ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಮೂಢ ಉವಾಚ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೂಢ ಉವಾಚ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜನವರಿ 28, 2013

ಮೂಢ ಉವಾಚ - 93


ಕೀಳರಿಮೆ ಪಡಬೇಡ ಹೀಗಳೆವರ ಮುಂದೆ 
ಜಾರಿ ಬೀಳಲು ಬೇಡ ನಗುವವರ ಮುಂದೆ |
ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ
ಮನವು ಮೆಚ್ಚಿದೊಡೆ ಸಾಕೆಲವೊ ಮೂಢ || ..೩೨೫

ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ 
ಗುರುವಿರದ ಶಾಲೆ ಒಡೆಯನಿಲ್ಲದ ಮನೆ |
ಇದ್ದರೇನಿಲ್ಲದಿರೇನ್ ತಳವಿರದ ಮಡಕೆ 
ಲೋಕವಿದು ಕೊರತೆಯ ಸಂತೆ ಮೂಢ || ..೩೨೬

ಅನುಭವಿಸಿದ ದುಃಖ ಭಯವಾಗಿ ಕಾಡೀತು
ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ |
ಸುಖದ ನೆನಪುಗಳು ಬಯಕೆ ತರದಿರದೆ
ಬಯಕೆ ದುಃಖಕ್ಕೆ ದೂಡೀತು ಮೂಢ || ..೩೨೭

ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ
ನನ್ನಿಂದ ನಾಬರಲು ನನ್ನನೇ ಮರೆಸುವುದು |
ನಾನತ್ವ ಬಿಗಿಯುವ ಕಗ್ಗಂಟೆ ಮಮಕಾರ
ಅರಿತೆನೆಂಬಹಮಿಕೆಗೆ ಸಿದ್ಧಿ ದೂರವು ಮೂಢ || ..೩೨೮
************
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 21, 2012

ಮೂಢ ಉವಾಚ - 92


ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ || ..೩೨೧

ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು
ಒಂದಿದ್ದು ಎರಡಾಗಿ ಮೂರಾಗಿ ಕಾಣುವುದು |
ದೇಹವೇ ನಾನೆನಿಸಿ ಭೇದ ಮೆರೆಯುವುದು
ಮಾಯಾ ಮೋಹಿನಿಗೆ ಶರಣು ಮೂಢ || ..೩೨೨

ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ |
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ ||..೩೨೩

ತಳಮಳಿಪ ಮನವನ್ನು ತಣಿಪುವುದೆ ಪೂಜೆ
ಕುಣಿಕುಣಿವ ಮನವನ್ನು ನಿಲಿಸುವುದೆ ಧ್ಯಾನ |
ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ || ..೩೨೪
****************
-ಕ.ವೆಂ.ನಾಗರಾಜ್.

ಸೋಮವಾರ, ಸೆಪ್ಟೆಂಬರ್ 10, 2012

ಮೂಢ ಉವಾಚ - 89


ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳೂ ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ || ..೩೦೯

ತಿನಿಸ ಕಂಡೊಡನೆ ಹಸಿವು ಹಿಂಗುವುದೆ
ಜಠರಾಗ್ನಿ ತಣಿದೀತು ಸೇವಿಸಲು ತಾನೆ? |
ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
ಅನುಭವಿಸಿ ಕಾಣಬೇಕವನ ಮೂಢ || ..೩೧೦

ದುರ್ಜನರ ಸಂಗವದು ರಾಗದ್ವೇಷಕೆ ದಾರಿ
ಒಳಕರೆಗೆ ಕಿವುಡಾಗಿ ಬೀಳುವರು ಜಾರಿ |
ಕುಜನರಿಂ ದೂರಾಗಿ ಸುಜನರೊಡನಾಡೆ
ಮೇಲೇರುವ ದಾರಿ ಕಂಡೀತು ಮೂಢ || .೩೧೧

ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ
ರುದ್ರಾಕ್ಷಿ ಸರವೇಕೆ ಜಪಮಣಿಯು ಬೇಕೆ |
ತೋರಿಕೆಯ ನಡೆ ಸಲ್ಲ ನುಡಿಯು ಬೇಕಿಲ್ಲ
ಅಂತರಂಗದ ಭಾವ ಸಾಕೆಲ್ಲ ಮೂಢ || ..೩೧೨
****************
-ಕ.ವೆಂ.ನಾಗರಾಜ್.

ಮಂಗಳವಾರ, ಆಗಸ್ಟ್ 28, 2012

ಮೂಢ ಉವಾಚ - 88



ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು
ಯೋಗಕಿಂ ಮಿಗಿಲು ಭಕ್ತಿಯ ಹೊನಲು |
ಮೂರರ ಗುರಿಯೆ ಭಕ್ತಿ ತಾನಾಗಿರಲು
ಭಕ್ತಿಯೇ ಸಿರಿ ನೀನರಿಯೊ ಮೂಢ || ..305

ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು
ದೇವ ಸುಜನರೊಡೆ ಕೂಡಿಯಾಡಲುಬೇಕು |
ಗುರುಕರುಣೆಯಲಿ ನಲಿಯುತಿರಬೇಕು 
ನಿರ್ಮಮದಿ ಸಚ್ಚಿದಾನಂದ ಮೂಢ || ..306


ನಯನ ನೋಡುವುದು ತನಗಾಗಿ ಅಲ್ಲ
ಕಿವಿಯು ಕೇಳುವುದು ತನಗಲ್ಲವೇ ಅಲ್ಲ |
ದೇಹವಿದು ದಣಿಯುವುದು ದೇಹಕೆಂದಲ್ಲ
ಯಾರಿಗಾಗೆಂದು ಗೊತ್ತಿಹುದೆ ಮೂಢ || ..307

ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತಮ್ಮಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ || ..308
*********************
-ಕ.ವೆಂ.ನಾಗರಾಜ್.


ಶುಕ್ರವಾರ, ಜುಲೈ 27, 2012

ಮೂಢ ಉವಾಚ - 86


ಜಗಕೆ ಕಾರಣ ಒಂದು ಆಧಾರ ಒಂದು
ಒಂದನೊಂದನು ಕಂಡು ಬೆರಗಾಯಿತೊಂದು |
ಚಂದಕಿಂತ ಚಂದ ಒಂದಕೊಂದರ ನಂಟು
ಆಧಾರಕಾಧಾರನವನೆ ಮೂಢ || ..೨೯೭


ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ
ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ |
ಅವನೊಬ್ಬನೇ ಜಗದ ಎಲ್ಲೆಯನು ಬಲ್ಲ
ಕಣ್ಣರಳಿ ಬೆರಗಾಗಿ ನಿಂತಿಹನು ಮೂಢ || ..೨೯೮


ನೆಲವ ಸೋಕದಿಹ ಅನ್ನವಿಹುದೇನು
ನೆಲವ ತಾಕದಿಹ ಪಾದಗಳು ಉಂಟೇನು |
ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು
ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..೨೯೯


ಸವಿಗವಳದ ರುಚಿಯ ಕರವು ತಿಳಿದೀತೆ
ಸವಿಗಾನದ ಸವಿಯ ನಯನ ಸವಿದೀತೆ |
ಚೆಲುವು ಚಿತ್ತಾರಗಳ ಕಿವಿಯು ಕಂಡೀತೆ
ಅವರವರ ಭಾಗ್ಯ ಅವರದೊ ಮೂಢ || ..೩೦೦
***************
-ಕ.ವೆಂ.ನಾಗರಾಜ್.


ಮಂಗಳವಾರ, ಮೇ 15, 2012

ಮೂಢ ಉವಾಚ - 84


ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ
ಐದಲ್ಲ ಆರಲ್ಲ ಏಳಲ್ಲವೇ ಅಲ್ಲ |
ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ
ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..೨೮೯


ಚಲಿಸದೇ ಚಲಿಸುವನು ಅವನೊಬ್ಬನೇ
ನೋಡದೇ ನೋಡುವನು ಅವನೊಬ್ಬನೇ |
ಒಳಹೊರಗು ಎಲ್ಲೆಲ್ಲು ಅವನೊಬ್ಬನೇ
ನಿರಾಕಾರ ನಿರ್ವಿಕಾರ ಒಬ್ಬನೇ ಮೂಢ || ..೨೯೦


ದಾನಿಯೆಂದೆನುತ ಕೊರಳೆತ್ತಿ ನಡೆಯದಿರು
ತರಲಿಲ್ಲ ನೀನು ಕೊಡುವೆ ಮತ್ತೇನು |
ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ 
ದಾನಿಗಳ ದಾನಿ ಒಬ್ಬನೇ ಮೂಢ || ..೨೯೧


ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ || ..೨೯೨
***********
-ಕ.ವೆಂ.ನಾಗರಾಜ್.

ಭಾನುವಾರ, ಏಪ್ರಿಲ್ 29, 2012

ಮೂಢ ಉವಾಚ - 83


ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು |
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..೨೮೫


ಕಾಣದ್ದು ಕಾಣುವುದು ಕೇಳದ್ದು ಕೇಳುವುದು
ಕಂಡಿರದ ಕೇಳಿರದ ಸತ್ಯದರಿವಾಗುವುದು |
ಮುಚ್ಚಿದ್ದ ದಾರಿಗಳು ನಿಚ್ಚಳದಿ ತೆರೆಯುವುವು
ಏಕಾಂತದಲಿಹುದು ನಿನ್ನತನ ಮೂಢ || ..೨೮೬


ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲು
ಕಣ್ಣಿದ್ದು ಕುರುಡನೆನಿಸುವೆಯೋ ನೀನು |
ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲು
ನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..೨೮೭


ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿ
ಜ್ಞಾನಿಗಳ ಹಿತನುಡಿಯು ನಾಯಕಗೆ ನೆರವಾಗೆ |
ಅಂತಿಪ್ಪ ನಾಡು ಪುಣ್ಯವಂತರ ಬೀಡು
ಸಜ್ಜನರ ಒಡನಾಟ ಹಿತಕಾರಿ ಮೂಢ || ..೨೮೮
************
-ಕ.ವೆಂ.ನಾಗರಾಜ್.

ಮಂಗಳವಾರ, ಏಪ್ರಿಲ್ 17, 2012

ಮೂಢ ಉವಾಚ - 82


ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ || ..೨೮೧


ಹಿರಿಯ ಪರ್ವತದ ಬದಿಯೆ ಕಂದಕವು
ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು |
ಸುಖವ ಬಯಸಿರಲು ಜೊತೆಗಿರದೆ ದುಃಖ
ಒಂದರಿಂದಾಗಿ ಮತ್ತೊಂದು ಮೂಢ || ..೨೮೨


ನುಡಿವ ಸತ್ಯವದು ಗೆಳೆತನವ ನುಂಗೀತು
ಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |
ಮರುಳು ಮಾಡುವ ಸುಳ್ಳಿಗಿಹ ಬೆಲೆಯ
ಕೊಡರು ಸತ್ಯಕಿದು ಸತ್ಯ ಮೂಢ || ..೨೮೩


ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲ
ಮತ್ತೇನೂ ಬೇಡದಿರೆ ಸಂತೋಷ ಬಾಳೆಲ್ಲ|
ಇರುವುದು ಸಾಕೆಂಬ ಭಾವ ಸಂತೋಷ
ಅರಿತವನೆ ಪರಮಸುಖಿ ಕಾಣು ಮೂಢ || ..೨೮೪
*************
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 22, 2011

ಮೂಢ ಉವಾಚ - 81

ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು
ತಿರುಳಿರದ ಫಲಕೆ ಸಮ ಅರಿವಿರದಕರ್ಮ |
ಕರ್ಮವಿರದಾ ಧರ್ಮ ಒಣಶುಷ್ಕ ಸಿದ್ಧಾಂತ
ನಿಜಧರ್ಮದ ಮರ್ಮ ಸತ್ಕರ್ಮ ಮೂಢ ||


ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |
ಬೆಳಗೀತು ಬಾಳು ಪಸರಿಸಲರಿವ ಬೆಳಕು
ವಿಕಸಿಸುವ ಹಾದಿ ತೋರೀತು ಮೂಢ ||



ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರಿಹರು 
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ || 


ಇವರಿಂತೆ ಅವರಂತೆ ಎಂತಿರಲಿ ಏನಂತೆ
ಇರುವೆ ನೀನೆಂತೆ ಬಿಟ್ಟುಬಿಡು ಪರಚಿಂತೆ |
ಹುಳುಕನೆತ್ತಾಡದಿರು ಕೆಡುಕು ನಿನಗಂತೆ
ಕೊಟ್ಟಿಗೆಯ ಶುನಕ*ನಾಗದಿರು ಮೂಢ ||

[*ಕೊಟ್ಟಿಗೆಯ ಶುನಕ: ಕೊಟ್ಟಿಗೆಯಲ್ಲಿ ನಾಯಿ ಇದ್ದರೆ ಅದು ತಾನಂತೂ ಹುಲ್ಲು ತಿನ್ನುವುದಿಲ್ಲ, ಆದರೆ ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ.]
**************************
-ಕ.ವೆಂ.ನಾಗರಾಜ್.



ಭಾನುವಾರ, ನವೆಂಬರ್ 13, 2011

ಮೂಢ ಉವಾಚ - 80

ಪ್ರಿಯರಾರು ಆರಿಸೆನೆ ಅನ್ಯರನು ತೋರುವರೆ
ಸತಿಸುತರನಾರಿಸರು ಬಂಧುಗಳನಾರಿಸರು |
ಹಿರಿಯರನಾರಿಸರು ದೇವರದೇವನಾರಿಸರು
ತಾವೆ ಮಿಗಿಲೆಂಬರು ಇದು ಸತ್ಯ ಮೂಢ ||


ಸಕಲವನು ಬಯಸುವ ಲೋಭದ ಪರಿಯೇನು
ಅಹಮಿಕೆಯು ತಾನೆರಗಿ ಮೆರೆದಿಹ ಸಿರಿಯೇನು |
ಗೆಲ್ಲಹೊರಟಿಹುದೇನು ಬಾಳಲಾರದ ಮನುಜ
ಮಾಯೆಯ ಮುಸುಕು ಸರಿದೀತೆ ಮೂಢ || 



ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು
ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು |
ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು
ಸುಳ್ಳಿನ ಗುಳ್ಳೆಯೊಡೆದೀತು ಮೂಢ ||


ಮಾಯೆಯಲಿ ಸೊಗವು ಮಾಯೆಯಲಿ ಜಗವು
ಮಾಯೆಯಲಿ ನಲಿವು ಮಾಯೆಯಲಿ ನೋವು |
ಮಾಯಾವಿ ಮಾಯೆಯಿಂ ಜಗವು ನಡೆದಿಹುದು
ಮಾಯೆಯಿಲ್ಲದಿರೆ ಜಗವೆಲ್ಲಿ ಮೂಢ ||
****************
-ಕ.ವೆಂ.ನಾಗರಾಜ್.



ಬುಧವಾರ, ನವೆಂಬರ್ 9, 2011

ಮೂಢ ಉವಾಚ - 79

ಏನಿದೇನಿದೀ ಮಾಯೆ ಏನಿದೇನಿದೀ ಚೋದ್ಯ
ಇರುವುದೇ ಮೂರು ದಿನ ಜಗವನೆ ಬಯಸಿಹರು |
ಚಿರಕಾಲ ಬದುಕೆಂದು ಭ್ರಮೆಯ ತಳೆದಿಹರು
ಈ ಜಗವ ನಡೆಸಿಹುದು ಮಾಯೆ ಮೂಢ || 


ನೂರು ಜನ್ಮವು ಅಲ್ಪ ತಿಳಿಯಲೀ ಜಗವ
ಅಲ್ಪಜ್ಞ ಕುಣಿವ ತೋರಿ ಪಂಡಿತನ ಭಾವ |
ಪರರ ಹೀಗಳೆದು ತಾನೆ ಸರಿಯೆನುವವನು
ಮಾಯೆಯ ಬಲೆಯಲಿಹ ಕೀಟ ಮೂಢ ||
***************
-ಕ.ವೆಂ.ನಾಗರಾಜ್.

ಪ್ರಾಸಂಗಿಕವಾಗಿ ಈ ಸುದ್ದಿ ತಮ್ಮ ಗಮನಕ್ಕಾಗಿ:
:

ಸೋಮವಾರ, ನವೆಂಬರ್ 7, 2011

ಮೂಢ ಉವಾಚ - 78


ಹೆಸರು ಹೆಸರೆಂದು ಕೊಸರಾಡಿ ಫಲವೇನು
ನೆನೆಸುವರು ಚಿರರಿಹರೆ ಚಿರವೆ ಹೆಸರು? |
ಅರಿತವರೆ ಬಿಡದಿಹರು ಹೆಸರ ಹಂಬಲವ
ಹುಲುನರರ ಕಥೆಯೇನು ಹೇಳು ಮೂಢ ||


ಏನಿಲ್ಲ ಏನಿಹುದು ಪೂರ್ಣ ಜಗವಿಹುದು
ಶಕ್ತನಿರೆ ಪಡೆಯುವೆ ದೇವನ ಕರುಣೆಯಿದು |
ಪಡೆದಿರುವೆ ನೀನು ಕೊಡದಿರಲು ದ್ರೋಹ
ಕೊಟ್ಟಷ್ಟು ಪಡೆಯುವೆ ನಿಜವು ಮೂಢ ||



ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||


ಎಲ್ಲರನು ಜಯಿಸಿದವ ವೀರನೆಂಬುದು ಸುಳ್ಳು
ತನ್ನ ತಾ ಜಯಿಸದಿರೆ ಅವನೊಂದು ಜೊಳ್ಳು |
ಎಲ್ಲವನು ಪಡೆದವನು ಹಿರಿತನವ ಪಡೆದಾನೆ
ತನದಲ್ಲವೆನುವವನೆ ಹಿರಿಯ ಮೂಢ ||
***************
-ಕ.ವೆಂ.ನಾಗರಾಜ್.

ಬುಧವಾರ, ಅಕ್ಟೋಬರ್ 19, 2011

ಮೂಢ ಉವಾಚ - 77


ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ |
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ ||


ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ
ಬರಡು ಮನದಲಿ ತೋರಿಕೆಯ ಸಂತೋಷ |
ಹೀನ ದೈನ್ಯತೆಯ ಆಶ್ರಯದ ಪಾಶ
ಮೂದಲಿಕೆ ತಪ್ಪದು ಮುದಿತನದಿ ಮೂಢ ||


ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||


ಸಂಸಾರ ವೃಕ್ಷಕೆ ಅಜ್ಞಾನವೇ ಬೇರು
ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು |
ಕರ್ಮವದು ನೀರು ಸಹವಾಸ ಗೊಬ್ಬರವು
ತಕ್ಕಂತೆ ಸಿಕ್ಕೀತು ಫಲವು ಮೂಢ ||
^^^^^^^^^^^^^^^
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 17, 2011

ಮೂಢ ಉವಾಚ - 76


ದೇಹ ದೇವರಾಗಿ ಭೋಗ ಪೂಜೆಯಾಗಿ
ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ |
ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ
ಕೂಪದಲಿ ಬಿದ್ದರೇಳುವರೆ ಮೂಢ || 


ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು
ಆಸೆ ನಗುವುದು ವಿಚಾರ ಸೋಲುವುದು |
ಜಾರುವುದರಿತರೂ ನಾಶವಾಗದು ಚಪಲ
ಸಕಲ ಸಂಕಟಕೆ ಮೂಲವಿದು ಮೂಢ ||


ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ
ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು |
ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ
ಅಣೋರಣೀಯನ ಮಹತಿಯಿದು ಮೂಢ ||


ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
**************
-ಕ.ವೆಂ.ನಾಗರಾಜ್.

ಶುಕ್ರವಾರ, ಅಕ್ಟೋಬರ್ 14, 2011

ಮೂಢ ಉವಾಚ - 75


ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು
ಮೊಳಕೆ ಬೆಳೆದೀತು ಕಾಣುವ ನೋಟವಿರೆ
ಮನನದ ನೀರೆರೆದು ಅನುಭವದಿ ಕಳೆಕೀಳೆ
ಅದ್ಭುತಾಮೃತ ಫಲ ನಿನದೆ ಮೂಢ ||


ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||


ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||


ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು
ಇಂದ್ರಿಯಾಶ್ವವನು ಚಿತ್ತ ಹಿಡಿದಿಹುದು |
ಒಡೆಯ ಹೇಳ್ದಂತೆ ಸಾಗುವನು ಸಾರಥಿಯು
ಒಡೆಯನಾರೆಂದು ತಿಳಿದಿಹೆಯ ಮೂಢ ||
*********************
-ಕ.ವೆಂ.ನಾಗರಾಜ್.

ಮಂಗಳವಾರ, ಅಕ್ಟೋಬರ್ 4, 2011

ಮೂಢ ಉವಾಚ - 74


ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ
ನರಕವೆಂಬುದಿದೆ  ಪಾಪ ಕಳೆಯುವ ತನಕ 
ನಿನ್ನೊಳಗೆ ನಾನು ನನ್ನೊಳಗೆ ನೀನೆನಲು
ಸಚ್ಚಿದಾನಂದಭಾವ ಕೊನೆತನಕ ಮೂಢ ||


ಸ್ವರ್ಗವನು ಬಯಸುವರು ಕಾಮಿಗಳು ಕೇಳು
ನಿಜಭಕ್ತರವರಲ್ಲ ಜ್ಞಾನಿಗಳು ಮೊದಲಲ್ಲ 
ಅಂಜಿಕೆಯ ಮೇಲೆ ನರಕ ನಿಂತಿರಲು
ಆಸೆಯೇ ಸಗ್ಗಕಾಧಾರ ಮೂಢ ||


ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರಲಿಹುದು ಸಾವು
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||


ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ ||
****************
-ಕ.ವೆಂ.ನಾಗರಾಜ್.


ಶುಕ್ರವಾರ, ಸೆಪ್ಟೆಂಬರ್ 30, 2011

ಮೂಢ ಉವಾಚ - 73


ಶ್ರಮವಿರದ ಸುಖವೆಲ್ಲರಿಗೆ ಬೇಕು ನಿತ್ಯ
ಸುಖವು ಶ್ರಮದಲಿಹುದೆಂಬುದೆ ಪರಮಸತ್ಯ |
ಸುಖಿಸುವರ ಕಂಡು ಕರುಬುವರು ಪರರು
ಶ್ರಮಿಸುವರ ಮಚ್ಚರಿಪರಿಹರೆ ಮೂಢ ||


ವಿಷಯರಾಗವನು ಮೂಡಿಪುದೆ ಮನಸು
ಪಶುತರದಿ ಬಂಧಗೊಳಿಪುವುದು ಮನಸೆ |
ವಿರಾಗದಲಿ ಬಂಧ ಬಿಡಿಸುವುದು ಮನಸು
ಮನಸಿನಿಂದಲೆ ಕನಸು ನನಸು ಮೂಢ ||


ಹೆತ್ತು ಹೊತ್ತು ಸಲಹಿದ ಮಮತೆಯ ಜಲಧಿ
ತಾಯ ಋಣ ತೀರಿಸಲು ಆಗುವುದೆ ಜಗದಿ |
ನೋವನುಂಡು ನಲಿವ ನೀಡುವಳು ಮುದದಿ
ಆಕೆಯನು ನೋಯಿಪನು ಕಡುಪಾಪಿ ಮೂಢ ||


ಸಾಲ ಪಡೆದೆವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||

****************
-ಕ.ವೆಂ.ನಾಗರಾಜ್.


ಮಂಗಳವಾರ, ಸೆಪ್ಟೆಂಬರ್ 27, 2011

ಮೂಢ ಉವಾಚ - 72

ಬುದ್ಧಿಗೂ ಹೃದಯಕೂ ಎನಿತೊಂದು ಅಂತರ
ಬುದ್ಧಿಯದು ಚಮತ್ಕಾರ ಹೃದಯದಿಂದುಪಕಾರ |
ಬುದ್ಧಿಯ ಬಲದಲಿ ಜಗವನೆ ಗೆಲಲೇಕೆ
ಹೃದಯವಂತ ಜಗದೊಡೆಯ ಮೂಢ ||

ಹೃದಯವಿರದ ಬುದ್ಧಿ ಅಪಾಯ ತಂದೀತು
ಸ್ವಾರ್ಥ ಮೇಲಾಗಿ ಲೋಕಕಪಕಾರಿಯಾದೀತು |
ಹೃದಯದ ಒಲವಿರಲು ಬುದ್ಧಿ ಜೊತೆಗಿರಲು
ಲೋಕವೊಪ್ಪಿ ಅಹುದೆನದೆ ಮೂಢ || 


ಮೇಲು ಕೀಳುಗಳಿಗೆ ಕಾರಣರು ಪರರಲ್ಲ
ಆಲಸಿಕೆ ಕುಚಟಗಳ ದಾಸರಾಗರೆ ಕೀಳು |
ಮುನ್ನಡೆಯ ಹಂಬಲಿಸೆ ಆಗುವರು ಮೇಲು
ಪರರ ದೂಷಿಸಿ ಫಲವೇನು ಮೂಢ ||


ಸಮರಾರಿಹರು ಜಗದೊಳು ಸಮರಾರಿಹರು
ಅಸಮಾನರೆನಿಸೆ ಹಂಬಲಿಸಿ ಹೋರಾಡುತಿಹರು |
ಗುರಿ ಸಮನಿರಬಹುದು ದಾರಿ ಸಮನಹುದೆ
ನಿಜಸಮತೆ ಕಂಡೀತು ಸಾವಿನಲಿ ಮೂಢ ||
**************
-ಕ.ವೆಂ.ನಾಗರಾಜ್.

ಗುರುವಾರ, ಸೆಪ್ಟೆಂಬರ್ 22, 2011

ಮೂಢ ಉವಾಚ -71


ತಿಳಿಯಾಗಿರಲಿ ಮನ ದೋಷವಿರದಿರಲಿ
ಆನಂದ ತುಂಬಿರಲಿ ಮಂದಹಾಸವದಿರಲಿ |
ರೋಷವದು ದೂರ ವಿವೇಕ ಬಳಿಯಿರಲಿ
ಮಾನಸ ತಪದ ಫಲವೊಲಿಯಲಿ ಮೂಢ ||


ಗುರುಹಿರಿಯರ ಗೌರವವಿಸದವ ಹಾಳು
ಒಳಿತಿನಲಿ ಹುಳುಕರಸುವ ಸಂಶಯಿ ಹಾಳು
ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ
ಪರರಿಗೂ ಅವನಿಂದ ಸುಖವಿಲ್ಲ ಮೂಢ || 


ಸುಖ ಬೇಕು ಮನುಜನಿಗೆ ದುಃಖ ಬೇಡ
ಸುಖಿಯು ಹೆಚ್ಚು ಸುಖ ಬಯಸುವನು |
ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು
ಸುಖವ ನಿನ್ನೊಳಗೆ ಅರಸು ಮೂಢ || 


ಲೌಕಿಕ ಸುಖಕಾಗಿ ಹೊರಗೆ ಸುತ್ತಲು ಬೇಕು
ಅಂತರಂಗದ ಸುಖಕೆ ಒಳಗೆ ಸಾಗಲು ಬೇಕು |
ಸುಖ ದುಃಖಗಳೆರಡು ಅವಳಿ ಜವಳಿಗಳು
ಒಂದು ಬಿಟ್ಟಿನ್ನೊಂದಿಲ್ಲ ಮೂಢ ||
****************
-ಕ.ವೆಂ.ನಾಗರಾಜ್.

ಮಂಗಳವಾರ, ಸೆಪ್ಟೆಂಬರ್ 20, 2011

ಮೂಢ ಉವಾಚ - 70

ಹಿತಮಿತದ ಮಾತು ಬಾಳಿಗಾಧಾರ
ಹಿತಮಿತದ ಊಟ ಆರೋಗ್ಯಧಾರ |
ಹಿತಮಿತದ ಕರ್ಮ ಸೊಗಸಿನ ಮರ್ಮ
ಇತಿಮಿತಿಯಲಿ ಬಾಳೆಲೋ ಮೂಢ || 


ಸಂಕಲ್ಪದಿಂ ಕಾಮ ಕಾಮದಿಂ ಕರ್ಮ
ಕರ್ಮದಿಂ ಬಹುದು ಸುಖ ದುಃಖ ಪ್ರಾಪ್ತಿ
ಪುನರಪಿ ಮರಣ ಪುನರಪಿ ಜನನ
ಸಂಸಾರ ಚಕ್ರಕೆ ಮೂಲ ಸಂಕಲ್ಪ ಮೂಢ || 



ವಿರಳ ಮಾನವಜನ್ಮ ಪುಣ್ಯಪಾಪದ ಫಲವು 
ವಿರಳವು ಹುಟ್ಟಿನ ಮಹತಿ ಗುರಿಯರಿವು |
ವಿರಳರು ಅರಿವರಿತು ಸರಿದಾರಿ ಹಿಡಿವವರು
ವಿರಳಾತಿವಿರಳ ಮುಕ್ತಿ ಪಡೆವವರು ಮೂಢ || 


ನುಡಿದಂತೆ ನಡೆಯುವರು ಸಟೆಯನಾಡರು
ಚಿತ್ತದಲಿ ಶಾಂತಿ ಹಿರಿಯರಲಿ ಗೌರವ |
ಅಲೋಲುಪ ಅಚಾಪಲ ತ್ಯಾಗಿಗಳವರು
ದೇವಮಾನವರವರೆ ಮೂಢ ||