ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಸೇವಾ ಚಟುವಟಿಕೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೇವಾ ಚಟುವಟಿಕೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 22, 2018

ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್


     ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ ಸಂಬಂಧ ಮುಂದೆ ವೈವಾಹಿಕ ಜೀವನದಲ್ಲಿಯೂ ಒಟ್ಟಿಗೆ ಮುಂದುವರೆಯಿತು. ೧೪ ವರ್ಷಗಳ ಬಾಲ್ಯದ ಒಡನಾಟ, ೩೩ ವರ್ಷಗಳ ವೈವಾಹಿಕ ಜೀವನದ ಸಂಗಾತಿಯಾಗಿ ಸುಖ-ದುಃಖಗಳೆಲ್ಲದರಲ್ಲಿ ಸಹಭಾಗಿಯಾಗಿದ್ದ ಚಂದ್ರಲೇಖಾ ಶಿಕ್ಷಕಿಯಾಗಿ ಮಕ್ಕಳ ಕಣ್ಮಣಿಯಾಗಿದ್ದರಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯನ್ನೂ ಹೊಂದಿ ತನು-ಮನ-ಧನಗಳಿಂದ ತೊಡಗಿಕೊಂಡಿದ್ದವರು. ಇಂತಹ ಸುದೀರ್ಘ ಒಡನಾಟ ಅಕಾಲಿಕವಾಗಿ ಅಂತ್ಯಗೊಂಡಿದ್ದರಿಂದ ಸುಬ್ರಹ್ಮಣ್ಯ ವಿಚಲಿತರಾದರೂ, ಸಾವರಿಸಿಕೊಂಡು ಪತ್ನಿಯ ಸಾಮಾಜಿಕ ಕಳಕಳಿಯನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದರು. ಅವರ ಪತ್ನಿ ತಮ್ಮ ಸೇವಾವಧಿಯಲ್ಲಿ ಗಳಿಸಿ ಉಳಿಸಿದ್ದ ಹಣವನ್ನು ನಿಗದಿತ ಠೇವಣಿಯಲ್ಲಿರಿಸಿ ಅದರಿಂದ ಬರುವ ಉತ್ಪತ್ತಿಯನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದರು. ಪತ್ನಿಯ ಹೆಸರನ್ನು ಆ ಮೂಲಕ ಚಿರಸ್ಥಾಯಿಯಾಗಿ ಉಳಿಸಬೇಕೆಂಬ ಉದ್ದೇಶದಿಂದ ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ರಿಜಿಸ್ಟರ್ ಮಾಡಿಸಿದರು. ಬಡರೋಗಿಗಳಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ನೆರವು ಒದಗಿಸುವುದು ಟ್ರಸ್ಟಿನ ಮೂಲ ಧ್ಯೇಯೋದ್ದೇಶವಾಗಿದೆ. ಶ್ರೀ ಹೆಚ್.ಎಸ್.ಸುಬ್ರಹ್ಮಣ್ಯ ಟ್ರಸ್ಟಿನ ಅಧ್ಯಕ್ಷರು, ಶ್ರೀ ಹೆಚ್.ಆರ್.ರಂಗಸ್ವಾಮಿ ಉಪಾಧ್ಯಕ್ಷರು, ಶ್ರೀಮತಿ ನಾಗಶ್ರೀಚೇತನ್ ಕಾರ್ಯದರ್ಶಿ ಮತ್ತು ಶ್ರೀ ಹೆಚ್.ಆರ್.ವಿನಾಯಕ ಖಜಾಂಚಿಯಾಗಿದ್ದರೆ, ಶ್ರೀಯುತರಾದ ಕ.ವೆಂ.ನಾಗರಾಜ್, ಹೆಚ್.ಎಸ್.ರಾಮಸ್ವಾಮಿ, ಕೆ.ಎಸ್.ನಾಗರಾಜ್, ಹೆಚ್.ವಿ.ಗೋಪಾಲಕೃಷ್ಣ ಮತ್ತು ಶ್ರೀಮತಿ ಎಲ್.ಎಸ್. ಮಾಧುರಿಯವರುಗಳು ಟ್ರಸ್ಟಿನ ಸದಸ್ಯರುಗಳಾಗಿರುವಂತೆ ಟ್ರಸ್ಟ್ ರಚನೆಯಾಗಿದೆ.

     ದಿನಾಂಕ ೧೯.೪.೨೦೧೮ರಂದು ಶ್ರೀ ಸುಬ್ರಹ್ಮಣ್ಯರವರ ಪತ್ನಿಯ ವೈಕುಂಠ ಸಮಾರಾಧನೆಯ ದಿನದಂದು ಹಾಸನದ ಸಂಗಮೇಶ್ವರ ಬಡಾವಣೆಯ ಶ್ರೀ ಶಿವಪಾರ್ವತಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ, ಬಂದಿದ್ದ ಬಂಧುಗಳು, ಸ್ನೇಹಿತರುಗಳ ಸಮ್ಮುಖದಲ್ಲಿ ಟ್ರಸ್ಟಿನ ಔಪಚಾರಿಕ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಜೀವನಾದರ್ಶಗಳು, ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ೬೩ ಚಿಂತನಗಳ ಗುಚ್ಛ ತ್ರಿಷಷ್ಟಿ ಸಿಂಚನ ಹೆಸರಿನ ಪುಸ್ತಕದ ಬಿಡುಗಡೆಯಾಯಿತು. ಪ್ರೊ. ವಿ ನರಹರಿ (೧೦), ಶ್ರೀ ಕ.ವೆಂ.ನಾಗರಾಜ್ (೩೧), ಶ್ರೀಮತಿ ಸುಶೀಲಾ ಸೋಮಶೇಖರ್ (೧೫) ಮತ್ತು ಶ್ರೀ ಜಿ.ಎಸ್.ಮಂಜುನಾಥ್ (೭) ರವರುಗಳ ಲೇಖನಗಳ ಸಂಗ್ರಹವೇ ತ್ರಿಷಷ್ಟಿ ಚಿಂತನ. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಲೇಖಕರುಗಳು ಮತ್ತು ಪುಸ್ತಕ ಮುದ್ರಿಸಿದ ಬಾಲಾಜಿ ಪ್ರಿಂಟರ್ಸಿನ ಶ್ರೀ ಪಾಂಡುರಂಗರವರನ್ನು ಸನ್ಮಾನಿಸಲಾಯಿತು.

     ಇದೇ ಸಂದರ್ಭದಲ್ಲಿ ಟ್ರಸ್ಟಿನ ಉದ್ದೇಶಕ್ಕೆ ಪೂರಕವಾಗಿ ಪ್ರಾರಂಭಿಕ ನಡೆಯಾಗಿ ಸಕಲೇಶಪುರ ತಾ. ಬಾಗೆ, ಜಮ್ಮನಹಳ್ಳಿ ಮತ್ತು ಅಂಬೇಡ್ಕರ್ ನಗರದ ೧೮೦ ಮಕ್ಕಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ತಲುಪಿಸುವ ಸಲುವಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಕೊಡಲಾಯಿತು. ಹಳೇಬೀಡಿನ ಶ್ರೀ ಕೇಶವಮೂರ್ತಿಯವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಅವರಿಗೆ ನೆರವಾಗುವ ಸಲುವಾಗಿ ರೂ. ೧೫೦೦೦/- ಚೆಕ್ ನೀಡಲಾಯಿತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾ. ಗರ್ತಿಕೆರೆಯ ರಾ.ಸ್ವ.ಸಂ. ಪ್ರೇರಿತ ಶಾಲೆಯ ಉಪಯೋಗಕ್ಕೆ ಯು.ಪಿ.ಎಸ್. ಖರೀದಿಸಲು ರೂ. ೧೫೦೦೦/- ಚೆಕ್ ಅನ್ನು ಶಾಲೆಯ ಕಾರ್ಯದರ್ಶಿ ಶ್ರೀ ರಾಘವೇಂದ್ರರವರಿಗೆ ನೀಡಲಾಯಿತು. ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಕುರಿತು ಶ್ರೀ ಕ.ವೆಂ. ನಾಗರಾಜ್ ಮಾತನಾಡಿದರು. ಪ್ರೊ. ನರಹರಿಯವರು ಟ್ರಸ್ಟಿನ ಉದ್ದೇಶವನ್ನು ಮನಸಾರೆ ಶ್ಲಾಘಿಸಿ ಎಲ್ಲರೂ ಈ ಕಾರ್ಯದಲ್ಲಿ ಜೊತೆಗೂಡಲು ಕರೆ ನೀಡಿದರು. ಭಾವುಕರಾಗಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ಪತ್ನಿಯ ನೆನಪನ್ನು ಉಳಿಸುವ ಮತ್ತು ಆಕೆಯ ಆಶಯದಂತೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ, ಬಡ ರೋಗಿಗಳು ಮತ್ತು ಅಸಹಾಯಕರಿಗೆ ನೆರವು ನೀಡುವ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಎಲ್ಲಾ ಬಂಧುಗಳು ಮತ್ತು ಸ್ನೇಹಿತರ ಸಹಕಾರ ಕೋರಿದರು. ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಶ್ರೀ ಸುಬ್ರಹ್ಮಣ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.
                              ಸಮಾರಂಭದ ಕೆಲವು ದೃಷ್ಯಗಳು:






ಗುರುವಾರ, ಜೂನ್ 30, 2016

ದಕ್ಷ ಆಡಳಿತಗಾರನ ಲಕ್ಷಣ


     ರಾಜಕೀಯ ಕಾರಣಕ್ಕೋ, ಯಾವುದೋ ಕ್ಷುಲ್ಲಕ ಕಾರಣಕ್ಕೋ ದಕ್ಷ ಅಧಿಕಾರಿಯೊಬ್ಬನ ಅಕಾಲಿಕ ವರ್ಗಾವಣೆಯಾದರೆ ಜನರು ಪ್ರತಿಭಟಿಸುವುದುಂಟು. ಇದು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು ಜನಪರ ಅಧಿಕಾರಿಗಳನ್ನು ಜನರು ಇಷ್ಟಪಡುತ್ತಾರೆ ಮತ್ತು ಇನ್ನೊಂದು, ದಕ್ಷತೆ ಸ್ವಾರ್ಥಪರ ಹಿತಾಸಕ್ತಿಗಳಿಗೆ ಕಂಟಕವಾಗಿರುತ್ತದೆ. ಕಾನೂನು, ಕಾಯದೆಗಳನ್ನು ಎಲ್ಲಾ ಸಮಯಕ್ಕೂ, ಎಲ್ಲಾ ಸಂದರ್ಭಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸಬಾರದು ಮತ್ತು ಇವುಗಳನ್ನು ಜನರ ಹಿತಕ್ಕೆ ಅನುಕೂಲವಾಗುವಂತೆ ಹೇಗೆ ಬಳಸಬಹುದು ಎಂದು ದಕ್ಷ ಆಡಳಿತಗಾರ ಅರಿತಿರುತ್ತಾನೆ. ಇದೇ ಅವನ ಯಶಸ್ಸಿನ ಮೂಲಮಂತ್ರ.  ಇಂದಿನ ವ್ಯವಸ್ಥೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದನ್ನೂ ಮೀರಿ ನಿಲ್ಲಬಲ್ಲ ಅಧಿಕಾರಿಯನ್ನು ಮಹಾನ್ ಎನ್ನಲೇಬೇಕಾಗುತ್ತದೆ. ಒಬ್ಬ ಅಧಿಕಾರಿ ದಕ್ಷ ಎನಿಸಿಕೊಳ್ಳಬೇಕಾದರೆ ಏನೆಲ್ಲಾ ಗುಣಗಳು ಇರಬೇಕು ಎಂಬ ಬಗ್ಗೆ ನೋಡೋಣ.
೧. ತಾಂತ್ರಿಕ ನೈಪುಣ್ಯ:
     ಇಂದಿನ ಕಂಪ್ಯೂಟರ್ ಜಗತ್ತಿನಲ್ಲಿ ಅತ್ಯಾಧುನಿಕ ಸಂಪರ್ಕ ಮತ್ತು ಸಂವಹನ ಸಾಧನಗಳಲ್ಲಿ ಅವನು ನೈಪುಣ್ಯತೆ ಹೊಂದಿರಬೇಕಾಗುತ್ತದೆ. ಅಧೀನ ಸಿಬ್ಬಂದಿಯ ಕಾರ್ಯಕ್ಷಮತೆ, ಚಲನವಲನಗಳ ಮೇಲೆ ಗಮನ, ಕಡತಗಳ ಶೀಘ್ರ ವಿಲೇವಾರಿ, ಚರ್ಚೆ ಹಾಗೂ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವುದು, ಸಾರ್ವಜನಿಕರೊಡನೆ ಸಂಪರ್ಕ, ಇತ್ಯಾದಿಗಳ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಸಮರ್ಥವಾಗಿ ಮಾಡಿಕೊಳ್ಳುವವನಾಗಿರಬೇಕು. ಮೇಲಾಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ, ವರದಿ ನೀಡಿಕೆ, ಇತ್ಯಾದಿಗಳ ಸಲುವಾಗಿ ಸಹ ಇದನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳಬೇಕು.
೨. ಸ್ಥಳೀಯ ಸಮಸ್ಯೆಗಳ ಅರಿವು:
     ಒಂದೊಂದು ಪ್ರದೇಶಕ್ಕೂ ತನ್ನದೇ ಆದ ಗುಣ-ಲಕ್ಷಣಗಳು, ರೀತಿ-ನೀತಿಗಳು, ಸಮಸ್ಯೆಗಳು ಇರುತ್ತವೆ. ಅವುಗಳ ಕುರಿತು ಅಧ್ಯಯನ ಮತ್ತು ಮಾಹಿತಿಗಳನ್ನು ಹೊಂದಿರಬೇಕು. ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬಹುದೆಂಬ ಬಗ್ಗೆಯೂ ಚಿಂತಿಸಬೇಕು ಮತ್ತು ಪರಿಹಾರಕ್ಕೆ ತೊಡಗಬೇಕು.
೩. ಸಂಘಟನಾ ಚತುರತೆ:
     ಅಧೀನ ಅಧಿಕಾರಿಗಳು, ಸಿಬ್ಬಂದಿಗಳನ್ನು ಒಂದು ತಂಡದಂತೆ ಮುನ್ನಡೆಸಬಲ್ಲ ಚಾಕಚಕ್ಯತೆ ಹೊಂದಿರಬೇಕು. ಮುಂಚೂಣಿಯಲ್ಲಿ ತಾನೇ ಇದ್ದು ಅಗತ್ಯದ ನಿರ್ದೇಶನ ನೀಡುತ್ತಾ ಸಿಬ್ಬಂದಿಯಿಂದ ಕೆಲಸ ಮಾಡಿಸುವವನಾಗಿರಬೇಕು. ಯಾವುದೇ ಕೆಲಸ ಸಣ್ಣದಲ್ಲವೆಂಬ ಅರಿವಿರಬೇಕು. ಸಣ್ಣ ಸಂಗತಿಗಳಿಗೂ ಗಮನ ಕೊಡಬೇಕು. ಹುರಿದುಂಬಿಸುವ, ಸಂದರ್ಭಗಳಲ್ಲಿ ಶಿಕ್ಷಿಸುವ ಮನೋಭಾವವಿರಬೇಕು. ತಂಡದಲ್ಲಿ ಸಮನ್ವಯತೆ ಇರುವಂತೆ ನೋಡಿಕೊಂಡು ದುರ್ಬಲ ಕೊಂಡಿಗಳನ್ನು ಬಲಗೊಳಿಸಬಲ್ಲವನಾಗಿರಬೇಕು. ಎಲ್ಲರೊಡನೆ ಸ್ನೇಹಿತನಂತೆ ವರ್ತಿಸಬೇಕು.
೪. ಸಮಯಪಾಲನೆ:
     ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವಂತೆ ನೋಡಿಕೊಳ್ಳುವವನಾಗಿರಬೇಕು. ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಮತ್ತು ಕೆಲಸಗಳಲ್ಲಿ ತೊಡಗಿರುವಂತೆ ಸೂಕ್ತ ವ್ಯವಸ್ಥೆ ರೂಪಿಸಬೇಕು. ತಪ್ಪು ಮಾಡಿದರೆ ದಂಡ ತಪ್ಪಿದ್ದಲ್ಲ ಎಂದು ಸಿಬ್ಬಂದಿ ಅರಿಯುವಂತೆ ಮಾಡಬೇಕು.
೫. ದೂರದೃಷ್ಟಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಚಾಕಚಕ್ಯತೆ:
     ಮುಂದಿನ ಆಗು-ಹೋಗುಗಳನ್ನು ಗಮನಿಸುತ್ತಿದ್ದು ಸಂಭಾವ್ಯ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಯೋಜಿಸಿದ್ದರೆ ಸಮಸ್ಯೆಗಳ ಪರಿಹಾರ ಅರ್ಧಕ್ಕರ್ಧ ಆದಂತೆಯೇ ಸರಿ. ಕೆಲವೊಮ್ಮೆ ಅನಿರೀಕ್ಷಿತವಾಗಿ ಹಲವು ಸಮಸ್ಯೆಗಳು ಒಟ್ಟೊಟ್ಟಿಗೇ ಬಂದುಬಿಡಬಹುದು. ಆಗ ಸಮಚಿತ್ತದಿಂದ ಧೃಢತೆ ಕಾಯ್ದುಕೊಂಡು ವರ್ತಿಸಿದರೆ ಸಿಬ್ಬಂದಿ ಮತ್ತು ಜನರು ಸಹಾಯಕ್ಕೆ ನಿಲ್ಲುತ್ತಾರೆ. ಸಮಸ್ಯೆಗಳು ಎದುರಾದಾಗ ತಪ್ಪಿಸಿಕೊಂಡು ದೂರವಿರುವ ಪ್ರಯತ್ನ ಮಾಡದೆ ಸಮಸ್ಯೆಯ ಎದುರಿಗೇ ನಿಲ್ಲುವ ಮನೋಭಾವವಿರಬೇಕು. ದೂರ ಹೋದಷ್ಟೂ ಸಮಸ್ಯೆಗಳು ಭೂತಾಕಾರವಾಗಿ ಬೆಳೆದು ಬೆದರಿಸುತ್ತವೆ. ಹತ್ತಿರವಿದ್ದರೆ ಸಮಸ್ಯೆಗಳು ಸಣ್ಣದಾಗುತ್ತಾ ಹೋಗುತ್ತವೆ. ಸ್ವಂತದ ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಒಂದು ದಿನ ಒಬ್ಬ ರೌಡಿಯನ್ನು ಬೈಕಿನಲ್ಲಿ ಹೋಗುತ್ತಿದ್ದಾಗ ಅಡಗಟ್ಟಿ ಕೊಚ್ಚಿ ಕೊಲೆ ಮಾಡಿದ್ದರು. ಸರ್ಕಾರಿ ಭೂಮಿ ಒತ್ತುವರಿ ವಿಚಾರದಲ್ಲಿ ಎರಡು ಗುಂಪುಗಳ ನಡುವಣ ವೈಷಮ್ಯ ಕೊಲೆಗೆ ಕಾರಣವಾಗಿತ್ತು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇತ್ತು. ಶಂಕಿತ ಒಬ್ಬಿಬ್ಬರ ಬಂಧನವಾಗಿತ್ತು. ಪೋಲಿಸರು ಎರಡು ಗುಂಪುಗಳ ವಿರುದ್ಧ ಸೆ. ೧೦೭ರಂತೆ ಮೊಕದ್ದಮೆಯನ್ನು ನನ್ನ ನ್ಯಾಯಾಲಯದಲ್ಲಿ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದರು. ಸ್ಥಳೀಯ ಗ್ರಾಮಲೆಕ್ಕಿಗರನ್ನು ಕರೆಸಿ ಮಾಹಿತಿ ಸಂಗ್ರಹಿಸಿದೆ. ಅಂದು ಸಂಜೆ ೬ ಗಂಟೆಯ ವೇಳೆಗೆ ರೆವಿನ್ಯೂ ಇನ್ಸ್‌ಪೆಕ್ಟರರನ್ನು ಕರೆದುಕೊಂಡು ಗ್ರಾಮಕ್ಕೆ ಹೊರಟೆ. ರೆವಿನ್ಯೂ ಇನ್ಸ್‌ಪೆಕ್ಟರ್, ಸಾಯಂಕಾಲದ ವೇಳೆಯಲ್ಲಿ ಹೆಚ್ಚಿನವರು ಕುಡಿದ ಮತ್ತಿನಲ್ಲಿದ್ದು ಸಾಮಾನ್ಯವಾಗಿ ಯಾವ ಅಧಿಕಾರಿಗಳೂ ಅಲ್ಲಿಗೆ ಆ ಸಮಯದಲ್ಲಿ ಹೋಗುವುದಿಲ್ಲ, ಹೋಗುವುದೇ ಆದರೆ ಪೋಲಿಸರನ್ನೂ ಕರೆದುಕೊಂಡು ಹೋಗೋಣ ಎಂದು ಅಳುಕುತ್ತಾ ಹೇಳಿದ್ದ. ನಾನು ಧೈರ್ಯ ಹೇಳಿ ಗ್ರಾಮಕ್ಕೆ ಹೊರಟೆ. ನನ್ನನ್ನು ಆ ಸಮಯದಲ್ಲಿ ನಿರೀಕ್ಷಿಸಿರದಿದ್ದ ಗ್ರಾಮಸ್ಥರು ಮನೆಯೊಳಗೆ ಸೇರಿಕೊಂಡರು. ಯಾರೂ ಹೊರಬರಲಿಲ್ಲ. ಅಲ್ಲಿನ ದೇವಸ್ಥಾನದ ಜಗಲಿಯ ಮೇಲೆ ಕುಳಿತು ಇದ್ದ ಒಬ್ಬಿಬ್ಬರ ಜೊತೆ ಕುಶಲೋಪರಿ ಮಾತನಾಡುತ್ತಿದ್ದೆ. ಇಣಿಕಿ ನೋಡುತ್ತಿದ್ದ ಜನರು ಕ್ರಮೇಣ ಒಬ್ಬೊಬ್ಬರಾಗಿ ಬರತೊಡಗಿದರು. ಹೆಚ್ಚಿನವರಿಗೆ ನಾನು ಏನು ಮಾಡುತ್ತೇನೆಂದು ತಿಳಿದುಕೊಳ್ಳುವ ಕುತೂಹಲವಿತ್ತು. ಅವರೊಡನೆ ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತ ಸ್ವಲ್ಪ ಸಮಯ ಕಳೆಯಿತು. ಬಂದಿದ್ದವರಲ್ಲಿ ಎರಡು ಗುಂಪಿಗೂ ಸೇರಿದ ಕೆಲವರು ಇದ್ದುದು ಅವರುಗಳು ಪ್ರತ್ಯೇಕ ಗುಂಪುಗಳಲ್ಲಿ ಇದ್ದುದರಿಂದ ಗೊತ್ತಾಯಿತು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿ ನೇರ ವಿಷಯಕ್ಕೆ ಬಂದೆ. ನನಗೆ ಎಲ್ಲಾ ಗೊತ್ತಾಗಿದೆ. ಅಪರಾಧ ನಡೆಯುವ ಮುನ್ನ ತಡೆಯುವ ಹೊಣೆಗಾರಿಕೆ ನನ್ನದಿದೆ. ಅಪರಾಧ ನಡೆದುಹೋದರೆ ಪೋಲಿಸು, ಕೋರ್ಟು ನೋಡಿಕೊಳ್ಳುತ್ತದೆ. ನಿಮ್ಮಲ್ಲಿ ಯಾರು ಯಾರು ಜಗಳಕ್ಕೆ ಕುಮ್ಮಕ್ಕು ಕೊಡುತ್ತಿದ್ದೀರಿ ನನಗೆ ಗೊತ್ತು. ನಿಮ್ಮಲ್ಲಿ ಎರಡು ಗುಂಪನ್ನೂ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಲು ನನ್ನ ಮುಂದೆ ಸೆ. ೧೦೭ ಕೇಸ್ ಬಂದಿದೆ. ಮುಚ್ಚಳಿಕೆ ಬರೆದುಕೊಡಬೇಕು, ಇಲ್ಲಾ ಜೈಲಿಗೆ ಹೋಗಬೇಕು.  ನೀವೇ ನಿರ್ಧರಿಸಿ ನಾಳೆ ತಿಳಿಸಿ. ಒಮ್ಮೆ ಪಟ್ಟಿಗೆ ಸೇರಿದರೆ ಮುಂದೆ ಯಾವ ಜಗಳ ಆದರೂ ನೀವು ಒಳಗೆ ಹೋಗಬೇಕಾಗುತ್ತದೆ. ನಾನು ಯಾರ ಮುಲಾಜೂ ಇಟ್ಟುಕೊಳ್ಳುವುದಿಲ್ಲ. ಸಂದರ್ಭ ಬಂದರೆ ನನ್ನಷ್ಟು ಕೆಟ್ಟವನು ಯಾರೂ ಇರುವುದಿಲ್ಲ ಎಂದು ಗಂಭೀರವಾಗಿ ಧೃಢವಾಗಿ ಹೇಳಿದಾಗ ಯಾರೂ ತುಟಿಪಿಟಕ್ಕೆಂದಿರಲಿಲ್ಲ. ನನಗೆ ಮೌನ ಸಮ್ಮತಿ ಸಿಕ್ಕಿತ್ತು. ನಾನು ಕೇಸ್ ಮುಂದುವರೆಸದೆ ಮುಕ್ತಾಯಗೊಳಿಸಿದೆ. ನಡೆಸಿದ್ದರೆ ಕಹಿ ವಾತಾವರಣ ಮುಂದುವರೆಯುತ್ತಿತ್ತು. ನಂತರದಲ್ಲಿ ನಿರೀಕ್ಷಿಸಿದ್ದಂತೆ ಸಂಘರ್ಷ ನಡೆಯಲಿಲ್ಲ. ಬಹುಷಃ ಮುನ್ನೆಚ್ಚರಿಕೆ ಕೊಡದೆ ಇದ್ದಿದ್ದರೆ ದೊಡ್ಡ ಹೊಡೆದಾಟವೇ ಆಗುತ್ತಿತ್ತು.
೬. ತುರ್ತು ಮಾಹಿತಿ ಪಡೆಯುವ ವ್ಯವಸ್ಥೆ:
     ಕಾರ್ಯವ್ಯಾಪ್ತಿಯಲ್ಲಿ ಏನೇ ವಿಶೇಷ ಜರುಗಿದರೂ, ಜರುಗುವ ಸಂಭವವಿದ್ದರೂ ಕೂಡಲೇ ಅಧೀನ ಸಿಬ್ಬಂದಿ ದೂರವಾಣಿ ಮೂಲಕ ಮಾಹಿತಿ ಕೊಡುವಂತೆ ನೆಟ್ ವರ್ಕ್ ಇಟ್ಟುಕೊಂಡರೆ ಅದನ್ನು ಆಧರಿಸಿ ಕ್ರಮ ಅನುಸರಿಸುವುದು ಸುಲಭವಾಗುತ್ತದೆ. ನನ್ನ ಅನುಭವದಲ್ಲಿ ಹೇಳಬೇಕೆಂದರೆ ಅಧೀನ ಸಿಬ್ಬಂದಿಯಲ್ಲದೆ ಗ್ರಾಮಗಳ ಕೆಲವು ಜನರಿಗೂ ಸಹ ಈ ಬಗ್ಗೆ ತಿಳುವಳಿಕೆ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆ. ನಿವೃತ್ತನಾದ ನಂತರದಲ್ಲೂ ಎರಡು ವರ್ಷಗಳವರೆಗೂ ಕೆಲವರಿಂದ ನನಗೆ ದೂರವಾಣಿ ಕರೆಗಳು ಬರುತ್ತಿದ್ದವು. ಅವು ಹೀಗಿರುತ್ತಿದ್ದವು, ಸಾರ್, ಸಿಡಿಲು ಹೊಡೆದು ರಾಮಯ್ಯನ ಎಮ್ಮೆ ಸತ್ತು ಹೋಯಿತು, ನಾಳೆ ಗ್ರಾಮದೇವತೆ ಪೂಜೆ ಇದೆ. ಮೊದಲ ಪೂಜೆ ಮಾಡುವ ಬಗ್ಗೆ ಜಗಳ ಆಗ್ತಾ ಇದೆ. ಹೊಡೆದಾಟ ಆಗಬಹುದು ಸಾರ್. ನನಗೆ ಹೆಮ್ಮೆ ಅನಿಸುತ್ತಿತ್ತು. ಅವರುಗಳಿಗೆ ಧನ್ಯವಾದ ಹೇಳಿ ಹೊಸ ತಹಸೀಲ್ದಾರರಿಗೆ ಫೋನು ಮಾಡಲು ಹೇಳುತ್ತಿದ್ದೆ.
೭. ಉತ್ತಮ ಸಂಪರ್ಕ ಮತ್ತು ಸಮನ್ವಯ:
     ಮೇಲಾಧಿಕಾರಿಗಳು, ಅಧೀನ ಸಿಬ್ಬಂದಿ, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು, ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರೊಡನೆ ಉತ್ತಮ ರೀತಿಯ ಸಂಬಂಧಗಳನ್ನು ಹೊಂದಿರುವವನು ಉತ್ತಮ ಆಡಳಿತಗಾರನೆನಿಸುತ್ತಾನೆ. ಪೂರ್ವ ತಯಾರಿ ಮತ್ತು ಅಭ್ಯಾಸಗಳಿದ್ದರೆ ಮಾತ್ರ ಈ ಗುಣ ಬೆಳೆಸಿಕೊಳ್ಳಲು ಸಾಧ್ಯ.
     ಸಾರರೂಪವಾಗಿ ಹೇಳಬೇಕೆಂದರೆ ಒಬ್ಬ ದಕ್ಷ ಅಧಿಕಾರಿಗೆ ಕಾರ್ಯಗಳ ಅರಿವಿರಬೇಕು, ಕಾನೂನು-ಕಟ್ಟಳೆಗಳು, ಸ್ಥಳೀಯ ಸಂಪ್ರದಾಯಗಳ ಬಗ್ಗೆ ತಿಳಿದಿರಬೇಕು, ಧೃಢತೆ ಇರಬೇಕು, ಸಾಧಿಸುವ ವಿಶ್ವಾಸ ಇರಬೇಕು, ಸಂಘಟನಾ ಚಾತುರ್ಯವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕನಾಗಿ ಪಕ್ಷಾತೀತನಾಗಿರುವುದಲ್ಲದೆ ಜೊತೆಗೆ, ಯಾರ ಪಕ್ಷಪಾತಿಯೂ ಅಲ್ಲ ಎಂಬುದನ್ನು ತೋರಿಸಿಕೊಳ್ಳಬೇಕು. ಪರಸ್ಪರ ರಾಜಕೀಯ ವಿರೋಧಿಗಳನ್ನು ಹೊಂದಾಣಿಸಿಕೊಂಡು, ಸಂಭಾಳಿಸಿಕೊಂಡು ಹೋಗುವ ಎರಡು ಅಲಗಿನ ಕತ್ತಿಯ ಮೇಲಣ ಜಾಗೃತ ನಡಿಗೆ ಮಾಡುವುದನ್ನು ಕಲಿಯಲೇಬೇಕು. ಕಷ್ಟ, ಆದರೆ ಅಸಾಧ್ಯವೇನಲ್ಲ. ದೇವರು ಎಲ್ಲರಿಗೂ ಅಧಿಕಾರ ಕೊಡುವುದಿಲ್ಲ. ಸಿಕ್ಕ ಅಧಿಕಾರವನ್ನು ಜನಪರವಾಗಿ ಬಳಸುವ ಮನೋಭಾವ ಅಧಿಕಾರಿಗಳಿಗೆ ಬರಬೇಕು. ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸುವ ಕೆಲಸ ಆಗಬೇಕು. ಭ್ರಷ್ಠರನ್ನು ಸಲಹುವ ರಾಜಕೀಯ ನಾಯಕರುಗಳಿಗೆ ಪಾಠ ಕಲಿಸಿದರೆ ಬದಲಾವಣೆ ಆಗುತ್ತದೆ, ಆಗಬೇಕು!
--ಕ.ವೆಂ.ನಾಗರಾಜ್.
*****************
ದಿನಾಂಕ 04-04-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಜನವರಿ 12, 2015

ವಿವೇಕಾನಂದ ಜಯಂತಿ

     ದಿನಾಂಕ 11.1.2015ರಂದು ಸ್ಪಂದನ ವೇದಿಕೆಯ ಕಲಾವತಿ ಮಧುಸೂದನ್ ಮತ್ತು ಅವರ ಸಹಕಾರಿಗಳು ವಿವೇಕಾನಂದರ 152ನೆಯ ಜನ್ಮದಿನಾಚರಣೆ ನಿಮಿತ್ತ ಜಿಲ್ಲಾಮಟ್ಟದ ವಚನ ಗಾಯನ ಸ್ಪರ್ಧೆ ಮತ್ತು ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಕಲಚೇತನರಿಗೆ ಉಪಯುಕ್ತ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾನೂ ಸಹ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದೆ. ವೇದಭಾರತಿಯ ಸಕ್ರಿಯ ಕಾರ್ಯಕರ್ತೆಯೂ ಆದ ಕಲಾವತಿಯವರು ಕಾರ್ಯಕ್ರಮವನ್ನು ಅಗ್ನಿಹೋತ್ರದಿಂದ ಆರಂಭಿಸಲು ವ್ಯವಸ್ಥೆ ಮಾಡಿದ್ದು ವಿಶೇಷ. ಕಾರ್ಯಕ್ರಮದ ಕೆಲವು ಫೋಟೋಗಳಿವು:








ಬುಧವಾರ, ಡಿಸೆಂಬರ್ 14, 2011

ಸೇವಾಭಾರತಿ - ಸವಿನೆನಪು

'ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವಾ'
     ಹಾಸನ ನಗರದಲ್ಲಿ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅಕ್ಟೋಬರ್, ೧೯೯೩ರಲ್ಲಿ ಸೇವಾಭಾರತಿ ಸಂಸ್ಥೆ ಉದಯವಾಗಿ ಅದಕ್ಕಾಗಿ ೧೩ ಸದಸ್ಯರ ತಂಡ ಜೋಡಿಸಲಾಯಿತು. ಈ ಸಂಸ್ಥೆಯ ಸಂಯೋಜಕ ನಾನಾಗಿದ್ದರೆ, ಡಾ. ಗುರುರಾಜ ಹೆಬ್ಬಾರರು ಅಧ್ಯಕ್ಷರು, ಡಾ. ವೈ.ಎಸ್. ವೀರಭದ್ರಪ್ಪ ಹಾಗೂ ಡಾ. ಭಾರತಿ ರಾಜಶೇಖರ್ ರವರು ಉಪಾಧ್ಯಕ್ಷರು, ಶ್ರೀ ಹೆಚ್.ಬಿ ಲಕ್ಷ್ಮಣ್‌ರವರು ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ಭಟ್‌ರವರು ಸಹಕಾರ್ಯದರ್ಶಿ, ಶ್ರೀ ಎಂ.ಎಸ್. ಶ್ರೀಕಂಠಯ್ಯನವರು ಖಜಾಂಚಿಯಾಗಿ, ಸದಸ್ಯರುಗಳಾಗಿ ಶ್ರೀಯುತರಾದ ಹರಿಹರಪುರ ಶ್ರೀಧರ್, ಕೆ. ವೆಂಕಟಯ್ಯ, ನರಹರಿ, ಗಿರಿಜಮ್ಮ, ಸೀತಾಲಕ್ಷ್ಮಮ್ಮ, ಡಾ. ದೇವದಾಸ್ ರವರುಗಳು ಇದ್ದರು. ಯೋಗ ಮತ್ತು ಸಂಸ್ಕೃತ ತರಗತಿಗಳು, ವೈದ್ಯಕೀಯ ಸೇವೆ, ಆಪ್ತ ಸಲಹಾ ಕೇಂದ್ರ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದೆವು. ಹೆಸರಿಗೆ ೧೩ ಜನರ ತಂಡವಿದ್ದರೂ ಡಾ. ಗುರುರಾಜ ಹೆಬ್ಬಾರ್ ಮತ್ತು ಡಾ. ವೈ.ಎಸ್. ವೀರಭದ್ರಪ್ಪನವರ  ಅತ್ಯಮೂಲ್ಯ ಸಹಕಾರ ಪಡೆದು ನಿಜವಾಗಿ ಸೇವಾಭಾರತಿಯ ಕೆಲಸದಲ್ಲಿ ತೊಡಗಿಕೊಂಡವರು ನಾನು, ಕೆ.ಇ.ಬಿ. ಇಂಜನಿಯರ್ ಶ್ರೀಧರ್ ಮತ್ತು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ರವರು ಮಾತ್ರ. ಈ ಮಾತನ್ನು ಹೆಗ್ಗಳಿಕೆಗಾಗಿ ಹೇಳುತ್ತಿಲ್ಲ. ಇದು ವಾಸ್ತವ ಸಂಗತಿ. ನಮ್ಮ ಮೂವರ ತಂಡವನ್ನು  ೩ ಚಕ್ರಗಳ ಆಟೋರಿಕ್ಷಾಗೆ ಹೋಲಿಸಲಾಗುತ್ತಿತ್ತು. ೩ ಚಕ್ರಗಳ ಪೈಕಿ ಒಂದಕ್ಕೆ ತೊಂದರೆಯಾದರೂ ಸೇವಾ ಆಟೋ ಚಲಿಸುತ್ತಿರಲಿಲ್ಲ. ಸುಮಾರು ೪ ವರ್ಷಗಳ ಕಾಲ ಈ ಸೇವಾಚಟುವಟಿಕೆಗಳು ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ಲಕ್ಷ್ಮಣ್ ಮೈಸೂರಿಗೆ ಮತ್ತು ನಾನು ಮಂಗಳೂರಿಗೆ ವರ್ಗಾವಣೆಗೊಂಡದ್ದರಿಂದ ಸೇವಾಚಟುವಟಿಕೆಗಳು ನಿಂತವು ಎಂದೇ ಹೇಳಬಹುದು. ಈಗ ಲಕ್ಷ್ಮಣ್ ರವರು ಮೈಸೂರಿನಲ್ಲೇ ಇದ್ದರೆ ನಾನು ಮತ್ತು ಶ್ರೀಧರ್ ಸ್ವಯಂ ನಿವೃತ್ತಿ ಪಡೆದು ಹಾಸನದಲ್ಲಿದ್ದೇವೆ. ಈಗ ಯಾರಾದರೂ ತರುಣರು ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಮುಂದೆ ಬಂದಲ್ಲಿ ನಮ್ಮಿಬ್ಬರ ಕ್ರಿಯಾತ್ಮಕ ಸಹಕಾರ ಅವರಿಗೆ ಖಂಡಿತವಾಗಿ ದೊರೆಯಲಿದೆ.  
'ಸೇವಾ ಆಟೋ'ದ ಮೂರು ಚಕ್ರಗಳು: ಶ್ರೀಧರ್, ನಾಗರಾಜ್, ಲಕ್ಷ್ಮಣ್ (1994ರ ಫೋಟೋ)
ಎಂಜಿನ್: ಡಾ. ಗುರುರಾಜ ಹೆಬ್ಬಾರ್
ಸೇವಾಚಟುವಟಿಕೆಗಳ ಸಂಕ್ಷಿಪ್ತ ನೋಟ:
೧. 'ಸೇವಾದಿನ'ದ ಆಚರಣೆ:
     ಸಮಾಜಸೇವೆಗಾಗಿಯೇ ತಮ್ಮ ಇಡೀ ಆಯಷ್ಯವನ್ನು ಧಾರೆಯೆರೆದು ಸಾವಿರಾರು ಯುವಕ-ಯುವತಿಯರಿಗೆ ಸಮಾಜ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸಿದ ದಿವ್ಯ ಚೇತನ ಸ್ವರ್ಗೀಯ ಅಜಿತಕುಮಾರರ ಪುಣ್ಯತಿಥಿಯ ದಿನದಂದು - ಅಂದರೆ ೩೦-೧೨-೧೯೯೩ರಂದು - ಸೇವಾದಿನವಾಗಿ ಆಚರಿಸಿದೆವು. ಪೂರ್ವಭಾವಿಯಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ (ವಿಷಯ: ಸಮಾಜಸೇವೆಯಲ್ಲಿ ನನ್ನ ಪಾತ್ರ) ಮತ್ತು ದೇಶಭಕ್ತಿ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳಿಗಾಗಿ 'ತ್ಯಾಗ ಮತ್ತು ಸೇವೆ - ಇವು ಭರತಖಂಡದ ಆದರ್ಶಗಳು' ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿಜೇತರಿಗೆ ಸೇವಾದಿನದಂದು ಬಹುಮಾನಗಳನ್ನು ವಿತರಿಸಲಾಯಿತು. ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಪ್ರವಚನ ಮಂದಿರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಿಸ್ಪೃಹ ಸೇವೆ ಸಲ್ಲಿಸುತ್ತಿದ್ದ ಹಾಸನದ ಔಷಧ ಪರಿವೀಕ್ಷಕರಾದ ಶ್ರೀ ಕರುಣಾಕರ ಮೂಲ್ಯ ಮತ್ತು ಪೌರ ಕಾರ್ಮಿಕ ಶ್ರೀ ಓಬಳಯ್ಯನವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. 


೨. ಉಚಿತ ಆರೋಗ್ಯ ತಪಾಸಣಾ ಶಿಬಿರಗಳು:
     ಹಾಸನದ ಸಿದ್ದಯ್ಯನಗರ ಮತ್ತು ಅಂಬೇಡ್ಕರ್ ನಗರದ ನಿವಾಸಿಗಳ ಸಲುವಾಗಿ ಪ್ರತಿ ತಿಂಗಳಿನ ಮೊದಲ ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದು ಸೇವಾಭಾರತಿಯ ಉತ್ತಮ ಚಟುವಟಿಕೆಗಳಲ್ಲಿ ಹೆಸರಿಸಬಹುದಾದುದು. ವಿಷಾದದ ಸಂಗತಿಯೆಂದರೆ ಅಲ್ಲಿನ ಯುವಕರು ತಪಾಸಣಾ ಶಿಬಿರ ನಡೆಯುತ್ತಿದ್ದ ಸರ್ಕಾರಿ ಶಾಲೆಯ ಕಾಂಪೌಂಡಿನ ಮೇಲೆ ಕುಳಿತು ತಮಾಷೆ ನೋಡುತ್ತಿದ್ದರೇ ಹೊರತು ಕೈಜೋಡಿಸುತ್ತಿರದೇ ಇದ್ದುದು. ಸ್ವಲ್ಪ ದೂರದ ಸ್ಥಳದಿಂದ ಟೇಬಲ್ಲು, ಕುರ್ಚಿಗಳನ್ನೂ ನಾವು ಮೂವರೇ ಹೊತ್ತು ತರುತ್ತಿದ್ದರೂ ಆ ಯುವಕರಿಗೆ ಸಹಾಯ ಮಾಡಬೇಕೆಂದು ಅನ್ನಿಸುತ್ತಿರಲಿಲ್ಲ. ಹಲವಾರು ದಿನಗಳ ಕಾಲ ಸಿದ್ದಯ್ಯನಗರ ಮತ್ತು ಅಂಬೇಡ್ಕರ್ ನಗರದ ಮನೆಮನೆಗಳಿಗೆ ಹೋಗಿ ಅಲ್ಲಿನವರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರ ಸಂಗ್ರಹ ಸಹ ನಾವು ಮೂವರೇ ಮಾಡಿದ್ದೆವು.ಅದಕ್ಕೆ ತಕ್ಕಂತೆ ಔಷಧಿ, ಮಾತ್ರಗಳನ್ನು ಹೊಂದಿಸಿ ತರಲಾಗುತ್ತಿತ್ತು. ಡಾ. ಗುರುರಾಜ ಹೆಬ್ಬಾರರು ತಮ್ಮೊಡನೆ ಇತರ ವೈದ್ಯರುಗಳು, ನರ್ಸ್‌ಗಳು, ಟೆಕ್ನಿಷಿಯನ್ನರುಗಳನ್ನು ಕರೆತರುತ್ತಿದ್ದರು. ಡಾ. ವೀರಭದ್ರಪ್ಪನವರು ಅಗತ್ಯದ ಔಷಧಿಗಳು, ಮಾತ್ರೆಗಳನ್ನು ಒದಗಿಸುತ್ತಿದ್ದರು. ಇವರಿಬ್ಬರ ಕಾರ್ಯ ನಮಗೆ ಕೆಲಸ ಮಾಡಲು ಉತ್ಸಾಹ ಕೊಡುತ್ತಿತ್ತು. ಹಲವಾರು ತಿಂಗಳುಗಳವರೆಗೆ (೦೨-೦೧-೯೪, ೦೬-೦೨-೯೪, ೦೬-೦೩-೯೪, ೦೩-೦೪-೯೪, ೦೧-೦೫-೯೪, ೦೫-೦೬-೯೪, ೦೩-೦೭-೯೪, ೦೭-೦೮-೯೪) ನಡೆದ ಇಂತಹ ಶಿಬಿರಗಳಿಂದ ಅಲ್ಲಿನ ನಿವಾಸಿಗಳಿಗೆ ಬಹಳ ಉಪಕಾರವಾಯಿತೆಂದೇ ಹೇಳಬಹುದು. ಸರ್ಕಾರದಿಂದ ಹಣದ ಅನುಕೂಲ ಪಡೆದು ಸ್ವಲ್ಪ ಭಾಗವನ್ನು ಮಾತ್ರ ಶಿಬಿರಗಳಿಗೆ ಉಪಯೋಗಿಸುತ್ತಿದ್ದೆವೆಂದು ಅಲ್ಲಿನ ಕೆಲವರ ತಪ್ಪು ಭಾವನೆಯಾಗಿತ್ತು. ಈ ಕುಹಕವನ್ನು ಸಹಿಸಿಕೊಂಡು ನಾವು ಕೆಲಸ ಮಾಡುತ್ತಿದ್ದೆವು. ಡಾ. ಗುರುರಾಜ ಹೆಬ್ಬಾರರು ತಮ್ಮ ಚಿಕಿತ್ಸಾಲಯದಲ್ಲಿ ಸೇವಾಭಾರತಿಯ ಹೆಸರಿನಲ್ಲಿ ಒಂದು ಗೋಲಕ ಇರಿಸಿದ್ದರು. ಆ ಗೋಲಕದಲ್ಲಿ ಸಂಗ್ರಹವಾಗುವ ಮೊಬಲಗನ್ನು ಸೇವಾಭಾರತಿಯ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತಿತ್ತು.


೩.ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ:
     ಸಂಜೀವಿನಿ ಸಹಕಾರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ೧೦-೦೯-೯೪ರಿಂದ ೧೨-೦೯-೯೪ರವರೆಗೆ ಉಚಿತ ನೇತ್ರ ಶಸ್ತ್ರಚಿಕಿತ್ಸಾಶಿಬಿರ ನಡೆಸಿದ್ದು ಹಲವರು ಇದರ ಉಪಯೋಗ ಪಡೆದದ್ದು ಉಲ್ಲೇಖನೀಯ ಸಂಗತಿ. ರೋಗಿಗಳಿಗೆ ಮತ್ತು ಅವರ ಸಹಾಯಕರುಗಳಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಸಹ ಮಾಡಲಾಗಿತ್ತು.


೪. ಸಂಸ್ಕೃತ ಸಂಭಾಷಣಾ ಶಿಬಿರಗಳು:
     ೨೧-೦೨-೯೪ ರಿಂದ ೦೨-೦೩-೯೪ರವರೆಗೆ ಮತ್ತು ೧೦-೦೩-೯೪ರಿಂದ ೧೯-೦೩-೯೪ರವರೆಗೆ ಎರಡು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು.


೫. ರಕ್ತದಾನ ಯೋಜನೆ:
     ಗಾಂಧಿಜಯಂತಿ ದಿನವಾದ ೦೨-೧೦-೯೪ರಂದು ರಕ್ತದಾನ ಯೋಜನೆಯ ಉದ್ಘಾಟನೆಯಾಯಿತು. ಸೇವಾಭಾರತಿಯ ಪ್ರಕಟಣೆ ನೋಡಿ ನೂರಾರು ಜನರು ಆಗಮಿಸಿ ರಕ್ತದಾನಿಗಳಾಗಿ ತಮ್ಮ ಹೆಸರು ನೋಂದಾಯಿಸಿಕೊಂಡದ್ದು ವಿಶೇಷ. ಅವರೆಲ್ಲರ ರಕ್ತದ ವರ್ಗದ ಉಚಿತ ತಪಾಸಣೆ ಮಾಡಿ ಎಲ್ಲರಿಗೂ ಗುರುತಿನ ಕಾರ್ಡುಗಳನ್ನು ಕೊಡಲಾಯಿತು. ಅಪಘಾತ, ಶಸ್ತ್ರಚಿಕಿತ್ಸೆ, ಇತ್ಯಾದಿ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅವರ ಬಂಧುಗಳು, ಸ್ನೇಹಿತರಿಂದ ರಕ್ತ ಸಿಕ್ಕದ ಅನಿವಾರ್ಯ ಪ್ರಸಂಗಗಳಲ್ಲಿ ರಕ್ತದಾನಿಗಳಿಗೆ ಹೇಳಿಕಳುಹಿಸಿ ರಕ್ತ ಒದಗಿಸುವ ಹೊಣೆಯನ್ನು ನಾವು ಹೊತ್ತೆವು. ಈ ಯೋಜನೆ ಪ್ರಾರಂಭದ ನಂತರ ರಕ್ತ ಕೋರಿ ದೂರವಾಣಿ ಕರೆಗಳು ನಿರಂತರವಾಗಿ ಬರಲಾರಂಭಿಸಿದ್ದವು. ನೂರಾರು ರೋಗಿಗಳಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಸ್ವತಃ ನಾನೂ ೧೬ ಬಾರಿ ರಕ್ತದಾನ ಮಾಡಿದ್ದೇನೆ. ನನಗೆ ಮಧುಮೇಹ ಹಾಗೂ ಥೈರಾಯಿಡ್ ಸಮಸ್ಯೆ ಬಂದ ನಂತರದಲ್ಲಿ ರಕ್ತದಾನ ಮಾಡುವುದನ್ನು ನಿಲ್ಲಿಸಿದೆ. 


೬. ಸ್ವದೇಶಿ ಜಾಗರಣ ಆಂದೋಲನ:
      ಸ್ವದೇಶಿ ಜಾಗರಣ ಆಂದೋಲನದ ಅಂಗವಾಗಿ ಭಿತ್ತಿಚಿತ್ರಗಳು, ವ್ಯಂಗ್ಯಚಿತ್ರಗಳ ರಚನಾಸ್ಪರ್ಧೆ ಹಾಗೂ ಪ್ರದರ್ಶನವನ್ನು ೨೪-೧೨-೯೪ರಂದು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರದರ್ಶಿಸಲಾದ ಭಿತ್ತಿಚಿತ್ರಗಳು ಮತ್ತು ವ್ಯಂಗ್ಯಚಿತ್ರಗಳು ಆಕರ್ಷಣೀಯವಾಗಿದ್ದು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು. 
     ಕಾಲೇಜು ವಿದ್ಯಾರ್ಥಿಗಳಿಗಾಗಿ 'ಸ್ವದೇಶೀ ಆಂದೋಲನದಿಂದಲೇ ದೇಶದ ಪ್ರಗತಿ ಸಾಧ್ಯ' ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಅನೇಕರು ಉತ್ಸಾಹದಿಂದ ಪಾಲುಗೊಂಡಿದ್ದು ವಿಶೇಷ.


೭. ಸೇವಾ-ಸ್ವದೇಶೀ-ಸುರಕ್ಷಾ ದಿನ:
     ಸ್ವದೇಶಿ ಜಾಗರಣ ವೇದಿಕೆಯೊಂದಿಗೆ ಕೂಡಿಕೊಂಡು ಸೇವಾಭಾರತಿಯ ಪ್ರಥಮ ವಾರ್ಷಿಕೋತ್ಸವವನ್ನು ೨೪-೧೨-೯೪ರಂದು ಹಾಸನದ ಗಣಪತಿ ಪೆಂಡಾಲಿನಲ್ಲಿ ಸೇವಾ-ಸ್ವದೇಶಿ-ಸುರಕ್ಷಾ ದಿನವಾಗಿ ಆಚರಿಸಲಾಯಿತು. ಸ್ವದೇಶಿ ಜಾಗರಣ ವೇದಿಕೆಯ ರಾಜ್ಯ ಸಂಚಾಲನಾ ಸಮಿತಿಯ ಸದಸ್ಯ ಶ್ರೀ ದಿನೇಶ ಕಾಮತರಿಂದ ಪ್ರಧಾನ ಭಾಷಣ ನೆರೆದಿದ್ದವರ ಮನದಲ್ಲಿ ವಿಚಾರಮಂಥನ ಎಬ್ಬಿಸಿತು. ನಿಸ್ಪೃಹ ಸೇವೆಯನ್ನು ಗುರುತಿಸಿ ಹಾಸನ ಜಿಲ್ಲಾಧಿಕಾರಿ ಕಛೇರಿಯ ಸಹಾಯಕ ಶ್ರೀ ಕೆ. ರಾಮಸ್ವಾಮಿ ಮತ್ತು ಸಂಜೀವಿನಿ ಸಹಕಾರಿ ಆಸ್ಪತ್ರೆಯ ದಾದಿ ಶ್ರೀಮತಿ ಎನ್.ಎಂ.ಕಮಲಮ್ಮರವರನ್ನು ಸನ್ಮಾನಿಸಲಾಯಿತು.


೮. ವಿನೂತನ ರಕ್ಷಾಬಂಧನ ಕಾರ್ಯಕ್ರಮ:
     ೨೫-೦೮-೯೬ರಂದು ಹಾಸನದ ಶಾಂತಿನಗರ ಬಡಾವಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಾನವತಾ ಮತ್ತು ಪರಿಸರವಾದಿ ಸಂಘ, ಶಾಂತಿನಗರ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದೊಂದಿಗೆ ಪಾರ್ಥೇನಿಯಂ ನಿರ್ಮೂಲನಾ ಕಾರ್ಯಕ್ರಮ ಜೋಡಿಸಿಕೊಂಡು ರಕ್ಷಾಬಂಧನ ಕಾರ್ಯಕ್ರಮ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 


೯. ಸಾಂಸ್ಕೃತಿಕ ಚಟುವಟಿಕೆ:
     ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ೦೧-೦೯-೯೬ರಂದು ಕೆಳಕಂಡ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸುಂದರ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಮುದ್ದುಕೃಷ್ಣ ವೇಷ ಸ್ಪರ್ಧೆ: ೧-೩ ವರ್ಷದ ಮಕ್ಕಳಿಗೆ,
ಬಾಲಕೃಷ್ಣ ವೇಷ ಸ್ಪರ್ಧೆ:   ೪-೬ ವರ್ಷದ ಮಕ್ಕಳಿಗೆ
ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಮಾಧ್ಯಮಿಕ ಶಾಲಾ ಮಕ್ಕಳಿಗೆ.
ಮಹಿಳೆಯರಿಗಾಗಿ: ದೇಶಭಕ್ತಿ ಗೀತೆ ಸ್ಪರ್ಧೆ, ದೇವರನಾಮ ಸ್ಪರ್ಧೆ, ರಂಗೋಲಿ ಸ್ಪರ್ಧೆ.
     ಮನಸ್ಸಿದ್ದಲ್ಲಿ ಮಾರ್ಗವಿದೆ. ಯುವಕ-ಯುವತಿಯರೇ, ಸೇವಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿರಿ. ನಿಮಗೆ ಪ್ರೇರಿಸುವ ಸಲುವಾಗಿಯೇ ಸೇವಾಭಾರತಿಯ ಚಟುವಟಿಕೆಗಳ ಮಾಹಿತಿ ಇಲ್ಲಿ ನೀಡಿದೆ. ಹಾಸನದಲ್ಲಿ ನಡೆಯುವ ಎಲ್ಲಾ ಸೇವಾ ಚಟುವಟಿಕೆಗಳಿಗೆ ನಮ್ಮ ಹೃತ್ಪೂರ್ವಕ ಸಹಕಾರವಿದೆ. 
     [ಸೇವಾಭಾರತಿಯ ಚಟುವಟಿಕೆಗಳ ಕೆಲವು ಫೋಟೋಗಳನ್ನು ಇಲ್ಲಿ ಕ್ಲಿಕ್ಕಿಸಿ ನೋಡಬಹುದು:  http://kavimana.blogspot.com/2011/12/blog-post_14.html]

ಲೋಕ ಹಿತದ ಕಾಯಕ ನಾಡಿಗಭಯದಾಯಕ
ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರ ಸೇವಕ
***************
-ಕ.ವೆಂ.ನಾಗರಾಜ್.



ನಮ್ಮ 'ಸೇವಾಭಾರತಿ'ಯ ಕೆಲವು ಚಟುವಟಿಕೆಗಳು - ಕ್ಯಾಮರಾ ಕಣ್ಣಿನಲ್ಲಿ

 ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದ ಒಂದು ನೋಟ


 'ರಕ್ತದಾನ ಯೋಜನೆ'ಯ ಪ್ರಾರಂಭ



 ಉಚಿತ ರಕ್ತವರ್ಗದ ಪರೀಕ್ಷೆ


ಇವರೂ ರಕ್ತದಾನಿಗಳಾಗಿ ನೋಂದಾಯಿಸಿಕೊಂಡವರು


'ಸೇವಾದಿನ'ದ ಆಚರಣೆ


 ನಿಸ್ಪೃಹ ಸೇವೆಗಾಗಿ ಶ್ರೀಮತಿ ಕಮಲಮ್ಮ ಮತ್ತು ಶ್ರೀ ರಾಮಸ್ವಾಮಿಯವರಿಗೆ ಸನ್ಮಾನ


 ಸ್ವದೇಶಿ-ಸುರಕ್ಷಾ-ಸೇವಾ ದಿನದ ಆಚರಣೆ





 ನಿಸ್ಪೃಹ ಸೇವೆಗಾಗಿ ಶ್ರೀ ಕರುಣಾಕರ ಮೂಲ್ಯ ಮತ್ತು ಶ್ರೀ ಓಬಳಯ್ಯನವರಿಗೆ ಸನ್ಮಾನ


 ಭಿತ್ತಿಚಿತ್ರ ಮತ್ತು ಕಾರ್ಟೂನ್ ಚಿತ್ರಗಳ ಸ್ಪರ್ಧೆಗೆ ಬಂದ ಚಿತ್ರಗಳ ಪ್ರದರ್ಶನ


 ಶ್ರೀ ಕೃಷ್ಣಜನ್ಮಾಷ್ಟಮಿಯ ವಿಶಿಷ್ಟ ಆಚರಣೆ



 ರಂಗವಲ್ಲಿ ಸ್ಪರ್ಧೆ