ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಚುಟುಕು-ಗುಟುಕು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚುಟುಕು-ಗುಟುಕು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 8, 2018

ಪಾಠ ಮರೆತುಹೋಯಿತು!

     

     ಆ ಮಗು ಒಂದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅವನ ಶಾಲೆಯ ಮಾಸ್ತರು ಬಸವಣ್ಣನವರ ವಿಚಾರ ಹೇಳುತ್ತಾ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಹೇಳಿದ್ದರು. ಶಾಲೆ ಮುಗಿಸಿ ಮರಳಿ ಬರುವಾಗ ಮಳೆ ಪ್ರಾರಂಭವಾದುದರಿಂದ ಒಂದು ಮನೆಯ ಮುಂಭಾಗದಲ್ಲಿ ನಿಂತಿತ್ತು. ಆಗ ಓಡಿ ಬಂದ ನಾಯಿಯೊಂದೂ ಸಹ ರಕ್ಷಣೆಗಾಗಿ ಅದೇ ಮನೆಯ ಬಳಿ ಬಂದು ನಿಂತಿತು. ಇವನು ನಿಂತಿದ್ದರಿಂದ ನಾಯಿಗೆ ಜಾಗ ಸಾಲದಾಗಿ ಅರ್ಧ ನೆನೆಯುತ್ತಿತ್ತು. ಮಗು ಯೋಚಿಸಿತು, "ನನಗಾದರೆ ಮನೆಯಿದೆ, ಬಟ್ಟೆಯಿದೆ. ಪಾಪ, ಈ ನಾಯಿಗೆ ಏನಿದೆ?" ನಾಯಿಗೆ ಜಾಗ ಬಿಟ್ಟು ನೆನೆದುಕೊಂಡೇ ಮನೆಗೆ ವಾಪಸು ಬಂದ ಮಗನನ್ನು ಕಂಡ ತಾಯಿಗೆ ನೆನೆದುಕೊಂಡು ಬಂದ ಕಾರಣ ತಿಳಿಸಿತು.ನೆನೆದಿದ್ದ ಮಗುವನ್ನು ಒರೆಸಿ ಬೇರೆ ಬಟ್ಟೆ ಹಾಕಿದ ತಾಯಿ ಮಗುವನ್ನು ಮುದ್ದಾಡಿದಳು. ವಿಷಯ ತಿಳಿದ ತಂದೆಯೂ ಖುಷಿಪಟ್ಟು ಮಗುವಿಗೆ ಹೊಸ ಬಟ್ಟೆ, ಚಾಕೊಲೇಟ್ ಕೊಡಿಸಿದ. ಕಾಲ ಸರಿಯಿತು, ಮಗು ದೊಡ್ಡದಾಗುತ್ತಾ ಹೋದಂತೆ ಆ ಮಾಸ್ತರ ಪಾಠ ಮರೆತುಹೋಗುತ್ತಾ ಒಂದೊಮ್ಮೆ ಪೂರ್ತಿ ಮರೆತೇಹೋಯಿತು.
-ಕ.ವೆಂ.ನಾಗರಾಜ್.

ಸೋಮವಾರ, ಸೆಪ್ಟೆಂಬರ್ 9, 2013

ಬೆನಕನ ನೆನಯೋ ಕೊನೆತನಕಾ . .

ಎರಡು ವರ್ಷಗಳ ಹಿಂದೆ ಬೆಲಗೂರಿನಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕದ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದಾಗ ಅಲ್ಲಿನ ದೇವಸ್ಥಾನದ ಮುಂದೆ ಕುಳಿತಿದ್ದ ಏಕನಾದಿ ಮೀಟಿ ಹಾಡುತ್ತಿದ್ದ ವ್ಯಕ್ತಿಯ ಬಗ್ಗೆ ನನ್ನ ಗಮನ ಹರಿಯಿತು. ಅವನ ಮುಂದೆ ಕುಳಿತು ಈ ಹಾಡು ಚಿತ್ರೀಕರಿಸಿಕೊಂಡೆ. ಗಣೇಶನ ಹಬ್ಬದ ದಿನವಾದ ಇಂದು ಇದನ್ನು ನೀವೂ ಕೇಳಿ:

ಶುಕ್ರವಾರ, ಮೇ 24, 2013

ಶೌಚಾಲಯವೂ, ಭ್ರಷ್ಟಾಚಾರವೂ !!



     ಹಾಸನ ನಗರದ ಸ್ಟೇಡಿಯಮ್ಮಿನಲ್ಲಿ ಒಂದು ಆಧುನಿಕ ಶೌಚಾಲಯ ನಿರ್ಮಾಣವಾಗಿ ೪-೫ ವರ್ಷಗಳಾಗಿವೆ. ಆಗ ಈ ಕಾಮಗಾರಿಗೆ ಸುಮಾರು ೫-೧೦ ಲಕ್ಷ ರೂ. ಖರ್ಚು ತೋರಿಸಿರಬಹುದು, ಅಥವ ಇನ್ನೂ ಹೆಚ್ಚು ತೋರಿಸಿರಲೂಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲವೆಂದು ಅದನ್ನು ಕಟ್ಟಿಸಿದವರಾಗಲೀ, ಜನರಾಗಲೀ ಇದುವರೆವಿಗೂ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳು ಇವೆಯೇ ಎಂದರೆ ಅದೂ ಇಲ್ಲ. ದಿನ ನಿತ್ಯ ನೂರಾರು ಜನರು ಅಲ್ಲಿ ವಾಯುಸೇವನೆಗೆ, ವಿಶ್ರಾಂತಿಗೆ ಬಂದು ಹೋಗುತ್ತಾರೆ. ಹಲವಾರು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಮುಂತಾದ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುವುದು ಇಲ್ಲಿಯೇ. ಆಗ ಸಾವಿರಾರು ಜನರು ಸೇರುತ್ತಾರೆ. ಇಲ್ಲಿನ ಶಾಸಕರ ಮನೆ ಇರುವುದೂ ಸ್ಟೇಡಿಯಮ್ ಸಮೀಪದ ಬಡಾವಣೆಯಲ್ಲಿಯೇ. ಅವರು ಇದೇ ಮಾರ್ಗವಾಗಿ ಓಡಾಡುತ್ತಾರೆ. ಆದರೂ ಶೌಚಾಲಯ ಉಪಯೋಗಕ್ಕೆ ತೆರೆದಿಲ್ಲ ಮತ್ತು ಜನರಿಗೂ ಅದು ಬೇಕಿಲ್ಲವೆಂದರೆ ಏನೆನ್ನಬೇಕು? ಇಲ್ಲಿ ಶೌಚಾಲಯದ ಅಗತ್ಯವಿಲ್ಲವೇ ಎಂದರೆ ತುಂಬಾ ಅಗತ್ಯವಿದೆ. ಗಂಡಸರು ಎಲ್ಲೋ ದಿಬ್ಬದ ಮರೆಯಲ್ಲಿ, ಗಿಡದ ಮರೆಯಲ್ಲಿ ಮತ್ತು ವಿಶೇಷವೆಂದರೆ ಇದೇ ಶೌಚಾಲಯದ ಹಿಂಬದಿಯಲ್ಲಿ ಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಹೆಂಗಸರು ಏನು ಮಾಡಬೇಕು? ಸ್ತ್ರೀಶಕ್ತಿ ಸಂಘಗಳು, ಪ್ರಬುದ್ಧ ಮಹಿಳಾಮಣಿಗಳೂ ಈ ಬಗ್ಗೆ ಚಕಾರವೆತ್ತಿಲ್ಲ. ಜನರು ಇದೇ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಶೌಚಾಲಯದ ನಿರ್ಮಾಣಕ್ಕೆ ಆದ ವೆಚ್ಚ ವ್ಯರ್ಥವಾದಂತಾಯಿತಲ್ಲವೇ? ಇದು ಸಾರ್ವಜನಿಕರ ಹಣದ ದುರುಪಯೋಗವಲ್ಲವೇ? ಇದು ಭ್ರಷ್ಟಾಚಾರವಲ್ಲವೇ? ಜನರು ಜಾಗೃತರಾಗಿದ್ದರೆ ಈ ಶೌಚಾಲಯಕ್ಕೆ ಆದ ವೆಚ್ಚ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವಂತೆ ನೋಡಿಕೊಳ್ಳುತ್ತಿದ್ದರು ಮತ್ತು ತೆರೆದ ನಂತರವೂ ಅದು ಸರಿಯಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು ಅಥವ ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇಲ್ಲಿ ಹಾಗಾಗಿಲ್ಲ. ಹಾಗಾದರೆ ಭ್ರಷ್ಟಾಚಾರಕ್ಕೆ ನಿಜವಾದ ಹೊಣೆಗಾರರು ಯಾರು? ನಾವೇ ಅಲ್ಲವೇ? ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರದ ಮೂಲಬೇರು ಎಲ್ಲಿದೆಯೆಂದರೆ ಜನರಿಗೆ ಅಗತ್ಯವಾದ ಮೂಲಭೂತ ಕಾರ್ಯಕ್ರಮಗಳ ಜಾರಿ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಗಮನಿಸುವಲ್ಲಿನ ವೈಫಲ್ಯದಲ್ಲಿ, ನಮ್ಮ ಅಜಾಗರೂಕತೆಯಲ್ಲಿ, ಅನ್ಯಾಯವೆಂದು ಗೊತ್ತಿದ್ದೂ ಸಹಿಸಿಕೊಂಡಿರುವಲ್ಲಿ!
-ಕ.ವೆಂ.ನಾಗರಾಜ್

ಸೋಮವಾರ, ಫೆಬ್ರವರಿ 18, 2013

ಮುಸುಕಿನ ಗುದ್ದು


    ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು: 'ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರನ್ನ ಕಂಡರೆ ಮೈ ಉರಿಯುತ್ತೆ'. ಪೇಪರ್ ಓದುತ್ತಾ ಕುಳಿತಿದ್ದ ಗಂಡನ ಕಡೆಗೆ ಕಿರುನೋಟ ಬೀರಿ ನೋಡುತ್ತಾ  ಹೀಗೆ ಹೇಳಿದಾಗ ಬೆಳಿಗ್ಗೆ ನಡೆದ ಮಾತಿನ ಚಕಮಕಿಯಿಂದ ಮುಖ ದಪ್ಪಗೆ ಮಾಡಿಕೊಂಡಿದ್ದ ಅವನ ಮುಖ ಇನ್ನೂ ದಪ್ಪಗಾಯಿತು.
     ಅದೇ ಸಮಯಕ್ಕೆ ಪಕ್ಕದ ಮನೆ ಗಿರಿಜಮ್ಮ ಬಂದವರು, "ಮನೆಗೆ ನೆಂಟರು ಬಂದಿದ್ದಾರೆ. ಹಾಲೆಲ್ಲಾ ಮುಗಿದಿದೆ. ಸಂಜೆ ತರಿಸಿಕೊಡ್ತೀನಿ. ಸ್ವಲ್ಪ ಹಾಲಿದ್ದರೆ ಕೊಡಿ" ಎಂದು ಹದಿನೈದೇ ನಿಮಿಷ ಮಾತನಾಡಿದ್ದರು. ಗಂಡ ಕೊಡಿಸಿದ್ದ ಹೊಸ ಬಂಗಾರದ ಬಳೆ ತೋರಿಸಿಹೋಗೋದು ಮುಖ್ಯ ಕಾರಣ ಆಗಿತ್ತು. ಹೋಗುವಾಗ ಅವಳಿಂದ ಹಾಲಿನ ಜೊತೆಗೆ "ನೀವು ಬಿಡ್ರೀ ಗಿರಿಜಮ್ಮ, ಪುಣ್ಯವಂತರು. ಹೇಳಿದ್ದನ್ನು ಕೇಳೋದಿರಲಿ, ಮನಸ್ಸಿನಲ್ಲಿರೋದನ್ನೂ ಅರ್ಥ ಮಾಡಿಕೊಳ್ಳೋ ಗಂಡನನ್ನು ಪಡೆದಿದ್ದೀರಿ" ಎಂಬ ಶಹಭಾಸಗಿರಿಯನ್ನೂ ತೆಗೆದುಕೊಂಡು ಹೋದರು. ಅವಳು ಮತ್ತೊಂದು ಕೊಂಕುನೋಟ ಗಂಡನೆಡೆಗೆ ಬೀರಿದ್ದಳು. ತಿಂಡಿ ಆದ ಮೇಲೆ ಕಾಫಿಗಾಗಿ ಕಾಯುತ್ತಲೇ ಇದ್ದ ಅವನ ದಪ್ಪ ಮುಖ ಈ ಮಾತಿನಿಂದ ಕೆಂಪಗೂ ಆಯಿತು. ಗೆಳತಿಯೊಡನೆ ಹರಟುತ್ತಾ ಪುರುಸೊತ್ತು ಮಾಡಿಕೊಂಡು ಕಾಫಿ ಮಾಡಿದ ಅವಳು ಗೆಳತಿಗೆ ಕೊಟ್ಟು, ಗಂಡನ ಮುಂದೆಯೂ ಒಂದು ಲೋಟ ಕುಕ್ಕಿ ಪಿಸುಗುಟ್ಟಿದ್ದಳು: "ಉರಾ ಉರಾ ಅಂತಿರಬೇಡಿ. ಬಂದವರ ಎದುರಿಗಾದರೂ ನಗುನಗುತ್ತಾ ಇರಿ." ಕಾಫಿ ಗಟಗಟ ಕುಡಿದು ಎದ್ದು ರೂಮಿಗೆ ಹೋದ ಅವನು ಕನ್ನಡಿಯಲ್ಲಿ ಮುಖ ನೋಡಿಕೊಂಡ. ಬಲವಂತದ ನಗೆ ನಕ್ಕ ಅವನ ಮುಖ ಅವನಿಗೇ ವಿಚಿತ್ರವಾಗಿ ಕಂಡಿತು.

ಗುರುವಾರ, ಮಾರ್ಚ್ 8, 2012

ತಲೆ ಮಾತ್ರ ಬಾಗದಿರಲಿ, ಅನ್ಯಾಯದೆದುರು ಧಾತಾ

     ಪ್ರತಿ ಶನಿವಾರದಂದು ಸಾಯಂಕಾಲ 5-30ಕ್ಕೆ ಸರಿಯಾಗಿ ಬೆಂಗಳೂರಿನ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಸತ್ಸಂಗವಿರುತ್ತದೆ. ಆ ಸಂದರ್ಭದಲ್ಲಿ ಅಗ್ನಿಹೋತ್ರ, ಭಜನೆ ಮತ್ತು ಪಂಡಿತರಿಂದ ಸುಮಾರು 45 ನಿಮಿಷಗಳ ಕಾಲ ಉಪನ್ಯಾಸವಿರುತ್ತದೆ. ಆಸಕ್ತರು ಭಾಗವಹಿಸಬಹುದು. ಅಲ್ಲಿ ಹಾಡಲಾದ ಒಂದು ಭಜನೆಯನ್ನು ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಭಜನೆಯ ಸಾಹಿತ್ಯವನ್ನೂ ಇಲ್ಲಿ ಕೊಟ್ಟಿರುವೆ. ನಿಮಗೆ ಇಷ್ಟವೆನಿಸಿದರೆ ಸಂತೋಷ.
-ಕ.ವೆಂ.ನಾಗರಾಜ್.



ಜ್ಯೋತೀಸ್ವರೂಪ ಭಗವನ್| ಆ ದಿವ್ಯಜ್ಯೋತಿ ನೀಡು|
ಈ ತಿಮಿರ ರಾಶಿ ಹರಿದು| ಮನವಾಗೆ ಬೆಳಕ ಬೀಡು || ೧ ||
ಪ್ರಾಸಾದ ಕುಟಿಗಳಲ್ಲಿ| ಧನಿ ದೀನರಲ್ಲಿ ದೇವ|
ವೈಶಮ್ಯ ದ್ವಂದ್ವದಲ್ಲಿ| ನೀಡೆಮಗೆ ಸಾಮ್ಯಭಾವ || ೨ ||
ನರರೆಲ್ಲ ಸರಿಸಮಾನ| ಎಂಬೀ ಪ್ರಬುದ್ಧ ಭಾವ|
ಉರದಲ್ಲಿ ಮೂಡುವಂತೆ| ಧೃತಿ ನೀಡು ಸತ್ಪ್ರಭಾವ || ೩ ||
ದೀನರ್ಗೆ ನೋವನಿತ್ತು| ಸಂಪತ್ತ ಗಳಿಸದಂತೆ|
ನೀ ನೀಡು ಶುದ್ಧಮತಿಯಾ| ಪರಹಿಂಸೆಗೆಳೆಸದಂತೆ || ೪ ||
ಮನದಲ್ಲಿ ಮಾತಿನಲ್ಲಿ| ಮೈಯಲ್ಲಿ ಸತ್ಯ ಮಾತ್ರ|
ಮೊನೆವಂತೆ ಆತ್ಮಬಲವ| ನೀಡೈ ಜಗದ್ವಿಧಾತ್ರ || ೫ ||
ಸಲೆ ಕಷ್ಟಕೋಟಿ ಬರಲಿ| ನಮಗಾದರಾತ್ಮಧಾತಾ|
ತಲೆ ಮಾತ್ರ ಬಾಗದಿರಲಿ| ಅನ್ಯಾಯದೆದುರು ಧಾತಾ || ೬ ||
ಪಾಪಾಚರಣ ವಿರಕ್ತಿ| ಜೀವಾತ್ಮರಲನುರಕ್ತಿ|
ತಾಪಾಪಹಾರ ಶಕ್ತಿ| ನೀಡೆಮಗೆ ನಿನ್ನ ಭಕ್ತಿ || ೭ ||
ಬಾಧಾ ಕಠೋರ ಕ್ಲೇಶ| ಪ್ರತಿನಿತ್ಯ ಸಹಿಪೆವಾವು|
ವೇದೋಕ್ತ ಧರ್ಮ ಮಾತ್ರ| ಬಿಡೆವಡಸಿದೊಡೆಯೆ ಸಾವು || ೮ ||

ಮಂಗಳವಾರ, ಫೆಬ್ರವರಿ 7, 2012

ರಂಗೋಲಿ ಹೇಗಿದೆ?

     ರಂಗೋಲಿ ಬರೆದು ಅದನ್ನು ಯಾರೂ ತುಳಿಯಬಾರದೆಂದು ಕಾಯ್ದು ಕುಳಿತಿರುವ ನನ್ನ ಮೊಮ್ಮಗಳು ಅಕ್ಷಯ!

ಶುಕ್ರವಾರ, ಜನವರಿ 20, 2012

ಮಗಳು-ಮೊಮ್ಮಗಳು


ಮಗಳು ಬಿಂದು 25 ವರ್ಷಗಳ ಹಿಂದೆ

     ನನ್ನ ಮಗಳು ಬಿಂದು ಚಿಕ್ಕ ವಯಸ್ಸಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ನಾಟ್ಯ/ನೃತ್ಯಗಳಲ್ಲಿ ಭಾಗವಹಿಸಿದ ಸಂದರ್ಭದ ಕೆಲವು ಚಿತ್ರಗಳಿವು. ಅವಳು ಧರಿಸಿದ ಅಲಂಕಾರಿಕ ಆಭರಣಗಳನ್ನು (ಸೊಂಟದ ಪಟ್ಟಿ/ಡಾಬು, ತೋಳಬಂದಿ, ನೆಕ್ಲೇಸು, ಗೆಜ್ಜೆಗಳು, ಕಿರೀಟ, ಜಡೆಬಿಲ್ಲೆಗಳು, ಇತ್ಯಾದಿ) ಸುಮಾರು ೨೫ ವರ್ಷಗಳ ಹಿಂದೆ ನಾನೇ ಹಲವಾರು ದಿನಗಳ ಪರಿಶ್ರಮ ವಹಿಸಿ ತಯಾರಿಸಿದ್ದು ಎಂಬುದನ್ನು ನೆನೆಸಿಕೊಂಡರೆ ನನಗೇ ಆಶ್ಚರ್ಯವೆನಿಸುತ್ತಿದೆ. ಈಗ ಇದೇ ಅಲಂಕಾರಿಕ ವಸ್ತುಗಳು ನನ್ನ ಮೊಮ್ಮಗಳ ಉಪಯೋಗಕ್ಕೂ ಬಂದಿದೆ. ಇದೇ ಈ ವಿಶೇಷವನ್ನು ನಿಮ್ಮೊಡನೆ ಹಂಚಿಕೊಳ್ಳುವಂತೆ ಪ್ರೇರೇಪಿಸಿದೆ.

ಮೊಮ್ಮಗಳು ಅಕ್ಷಯ 

ಗುರುವಾರ, ಜನವರಿ 19, 2012

ಒಳ್ಳೆಯದನ್ನು ಕೇಳು, ಒಳ್ಳೆಯದನ್ನು ನೋಡು, ಒಳ್ಳೆಯದನ್ನು ಆಡು!!

     ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ ಎಂಬ ನೀತಿ ಸಾರುವ ಮೂರು ಕೋತಿಗಳ ಚಿತ್ರವನ್ನು ನಾವು ನೋಡುತ್ತಿರುತ್ತೇವೆ. ಇದು ಒಳ್ಳೆಯ ವಿಚಾರವಾದರೂ ಸಹ ಇದೇ ನೀತಿಯನ್ನು ಧನಾತ್ಮಕವಾಗಿ ಹೀಗೆ ಹೇಳಬಹುದು: ಒಳ್ಳೆಯದನ್ನು ಕೇಳು, ಒಳ್ಳೆಯದನ್ನು ನೋಡು, ಒಳ್ಳೆಯದನ್ನು ಆಡು:


ಪ್ರೇರಣೆ: ಚಂದನ ವಾಹಿನಿಯಲ್ಲಿ ಕಳೆದ ಭಾನುವಾರ ಬೆ. 9.30ಕ್ಕೆ ಪ್ರಸಾರವಾದ 'ಹೊಸಬೆಳಕು' ಕಾರ್ಯಕ್ರಮ

ಶುಕ್ರವಾರ, ಜನವರಿ 13, 2012

ಮಡ್ಡಿ-ಮಂಕರ ಸಂಭಾಷಣೆ


ಮಡ್ಡಿ :  ನೀನು ಅತ್ಯಂತವಾಗಿ ಪ್ರೀತಿಸುವ ವ್ಯಕ್ತಿ ಯಾರು?
ಮಂಕ:  ನನ್ನ ಹೆಂಡತಿ.
ಮಡ್ಡಿ:   ಹಾಂ!! ಅತ್ಯಂತವಾಗಿ ದ್ವೇಷಿಸುವ ವ್ಯಕ್ತಿ ಯಾರು?
ಮಂಕ:  ನನ್ನ ಹೆಂಡತಿ.
ಮಡ್ಡಿ:   ಹೌದಾ?? ಅದಕ್ಕೇ ನೀನು ಮಂಕಾಗಿರುವುದು! :)
ಮಂಕ:  ಇಷ್ಟು ಸಣ್ಣ ವಿಷಯ ನಿನಗೆ ತಿಳಿಯದೇ ಇರುವುದರಿಂದಲೇ ನಿನ್ನನ್ನು ಮಡ್ಡಿ ಅನ್ನುವುದು! :)
ಮಡ್ಡಿ:   :(
ಮಂಕ:  :(
ಮಡ್ಡಿ:   :) ಹೋಗಲಿ ಬಿಡು, ಬಾ, ಬೈಟು ಕಾಫಿ ಕುಡ್ಕೊಂಡ್ ಬರೋಣ.
ಮಂಕ:  :) ನಡಿ.

ಬುಧವಾರ, ಡಿಸೆಂಬರ್ 21, 2011

ಲೋಕ ಕಲ್ಯಾಣಾರ್ಥ?

     ನಾನು ಮತ್ತು ನನ್ನ ಪತ್ನಿ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿದ್ದಾಗ ಕಂಡ ದೃಷ್ಯದ ಒಂದು ತುಣುಕು ಸೆರೆ ಹಿಡಿದು ಇಲ್ಲಿ ಹಾಕಿರುವೆ. ದೇವಸ್ಥಾನದ ಪ್ರಾಂಗಣದ ಸುತ್ತಲೂ ಹರಳು ಉಪ್ಪನ್ನು ಹರಡಲಾಗಿತ್ತು, ಅದರ ಮೇಲೆ ವ್ಯಕ್ತಿಯೊಬ್ಬರು ಹೊರಳುತ್ತಾ ಪ್ರದಕ್ಷಿಣೆ ಮಾಡುತ್ತಿದ್ದರು. ಹರಳು ಉಪ್ಪಾಗಿದ್ದರಿಂದ ಶರೀರಕ್ಕೆ ಚುಚ್ಚಿ ಅವರಿಗೆ ನೋವಾಗುತ್ತಿದ್ದುದು ಕಣ್ಣಿಗೆ ತಿಳಿಯುತ್ತಿತ್ತು. 'ಉರಿಯುವ ಗಾಯದ ಮೇಲೆ ಉಪ್ಪು ಸವರಿದಂತೆ' ಎಂಬ ಗಾದೆಯ ನೆನಪಾಯಿತು. ನೋವು ಅನುಭವಿಸಿ ಉರುಳುಸೇವೆ ಮಾಡುತ್ತಿದ್ದ ಅವರು ಉರುಳಲಾಗದೆ ಕೆಲವೊಮ್ಮೆ 5-10 ನಿಮಿಷಗಳು ಕಣ್ಣು ಮುಚ್ಚಿ ಅಲ್ಲೇ ಮಲಗಿರುತ್ತಿದ್ದರು. ಅವರನ್ನು ಅನುಸರಿಸಿ ಬರುತ್ತಿದ್ದ ಜೊತೆಯವರು ಭಜನೆ ಮಾಡುತ್ತಾ ಬರುತ್ತಿದ್ದರು. ಲೋಕ ಕಲ್ಯಾಣಾರ್ಥ ಅವರು ಹೀಗೆ ಉರುಳುಸೇವೆ ಮಾಡುತ್ತಿದ್ದರಂತೆ. ಇದರಿಂದ ಲೋಕಕಲ್ಯಾಣ ಹೇಗೆ ಆದೀತು ಎಂದು ನನಗಂತೂ ಅರ್ಥವಾಗಲಿಲ್ಲ. ಸುಮಾರು 50-60 ಮೂಟೆ ಉಪ್ಪು ಅಲ್ಲಿ ಸುರಿಯಲಾಗಿದ್ದು, ಅದು ನಂತರದಲ್ಲಿ ಉಪಯೋಗಕ್ಕೂ ಬರಲಾರದು. ಲೋಕಕಲ್ಯಾಣ ಹೇಗೆ ಆಗುತ್ತದೆ ಎಂದು ಯಾರಾದರೂ ಗೊತ್ತಿದ್ದರೆ ತಿಳಿಸುವಿರಾ?


ಮಂಗಳವಾರ, ನವೆಂಬರ್ 8, 2011

'ಕವಿಮನ' ತಾಣವನ್ನು ವೀಕ್ಷಿಸಿದವರ ವಿವರ:


     'ಕವಿಮನ' ತಾಣಕ್ಕೆ ಭೇಟಿ ನೀಡಿ ಪರದೇಶದವರೂ, ರಶಿಯಾ, ಮಲೇಶಿಯಾ, ಜರ್ಮನಿ, ಕೊರಿಯಾ ದೇಶಗಳ ಆಸಕ್ತರೂ ಸೇರಿದಂತೆ 5009 ಪುಟವೀಕ್ಷಣೆಗಳಾಗಿರುವುದು ಸಂತಸದ ಸಂಗತಿಯಾಗಿದೆ. ಭಾರತದ, ವಿಶೇಷವಾಗಿ ಕರ್ನಾಟಕದ ವೀಕ್ಷಕರಿಂದ 3949 ಪುಟವೀಕ್ಷಣೆಗಳಾಗಿವೆ.  ಎಲ್ಲಾ ಓದುಗರಿಗೂ ಕೃತಜ್ಞತೆಯ ನಮನಗಳು.
ರಾಷ್ಟ್ರಗಳ ಪ್ರಕಾರವಾಗಿ ಪುಟದ ವೀಕ್ಷಣೆಗಳು
ಭಾರತ
೩,೯೪೯
ಅಮೇರಿಕಾ ಸಂಯುಕ್ತ ಸಂಸ್ಥಾನ
೬೬೮
ಮಲೇಶಿಯಾ
೮೦
ರಶಿಯಾ
೪೬
ಕೆನಡಾ
೩೭
ಜರ್ಮನಿ
೩೦
ಸಂಯುಕ್ತ ಅರಬ್ ಎಮಿರೇಟಸ್
೨೫
ದಕ್ಷಿಣ ಕೋರಿಯಾ
೨೫
ಲಾಟ್ವಿಯಾ
೧೩
ಬ್ರಿಟನ್/ಇಂಗ್ಲೆಂಡ್

ಶನಿವಾರ, ಅಕ್ಟೋಬರ್ 15, 2011

ಹಳೆ ಬೇರು-ಹೊಸಚಿಗುರು - ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ

ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವವರಿಹರು ಬೆಸೆದುಕೊಂಬವರಿಹರು |
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ ||


     ವ್ಯಕ್ತಿ-ವ್ಯಕ್ತಿಗಳ ಸುಮಧುರ ಬಾಂಧವ್ಯ ಒಳ್ಳೆಯ ಮತ್ತು ಆರೋಗ್ಯಕರ ಸಮಾಜದ ದ್ಯೋತಕ. ಒಂದು ಕುಟುಂಬದಲ್ಲೇ ಈ ಸಾಮರಸ್ಯದ ಕೊರತೆಯನ್ನು ಗಮನಿಸಬಹುದಾಗಿದೆ. ಈ ಕೊರತೆಯನ್ನು ನೀಗಿಸುವ ಪ್ರಯತ್ನವೇ ಕವಿಕುಟುಂಬಗಳ ವಾರ್ಷಿಕ ಸಮಾವೇಶಗಳು. ಶಿವಮೊಗ್ಗದಲ್ಲಿ ೨೮-೦೧-೨೦೦೭ರಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ವಾರ್ಷಿಕ ಸಮಾವೇಶದಲ್ಲಿ ಸಹೋದರ ಕವಿಸುರೇಶನ "ಹಳೆ ಬೇರು-ಹೊಸಚಿಗುರು - ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ" ಎಂಬ ಪುಸ್ತಕದ ಬಿಡುಗಡೆಯಾಯಿತು. ಸುಪ್ರಸಿದ್ಧ ಲೇಖಕ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಮುನ್ನುಡಿ ಬರೆದಿರುವ ಈ ಪುಸ್ತಕದಲ್ಲಿ ಹೆಸರೇ ಸೂಚಿಸಿರುವಂತೆ ಕೆಳದಿ ಕವಿ ವಂಶಸ್ಥರ ಕಿರುಪರಿಚಯವನ್ನು ಮಾಡಿಕೊಡಲಾಗಿದೆ. ಹಿಂದಿನವರ ಸಾಧನೆಗಳು, ಅವರ ಕೃತಿಗಳ ವಿವರಗಳು ಇದರಲ್ಲಿದ್ದು ಈಗಿನವರಿಗೆ ಮಾದರಿಯಾಗಿವೆ. ಈ ಪುಸ್ತಕದಲ್ಲಿನ ವಿಶೇಷತೆಗಳು:
೧. ಸಂಬಂಧಿಗಳನ್ನು ಹುಡುಕಲು ನಡೆಸಿದ ಪ್ರಯತ್ನದ ವಿವರ, ಸಹಕಾರ ನೀಡಿದವರಿಗೆ ಕೃತಜ್ಞತೆ ಅರ್ಪಣೆ,
೨. ಕವಿಮನೆತನದ ವಂಶವೃಕ್ಷ, ಪೀಳಿಗೆವಾರು ವಿವರ, ಕಿರುಪರಿಚಯಗಳು,
೩. ಹಿಂದಿನವರ ಸಾಧನೆಗಳು, ಕೃತಿಗಳ ಪರಿಚಯ,
೪. ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಮನೆತನಗಳ ಹಾಗೂ ಕವಿಮನೆತನಕ್ಕೆ ಬಂದ ಹೆಣ್ಣುಮಕ್ಕಳ ತವರಿನವರ ವಿವರ, ವಂಶವೃಕ್ಷಗಳು,
೫. ಹಿರಿಯರು ಸದ್ಗತಿ ಹೊಂದಿದ ದಿನಾಂಕಗಳು, ಈಗಿನವರ ಹುಟ್ಟಿದ ದಿನಾಂಕಗಳು, ವಿವಾಹದ ದಿನಾಂಕಗಳು, ಇತ್ಯಾದಿಗಳ ವಿವರ,
೬. ಎಲ್ಲರ ವಿಳಾಸಗಳು, ದೂರವಾಣಿ ಸಂಖ್ಯೆಗಳು,
೭. ಕವಿಮನೆತನಕ್ಕೆ ಸಂಬಂಧಿಸಿದ ಅಪರೂಪದ ಫೋಟೋಗಳು,
೮. ಶ್ರೀಯುತರಾದ ಕವಿನಾಗರಾಜ್, ಡಾ. ಕೆ.ಕೃಷ್ಣಾಜೋಯಿಸ್, ಗುಂಡಾಜೋಯಿಸ್, ಶಿವಪ್ರಸಾದ್ ಮುಂತಾದವರ ಲೇಖನಗಳು, ಕವನಗಳು, ಚಿತ್ರಗಳು.


     ಕವಿಪ್ರಕಾಶನದಲ್ಲಿ ಹೊರತಂದಿರುವ ಆಕರ್ಷಕ ರಕ್ಷಾಪುಟ ಹೊಂದಿರುವ ೧೨೪ ಪುಟಗಳ ಈ ಪುಸ್ತಕ ಸಂಬಂಧಗಳನ್ನು ಜೋಡಿಸುವ ಪ್ರಯತ್ನ ಮಾಡಬಯಸುವವರಿಗೆ ಮಾದರಿಯಾಗಿದೆ.
****************
-ಕ.ವೆಂ.ನಾಗರಾಜ್.
ಹಿಂದಿನ ಲೇಖನಕ್ಕೆ ಲಿಂಕ್: ಕೆಳದಿ ಕವಿ ಮನೆತನ: ಕುಟುಂಬಗಳು ಮತ್ತು ಬಂಧು-ಬಳಗದವರ ವಾರ್ಷಿಕ ಸಮಾವೇಶಗಳು - 1
http://kavimana.blogspot.com/2011/10/1.html

ಗುರುವಾರ, ಸೆಪ್ಟೆಂಬರ್ 29, 2011

ಸಮಸ್ಯೆ ಒಂದು - ಸಂಭಾವ್ಯ ಪರಿಹಾರ ಐದು!

ಒಂದು:
     ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ ರಸ್ತೆಯಲ್ಲಿ ದೊಡ್ಡ ಗುಂಡಿಯಿದ್ದು ವಾಹನಗಳು ಓಡಾಡುವುದು ದುಸ್ತರವಾಗಿತ್ತು. ಒಮ್ಮೆ ಅವನ ಸ್ನೇಹಿತ ಅವನನ್ನು ಕಾಣಲು ಬರುವಾಗ ಗುಂಡಿಯ ಕಾರಣದಿಂದ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಗಿನಿಂದ ರಸ್ತೆ ಸರಿಪಡಿಸಲು ನಗರಸಭೆಯ ಅಧಿಕಾರಿಗಳನ್ನು ಹಲವಾರು ಸಲ ಭೇಟಿ ಮಾಡಿ ಅರ್ಜಿ ಕೊಟ್ಟು ವಿಚಾರಿಸಿದರೂ ಏನೂ ಪ್ರಯೋಜನವಾಗಿರಲಿಲ್ಲ. ಆ ಭಾಗದ ಕೌನ್ಸಿಲರರನ್ನು ಕಂಡು ಬರುವುದು ಒಳ್ಳೆಯದೆಂದುಕೊಂಡು ಅವರ ಮನೆಗೆ ಹೋದ. ಮನೆಯ ಮುಂದೆ ಜನಗಳ ಗುಂಪೇ -ಕೆಲಸ ಮಾಡಿಸಿಕೊಳ್ಳಲು ಬಂದವರು, ಹಿಂಬಾಲಕರು, ಮುಂಬಾಲಕರು, ಇತ್ಯಾದಿ-ಇತ್ತು. ರಾಜಣ್ಣ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೂ ಅವರು ಅವನನ್ನು ಗಮನಿಸಿಯೂ ಗಮನಿಸದಂತೆ ಇತರರೊಂದಿಗೆ ಮಾತುಕತೆಯಲ್ಲೇ ತೊಡಗಿದ್ದರು. ಮಧ್ಯೆ ಮಧ್ಯೆ ಆಪ್ತ/ಗುಪ್ತ ಸಮಾಲೋಚನೆಗಾಗಿ ಪಕ್ಕದ ಕೊಠಡಿಗೆ ಹೋಗಿಬರುತ್ತಿದ್ದರು. ಕೊನೆಗೊಮ್ಮೆ ಆ ಜನಪ್ರತಿನಿಧಿ 'ಏನ್ರೀ, ನಿಮ್ಮದು?' ಎಂದಾಗ ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂದೂ, ನಗರಸಭೆಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲವೆಂದು ಹೇಳಿಕೊಂಡ. ಅವರು 'ನಮಗೆ ಇದೇ ಕೆಲಸವೇನ್ರೀ? ಆ ರಸ್ತೆ ಮಾಡಿಸಿ, ಈ ಚರಂಡಿ ಕ್ಲೀನ್ ಮಾಡಿಸಿ, ಬರೀ ಇದೇ ಆಯಿತು' ಎಂದು ಹೇಳಿ, ಅಲ್ಲೇ ಇದ್ದ ನಗರಸಭೆ ಇಂಜನಿಯರರಿಗೆ 'ಅದೇನು ನೋಡ್ರೀ' ಎಂದು ಹೇಳಿದವರು  ಆಗತಾನೇ ಬಂದ ವ್ಯಕ್ತಿಯೊಬ್ಬರನ್ನು ಆತ್ಮೀಯವಾಗಿ ಆಹ್ವಾನಿಸಿ ಪಕ್ಕದ ಕೊಠಡಿಗೆ ಕರೆದುಕೊಂಡು ಹೋದರು. ಇಂಜನಿಯರ್ ಉದಾಸೀನದಿಂದ 'ಆಯ್ತು ನೋಡೋಣ, ಹೋಗಿ' ಎಂದು ಹೇಳಿದ. ರಾಜಣ್ಣ ವಾಪಸು ಬಂದ.
ಎರಡು:
     ನಾಗಣ್ಣ ನಿವೃತ್ತನಾಗಿದ್ದ ಒಬ್ಬ ಹಿರಿಯ ಅಧಿಕಾರಿ. ರಸ್ತೆ ರಿಪೇರಿ ಮಾಡಿಸಲು ದೂರವಾಣಿ ಮೂಲಕ ನಗರಸಭೆ ಕಮಿಷನರರೊಂದಿಗೆ ಮಾತನಾಡಿದ್ದರು. ಹಾಗೆಯೇ ಕೌನ್ಸಿಲರರಿಗೆ ಒಂದು ಮಾತು ಹೇಳೋಣವೆಂದು ಕಾರಿನಲ್ಲಿ ಬಂದಿಳಿದ ಅವರನ್ನು ಕಂಡು ಮನೆಯ ಮುಂದಿದ್ದವರು ಅವರು ಒಳಗೆ ಬರಲು ಜಾಗ ಮಾಡಿಕೊಟ್ಟು ಸರಿದು ನಿಂತರು. ಒಳಗೆ ಹೋದ ನಾಗಣ್ಣ ಜನಪ್ರತಿನಿದಿಗೆ ವಿಷಯ ತಿಳಿಸಿದರು. 'ಆಯ್ತು ಬಿಡಿ, ಮಾಡಿಸೋಣ' ಎಂದವರು, ಇಂಜನಿಯರರಿಗೆ 'ಇಂಥ ಸಣ್ಣ ಕೆಲಸ ಮಾಡಕ್ಕೆ ಆಗಲ್ಲವೇನ್ರೀ, ಬೇಗ ಮಾಡಿಸಿರಿ' ಎಂದರು. ನಮಸ್ಕಾರ ಮಾಡಿ ನಾಗಣ್ಣ ಹೊರಗೆ ಹೋದಾಗ 'ನನಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅಂದುಕೊಂಡಿದಾನೆ' ಎಂದು ಗೊಣಗುಟ್ಟಿದರು. ಇಂಜನಿಯರರಿಗೆ ಆ ಕೆಲಸಕ್ಕೆ ಅರ್ಜೆಂಟ್ ಇಲ್ಲವೆಂದು ಅರ್ಥವಾಯಿತು. 
ಮೂರು:
     ಮಂಜಣ್ಣ ವಿದ್ಯಾವಂತನೇನಲ್ಲ, ಪಿಯುಸಿ ಫೇಲಾದ ಮೇಲೆ ಅವನ ವಿದ್ಯಾಭ್ಯಾಸ ಮೊಟಕಾಗಿತ್ತು. ಅಪ್ಪ ಕೊಟ್ಟ ದುಡ್ಡಿನಲ್ಲಿ ಕೆಲವು ಟ್ಯಾಕ್ಸಿಗಳನ್ನು ಇಟ್ಟುಕೊಂಡು ಡ್ರೈವರರನ್ನು ನೇಮಿಸಿಕೊಂಡು ಟ್ರಾವೆಲ್ ಏಜೆನ್ಸಿ ನಡೆಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ. ಕಟ್ಟುಮಸ್ತಾಗಿದ್ದ ಅವನ ಜೊತೆ ಗೆಳೆಯರ ಗುಂಪೇ ಇರುತ್ತಿತ್ತು. ಏನಾದರೂ ಕೆಲಸ ಆಗಬೇಕಿದ್ದರೆ ಅವನಿಗೆ ಹೇಳಿದರೆ ಆಗುತ್ತಿತ್ತು. ಅದನ್ನು ಮಾಡಬೇಕೆಂದು ಅವನಿಗೆ ಅನ್ನಿಸಿದರೆ ಅವನು ಅದನ್ನು ಆಗುವವರೆಗೂ ಬಿಡುವ ಜಾಯಮಾನ ಅವನದಾಗಿರಲಿಲ್ಲ. ಅಂದು ಅವನು ತನ್ನ ಗೆಳೆಯರ ಗುಂಪಿನೊಂದಿಗೆ ತನ್ನ ಗಡಸು ದ್ವನಿಯಲ್ಲಿ 'ಇದಾರೇನ್ರೀ' ಎಂದುಕೊಂಡು ಕೌನ್ಸಿಲರರ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಎದ್ದುಬಂದ ಆ ಜನಪ್ರತಿನಿಧಿ 'ಏನ್ ಮಂಜಣ್ಣಾ, ಏನ್ಸಮಾಚಾರ?' ಎಂದು ಕೇಳಿದ. 'ಬರೀ ಕಮಿಷನ್, ಕಂಟ್ರಾಕ್ಟು ಅಂತ ಇರ್ತೀರೋ ಅಥವಾ ಜನಗಳ ಕೆಲಸಾನೂ ಮಾಡ್ತೀರೋ?' ಎಂದ ಅವನನ್ನು ಸಮಾಧಾನಿಸಿ 'ಈಗ ಏನಾಗಬೇಕು ಹೇಳು ಮಂಜಣ್ಣ' ಎಂದು ವಿಚಾರಿಸಿದ. ರಸ್ತೆ ರಿಪೇರಿ ವಿಷಯವೆಂದು ತಿಳಿದಾಗ ಅಲ್ಲಿದ್ದ ಇಂಜನಿಯರರಿಗೆ 'ನೀವೇನು ಕತ್ತೆ ಕಾಯ್ತಾ ಇರ‍್ತೀರಾ? ಆ ರಸ್ತೆ ಗುಂಡಿ ಮುಚ್ಚಿ ಸರಿ ಮಾಡಿ ಅಂತ ನಿಮಗೆ ಎಷ್ಟು ಸಲ ಹೇಳಬೇಕ್ರೀ? ಅದೆಲ್ಲಾ ಗೊತ್ತಿಲ್ಲ, ನಾಳೆ ಒಳಗೆ ಆ ಕೆಲಸ ಮಾಡಿ ನನಗೆ ಮುಖ ತೋರಿಸಬೇಕು' ಎಂದು ಗದರಿಸಿದರು. ಇಂಜನಿಯರ್ 'ಇವತ್ತೇ ಮಾಡಿಸುತ್ತಿದ್ದೆ ಸಾರ್, ಜನ ಸಿಗಲಿಲ್ಲ, ನಾಳೆ ಖಂಡಿತಾ ಆಗುತ್ತೆ ಸಾರ್' ಎಂದ. ಇಂಜನಿಯರ್ ತರಿಸಿದ ಕಾಫಿ ಕುಡಿದು ಮಂಜಣ್ಣ ಮತ್ತು ಅವನ ಗೆಳೆಯರು ಅಲ್ಲಿಂದ ಹೊರಟರು.
ನಾಲ್ಕು:
     ಗುಂಡಣ್ಣನ ಮನೆಯ ಮುಂದೆ ಇದ್ದ ಆ ಗುಂಡಿಯಿಂದ ಎಲ್ಲರಿಗೂ ಅನಾನುಕೂಲವಾಗಿದ್ದನ್ನು ನೋಡಲಾರದೆ ಗುಂಡಣ್ಣ ಎದುರುಮನೆ ತಿಮ್ಮಪ್ಪನನ್ನು ಕರೆದು ಇಬ್ಬರೂ ಖರ್ಚು ಹಾಕಿಕೊಂಡು ಜಲ್ಲಿ ಮಣ್ಣು ತರಿಸಿ ಇಬ್ಬರ ಮನೆಯ ಮುಂದಿರುವ ಹಳ್ಳಕೊಳ್ಳಗಳನ್ನು ಮುಚ್ಚಿಸೋಣವೆಂದರೆ ತಿಮ್ಮಪ್ಪ ಒಪ್ಪಲಿಲ್ಲ. ಮುನಿಸಿಪಾಲಿಟಿಗೆ ಹೋಗಿ ದಬಾಯಿಸೋಣ, ನಾವು ಏಕೆ ಖರ್ಚು ಮಾಡಬೇಕು ಎಂಬುದು ತಿಮ್ಮಪ್ಪನ ವಾದ. ಅದು ಸರಿಯೇ ಇದ್ದರೂ ಮುನಿಸಿಪಾಲಿಟಿಯಿಂದ ಈ ಕಾಲಕ್ಕೆ ಕೆಲಸವಾಗದೆಂದು ಗುಂಡಣ್ಣ ತಾನೇ ಒಂದು ಲೋಡು ಮಣ್ಣು ಮತ್ತು ಜಲ್ಲಿ ತರಿಸಿ ಮನೆಯ ಮುಂಭಾಗದ ರಸ್ತೆ ಸಮತಟ್ಟು ಮಾಡಿಸಿದ. ತಿಮ್ಮಪ್ಪನಿಗೆ ಇಷ್ಟವಿಲ್ಲದಿದ್ದರೂ ಎಷ್ಟು ಖರ್ಚಾಯಿತೆಂದು ವಿಚಾರಿಸಿ ನಂತರ ಅರ್ಧ ಹಣ ಕೊಟ್ಟ. 
ಐದು:-
     ಅಂದು ಬೆಳ್ಳಂಬೆಳಗ್ಗೆ ರಸ್ತೆ ದುರಸ್ತಿ ತರಾತುರಿಯಿಂದ ನಡೆದಿತ್ತು. ಕೆಲಸಗಾರರ, ಕೆಲಸದ ಉಸ್ತುವಾರಿ ನೋಡಿಕೊಳ್ಳುವವರ ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ಕಾರಣ, ಜಿಲ್ಲಾ ಮಂತ್ರಿಗಳು ಅಂದು ಆ ರಸ್ತೆಯ ಮೂಲಕ ಹಾದು ಹೋಗುತ್ತಿದ್ದರು!

ಭಾನುವಾರ, ಸೆಪ್ಟೆಂಬರ್ 18, 2011

ಸುಳ್ಳು ಹೇಳುವುದು ಸುಲಭವಲ್ಲ


     ಸುಳ್ಳು ಹೇಳುವುದು ಸುಲಭವಲ್ಲ. ಸುಳ್ಳು ಹೇಳಿದರೂ ಅರಗಿಸಿಕೊಳ್ಳುವುದು ಸುಲಭವಲ್ಲ. ಸುಳ್ಳು ಹೇಳುವವರಿಗೆ ಅರ್ಹತೆಯಿರಬೇಕು. ಏನು ಅರ್ಹತೆ? ನನಗೆ ತೋಚಿದ ಕೆಲವು ಅಂಶಗಳು:
೧. ಅಗಾಧ ಜ್ಞಾಪಕಶಕ್ತಿಯಿರಬೇಕು.
೨. ಸುಳ್ಳು ಸಮರ್ಥಿಸಿಕೊಳ್ಳಲು ಸುಳ್ಳುಗಳ ಸರಮಾಲೆ ಹೆಣೆಯುವ ಚಾಕಚಕ್ಯತೆ ಇರಬೇಕು.
೩. ಬುದ್ಧಿವಂತಿಕೆ ಇರಬೇಕು. 
೪. ಆಪ್ತರೇ ಹೇಳಿಕೊಟ್ಟಂತೆ ಸುಳ್ಳು ಹೇಳಿದರೂ ಅದನ್ನು ನಿಭಾಯಿಸುವ ಚಾಣಾಕ್ಷತೆ ಇರಬೇಕು. ಅತ್ಯಂತ ಆಪ್ತರೇ ಆದರೂ ಅವರು ಹೇಳಿಕೊಟ್ಟಂತೆ ಹೇಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಶಕ್ತಿ ಇರಬೇಕು.
೫. ಹೇಳಿದ್ದು ಸುಳ್ಳು ಎಂದು ಗೊತ್ತಾದಾಗ ಆಗುವ ಪರಿಣಾಮ ಎದುರಿಸಲು ಸಿದ್ಧರಿರಬೇಕು.
೬. ಗಾಢ ಸಂಬಂಧಗಳನ್ನು ಕಳೆದುಕೊಳ್ಳುವ ಅಪಾಯದ ಅರಿವಿರಬೇಕು. (ಅಥವ ಸಂಬಂಧಗಳಿಗೆ ಬೆಲೆ ಕೊಡದ ಮನಸ್ಥಿತಿ ಹೊಂದಬೇಕು.)
೭. ನಂಬಿಕಾರ್ಹರಲ್ಲ ಎಂಬ ಹಣೆಪಟ್ಟಿ ಹೊರಲು ಸಿದ್ಧರಿರಬೇಕು.
೮. ತಾನು ಮಾಡಿದ್ದು ತಪ್ಪಲ್ಲವೆಂದು ವಾದಿಸಿ ಗೆಲ್ಲುವ ಭಂಡತನವಿರಬೇಕು. ವಾದದಲ್ಲಿ ಗೆದ್ದರೂ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಪುನಃ ವಿಶ್ವಾಸ ಗಳಿಸುವ ನೈಪುಣ್ಯತೆ ಹೊಂದಿರಬೇಕು.
೯. ಕೆಲವೊಮ್ಮೆ ಪೇಚಿನ ಪ್ರಸಂಗಗಳಲ್ಲಿ ಸುಳ್ಳು ಹೇಳಬೇಕಾಗಿ ಬಂದರೂ ಆ ಸುಳ್ಳನ್ನು ನಿಜ ಮಾಡುವಂತೆ ನಡೆದುಕೊಳ್ಳಬೇಕು.
೧೦. . . . . . 
೧೧. . . . . .
     ನಬ್ರೂಯಾತ್ ಸತ್ಯಮಪ್ರಿಯಮ್ -  ಅಪ್ರಿಯವಾದ ಸತ್ಯ ಹೇಳಬಾರದು ಎಂಬ ಕಾರಣಕ್ಕಾಗಿ ಹಾಗೂ ಒಳ್ಳೆಯ ಉದ್ದೇಶಗಳಿಗಾಗಿ ಹೇಳುವ ಸುಳ್ಳುಗಳಿಗೆ ಇವು ಅನ್ವಯವಾಗುವುದಿಲ್ಲ. ಆದರೆ ಸುಳ್ಳು ಹೇಳಿದ ಕಾರಣದಿಂದ ಆಪ್ತರ ಮನಸ್ಸಿಗೆ ನೋವಾಗಿರುವುದು ಅರಿವಿಗೆ ಬಂದರೆ ಅವರ ಕ್ಷಮೆ ಕೇಳಿ ದೊಡ್ಡವರೆನಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ. ಸುಳ್ಳು ಹೇಳುವ ಪ್ರಸಂಗಗಳೇ ಬಾರದಂತೆ ನೋಡಿಕೊಳ್ಳುವುದು ಇನ್ನೂ ಬುದ್ಧಿವಂತರ ಲಕ್ಷಣ. 
*********************

ಸೋಮವಾರ, ಸೆಪ್ಟೆಂಬರ್ 5, 2011

ಚುಟುಕು-ಗುಟುಕು-ಕುಟುಕು


     ಸಿಟಿ ಬಸ್ಸು ಜನರಿಂದ ತುಂಬಿ ತುಳುಕಿತ್ತು. ವೃದ್ಧರೊಬ್ಬರು ಮಹಿಳೆಯರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದರು. ಜನರ ಮಧ್ಯದಿಂದ ತೂರಿ ಬಂದ ನವತರುಣಿಯೊಬ್ಬಳು ಆ ವೃದ್ದರನ್ನು ಉದ್ದೇಶಿಸಿ 'ಏಳಯ್ಯಾ ಮೇಲೆ, ಇದು ಲೇಡೀಸ್ ಸೀಟು' ಎಂದು ಏಕವಚನದಲ್ಲಿ ಜಬರಿಸಿದಳು. ಆ ವೃದ್ಧರು ಕಷ್ಟಪಟ್ಟು ತಮ್ಮ ಊರುಗೋಲು ಊರಿಕೊಂಡು ಎದ್ದು ನಿಂತರು. ಆ ತರುಣಿ ಏನನ್ನೋ ಸಾಧಿಸಿದಂತೆ ಹಮ್ಮಿನ ಮುಖಭಾವದೊಂದಿಗೆ ಆ ಸೀಟಿನಲ್ಲಿ ಆಸೀನಳಾದಳು. ವೃದ್ಧರ ಇನ್ನೊಂದು ಕೈಯಲ್ಲಿ ಕೈಚೀಲವಿದ್ದು ಕಂಬವನ್ನು ಆಧರಿಸಿ ಒರಗಿ ನಿಲ್ಲುವುದೂ ಅವರಿಗೆ ಕಷ್ಟವಾಗಿದ್ದುದನ್ನು ಗಮನಿಸಿದ ಹಿಂದಿನ ಸೀಟಿನ ಪ್ರೌಢ ಮಹಿಳೆ ತನ್ನ ಸೀಟನ್ನು ಬಿಟ್ಟುಕೊಟ್ಟು ವೃದ್ಧರಿಗೆ ಕೂರಲು ಹೇಳಿದಳು. ವೃದ್ಧರು 'ಇದು ಮಹಿಳೆಯರ ಸೀಟು, ಇನ್ಯಾರೋ ಬಂದು ಏಳಯ್ಯಾ ಅಂದರೆ ಏಳಬೇಕಾಗುತ್ತೆ' ಅಂತ ಹೇಳಿ ಕುಳಿತುಕೊಳ್ಳಲಿಲ್ಲ. ಹಿರಿಯ ನಾಗರಿಕರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಧ್ಯವಯಸ್ಕರು ಇದನ್ನು ಗಮನಿಸಿದರೂ ಗಮನಿಸದಂತೆ ತಮ್ಮ ಪಾಡಿಗೆ ತಾವು ಕುಳಿತಿದ್ದರು. ಅವರ ಹಿಂದಿನ ಸೀಟಿನಲ್ಲಿದ್ದ ಹುಡುಗನೊಬ್ಬ ತಾನು ಕುಳಿತಿದ್ದ ಜಾಗದಿಂದ ಮೇಲೆದ್ದು 'ಕೂತ್ಕೊಳಿ ತಾತಾ' ಎಂದು ಅವರ ಕೈಹಿಡಿದು ಕುಳ್ಳಿರಿಸಿದಾಗ ಅಲ್ಲಿ ಕುಳಿತ ವೃದ್ಧ ಆ ಹುಡುಗನಿಗೆ 'ಚೆನ್ನಾಗಿರಪ್ಪಾ' ಎಂದು ಆಶೀರ್ವದಿಸಿದರು.  
**************
-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 18, 2011

ರಾಮಣ್ಣನ ತಪ್ಪು


     ರಾಮಣ್ಣ ದೂರದೂರಿನಲ್ಲಿದ್ದ ತನ್ನ ಹತ್ತಿರದ ಬಂಧು ಜಾನಕಪ್ಪನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ. ಯಾವುದೋ ಕಾರಣಕ್ಕೆ ಅವರ ನಡುವೆ ಸಂಬಂಧ ಅಷ್ಟೊಂದು ಸುಮಧುರವಾಗಿರಲಿಲ್ಲ. ಹಾಗೆಂದು ಅವರಲ್ಲಿ ಪರಸ್ಪರ ದ್ವೇಷವಿರಲಿಲ್ಲ. ಸಂಬಂಧ ಚೆನ್ನಾಗಿರಲು ಇತರ ಬಂಧುಗಳು ಬಿಡುತ್ತ್ತಿರಲಿಲ್ಲ. ರಾಮಣ್ಣ ಸಂಬಂಧ ಸರಿಪಡಿಸಲು ಮಾಡಿದ ಪ್ರಯತ್ನ ಈಡೇರುತ್ತಿರಲಿಲ್ಲ. ಈ ಕೊರಗು ಅವನನ್ನು ಕಾಡುತ್ತಲೇ ಇತ್ತು. ದೂರವಾಣಿಯಲ್ಲಿ ಮಾತನಾಡುತ್ತಿದ್ದಂತೆ ಅದೇ ಊರಿನಲ್ಲಿದ್ದ ರಾಮಣ್ಣನ ಅಣ್ಣ ತಮ್ಮಣ್ಣ ಜಾನಕಪ್ಪನ ಮನೆಗೆ ಬಂದ. ತಮ್ಮಣ್ಣ ಬಂದ ವಿಷಯ ತಿಳಿಸಿದ ಜಾನಕಪ್ಪ ಆಮೇಲೆ ಫೋನು ಮಾಡುವುದಾಗಿ ಹೇಳಿದ. ಸರಿ ಎಂದ ರಾಮಣ್ಣ ಫೋನು ಜೇಬಿನಲ್ಲಿಡಲು ಹೋದಾಗ ಜಾನಕಪ್ಪ ಮತ್ತು ತಮ್ಮಣ್ಣ ಮಾತನಾಡುತ್ತಿರುವುದು ಕೇಳಿಸಿತು. ಜಾನಕಪ್ಪ ಫೋನನ್ನು ಡಿಸ್ ಕನೆಕ್ಟ್ ಮಾಡಿರಲಿಲ್ಲವೆಂದು ತೋರುತ್ತದೆ. ತನ್ನ ಹೆಸರು ಪ್ರಸ್ತಾಪವಾಗಿದ್ದನ್ನು ಕೇಳಿದ ರಾಮಣ್ಣ ಫೋನನ್ನು ಜೇಬಿಗಿಡಲು ಹೋಗಿದ್ದವನು ಮತ್ತೆ ಕಿವಿಗಾನಿಸಿದ. ಅವರಿಬ್ಬರೂ ತನ್ನ ಬಗ್ಗೆ ದೂರುತ್ತಾ ಮಾತನಾಡುತ್ತಿದ್ದುದು ಕೇಳಿಸಿಕೊಂಡ. ತಾನು ಮಾಡದಿದ್ದುದನ್ನು ಮಾಡಿದ್ದೇನೆಂಬಂತೆ ಅವರಿಬ್ಬರೂ ಮಾತನಾಡುತ್ತಿದ್ದುದು ಅವನಿಗೆ ಬೇಸರ ತರಿಸಿತ್ತು. ತಾನು ಆರೀತಿ ಮಾಡದಿದ್ದುದು ಅವರಿಬ್ಬರಿಗೂ ಗೊತ್ತಿದ್ದರೂ ಹಾಗೆ ಮಾತನಾಡಿದ್ದು ಜಿಗುಪ್ಸೆ ತರಿಸಿತ್ತು. ಸ್ವಲ್ಪ ಹೊತ್ತು ಕೇಳಿ ರಾಮಣ್ಣನೇ ಫೋನನ್ನು ಡಿಸ್ ಕನೆಕ್ಟ್ ಮಾಡಿದ. ಎಷ್ಟೋ ಹೊತ್ತಿನ ನಂತರ ರಾಮಣ್ಣ ತಮ್ಮಣ್ಣನಿಗೆ ನೀವಿಬ್ಬರೂ ಮಾತನಾಡಿದ ವಿಷಯ ತನಗೆ ಗೊತ್ತಾಯಿತು ಎಂಬ ಸಂಗತಿ ಹೇಳಿದಾಗ  ತಮ್ಮಣ್ಣ ಕೂಗಾಡಿದ. ಇಬ್ಬರು ಮಾತನಾಡುತ್ತಿದ್ದಾಗ ಅದನ್ನು ಕದ್ದು ಕೇಳಿದ ನಡವಳಿಕೆ ಎಷ್ಟರ ಮಟ್ಟಿಗೆ ಸರಿ ಎಂದ, ಅನ್ ಡ್ಯೂ ಅಡ್ವಾಂಟೇಜ್ ಪಡೆದುಕೊಂಡೆಯೆಂದು ದೂಷಿಸಿದ. ಅವನ ಹತ್ತಿರ ಮಾತನಾಡಿ ಪ್ರಯೋಜನವಿಲ್ಲವೆಂದು ರಾಮಣ್ಣ ಸುಮ್ಮನಾದರೂ ತಮ್ಮಣ್ಣ ತಮ್ಮ ಮಾತನ್ನು ಕದ್ದು ಕೇಳಿದ ರಾಮಣ್ಣನ ಬಗ್ಗೆ ಅಪಪ್ರಚಾರಕ್ಕೆ ತೊಡಗಿದ. ಯಾರೇ ಆಗಲಿ, ಯಾರಾದರೂ ತನ್ನ ಬೆನ್ನ ಹಿಂದೆ ತನ್ನ ವಿರುದ್ಧ ಮಾತನಾಡುತ್ತಿರುವ ವಿಷಯ ಕಿವಿಗೆ ಬಿದ್ದರೆ ಅದನ್ನು ಕೇಳಿಸಿಕೊಳ್ಳುವುದು ತಪ್ಪು ಎಂದು ತಿಳಿದು ಸುಮ್ಮನೆ ಹೋಗುತ್ತಾರೆಯೇ, ಅಥವಾ ಕೇಳಿಸಿಕೊಳ್ಳುತ್ತಾರೆಯೇ, ಬೇರೆಯವರ ವಿಷಯವಾದರೆ ಕೇಳಿಸಿಕೊಳ್ಳುವುದು ಸರಿಯಲ್ಲ ಆದರೆ ತನ್ನ ಬಗ್ಗೆಯೇ ಮಾತನಾಡುತ್ತಿದ್ದರೆ ಕೇಳಿಸಿಕೊಳ್ಳದೇ ಇರುತ್ತಾರೆಯೇ ಎಂಬ ಸಾಮಾನ್ಯ ಸಂಗತಿ ತಮ್ಮಣ್ಣನಿಗೆ ತಿಳಿಯದೇ ಹೋಯಿತಲ್ಲಾ ಎಂದು ರಾಮಣ್ಣ ನೊಂದುಕೊಂಡ.
*********************************

ಭಾನುವಾರ, ಜುಲೈ 17, 2011

'ಐ ಡೋಂಟ್ ವಾಂಟ್ ಟು ಡೈ'


     ಐದು ವರ್ಷದ ಮಗಳು ಅಂದು ಶಾಲೆಯಿಂದ ಮರಳಿ ಬಂದಾಗ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಗಂಭೀರಳಾಗಿದ್ದಳು. ಮಗಳ ಯೂನಿಫಾರಮ್ ಕಳಚಿ ಬೇರೆ ಬಟ್ಟೆ ಹಾಕುತ್ತಿದ್ದ ತಾಯಿಗೆ ಮಗು ಹೇಳಿತು:
"ಮಮ್ಮಿ, ನನ್ನ ಫ್ರೆಂಡ್ ಪಿಂಕಿ ತಾತ ಸತ್ತು ಹೋದರಂತೆ".
"ಹೌದಾ ಪುಟ್ಟಾ, ಪಾಪ".
"ಮಮ್ಮಿ, ಎಲ್ರೂ ಸಾಯ್ತಾರಾ?"
"ಹೌದು ಪುಟ್ಟಿ, ವಯಸ್ಸಾದ ಮೇಲೆ ಎಲ್ರೂ ಸಾಯ್ತಾರೆ."
"ನನ್ ತಾತಾನೂ ಸಾಯ್ತಾರಾ?"
     ಅಮ್ಮನಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ತನ್ನ ತಂದೆಯ ಸಾವಿನ ಬಗ್ಗೆ ಮಗು ಕೇಳಿದಾಗ ತಕ್ಷಣ ಏನು ಉತ್ತರಿಸಿಯಾಳು? ಸಾವರಿಸಿಕೊಂಡು ಹೇಳಿದಳು:
"ಇನ್ನೂ ತುಂಬಾ ವರ್ಷ ಪುಟ್ಟೂ. ಹಂಡ್ರಡ್ ವರ್ಷ ಆದ ಮೇಲೆ ಎಲ್ರೂ ಸಾಯ್ತಾರೆ. ಈ ವಿಷಯ ಎಲ್ಲಾ ಮಾತಾಡಬಾರದು. ಹೋಗ್ಲಿ ಬಿಡು, ಸ್ಕೂಲಲ್ಲಿ ಇವತ್ತು ಏನು ಹೇಳಿಕೊಟ್ರು?"
     ಮಗು ಪಟ್ಟು ಬಿಡದೆ ಕೇಳಿತು:
'ಮಮ್ಮಿ, ನಾನೂ ಸಾಯ್ತೀನಾ?"
     ಮಗುವಿನ ಬಾಯಿಯ ಮೇಲೆ ಕೈಮುಚ್ಚಿ ತಾಯಿ ಅವಳನ್ನು ಅಪ್ಪಿಕೊಂಡು ಹೇಳಿದಳು:
"ನಾನು ಆಗಲೇ ಹೇಳಲಿಲ್ಲವಾ? ಹೀಗೆಲ್ಲಾ ಮಾತಾಡಬೇಡ. ನಿನಗಿನ್ನೂ ಐದೇ ವರ್ಷ. ಒಳ್ಳೆಯವರು ಸಾಯುವುದಿಲ್ಲ. ಆ ವಿಷಯ ಇನ್ನು ಸಾಕು. ನಡಿ, ಕೈಕಾಲು ಮುಖ ತೊಳೆಸುತ್ತೀನಿ. ಊಟ ಮಾಡುವಂತೆ."
"ಹಾಗಾದ್ರೆ ಸತ್ತೋರೆಲ್ಲಾ ಬ್ಯಾಡ್ ಬಾಯ್ಸಾ?"
     ತಾಯಿ ಏನು ಉತ್ತರಿಸಿಯಾಳು? ಸುಮ್ಮನೆ ಮಗುವನ್ನು ಬಚ್ಚಲಮನೆಗೆ ಕರೆದುಕೊಂಡು ಹೋಗಿ ಮುಖ ತೊಳೆಸಿದಳು. ಬೇರೆ ಬೇರೆ ವಿಷಯ ಮಾತನಾಡಿ ಗಮನ ಬೇರೆಡೆಗೆ ಸೆಳೆಯಲು ಅಮ್ಮನ ಪ್ರಯತ್ನ ಸಾಗಿತ್ತು. ಮಗುವಿನ ಮುಖವನ್ನು ಟವೆಲಿನಿಂದ ಒರೆಸುತ್ತಿದ್ದಾಗ ಮಗು ಮುಂದುವರೆಸಿತು:
"ಮಮ್ಮಿ, ಪ್ಲೀಸ್, ಐ ಡೋಂಟ್ ವಾಂಟ್ ಟು ಡೈ."
     ಮಗುವಿನಲ್ಲಿ ಅಮ್ಮ ಏನಾದರೂ ಮಾಡಲೆಂಬ ನಿರೀಕ್ಷೆಯಿತ್ತು, ಏನಾದರೂ ಮಾಡಬಹುದೆಂಬ ಭರವಸೆಗಾಗಿ ಕಾದಿತ್ತು. ಮಗಳ ಮಾತು ಕೇಳಿ ಅವಾಕ್ಕಾದ ಅಮ್ಮನ ಕಣ್ಣಂಚಿನಲ್ಲಿ ನೀರು ತುಳುಕಿತು. ಮಗುವನ್ನು ಅಪ್ಪಿ ಬಿಗಿಯಾಗಿ ಹಿಡಿದುಕೊಂಡಳು.
"ಇಲ್ಲಾ ಕಂದಾ, ನೀನು ಸಾಯುವುದಿಲ್ಲ. ನಿನ್ನನ್ನು ನಾನು ಸಾಯಲು ಬಿಡುವುದಿಲ್ಲ. ನೀನು ಸಾಯುವುದೇ ಇಲ್ಲ. ಏಕೆಂದರೆ ನೀನು ಒಳ್ಳೆಯವಳು. ನೀನು ತುಂಬಾ, ತುಂಬಾ, ತುಂಬಾ ಗುಡ್ ಗರ್ಲ್."
     ಹೀಗೆ ಹೇಳುತ್ತಾ ಮಗುವನ್ನು ಮುದ್ದಿಸಿದಾಗ ಮಗುವಿಗೆ ಸಮಾಧಾನವಾಗಿತ್ತು, ಸಂತೋಷವಾಗಿತ್ತು. ಸ್ಕೂಲಿನ ಅಂದಿನ ಆಟ ಪಾಠದ ಬಗ್ಗೆ ಕಣಿ ಹೇಳಲು ಶುರು ಮಾಡಿತು.
(ಚಿತ್ರ ಕೃಪೆ: ಅಂತರ್ಜಾಲದಿಂದ)
**********************
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 14, 2011

ಉತ್ತರ ಸಿಕ್ಕಿತು!

    
     ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************

ಭಾನುವಾರ, ಜೂನ್ 26, 2011

ನೂತನ ಕೊಠಡಿ ಪ್ರವೇಶ(?)




     'ವಿಪ್ರವಾಹಿನಿ' ನಾಗರಾಜರ ಮನೆಯಲ್ಲಿ ಪ್ರತಿತಿಂಗಳ ಕೊನೆಯ ಭಾನುವಾರ ವೇದಪಾಠ ನಡೆಸಲಾಗುತ್ತಿತ್ತು. ಬೇಲೂರಿನ ಶ್ರೀ ವಿಶ್ವನಾಥಶರ್ಮರವರು ಪಾಠ ಹೇಳಿಕೊಡುತ್ತಿದ್ದರು. ತಿಂಗಳಿಗೆ ಒಮ್ಮೆ ಮಾತ್ರ ನಡೆದರೆ ಸಾಕಾಗಲಾರದು, ವಾರಕ್ಕೊಮ್ಮೆಯಾದರೂ ನಡೆದರೆ ಒಳ್ಳೆಯದೆಂಬ ಸಲಹೆ ಮೂಡಿಬಂದಿತು. ಮುಂದಿನ ಭಾನುವಾರ ನಮ್ಮ ಮನೆಯಲ್ಲಿ ನಡೆಸಬಹುದೆಂಬ ನನ್ನ ಕೋರಿಕೆಯನ್ನು ಶ್ರೀ ವಿಶ್ವನಾಥಶರ್ಮ ಮತ್ತು ಅಭ್ಯಾಸಿಗಳು ಒಪ್ಪಿದರು.
     ಸರ್ಕಾರಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿಯಾದ ನಂತರ ಹಾಸನದ ಸ್ವಂತದ ಮನೆಯ ಮೇಲೆ ಒಂದು ಕೊಠಡಿಯನ್ನು ಕಟ್ಟಿಸಿದ್ದೆ. ಕೊಠಡಿ ಪೂರ್ಣವಾದ ನಂತರ ಆ ನಿಮಿತ್ತ ಪ್ರತ್ಯೇಕ ಕಾರ್ಯಕ್ರಮ - ಗೃಹಪ್ರವೇಶ, ಸತ್ಯನಾರಾಯಣಪೂಜೆ, ಇತ್ಯಾದಿ - ಮಾಡಿರಲಿಲ್ಲ, ಮಾಡುವ ಇರಾದೆಯೂ ಇರಲಿಲ್ಲ. ವೇದಪಾಠವನ್ನು ಆ ಕೊಠಡಿಯಲ್ಲೇ ನಡೆಸಲು ಮತ್ತು ಆ ಸಂದರ್ಭದಲ್ಲಿ ಪ್ರಾರಂಭದಲ್ಲಿ ಅಗ್ನಿಹೋತ್ರ ಮಾಡಲು ಮತ್ತು ಅದನ್ನೇ ಕೊಠಡಿಯ ಗೃಹಪ್ರವೇಶ ಎಂದು ಭಾವಿಸಲು ನಿರ್ಧರಿಸಿದೆವು. ಶರ್ಮರಿಗೆ ದೂರವಾಣಿ ಮೂಲಕ ಪಾಠಾಭ್ಯಾಸದ ಮುನ್ನ ಅಗ್ನಿಹೋತ್ರ ಕಾರ್ಯ ನಡೆಸಲು ಕೇಳಿದಾಗ ಅವರ ಒಪ್ಪಿಗೆಯೂ ಸಿಕ್ಕಿತು. ಆ ಭಾನುವಾರ ಬೆಳಿಗ್ಗೆ ೧೦-೩೦ರ ವೇಳೆಗೆ ಹರಿಹರಪುರ ಶ್ರೀಧರ ತಮ್ಮ ಪತ್ನಿಯೊಂದಿಗೆ ಬಂದರು. ವಿಪ್ರವಾಹಿನಿ ನಾಗರಾಜ್-ಗಿರಿಜಾಂಬಾರವರೂ ಆಗಮಿಸಿದರು. ಶ್ರೀದರರು ತಮ್ಮೊಂದಿಗೆ ಅಗ್ನಿಹೋತ್ರ ಮಾಡಲು ಹೋಮಕುಂಡ, ಸಮಿತ್ತು ಮತ್ತು ಅಗತ್ಯ ಸಾಮಗ್ರಿ ತಂದಿದ್ದರು. 'ಹಾಸನವಾಣಿ' ಸಂಪಾದಕಿ ಶ್ರೀಮತಿ ಲೀಲಾವತಿ, ನಿವೃತ್ತ ಕಾರ್ಯಪಾಲಕ ಇಂಜನಿಯರ್ ಜಯರಾಮ್ ಮತ್ತು ಕೆಲವರು ವೇಧಾಭ್ಯಾಸಿಗಳೂ ಹಾಜರಾದರು. ಪಾಠದ ಮುನ್ನ ಅಗ್ನಿಹೋತ್ರ ನಡೆಯಿತು. ಕೊಠಡಿಯ ವಿದ್ಯುಕ್ತ ಪ್ರವೇಶ ಆಯಿತು ಅಂದುಕೊಂಡೆವು. ಕಾರ್ಯಕ್ರಮದ ನಂತರ ಮನೆಯಲ್ಲಿ ಎಲ್ಲರಿಗೂ ಊಟವಾಯಿತು. ಅಂದಹಾಗೆ ಕಾರ್ಯಕ್ರಮ ನಡೆದ ಭಾನುವಾರ ಈ ವರ್ಷದ ಯುಗಾದಿಯ ಹಿಂದಿನ ದಿನವಾದ ೦೩-೦೪-೨೦೧೧ರ ಅಮಾವಾಸ್ಯೆಯಂದು. ಅಂದು ತೆಗೆದಿದ್ದ ಕೆಲವು ಫೋಟೋಗಳು ಇಲ್ಲಿವೆ.