ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಕೆಳದಿ ಕವಿಮನೆತನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೆಳದಿ ಕವಿಮನೆತನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜುಲೈ 3, 2013

ಅಪ್ಪ - ಮಗ - ಮೊಮ್ಮಗ


     ಅದೊಂದು ವಿಶಿಷ್ಟ ಸಂದರ್ಭ. ದಿನಾಂಕ 28-12-2008ರಂದು ಬೆಂಗಳೂರಿನಲ್ಲಿ ನಡೆದ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ಸಮಾವೇಶದಲ್ಲಿ ದಿ. ಕವಿ ಸುಬ್ರಹ್ಮಣ್ಯಯ್ಯನವರ ವ್ಯಕ್ತಿತ್ವ ಪರಿಚಯಿಸುವ ಕೃತಿ 'ಕವಿ ಸುಬ್ರಹ್ಮಣ್ಯಯ್ಯ' ಅನ್ನು ಮೊಮ್ಮಗ ಕವಿನಾಗರಾಜ್ ರಚಿಸಿದ್ದು, ಅದನ್ನು ಬಿಡುಗಡೆ ಮಾಡಿದ್ದು ಕವಿ ಸುಬ್ರಹ್ಮಣ್ಯಯ್ಯನವರ ಮಗ ದಿ. ಕವಿ ವೆಂಕಟಸುಬ್ಬರಾಯರು.ದ್ವನಿವರ್ಧಕದ ಸಮಸ್ಯೆಯಿಂದ ಅವರ ಮಾತುಗಳು ಸ್ಪಷ್ಟವಾಗಿ ಕೇಳದಿದ್ದರೂ ಇದೊಂದು ಅಪರೂಪದ ವಿಡಿಯೋ ಆಗಿ ಉಳಿದಿರುವುದು ವಿಶೇಷ. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ್ದ ಅವರು ತಮ್ಮ ತಂದೆಯ ಬಗ್ಗೆ ನೆನಪಿಸಿಕೊಂಡಿದ್ದಲ್ಲದೆ, ಮಕ್ಕಳು, ಮೊಮ್ಮಕ್ಕಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅವರ ಭಾಷಣದ ಒಂದು ತುಣುಕು ಇದು.

ಸೋಮವಾರ, ಜೂನ್ 3, 2013

ಬೆಳಕಿಗೆ ಬಂದ ಕವಿ ವೆಂಕಣ್ಣನ ಕೀರ್ತನೆಗಳು

     ೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಕೆಳದಿ ಕವಿ ವೆಂಕಣ್ಣ, ಐತಿಹಾಸಿಕ ಕಾವ್ಯ 'ಕೆಳದಿ ನೃಪ ವಿಜಯ'ದ ಕರ್ತೃ ಕವಿಲಿಂಗಣ್ಣನ ಮಗ. ವೆಂಕಣ್ಣನ ಹೆಸರು ಇನ್ನೂ ಉಳಿದಿರುವುದು ಆತ ರಚಿಸಿದ ಕೃತಿಗಳಿಂದ ಎಂಬುದು ಗಮನಾರ್ಹ. ಈತ ರಚಿಸಿದ ೧೦೨೪ ನಾಮಾವಳಿಗಳಿರುವ 'ಗಣ ಸಹಸ್ರನಾಮ', ನೀತಿ ಬೋಧಕ 'ಪಾರ್ವತಿ ವಲ್ಲಭ ಶತಕ', ನೃಸಿಂಹಾವತಾರದ ವೈಭವ ತೋರುವ 'ನರಹರಿ ವಿಜಯ' ಮತ್ತು ಕೆಳದಿ ರಾಮೇಶ್ವರನ ಕುರಿತು ರಚಿಸಿದ ಭಕ್ತಿ ಗೀತೆಗಳು, ಮುಂತಾದ ಕೃತಿಗಳು ಅವುಗಳಲ್ಲಿ ಅಡಗಿರುವ ಭಾವ, ಭಕ್ತಿ, ಕಾವ್ಯಾತ್ಮಕ ಮೌಲ್ಯಗಳಿಂದಾಗಿ ಉಳಿದಿವೆ. ಗಣ ಸಹಸ್ರನಾಮದಲ್ಲಿ ವೆಂಕಣ್ಣ ತನ್ನ ಪರಿಚಯವನ್ನು 'ಧರಣಿದೇವ ಲಲಾಮನೆನಿಸಿದ ವರ ಕೆಳದಿ ಲಿಂಗಾರ್ಯ ತನುಭವ ಗರುವ ವೆಂಕಪ'ನೆಂದು ಮಾಡಿಕೊಂಡಿದ್ದಾನೆ.
     ಕೆಳದಿ ರಾಮೇಶ್ವರ ಮತ್ತು ಕೊಲ್ಲೂರು ಮೂಕಾಂಬಿಕೆಯನ್ನು ಪ್ರಮುಖವಾಗಿ ಭಕ್ತಿಭಾವದಿಂದ ಸ್ತುತಿಸುವ ಕೀರ್ತನೆಗಳು ಲಭ್ಯವಿದೆ. ತಾಳೆಗರಿಗಳಲ್ಲಿ ರಚಿಸಿರುವ ಈ ರಚನೆಗಳನ್ನು ಸಂಪಾದಿಸಿ ಡಾ. ಕೆಳದಿ ಗುಂಡಾಜೋಯಿಸರು 'ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳು' ಎಂಬ ಹೆಸರಿನಲ್ಲಿ ವೆಂಕಣ್ಣನ ೫೦ ಕೀರ್ತನೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ೧೯೭೭ರಲ್ಲಿ ಪ್ರಕಟಣೆಯಾಗಿದೆ. ವೆಂಕಣ್ಣನ ರಚನೆಗಳನ್ನು ಸಂಗೀತಗಾರರು ಬಳಸಿ ಹಾಡಲು ತಕ್ಕವಾಗಿವೆ. 
     ಇತ್ತೀಚೆಗೆ ವೆಂಕಣ್ಣನ ಕೀರ್ತನೆಗಳನ್ನು ಪ್ರಸಿದ್ಧ ಗಾಯಕರಾದ ಶ್ರೀ ಗರ್ತಿಕೆರೆ ರಾಘಣ್ಣ, ಶ್ರೀಮತಿ ವಸುಧಾಶರ್ಮ, ಶ್ರೀ ರಾಘವೇಂದ್ರ ಬಿಜಾಡಿ, ಕು. ಪಲ್ಲವಿಕೃಷ್ಣ ಮತ್ತು ಶ್ರೀ ರಾಜೇಂದ್ರ ಬಾಳೆಹಳ್ಳಿ ಇವರುಗಳಿಂದ ಹಾಡಿಸಿ ಧ್ವನಿ ದಾಖಲಿಸಿ 'ಶಿವ ಮಂತ್ರವ ಜಪಿಸೋ' ಎಂಬ ಹೆಸರಿನಲ್ಲಿ ಸಿ.ಡಿ. ರೂಪದಲ್ಲಿ ಹೊರತರಲಾಯಿತು. ಶ್ರೀ ಶ್ರೀಕಾಂತ ಕಾಳಮಂಜಿಯವರು ಸಂಗೀತ ನಿರ್ದೇಶನ ಮಾಡಿದ್ದು, ಶ್ರೀ ಪ್ರಕಾಶ ಹೆಗಡೆ (ಕೊಳಲು), ಭಾರ್ಗವ ಹೆಗಡೆ ಸೀಗೆಹಳ್ಳಿ (ಸಿತಾರ), ಕವಿ ಬಿ.ಎಸ್.ಆರ್. ದೀಪಕ್ (ವಯಲಿನ್) ವಾದ್ಯ ಸಹಕಾರ ನೀಡಿದ್ದಾರೆ. ಎರಡು ಶತಮಾನಗಳ ನಂತರದಲ್ಲಿ ಕೆಳದಿ ಕವಿ ವೆಂಕಣ್ಣನ ರಚನೆಗಳು ಪ್ರಚಾರಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಸಿ.ಡಿ. ಬಿಡುಗಡೆಗೆ ಶ್ರಮಿಸಿದ ಡಾ. ಕೆಳದಿ ಗುಂಡಾಜೋಯಿಸ್ ಮತ್ತು ಡಾ. ವೆಂಕಟೇಶ ಜೋಯಿಸ್ ಅಭಿನಂದನಾರ್ಹರು. ಕೆಳದಿಯ ಶ್ರೀ ಸರಸ್ವತಿ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಚಿಪ್ಪಳ್ಳಿ ಗೋಪಾಲ ಕೃಷ್ಣರ ಅಧ್ಯಕ್ಷತೆಯಲ್ಲಿ ಕೆಳದಿಯಲ್ಲಿ ನಡೆದ ಸಮಾರಂಭದಲ್ಲಿ ಸಾಗರದ ಮಾಜಿ ಶಾಸಕ  ಶ್ರೀ ಎಲ್.ಟಿ. ತಿಮ್ಮಪ್ಪ ಹೆಗಡೆಯವರು ಸಿ.ಡಿ. ಬಿಡುಗಡೆ ಮಾಡಿದರು. ಸಮಾರಂಭದ ಕೆಲವು ದೃಷ್ಯಗಳಿವು.




-ಕ.ವೆಂ.ನಾಗರಾಜ್.
*************
      ಕೆಳದಿ ವೆಂಕಣ್ಣ ಕವಿಯ ಒಂದು ಭಕ್ತಿ ಸ್ತುತಿ:
ರಾಗ|| ಮಧ್ಯಮಾವತಿ      ತಾಳ || ಆದಿ ||
ಶಿವಮಂತ್ರವ ಜಪಿಸೋ | ಮೂಢ |
ಶಿವಮಂತ್ರವ ಜಪಿಸೋ
ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||

ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
ಧ್ಯಾನ ಬೇಡ ಧಾರಣೆ ಬೇಡ
ಮೌನ ಬೇಡ ಮಣಿಮಾಲಿಕೆ ಬೇಡ
ಧ್ಯಾನ ಬೇಡ ಪಶುವಧೆಗಳು ಬೇಡ || ೧ ||

ದೇಶಕಾಲ ಪಾತ್ರವ ನೋಡಬೇಡ
ಕಾಷಾಯಾಂಬರ ಧಾರಣೆ ಬೇಡ
ಭಾಸುರ ಜಡೆಯನು ಬೆಳೆಸಲು ಬೇಡ
ಈ ಶರೀರವನೆ ದಂಡಿಸಬೇಡ || ೨ ||

ಕಾಲನ ದೂತರು ಎಳೆಯುವ ಮುನ್ನ
ನಾಲಿಗೆ ತನ್ನಾಧೀನವಾಗಿರುವಾಗ
ಏಳುಕೋಟಿ ಮಂತ್ರಕೆ ಮಣಿಯಾದ ವಿ
ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು|| ೩ ||
*******

ಗುರುವಾರ, ನವೆಂಬರ್ 15, 2012

ಅರಿಯದೆ ಕುವರಿಯನಿತ್ತೆ . .


ರಾಗ: ಸಾವೇರಿ
ಅರಿಯದೆ ಕುವರಿಯನಿತ್ತೆ | ಸರ್ವ | ಸುರರೊಳು ಲಾಘವವೆತ್ತೆ | ಸರಸಿಜಭವ ಸುರ | ವರರು ಬೋಧಿಸೆ ಲೋಕ | ಗುರುವೆಂದು ಕೇಳ್ದತಿ | ಮರುಳಾಗಿ ಗೊರವಗಾನರಿಯದೆ  ||ಪ||

ವರ ವ್ಯಾಘ್ರ ಚರ್ಮವನ್ನುಟ್ಟು | ವಿಷ | ಧರ ಭೂಷಣಂಗಳನಿಟ್ಟು | ಕರಿಚರ್ಮಮಂ ಪೊದೆ | ದೊರಲುವ ತಲೆಯೋಡ | ಕರದಿ ಪಿಡಿದು ನಿಚ್ಚ | ಚರಿಸುವನಾಥನಿಗರಿಯದೆ              || ೧ ||

ಪಿಂಗದೆ ಪಳೆಯೆತ್ತನೇರಿ | ಮುದಿ | ಸಿಂಗಿಯ ವಿಷವನು | ಪೀರಿ ಕಂಗೊಳಿಸುವ ಶಬ | ರಾಂಗವ ಧರಿಸಿ ಕ | ರ್ಮಂಗಳ ವರ್ಜಿಸಿ | ದಿಂಗಳಗಣ್ಣಗಾನರಿಯದೆ                         || ೨ ||

ರೂಢಿಯರಿಯೆ ತಿರಿದುಂಡು | ಮೈಗೆ | ಕಾಡ ಬೂದಿಯ ಪೂಸಿ ಕೊಂಡು | ಕೋಡುಗಲ್ಲೊಳು ಗೂಡ | ಮಾಡಿ ಭೂತಗಳೊಡ | ನಾಡಿ ಬತ್ತಲೆ ಕುಣಿ | ದಾಡುವ ಮರುಳಗಾ | ನರಿಯದೆ || ೩ ||

ಊರೊಳಗಿರ್ಪುದ ಬಿಟ್ಟು | ಕಾಡ | ಸೇರಿ ಮೂರೂರ್ಗಳ ಸುಟ್ಟು | ಕ್ರೂರ ಬಾಣನ ಪಡಿ | ಹಾರನೆಂದೆನಿಸಿ ಪು | ನ್ನಾರಿರವನಾಂತು | ನಾರ ಪೊತ್ತಿರುವಗಾನರಿಯದೆ || ೪ ||

ಪಲವು ನಾಮಂಗಳ ನಾಂತು | ಎಲು | ದಲೆ ಮಾಲೆಗಳ ತಳೆದಿಂತು | ಸುಲಭನಲ್ಲದೆ ಮನವಳಿದು ಸಂಸಾರವ | ನುಳಿದು ಲೋಗರ ಶೂಲೆ | ಗೆಳಸುವ ಮರುಳಗಾನರಿಯದೆ     || ೫ ||


     ಇದು ೧೮ನೆಯ ಶತಮಾನದ ಲಿಂಗಣ್ಣಕವಿ (ಕವಿ ಮನೆತನದ ಮೂಲ ಪುರುಷ) ರಚಿಸಿದ ಖಂಡ ಕಾವ್ಯ  'ದಕ್ಷಾಧ್ವರ ವಿಜಯ' ಕೃತಿಯಲ್ಲಿ ದಕ್ಷನು ಪರಮೇಶ್ವರನಿಗೆ ತನ್ನ ಮಗಳನ್ನು ಕೊಟ್ಟ ಬಗ್ಗೆ ಹಳಹಳಿಸುವ, ಶಿವನನ್ನು ನಿಂದಿಸುವ ಸನ್ನಿವೇಶ. ತಾನೇ ಶ್ರೇಷ್ಠನೆಂಬ ಹಮ್ಮಿನಿಂದ ಬೀಗುತ್ತಿದ್ದ ದಕ್ಷನನ್ನು ಶಿವ ಎದ್ದು ಗೌರವಿಸಲಿಲ್ಲವೆಂಬ ಕಾರಣದಿಂದ ಸಿಟ್ಟಿಗೆದ್ದ ದಕ್ಷ ಶಿವನನ್ನು ನಿಂದಿಸುವ ಸನ್ನಿವೇಶದಲ್ಲಿ ಇದನ್ನು ಕವಿ ರಚಿಸಿದ್ದಾನೆ. ಕವಿಯೇ ಹೇಳಿಕೊಂಡಿರುವಂತೆ 

"ಪಳಗನ್ನಡದೊಳಚ್ಚ ಸಕ್ಕದಂಗಳೊಳುಸುರೆ |
ತಿಳಿಯಲ್ಕೆ ಕೆಲಬರ್ಗಸಾಧ್ಯಮೆಂದು ||
ತಿಳಿದುತದ್ಭವಮಿಶ್ರದೇಶೀಯವರ್ಣಕೋ |
ಜ್ವಲ ವಸ್ತುಕಾನ್ವಿತ ಸುಗಾನ ಭಣಿತೆಯೊಳು ||" ಇದನ್ನು ರಚಿಸಿದ್ದಾನೆ. 
ಇದು ಕೆಳದಿ ಕವಿಮನೆತನದ 7ನೆಯ ತಲೆಮಾರಿನ ಬಹುಮುಖ ಪ್ರತಿಭೆ ದಿ. ಎಸ್.ಕೆ. ಲಿಂಗಣ್ಣಯ್ಯನವರು (1879-1943) ರಚಿಸಿದ ಚಿತ್ರ -  'ವೀರಭದ್ರ ಸೃಷ್ಟಿ'



ಸೋಮವಾರ, ಏಪ್ರಿಲ್ 23, 2012

ಅಪ್ರತಿಮ ಚಿತ್ರ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ (೧೮೭೯-೧೯೪೩)


     ಕೆಲವರು ಬದುಕಿಯೂ ಸತ್ತಂತಿರುತ್ತಾರೆ. ಕೆಲವರು ಸತ್ತರೂ ಜನಮಾನಸದಲ್ಲಿ ಬದುಕಿಯೇ ಇರುತ್ತಾರೆ. ಅಂತಹ ಕೆಲವು ಅಪರೂಪದ ಜೀವಂತ ವ್ಯಕ್ತಿತ್ವ ಹೊಂದಿದವರ ಪೈಕಿ ಒಬ್ಬರು ಸಾಗರದ ಕವಿ ಲಿಂಗಣ್ಣಯ್ಯನವರು. ಯಾವುದೇ ವ್ಯಕ್ತಿಯನ್ನು ಜನ ನೆನೆಯುವುದು ಅವರ ಕೃತಿಗಳಿಂದಲೇ ಹೊರತು ಅವರು ಮಾಡಿಟ್ಟಿದ್ದ ಆಸ್ತಿ-ಪಾಸ್ತಿಗಳಿಂದಲ್ಲ. ಕೆಳದಿ ಕವಿಮನೆತನದ ಏಳನೆಯ ಪೀಳಿಗೆಗೆ ಸೇರಿದವರಾದ ಲಿಂಗಣ್ಣಯ್ಯ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದವರು. ಸಂಬಂಧದಲ್ಲಿ ನನಗೆ ಅವರು ನನ್ನ ಮುತ್ತಜ್ಜ ಕವಿ ವೆಂಕಣ್ಣನವರ ತಮ್ಮ - ಅಂದರೆ ಚಿಕ್ಕ ಮುತ್ತಜ್ಜ - ಆಗಬೇಕು. ಬೆಂಗಳೂರಿನ ಅಠಾರಾ ಕಛೇರಿಯಲ್ಲಿ (ಈಗಿನ ಉಚ್ಛ ನ್ಯಾಯಾಲಯದ ಕಟ್ಟಡ) ಸ್ಟಾಂಪ್ ಸೂಪರ್‌ವೈಸರ್ ಆಗಿ ವೃತ್ತಿ ಪ್ರಾರಂಭಿಸಿದ್ದ ಇವರು ಸೊರಬದಲ್ಲಿ ಸಬ್ ರಿಜಿಸ್ಟ್ರಾರರೂ ಆಗಿದ್ದರು. ಒಳ್ಳೆಯ ಸಂಗೀತಗಾರರು, ವೀಣಾ ವಿದ್ವಾಂಸರು ಸಹ ಆಗಿದ್ದ ಇವರು ಬೆಂಗಳೂರಿನ ವಿಶ್ವೇಶ್ವರಪುರ ಸಜ್ಜನರಾವರ ವೃತ್ತದ ಸಮೀಪದಲ್ಲಿ ರೋಷನ್ ಬಾಗ್ ರಸ್ತೆ (ಬುರುಗಲ್ ಮಠ ರಸ್ತೆ)ಯಲ್ಲಿ ಶ್ರೀ ಕಾಂತರಾಜಾ ಕ್ರೋಮೋ ಲಿಥೋ ಮುದ್ರಣಾಲಯ ಸ್ಥಾಪಿಸಿ ವಾಣಿಜ್ಯೋದ್ಯಮಿಯಾಗಿಯೂ ಹೆಸರು ಮಾಡಿದ್ದವರು. ಶಾಲಾ ಕಾಲೇಜುಗಳಿಗೆ ವಿವಿಧ ಭೂಪಟಗಳನ್ನು ಸ್ವತಃ ತಾವೇ ಸಿದ್ದಪಡಿಸಿ ಒದಗಿಸುತ್ತಿದ್ದವರು. ಜ್ಯೋತಿಷ್ಯ, ವೈದ್ಯಕೀಯ, ಫೋಟೋಗ್ರಫಿ, ಮುಂತಾಧ ರಂಗಗಳಲ್ಲೂ ಗುರುತಿಸಿಕೊಂಡಿದ್ದವರು. ಒಳ್ಳೆಯ ಸಾಹಿತಿಯೂ ಆಗಿದ್ದರು. ಇವರ ಸಾಧನೆಯ ಒಂದೊಂದು ಕ್ಷೇತ್ರದ ಕುರಿತೂ ವಿವರಿಸ ಹೊರಟರೆ ಒಂದು ದೊಡ್ಡ ಉದ್ಗ್ರಂಥವೇ ಆಗುತ್ತದೆ. ಒಳ್ಳೆಯ ಚಿತ್ರ ಕಲಾವಿದರಾಗಿದ್ದ ಇವರ ಕೆಲವು ಕೃತಿಗಳ ಫೋಟೋಗಳನ್ನು ತಮ್ಮ ಅವಲೋಕನಕ್ಕಾಗಿ ಕೊಟ್ಟಿರುವೆ.
     ವರ್ಣಚಿತ್ರಗಳಿಗೆ ಲಿಂಗಣ್ಣಯ್ಯನವರು ಬಳಸಿರುವ ಬಣ್ಣಗಳು ಪರಿಸರ ಸ್ನೇಹಿ ಮತ್ತು ಸ್ವಯಂ ನಿರ್ಮಿತವಾದದ್ದು ಎಂಬುದು ವಿಶೇಷ. ಆ ಕಾಲದಲ್ಲಿ ಪ್ರಚಲಿತವಿದ್ದ ಹೆಸರುವಾಸಿ ಬಣ್ಣಗಳು ವಿದೇಶಿಯಾಗಿದ್ದು ದುಬಾರಿ ಬೆಲೆಯದಾಗಿದ್ದವು. ಇವರೇ ಸ್ವತಃ ಗ್ರಂದಿಗೆ ಅಂಗಡಿಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಸಿದ್ಧಪಡಿಸಿದ ಬಣ್ಣಗಳು ಯಾವುದೇ ವಿದೇಶೀ ಬಣ್ಣಗಳಿಗಿಂತಲೂ ಕಡಿಮೆಯಲ್ಲ ಮತ್ತು ಕಡಿಮೆ ದರದಲ್ಲಿ ಸಿದ್ಧಪಡಿಸಲು ಸಾಧ್ಯವೆಂದು ತೋರಿಸಿಕೊಟ್ಟವರಿವರು. ರಾಮಾಯಣವನ್ನು ಸುಮಾರು ೭೦೦ ಚಿತ್ರಗಳ ಮೂಲಕ ರಚಿಸಿ ರಾಮಾಯಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದವರು. ಭಾಗವತವನ್ನೂ ಸಹ ಚಿತ್ರಗಳ ಮೂಲಕ ತೆರೆದಿಟ್ಟವರು. ಪೂರ್ಣ ಭಗವದ್ಗೀತೆಯ ಶ್ಲೋಕಗಳನ್ನೇ ಬಳಸಿಕೊಂಡು ರಚಿಸಿದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಬೃಹತ್ ವರ್ಣಚಿತ್ರ ಇವರ ಸಾಧನೆಗೆ ಹಿಡಿದ ಕನ್ನಡಿ. ವಾಯುಸ್ತುತಿ (ದೇವನಾಗರಿ ಮತ್ತು ಕನ್ನಡ ಲಿಪಿಗಳಲ್ಲಿ ಪ್ರತ್ಯೇಕವಾಗಿ) ಬಳಸಿ ರಚಿಸಿದ ಮಾರುತಿ, ಲಲಿತಾ ಸಹಸ್ರನಾಮ ಬಳಸಿ ರಚಿಸಿದ ಲಲಿತಾ ತ್ರಿಪುರ ಸುಂದರಿ, ವಿಷ್ಣು ಸಹಸ್ರನಾಮ ಬಳಸಿ ರಚಿಸಿದ ವಿಷ್ಣು, ಮುಂತಾದುವುಗಳನ್ನು ಈಗಿನಷ್ಟು ಸೌಲಭ್ಯಗಳು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ರಚಿಸಿರುವುದು ಇವರ ಅಗಾಧ ಕರ್ತೃತ್ವ ಮತ್ತು ತಾಳ್ಮೆಗೆ ಉದಾಹರಣೆಗಳಾಗಿವೆ. ಶ್ರೀರಾಮ ಪಟ್ಟಾಭಿಷೇಕ. ವಿಶ್ವರೂಪದರ್ಶನದ ಚಿತ್ರಪಟಗಳೂ ನಿಬ್ಬೆರಗಾಗಿಸುತ್ತವೆ. ಸೂರ್ಯ ಮುಳುಗದ ಸಾಮ್ರಾಜ್ಯವೆನಿಸಿದ್ದ ಇಂಗ್ಲೆಂಡಿನ ಆಗಿನ ಎಲ್ಲೆಗಳನ್ನು ತೋರಿಸುವ ದಿ ಗಾರ್ಡಿಯನ್ ಏಂಜೆಲ್ ಆಫ್ ದಿ ಬ್ರಿಟಿಷ್ ಎಂಪೈರ್ ಚಿತ್ರ ವಿದೇಶೀಯರೂ ಸೇರಿದಂತೆ ಎಲ್ಲರನ್ನೂ ಆಕರ್ಷಿಸಿದೆ. ಇದರಲ್ಲಿ ಮುಖಭಾಗ ಇಂಗ್ಲೆಂಡ್ ಆಗಿದ್ದರೆ, ಕೈಗಳಲ್ಲಿ ಆಸ್ಟ್ರೇಲಿಯಾ, ಕೆನಡಾ, ತೊಡೆಯಲ್ಲಿ ಅಮೆರಿಕಾ ಪ್ರಾಂತಗಳು, ಹೂ ಮುಡಿದಂತೆ ತೋರುವ ಐರ‍್ಲೆಂಡ್, ಕಿರೀಟದಲ್ಲಿ ಸ್ಕಾಟ್ಲೆಂಡ್, ಇತ್ಯಾದಿಗಳನ್ನು ತೋರಿಸಿದ್ದರೆ ಹೃದಯ ಭಾಗದಲ್ಲಿ ಭಾರತವನ್ನು ತೋರಿಸಲಾಗಿದೆ. ಇವರ ಅನೇಕ ಕೃತಿಗಳು ಈಗ ಅಲಭ್ಯವಾಗಿವೆ. ಇರುವ ಕೃತಿಗಳೂ ಜೀರ್ಣವಾಗಿ ಅಳಿಯುವ ಹಂತದಲ್ಲಿವೆ. ಹಲವಾರು ಕೃತಿಗಳು ಸಂಬಂಧಿಗಳ ಮನೆಯಲ್ಲಿವೆ. ಹಲವನ್ನು ಕೆಳದಿ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು. ಇವರ ರಚನೆಗಳನ್ನು ಸಂರಕ್ಷಿಸುವ ಕೆಲಸವನ್ನು ಈಗ ಕುವೆಂಪು ವಿಶ್ವ ವಿದ್ಯಾನಿಲಯದ ಆಡಳಿತಕ್ಕೊಳಪಟ್ಟ ಕೆಳದಿ ವಸ್ತು ಸಂಗ್ರಹಾಲಯ ಮಾಡಬೇಕಿರುವುದು ಇಂದಿನ ಅಗತ್ಯವಾಗಿದೆ. ಸಂಬಂಧಿಸಿದವರು ಈ ಕೆಲಸ ಮಾಡುವರೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
-ಕ.ವೆಂ.ನಾಗರಾಜ್.
ಆಧಾರ: ಕೆಳದಿ ಗುಂಡಾಜೋಯಿಸರ ಕೃತಿ: ಚಿತ್ರ ಕಲಾವಿದ ಕವಿ ಲಿಂಗಣ್ಣಯ್ಯ ಮತ್ತು ಸೋದರ
            ಕವಿಸುರೇಶರ ಕೃತಿ: Karmayogi Kalavallabha S.K. LINGANNAIYA’
****************












ಬುಧವಾರ, ಫೆಬ್ರವರಿ 8, 2012

ಕವಿಮನೆತನದ ಪತ್ರಿಕೆ 'ಕವಿಕಿರಣ'


     ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ರಾಜಮನೆತನವಾಗಿದ್ದು ಮೈಸೂರು ಅರಸರ ರಾಜ್ಯಕ್ಕಿಂತಲೂ ಹೆಚ್ಚಿನ ವಿಸ್ತಾರ ಹೊಂದಿತ್ತು.  ಕೆಳದಿ ಅರಸರು ನಾಡಿನ ಅಭಿವೃದ್ಧಿಯೊಂದಿಗೆ ಕಲೆ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದು ಇತಿಹಾಸ. ನಮ್ಮ ಪೂರ್ವಜರು ಕೆಳದಿ ಸಂಸ್ಥಾನದ ಆಸ್ಥಾನ ಕವಿಗಳಾಗಿದ್ದು ಅವರ ಕೃತಿಗಳಿಂದಲೇ ಕೆಳದಿಯ ಇತಿಹಾಸ ದಾಖಲೆಯಾಗಿ ಉಳಿದಿರುವುದೂ ಸಹ ಇತಿಹಾಸ. ವಿಶೇಷವಾಗಿ ಕೆಳದಿನೃಪ ವಿಜಯ ಪ್ರಮುಖ ಐತಿಹಾಸಿಕ ಕೃತಿಯಾಗಿದ್ದು ಇದರ ರಚನಕಾರ ಕವಿಲಿಂಗಣ್ಣ ಕೆಳದಿ ಕವಿಮನೆತನದ ಮೂಲಪುರುಷ. ಇವನ ನಂತರದ ಪೀಳಿಗೆಯವರೂ ಸಹ ಪ್ರತಿಭಾಶಾಲಿಗಳಾಗಿದ್ದು ಅವರುಗಳ ಸಾಧನೆ ಈಗಿನವರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ಅವರ ಕೃತಿಗಳನ್ನು ಬೆಳಕಿಗೆ ತರುವ, ಸಾಧನೆಗಳನ್ನು ಪರಿಚಯಿಸುವ ಕಾರ್ಯ ಮಾಡುವ ಸಲುವಾಗಿ ಹಾಗೂ ಕವಿಕುಟುಂಬಗಳ ಸಮಕಾಲೀನರೂ ಸಾಧಕರಾಗಲು ಪ್ರೇರಿಸುವ ಉದ್ದೇಶದಿಂದ ಒಂದು ಪತ್ರಿಕೆ ಹೊರತರುವ ವಿಚಾರ ನಮ್ಮಲ್ಲಿ ಮೊಳಕೆಯೊಡೆದಿತ್ತು. 
     ಕೆಳದಿಯಲ್ಲಿ ೨೦೦೭ರ ಡಿಸೆಂಬರಿನಲ್ಲಿ ನಡೆದ ಎರಡನೆಯ ವಾರ್ಷಿಕ ಸಮಾವೇಶದಲ್ಲಿ ಸಂವಹನಾ ಮಾಧ್ಯಮವಾಗಿ ಒಂದು ಪತ್ರಿಕೆಯನ್ನು ಹೊರತರಲು ನಿಶ್ಚಯಿಸಿ ಈ ಕೆಲಸಕ್ಕಾಗಿ ನನ್ನನ್ನು ಸಂಪಾದಕನನ್ನಾಗಿ ಮತ್ತು ಸೋದರ ಸುರೇಶನನ್ನು ಸಹಸಂಪಾದಕನನ್ನಾಗಿ ಆರಿಸಿದರು. ನನಗೂ ಈ ಕೆಲಸ ಮಾಡುವುದು ಪ್ರಿಯವಾಗಿತ್ತು. ನನ್ನೊಳಗಿದ್ದ ಬರಹಗಾರನಿಗೆ ಎಚ್ಚರವಾಗಿದ್ದು ಆಗಲೇ. ತಹಸೀಲ್ದಾರನಾಗಿ ನನಗಿದ್ದ ಕಾರ್ಯಬಾಹುಳ್ಯದಿಂದಾಗಿ ಹಾಗೂ ಮುಕ್ತವಾಗಿ ಅನಿಸಿಕೆಗಳನ್ನು ಸರ್ಕಾರಿ ನೌಕರನಾಗಿ ವ್ಯಕ್ತಪಡಿಸುವುದು ಸೂಕ್ತವಲ್ಲವಾಗಿದ್ದರಿಂದ ಬರವಣಿಗೆಗೆ ಆ ಮೊದಲು ಕೈ ಹಾಕಿರಲಿಲ್ಲ. ಕೆಲವೇ ದಿನಗಳಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಹೊಂದುವುದಿದ್ದರೂ ಸಹ ೨೦೦೯ರಲ್ಲಿ ಅನೇಕ ಕಾರಣಗಳಿಂದ ನಾನು ಸರ್ಕಾರಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಪಡೆದಿದ್ದು, ಅವುಗಳಲ್ಲಿ ಒಂದು ಕಾರಣ ಈ ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಳ್ಳುವುದೂ ಆಗಿತ್ತು.
     ಸರ್ಕಾರಿ ಅಧಿಕಾರಿಯಾಗಿದ್ದರಿಂದ ಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸಲು ನಡತೆ ನಿಯಮಾವಳಿಗಳ ಪ್ರಕಾರ ಅನುಮತಿ ಕೋರಿ ಶಿವಮೊಗ್ಗ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದೆ. (ಆ ಅವಧಿಯಲ್ಲಿ ನಾನು ಶಿವಮೊಗ್ಗದಲ್ಲಿ ಪುರಸಭಾ ತಹಸೀಲ್ದಾರ್ ಮತ್ತು ನಂತರ ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದೆ). ನೂತನ ಪತ್ರಿಕೆಗೆ ಹಲವಾರು ಹೆಸರುಗಳು ಸೂಚಿಸಲ್ಪಟ್ಟಿದ್ದು ಅಂತಿಮವಾಗಿ ಕವಿಕಿರಣ ಎಂಬ ಹೆಸರನ್ನು ಇಡಬೇಕೆಂದು ಹಾಗೂ ಅರ್ಧವಾರ್ಷಿಕವಾಗಿ ಹೊರತರಬೇಕೆಂದು ತೀರ್ಮಾನಿಸಿದೆವು. ಜಿಲ್ಲಾ ದಂಡಾಧಿಕಾರಿಯವರ ಮೂಲಕ ಪತ್ರಿಕೆಯ ಶೀರ್ಷಿಕೆಯ ಪರಿಶೀಲನೆಗೆ ನವದೆಹಲಿಯ ವೃತ್ತಪತ್ರಿಕೆಗಳ  ರಿಜಿಸ್ಟ್ರಾರರಿಗೆ ಕಳಿಸಿಕೊಡಲಾಯಿತು. ಇದಕ್ಕೆ ಮುನ್ನ ನಿಯಮದಂತೆ ಪೋಲಿಸ್ ಇಲಾಖೆಯಿಂದ ನನ್ನ ಪೂರ್ವಾಪರ ವಿಚಾರಣೆ ನಡೆದು ಎಸ್.ಪಿ.ಯವರು ಪತ್ರಿಕೆ ಪ್ರಾರಂಭಕ್ಕೆ ಅನುಮತಿ ಸೂಚಿಸಿ ಪತ್ರ ಕೊಟ್ಟಿದ್ದರು. ಕವಿಕಿರಣ ಪತ್ರಿಕೆಯ ಶೀರ್ಷಿಕೆ ಲಭ್ಯವಿದ್ದ ಬಗ್ಗೆ ನವದೆಹಲಿಯ ರಿಜಿಸ್ಟ್ರಾರರ ಕಛೇರಿಯಿಂದ ಸೂಚನೆ ಬಂದ ನಂತರ ಅಗತ್ಯದ ಮುಚ್ಚಳಿಕೆಗಳನ್ನು ನಾನು ಮತ್ತು ನನ್ನ ತಮ್ಮ ಜಿಲ್ಲಾ ಅಪರ ದಂಡಾಧಿಕಾರಿಯವರಿಗೆ ಬರೆದುಕೊಟ್ಟೆವು. ಪತ್ರಿಕೆಗಳ ರಿಜಿಸ್ಟ್ರಾರರು ನಮ್ಮ ಪತ್ರಿಕೆಯನ್ನು ನೋಂದಾಯಿಸಿಕೊಂಡು ಪತ್ರಿಕೆಯ ನೋಂದಣಿ ಕ್ರಮಾಂಕ ಹಾಗೂ ಪ್ರಮಾಣ ಪತ್ರ ನೀಡಿದರು. ಪತ್ರಿಕೆ ಪ್ರಾರಂಭಕ್ಕೆ ಹಾದಿ ನಿಚ್ಚಳವಾಯಿತು. 
      ಹಿರಿಯರೊಡನೆ ಹಲವಾರು ಸಲ ಚರ್ಚಿಸಿ ಪತ್ರಿಕೆಯ ರೂಪುರೇಷೆ ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಪತ್ರಿಕೆಯ ಮೊದಲ ಸಂಚಿಕೆ ಹೊರಬಂದಿತು. ಒಂದು ಸಾರ್ಥಕ ಕೆಲಸ ಪ್ರಾರಂಭಿಸಿದ ಸಂತೋಷ ನಮ್ಮದಾಗಿತ್ತು. ಕವಿಕಿರಣಕ್ಕೆ ಶೃಂಗೇರಿಯ ಜಗದ್ಗುರುಗಳು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು, ರಾಮಚಂದ್ರಾಪುರ ಮಠದ ಶ್ರೀಗಳು ಸೇರಿದಂತೆ ಹಲವರು ಗುರುಹಿರಿಯರು ಆಶೀರ್ವದಿಸಿದ್ದಾರೆ; ಕ.ಸಾ.ಪ.ದ ರಾಜ್ಯಾಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್ ಸೇರಿದಂತೆ ಹಲವರು ಗಣ್ಯರು ಶುಭ ಹಾರೈಸಿದ್ದಾರೆ; ಕುಟುಂಬಗಳ ಹಿರಿಯರ ಮಾರ್ಗದರ್ಶನವಿದೆ. ಉತ್ತಮ ಸಹಕಾರಿಗಳಿದ್ದಾರೆ.
     ಕವಿಕಿರಣದಲ್ಲಿ ಸುಮಧುರ ಬಾಂಧವ್ಯದ ಕನಸು ನನಸಾಗಿಸುವ ಸಹೃದಯತೆಯಿದೆ, ಹಿಂದಿನ ಸಾಧಕರನ್ನು ನೆನೆಯುವ ಕೃತಜ್ಞತೆಯಿದೆ, ಐತಿಹಾಸಿಕ ಸಂಗತಿಗಳನ್ನು ನೆನಪಿಸುವ ಕರ್ತವ್ಯವಿದೆ, ಈಗಿನವರಿಗೆ ಪ್ರೇರಣೆ ನೀಡುವ ಕಸುವಿದೆ, ಸಜ್ಜನ ಶಕ್ತಿಯನ್ನು ಜಾಗೃತಗೊಳಿಸುವ ಸಂಕಲ್ಪವಿದೆ. ಅಷ್ಟೇ ಅಲ್ಲ, ಇದು ಕವಿಮನೆತನದವರಿಗೆ ಹಾಗೂ ಬಂಧುಗಳಿಗೆ ಕುಟುಂಬದ ದಾಖಲೆಯಾಗಿದ್ದರೆ, ಕೆಳದಿಯ ಇತಿಹಾಸಾಸಕ್ತರಿಗೆ ಮಾಹಿತಿ ಕೊಡುವ ಸ್ರೋತವಾಗಿದೆ.  ಅಗಣಿತ ಅತ್ತಣ, ಇತ್ತಣ, ಸುತ್ತಣ, ಎತ್ತೆತ್ತಣದ ಕವಿಗಡಣದ ಸುಗುಣದಾಭರಣವಾಗಿ, ಗುಣವ ಪ್ರಧಾನವಾಗಿಸಿ, ಅವಗುಣವ ಗೌಣವಾಗಿಸಿ, ಬಣಗುಡುವ ದಣಿದ ಮನವ ತಣಿಪ ಹೊಂಗಿರಣವಾಗಿ, ಕವಿಮನೆತನದ ಆಶಾಕಿರಣವಾಗಿ ಕವಿಕಿರಣ ಚಿರಕಾಲ ಬೆಳಗಲಿ, ಸಹೃದಯರು ಬೆನ್ನಿಗಿರಲಿ ಎಂಬುದು ನಮ್ಮ ಸದಾಶಯ. ಒಂದು ವಿಶೇಷ ಪೂರಕ ಸಂಚಿಕೆ ಸೇರಿ ಈಗಾಗಲೇ ಎಂಟು ಅರ್ಧ ವಾರ್ಷಿಕ ಸಂಚಿಕೆಗಳು ಹೊರಬಂದಿವೆ. ಅಂತರ್ಜಾಲ ತಾಣದಲ್ಲೂ ಈ ಸಂಚಿಕೆಗಳನ್ನು ಓದಬಹುದು. ತಮ್ಮ ಮಾಹಿತಿಗಾಗಿ ಈ ಕೆಳಗೆ ಲಿಂಕ್ ಕೊಟ್ಟಿದೆ. ಆಸಕ್ತರು ಓದಿ ತಮ್ಮ ಅಮೂಲ್ಯ ಸಲಹೆಗಳನ್ನು ಕೊಡಬಹುದಾಗಿದೆ. ಕವಿಕಿರಣ ಪತ್ರಿಕೆಯಲ್ಲದೆ ಕವಿಪ್ರಕಾಶನದ ಎಲ್ಲಾ ಪ್ರಕಟಣೆಗಳನ್ನೂ ಕಾಲಕ್ರಮೇಣ ಈ ತಾಣದಲ್ಲಿ ಪ್ರಕಟಿಸುವ ಉದ್ದೇಶವಿದೆ. ಜಾಹಿರಾತು ಪಡೆಯದ, ಕವಿಕುಟುಂಬಗಳವರೇ ಖರ್ಚು-ವೆಚ್ಚ ಭರಿಸುತ್ತಿರುವ ಈ ಪತ್ರಿಕೆ ಕನ್ನಡ ಸಾರಸ್ವತ ಲೋಕಕ್ಕೆ ಕವಿಮನೆತನದವರ ಅಳಿಲು ಸೇವೆಯಾಗಿದೆ.  

'ಕವಿಕಿರಣ'ದ ಸಂಚಿಕೆಗಳನ್ನು ಇಲ್ಲಿಯೂ ಓದಬಹುದು:
   http://kavikirana.blogspot.in/  - ಇದು ಕವಿ ಪ್ರಕಾಶನದ ಪ್ರಕಟಣೆಗಳನ್ನು ಅಂತರ್ಜಾಲದ ಮೂಲಕವೂ ಜನರಿಗೆ ತಲುಪಿಸಲು ಉದ್ದೇಶಿಸಿರುವ ಬ್ಲಾಗ್.  ಈ ತಾಣದಲ್ಲಿ ಇದುವರೆಗೆ ಪ್ರಕಟಿಸಿದ ಪ್ರಕಟಣೆಗಳು:
1. 'ಕವಿಕಿರಣ' ಪತ್ರಿಕೆ ಮೂಡಿದ ಪರಿಯ ಪರಿಚಯ, 
     http://kavikirana.blogspot.in/2011/01/blog-post_26.html
2. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆ
     http://kavikirana.blogspot.in/2011/02/2008.html
3. 'ಕವಿಕಿರಣ' ಪತ್ರಿಕೆಯ ಜೂನ್, 2009ರ ಸಂಚಿಕೆ
     http://kavikirana.blogspot.in/2011/04/2009.html
4. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2009ರ ಸಂಚಿಕೆ
     http://kavikirana.blogspot.in/2011/05/01-12-2009.html
5. 'ಕವಿಕಿರಣ' ಪತ್ರಿಕೆಯ ಜೂನ್, 2010ರ ಸಂಚಿಕೆ
    http://kavikirana.blogspot.in/2011/07/01-06-2010.html
6. 'ಕವಿಕಿರಣ' ಪತ್ರಿಕೆಯ ಜೂನ್, 2010ರ ವಿಶೇಷ ಸಂಚಿಕೆ
    http://kavikirana.blogspot.in/2011/07/01-06-2010.html
7.  ಕ.ವೆಂ. ನಾಗರಾಜರ ಕೃತಿ: ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿಚಿತ್ರಣ)  http://kavikirana.blogspot.in/2011/06/blog-post_23.html
8. ಕವಿ ವೆಂ. ಸುರೇಶರ  'Karmayogi – Kalavallabha S.K. LINGANNAIYA – a concise biography of Sri S.K. Lingannaiya'
     http://kavikirana.blogspot.in/2011/07/this-book-is-biography-of-one-of.html
      ಕಾಲಕ್ರಮೇಣ ಉಳಿದ ಪ್ರಕಟಣೆಗಳನ್ನೂ ಸಹೃದಯೀ ವಾಚಕರ ಮುಂದಿಡುವ ವಿಚಾರವಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನನ್ನನ್ನಾಗಲೀ, ಕವಿ ಸುರೇಶರನ್ನಾಗಲೀ ಸಂಪರ್ಕಿಸಬಹುದು. ತಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆ, ಸಹಕಾರಗಳಿಗೆ ಸ್ವಾಗತ.
-ಕ.ವೆಂ.ನಾಗರಾಜ್.

ಶುಕ್ರವಾರ, ಜನವರಿ 6, 2012

ಹರಿಹರಪುರ ಶ್ರೀಧರ್ ಮತ್ತು ಕವಿಮನೆತನದ ಸಮಾವೇಶ


     ಮಿತ್ರ ಶ್ರೀಧರ್ ಮತ್ತು ನನ್ನ ಸ್ನೇಹ ಕಳೆದ ನಾಲ್ಕು ದಶಕಗಳದ್ದು. ಕೆಲವು ತಾತ್ವಿಕ ವಿಷಯಗಳಲ್ಲಿ ಸಣ್ಣಪುಟ್ಟ ಅಭಿಪ್ರಾಯ ಬೇಧಗಳಿದ್ದರೂ ಅದರಿಂದ ನಮ್ಮ ಸ್ನೇಹಕ್ಕೆ ಭಂಗ ಬಂದಿಲ್ಲ. ಯಾವುದೇ ಒಳ್ಳೆಯ ಸಂಗತಿಗಳು, ವಿಚಾರಗಳಿಗೆ ಸ್ಪಂದಿಸುವ ಮನೋಭಾವದ ಶ್ರೀಧರ್ ಸತ್ಸಂಗಗಳನ್ನು ನಡೆಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವ ಅವರು ಸಾಧು-ಸಂತರನ್ನು ಕರೆಯಿಸಿ ಉಪನ್ಯಾಸಗಳನ್ನು ಏರ್ಪಡಿಸುವುದಲ್ಲದೆ ಉಪನ್ಯಾಸಗಳ ಆಡಿಯೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿಕೊಂಡು ವೇದಸುಧೆ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಹೆಚ್ಚಿನ ಜನರಿಗೆ ಸದ್ವಿಚಾರ ತಲುಪಿಸುತ್ತಿರುವುದು ಅವರ ಕಳಕಳಿಗೆ ಸಾಕ್ಷಿ. ಸತ್ಸಂಗಕ್ಕಾಗಿಯೇ ಅವರ ಮನೆಯ ಮೇಲ್ಭಾಗದಲ್ಲಿ ಒಂದು ದೊಡ್ಡ ಸಭಾಂಗಣವನ್ನೇ ಕಟ್ಟಿಸಿ ಸಜ್ಜುಗೊಳಿಸಿರುವುದು ಅವರ ವಿಶೇಷತೆ. ವೇದಸುಧೆ ಅಂತರ್ಜಾಲ ತಾಣಕ್ಕೆ ನನ್ನನ್ನು ಗೌರವ ಸಂಪಾದಕನೆಂದು ಹೆಸರಿಸಿರುವುದು ಅವರು ನನ್ನಲ್ಲಿಟ್ಟ ವಿಶ್ವಾಸಕ್ಕೆ ದ್ಯೋತಕವಾಗಿದೆ. ಅವರು ನನ್ನನ್ನು ಅಣ್ಣನಂತೆ ಭಾವಿಸಿದ್ದಾರೆ. ನಾನೂ ಶ್ರೀಧರರನ್ನು ತಮ್ಮನಂತೆಯೇ ಕಂಡಿದ್ದೇನೆ. 
     25-12-2011ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ ಸಮಾವೇಶದ ವಿಶೇಷ ಆಹ್ವಾನಿತರಾದ ಸನ್ಮಾನ್ಯ ಶ್ರೀ ಸು.ರಾಮಣ್ಣ, ಮುಖ್ಯ ಅತಿಥಿ ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಸೋದರ ಕವಿಸುರೇಶರನ್ನು ಸಮಾವೇಶದ ಹಿಂದಿನ ದಿನ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಸತ್ಕರಿಸಿದ್ದು ಅವರು ಸಮಾವೇಶದ ಕೆಲಸದಲ್ಲಿ ಹೇಗೆ ತೊಡಗಿಕೊಂಡಿದ್ದರು ಎಂಬುದನ್ನು ತೋರಿಸುತ್ತದೆ. ಅಲ್ಲದೆ ಹೆಚ್ಚಿನ ಬಂಧುಗಳನ್ನು ತಮ್ಮ ಮನೆಗೂ ಕಳುಹಿಸುವಂತೆ ನನಗೆ ಹೇಳಿದ್ದರು. ಸಮಾವೇಶದ ದೃಷ್ಯಗಳನ್ನು ಸೆರೆ ಹಿಡಿಯುವುದು, ವಿಡಿಯೋ ಚಿತ್ರೀಕರಿಸಿರುವುದು, ಅದನ್ನು 'ಬಂಧು-ಬಳಗ' ಎಂಬ ಅಂತರ್ಜಾಲ ತಾಣದಲ್ಲಿ ಪ್ರಚುರಪಡಿಸಿ ಸಮಾವೇಶದ ನೆನಪು ಬಹಳ ಕಾಲ ಉಳಿಯುವಂತೆ ಮಾಡಿರುವುದಕ್ಕಾಗಿ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ಗುರುವಾರ, ಜನವರಿ 5, 2012

ನಮ್ಮ ಮನೆ

     ದಿನಾಂಕ 25-12-2012ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಬೋಧನ್ ಸಂಸ್ಥೆಯ ಸಂಯೋಜಕರಾದ ಸನ್ಮಾನ್ಯ ಶ್ರೀ ಸು.ರಾಮಣ್ಣನವರು ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಆ ಸಂದರ್ಭದಲ್ಲಿ ಅವರು 'ನಮ್ಮ ಮನೆ' ಎಂಬ ಹಾಡನ್ನು ಹೇಳಿಕೊಟ್ಟು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರಿಗೂ ಹೇಳಿಸಿ ಕಾರ್ಯಕ್ರಮ ಪ್ರಾರಂಭಿಸಿದ್ದು ವಿಶೇಷವೆನಿಸಿತು. ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲುಗೊಂಡಿದ್ದರು. ಮಿತ್ರ ಹರಿಹರಪುರ ಶ್ರೀಧರರು ಹಾಡಿನ ಭಾಗದ ದೃಷ್ಯ-ಧ್ವನಿಗ್ರಹಣ ಮಾಡಿದ್ದು ಅದನ್ನು ನಿಮ್ಮ ಕೇಳುವಿಕೆಗಾಗಿ ಇಲ್ಲಿ ಪ್ರಸ್ತುತ ಪಡಿಸಿದೆ. ಹಾಡಿನ ಸಾಹಿತ್ಯವನ್ನೂ ಕೆಳಗೆ ಕೊಟ್ಟಿದೆ.
ನಮ್ಮ ಮನೆ: ಭಾಗ-1


ನಮ್ಮ ಮನೆ: ಭಾಗ-2

ನಮ್ಮ ಮನೆ
ನಮ್ಮ ಮನೆ ಇದು ನಮ್ಮ ಮನೆ
ನಲಿವಿನ ಅರಿವಿನ ನಮ್ಮ ಮನೆ |
ರೀತಿಯ ನೀತಿಯ ಭದ್ರ ಬುನಾದಿಯ
ಮೇಲೆ ನಿಂತಿದೆ ನಮ್ಮ ಮನೆ || ಪ ||


ತಾಯಿಯ ಮಮತೆಯ ತಂದೆಯ ಪ್ರೀತಿಯ
ಸೆಲೆಯಲಿ ತೆರೆದಿದೆ ನಮ್ಮ ಮನೆ
ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ
ನಿಲುವಲಿ ನಿಂತಿದೆ ನಮ್ಮ ಮನೆ || 1 ||


ಹಕ್ಕಿಗಳುಲಿವಿಗೆ ನೇಸರನುದಯಕೆ
ಏಳುವರೆಲ್ಲರು ಮುದದಿಂದ
ಮೀಯುತ ಮಡಿಯಲಿ ನೆನೆಯುತ ದೇವಗೆ
ಭಕುತಿಯ ನಮನ ಕರದಿಂದ || 2 ||


ಅಕ್ಕತಂಗಿಯರ ಅಣ್ಣತಮ್ಮದಿರ
ಕದನಕುತೂಹಲ ಮುದವಿರಲು
ಬೆಳೆಯುತ ನಾವು ಮುಂದಿನ ಪ್ರಜೆಗಳು
ದೇಶದ ಆಸ್ತಿಯು ನಾವೆನಲು || 3 ||


ಹಬ್ಬಹರಿದಿನದಿ ಮಾವುಬಾಳೆಯು
ಸಿಂಗರಿಸಿರಲು ಹಸಿರಿಂದ
ರಂಗವಲ್ಲಿಯ ಹೊಸ್ತಿಲದೀಪವು
ರುಚಿ ರುಚಿ ಅಡಿಗೆಯು ಘಮ್ಮೆಂದು || 4 ||


ಏಳುಬೀಳಿಗೆ ಕದಲದ ಮನವು
ಛಲದಲಿ ದುಡಿಯುವ ಕೈಗಳಿವು
ಬೀಳಿಗೆ ಆಸರೆ ಏಳ್ಗೆಗೆ ಹರಕೆ
ತುಂಬಿದ ಮನೆ ಮೇಲ್ ತಾಣವು || 5 ||


ಶಾಲೆಯು ಇದುವೆ ಬದುಕಿನ ಪಾಠಕೆ
ನಾಳೆಯ ಕನಸಿಗೆ ಕೇತನವು
ದೇಶವ ಕಟ್ಟುವ ಸಂಸ್ಕೃತಿ ಸಾರಕೆ
ಕೇಶವ ಕುಲದ ನಿಕೇತನವು || 6 ||

ಬುಧವಾರ, ಜನವರಿ 4, 2012

ಸಾಧನಾ ಪಥದಲ್ಲಿ ಕೆಳದಿಕವಿಮನೆತನ

"ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ
  ಭಿನ್ನ ಭಾವ ಮರೆಯುವಾ ದೇಶಕಾಗಿ ದುಡಿಯುವಾ"


     ದಿನಾಂಕ 25-12-2011ರಂದು ಹಾಸನದಲ್ಲಿ ನಡೆದ ಕೆಳದಿ ಕವಿಮನೆತನದವರ ಹಾಗೂ ಅವರ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಉದ್ದೇಶ ಸಾಧನೆಯಲ್ಲಿ ಯಶಸ್ಸು ಕಂಡಿತೆಂದರೆ ಉತ್ಪ್ರೇಕ್ಷೆಯಲ್ಲ. ಇಂದಿನ ವ್ಯವಸ್ಥೆಯಲ್ಲಿ 'ನಾವಾಯಿತು, ನಮ್ಮ ಸ್ವಂತ ಕುಟುಂಬದ ವಿಷಯವಾಯಿತು, ಇತರ ವಿಷಯಗಳಿಗೆ ಪುರುಸೊತ್ತಿಲ್ಲ' ಎನ್ನುವ ಮನಸ್ಥಿತಿಯವರೇ ಬಹಳವಿದ್ದಾಗ ಎಲ್ಲರನ್ನೂ ಜೊತೆಗೂಡಿಸಿ ಸಜ್ಜನಶಕ್ತಿಯ ಜಾಗರಣೆ ಮಾಡುವ ಮತ್ತು ಅದರಲ್ಲಿ ಪ್ರಗತಿ ಕಾಣುವ ಕೆಲಸ ಸುಲಭವೇನಲ್ಲ. ದೂರ ದೂರದ ಊರುಗಳಿಂದ ಬಂದಿದ್ದ 150 ಬಂಧುಗಳು ಅಂದು ಒಟ್ಟಿಗೆ ಸೇರಿ ಸಂಭ್ರಮಿಸಿದ ದಿನ. ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಆಶೀರ್ವಾದದೊಂದಿಗೆ ಸಂಚಾಲಕರುಗಳಾಗಿ ಹಾಸನದ ಶ್ರೀ ಕ.ವೆಂ. ನಾಗರಾಜ್ ಮತ್ತು ಶಿವಮೊಗ್ಗದ ಶ್ರೀ ಕವಿಸುರೇಶರ ಪ್ರಯತ್ನ, ಆಯೋಜಕರಾಗಿ ಶ್ರೀಮತಿ ಮತ್ತು ಶ್ರೀ ಕುಮಾರಸ್ವಾಮಿಯವರು ಕೈಜೋಡಿಸಿದುದು, ಮಿತ್ರ ಹರಿಹರಪುರ ಶ್ರೀಧರರ ನೆರವು, ಸ್ಪಂದಿಸಿದ ಬಂಧುವರ್ಗದಿಂದಾಗಿ ಭಾಗವಹಿಸಿದವರೆಲ್ಲರಿಗೆ ಸ್ಮರಣೀಯ ಸಮಾವೇಶವೆನಿದ್ದು ಸುಳ್ಳಲ್ಲ. ಸಮಾವೇಶದ ಸಂಕ್ಷಿಪ್ತ ನೋಟ ನಿಮಗಾಗಿ, ಇದೋ ಇಲ್ಲಿ!


     ಸಮಯಪಾಲನೆಗೆ ಮಹತ್ವ ನೀಡಿ ಸರಿಯಾಗಿ 10-00 ಘಂಟೆಗೆ ಕಾರ್ಯಕ್ರಮ ಆರಂಭಿಸಲಾಯಿತು. ಅದಕ್ಕೆ ಮುಂಚೆ ಬಂದಿದ್ದವರೆಲ್ಲರಿಗೆ ರುಚಿರುಚಿಯಾದ ಉಪಹಾರದ ವ್ಯವಸ್ಥೆಯಾಗಿತ್ತು. ವೇದಿಕೆಯಲ್ಲಿ ಮನೆತನದ ಅತ್ಯಂತ ಹಿರಿಯ ಸದಸ್ಯರಾದ ಬೆಂಗಳೂರಿನ ಶ್ರೀ ಸಾ.ಕ. ಕೃಷ್ಣಮೂರ್ತಿಯವರನ್ನು ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಗಳ ಸ್ಥಾಪಕ ಮುಖ್ಯಸ್ಥರು, ವಿಶೇಷ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಭೋದನ್ ಸಂಸ್ಥೆಯ ಸಂಯೋಜಕರಾದ ಶ್ರೀ ಸು. ರಾಮಣ್ಣನವರು ಮತ್ತು ಸಮಾವೇಶದ ಆಯೋಜಕ ದಂಪತಿಗಳಾದ ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಕುಮಾರಸ್ವಾಮಿಯವರುಗಳನ್ನು ಆಸೀನಗೊಳಿಸಲಾಯಿತು. ಕುಮಾರಿ ಸ್ಫೂರ್ತಿಆತ್ರೇಯಳ ಗಣೇಶ ಸ್ತುತಿ ನೃತ್ಯದೊಂದಿಗೆ ಶುಭಾರಂಭವಾದರೆ, ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಸಮಾವೇಶದ ಉದ್ಘಾಟನೆ ಮಾಡಿದರು.


ವೇದಿಕೆಯಲ್ಲಿ: ಶ್ರೀ/ಶ್ರೀಮತಿ:  ಸಾ.ಕ.ಕೃಷ್ಣಮೂರ್ತಿ, ಸು.ರಾಮಣ್ಣ, ಸಿ.ಎಸ್.ಕೃಷ್ಣಸ್ವಾಮಿ, ಗಿರಿಜಾಂಬಾ, ಕುಮಾರಸ್ವಾಮಿ
ನಿರೂಪಕಿ: ಬಿಂದು ರಾಘವೇಂದ್ರ
ಸ್ಫೂರ್ತಿಆತ್ರೇಯಳಿಂದ ಗಣೇಶ ಸ್ತುತಿ ನೃತ್ಯ 
  ಕಳೆದ ವರ್ಷ ವಿಧಿವಶರಾದ ಬೆಂಗಳೂರಿನ ಅಡ್ವೋಕೇಟ್ ಶ್ರೀ ಬಿ.ಎನ್. ಲಕ್ಷ್ಮಣರಾವ್, ಹಾಸನ ತಾ. ನಿಟ್ಟೂರಿನ ನಿವೃತ್ತ ಉಪಾಧ್ಯಾಯ ಶ್ರೀ ರಾಮರಾವ್ ಮತ್ತು ಬೀರೂರಿನ ಶ್ರೀಮತಿ ವಿಮಲಮ್ಮಶೇಷಗಿರಿರಾವ್ ಇವರುಗಳ ಆತ್ಮಗಳಿಗೆ ಸದ್ಗತಿ ಕೋರಿ ಎರಡು ನಿಮಿಷಗಳ ಕಾಲ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಸನದ ಶ್ರೀ ಬಿ.ಎನ್. ಸತ್ಯಪ್ರಸಾದರವರು ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ಮಾಡಿಕೊಡುವುದರೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ಶ್ರೀ ಬಿ.ಎನ್.ಸತ್ಯಪ್ರಸಾದರಿಂದ ಸ್ವಾಗತ, ಪರಿಚಯ
        'ಕವಿಕಿರಣ' ಪತ್ರಿಕೆಯ ಸಂಪಾದಕ ಶ್ರೀ ಕ.ವೆಂ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮಾವೇಶಗಳ ಹಿನ್ನೆಲೆ, ಕಾರ್ಯಕ್ರಮಗಳ ಮಹತ್ವ, ಕವಿಕಿರಣ ಪತ್ರಿಕೆಯ ಧ್ಯೇಯೋದ್ದೇಶ, ಕವಿಪ್ರಕಾಶನದ ಪ್ರಕಟಣೆಗಳು, ಇತ್ಯಾದಿ ಸಂಗತಿಗಳ ಕುರಿತು ವಿವರಿಸಿ ಸಾಧನಾಪಥದಲ್ಲಿ ಮುನ್ನಡೆದು ಮನೆತನದ ಪರಂಪರೆಯನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಶ್ರೀ ಕ.ವೆಂ.ನಾಗರಾಜರಿಂದ ಪ್ರಾಸ್ತಾವಿಕ ನುಡಿ

     "ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ" ಎಂಬ ವಿಷಯದಲ್ಲಿ ಶ್ರೀ ಸು.ರಾಮಣ್ಣನವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮ ಸಮಾವೇಶದ ಪ್ರಮುಖ ಅಂಗವಾಗಿತ್ತು ಮತ್ತು ಪ್ರಭಾವಿಯಾಗಿತ್ತು. ಒಂದು ಮಾದರಿ ಕುಟುಂಬ ಹೇಗಿರಬೇಕು ಎಂಬ ಬಗ್ಗೆ ಒಂದು ಹಾಡನ್ನು ಹೇಳಿಕೊಟ್ಟು ಎಲ್ಲರಿಂದಲೂ ಹೇಳಿಸುವುದರಿಂದ ಪ್ರಾರಂಭವಾದ ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು, ಪ್ರೇರಣೆ ಪಡೆದರು. ಹೆಚ್ಚಿನವರಿಗೆ ಇದು ಒಂದು ವಿಭಿನ್ನ ಕಾರ್ಯಕ್ರಮವೆನಿಸಿದ್ದು, ಈ ಸಂವಾದ ನೀಡಿದ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಸಂವಾದ ನಡೆಸುತ್ತಿರುವ ಶ್ರೀ ಸು.ರಾಮಣ್ಣನವರು
ಇವರುಗಳೂ ಸಂವಾದದಲ್ಲಿ ಭಾಗಿಗಳು
ಶ್ರೀ ಸು.ರಾಮಣ್ಣನವರಿಗೆ ಸನ್ಮಾನ
     ಕವಿಮನೆತನದ ಮೂಲಪುರುಷ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ Keladi Nrupa Vijaya’  ಅನ್ನು ಮುಖ್ಯ ಅತಿಥಿ ಶ್ರೀ ಕೃಷ್ಣಸ್ವಾಮಿಯವರು ಬಿಡುಗಡೆಗೊಳಿಸಿ ಈ ಕೃತಿ ಸಾರಸ್ವತ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ ಎಂದು ಶ್ಲಾಘಿಸಿದರು. ಕೃತಿ ಪರಿಚಯವನ್ನು ಸಾಗರದ ಶ್ರೀಮತಿ ಸುಮನಾವೆಂಕಟೇಶ ಜೋಯಿಸ್ ಮಾಡಿಕೊಟ್ಟರು. ಲೇಖಕ ಸುರೇಶರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಸುರೇಶ್ ಮಾತನಾಡಿ ತಮಗೆ ಇದು ಸ್ಮರಣೀಯವಾಗಿದೆಯೆಂದು ತಿಳಿಸಿ, ಈ ಕೃತಿ ತಮ್ಮ ಜೀವಮಾನದಲ್ಲಿ ಮಾಡಿದ ನೆನಪಿಟ್ಟುಕೊಳ್ಳುವ ಕೆಲಸವಾಗಿದೆಯೆಂದರು. ಕವಿಕಿರಣದ ಡಿಸೆಂಬರ್, ೨೦೧೧ ರ ಸಂಚಿಕೆಯನ್ನೂ ಬಿಡುಗಡೆಗೊಳಿಸಿ ಬಂದವರೆಲ್ಲರಿಗೆ ವಿತರಿಸಲಾಯಿತು. ಕ.ವೆಂ.ನಾಗರಾಜರ ಚಿಂತನಶೀಲ ಮುಕ್ತಕಗಳಿರುವ ಪುಸ್ತಕ ಮೂಢ ಉವಾಚದ ಪ್ರತಿಗಳನ್ನೂ ಸಹ ಬಂಧುಗಳಿಗೆ ಉಚಿತವಾಗಿ ನೀಡಲಾಯಿತು.
ಕವಿಸುರೇಶರ ಆಂಗ್ಲಭಾಷೆಯ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ
ಶ್ರೀಮತಿ ಸುಮನಾ ವೆಂಕಟೇಶಜೋಯಿಸರಿಂದ ಕೃತಿ ಪರಿಚಯ
ಲೇಖಕ ಕವಿಸುರೇಶರ ಮಾತು
ಲೇಖಕರಿಗೆ ಸನ್ಮಾನ
'ಕವಿಕಿರಣ'ದ ಡಿಸೆಂಬರ್ ಸಂಚಿಕೆ ಬಿಡುಗಡೆ
ಮುಖ್ಯ ಅತಿಥಿಗಳ ಮೆಚ್ಚುಗೆಯ ನುಡಿಗಳು
     ಹಿರಿಯರಾದ ಬೆಂಗಳೂರಿನ ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾವ್, ಶಿವಮೊಗ್ಗದ ಶ್ರೀಮತಿ ಸೀತಾಲಕ್ಷ್ಮಮ್ಮಕೃಷ್ಣಮೂರ್ತಿ ಮತ್ತು ಕೆಳದಿಯ ಶ್ರೀ ಗುಂಡಾಜೋಯಿಸರನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀ ಗುಂಡಾಜೋಯಿಸರು ಹೊರಗಿನವರ ಸನ್ಮಾನಕ್ಕಿಂತ ಬಂಧುಗಳು ಮಾಡಿದ ಸನ್ಮಾನ ತಮಗೆ ತುಂಬಾ ಸಂತೋಷ ನೀಡಿದೆಯೆಂದು ಕೃತಜ್ಞತೆ ಅರ್ಪಿಸಿದರು. ಶ್ರೀ ಕುಮಾರಸ್ವಾಮಿಯವರು ಮಾತನಾಡುತ್ತಾ ಭಾವುಕರಾಗಿದ್ದು ಸಮಾವೇಶದ ಯಶಸ್ಸು ಬಿಂಬಿಸಿತ್ತು. ಆಯೋಜಕರು, ಸಮಾವೇಶಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾಯರನ್ನು ಸನ್ಮಾನಿಸಿದಾಗ ಸಂಭ್ರಮಿಸಿದ ಬಂಧುಗಳು
ಶ್ರೀಮತಿ ಸೀತಾಲಕ್ಷ್ಮಮ್ಮ ಕೃಷ್ಣಮೂರ್ತಿಯವರನ್ನು ಸನ್ಮಾನಿಸಿದಾಗ
ಶ್ರೀ ಕೆಳದಿ ಗುಂಡಾಜೋಯಿಸರನ್ನು ಸನ್ಮಾನಿಸಿದಾಗ ಹಿಗ್ಗಿದ ಕುಟುಂಬವರ್ಗ
ಸಮಾವೇಶದ ಅಯೋಜಕರ ಬಂಧುವರ್ಗದ ಸಂಭ್ರಮ
ಸಹಕಾರಿಗಳು ಶ್ರೀ ಹರಿಹರಪುರ ಶ್ರೀಧರ ದಂಪತಿಗಳಿಗೆ ಅಭಿನಂದನೆ
ಸಹಕಾರಿ ಶ್ರೀ ಪಾಂಡುರಂಗ, ಹಾಸನ ಇವರಿಗೆ ಅಭಿನಂದನೆ
     ಇದೇ ಸಂದರ್ಭದಲ್ಲಿ ಒಂದು ಪ್ರದರ್ಶಿನಿ ಏರ್ಪಡಿಸಿದ್ದು ಇದರಲ್ಲಿ ಕವಿಮನೆತನದವರು ರಚಿಸಿದ ಕಲಾಕೃತಿಗಳು, ವರ್ಣಚಿತ್ರಗಳು, ಪುಸ್ತಕಗಳು, ಭಾವಚಿತ್ರಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗಿದ್ದು ಇದು ಇತರರಿಗೂ ಸಹ ಏನನ್ನಾದರೂ ಮಾಡಲು ಪ್ರೇರೇಪಿಸಲು ಸಹಕಾರಿಯಾಯಿತು ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಶ್ರೀ ಸಾ.ಕ.ಕೃಷ್ಣಮೂರ್ತಿಯವರು ಚಿತ್ರಗಳನ್ನು ಪ್ಲೈವುಡ್ ಮೇಲೆ ಅಂಟಿಸಿ ಕಲಾರಚನೆಗೆ ಅನುಗುಣವಾಗಿ ಕತ್ತರಿಸಿ ಸಿದ್ಧಪಡಿಸಿದ ಕೃತಿಗಳು ಗಮನ ಸೆಳೆದವು.
 ಪ್ರದರ್ಶಿನಿಯ ಕೆಲವು ದೃಷ್ಯಗಳು


     ಬೆಂಗಳೂರಿನ ಶ್ರೀಮತಿ ಸುಮಾರಾಜೇಶ್, ಕುಮಾರಿಯರಾದ ಸ್ಫೂರ್ತಿಆತ್ರೇಯ ಮತ್ತು ಲಕ್ಷ್ಮಿಶ್ರೀಭಾರದ್ವಾಜರವರುಗಳಿಂದ ನಡೆದ ಭರತನಾಟ್ಯ ಕಾರ್ಯಕ್ರಮ ಕಲಾರಸಿಕರಿಗೆ ಮನದಣಿಸುವಲ್ಲಿ ಯಶಸ್ವಿಯಾಯಿತು. ಶ್ರೀಮತಿ ಸುಮಾರಾಜೇಶರು ಬೆಂಗಳೂರಿನಲ್ಲಿ ಸ್ಫೂರ್ತಿ ನಾಟ್ಯಶಾಲೆ ನಡೆಸುತ್ತಿದ್ದು ಹೆಸರಾಂತ ಕಲಾವಿದೆಯಾಗಿದ್ದಾರೆ. ಕುಮಾರಿ ಪಲ್ಲವಿ ಸತ್ಯಪ್ರಸಾದರ ಹಾಡುಗಾರಿಕೆ ಕೇಳುಗರಿಗೆ ಹಿತವಾದ ಅನುಭವ ನೀಡಿತು. ಪುಟಾಣಿ ಅಕ್ಷಯಳ ಏಕಪಾತ್ರಾಭಿನಯ. ಅನಘನ ಭಗವದ್ಗೀತಾ ಪಠಣ, ಕು. ಕವನ ಸಂಗಡಿಗರಿಂದ ಡ್ಯಾನ್ಸ್, ಶ್ರೀ ಲಕ್ಷ್ಮೀಶರ ಹಾಡು, ಡಾ. ಬಿ.ಎಸ್.ಆರ್. ದೀಪಕ್‌ರ ಸಂಗೀತ, ಅನೇಕ ಬಂಧುಗಳು, ವಿಶೇಷವಾಗಿ ಪುಟಾಣಿಗಳು ನಡೆಸಿಕೊಟ್ಟ ವಿವಿಧ ಮನರಂಜನಾ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿದವು. ಶ್ರೀಮತಿ ಬಿಂದುರಾಘವೇಂದ್ರರವರ ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯಾಹ್ನದ ಭೋಜನಾನಂತರ ಸಹ ಮನರಂಜನೆ ಕಾರ್ಯಕ್ರಮಗಳು ಮುಂದುವರೆದವು. ವಂದನೆ, ಅಭಿನಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಾಗ ಎಲ್ಲರೂ ಸ್ಮರಣೀಯ ನೆನಪುಗಳೊಂದಿಗೆ ತಮ್ಮ ತಮ್ಮ ಊರುಗಳಿಗೆ ತೆರಳಿದರೆ ಸಮಾವೇಶಕ್ಕಾಗಿ ಶ್ರಮಿಸಿದವರಲ್ಲಿ ಸಮಾವೇಶ ಸಫಲಗೊಂಡ ಬಗ್ಗೆ ಸಾರ್ಥಕಭಾವ ಮೂಡಿತ್ತು.
ಸ್ಫೂರ್ತಿ ಆತ್ರೇಯ
 ಸುಮಾ ರಾಜೇಶ್


ಲಕ್ಷ್ಮಿಶ್ರೀ ಭಾರದ್ವಾಜ್
ಪಲ್ಲವಿ ಸತ್ಯಪ್ರಸಾದರಿಂದ ಸುಮಧುರ ಹಾಡುಗಳು
ಅಕ್ಷಯ, ಓರ್ವ  ಪುಟಾಣಿ, ಅನಘ, ಡಾ. ದೀಪಕ್.
ಅಂಬಿಕಾ, ಗೋಪಾಲಕೃಷ್ಣ, ಅಕ್ಷಯ, ಲಕ್ಷ್ಮೀಶ



ಇವರುಗಳೇ ಸಕ್ರಿಯರಾಗಿ ಪಾಲುಗೊಂಡು ಸಮಾವೇಶವನ್ನು ಸಾರ್ಥಕಗೊಳಿಸಿದವರು