ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ವಿಡಂಬನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಡಂಬನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 21, 2018

ಬಸವಣ್ಣನವರ ಜಾತಿ ಸರ್ಟಿಫಿಕೇಟು!


"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ."
"ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು.
"ಹೇಳಿ ಸಾರ್, ಏನು ಬರೋಣವಾಯಿತು?"
"ಒಂದು ಜಾತಿ ಸರ್ಟಿಫಿಕೇಟ್ ಬೇಕಿತ್ತು. ಕೌಂಟರಿನಲ್ಲಿ ಅರ್ಜಿ ಕೊಟ್ಟೆ. ತೆಗೆದುಕೊಳ್ಳಲಿಲ್ಲ. ತಹಸೀಲ್ದಾರರಿಗೇ ಕೊಡಿ ಅಂದರು. ಅದಕ್ಕೇ ನಿಮಗೇ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ".
ಅರ್ಜಿ ನೋಡಿ ಬೆಚ್ಚಿಬಿದ್ದ ತಹಸೀಲ್ದಾರರು,
"ಏನ್ಸಾರ್ ಇದು? ಬಸವಣ್ಣನವರ ಜಾತಿ ಸರ್ಟಿಫಿಕೇಟಾ? ಯು ಮೀನ್ ಜಗಜ್ಯೋತಿ ಬಸವೇಶ್ವರ?"
"ಯಸ್, ಈ ಮೀನ್ ಜಗಜ್ಯೋತಿ ಬಸವೇಶ್ವರ. ಅವರ ತಂದೆ, ತಾಯಿ ಹೆಸರು, ಅವರ ಜಾತಿಯ ಬಗ್ಗೆ ಅಧಿಕೃತವಾದ ಮಾಹಿತಿ ಇರುವ ಪ್ರಮಾಣಿತ ದಾಖಲೆಗಳು ಎಲ್ಲಾ ಕೊಟ್ಟಿದ್ದೇನೆ. ಇವುಗಳ ಆಧಾರದಲ್ಲಿ ನನಗೆ ಜಾತಿ ಸರ್ಟಿಫಿಕೇಟ್ ಕೊಡಿ".
ದೇಶಾವರಿ ನಗೆ ನಗುತ್ತಾ ತಹಸೀಲ್ದಾರರು,
"ತಮಾಷೆ ಮಾಡ್ತಾ ಇದೀರಾ ಸಾರ್? ಅವರ ಜಾತಿ ಸರ್ಟಿಫಿಕೇಟ್ ಈಗ ಕೊಡೊಕ್ಕಾಗುತ್ತಾ?"
"ಏಕೆ ಕೊಡಕ್ಕಾಗಲ್ಲ? ಸತ್ತು ಹೋದವರಿಗೆ ಯಾವುದೇ ಸರ್ಟಿಫಿಕೇಟ್ ಕೊಡಬಾರದು ಅಂತ ಕಾನೂನು ಇನ್ನೂ ಬಂದಿಲ್ಲ."
"ಹಾಗಲ್ಲಾ ಸಾರ್. ಅಷ್ಟಕ್ಕೂ ನಿಮಗೆ ಹೇಗೆ ಕೊಡೊಕ್ಕಾಗತ್ತೆ? ನಿಮಗೂ ಅವರಿಗೂ ಏನು ಸಂಬಂಧ?"
"ಏನ್ರೀ ಅರ್ಥ? ಬಸವಣ್ಣನವರಿಗೂ ನಮಗೂ ಸಂಬಂಧವಿಲ್ಲ ಅಂದರೆ ಅವರು ಇನ್ನು ಯಾರಿಗೆ ಸಂಬಂಧ? ಬಸವಣ್ಣನವರು ಎಲ್ಲರಿಗೂ ಸಂಬಂಧಪಟ್ಟವರು."
ತಹಸೀಲ್ದಾರರು ಮೌನವಾಗಿ ಕುಳಿತಾಗ ರಾಯರೇ ಮುಂದುವರೆಸಿದರು,
"ನೋಡಿ, ಸರ್ಕಾರ ಲಿಂಗಾಯತರು ಹಿಂದೂಗಳಲ್ಲ, ಅವರೇ ಬೇರೆ ಅಂತ ಬೇರೆ ಧರ್ಮ ಘೋಷಣೆ ಮಾಡಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದೆ. ನಾನು ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅಪೀಲು ಮಾಡಿದ್ದೇನೆ. ಆ ಕೇಸಿಗೆ ಸಂಬಂಧಪಟ್ಟಂತೆ ಬಸವಣ್ಣನವರ ಜಾತಿ ದಾಖಲೆಯೂ ಬೇಕಾಗುತ್ತೆ. ಅದನ್ನು ತಹಸೀಲ್ದಾರರಿಂದ ಪಡೆದುಕೊಳ್ಳಬೇಕು ಎಂಬ ಮನವಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಕೋರ್ಟಿನಿಂದಲೂ ತಮಗೆ ಸೂಚನೆ ಬರುತ್ತೆ. ನಾನೇ ಕೇಳಿದರೆ ಕಿರಿಕಿರಿ ಮಾಡಬಹುದು, ಕೊಡದೇ ಇರಬಹುದು ಎಂಬ ಸತ್ಯವೂ ನನಗೆ ಗೊತ್ತಿದ್ದರಿಂದ ಹೀಗೆ ಮಾಡಿದ್ದೇನೆ. ನನ್ನ ಪ್ರಯತ್ನವನ್ನೂ ಮಾಡೋಣ ಅಂತ ನಿಮ್ಮ ಹತ್ತಿರ ಬಂದಿದ್ದೇನೆ".
"ಸಾರ್, ನಮ್ಮನ್ನು ಮಧ್ಯಕ್ಕೆ ಸಿಕ್ಕಿಸಿಹಾಕುತ್ತಿದ್ದೀರ. ನಾನು ಎಷ್ಟಾದರೂ ನಿಮ್ಮ ಶಿಷ್ಯ. ನಿಮ್ಮಿಂದಲೇ ಪಾಠ ಕಲಿತವನು. ನೀವೇ ಒಂದು ದಾರಿ ತೋರಿಸಿಬಿಡಿ."
"ಬಸವಣ್ಣನವರ ಕಾಲದಲ್ಲಿ ಈಗಿನ ಜಾತಿ ಕಾನೂನು ಇರಲಿಲ್ಲ. ಅದಕ್ಕೇ ಅವರು ಅವರದೇ ಹೊಸಜಾತಿ ಕಟ್ಟಿದರು. ಬೇರೆ ಯಾವುದೇ ಜಾತಿಯವರು ಅವರ ಜಾತಿಗೆ ಸೇರಿಕೊಳ್ಳಲು ಅವಕಾಶವಿತ್ತು. ಸೇರಿಸಿಯೂಕೊಂಡರು. ಈಗ? ನಮ್ಮ ಅಪ್ಪ-ಅಮ್ಮನ ಜಾತಿ ಯಾವುದೋ ಅದೇ ನಮ್ಮ ಜಾತಿ! ಕಲಬೆರಕೆ ಆದರೆ ತಂದೆಯ ಜಾತಿಯೇ ಮಕ್ಕಳದೂ ಜಾತಿ. ಮುಸ್ಲಿಮ್ ಆಗಿಯೋ, ಕ್ರಿಶ್ಚಿಯನ್ ಆಗಿಯೋ ಮತಾಂತರ ಆದರೆ, ಯಾವುದೋ ವಶೀಲಿಬಾಜಿಯಿಂದ ಅವರಿಗೆ ಆ ಜಾತಿ ಸರ್ಟಿಫಿಕೇಟ್ ಕೊಡ್ತೀರಿ. ನನ್ನ ಮಗ ಮಾತೆ ಮಾದೇವಿಯಿಂದ ದೀಕ್ಷೆ ಪಡೆದುಕೊಂಡಿದ್ದಾನೆ ಅಂತ ದಾಖಲೆ ತೋರಿಸಿದರೆ ನೀವು ಅವನಿಗೆ ಲಿಂಗಾಯತ ಅಂತ ಸರ್ಟಿಫಿಕೇಟ್ ಕೊಡ್ತೀರಾ?"
"ಸಾರ್. ಅದೆಲ್ಲಾ ಬಿಟ್ಬಿಡಿ ಸಾರ್. ಈಗ ನಾನು ಏನು ಮಾಡಬಹುದು ಅನ್ನೋದಕ್ಕೆ ದಾರಿ ತೋರ್ಸಿ ಸಾರ್."
"ನೋಡಿ, ಬಸವಣ್ಣನವರು ಬ್ರಾಹ್ಮಣ ಅನ್ನೋದಕ್ಕೆ ದಾಖಲೆ ಇದೆ, ಲಿಂಗಾಯತ ಅನ್ನೋದಕ್ಕೆ ದಾಖಲೆ ಇದೆ. ವೀರಶೈವ ಅನ್ನೋದಕ್ಕೆ ದಾಖಲೆ ಇದೆ. ನಿಮಗೆ ಯಾವ ಸರ್ಟಿಫಿಕೇಟ್ ಕೊಡಬೇಕು ಅನ್ಸುತ್ತೋ ಅದನ್ನು ಕೊಡಿ."
"ಈಗಿನ ಕಾನೂನು ಪ್ರಕಾರ ಬಸವಣ್ಣನವರು ಬ್ರಾಹ್ಮಣ ಅಂತ ಕೊಡೋಕೆ ಅವಕಾಶವಿದೆ. ಹಾಗೆ ಕೊಟ್ಟರೆ ಸಿಎಮ್ ಸಾಹೇಬರು, ಮಿನಿಸ್ಟ್ರು ಪಾಟೀಲರು ಫುಟ್ ಬಾಲ್ ಆಡಿಬಿಡ್ತಾರೆ. ಲಿಂಗಾಯತ ಅಂತ ಕೊಟ್ಟರೆ ವೀರಶೈವರು ಮೇಲೆ ಬೀಳ್ತಾರೆ. ವೀರಶೈವ ಅಂತ ಕೊಟ್ರೆ ಲಿಂಗಾಯತರು ಸುಮ್ಮನಿರ್ತಾರಾ? ಒಟ್ಟಿನಲ್ಲಿ ಜನರ ಕೈಲಿ ಹೊಡೆಸಿಕೊಳ್ಳೋ ಕೆಲಸ."
"ಸರ್ಟಿಫಿಕೇಟ್ ಕೊಡಕ್ಕಾಗಲ್ಲ ಅಂತನಾದರೂ ಕೊಡಿ. ನನಗೆ ಎಂಥದೋ ಒಂದು ಸರ್ಟಿಫಿಕೇಟ್ ಬೇಕು ಅಷ್ಟೆ."
ಸಮಾಲೋಚನೆಗಾಗಿ ಕರೆಸಿದ್ದ ಡೆಪ್ಯುಟಿ ತಹಸೀಲ್ದಾರರು, 'ಎಸಿಯಿಂದ ಕ್ಲಾರಿಫೀಕೇಶನ್ ಪಡೆಯೋಣ ಸಾರ್,'ಎಂದು ಸಲಹೆ ಕೊಟ್ಟರು.
"ಪ್ರಯೋಜನ ಇಲ್ಲಾ ಕಣ್ರೀ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ ಅಂತ ನಮಗೇ ವಾಪಸು ಹಾಕಿಬಿಡ್ತಾರೆ."
ಇವರ ಪೇಚಾಟ ನೋಡಿದ ರಾಯರು, "ನಿಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ನಾನು ನಾಲ್ಕು ದಿನ ಬಿಟ್ಟು ಬರ್ತೇನೆ. ನೀವು ನನಗೆ ಉತ್ತರ ಕೊಡದೇ ಇದ್ದರೂ ಕೋರ್ಟಿಗಂತೂ ಉತ್ತರ ಹೇಳಲೇಬೇಕಾಗುತ್ತೆ. ನಮಸ್ಕಾರ."
ತಹಸೀಲ್ದಾರರು, 'ಈ ದರಿದ್ರ ಸರ್ಕಾರ' ಅಂತ ಏನೋ ಹೇಳಲು ಹೊರಟವರು ತುಟಿ ಕಚ್ಚಿಕೊಂಡು ಸುಮ್ಮನಾದರು. ತಲೆ ಮೇಲೆ ಕೈಹೊತ್ತು ಕುಳಿತರು.
-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 4, 2016

ಸೊಂಟದ ವಿಷಯ


   'ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ' ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾತಾಡಿದರೆ ಅಪರಾಧ ಅನ್ನುವ ಕಾನೂನು ಇನ್ನೂ ಬಂದಂತೆ ಕಾಣುತ್ತಿಲ್ಲ. ಅಷ್ಟಕ್ಕೂ ಸೊಂಟ ಸರಿಯಾಗಿದ್ದರೆ ಮಾತ್ರ ವಾನಪ್ರಸ್ಥಕ್ಕೆ ಹೋಗಬಹುದು. ಸೊಂಟ ಬಾಗಿ ಶರೀರ ಹಲವಾರು ಕಾಯಿಲೆಗಳ ನೆಲೆವೀಡಾಗಿದ್ದರೆ ಹೋಗಬೇಕಾಗಿರುವುದು ಆಸ್ಪತ್ರೆಗೆ ಅಷ್ಟೆ. ನೀವು  'ಸೊಂಟದ ವಿಸ್ಯ, ಬೇಡವೋ ಸಿಸ್ಯಾ' ಎಂಬ ಜನಪ್ರಿಯ ಹಾಡು ನೆನಪು ಮಾಡಿಕೊಂಡರೆ ಅದು ನನ್ನ ತಪ್ಪಲ್ಲ. ಹಿಂದೊಮ್ಮೆ ರಸಿಕರಾಗೋಣ ಎಂಬ ಲೇಖನ ಬರೆದಾಗ ಕೆಲವರು ಹುಬ್ಬೇರಿಸಿದ್ದರು. ಶೀರ್ಷಿಕೆ ನೋಡಿ ಕುತೂಹಲದಿಂದ ಓದಿದವರು ಇವನು ದಾರಿ ತಪ್ಪಿಲ್ಲ ಎಂದು ಸಮಾಧಾನ ಪಟ್ಟಿದ್ದರು, ಕೆಲವರಿಗೆ ನಿರಾಶೆಯೂ ಆಗಿತ್ತು. ಈಗ ಈ ವಯಸ್ಸಿನಲ್ಲಿ ಸೊಂಟದ ಬಗ್ಗೆ ಹೇಳುತ್ತಿರುವುದರಿಂದ ನನ್ನ ತಲೆ ಕೆಡುತ್ತಿದೆಯೆಂದು ಯಾರಿಗಾದರೂ ಅನ್ನಿಸಿದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ.
     ಸೊಂಟ ಅಂದಾಕ್ಷಣ ಸಿನೆಮಾ ತಾರೆಯರ, ಮಾಡೆಲ್ಲುಗಳ, ಸುಂದರ ತರುಣಿಯರ ಬಳುಕುವ ಸೊಂಟಗಳ ನೆನಪು ಸುಳಿದಾಡಿದರೆ ಅದು ನಿಮ್ಮ ಹಣೆಯಬರಹ. ಸುಂದರಿಯರ ಸ್ಪರ್ಧೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ಸೊಂಟವೇ. ಯಾರ ಯಾರ ಸೊಂಟದ ಅಳತೆ ಎಷ್ಟೆಷ್ಟು ಅಂತ ಪಡ್ಡೆ ಹುಡುಗರು ನೋಡಿದ ತಕ್ಷಣ ಹೇಳಿಬಿಡುತ್ತಾರೆ. ಸೊಂಟದ ಅಳತೆ ಕಡಿಮೆಯಿರುವವರೆಗೆ ಮಾತ್ರ ನಾಯಕಿಯರುಗಳಿಗೆ ಬೇಡಿಕೆ. ಸ್ವಲ್ಪ ದಪ್ಪವಾಯಿತೋ ಅವರುಗಳು ಅಕ್ಕ, ಅಮ್ಮರ ಪಾತ್ರಗಳಿಗೆ ವರ್ಗಾವಣೆಯಾಗಿಬಿಡುತ್ತಾರೆ. ಪುರಾತನ ಕಾಲದಿಂದಲೂ ಕವಿಗಳು ತರುಣಿಯರ ಸೊಂಟವನ್ನು ಬಳುಕುವ ಬಳ್ಳಿಗೆ ಹೋಲಿಸಿ ಪ್ರಿಯತಮನ ತೋಳಿನಾಸರೆ ಅವರುಗಳಿಗೆ ಅವಶ್ಯವೆಂದು ಸಾರಿ ಸಾರಿ ಬರೆಯುತ್ತಾ ಬಂದಿದ್ದಾರೆ. ಸೊಂಟದ ಬಗ್ಗೆ ತಲೆ ಕೆಡಿಸಿಕೊಂಡ ಕೆಲವರು ಸೊಂಟ ಮುರಿಸಿಕೊಂಡದ್ದೂ ಇದೆ. ಇರಲಿ ಬಿಡಿ, ನಾನು ಸೊಂಟದ ಈ ರೀತಿಯ ಕಲ್ಪನೆಗೆ ಹೊರತಾಗಿ ಬರೆಯುವೆ. ಸೊಂಟಾಭಿಮಾನಿಗಳ ವಿರೋಧವನ್ನು ನಾನು ಕಟ್ಟಿಕೊಳ್ಳಲಾರೆ, ಆದ್ದರಿಂದ ಮೊದಲೇ ಹೇಳಿಬಿಡುವೆ, ಸೊಂಟ ಪ್ರಧಾನವಾದ ಅಂಗ ಎಂಬುದನ್ನು ಪ್ರತಿಪಾದಿಸುವುದೇ ಈ ಬರಹದ ಉದ್ದೇಶ.
     ಸೊಂಟದ ಸುತ್ತಳತೆ ಶರೀರದ ಎತ್ತರದ ಅರ್ಧಕ್ಕಿಂತ ಹೆಚ್ಚಿಗೆ ಇರಬಾರದೆಂದು ಯಾರೋ ಪುಣ್ಯಾತ್ಮ ಹೇಳಿದ್ದಾನೆ. ಇದು ಸರಿಯೋ, ಅಲ್ಲವೋ ನನಗಂತೂ ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ. ಈ ಸೊಂಟ ಇದೆಯಲ್ಲಾ, ಅದೇ ಆಧಾರ ಮನುಷ್ಯನಿಗೆ. ಸೊಂಟ ಭದ್ರವಿಲ್ಲದಿದ್ದರೆ ಕೂರುವುದು, ಓಡಾಡುವುದಾದರೂ ಹೇಗೆ? ಮನುಷ್ಯನಿಗೆ ಆಧಾರವಾಗಿರುವ ಪ್ರಧಾನ ಬೆನ್ನು ಮೂಳೆಯ ಉಗಮ ಸೊಂಟದ ಕೆಳಭಾಗದಿಂದಲೇ. ಸೊಂಟ ಬಾಗಿಸಿದರೆ ಬೆನ್ನೂ ಬಾಗುತ್ತದೆ. ಎದೆ ಎತ್ತಿ, ಎದೆ ಉಬ್ಬಿಸಿ ನಡೆ ಎನ್ನುತ್ತಾರೆ. ಆದರೆ ಎದೆ ಎತ್ತಬೇಕಾದರೆ, ಎದೆ ಉಬ್ಬಿಸಿ ನಡೆಯಬೇಕೆಂದರೆ ಸೊಂಟ ನೆಟ್ಟಗಿರಬೇಕು! ಸೊಂಟ ಸೊಟ್ಟಗಿದ್ದರೆ ಎದೆ ಉಬ್ಬುವುದಾದರೂ ಹೇಗೆ? ಕೆಲಸ ಸೊಂಟದ್ದು, ಹೆಸರು ಮಾತ್ರ ಎದೆಗೆ! ಯಾರ ಸೊಂಟ ನೆಟ್ಟಗಿದೆಯೋ ಅವರು ಆರೋಗ್ಯವಾಗಿರುತ್ತಾರೆ. ಸೊಟ್ಟ ಸೊಂಟದವನ ಆರೋಗ್ಯವೂ ಸೊಟ್ಟವೇ ಆಗಿರುತ್ತದಂತೆ! ನೆಚ್ಚಿನ ಸಹಾಯಕ ದೂರವಾದರೆ ಕೈ ಮುರಿದಂತೆ ಅನ್ನುತ್ತಾರೆ. ಆದರೆ ಆಸರೆಯಾಗಿರುವವರು ದೂರವಾದರೆ ಸೊಂಟವೇ ಮುರಿದಂತೆ ಎಂದು ಹೇಳುತ್ತಾರೆ. ಆಸರೆ, ಆಧಾರಕ್ಕೆ ಪರ್ಯಾಯವೇ ಸೊಂಟ! ಯಾರಿಗಾದರೂ ಹಿರಿಯರಿಗೆ ಗೌರವ ಸಲ್ಲಿಸಬೇಕೆಂದರೆ ನಡು ಬಗ್ಗಿಸಿ ನಮಸ್ಕರಿಸುತ್ತಾರೆ. ಜಪಾನ್, ಚೀನಾಗಳಲ್ಲೂ ಸೊಂಟ ಬಗ್ಗಿಸಿ ಸಲಾಮು ಮಾಡುವುದು ಗೌರವದ ಸಂಕೇತ. ದೈನ್ಯ ಪ್ರದರ್ಶನಕ್ಕೂ, ಇಷ್ಟವಿರಲಿ, ಇಲ್ಲದಿರಲಿ ಸೊಂಟ ಬಗ್ಗಿಸಿ ಗೌರವ ಸಲ್ಲಿಸಬೇಕು. ಅಂತಹ ಗೌರವ ಕೊಡುವುದಕ್ಕೆ ಡೊಗ್ಗು ಸಲಾಮು ಎನ್ನುತ್ತಾರೆ. ಜನರಿಗೆ ನಮಸ್ಕಾರ ಮಾಡಿ ಅಧಿಕಾರಕ್ಕೇರಿದವರು ನಂತರ ಜನರಿಂದ ನಮಸ್ಕಾರ ಪಡೆದುಕೊಳ್ಳುತ್ತಾರೆ. ಧಿಮಾಕು ತೋರಿಸಬೇಕೆಂದವರು ಸೊಂಟದ ಮೇಲೆ ಕೈಯಿಟ್ಟು ಕುಹಕ ನೋಟ ಬೀರುತ್ತಾರೆ. ಮರುಳು ಮಾಡುವ ಲಲನಾಮಣಿಯರೂ ಸೊಂಟದ ಮೇಲೆ ಕೈಯಿಟ್ಟು ಓರೆನೋಟ ಬೀರುತ್ತಾರೆ. ಎಲ್ಲದಕ್ಕೂ ಸೊಂಟ ಬೇಕು! ಮಾನವಬಾಂಬುಗಳಾಗಿ ಹಲವರ ಪ್ರಾಣ ತೆಗೆಯುವ ಉಗ್ರಗಾಮಿಗಳು ಬಾಂಬು ಇರುವ ಬೆಲ್ಟು ಕಟ್ಟಿಕೊಳ್ಳುವುದಕ್ಕೂ ಸೊಂಟ ಬೇಕು. ಮಾನ ಮುಚ್ಚುವ ಬಟ್ಟೆಗೆ ಆಧಾರಕ್ಕೂ ಈ ಸೊಂಟವೇ ಬೇಕು. ಆಡುವ ಮಾತುಗಳಿಗೂ ಸೊಂಟಕ್ಕೂ ಏನೋ ಸಂಬಂಧವಿರಬೇಕು. ಸೊಂಟದ ಕೆಳಗಿನ ಮಾತು ಅಂದರೆ ಆಡಬಾರದ ಮಾತು, ಸೊಂಟದ ಮೇಲಿನ ಮಾತು ಅಂದರೆ ಹೃದಯದಿಂದ ಬಂದ ಮಾತು ಎನ್ನುವುದು ವಾಡಿಕೆ. ಆದರೆ ಸೊಂಟ ಮಾತ್ರ ಎರಡು ರೀತಿಯ ಮಾತುಗಳಿಗೂ ಮಧ್ಯದಲ್ಲಿದ್ದು ನಿಷ್ಪಕ್ಷಪಾತವಾಗಿರುತ್ತದೆ.
     'ಕೊಬ್ಬು ಜಾಸ್ತಿ ಮಗನಿಗೆ, ನಾನು ಇಳಿಸುತ್ತೇನೆ' ಎಂಬ ರೀತಿಯ ಮಾತುಗಳು ಕಿವಿಗೆ ಬಿದ್ದಿರಬಹುದು. ಈ ಕೊಬ್ಬು ಅನ್ನುವುದು ಎರಡು ತರಹ ಇರುತ್ತದೆ, ಒಂದು ಮಾನಸಿಕ, ಇನ್ನೊಂದು ಶಾರೀರಿಕ. ಮಾನಸಿಕ ಕೊಬ್ಬಿನ ಬಗ್ಗೆ ಮಾತನಾಡುವುದು ಇಲ್ಲಿ ಅಪ್ರಸ್ತುತ. ಶಾರೀರಿಕ ಕೊಬ್ಬು ಇದೆಯಲ್ಲಾ ಅದು ಮೊದಲು ಆಕ್ರಮಣ ಮಾಡುವುದು ಸೊಂಟವನ್ನೇ, ಚೀನಾ ಟಿಬೆಟ್ಟನ್ನು ನುಂಗಿದಂತೆ. ಅಂತಹವರ ಸೊಂಟ ಯಾವುದು ಹೊಟ್ಟೆ ಯಾವುದು ಗೊತ್ತಾಗುವುದಿಲ್ಲ. ಕೆಲವರ ಸೊಂಟ-ಕಮ್-ಹೊಟ್ಟೆಯ ಸುತ್ತಳತೆ ಶರೀರದ ಎತ್ತರಕ್ಕಿಂತ ಜಾಸ್ತಿಯಿರುತ್ತದೆ. ಸಾಮಾನ್ಯವಾಗಿ ಅವರಿಗೆ ಸಿಟ್ಟು ಬರುವುದು ಕಡಿಮೆ. ಸೊಂಟ ಮಾಯವಾಗುವುದರಿಂದ ಸಿಟ್ಟೂ ಮಾಯವಾಗುತ್ತದೆಯೇ ಎಂಬುದು ಸಂಶೋಧನೆ ಮಾಡಬೇಕಾದ ವಿಷಯ. ವೈಜ್ಞಾನಿಕ ಕಾರಣ ಏನಿರಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದರೆ ನನ್ನನ್ನು ಕೇಳಬೇಡಿ, ನನಗೆ ಗೊತ್ತಿಲ್ಲ. ಮನುಷ್ಯನ ಮಧ್ಯ  ವಯಸ್ಸು ಎಂದರೆ ಸಣ್ಣ ಸೊಂಟ ಮತ್ತು ವಿಶಾಲ ಮನಸ್ಸುಗಳು ಸ್ಥಳ ಬದಲಾಯಿಸಲು ಪ್ರಾರಂಭಿಸುವ ಸಮಯ; ಅಂದರೆ ಸೊಂಟ ವಿಶಾಲವಾಗುತ್ತಾ ಹೋಗುತ್ತದೆ, ಮನಸ್ಸು ಸಣ್ಣದಾಗುತ್ತಾ ಹೋಗುತ್ತದೆ. ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರತಿಯೊಂದಕ್ಕೂ ಅಪವಾದವಿರುತ್ತದೆ.
     ಏನಾದರೂ ಸಾಧಿಸಬೇಕು ಎನ್ನುವುದಕ್ಕೆ ಸೊಂಟ ಭದ್ರವಿರಬೇಕು ಎನ್ನುತ್ತಾರೆ. ಶ್ರಮದ ಕೆಲಸ ಮಾಡುವವರು ಸೊಂಟಕ್ಕೆ ಭದ್ರವಾಗಿ ಟವೆಲನ್ನೋ, ವಸ್ತ್ರವನ್ನೋ ಕಟ್ಟಿರುತ್ತಾರೆ. ಅದರಿಂದ ಸೊಂಟಕ್ಕೆ ಆಧಾರ, ಬಲ ಬರುತ್ತದೆ. ಹಿಡಿದ ಕೆಲಸ ಬಿಡದೆ ಸಾಧಿಸುವವರನ್ನು ಟೊಂಕ ಕಟ್ಟಿ ನಿಂತವರು ಎನ್ನುತ್ತಾರೆ. ಈ ಟೊಂಕ ಎಂದರೆ ಬೇರೆ ಅಲ್ಲ, ಸೊಂಟವೇ. ಸ್ವಾಮಿ ವಿವೇಕಾನಂದರ ಜನಪ್ರಿಯ ಭಂಗಿಯ ಫೋಟೋ ಗಮನಿಸಿದ್ದೀರಾ? ಅವರು ಸೊಂಟಕ್ಕೆ ವಸ್ತ್ರ ಬಿಗಿದುಕೊಂಡು ಕೈಕಟ್ಟಿ ಎದೆಯುಬ್ಬಿಸಿ ನೋಡುತ್ತಿರುವ ನೋಟ ಎಂತಹವರಿಗೂ ಅವರಲ್ಲಿ ಗೌರವ ಉಕ್ಕಿಸುತ್ತದೆ. ನಾವು ಏನೇನೋ ಮಾಡಬೇಕೆಂದು ಅಂದುಕೊಂಡಿರುತ್ತೇವೆ. ಅಂದುಕೊಂಡದ್ದನ್ನು ಮಾಡಲಾಗದ್ದಕ್ಕೆ ಮುಖ್ಯ ಕಾರಣ ಟೊಂಕ ಕಟ್ಟಿ ನಿಲ್ಲದಿರುವುದು! ಇನ್ನು ಮುಂದಾದರೂ ನಮ್ಮ ವೈಫಲ್ಯಗಳಿಗೆ ನೆಪಗಳನ್ನು ಹೇಳದಿರೋಣ, ಟೊಂಕ ಕಟ್ಟಿ ನಿಂತು ಸಾಧಿಸೋಣ. ಏನಂತೀರಿ?
-ಕ.ವೆಂ.ನಾಗರಾಜ್.
**************
ದಿನಾಂಕ 9.05.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಶನಿವಾರ, ಮೇ 10, 2014

ಹೆಸರಿನ ಹಂಬಲ


     ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:
     "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ, ಅವರಿಗೂ ಈಗ ಸಿಕ್ಕಿರುವ ಗೌರವದಿಂದ ಸಮಾಧಾನ ಆಗಿರುವುದಿಲ್ಲ. ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದೇನೆ, ಎಷ್ಟು ಹಣ, ಸಮಯ ಖರ್ಚು ಮಾಡಿದ್ದೇನೆ. ಅದಕ್ಕೆ ಹೋಲಿಸಿದರೆ ಈಗ ಸಿಕ್ಕಿರುವ ಗೌರವ ತುಂಬಾ ಕಡಿಮೆ ಆಯಿತು ಅಂತ ಕೊರಗುತ್ತಿರುತ್ತಾರೆ. ಇನ್ನೊಂದು ವಿಷಯ ಗೊತ್ತಾ? ಸಿಕ್ಕಿರುವ ಆ ಗೌರವವನ್ನು ಉಳಿಸಿಕೊಳ್ಳಲು ಅವರು ಇನ್ನು ಮುಂದೆಯೂ ಒದ್ದಾಡುತ್ತಲೇ ಇರಬೇಕು. ಒಣ ಹೆಸರು ಅನ್ನುವುದನ್ನು ಬಿಟ್ಟರೆ ಗೌರವ ಅನ್ನುವುದರಲ್ಲಿ ಏನಿದೆ?"
     "ಏನೆಂದೆ? ಸತ್ತವರಿಗೆ ಸಿಗುವ ಗೌರವವಾ? ಒಣ ಹೆಸರು ಮಾತ್ರ ಅಂತೀಯಾ?"
     "ಅಷ್ಟಲ್ಲದೇ ಏನು? ಒಂದು ಕಥೆ ಹೇಳ್ತೀನಿ, ಕೇಳು. ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ. ಒಂದು ದಿನ ಅಶರೀರವಾಣಿ ಅವನಿಗೆ ಕೇಳಿಸಿತು: 'ಎಲೈ ರಾಜನೇ, ಯಾರು ಹೆಚ್ಚು ದಾನ ಮಾಡುತ್ತಾರೋ ಅವರು ಸ್ವರ್ಗಕ್ಕೆ ಹೋಗುತ್ತಾರೆ. ಅವರ ಹೆಸರನ್ನು ಸ್ವರ್ಗದಲ್ಲಿರುವ ಬಂಗಾರದ ಬೆಟ್ಟದಲ್ಲಿ ಬರೆಯಲಾಗುವುದು'. ಸರಿ, ರಾಜನಿಗೆ ಬಂಗಾರದ ಬೆಟ್ಟದಲ್ಲಿ ತನ್ನ ಹೆಸರು ಕಾಣುವ ಬಯಕೆ ಗರಿಗಟ್ಟಿತು. ಪ್ರತಿದಿನ ಬಡಬಗ್ಗರಿಗೆ ಊಟ ಹಾಕಿಸಿದ, ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಕಟ್ಟಿಸಿದ, ಧರ್ಮಛತ್ರಗಳನ್ನು ಕಟ್ಟಿಸಿದ. ಪ್ರವಾಸಿಗರಿಗೆ ಅನುಕೂಲವಾಗಲು ವಿಶ್ರಾಂತಿಧಾಮಗಳನ್ನು ಕಟ್ಟಿಸಿದ. ದೇವಸ್ಥಾನಗಳನ್ನು ನಿರ್ಮಿಸಿದ, ಅದು ಮಾಡಿದ, ಇದು ಮಾಡಿದ, ಏನೇನೋ ಮಾಡಿದ. ಎಲ್ಲಾ ಕಟ್ಟಡಗಳಲ್ಲೂ ರಾಜನ ಹೆಸರೋ ಹೆಸರು. ಎಲ್ಲೆಲ್ಲಿ ನೋಡಿದರೂ ರಾಜನ ದಾನ ಮಾಡಿದ ಕುರಿತು ಫಲಕಗಳೇ ಫಲಕಗಳು. ಒಂದು ದಿನ ರಾಜ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ಹೋದವನೇ ಮೊದಲು ಮಾಡಿದ ಕೆಲಸ ಎಂದರೆ ಬಂಗಾರದ ಬೆಟ್ಟ ಎಲ್ಲಿದೆ ಅಂತ ವಿಚಾರಿಸಿದ್ದು. ಬೆಟ್ಟದ ಹತ್ತಿರ ಹೋಗಿ ನೋಡಿದರೆ ಬೆಟ್ಟದ ತುಂಬೆಲ್ಲಾ ಜಾಗವೇ ಇಲ್ಲದಷ್ಟು ಹೆಸರುಗಳು ತುಂಬಿಹೋಗಿದ್ದವು. ಅಲ್ಲಿದ್ದ ಮೇಲ್ವಿಚಾರಕರನ್ನು ತನ್ನ ಹೆಸರು ಎಲ್ಲಿದೆ ಅಂತ ವಿಚಾರಿಸಿದ. ಅವನು ಒಂದು ಬರೆಯುವ ಸಾಧನ ಕೊಟ್ಟು ಹೇಗೆ ಬೇಕೋ ಹಾಗೆ, ಎಲ್ಲಿ ಬೇಕೋ ಅಲ್ಲಿ ಹೆಸರನ್ನು ಬರೆದುಕೊಳ್ಳಬಹುದೆಂದು ಹೇಳಿದ. ಬರೆಯಲು ಜಾಗವೇ ಇಲ್ಲವಲ್ಲಾ ಅಂದಿದ್ದಕ್ಕೆ, ತಿರುಗಿಯೂ ನೋಡದೆ ಆತ ಹೇಳಿದ್ದೇನೆಂದರೆ, 'ಇರುವ ಯಾವುದಾದರೂ ಹೆಸರನ್ನು ಅಳಿಸಿ ನಿನ್ನ ಹೆಸರು ಬರೆದುಕೊಳ್ಳಬಹುದು' ಅಂತ."
     "ಹಾಂ??"
     "ಆ ರಾಜನಿಗಾದರೋ ಸತ್ತ ಮೇಲೆ ತನ್ನ ಹೆಸರು ಬರೆದುಕೊಳ್ಳುವ ಅವಕಾಶವಾದರೂ ಸಿಕ್ಕಿತ್ತು. ನಿನಗೇನು ಸಿಗುತ್ತೆ? ಮಣ್ಣು. ಸತ್ತ ಮೇಲೆ ನಿನಗೇ ನೀನು ಯಾರು ಅಂತ ಗೊತ್ತಿರುತ್ತೋ ಇಲ್ಲವೋ! ಸತ್ತ ಮೇಲೆ ಗೌರವ ಸಿಗುತ್ತೆ ಅಂತ ಈಗ ಯಾಕೆ ಒದ್ದಾಡುತ್ತೀಯಾ?"
     "ಹಾಂ??"
     "ಹೌದು ಕಣೋ ಮಂಕೆ. ಆದರೆ ಒಂದು ಸಮಾಧಾನವಿದೆ. ಈಗ ಬದುಕಿದ್ದಾಗ ನಿನ್ನ ಕಾಲು ಎಳೆದವರೇ ಮುಂದೆ  ನೀನು ಸತ್ತ ಮೇಲೆ ನಿನ್ನ ಫೋಟೋಗೆ ಹಾರ ಹಾಕಿ 'ಅವರು ಎಷ್ಟು ದೊಡ್ಡ ವ್ಯಕ್ತಿ. ಆದರೆ ಅವರಿಗೆ ಬದುಕಿದ್ದಾಗ ಸಿಗಬೇಕಾದ ಗೌರವ ಸಿಗಲಿಲ್ಲ. ಅಂತಹ ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಅವರ ಸಾವಿನಿಂದ ತುಂಬಲಾರದ ನಷ್ಟ ಆಗಿದೆ' ಅಂತ ಕಣ್ಣೀರು ಹಾಕ್ತಾರೆ. ನಿನ್ನದು ಒಂದು ಒಳ್ಳೆಯ ಪೋಸ್ ಇರುವ ಫೋಟೋ ಇಲ್ಲದಿದ್ದರೆ ಈಗಲೇ ತೆಗೆಸಿಟ್ಟಿರು. ಮುಂದೆ ಉಪಯೋಗಕ್ಕೆ ಬರುತ್ತೆ."
     "ಹಾಂ??"
     "ಈ ಹೆಸರಿನ ಹಂಬಲ ಇದೆಯಲ್ಲಾ, ಅದು ಮಾಡಬಾರದ್ದು ಮಾಡಿಸುತ್ತೆ. ತನಗಿಂತಾ ಹೆಚ್ಚು ಹೆಸರು ಇನ್ನೊಬ್ಬರಿಗೆ ಬರಬಾರದು ಅಂತ ಇತರರನ್ನು ಕೀಳಾಗಿ ನೋಡುವಂತೆ ಮಾಡುತ್ತೆ. ಅಧಿಕಾರ, ಹೆಸರು ಬರಲು ಕಾರಣರಾದವರನ್ನೇ ಮುಂದೆ ಅವರಿಂದ ತನ್ನ ಅಧಿಕಾರ, ಹೆಸರಿಗೆ ಕುತ್ತು ತರುತ್ತಾರೆಂದು ದ್ವೇಷಿಸುವಂತೆ ಮಾಡುತ್ತೆ. ಸ್ನೇಹಿತರು, ಬಂಧುಗಳೇ ಶತ್ರುಗಳಂತೆ ಕಾಣಿಸುವಂತೆ ಮಾಡುತ್ತೆ. ಈ ಹೆಸರು ದುಂಬಿ ಇದ್ದಂತೆ. ಅದು ಹಾಡೂ ಹೇಳುತ್ತೆ. ಚುಚ್ಚಿಯೂ ಚುಚ್ಚುತ್ತೆ."
     "ನಿಜ, ನಿಜ. ಈಗಿನ ರಾಜಕಾರಣಿಗಳನ್ನು ನೋಡಿದರೇ ಗೊತ್ತಾಗುತ್ತೆ."
     "ಬರೀ ರಾಜಕಾರಣಿಗಳೇನು, ಸಾಹಿತಿಗಳು, ಅಧಿಕಾರಿಗಳು, ವರ್ತಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಇಂಥವರು, ಅಂಥವರು, ನಾವು ಎಲ್ಲರೂ ಹೀಗೆ ಮಾಡುವವರೇ. ಅವರಿಗೂ ಶಾಂತಿಯಿಲ್ಲ, ಅವರಿಂದ ಬೇರೆಯವರಿಗೂ ಶಾಂತಿಯಿಲ್ಲ."
     "ಹಂಗಂತೀಯ??"
     "ಹಂಗನ್ನದೆ ಇನ್ನು ಹ್ಯಾಂಗನ್ನಲಿ, ಮಂಕಣ್ಣ. ಇನ್ನೊಂದು ವಿಷಯ ಗೊತ್ತಾ? ಈ ಹೆಸರು ಬಂದವರು ಇದ್ದಾರಲ್ಲಾ, ಅವರು ಮೊದಲು ಇದ್ದಂತೆ ಇರುವುದಿಲ್ಲ. ತಾವು ಎಲ್ಲರಿಗಿಂತ ಮೇಲು ಅಂದುಕೊಂಡು ಬೇರೆಯವರನ್ನು, ಬೇರೆಯವರಿರಲಿ, ತನ್ನ ಸ್ನೇಹಿತರು, ಬಂಧುಗಳನ್ನೇ ಹಗುರವಾಗಿ ಕಂಡು ಅವಮಾನ ಮಾಡುತ್ತಾರೆ. ಈ ಸ್ವಭಾವದಿಂದ ವಿನಾಕಾರಣ ಇತರರ ದ್ವೇಷ ಕಟ್ಟಿಕೊಳ್ಳುತ್ತಾರೆ."
     "ಅಯ್ಯಪ್ಪಾ! ನನಗೆ ಹಾರ ಹಾಕದಿದ್ದದ್ದೇ ಒಳ್ಳೆಯದಾಯಿತು ಬಿಡು."
     "ಈಗ ಹಾಕದಿದ್ದರೇನಂತೆ, ಮುಂದೆ ಒಂದು ದಿನ ಹಾಕುತ್ತಾರೆ, ಬಿಡು. ಈ ಹೆಸರಿನ ಹಂಬಲ ಇದೆಯಲ್ಲಾ, ಇದು ಎಂಥಾ ದೊಡ್ಡ ವ್ಯಕ್ತಿಗಳನ್ನೂ ಬಿಡುವುದಿಲ್ಲ. ಹೆಸರು, ಅಧಿಕಾರಕ್ಕಾಗಿ ಅವರು ಸ್ವಂತ ವ್ಯಕ್ತಿತ್ವವನ್ನೇ ಮರೆತುಬಿಡುತ್ತಾರೆ."
     "ಅದೇನೋ ಸರಿ, ಈಗಿನ ದೇಶದ ನಾಯಕರು ಇರೋದೇ ಹಾಗೆ. ಆದರೂ ಅವರು ನಾಯಕರು. ನೀನು ಮಾತನ್ನು ಎಲ್ಲೆಲ್ಲಿಗೋ ತಿರುಗಿಸುತ್ತಿದ್ದೀಯಾ. ಈಗಿನ ಸಂದರ್ಭದ ಬಗ್ಗೆ ಮಾತನಾಡು. ಕೊನೆಯ ಪಕ್ಷ ಬಾಯಿಮಾತಿನಲ್ಲಾದರೂ ಹಾಳು ಬಿದ್ದು ಹೋಗಲಿ ಅಂದುಕೊಂಡು ನನ್ನ ಬಗ್ಗೆ ಎರಡು ಒಳ್ಳೆಯ ಮಾತು ಹೇಳಬಹುದಿತ್ತಲ್ಲವಾ?"
      "ಹೇಳಿದ್ದರೆ ನಿನಗೆ ಏನು ಸಿಗುತ್ತಿತ್ತು? ಅವರಿಗೆ ಹೇಳಲು ಬೇಕಿಲ್ಲದಿರಬಹುದು. ನಿನ್ನನ್ನು ಹೊಗಳಿದರೆ ಅವರಿಗೆ ಬೆಲೆ ಕಡಿಮೆ ಆಗುತ್ತೆ ಅಂದುಕೊಂಡಿರಬಹುದು. ಸೇರಿರುವ ಜನ ಯಾರನ್ನು ಯಾರು ಗೌರವಿಸಿದರೂ ಅಷ್ಟೆ, ಗೌರವಿಸದಿದ್ದರೂ ಅಷ್ಟೆ, ತಲೆ ಕೆಡಿಸಿಕೊಳ್ಳದವರು. ಹಾಗಿರುವಾಗ ನಿನಗೆ ಅವರಿಂದ ಗೌರವಿಸಿಕೊಳ್ಳಬೇಕು ಅನ್ನುವ ಹಂಬಲ ಯಾಕೆ? ಒಂದು ಮಾತು ಹೇಳ್ತೀನಿ ಕೇಳು, ಪ್ರತಿಭೆ ಅನ್ನುವುದು ದೇವರ ಕೊಡುಗೆ. ದೇವರಿಗೆ ತಲೆಬಾಗಬೇಕು. ಗೌರವ ಜನರು ಕೊಡುವುದು. ಕೊಟ್ಟರೆ  ಅವರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ನಮಗೆ ನಾವೇ ಕೊಟ್ಟುಕೊಳ್ಳುವುದು. ಎಚ್ಚರವಿರಬೇಕು."
     ಅಷ್ಟರಲ್ಲಿ ಧ್ವನಿವರ್ಧಕದಲ್ಲಿ ಮೊಳಗಲು ಪ್ರಾರಂಭವಾಯಿತು, "ಮಂಕಣ್ಣನವರು ಎಲ್ಲಿದ್ದರೂ ಬರಬೇಕು. ಮಾನ್ಯ ಅತಿಥಿಗಳು ಅವರಿಗೆ ಮಾಲಾರ್ಪಣೆ ಮಾಡಲಿದ್ದಾರೆ". ಮಂಕಣ್ಣ ಕೂಡಲೇ ಅಡ್ಡವಿದ್ದವರನ್ನು ಪಕ್ಕಕ್ಕೆ ಸರಿಸುತ್ತಾ ವೇದಿಕೆಯ ಕಡೆಗೆ ಧಾವಿಸಿದ! ಹಾರ ಹಾಕಿಸಿಕೊಂಡು ಬೀಗುತ್ತಾ ಬಂದ ಮಂಕನನ್ನು ಮೂಢ ಕೆಣಕಿದ, "ಅಂತೂ ಹಾರ ಹಾಕಿಸಿಕೊಂಡೆಯಲ್ಲಾ! ಸಮಾಧಾನವಾಯಿತಾ?" ಈ ಮಾತು ಕೇಳಿ ಮಂಕಾದ ಮಂಕನನ್ನು ಕಂಡು ಮರುಕಪಟ್ಟು ಹೇಳಿದ:
     "ನಿಜ, ನೀನು ನಿಜವಾಗಿಯೂ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೀಯಾ. ಆದರೆ ಅಲ್ಲಿ ವೇದಿಕೆಯ ಮೇಲೆ ಕುಳಿತವರನ್ನೊಮ್ಮೆ ನೋಡು. ಅವರು ನಿನ್ನ, ನಿನ್ನಂತಹವರ ಶ್ರಮದಲ್ಲಿ ಕೆಲಸ ಮಾಡದೇ ಗೌರವ ಪಡೆಯುತ್ತಿದ್ದಾರೆ. ಜನ ಅವರಿಗೇ ಹಾರ ಹಾಕಿ, ಅವರ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ. ಅದು ಅವರ ಸಾಮರ್ಥ್ಯ. ಎಲ್ಲರಿಗೂ ಅದು ಬರಲ್ಲ."
     "ಅದೇನೋ ಸರಿ ಬಿಡು. ನಾನು ಪಡೆದದ್ದು ನನಗೆ. ಅವರು ಪಡೆದದ್ದು ಅವರಿಗೆ."
     "ಕನ್ನಡದ ಸುಪ್ರಸಿದ್ಧ ಗೀತ ರಚನಕಾರ ಎಸ್.ಕೆ. ಕರೀಮ್‌ಖಾನರ ಹೆಸರು ಕೇಳಿದ್ದೀಯಲ್ಲವಾ? ಅವರ ಬಡತನವನ್ನು ದುರುಪಯೋಗಿಸಿಕೊಂಡು ಅವರಿಂದ ಗೀತೆಗಳನ್ನು ಬರೆಸಿ ತಮ್ಮ ಹೆಸರಿನಲ್ಲಿ ಹಾಕಿಕೊಂಡು ಪ್ರಸಿದ್ಧರಾದವರೂ ಈ ನೆಲದಲ್ಲಿ ಇದ್ದರು."
     "ಹೌದಾ?"
     "ನಿಜ ಕಣೋ. ಈಗ ಹೆಸರಿನ ಹಿಂದೆ ಡಾಕ್ಟರ್ ಅಂತ ಸೇರಿಸಿಕೊಳ್ಳೋದು ಕಷ್ಟವೇನಿಲ್ಲ. ಹಣ ಖರ್ಚು ಮಾಡಿದರೆ ಡಾಕ್ಟೊರೇಟ್ ಕೊಡಿಸುವ ದಲ್ಲಾಳಿಗಳು ಡಾಕ್ಟೊರೇಟ್ ಕೊಡಿಸುತ್ತಾರೆ. ನೀನು ಸಾಹಿತಿಯಾಗಿ ಒಂದೆರಡು ಪುಸ್ತಕ ಬರೆದು, ಲೇಖನಗಳನ್ನು ಬರೆದುಬಿಟ್ಟೆಯೋ ನಿನ್ನ ಅಂತಸ್ತು ಸ್ವಲ್ಪ ಏರುತ್ತದೆ. ಶ್ರಮ ಪಟ್ಟರೆ, ರಾಜಕಾರಣಿಗಳ ಬೆನ್ನು ಬಿದ್ದರೆ ಪ್ರಶಸ್ತಿಯೂ ಸಿಕ್ಕಿಬಿಡುತ್ತದೆ."
     "ಹಾಗಾದರೆ ಪ್ರಶಸ್ತಿ ಪಡೆದವರೆಲ್ಲಾ ಹೀಗೆಯೇ ಪಡೆದವರಾ?"
     "ಛೇ, ಛೇ. ಹಾಗೆಂದರೆ ಬಾಯಲ್ಲಿ ಹುಳ ಬೀಳುತ್ತದೆ. ಅರ್ಹತೆಯಿದ್ದು ಪ್ರಶಸ್ತಿ ಪಡೆದವರು ತಮ್ಮ ತೂಕ ಉಳಿಸಿಕೊಂಡಿರುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಹಾಗೆ. ಆದರೆ ಲಾಬಿ ಮಾಡಿ ಪ್ರಶಸ್ತಿ ಪಡೆದವರ ತಲೆಯೇ ನಿಲ್ಲುವುದಿಲ್ಲ. ಎಡಬಿಡಂಗಿ ಹೇಳಿಕೆಗಳನ್ನು ಕೊಡುತ್ತಾ, ವಿವಾದ ಸೃಷ್ಟಿಸುತ್ತಾ ಸದಾ ತಮ್ಮ ಹೆಸರು ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿರುತ್ತಾರೆ."
     "ದೊಡ್ಡವರ ವಿಷಯ ನಮಗೇಕೆ ಬಿಡು. ಭೋಗಿ ಪಡೆದಿದ್ದು ಭೋಗಿಗೆ, ಜೋಗಿ ಪಡೆದಿದ್ದು ಜೋಗಿಗೆ."
     "ಹೋಗಲಿ ಬಿಡು. ಏನೋ, ಹಾರ ಹಾಕಲಿಲ್ಲ ಅಂತ ನೀನು ಪೇಚಾಡ್ತಾ ಇದ್ದಿಯಲ್ಲಾ, ಅದಕ್ಕೆ ನಾಲ್ಕು ಮಾತಾಡಿದೆ ಅಷ್ಟೆ. ಈ ಮನುಷ್ಯರ ಪ್ರಪಂಚ ನಡೀತಿರೋದೇ ಈ ನಾನು, ನಾನು ಅನ್ನೋ ಹೆಸರಿನ ಹಂಬಲದಿಂದ. ನಾನೂ, ನೀನೂ ಇದಕ್ಕೆ ಹೊರತಾದವರೇನಲ್ಲ."
     ಅಕ್ಕ ಪಕ್ಕದಲ್ಲಿದ್ದವರಿಗೆ ಇವರ ಮಾತುಗಳಿಂದ ಕಿರಿಕಿರಿಯಾಗುತ್ತಿದ್ದರಿಂದ ಇವರನ್ನು ಅಸಹನೆಯಿಂದ ನೋಡುತ್ತಿದ್ದರು. ಇದನ್ನು ಗಮನಿಸಿದ ಇವರೂ ಸುಮ್ಮನೆ ಕುಳಿತು ಸಭಾಕಲಾಪ ವೀಕ್ಷಿಸತೊಡಗಿದರು.
-ಕ.ವೆಂ.ನಾಗರಾಜ್.
**************
23.6.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.




ಶುಕ್ರವಾರ, ಮಾರ್ಚ್ 28, 2014

'ವಿಕ್ರಮ'-ಯುಗಾದಿ ವಿಶೇಷ ಸಂಚಿಕೆ (30-03-2014)ರಲ್ಲಿ ಪ್ರಕಟವಾದ ನನ್ನ ವಿನೋದ ಲೇಖನ- ಆಡದ ಮಾತುಗಳು






     ಮಂಕ, ಮಡ್ಡಿ, ಮರುಳ, ಮೂಢರು ಒಂದು ನಿಯಮ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಿ, ಬಿಡಲಿ ವಾರಕ್ಕೊಮ್ಮೆಯಾದರೂ ಮುಠ್ಠಾಳನ ಮನೆಯಲ್ಲಿ ಒಟ್ಟಿಗೆ ಸೇರಿ ಕೆಲವು ಗಂಟೆಗಳಾದರೂ ಕಷ್ಟ-ಸುಖಗಳನ್ನು ವಿನಿಮಯ ಮಾಡಿಕೊಳ್ಳಬೇಕೆಂಬುದೇ ಆ ನಿಯಮ. ಆಗ ಮುಠ್ಠಾಳ ಅವರಿಗೆ ಕಾಫಿ, ತಿಂಡಿ ಒದಗಿಸಬೇಕಾಗಿದ್ದುದೂ ಒಂದು ಅಲಿಖಿತ ನಿಯಮವಾಗಿತ್ತು. ಅವರು ಒಟ್ಟಿಗೆ ಇರುವುದನ್ನು ಕಂಡವರು ಆಡಿಕೊಳ್ಳುತ್ತಿದ್ದರು, 'ಶುರುವಾಯ್ತಪ್ಪಾ ಇವರ ಸತ್ತ ಸಂಗ (ಸತ್ಸಂಗ!)'. ಹಾಗೆ ಸೇರಿದಾಗ ಯಾವುದಾದರೂ ವಿಷಯದ ಮೇಲೆ ಚರ್ಚೆ ಮಾಡುತ್ತಿದ್ದರು. ಹಾಗೆ ಒಂದು ದಿನ ಸೇರಿದಾಗ ಮುಠ್ಠಾಳ ಕೊಟ್ಟ ಬಿಸಿ ಬಿಸಿ ಬೋಂಡಾ ತಿನ್ನುತ್ತಾ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತಿದ್ದರು. ಯಾರೂ ಮಾತು ಪ್ರಾರಂಭಿಸದಿದ್ದರಿಂದ ಮಂಕ ಗಂಟಲು ಸರಿ ಮಾಡಿಕೊಂಡು ತಾನೇ ಶುರು ಮಾಡಿದ:
    "ಗೆಳೆಯರೇ, ಈ ವಿಷಯ ನಿಮಗೆ ಮೊದಲು ಹೇಳಿರಲಿಲ್ಲ. ಈಗ ಹೇಳಿಬಿಡುತ್ತೇನೆ. ನಾನು  ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದೆ. ಆ ದೇವರು ನನ್ನನ್ನು ದುರ್ಬಲನಾಗಿ ಮಾಡಿಬಿಟ್ಟ, ಏಕೆಂದರೆ ವಿಧೇಯತೆ ಕಲಿಯಲಿ ಅಂತ. ಆರೋಗ್ಯ ಕೊಡು ಎಂದದ್ದಕ್ಕೆ, ಎಡವಟ್ಟು ಮಾಡಿದ, ಏಕೆಂದರೆ ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲಿ ಅಂತ. ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಅಂತ ಕೇಳಿದರೆ ಬಡತನ ಕೊಟ್ಟುಬಿಟ್ಟ. ಬುದ್ಧಿವಂತ ಆಗಲಿ ಅಂತ. ಅಧಿಕಾರ ಕೊಡು, ಜನ ನನ್ನನ್ನು ಹೊಗಳಲಿ ಅಂತ ಕೇಳಿದರೆ ಜವಾನನಾಗಿ ಕೆಲಸ ಮಾಡುವಂತೆ ಮಾಡಿದ, ಏಕೆಂದರೆ ನಾನು ದೇವರನ್ನು ನೆನೆಸಿಕೊಳ್ಳುತ್ತಿರಲಿ ಅಂತ. ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂತ ಕೇಳಿದೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂತ ಹೇಳಿದ. ಆಮೇಲೆ ನಾನು ಅವನನ್ನು ಕೇಳಿಕೊಳ್ಳಬೇಕು ಅಂತ  ಇದ್ದೆನೋ ಅದನ್ನು ಕೇಳಿಕೊಳ್ಳಲೇ ಇಲ್ಲ, ಆದರೆ ಆ ದೇವರು ಅವೆಲ್ಲವನ್ನೂ ನನಗೆ ಕೊಟ್ಟ. ನಾನು ಈಗ ಎಲ್ಲರಿಗಿಂತ ಹೆಚ್ಚು ಸುಖಿಯಾಗಿದೀನಿ." 
     'ಅವನು ಸುಖವಾಗಿರುವ ಮುಖ ನೋಡು' ಅಂತ ಮಡ್ಡಿ ಮನಸ್ಸಿನ ಒಳಗೇ ಗೊಣಗಿಕೊಂಡವನು ಮಂಕನಿಗೆ ಕೇಳಿದ: "ಹೌದಪ್ಪಾ, ಅಂಥಾದ್ದೇನು ನೀನು ದೇವರನ್ನು ಕೇಳಿಕೊಳ್ಳದೇ ಇದ್ದದ್ದು?" 
     "ಅದನ್ನು ನೀವು ಕೇಳಬಾರದು, ನಾನು ಹೇಳಲೂಬಾರದು"-ಮಂಕನ ಉತ್ತರ.
     ಇವರ ಮಾತು ಕೇಳುತ್ತಿದ್ದ ಮೂಢ ಮೂಗು ತೂರಿಸಿದ: "ಮಂಕ ಹೇಳೋದು ಒಂದು ರೀತಿಯಲ್ಲಿ ಸರಿ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಅವರ ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. ಮಾತುಗಳನ್ನು ನಾವು ಮುಟ್ಟೋಕಾಗಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ. ಮಂಕ ಬುದ್ಧಿವಂತ, ಅದಕ್ಕೇ ಅದೇನು ಅಂತ ಹೇಳ್ತಾ ಇಲ್ಲ. ಒಂದಲ್ಲಾ ಒಂದು ದಿನ ಯಾವುದಾದರೂ ರೀತಿಯಲ್ಲಿ ಹೊರಬರುತ್ತೆ ಬಿಡು. ಎಷ್ಟು ದಿನಾ ಅಂತ ಅದನ್ನು ಒಳಗೇ ಇಟ್ಟುಕೊಂಡು ಒದ್ದಾಡ್ತಾನೆ."
     ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟು ನೋಡಿದ ಮರುಳ, "ಮಾತು ಆಡಕ್ಕಾಗಲ್ವಾ? ಒಳಗೇ ಇರ್ತಾವಾ? ಹೆಂಗೆ?" ಎಂದಾಗ ಮಡ್ಡಿ, "ಅಯ್ಯೋ, ಮರುಳೆ, ನೀನು ಒಂದು ಸುಂದರ ಹುಡುಗಿ ನೋಡ್ತೀಯ, ಅವಳು ಹೆಂಡತಿಯಾಗಿ ಸಿಕ್ಕರೆ ಅಂತ ಆಸೆ ಪಡ್ತೀಯಾ ಅಂತಿಟ್ಕೋ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ದೊಡ್ಡ ಶ್ರೀಮಂತ ಅಪ್ಪ. ನೀನೋ ಅಟ್ಲಾಸ್ ಸೈಕಲ್ ಮಾಲಿಕ.  ನೀನು ಅವರಪ್ಪನ್ನ ಅಥವ ಆ ಹುಡುಗೀನ ನಿನ್ನ ಆಸೆ ಬಗ್ಗೆ ಹೇಳಿಕೊಳ್ಳೋಕೆ ಆಗುತ್ತಾ? ಅದು ನಿನ್ನ ಗಂಟಲ ಕೆಳಗೇ ಉಳಿದುಹೋಗುತ್ತೆ. ಅರ್ಥ ಆಯ್ತಾ? ಇನ್ನೊಂದು ಉದಾಹರಣೆ ಹೇಳಬೇಕು ಅಂದರೆ, ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸ್ತಿದಾನೆ ಅಂತ ಇಟ್ಕೋ. ಆದರೆ ಅದನ್ನು ಹೇಳೋಕೆ ಅವನಿಗೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಆ ಹುಡುಗೀಗೂ ಅದೇ ಕಥೇ ಆಗಿದ್ದು ಅವಳದ್ದೂ ಅದೇ ಪರಿಸ್ಥಿತಿ ಅಂತ ಇಟ್ಕೋ. ಇಬ್ಬರೂ ಸುಮ್ಮನೆ ಇರ್ತಾರೆ. ಒಂದು ದಿನ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ ಇರ್ತಾವೆ. ಮುಗಿದು ಹೋಯಿತು, ಮಾತುಗಳು ಅಲ್ಲೇ ಸಮಾಧಿಯಾಗುತ್ತವೆ" ಎಂದವನೇ ತಾನು ಎಷ್ಟು ಬುದ್ಧಿವಂತ ಎಂಬಂತೆ ಉಳಿದವರ ಕಡೆ ಕಣ್ಣು ಹಾಯಿಸಿದ.  
     ಎಲ್ಲರ ತಟ್ಟೆಗಳಿಗೆ ಮತ್ತಷ್ಟು ಬೋಂಡ ತಂದು ಹಾಕುತ್ತಾ ಮುಠ್ಠಾಳ, "ಹೇಳಕ್ಕಾಗದೇ ಇದ್ರೆ ಏನಾಯ್ತು? ಒಳಗೇ ಇದ್ದರೆ ಇರಲಿ, ಏನಾಗುತ್ತೆ?"  ಬೋಂಡಾದ ಮುಲಾಜಿಗೆ ಉಳಿದವರು ಅವನನ್ನು ಹಂಗಿಸಲಿಲ್ಲ. ಮೂಢ ಹೇಳಿದ, "ಹೇಳದೆ ಇದ್ದರೆ ಆ ಮಾತುಗಳು ಒಳಗೇ ಕುಣೀತಾ ಇರ್ತವೆ. ಹೊರಗೆ ಬರಲು ಚಡಪಡಿಸ್ತಾ ಇರ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ತಮ್ಮ ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುತ್ತೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ."
     ಮಂಕ, "ಅನ್ನಿ, ಅನ್ನಿ. ನೀವು ನನ್ನನ್ನೇ ಅಂತಾ ಇರೋದು ಅಂತ ನನಗೆ ಗೊತ್ತು. ಒಂದು ವಿಷಯ ತಿಳ್ಕೊಳ್ಳಿ, ಮಾತುಗಳು ಮತ್ತು ಹೃದಯಗಳ ಬಗ್ಗೆ ಜೋಪಾನವಾಗಿರಬೇಕು. ಮಾತುಗಳನ್ನು ಆಡುವ ಮುನ್ನ ಮತ್ತು ಹೃದಯಗಳು ಒಡೆಯುವ ಮುನ್ನ ಎಚ್ಚರಿಕೆ ಇರಬೇಕು ಅನ್ನುವುದು ನೆನಪಿರಲಿ" ಅಂದ. ಎಲ್ಲರೂ ಮಂಕನ ಮೇಲೆ ಮುಗಿಬಿದ್ದರು. "ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳುತ್ತೀಯ? ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಸಿದ್ದಪ್ಪ ಎದೆ ಒಡೆದುಕೊಂಡ ಅಂದ ಹಾಗೆ ಆಯ್ತು ನಿನ್ನ ಮಾತು" ಎಂದರು. ಮಂಕನಿಗೆ ಸಿಟ್ಟು ಬಂದು ಹೇಳಿದ, "ನಾನು ಹೇಳಿದ್ದರಲ್ಲಿ ತಪ್ಪೇನಿದೆ, ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು ಅಂತ ಹೇಳಿದ್ದು. ಏಕೆಂದರೆ ಅವೇ ಮಾತುಗಳಾಗಿ ಹೊರಬರೋದು." "ಆಂ?" ಅಂತ ಎಲ್ಲರೂ ತಲೆ ಕೆರೆದುಕೊಂಡರು. 'ಬಾಯಿ ಬಿಟ್ಟರೆ ಬಣ್ಣಗೇಡು' ಅಂತ ಅವನ ಬಗ್ಗೆ ಆಡಿಕೊಳ್ತಾ ಇದ್ದವರು ಮಂಕ ಈರೀತಿ ಮಾತು ಎಲ್ಲಿ ಕಲಿತ ಅಂತ ಆಶ್ಚರ್ಯಪಟ್ಟರು. 
     "ಆಡಲು ಏನೋ ಇದೆ, ಆದರೆ ಆಡಲಾಗುವುದಿಲ್ಲ ಎಂಬಂತಹ ಜನರಿಂದಲೇ     ಈ ಪ್ರಪಂಚ ತುಂಬಿಹೋಗಿದೆ. ಬುದ್ಧಿವಂತರು ಏನೋ ಹೇಳುತ್ತಾರೆ, ಅವರಿಗೆ ಏನೋ ಹೇಳಲು ಇರುತ್ತದೆ. ದಡ್ಡರೂ ಏನೋ ಹೇಳಬೇಕು ಅಂತಾ ಹೇಳ್ತಾರೆ"-ಮೂಢ ಹೇಳಿದ ಈ ಮಾತು ಯಾರಿಗೂ ಅರ್ಥವಾಗಲಿಲ್ಲ. ಮರುಳ ಕೇಳೇಬಿಟ್ಟ, "ಹಂಗಂದ್ರೆ?" ಮೂಢ ಹೇಳಿದ, "ನಂಗೂ ಸರಿಯಾಗಿ ಗೊತ್ತಿಲ್ಲ, ನಮ್ಮ ಗುರುಗಳು ಮೊನ್ನೆ ಹೇಳಿದರು, ಅದನ್ನೇ ನಿಮಗೆ ಹೇಳಿದೆ."
    ಇಷ್ಟು ಹೊತ್ತು ಸುಮ್ಮನೇ ಇದ್ದ ಮಡ್ಡಿ ಇನ್ನೂ ಸುಮ್ಮನೆ ಇದ್ದರೆ ತನ್ನನ್ನು ದಡ್ಡ ಅನ್ನುತ್ತಾರೆ ಅಂದುಕೊಂಡು ಬಾಯಿಬಿಟ್ಟ, "ಎಲ್ಲರೂ ಯಾಕೆ ಚರ್ಚೆ ಮಾಡುತ್ತಾರೆ ಗೊತ್ತಾ, ದೊಡ್ಡ ಬಾಯಿ ಮಾಡಿ ಬೇರೆಯವರ ಬಾಯಿ ಮುಚ್ಚಿಸುತ್ತಾರೆ ಗೊತ್ತಾ? ತಾವೇ ಬುದ್ಧಿವಂತರು, ತಮಗೇ ಹೆಚ್ಚು ತಿಳಿದಿದೆ, ಉಳಿದವರಿಗಿಂತ ತಾವೇ ಒಳ್ಳೆಯವರು, ತಾವೇ ಹೆಚ್ಚು ಕಷ್ಟಪಟ್ಟವರು, ತಾವೇ ಹೆಚ್ಚು ಅಂತ ತೋರಿಸಿಕೊಳ್ಳೋಕೆ. ತಮ್ಮ ಮಾತು ಕೇಳಿದರೆ ಪ್ರಪಂಚ ಉದ್ಧಾರ ಆಗುತ್ತೆ ಅಂತ ಅವರು ಅಂದುಕೊಳ್ತಾರೆ." ಗಂಟಲು ದೊಡ್ಡದು ಮಾಡಿಕೊಂಡು ವಿಷಯಕ್ಕೆ ಸಂಬಂಧಿಸದಿದ್ದ ಮಾತನಾಡಿದ ಮಡ್ಡಿಯನ್ನು ಎಲ್ಲರೂ ಬಾಯಿಬಿಟ್ಟುಕೊಂಡು ನೋಡಿದರು. ಯಾರಿಂದಲೂ ಪ್ರತಿಕ್ರಿಯೆ ಬರದಿದ್ದರಿಂದ ಮಡ್ಡಿಯ ಮುಖ ದಪ್ಪಗಾಯಿತು. 
     "ಅಪ್ಪಂದಿರಾ, ಇನ್ನು ಬೋಂಡಾ ಇಲ್ಲ, ಮುಗೀತು. ಕಾಫಿ ಕುಡಿದು ಜಾಗ ಖಾಲಿ ಮಾಡಿ. ಅಪ್ಪಾ, ಮೂಢೋತ್ತಮ, ವಂದನಾರ್ಪಣೆ ಮಾಡಿ ಮುಗಿಸಿಬಿಡು" - ಮುಠ್ಠಾಳ ಆರ್ಡರ್ ಮಾಡಿದಾಗ, ಎಲ್ಲರಿಗೂ ಏನೋ ಆಡಬೇಕು ಅನ್ನಿಸಿದರೂ ಆಡದೆ ಸುಮ್ಮನಾದರು. ಮೂಢ ಎಲ್ಲರ ಮುಖವನ್ನೂ ನೋಡುತ್ತಾ ಹೇಳಿದ: "ಗೆಳೆಯರೆ, ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆ ಮಾತುಗಳು ಅಂತಾ ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಅಂತ ದೇವರಲ್ಲಿ ಕೇಳಿಕೊಳ್ಳೋಣ. ಸರ್ವಜ್ಞನ ವಚನ ಹೇಳಿ ಮಾತು ಮುಗಿಸುತ್ತೇನೆ.  'ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಆಡಿಯೂ ಮಾಡದವ ಅಧಮ ಸರ್ವಜ್ಞ'." ಮೂಢ ಮಾತು ಮುಗಿಸುತ್ತಿದ್ದಂತೆಯೇ "ಆಡುವುದಕ್ಕೆ ಆಗದೆ ಇರುವವನು?" ಎಂಬ ಮಾತು ಕೇಳಿಬಂತು. ಎಲ್ಲರೂ ತನ್ನನ್ನು ದುರುಗುಟ್ಟಿ ನೋಡಿದರೂ ನಸುನಗುತ್ತಾ ಇದ್ದ ಮುಠ್ಠಾಳನಿಗೆ ಗೊತ್ತಿತ್ತು, ಕಾಫಿ, ತಿಂಡಿ ಮುಲಾಜಿಗೆ ಯಾರೂ ಏನೂ ಆಡಲಾರರು ಅಂತ!
********************
-ಕ.ವೆಂ.ನಾಗರಾಜ್.

ಶನಿವಾರ, ಮಾರ್ಚ್ 2, 2013

ಸೊಂಟದ ವಿಷಯ



   ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾತಾಡಿದರೆ ಅಪರಾಧ ಅನ್ನುವ ಕಾನೂನು ಇನ್ನೂ ಬಂದಂತೆ ಕಾಣುತ್ತಿಲ್ಲ. ಅಷ್ಟಕ್ಕೂ ಸೊಂಟ ಸರಿಯಾಗಿದ್ದರೆ ಮಾತ್ರ ವಾನಪ್ರಸ್ಥಕ್ಕೆ ಹೋಗಬಹುದು. ಸೊಂಟ ಬಾಗಿ ಶರೀರ ಹಲವಾರು ಕಾಲೆಗಳ ನೆಲೆವೀಡಾಗಿದ್ದರೆ ಹೋಗಬೇಕಾಗಿರುವುದು ಆಸ್ಪತ್ರೆಗೆ ಅಷ್ಟೆ. ನೀವು  'ಸೊಂಟದ ವಿಸ್ಯ, ಬೇಡವೋ ಸಿಸ್ಯಾ' ಎಂಬ ಜನಪ್ರಿಯ ಹಾಡು ನೆನಪು ಮಾಡಿಕೊಂಡರೆ ಅದು ನನ್ನ ತಪ್ಪಲ್ಲ. ಹಿಂದೊಮ್ಮೆ 'ರಸಿಕರಾಗೋಣ' ಎಂಬ ಲೇಖನ ಬರೆದಾಗ ಕೆಲವರು ಹುಬ್ಬೇರಿಸಿದ್ದರು. ಶೀರ್ಷಿಕೆ ನೋಡಿ ಕುತೂಹಲದಿಂದ ಓದಿದವರು ಇವನಿಗೆ ಹುಚ್ಚು ಹಿಡಿದಿಲ್ಲ ಎಂದು ಸಮಾಧಾನ ಪಟ್ಟಿದ್ದರು, ಕೆಲವರಿಗೆ ನಿರಾಶೆಯೂ ಆಗಿತ್ತು. ಈಗ ಈ ವಯಸ್ಸಿನಲ್ಲಿ ಸೊಂಟದ ಬಗ್ಗೆ ಹೇಳುತ್ತಿರುವುದರಿಂದ ನನ್ನ ತಲೆ ಕೆಡುತ್ತಿದೆಯೆಂದು ಈಗಲೂ ಯಾರಿಗಾದರೂ ಅನ್ನಿಸಿದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ. 
     ಸೊಂಟ ಅಂದಾಕ್ಷಣ ಸಿನೆಮಾ ತಾರೆಯರ, ಮಾಡೆಲ್ಲುಗಳ, ಸುಂದರ ತರುಣಿಯರ ಬಳುಕುವ ಸೊಂಟಗಳ ನೆನಪು ಸುಳಿದಾಡಿದರೆ ಅದು ನಿಮ್ಮ ಹಣೆಯಬರಹ. ಸುಂದರಿಯರ ಸ್ಪರ್ಧೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ಸೊಂಟವೇ. ಯಾರ ಯಾರ ಸೊಂಟದ ಅಳತೆ ಎಷ್ಟೆಷ್ಟು ಅಂತ ಪಡ್ಡೆ ಹುಡುಗರು ನೋಡಿದ ತಕ್ಷಣ ಹೇಳಿಬಿಡುತ್ತಾರೆ. ಸೊಂಟದ ಅಳತೆ ಕಡಿಮೆಯಿರುವವರೆಗೆ ಮಾತ್ರ ನಾಯಕಿಯರುಗಳಿಗೆ ಬೇಡಿಕೆ. ಸ್ವಲ್ಪ ದಪ್ಪವಾಯಿತೋ ಅವರುಗಳು ಅಕ್ಕ, ಅಮ್ಮರ ಪಾತ್ರಗಳಿಗೆ ವರ್ಗಾವಣೆಯಾಗಿಬಿಡುತ್ತಾರೆ. ಪುರಾತನ ಕಾಲದಿಂದಲೂ ಕವಿಗಳು ತರುಣಿಯರ ಸೊಂಟವನ್ನು ಬಳುಕುವ ಬಳ್ಳಿಗೆ ಹೋಲಿಸಿ ಪ್ರಿಯತಮನ ತೋಳಿನಾಸರೆ ಅವರುಗಳಿಗೆ ಅವಶ್ಯವೆಂದು ಸಾರಿ ಸಾರಿ ಬರೆಯುತ್ತಾ ಬಂದಿದ್ದಾರೆ. ಸೊಂಟದ ಬಗ್ಗೆ ತಲೆ ಕೆಡಿಸಿಕೊಂಡ ಕೆಲವರು ಸೊಂಟ ಮುರಿಸಿಕೊಂಡದ್ದೂ ಇದೆ. ಇರಲಿ ಬಿಡಿ, ನಾನು ಸೊಂಟದ ಈ ರೀತಿಯ ಕಲ್ಪನೆಗೆ ಹೊರತಾಗಿ ಬರೆಯುವೆ. ಸೊಂಟಾಭಿಮಾನಿಗಳ ವಿರೋಧವನ್ನು ನಾನು ಕಟ್ಟಿಕೊಳ್ಳಲಾರೆ, ನನ್ನ ಸೊಂಟವೂ ಗಟ್ಟಿಯಾಗಿ ಉಳಿಯಬೇಕಲ್ಲಾ, ಆದ್ದರಿಂದ ಮೊದಲೇ ಹೇಳಿಬಿಡುವೆ, ಸೊಂಟ ಪ್ರಧಾನವಾದ ಅಂಗ ಎಂಬುದನ್ನು ಪ್ರತಿಪಾದಿಸುವುದೇ ಈ ಬರಹದ ಉದ್ದೇಶ. 
     ಸೊಂಟದ ಸುತ್ತಳತೆ ಶರೀರದ ಎತ್ತರದ ಅರ್ಧಕ್ಕಿಂತ ಹೆಚ್ಚಿಗೆ ಇರಬಾರದೆಂದು ಯಾರೋ ಪುಣ್ಯಾತ್ಮ ಹೇಳಿದ್ದಾನೆ. ಇದು ಸರಿಯೋ, ಅಲ್ಲವೋ ನನಗಂತೂ ಗೊತ್ತಿಲ್ಲ. ಗೊತ್ತಿರುವವರು ನನಗೂ ತಿಳಿಸಿ. ಈ ಸೊಂಟ ಇದೆಯಲ್ಲಾ, ಅದೇ ಆಧಾರ ಮನುಷ್ಯನಿಗೆ. ಸೊಂಟ ಭದ್ರವಿಲ್ಲದಿದ್ದರೆ ಕೂರುವುದು, ಓಡಾಡುವುದಾದರೂ ಹೇಗೆ? ಮನುಷ್ಯನಿಗೆ ಆಧಾರವಾಗಿರುವ ಪ್ರಧಾನ ಬೆನ್ನು ಮೂಳೆಯ ಉಗಮ ಸೊಂಟದ ಕೆಳಭಾಗದಿಂದಲೇ. ಸೊಂಟ ಬಾಗಿಸಿದರೋ, ಬೆನ್ನೂ ಬಾಗುತ್ತದೆ. ಎದೆ ಎತ್ತಿ, ಎದೆ ಉಬ್ಬಿಸಿ ನಡೆ ಎಂದು ಹೇಳುತ್ತಾರೆ. ಆದರೆ ಎದೆ ಎತ್ತಬೇಕಾದರೆ, ಎದೆ ಉಬ್ಬಿಸಿ ನಡೆಯಬೇಕೆಂದರೆ ಸೊಂಟ ನೆಟ್ಟಗಿರಬೇಕಲ್ಲವೇ? ಸೊಂಟ ಸೊಟ್ಟಗಿದ್ದರೆ ಎದೆ ಉಬ್ಬುವುದಾದರೂ ಹೇಗೆ? ಕೆಲಸ ಸೊಂಟದ್ದು, ಹೆಸರು ಮಾತ್ರ ಎದೆಗೆ! ಯಾರ ಸೊಂಟ ನೆಟ್ಟಗಿದೆಯೋ ಅವರು ಆರೋಗ್ಯವಾಗಿರುತ್ತಾರೆ. ಸೊಟ್ಟ ಸೊಂಟದವನ ಆರೋಗ್ಯವೂ ಸೊಟ್ಟವೇ ಆಗಿರುತ್ತದಂತೆ! ನೆಚ್ಚಿನ ಸಹಾಯಕ ದೂರವಾದರೆ ಕೈ ಮುರಿದಂತೆ ಅನ್ನುತ್ತಾರೆ. ಸಾಲ ಕೊಟ್ಟವರು ಕೇಳಲು ಬಂದರೆ ಕಿಬ್ಬದಿಯ ಕೀಲು ಮುರಿದಂತೆ ಅಂತ ಸರ್ವಜ್ಞನೇ ಹೇಳಿದ್ದಾನೆ. ಆದರೆ ಆಸರೆಯಾಗಿರುವವರು ದೂರವಾದರೆ ಸೊಂಟವೇ ಮುರಿದಂತೆ ಎಂದು ಹೇಳುತ್ತಾರೆ. ಆಸರೆ, ಆಧಾರಕ್ಕೆ ಪರ್ಯಾಯವೇ ಸೊಂಟ! ಯಾರಿಗಾದರೂ ಹಿರಿಯರಿಗೆ ಗೌರವ ಸಲ್ಲಿಸಬೇಕೆಂದರೆ ನಡು ಬಗ್ಗಿಸಿ ನಮಸ್ಕರಿಸುತ್ತಾರೆ. ಜಪಾನ್, ಚೀನಾಗಳಲ್ಲೂ ಸೊಂಟ ಬಗ್ಗಿಸಿ ಸಲಾಮು ಮಾಡುವುದು ಗೌರವದ ಸಂಕೇತ. ದೈನ್ಯ ಪ್ರದರ್ಶನಕ್ಕೂ, ಇಷ್ಟವಿರಲಿ, ಇಲ್ಲದಿರಲಿ ಸೊಂಟ ಬಗ್ಗಿಸಿ ಗೌರವ ಸಲ್ಲಿಸಬೇಕು. ಅಂತಹ ಗೌರವ ಕೊಡುವುದಕ್ಕೆ ಡೊಗ್ಗು ಸಲಾಮು ಎನ್ನುತ್ತಾರೆ. ಜನರಿಗೆ ನಮಸ್ಕಾರ ಮಾಡಿ ಅಧಿಕಾರಕ್ಕೇರಿದವರು ನಂತರ ಜನರಿಂದ ನಮಸ್ಕಾರ ಪಡೆದುಕೊಳ್ಳುತ್ತಾರೆ. ಧಿಮಾಕು ತೋರಿಸಬೇಕೆಂದವರು ಸೊಂಟದ ಮೇಲೆ ಕೈಯಿಟ್ಟು ಕುಹಕ ನೋಟ ಬೀರುತ್ತಾರೆ. ಮರುಳು ಮಾಡುವ ಲಲನಾಮಣಿಯರೂ ಸೊಂಟದ ಮೇಲೆ ಕೈಯಿಟ್ಟು ಓರೆನೋಟ ಬೀರುತ್ತಾರೆ. ಎಲ್ಲದಕ್ಕೂ ಸೊಂಟ ಬೇಕು! ಮಾನವಬಾಂಬುಗಳಾಗಿ ಹಲವರ ಪ್ರಾಣ ತೆಗೆಯುವ ಉಗ್ರಗಾಮಿಗಳು ಬಾಂಬು ಇರುವ ಬೆಲ್ಟು ಕಟ್ಟಿಕೊಳ್ಳುವುದಕ್ಕೂ ಸೊಂಟ ಬೇಕು. ಮಾನ ಮುಚ್ಚುವ ಬಟ್ಟೆಗೆ ಆಧಾರಕ್ಕೂ ಈ ಸೊಂಟವೇ ಬೇಕು. ಆಡುವ ಮಾತುಗಳಿಗೂ ಸೊಂಟಕ್ಕೂ ಏನೋ ಸಂಬಂಧವಿರಬೇಕು. ಸೊಂಟದ ಕೆಳಗಿನ ಮಾತು ಅಂದರೆ ಆಡಬಾರದ ಮಾತು, ಸೊಂಟದ ಮೇಲಿನ ಮಾತು ಅಂದರೆ ಹೃದಯದಿಂದ ಬಂದ ಮಾತು ಎನ್ನುವುದು ವಾಡಿಕೆ. ಆದರೆ ಸೊಂಟ ಮಾತ್ರ ಎರಡು ರೀತಿಯ ಮಾತುಗಳಿಗೂ ಮಧ್ಯದಲ್ಲಿದ್ದು ನಿಷ್ಪಕ್ಷಪಾತವಾಗಿರುತ್ತದೆ.
     'ಕೊಬ್ಬು ಜಾಸ್ತಿ ಮಗನಿಗೆ, ನಾನು ಇಳಿಸುತ್ತೇನೆ' ಎಂಬ ರೀತಿಯ ಮಾತುಗಳು ಕಿವಿಗೆ ಬಿದ್ದಿರಬಹುದು. ಈ ಕೊಬ್ಬು ಅನ್ನುವುದು ಎರಡು ತರಹ ಇರುತ್ತದೆ, ಒಂದು ಮಾನಸಿಕ, ಇನ್ನೊಂದು ಶಾರೀರಿಕ. ಮಾನಸಿಕ ಕೊಬ್ಬಿನ ಬಗ್ಗೆ ಮಾತನಾಡುವುದು ಇಲ್ಲಿ ಅಪ್ರಸ್ತುತ. ಶಾರೀರಿಕ ಕೊಬ್ಬು ಇದೆಯಲ್ಲಾ ಅದು ಮೊದಲು ಆಕ್ರಮಿಸುವುದು ಸೊಂಟವನ್ನೇ, ಚೀನಾ ಟಿಬೆಟ್ಟನ್ನು ನುಂಗಿದಂತೆ. ಅಂತಹವರ ಸೊಂಟ ಯಾವುದು ಹೊಟ್ಟೆ ಯಾವುದು ಗೊತ್ತಾಗುವುದಿಲ್ಲ. ಕೆಲವರ ಸೊಂಟ-ಕಮ್-ಹೊಟ್ಟೆಯ ಸುತ್ತಳತೆ ಶರೀರದ ಎತ್ತರಕ್ಕಿಂತ ಜಾಸ್ತಿಯಿರುತ್ತದೆ. ಸಾಮಾನ್ಯವಾಗಿ ಅವರಿಗೆ ಸಿಟ್ಟು ಬರುವುದು ಕಡಿಮೆ. ಸೊಂಟ ಮಾಯವಾಗುವುದರಿಂದ ಸಿಟ್ಟೂ ಮಾಯವಾಗುತ್ತದೆಯೇ ಎಂಬುದು ಸಂಶೋಧನೆ ಮಾಡಬೇಕಾದ ವಿಷಯ. ವೈಜ್ಞಾನಿಕ ಕಾರಣ ಏನಿರಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದರೆ ನನ್ನನ್ನು ಕೇಳಬೇಡಿ, ನನಗೆ ಗೊತ್ತಿಲ್ಲ. ಸೊಂಟದ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ನನ್ನ ಸೊಂಟದ ಬಗ್ಗೆಯೂ ಸಹ ಕಾಳಜಿ ವಹಿಸಬೇಕಲ್ಲಾ, ಅದಕ್ಕಾಗಿ ಮುಗಮ್ಮಾಗಿ ಸೂಕ್ಷ್ಮವಾಗಿ ಪ್ರಸ್ತಾಪಿಸಿರುವೆ. ನಾನು ಹೇಳದೆ ಬಿಟ್ಟಿರುವ ಸಂಗತಿಗಳನ್ನು ನೀವೇ ಕಲ್ಪಿಸಿಕೊಳ್ಳಿ.
     ಮನುಷ್ಯನ ಮಧ್ಯ  ವಯಸ್ಸು ಎಂದರೆ ಸಣ್ಣ ಸೊಂಟ ಮತ್ತು ವಿಶಾಲ ಮನಸ್ಸುಗಳು ಸ್ಥಳ ಬದಲಾಯಿಸಲು ಪ್ರಾರಂಭಿಸುವ ಸಮಯ; ಅಂದರೆ ಸೊಂಟ ವಿಶಾಲವಾಗುತ್ತಾ ಹೋಗುತ್ತದೆ, ಮನಸ್ಸು ಸಣ್ಣದಾಗುತ್ತಾ ಹೋಗುತ್ತದೆ. ಇದನ್ನು ಎಲ್ಲರಿಗೂ ಅನ್ವಯಿಸಿ ಬರೆಯುತ್ತಿಲ್ಲ. ಹೆಚ್ಚಿನವರಿಗೆ ಅನ್ವಯಿಸಬಹುದು. ಪ್ರತಿಯೊಂದಕ್ಕೂ ಅಪವಾದವಿರುತ್ತದೆ.
     ಏನಾದರೂ ಸಾಧಿಸಬೇಕು ಎನ್ನುವುದಕ್ಕೆ ಸೊಂಟ ಭದ್ರವಿರಬೇಕು ಎನ್ನುತ್ತಾರೆ. ಶ್ರಮದ ಕೆಲಸ ಮಾಡುವವರು ಸೊಂಟಕ್ಕೆ ಭದ್ರವಾಗಿ ಟವೆಲನ್ನೋ, ವಸ್ತ್ರವನ್ನೋ ಕಟ್ಟಿರುತ್ತಾರೆ. ಅದರಿಂದ ಸೊಂಟಕ್ಕೆ ಆಧಾರ, ಬಲ ಬರುತ್ತದೆ. ಹಿಡಿದ ಕೆಲಸ ಬಿಡದೆ ಸಾಧಿಸುವವರನ್ನು 'ಟೊಂಕ ಕಟ್ಟಿ' ನಿಂತವರು ಎನ್ನುತ್ತಾರೆ. ಈ ಟೊಂಕ ಎಂದರೆ ಬೇರೆ ಅಲ್ಲ, ಸೊಂಟವೇ. ಸ್ವಾಮಿ ವಿವೇಕಾನಂದರ ಜನಪ್ರಿಯ ಭಂಗಿಯ ಫೋಟೋ ಗಮನಿಸಿದ್ದೀರಾ? ಅವರು ಸೊಂಟಕ್ಕೆ ವಸ್ತ್ರ ಬಿಗಿದುಕೊಂಡು ಕೈಕಟ್ಟಿ ಎದೆಯುಬ್ಬಿಸಿ ನೋಡುತ್ತಿರುವ ನೋಟ ಎಂತಹವರಲ್ಲೂ ಅವರಲ್ಲಿ ಗೌರವ ಉಕ್ಕಿಸುತ್ತದೆ. ನಾವು ಏನೇನೋ ಮಾಡಬೇಕೆಂದು ಅಂದುಕೊಂಡಿರುತ್ತೇವೆ. ಅಂದುಕೊಂಡದ್ದನ್ನು ಮಾಡಲಾಗದ್ದಕ್ಕೆ ಮುಖ್ಯ ಕಾರಣ ಟೊಂಕ ಕಟ್ಟಿ ನಿಲ್ಲದಿರುವುದು! ಇನ್ನು ಮುಂದಾದರೂ ನಮ್ಮ ವೈಫಲ್ಯಗಳಿಗೆ ನೆಪಗಳನ್ನು ಹೇಳದಿರೋಣ, ಟೊಂಕ ಕಟ್ಟಿ ನಿಂತು ಸಾಧಿಸೋಣ. ಏನಂತೀರಿ?
-ಕ.ವೆಂ.ನಾಗರಾಜ್.

ಮಂಗಳವಾರ, ಫೆಬ್ರವರಿ 19, 2013

ಗೋಲ್ ಮಾಲ್ ಟಿವಿ ರಿಪೋರ್ಟರ್ ಗೋವಿಂದ


    ಎಂದಿನಂತೆ ಮಂಕ, ಮೂಢರು ಸಂಜೆ ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಮಡ್ಡಿ ಮತ್ತು ಮುಠ್ಠಾಳರು ಮೆಟ್ಟಿಲ ಮೇಲೆ ಕುಳಿತು ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದುದನ್ನು ಕಂಡು ಇವರೂ ಸೇರಿಕೊಂಡರು. ಸರ್ಕಾರಿ ಶಾಲೆಯೊಂದರ ಶಿಕ್ಷಕನಾಗಿದ್ದ ಮುಠ್ಠಾಳ ಹೆಡ್ ಮಾಸ್ಟರನ ಕಿರಿಕಿರಿ ಬಗ್ಗೆ ಕೊರಗುಟ್ಟುತ್ತಿದ್ದ. ರಜಾ ಕೇಳಿದರೆ ಕೊಡಲ್ಲ, ಲೇಟಾಗಿ ಬಂದರೆ ಸಿ.ಎಲ್. ಕಟ್ ಮಾಡ್ತಾನೆ, ಹಾಗೆ, ಹೀಗೆ ಅಂತ ಅಲವತ್ತುಕೊಳ್ಳುತ್ತಿದ್ದ.
ಮುಠ್ಠಾಳ: ಏನು ಮಾಡಬೇಕೋ ಗೊತ್ತಾಗ್ತಾ ಇಲ್ಲ ಕಣ್ರೋ. ಬೇರೆ ಸ್ಕೂಲಿಗೆ ಟ್ರಾನ್ಸ್‌ಫರ್ ಮಾಡಿಸ್ಕೊಳ್ಳೋಕೂ ನೋಡಿದೆ ಕಣೋ, ಅದಕ್ಕೂ ಕಲ್ಲು ಹಾಕಿದ ಕಣೋ. ಅವನಿಗೊಂದು ಗತಿ ಕಾಣಿಸ್ಬೇಕು.
ಮಂಕ:  ಶಿಕ್ಷಣಾಧಿಕಾರಿ ಹತ್ರ ಮಾತಾಡಬೇಕಿತ್ತು.
ಮುಠ್ಠಾಳ; ಅಯ್ಯೋ, ಅವನು ಅವರೆಲ್ಲರ ಹತ್ರ ಚೆನ್ನಾಗಿದಾನೆ. ನಾನು ಅವರ ಆಫೀಸಿನಲ್ಲಿ ಏನು ಮಾತಾಡಿದರೂ ಅವನಿಗೆ ಗೊತ್ತಾಗಿಹೋಗುತ್ತೆ. ಅವನು ಬಂದು ಕಡ್ಡಿ ಆಡಿಸಿ ಹೋಗ್ತಾನೆ. ನಾಲ್ಕು ತದುಕಿಬಿಡೋಣ ಅಂದರೆ ಅದೂ ಎಡವಟ್ಟಾಗುತ್ತೆ. ಏನಾದರೂ ದಾರಿ ಇದ್ರೆ ಹೇಳ್ರೋ.
     ಹಲ್ಲು ಕಡಿಯುತ್ತಾ ಧುಮುಗುಟ್ಟುತ್ತಿದ್ದ ಮುಠ್ಠಾಳನನ್ನು ಕಂಡು ಸ್ನೇಹಿತರಿಗೆ ಕನಿಕರವಾಯಿತು. ಏನೋ ಹೊಳೆದವನಂತೆ ಮಡ್ಡಿ ಪ್ರಕಾಶಮಾನನಾದ.
ಮಡ್ಡಿ:  ಸರ್ವ ರೋಗಕ್ಕೆ ಸಾರಾಯಿ ಮದ್ದು ಅನ್ನೋ ಹಾಗೆ ಸರ್ವಸಮಸ್ಯೆಗೆ ಪರಿಹಾರ ಕೊಡೋ ಗೋವಿಂದ ಇದಾನೆ. ಅವನ ಹತ್ರ ಹೋಗೋಣ. 
ಮೂಢ: ಆ ಗೋಲ್ ಮಾಲ್ ಚಾನೆಲ್ ರಿಪೋರ್ಟರ್ ಗೋವಿಂದಾನಾ? ನಿನ್ನ ದೂರದ ನೆಂಟ? ಅವನೇನು ಮಾಡ್ತಾನೋ?
ಮಡ್ಡಿ:  ಹೂಂ, ಅವನೇ. ಅವನು ಬಂದ ಅಂದರೆ ಆ ಹೆಡ್ ಮಾಸ್ಟರನಿಗೆ ಒಂದು ಗತಿ ಕಾಣಿಸ್ತಾನೆ. ಎಲ್ಲರೂ ಹೋದರೆ ಕೆಲಸ ಕೆಡುತ್ತೆ. ನಾನು ಮುಠ್ಠಾಳ ಇಬ್ರೇ ಹೋಗಿಬರ್ತೀವಿ. ಅವನಿಗೆ ಪುರುಸೊತ್ತೇ ಇರಲ್ಲ. ಅಪಾಯಿಂಟ್ ಮೆಂಟ್ ತೆಗೆದುಕೊಂಡೇ ಹೋಗಬೇಕು.
     ಪರಿಹಾರ ಕಂಡ ಖುಷಿಯಲ್ಲಿ ಅವತ್ತಿನ ಸಂಜೆಯ ತಿಂಡಿ, ಕಾಫಿಯ ಖರ್ಚನ್ನು ಮುಠ್ಠಾಳನೇ ವಹಿಸಿಕೊಂಡ. ಫೋನು ಮಾಡಿ ವಿಚಾರಿಸಿದಾಗ ಮೂರು ದಿನದ ನಂತರ ಮಧ್ಯಾಹ್ನ 4 ಘಂಟೆಗೆ ಅಪಾಯಿಂಟ್ ಮೆಂಟ್ ಸಿಕ್ಕಿತು. ಬೇರೆ ರಿಪೋರ್ಟರುಗಳು ಸುದ್ದಿಗಾಗಿ ಓಡಾಡುತ್ತಿದ್ದರೆ ಸುದ್ದಿಗಳೇ ತನ್ನಲ್ಲಿಗೆ ಬರುತ್ತವೆ ಎಂದು ಗೋವಿಂದ ಜಂಬದಿಂದ ಹೇಳುತ್ತಿದ್ದ. ಸಮಯಕ್ಕೆ ಸರಿಯಾಗಿ ಮಡ್ಡಿ, ಮುಠ್ಠಾಳರು ಗೋವಿಂದನ ಮನೆಗೆ ಹೋದರು. ಕೆಲವೇ ವರ್ಷಗಳ ಹಿಂದೆ ಒಂದು ಸಣ್ಣ ಮಂಗಳೂರು ಹೆಂಚಿನ ಬಾಡಿಗೆ ಮನೆಯಲ್ಲಿದ್ದ ಗೋವಿಂದ ಈಗ ಒಂದು ದೊಡ್ಡ ಬಂಗಲೆಯ ಒಡೆಯ. ವರಾಂಡಾದಲ್ಲಿ ಹಾಕಿದ್ದ ಸಾಲು ಕುರ್ಚಿಗಳಲ್ಲಿ ಏಳೆಂಟು ಜನ ಕುಳಿತಿದ್ದರು. ಟಿವಿಎಸ್ ಮೊಪೆಡ್ಡಿನಲ್ಲಿ ಓಡಾಡುತ್ತಿದ್ದವನು ಇಂದು ಇನೋವಾ ಕಾರಿನ ಮಾಲಿಕ. ಮಡ್ಡಿ, ಮುಠ್ಠಾಳರು ಗೋವಿಂದನನ್ನು ಕಂಡು ನಮಸ್ಕರಿಸಿದಾಗ ಅವನು ನೆಂಟ ಮಡ್ಡಿಯನ್ನು ಕುರಿತು, 'ಆರಾಮವಾಗಿ ಮಾತಾಡೋಣ, ಕೂತ್ಕೊಳಿ. ಬಂದಿರೋರನ್ನ ಬೇಗ ಕಳಿಸಿಬಿಡ್ತೀನಿ' ಅಂದು ಹೊರಗಿದ್ದವರನ್ನು ಒಬ್ಬೊಬ್ಬರಾಗಿ ಕರೆಸಿ ಅವರುಗಳಿಗೆ ಪರಿಹಾರ ಹೇಳಿ ಕಳಿಸಿದ.
ಗೋವಿಂದ:  ಈಗ ಹೇಳು ಮಡ್ಡಿ. ನಿಮ್ಮ ಸ್ನೇಹಿತರದೇನು ಸಮಸ್ಯೆ?
     ಮುಠ್ಠಾಳ ಪುನಃ ಮೊದಲಿನಿಂದ ಪೂರ್ಣವಾಗಿ ವರದಿ ಒಪ್ಪಿಸಿದ. ಕೇಳಿಕೊಂಡ ಗೋವಿಂದ ಐದು ನಿಮಿಷ ಸೀಲಿಂಗ್ ಫ್ಯಾನ್ ನೋಡುತ್ತಾ ಏನೋ ಲೆಕ್ಕ ಹಾಕುತ್ತಿದ್ದ. ಕೊನೆಗೆ ಬಾಯಿಬಿಟ್ಟ.
ಗೋವಿಂದ: ಇದು ಬಹಳ ಖರ್ಚಿನ ಬಾಬತ್ತು. ನಿಮ್ಮ ಹೆಸರು ಹೊರಗೆ ಬರದಂತೆ ನೋಡಿಕೊಳ್ಳಬೇಕು. ಜನರನ್ನು ಸೇರಿಸಬೇಕು. ನಮ್ಮ ಸಂಪಾದಕರನ್ನೂ ನೋಡಿಕೊಳ್ಳಬೇಕು. ನಿಮ್ಮ ಕೈಲಿ ಆಗಲಾರದು, ಬಿಡಿ.
ಮುಠ್ಠಾಳ:  ಎಷ್ಟು ಖರ್ಚಾದರೂ ಪರವಾಗಿಲ್ಲ. ಸಾಲ ಮಾಡಿಯಾದರೂ ಕೊಡುತ್ತೇನೆ. ಅವನು ತಲೆ ಮೇಲೆತ್ತಬಾರದು, ಹಾಗಾಗಬೇಕು.
ಗೋವಿಂದ: ಸರಿ ಹಾಗಾದರೆ ಈಗ ಇಪ್ಪತ್ತು ಸಾವಿರ ಅಡ್ವಾನ್ಸ್ ಕೊಡಿ. ಒಟ್ಟು ಎಷ್ಟು ಕೊಡಬೇಕು ಅನ್ನೋದನ್ನು ನಮ್ಮ ಸಂಪಾದಕರನ್ನು ಕೇಳಿ ಹೇಳ್ತೀನಿ. ಕೆಲಸ ಆಗೋ ದಿವಸ ಉಳಿದ ದುಡ್ಡು ಕೊಟ್ಟ ನಂತರವೇ ನಮ್ಮ ಕೆಲಸ ಶುರು ಆಗುತ್ತೆ. ಕೊಡಲಿಲ್ಲ ಅಂದರೆ ಕೆಲಸ ಆಗಲ್ಲ. ನಿಮ್ಮ ಅಡ್ವಾನ್ಸ್ ಹಣಾನೂ ವಾಪಸು ಸಿಗಲ್ಲ.
ಮುಠ್ಠಾಳ: ಈಗ ಹತ್ತು ಸಾವಿರ ಇದೆ. ಉಳಿದದ್ದು ಖಂಡಿತಾ ಕೊಡ್ತೀನಿ. ಕೆಲಸ ಮಾಡಿಕೊಡಿ. ಏನು ಮಾಡಬೇಕೂ ಅಂತ ಇದೀರಿ?
ಗೋವಿಂದ:  ಅದು ಪ್ರೊಫೆಶನಲ್ ಸೀಕ್ರೆಟ್. ಈಗ ಹೇಳಲ್ಲ. ಒಟ್ಟಿನಲ್ಲಿ ಅವನು ಇನ್ನುಮುಂದೆ ನಿಮ್ಮ ತಂಟೆಗೆ ಇರಲಿ, ಬೇರೆ ಯಾರ ತಂಟೆಗೂ ಹೋಗಕ್ಕಾಗಬಾರದು ಹಾಗೆ ಮಾಡ್ತೀವಿ.
ಮುಠ್ಠಾಳ: ನೀವು ಹೇಳೋ ಅಷ್ಟು ಹಣ ಕೊಡ್ತೀನಿ. ನಾಳೆ ನಾಡಿದ್ದರಲ್ಲಿ ಕೆಲಸ ಆಗಬೇಕು.
ಗೋವಿಂದ: ಇನ್ನು ಒಂದು ವಾರ ನಮಗೆ ಪುರುಸೊತ್ತಿಲ್ಲ. ಇಂದು ಸಂಜೆ ಲಾಯರ್ ಗುಂಡಣ್ಣನನ್ನು ಚಪ್ಪಲಿಯಲ್ಲಿ ಹೊಡೆಸುವ ಪ್ರೋಗ್ರಾಮ್ ಫಿಕ್ಸ್ ಆಗಿದೆ. ನಾಳೆ ತರಲಾಪುರದಲ್ಲಿ ಗಂಡ-ಹೆಂಡತಿ ಕಿತ್ತಾಟದ ರೆಕಾರ್ಡಿಂಗ್ ಇದೆ. ಸೋಮವಾರ ಗಲಾಟೆಹಳ್ಳಿಯಲ್ಲಿ ಜಮೀನು ವ್ಯವಹಾರಕ್ಕೆ ಅಪ್ಪ-ಮಕ್ಕಳ ಜಗಳಕ್ಕೆ ಡೇಟ್ ಫಿಕ್ಸ್ ಆಗಿದೆ. ಇನ್ನೂ ಮೂರು ಕೆಲಸಗಳಿಗೆ ಫೈನಲ್ ಟಚ್ ಕೊಡಬೇಕು. 23ನೆಯ ತಾರೀಕು ನಿಮ್ಮ ಕೆಲಸ ಆಗುತ್ತೆ. ಆಗುತ್ತಾ? ಅಷ್ಟು ಹೊತ್ತಿಗೆ ಹಣ ಹೊಂದಿಸಿಕೊಳ್ಳಿ.
     ಗೋವಿಂದ ಡೈರಿಯಲ್ಲಿ ಗುರುತು ಹಾಕಿಕೊಂಡ ಮೇಲೆ ಗೆಳೆಯರಿಬ್ಬರು ಹಿಂತಿರುಗಿದರು. ಮುಠ್ಠಾಳ ದಿನ ಲೆಕ್ಕ ಹಾಕುತ್ತಾ 23ನೆಯ ತಾರೀಕು ಎಂದು ಬರುತ್ತದೋ ಎಂದು ಕಾಯುತ್ತಿದ್ದ ದಿನ ಕೊನೆಗೂ  ಬಂದೇಬಿಟ್ಟಿತು. ಶಾಲೆಯಲ್ಲಿ ಪಾಠ ಮಾಡುತ್ತಿದ್ದವನಿಗೆ ಅದರ ಮೇಲೆ ಗಮನವೇ ಇರಲಿಲ್ಲ. ಅನ್ಯಮನಸ್ಕನಾಗಿದ್ದ ಅವನಿಗೆ ಗಂಟೆ ಹನ್ನೆರಡಾದರೂ ಏನೂ ಆಗದಿದ್ದುದು ಕಂಡು ತನ್ನ ಹಣ ಹಳ್ಳ ಹತ್ತಿತೇ ಎಂಬ ಯೋಚನೆ ಶುರುವಾಯಿತು. ಅಷ್ಟು ಹೊತ್ತಿಗೆ ಶಾಲೆಯ ಹೊರಗೆ ಗದ್ದಲ ಆಗುತ್ತಿದ್ದುದು ಕೇಳಿಸಿತು. ಸುಮಾರು 25-30 ಜನರ ಗುಂಪು 'ಕಾಮುಕ ಶಿಂಗಣ್ಣನಿಗೆ ಧಿಕ್ಕಾರ' ಎಂದು ಗಂಟಲು ಹರಿಯುವಂತೆ ಕಿರುಚುತ್ತಿತ್ತು. ಏನು ಗಲಾಟೆ ಎಂದು ನೋಡಲು ಹೊರಬಂದ ಶಿಂಗಣ್ಣನನ್ನು 4-5 ಜನರು ಎಳೆದುಕೊಂಡು ಹಿಗ್ಗಾಮುಗ್ಗಾ ಹೊಡೆಯತೊಡಗಿದರು. ಟಿವಿಯ ಕ್ಯಾಮರಾ ಎಲ್ಲಾ ದೃಷ್ಯಗಳನ್ನು ಸೆರೆಹಿಡಿಯುತ್ತಿತ್ತು. ಏಕೆ, ಏನು ಎಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗಿದ್ದ ಶಿಂಗಣ್ಣನ ಮೂಗು ಒಡೆದು ರಕ್ತ ಬರುತ್ತಿತ್ತು. ಎಡಗಣ್ಣು ಕಪ್ಪುಗಟ್ಟಿತ್ತು. ಒಬ್ಬ ಹೆಣ್ಣು ಮಗಳು ಎದೆ ಬಡಿದುಕೊಳ್ಳುತ್ತಾ ತನ್ನ ಮಗಳಿಗೆ ಶಿಂಗಣ್ಣ ಹೇಗೆ ಹಿಂಸೆ ಕೊಟ್ಟಿದ್ದ ಎಂದು ಅಳುತ್ತಾ ಹೇಳಿದ್ದು ಸಹ ರೆಕಾರ್ಡ್ ಆಯಿತು. ಇದನ್ನೆಲ್ಲಾ ನೋಡುತ್ತಿದ್ದ ಸುತ್ತ ಮುತ್ತಲಿನ ಜನ ಸಹ ಶಿಂಗಣ್ಣನನ್ನು ಮತ್ತೆ ಬಡಿದರು. ಅಷ್ಟು ಹೊತ್ತಿಗೆ ಬಂದ ಪೋಲಿಸರು ಶಿಂಗಣ್ಣನನ್ನು ಜೀಪಿನಲ್ಲಿ ಕೂರಿಸಿಕೊಂಡು ಹೋದರು. ಬಂದ ಆರೋಪ, ಬಿದ್ದ ಪೆಟ್ಟುಗಳಿಂದ ದಂಗುಬಡಿದಿದ್ದ ಶಿಂಗಣ್ಣನಿಗೆ ಮಾತೇ ಹೊರಡುತ್ತಿರಲಿಲ್ಲ. ಟಿವಿಯಲ್ಲಿ ಬರುತ್ತಿದ್ದ ಲೈವ್ ಕಾರ್ಯಕ್ರಮ ನೋಡುತ್ತಿದ್ದವರು ಶಿಂಗಣ್ಣನನ್ನು ಶಪಿಸುತ್ತಿದ್ದರು. 
     ನಂತರದ ಬೆಳವಣಿಗೆಯಲ್ಲಿ ಶಿಂಗಣ್ಣ ಸಸ್ಪೆಂಡ್ ಆದ, ಮುಠ್ಠಾಳನೇ ಇನ್ ಛಾರ್ಜ್ ಹೆಡ್ ಮಾಸ್ಟರ್ ಆದ. ಆದರೆ ಮುಠ್ಠಾಳನಿಗೆ ಶಾಂತಿಯಿರಲಿಲ್ಲ. ಹೆಡ್ ಮಾಸ್ಟರರಿಗೆ ಬುದ್ಧಿ ಕಲಿಸಬೇಕೆಂದು ಅವನಿಗೆ ಇತ್ತಾದರೂ ಈ ರೀತಿ ಆದದ್ದು ಸರಿ ಕಾಣಲಿಲ್ಲ. ಇನ್ನೇನು ಎರಡು ವರ್ಷಕ್ಕೆ ರಿಟೈರ್ ಆಗುತ್ತಿದ್ದ, ಮೊಮ್ಮಕ್ಕಳಿರುವ ಶಿಂಗಣ್ಣನಿಗೆ ಈ ಅಪವಾದ ಹೊರಿಸಬಾರದಿತ್ತು ಎಂದು ಹಳಹಳಿಸಿದ. ಶಿಂಗಣ್ಣ ಸ್ಟ್ರಿಕ್ಟ್ ಆಗಿದ್ದರೂ ಕಚ್ಚೆಹರುಕನಾಗಿರಲಿಲ್ಲ. ಯಾವ ವಿದ್ಯಾರ್ಥಿನಿ ಮೇಲೆ ಶಿಂಗಣ್ಣ ಲೈಂಗಿಕ ದೌರ್ಜನ್ಯ ನಡೆಸಿದ ಎಂದು ಹೇಳಲಾಗಿತ್ತೋ ಆ ಹುಡುಗಿ ಬಡಹುಡುಗಿಯಾಗಿದ್ದು, ಅವಳ ಚಿಕ್ಕಮ್ಮನಿಗೆ ದುಡ್ಡು ಕೊಟ್ಟು ಆ ರೀತಿ ಹೇಳಿಸಿದ್ದು ಎಂದು ಗೋವಿಂದ ನಂತರ ಗುಟ್ಟಾಗಿ ಹೇಳಿದ್ದ. ಒಬ್ಬರಿಗೆ 200 ರೂ. ನಂತೆ ಕೊಟ್ಟು 25 ಜನರನ್ನು ಹೊಡೆಸಲು ಕರೆಸಲಾಗಿತ್ತಂತೆ. ಶಿಂಗಣ್ಣನ ಮೇಲೆ ಸುತ್ತಮುತ್ತಲಿನ ಜನರಿಗೆ ತುಂಬಾ ಒಳ್ಳೆಯ ಅಭಿಪ್ರಾಯವಿತ್ತು. ಅವರಿಗೆ ಶಿಂಗಣ್ಣ ಹೀಗೆ ಮಾಡಿದ್ದನೆಂದರೆ ನಂಬಿಕೆ ಬರುತ್ತಿರಲಿಲ್ಲ. ಮುಠ್ಠಾಳ ಗೋವಿಂದನಿಗೆ ದೂರವಾಣಿ ಮೂಲಕ ಹೀಗೆ ಮಾಡಬಾರದಿತ್ತೆಂದು ಆಕ್ಷೇಪಿಸಿದ್ದಕ್ಕೆ ರೇಗಿದ ಗೋವಿಂದ, ಸುಮ್ಮನಿರದಿದ್ದರೆ ಮುಠ್ಠಾಳನೂ ಮನೆಗೆ ಹೋಗಬೇಕಾಗುತ್ತದೆಂದು ಎಚ್ಚರಿಸಿ ಬಾಯಿ ಮುಚ್ಚಿಸಿದ. ಶಿಂಗಣ್ಣನ ಆಪ್ತರು ಮನನೊಂದು ನಿಜ ತಿಳಿಯಲು ಸಂಬಂಧಿಸಿದ ಬಾಲಕಿಯ ಮನೆ ಪತ್ತೆ ಹಚ್ಚಿ ವಿಚಾರಿಸಿದಾಗ ಬಾಲಕಿಯ ತಾಯಿ ಹೆದರಿ ಬಾಯಿ ಬಿಟ್ಟಿದ್ದಳು. ಅವಳಿಗೆ ಹತ್ತು ಸಾವಿರ ಕೊಡುವುದಾಗಿ ಹೇಳಿದ್ದ ಗೋವಿಂದ ಎರಡು ಸಾವಿರ ಮಾತ್ರ ಕೊಟ್ಟಿದ್ದನಂತೆ. ವಿಷಯ ಬಾಯಿಂದ ಬಾಯಿಗೆ ಹರಡಿ ಜನ ರೊಚ್ಚಿಗೆದ್ದರು. ಶಿಂಗಣ್ಣನ ಒಳ್ಳೆಯತನ ಅವನ ಸಹಾಯಕ್ಕೆ ಬಂದಿತು. ಗೋವಿಂದ ಮನೆಯಿಂದ ಹೊರಗೆ ಬರುತ್ತಿದ್ದುದನ್ನೇ ಕಾದಿದ್ದ 10-15 ಜನರ ಗುಂಪು ಅವನು ಹೊರಬರುತ್ತಿದ್ದಂತೆ, ಅವನನ್ನು ಕಾರಿನಿಂದ ಹೊರಗೆಳೆದು ಮನಸೋ ಇಚ್ಛೆ ಥಳಿಸಿ ಪರಾರಿಯಾಯಿತು. ಅವನ ಕೈಕಾಲುಗಳ ಮೂಳೆಗಳು ಮುರಿದಿದ್ದವು. ಆಸ್ಪತ್ರೆಯಲ್ಲಿ ಮೈಪೂರಾ ಬ್ಯಾಂಡೇಜ್ ಹಾಕಿಸಿಕೊಂಡು ಮಲಗಿದ್ದ ಗೋವಿಂದನ ಚಿತ್ರ ತೋರಿಸಿ 'ಗೋಲ್ ಮಾಲ್ ರಿಪೋರ್ಟರ್ ಮೇಲೆ ಅಮಾನುಷ ಹಲ್ಲೆ' ಎಂದು ಬ್ರೇಕಿಂಗ್ ನ್ಯೂಸ್ ದಿನವಿಡೀ ಬಿತ್ತರವಾಯಿತು. ಅದನ್ನು ಖಂಡಿಸುವ ಗಣ್ಯರುಗಳ ಹೇಳಿಕೆಗಳನ್ನು ಪುಂಖಾನುಪುಂಖವಾಗಿ ಪ್ರಸಾರ ಮಾಡಲಾಯಿತು. ಗುಂಪು ಚರ್ಚಾಗೋಷ್ಠಿಗೆ ಭಾಗವಹಿಸಲು ತುದಿಗಾಲಲ್ಲಿ ನಿಂತಿರುತ್ತಿದ್ದ ಮಾಧ್ಯಮಗಳ ಮಾಮೂಲಿ ಬುದ್ಧಿವಂತ ಗಣ್ಯರು ಎಂದಿನಂತೆ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದು ಘಟನೆಯನ್ನು ಖಂಡಿಸತೊಡಗಿದರು. 
     ಮರುದಿನ ಹುಳುಕೇಶನ ನೇತೃತ್ವದಲ್ಲಿ ಮಾಧ್ಯಮದ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಸುಮಾರು 50 ಜನ ಮಾಧ್ಯಮದವರು ಧರಣಿ ಕುಳಿತಿದ್ದರು. ವ್ಹೀಲ್ ಛೇರಿನಲ್ಲಿ ಗೋವಿಂದನನ್ನೂ ಕೂರಿಸಿ ಕರೆತಂದಿದ್ದರು. ಅವರುಗಳು ಧರಣಿ ಕುಳಿತು ಸುಮಾರು ಅರ್ಧ ಘಂಟೆಯಾಗಿರಬಹುದು. ನೂರಾರು ಜನರು ಮಾಧ್ಯಮದವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಬರುತ್ತಿದ್ದುದನ್ನು ಕಂಡು ಹುಳುಕೇಶನಾದಿಯಾಗಿ ಮಾದ್ಯಮದವರೆಲ್ಲರೂ ಕಾಲುಕಿತ್ತರು. ಓಡಲಾಗದ ಗೋವಿಂದನೊಬ್ಬ ರಕ್ಷಣೆಗಾಗಿ ಬಾಯಿ ಬಡಿದುಕೊಳ್ಳುತ್ತಿದ್ದ. ಇಬ್ಬರು ಪೋಲಿಸರು ಅಕ್ಕ ಪಕ್ಕ ನಿಂತಿದ್ದರೂ, ಸೇರಿದ್ದ ತನಗೆ ಜನ ಏನು ಮಾಡುತ್ತಾರೋ ಎಂದು ಅವನು ಹೆದರಿ ನಡುಗುತ್ತಿದ್ದ.  ಸಮಯ ಸರಿದಂತೆ ಪ್ರತಿಭಟಿಸುವ ಜನರ ಸಂಖ್ಯೆ ಬೆಳೆಯುತ್ತಾ ಹೋಯಿತು. ಜನರ ಒತ್ತಾಯಕ್ಕೆ ಮಣಿಯಲೇ ಬೇಕಾಗಿ ಬಂದ ಪೋಲಿಸರು ಗೋಲ್ ಮಾಲ್ ಚಾನೆಲ್ಲಿನ ರಿಪೋರ್ಟರ್ ಮತ್ತು ಸುದ್ದಿ ಸಂಪಾದಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡರು. ಗೋಲ್ ಮಾಲ್ ಚಾನೆಲ್ಲಿನ ಸುದ್ದಿ ಸಂಪಾದಕ ಸಂಪಾದಿಸಿದ್ದ ಅಕ್ರಮ ಸಂಪತ್ತಿನ ಬಗ್ಗೆ ಸಹ ವಿಚಾರಣೆ ನಡೆಸಲು ಲೋಕಾಯುಕ್ತರಿಗೆ ಜನಪರ ಹೋರಾಟಗಾರ ತಮ್ಮಣ್ಣ ದೂರು ಅರ್ಜಿ ಸಲ್ಲಿಸಿದ್ದನ್ನು ಕಂಡು ಇತರ ಮಾಧ್ಯಮಗಳವರು ಬೆಚ್ಚಿ ಬಿದ್ದರು. ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಅಂದು ಮಧ್ಯಾಹ್ನ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಮಾಧ್ಯಮದವರು ಇನ್ನು ಮುಂದೆ ಸಾಂಸಾರಿಕ ಮತ್ತು ವೈಯಕ್ತಿಕ ವಿಷಯಗಳಿಗೆ ಮೂಗು ತೂರಿಸುವುದಿಲ್ಲವೆಂದು ಲಿಖಿತ ಮುಚ್ಚಳಿಕೆ ಬರೆದುಕೊಟ್ಟರು.
-ಕ.ವೆಂ.ನಾಗರಾಜ್.  

ಗುರುವಾರ, ಜನವರಿ 31, 2013

ಸತ್ಯೋಪದೇಶ



     ಅವಸರ ಅವಸರವಾಗಿ ಹೋಗುತ್ತಿದ್ದ ಮಡ್ಡಿಯನ್ನು ತಡೆದು ಮಂಕ ಕೇಳಿದ:
'ಯಾಕೋ ಇಷ್ಟೊಂದು ಅರ್ಜೆಂಟಾಗಿ ಹೋಗುತ್ತಿದ್ದೀಯಾ?'
ಮಡ್ಡಿ:  ನಿನಗೆ ಗೊತ್ತಿಲ್ಲವಾ? ಸ್ವಾಮಿ ಸತ್ಯಾನಂದರ ಶಿಷ್ಯ ಸತ್ಯಪ್ರೇಮಾನಂದ ಬಂದಿದ್ದಾರೆ. ಆ ಮೂಲೆಮನೆ ಗುಂಡಣ್ಣನ ಮನೇಲಿ ಉಳಕೊಂಡಿದಾರೆ. ಇವತ್ತು ಸಾಯಂಕಾಲ ಸತ್ಯೋಪದೇಶ ಇದೆ. ಈಗ 'ಸಂದೇಹಕ್ಕೆ ಸಮಾಧಾನ' ಅಂತ ಕಾರ್ಯಕ್ರಮ ಇದೆ. ಅವರನ್ನು ಕಂಡು ನಮಸ್ಕಾರ ಮಾಡಿ, ಕೆಲವು ಅನುಮಾನ ಪರಿಹಾರ ಮಾಡಿಕೊಳ್ಳೋಣ ಅಂತ ಹೋಗ್ತಾ ಇದೀನಿ. ಬರ್ತೀಯಾ? ಅವರು ಇದೇ ಊರಿನವರು ಕಣೋ.
ಮಂಕ:  ಈ ಊರಿನವರಾ? ಯಾರು?
ಮಡ್ಡಿ:  ಅದೇ, ತಿಕ್ಕಲು ಮೇಷ್ಟ್ರು ಶೀನ ಇದ್ದರಲ್ಲೋ, ಅವರ ಮಗ ಗೋವಿಂದ. ಅವರೇ ಈಗ ಸತ್ಯಾನಂದರ ಶಿಷ್ಯ ಸತ್ಯಪ್ರೇಮಾನಂದ.
ಮಂಕ:  ಗೋವಿಂದನಾ? ಭಗ್ನಪ್ರೇಮಿ? ಆ ಉಂಡಾಡಿಗುಂಡನ್ನ ಯಾವ ಹುಡುಗಿ ಒಪ್ತಿದ್ದಳು ಹೇಳು. ಈಗ ಸತ್ಯಪ್ರೇಮಿ ಆಗಿದಾನಾ?
ಮಡ್ಡಿ:  ಏಯ್, ಅವರ ಬಗ್ಗೆ ಹಗುರವಾಗಿ ಮಾತಾಡಬೇಡ ಕಣೋ. ಅವರನ್ನು ನೋಡಿದರೇ ನಮಸ್ಕಾರ ಮಾಡಬೇಕು ಅನ್ಸುತ್ತೆ. ಏನ್ ಕಳೆ ಅವರ ಮುಖದ ಮೇಲೆ! ಸತ್ಯಪ್ರೇಮಾನಂದ ಅಂದರೆ ಅವರೇನು ಸಾಮಾನ್ಯರಲ್ಲ. ಸತ್ಯ, ಸತ್ಯ ಅಂತ ಜಪ ಮಾಡ್ತಾ ಇರ್ತಾರೆ. ಊರೂರು ತಿರುಗಿ ಸತ್ಯೋಪದೇಶ ಮಾಡ್ತಾರೆ.
ಮಂಕ:  'ಸಂದೇಹಕ್ಕೆ ಸಮಾಧಾನ' ಕಾರ್ಯಕ್ರಮ ಅಂದೆಯಾ? ನನಗೆ ಅವರ ಬಗ್ಗೇನೇ ಸಂದೇಹವಿದೆ. ನಡಿ, ನಾನೂ ಬರ್ತೀನಿ. ಮುಠ್ಠಾಳ, ಮೂಢರನ್ನೂ ಕರಕೊಂಡು ಹೋಗೋಣ.
     ಮಂಕ, ಮಡ್ಡಿ, ಮುಠ್ಠಾಳ, ಮೂಢರು ಗರಿ ಗರಿ ಬಟ್ಟೆ ಧರಿಸಿ ಮೂಲೆಮನೆ ಗುಂಡಣ್ಣನ ಮನೆಯ ಹತ್ತಿರ ಹೋದರೆ ಅಲ್ಲಿ ಜನವೋ ಜನ. ಹಣ್ಣು-ಹಂಪಲು ತಟ್ಟೆ ಹಿಡಿದುಕೊಂಡು ಸ್ವಾಮಿಗಳಿಗೆ ಅರ್ಪಿಸಿ ಆಶೀರ್ವಾದ ಪಡೆಯಲು ದೊಡ್ಡ ಕ್ಯೂ ಇತ್ತು. ಧ್ವನಿವರ್ಧಕದಲ್ಲಿ ಗುಂಡಣ್ಣನ ಧ್ವನಿ ಕೇಳಿಸುತ್ತಿತ್ತು: "ಈಗ ಕಾರ್ಯಕ್ರಮ ಪ್ರಾರಂಭ ಆಗುತ್ತೆ. ನಮಸ್ಕಾರ ಮಾಡುವವರು ಕಾರ್ಯಕ್ರಮ ಆದ ಮೇಲೆ ಆಶೀರ್ವಾದ ಪಡೆಯಬಹುದು. ಈಗ ಎಲ್ಲರೂ ಹಾಲಿನಲ್ಲಿ ಕುಳಿತುಕೊಳ್ಳಬೇಕು." ನಾಲ್ವರು ಮಿತ್ರರು ಮುಂಭಾಗದಲ್ಲಿ ಜಾಗ ಹಿಡಿದು ಕುಳಿತರು. ದೊಡ್ಡ ಮೆತ್ತನೆಯ ಕುರ್ಚಿಯ ಮೇಲೆ ಕುಳಿತಿದ್ದರು ಗೋವಿಂದ -ಅಲ್ಲಲ್ಲ ಸತ್ಯಪ್ರೇಮಾನಂದ! ಹಿಂಭಾಗದಲ್ಲಿ "ಸತ್ಯವನ್ನೇ ಹೇಳುತ್ತೇನೆ, ನಾನು ಹೇಳಿದ್ದೇ ಸತ್ಯ" ಎಂಬ ಫಲಕ ತೂಗುಹಾಕಿತ್ತು. ಕುರ್ಚಿಯ ಪಕ್ಕದಲ್ಲಿ ಭಕ್ತರು ಹಾಕಿದ್ದ ಹಾರಗಳ ರಾಶಿಯೇ ಇತ್ತು. ಇನ್ನೊಂದು ಮೂಲೆಯಲ್ಲಿ ಹಣ್ಣಿನ ಅಂಗಡಿಯಲ್ಲಿ ಇಡಬಹುದಾದಷ್ಟು ಹಣ್ಣುಗಳಿದ್ದವು. ಗುಂಡಣ್ಣ, "ಗುರುಗಳು ನಮ್ಮ ಊರಿಗೆ ಬಂದಿರುವುದು ನಮ್ಮ ಸೌಭಾಗ್ಯ. ಹೆಸರಿಗೆ ತಕ್ಕಂತೆ ಅವರು ಸತ್ಯವನ್ನು ಎಷ್ಟು ಪ್ರೇಮಿಸುತ್ತಾರೆಂದರೆ ಅಷ್ಟು ಪ್ರೇಮಿಸುತ್ತಾರೆ. ಅದಕ್ಕೇ ಅವರ ಗುರುಗಳು ಅವರಿಗೆ ಈ ಹೆಸರಿಟ್ಟಿದ್ದಾರೆ. ಬಂದಿರುವ ಭಕ್ತರು ತಮ್ಮ ಅನುಮಾನಗಳಿದ್ದರೆ ಹೇಳಿಕೊಂಡು ಅವರಿಂದ ಪರಿಹರಿಸಿಕೊಳ್ಳಬಹುದು. ಸಾಯಂಕಾಲ ಅವರು ಸತ್ಯೋಪದೇಶ ಮಾಡುತ್ತಾರೆ. ಆಗಲೂ ಎಲ್ಲರೂ ಬಂದು ಆಶೀರ್ವಾದ ಪಡೆಯಬೇಕು" ಎಂದು ಭಕ್ತಿಯಿಂದ ಗುರುಗಳ ಕಾಲಿಗೆ ಬಿದ್ದು, ಪಕ್ಕದಲ್ಲಿ ಕುಳಿತುಕೊಳ್ಳುವಾಗ ಜಮಖಾನ ಕಾಲಿಗೆ ತೊಡರಿ ಕುಕ್ಕರಿಸಿ ಕುಳಿತ. ಹಿಂಬಾಲಿಸುವ ಜನರೇ ಜಾಸ್ತಿ ಇದ್ದದ್ದರಿಂದ ಮೊದಲ ಪ್ರಶ್ನೆ ಕೇಳಲು ಯಾರೂ ಮುಂದಾಗಲಿಲ್ಲ. ಮಂಕನೇ ಮೊದಲಿಗೆ ಎದ್ದು ನಿಂತು ಕೇಳಿದ:
"ಗುರುಗಳೇ, ಸತ್ಯ ಹೇಳಬೇಕು ನಿಜ. ಆದರೆ ಸಮಯ, ಸಂದರ್ಭ ನೋಡಿ ಹೇಳಬೇಕು, ಅಲ್ಲವೇ?"
ಸತ್ಯ:  ಸತ್ಯ ಹೇಳುವುದಕ್ಕೆ ಹೆದರಬಾರದು. ಎಂತಹ ಸಂದರ್ಭದಲ್ಲೂ ಸತ್ಯವನ್ನೇ ಹೇಳಬೇಕು.
ಮಂಕ:  ಸ್ವಾಮಿ, ಒಬ್ಬ ಕಳ್ಳತನ ಮಾಡಬೇಕು ಅಂತ ಮಧ್ಯರಾತ್ರೀಲಿ ಹೋಗ್ತಾ ಇದ್ದಾಗ ಬೀಟ್ ಪೋಲಿಸ್ ಕೈಗೆ ಸಿಕ್ಕಿ, ಅವನನ್ನು ಎಲ್ಲಿಗೆ ಹೋಗ್ತಾ ಇದೀಯಾ ಅಂತ ಕೇಳಿದರೆ 'ಕಳ್ಳತನ ಮಾಡಕ್ಕೆ' ಅಂತ ಹೇಳಿದರೆ ಅವನನ್ನು ಸೀದಾ ಪೋಲಿಸ್ ಠಾಣೆಗೆ ಎಳಕೊಂಡು ಹೋಗಲ್ವೇ? ಅದಕ್ಕೇ ಸಮಯ ನೋಡಿ ಸತ್ಯ ಹೇಳಬೇಕು ಅಂತ ನಾನು ಹೇಳಿದ್ದು.
ಸತ್ಯ:  ಶಿಷ್ಯಾ, ಅವನು ಕಳ್ಳತನ ಮಾಡಕ್ಕೆ ಅಂತ ನಿಜ ಹೇಳಿದ್ರೆ ತಮಾಷೆ ಮಾಡ್ತಾ ಇದಾನೆ ಅಂದುಕೊಂಡು ಬಿಟ್ಟು ಕಳಿಸುತ್ತಾರೆ. ಮನೇಗೆ ಹೋಗ್ತಾ ಇದೀನಿ ಅಂತ ಸುಳ್ಳು ಹೇಳಿದ್ರೆ, ಪೋಲಿಸ್ನೋನು ನಂಬದೆ ಕಳ್ಳತನ ಮಾಡಕ್ಕೆ ಹೋಗ್ತಾ ಇದೀಯ ಅಂತ ದಬಾಯಿಸಿ ಎಳಕೊಂಡು ಹೋಗ್ತಾನೆ.
ಮೂಢ:  ಸತ್ಯ ಹೇಳೋದರಿಂದ ಇನ್ನೊಬ್ಬರಿಗೆ ತೊಂದರೆ ಆಗುತ್ತೆ, ಅವರ ಮನಸ್ಸಿಗೆ ನೋವಾಗುತ್ತೆ ಅನ್ನೋದಾದರೆ?
ಸತ್ಯ:  ಸತ್ಯ, ಸತ್ಯ, ಸತ್ಯ. ಅದೇ ಮುಖ್ಯ. ಅದರಿಂದ ಯಾರು ಸತ್ತರೂ ಪರವಾಗಿಲ್ಲ, ಅತ್ತರೂ ಪರವಾಗಿಲ್ಲ. ನಾನು ಸತ್ಯದೀಕ್ಷೆ ಪಡೆಯಲು ಕಾರಣ ಆದ ಘಟನೆ ಬಗ್ಗೆ ಹೇಳುವೆ. ಒಂದು ದಿನ ರಾತ್ರಿ ಸುಮಾರು ೧೧ ಗಂಟೆ ಇರಬಹುದು. ಯಾರೋ ಒಬ್ಬರು ನಮ್ಮ ಮನೆ ಬಾಗಿಲು ಬಡಿದರು. ಬಾಗಿಲು ತೆಗೆದು ನೋಡಿದರೆ ಒಬ್ಬ ವ್ಯಕ್ತಿ 'ನನ್ನನ್ನು ಇಬ್ಬರು ಅಟ್ಟಿಸಿಕೊಂಡು ಬರ್ತಾ ಇದಾರೆ. ದಯವಿಟ್ಟು ಸ್ವಲ್ಪ ಹೊತ್ತು ನಿಮ್ಮ ಮನೆಯಲ್ಲಿ ಅಡಗಿಕೊಂಡಿರಲು ಅವಕಾಶ ಕೊಡಿ' ಅಂತ ಕೇಳಿದರು. ನಾನು ಅವರನ್ನು ಒಳಕ್ಕೆ ಕರೆದುಕೊಂಡು ಬಾಗಿಲು ಹಾಕಿದೆ. ಐದೇ ನಿಮಿಷದಲ್ಲಿ ಮತ್ತೆ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆಗೆದರೆ, ಇಬ್ಬರು 'ಇಲ್ಲಿಗೆ ಹಳದಿ ಷರ್ಟು ಹಾಕಿಕೊಂಡೋರು ಒಬ್ಬರು ಬಂದರಾ?' ಅಂತ ಕೇಳಿದರು. ಒಳಗೆ ಇದ್ದ ವ್ಯಕ್ತಿ ಸನ್ನೆ ಮಾಡಿ ಹೇಳಬೇಡಿ ಅಂದರೂ ಸತ್ಯ ಹೇಳಬೇಕು ಅನ್ನುವ ನನ್ನ ತತ್ವಕ್ಕೆ ಬದ್ಧನಾಗಿ ಅವನು ಇರುವ ವಿಷಯ ಹೇಳಿದೆ. ಅವರು ಒಳಕ್ಕೆ ನುಗ್ಗಿದವರೇ ಹಳದಿ ಷರ್ಟಿನವನನ್ನು ಹಿಡಿದು ಚಚ್ಚಿ ಅವನ ಜೇಬಿನಲ್ಲಿದ್ದ ಹಣ, ಹಾಕಿಕೊಂಡಿದ್ದ ಉಂಗುರ, ಸರಗಳನ್ನೂ ಕಸಿದು ಓಡಿಹೋದರು. ಆಮೇಲೆ ಹಳದಿ ಷರ್ಟಿನವನು ನನ್ನನ್ನು ಬಾಯಿಗೆ ಬಂದಂತೆ ಬೈದು ಹೋದ. ಮಾರನೆಯ ದಿನ ಕೆಲವರು ಅವನೊಂದಿಗೆ ಬಂದು ನನಗೆ ಹಿಗ್ಗಾಮುಗ್ಗಾ ಹೊಡೆದರು. ನಾನು ಒಂದು ವಾರ ಆಸ್ಪತ್ರೆಯಲ್ಲಿರಬೇಕಾಯಿತು. ಆಮೇಲೆ ನಾನು ಮಾಡಿದ ಮೊದಲ ಕೆಲಸ ಅಂದರೆ ಸ್ವಾಮಿ ಸತ್ಯಾನಂದರನ್ನು ಕಂಡು ದೀಕ್ಷೆ ಪಡೆದು ಅವರ ಮಠದಲ್ಲೇ ಉಳಿದದ್ದು. ಅಲ್ಲಿ ಭದ್ರವಾದ ರಕ್ಷಣೆ ಇರುವುದರಿಂದ ಆಮೇಲೆ ನಾನು ನಿರ್ಭಯವಾಗಿ ಸತ್ಯ ಹೇಳುವ ಕೆಲಸ ಮುಂದುವರೆಸಿಕೊಂಡು ಬಂದಿದ್ದೇನೆ.
ಮುಠ್ಠಾಳ:  ಗುರುಗಳೇ, ಅಪ್ರಿಯವಾದ ಸತ್ಯ ಹೇಳಬೇಡಿ ಅಂತ ಹೇಳ್ತಾರೆ. ನೀವು ನೋಡಿದರೆ ಹೀಗೆ ಹೇಳ್ತೀರಿ.
ಸತ್ಯ:  ಹಾಗೆ ಹೇಳುವವರೆಲ್ಲಾ ಮೂರ್ಖರು.
ಮಡ್ಡಿ:  ಕೋರ್ಟಿನಲ್ಲಿ ಪ್ರಮಾಣ ಮಾಡಿಸ್ತಾರೆ, 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್, 'ನಾನು ಹೇಳಿಕೊಟ್ಟಂತೆ ಮಾತ್ರ ಹೇಳು, ಸತ್ಯ ಹೇಳಿದರೆ ಕೆಟ್ಟುಹೋಗ್ತೀಯಾ' ಅಂತಾರೆ. ನಿಜ ಅಲ್ಲವಾ?
ಸತ್ಯ:  ಅಲ್ಲಿ ಮಾಡಿಸುವ ಪ್ರಮಾಣ ಸರಿಯಲ್ಲ. ನಾನು ಹೇಳುವುದೆಲ್ಲಾ ಸತ್ಯ ಅಂತ ಹೇಳಬಾರದು. ನೋಡಿ, ಇಲ್ಲಿ ಬೋರ್ಡು ಹಾಕಿಲ್ಲವಾ, ನಾನು ಹೇಳಿದ್ದೇ ಸತ್ಯ ಅಂತ! ಹಾಗೆ ಹೇಳಬೇಕು.
ಮಡ್ಡಿ:  ಅರ್ಥವಾಗಲಿಲ್ಲ, ಗುರುಗಳೇ.
ಸತ್ಯ:  ಸತ್ಯ ಅಂದರೇನು? ಮೊದಲು ತಿಳಿದುಕೊಳ್ಳಿ. ಅದು ಏನಾದರೂ ಆಗಿರಲಿ, ಹೇಗಾದರೂ ಆಗಿರಲಿ, ನಿನಗೆ ಏನು ಅನ್ನಿಸುತ್ತೋ ಅದು ಸತ್ಯ. ನಿನಗೆ ಅದು ಸತ್ಯ ಅಂತ ಅನ್ನಿಸಿದರೆ, ಬೇರೆಯವರು ಹೇಳುವುದು, ತಿಳಿದುಕೊಂಡಿರುವುದು ಸರಿಯಲ್ಲ. ನಾನು ಹೇಳಿದ್ದೇ ಸತ್ಯ, ಬೇರೆಯವರದು ಸುಳ್ಳು, ತಪ್ಪು ಅಂತಲೇ ಹೇಳಬೇಕು. ಯಾರು ಏನಾದರೂ ಅನ್ನಲಿ, ಅವರಿಗೆ ನೋವಾದರೂ ಆಗಲಿ, ಬೇಸರವಾದರೂ ಆಗಲಿ, ಡೋಂಟ್ ಕೇರ್ ಅನ್ನುವಂತೆ ಇರಬೇಕು. ಏಕೆಂದರೆ ಅದು ನಿನ್ನ ಸತ್ಯ, ನೀನು ಕಂಡುಕೊಂಡ ಸತ್ಯ! ಇಂತಹ ಸತ್ಯದ ಮಹಿಮೆ ಅಪಾರ!! ಕುಂಟನನ್ನು ಕುಂಟ ಅಂದರೆ, ಕುರುಡನನ್ನು ಕುರುಡ ಅಂದರೆ ಅವರು ಬೇಜಾರು ಮಾಡಿಕೊಂಡರೆ ಅದು ಅವರ ಹಣೆಬರಹ.
ಮಡ್ಡಿ:  ನೀನು ಹೇಳ್ತಾ ಇರೋದು ಸತ್ಯ ಅಲ್ಲ ಅಂತ ಆಧಾರ ಕೊಟ್ಟು ವಾದ ಮಾಡಿದ್ರೆ ಏನು ಮಾಡಬೇಕು?
ಸತ್ಯ:  ಅದಕ್ಯಾಕೆ ಹೆದರಬೇಕು?  ಸರ್ವಜ್ಞನ ಹೆಸರಿನಲ್ಲಿ ಯಾರು ಯಾರೋ ಏನೇನೋ ವಚನಗಳನ್ನು ಬರೆದಿದ್ದಾರೆ ಅಂತಾರೆ. ಅಂಥವನ್ನು ಉದಾಹರಣೆ ಕೊಡು. ಅಥವ ಸರ್ವಜ್ಞ ಹೇಳಿದ ಮಾತು ಅಂತ ನೀನೇ ಒಂದು ತ್ರಿಪದಿ ಬರೆದು ಕೊನೆಗೆ ಸರ್ವಜ್ಞ ಅಂತ ಸೇರಿಸು. ಅದನ್ನೇನು ಸರ್ವಜ್ಞ ಬರೆದಿದ್ದೋ ಅಲ್ಲವೋ ಅಂತ ಯಾರು ತನಿಖೆ ಮಾಡ್ತಾರೆ. ಅಲ್ಲಿಗೆ ಎಲ್ಲರೂ ಬಾಯಿ ಮುಚ್ಚಿಕೊಂಡು ಒಪ್ಪಲೇಬೇಕು. ಇಂತಹ ಅನೇಕ ವಿಷಯ, ರಹಸ್ಯಗಳನ್ನು ಸತ್ಯದೀಕ್ಷೆ ಪಡೆಯುವವರಿಗೆ ಹೇಳಿಕೊಡುತ್ತೇನೆ.
ಮೂಢ:  ಸ್ವಾಮಿ ದಯಾನಂದರು 'ಸತ್ಯವನ್ನೇ ಹೇಳು, ಆದರೆ ಸತ್ಯ ಹೇಳುತ್ತೇನೆಂದು ಶಪಥ ಮಾಡಬೇಡ. ಏಕೆಂದರೆ ಸತ್ಯ ಅನ್ನುವುದನ್ನು ನೀನೇ ತಪ್ಪು ತಿಳಿದುಕೊಂಡಿರಬಹುದು. ಅದರಿಂದ ಬೇರೆಯವರಿಗೆ ತೊಂದರೆ ಆಗಬಹುದು' ಅಂತ ಹೇಳುತ್ತಿದ್ದರಂತೆ. ನೀವು ಬೇರೆ ತರಹ ಹೇಳ್ತಾ ಇದೀರಿ. ನಮಗೆ ಗೊಂದಲ ಆಗಿದೆ, ಪರಿಹರಿಸಿ ಸ್ವಾಮಿ."
ಸತ್ಯ:  ಗೊಂದಲ ಎಲ್ಲಿದೆ? ದಯಾನಂದರು ಏನೇ ಹೇಳಲಿ, ನಿರ್ದಯಾನಂದರೂ ಏನೇ ಹೇಳಲಿ. ನಾನು ಹೇಳಿದ್ದೇ ಸತ್ಯ, ಹೇಳೋದೆಲ್ಲಾ ಸತ್ಯ ಅಂದಾಗ, ಅದು ತಪ್ಪಾಗಿದ್ದರೂ ಅದು ನಮ್ಮ ಸತ್ಯ. ಸರಿಯಿರಲಿ, ಇಲ್ಲದಿರಲಿ ಅದರ ಗೊಡವೆ ಬೇಡ, ಬೇರೆಯವರು ವಿರೋಧಿಸಲಿ, ತಲೆ ಕೆಡಿಸಿಕೊಳ್ಳೋದೇ ಬೇಡ. ಅವರ ತಲೆ ಕೆಟ್ಟು ಹೋಗಲಿ. ಸತ್ಯ ನಮ್ಮದು, ನಮ್ಮದೇ ಸತ್ಯ. ಅದರಲ್ಲೇ ಇರುವುದು ಸತ್ವ. ಬಾಯಿ ತಪ್ಪಿ ಕಾಗೆ ಬೆಳ್ಳಗಿದೆ ಅಂತ ಅಂದಿರಿ ಅಂತ ಇಟ್ಟುಕೊಳ್ಳಿ. ಅದೇ ಸರಿಯೆಂದು ವಾದಿಸಿ. ಕಪ್ಪು, ಬಿಳಿ ಅನ್ನೋದನ್ನೆಲ್ಲಾ ನಮಗಾಗದವರು ಮಾಡಿದ್ದು. ನಿಜವಾಗಿ ಹೇಳಬೇಕೆಂದರೆ ಬೆಳ್ಳಗೆ ಕಾಣುವುದು ಕಪ್ಪು ಬಣ್ಣ. ಕತ್ತಲೆಯಂತೆ ಕಾಣುವುದು ಬಿಳಿ ಬಣ್ಣ ಅಂತ ಹೇಳಿ. ಅದು ನಿಜವಾದ ಸತ್ಯ. ಯಾರು ಒಪ್ಪಲಿ, ಬಿಡಲಿ, ಅದು ಸತ್ಯ, ಸತ್ಯ, ಸತ್ಯ. ಸತ್ಯ ಹೇಳಿದರೆ ಸತ್ತಾಗ ಬಡಕೊಳ್ಳುವಂತೆ ಬಡಕೊಳ್ಳುವವರನ್ನು ಕಂಡು ಮರುಕವಾಗುತ್ತದೆ.
ಮೂಢ:  ಬೇರೆಯವರಿಗೆ ಹಾನಿ ಮಾಡುವಂತಹುದು ಸತ್ಯವಲ್ಲ. ನನಗೆ ಮಾತ್ರ ಒಳ್ಳೆಯದಾಗಲಿ ಅಂತ ಬಯಸುವುದೂ ಸತ್ಯ ಅಲ್ಲ. ಎಲ್ಲರಿಗೂ ಒಳ್ಳೆಯದಾಗಲೀ ಅಂತ ಬಯಸುವುದು ಮಾತ್ರ ಸತ್ಯ ಅಂತ ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ಬೇರೆಯವರಿಗೆ ಕೆಟ್ಟದಾದ್ರೂ ಅದು ಸತ್ಯ ಅಂತ ನೀವು ಹೇಳ್ತೀರಿ. ನಾವು ಯಾರ ಮಾತು ಕೇಳಬೇಕು?
ಸತ್ಯ:  ಆ ಹಿರಿಯರು ಅನ್ನಿಸಿಕೊಂಡವರಿಗೆ ತಲೆ ಇಲ್ಲ. ಅವರು ಸರಿಯಾಗಿ ಹೇಳಿಲ್ಲ. ನಾನು ಹೇಳಿದ್ದೇ ಸತ್ಯ. ಹೇಳುವುದೇ ಸತ್ಯ. ಕೇಳಿದರೆ ಉದ್ಧಾರ ಆಗ್ತೀರಿ. ಇಲ್ಲದಿದ್ದರೆ ಹಾಳಾಗಿ ಹೋಗ್ತೀರಿ. ನಿಮಗೆ ಇಷ್ಟ ಆಗಲಿ, ಬಿಡಲಿ, ನಾನಂತೂ ನನ್ನ ಸತ್ಯ ಹೇಳಿಯೇ ಹೇಳ್ತೀನಿ. ಆನೆ ನಡೆದಿದ್ದೇ ದಾರಿ, ನಾನು ಹೇಳಿದ್ದೇ ಸತ್ಯ. ಇಂದು ಸಾಯಂಕಾಲ ಸತ್ಯೋಪದೇಶವಿದೆ. ಎಲ್ಲರೂ ಬನ್ನಿ. ಸತ್ಯ ಹೇಳುವ ದೀಕ್ಷೆ ಪಡೆಯಿರಿ. ಜೈ, ಸದ್ಗುರು ಸತ್ಯಾನಂದ, ನನ್ನ ಸತ್ಯದಿಂದ ಜಗಕಾನಂದ!
**************
-ಕ.ವೆಂ.ನಾಗರಾಜ್.

ಶುಕ್ರವಾರ, ಜನವರಿ 25, 2013

ಕುಲದ ನೆಲೆಯ ಬಲ್ಲಿರಾ?



     "ಈ ಮನುವಾದಿಗಳು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಶತಶತಮಾನಗಳಿಂದ ನಮ್ಮನ್ನು ತುಳಿಯುತ್ತಾ, ಶೋಷಿಸುತ್ತಾ ಬಂದಿದ್ದಾರೆ. ಅವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ನಮ್ಮ ಉದ್ಧಾರ ಸಾಧ್ಯ" - ಪುಟ್ಟರಾಜುವಿನ ಭಾಷಣ ಈ ಮಾತಿನೊಂದಿಗೆ ಮುಕ್ತಾಯವಾದಾಗ ಜನ ಚಪ್ಪಾಳೆ ತಟ್ಟಿದರು. ಯಾವುದೋ ಗುಂಗಿನಲ್ಲಿದ್ದ, ಪರಸ್ಪರ ಮಾತಿನಲ್ಲಿ ಮಗ್ನರಾಗಿದ್ದ ಇನ್ನಿತರರೂ ಎಚ್ಚೆತ್ತು ಚಪ್ಪಾಳೆ ತಟ್ಟಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಣ್ಣಸ್ವಾಮಿಯ ಮೇಲೆ ಪುಟ್ಟರಾಜುವಿನ ಮಾತು ಬಹಳ ಪ್ರಭಾವ ಬೀರಿತ್ತು. ಮನುವಾದಿಗಳನ್ನು ಮಟ್ಟ ಹಾಕಲು ಏನಾದರೂ ಮಾಡಬೇಕೆಂದು ಸಣ್ಣಸ್ವಾಮಿಗೆ ಅನ್ನಿಸಿತು. ಏನು ಮಾಡಬಹುದೆಂದು ಪುಟ್ಟರಾಜುವಿನೊಂದಿಗೇ ಚರ್ಚಿಸಬೇಕೆಂದುಕೊಂಡ ಅವನಿಗೆ ಅವಕಾಶವೂ ಒದಗಿಬಂದಿತು. ಒಮ್ಮೆ ಗೆಳೆಯರೊಡನೆ ಎಡವಟ್ಟು ಮಂಜನ ಮನೆಯಲ್ಲಿ ಪಾನಗೋಷ್ಠಿ ವ್ಯವಸ್ಥೆ ಆಗಿದ್ದಾಗ ಪುಟ್ಟರಾಜುವೂ ಬಂದಿದ್ದ. ಕುರುಕಲು ತಿಂಡಿ ತಿನ್ನುತ್ತಾ ಒಳಕ್ಕೆ ಚೈತನ್ಯರಸ ಇಳಿಯುತ್ತಿದ್ದಂತೆಯೇ ಮಾತುಕತೆಗೆ ರಂಗೇರಿತ್ತು. ಎಲ್ಲರದೂ ಒಂದು ದಾರಿಯಾದರೆ ಎಡವಟ್ಟನದೇ ಬೇರೆ ದಾರಿ ಎಂಬಂತೆ ಅಡ್ಡಪ್ರಶ್ನೆಗಳನ್ನೇ ಹಾಕುತ್ತಿದ್ದ ಮಂಜನಿಗೆ ಉತ್ತರ ಕೊಡಲಾರದ ಗೆಳೆಯರು ಅವನನ್ನು ಎಡವಟ್ಟು ಮಂಜ ಎಂದೇ ಕರೆಯುತ್ತಿದ್ದರು.
ಸಣ್ಣಸ್ವಾಮಿ: ಪುಟ್ಟರಾಜು, ನೀನು ಅವತ್ತು ಮಾಡಿದ ಭಾಷಣ ಬೊಂಬಾಟಾಗಿತ್ತು. ಮನುವಾದಿಗಳನ್ನು ಮಟ್ಟ ಹಾಕಬೇಕು ಅಂದ ಮಾತಂತೂ ನನಗೆ ಬಹಳ ಇಷ್ಟವಾಯಿತು. ನೂರಾರು ವರ್ಷಗಳಿಂದ ನಮ್ಮನ್ನು ತುಳಿಯುತ್ತಾ ಬಂದಿರುವ ಅವರನ್ನು ಮಟ್ಟ ಹಾಕಕ್ಕೆ ನಿಜವಾಗಿಯೂ ಏನಾದರೂ ಮಾಡಲೇಬೇಕು ಕಣ್ಲಾ. ಏನು ಮಾಡಬಹುದು?
ಪುಟ್ಟರಾಜು ಏನನ್ನೋ ಹೇಳಲು ಬಾಯಿ ತೆರೆಯುತ್ತಿದ್ದಂತೆ ಮಂಜ ಅಡ್ಡಬಾಯಿ ಹಾಕಿದ:
ಮಂಜ: ಲೋ, ಪುಟ್ಟರಾಜ, ನಿಂಗೆ ಎಷ್ಟಲಾ ವಯಸ್ಸು?
ಪು: ಇಪ್ಪತ್ತೆಂಟು. ಯಾಕಲಾ?
ಮಂಜ: ಅಲ್ಲಾ, ನೂರಾರು ವರ್ಷದಿಂದ ತುಳೀತಿದಾರೆ ಅಂದೆಯಲ್ಲಾ, ಅದಕ್ಕೇ ಕೇಳಿದೆ.
ಪು: ನನ್ನನ್ನು ಅಂತ ಹೇಳ್ಲಿಲ್ಲ ಕಣ್ಲಾ, ನಮ್ಮನ್ನು ಅಂತ ಅಂದೆ.
ಮಂಜ: ನಾವು ಅಂದರೆ ನಮ್ಮ ಜಾತಿಯೋರು! ಅಲ್ಲವೇನ್ಲಾ?
ಪು: ಹೂಂ.
ಮಂಜ: ನೀನು ಪುನರ್ಜನ್ಮ ನಂಬ್ತೀಯಾ?
ಪು: ಯಾಕಲಾ?
ಮಂಜ: ಉತ್ತರ ಹೇಳು, ಮೊದಲು.
ಪು: ಒಂದೊಂದು ಸಲ ಪುನರ್ಜನ್ಮ ಇದೆ ಅಂತ ಅನ್ಸುತ್ತೆ, ಒಂದೊಂದು ಸಲ ಇಲ್ಲ ಅಂತ ಅನ್ಸುತ್ತೆ.
ಮಂಜ: ಪುನರ್ಜನ್ಮ ಇಲ್ಲ ಅಂದರೆ ನೂರಾರು ವರ್ಷದಿಂದ ತುಳೀತಿದಾರೆ ಅನ್ನೋ ಮಾತಿಗೆ ಅರ್ಥ ಇರಲ್ಲ. ಇದೇ ಅಂತ ಅಂದುಕೊಂಡರೆ ಹಿಂದೆಯೂ ಇದೇ ಜಾತೀಲಿ ಹುಟ್ಟಿದ್ದೆವಾ ಅನ್ನೋದು ಗ್ಯಾರೆಂಟಿ ಏನು? ಏನೋ ನಮ್ಮ ಅಪ್ಪ-ಅಮ್ಮ ಈ ಜಾತಿಯವರು, ಆದ್ದರಿಂದ ನಮ್ಮದೂ ಈ ಜಾತಿ. ನಾವೇನಾದರೂ ದೇವರನ್ನು ಕೇಳಿಕೊಂಡಿದ್ದೆವಾ, ಈ ಜಾತೀಲಿ ಹುಟ್ಟಿಸು ಅಂತಾ? ಹಿಂದೆ ಬೇರೆ ಇನ್ನು ಯಾವುದೋ ಜಾತಿಯಲ್ಲಿ ಹುಟ್ಟಿರಬಹುದಲ್ವಾ? ದೇವರನ್ನು ಇಂಥಾ ಜಾತೀಲೇ ಹುಟ್ಟಿಸು ಅಂತ ಕೇಳಿಕೊಂಡು ಹುಟ್ಟಲು ಸಾಧ್ಯ ಇದ್ದಿದ್ದರೆ ನೀನು ನಿನ್ನನ್ನು ಯಾವ ಜಾತೀಲಿ ಹುಟ್ಟಿಸು ಅಂತ ಕೇಳಿಕೊಳ್ತಾ ಇದ್ದೆ?
ಪು: ತಲೆ ತಿನ್ನಬೇಡ ಕಣ್ಲಾ.
ಮಂಜ: ಮನುವಾದ ಅಂದ್ರೆ ಏನು?
ಪು: ಈ ಪುಳಿಚಾರುಗಳು ನಮ್ಮನ್ನು ತುಳಿಯೋಕೆ ಮಾಡ್ಕೊಂಡಿರೋ ಒಂದು ಗ್ರಂಥ.
ಮಂಜ: ಅದರಲ್ಲಿ ಏನಿದೆ? ನೀನು ಅದನ್ನು ಓದಿದೀಯಾ?
ಪು: ನಾನು ಓದಿಲ್ಲ ಕಣ್ಲಾ. ಅದನ್ನು ಯಾವನು ಓದ್ತಾನೆ? ಅದರಲ್ಲಿ ವೇದಾನ ಬ್ರಾಹ್ಮಣರು ಅದರಲ್ಲೂ ಗಂಡಸರು ಮಾತ್ರ ಕಲಿಯಬೇಕು, ಹೆಂಗಸರಿಗೆ ಸ್ವಾತಂತ್ರ್ಯ ಕೊಡಬಾರದು, ಹಾಗೆ, ಹೀಗೆ ಅಂತ ಏನೇನೋ ಅಪದ್ಧ ಇದೆಯಂತೆ. ಒಟ್ಟಿನಲ್ಲಿ ನಮ್ಮನ್ನು ತುಳಿಯೋಕೆ ಏನು ಬೇಕೋ ಅದೆಲ್ಲಾ ಇದೆಯಂತೆ. 
ಮಂಜ: ನೀನು ಅದನ್ನು ಓದದೇ ಅದು ಹೆಂಗಲಾ ಹೇಳ್ತೀಯ? ನನ್ನ ಕ್ಲಾಸ್ ಮೇಟ್ ಹಾರುವ ಪ್ರಸಾದಿಗೂ ಮನುವಾದ ಅಂದ್ರೆ ಏನೂ ಅಂತಲೇ ಗೊತ್ತಿಲ್ಲ. ಅವರಪ್ಪ ಜೋಯಿಸರನ್ನೂ ಕೇಳಿದ್ದೆ. 'ಅದೇನೋ ಗೊತ್ತಿಲ್ಲ, ಮನುಷ್ಯರು ಹೇಗಿರಬೇಕು ಅಂತ ಬರೆದಿದ್ದಾರೆ, ಅಷ್ಟೇ ನನಗೆ ಗೊತ್ತಿರೋದು' ಅಂದರು. ಅವರೂ ಅದನ್ನು ಓದಿಲ್ಲವಂತೆ. ಅವರೊಬ್ಬರೇ ಅಲ್ಲ, ಹೆಚ್ಚಿನ ಹಾರುವರಿಗೂ ಸರಿಯಾಗಿ ಗೊತ್ತಿಲ್ಲ. ಮತ್ತೆ ಯಾಕಲಾ, ಈ ಜಟಾಪಟಿ?
ಪು: ನೀನೇನು ಬ್ರಾಮಣರ ಏಜೆಂಟ್ ಏನ್ಲಾ? ಅವರ ಪರ ಯಾಕ್ ಮಾತಾಡ್ತೀಯ? ಅವರೇನು ಅವರ ಜಾತಿ ಬಿಟ್ಟುಕೊಡ್ತಾರಾ? 
ಮಂಜ: ನಾನು ಯಾರ ಪರಾನೂ ಮಾತಾಡ್ತಿಲ್ಲ ಕಣ್ಲಾ. ನಂಗೆ ಅರ್ಥ ಆಗದೇ ಇರೋದು ಏನೆಂದರೆ ನಾವು ಹಿಂದೆ ಯಾವ ಜಾತೀಲಿ ಹುಟ್ಟಿದ್ದೆವು? ಮುಂದೆ ಯಾವ ಜನ್ಮದಲ್ಲಿ ಹುಟ್ತೀವಿ ಅನ್ನೋದು. ಈಗಿರೋ ಜಾತೀಲೇ ಮುಂದೇನೂ ಹುಟ್ಟುತ್ತೇವಾ? 
ಪು: ಇವನ್ಯಾವನ್ಲಾ ಇವನು? ತಲೆ ಗಬ್ಬೆಬ್ಬಿಸಿಬಿಟ್ಟ.
ಮಂಜ: ನಿನ್ನ ಮಾತು ಕೇಳಿಯೇ ಕಣ್ಲಾ ನನ್ನ ತಲೇನೂ ಗಬ್ಬೆದ್ದಿರೋದು. ಈ ಪ್ರಪಂಚ ಏನು ಇವತ್ತಿಂದಾ? ಬ್ರಾಮಣರು, ಕ್ರಿಶ್ಚಿಯನರು, ಸಾಬರು, ಬೌದ್ಧರು, ಜೈನರು, ಲಿಂಗಾಯತರು ಇಂಥವೆಲ್ಲಾ ಪ್ರಪಂಚ ಹುಟ್ಟಿದಾಗಿನಿಂದಲೂ ಇದ್ದವೇನ್ಲಾ? ಇವನ್ನೆಲಾ ಮಾಡಿದೋರು ಜನರೇ ಅಲ್ಲವೇನ್ಲಾ? 
ಪು: ಮತ್ತೆ ಯಾಕಲಾ ಆ ಪುಳಿಚಾರುಗಳು ಬ್ರಾಹ್ಮಣ ಮುಖದಿಂದ ಹುಟ್ಟಿದ, ಶೂದ್ರ ಕಾಲಿಂದ ಹುಟ್ಟಿದ ಅನ್ನೋದು?
ಮಂಜ: ಯಾರಾದ್ರೂ ಎಲ್ಲಿಂದ ಹುಟ್ತಾರೆ ಅನ್ನೋದು ಎಲ್ರಿಗೂ ಗೊತ್ತು. ಎಲ್ಲಾರೂ ಹುಟ್ಟೋದು ಒಂದೇ ಕಡೆಯಿಂದ.
ಪು: ಲೋ ಮಗನೇ. ಕೆಣಕಬೇಡ, ಒದ್ದುಬಿಡ್ತೀನಿ. ನಾನು ಹೇಳಿದ್ದು ಅವರು ಮೇಲೆ, ನಾವು ಕೆಳಗೆ ಅಂತ ಹೇಳೋ ರೀತಿ ಕಣ್ಲಾ ಇದು. 
ಮಂಜ: ಜಾತೀಲಿ ಮೇಲು-ಕೀಳು ಅನ್ನೋರು ಯಾರೇ ಆಗಲಿ ಅವರು ಸರಿಯಿಲ್ಲ. ಜಾತೀಲಿ ಮೇಲು-ಕೀಳು ಇದೆ ಅಂತ ತಿಳಿಯೋರೂ ಮೂರ್ಖರೇ. ಬ್ರಾಹ್ಮಣ ಅನ್ನಿಸಿಕೊಂಡೋನು ಕೆಟ್ಟದಾಗಿ ನಡೆದುಕೊಂಡರೆ ಅವನಿಗಿಂತ ಕೆಟ್ಟವರಿಲ್ಲ. ಶೂದ್ರ ಅನ್ನಿಸಿಕೊಂಡೋನು ಒಳ್ಳೆಯ ರೀತಿ ನಡೆದರೆ ಅವನನ್ನು ಮೇಲು ಅಂದರೆ ತಪ್ಪೇನೂ ಇಲ್ಲ. ಹುಟ್ಟೋ ಜಾತೀನೇ ಖಾಯಂ ಇಲ್ಲ. ಹಾಗಿರುವಾಗ ಹುಟ್ಟಿನ ಜೊತೆ ಬರೋ ಜಾತಿ ಹಿಡ್ಕೊಂಡು ಯಾಕೆ ಕಿತ್ತಾಡಬೇಕು? ಹುಟ್ಟು ನಮ್ಮದಲ್ಲ, ಸಾವೂ ನಮ್ಮದಲ್ಲ. ಮಧ್ಯ ಇರೋ ಬದುಕು ಮಾತ್ರ ನಮ್ಮದು ಕಣ್ಲಾ.  
ಪು: ಗ್ಯಾರೆಂಟಿ ಆಯ್ತು ಕಣ್ಲಾ. ಯಾರೋ ನಿನ್ನ ತಲೇನ ಚೆನ್ನಾಗಿ ತಿಕ್ಕೀದಾರೆ. ಅದಕ್ಕೇ ಹೀಗೆ ಮಾತಾಡ್ತಾ ಇದೀಯ.
ಮಂಜ: ನೀನೇ ಹೇಳ್ತೀಯ, ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ ಅಂತ. ಗೋಡೆ ಮೇಲೆಲ್ಲಾ ಹೀಗೆ ಬರೀತಾರೆ, ನೀನು ಜಾತಿ ಬಿಡಕ್ಕೆ ತಯಾರಿದೀಯಾ?
ಪು: ಅದ್ಹೆಂಗಲಾ ಬಿಡಕ್ಕಾಗುತ್ತೆ? ನಮ್ಮ ಜಾತಿ ನಮಗೆ ದೊಡ್ಡದು, ನೀನು ಬಿಟ್ಟೀಯಾ?
ಮಂಜ: ಓ ಬಿಡ್ತೀನಿ. ಆದ್ರೆ ಒಂದು ಪ್ರಾಬ್ಲೆಮ್ಮು. ಈ ಜಾತಿ ಹೆಸರಿಂದನೇ ನನಗೆ ಕೆಲಸ ಸಿಕ್ಕಿರೋದು. ನನ್ನ ಮಗನಿಗೆ ಸ್ಕಾಲರ್ ಶಿಪ್ ಸಿಕ್ಕಿರೋದು. ಜಾತಿ ಬಿಟ್ಟರೆ ಇದಕ್ಕೆಲ್ಲಾ ಎಳ್ಳು-ನೀರು ಬಿಡಬೇಕಾಗುತ್ತೆ. ಅಷ್ಟಕ್ಕಾದರೂ ಜಾತಿ ಇಟ್ಕೊಳ್ಳಲೇಬೇಕು.
ಸಣ್ಣಸ್ವಾಮಿ: ನಮ್ಮ ನಂಜಪ್ಪ ಚರ್ಚಿಗೆ ಹೋಗ್ತಾನೆ, ಚರ್ಚಿನವರು ಅವರ ಆಸ್ಪತ್ರೇಲಿ ಅವನ ಮಗಳಿಗೆ ನರ್ಸು ಕೆಲಸ ಕೊಡಿಸಿದಾರೆ. ಆದ್ರೆ ಅವನು ಜಾತಿ ಬಿಟ್ಟಿಲ್ಲ. ಎರಡು ಕಡೇಗೂ ಹೋಗ್ತಾನೆ, ಎರಡು ಕಡೇನೂ ಅನುಕೂಲ ಪಡೀತಾ ಇದಾನೆ.
ಮಂಜ: ಈಗ ಹೇಳು, ಜಾತಿ ಮನುಷ್ಯರು ಮಾಡಿದ್ದಾ? ದೇವರು ಮಾಡಿದ್ದಾ? ದೇವರು ಮಾಡಿದ್ದಾದರೆ ಜಾತಿ ಬದಲಾಯಿಸಕ್ಕೆ ಆಗ್ತಾ ಇತ್ತಾ? ದೇವರೇ ಜಾತಿ ಮಾಡಿದ್ದಾಗಿದ್ರೆ ನೋಡಿದ ತಕ್ಷಣ ಇವರು ಇಂತಹ ಜಾತಿಯವರು ಅಂತ ಗೊತ್ತಾಗೋ ಹಾಗೆ ಮಾಡ್ತಾ ಇದ್ದ. ಈಗ ಕುದುರೆ ಇದೆ, ಕತ್ತೆ ಇದೆ, ನಾಯಿ ಇದೆ. ಅವು ಪ್ರಪಂಚದ ಎಲ್ಲೇ ಇರಲಿ, ನೋಡಿದ ಕೂಡಲೇ ಕುದುರೆ, ಕತ್ತೆ, ನಾಯಿ ಅಂತಾ ಹೇಳಬಹುದು. ಆದರೆ ಮನುಷ್ಯರನ್ನು ನೋಡಿ ಇವರು ಇಂತಹ ಜಾತಿಯವರು ಅಂತ ಹೇಳಕ್ಕೆ ಆಗುತ್ತಾ? ಮನುಷ್ಯ ಅಂತ ಮಾತ್ರ ಹೇಳ್ಬೋದು. ನಾಯಿ ಹೊಟ್ಟೇಲಿ ನಾಯಿ ಹುಟ್ಟುತ್ತೆ. ಅದಕ್ಕೇ ಅದು ನಾಯಿ ಜಾತಿ. ಮನುಷ್ಯರ ಹೊಟ್ಟೇಲಿ ಮನುಷ್ಯರೇ ಹುಟ್ಟೋದು. ಅದು ಮನುಷ್ಯ ಜಾತಿ ಅಷ್ಟೆ. ದೇವರು ಮಾಡಿದ್ದೂ ಅಷ್ಟೇ. ಮನುಷ್ಯರು ಆಮೇಲೆ ಆ ಜಾತಿ, ಈ ಜಾತಿ, ಮೇಲೆ, ಕೆಳಗೆ ಅಂತ ಮಾಡಿಕೊಂಡಿದ್ದು. 
ಪು: ಈಗ ನನ್ನ ದಾರೀಗೆ ಬಂದೆ ನೀನು. ಮನುಷ್ಯರೆಲ್ಲರೂ ಒಂದೇ. ಮೊದಲು ಈ ಜಾತಿ ಹೋಗಬೇಕು. ವಿಶ್ವಮಾನವರಾಗಬೇಕು.
ಮಂಜ: ನೀನೇ ನಿನ್ನ ಜಾತಿ ಬಿಡಕ್ಕೆ ತಯಾರಿಲ್ಲ. ಬೇರೆಯವರಿಗೆ ಯಾಕಲಾ ಹೇಳ್ತೀಯಾ? ವಿಶ್ವಮಾನವ ಅಂದರೆ ಎಲ್ಲಾ ಒಂದೇ ಅಂತ ತಾನೇ? ಹಾಗಾದ್ರೆ ನೀನು ಒಂದು ಜಾತಿಯವರನ್ನೇ ಏಕೆ ಬೈತೀಯಾ? 
ಪು: ಅವರಿಂದಾನೇ ದೇಶ ಹಾಳಾಗಿರೋದು ಅದಕ್ಕೇ.
ಮಂಜ: ಅವರಿಂದಾನೇ ದೇಶ ಉದ್ಧಾರ ಆಗಿರೋದು ಅಂತ ಅವರೂ ಹೇಳಬಹುದಲ್ಲವೇನ್ಲಾ? ಅವರನ್ನು ಬೈದರೆ ದೇಶ ಸರಿ ಹೋಗುತ್ತಾ? ಯಾರನ್ನಾದರೂ ಬೈದುಬಿಟ್ಟು ಸರಿ ಮಾಡಕ್ಕೆ ಸಾಧ್ಯ ಇದೆಯಾ? ಸರಿ ಅಂತ ಅವರಿಗೆ ಅನ್ನಿಸಿದರೆ ಅವರೇ ಸರಿ ಹೋಗ್ತಾರೆ. ನೀನು ಅವರನ್ನು ದ್ವೇಷ ಮಾಡುತ್ತಾ ಅವರು ನಿನ್ನನ್ನು ಪ್ರೀತಿಸಬೇಕು ಅಂತ ಬಯಸೋದು ಅಷ್ಟು ಸರಿ? ನೀನು ಇನ್ನೊಬ್ಬರನ್ನು ಅನ್ನುವುದನ್ನು ಬಿಟ್ಟರೆ ಅದೇ ದೊಡ್ಡ ಬದಲಾವಣೆ. ಮುಸ್ಲಿಮರು ಬೇರೆಯವರನ್ನು ಕಾಫಿರ್ ಅಂತ ಬೈದರೆ? ಕಾಫಿರರಿಗೆ ಬದುಕುವ ಹಕ್ಕಿಲ್ಲ ಅಂದರೆ? ಕ್ರಿಶ್ಚಿಯನ್ನರು ಇತರರನ್ನು ದ್ವೇಷಿಸುತ್ತಾ ಹೋದರೆ, ಮತಾಂತರ ಮಾಡುತ್ತಾ ಹೋದರೆ ಪರಿಸ್ಥಿತಿ ಸರಿಹೋಗುತ್ತಾ? ಹಿಂದೂಗಳು ಇತರ ಧರ್ಮದವರನ್ನು ಸಹಿಸದೇ ಹೋದರೆ? ಇದಕ್ಕೆಲ್ಲಾ ಕೊನೆ ಅನ್ನೋದು ಇದೆಯಾ? ಇನ್ನೊಂದು ವಿಷಯ. ಈಗ ನಮ್ಮಲ್ಲಿ ಜಾತಿ ಅನ್ನೋದು ಉಳಿಯೋದಕ್ಕೆ, ಬಲವಾಗುವುದಕ್ಕೆ ನಿಜವಾದ ಕಾರಣ ಈ ದರಿದ್ರ ರಾಜಕಾರಣಿಗಳು. ಅವರನ್ನು ಮೊದಲು ವಿಚಾರಿಸಿಕೊಳ್ಳಬೇಕು. ಎಲ್ಲರೂ ದೇಶ ಮುಂದುವರೆಯಬೇಕು ಅಂತ ಬಯಸಬೇಕಾಗಿರುವಾಗ, ಸಿಗೋ ಸ್ವಲ್ಪ ಲಾಭಕ್ಕೋಸ್ಕರ ನಮ್ಮ ಜಾತಿ ಹಿಂದುಳಿದವರ ಜಾತಿಗೆ ಸೇರಲಿ, ವರ್ಗಕ್ಕೆ ಸೇರಲಿ ಅಂತ ಹೊಡೆದಾಡ್ತಾ ಇದಾರೆ. ಜಾತಿಗೆ ಸರ್ಕಾರಿ ಮಾನ್ಯತೆ ಇದೆ. ಅದೇ ತಪ್ಪು. ಜಾತೀ ಆಧಾರದ  ಮೇಲೇನೇ ಸರ್ಕಾರ ನಡೆಸ್ತಾ ಇದಾರೆ. ಇದು ನಿಜವಾಗಿಯೂ ಜಾತ್ಯಾತೀತ ದೇಶ ಅಂತ ಹೇಳಕ್ಕಾಗುತ್ತೇನ್ಲಾ?
ಪು: ನೀನು ಏನ್ಲಾ ಹೇಳೋದು? ಇದನ್ನು ಬದಲಾಯಿಸೋಕೆ ಏನು ಮಾಡಬೇಕು? ನನ್ ತಲೆ ಗೊಜ್ಜಾಗಿ ಹೋಯಿತು. ತಂದೇ, ನಿನಗೆ ಕೈಮುಗೀತೀನಿ, ನೀನು ಏನು ಹೇಳಬೇಕೂಂತಿದೀಯಾ?
ಮಂಜ: ಬದಲಾಯಿಸೋಕೆ ನಾನು, ನೀನು ಯಾರಲಾ? ಎಲ್ಲರೂ ಎಲ್ಲರನ್ನೂ ಪ್ರೀತಿಸಬೇಕು ಅಂತ ತಾನೇ ನೀನು ಅವರನ್ನು ಬಯ್ಯೋ ಹಿಂದಿರುವ ಕಾರಣ? ಅದಕ್ಕೆ ಏನು ಮಾಡಬೇಕು? ನೀನು ಅದನ್ನು ಮೊದಲು ಅದನ್ನು ಮಾಡು. ನೀನು ಬೇರೆಯವರನ್ನು ಪ್ರೀತಿಸು. ಆಮೇಲೆ ಬೇರೆಯವರಿಗೆ ಹೇಳುವಂತೆ. ನೀನು ಮೊದಲು ಬದಲಾಗು.
ಪು: ನಾನೊಬ್ಬ ಬದಲಾಗಿಬಿಟ್ಟರೆ ದೇಶ ಬದಲಾಗಿಬಿಡುತ್ತಾ?
ಮಂಜ: ಎಲ್ಲರೂ ಬೇರೆಯವರು ಬದಲಾಗಲಿ ಅಂತಾರೆ. ತಾವು ಮಾತ್ರ ಬದಲಾಗಲ್ಲ. ಹೀಗಾದ್ರೆ ಬದಲಾವಣೆ ಆಗುತ್ತಾ? ಬೇರೆಯವರ ಬಗ್ಗೆ ಯೋಚಿಸೋದು ಬಿಟ್ಟು ಪ್ರತಿಯೊಬ್ಬರೂ ಅವರ ಪಾಡಿಗೆ ಅವರು ಬದಲಾಗಲಿ. ಆಗ ಬದಲಾವಣೆ ಆಗೇ ಆಗುತ್ತೆ. ಸಾವಿರಾರು ಮೈಲಿ ಪ್ರಯಾಣ ಪ್ರಾರಂಭ ಆಗೋದು ನಾವು ಇಡೋ ಮೊದಲ ಹೆಜ್ಜೆಯಿಂದಲೇ. ಆ ಹೆಜ್ಜೆ ನಮ್ಮಿಂದಲೇ ಶುರುವಾಗಲಿ. ಏನಂತೀರಾ ಫ್ರೆಂಡ್ಸ್? 
     ಎಲ್ಲರೂ 'ಚಿಯರ್ಸ್' ಅಂದರು. 'ಥತ್, ಇವತ್ತು ಕಿಕ್ಕೇ ಬರಲಿಲ್ಲ. ಎಲ್ಲಾ ಈ ಎಡವಟ್ಟು ಮಂಜನಿಂದ' ಎಂದು ಪುಟ್ಟರಾಜು ಗೊಣಗಾಡಿದರೆ ಉಳಿದವರು 'ನಮಗಂತೂ ಸಕತ್ ಕಿಕ್ ಸಿಕ್ಕಿತು' ಎಂದು ನಕ್ಕರು.
-ಕ. ವೆಂ.ನಾಗರಾಜ್.