದೆ ದಯಾನಂದರು ಮಹರ್ಷಿಯೆನಿಸಿ ಜನರಿಗೆ ಉಪದೇಶ ನೀಡುತ್ತಿದ್ದ ಸಂದರ್ಭದಲ್ಲಿ ತಮ್ಮ ಭುಜದ ಮೇಲೆ ಗುರುಗಳು ಹೊಡೆದಿದ್ದರಿಂದ ಆಗಿದ್ದ ಗುರುತನ್ನು ತೋರಿಸಿ ಹೇಳುತ್ತಿದ್ದರು, "ಇವು ನನ್ನ ಗುರುವಿಗೆ ನಾನು ಯಾವಾಗಲೂ ಕೃತಜ್ಞನಾಗಿರಬೇಕೆಂದು ನೆನಪಿಸುತ್ತವೆ."
     ಆರ್ಯಸಮಾಜ ಸ್ಥಾಪಕರಾಗಿ ವೇದದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಅಗ್ರಪಾತ್ರ ವಹಿಸಿದ, ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆಯಲು ಸತತ ಪ್ರಯತ್ನ ಮಾಡುತ್ತಾ, ಸತ್ಯಾರ್ಥ ಪ್ರಕಾಶದಂತಹ ಜನರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವ ಗ್ರಂಥ ರಚಿಸಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಬಲಿದಾನ ಮಾಡಿದ ಮಹರ್ಷಿ ದಯಾನಂದ ಸರಸ್ವತಿಯವರ ವೈಚಾರಿಕ ಪ್ರಖರತೆಯ ಮೂಲ ವಿರಜಾನಂದ ಸರಸ್ವತಿಯವರೇ ಆಗಿದ್ದರು ಎಂಬುದರಲ್ಲಿ ಎರಡು ಮಾತಿರಲಾರದು. 1868ರಲ್ಲಿ 90 ವರ್ಷದವರಿದ್ದಾಗ ವಿರಜಾನಂದರ ದೇಹಾಂತ್ಯವಾಯಿತು. ಕಣ್ಣುಗಳಿದ್ದೂ ಕುರುಡರಾಗಿರವವರೇ ಹೆಚ್ಚಾಗಿರುವಾಗ, ಹುಟ್ಟು ಕುರುಡರಾಗಿದ್ದರೂ ಪ್ರಜ್ಞಾಚಕ್ಷುವಾಗಿದ್ದ, ಅಂತರಂಗದ ದೃಷ್ಟಿಯಿಂದ ಸಕಲವನ್ನೂ ಅರಿತಿದ್ದ ವಿರಜಾನಂದ ಸರಸ್ವತಿಯವರು ಸಾಧಕರಿಗೆ ಅನುಪಮ ಮಾರ್ಗದರ್ಶಿಯಾಗಿದ್ದಾರೆ.
ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗ ತೋರುವನೆ ಗುರುವು |
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವೆ ದೇವರೂಪಿಯೋ ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 22.5.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಫೆಬ್ರವರಿ 10, 2014

'ನಾನಿದ್ದೂ ನನ್ನದೇನಿಲ್ಲ' - ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೆ ಒಂದು ಅಪೂರ್ವ ಶ್ರದ್ಧಾಂಜಲಿ

     ಶ್ರೀಪಾದ ಪೂಜಾರರ 'ನಾನಿದ್ದೂ ನನ್ನದೇನಿಲ್ಲ' ಕೃತಿ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕುರಿತ ನೆನಪುಗಳನ್ನು ಪೋಣಿಸುತ್ತಾ ಅವರ ಧೀಮಂತ ವ್ಯಕ್ತಿತ್ವವನ್ನು ಕಣ್ಣ ಮುಂದೆ ನಿಲ್ಲಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ೨೩-೦೩-೨೦೧೩ರಲ್ಲಿ ತಮ್ಮ ೯೭ನೆಯ ವಯಸ್ಸಿನಲ್ಲಿ ಕಣ್ಮರೆಯಾದ ಅಪೂರ್ವ ಚೇತನಕ್ಕೆ ಸಲ್ಲಿಸಿದ ಅನುಪಮ ಶ್ರದ್ಧಾಂಜಲಿಯಾಗಿದೆ. ಬೆಂಗಳೂರಿನ ಕಾಮಧೇನು ಪ್ರಕಾಶನದಿಂದ ಪ್ರಥಮವಾಗಿ ಮೇ, ೨೦೧೩ರಲ್ಲಿ ಪ್ರಕಾಶಿತವಾದ ೨೧೬ ಪುಟಗಳ ಈ ಕೃತಿ ಕೇವಲ ೭ ತಿಂಗಳುಗಳಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆಯೆಂದರೆ "ಶೇಷವೇ ಸರಿ. ಬೆಳಗೆರೆ ಕೃಷ್ಣಶಾಸ್ತ್ರಿಗಳ ವ್ಯಕ್ತಿತ್ವ ಜನರ ಮೇಲೆ ಬೀರಿದ್ದ ಪ್ರಭಾವದಿಂದ ಇದು ಸಾಧ್ಯವಾಗಿದೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಹೆಗ್ಗೆರೆಯ ಶ್ರೀ ನಾಗರಾಜು ಮತ್ತು ಶ್ರೀಮತಿ ಗಾಯತ್ರಿ ನಾಗರಾಜು ದಂಪತಿಗಳು ಶಿವಮೊಗ್ಗದ ತಮ್ಮ ನೂತನ ಮನೆ 'ನಂದನ'ದ ಗೃಹಪ್ರವೇಶದ ಸಂದರ್ಭದಲ್ಲಿ ಈ ಪುಸ್ತಕವನ್ನು ಸಮಾರಂಭಕ್ಕೆ ಆಗಮಿಸಿದ್ದ ಬಂಧು-ಮಿತ್ರರುಗಳಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದರು. ಅವರ ಅಳಿಯ ಶಿವಮೊಗ್ಗದ ಡಾ. ವೆಂಕಟಕೃಷ್ಣರವರಿಂದ ನನಗೆ ಈ ಪುಸ್ತಕದ ಪ್ರತಿ ತಲುಪಿದ್ದು, ಓದಲು ಪ್ರಾರಂಭಿಸಿದಾಗ ಸುಲಲಿತವಾಗಿ ಓದಿಸಿಕೊಂಡುಹೋದ ಪುಸ್ತಕವಿದು. ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಓದಿದವರ ಮೇಲೆ ಮುಕುಂದೂರು ಸ್ವಾಮಿಗಳ ಬಗ್ಗೆ ಗೌರವ ಮತ್ತು ಅವರ ಒಡನಾಡಿಯಾಗಿದ್ದ ಕೃಷ್ಣಶಾಸ್ತ್ರಿಗಳ ಬಗ್ಗೆ ಅಭಿಮಾನ ಮೂಡದೇ ಇರಲು ಸಾಧ್ಯವೇ ಇಲ್ಲ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರು ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದಂತೆ ಕೃಷ್ಣಶಾಸ್ತ್ರಿಗಳು 'ಎಲೆಯ ಮರೆಯ ಅಲರು'.
     ಕೃಷ್ಣಶಾಸ್ತ್ರಿಗಳ ಕುರಿತ ನೆನಪುಗಳ ಎಳೆಗಳನ್ನು ಕೂಡಿಸುತ್ತಾ ಅವರ ವ್ಯಕ್ತಿತ್ವದ ಅನಾವರಣ ಮಾಡುವ ಲೇಖಕರ ರೀತಿ ಕೃಷ್ಣಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಪರಿಚಯ ಮಾಡಿದ ರೀತಿಗೆ ಹೋಲುತ್ತದೆ. 'ಯೇಗ್ದಾಗೆಲ್ಲಾ ಐತೆ' ಪುಸ್ತಕ ಓದಿ ಪ್ರಭಾವಿತರಾಗಿದ್ದ ಲೇಖಕರು ತಮಗೆ ಕೃಷ್ಣಶಾಸ್ತ್ರಿಗಳ ಪರಿಚಯ ಹೇಗೆ ಪ್ರಾರಂಭವಾಯಿತೆಂದು ವಿವರಿಸುವುದರೊಂದಿಗೆ ನೆನಪುಗಳ ಸರಮಾಲೆ ಆರಂಭವಾಗುತ್ತದೆ. ಮೊದಲ ಭೇಟಿಯಲ್ಲಿ ತಾವು ಭಾವಿಸಿದ್ದ ರೀತಿಯಲ್ಲಿ ಕಂಡು ಬರದಿದ್ದ ಈ ಬಿಳಿಬಟ್ಟೆಯ ವ್ಯಕ್ತಿಯ ಬಗ್ಗೆ ನಿರಾಶರಾಗಿದ್ದ ಅವರು ಕ್ರಮೇಣ ಶಾಸ್ತ್ರಿಗಳ ಒಳವ್ಯಕ್ತಿತ್ವದ ಅನುಭವ ಪಡೆದಾಗ ಧನ್ಯತೆಯ ಭಾವಕ್ಕೆ ಬದಲಾದುದನ್ನು ವಿವರಿಸಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ತೀವ್ರ ಹೃದ್ರೋಗದಿಂದ ಬಳಲಿ ಐ.ಸಿ.ಯು. ನಲ್ಲಿ ಇದ್ದಾಗ ಅವರ ಕೈಗೆ ಹಾಕಿದ್ದ ಡ್ರಿಪ್ಸ್ ಅಲ್ಲಾಡದಂತೆ ಇರಲು ಕೈಯನ್ನು ಹಿಡಿದು ಲೇಖಕರು ಕುಳಿತಿದ್ದಾಗ ಒಬ್ಬರು ಬಂದು 'ನಾನು ಸ್ವಲ್ಪ ಹೊತ್ತು ಅವರ ಕೈ ಹಿಡಿದುಕೊಳ್ಳಲೇ' ಎಂದು ಕೋರಿ ಅವಕಾಶ ಪಡೆದಿದ್ದರು. ಶಾಸ್ತ್ರಿಗಳು ಕಣ್ಣು ತೆರೆದು ಅವರನ್ನು ನೋಡಿ ಮುಗುಳ್ನಕ್ಕು ಮತ್ತೆ ಕಣ್ಣು ಮುಚ್ಚಿ ಮಲಗಿದರು. ಅರ್ಧ ಗಂಟೆಯ ನಂತರ ಲೇಖಕ ಬಂದಾಗ ಇನ್ನೂ ಸ್ವಲ್ಪ ಹೊತ್ತು ಇರುವುದಾಗಿ ಹೇಳಿದ್ದ ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ಹಾಗೆ ಕುಳಿತಿದ್ದರು. ಆ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್.ಪಿ. ಆಗಿದ್ದ ಐ.ಪಿ.ಎಸ್. ಅಧಿಕಾರಿ ಶ್ರೀ ರಾಮಕೃಷ್ಣರವರು. ಓರ್ವ ಸಾಮಾನ್ಯ ಶಿಕ್ಷಕರಾಗಿದ್ದವರು ಯಾವ ಮಟ್ಟಕ್ಕೆ ಬೆಳೆದಿದ್ದರು ಎಂಬುದನ್ನು ಸೂಚಿಸುವ ಒಂದು ಸಣ್ಣ ಘಟನೆಯಿದು.
     ಈ ಬಿಳಿಬಟ್ಟೆಯ ಸಂನ್ಯಾಸಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಈ ಚಟುವಟಿಕೆಗಳ ಸಂದರ್ಭದ ಘಟನೆಗಳು ಒಂದಕ್ಕಿಂತಾ ಒಂದು ರೋಚಕವಾಗಿವೆ. ತಂದೆ ಸಂಸ್ಕೃತ ವಿದ್ವಾಂಸರಾಗಿದ್ದ ಚಂದ್ರಶೇಖರ ಶಾಸ್ತ್ರಿಗಳ ಗಾಢ ಪ್ರಭಾವ ಕೃಷ್ಣಶಾಸ್ತ್ರಿಗಳ ಮೇಲೆ ಆಗಿದೆ. ಜಾತಿ, ಮತ, ವರ್ಗ, ವರ್ಣ ಮುಂತಾದುವುಗಳಿಂದ ಗಾವುದ ದೂರವಿದ್ದ ಶಾಸ್ತ್ರಿಗಳ ಅಂತರಂಗ ಅವರ ಕೃತಿಗಳಲ್ಲಿ, ನಾಟಕಗಳಲ್ಲಿ, ನಡೆನುಡಿಗಳಲ್ಲಿ ಎದ್ದು ಕಾಣುವಂತಹದು. ಮುಕುಂದೂರು ಸ್ವಾಮಿಗಳ ಬಗ್ಗೆ ಮತ್ತು ರಮಣರ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುತ್ತಿದ್ದವರು. ಅವರ ಬದುಕೇ ಒಂದು ತೆರೆದ ಪುಸ್ತಕ. 'ಮಕ್ಕಳಿಗೆ ಎರಡಕ್ಷರ ಕಲಿಸು, ನಾಲ್ಕು ತುತ್ತು ಅನ್ನ ಹಾಕು' ಎಂಬ ತಂದೆಯ ಮರಣಕಾಲದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ ಶಾಸ್ತ್ರಿಗಳು, ಈ ಸಾಧನೆ ಮಾಡುವಾಗ ಪಟ್ಟ ಕಷ್ಟ-ನಷ್ಟಗಳು, ಶ್ರಮ, ಸಾಫಲ್ಯ ಇವುಗಳನ್ನು ತೆರೆದಿಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ೧೯೬೬ರಲ್ಲಿ ಹೀಗೆ ಪ್ರಾರಂಭವಾದದ್ದು ಬೆಳಗೆರೆಯ 'ಶ್ರೀ ಶಾರದಾ ಮಂದಿರ ವಿದ್ಯಾಸಂಸ್ಥೆ'. ತಮ್ಮ ವಿರೋಧಿಗಳಿಂದಲೂ ಮನ್ನಣೆ ಗಳಿಸಿದ ಕುರಿತ ಪ್ರಸಂಗಗಳು ಆಶ್ಚರ್ಯ ಮೂಡಿಸುತ್ತವೆ. ತಮ್ಮ ನೇರ ಮತ್ತು ದಿಟ್ಟ ನಡೆ ಮತ್ತು ಮಾತುಗಳಿಂದ ಸಾಕಷ್ಟು ವಿರೋಧಿಗಳನ್ನೂ ಹೊಂದಿದ್ದ ಅವರಿಗೆ ಜೀವ ಬೆದರಿಕೆ ಇದ್ದುದನ್ನು ಕಂಡ ಜಿಲ್ಲಾ ಪೋಲಿಸ್ ಅಧಿಕಾರಿ ಶ್ರೀ ಕೆ.ಆರ್. ಶ್ರೀನಿವಾಸನ್ ಅವರು ಶಾಸ್ತ್ರಿಗಳಿಗೆ ತಮ್ಮ ಗುಡಿಸಲ ವಾಸ ಬಿಟ್ಟು ವಾಸಸ್ಥಳವನ್ನು ಬದಲಾಯಿಸಲು ಹೇಳಿದ್ದರೂ ಅವರು ಕೇಳಲಿಲ್ಲ. ಅವರ ಮಾತಿಗೆ ಬೆಲೆ ಕೊಡದಿದ್ದಾಗ ಆ ಅಧಿಕಾರಿ ಕೆರಳಿ, 'ಇದರ ಪರಿಣಾಮ ನೆಟ್ಟಗಿರುವುದಿಲ್ಲ. ನೀವು ಕಂಬಿ ಎಣಿಸಬೇಕಾಗುತ್ತದೆ' ಎಂದು ಬೆದರಿಸಿದ್ದರು. ಶಾಸ್ತ್ರಿಗಳು, 'ಸತ್ಯ ಎಂಬುದೊಂದಿದ್ದು ಅದು ಸತ್ತು ಹೋದರೆ ಕಂಬಿ ಎಣಿಸಲು ತಯಾರಾಗಿದ್ದೇನೆ ಬಿಡಿ ಸಾರ್' ಎಂದಿದ್ದರು. ಧಡಕ್ಕನೆ ಎದ್ದು ಮನೆಯ ಒಳಗೆ ಹೋದ ಅಧಿಕಾರಿ ತಮ್ಮನ್ನು ಬಂಧಿಸಲು ಬೇಡಿ ತರಲು ಹೋಗಿದ್ದಾರೆ ಎಂದು ಶಾಸ್ತ್ರಿಗಳು ಅಂದುಕೊಂಡಿದ್ದರೆ, ಅಧಿಕಾರಿ ಬರುತ್ತಾ ಎರಡು ಲೋಟ ಕಾಫಿ ಹಿಡಿದುಕೊಂಡು ಬಂದಿದ್ದರು. ಶಾಸ್ತ್ರಿಯವರ ಮೇಲಿನ ಅಭಿಮಾನದಿಂದ ಒರಟಾಗಿ ನಡೆದುಕೊಂಡಿದ್ದಾಗಿಯೂ ತಿಳಿಸಿ ಕ್ಷಮಿಸಲು ಕೇಳುವುದರೊಂದಿಗೆ ಜಾಗರೂಕರಾಗಿ ಇರಲು ಕೇಳಿಕೊಂಡಿದ್ದರು. ಇಂತಹ ನೆನಪುಗಳ ಮೂಟೆಯನ್ನೇ ಈ ಪುಸ್ತಕ ಹೊಂದಿದೆ. 
     ಹೆಸರು ಬೆಳಗೆರೆ ಕೃಷ್ಣಶಾಸ್ತ್ರಿಯಾದರೂ ಒಂದು ಅಹಿತಕರ ಘಟನೆಯಿಂದ ಬೆಳಗೆರೆಯಿಂದ ಉಟ್ಟ ಬಟ್ಟೆಯಲ್ಲೇ ಹೊರಬಂದಿದ್ದ ಅವರು ತಮ್ಮ ಜಮೀನಿನಲ್ಲೇ ಒಂದು ಬಾಗಿಲಿಲ್ಲದ ಗುಡಿಸಲು ಕಟ್ಟಿಕೊಂಡು ಜೀವನದ ಬಹುಭಾಗ, ಸುಮಾರು ೪೫ ವರ್ಷಗಳನ್ನು ಅಲ್ಲಿ ಕಳೆದಿದ್ದರು. ವಿದ್ಯಾಮಂದಿರ ಮತ್ತು ಹಾಸ್ಟೆಲನ್ನು ಪೋಷಿಸುತ್ತಿದ್ದ ಜಮೀನಿನಲ್ಲೇ ವಾಸವಿದ್ದು ಇಪ್ಪತ್ತನಾಲ್ಕು ಗಂಟೆಗಳೂ ಜಾಗೃತನಾಗಿದ್ದ ಶಿಕ್ಷಕರಾಗಿದ್ದ ಅವರ ಬದುಕಿನ ರೀತಿಯನ್ನು ರೂಪಿಸಿಬಿಟ್ಟಿದ್ದವರು ರಮಣರು, ಮುಕುಂದೂರು ಸ್ವಾಮಿಗಳು ಮತ್ತು ಗಾಂಧೀಜಿ ಎಂದರೆ ಅತಿಶಯೋಕ್ತಿಯಲ್ಲವೆಂಬುದನ್ನು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ. 'ತಂದೆ ಚಂದ್ರಶೇಖರ ಶಾಸ್ತ್ರಿಗಳಿಗೆ ಗುಡಿಸಲೇ ಇರಲಿಲ್ಲ, ಮಗನ ಗುಡಿಸಲಿಗೆ ಬಾಗಿಲೇ ಇರಲಿಲ್ಲ' - ಎಂಬುದನ್ನು ಹೇಳುತ್ತಾ ಅನಿಕೇತನರಾದ ತಂದೆ, ನಿಕೇತನವಿದ್ದರೂ ಅದನ್ನು ಬಯಲಾಗಿಸಿದ ಮಗನ ಬಗ್ಗೆ ಕೃಷ್ಣಮೂರ್ತಿ ಹನೂರರು ಚಂದ್ರಶೇಖರ ಶಾಸ್ತ್ರಿಗಳ ಪುತ್ಥಳಿ ಬಿಡುಗಡೆ ಮಾಡುವಾಗ ಹೇಳಿದ ಮಾತಿನ ಉಲ್ಲೇಖ ಗಮನ ಸೆಳೆಯುತ್ತದೆ. ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಪತ್ನಿವಿಯೋಗವಾದಾಗ ಪುನರ್ವಿವಾಹದ ಪ್ರಸ್ತಾಪ ಬರಬಾರದೆಂದು ಗಟ್ಟಿಯಾಗಿದ್ದ ತಮ್ಮ ಹಲ್ಲುಗಳನ್ನು ಕೀಳಿಸಿಕೊಂಡು ಅಕಾಲವೃದ್ಧಾಪ್ಯ ಆವಾಹಿಸಿಕೊಂಡಿದ್ದ ಶಾಸ್ತ್ರಿಗಳ ವಿಲಕ್ಷಣ ನಡೆ ಗರಬಡಿಸುತ್ತದೆ. ತಂಗಿ ಪಾರ್ವತಮ್ಮನ ಒತ್ತಾಯದಿಂದ ಕಟ್ಟಿಕೊಂಡಿದ್ದ ಹಲ್ಲಿನ ಸೆಟ್ಟನ್ನೂ ವೇದಾವತಿ ನದಿಗೆ ಅರ್ಪಿಸಿ ಕೈ ತೊಳೆದುಕೊಂಡಿದ್ದ ಅವರ ಚರ್ಯೆ ಬೆರಗು ಮೂಡಿಸುತ್ತದೆ. ಕಾಮನಿಗ್ರಹಕ್ಕೆ ಇದು ಅವರು ಕಂಡುಕೊಂಡಿದ್ದ ರೀತಿಯೇ, ಹರಯದಲ್ಲೂ ಕಾಮ ಅವರನ್ನು ಕಾಡಿರಲಿಲ್ಲವೇ ಎಂಬ ಲೇಖಕರ ಪ್ರಶ್ನೆಗೆ ಶಾಸ್ತ್ರಿಗಳು ಕೊಟ್ಟಿದ್ದ ಉತ್ತರವೆಂದರೆ, 'ಹರೆಯದಲ್ಲೂ ಕಾಮ ನನ್ನನ್ನು ಕಾಡಲಿಲ್ಲ. ರಮಣರ ದರ್ಶನವಾದ ನಂತರ ಮನಸ್ಸು ಆ ಕಡೆ ಎಳೆಯಲೇ ಇಲ್ಲ' ಎಂಬುದು! ತಮ್ಮ ಎದುರಿಗೆ ಬಂದ ಹಾಲುಹಲ್ಲು ಬಿದ್ದ ಪುಟ್ಟಮಕ್ಕಳನ್ನು ಕಂಡಾಗ ಶಾಸ್ತ್ರಿಗಳು ತಮಾಷೆ ಮಾಡುತ್ತಿದ್ದರಂತೆ, "ನೋಡು, ನಿನಗೆ ಮತ್ತೆ ಹಲ್ಲು ಹುಟ್ಟಿಬಂದು ದೊಡ್ಡವನಾಗುತ್ತೀಯ. ನನಗೆ ಹಲ್ಲು ಬರುವುದೇ ಇಲ್ಲ. ನಾನು ಮಗುವಾಗಿಯೇ ಇರುತ್ತೇನೆ". ಸ್ತ್ರೀಯರ ಕುರಿತ ಇವರ ಭಾವನೆ ಅರ್ಥ ಮಾಡಿಕೊಳ್ಳಬೇಕೆಂದರೆ ಇನ್ನೊಂದು ಘಟನೆ ಉಲ್ಲೇಖಿಸಬೇಕು. ಚಿತ್ರದುರ್ಗದ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಉಷಾಲತಾ ಅವರಿಗೆ ಭದ್ರಾವತಿಗೆ ವರ್ಗವಾದ ಸಂದರ್ಭದಲ್ಲಿ ನಡೆದ ಬೀಳ್ಕೊಡುಗೆ ಸಂದರ್ಭದಲ್ಲಿ ಶಾಸ್ತ್ರಿಗಳೂ ಇಚ್ಛೆಪಟ್ಟು ಹೋದಾಗ ಅವರನ್ನು ಗೌರವದಿಂದ ವೇದಿಕೆಯಲ್ಲಿ ಕೂರಿಸಿದ್ದರು. ಉಷಾಲತಾ ಅವರಿಗೆ ಶಾಸ್ತ್ರಿಗಳ ಬಗ್ಗೆ ಗೌರವ ಮತ್ತು ಆತ್ಮೀಯತೆಯ ಸಂಬಂಧವಿತ್ತು. ಅಂದು ಮಾತನಾಡಿದವರೆಲ್ಲರೂ ಶಾಸ್ತ್ರಿಗಳು ಉಷಾಲತಾ ಅವರ ಪಿತೃಸಮಾನರೆಂದು ಹೇಳಿದ್ದರು. ಶಾಸ್ತ್ರಿಗಳ ಮಾತನಾಡುವ ಸರದಿ ಬಂದಾಗ ಅವರು ಹೇಳಿದ್ದರು, "ಮಾತನಾಡಿದವರೆಲ್ಲರೂ ಒಂದು ತಪ್ಪು ಮಾಡಿದ್ದಾರೆ. ಉಷಾಲತಾ ನನ್ನ ಮಗಳ ಸಮಾನ ಎಂದಿದ್ದಾರೆ. ಅದು ತಪ್ಪು. ಅವರು ನನ್ನ ತಾಯಿ".
     ಎಸ್.ಎಲ್. ಭೈರಪ್ಪನವರಿಗೆ ಸರಸ್ವತೀ ಸಮ್ಮಾನ್ ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಲು ತುಡಿದವರು ಶಾಸ್ತ್ರಿಗಳು. ಭೈರಪ್ಪನವರು 'ಹಿರಿಯರು ತೊಂದರೆ ತೆಗೆದುಕೊಳ್ಳಬಾರದೆಂದೂ, ತಾವೇ ಬರುವುದಾಗಿಯೂ' ತಿಳಿಸಿದರೂ ಅವರನ್ನು ಕಾಣಲು ಮೈಸೂರಿಗೇ ಹೋಗಿದ್ದರು. ಭೈರಪ್ಪನವರೂ ಶಾಸ್ತ್ರಿಗಳ ಬಗ್ಗೆ ಗೌರವಭಾವನೆ ಹೊಂದಿದ್ದು ಎರಡೆರಡು ಸಲ ಶಾಸ್ತ್ರಿಗಳ ಗುಡಿಸಲಿಗೆ ಬಂದು, ಅಲ್ಲೇ ಕೆಲವು ದಿನಗಳು ಕಳೆದಿದ್ದರು. ಅನಗತ್ಯ ಮಾತುಗಳಿಗಿಂತ ಮೌನದ ಮಹತ್ವ ಸಾರುವ ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ ಬರುವ ಮಹದೇವಯ್ಯನವರು ನಿಜವಾಗಲೂ ಇದ್ದವರು. ಮಹದೇವಯ್ಯನವರು ಆಗಾಗ ಹೇಳುತ್ತಿದ್ದ ಮಾತು, "ಉತ್ಸವ ದೇವರು ಊರಾಡಿದಷ್ಟೂ ಮೂಲ ದೇವರ ಮಹಿಮೆ ಕಡಿಮೆ ಆಗುತ್ತೆ". (ಭೈರಪ್ಪನವರು ತಮ್ಮ ನಾಭಿಂದ ಕುತ್ತಿಗೆಯವರೆಗೆ ಕೈಯಾಡಿಸಿ ಅದನ್ನು ಮೂಲದೇವರು ಎಂಬಂತೆ ಸಂಕೇತಿಸಿದ್ದರಂತೆ). ಅನೇಕ ಹಿರಿಯರು, ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ, ನಿಟ್ಟೂರರು, ಕರೀಂಖಾನರು, ಹಿರಿಯ ಅಧಿಕಾರಿಗಳು, ಸಾಹಿತಿಗಳು, ಮಠಾಧಿಪತಿಗಳು ಇವರೊಡನೆ ಆತ್ಮೀಯ ಮತ್ತು ಗೌರವಭಾವನೆಯ ಸಂಬಂಧ ಹೊಂದಿದ್ದು ಅವರುಗಳ ಭೇಟಿಯ ಕ್ಷಣಗಳ ವಿವರಗಳು ದೊಡ್ಡವರ ದೊಡ್ಡತನದ ದರ್ಶನ ಮಾಡಿಸುತ್ತವೆ. ಶಾಸ್ತ್ರಿಗಳ ನಡೆ ನುಡಿಗಳು ಅವರ ಕಲ್ಪನೆಯ ವಿದ್ಯಾಮಂದಿರದ ಕಟ್ಟಡಗಳು, ಹಾಸ್ಟೆಲುಗಳು, ಮಕ್ಕಳ ಊಟದ ವ್ಯವಸ್ಥೆಗೆ ಹಣ ಹೊಂದಿಸಲು ನೆರವಾದ ಕುರಿತ ವಿವರಗಳು ಗಮನ ಸೆಳೆಯುತ್ತವೆ. ವಿಶೇಷವಾಗಿ ಅವರ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಪ್ರಭಾವ ಸಹಾಯಕವಾಗಿ ಎದ್ದು ಕಾಣುತ್ತಿದ್ದ ಅಂಶವೆಂದರೆ ತಪ್ಪಲ್ಲ. ನಿಗದಿತವಾಗಿ ಧನಸಹಾಯ ಮಾಡುವವರ ದೊಡ್ಡ ಸಮೂಹವೇ ಅವರ ಬೆನ್ನಿಗಿತ್ತು.
     ಶಾಸ್ತ್ರಿಗಳು ತಮ್ಮ ಇಳಿವಯಸ್ಸಿನಲ್ಲಿ ಶಸ್ತ್ರಕ್ರಿಯೆ ನಂತರದಲ್ಲಿ ತಂಗಿಯ ಮಗ ರವಿ ಬೆಳಗೆರೆಯ ಮನೆಯಲ್ಲಿ ಇರಲು ಪ್ರಾರಂಭಿಸಿದ್ದು ಹಲವರಿಗೆ ಇಷ್ಟವಾಗಿರಲಿಲ್ಲ. ಶಾಸ್ತ್ರಿಗಳ ಮನೋಭಾವಕ್ಕೂ ರವಿ ಬೆಳಗೆರೆಯವರ ಸ್ವಭಾವಕ್ಕೂ ಅಜಗಜಾಂತರ ವೈರುಧ್ಯವಿದ್ದುದೇ ಇದಕ್ಕೆ ಕಾರಣ. "ಶಾಸ್ತ್ರಿಗಳು ರವಿ ಬೆಳಗೆರೆಯ ಮನೆಯಲ್ಲಿ ಇದ್ದಾರೆಯೇ?" ಎಂದು ಆಶ್ಚರ್ಯ ಪಡುವ, ಆಕ್ಷೇಪಿಸುವ ಮಂದಿಗೆ ಕೊರತೆಯಿರಲಿಲ್ಲ. ರವಿ ಬೆಳಗೆರೆ ಮತ್ತು ಶಾಸ್ತ್ರಿಗಳ ಅಂತರ್ವೈಯುಕ್ತಿಕ ಸಂಬಂಧ ಕುರಿತು ಒಂದು ಅಧ್ಯಾಯವೇ ಇದೆ. ಈ ಬಗ್ಗೆ ಪುಸ್ತಕ ಓದಿಯೇ ತಿಳಿಯುವುದು ಒಳ್ಳೆಯದು. ಒಂದಂತೂ ನಿಜ, ಶಾಸ್ತ್ರಿಗಳ ಆಯಸ್ಸು ಹತ್ತು ವರ್ಷ ಹೆಚ್ಚಾಗಲು ಅವರು ರವಿಯವರ ಮನೆಯಲ್ಲಿದ್ದುದೇ ಕಾರಣವೆಂದು ಲೇಖಕರ ಮತ್ತು ಅವರನ್ನು ಅರಿತವರ ಖಚಿತ ಅಭಿಪ್ರಾಯ. ಅಂತ್ಯಕಾಲ ಸಮೀಪಿಸಿದ್ದ ದಿನದಲ್ಲಿ ಒಂದು ದಿನ ಲೇಖಕರಿಂದ ಡಿವಿಜಿಯವರ 'ವನಸುಮ' ಪದ್ಯವನ್ನು ಓದಿಸಿ ಹೇಳಿಸಿ, ರವಿಯವರಿಗೆ ಆ ಪದ್ಯದ ಪ್ರತಿ ಕೊಡುತ್ತಾ, "ನೋಡಪ್ಪಾ, ಹೆಚ್ಚಿಗೆ ಏನೂ ಹೇಳುವುದಿಲ್ಲ. ಇದರಂತೆ ಬಾಳಬೇಕು ನೀನು" ಎಂದಿದ್ದರು. ರವಿ ಭಾವುಕರಾಗಿ, "ನಿನ್ನ ಕಾಲ ಬಳಿ ಜಾಗ ಕೊಡು, ನನಗೆ ಇನ್ನೇನೂ ಬೇಡ" ಎಂದು ಕಣ್ಣೀರು ಸುರಿಸಿದ್ದರು.
     ಗಾಂಧೀಜಿಯವರ ಸತ್ಯ, ಅಹಿಂಸೆ, ಆಸ್ತೇಯ, ಇತ್ಯಾದಿ ಏಕಾದಶವ್ರತಗಳು ಶಾಸ್ತ್ರಿಯವರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಇವುಗಳಿಗೆ ಪೂರಕವಾಗಿ ಅವರ ಜೀವನದ ವಿವಿಧ ಘಟನೆಗಳನ್ನು ಪೋಣಿಸಿ ನಿರೂಪಿಸಿರುವುದು ಮನಸ್ಸಿಗೆ ಹಿತವೆನಿಸುತ್ತವೆ. ಜಾತಿ, ವರ್ಗ, ವರ್ಣಬೇಧ ಮಾಡದ ಶಾಸ್ತ್ರಿಯವರ ಬಗ್ಗೆ ತಿಳಿಸಿರುವ ಈ ಘಟನೆ ಅವರ ಬಗ್ಗೆ ಪೂಜ್ಯಭಾವ ಮೂಡಿಸುತ್ತದೆ. ಮೀರಾಸಾಬಿಹಳ್ಳಿಯಲ್ಲಿ ಶಾಸ್ತ್ರಿಯವರು ಶಿಕ್ಷಕರಾಗಿದ್ದಾಗ ಅವರ ಜೊತೆ ಶಿಕ್ಷಕರಾಗಿದ್ದ ಮಾದಯ್ಯ ಒಬ್ಬ ದಲಿತ ವರ್ಗಕ್ಕೆ ಸೇರಿದವರು. ಅವರು ನಿವೃತ್ತರಾದ ನಂತರದಲ್ಲಿ ಅವರಿಗೆ ಸೌಖ್ಯವಿಲ್ಲವೆಂದು ತಿಳಿದು ಶಾಸ್ತ್ರಿಗಳು ಅವರನ್ನು ಕಾಣಲು ಅವರಿದ್ದ ಹಳ್ಳಿಗೆ ಹೋದರು. ಸಂತೋಷಪಟ್ಟ ಮಾದಯ್ಯ ಸಂಕೋಚದಿಂದ ತಮಗೆ ಒಂದು ಆಸೆಯಿದೆಯೆಂದು ಹೇಳಿದಾಗ ಶಾಸ್ತ್ರಿಯವರು 'ಹೇಳಿ ಮಾದಯ್ಯ, ಯಾಕೆ ಸಂಕೋಚ' ಎಂದಿದ್ದರು. ಶಾಸ್ತ್ರಿಯವರೊಂದಿಗೆ ಊಟ ಮಾಡುವ ಆಸೆ ವ್ಯಕ್ತಪಡಿಸಿದಾಗ. ಜಾತೀಯತೆ ತೋರದಿದ್ದ ತಮ್ಮನ್ನು ಕೇಳಲು ಸಂಕೋಚವೇಕೆಂದು ಅರ್ಥವಾಗದ ಶಾಸ್ತ್ರಿಯವರು 'ಅದಕ್ಕೇನಂತೆ? ತಾಯಿ, ಅಡುಗೆ ಮಾಡಿ. ನಾನು ಇಲ್ಲೇ ಊಟ ಮಾಡುತ್ತೇನೆ' ಎಂದಿದ್ದರು. ತೀವ್ರ ಅಸ್ವಸ್ಥರಾಗಿದ್ದ ಮಾದಯ್ಯನವರಿಗೆ ಶಾಸ್ತ್ರಿಯವರೇ ಕಲಸಿ ಅವರಿಗೆ ಪ್ರೀತಿಯಿಂದ ಊಟ ಮಾಡಿಸಿ, ತಾವೂ ಊಟ ಮಾಡಿ ಅವರ ಸಂತೃಪ್ತಿಗೆ ಕಾರಣರಾಗಿದ್ದರು. ಮುಂದೆ ನಾಲ್ಕೇ ದಿನದಲ್ಲಿ ಮಾದಯ್ಯನವರು ತೀರಿಹೋದರೆಂದು ಸುದ್ದಿ ಬಂದು ಶಾಸ್ತ್ರಿಯವರು ಮತ್ತೆ ಅವರ ಮನೆಗೆ ಹೋದರು. ಮಾದಯ್ಯನವರ ಮಡದಿ, "ನಿಮ್ಮ ಕೈಯಿಂದ ಊಟ ಮಾಡಿದ್ದೇ ಕೊನೆ ಸಾರ್. 'ದೇವರ ಕೈಯಲ್ಲಿಯೇ ಪ್ರಸಾದ ಸ್ವೀಕರಿಸಿದ ಮೇಲೆ ಮತ್ತೆ ಊಟ ಮಾಡಲೇ?' ಎಂದು ನಂತರ ಊಟ ಮಾಡದೇ ಶಾಂತಿಯಿಂದ ಹೋಗಿಬಿಟ್ಟರು ಸಾರ್" ಎಂದು ಹೇಳಿದ್ದರು. ಈ ಆತ್ಮಬಂಧ ವಿವರಿಸಲು ಸಾಧ್ಯವಿದೆಯೇ?
     ಲೇಖಕರು ಅಭಿಪ್ರಾಯ ಪಡುವಂತೆ ಆಚರಿಸುವ ತತ್ವಗಳಿಂದ ವ್ಯಕ್ತಿ ದೊಡ್ಡವನಾಗುವುದಿಲ್ಲ. ಉನ್ನತ ವ್ಯಕ್ತಿಗಳಲ್ಲಿ ತತ್ವಗಳು ಪ್ರಕಾಶಿಸುತ್ತವೆ. ಒಟ್ಟಾರೆಯಾಗಿ, 'ನಾನಿದ್ದೂ ನನ್ನದೇನಿಲ್ಲ' ಕೃತಿಯು ಅವರ ಕುರಿತ ನೆನಪುಗಳ, ಘಟನೆಗಳ ಮೂಲಕ ಕೃಷ್ಣಶಾಸ್ತ್ರಿಗಳ ಗುಣಗಳ ಅನಾವರಣ ಮಾಡುವಲ್ಲಿ ಸಾಫಲ್ಯತೆ ಪಡೆದಿದೆ. ಓದಬೇಕಾದ ಪುಸ್ತಕವಿದು.
-ಕ.ವೆಂ.ನಾಗರಾಜ್.

ಶುಕ್ರವಾರ, ಜುಲೈ 26, 2013

ಸ್ವಾಮಿ ಚಿದ್ರೂಪಾನಂದ ಸರಸ್ವತಿ - ಕಿರುಪರಿಚಯ

     ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ ದೇವರ ವಿಗ್ರಹದ ವಿಧಿವತ್ ಪ್ರತಿಷ್ಟಾಪನೆ ಕಾರ್ಯ ಹುಬ್ಬಳ್ಳಿಯ ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಸಾನ್ನಿಧ್ಯದಲ್ಲಿ ೦೯-೦೬-೨೦೧೩ರಂದು ನೆರವೇರಿತ್ತು. ಆ ಗೋಶಾಲೆಗೂ ಒಂದು ಹಿನ್ನೆಲೆಯಿತ್ತು. ೨೦ ವರ್ಷದ ಬೆಳೆದ ಮಗ ಸುಭಾಷ್ ಅಕಾಲಿಕವಾಗಿ ತೀರಿಹೋದ ದುಃಖವನ್ನು ಅರಗಿಸಿಕೊಳ್ಳಲಾಗದ ಆ ದಂಪತಿಗಳು ಗೋಶಾಲೆಯನ್ನು ನಡೆಸುವ ಮೂಲಕ ಮರೆಯಲು ಪ್ರಯತ್ನಿಸಿದ್ದಾರೆ. ಆಹ್ವಾನವಿದ್ದದ್ದರಿಂದ ಹಾಸನದ ವೇದಭಾರತಿಯ ನಾವು ಹದಿನೈದು ವೇದಾಭ್ಯಾಸಿಗಳು ಆ ಸಮಾರಂಭಕ್ಕೆ ಹೋಗಿದ್ದೆವು. ನಮ್ಮ ತಂಡದಲ್ಲಿ ಮಹಿಳೆಯರೂ ಇದ್ದು ಸ್ವಾಮಿಗಳ ಸಮ್ಮುಖದಲ್ಲಿ ವೇದಘೋಷವನ್ನೂ ಮಾಡಿದೆವು. ಮಹಿಳೆಯರೂ ವೇದಮಂತ್ರಗಳನ್ನು ಹೇಳಿದ್ದನ್ನು ಕೇಳಿದ ಸ್ವಾಮಿಗಳು ಆನಂದಿತರಾಗಿ ವೇದಭಾರತಿಯ ಕುರಿತು ವಿಚಾರಿಸಿದರು. ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸುಗಳ ತಾರತಮ್ಯವಿಲ್ಲದೆ ಕಳೆದ ಒಂದು ವರ್ಷದಿಂದ ವೇದಾಭ್ಯಾಸ ಮಾಡುತ್ತಿರುವ ಬಗ್ಗೆ, ಇದಕ್ಕೆ ಪೂರಕವಾದ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ತಿಳಿಸಿ, ಈ ಕಾರ್ಯಕ್ಕೆ ಅವರ ಆಶೀರ್ವಾದವನ್ನೂ ಕೋರಿದೆವು. ಆಗ ಅವರು ಉದ್ಗರಿಸಿದ್ದೇನೆಂದರೆ, "ಇದು ನಿಜವಾಗಿ ರಾಷ್ಟ್ರ ಕಟ್ಟುವ ಕೆಲಸ. ಆಗಬೇಕಾಗಿರುವುದೂ ಇದೇ. ಕೇವಲ ನನ್ನ ಆಶೀರ್ವಾದ ನಿಮಗೆ ಸಾಕೆ? ಐ ವಿಲ್ ಬಿ ವಿತ್ ಯು! " ಈ ಭೇಟಿಯ ಫಲಶ್ರುತಿಯಾಗಿ ಇದೀಗ ಸ್ವಾಮಿಗಳು ವೇದಭಾರತಿ ಮತ್ತು ಹುಬ್ಬಳ್ಳಿಯ ಆರ್ಷವಿದ್ಯಾಕೇಂದ್ರದ ಆಶ್ರಯದಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ತಿಂಗಳು ೨೫ ರಿಂದ ೩೦ರವರೆಗೆ ಗೀತಾಜ್ಞಾನಯಜ್ಞ ನಡೆಸಿಕೊಡುತ್ತಿದ್ದಾರೆ. ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಕಿರುಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.
     ಪೂಜ್ಯರ ಪೂರ್ವಾಶ್ರಮದ ಹೆಸರು ದತ್ತಾತ್ರೇಯ. ಸಾತ್ವಿಕ ದಂಪತಿಗಳಾದ ಕೃಷ್ಣಭಟ್ಟ-ಕಮಲಾಬಾಯಿಯವವರ ಮೂರನೆಯ ಮಗನಾಗಿ ೧೧-೧-೧೯೪೮ರಲ್ಲಿ ಜನಿಸಿದ ಇವರು ಚಿಕ್ಕಂದಿನಲ್ಲಿಯೇ ತಂದೆಯವರನ್ನು ಕಳೆದುಕೊಂಡು, ತಾಯಿ ಮತ್ತು ಸೋದರಮಾವನ ಆಶ್ರಯದಲ್ಲಿ ಸುಯೋಗ್ಯ ಶಿಕ್ಷಣ, ಸಂಸ್ಕಾರಗಳನ್ನು ಪಡೆದರು. ಬಾಲ್ಯದಿಂದಲೇ ಭಜನೆ, ಕೀರ್ತನೆ, ಸತ್ಸಂಗಗಳಲ್ಲಿ ಕಳೆಯುವ ಅವಕಾಶ ಮತ್ತು ಸಂಸ್ಕಾರ ಅವರಿಗೆ ಲಭ್ಯವಾಗಿತ್ತು. ತಬಲ ಮತ್ತು ಹಾರ್ಮೋನಿಯಮ್ ನುಡಿಸುವುದನ್ನು ಕಲಿತ ಅವರಿಗೆ ಸಂಗೀತದಲ್ಲೂ ಆಸಕ್ತಿಯಿತ್ತು. ಅವರ ತಾಯಿ ಹಸ್ತ ಸಾಮುದ್ರಿಕ, ಶರೀರ ಹಾಗೂ ಮುಖಲಕ್ಷಣ ಶಾಸ್ತ್ರಗಳನ್ನು ತಿಳಿದವರಾಗಿದ್ದು, ಮಗನಿಗೆ ಬಯ್ಯುವಾಗ ಆಗಾಗ್ಗೆ 'ನೀನು ಸನ್ಯಾಸಿ ಆಗು' ಅನ್ನುತ್ತಿದ್ದರಂತೆ. ಹುಬ್ಬಳ್ಳಿಯ ಭೂಮರೆಡ್ಡಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜನಿಯರಿಂಗ್ ಶಿಕ್ಷಣ ಪಡೆದು, ಕೆಲಕಾಲ ಅಣ್ಣಿಗೇರಿ, ನವಲಗುಂದಗಳಲ್ಲಿ ಖಾಸಗಿ ಸೇವೆಯನ್ನೂ ಸಲ್ಲಿಸಿದ್ದರು. ಸ್ವಾಮಿ ಚಿನ್ಮಯಾನಂದರ ಪ್ರಭಾವಕ್ಕೆ ಒಳಗಾದ ಅವರು ೧೯೭೯-೮೦ರಲ್ಲಿ ಸ್ವಾಮಿ ಚಿನ್ಮಯಾನಂದರ ಸಾಂದಿಪಿನಿ ಗುರುಕುಲದಲ್ಲಿ ಎರಡೂವರೆ ವರ್ಷಗಳ ಕಾಲ ವೇದಾಂತ ಸಾಧನಾ ತರಬೇತಿ ಪಡೆದರು. ನಂತರ ಸ್ವಾಮಿ ದಯಾನಂದ ಸರಸ್ವತಿಗಳವರ ಆಚಾರ್ಯತ್ವದಲ್ಲಿ ಹೃಷಿಕೇಶ, ಮುಂಬಯಿ, ಉತ್ತರಕಾಶಿಗಳಲ್ಲಿ ಶಾಸ್ತ್ರ ಅಧ್ಯಯನ ತರಬೇತಿ ಪಡೆದು, ನೈಷ್ಟಿಕ ಬ್ರಹ್ಮಚಾರಿ ದೀಕ್ಷೆ ಹೊಂದಿ ಮುಕ್ತಚೈತನ್ಯ ಎಂಬ ಹೆಸರು ಪಡೆದರು. ಮೂರು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಮಳಗಿಯಲ್ಲಿ ಆಶ್ರಮ ಹೊಂದಿ ಭಜನೆ, ಸತ್ಸಂಗ, ಉಪನ್ಯಾಸಗಳಲ್ಲಿ ತೊಡಗಿಸಿಕೊಂಡರು. ವೈಜ್ಞಾನಿಕವಾಗಿ, ವೈಚಾರಿಕವಾಗಿ ಶುದ್ಧ ಅದ್ವೈತ ವೇದಾಂತವನ್ನು ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಅವರಿಗೆ ಕರಗತವಾಗಿತ್ತು. ಹೃಷಿಕೇಶದ ಗಂಗಾತಟದಲ್ಲಿ ಸ್ವಾಮಿ ದಯಾನಂದ ಸರಸ್ವತಿಗಳಿಂದ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ಚಿದ್ರೂಪಾನಂದ ಸರಸ್ವತಿ ಎಂಬ ನಾಮಧೇಯವನ್ನು ಸದ್ಗುರುವಿನಿಂದ ಪಡೆದರು.
     ಗುರುಗಳ ಮಾರ್ಗದರ್ಶನದಲ್ಲಿ ಸತತ ಏಳು ವರ್ಷಗಳ ಕಾಲ ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆ, ವೇದ, ಉಪದೇಶಸಾರ, ಇತ್ಯಾದಿಗಳನ್ನು ಆಳವಾಗಿ ಅಭ್ಯಸಿಸಿದ ಪೂಜ್ಯರು, ಗುರುಗಳ ಸೂಚನೆಯಂತೆ ತಾವು ಹೊಂದಿದ ಜ್ಞಾನಪ್ರಸಾರಕಾರ್ಯವನ್ನು ಮಾಡುತ್ತಾ ಎಲ್ಲೆಡೆ ಪ್ರವಾಸ ಮಾಡತೊಡಗಿದರು. ಹಲವು ಸಲ ವಿದೇಶಗಳಲ್ಲೂ ಸಂಚರಿಸಿ ಆಧ್ಯಾತ್ಮಿಕ ಪ್ರಚಾರ ಮಾಡಿದರು. ಇದೀಗ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಪೂರ್ವಾಶ್ರಮದಲ್ಲಿ ಸಿವಿಲ್ ಇಂಜನಿಯರ್ ಆಗಿ ಮನೆಗಳನ್ನು ಕಟ್ಟುತ್ತಿದ್ದ, ಮುರಿದ ಮನೆಗಳನ್ನು ಸರಿಪಡಿಸುತ್ತಿದ್ದ ಪೂಜ್ಯರು ಈಗಲೂ ಆಧ್ಯಾತ್ಮಿಕ ಇಂಜನಿಯರ್ ಆಗಿ ಮುರಿದ ಮನಗಳನ್ನು ಕಟ್ಟುವ ಕಾಯಕ ಮುಂದುವರೆಸಿದ್ದಾರೆ. ಜನರ ಆತ್ಮವಿಶ್ವಾಸವನ್ನು ಬಡಿದೆಬ್ಬಿಸುವ, ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಈ ಕಾರ್ಯಕ್ಕೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿಸಿ ಹೇಳಬಲ್ಲ ಅವರ ಪಾಂಡಿತ್ಯ, ಜನರೊಡನೆ ಬೆರೆಯುವ ರೀತಿಗಳು ಸಹಕರಿಸಿವೆ.
     ಹುಬ್ಬಳ್ಳಿಯಲ್ಲಿ ಆರ್ಷವಿದ್ಯಾಪೀಠದ ಹೆಸರಿನಲ್ಲಿ ಆಶ್ರಮ ಹೊಂದಿರುವ ಇವರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಮಲಗುಂದದಲ್ಲಿ ಗುರುಕುಲವೊಂದನ್ನೂ ಸ್ಥಾಪಿಸಿದ್ದಾರೆ. ಆಶ್ರಮ ಮತ್ತು ಗುರುಕುಲದಲ್ಲಿ ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು, ಆಧ್ಯಾತ್ಮ ಶಿಬಿರಗಳು, ಸೇವಾಕಾರ್ಯದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗಳನ್ನು ಆಗಾಗ್ಗೆ ನಡೆಸುತ್ತಾ ಬಂದಿರುವುದಲ್ಲದೆ, ಅನೇಕ ಮಾರ್ಗದರ್ಶಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ. ಸ್ವಾಮಿ ದಯಾನಂದ ಸರಸ್ವತಿಯವರು ೨೦೦೦ದಲ್ಲಿ ಪ್ರಾರಂಭಿಸಿದ ಅಖಿಲ ಭಾರತ ಸೇವಾ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಗಳ ಸಮೀಪದಲ್ಲಿಯೇ ಛಾತ್ರಾಲಯ(ಹಾಸ್ಟೆಲ್)ಗಳನ್ನು ಸ್ಥಾಪಿಸಿ ಅವರುಗಳಿಗೆ ಉಚಿತವಾಗಿ ಊಟ, ವಸತಿಗಳನ್ನು ಒದಗಿಸುವುದಲ್ಲದೆ ಶಿಕ್ಷಣಕ್ಕೆ ಪೂರಕವಾದ ಆವಶ್ಯಕತೆಗಳನ್ನು ಒದಗಿಸುವುದು, ಆಟೋಟಗಳು, ಕುಶಲಕಲೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದವುಗಳಲ್ಲಿ ತರಬೇತಿ ನೀಡುವುದರ ಜೊತೆಗೆ ಅವರನ್ನು ಸದ್ವಿಚಾರಗಳನ್ನು ಹೊಂದುವ ಸುಯೋಗ್ಯ ಮಾನವರನ್ನಾಗಿ ರೂಪಿಸಿ ಭವಿಷ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ ದೇಶದ ೧೧ ರಾಜ್ಯಗಳಲ್ಲಿ ೪೦ ಛಾತ್ರಾಲಯಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸೇವಾ ಅಭಿಯಾನದ ಪ್ರಮುಖರಾಗಿರುವ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಮುಂದಾಳತ್ವದಲ್ಲಿ ೧೭ ಛಾತ್ರಾಲಯಗಳಲ್ಲಿ ೫೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ೧೨೦ ಸಂಧ್ಯಾ ಗುರುಕುಲಗಳು ೪೦೦೦ಕ್ಕೂ ಹೆಚ್ಚು ಶಾಲೆಗೆ ಹೋಗುವ ಮಕ್ಕಳಿಗೆ ಉಪಯೋಗಿಯಾಗಿವೆ. ಹೊನ್ನಾವರದಲ್ಲಿ ಒಂದು ಪ್ರಾಥಮಿಕ ಶಾಲೆ, ಕಲಭಾವಿಯಲ್ಲಿ ಪ್ರೌಢಶಾಲೆ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ವೇದ ಪಾಠಶಾಲೆಗಳು ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ೧೭೦ ಸ್ವಸಹಾಯ ಸಂಘಗಳು ಕಾರ್ಯನಿರತವಾಗಿವೆ. ೧೯೯೮ರಲ್ಲಿ ಪೂಜ್ಯರಿಂದ ಪ್ರಾರಂಭವಾದ ಅಕ್ಷಯ ಟ್ರಸ್ಟ್ ಸಹಾಯ ಅಗತ್ಯವಿರುವ ಎಲ್ಲರಿಗೆ ಜಾತಿ,ಮತ, ರಾಷ್ಟ್ರೀಯತೆಗಳ ಭೇದವಿಲ್ಲದೆ ಶಿಕ್ಷಣ ನೀಡುವ ಗುರಿ ಹೊಂದಿದ್ದು ೬ ಶಾಲೆಗಳು, ಪಿಯು ವಿಜ್ಞಾನ ಕಾಲೇಜು ಮತ್ತು ವೇದಪಾಠಶಾಲೆ ನಡೆಸುತ್ತಿದ್ದು ಸುಮರು ೫೦೦೦ ಮಕ್ಕಳು ಪ್ರಯೋಜನ ಹೊಂದಿದ್ದಾರೆ. 'ಸ್ವಾಸ್ಥ್ಯ' ಎಂಬ ಕನಸಿನ ಯೋಜನೆ ರೂಪಿಸಿರುವ ಇವರು, ಅಕ್ಷಯ ಟ್ರಸ್ಟ್ ವತಿಯಂದ ಇದರ ಅಡಿಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಭವನದಲ್ಲಿ ನಿಯಮಿತವಾಗಿ ಧಾರ್ಮಿಕ ಪ್ರವಚನಗಳು, ಧ್ಯಾನ, ಪ್ರಾರ್ಥನೆ ಮತ್ತು ಯೋಗ ಮಾಡಲು ಅವಕಾಶ, ಸಾತ್ವಿಕ ಆಹಾರ, ವ್ಯಾಯಾಮಶಾಲೆ, ಈಜುವಕೊಳ, ಇತ್ಯಾದಿಗಳನ್ನು ಒದಗಿಸಿ ಸ್ವಾಸ್ಥ್ಯ ಜೀವನ ನಡೆಸಬಯಸುವವರಿಗೆ ಅವಕಾಶ ಕಲ್ಪಿಸಬಯಸಿದ್ದಾರೆ. 
     ಇವರ ವಿಚಾರಧಾರೆಯ ಕೆಲವು ಅಂಶಗಳು ಹೀಗಿವೆ:
* ಸಮಾಜದಲ್ಲಿ ಕೆಲವು ಪರಿವರ್ತನೆಗಳು ಆಗಬೇಕಿದೆ. ಜನರು ಧರ್ಮಭೀರುಗಳಾಗಬೇಕು.
* ಸಂನ್ಯಾಸಿಗಳ ಅವಶ್ಯಕತೆ ಸಮಾಜಕ್ಕೆ ಇಲ್ಲ. ಬದಲಾಗಿ ಸುಸಂಘಟಿತವಾದ ಸಮಾಜವನ್ನು ಕಟ್ಟುವಂತಹ, ಜಾತಿರಹಿತ ಸಮಾಜವನ್ನು ಕಟ್ಟಬಲ್ಲ ಉತ್ಸಾಹಿ ತರುಣರ ಅವಶ್ಯಕತೆ ಇದೆ. ಅವರನ್ನೇ ಸಂನ್ಯಾಸಿಗಳೆಂದು ಕರೆದರೂ ತಪ್ಪಿಲ್ಲ.
* ಜಾತಿಯ, ರಾಜಕಾರಣಿಗಳ ಅಥವ ಸರಕಾರದ, ಅಧಿಕಾರಿಗಳ ಮುಲಾಜಿಗೆ ಒಳಪಟ್ಟು ಉತ್ಸಾಹ ತೋರುವ ಸಂನ್ಯಾಸಿಗಳಿಂದ ಸಮಾಜದಲ್ಲಿ ಸುಸಂಘಟನೆ ತರಲಾಗದು. ಯಾವ ಮತ್ತು ಯಾರ ಮುಲಾಜಿಗೂ ಒಳಗಾಗದ ಸಂನ್ಯಾಸಿಗಳು ಇರಬೇಕು. ಇಂತಹ ಉತ್ಕಟ ಅನಿಸಿಕೆಯನ್ನು ಸಾಕಾರಗೊಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿರುವೆ. ಆಗುತ್ತಾ ಇಲ್ಲ. ಆದರೂ ಸಂಕಲ್ಪ ದೂರವಾಗಿಲ್ಲ.
* ಸಂನ್ಯಾಸಿಗಳಲ್ಲಿ ಎರಡು ವಿಧ - ಸಾಧಕ ಸಂನ್ಯಾಸಿ, ಜ್ಞಾನಿ ಸಂನ್ಯಾಸಿ. ಜ್ಞಾನಿ ಸಂನ್ಯಾಸಿಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಸಾಧಕ ಸಂನ್ಯಾಸಿಗಳಿಗೆ ರಾಷ್ಟ್ರಹಿತ, ಸಮಾಜಹಿತ, ಧರ್ಮರಕ್ಷಣೆ ಮತ್ತು ಆತ್ಮವಿಕಾಸಗಳೆಂಬ ನಾಲ್ಕು ಕರ್ತವ್ಯಗಳಿವೆ. ಸಮಾಜಹಿತವೆಂದರೆ ಸಮಸ್ತ ಮಾನವಕುಲಹಿತ. ಸಮಾಜವೆಂದರೆ ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ಕ್ಷತ್ರಿಯ ಸಮಾಜ, ಇತ್ಯಾದಿ ಪರಿಗಣಿಸುವುದಲ್ಲ. ಸದ್ಯದ ಸಂನ್ಯಾಸಿಗಳು ಜಾತಿ ಆಧಾರಿತ ಸಮಾಜದ ಸುಸಂಘಟನೆಗಾಗಿ ದುಡಿಯುವಂತಹವರಾದರೆ ಆದಷ್ಟು ಬೇಗ ತಮ್ಮ ವಿಚಾರಧಾರೆಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯದು.
* ಯುವಕರ ವಿಚಾರದಲ್ಲಿ ಧಾರ್ಮಿಕ ಜವಾಬ್ದಾರಿ ಹೊತ್ತ ಗುರುಗಳು, ಆಚಾರ್ಯರು, ಸಂನ್ಯಾಸಿಗಳು ಅವರನ್ನು ಅರ್ಥ ಮಾಡಿಕೊಂಡು, ಅವರಿಗೆ ಅರ್ಥವಾಗುವ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಧಾರ್ಮಿಕ ವಿಚಾರಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಯುವಪೀಳಿಗೆಗೆ ಕೊಟ್ಟರೆ ಅವರಿಗೂ ಆಸಕ್ತಿ ಬರುತ್ತದೆ.
* ದೀನ ದಲಿತ, ಕಡುಬಡವ ಮಕ್ಕಳಿಗೆ ಸಂಸ್ಕಾರ, ಶಿಕ್ಷಣಗಳನ್ನು ಉಚಿತವಾಗಿ ನೀಡುವ ಪ್ರಯತ್ನವನ್ನು ಪ್ರತಿ ಯುವಕ-ಯುವತಿಯರು, ಸಂನ್ಯಾಸಿಗಳು ಯಾವುದೇ ರೀತಿಯಲ್ಲಿ ಮಾಡಬೇಕು.
* ಮೌಲ್ಯಗಳ ಅಧಃಪತನದಿಂದಾಗಿ ಜನರಲ್ಲಿ ಸುಳ್ಳು, ವಂಚನೆ. ಮೋಸಗಳು ಇವೆ, ಇದರಿಂದಾಗಿ ಅಸತ್ಯದ ಅನುಸರಣೆ ಮಾಡುತ್ತಾರೆ, ಸತ್ಯವನ್ನು ದೂರ ಮಾಡುತ್ತಾರೆ. ಸತ್ಯಕ್ಕೆ ಕುಂದಿಲ್ಲ. ಶಾಸ್ತ್ರಾಧ್ಯಯನ, ಶಾಸ್ತ್ರ ಪರಂಪರೆ ಇದು ಒಬ್ಬಿಬ್ಬರ ಕೊಡುಗೆಯಲ್ಲ. ಸಹಸ್ರಾರು ವರ್ಷಗಳ, ಸಹಸ್ರಾರು ಜನರ ಶ್ರಮಕ್ಕೆ ವೈಜ್ಞಾನಿಕತೆಯಿದೆ, ವಿಶ್ಲೇಷಣೆ ಇದೆ, ಕರ್ತವ್ಯವೂ ಇದೆ. ಪ್ರಮಾಣರಹಿತವಾದ ಇತರ ಮಾರ್ಗಗಳನ್ನು ಜನರು ಅನುಸರಿಸುತ್ತಾರೆಂದರೆ ಇದಕ್ಕೆ ಮೌಲ್ಯದ ಅಧಃಪತನವೇ ಕಾರಣ. ಕ್ರಮೇಣ ಇದರಲ್ಲಿ ಕೊರತೆ ಕಾಣುವ ಜನರು ಇದರಿಂದ ದೂರ ಸರಿಯುತ್ತಾರೆ. ಸತ್ಯ ತಲೆಯೆತ್ತುತ್ತದೆ. 
     ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ೨೫ರಿಂದ ೩೦ರವರೆಗೆ ಇವರು ಭಗವದ್ಗೀತೆಯ ಮತ್ತು ಉಪನಿಷತ್ ಕುರಿತು ನಡೆಸಿಕೊಡಲಿರುವ ಪ್ರವಚನಗಳು ಆಸಕ್ತರಿಗೆ ಮಾರ್ಗದರ್ಶಿಯಾಗಲಿರುವುದರಲ್ಲಿ ಅನುಮಾನವಿಲ್ಲ.

-ಕ.ವೆಂ.ನಾಗರಾಜ್.
(ಆಧಾರ: ಸ್ವಾಮಿ ಸುವ್ರತಾನಂದ ಸರಸ್ವತಿಯವರ 'ಚಿದ್ರೂಪ ದರ್ಶನ')     

ಶುಕ್ರವಾರ, ಏಪ್ರಿಲ್ 19, 2013

ಜೀವಂತ ಇತಿಹಾಸದ ನೈಜ ಪ್ರತಿನಿಧಿ ಪಂ. ಸುಧಾಕರ ಚತುರ್ವೇದಿಯವರಿಗೆ 117ನೆಯ ವರ್ಷದ ಜನ್ಮದಿನದ ಶುಭ ಹಾರೈಕೆಗಳು


     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (19-04-2013) 116 ವಸಂತಗಳನ್ನು ಕಂಡು 117ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ 1897ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು 6-7 ವರ್ಷದವರಾಗಿದ್ದಾಗ -ಅಂದರೆ ಸುಮಾರು 110 ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ 13ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು 15 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಜೀವಂತ ಇತಿಹಾಸದ ನೈಜ ಪ್ರತಿನಿಧಿ.

     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ 117 ವರ್ಷಗಳ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ 5ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. 286/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.

ಶುಕ್ರವಾರ, ಫೆಬ್ರವರಿ 22, 2013

ಸಹಸ್ರಮಾನದ ವ್ಯಕ್ತಿ - ಪಾಲಮ್ ಕಲ್ಯಾಣ ಸುಂದರಮ್


   ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಸರ್ಕಾರ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುಚ್ಛ ಗೌರವಾನ್ವಿತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ತೂತ್ತುಕುಡಿ ಜಿಲ್ಲೆಯ ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಇವರು ತಮ್ಮ ವೈಯಕ್ತಿಕ ಖರ್ಚುವೆಚ್ಚಗಳಿಗಾಗಿ ಹೋಟೆಲು ಮಾಣಿಯಾಗಿಯೂ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದರೆ ನಂಬಲು ಕಷ್ಟವಾದರೂ ಸತ್ಯವಾದ ಸಂಗತಿ. 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ 30 ಕೋಟಿ ರೂ. ಹಣವನ್ನೂ ಸಹ ಬಿಡುಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದ ಪುಣ್ಯಾತ್ಮರಿವರು. ಇವರಿಗೆ ಇವರೇ ಸಾಟಿ, ಅನ್ಯರಿಲ್ಲ. ಇವರೇ ಪಾಲಮ್ ಕಲ್ಯಾಣ ಸುಂದರಮ್. ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ಇವರನ್ನು ತಮ್ಮ ದತ್ತು ತಂದೆಯನ್ನಾಗಿಸಿಕೊಂಡಿದ್ದಾರೆ.
     ಅದು ಭಾರತ-ಚೀನಾ ಯುದ್ಧದ ಸಂದರ್ಭ. ಇಡೀ ದೇಶವೇ ಒಂದಾಗಿ ಎದ್ದು ನಿಂತಿದ್ದ ಸಮಯ. ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದ ಸಮಯ. ಆಗ ರಾಜಕಾರಣಿಗಳ ನೈತಿಕತೆ ಇಷ್ಟೊಂದು ಪಾತಾಳ ಕಂಡಿರಲಿಲ್ಲ. ರಾಜಕಾರಣಿಗಳನ್ನು ಜನರು ನಂಬುತ್ತಿದ್ದ ಕಾಲ. ಅವರುಗಳಲ್ಲೂ ನಂಬಿಕೆ ಉಳಿಸಿಕೊಂಡಿದ್ದವರಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿ. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗೆ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರವರನ್ನು ಕಂಡು ವಿಷಯ ತಿಳಿಸಿದಾಗ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ಹೇಳಿ ವಾಪಸು  ಕಳಿಸಿದ್ದು ಪವಾಡವನ್ನೇ ಮಾಡಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗೀ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು 30 ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವೂ ಸಮಾಜಕ್ಕೆ ಅರ್ಪಿಸಿದ ಆ ಪುಣ್ಯಾತ್ಮ ಅಸಾಮಾನ್ಯ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ. 1990ರಲ್ಲಿ ಪೆನ್ಶನ್ ಮತ್ತು ನಿವೃತ್ತಿ ಸಂಬಂಧದ ಹಣ ಸುಮಾರು 10 ಲಕ್ಷ ರೂ.ಗಳು ಬಂದಾಗ ಆ ಎಲ್ಲಾ ಹಣವನ್ನೂ ತಿರುನಲ್ವೇಲಿಯ ಕಲೆಕ್ಟರರ ನಿಧಿಗೆ ಕೊಟ್ಟು ನಿರಾಳರಾದ ಅವರನ್ನು, ಕಲೆಕ್ಟರರು ಅವರ ವಿರೋಧವನ್ನೂ ಲೆಕ್ಕಿಸದೆ ಸನ್ಮಾನಿಸಿದ್ದರು. ತಿರುನಲ್ವೇಲಿಯ ವೈದ್ಯಕೀಯ ಕಾಲೇಜಿಗೆ ಸತ್ತ ನಂತರದಲ್ಲಿ ತಮ್ಮ ಕಣ್ಣು ಮತ್ತು ದೇಹದಾನ ಪಡೆಯಲು ಅನುಮತಿಸಿ ಬರೆದುಕೊಟ್ಟಿರುವವರಿವರು. ಪಾಲಮ್ ಎಂಬ ಹೆಸರಿನ ಸಮಾಜ ಕಲ್ಯಾಣ ಸಂಸ್ಥೆ ಸ್ಥಾಪಿಸಿರುವ ಅವರು ಅದರ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ. ಈ ಸಂಸ್ಥೆ ದಾನಿಗಳು ಮತ್ತು ಫಲಾನುಭವಿಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿದ್ದು, ದಾನಿಗಳು ಕೊಡುವ ವಸ್ತುಗಳು ಮತ್ತು ಹಣ ಯೋಗ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಚಂಡಮಾರುತ ಸಂತ್ರಸ್ತರಿಗೆ, ಮಹಾರಾಷ್ಟ್ರ ಮತ್ತು ಗುಜರಾತಿನ ಭೂಕಂಪ ಪೀಡಿತರಿಗೆ ಈ ಸಂಸ್ಥೆ ಸಹಾಯಹಸ್ತ ಚಾಚಿದೆ. 
     ತಿರುನಲ್ವೇಲಿ ಜಿಲ್ಲೆಯ ಮೇಲಕರಿವೇಲಾಂಕುಲಂನಲ್ಲಿ 1953ರ ಆಗಸ್ಟ್ ತಿಂಗಳಿನಲ್ಲಿ ಜನಿಸಿದ ಕಲ್ಯಾಣಸುಂದರಮ್ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ಅವರಿಗೆ ಬಡವರ ಸೇವೆ ಮಾಡಲು ಪ್ರೇರಿಸಿದ್ದು ಅವರ ತಾಯಿ. ಲೈಬ್ರರಿ ಸೈನ್ಸಿನಲ್ಲಿ ಚಿನ್ನದ ಪದಕ ಗಳಿಸಿದ್ದ ಅವರು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲೂ ಅನುಪಮ ಸೇವೆ ಸಲ್ಲಿಸಿದವರು. ಮದ್ರಾಸ್ ವಿಶ್ವವಿದ್ಯಾಲಯದ ಸಾಹಿತ್ಯ ಮತ್ತು ಇತಿಹಾಸ ವಿಷಯಗಳಲ್ಲಿ ಮಾಸ್ಟರ್ ಪದವಿ ಹೊಂದಿದ್ದಾರೆ. ಗ್ರಂಥಪಾಲನೆ ಮಾಡುವ ಕ್ರಮದ ಅಭಿವೃದ್ಧಿಗೆ ಮಾರ್ಗಸೂಚಿಗಳನ್ನು ತೋರಿದವರು. ಅವರು ಖಾದಿ ತೊಡಲು ಪ್ರಾರಂಭಿಸಿದ ಹಿನ್ನೆಲೆ ಸ್ವಾರಸ್ಯಕರವಾಗಿದೆ. ಗಾಂಧೀಜಿ ವಿಚಾರಗಳ ಕುರಿತು ಅವರು ಕಾಲೇಜಿನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಿತ್ತಂತೆ. ಗಾಂಧಿ ಕುರಿತು ಮಾತನಾಡುವಾಗ ಬೆಲೆ ಬಾಳುವ ಬಟ್ಟೆ ಧರಿಸಿ ಮಾತನಾಡುವುದು ಸರಿಕಾಣದೆ ಅವರು ಖಾದಿ ತೊಡಲು ಆರಂಭಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನವರಾಗಿದ್ದು, ಅವರಲ್ಲಿ ಅನೇಕರು ಪಾಲಮ್ ಸಂಸ್ಥೆಗೆ ಸೇರಿದ್ದಾರೆ. ರಾಷ್ಟ್ರೀಕೃತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ಎಲ್ಲಾ ಸ್ತರದ ಜನರಿಗೆ ಅದರ ಉಪಯೋಗ ಕಲ್ಪಿಸುವ ಒಂದು ಗುರಿಯನ್ನೂ ಸಹ ಅವರ ಸಂಸ್ಥೆ ಹೊಂದಿದೆ. "ಕ್ರಿಯಾಸಿದ್ಧಿಃ ಸತ್ವೇಭವತಿ ಮಹತಾಂ ನೋಪಕರಣೇ" ಎಂಬ ವಾಕ್ಯದ ಅರ್ಥ ಇವರ ನಡೆ ನುಡಿಯಲ್ಲಿ ವ್ಯಕ್ತವಾಗಿದೆ.
     ಸರಳ ಜೀವನ, ಉನ್ನತ ಚಿಂತನೆಯ ಸಾಕಾರ ರೂಪ ಕಲ್ಯಾಣಸುಂದರಮ್. ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕು. ಸಾಮಾಜಿಕ ಒಳಿತಿಗೆ ಪ್ರತಿಯೊಬ್ಬರೂ ತಮ್ಮ ಪಾಲಿನ ಕಾಣಿಕೆ ಕೊಟ್ಟರೆ ಬದಲಾವಣೆ ಸಾಧ್ಯವೆಂದು ನಂಬಿರುವ ಅವರು ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೆಸರಿಗೆ ತಕ್ಕಂತೆ ಲೋಕಕಲ್ಯಾಣಕಾರಿಯಾಗಿರುವ, ಸುಂದರ ವಿಚಾರಗಳನ್ನು ಕಾರ್ಯರೂಪಕ್ಕಿಳಿಸಿರುವ ಕಲ್ಯಾಣಸುಂದರಮ್ ನಮ್ಮೆಲ್ಲರಿಗೆ ಆದರ್ಶವಾಗಲಿ. ಕೋಟಿ ಕೋಟಿ ಹಣ ಬಾಚುವ, ದೋಚುವ ರಾಜಕಾರಣಿಗಳು, ನುಂಗಣ್ಣರನ್ನು ವೈಭವೀಕರಿಸುವ ಜನರು ಮತ್ತು ಮಾಧ್ಯಮಗಳು ಇಂತಹವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಲಿ, ಗೌರವಿಸಲಿ.  ಸಹಸ್ಯಮಾನದ ಈ ಅಪರೂಪದ ವ್ಯಕ್ತಿತ್ವಕ್ಕೆ ನಮೋನಮಃ. 
     ಈ ಲೇಖನಕ್ಕೆ ದಿ ಹಿಂದೂ ಪತ್ರಿಕೆಯ ಆನ್ ಲೈನ್ ಪ್ರತಿಯಲ್ಲಿರುವ ಲೇಖನ ಆಧಾರವಾಗಿದೆ. ಬಳಸಿರುವ ಚಿತ್ರ ಸಹ ಇಲ್ಲಿಯದೇ. ಲಿಂಕ್ ಇಲ್ಲಿದೆ:
 http://www.hindu.com/lf/2004/08/22/stories/2004082209260200.htm. ಯು ಟ್ಯೂಬಿನ ಸರ್ಚ್ ಅಂಕಣದಲ್ಲಿ ಇವರ ಹೆಸರು ನಮೂದಿಸಿ ಹುಡುಕಿದರೆ ಇವರ ಕುರಿತು ಕೆಲವು ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.
-ಕ.ವೆಂ.ನಾಗರಾಜ್.

ಶುಕ್ರವಾರ, ಸೆಪ್ಟೆಂಬರ್ 16, 2011

ಬೆಲಗೂರಿನಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ - 24ರಿಂದ 28-08-2011

     ಬೆಲಗೂರಿನಲ್ಲಿ  24ರಿಂದ 28-08-2011ರವರೆಗೆ ನಡೆದ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ, ಸಹಸ್ರ ಕುಂಭಾಭಿಷೇಕ ವೀಕ್ಷಿಸಲು ಅನೇಕ ಸ್ಥಳಗಳಿಂದ ಭಕ್ತರು ಆಗಮಿಸಿದ್ದರು. ಆ ಸಂದರ್ಭದ ಕೆಲವು ದೃಷ್ಯಗಳು:















     ಸ್ವಾಮಿ ಬಿಂದು ಮಾಧವ ಶರ್ಮರವರ ಚೈತನ್ಯಶೀಲ ವ್ಯಕ್ತಿತ್ವ ಎಲ್ಲರನ್ನೂ ಸೆಳೆಯುವಂತಹುದು. ಜಾತಿಭೇದ ಮಾಡದ , ಎಲ್ಲರನ್ನೂ ಸಮಾನರಾಗಿ ಕಾಣುವ ಅವರು ಇತರರಿಗೆ ಮಾದರಿಯಾಗಿದ್ದಾರೆ. ನಾಲ್ಕು ದಿನಗಳ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಪ್ರೇರಕರಾದ ಅವರ ಶಕ್ತಿ ಆಶ್ಚರ್ಯ ತರುವಂತಹುದು. ವೈಯಕ್ತಿಕವಾಗಿ ನನಗೆ ದೇವಸ್ಥಾನದ ಹೊರಗೆ ಕುಳಿತು ಏಕನಾದದೊಂದಿಗೆ ತತ್ವಪದ ಹೇಳುತ್ತಿದ್ದ ಒಬ್ಬ ವ್ಯಕ್ತಿ ಗಮನಸೆಳೆದ. ಸಾಂಸ್ಕೃತಿಕ ಕಾರ್ಯಕ್ರಮಗಳೂ ಚೇತೋಹಾರಿಯಾಗಿದ್ದವು. ಕಲ್ಯಾಣರಾಮನ್ ರವರು ಭಜನೆಗಳನ್ನು ಹೇಳಿ ಸೇರಿದ್ದವರನ್ನು ಭಕ್ತಿಪರವಶರಾಗಿಸಿದ್ದಲ್ಲದೆ ಕುಣಿಯುವಂತೆ ಮಾಡಿದ್ದು ಮನಸ್ಸಿಗೆ ಉಲ್ಲಾಸ ನೀಡಿತೆಂದರೆ ಅತಿಶಯೋಕ್ತಿಯಲ್ಲ.
***************
-ಕ.ವೆಂ.ನಾಗರಾಜ್.