ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಮಾರ್ಚ್ 15, 2014

ದೇವನ ನೆನೆಯುವೆ

     ಬೆಳಗಿನ ಸಮಯ ಏಳುವಾಗ ದೇವಸ್ಮರಣೆ ಮಾಡುವ ಸಲುವಾಗಿ ಹೇಳುವ ಋಗ್ವೇದದ ಮಂತ್ರಗಳು 7.41.1ರಿಂದ5ರ ಪ್ರೇರಣೆಯಿಂದ ಇದನ್ನು ರಚಿಸಿರುವೆ. ಭಗಿನಿ ಕಲಾವತಿಯವರು 'ಈಶಾವಾಸ್ಯಮ್'ನಲ್ಲಿ ನಡೆಯುವ ಅಗ್ನಿಹೋತ್ರ ಮತ್ತು ವೇದಾಭ್ಯಾಸದ ಸಂದರ್ಭದಲ್ಲಿ ಈ ರಚನೆಗೆ ರಾಗ ಸಂಯೋಜಿಸಿ ಹಾಡಿದ್ದಾರೆ. ಇದನ್ನು ಶ್ರೀ ಹರಿಹರಪುರಶ್ರೀಧರರು ಫೇಸ್ ಬುಕ್ಕಿನಲ್ಲೂ ಶೇರ್ ಮಾಡಿದ್ದು, ಆಲಿಸಿದ ಹುಬ್ಬಳ್ಳಿಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ದೂರವಾಣಿ ಮೂಲಕ ನಮ್ಮೆಲ್ಲರಿಗೆ ಆಶೀರ್ವದಿಸಿ ಇಂತಹ ಪ್ರಯತ್ನ ಮುಂದುವರೆಸಲು ಹೇಳಿದ್ದು ಆನಂದ ತಂದಿದೆ. ನೀವೂ ಆಲಿಸಿ. ಸಾಹಿತ್ವವನ್ನೂ ಕೆಳಗೆ ಕೊಟ್ಟಿರುವೆ.
-ಕ.ವೆಂ.ನಾಗರಾಜ್.




ಬೆಳಗಾಗಿ ನಾನೆದ್ದು ದೇವನ ನೆನೆಯುವೆ
ಪರಮಸಂಪದದೊಡೆಯ ತೇಜಸ್ವಿಯ |
ಭೂತಾಯಿಯಂತೆ ಮತ್ತೆ ಆಗಸದಂತೆ
ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||

ಬುದ್ಧಿಗೊಡೆಯ ಜಗದೀಶನ ನೆನೆಯುವೆ
ಕರ್ಮಫಲದಾತ ಜ್ಯೋತಿರ್ಮಯನ |
ಮಂಗಳಮಯ ಸಕಲ ಲೋಕಪ್ರಿಯ
ದೇವಾಧಿದೇವನಿಗೆ ಶರಣೆನ್ನುವೆ || ೨ ||

ನಿತ್ಯವಿಜಯಿಯಾದ ಒಡೆಯನ ನೆನೆಯುವೆ 
ಸಕಲ ಲೋಕಾಧಾರ ತೇಜಸ್ವಿಯ |
ಪಾತಕಿಕಂಟಕ ಸತ್‌ಪ್ರಕಾಶ ಈಶ
ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||

ಮನೋಧಿನಾಯಕ ದೇವನ ಬೇಡುವೆ
ಕೊಡು ಮತಿಯ ಕೊಡು ಸಕಲ ಸಂಪತ್ತಿಯ |
ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ
ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||

ಪರಮ ಬೆಳಕಿನೊಡೆಯ ದೇವನ ಬೇಡುವೆ
ಕರುಣಿಸು ರಕ್ಷೆ ಮೇಣ್ ಸಕಲಸುಖವ |
ಸಜ್ಜನರ ಸುಮತಿಯ ಪಾಲಿಸುವ ಮನವ
ನೀಡೆಂದು ಬೇಡುತ ಶರಣೆನ್ನುವೆ || ೫ ||

ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ
ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |
ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು
ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||
-ಕ.ವೆಂ.ನಾ.
************** 
ಪ್ರೇರಣೆ:
ಓಂ ಪ್ರಾತರಗ್ನಿಂ ಪ್ರಾತರಿಂದ್ರಂ ಹವಾಮಹೇ ಪ್ರಾತರ್ಮಿತ್ರಾವರುಣಾ ಪ್ರಾತರಶ್ವಿನಾ |
ಪ್ರಾತರ್ಭಗಂ ಪೂಷಣಂ ಬ್ರಹ್ಮಣಸ್ಪತಿಂ ಪ್ರಾತಃ ಸೋಮಮುತ ರುದ್ರಂ ಹುವೇಮ || (ಋಕ್.೭.೪೧.೧.)

ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾಃ |
ಆಧ್ರಶ್ಚಿದ್ ಯಂ ಮನ್ಯಮಾನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹ || (ಋಕ್.೭.೪೧.೨.)

ಓಂ ಭಗ ಪ್ರಣತೇರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವಾ ದದನ್ನಃ |
ಭಗ ಪ್ರ ಣೋ ಜನಯ ಗೋಭರಶ್ವೈರ್ಭಗ ಪ್ರ ನೃಭಿರ್ನೃವಂತಃ ಸ್ಯಾಮ || (ಋಕ್.೭.೪೧.೩.)

ಓಂ ಉತೇದಾನೀಂ ಭಗವಂತಃ ಸ್ಯಾಮೋತ ಪ್ರಪಿತ್ವ ಉತ ಮಧ್ಯೇ ಅಹ್ನಾಂ |
ಉತೋದಿತಾ ಮಘವನ್ ತ್ಸೂರ್ಯಸ್ಯ ವಯಂ ದೇವಾನಾಂ ಸುಮತೌ ಸ್ಯಾಮ || (ಋಕ್.೭.೪೧.೪.)

ಓಂ ಭಗ ಏವ ಭಗವಾನ್ ಅಸ್ತು ದೇವಸ್ತೇನ ವಯಂ ಭಗವಂತಃ ಸ್ಯಾಮ | 
ತಂ ತ್ವಾ ಭಗ ಸರ್ವ ಇಜ್ಜೋಹವೀ ತಿ ಸ ನೋ ಭಗ ಪುರಏತಾ ಭವೇಹಃ || (ಋಕ್.೭.೪೧.೫.) 

ಸೋಮವಾರ, ಜುಲೈ 15, 2013

ಹೆಸರೊಂದಿಟ್ಟರೆನಗೆ

ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ
ಹೆಸರೊಂದಿಟ್ಟರೆನಗೆ || ಪ ||

ಎನಿತು ಜನನವೋ ಎನಿತು ಮರಣವೋ
ಯಾವ ಜೀವವೋ ಎಂಥ ಮಾಯೆಯೋ
ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||

ಹಿಂದೆ ಇರದ ಮುಂದೆ ಇರದಿಹ
ತನುವ ಕಣಕಣ ಚಣಚಣಕೆ ಬದಲು
ಇಂತಪ್ಪ ತನುವೆ ತಾನು ಎಂದವಗೆ ಹೆಸರೊಂದಿಟ್ಟರೆನಗೆ ||

ಪಂಚತತ್ವದ ದೇಹ ಬಣ್ಣ ಬಣ್ಣದ ಬಟ್ಟೆ
ಚೈತನ್ಯವಿಲ್ಲದಿರೆ ಬರಿಯ ಲೊಳಲೊಟ್ಟೆ
ಚೇತನದ ಚೆಲುವ ಕಂಡರಿಯದವಗೆ ಹೆಸರೊಂದಿಟ್ಟರೆನಗೆ ||

ಅವನ ಕರುಣೆ ನವರಸದ ಅರಮನೆ
ಚಲಿಪ ಅರಮನೆಗೊಡೆಯನೆಂದು
ಬೀಗಿ ರಾಗದಿ ನಿಜವ ಮರೆತವಗೆ ಹೆಸರೊಂದಿಟ್ಟರೆನಗೆ ||

ಎನಿತು ಪುಣ್ಯವೋ ಮನುಜನಾಗಿಹೆ
ಮತಿಯ ಬಿಟ್ಟರೆ ಜಾರಿಹೋಗುವೆ
ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||

ಹೆಸರು ಹೆಸರೆಂದು ಕೊಸರುತಿಹರು
ಅರಿತವರೆ ಬಿಡರು ಹೆಸರ ಹಂಬಲ
ಹೆಸರು ಹಸಿರೆಂದುಸಿರುವವಗೆ ಹೆಸರೊಂದಿಟ್ಟರೆನಗೆ ||

-ಕ.ವೆಂ.ನಾಗರಾಜ್.



ಗುರುವಾರ, ಮಾರ್ಚ್ 28, 2013

ನಾನು


ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು
ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ||

ಸಾಯಲಾರದ ನಾನು ಬದುಕಲಾರದ ನಾನು
ನಾನಾ ಸಂತೆಯಲಿ ಸರಕಾದ ನಾನು
ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು
ಕಣ್ಣಿದ್ದು ಕಾಣದಾ ಕುರುಡನೇ ನಾನು || ೧ ||

ಅವನಿಗೆ ಅವ ನಾನು ಇವನಿಗೆ ಇವ ನಾನು
ಅವನಿಯೊಳಾಳ್ವಿಕೆ ಮಾಡಿಹುದೇ ನಾನು
ನಾನು ನಾನೆನುತ ಅವಿರತ ಸೆಣಸಾಡಿ
ನರರು ಹತರಾಗಿ ಗೆದ್ದಿದ್ದೆ ನಾನು || ೨ ||

ಬಗೆ ಬಗೆ ಮುಖವಾಡ ಧರಿಸಿಕೊಂಡಿಹ ನಾನು
ಒಳ ನಾನು ಮರೆಯಾಗಿ ನರಳಿದ್ದೇ ನಾನು
ಕಪಟ ಬಂಧವ ಮುರಿದು ಹೊರಬರಲು ನಾನು
ಉದ್ಧಾರವಾದದ್ದೇ ನಿಜ ನಾನು ನಾನು || ೩ ||
***************
-ಕ.ವೆಂ.ನಾಗರಾಜ್.

ಸೋಮವಾರ, ಜುಲೈ 16, 2012

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ


ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ
ಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ || 


ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬ
ವಿವೇಕವನೆ ಮರೆಸಿ ತುಳಿಯುವವನೊಬ್ಬ
ಕೂಡಿಡುವ ಕಟಪವನು ಕಲಿಸುವವನೊಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಹಾಳವ್ವ || ೧ ||


ನನದೆಂಬ ಭಾವವನು ಮೂಡಿಸುವನೊಬ್ಬ
ಸೊಕ್ಕಿನಿಂ ಮೆರೆಯೆನುತ ಉಬ್ಬಿಸುವನೊಬ್ಬ
ಉರಿವ ಒಡಲಿಗೆ ತುಪ್ಪ ಹಾಕುವನು ಒಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಗೋಳವ್ವ || ೨ ||


ಅರಿಗಳಾರೆನಿಸಿ ಜಗದಿ ಮೆರೆದಿಹರವ್ವ್ವ
ಒಬ್ಬರಿಗೆ ಒಬ್ಬರು ಜೊತೆಯಾಗಿ ಇಹರವ್ವ
ಶೂರಾಧಿಶೂರರೇ ಮಣ್ಣು ಮುಕ್ಕಿಹರವ್ವ
ಮೋಹಿನಿ ಮಾಯವ್ವ ನಿಷ್ಕರುಣಿ ನೀನವ್ವ || ೩ ||


ಕಾಮ ಕ್ರೋಧಗಳು ಹಾಳು ಮಾಡಿದವವ್ವ
ಮದ ಮಚ್ಚರಗಳು ಚೂರಿ ಹಾಕಿಹವವ್ವ
ಲೋಭ ಮೋಹಗಳು ತುಳಿದಿಹವು ಕಾಣವ್ವ 
ಎಷ್ಟು ಕಾಡುತಿಯವ್ವ ದೇವರೇ ದಿಕ್ಕವ್ವ || ೪ ||
*************
-.ಕವೆಂ.ನಾಗರಾಜ್.

ಭಾನುವಾರ, ಜೂನ್ 3, 2012

ಶರಣೋ ಶರಣು


ನೋವನಿತ್ತ ದೇವನಿಗೆ ಶರಣೋ ಶರಣು |
ನಲಿವನಿತ್ತ ದೇವನಿಗೆ ಶರಣೋ ಶರಣು ||


ಬರಿಗೈಲಿ ಬಂದೆನೆಂದು ತೋರಿಹೆ ಶರಣು
ಬರಿಗೈಲಿ ಪೋಪೆನೆಂದು ಹೇಳಿಹೆ ಶರಣು |
ನನದೆಂಬ ಮೋಹಪಾಶ ಹರಿಯೋ ಶರಣು
ಅತ್ತಲಿತ್ತ ಸರಿಯದಂತೆ ನೋಡಿಕೊ ಶರಣು ||


ನಿಂದಕರ ವಂದಿಸಲು ಕಲಿಸಿಹೆ ಶರಣು
ಪೀಡಕರೇ ಗುರುವೆಂದು ಸಾರಿಹೆ ಶರಣು |
ಅನುಭವದ ಬುತ್ತಿ ಯಿತ್ತು ತಣಿಸಿಹೆ ಶರಣು
ಕರಪಿಡಿದು ನಡೆಸಿರುವೆ ಶರಣೋ ಶರಣು ||

ಒಡಲಾಳದ ರಜತಮವ ಕಳೆಯೋ ಶರಣು
ಒಳಗಣ್ಣಿನ ಬೆಳಕಿನಲಿ ನಡೆಸೋ ಶರಣು |
ಒಳದನಿಯು ಕೇಳುವಂತೆ ಮಾಡೋ ಶರಣು
ಒಳ ಹೊರಗು ಒಂದೆನಿಸೆ ಶರಣೋ ಶರಣು ||
***************
-.ಕ.ವೆಂ.ನಾಗರಾಜ್.

ಶನಿವಾರ, ಏಪ್ರಿಲ್ 7, 2012

ಕೆಟ್ಟವರಿರಬೇಕು


ಕೆಟ್ಟವರಿರಬೇಕ . . ಜಗದಿ. .  ಕೆಟ್ಟವರಿರಬೇಕ. .
ಕೆಟ್ಟವರಿದ್ದರೆ ಒಳಿತಿಗೆ ಬೆಲೆಯು ಕೆಟ್ಟವರಿರಬೇಕ. .



ರಕ್ಕಸರಿರಬೇಕ . . ಹಿಂಸೆಯು
ಮಿತಿಯ ಮೀರಬೇಕ . .
ಸುಮ್ಮನೆ ಕುಳಿತಿಹ ಸಜ್ಜನ
ಶಕ್ತಿ ಮೇಲೆ ಏಳಲಾಕ . .


ರಾವಣರಿರಬೇಕ . . ನೀತಿಯು
ಶೋಕಿಸುತಿರಬೇಕ . .
ರಾಮರು ಬಂದು ಶಿರಗಳ ತರಿದು
ನ್ಯಾಯವ ತರಲಾಕ . .


ಕಷ್ಟವು ಬರಬೇಕ . . ಬಂದು
ನಷ್ಟವ ತರಬೇಕ . .
ಕಷ್ಟ ನಷ್ಟಗಳು ಜೀವವ ಮಾಗಿಸಿ
ದೇವನ ನೆನಿಲಾಕ . .


ಸೋಲು ಕಾಡಬೇಕ . . ಸೋತು
ಸುಣ್ಣವಾಗಬೇಕ . .
ಸೋಲನು ಮೆಟ್ಟಿ ಗೆಲ್ಲುವ
ಛಲವೆ ನಮ್ಮದಾಗಬೇಕ . . 


ಬೆಂಕಿ ಚಿಮ್ಮಬೇಕ . . ಚಿಮ್ಮಿ
ಕೆಡುಕ ನುಂಗಬೇಕ. .
ಜಲವು ಉಕ್ಕಬೇಕ . . ಪಾಪವ
ಮುಕ್ಕಿ ಮುಗಿಸಲಾಕ . .
***********
-ಕ.ವೆಂ.ನಾಗರಾಜ್.

ಶನಿವಾರ, ಮಾರ್ಚ್ 17, 2012

ತಿಳಿದೆ ನಾನು


ತಿಳಿದೆ ನಾನು
ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು
ತಿಳಿದೆ ನಾನು
ಕೆಲರು ಒಡನಿರುವರು ನಾನು ಬೇಕೆಂದಲ್ಲ 
ಅವರಿಗೆ ನಾನು ಬೇಕಿತ್ತೆಂದು
ತಿಳಿದೆ ನಾನು 
ಯಾರನ್ನು ಇಷ್ಟಪಡುವೆನೋ ಅವರಿಂದ
ದೂರಲ್ಪಡುವೆನೆಂದು
ತಿಳಿದೆ ನಾನು
ಪ್ರಿಯರ ಸಣ್ಣ ಸುಳ್ಳು ಹೃದಯ ಒಡೆಸೀತೆಂದು
ತಿಳಿದೆ ನಾನು
ಆಸರೆಯ ಭುಜವಿಲ್ಲದೆ ಅಳುವುದು ಕಷ್ಟವೆಂದು
ತಿಳಿದೆ ನಾನು
ಇರುವ ಪ್ರೀತಿಯನ್ನೆಲ್ಲಾ ಕಳೆದುಕೊಳ್ಳದೆ
ಸ್ವಂತಕ್ಕೂ ಸ್ವಲ್ಪ ಉಳಿಸಿಕೊಳ್ಳಬೇಕೆಂದು
ತಿಳಿದೆ ನಾನು
ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು
ತಿಳಿದೆ ನಾನು
ಬದಲಾಗಬೇಕಾದ್ದು ನಾನೇ ಎಂದು
ತಿಳಿದೆ ನಾನು
ಬಯಸಿದಂತೆ ನಡೆಯುವುದು ಕಷ್ಟವೆಂದು
ತಿಳಿದೆ ನಾನು
ಬಹಿರಂಗ ಅಂತರಂಗವ ನುಂಗಿ ನೀಗೀತೆಂದು
ತಿಳಿದೆ ನಾನು
ಏಕಾಂತ ಮಾತ್ರ ನನ್ನತನವನುಳಿಸೀತೆಂದು
ತಿಳಿದೆ ನಾನು
ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು
ತಿಳಿದೆ ನಾನು
. . . . . . . . . . . . . . . . . . . . . . . . . . . . . .! 
. . . . . . . . . . . . . . . . . . . . . . . . . 
-ಕ.ವೆಂ.ನಾಗರಾಜ್.

ಗುರುವಾರ, ನವೆಂಬರ್ 3, 2011

ಜಿಹಾದ್, ಜಿಹಾದ್!

ಆತ್ಮದಾ ಕರೆಯಿದು, ಜಿಹಾದ್ ಜಿಹಾದ್|
ಒಳಗಿನ ಮೊರೆಯಿದು, ಜಿಹಾದ್ ಜಿಹಾದ್|


ವೈರಿಗಳು ಹೊರಗಿಲ್ಲ ಅದೆಲ್ಲ ಬರಿಯ ಸುಳ್ಳು,
ನಿಜವೈರಿ ಒಳಗಿಹನು ಹೊರಗೆಳೆದು ತಳ್ಳು
ಅಂಧಕಾರ ಮೂಡಿಸುವ ಕಾಮ ನಿನ್ನ ವೈರಿ,
ಬುದ್ಧಿಯನ್ನು ದಹಿಸುವ ಕ್ರೋಧ ನಿನ್ನ ವೈರಿ,
ವೈರಿಗಳ ತರಿಯೋಣ ಜಿಹಾದ್ ಜಿಹಾದ್|


ನರರ ತರಿದು ಗೆಲ್ವೆನೆಂದು ಕಾಣದಿರು ಕನಸು
ಕಸುವಿದ್ದರೆ ಒಳಗಿರುವ ವೈರಿಯನ್ನು ಮಣಿಸು
ಮೋಹ ಕೊರಳಿಗುರುಳು ಕುಣಿಕೆಯನ್ನು ಸರಿಸು
ಹರಿಹರಿದು ತಿನ್ನುತಿಹ ಮದವ ಮೆಟ್ಟಿ ಕೊಲ್ಲು
ಕೊಲ್ಲೋಣ ಕೊಲ್ಲೋಣ ಜಿಹಾದ್ ಜಿಹಾದ್!


ಬಾಂಬು ಹಾಕಿ ವಿಷವನಿಕ್ಕಿ ಮಾಡಿದ್ದೇನು ನೀನು
ಮತ್ಸರದ ಕೊರಳನಮುಕಿ ಹಿಡಿಯಬಲ್ಲೆಯೇನು
ಅಡಗಿರುವ ಲೋಭವನ್ನು ಹುಡುಕಬಲ್ಲೆಯೇನು
ವೀರ ಶೂರನಾದರೆ ಹಿಡಿದು ಎಳೆದು ಸಾಯಿಸು
ಮೆಟ್ಟೋಣ ಕುಟ್ಟೋಣ ಜಿಹಾದ್ ಜಿಹಾದ್!
-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 18, 2011

ಒಳ್ಳೆಯವರೇ ಕೆಟ್ಟವರು !


ಒಳ್ಳೆಯವರೇ ಕೆಟ್ಟವರು, 
ಏಕೆಂದರೆ ಅವರು ಒಳ್ಳೆಯವರು!


ಇದ್ದದ್ದು ಇದ್ದ ಹಾಗೆ ಹೇಳುವರು,
ಎದೆಗೆ ಒದೆಸಿಕೊಳ್ಳುವರು;
ಸಾವರಿಸಿಕೊಂಡೇಳುವ ಮುನ್ನ
ಮತ್ತೆ ಬಡಿಸಿಕೊಳ್ಳುವರು;
ಏಕೆಂದರೆ ಅವರು ಒಳ್ಳೆಯವರು!


ಲಂಚ ಬೇಡ ಬೇಡವೆನುವರು;
ಬದುಕಲರಿಯದ ಮೂರ್ಖರು;
ಲಂಚ ಕೊಡಲು ಮನಸಿರದವರು;
ಕಾಯ್ದು ಬಸವಳಿಯುವರು;
ಏಕೆಂದರೆ ಅವರು ಒಳ್ಳೆಯವರು!
****************
-ಕ.ವೆಂ.ನಾಗರಾಜ್.

ಗುರುವಾರ, ಜೂನ್ 30, 2011

ಜೀವಸೆಲೆ

   


 

ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||




ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು||
 

ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||


  

ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ|
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||


****************
-ಕ.ವೆಂ. ನಾಗರಾಜ್.
(ಆಧಾರ: ಶಿವಮೊಗ್ಗದ ದಿನಪತ್ರಿಕೆ 'ಜನಹೋರಾಟ'ದಲ್ಲಿ ಪ್ರಕಟವಾದ ಕವಿ ಸುರೇಶರ 'ಒಂದು ಗೂಡಿನ ಕಥೆ' ಎಂಬ ಸಚಿತ್ರ ಲೇಖನ;                                              ಚಿತ್ರಗಳು: ಬಿ.ಎಸ್.ಆರ್. ದೀಪಕ್.)



ಬುಧವಾರ, ಜೂನ್ 29, 2011

ಅರಿವು


ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ |
ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ || ಪ ||

ಕಂಡದ್ದೆಲ್ಲ ಬಯಸಿದೆನಲ್ಲ; ಸಿಕ್ಕದೆ ಇರಲು ಶಪಿಸಿದೆನಲ್ಲ |
ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ || 1 ||

ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ |
ಚಂಚಲ ಬುದ್ಧಿ ಆಡಿದ ಆಟಕೆ ಎಡವಿ ಬಿದ್ದೆನಲ್ಲಾ || 2 ||

ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ |
ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ || 3 ||

ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ |
ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ || 4 ||

ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
ನಿನ್ನನು ಬಿಟ್ಟು ನಾನೇನೆಂಬುದ ಅರಿಯಲಿಲ್ಲವಲ್ಲಾ || 5 ||

ಕ.ವೆಂ.ನಾಗರಾಜ್.

ಸೋಮವಾರ, ಫೆಬ್ರವರಿ 21, 2011

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||


ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||


ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||


ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.



ಶುಕ್ರವಾರ, ಫೆಬ್ರವರಿ 11, 2011

ಮೊರೆ

ದಿನಾಂಕ 30-01-2011ರಂದು ಹಾಸನದಲ್ಲಿ ನಡೆದ 'ವೇದಸುಧೆ' ಅಂತರ್ಜಾಲ ತಾಣದ ವಾರ್ಷಿಕೋತ್ಸವದಲ್ಲಿ ಶ್ರೀಮತಿ ಲಲಿತಾರಮೇಶರವರು ರಾಗ ಸಂಯೋಜಿಸಿ ಹಾಡಿದ ಕವಿನಾಗರಾಜರ ರಚನೆ:


Untitled from hariharapurasridhar on Vimeo.
--ಹರಿಹರಪುರ ಶ್ರೀಧರ್.
ಸಾಹಿತ್ಯ:
ಮೊರೆ
ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ

ಸರ್ವದೂಷಿತನಾಗಿ ನೆಲೆಗಾಣದಿದೆ ಮನವು|
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂಧಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀ ನೀಡು||
************
-ಕ.ವೆಂ.ನಾ.

ಬುಧವಾರ, ಅಕ್ಟೋಬರ್ 20, 2010

ಮೊರೆ

     'ವೇದುಸುಧೆ' ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನನ್ನ ಈ ರಚನೆಯನ್ನು ಶ್ರೀಮತಿ ಲಲಿತಾ ರಮೇಶರವರು ಸುಶ್ರಾವ್ಯವಾಗಿ ಹಾಡಿದ್ದರು. ನೀವೂ ಕೇಳಿ:



ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ |
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂಧಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.
http://vimeo.com/19814385

ಶನಿವಾರ, ಅಕ್ಟೋಬರ್ 2, 2010

ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು
ಓಹೋ ನಾವ್ ಅಳಿಸುವವರು ||ಪ||

ಕುರ್ಚಿಯ ಕಾಲ್ಗಳನೊತ್ತುವೆವು
ತಡೆದರೆ ಕೈಯನೆ ಕಡಿಯುವೆವು|

ದೇಶವ ಪೊರೆಯುವ ಹಿರಿಗಣರು
ಖಜಾನೆ ಕೊರೆಯುವ ಹೆಗ್ಗಣರು|

ಜಾತ್ಯಾತೀತರು ಎನ್ನುವೆವು
ಜಾತೀಯತೆಯ ಬೆಳೆಸುವೆವು|

ಗಾಂಧಿಯ ನಾಮ ಜಪಿಸುವೆವು
ಬ್ರಾಂದಿಯ ಕುಡಿದು ಮಲಗುವೆವು|

ಬಿದ್ದರೆ ಪಾದವ ಹಿಡಿಯುವೆವು
ಎದ್ದರೆ ಎದೆಗೆ ಒದೆಯುವೆವು|

ಪಾದಯಾತ್ರೆಯನು ಮಾಡುವೆವು
ಕುರ್ಚಿಯ ಕನಸನು ಕಾಣುವೆವು|

ಗೆದ್ದವರನೆ ನಾವ್ ಕೊಳ್ಳುವೆವು
ಸ್ವಂತದ ಸೇವೆಯ ಮಾಡುವೆವು|

ಸಮಾಜ ಸೇವಕರೆನ್ನುವೆವು
ದೇಶವ ಹರಿದು ತಿನ್ನುವೆವು|
*********
-ಕವಿನಾಗರಾಜ್.

ಮಂಗಳವಾರ, ಸೆಪ್ಟೆಂಬರ್ 14, 2010

ಸಂಬಂಧ

ಯಾರೂ ಬೇಡವೆಂದವರು
ಯಾರಿಗೂ ಬೇಡವಾಗುವರು
ಸ್ವಹಿತವೇ ಮೇಲೆಂಬರು
ಇತರರನು ದೂರುವರು
ಮೂಲೆಗುಂಪಾಗುವರು


ಎಲ್ಲರೂ ಬೇಕೆಂಬವರೂ
ಯಾರಿಗೂ ಬೇಡವಾಗುವರು
ಅವರ ಪರವೆಂದಿವರು
ಇವರ ಪರವೆಂದವರು
ದೂರಿ ದೂಡಿಬಿಡುವರು
*********
-ಕ.ವೆಂ.ನಾಗರಾಜ್.

ಬುಧವಾರ, ಸೆಪ್ಟೆಂಬರ್ 1, 2010

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.

ಮಂಗಳವಾರ, ಆಗಸ್ಟ್ 17, 2010

ಕೆಂಪು ಬೆಳೆ

ಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದು
ಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದು|

ಅಸಹನೆ ಮತ್ಸರದುಪಕರಣದಿಂ ಉತ್ತಿರಲು
ದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರು|

ಸಂಶಯದ ಗೊಬ್ಬರವ ಕಾಲಕಾಲಕೆ ಹಾಕಿ
ಶಾಂತಿ ಸಹನೆಯ ಕಳೆಯ ಚಿವುಟಿ ಹಾಕಿಹರು|

ವೈಮನಸ್ಸಿನ ಬೆಳೆಯು ಅಬ್ಬರದಿ ಬೆಳೆದಿರಲು
ಆಹಾ ಎಲ್ಲಿ ನೋಡಿದರಲ್ಲಿ ಕೆಂಪಿನೋಕುಳಿಯು

ಬೆಳೆಯ ಬೆಳೆದವರು ಬೆಳೆಯನುಂಡವರು
ಅಯ್ಯೋ ಕೆಂಗಣ್ಣರಾಗಿ ಮತಿಯ ಮರೆತಿಹರು|

ಪತಿ ಪತ್ನಿಯರ ನಡುವೆ ಹೆತ್ತವರ ನಡುವೆ
ವಿರಸದುರಿಯದು ಹೊತ್ತಿ ಜ್ವಲಿಸುತಿಹುದು|

ಅತ್ತೆ ಸೊಸೆಯರ ನಡುವೆ ಸೋದರರ ನಡುವೆ
ಮತ್ಸರದ ಬೆಂಕಿ ತಾ ಹೊಗೆಯಾಡುತಿಹುದು|

ಬದುಕು ಶಾಶ್ವತವಲ್ಲ ದ್ವೇಶ ಬಿಡಿ ಎಂದವರ
ನಾಲಗೆಯ ಕತ್ತರಿಸಿ ಕರುಳ ಬಗೆದೆಳೆದಿಹರು||

************
-ಕವಿ ನಾಗರಾಜ್.

ಮಂಗಳವಾರ, ಆಗಸ್ಟ್ 10, 2010

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!


ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?


ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!


ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?


ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!


ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಗುರುವಾರ, ಆಗಸ್ಟ್ 5, 2010

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು |
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ||

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು |
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ||


ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ |
ಸಂಬಂಧ ಉಳಿಸುವ ಕಳಕಳಿಯ ಮಾತು ||


ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ |
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ||


ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ||


ದಾರಿಯದು ಸರಿಯಿರಲಿ ಅನೃತವನಾಡದಿರಿ |
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ||


ಗೌರವಿಸಿ ಹಿರಿಯರ ಕಟುಮಾತನಾಡದಿರಿ |
ಅಸಹಾಯಕರ ಶಾಪ ತಂದೀತು ಪರಿತಾಪ |


ದೇವರನು ಅರಸದಿರಿ ಗುಡಿಗೋಪುರಗಳಲ್ಲಿ |
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ ||


ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು |
ಹೃದಯಗಳ ಜೋಡಿಸಿರಿ ಆಗುವುದು ಮನೆಯು ||


ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ? |
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ ||
-ಕ.ವೆಂ.ನಾಗರಾಜ್.