ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ವೈಚಾರಿಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವೈಚಾರಿಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜುಲೈ 26, 2023

ದೇವರೊಡನೆ ಸಂದರ್ಶನ - 14


ಗಣೇಶ: ದೇವರೇ, ನಾನು ಇದ್ದರೆ ನೀನು ಅನ್ನೋದು ನೀನೇ ಹೇಳಿಕೊಟ್ಟ ಮಾತು. ನನಗಂತೂ ಖುಷಿಯಾಯಿತು. ಮುಂದೇನು ಅಂತ ತಿಳಿಯುವ ಕುತೂಹಲ ಬಂದಿದೆ.
ದೇವರು: ಒಂದು ಮಾತು ಮನಸ್ಸಿನಲ್ಲಿರಲಿ, ಗಣೇಶ. ಯಾವುದು ಸತ್ಯ, ಯಾವುದು ಸರಿ ಅನ್ನುವುದನ್ನು ಕೊನೆಗೆ ನಿರ್ಧರಿಸಬೇಕಾದವನು ನೀನೇ! ಹಿಂದಿನ ಇತಿಹಾಸವನ್ನು ತಿಳಿ, ಧರ್ಮಗ್ರಂಥಗಳು, ಶಾಸ್ತ್ರಗಳು, ನೀವುಗಳೇ ಮಾಡಿಕೊಂಡಿರುವ ಕಟ್ಟಳೆಗಳು, ಸಂಪ್ರದಾಯಗಳ ಕುರಿತೂ ತಿಳಿದುಕೋ, ಕೇಳು, ಅಧ್ಯಯನ ಮಾಡು, ವಿಚಾರ ಮಾಡು, ಚರ್ಚೆ ಮಾಡು. ಯಾವುದನ್ನೂ ಕಣ್ಣು ಮುಚ್ಚಿಕೊಂಡು ಒಪ್ಪುವ ಅಗತ್ಯವೂ ಇಲ್ಲ, ಯಾರೋ ಹೇಳಿದರು ಅಂತ ಒಪ್ಪಲೇಬೇಕು ಅಂತಲೂ ಇಲ್ಲ. ಇಷ್ಟೆಲ್ಲಾ ಆದ ಮೇಲೆ ನಿನ್ನ ಅಂತರಂಗಕ್ಕೆ ಯಾವುದು ಸರಿ ಅನ್ನಿಸುತ್ತದೋ ಅದನ್ನು ನೀನೇ ಕಂಡುಕೊಳ್ಳಬೇಕು. ಅರಿತವರು ಎಂದು ನೀನು ಭಾವಿಸುವ ಸಜ್ಜನರು ಯಾವ ದಾರಿಯಲ್ಲಿ ಸಾಗುತ್ತಾರೋ ಅವರ ದಾರಿಯಲ್ಲೇ ನಿನ್ನ ಬಂಡಿಯೂ ಸಾಗಲಿ. ಗೊತ್ತಾಯಿತಾ, ಕೊನೆಗೆ ಸತ್ಯವನ್ನು ಕಂಡುಕೊಳ್ಳಬೇಕಿರುವುದು ನೀನೇ, ನೀನೇ, ನೀನೇ!
ಗಣೇಶ: ಅದೇನೋ ಸರಿ, ಆದರೆ ನಾನು ಕಂಡುಕೊಳ್ಳಬೇಕಾದ ಸತ್ಯ ಯಾವುದು ಅನ್ನೋದಾದರೂ ನನಗೆ ಅರ್ಥವಾಗಬೇಕಲ್ಲವಾ? ಸ್ವಲ್ಪ ಸುಳಿವು ಕೊಟ್ಟರೆ, ಕೈ ತೋರಿಸಿದರೆ ಆ ದಾರಿಯಲ್ಲಿ ನಡೆಯಬಹುದು. ಯಾಕೋ ನಿನ್ನೆಯ ಮಾತಿಗೂ ಇವತ್ತಿನ ಮಾತಿಗೂ ಏನು ಸಂಬಂಧ ಅನ್ನುವುದೂ ಅರ್ಥವಾಗುತ್ತಿಲ್ಲ. ನನ್ನ ಅಸ್ತಿತ್ವ ಇದ್ದರೆ ಮಾತ್ರ ಉಳಿದೆಲ್ಲಾ ಅಸ್ತಿತ್ವದ ಅರಿವು ನಮಗಾಗುತ್ತೆ ಅನ್ನೋದು ನಿನ್ನೆ ನೀನು ಹೇಳಿದ್ದು. ಅದನ್ನು ಮುಂದುವರೆಸು ದೇವರೇ.
ದೇವರು: ನಿನ್ನ ಅಸ್ತಿತ್ವ ಅನ್ನುವುದು ದೊಡ್ಡದು ಅಂತ ನಿನಗೆ ಆಗಿರುವ ಸಂತೋಷದಿಂದ ನೀನು ಇನ್ನೂ ಹೊರಬಂದಿಲ್ಲ. ಇರಲಿ, ನಿನ್ನ ಅಸ್ತಿತ್ವಕ್ಕೆ ಕಾರಣವಾದರೂ ಏನು ಅಂತ ಯೋಚಿಸಿದ್ದೀಯಾ? ನೀನು ಇದ್ದೀಯಾ ನಿಜ, ಆದರೆ ಏಕೆ ಇದ್ದೀಯಾ?
ಗಣೇಶ: ಗೊಂದಲವಾಗುತ್ತಿದೆ. ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದೂ ಕಷ್ಟವಾಗುತ್ತಿದೆ.
ದೇವರು: ನೇರವಾಗಿ ಕೇಳುತ್ತೇನೆ, ನಿನಗೆ ಇರಬೇಕು ಅನ್ನಿಸುತ್ತದೋ ಇಲ್ಲವೋ?
ಗಣೇಶ: ಇದೆಂತಹ ಪ್ರಶ್ನೆ? ಯಾರಿಗಾದರೂ ಇರಬಾರದು ಅನ್ನಿಸುತ್ತಾ? ಇದಕ್ಕೆ ಉತ್ತರವನ್ನು ಯಾವ ಮುಠ್ಠಾಳನಿಗೆ ಕೇಳಿದರೂ ಹೇಳುತ್ತಾನೆ.
ದೇವರು: ಈಗ ಹಿಂದಿನ ಪ್ರಶ್ನೆಗೆ ಮತ್ತೆ ಹಿಂತಿರುಗೋಣ. ಇರಬೇಕು ಅನ್ನಿಸುತ್ತದಲ್ಲಾ ಏಕೆ? ನಾನೇ ಹೇಳಿಬಿಡುತ್ತೇನೆ, ಕೇಳು. ನೀನು ಇರುವುದಕ್ಕಿಂತ ಇರಬೇಕು ಅನ್ನುವ ಆಸೆ ಇದೆಯಲ್ಲಾ ಅದು ದೊಡ್ಡದು. ನೀವುಗಳೇ ಏಕೆ, ಜಗತ್ತಿನ ಯಾವೊಂದೂ ಪ್ರಾಣಿ, ಕ್ರಿಮಿ-ಕೀಟ ಸಹ ಸಾಯಲು ಇಚ್ಛಿಸುವುದಿಲ್ಲ. ನೀವು ತಿಂದು ತೇಗುವ ಕುರಿ, ಕೋಳಿಗಳೇ ಮಾತನಾಡಲು ಬರುತ್ತಿದ್ದರೆ ತಮ್ಮ ಜೀವ ಉಳಿಸಲು ನಿಮ್ಮನ್ನು ಬೇಡಿಕೊಳ್ಳುತ್ತಿದ್ದವು. ಹೌದೋ ಅಲ್ಲವೋ? ಈ ಬದುಕಬೇಕು ಅನ್ನುವ ಆಸೆ ನಿಮ್ಮಗಳನ್ನು ಬದುಕಿಸಿದೆ. ಅದು ನಿಮ್ಮ ಒಳಗೇ ಇರುವ ಸಂಗತಿ. ಅದು ಒಂದು ರೀತಿಯ ಆಸೆ, ಭರವಸೆ, ನಿರೀಕ್ಷೆಗಳಿರಬಹುದು, ಅದು ನಿಮ್ಮನ್ನು ಬದುಕುವಂತೆ ಮಾಡುತ್ತಿದೆ. ಆ ಆಸೆ ಏನು ಗೊತ್ತಾ? ಈಗ ಇರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಆಸೆ. ಇದೇ ಎಲ್ಲಾ ಜೀವಿಗಳಲ್ಲೂ ಅಂತರ್ಗತವಾಗಿ ಹುದುಗಿದೆ. ವಿಚಾರ ಮಾಡಬಲ್ಲವರು ಇದನ್ನು ಆತ್ಮೋನ್ನತಿಯ ಆಸೆ ಅನ್ನುತ್ತಾರೆ.
ಗಣೇಶ: ನೀನು ಹೇಳುವುದು ಸ್ವಲ್ಪ ತಲೆಗೆ ಹೋಗುತ್ತಿದೆ. ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುವಂತೆ, ಸಹನೀಯವಾಗುವಂತೆ ಮಾಡುತ್ತದೆ. ಇದು ಏಕೆ ಹೀಗೆ?
ದೇವರು: ನಿಮ್ಮ ಅಸ್ತಿತ್ವಕ್ಕೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಅಂತರ್ಗತ ಪ್ರಜ್ಞೆಯಿಂದ ಅಂತ ಗೊತ್ತಾಯಿತಲ್ಲಾ? ಇದು ಹೊರನೋಟಕ್ಕೆ ಕಾಣುವುದಿಲ್ಲ. ಒಳಗೊಳಗೇ ಕಾಣದಂತೆ ಕೆಲಸ ಮಾಡುವ ಈ ಒಳಪ್ರಜ್ಞೆ ಜೀವಿಗಳ ವಿಚಿತ್ರ, ವಿಶಿಷ್ಟ ಗುಣವಾಗಿದೆ. ನಿನ್ನ ಶರೀರ ಅನ್ನುವುದು ಒಂದು ಬಂಡಿ ಎಂದುಕೊಂಡರೆ ಆ ಬಂಡಿಯ ಒಡೆಯನೂ ನೀನೇ, ಪ್ರಯಾಣಿಕನೂ ನೀನೇ! ಆ ಬಂಡಿ ಮುಂದಕ್ಕೆ ಹೋಗುತ್ತಿರಬೇಕು ಅಂದರೆ ಅದನ್ನು ಸರಿಯಾಗಿ ನಡೆಸಬೇಕು. ಆ ಪ್ರಯಾಣ ಏಕೆ ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳಬೇಕಾದವನು ಪ್ರಯಾಣಿಕನೇ. ಈ ಬಂಡಿ, ಬಂಡಿಯ ಮಾಲೀಕ, ಬಂಡಿಯ ಪ್ರಯಾಣಿಕ ಎಲ್ಲವೂ ಒಂದು ರೀತಿಯ ವಿಸ್ಮಯವಾಗಿ ಕಾಣುತ್ತದೆಯಲ್ಲವೇ? ಪ್ರಯಾಣಿಸುತ್ತಾ ಹೋದಂತೆ ಗುಟ್ಟು ಬಯಲಾಗುತ್ತಾ ಹೋಗುತ್ತದೆ. ಆದರೆ ಇದು ಬಹು ದೀರ್ಘವಾದ ಪಯಣ. ಗೊತ್ತಿದ್ದೋ, ಗೊತ್ತ್ತಿಲ್ಲದೆಯೋ ನೀವು ಪ್ರಯಾಣ ಮಾಡುತ್ತಲೇ ಇರುತ್ತೀರಿ. ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಬಯಕೆ ನಿಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತಿರುತ್ತದೆ. ವಿಶೇಷ ಅಂದರೆ ಹೋಗುತ್ತಾ ಹೋಗುತ್ತಾ ಉತ್ತಮ ಸ್ಥಿತಿ ಅಂದರೇನು ಅನ್ನುವ ನಿಮ್ಮ ಕಲ್ಪನೆ ಸಹ ಬದಲಾಗುತ್ತಾ ಹೋಗುತ್ತದೆ.
ಗಣೇಶ: ನೀನು ಹೇಳೋದು ಕೇಳಿದರೆ ಮುಂದಕ್ಕೆ ಹೋಗೋದು ಅಂದರೆ ಕೊನೆಗೊಮ್ಮೆ ಸ್ವರ್ಗಾನೋ, ಮೋಕ್ಷಾನೋ ಪಡೆಯುವವರೆಗೆ ಬದುಕುವ ಹೆಸರಿನಲ್ಲಿ ಒದ್ದಾಡೋದಾ?
ದೇವರು: ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ಶರೀರದ ಮೂಲಕ ಹೊಂದಿರುವ ಅಸ್ತಿತ್ವವನ್ನೇ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತವಿರುವುದನ್ನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಹೆಚ್ಚು ಹೆಚ್ಚು ಸಂಗ್ರಹಿಸುತ್ತಾ ಹೋಗುವುದು ಮತ್ತು ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ಪ್ರಾಪ್ತಿ(ಸಾಮ್ರಾಜ್ಯ ಅಂದುಕೋ)ಯನ್ನು ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಯಸುವುದೇ ಜೀವಿಯ ಆಸೆಯಾಗಿದೆ. ಇದಕ್ಕಾಗಿಯೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೀರಿ. ಈಗಿರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೀರಿ. ಎಷ್ಟರಮಟ್ಟಿಗೆ ಎಂದರೆ, ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಿಮ್ಮದಾಗಬೇಕೆಂಬವರೆಗೆ ಈ ಅಸೆ ಅಪ್ರಜ್ಞಾತ್ಮಕವಾಗಿ ಸುಪ್ತವಾಗಿರುತ್ತದೆ. ತಿಳುವಳಿಕೆಯ ಕೊರತೆಯಿಂದ ಈ ಶರೀರದಲ್ಲಿಯೇ ದೀರ್ಘವಾಗಿ ಇರಬೇಕೆಂಬ ಆಸೆ ಎಂದು ಅಂದುಕೊಳ್ಳುತ್ತೀರಿ.
ಗಣೇಶ: ಅರ್ಥವಾಗಲಿಲ್ಲ.
ದೇವರು: ನೋಡು, ಹೆಚ್ಚು ಹೆಚ್ಚು ಗಳಿಸುತ್ತೀಯಾ, ಅದನ್ನು ಅನುಭವಿಸಲು ದೀರ್ಘಾಯಸ್ಸು ಬೇಕೆನ್ನುತ್ತೀಯಾ. ಈ ದೀರ್ಘಾಯಸ್ಸು ಅಂದರೆ ಏನು? ಈಗ ಹೊಂದಿರುವ ಶರೀರವನ್ನೇ ಧರಿಸಿ ಇರುವ ಬಯಕೆಯಂತೂ ಇರಲಾರದು. ನಿಮಗೆ ಗೊತ್ತಿಲ್ಲದಂತೆಯೇ ಅದು ಏನೆಂದು ಮನಸ್ಸಿಗೇ ಸ್ಪಷ್ಟವಿರದ ಸಂಗತಿಯ ಬಗ್ಗೆ ಪ್ರಾರ್ಥಿಸುತ್ತೀರಿ. ಕಲ್ಪನೆಗೂ ಮೀರಿದಂತಹ ಅದೇನೋ ಬಯಸುತ್ತೀರಿ, ಅಲ್ಲವಾ? ಈ ದೀರ್ಘಾಯಸ್ಸು ಅಂದರೆ ಈಗಿನ ಶರೀರದಲ್ಲಿಯೇ ಬಹುಕಾಲ ಇರುವುದೇ? ಅದು ಬಾಲ್ಯಕಾಲದ ಶರೀರವೇ, ಯುವಾವಸ್ಥೆಯ ಶರೀರವೇ, ಮಧ್ಯವಯಸ್ಸಿನ ಶರೀರವೇ, ಪ್ರೌಢಾವಸ್ಥೆಯ ಶರೀರವೇ ಅಥವ ವೃದ್ಧಾಪ್ಯದ ಶರೀರವೇ? ಈ ಶರೀರದಲ್ಲಿ ಬಹುಕಾಲ ಇರಲಾರೆವು ಎಂಬ ಅರಿವೂ ನಿಮಗೆ ಇರುತ್ತದೆ. ಆದರೂ ದೀರ್ಘಾಯಸ್ಸು ಬೇಕು!
ಗಣೇಶ: ಮತ್ತೂ ಅರ್ಥವಾಗಲಿಲ್ಲ.
ದೇವರು: ನಿನಗೆ ಈ ವಿಷಯದಲ್ಲಿ ಚಿಂತನೆ ನಡೆಸಿದರೆ ಸೂಕ್ಷ್ಮ ಅರ್ಥವಾಗುತ್ತಾ ಹೋಗುತ್ತದೆ. ಸೂತ್ರ ರೂಪದಲ್ಲಿ ಇಷ್ಟು ತಿಳಿದುಕೋ. ಬೇಕು, ಬೇಕು ಅನ್ನುವ ಒಳ ಆಸೆ ನಿಮ್ಮನ್ನು ಬದುಕುವಂತೆ ಮಾಡುತ್ತದೆ. ಈ ಬೇಕು ಅನ್ನುವ ಕಾಮ ದಾರಿ ತಪ್ಪಿಸಿದರೆ ನಿಮ್ಮ ಶತ್ರು, ಸರಿದಾರಿಯಲ್ಲಿ ನಡೆಸಿದರೆ ನೀವು ಹೇಳುವ ಪುರುಷಾರ್ಥ ಸಾಧನೆಗೆ ಸಹಕಾರಿ.
ಗಣೇಶ: ಹೌದು, ನೀನು ಹೇಳಿದಂತೆ ಅದು ಏನೇ ಇರಲಿ, ನಾನಂತೂ ಬದುಕಬೇಕು, ಹೆಚ್ಚು ಕಾಲ ಬದುಕಬೇಕು.  ಅದಕ್ಕಾದರೂ ಅವಕಾಶ ಕೊಡು.
ದೇವರು: (ನಗುತ್ತಾ) ಆಗಲಿ, ಗಣೇಶಾ. ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ. ಇದೇ ಸತ್ಯ! ಕೆಳಹಂತದ ಗುರಿಗಳು, ಆಸೆಗಳು, ಬಯಕೆಗಳನ್ನು ಬಿಟ್ಟು ಉನ್ನತವಾದ ಗುರಿಯೆಡೆಗೆ ಲಕ್ಷ್ಯವಿದ್ದರೆ ಶಾರೀರಿಕ ಅಸ್ತಿತ್ವ ಮೀರಿ ನೈಜ ಅಸ್ತಿತ್ವ ಮುನ್ನಡೆಯುತ್ತದೆ. ಬದುಕುವುದು ಅಂದರೆ ಇದೇ ಆಗಿದೆ. ನೀನೊಬ್ಬನೇ ಏನು, ಎಲ್ಲರೂ ಬದುಕಲಿ ಎಂಬುದೇ ನನ್ನ ಆಸೆ.
     "ಏನ್ರೀ ಇದು? ನಿಮ್ಮ ಮುಂದಿಟ್ಟಿದ್ದ ಚಹ ಆರಿ ತಣ್ಣಗಾಗಿಹೋಗಿದೆ. ಬಾಯಿ ಬಿಟ್ಟುಕೊಂಡು ಏನು ಯೋಚನೆ ಮಾಡುತ್ತಾ ಕೂತಿದ್ದೀರಿ?" ಎಂಬ ಪತ್ನಿಯ ಮಾತು ಕೇಳಿ ಎಚ್ಚರಗೊಂಡ ಗಣೇಶರು, "ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ, ಈಗ ನೀನು ಚಹ ಬಿಸಿ ಮಾಡಿಕೊಂಡು ತರಬೇಕು" ಎಂದರು. ದುರುಗುಟ್ಟಿ ನೋಡಿದ ಪತ್ನಿಯ ನೋಟವನ್ನು ನಗುತ್ತಾ ಸ್ವೀಕರಿಸಿದ ಗಣೇಶರು ಟಿವಿಯ ರಿಮೋಟಿನ ಗುಂಡಿ ಒತ್ತಿದರು. ಅವರ ದುರದೃಷ್ಟಕ್ಕೆ ಯಾರೋ ಉಪನ್ಯಾಸ ಮಾಡುತ್ತಾ ಹೇಳುತ್ತಿದ್ದರು:
     " . . . ಈ ಬದುಕುವುದು ಅಂದರೆ ಏನು, ಬದುಕಿನ ಗುರಿ ಏನು ಎಂಬುದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಸ್ವರ್ಗ ಅಥವ ಮೋಕ್ಷ ಪ್ರಾಪ್ತಿಗಾಗಿ ಬದುಕುವುದು ಅನ್ನುತ್ತಾರೆ. ಹುಟ್ಟುವುದು ಆಕಸ್ಮಿಕವಾದರೂ ಸಾಯುವುದು ಖಚಿತ ಎನ್ನುವವರೂ ಇದ್ದಾರೆ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಗುರಿಯಾಗಿರಲಿಕ್ಕಿಲ್ಲ. ಹುಟ್ಟುವುದಕ್ಕಿಂತ ಮುಂಚೆ ಮತ್ತು ಸತ್ತ ನಂತರದಲ್ಲಿ ನಾವು ಈಗ ಹೊಂದಿರುವ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಸಾವು ಅಂತಿಮವಲ್ಲ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಬದುಕಿನ ಗುರಿಯಾಗಿದ್ದರೆ ನಾವು ಹುಟ್ಟುತ್ತಲೇ ಇರುತ್ತಿರಲಿಲ್ಲ. ಹುಟ್ಟಿರುವುದರಿಂದ ನಾವು ಗುರಿಯನ್ನು ತಲುಪಿಲ್ಲವೆಂದು ಹೇಳಬಹುದೇ? ಕವಿ ಹೇಳುತ್ತಾನೆ:
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ || . . ."
     ಟಿವಿಯನ್ನು ಆಫ್ ಮಾಡಿದ ಗಣೇಶರು ಮಡದಿ ಮತ್ತೆ ಬಿಸಿ ಮಾಡಿ ತಂದ ಚಹವನ್ನು ಗುಟುಕರಿಸತೊಡಗಿದರು.
-ಕ.ವೆಂ.ನಾಗರಾಜ್.

ಶನಿವಾರ, ಅಕ್ಟೋಬರ್ 20, 2018

ಮೂಢ ನಂಬಿಕೆ


     ಹಲವು ವರ್ಷಗಳ ಹಿಂದಿನ ಸಂಗತಿ. ಹಳೇಬೀಡಿನ ತುಂಬು ಕುಟುಂಬದ ಪ್ರಧಾನ ವ್ಯಕ್ತಿಯಾದ ನಮ್ಮ ತಾಯಿ ಲಕ್ಷ್ಮಮ್ಮನವರು ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಗೆಯೊಂದು ಅವರ ತಲೆಯ ಮೇಲೆ ಕುಳಿತುಹೋಗಿತ್ತು. ತಾಯಿಯವರಿಗೆ ಗಾಬರಿಯಾಗಿ ಒಳಕ್ಕೆ ಓಡಿ ಬಂದವರು ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡರು. ನಮ್ಮ ಊರಿನ ಪ್ರಮುಖ ಪುರೋಹಿತರು ಮತ್ತು ಜ್ಯೋತಿಷಿಗಳ ಬಳಿಗೆ ಹೋಗಿ ವಿಚಾರಿಸಿದರೆ 'ಕಾಗೆ ತಲೆಯ ಮೇಲೆ ಕುಳಿತರೆ ಮರಣದ ಸೂಚನೆ' ಎಂದುಬಿಟ್ಟರು. ಮೊದಲೇ ಆತಂಕಿತರಾಗಿದ್ದ ನಮ್ಮ ತಾಯಿಗೆ ಜ್ವರ ಬಂದಿತು. ಇದಾಗಿ ಏಳೆಂಟು ದಿನಗಳಾಗಿರಬಹುದು. ಹಲ್ಲಿಯೊಂದು ಸಹ ಅವರ ತಲೆಯ ಮೇಲೆ ಬಿದ್ದುಬಿಟ್ಟಿತು. ಮೊದಲೇ ಹೆದರಿದ್ದ ಅವರು ಇನ್ನೂ ಹೆದರಿಬಿಟ್ಟರು. ನಮ್ಮ ಜೋಯಿಸರು ಪಂಚಾಂಗ ಹರಡಿಕೊಂಡು ತಲೆ ಆಡಿಸಿ ಹೇಳಿದರು: "ಇನ್ನು ಆರು ತಿಂಗಳಲ್ಲಿ ಮರಣ". ನಮ್ಮ ತಾಯಿ ಕುಸಿದುಹೋಗಿ ಹಾಸಿಗೆ ಹಿಡಿದುಬಿಟ್ಟರು. ಕೆಲವು ದಿನಗಳಲ್ಲಿ ಹಾಸಿಗೆ ಬಿಟ್ಟು ಏಳಲೂ ಆಗದಷ್ಟು ನಿಶ್ಶಕ್ತಿ ಅವರನ್ನು ಆವರಿಸಿತು. ಅವರಿಗೆ ತಾವು ಸಾಯುವುದು ಖಂಡಿತ ಅನ್ನಿಸಿಬಿಟ್ಟಿತ್ತು. ನಾನು ಬೇಲೂರಿನ ನನ್ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ ಹೇಗೆಲ್ಲಾ ಧೈರ್ಯ ಹೇಳಬೇಕೆಂದು ಹೇಳಿಕೊಟ್ಟು ಮನೆಗೆ ಕರೆದುಕೊಂಡು ಬಂದೆ. ಅವನೂ ಕಚ್ಚೆಪಂಚೆ, ಸಿಲ್ಕ್ ಜುಬ್ಬಾ ಧರಿಸಿ ಢಾಳಾಗಿ ವಿಭೂತಿ ಪಟ್ಟೆ, ಕುಂಕುಮ ಹಚ್ಚಿಕೊಂಡು ಬಂದಿದ್ದ. ಅಮ್ಮನಿಗೆ, "ಇವರು ಪ್ರಸಿದ್ಧ ಜ್ಯೋತಿಷಿ. ನಾಲ್ಕು ವರ್ಷ ಕೇರಳದಲ್ಲಿ ಅಧ್ಯಯನ ಮಾಡಿದ್ದಾರೆ. ಇವರನ್ನೂ ಭವಿಷ್ಯ ಕೇಳೋಣ ಅಂತ ಕರಕೊಂಡು ಬಂದಿದೀನಿ" ಎಂದು ಹೇಳಿ ನನ್ನ ಸ್ನೇಹಿತನಿಗೆ ಮುಂದುವರೆಸುವಂತೆ ಸೂಚನೆ ಕೊಟ್ಟೆ. ಆಗಿನ ಸಂಭಾಷಣೆ:
ಸ್ನೇಹಿತ: ಅಮ್ಮಾ, ಕಾಗೆ ತಲೆಯ ಮೇಲೆ ಕುಳಿತದ್ದು ಎಂದು? ಎಷ್ಟು ಹೊತ್ತಿಗೆ?
ಅಮ್ಮ: ಶನಿವಾರ, ಬೆಳಿಗ್ಗೆ ೮ ಗಂಟೆ ಇರಬಹುದು.
ಸ್ನೇಹಿತ: (ಕಣ್ಣುಮುಚ್ಚಿ ಏನೋ ಮಣಮಣಿಸಿ, ನಂತರ ಕವಡೆಗಳನ್ನು ಹಾಕಿ ಎಣಿಸಿ, ಗುಣಿಸಿದಂತೆ ಮಾಡಿ) ಶನಿವಾರ. ಹೂಂ. ಶನಿದೇವರ ವಾರ. ಶನಿಯ ವಾಹನ ಕಾಕರಾಜ ನಿಮ್ಮ ತಲೆಯ ಮೇಲೆ ಕುಳಿತು ಆಶೀರ್ವಾದ ಮಾಡಿದ್ದಾನೆ. ನಿಮಗೆ ಅಭಯ ನೀಡಿದ್ದಾನೆ. ಸಂತೋಷಪಡಿ.
ಅಮ್ಮ: ಆದರೆ ತಲೆ ಮೇಲೆ ಹಲ್ಲಿ ಬಿದ್ದಿತ್ತಲ್ಲಾ?
ಸ್ನೇಹಿತ: ಆಮೇಲೆ ಏನಾಯಿತು?
ಅಮ್ಮ: ಪರಕೆಯಲ್ಲಿ ಹಲ್ಲಿಗೆ ಹೊಡೆದೆ. ಅದು ಸತ್ತುಹೋಯಿತು. ಹೊರಗೆ ಹಾಕಿದೆ.
ಸ್ನೇಹಿತ: (ಜೋಳಿಗೆಯ ಚೀಲದಿಂದ ಪಂಚಾಂಗ ತೆಗೆದು ನೋಡಿ ಏನೋ ಲೆಕ್ಕಾಚಾರ ಹಾಕಿದಂತೆ ಮಾಡಿ): ಸರಿಯಾಗಿಯೇ ಇದೆ. ಹಲ್ಲಿ ಬಿದ್ದರೆ ಮರಣ. ಹಲ್ಲಿ ತಲೆ ಮೇಲೆ ಬಿತ್ತು. ಸತ್ತು ಹೋಯಿತು. ನಿಮಗೆ ಶನಿದೇವನ ಆಶೀರ್ವಾದ ಗಟ್ಟಿಯಾಗಿದೆ. ನಿಮಗೆ ಪೂರ್ಣ ಆಯಸ್ಸಿದೆ. ನಿಮ್ಮ ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ನಿಮಗೆ ಸಾವಿಲ್ಲ. ತಾಯಿ, ಪುಣ್ಯವಂತರು ನೀವು. ಹೋಗಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿಬನ್ನಿ.
     ನಂತರದಲ್ಲಿ ಖುಷಿಯಿಂದ ಹಾಸಿಗೆಯಿಂದ ಎದ್ದ ಅಮ್ಮ ಕೈಕಾಲು ತೊಳೆದುಕೊಂಡು ದೇವರ ಮುಂದೆ ದೀಪ ಹಚ್ಚಿದ್ದರು. ಗೆಲುವಾಗಿದ್ದರು. ನನ್ನಿಂದಲೇ ಐವತ್ತು ರೂಪಾಯಿ (ಆಗ ಆ ಹಣ ದೊಡ್ಡ ಮೊತ್ತವೇ ಆಗಿತ್ತು.) ದಕ್ಷಿಣೆ ಹಣವನ್ನು ತಾಂಬೂಲದೊಂದಿಗೆ ಅವನಿಗೆ ಕೊಡಿಸಿದ್ದರು. ಅವನನ್ನು ಬಸ್ಸು ಹತ್ತಿಸಿ ಬರಲು ಅವನೊಂದಿಗೆ ಹೋದಾಗ ಅವನು ಹೇಳಿದ್ದು: "ಈ ಸುಳ್ಳು ಜ್ಯೋತಿಷ್ಯ ಹೇಳಿದ್ದು ಎಷ್ಟು ಸರೀನೋ ಗೊತ್ತಿಲ್ಲ. ನಿನಗೋಸ್ಕರ ಬಂದೆ. ಬಂದದ್ದಕ್ಕೂ ಲಾಭ ಅಯಿತು ಬಿಡು". "ಜ್ಯೋತಿಷ್ಯ ಸುಳ್ಳೋ, ನಿಜಾನೋ ನನಗೆ ಮುಖ್ಯ ಅಲ್ಲ. ಅಮ್ಮ ಗೆಲುವಾದಳಲ್ಲ, ಅದು ಮುಖ್ಯ" ಎಂದು ನಾನು ಹೇಳುತ್ತಿದ್ದಾಗ ಬೇಲೂರು ಬಸ್ಸು ಬಂದಿತ್ತು. ಅವನನ್ನು ಕಳಿಸಿ ಮನೆಗೆ ಬಂದರೆ ಅಮ್ಮ ಅದಾಗಲೇ ಹಾಸಿಗೆ ಮಡಿಸಿಟ್ಟಾಗಿತ್ತು. ಕೆಲವೇ ದಿನಗಳಲ್ಲಿ ಮೊದಲಿನಂತೆ ಉತ್ಸಾಹ ಅವರಲ್ಲಿ ಮನೆ ಮಾಡಿತ್ತು. ಈ ಘಟನೆ ನಡೆದ ನಂತರದಲ್ಲೂ ಮುಂದಿನ ೨೫ ವರ್ಷಗಳವರೆಗೆ ನಮ್ಮಮ್ಮ ಬದುಕಿದ್ದರು. 
-ಹೆಚ್.ಎಸ್. ಪುಟ್ಟರಾಜು, ಜಾವಗಲ್.
***
ಮಾಹಿತಿಗೆ: ಇದು ಡಿಸೆಂಬರ್, 2014ರ ಕವಿಕಿರಣ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಪುಟ್ಟರಾಜು ಹೇಳಿದ್ದ ವಿಚಾರವನ್ನು ಲೇಖನವಾಗಿಸಿ ಪ್ರಕಟಿಸಿದೆ.

ಭಾನುವಾರ, ಏಪ್ರಿಲ್ 8, 2018

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ- ಗೌರವ ಸಾಕು, ಗೌರವಧನ ಬೇಡ!


     1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 12-13 ವರ್ಷದ ಬಾಲಕನಾಗಿದ್ದವರಿಗೂ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಮತ್ತು ಪಿಂಚಣಿ ಸಿಗುತ್ತದೆ. ಆ ಸಮಯದಲ್ಲಿ ಮತ್ತಾವುದೋ ಕಾರಣಕ್ಕಾಗಿ ಜೈಲಿನಲ್ಲಿದ್ದವರೂ ಪ್ರಮಾಣ ಪತ್ರ ಪಡೆದು ಸ್ವಾತಂತ್ರ್ಯ ಹೋರಾಟಗಾರರೆನಿಸಿಕೊಂಡ ಬಗ್ಗೆಯೂ ಜನರು ಆಡಿಕೊಂಡದ್ದನ್ನು ಕೇಳಿದ್ದೇನೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಶಿಫಾರಸಿನ ಆಧಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಪಡೆದವರ ಸಂಖ್ಯೆಯೇ ಹೆಚ್ಚು ಎಂಬುದು ವಿಪರ್ಯಾಸ. ಇಂತಹ ಶಿಫಾರಸುಗಳ ಬಲದಿಂದ ಖೊಟ್ಟಿ ಸ್ವಾತಂತ್ರ್ಯ ಹೋರಾಟಗಾರರು ಸವಲತ್ತುಗಳ ಲಾಭ ಪಡೆಯಲು ಅವಕಾಶವಿದೆ, ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಇದನ್ನು ಪ್ರಸ್ತಾಪಿಸುತ್ತಿರುವ ಉದ್ದೇಶವೆಂದರೆ ಈಗ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೂ ಪಿಂಚಣಿ ಕೊಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಬಿಹಾರ, ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡುತ್ತಿದ್ದಾರೆ, ಕರ್ನಾಟಕದಲ್ಲೂ ಕೊಡಬೇಕೆಂದು ಒತ್ತಾಯ ಮಾಡುವ ಪ್ರಯತ್ನಗಳು ಆರಂಭವಾಗಿದೆ. ವೈಯಕ್ತಿಕವಾಗಿ ನನಗೆ ಇಂತಹ ಪ್ರಯತ್ನ ಒಳ್ಳೆಯದಲ್ಲವೆಂದು ಅನ್ನಿಸುತ್ತಿದೆ. ಅದಕ್ಕೆ ಪೂರಕವಾಗಿ ನನ್ನ ವಿಚಾರಗಳನ್ನು ಮಂಡಿಸುತ್ತಿರುವೆ. 
     'ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡಬಾರದೆಂದು ಹೇಳಲು ನೀವು ಯಾರು?' ಎಂಬ ಪ್ರಶ್ನೆಗೆ  ಉತ್ತರ ಕೊಟ್ಟು ಮುಂದುವರೆಸುವೆ. ಸ್ವತಃ ನಾನೂ ಒಬ್ಬ 1975-77ರ ತುರ್ತು ಪರಿಸ್ಥಿತಿಯ ಸಂತ್ರಸ್ತನಾಗಿದ್ದವನು. ಆಗ ನಾನು 23-24ರ ತರುಣ. (ಈಗ ನನಗೆ 67 ವರ್ಷಗಳು.) ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದವು. ಆ ಸಮಯದಲ್ಲಿ ನಿಷೇಧಕ್ಕೆ ಒಳಗಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೆಂಬ ಕಾರಣದಿಂದ ನನ್ನನ್ನು ರಾಷ್ಟ್ರೀಯ ಭದ್ರತಾ ನಿಯಮಗಳ ಅನುಸಾರ ಬಂಧಿಸಿ ಹಾಸನದ ಜೈಲಿಗೆ ಅಟ್ಟಿದ್ದರು. ನೌಕರಿಯಿಂದ ಅಮಾನತ್ತು ಮಾಡಿದ್ದರು. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿದ್ದವನು. ಒಂದೂವರೆ ವರ್ಷಗಳ ಕಾಲ ಸೇವೆಯಿಂದ ಅಮಾನತ್ತಿನಲ್ಲಿ ಇದ್ದವನನ್ನು ವಿಚಾರಣೆಯ ಫಲಿತಾಂಶಕ್ಕೆ ಒಳಪಟ್ಟು ಹಾಸನದಿಂದ ದೂರದ ಗುಲ್ಬರ್ಗ ಜಿಲ್ಲೆಯ ಸೇಡಮ್ ತಾಲ್ಲೂಕಿಗೆ ವರ್ಗಾಯಿಸಿದ್ದರು ಅನ್ನುವ ಬದಲು ಒಗಾಯಿಸಿದ್ದರು ಅನ್ನಬಹುದು. ನನ್ನ ತಂದೆಯವರು ಆಗ ಹಾಸನದ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿದ್ದು, ಅವರು ಕೆಲಸ ಮಾಡುತ್ತಿದ್ದ ನ್ಯಾಯಾಲಯಕ್ಕೇ ನಾನು ವಿಚಾರಣೆಗೆ ಹಾಜರಾಗಬೇಕಾಗಿ ಬರುತ್ತಿತ್ತು. ಅಂತಹ ದಿನಗಳಲ್ಲಿ ತಂದೆಯವರು ಕರ್ತವ್ಯಕ್ಕೆ ರಜೆ ಹಾಕುತ್ತಿದ್ದರು, ನ್ಯಾಯಾಲಯಕ್ಕೆ ಬರುತ್ತಿರಲಿಲ್ಲ. ಇಷ್ಟೇ ಸಾಲದೆಂಬಂತೆ, ಮನೆಯಲ್ಲಿ ನಿಷೇಧಿತ ಸಂಸ್ಥೆಯ ಚಟುವಟಿಕೆಗಳಿಗೆ ಆಸ್ಪದ ಕೊಡುತ್ತಿದ್ದರೆಂದು ಕಾರಣ ನೀಡಿ ತಂದೆಯವರು ಕೆಲಸ ಮಾಡುತ್ತಿದ್ದ ನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪ್ರಸ್ತಾವನೆ ಸಲ್ಲಿಸಿ ನನ್ನ ತಂದೆಯನ್ನೂ ಕೆಲಸದಿಂದ ಕಡ್ಡಾಯ ನಿವೃತ್ತಿಗೊಳಿಸಲು ಶಿಫಾರಸು ಮಾಡಿದ್ದರು. ಆಗ ಶ್ರೀ ಕೋ. ಚೆನ್ನಬಸಪ್ಪನವರು ಜಿಲ್ಲಾ ಜಡ್ಜ್ ಆಗಿದ್ದು ಪ್ರಸ್ತಾವನೆಯನ್ನು ಒಪ್ಪದಿದ್ದುದರಿಂದ ನನ್ನ ತಂದೆಯವರ ನೌಕರಿ ಉಳಿದಿತ್ತು. ಜೈಲಿನ ಗೋಡೆಗೆ ಒರಗಿ ಕುಳಿತು, ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ನನಗೆ ಮುಂದೇನು ಮಾಡಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಿದ್ದೆ. ನನ್ನ ನೌಕರಿ ಮರಳಿ ಸಿಗುವ ಭರವಸೆ ನನಗಿರಲಿಲ್ಲ. ನನಗೆ, ನನ್ನ ಕುಟುಂಬದವರಿಗೆ ಅನಗತ್ಯ ಕಿರುಕುಳ ಕೊಟ್ಟಿದ್ದ ಹಲವಾರು ಜನರನ್ನು ಕೊಂದುಹಾಕುವ ಬಗ್ಗೆಯೂ ರೋಷತಪ್ತ ಮನಸ್ಸು ಚಿಂತಿಸುತ್ತಿತ್ತು. ಯಾರು ಯಾರನ್ನು ಹೇಗೆ ಕೊಲ್ಲಬೇಕೆಂಬ ಬಗ್ಗೆಯೂ ಲೆಕ್ಕಾಚಾರ ಹಾಕುತ್ತಿತ್ತು. ಆದರೆ ರಾ.ಸ್ವ.ಸಂಘದ ಹಿರಿಯರು ಮತ್ತು ಸುಮನಸ್ಕರ ಸಹವಾಸಗಳಿಂದ ಬಂದಿದ್ದ ಸಂಸ್ಕಾರ ನನ್ನನ್ನು ದಾರಿ ತಪ್ಪಲು ಬಿಡಲಿಲ್ಲ. ಇಂತಹ ಸಂಸ್ಕಾರ ಇಲ್ಲದೇ ಇದ್ದಿದ್ದರೆ ನಾನೊಬ್ಬ ಉಗ್ರ ಹಿಂಸಾವಾದಿಯಾಗುತ್ತಿದ್ದುದರಲ್ಲಿ ಸಂದೇಹವಿಲ್ಲ. ನನ್ನ ಮುಂದಿನ ಭವಿಷ್ಯವೇ ಮಸುಕಾಗಿದ್ದ ಸಂದರ್ಭವನ್ನು ಎದುರಿಸಿ ಬಂದಿದ್ದ ನಾನು ಅದಕ್ಕಾಗಿ ಈಗ ಪ್ರತಿಫಲರೂಪವಾಗಿ ಪಿಂಚಣಿಯನ್ನೋ, ಗೌರವಧನವನ್ನೋ ನಿರೀಕ್ಷಿಸಿದರೆ, ಅದೂ 40 ವರ್ಷಗಳ ನಂತರದಲ್ಲಿ, ಅದು ನನಗೆ ನಾನೇ ಮಾಡಿಕೊಳ್ಳುವ ಅವಮಾನವೆಂಬುದು ನನ್ನ ವೈಯಕ್ತಿಕ ಅನಿಸಿಕೆ. ನಾನಂತೂ ಅದನ್ನು ನಿರೀಕ್ಷಿಸುವುದಿಲ್ಲ ಮತ್ತು ಅದಕ್ಕಾಗಿ ಕೋರುವುದೂ ಇಲ್ಲ.
     ನಿಜ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೆಷ್ಟು ಜನರು ಪ್ರಾಣ ಕಳೆದುಕೊಂಡರೋ, ಅದೆಷ್ಟು ಕುಟುಂಬಗಳು ಬೀದಿಗೆ ಬಿದ್ದವೋ, ಅದೆಷ್ಟು ಜನರು ಶಾಶ್ವತವಾಗಿ ಅಂಗವಿಕಲರಾದರೋ ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಅಂತಹವರನ್ನು ಸ್ಮರಿಸುವುದು, ನಿಜಕ್ಕೂ ಆಸರೆ ಅಗತ್ಯವಿರುವವರಿಗೆ ಆಸರೆ ಒದಗಿಸುವುದು ಉತ್ತಮವಾದ ಕಾರ್ಯವೇ. ಅಂತಹವರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ಚಾಚಿದರೆ ಅದು ಮೆಚ್ಚುವ ಕಾರ್ಯ. ನಾನು ಹಾಸನ ಜಿಲ್ಲೆಯನ್ನೇ ಉದಾಹರಣೆಯಾಗಿಟ್ಟುಕೊಂಡು ನನಗೆ ತಿಳಿದ ಮಾಹಿತಿಯನ್ನು ಹೇಳುವುದಾದರೆ, ಆ ಸಂದರ್ಭದಲ್ಲಿ ಯಾವುದೇ ವಿಚಾರಣೆಯಿಲ್ಲದೆ ಬಂಧಿಸಿಡಬಹುದಾಗಿದ್ದ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ (ಮೀಸಾ) ಅನ್ವಯ ಬಂಧಿತರಾಗಿದ್ದವರು 13 ಜನರು. ಅವರಲ್ಲಿ 10 ಜನರು ಈಗಾಗಲೇ ಮೃತರಾಗಿದ್ದಾರೆ ಮತ್ತು ಅವರ ಕುಟುಂಬಗಳು ಆರ್ಥಿಕ ಸುಸ್ಥಿತಿಯಲ್ಲಿವೆ. ಮೀಸಾ ಬಂದಿಯಾಗಿದ್ದ ರಾ.ಸ್ವ.ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಗಳ ಕಾರಣದಿಂದ ತುರ್ತು ಪರಿಸ್ಥಿತಿ ಹಿಂತೆಗೆತವಾದ ಕೆಲವು ವರ್ಷಗಳ ನಂತರದಲ್ಲಿ ಮತಿಭ್ರಮಣೆಗೊಳಗಾಗಿ ಮೃತಿ ಹೊಂದಿದ್ದರು. ಉಳಿದ ಮೂವರೂ ಮೀಸಾ ಬಂಧಿತರಾಗಿದ್ದವರು ಸಹ ಒಳ್ಳೆಯ ಆರ್ಥಿಕ ಸ್ಥಿತಿಯವರಾಗಿದ್ದಾರೆ. ಭಾರತ ರಕ್ಷಣಾ ನಿಯಮಗಳ ಅನುಸಾರ ಬಂಧಿತರಾಗಿದ್ದವರು ಸುಮಾರು 300 ಜನರು. ಅವರಲ್ಲಿಯೂ ಬಹುತೇಕರು ಮೃತರಾಗಿದ್ದಾರೆ ಮತ್ತು ಹಲವರು ಈಗ ಪರಸ್ಥಳಗಳಲ್ಲಿದ್ದು ಎಲ್ಲಿದ್ದಾರೋ ತಿಳಿದಿಲ್ಲ. ಇರುವ ಉಳಿದವರೂ ಸಹ ಪಿಂಚಣಿ ಅವಲಂಬಿಸಿಯೇ ಜೀವನ ಸಾಗಿಸಬೇಕು ಎಂಬ ಸ್ಥಿತಿಯಲ್ಲಿರುವವರು ಬಹುಷಃ ಯಾರೂ ಇಲ್ಲವೆನ್ನಬೇಕು. ಇನ್ನು ಸಾವಿರಾರು ಜನರು ಪ್ರತಿಭಟನೆಯಲ್ಲಿ ತೊಡಗಿದ್ದರೂ, ಜೈಲುಗಳಲ್ಲಿ ಸ್ಥಳಾವಕಾಶವಿಲ್ಲದಿದ್ದರಿಂದ ಪೊಲೀಸರು ಅವರನ್ನು ಹೊಡೆದು, ಬಡಿದು ಹಿಂಸಿಸಿ ಬಿಟ್ಟುಬಿಟ್ಟಿದ್ದರು. ಇನ್ನು ಭೂಗತ ಚಟುವಟಿಕೆಗಳಲ್ಲಿ ತೊಡಗಿ ಚಳುವಳಿಯನ್ನು ಜೀವಂತವಾಗಿರಿಸಿದ್ದವರ ಸಂಖ್ಯೆಯೂ ದೊಡ್ಡದಿದೆ. ಅವರುಗಳಿಗೆ ಗೌರವಧನ ನೀಡಲು ಶಿಫಾರಸು ಪತ್ರಗಳೇ ಆಧಾರವಾಗುತ್ತವೆ. ಹೆಚ್ಚಿನ ರಾ.ಸ್ವ. ಸಂಘದ ಪ್ರಚಾರಕರು, ಕಾರ್ಯಕರ್ತರು ಶಿಫಾರಸಿನ ಗೋಜಿಗೇ ಹೋಗಲಾರರು. ಆಗ ಹೋರಾಟದಿಂದ ದೂರವಿದ್ದ ಹಲವರು ಇಂತಹ ಶಿಫಾರಸಿನ ಲಾಭ ಪಡೆಯುವುದಿಲ್ಲ ಎಂದೂ ಹೇಳಲಾಗದು. ಹೋರಾಟದಲ್ಲಿ ಪಾಲುಗೊಂಡಿದ್ದವರು  ಸ್ವಪ್ರೇರಣೆಯಿಂದ, ಪ್ರಜಾಪ್ರಭುತ್ವದ ಮತ್ತು ದೇಶದ ಹಿತದೃಷ್ಟಿಯಿಂದ ಮಾಡಿದ್ದರೇ ಹೊರತು ಯಾವುದೇ ಫಲಾಪೇಕ್ಷೆಯ ನಿರೀಕ್ಷೆ ಅವರಲ್ಲಿರಲಿಲ್ಲ. 
     ಪಿಂಚಣಿಯೋ, ಗೌರವಧನವೋ ಬರುತ್ತದೆಯೆಂದರೆ, ಬಂದರೆ ಬರಲಿ ಎಂಬ ಮನೋಭಾವದವರೂ ಇರುತ್ತಾರೆ. ತುಂಬಾ ಅನುಕೂಲ ಸ್ಥಿತಿಯಲ್ಲಿರುವ ಒಬ್ಬ ಸ್ನೇಹಿತರು ಹೇಳಿದ್ದೇನೆಂದರೆ, ಒಂದು ಐದು ಸಾವಿರ ಕೊಟ್ಟರೆ ಕೊಡಲಿ ಬಿಡಿ. ನಾವು ತೆಗೆದುಕೊಳ್ಳದೆ ಅದನ್ನು ಬೇರೆ ಯಾವುದೋ ಅಗತ್ಯವಿರುವ ಸಂಸ್ಥೆಗೆ ಅಥವ ಜನರಿಗೆ ಸಿಗುವಂತೆ ಮಾಡಿದರಾಯಿತು! ಹಣದ ಪ್ರಲೋಭನೆಯೇ ಅಂತಹದು. ಯಾರೋ ಕೊಡುವ ಹಣವನ್ನು ಇನ್ನು ಯಾರಿಗೋ ದಾನ ಮಾಡುವ ಬದಲು, ಸಾಧ್ಯವಾದರೆ ನಮ್ಮಲ್ಲಿರುವ ಹಣದಿಂದಲೇ ಸಹಾಯ ಮಾಡೋಣ. ಸರ್ಕಾರದಿಂದ ಪಡೆದು ಏಕೆ ಕೊಡಬೇಕು? ಈಗ ಮಾಡಬಹುದಾದುದೇನೆಂದರೆ, ದೀನಸ್ಥಿತಿಯಲ್ಲಿ ಇರಬಹುದಾದವರನ್ನು ಗುರುತಿಸಿ ಅಂತಹವರಿಗೆ ಮಾತ್ರ ಅವರ ಅಗತ್ಯ ಅನುಸರಿಸಿ ಸಹಾಯ ಸಿಗುವಂತೆ ನೋಡಿಕೊಳ್ಳಬೇಕು, ಅಷ್ಟೆ. ಅಂದು ಹೋರಾಟ ಮಾಡಿದವರೆಲ್ಲರೂ ಈಗ 60 ವರ್ಷಗಳನ್ನು ಮೀರಿದವರೇ ಆಗಿದ್ದಾರೆ. ಅವರಿಗೆ ಗೌರವಧನ ಬೇಡ, ಗೌರವ ಸಾಕು. ಅವರ ವಯಸ್ಸು, ಅನುಭವಗಳನ್ನು ಆಧರಿಸಿ, ಅವರವರ ಶಕ್ತಿ, ಸಾಮರ್ಥ್ಯ ಅನುಸರಿಸಿ ಅವರ ಸೇವೆ, ಮಾರ್ಗದರ್ಶನಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಅದು ನಿಜವಾಗಿ ಅವರುಗಳಿಗೆ ಸಲ್ಲಿಸಬಹುದಾದ ಗೌರವವಾಗುತ್ತದೆ. 
-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 26, 2018

ಒಳ್ಳೆಯ ದಿನಗಳು ಬರಲಿವೆ!


     ಹೌದು, ಒಳ್ಳೆಯ ದಿನಗಳು ಬರಲಿವೆ! ಈ ಮಾತನ್ನು ಯಾವುದೇ ರಾಜಕೀಯ ನಾಯಕರನ್ನು ಸಮರ್ಥಿಸಲು ಬರೆಯುತ್ತಿಲ್ಲ ಅಥವ ಈ ಮಾತಿಗೆ ರಾಜಕೀಯ ಮಹತ್ವವನ್ನೂ ಕೊಡಬೇಕಿಲ್ಲ. ನಾನು ಸಹಜವಾದ ವಿಷಯವನ್ನು ಸಹಜವಾಗಿ ಪ್ರಸ್ತಾಪಿಸುವ ಸಲುವಾಗಿ ಈ ವಾಕ್ಯವನ್ನು ಆರಿಸಿಕೊಂಡಿರುವೆ, ಅಷ್ಟೆ. ಪ್ರತಿಯೊಬ್ಬರೂ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದುಕೊಂಡೇ ಜೀವಿಸುತ್ತಾರೆ ಎಂಬುದು ಸತ್ಯ. ಈಗ ಇರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಬಾಳಬೇಕು ಎಂಬುದೇ ಎಲ್ಲರ ಪ್ರಬಲವಾದ ಇಚ್ಛೆಯಾಗಿರುವುದರಿಂದ, ಈಗ ಇರುವ ಕಷ್ಟದ, ದುಃಖದ ಸ್ಥಿತಿಯನ್ನು ಸಹಿಸಿಕೊಂಡು ಮುಂದುವರೆಯುವುದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯಿಂದ! ಒಳ್ಳೆಯ ದಿನಗಳಿಗಾಗಿ ನಮ್ಮ ಪ್ರಯತ್ನ ಅಚಲವಾಗಿದ್ದರೆ, ಸತತವಾಗಿದ್ದರೆ ಆ ದಿನಗಳು ಬಂದೇ ಬರುತ್ತವೆ. 
      ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ!      ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
     ಒಂದು ಅರ್ಥದಲ್ಲಿ ನೋಡಿದರೆ ನಾವು ಬದುಕಿರುವ, ಉಸಿರಾಡುತ್ತಿರುವ ಪ್ರತಿದಿನವೂ ಒಳ್ಳೆಯ ದಿನವೇ! ಏಕೆಂದರೆ ಮತ್ತಷ್ಟು ಒಳ್ಳೆಯದನ್ನು ನೋಡಲು, ಕಾಣಲು ಪ್ರತಿದಿನವೂ ಅವಕಾಶ ಮಾಡಿಕೊಡುತ್ತದೆ. ಕೆಲವು ದಿನಗಳು ಕೆಟ್ಟ, ಕಷ್ಟದ, ದುಃಖದ ದಿನಗಳೆಂದು ನಮಗೆ ಅನ್ನಿಸಬಹುದು. ಒಳ್ಳೆಯ ದಿನಗಳ, ಸಂತೋಷದ ಕ್ಷಣಗಳ ಉತ್ಕಟ ಅನುಭವವಾಗಬೇಕಾದರೆ ದುಃಖ, ಕಷ್ಟಗಳ ಅನುಭವವೂ ಆಗಬೇಕು. ಬೆಳಿಗ್ಗೆ ಎದ್ದಾಗ ನಮ್ಮ ಭುಜಗಳ ಮೇಲೆ ತಲೆ ಇದ್ದರೆ, ಇಂದು ಶುಭದಿನ, ಶುಭವಾಗಲಿದೆ ಎಂದೇ ದಿನವನ್ನು ಪ್ರಾರಂಭಿಸಿದರೆ ಆ ದಿನ ಶುಭವಾಗಿಯೇ ಇರುತ್ತದೆ. 1975-77ರಲ್ಲಿ ಅಂದಿನ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಾಳ ತುರ್ತು ಪರಿಸ್ಥಿತಿ ಹೇರಿ, ಪ್ರಜಾಫ್ರಭುತ್ವಕ್ಕೆ ಕಳಂಕ ತಂದಿದ್ದ ಸಂದರ್ಭದಲ್ಲಿ ಅದೆಷ್ಟು ಅಮಾಯಕರು ಜೀವ ಕಳೆದುಕೊಂಡರೋ, ಕಷ್ಟ-ನಷ್ಟಗಳನ್ನು ಅನಭವಿಸಿದರೋ ಲೆಕ್ಕವಿಲ್ಲ. ಸ್ವತಃ ನಾನೂ ಹಾಸನದ ಜೈಲಿನಲ್ಲಿ ಭಾರತ ರಕ್ಷಣಾ ಕಾಯದೆಯ ಅಡಿಯಲ್ಲಿ ಬಂಧಿಸಲ್ಪಟ್ಟಿದ್ದೆ. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ನನ್ನ ಮೇಲೆ ಹೂಡಲಾಗಿತ್ತು. ನನ್ನನ್ನು ನೌಕರಿಯಿಂದ ತೆಗೆದಿದ್ದರು. ಆಗ ಜೈಲಿನ ಗೋಡೆಯನ್ನು ಒರಗಿಕೊಂಡು ಅನಿಶ್ಚಿತ ಭವಿಷ್ಯದ ಕುರಿತು ಚಿಂತಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡರೆ ಇಂದಿನ ಪ್ರತಿಯೊಂದು ದಿನವೂ ನನಗೆ ಸಂತೋಷದ ದಿನವಾಗಿ ಕಾಣುತ್ತದೆ. ಅಂದಿನ ಕಷ್ಟದ ದಿನಗಳು ಮುಂದೆ ನನ್ನನ್ನು ಮಾನಸಿಕವಾಗಿ ಮತ್ತಷ್ಟು ಬಲಿಷ್ಠನನ್ನಾಗಿ ಮಾಡಿದವು ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಕೆಟ್ಟ ದಿನಗಳನ್ನು ನಿಭಾಯಿಸಬಲ್ಲವನು ಒಳ್ಳೆಯ ದಿನಗಳನ್ನು ಕಾಣಬಲ್ಲ. ಜೀನ್ ಸೈಮನ್ಸ್ ಎಂಬಾಕೆ ಬರೆಯುತ್ತಾಳೆ, "ನನ್ನ ತಾಯಿಯ ಜೀವನ ನರಕವಾಗಿತ್ತು. ಆಕೆ 14 ವರ್ಷದವಳಾಗಿದ್ದಾಗ ನಾಝಿಗಳ ಯಾತನಾಶಿಬಿರದಲ್ಲಿ ಬಂದಿಯಾಗಿದ್ದಳು. ಈಗ ಜೀವನದ ಬಗ್ಗೆ ಅವಳ ಅನಿಸಿಕೆಯೆಂದರೆ, ಭೂಮಿಯ ಮೇಲಿನ ಪ್ರತಿಯೊಂದು ದಿನವೂ ಶುಭದಿನವೇ!" ಮೃತ್ಯುವಿನ ದರ್ಶನ ಮಾಡಿಬಂದು ಬದುಕುಳಿದವರೆಲ್ಲರ ಅನುಭವವೂ ಸಾಮಾನ್ಯವಾಗಿ ಇದೇ ಆಗಿರುತ್ತದೆ.
     ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾವಾದವೇ ಜೀವನ; ಅಯ್ಯೋ, ಎಲ್ಲವೂ ಮುಗಿಯಿತು ಎನ್ನುವ ನಿರಾಶಾವಾದವೇ ಮರಣ. ಆಶಾವಾದಕ್ಕೆ ದುರ್ಯೋಧನ ಉತ್ತಮ ಉದಾಹರಣೆಯಾಗಿದ್ದಾನೆ. ತಾನೊಬ್ಬನೇ ಹಸ್ತಿನಾಪುರವನ್ನು ಆಳಬೇಕು, ಪಾಂಡವರನ್ನು ಸೋಲಿಸಲೇಬೇಕು ಎಂಬ ಛಲದಿಂದ ಕುರುಕ್ಷೇತ್ರದ ಯುದ್ದದಲ್ಲಿ ತೊಡಗಿದ್ದಾಗ, ಅವನ ಕಣ್ಣಮುಂದೆಯೇ ಅವನ ಸಹೋದರರು ಹತರಾದರು, ದ್ರೋಣ, ಭೀಷ್ಮ, ಕರ್ಣರಂತಹ ಅತಿರಥ, ಮಹಾರಥರೆಲ್ಲರೂ ಧರೆಗುರುಳಿದರು. ಆದರೂ ಅವನಿಗೆ ವಿಶ್ವಾಸವಿತ್ತು, ಶಕುನಿ ಇನ್ನೂ ಇದ್ದಾನೆ, ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತಾನೆ. ಸ್ವತಃ ತಾನು ಸಾಯುವವರೆಗೂ ತಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇಟ್ಟುಕೊಂಡೇ ಸತ್ತವನು ಅವನು. ದುರ್ಯೋಧನನ ಜೀವನ ನಮಗೆ ಆದರ್ಶವಲ್ಲದಿದ್ದರೂ, ಅವನ ಎಡೆಬಿಡದ ಆಶಾವಾದ, ಛಲಗಳು ಅನುಕರಣೀಯವಾಗಿವೆ.
     ಕೇವಲ ಆಸೆ, ಭರವಸೆ, ನಿರೀಕ್ಷೆಗಳೇ ನಮ್ಮ ಒಳ್ಳೆಯ ದಿನಗಳ ನಿರೀಕ್ಷೆಗೆ ಸಾಕಾಗುವುದಿಲ್ಲ. ನಮ್ಮ ಒಳ್ಳೆಯ ದಿನಗಳನ್ನು ಬೇರೆ ಯಾರೋ ತಂದುಕೊಡುತ್ತಾರೆ ಎಂದು ನಿರೀಕ್ಷಿಸುವುದೂ ತರವಲ್ಲ. ನಾವು ಯಾರೋ ನಮಗೆ ಒಳ್ಳೆಯ ದಿನಗಳನ್ನು ತಂದುಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಕೈಕಟ್ಟಿ ಕುಳಿತರೆ ಹಿಂದೆ ಉಳಿಯುವವರು, ಭ್ರಮನಿರಸನಕ್ಕೆ ಪಕ್ಕಾಗುವವರು ನಾವೇನೇ. ನಮ್ಮ ಒಳ್ಳೆಯ ದಿನಗಳಿಗಾಗಿ ನಾವೇ ಶ್ರಮಿಸಬೇಕು. ವಿವೇಕಾನಂದರು ಹೇಳಿದಂತೆ, ನಮ್ಮ ಏಳಿಗೆಯ ಶಿಲ್ಪಿಗಳು ನಾವೇ! ಪರದೇಶದ ಒಬ್ಬ ಯಾತ್ರಿಕ ಒಮ್ಮೆ ಒಬ್ಬ ಸನ್ಯಾಸಿಯನ್ನು ಭೇಟಿ ಮಾಡಿದನಂತೆ. ಒಂದು ಸಣ್ಣ ಗುಡಿಸಲಿನಲ್ಲಿದ್ದ ಆ ಸನ್ಯಾಸಿಯ ಹತ್ತಿರ ಇದ್ದುದು ಒಂದು ಚಾಪೆ ಮತ್ತು ಒಂದು ಕುಡಿಯುವ ನೀರಿನ ಪಾತ್ರೆ ಅಷ್ಟೆ. ಆಶ್ಚರ್ಯಗೊಂಡ ಯಾತ್ರಿಕ ಸನ್ಯಾಸಿಯನ್ನು ಕೇಳಿದನಂತೆ: "ಸ್ವಾಮಿ, ನಿಮ್ಮ ಪೀಠೋಪಕರಣಗಳು ಎಲ್ಲಿ?" ಸನ್ಯಾಸಿಯಿಂದ ಮರುಪ್ರಶ್ನೆ ಬಂದಿತು: "ನಿಮ್ಮ ಪೀಠೋಪಕರಣಗಳು ಎಲ್ಲಿ?" ಯಾತ್ರಿಕ ಹೇಳಿದ, "ಸ್ವಾಮಿ, ನಾನೊಬ್ಬ ಯಾತ್ರಿಕ. ನನ್ನ ಪೀಠೋಪಕರಣಗಳು ನನ್ನ ಊರಿನಲ್ಲಿವೆ". ಸನ್ಯಾಸಿ ಹೇಳಿದನಂತೆ, "ನಾನೂ ಒಬ್ಬ ಯಾತ್ರಿಕ!" ಜೀವನದ ಪಾಠ ಇಲ್ಲಿದೆ. ಜನರು ತಾವು ಶಾಶ್ವತವಾಗಿರುತ್ತೇವೆಂದುಕೊಂಡು ಮೂರ್ಖರಂತೆ ಬಾಳುತ್ತಾರೆ. ಅರ್ಥ ಮಾಡಿಕೊಂಡರೆ ನಮ್ಮ ಜೀವನದ ಪ್ರತಿದಿನವೂ ಶುಭದಿನ ಆಗಿರಲೇಬೇಕು! ಎಲ್ಲರಿಗೂ, ಎಲ್ಲಾ ದಿನಗಳೂ ಶುಭದಿನಗಳಾಗಲೆಂದು ಆಶಿಸೋಣ. ನಿಜ ಅಲ್ಲವೇ? ಒಳ್ಳೆಯ ದಿನಗಳು ಖಂಡಿತಾ ಬರಲಿವೆ! ಸ್ವಾಗತಿಸಲು ಸಿದ್ಧರಾಗೋಣ. 
-ಕ.ವೆಂ.ನಾಗರಾಜ್.

ಭಾನುವಾರ, ಫೆಬ್ರವರಿ 11, 2018

ಎಲೆ ನೋವೇ, ವಿಶ್ರಾಂತಿ ತೆಗೆದುಕೋ! - Dear pain, please take rest!


ಧಾರಾಳಿಗಳಿವರು ಉರಿನುಡಿಗಳಾಡಲು
ನುಡಿಯೊಂದಕೆದುರಾಗಿ ಕಟುನುಡಿಗಳೈದಾರು |
ಸವಿನುಡಿಯ ಮೆಚ್ಚರು ಮೌನವಾಂತುವರು
ನಲ್ನುಡಿಗೆ ನಾಲಿಗೆಯು ಸವೆದೀತೆ ಮೂಢ ||
     ಈ ಜನರೇ ಹೀಗೆ, ಯಾರಾದರೂ ಏನಾದರೂ ಅಂದರೆ ಒಂದು ಬೈಗುಳಕ್ಕೆ ಪ್ರತಿಯಾಗಿ ಹತ್ತಿಪ್ಪತ್ತು ಬೈಗುಳಗಳನ್ನು ಹಿಂತಿರುಗಿಸುತ್ತಾರೆ. ಆದರೆ ಹತ್ತಿಪ್ಪತ್ತು ಒಳ್ಳೆಯ ಮಾತುಗಳಿಗೆ ಪ್ರತಿಯಾಗಿ ಒಂದಾದರೂ ಒಳ್ಳೆಯ ಮಾತು ಆಡಿದರೆ ಅದೇ ಬಹಳ ಹೆಚ್ಚು. ಕೆಟ್ಟ ನುಡಿಗಳನ್ನು ಆಡಲು ತೋರುವ ಧಾರಾಳತನ ಒಳ್ಳೆಯ ಮಾತುಗಳಿಗೆ ಬರುವುದಿಲ್ಲ. ಎಲ್ಲಿ ತಮ್ಮ ಒಳ್ಳೆಯ ಮಾತುಗಳಿಂದ ಇನ್ನೊಬ್ಬರಿಗೆ ಕೋಡು ಬಂದುಬಿಡುತ್ತದೋ ಎಂಬ ಆತಂಕದಿಂದ ಆ ಕೋಡುಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ! ಪುರಂದರದಾಸರು ಈ ಕಾರಣಕ್ಕಾಗಿಯೇ, 'ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥ ನಾಲಿಗೆ' ಎಂದು ಹಾಡಿರುವುದು. ಇನ್ನೊಬ್ಬರಿಗೆ ಅಹಿತವಾಗಿ ಮಾತನಾಡುವುದರಿಂದ, ಅಹಿತ ಬಯಸುವುದರಿಂದ ಅವರಿಗೂ ನೋವು, ಇವರಿಗೂ ನೋವು, ಇಬ್ಬರಿಗೂ ನೋವು! ಇದಕ್ಕೆ ಪರಿಹಾರವಿದೆಯೇ? ಎಲೆ ನೋವೇ, ಸ್ವಲ್ಪ ವಿಶ್ರಾಂತಿ ತೆಗೆದುಕೋ ಎಂದು ಹೇಳಲು ಬರುವುದಿಲ್ಲವೇ?
     'ನೋವು ಅನಿವಾರ್ಯ. ಆದರೆ ನೋವು ಅನುಭವಿಸುವುದು ಅನಿವಾರ್ಯವಲ್ಲ' - ಈ ಸೂತ್ರ ಅನುಸರಿಸಿ ವಿಚಾರ ಮಾಡೋಣ. ದೈಹಿಕವಾಗಿ ಆಗುವ ನೋವು ಕಾಲಾನುಕ್ರಮದಲ್ಲಿ ನಿವಾರಣೆಯಾಗಿತ್ತದೆ. ಆದರೆ ಮಾನಸಿಕವಾಗಿ ಆಗುವ ನೋವು ಬೇಗ ಶಮನವಾಗುವುದಿಲ್ಲ. ಒಬ್ಬೊಬ್ಬರ ಮನಸ್ಥಿತಿ ಅನುಸರಿಸಿ ನೋವಿನ ಪ್ರಮಾಣ ಇರುತ್ತದೆ. ಒಂದೇ ರೀತಿಯ ಆಘಾತ ಹಲವರಿಗೆ ಹಲವು ರೀತಿಯಲ್ಲಿ ಬಾಧಿಸುತ್ತದೆ. ದಪ್ಪ ಚರ್ಮದವರಿಗೆ ಏನೂ ಆಗದಿರಬಹುದು. ಕೆಲವರು ಕೊರಗಬಹುದು, ಕಾಯಿಲೆ ಬೀಳಬಹುದು. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು. 'ಆಗಿದ್ದು ಆಗಿಹೋಯಿತು. ಅನುಭವಿಸಬೇಕು. ಸಮಾಧಾನ ಮಾಡಿಕೋ' ಎಂಬ ಉಪದೇಶಗಳು ನೋವಿನ ಪ್ರಮಾಣ ಕಡಿಮೆ ಮಾಡಲಾರವು. ಸಂತೋಷದ ಸಂದರ್ಭಗಳಲ್ಲೂ ಅದನ್ನು ಅನುಭವಿಸಲಾಗದ ಸ್ಥಿತಿ ಒದಗಿರುತ್ತದೆ. ಇಂತಹ ಸ್ಥಿತಿಯಲ್ಲಿ ನೋವಿಗೆ ವಿಶ್ರಾಂತಿ ನೀಡುವ, ಮನಸ್ಸಿಗೆ ಹಿತವಾಗುವ ರೀತಿಯನ್ನು ಕಂಡುಕೊಳ್ಳುವುದು ಹೇಗೆ? 
೧. ನೋವಿನ ಮೂಲ ತಿಳಿಯುವುದು: 
     ನೋವಿಗೆ ಕಾರಣವಾದ ಸಂಗತಿ ತಿಳಿದುಕೊಳ್ಳಬೇಕು. ಏಕೆ ಇಂತಹ ನೋವಿಗೆ ಒಳಗಾಗಿದ್ದೇವೆ ಎಂಬ ಕುರಿತು ಚಿಂತಿಸಬೇಕು. ಕೆಲವರಿಗೆ ಯಾವ ಕಾರಣಕ್ಕಾಗಿ ನೋವು ಅನುಭವಿಸಬೇಕಾಗಿದೆಯೋ, ಆ ಕಾರಣದಿಂದಾಗಿ ತಾವು ದೂಷಿಸಲ್ಪಡಲು, ಕೆಟ್ಟದಾಗಿ ಕಾಣಲ್ಪಡಲು ಅರ್ಹರೆಂಬ ಭಾವನೆ ಬಂದು ಕೀಳರಿಮೆ ಕಾಡುವುದೂ ಇದೆ. ಇದರಿಂದ ಹೊರಬರಲು ಆಗುವುದೇ ಇಲ್ಲವೆಂಬ ನಿರಾಶೆಯನ್ನೂ ಹೊಂದುವ ಸಾಧ್ಯತೆಯೂ ಇದೆ. ಮೊದಲ ಹೆಜ್ಜೆಯಾಗಿ, ಸಮಸ್ಯೆಯ ಮೂಲಕ್ಕೆ ಹೋಗಿ ಅರ್ಥ ಮಾಡಿಕೊಳ್ಳುವ, ಪರಿಹರಿಸಿಕೊಳ್ಳುವ ಪ್ರಯತ್ನ ಆರಂಭಿಸಬೇಕು. 
೨. ನೋವಿನ ಅಭಿವ್ಯಕ್ತಿ:
     ಯಾರು ನಮ್ಮ ನೋವಿಗೆ ಕಾರಣರಾಗಿದ್ದಾರೋ ಅವರಿಗೆ ನಮ್ಮ ಸ್ಥಿತಿಯನ್ನು, ಮನೋಭಾವವನ್ನು ತಿಳಿಸಬೇಕು. ಅವರು ನಮ್ಮ ಭಾವನೆ ಅರ್ಥ ಮಾಡಿಕೊಳ್ಳುವರೆಂಬ ಭರವಸೆ ಇಲ್ಲದಿದ್ದರೂ ನಾವು ಹೇಳುವುದನ್ನು ಹೇಳಿಕೊಂಡುಬಿಡಬೇಕು. ನಮಗೆ ಏನೆಲ್ಲಾ ಅನ್ನಿಸುತ್ತದೋ ಅದನ್ನು ಒಂದು ಕಾಗದದಲ್ಲಿ ಬರೆದು, ನಂತರ ಅದನ್ನು ಸುಟ್ಟುಹಾಕಿಬಿಡುವುದೂ ಸಮಾಧಾನ ತರಬಹುದು. ಇದು ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಲು ಮನೋಧೈರ್ಯ ನೀಡುತ್ತದೆ. ನೋವಿನ ಪ್ರಮಾಣ ಕಡಿಮೆ ಮಾಡುತ್ತದೆ, ಬಲಿಪಶುವಾದೆ ಎಂಬ ಭಾವನೆಯಿಂದ ಹೊರಬರಲು ಸಹಾಯ ಮಾಡುತ್ತದೆ.
೩. ವರ್ತಮಾನಕ್ಕೆ ಆದ್ಯತೆ ಕೊಡುವುದು:
     ನೋವಿಗೆ ಕಾರಣವಾದ ಹಳೆಯ ಸಂಗತಿಯನ್ನೇ ಕುರಿತು ಚಿಂತಿಸುವುದು ಒಳ್ಳೆಯದಲ್ಲ. ಅದು ಅಂತಹ ಸಂಗತಿಯನ್ನು ಪುನರಾವರ್ತಿಸುವುದಕ್ಕೆ, ವಿರೋಧಿಸುವುದಕ್ಕೆ ಪ್ರಚೋದಿಸುತ್ತದೆ. 'ಏನಾಯಿತು? ಏನು ತಪ್ಪು ಮಾಡಿದೆ? ಏನು ಮಾಡಬಹುದಿತ್ತು?' ಎಂದೆಲ್ಲಾ ಯೋಚಿಸುವಂತೆ ಮಾಡುತ್ತದೆ. ಇದು ನಮ್ಮನ್ನು ನಾವೇ ಹಿಂಸಿಸಿಕೊಳ್ಳುವ ಪರಿ. ನಾವು ಏನು ಮಾಡಬಹುದಿತ್ತೋ ಅದನ್ನು ಈಗ ಮಾಡಲು ಬರುವುದಿಲ್ಲ. ಅದರ ಬದಲು, ಯಾವ ಕಾರಣದಿಂದ ಆ ಪರಿಸ್ಥಿತಿ ಬಂದಿದೆಯೋ ಅದನ್ನು ನಿಭಾಯಿಸುವ ಬಗ್ಗೆ ಗಮನ ಕೊಡಬೇಕು. ಕಷ್ಟವೆಂದಾದರೆ ಆಪ್ತ ಸಮಾಲೋಚಕರ ನೆರವು ಪಡೆಯಬೇಕು.
೪. ಸಮರ್ಥಿಸಿಕೊಳ್ಳದಿರುವುದು:
     'ನಿನ್ನದೇನೂ ತಪ್ಪಿಲ್ಲ, ನಿನಗೆ ಈ ಸ್ಥಿತಿ ಬರಬಾರದಿತ್ತು, ಇದಕ್ಕೆ ನೀನು ಅರ್ಹನಲ್ಲ' ಎಂಬ ಸಮಾಧಾನದ ಮಾತುಗಳನ್ನು ಕೇಳುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಇದು ಹಳೆಯ ನಿಲುವಿಗೇ ಅಂಟಿಕೊಳ್ಳುವಂತೆ ಮಾಡುತ್ತದೆ. ಸಮರ್ಥಿಸಿಕೊಳ್ಳಲು ಕಾರಣಗಳನ್ನು, ಕತೆಗಳನ್ನು ಹೇಳುವುದೂ ಸರಿಯಲ್ಲ. ದೂರಿಗೆ ಪ್ರತಿಯಾಗಿ ದೂರುವುದೂ ತರವಲ್ಲ. ಪರಿಸ್ಥಿತಿಯನ್ನು ಉತ್ತಮಗೊಳಿಸಲು ಏನು ಮಾಡಬಹುದೋ ಆ ಬಗ್ಗೆ ಮಾತ್ರ ಗಮನ ಕೊಡಬೇಕು. ನಾವು ಚೆನ್ನಾಗಿರಲು ಬೇರೆಯವರ ಸಮರ್ಥನೆ ಬೇಕಿಲ್ಲ, ನಾವೂ ನಮ್ಮನ್ನು ಸಮರ್ಥಿಸಿಕೊಳ್ಳಬೇಕಿಲ್ಲ.
೫. ಕ್ಷಮಿಸಿಕೊಳ್ಳೋಣ:
     ನಾವು ಏನೂ ತಪ್ಪು ಮಾಡದಿರಬಹುದು, ಅಥವ ತಪ್ಪೇ ಮಾಡಿರಬಹುದು. ಅದಕ್ಕಾಗಿ ಕೊರಗುತ್ತಾ ಕುಳಿತರೆ ಪ್ರಯೋಜನವಿಲ್ಲ. ಇಂದಿನ ದಿನವನ್ನು ಹಳೆಯ ನೆನಪುಗಳ ಭಾರವನ್ನು ಹೊತ್ತು ಕಳೆಯುವುದೇಕೆ? ತಪ್ಪು ಮಾಡಿರಲಿ, ಮಾಡದಿರಲಿ ನಮ್ಮನ್ನು ನಾವು ಕ್ಷಮಿಸಿಕೊಂಡು ಮುಂದಿನ ದಿನಗಳನ್ನಾದರೂ ಸಹನೀಯವಾಗುವಂತೆ, ಮತ್ತೆ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದರಲ್ಲಿ ಜಾಣತನವಿದೆ.
೬. ಬಲಿಪಶುವೆಂಬ ಭಾವ ಸಲ್ಲದು, ದೂಷಿಸಬಾರದು:
      ನಾವು ಬಲಿಪಶುವಾಗಿರಬಹುದು. ಇನ್ನೊಬ್ಬರು ಕೇಡು ಬಗೆದಿರಬಹುದು. ಇಂದಿನ ಸ್ಥಿತಿಗೆ ನಮ್ಮ ತಪ್ಪು ಕಾರಣವಾಗಿರದಿರಬಹುದು. ಇದಕ್ಕಾಗಿ ಇನ್ನೊಬ್ಬರನ್ನು ದೂಷಿಸಿದರೆ ಪರಿಸ್ಥಿತಿ ಸರಿಯಾಗದು. ಅದು ನಮ್ಮನ್ನು ಹಿಂದಿನ ಸ್ಥಿತಿಯಲ್ಲಿಯೇ ಉಳಿಸುತ್ತದೆ. ನಮ್ಮ ತಪ್ಪು ಇಲ್ಲದಿದ್ದರೂ, ನಮ್ಮ ಮನೋಭಾವಕ್ಕೆ ಹೊಣೆಗಾರರು ನಾವೇ ಆಗಿರುತ್ತೇವೆ. ಇಂತಹ ಪರಿಸ್ಥಿತಿಗೆ ನಮ್ಮ ಮನೋಭಾವವೂ ಕಾರಣವೆಂಬುದನ್ನು ಮರೆಯಬಾರದು. 
೭. ನೋವು ನಮ್ಮ ಗುರುತಾಗದಿರಲಿ:
      ಹಳೆಯ ಘಟನೆಗಳು, ಸಂಗತಿಗಳು ನಮ್ಮ ಗುರುತಾಗಿ ಉಳಿಯದಿರಲಿ. ಅದು ಸಂಬಂಧಗಳ ಮೇಲೆ ಪರಿಣಾಮ ಬೀರುವಂತಾಗಬಾರದು. ಹಳೆಯ ಕಹಿ ಸಂಗತಿಗಳ ತಳಪಾಯದ ಮೇಲೆ ಇಂದಿನ ಕಟ್ಟಡ ನಿರ್ಮಿಸಲು ಹೋಗಬಾರದು. ಹಳೆಯ ಸಂಗತಿಗಳ ಬಗ್ಗೆ ಒಂದು ನಿರ್ಧಾರ ತಳೆದು ಮುಂದುವರೆಯುವುದು ಸೂಕ್ತ. ತನ್ನಿಂದ ತಾನೇ ಸರಿಯಾಗಲಿ ಎಂಬ ನಿರೀಕ್ಷೆ ಪರಿಸ್ಥಿತಿಯನ್ನು ಯಥಾಸ್ಥಿತಿಯಲ್ಲಿ ಉಳಿಸುತ್ತದೆ. ಆಪ್ತ ಸಮಾಲೋಚನೆ ಖಂಡಿತವಾಗಿ ನೆರವಿಗೆ ಬರುತ್ತದೆ. ಬಹಳ ಸಮಯದಿಂದ ಮುಂದುವರೆದುಕೊಂಡು ಬಂದಿರುವ ಕಹಿ ಗುರುತನ್ನು ಅಳಿಸುವುದು ಸುಲಭವಲ್ಲ. ಕಹಿ ಘಟನೆ ಸಂಭವಿಸುವ ಮುನ್ನ ನಾವು ಹೇಗಿದ್ದೆವು, ನಂತರ ಹೇಗಿದ್ದೇವೆ ಎಂಬುದನ್ನು ಚಿಂತಿಸಬೇಕು. ಘಟನೆಗಿಂತ ಮುಂಚೆ ಇದ್ದಂತೆ ಈಗಲೂ ಇರುವ ಸಾಧ್ಯತೆ ಮತ್ತು ಅಗತ್ಯತೆ ಬಗ್ಗೆ ಗಮನ ಹರಿಸಬೇಕು. ನಮ್ಮ ಬಗ್ಗೆ ಇತರರು ಏನು ಭಾವಿಸುತ್ತಾರೆ ಎಂಬ ಬಗ್ಗೆ ಅರಿವು ಹೊಂದಬೇಕು. ಇದು ನಾವು ಏನಾಗಬೇಕು, ಏನಾಗಿರಬಾರದು ಎಂಬ ಬಗ್ಗೆ ತಿಳಿಹೇಳುತ್ತದೆ. ನಮ್ಮ ಮನೋಭಾವ ಇಲ್ಲಿಯೂ ಮುಖ್ಯವಾಗುತ್ತದೆ.
೮. ಸಂತೋಷ ನೀಡುವ ಸಂಗತಿಗಳ ಬಗ್ಗೆ ಗಮನ ಕೊಡೋಣ:
     ನೋವಿನ ಕುರಿತೇ ಯೋಚಿಸುವುದನ್ನು ನಿಲ್ಲಿಸೋಣ. ಈ ಕ್ಷಣಕ್ಕೆ ಯಾವುದು ಸಂತೋಷ ಕೊಡುತ್ತದೋ ಅದನ್ನು ಅನುಭವಿಸಬೇಕು. ತಂಗಾಳಿಯಲ್ಲಿ ಉದ್ಯಾನವನದಲ್ಲಿ ಕುಳಿತುಕೊಳ್ಳುವುದು ಹಿತವೆನಿಸಬಹುದು, ಹಿತವಾದವರನ್ನು ಮಾತನಾಡಿಸುವುದು, ಪುಟ್ಟ ಮಕ್ಕಳೊಡನೆ ಸಮಯ ಕಳೆಯುವುದು, ಸತ್ಸಂಗಗಳಲ್ಲಿ ಭಾಗಿಯಾಗುವುದು, ಇತ್ಯಾದಿಗಳಲ್ಲಿ ಸಿಗುವ ಸಂತೋಷ ಅನುಭವಿಸಬೇಕು. ಈಗಿನ ಸಣ್ಣ ಸಂತೋಷದ ಕ್ಷಣಗಳೇ ಮುಂದಿನ ನಮ್ಮ ಗುರಿಯನ್ನು ಕಂಡುಕೊಳ್ಳಲು ಸಹಾಯ ಮಾಡಬಹುದು. 
೯. ಇತರರೊಂದಿಗೆ ಸಮಯ ಹಂಚಿಕೊಳ್ಳೋಣ:
     ನೋವಿನ ಭಾರದಿಂದಾಗಿ ಜನರೊಡನೆ ಬೆರೆಯದೆ ಒಂಟಿಯಾಗಿರುವುದು ತರವಲ್ಲ. ಅದು ನಮ್ಮ ದೌರ್ಬಲ್ಯವನ್ನು ತೋರಿಸಿದಂತಾಗುತ್ತದೆ. ನಾವು ಯಾವಾಗಲೂ ನೋವಿನ ಭಾರವನ್ನು ಹೊತ್ತೇ ತಿರುಗಾಡಬೇಕಿಲ್ಲ. ನಮ್ಮ ಹಿತ ಬಯಸುವವರೊಡನೆ ಸಮಯ ಕಳೆಯಬೇಕು. ಅವರನ್ನು ಆರಿಸಿಕೊಳ್ಳುವಾಗಲೂ ಎಚ್ಚರಿಕೆಯಿರಬೇಕು. ಅನುಕಂಪ ತೋರುವ ನೆಪದಲ್ಲಿ ಬಿರುಕುಗಳನ್ನು ಹೆಚ್ಚಿಸುವವರನ್ನು ಹತ್ತಿರ ಸೇರಿಸಬಾರದು. ನೋವಿನ ಕತೆಗಳನ್ನು ದೂರವಿರಿಸಿರಬೇಕು. ಅವರುಗಳಲ್ಲದೆ ಇನ್ನಿತರರ ಜೊತೆಗೂ ಒಟ್ಟಿಗೆ ಊಟ ಮಾಡುವ, ಸಿನೆಮಾಗೆ, ಶಾಪಿಂಗಿಗೆ ಹೋಗುವ ಸಂದರ್ಭಗಳನ್ನು ಬಳಸಿಕೊಂಡರೆ, ನೋವಿನ ಭಾರ ಕಡಿಮೆಯಾಗುತ್ತಾ ಹೋಗುತ್ತದೆ. ಸಣ್ಣ ಪುಟ್ಟ ಸಂತೋಷದ, ಶಾಂತಿಯ ಕ್ಷಣಗಳನ್ನು ನಮ್ಮದಾಗಿಸಿಕೊಳ್ಳುತ್ತಾ ಹೋದರೆ ಹಳೆಯ ನೋವು ಮರೆಯುತ್ತಾಹೋಗುತ್ತದೆ.
೧೦. ಪರಿಹಾರ ಕಂಡುಕೊಳ್ಳಬೇಕಾದವರು ನಾವೇ!
      ಎಲ್ಲಾ ಸಮಸ್ಯೆಗಳಿಗೂ ಒಂದೇ ರೀತಿಯ ಪರಿಹಾರ ಇರುತ್ತದೆ ಎಂದೇನೂ ಇಲ್ಲ. ಆದರೆ ಪರಿಹಾರ ಕಂಡುಕೊಳ್ಳಬೇಕಾದವರು ನಾವೇ ಆಗಿರುತ್ತೇವೆ. ಪರಿಹಾರ ಬೇಕೇ, ಬೇಡವೇ ಎಂದು ನಿರ್ಧರಿಸಬೇಕಾದವರೂ ನಾವೇ! ಅದಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾಗಬೇಕಾದವರೂ ನಾವೇನೇ! ಒಟ್ಟಾರೆಯಾಗಿ ಇಷ್ಟು ಮಾತ್ರ ಸತ್ಯ, ನೋವುಗಳು ಸಾಮಾನ್ಯವಾಗಿ ಅನಿವಾರ್ಯ, ಆದರೆ ನೋವನ್ನು ಅನುಭವಿಸುವುದು ಮಾತ್ರ ಅನಿವಾರ್ಯವಲ್ಲ. 
-ಕ.ವೆಂ. ನಾಗರಾಜ್.

ಸೋಮವಾರ, ಜನವರಿ 29, 2018

ಕನ್ನಡ ಉಳಿಯಲಿ, ಬೆಳಗಲಿ! - Kannada remains, glows!


     ಬೆಂಗಳೂರಿನ ಬಡಾವಣೆಯೊಂದರಲ್ಲಿ "ತಮಿಳು ಭಾಷಿಕರು ಹಾಕಿರುವ ತಮಿಳು ಫ್ಲೆಕ್ಸ್ ಅನ್ನು ಕಿತ್ತುಹಾಕಲು ಕನ್ನಡ ಹೋರಾಟಗಾರರೆಲ್ಲಾ ಇಂತಹ ಸ್ಥಳದಲ್ಲಿ ಸೇರಿ" ಎಂಬ ಒಕ್ಕಣೆ ಫೇಸ್ ಬುಕ್ಕಿನಲ್ಲಿ ಪ್ರಚುರವಾಗಿತ್ತು. ಸನ್ನಿಲಿಯೋನ್ ಕಾರ್ಯಕ್ರಮ ನಡೆಸಲು ಅವಕಾಶ ಕೊಡುವುದಕ್ಕೆ 30 ಲಕ್ಷ ರೂ. ಕೇಳಿದ್ದ ಕನ್ನಡಪರ ಸಂಘಟನೆಯೊಂದರ ಪದಾಧಿಕಾರಿಯ ವಿಚಾರ ಹೆಚ್ಚು ಪ್ರಚಾರ ಮತ್ತು ಟೀಕೆಗೆ ಒಳಗಾಗಿದ್ದ ಸಂದರ್ಭದಲ್ಲೇ ಈ ಒಕ್ಕಣೆ ಪ್ರಕಟಗೊಂಡಿದ್ದು, ಬಹುಷಃ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಇದ್ದಿರಬೇಕು. ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ಖಂಡಿಸಿದ್ದ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣವೂ ಆಯಿತು. ಗೋವಾದ ಮಂತ್ರಿಯೊಬ್ಬರು ಕನ್ನಡಿಗರನ್ನು ತುಚ್ಚವಾಗಿ ಹೀಯಾಳಿಸಿದ್ದರು. ಹಿಂದಿ ಫಲಕಗಳ ವಿರುದ್ಧ ಆಗಾಗ್ಗೆ ಸಮೂಹ ಸನ್ನಿಯ ವಾತಾವರಣ ಮೂಡಿ ಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ರಮವೂ ಆಗುತ್ತಿರುತ್ತದೆ. ಹಿಂದೊಮ್ಮೆ ಮುಂಬಯಿಯಲ್ಲಿ ಕನ್ನಡಿಗರನ್ನು ಅಲ್ಲಿಂದ ಹೊರಹಾಕುವ ಚಳುವಳಿ ನಡೆದು ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಕಾವೇರಿ ವಿವಾದ ಭುಗಿಲೆದ್ದಾಗಲೆಲ್ಲಾ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಕನ್ನಡದ ಹೆಸರಿನಲ್ಲಿ ಚಂದಾ ವಸೂಲು ಮಾಡುವ ಸಂಘ-ಸಂಸ್ಥೆಗಳಿಗೆ ಕರುನಾಡಿನಲ್ಲಿ ಬರವಿಲ್ಲ. ಹಣಬಲವಿರುವ, ರಾಜಕೀಯ ಕೃಪಾಶ್ರಯಗಳಿರುವ ಅಂತಹ ಗುಂಪುಗಳವರು ಸಾಕಿಕೊಂಡಿರುವ ಗೂಂಡಾಪಡೆಗಳ ಭಯದಿಂದಾಗಿ ಸಾಮಾನ್ಯರು ಅವರ ವಿರುದ್ಧ ಮಾತನಾಡುವುದಿಲ್ಲ. ಆದರೆ ಈ ಎಲ್ಲಾ ಪ್ರಸಂಗಗಳಲ್ಲಿ ಕನ್ನಡ ಭಾಷೆಗೆ ಆದ ಅನುಕೂಲವೆಷ್ಟು ಎಂದು ನೋಡಿದರೆ ಉತ್ತರ ಸೊನ್ನೆಯೇ ಆಗಿದೆ. ಕನ್ನಡ ಸಾಹಿತ್ಯದ, ವ್ಯಾಕರಣದ ಗಂಧ-ಗಾಳಿ ಇಲ್ಲದಿದ್ದವರೂ ಕನ್ನಡದ ಹೋರಾಟಗಾರರಾಗಿದ್ದಾರೆ ಎಂಬುದು ವಿಪರ್ಯಾಸ.
     ಕನ್ನಡ ಭಾಷೆಯ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಅದನ್ನು ಉಳಿಸುವ, ಬೆಳೆಸುವ ಬಗ್ಗೆ ಚಿಂತಿಸಬೇಕು. ಅದನ್ನು ಬಿಟ್ಟು ಬೇರೆ ಭಾಷೆಗಳನ್ನು ದ್ವೇಷಿಸಿದರೆ ಕನ್ನಡಕ್ಕೆ ಆಗುವ ಉಪಕಾರವೇನು? ಇಂತಹ ದ್ವೇಷದಿಂದ ಇತರ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ತೊಂದರೆಯಾಗುವುದೇ ಹೊರತು ಮತ್ತೇನೂ ಆಗದು. ಅಮೆರಿಕಾ, ಬ್ರಿಟನ್, ದುಬಾಯಿ, ಆಸ್ಟ್ರೇಲಿಯ ಮುಂತಾದ ಪರದೇಶಗಳಲ್ಲಿ, ಭಾರತದ ಇತರ ರಾಜ್ಯಗಳಲ್ಲಿ ಕನ್ನಡದ ಅಭಿಮಾನಿಗಳು ಕನ್ನಡದ ಬಗ್ಗೆ ಕಾಳಜಿ ವಹಿಸಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ, ಅಂತಹ ಕಾರ್ಯಕ್ರಮಗಳಲ್ಲಿ ಕನ್ನಡದ ದಿಗ್ಗಜರು ಭಾಗವಹಿಸುವ ಬಗ್ಗೆ ನಮಗೆ ಹೆಮ್ಮೆ ಆಗುತ್ತದೆಯಲ್ಲವೇ? ಅದೇ ರೀತಿ ಇತರ ಭಾಷಿಕರು ಅವರವರ ಭಾಷೆಗಳ ಬಗ್ಗೆ ಹೆಮ್ಮೆ ಹೊಂದಿರುತ್ತಾರೆ. ಈ ಮೂಲ ಅಂಶವನ್ನು ಗಮನದಲ್ಲಿರಿಸಿ ಕನ್ನಡಿಗರು ಕನ್ನಡವನ್ನು ಮೆರೆಸುವ ಬಗ್ಗೆ ಒತ್ತು ಕೊಡಬೇಕಿದೆ. ಕನ್ನಡದ ಬಗ್ಗೆ ಕನ್ನಡದವರೇ ಅಸಡ್ಡೆ ಮಾಡಿ, ಇತರ ಭಾಷಿಕರು ಕನ್ನಡವನ್ನು ಬಳಸಲು ಒತ್ತಾಯಿಸುವುದು ಅರ್ಥಹೀನ. ಕರುನಾಡಿನ ರಾಜಧಾನಿ ಬೆಂಗಳೂರಿನ ಕನ್ನಡದಲ್ಲಿ ಕನ್ನಡವನ್ನು ಹುಡುಕಬೇಕು. ಅಲ್ಲಿ ಕಂಗ್ಲಿಷಿನದೆ ರಾಜ್ಯಭಾರ. ಅಷ್ಟೇ ಅಲ್ಲ, ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಉರ್ದು ಇತ್ಯಾದಿ ಹಲವಾರು ಭಾಷೆಗಳ ಕಲಸು ಮೇಲೋಗರ. ಕನ್ನಡಿಗರು ಸಕಲ ಭಾಷಾಪ್ರವೀಣರು. ಅವರು ತಮಿಳರೊಂದಿಗೆ ತಮಿಳಿನಲ್ಲಿ, ಹಿಂದಿಯವರೊಂದಿಗೆ ಹಿಂದಿಯಲ್ಲಿ, ಮುಸ್ಲಿಮರೊಂದಿಗೆ ಉರ್ದುವಿನಲ್ಲಿ, ತಮ್ಮ ತಮ್ಮಲ್ಲೇ ಆದರೆ ಶೇ. 70ರಷ್ಟು ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾರೆ. ಮಕ್ಕಳೆಲ್ಲರನ್ನೂ ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗೆ ಕಳಿಸುತ್ತಾರೆ, ಮನೆಯಲ್ಲಿಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲೇ ಬರದಿದ್ದರೂ ಮಾತನಾಡುತ್ತಾರೆ. ಕರ್ನಾಟಕ ಸಂಗೀತವನ್ನೂ ಇಂಗ್ಲಿಷ್ ಲಿಪಿಯ ಸಾಹಿತ್ಯದಲ್ಲಿ ಕಲಿಸುವ ಸಂಗೀತ ವಿದ್ವಾಂಸರುಗಳು ಬೆಂಗಳೂರಿನಲ್ಲಿದ್ದಾರೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುತ್ತಾರೆ. ಇನ್ನು ಕನ್ನಡ ಉಳಿಯಬೇಕೆಂದರೆ ಹೇಗೆ?
     ಕನ್ನಡ ನಮಗೆ ಹೇಗೆ ಮಾತೃಭಾಷೆಯೋ, ತಮಿಳರಿಗೆ ತಮಿಳು, ಆಂಧ್ರದವರಿಗೆ ತೆಲುಗು, ಕೇರಳಿಗರಿಗೆ ಮಲಯಾಳಿ, ಮಹಾರಾಷ್ಟ್ರಿಗರಿಗೆ ಮರಾಠಿ, ಉತ್ತರದ ರಾಜ್ಯಗಳವರಿಗೆ ಹಿಂದಿ, ಬಂಗಾಳಿ, ಬಿಹಾರಿ ಇತ್ಯಾದಿಗಳು ಮಾತೃಭಾಷೆಗಳಾಗಿವೆ. ಅವರವರ ಮಾತೃಭಾಷೆಗಳನ್ನು ಗೌರವಿಸುವುದು ಆಯಾ ಭಾಷಿಕರ ಕರ್ತವ್ಯ. ನಮ್ಮ ತಾಯಿ ಬಡವಾಗಿದ್ದಾಳೆ ಎಂದು ಇತರರ ಶ್ರೀಮಂತ ತಾಯಂದಿರನ್ನು ದ್ವೇಷಿಸಿದರೆ ನಮ್ಮ ತಾಯಿಯ ಬಡತನ ಹೋಗುವುದೇ? ಭಾರತದ ಸೋದರ ಭಾಷೆಗಳನ್ನು ನಾವೂ ಗೌರವಿಸುವುದು ಅಗತ್ಯ. ಹಾಗೆಯೇ ನಮ್ಮ ಮಾತೃಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವುದೂ ನಮ್ಮ ಕರ್ತವ್ಯ. ನಮ್ಮ ತಾಯಿಭಾಷೆಯನ್ನು ಶ್ರೀಮಂತಗೊಳಿಸಲು ಏನು ಮಾಡಬೇಕೋ ಅದನ್ನು ಮಾಡದೆ, ಕನ್ನಡ, ಕನ್ನಡ ಎಂದು ಬೀದಿಯಲ್ಲಿ ಬೊಬ್ಬೆ ಹೊಡೆದರೆ ಕನ್ನಡ ಉದ್ಧಾರವಾಗುವುದಿಲ್ಲ. ಕನ್ನಡವನ್ನು ವ್ಯವಹಾರಗಳಲ್ಲಿ ಉಳಿಸಬೇಕು, ಬಳಸಬೇಕು. ಹಾಗಾದಾಗ ಮಾತ್ರ ಕನ್ನಡ ಉಳಿದೀತು. ರಾಜ್ಯ ಸರ್ಕಾರ ಈ ದಿಸೆಯಲ್ಲಿ ವಿಫಲವಾಗಿದೆಯೆಂದರೆ ಕಠಿಣವಾದ ಮಾತಾದರೂ ಸತ್ಯವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳಿಗೆ ಉತ್ತೇಜನ ಏನೇನೂ ಸಾಲದು. ಕನ್ನಡದ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಡುತ್ತಿವೆ. ಖಾಸಗಿ ಶಾಲೆಗಳಲ್ಲಂತೂ ಕನ್ನಡಕ್ಕೆ ಸ್ಥಾನವೇ ಇಲ್ಲ. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಇತ್ಯಾದಿಗಳು ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಾಗಿದ್ದು, ಸರ್ಕಾರದ ಅನುದಾನ ಅವಲಂಬಿಸಿ ಆಡಳಿತದಲ್ಲಿರುವ ರಾಜಕಾರಣಿಗಳ ಹಸ್ತಕ್ಷೇಪಕ್ಕೆ, ಮುಲಾಜಿಗೆ ಒಳಗಾಗಿವೆ. ವರ್ಷಕ್ಕೊಮ್ಮೆ ಸಮ್ಮೇಳನಗಳು, ಕೆಲವು ಔಪಚಾರಿಕ ನಿರ್ಣಯಗಳನ್ನು ಅಂಗೀಕರಿಸಿದರೆ ಅವುಗಳ ಕೆಲಸ ಮುಗಿಯಿತು. ಅವು ಜಾರಿಯಾಗುತ್ತವೆಯೇ ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಲಾಬಿ ಮಾಡುವವರಿಗೆ, ಆಡಳಿತ ಪಕ್ಷದವರನ್ನು ಓಲೈಸುವವರಿಗೆ ಪ್ರಶಸ್ತಿ, ಸನ್ಮಾನಗಳು ಸಿಗುತ್ತವೆ ಎಂಬ ದೊಡ್ಡ ಆಪಾದನೆಯೇ ಇದೆ. ಇನ್ನು ಕನ್ನಡ ಮಾಧ್ಯಮದಲ್ಲಿ ಓದಿದರೆ ಭವಿಷ್ಯವಿಲ್ಲ ಎಂಬ ವಾತಾವರಣಕ್ಕೆ ಪೂರಕವಾಗಿ ಸರ್ಕಾರ ವರ್ತಿಸುತ್ತಿರುವದಕ್ಕೆ ಮುಖ್ಯ ಕಾರಣವೆಂದರೆ ಶಿಕ್ಷಣ ಕ್ಷೇತ್ರ ಬಹುತೇಕ ರಾಜಕಾರಣಿಗಳ ಹಿಡಿತದಲ್ಲಿಯೇ ಇರುವುದು! ಕನ್ನಡ ಮೂಲೆಪಾಲಾಗದೆ ಇನ್ನೇನಾಗುತ್ತದೆ? ರಾಜ್ಯದಲ್ಲಿಯೇ ಕನ್ನಡಕ್ಕೆ ಆದ್ಯತೆ, ಮಹತ್ವ ಕೊಡದವರು ವಿಶ್ವ ಕನ್ನಡ ಸಮ್ಮೇಳನ ಮಾಡುತ್ತಾರೆ.
     ಕನ್ನಡಕ್ಕೆ ನಿಜವಾಗಿಯೂ ಮಹತ್ವ ಸಿಗಬೇಕೆಂದರೆ, ಕನ್ನಡ ಉಳಿಯಬೇಕೆಂಬ ನೈಜ ಕಳಕಳಿ ಇದ್ದರೆ ಕನ್ನಡದಲ್ಲಿ ಶಿಕ್ಷಣ ಪಡೆದವರಿಗೆ ರಾಜ್ಯದಲ್ಲಿ ಪ್ರಥಮ ಆದ್ಯತೆ ನೀಡಬೇಕು, ಕನ್ನಡಿಗರಿಗೇ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕು, ಕನ್ನಡ ಮಾಧ್ಯಮ ಶಾಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು, ಹೊಸ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಿಯಂತ್ರಿಸಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಗುಣಮಟ್ಟ ಕನ್ನಡ ಶಾಲೆಗಳಲ್ಲೂ ಕಾಯ್ದುಕೊಳ್ಳಬೇಕು. ಕನ್ನಡದ ಕಟ್ಟಾಳುಗಳು, ಹೋರಾಟಗಾರರು ತಮ್ಮ ಹೋರಾಟವನ್ನು ಯಾವುದೋ ಸಿನೆಮಾ ಪ್ರದರ್ಶನ, ಫ್ಲೆಕ್ಸ್ ತೆಗೆಸುವುದು, ಯಾರೋ ಏನೋ ಮಾತನಾಡಿದರೆಂದು ಪ್ರತಿಭಟನೆ ಮಾಡುವುದು, ರಾಜಕಾರಣಿಗಳ ಕೈಗೊಂಬೆಗಳಾಗಿ ಅವರ ಮರ್ಜಿಯಂತೆ ಹೋರಾಟಗಳನ್ನು ಮಾಡುವುದು, ಇತ್ಯಾದಿಗಳಲ್ಲಿ ತೊಡಗಿ ತಮ್ಮ ಶ್ರಮವನ್ನು ವ್ಯರ್ಥಗೊಳಿಸುವುದಕ್ಕಿಂತ ಮೇಲೆ ಹೇಳಿದ ಸಂಗತಿಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಗಮನ ಹರಿಸಬೇಕು. ಯಾವುದೇ ಭಾಷೆಯಾದರೂ ಅದರ ಮೂಲ ಉದ್ದೇಶ ಭಾವನೆಗಳನ್ನು ವ್ಯಕ್ತಪಡಿಸುವುದೇ ಆಗಿದೆ. ಭಾಷೆ ವ್ಯವಹಾರಕ್ಕೆ ಉಪಯೋಗವಾಗುವ, ಭಾವನೆಗಳನ್ನು ಹೊರಹೊಮ್ಮಿಸಲು ಅವಕಾಶ ಕೊಡುವ ಸಾಧನ. ಕನ್ನಡಿಗರ ಭಾಷೆ ಕನ್ನಡ. ಅದು ಉಳಿಯಬೇಕು, ಬೆಳೆಯಬೇಕು ಅಂದರೆ ಅದರ ಹೊಣೆ ನಮ್ಮದೇ ಹೊರತು ಇತರರದಲ್ಲ. ನಮಗೆ ಬೇಕಿದ್ದರೆ ಅದು ಉಳಿಯುತ್ತದೆ, ಇಲ್ಲದಿದ್ದರೆ ಅಳಿಯುತ್ತದೆ. ಉಳಿಯಲಿ, ಬೆಳಗಲಿ ಎಂಬುದು ಎಲ್ಲರ ಸದಾಶಯ. ಆ ಆಶಯಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ.
-ಕ.ವೆಂ. ನಾಗರಾಜ್.

ಬುಧವಾರ, ಜನವರಿ 17, 2018

ಬೆಳೆಸಿದಂತೆ ಮಕ್ಕಳು!


     ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಮಗು ಹೋಮ್ ವರ್ಕ್ ಮಾಡುತ್ತಿತ್ತು. 'ಎಫ್‌ಆರ್‌ಇಎನ್‌ಡಿ-ಫ್ರೆಂಡ್' ಎಂದು ಹೇಳಿಕೊಳ್ಳುತ್ತಾ ಬರೆಯುತ್ತಿದ್ದುದನ್ನು ಗಮನಿಸಿದ ತಾಯಿ, ಅದು "ಎಫ್‌ಆರ್‌ಇಎನ್‌ಡಿ ಅಲ್ಲ, ಎಫ್‌ಆರ್‌ಐಇಎನ್‌ಡಿ- ಫ್ರೆಂಡ್" ಎಂದು ತಿದ್ದಿದಳು. ಮಗಳು, "ನಮ್ಮ ಮಿಸ್ ಹೇಳಿಕೊಟ್ಟಿದ್ದೇ ಹೀಗೆ. ಬೇರೆ ಬರೆದರೆ ಮಿಸ್ ತಪ್ಪು ಅಂತ ಇಂಟು ಮಾರ್ಕ್ ಹಾಕ್ತ್ತಾರೆ. ನನ್ನ ಫ್ರೆಂಡ್ ಶಾಂತಿ ಹೀಗೆ ಹೇಳಿದ್ದಕ್ಕೆ ಮಿಸ್ ಅವಳಿಗೆ ಹೊಡೆದರು" ಎಂದುದನ್ನು ಕೇಳಿಸಿಕೊಂಡ ತಂದೆ, "ನಡಿ, ನಾನೂ ಸ್ಕೂಲಿಗೆ ಬರ್ತೀನಿ, ಆ ಮಿಸ್ಸಿಗೆ ದಬಾಯಿಸ್ತೀನಿ" ಎಂದ. ಮಗಳು ಅಳುತ್ತಾ, "ಬೇಡಪ್ಪಾ, ಆಮೇಲೆ ನನಗೆ ಕಡಿಮೆ ಮಾರ್ಕ್ಸ್ ಕೊಡ್ತಾರೆ, ಫೇಲ್ ಮಾಡ್ತಾರೆ. ಎಲ್ಲರ ಎದುರಿಗೆ ನನಗೆ ಬೈತಾರೆ" ಅಂದಳು. ವಾಸ್ತವತೆ ಅರಿತ ತಂದೆ-ತಾಯಿ, "ನೋಡು, ನಾನು ಹೇಳಿಕೊಟ್ಟಿದ್ದೆನಲ್ಲಾ ಅದು ಸರಿ. ಮಿಸ್‌ಗೆ ತೋರಿಸೋದಿಕ್ಕೆ ಹಾಗೆ ಬರಿ, ಆದರೆ ಸರಿಯಾದ ಸ್ಪೆಲಿಂಗ್ ಹೀಗೆ ಅಂತ ತಿಳಿದುಕೊಂಡಿರು" ಎಂದು ಮಧ್ಯದ ದಾರಿಯನ್ನು ಮಗುವಿಗೆ ತೋರಿಸಿದರು. ಮಕ್ಕಳ ಬೆಳವಣಿಗೆ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯವಾಗಿದೆ. ಅದರಲ್ಲಿ ತಾಯಿ, ತಂದೆ ಮತ್ತು ಗುರುಗಳ ಪಾತ್ರ ಮಹತ್ವದ್ದಾಗಿದೆ. ಒಬ್ಬ ವ್ಯಕ್ತಿ ಸುಯೋಗ್ಯ ನಾಗರಿಕನಾಗಬೇಕಾದರೆ, ಅದರಲ್ಲಿ ತಂದೆ, ತಾಯಿ ಮತ್ತು ಗುರುಗಳ ಪಾತ್ರವೇ ನಿರ್ಣಾಯಕ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಕೆಟ್ಟವನೋ ಅಥವ ಒಳ್ಳೆಯವನೋ ಆಗುವುದರಲ್ಲಿ ಈ ಮೂವರ ಪಾತ್ರವೇ ಅಧಿಕವಾಗಿರುತ್ತದೆ. 
     ಮಕ್ಕಳ ಮನಸ್ಸು ಮತ್ತು ಸ್ವಭಾವ ಸೂಕ್ಷ್ಮವಾಗಿರುತ್ತದೆ. ೧೫ ವರ್ಷಗಳಾಗುವವರೆಗೆ ಅವರ ಸ್ವಭಾವಗಳು ಯಾರು ಯಾವ ರೀತಿ ತಿದ್ದುತ್ತಾರೋ ಆ ರೀತಿ ರೂಪಿತವಾಗುತ್ತದೆ. ಅವರಿಗೆ ತಂದೆ-ತಾಯಿಯರೇ ಆದರ್ಶ ಮತ್ತು ಮಾರ್ಗದರ್ಶಿಗಳು. ಅವರನ್ನು ಅನುಸರಿಸಿಯೇ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ತಂದೆ-ತಾಯಿಯರು ಜಾಗೃತರಾಗಿರಬೇಕು, ಮಕ್ಕಳ ಬೇಕು-ಬೇಡಗಳನ್ನು ಅರಿತಿರಬೇಕು, ಸೂಕ್ತ ಮಾರ್ಗದರ್ಶನ ಮಾಡಬೇಕು ಮತ್ತು ಮಕ್ಕಳಿಗೆ ಆದರ್ಶಪ್ರಾಯರಾಗಿ ನಡೆಯಬೇಕು ಅಥವ ಆ ರೀತಿ ಇರುವಂತೆಯಾದರೂ ತೋರಿಸಿಕೊಳ್ಳಬೇಕು. ಮಗುವೊಂದು ಶಾಲೆಯಿಂದ ಬರುವಾಗ ಯಾರದ್ದೋ ಪೆನ್ಸಿಲ್ ಕದ್ದುಕೊಂಡು ಬಂದಿತ್ತು. ಆ ಬಗ್ಗೆ ತಾಯಿ ಆಕ್ಷೇಪಿಸಿದಾಗ ತಂದೆ ಹೇಳಿದ್ದನಂತೆ, "ಮಗೂ, ಕದಿಯಬಾರದು. ನನಗೆ ಹೇಳಿದ್ದರೆ ನಾನೇ ಆಫೀಸಿನಿಂದ ತಂದುಕೊಡುತ್ತಿರಲಿಲ್ಲವಾ?" ಇಂತಹ ವ್ಯಕ್ತಿತ್ವದವರು ಮಕ್ಕಳಿಗೆ ಏನು ಸಂಸ್ಕಾರ ಕಲಿಸಿಯಾರು? ಮಕ್ಕಳು ದಡ್ಡರಾಗುವುದು, ಬುದ್ಧಿವಂತರಾಗುವುದು, ಚುರುಕಾಗುವುದು ಅಥವ ಮದ್ದರಾಗುವುದು ಪೋಷಕರ ಮೇಲೆಯೇ ಅವಲಂಬಿತವಾಗಿದೆ. ಅವರನ್ನು ಗದರಿಸಿ ತಿದ್ದಲು ಸಾಧ್ಯವಿಲ್ಲ. ಸ್ವತಃ ಆ ರೀತಿ ನಡೆದು ತೋರಿಸಿದರೆ ಮಕ್ಕಳು ಸಹಜವಾಗಿ ತಿದ್ದಿಕೊಳ್ಳುತ್ತಾರೆ, ಅನುಸರಿಸುತ್ತಾರೆ. ಒಂದೆರಡು ಉದಾಹರಣೆಗಳನ್ನು ಗಮನಿಸೋಣ.
     ಮನೆಯಲ್ಲಿ ಎಲ್ಲರೂ ಟಿವಿ ನೋಡುತ್ತಾ ಕುಳಿತಿರುತ್ತಾರೆ. ಮಗುವನ್ನು ಮಾತ್ರ, 'ಹೋಗು, ರೂಮಿನಲ್ಲಿ ಬಾಗಿಲು ಹಾಕಿಕೊಂಡು ಓದು, ಹೋಮ್ ವರ್ಕ್ ಮಾಡು' ಎಂದರೆ? ಆ ಸಂದರ್ಭದಲ್ಲಿ ಮಗುವಿನ ಮನಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕೂ ಎಲ್ಲರೊಂದಿಗೆ ಕುಳಿತು ಟಿವಿ ನೋಡುವ ಮನಸ್ಸಾಗುವುದಿಲ್ಲವೇ? ಎಲ್ಲರಿಗೂ ಇರುವುದು ನನಗಿಲ್ಲ ಎಂಬ ಭಾವನೆ ಬರುವುದಿಲ್ಲವೇ? ಓದಲು/ಬರೆಯಲು ಮನಸ್ಸು ಬರುತ್ತದೆಯೇ? ಆಗ ಪೋಷಕರಾದವರು ಸಂಯಮ ವಹಿಸಿ ತಾವೂ ಟಿವಿ ನೋಡಲು ಹೋಗಬಾರದು. ಮಕ್ಕಳೊಡನೆ ಟಿವಿ ನೋಡುವಾಗ ಒಳ್ಳೆಯ ಕಾರ್ಯಕ್ರಮಗಳನ್ನು ಮಾತ್ರ ನೋಡುವುದು ಒಳ್ಳೆಯದು. ಮಕ್ಕಳು ಏನಾದರೂ ಸಿಟ್ಟು ಮಾಡಿಕೊಂಡರೆ ರೇಗುವುದನ್ನು ಬಿಟ್ಟು, ನಾವು ಸಮಾಧಾನದಿಂದ, ಸಹನೆಯಿಂದ ಮಾತನಾಡುತ್ತಿದ್ದೇವೆಯೇ ಎಂದು ಆತ್ಮಶೋಧನೆ ಮಾಡಿಕೊಳ್ಳಬೇಕು. ನಾವು ಸಿಟ್ಟು ಮಾಡಿಕೊಳ್ಳಬಹುದು, ರೇಗಬಹುದು, ಮಕ್ಕಳು ಮಾತ್ರ ಸಿಟ್ಟು ಮಾಡಿಕೊಳ್ಳಬಾರದು ಎಂಬ ನೀತಿ ಸರಿಯಲ್ಲ. ಹೇಳುವುದನ್ನು ಕೇಳಿ ಅಲ್ಲ, ಮಾಡುವುದನ್ನು ನೋಡಿ ಮಕ್ಕಳು ಅನುಸರಿಸುತ್ತಾರೆ.
     'ನಾವೇನೋ ಕಷ್ಟಪಟ್ಟೆವು. ನಮ್ಮ ಮಕ್ಕಳಿಗೆ ಕಷ್ಟವಾಗಬಾರದು' ಎಂದು ಮಕ್ಕಳಿಗೆ ಸಕಲ ಸೌಲಭ್ಯಗಳನ್ನೂ ಒದಗಿಸಿ, ಅತಿ ಹೆಚ್ಚು ಫೀಸು ವಸೂಲು ಮಾಡುವ, ಒಳ್ಳೆಯ ಸೌಕರ್ಯಗಳಿರುವ, ಸುಂದರ ಕಟ್ಟಡದ ಶಾಲೆಗೇ ಸೇರಿಸುತ್ತಾರೆ. ಇದು ತಪ್ಪಲ್ಲ. ಕೇಳಿ ಕೇಳಿದ್ದನ್ನು, ಬೇಕು-ಬೇಕಾದದ್ದನ್ನೆಲ್ಲಾ ಕೊಡಿಸಿಬಿಟ್ಟರೆ ಪೋಷಕರ ಕರ್ತವ್ಯ ಮುಗಿದುಹೋಗುವುದಿಲ್ಲ. ಹೀಗೆ ಮಾಡಿದರೆ, ಕಷ್ಟವನ್ನೇ ಅರಿಯದ ಮಕ್ಕಳು ಮುಂದೆ ಜೀವನದಲ್ಲಿ ಸ್ವಾರ್ಥಿಗಳಾಗುತ್ತಾರೆ, ಸಣ್ಣ-ಪುಟ್ಟ ಕಷ್ಟಗಳಿಗೇ ಅಂಜುತ್ತಾರೆ, ಎದುರಿಸುವ ಧೈರ್ಯ ಬರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿನದನ್ನು ಒದಗಿಸಬಾರದು ಮತ್ತು ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂಬ ಭಾವನೆ ಬರದಂತೆ ನೋಡಿಕೊಳ್ಳಬೇಕು. ಬಡತನದಲ್ಲಿ ಬೆಳೆದ ಮಕ್ಕಳಿಗೆ ತಾಯಿ ಕೈತುತ್ತು ಹಾಕಿ, ಕೆಲವೊಮ್ಮೆ ಆಕೆ ಉಪವಾಸದಿಂದ ಇದ್ದುದು ತಿಳಿದಿರುತ್ತದೆ. ಮುಂದೆ ಪೋಷಕರನ್ನು ಸುಖವಾಗಿ ನೋಡಿಕೊಳ್ಳಬೇಕೆಂಬುದು ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಬಡತನವಿಲ್ಲದೆ ಸುಖವಾಗಿ ಬೆಳೆಯುತ್ತಿರುವ ಮಕ್ಕಳಿಗೂ ಸಹ, ತಮ್ಮ ಸಲುವಾಗಿ ಪೋಷಕರು ಕಷ್ಟ ಪಡುತ್ತಾರೆ, ತಮ್ಮ ಸಲುವಾಗಿ ಸಂಯಮದಿಂದ ವರ್ತಿಸಿ ತಮ್ಮ ಸುಖ-ಸಂತೋಷಗಳನ್ನು ತ್ಯಜಿಸುತ್ತಾರೆ ಎಂಬ ಭಾವನೆ ಬಂದರೆ ಅದೂ ಒಳ್ಳೆಯ ಬೆಳವಣಿಗೆಯೇ.
     ವಿವೇಕಾನಂದ ಬಾಲಕ ನರೇಂದ್ರನಾಗಿದ್ದಾಗಿನ ಘಟನೆ ಇಲ್ಲಿ ಪ್ರಸ್ತುತವೆನಿಸುತ್ತದೆ. ಶಾಲೆಯಲ್ಲಿ ಉಪಾಧ್ಯಾಯರು ಒಮ್ಮೆ ಕೇಳಿದ ಪ್ರಶ್ನೆಗೆ ನರೇಂದ್ರ ಸರಿಯಾದ ಉತ್ತರ ಕೊಡುತ್ತಾನೆ. ಉಪಾಧ್ಯಾಯರು ಆ ಉತ್ತರ ತಪ್ಪು ಎಂದಾಗ ನರೇಂದ್ರ, "ನನ್ನ ಉತ್ತರ ನಿಜಕ್ಕೂ ಸರಿಯಾಗಿದೆ" ಎಂದು ಸಮರ್ಥಿಸಿಕೊಳ್ಳುತ್ತಾನೆ. ಎದುರು ಮಾತನಾಡಿದ್ದಕ್ಕೆ ಮೇಷ್ಟರು ನರೇಂದ್ರನ ಕೈಗೆ ಬಾಸುಂಡೆ ಬರುವಂತೆ ಬಾರಿಸುತ್ತಾರೆ. ಅಳುತ್ತಾ ಬಂದ ಮಗನಿಂದ ತಾಯಿ ಭುವನೇಶ್ವರಿ ವಿಷಯ ತಿಳಿದು ಹೇಳುತ್ತಾಳೆ, "ಮಗೂ, ನೀನು ಸರಿಯಾಗಿಯೇ ಹೇಳಿದ್ದೀಯ. ಮೇಷ್ಟ್ರು ಹೇಳಿದ್ದನ್ನೇ ಸರಿ ಎಂದು ಒಪ್ಪಿಕೊಂಡಿದ್ದರೆ ನಿನಗೆ ಏಟು ಬೀಳುತ್ತಿರಲಿಲ್ಲ. ಆದರೆ ಎಂತಹ ಸಂದರ್ಭದಲ್ಲೂ ನೀನು ಸುಳ್ಳು ಒಪ್ಪಿಕೊಳ್ಳಬೇಡ. ಸುಳ್ಳಿನ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಡ". ಹೀಗೆ ಹೇಳದೆ 'ಇನ್ನು ಮುಂದೆ ಹೀಗೆಲ್ಲಾ ಏಟು ತಿಂದು ಬರಬೇಡ. ಒಪ್ಪಿಕೊಂಡುಬಿಡು' ಎಂದಿದ್ದರೆ, ನರೇಂದ್ರ ವಿವೇಕಾನಂದ ಆಗುತ್ತಲೇ ಇರಲಿಲ್ಲ. ವಿವೇಕಾನಂದರೂ ಮುಂದೆ, 'ಇಂದು ನಾನು ಏನು ಆಗಿದ್ದೇನೋ ಅದಕ್ಕೆ ನನ್ನ ತಾಯಿಯೇ ಕಾರಣ' ಎಂದು ಹೇಳುತ್ತಿದ್ದರು.   
     ಪೋಷಕರು ಮಕ್ಕಳ ಸಲುವಾಗಿ ಎಷ್ಟೇ ಕಷ್ಟ ಬಂದರೂ ತಮ್ಮ ಸಮಯವನ್ನು ಕೊಡಲೇಬೇಕು. ಈಗಂತೂ ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗುತ್ತಾರೆ. ಸಮಯವೇ ಸಾಕಾಗುವುದಿಲ್ಲ ಎಂಬ ನೆಪವೂ ಸೇರಿಕೊಳ್ಳುತ್ತದೆ. ಆದರೂ, ಸಮಯ ಕೊಡಲೇಬೇಕು; ಇಲ್ಲದಿದ್ದರೆ ಕರ್ತವ್ಯಚ್ಯುತಿ ಎಂದು ಹೇಳದೇ ವಿಧಿಯಿಲ್ಲ. ಸಮಯ ಕೊಡುವುದೆಂದರೆ ಮಕ್ಕಳನ್ನು ಕರೆದುಕೊಂಡು ಹೊರಗೆ ಸುತ್ತಾಡುವುದು, ಪಿಕ್‌ನಿಕ್ಕಿಗೆ ಹೋಗುವುದು, ಒಟ್ಟಾಗಿ ಮನರಂಜನೆಗಾಗಿ ಸಮಯ ಕೊಡುವುದು ಮಾತ್ರ ಅಲ್ಲ. ಮಕ್ಕಳು ಹೇಗೆ ಓದುತ್ತಿದ್ದಾರೆ, ಶಾಲೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುವುದರ ಜೊತೆಗೆ ವಾರಕ್ಕೆ ಒಂದೆರಡು ಗಂಟೆಗಳಾದರೂ ಶಾಲೆಯ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದೂ ಮುಖ್ಯವಾಗುತ್ತದೆ. ಇದು ಮಕ್ಕಳ ಮುಂದಿನ ಬೆಳವಣಿಗೆಗೆ, ಬಾಂಧವ್ಯ ವೃದ್ಧಿಗೆ, ಪೋಷಕರು ತಮ್ಮನ್ನು ಎಷ್ಟೊಂದು ಪ್ರೀತಿಸುತ್ತಾರೆ ಎಂಬ ಭಾವನೆ ಬರಲು ಅಗತ್ಯವಾಗಿದೆ. 
     ಲೇಖನ ವಿಸ್ತಾರವಾಗುವ ಕಾರಣದಿಂದ ಉಳಿದುದನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ:
೧. ಮಕ್ಕಳಿಗಾಗಿ ಕಡ್ಡಾಯವಾಗಿ ತಂದೆ-ತಾಯಿ ಇಬ್ಬರೂ ಸಮಯ ಮೀಸಲಿಡಬೇಕು; 
೨. ಮನೆಯಲ್ಲಿ ಮಕ್ಕಳ ಕಲಿಕೆ, ಅಭಿವೃದ್ಧಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು; 
೩. ಮಕ್ಕಳ ಶಾಲೆಯ ಶಿಕ್ಷಕರೊಡನೆ ಸಂಪರ್ಕವಿರಿಸಿಕೊಳ್ಳಬೇಕು; 
೪. ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಕೊಡಬೇಕು ಮತ್ತು ಅವರ ಚಟುವಟಿಕೆಗಳ ಬಗ್ಗೆ ಗಮನವಿರಬೇಕು; 
೫. ಮಕ್ಕಳಿಗೆ ಹೇಗೆ ವಿದ್ಯಾಭ್ಯಾಸ ಮಾಡಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡಬೇಕು; 
೬. ಪ್ರೀತಿ, ವಿಶ್ವಾಸಗಳು ಮತ್ತು ಶಿಸ್ತಿನ ವಿಚಾರದಲ್ಲಿ ಸಮತೋಲನ ಇಟ್ಟುಕೊಳ್ಳಬೇಕು; 
೭. ಮಕ್ಕಳ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದೆ ಬರಲು ಅಗತ್ಯದ ಸಹಕಾರ ಕೊಡಬೇಕು: ಆದರೆ, ಮೂಲ ವಿದ್ಯಾಭ್ಯಾಸದಲ್ಲಿ ಕೊರತೆ ಅಥವ ಹಿಂದುಳಿಯುವಿಕೆ ಆಗದಂತೆ ನೋಡಿಕೊಳ್ಳಬೇಕು. 
೮. ಕೊನೆಯದಾಗಿ, ಮಕ್ಕಳು ಏನಾಗಬೇಕೆಂದು ಬಯಸುತ್ತಾರೋ, ಆ ರೀತಿ ತಂದೆ-ತಾಯಿಗಳೂ ಇರಬೇಕು.
-ಕ.ವೆಂ. ನಾಗರಾಜ್.

ಸೋಮವಾರ, ಡಿಸೆಂಬರ್ 25, 2017

ಬದ್ಧತೆ (Commitment)


     1924ರಲ್ಲಿ ಜಪಾನಿನ ಟೋಕಿಯೋ ವಿಶ್ವವಿದ್ಯಾಲಯದ ಒಬ್ಬರು ಪ್ರೊಫೆಸರ್ ಒಂದು ಕಂದು ಬಣ್ಣದ ಮುದ್ದಾದ ನಾಯಿಯನ್ನು ಸಾಕಲು ತಂದರು. ಇಬ್ಬರಿಗೂ ಒಂದು ರೀತಿಯ ಪ್ರೀತಿಯ ಅನುಬಂಧ ಬೆಳೆಯಿತು. ಪ್ರತಿನಿತ್ಯ ಟ್ರೈನಿನಲ್ಲಿ ಕೆಲಸದ ಸ್ಥಳಕ್ಕೆ ಹೋಗಿಬರುತ್ತಿದ್ದ ಅವರು ಸಾಯಂಕಾಲ ಮರಳಿ ಬರುವಾಗ ಹತ್ತಿರವೇ ಇದ್ದ ಶಿಬುಯ ರೈಲ್ವೆ ನಿಲ್ದಾಣಕ್ಕೆ ಹೋಗಿ ಕಾಯುತ್ತಿದ್ದ 'ಹಚಿಕೋ' ಎಂಬ  ಹೆಸರಿನ ಆ ನಾಯಿ ಪ್ರತಿ ದಿನ ಅವರನ್ನು ಸ್ವಾಗತಿಸಿ ಅವರೊಂದಿಗೆ ಮನೆಗೆ ಬರುತ್ತಿತ್ತು. ಒಂದು ದಿನವೂ ತಪ್ಪದ ಈ ಕ್ರಮ ಒಂದು ವರ್ಷದವರೆಗೂ ಮುಂದುವರೆಯಿತು. ಮೇ, 1925ರಲ್ಲಿ ಆ ಪ್ರೊಫೆಸರ್ ಪಾಠ ಮಾಡುತ್ತಿದ್ದಾಗಲೇ ಕುಸಿದು ಮೃತರಾದರು. ಅಂದೂ ಸಹ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಹಚಿಕೋ ರೈಲು ಬಂದರೂ ಒಡೆಯ ಬಾರದುದನ್ನು ಕಂಡು ನಿರಾಶೆಯಿಂದ ಮರಳಿತ್ತು. ಮರುದಿನವೂ ಹೋಗಿ ಬಂದಿತು. ನಂತರದ ದಿನಗಳಲ್ಲೂ ತಪ್ಪದೆ ಹೋಗಿಬರುತ್ತಿತ್ತು. ಆಶ್ಚರ್ಯವಾಗುತ್ತದೆ, ಮುಂದಿನ 9 ವರ್ಷಗಳವರೆಗೆ ಒಂದು ದಿನವೂ ತಪ್ಪದ ಈ ಕಾಯುವಿಕೆ ಆ ನಾಯಿ ಸಾಯುವರೆಗೂ ಸಾಗಿತ್ತು. ಅದನ್ನು ಗಮನಿಸುತ್ತಿದ್ದ ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರು ಸಹ ಅದರ ಬಗ್ಗೆ ವಿಶೇಷ ಅಕ್ಕರೆ ಹೊಂದಿದ್ದರು. ಆ ನಾಯಿಯ ನೆನಪಿಗಾಗಿ ಪ್ರತಿಮೆಯನ್ನು ನಿಲ್ದಾಣದ ಪ್ರವೇಶದ್ವಾರದ ಬಳಿ ಸ್ಥಾಪಿಸಿ ಆ ದ್ವಾರಕ್ಕೆ 'ಹಚಿಕೋ ದ್ವಾರ' ಎಂದು ಹೆಸರಿಟ್ಟಿದ್ದಾರೆ. ಅದು ಈಗಲೂ ಒಂದು ವೀಕ್ಷಣೀಯ ಸ್ಥಳವಾಗಿದೆ. ಆ ನಾಯಿಯ ನಡವಳಿಕೆಯನ್ನು ಪ್ರೀತಿ ಎನ್ನುವುದೋ, ಬದ್ಧತೆ ಎನ್ನುವುದೋ? ಪ್ರೀತಿಯಿಂದ ಒಡಮೂಡಿದ ಬದ್ಧತೆ ಎನ್ನುವುದೇ ಸೂಕ್ತ!
     ಬದ್ಧತೆ ಅಂದರೆ ಒಂದು ನಿಶ್ಚಿತವಾದ ನಡವಳಿಕೆ, ಕ್ರಮ, ರೀತಿಗಳಿಗೆ ಬದ್ಧರಾಗುವುದು ಅನ್ನಬಹುದು. ಸ್ವಂತದ ಬದ್ಧತೆ ಎಂದರೆ ನಾನು ಹೀಗಿರಬೇಕು, ಹಾಗಿರಬೇಕು ಎಂದು ಕಟ್ಟುಪಾಡುಗಳನ್ನು ಹಾಕಿಕೊಳ್ಳುವುದು. ಪ್ರತಿನಿತ್ಯ ಬೆಳಿಗ್ಗೆ ಬೇಗ ಏಳುತ್ತೇನೆ, ವಾಕಿಂಗ್/ವ್ಯಾಯಾಮ ಮಾಡುತ್ತೇನೆ, ಸ್ನಾನ ಮಾಡಿದ ನಂತರವೇ ತಿಂಡಿ ತಿನ್ನುತ್ತೇನೆ, ತಪ್ಪದೆ ದೇವಸ್ಥಾನಕ್ಕೆ ಹೋಗುತ್ತೇನೆ, ಗಳಿಕೆಯ ಸ್ವಲ್ಪ ಭಾಗವನ್ನು ದೀನ-ದಲಿತರಿಗೆ ವೆಚ್ಚ ಮಾಡುತ್ತೇನೆ ಇತ್ಯಾದಿ ನಿರ್ಧಾರಗಳನ್ನು ಮಾಡಿಕೊಂಡು ಅದಕ್ಕೆ ಅನುಸಾರವಾಗಿ ನಡೆಯುವುದೇ ಸ್ವಂತದ ಬದ್ಧತೆ ಎನ್ನಿಸುತ್ತದೆ. ಈ ಕೆಲಸ ಆದರೆ ತಿರುಪತಿಗೆ ಹೋಗಿ ಮುಡಿ ಕೊಡುತ್ತೇನೆ, ಮಗ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ ಸೈಕಲ್ ತೆಗೆಸಿಕೊಡುತ್ತೇನೆ ಇತ್ಯಾದಿವ ಷರತ್ತು ಬದ್ಧ ಬದ್ಧತೆಗಳೂ ಇರುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಆಡಿದಂತೆ/ನಿರ್ಧರಿಸಿದಂತೆ ನಡೆಯುವುದೇ ಬದ್ಧತೆ. ಮದುವೆಯ ಸಂದರ್ಭದಲ್ಲಿ 'ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ' ಎಂದು ಪರಸ್ಪರ ಆಶ್ವಾಸನೆ ಕೊಟ್ಟುಕೊಳ್ಳುವುದೂ ಶಾಸ್ತ್ರೋಕ್ತ ಬದ್ಧತೆಯೇ! ಹೀಗೆ ನಡೆದಾಗ ಸಿಗುವುದೇ ಆತ್ಮ ಸಂತೋಷ.
     ರಮೇಶ, ಸುರೇಶ, ಗಣೇಶ ಮೂವರು ಸ್ನೇಹಿತರು. ಗಣೇಶ ತನ್ನ ಮನೆಯಲ್ಲಿ ಮರುದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೆ ತಪ್ಪದೆ ಬರಬೇಕೆಂದು ರಮೇಶ, ಸುರೇಶರನ್ನು ಆಹ್ವಾನಿಸುತ್ತಾನೆ. ಖಂಡಿತಾ ಬರುವುದಾಗಿ ಇಬ್ಬರೂ ಹೇಳುತ್ತಾರೆ. ಕಾರ್ಯಕ್ರಮದ ದಿನ ಭಾರಿ ಮಳೆ ಸುರಿಯುತ್ತದೆ. ರಸ್ತೆಗಳಲ್ಲಿ ನೀರು ಮೊಣಕಾಲೆತ್ತರದಲ್ಲಿ ಹರಿಯುತ್ತಿರುತ್ತದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. 'ತಲೆ ಮೇಲೆ ತಲೆ ಬಿದ್ದರೂ ತಪ್ಪದೆ ಬರುತ್ತೇನೆ' ಎಂದಿದ್ದ ರಮೇಶ ದೂರವಾಣಿ ಮೂಲಕ, 'ತಪ್ಪು ತಿಳಿಯಬೇಡ. ಇಂತಹ ಮಳೆಯಲ್ಲಿ ಬರಲಾಗುತ್ತಿಲ್ಲ' ಎಂದು ತಿಳಿಸುತ್ತಾನೆ. 'ಬರುತ್ತೇನೆ' ಎಂದಷ್ಟೇ ತಿಳಿಸಿದ್ದ ಸುರೇಶ ಮಳೆಯಲ್ಲಿ ನೆಂದು ತೊಪ್ಪೆಯಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾನೆ. ರಮೇಶನಿಗೆ ತಪ್ಪಿಸಿಕೊಳ್ಳಲು ಸಕಾರಣವಿರುತ್ತದೆ. ಅದನ್ನು ತಪ್ಪೆನ್ನಲಾಗುವುದಿಲ್ಲ. ಆದರೆ ಸುರೇಶನ ಬದ್ಧತೆ ಮಾತ್ರ ಮೆಚ್ಚುವಂತಹದು. ನನ್ನ ಚಿಕ್ಕ ವಯಸ್ಸಿನಲ್ಲಿನ ಒಂದು ಉದಾಹರಣೆ ಹಂಚಿಕೊಳ್ಳಬೇಕೆನಿಸಿದೆ. ನಾನು ಆರೆಸ್ಸೆಸ್ಸಿನ ಒಂದು ಪ್ರಭಾತ ಶಾಖೆಯ ಮುಖ್ಯ ಶಿಕ್ಷಕನಾಗಿದ್ದೆ. ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ಮೈದಾನದಲ್ಲಿ ನಿಂತು ಶಾಖೆ ಪ್ರಾರಂಭದ ಸೂಚನೆಯಾಗಿ ನಾನು ಒಬ್ಬನೇ ಇರಲಿ, ಹಲವಾರು ಜನರಿರಲಿ ಸೀಟಿ ಊದುತ್ತಿದ್ದೆ. ಮೈದಾನದ ಬದಿಯಲ್ಲಿನ ಮನೆಗಳಲ್ಲಿ ಮುಂಭಾಗದಲ್ಲಿ ಗುಡಿಸುವುದು, ನೀರು ಚಿಮುಕಿಸಿ ರಂಗೋಲಿ ಹಾಕುವುದು, ಇತ್ಯಾದಿ ಚಟುವಟಿಕೆಗಳೂ   ಅದೇ ಸಮಯದಲ್ಲಿ ಪ್ರಾರಂಭವಾಗುತ್ತಿದ್ದವು. ನನಗೆ ಜ್ವರ ಬಂದಿದ್ದರಿಂದ ಎರಡು ದಿನಗಳು ನನಗೆ ಶಾಖೆಗೆ ಹೋಗಲಾಗಿರಲಿಲ್ಲ. ಮೂರನೆಯ ದಿನ ಶಾಖೆ ಮುಗಿಸಿ ಹೋಗುವಾಗ ಒಬ್ಬ ಗೃಹಿಣಿ ನನ್ನನ್ನು ಕರೆದು "ಎರಡು ದಿನಗಳು ಏಕೆ ಬರಲಿಲ್ಲ? ನಿನ್ನ ಸೀಟಿ ಕೇಳಿದ ಮೇಲೇ ನಾನು ಏಳುತ್ತಿದ್ದೆ. ನೀನು ಸೀಟಿ ಊದದೇ ಇದ್ದರಿಂದ ನಾನು ಏಳುವುದು ತಡವಾಯಿತು" ಎಂದು ಹೇಳಿದ್ದರು! ಸಮಯಕ್ಕೆ ಸರಿಯಾಗಿ ಸೀಟಿ ಊದುವುದು ನನ್ನ ಬದ್ದತೆಯಾಗಿದ್ದರೆ, ಸೀಟಿ ಕೇಳಿ ಏಳುವುದು ಅವರು ರೂಢಿಸಿಕೊಂಡ ಬದ್ಧತೆಯಾಗಿತ್ತೇನೋ ಎನ್ನಿಸಿ ನಗು ಬಂದಿತ್ತು.
     ಸರ್ವಜ್ಞನ ವಚನ 'ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಅಧಮ ತಾನಾಡಿಯೂ ಮಾಡದವನು' ಎಂಬುದು ಬದ್ಧತೆಯ ಮಹತ್ವವನ್ನು ಎತ್ತಿಹಿಡಿದಿದೆ. ಬದ್ಧತೆ ಮತ್ತು ವಿಶ್ವಾಸಾರ್ಹತೆಗಳು ಜೊತೆಗಾರರು. ಬದ್ಧತೆಯಿರುವವರು ಜನರ ಮನ್ನಣೆ, ನಂಬಿಕೆಗೆ ಪಾತ್ರರಾಗುತ್ತಾರೆ. ಬದ್ಧತೆಯಿಲ್ಲದವರು ಬೊಗಳೆದಾಸರು ಎಂದು ಕರೆಯಿಸಿಕೊಳ್ಳುತ್ತಾರೆ. ಬಹುತೇಕ ರಾಜಕಾರಣಿಗಳು, ಪ್ರಚಾರದ ಹಂಗಿಗೆ ಬಿದ್ದ ಹಲವರು ಬೊಗಳೆದಾಸರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ವೈಯಕ್ತಿಕವಾಗಿ ಬದ್ಧತೆಯಿರುವವರು ಸುಯೋಗ್ಯ ನಾಗರಿಕರಾಗಿರುತ್ತಾರೆ. ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಹ ಉತ್ತಮ ವ್ಯಕ್ತಿಗಳು ಬದ್ಧತೆ ಹೊಂದಿರುತ್ತಾರೆ. ಕುಟುಂಬ, ಸಮಾಜ, ದೇಶದ ಹಿತದೃಷ್ಟಿಯಿಂದ ಕೆಲವೊಂದು ಬದ್ಧತೆಗಳನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಕುಟುಂಬ, ಸಮಾಜ, ದೇಶ ಪತನ ಹೊಂದುತ್ತದೆ.
     ಬದ್ಧತೆಯ ಮತ್ತಷ್ಟು ರೂಪಗಳೂ ಇವೆ. ಮಾತಿನ ಭರವಸೆಯಲ್ಲಿ ನಂಬಿಕೆ ಇರುತ್ತದೆ. ವ್ಯವಹಾರಗಳಲ್ಲಿ ಲಿಖಿತ ಬಾಂಡುಗಳಲ್ಲಿ ಒಪ್ಪಂದಗಳು, ಷರತ್ತುಗಳನ್ನು ವಿಧಿಸಿ ಅದಕ್ಕೆ ಭಾಗಿದಾರರು ಬದ್ಧರಾಗುತ್ತಾರೆ. ಜಾರಿಯಲ್ಲಿರುವ ಹಲವಾರು ಕಾನೂನುಗಳು, ಕಟ್ಟಳೆಗಳು, ಕಾಯದೆಗಳೂ ಸಹ ನಾಗರಿಕರನ್ನು ಅದರ ವ್ಯಾಪ್ತಿ ಮೀರಿ ಹೋಗದಂತೆ ನಿರ್ಬಂಧಿಸುತ್ತವೆ. ಅದಕ್ಕೆ ಒಳಪಡಬೇಕಾದುದೂ ಬದ್ಧತೆಯೇ ಆಗುತ್ತದೆ. ಪ್ರೀತಿಯ ಬದ್ದತೆ, ಭಕ್ತಿಯ ಬದ್ದತೆ, ಹಿರಿಯರಿಗೆ ಸಲ್ಲಿಸುವ ಗೌರವದ ಬದ್ಧತೆ, ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಬದ್ಧತೆ ಕಂಡುಬರುತ್ತದೆ. ಬದ್ಧತೆ ಇರುವಲ್ಲಿ ಭರವಸೆ, ನಂಬಿಕೆ, ವಿಶ್ವಾಸ, ನಿರಾತಂಕ, ಪ್ರೀತಿ ಇರುತ್ತದೆ. ನಮ್ಮ ನಡವಳಿಕೆಗಳಲ್ಲಿ ಕಂಡು ಬರುವ ಬದ್ಧತೆಯ ಪ್ರಮಾಣ ಅನುಸರಿಸಿ ನಮ್ಮ ವ್ಯಕ್ತಿತ್ವ ನಿರ್ಧರಿತವಾಗುತ್ತದೆ. ಬದ್ಧತೆ ಇರುವವರು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ರಾಜಿ ಮಾಡಿಕೊಳ್ಳುವವರು ಬದ್ಧತೆ ಇರುವವರಲ್ಲ. ರಾಜಿ ಮಾಡಿಕೊಳ್ಳುವ ಸ್ವಭಾವದವರು ತಮಗೇ ಸದಾ ಪಾಲಿಸಲು ಸಾಧ್ಯವಿಲ್ಲ ಅನ್ನಿಸುವಂತಹ ವಿಷಯಗಳನ್ನು ಪಾಲಿಸಲು ಇತರರಿಗೆ ಹೇಳದಿರುವುದು ಒಳಿತು. ವೈಯಕ್ತಿಕ ಬದ್ಧತೆ ಗುಂಪಿನ, ತಂಡದ, ಆಡಳಿತದ, ಸಮಾಜದ ಮತ್ತು ದೇಶದ ಯಶಸ್ಸಿಗೆ ತಳಪಾಯವಾಗಿದೆ.
     ನಾವು ಸಂತೋಷವಾಗಿರಬಹುದಾದ ಸರಳ ಉಪಾಯವೆಂದರೆ, ನಮಗೆ ಇಷ್ಟವೆನಿಸುವ, ನಮಗೆ ಗೌರವವಿರುವ ಯಾವುದೇ ವಿಚಾರ, ವ್ಯಕ್ತಿ, ಸಂಗತಿ ಕುರಿತು ಹೊಯ್ದಾಟವಿರದಂತಹ ಬದ್ಧತೆ ಹೊಂದಿರುವುದು. ಇಂತಹ ಬದ್ಧತೆ ಯಶಸ್ಸಿಗೂ ರಹದಾರಿ. ನಮ್ಮ ಅಂತರಂಗಕ್ಕೆ ಅದು ಸರಿ ಅನ್ನಿಸುವಾಗ ನಮಗೆ ಸಿಗುವುದು ಸಂತೋಷವೇ! ಸಂತೋಷ ಅನ್ನುವುದು ನಮ್ಮ ಮಾನಸಿಕ ಸ್ಥಿತಿ ಆಗಿರುವಾಗ ಅದನ್ನು ಇತರರ ಅನಿಸಿಕೆ, ಅಭಿಪ್ರಾಯಗಳನ್ನು ಅನುಸರಿಸಿ ನಿರ್ಧರಿಸಿಕೊಳ್ಳಬೇಕೇಕೆ? ನಮ್ಮ ಬದ್ಧತೆಯಿಂದ ನಾಲ್ಕು ಜನಕ್ಕೆ ಒಳ್ಳೆಯದಾಗುವುದಾದರೆ ಅದಕ್ಕಿಂತ ದೊಡ್ಡ ಸಮಾಧಾನ, ಸಂತೋಷ ಬೇರೆ ಏನಿದೆ?
-ಕ.ವೆಂ.ನಾಗರಾಜ್.

ಮಂಗಳವಾರ, ಡಿಸೆಂಬರ್ 12, 2017

ಘನತೆ (Dignity)


     'ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದರೂ ಅದರ ಬುದ್ದಿ ಬಿಟ್ಟೀತೇ' ಎಂಬುದು ಪ್ರಸಿದ್ಧ ಆಡುಮಾತು! ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸುವುದರಿಂದ ನಾಯಿಯ ಘನತೆ ಹೆಚ್ಚಬಹುದೇನೋ, ಆದರೆ ಸಿಂಹಾಸನದ ಘನತೆಗೆ ಮಾತ್ರ ಖಂಡಿತಾ ಕುಂದು ಬರುತ್ತದೆ. ವಿಧಾನಸೌಧದ ಬಾಗಿಲನ್ನು ಕಾಲಿನಿಂದ ಜಾಡಿಸಿ ಒದ್ದವರು ಪ್ತತಿಷ್ಠಿತ ಕುರ್ಚಿಯಲ್ಲಿ ಕುಳಿತಿರುವವರು ಇರುವಂತೆಯೇ, ಲೋಕಸಭೆಗೆ ಪ್ರಥಮವಾಗಿ ಕಾಲಿರಿಸಿದ ಸಂದರ್ಭದಲ್ಲಿ ಮೆಟ್ಟಲನ್ನು ಮುಟ್ಟಿ ನಮಸ್ಕರಿಸಿದವರೂ ಇದ್ದಾರೆ. ಕೆಲವರಿಂದ ಕುರ್ಚಿಗೆ, ಪ್ರಶಸ್ತಿಗಳಿಗೆ ಘನತೆ ಹೆಚ್ಚಿದರೆ ಕೆಲವರಿಂದ ಕುರ್ಚಿಯ ಮತ್ತು ಪ್ರಶಸ್ತಿಗಳ ಘನತೆ ತಗ್ಗುತ್ತದೆ. ಘನತೆ ಎಂಬ ಪದ ಹಿರಿದು, ಮೌಲ್ಯಯುತವಾದದ್ದು ಎಂಬ ಅರ್ಥ ಹೊರಡಿಸುತ್ತದೆ. ಸೌಜನ್ಯತೆ, ಗಾಂಭೀರ್ಯ, ಔನ್ನತ್ಯ, ದೊಡ್ಡತನ, ಗೌರವ, ಹಿರಿಮೆ, ಒಳ್ಳೆಯ ಗುಣ, ಒಳ್ಳೆಯ ನಡವಳಿಕೆ, ಆತ್ಮಾಭಿಮಾನ, ಆತ್ಮಗೌರವ, ಒಳ್ಳೆಯ ನಿಲುವು, ಸ್ಥಾನ-ಮಾನ, ಸುಸಂಸ್ಕೃತಿ, ವಿಶಿಷ್ಟತೆ, ವಿಶೇಷತೆ, ನಾಯಕತ್ವದ ಗುಣ, ಪರಿಪೂರ್ಣತೆ, ಅಂತಸ್ತು, ಸುಸಂಪನ್ನ, ಪ್ರಾಮುಖ್ಯತೆ, ಸುಜ್ಞಾನ ಹೀಗೆ ಹತ್ತು ಹಲವಾರು ವಿಶೇಷಣೆಗಳು ಘನತೆ ಪದದ ಅರ್ಥ ಮತ್ತು ಘನತೆಗಳನ್ನು ಸಾರುತ್ತವೆ. 
     ವ್ಯಕ್ತಿಯ ಗೌರವಕ್ಕೆ, ಅರ್ಥಾತ್ ಘನತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯವಾಗಿದೆ. ಭಾರತದ ಸಂವಿಧಾನದ ೧೫(೧) ಮತ್ತು (೨)ರ ವಿಧಿ ಸರ್ಕಾರವು ಯಾವುದೇ ಪ್ರಜೆಯನ್ನು ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಊರು, ಇತ್ಯಾದಿ ಯಾವುದೇ ಕಾರಣದಿಂದ ತಾರತಮ್ಯದಿಂದ ನೋಡದಿರಲು ಸ್ಪಷ್ಟ ನಿರ್ದೇಶನ ನೀಡುತ್ತದೆ. ಆದರೆ ಜನರ ಘನತೆಗೆ ಕುಂದು ತರುವ, ಧಕ್ಕೆ ನೀಡುವಂತಹ ಹಲವು ತಾರತಮ್ಯದ ಕ್ರಮಗಳನ್ನು ಆಡಳಿತ ಮಾಡುವವರೇ ಅನುಸರಿಸುತ್ತಿರುವುದು ಸಂವಿಧಾನ ವಿರೋಧಿ ಕ್ರಮವೆನ್ನದೆ ಇರಲಾಗದು. ಇಂತಹ ಕ್ರಮಗಳನ್ನು ವಿರೋಧಿಸುವವರನ್ನು ಅಧಿಕಾರಬಲ ಉಪಯೋಗಿಸಿ ಹತ್ತಿಕ್ಕುವುದೂ ಸಾಮಾನ್ಯವೆನಿಸಿಬಿಟ್ಟಿದೆ. ಇಂತಹ ಕ್ರೂರ ವ್ಯವಸ್ಥೆ ಅನಿವಾರ್ಯವೆಂಬಂತೆ ಜನರೂ ಒಗ್ಗಿ ಹೋಗುತ್ತಿದ್ದಾರೆ.
     ರಾಜಕೀಯ ಸ್ವಾರ್ಥದ ಕಾರಣಗಳಿಗಾಗಿ ಅನೇಕರ ಘನತೆಯನ್ನು ಕುಗ್ಗಿಸುವ, ಚಾರಿತ್ರ್ಯ ಹರಣ ಮಾಡುವ ಕೃತ್ಯಗಳು ಅಧಿಕಾರಸ್ಥ ರಾಜಕಾರಣಿಗಳೇ ಮಾಡಿರುವುದು, ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಸಾಧ್ವಿ ಪ್ರಜ್ಞಾರನ್ನು ಮತ್ತು ಹಲವಾರು ಹಿರಿಯ ಅಧಿಕಾರಿಗಳನ್ನು ಸುಳ್ಳು ಆರೋಪಗಳ ಮೇಲೆ ವರ್ಷಗಳವರೆಗೆ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಲ್ಲದೆ, ಚಿತ್ರಹಿಂಸೆಗೆ ಒಳಪಡಿಸಿದ ಅಕ್ಷಮ್ಯ ಅಪರಾಧ ಎಸಗಿದವರು ಅದನ್ನು ಜೀರ್ಣಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ಮುಂತಾದವರ ಪ್ರಕರಣಗಳಲ್ಲಿ ಎಗ್ಗಿಲ್ಲದೆ ಸಾಕ್ಷ್ಯನಾಶ, ಚಾರಿತ್ರ್ಯ ಹರಣ ಮುಂತಾದ ಕೃತ್ಯಗಳಲ್ಲಿ ಹಿರಿಯ ಮಂತ್ರಿಗಳು, ಉನ್ನತ ಅಧಿಕಾರಿಗಳ ಹೆಸರುಗಳು ಕೇಳಿಬರುತ್ತಿರುವುದು ಬೇಲಿಯೇ ಹೊಲ ಮೇಯುವಂತೆ ಆದುದಕ್ಕೆ ಈಚಿನ ಉದಾಹರಣೆಗಳು. ನ್ಯಾಯ ಕೊಡಬೇಕಾದವರೇ ಅಪರಾಧಿಗಳನ್ನು ರಕ್ಷಿಸುವ ಆರೋಪ ಹೊತ್ತಿದ್ದಾರೆ. ಅವರವರೇ ವಿಚಾರಣೆಯ ನಾಟಕ ನಡೆಸಿ ಶುದ್ಧ ಹಸ್ತರೆಂದು ಪ್ರಮಾಣ ಪತ್ರ ಕೊಟ್ಟುಕೊಂಡುಬಿಡುತ್ತಾರೆ ಎಂಬುದು ಜನಸಾಮಾನ್ಯರ ಮಾತು. 
     ರಾಜಕೀಯದ ಸಲುವಾಗಿ ಒಂದು ವರ್ಗವನ್ನು ಓಲೈಸುವುದೂ ತಾರತಮ್ಯದ ಕೃತ್ಯವಾಗಿದ್ದು, ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆಡಳಿತ ನಡೆಸುವವರು ತಾವು ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಸಮನಾಗಿ ಕಾಣುತ್ತಿದ್ದೇವೆಂದು ತೋರಿಸಿಕೊಳ್ಳುವುದೂ ಅತ್ಯಗತ್ಯ. ಯಾವುದೋ ವರ್ಗವನ್ನು ಓಲೈಸಿದರೆ ಅದು ಇನ್ನೊಂದು ವರ್ಗವನ್ನು ಕೀಳಾಗಿ ಕಂಡಂತೆ ಆಗುತ್ತದೆ. ಟಿಪ್ಪೂ ಜಯಂತಿಯನ್ನು ಮಾಡಲು ಮುಸ್ಲಿಮರೇ ಒತ್ತಾಯಿಸದಿದ್ದರೂ, ಸರ್ಕಾರ ಪ್ರಬಲ ಜನವಿರೋಧವನ್ನೂ ಕಡೆಗಣಿಸಿ, ಪೊಲೀಸ್ ಭದ್ರ ಕಾವಲಿನಲ್ಲಿ ಟಿಪ್ಪೂ ಜಯಂತಿ ಮಾಡುತ್ತದೆ. ಮುಸ್ಲಿಮರ ಹಬ್ಬ ಹರಿದಿನಗಳಿಗೆ ಎಲ್ಲಾ ರೀತಿಯ ಸವಲತ್ತುಗಳು, ಸಹಕಾರಗಳನ್ನು ಕೊಡುತ್ತಾರೆ, ಹಿಂದೂ ಹಬ್ಬಗಳು, ಉತ್ಸವಗಳಿಗೆ ಶಾಂತಿ, ಸುವ್ಯವಸ್ಥೆಯ ಹೆಸರಿನಲ್ಲಿ ಹಲವು ನಿರ್ಬಂಧಗಳನ್ನು ಹೇರುತ್ತಾರೆ, ಅಡ್ಡಿಪಡಿಸುತ್ತಾರೆ ಎಂಬ ಆರೋಪ ಬರುವಂತೆ ಆಡಳಿತದಲ್ಲಿರುವವರು ಅವಕಾಶ ಕೊಡಬಾರದು. ಈದ್ ಮಿಲಾದ್ ಮತ್ತು ಹನುಮ ಜಯಂತಿ ಉತ್ಸವಗಳಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ನಡೆದುಕೊಂಡ ರೀತಿ ತಾರತಮ್ಯದಿಂದ ಕೂಡಿದೆ ಎಂಬ ಅಪವಾದಕ್ಕೆ ಗುರಿಯಾಗಿದೆ.
     ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮತ್ತು ನಂತರದಲ್ಲಿ ಮುಖ್ಯಮಂತ್ರಿಯ ಕನಸು ಕಂಡು ಸದ್ಯ ತುರಂಗವಾಸದಲ್ಲಿರುವ ಶಶಿಕಲಾರವರ ಕಾಲಿಗೆ ಸರತಿಯ ಸಾಲಿನಲ್ಲಿ ನಿಂತು ನಡುಬಗ್ಗಿಸಿ ಪಾದಮುಟ್ಟಿ ನಮಸ್ಕಾರ ಮಾಡುತ್ತಿದ್ದ ಶಾಸಕರು, ಅಧಿಕಾರಸ್ಥರುಗಳನ್ನು ಕಂಡಿದ್ದೇವೆ. ಇದು ಅವರ ಘನತೆಯ ಪ್ರದರ್ಶನವಾಗಿರದೆ ಸಲಾಮು ಮಾಡುತ್ತಿದ್ದವರು ಸ್ವಾರ್ಥ ಮತ್ತು ಅಧಿಕಾರದ ಸಲುವಾಗಿ ಕಳೆದುಕೊಂಡಿದ್ದ ಘನತೆಯನ್ನು ಬಿಂಬಿಸುತ್ತದೆ. ಅಧಿಕಾರದ ಮುಂದೆ ಅಭಿಮಾನವೂ ನಿಕೃಷ್ಟವಾಗಿಬಿಡುತ್ತದೆ! ಇನ್ನು ಸಾಮಾಜಿಕವಾಗಿ ನೋಡುವುದಾದರೆ ಕೆಲವು ವರ್ಗದವರ ಬಗ್ಗೆ ಅಸ್ಪೃಷ್ಯತೆ, ಪ್ರವೇಶ ನಿಷೇಧ ಮುಂತಾದವು ಘನತೆಗೆ ಕುಂದು ತರುವ ಕೃತ್ಯಗಳಾಗಿವೆ. ಧಾರ್ಮಿಕವಾಗಿ ಸಹ ಕೆಲವು ಆಚರಣೆಗಳು ಪುರುಷ ಪ್ರಧಾನವಾಗಿರುವುದೂ ಕಂಡುಬರುತ್ತದೆ. ಉಡುಪು ಧರಿಸುವಿಕೆ, ಶಿಕ್ಷಣ. ವೈವಾಹಿಕ ಕಟ್ಟುಪಾಡುಗಳು ಇತ್ಯಾದಿಗಳಲ್ಲಿ ಧಾರ್ಮಿಕವಾಗಿ ಸಹ ಇರುವ ಕೆಲವು ಧರ್ಮಗಳಲ್ಲಿನ ಹಲವು ಕಟ್ಟುಪಾಡುಗಳು ಸ್ತ್ರೀ ತಾರತಮ್ಯಕ್ಕೆ ಉದಾಹರಣೆಗಳಾಗಿವೆ.
     ವೈಯಕ್ತಿಕವಾಗಿ, ಕೌಟುಂಬಿಕವಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸಿ ಅವರ ಘನತೆಗೆ ಕುಂದು ತರುವ ಕೃತ್ಯಗಳನ್ನೂ ಕಾಣುತ್ತಿರುತ್ತೇವೆ. ಕಾರ್ಯಕ್ರಮಕ್ಕೋ, ಸಮಾರಂಭಕ್ಕೋ ಎಲ್ಲರನ್ನೂ ಆಹ್ವಾನಿಸಿ ಕೆಲವರನ್ನು ಬೇಕೆಂದೇ ಕರೆಯದಿರುವುದು, ಕರೆದರೂ ಬಂದಾಗ ಅವರನ್ನು ಮಾತನಾಡಿಸದೇ ನಿರ್ಲಕ್ಷಿಸುವುದು ಮಾಡಿದಾಗ ಸಂಬಂದಿಸಿದವರು ಕುಗ್ಗಿಹೋಗುತ್ತಾರೆ. ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಲ್ಲಿ ಹಳೆಯ ಪರಿಚಯಸ್ಥರೊಬ್ಬರನ್ನು ಕಂಡು ವಿಶ್ವಾಸದಿಂದ ಅವರನ್ನು ಮಾತನಾಡಿಸಿದರೆ ಅವರು ಉತ್ತರಿಸದೆ, ಗಮನಿಸದಂತೆ ಮುಂದೆ ಹೋದರೆ ಹೇಗೆ ಅನ್ನಿಸುತ್ತದೆ? ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವೆ. ದೂರದ ಊರಿಗೆ ವರ್ಗವಾಗಿದ್ದ ನಾನು ಪ್ರಯತ್ನ ಪಟ್ಟು ನನ್ನ ಕುಟುಂಬ ವಾಸವಿದ್ದ ಜಿಲ್ಲಾಕೇಂದ್ರಕ್ಕೆ ವರ್ಗ ಮಾಡಿಸಿಕೊಂಡಿದ್ದೆ. ನಾನು ಅಲ್ಲಿಗೆ ಬಂದದ್ದು ಆಗ ಇದ್ದ ಜಿಲ್ಲಾಮಂತ್ರಿಗಳಿಗೆ ಇಷ್ಟವಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಅವರ ಕ್ಷೇತ್ರದಲ್ಲಿ ಹಲವು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದಾಗ ಅವರ ತಾಳಕ್ಕೆ ಕುಣಿಯುತ್ತಿರಲಿಲ್ಲ ಮತ್ತು ಅವರು ಹೇಳಿದ್ದ ಕಾನೂನಿಗೆ ವಿರುದ್ಧವಾದ ಕೆಲಸವನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಮಂಗಳೂರಿಗೆ ವರ್ಗಾಯಿಸಿದ್ದರು. ಅದನ್ನು ನೆನಪಿನಲ್ಲಿಟ್ಟಿದ್ದ ಅವರು ಜಿಲ್ಲಾಧಿಕಾರಿಯವರಿಗೆ ನನ್ನನ್ನು ಕೂಡಲೇ ವಾಪಸು ಕಳಿಸಲು ತಿಳಿಸಿದ್ದರು. ಜಿಲ್ಲಾಧಿಕಾರಿಗೆ ಆ ಅಧಿಕಾರವಿರಲಿಲ್ಲ. ಸರ್ಕಾರದ ಮಟ್ಟದಲ್ಲೇ ನನ್ನ ವರ್ಗಾವಣೆ ಆದೇಶ ಆಗಬೇಕಿತ್ತು. ನನ್ನ ಬಗ್ಗೆ ವಿಶ್ವಾಸವಿದ್ದ ಜಿಲ್ಲಾಧಿಕಾರಿಯವರು ನನ್ನನ್ನು ಕರೆದು, ಹೋಗಿ 'ಅವರಿಗೆ ಒಂದು ಸಲಾಮು ಹಾಕಿಬಾ. ಇಲ್ಲೇ ಉಳಿಸಲು ಕೇಳಿಕೋ' ಎಂದು ಸಲಹೆ ನೀಡಿದ್ದರು. ಅದರಿಂದ ಪ್ರಯೋಜನವಾಗದು ಎಂಬ ಅರಿವಿದ್ದ ನಾನು ಅವರನ್ನು ಕಂಡಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ನನಗೆ ಶಿವಮೊಗ್ಗಕ್ಕೆ ವರ್ಗಾಯಿಸಿದ ಆದೇಶ ಕೈಸೇರಿತ್ತು. ನನ್ನ ಇಂತಹ ಸ್ವಭಾವದಿಂದಾಗಿ ನನ್ನ ಸೇವಾವಧಿಯಲ್ಲಿ ಇಪ್ಪತ್ತಾರು ವರ್ಗಾವಣೆಗಳನ್ನು ಕಂಡಿದ್ದೆ. 
     ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಘೋಷಣೆಯಲ್ಲಿ, ಎಲ್ಲಾ ಮಾನವ ಜೀವಿಗಳೂ ಘನತೆ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನರು. ವಿವೇಚನೆ ಮಾಡುವ ಶಕ್ತಿ ಮತ್ತು ಅಂತಃಪ್ರಜ್ಞೆ ಇರುವ ಅವರು ಪರಸ್ಪರ ಒಬ್ಬರನ್ನೊಬ್ಬರನ್ನು ಸೋದರಭಾವದಿಂದ ಕಾಣಬೇಕು ಎಂದು ಹೇಳಿದೆ. ನಮ್ಮ ನಮ್ಮ ವೈಯಕ್ತಿಕ ಘನತೆ, ಗೌರವಗಳನ್ನು ಕಾಪಾಡಿಕೊಳ್ಳೋಣ. ಹಾಗೆಯೇ ಇತರರ ಘನತೆ, ಗೌರವಗಳಿಗೆ ಧಕ್ಕೆ ಬರದಂತೆ ವರ್ತಿಸೋಣ. ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಕೌಟುಂಬಿಕವಾಗಿ ಅಥವ ವೈಯಕ್ತಿಕವಾಗಿ ಇನ್ನೊಬ್ಬರ ಘನತೆಗೆ ಕುಂದು ಎಣಿಸಿದರೆ ಅದರ ಪರಿಣಾಮ ದ್ವೇಷ ಮತ್ತು ಸಂಘರ್ಷವಲ್ಲದೆ ಮತ್ತೇನೂ ಅಲ್ಲ. ಇದು ವಿನಾಶದ ಹಾದಿ. ಪರಸ್ಪರ ಗೌರವಿಸುವುದನ್ನು ಕಲಿಯೋಣ. ಇದು ವಿಕಾಸದ ಹಾದಿ.
-ಕ.ವೆಂ.ನಾಗರಾಜ್.

ಭಾನುವಾರ, ನವೆಂಬರ್ 26, 2017

ವ್ಯಕ್ತಿತ್ವ - ಅಸಲಿಯೋ ನಕಲಿಯೋ? (Personality)


     "ಅವರು ದೊಡ್ಡ ಮನುಷ್ಯರಾದರೂ ಎಷ್ಟೊಂದು ಸರಳವಾಗಿದ್ದಾರೆ! ಎಂಥವರಿಗಾದರೂ ನೋಡಿದರೆ ಕೈಮುಗಿಯಬೇಕು ಅನ್ನಿಸುತ್ತದೆ" - ಆ ವ್ಯಕ್ತಿಯನ್ನು ನೋಡಿದವರೊಬ್ಬರು ತಮ್ಮ ಸ್ನೇಹಿತನ ಬಳಿಯಲ್ಲಿ ಹೀಗೆ ಹೇಳಿದಾಗ ಅವನ ಸ್ನೇಹಿತ ನಗುತ್ತಾ, "ಅವನಾ? ಅವನೊಬ್ಬ ಛತ್ರಿ, ಆಷಾಡಭೂತಿ" ಎಂದು ಅವನ ಗುಣಗಳ ಅನಾವರಣ ಮಾಡಿದಾಗ ತಬ್ಬಿಬ್ಬಾಗಿದ್ದರು. ಮುಖವಾಡಗಳನ್ನೇ ಧರಿಸಿರುವ ಜನರ ನಡುವೆ ಅಸಲಿ ಮುಖ ಯಾವುದು, ನಕಲಿ ಯಾವುದು ಎಂದು ತಿಳಿಯುವುದು ಸುಲಭವಲ್ಲ. ನಾನು ತಹಸೀಲ್ದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಮ್ಮೆ ಅಂಬೇಡ್ಕರ್ ಜಯಂತಿಯಂದು ಸಾಮೂಹಿಕ ಭೋಜನದ ವ್ಯವಸ್ಥೆ  ಮಾಡಲಾಗಿತ್ತು. ಕ್ಷೇತ್ರದ ಶಾಸಕರು ಪಕ್ಕದಲ್ಲಿ ಕುಳಿತಿದ್ದ ನನಗೆ ಕಿವಿಯಲ್ಲಿ ಪಿಸುಗುಟ್ಟಿದ್ದರು, "ಊಟದ ಶಾಸ್ತ್ರ ಮಾಡಿ. ಐಬಿಯಲ್ಲಿ ಬೇರೆ ಊಟ ಇದೆ". ಮರುದಿನದ ಪತ್ರಿಕೆಗಳಲ್ಲಿ ನಮ್ಮ ಸಹಭೋಜನದ ಫೋಟೋ ಪ್ರಕಟವಾಗಿತ್ತು. ಅಸಲಿ ಆಭರಣಗಳಿಗಿಂತ ನಕಲಿ ಆಭರಣಗಳೇ ಸುಂದರವಾಗಿ, ಅಸಲಿಗಿಂತ ಚೆನ್ನಾಗಿ ಕಾಣುತ್ತವೆ. ಖೋಟಾ ನೋಟುಗಳನ್ನು ಪತ್ತೆ ಹಚ್ಚುವುದೇ ಕಷ್ಟವೆಂಬಷ್ಟು ಅಸಲಿಯಂತೆ ಕಾಣುತ್ತವೆ. ನಮ್ಮ ಎದುರಿಗೆ ಅತ್ಯಂತ ಸ್ನೇಹದಿಂದ ಮಾತನಾಡಿ, ಬೆನ್ನ ಹಿಂದೆ ನಮ್ಮನ್ನು ದೂರುವವರೂ ಇರುತ್ತಾರೆ. ಅಸಲಿ ಮತ್ತು ನಕಲಿತನಗಳನ್ನು ಗುರುತಿಸುವುದಕ್ಕೆ ಕೆಳಗೆ ತಿಳಿಸಿರುವ ಅಂಶಗಳು ಸಹಾಯಕವಾಗಬಹುದು.
೧. ಗೌರವ ತೋರಿಸುವ ರೀತಿ:
     ಯಾರು ತಮ್ಮ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಗೌರವದಿಂದ, ಪ್ರೀತಿಯಿಂದ ಕಾಣುತ್ತಾರೋ ಅವರು ಅಸಲಿಗಳು. ಅವರು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಅಥವ ತಾವು ಮೇಲಿನವರೆಂದು ತೋರಿಸಿಕೊಳ್ಳುವುದಿಲ್ಲ. ಆದರೆ ನಕಲಿಗಳು ಅಧಿಕಾರದಲ್ಲಿರುವವರನ್ನು ಮತ್ತು ತಮಗೆ ಪ್ರಯೋಜನಕ್ಕೆ ಬರುವವರೆನ್ನು ಮಾತ್ರ ಗೌರವಿಸುತ್ತಾರೆ. ಯಾರನ್ನು ಗೌರವಿಸಬೇಕು ಎಂಬ ವಿಚಾರದಲ್ಲಿ ಅವರು ಲೆಕ್ಕಾಚಾರ ಹಾಕುತ್ತಾರೆ. ಉಳಿದವರನ್ನು ನಿಕೃಷ್ಟವಾಗಿ ಕಾಣುತ್ತಾರೆ ಅಥವ ನಿರ್ಲಕ್ಷ್ಯಿಸುತ್ತಾರೆ. 
೨. ಮೆಚ್ಚುಗೆಯ ನಿರೀಕ್ಷೆ:
     ತುಂಬಿದ ಕೊಡದಂತಹ ವ್ಯಕ್ತಿತ್ವದವರು ತಾವಾಗಿಯೇ ಇನ್ನೊಬ್ಬರನ್ನು ಮೆಚ್ಚಿಸಲು, ಅವರ ಗಮನ ಸೆಳೆಯಲು ಹೋಗುವುದಿಲ್ಲ. ಅವರು ತಾವಿದ್ದಂತೆಯೇ ತಾವು ಸಂತುಷ್ಟರಾಗಿರುತ್ತಾರೆ ಮತ್ತು ಇನ್ನೊಬ್ಬರ ಮೆಚ್ಚುಗೆಗಾಗಲೀ, ನಿಂದನೆಗಾಗಲೀ ಮಹತ್ವ ಕೊಡುವುದಿಲ್ಲ. ಆದರೆ ನಕಲಿಗಳು ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ಜನರನ್ನು ಮೆಚ್ಚಿಸುವುದಕ್ಕಾಗಿ ತಮ್ಮ ಮಿತಿ ಮೀರಿ ಹೋಗುತ್ತಾರೆ. ಅನುಕೂಲವಾಗುತ್ತದೆ ಎನ್ನಿಸಿದರೆ ಎಂತಹವರನ್ನೂ ಓಲೈಸುತ್ತಾರೆ, ಲಾಬಿ ಮಾಡುತ್ತಾರೆ, ಹಾಡಿಹೊಗಳುತ್ತಾರೆ. ಅಧಿಕಾರದಲ್ಲಿರುವವರನ್ನು ಇಂದ್ರ, ಚಂದ್ರ, ದೇವೇಂದ್ರ ಎನ್ನುತ್ತಾ, ಅವರ ವಿರೋಧಿಗಳನ್ನು ವಾಚಾಮ ಗೋಚರವಾಗಿ ನಿಂದಿಸುವ ಕಾಯಕದಲ್ಲಿ ತೊಡಗುತ್ತಾರೆ. ದುರಂತವೆಂದರೆ ಆಡಳಿತದಲ್ಲಿರುವವರು ತಮ್ಮ ಸ್ವಾರ್ಥಸಾಧನೆಗಾಗಿ ಇಂತಹ ನಕಲಿಗಳನ್ನು ಪ್ರೋತ್ಸಾಹಿಸುತ್ತಾರೆ, ಪ್ರಶಸ್ತಿಗಳನ್ನು ಕೊಡುತ್ತಾರೆ, ಉನ್ನತ ಸ್ಥಾನಗಳ ಬಳುವಳಿ ನೀಡುತ್ತಾರೆ.
೩. ಗಮನ ಸೆಳೆಯುವುದು:
     ನೈಜ ವ್ಯಕ್ತಿತ್ವದವರು ತಾವು ಜನರ ಆಕರ್ಷಣೆಯ ಕೇಂದ್ರವಾಗಿರಬೇಕೆಂದು ಬಯಸುವುದಿಲ್ಲ. ತಾವು ಇರುವಂತೆಯೇ ಇರಬಯಸುವವರು ಅವರು. ತಾವು ಮಾಡುತ್ತಿರುವ ಕೆಲಸಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಹೋಗುವ ಮನಸ್ಥಿತಿಯವರು ಆ ಕಾರಣಕ್ಕಾಗಿಯೇ ಗೌರವಿಸಲ್ಪಡುತ್ತಾರೆ. ಆದರೆ ಪ್ರಚಾರದ ಹಪಾಹಪಿಯಿರುವವರು ದೊಡ್ಡ ಗಂಟಲಿನಲ್ಲಿ ಸ್ವಪ್ರಚಾರ ಮಾಡಿಕೊಳ್ಳುತ್ತಾ ಮುಂಚೂಣಿಯಲ್ಲಿರಬಯಸುತ್ತಾರೆ. ಅವರು ಜನರು ತಮ್ಮ ಸುತ್ತಲೇ ಇದ್ದು, ತಮ್ಮನ್ನು ಗೌರವಿಸುತ್ತಾರೆಂಬ ಭ್ರಮೆ ಹೊಂದಿರುತ್ತಾರೆ.
೪. ಸಾಧನೆಯ ಪ್ರಕಟೀಕರಣ:
     ನಿಜವಾದ ಸಾಧಕರು ತಮ್ಮ ಸಾಧನೆಯನ್ನು ಕೊಚ್ಚಿಕೊಳ್ಳುವುದಿಲ್ಲ. ಏಕೆಂದರೆ ಅದನ್ನು ಅವರು ಮೆಚ್ಚುಗೆ ಗಳಿಸಿಕೊಳ್ಳುವುದಕ್ಕಾಗಿ ಮಾಡಿರುವುದಿಲ್ಲ. ಅವರು ಸಾಮಾನ್ಯವಾಗಿ ವಿನೀತರಾಗಿರುತ್ತಾರೆ ಮತ್ತು ಸರಳರಾಗಿರುತ್ತಾರೆ. ಆದರೆ ಅರೆಬೆಂದ ವ್ಯಕ್ತಿತ್ವದವರು ತಾವು ಮಾಡಿದ, ಮಾಡಲು ಪ್ರಯತ್ನಿಸಿದ ಸಾಧನೆಗಳ ಬಗ್ಗೆ ದೊಡ್ಡದಾಗಿ ಕೊಚ್ಚಿಕೊಳ್ಳುತ್ತಿರುತ್ತಾರೆ. ಅಷ್ಟೇನೂ ಮಹತ್ವದ್ದಲ್ಲದ ಸಂಗತಿಯನ್ನೂ ಮಹತ್ವದ್ದೆಂಬಂತೆ ಬಿಂಬಿಸುತ್ತಿರುತ್ತಾರೆ. 
೫. ಅಭಿಪ್ರಾಯ ತಿಳಿಸುವ ರೀತಿ:
     ಮುಚ್ಚುಮರೆ ಮಾಡದ ಸ್ವಭಾವದವರು ತಮಗೆ ಅನ್ನಿಸಿದುದನ್ನು ನೇರವಾಗಿ ಹೇಳಿಬಿಡುತ್ತಾರೆ. ಅವರ ಅಭಿಪ್ರಾಯಗಳಲ್ಲಿ ಕಪಟತನವಾಗಲೀ, ಏನನ್ನೋ ಮುಚ್ಚಿಡುವುದಾಗಲೀ ಇರುವುದಿಲ್ಲ. ಇದ್ದುದನ್ನು ಇದ್ದಂತೆ ಪ್ರಾಮಾಣಿಕವಾಗಿ ಹೇಳುತ್ತಾರೆ. ಅದರೆ ದ್ವಿಮುಖ ವ್ಯಕ್ತಿತ್ವ ಹೊಂದಿದವರು ಎದುರಿಗೆ ಒಂದು ತರಹ ಮತ್ತು ಹಿಂದೆ ಮತ್ತೊಂದು ತರಹ ಹೇಳುತ್ತಾರೆ. ಗಾಳಿಮಾತುಗಳನ್ನು ಹರಡುವುದರಲ್ಲಿ ಅವರು ಆನಂದ ಕಾಣುತ್ತಾರೆ. 
೬. ಮಾತು ಮತ್ತು ಕೃತಿ: 
     ಸರ್ವಜ್ಞನ ನುಡಿ, ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ. ಅಧಮ ತಾನಾಡಿಯೂ ಮಾಡದವ ಎಂಬ ಮಾತು ಸಾರ್ವಕಾಲಿಕ ಸತ್ಯ. ಮಾಡಬೇಕೆಂದುದನ್ನು ಹೇಳದೇ ಸದ್ದಿಲ್ಲದೆ ಮಾಡುವ ಸಾಧಕರುಗಳು ನೋಡುವ ಕಣ್ಣುಗಳಿಗೆ ಕಾಣುತ್ತಾರೆ. ಆದರೆ ಆಡುವುದೇ ಒಂದು. ಮಾಡುವುದೇ ಮತ್ತೊಂದು ಎನ್ನುವವರ ಸಂಖ್ಯೆ ಹೆಚ್ಚು. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಭರವಸೆ ಕೊಡುವ ಬಹುತೇಕ ರಾಜಕಾರಣಿಗಳು ಅದನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುದು ತಿಳಿದ ವಿಚಾರವೇ ಆದರೂ ಜನರು ಮೋಸ ಹೋಗುತ್ತಾರೆ. 
೭. ಅಭಿಪ್ರಾಯ ವ್ಯಕ್ತಪಡಿಸುವ ರೀತಿ:
     ಪ್ರಾಮಾಣಿಕರು ಪೂರ್ವಾಗ್ರಹ ಪೀಡಿತರಾಗಿರದೆ ಯಾವುದೇ ಒಳ್ಳೆಯ ಸಂಗತಿ ಯಾರಿಂದಲೇ ಬಂದರೂ ಸ್ವೀಕರಿಸುತ್ತಾರೆ, ಮೆಚ್ಚುತ್ತಾರೆ, ಕೆಟ್ಟ ಕೃತ್ಯಗಳನ್ನು ಯಾರೇ ಮಾಡಿರಲಿ, ಖಂಡಿಸುತ್ತಾರೆ. ನಕಲಿ ವ್ಯಕ್ತಿತ್ವದವರು ಪೂರ್ವಾಗ್ರಹ ಪೀಡಿತರಾಗಿದ್ದು, ತಮ್ಮವರ ಮತ್ತು ತಮ್ಮ ಗುಂಪಿನವರ ವಿಚಾರಗಳನ್ನು ಮಾತ್ರ ಒಪ್ಪುತ್ತಾರೆ. ತಮ್ಮವರು ಎಂದು ಭಾವಿಸದವರ ಒಳ್ಳೆಯ ವಿಚಾರಗಳಲ್ಲೂ ಕೊಂಕು ಹುಡುಕುತ್ತಾರೆ. ತಮ್ಮವರ ಕೆಟ್ಟ ಕೃತ್ಯಗಳನ್ನು ಕಂಡೂ ಕಾಣದವರಂತಿರುತ್ತಾರೆ. ಮಾಧ್ಯಮಗಳು ಬುದ್ಧಿಜೀವಿಗಳು, ಪ್ರಗತಿಪರರು, ಇತ್ಯಾದಿ ವಿಶೇಷಣಗಳೊಂದಿಗೆ ಬಿಂಬಿಸಿ ಮುನ್ನೆಲೆಗೆ ತಂದಿರುವ ಅನೇಕ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು ಇಂತಹ ನಕಲಿ ವ್ಯಕ್ತಿತ್ವದವರಾಗಿರುವುದು ದೌರ್ಭಾಗ್ಯವೇ ಸರಿ. ಇಂತಹವರು ಇತರರನ್ನು ಟೀಕಿಸಿ ಕೆಟ್ಟವರೆಂದು ಪ್ರಚಾರ ಮಾಡಿ ಅವರ ನೋವಿನಲ್ಲಿ ಸಂತೋಷ ಕಾಣುವ ವಿಕೃತರಾಗಿರುತ್ತಾರೆ.
೮. ನೆರವು ನೀಡುವ ರೀತಿ:
     ಸಜ್ಜನರು ತಮ್ಮ ಸುತ್ತಮುತ್ತಲಿನವರಿಗೆ ವೈಯಕ್ತಿಕ ಅಭಿಲಾಷೆಗಳಿಲ್ಲದೆ ಷರತ್ತಿಲ್ಲದ ನೆರವು ನೀಡಲು ಮುಂದಾಗುತ್ತಾರೆ. ಎಲ್ಲರೂ ಚೆನ್ನಾಗಿರಲಿ ಎಂಬ ಮನೋಭಾವ ಅವರದಾಗಿರುತ್ತದೆ. ಆದರೆ ಸಮಯಸಾಧಕರು ತಮಗೆ ಪ್ರತಿಫಲ ಸಿಗುವಂತಹ ಸಂದರ್ಭಗಳಲ್ಲಿ ಮಾತ್ರ ಸಹಾಯಹಸ್ತ ಚಾಚುತ್ತಾರೆ. ತಮಗೆ ಪ್ರಯೋಜನವಿಲ್ಲ ಎಂದಾದರೆ ಇತರರು ಸಾಯುತ್ತಿದ್ದರೂ ತಿರುಗಿ ನೋಡದ ಅಮಾನವೀಯ ಗುಣದವರಾಗಿರುತ್ತಾರೆ. 
     ನಕಲಿಗಳನ್ನು ಅಸಲಿಗಳನ್ನಾಗಿಸುವುದು ಸಾಧ್ಯವೇ? ಈ ಜಗತ್ತು ಅಸಲಿಯೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ನಕಲಿಗಳಿಂದ ತುಂಬಿಹೋಗಿದೆ. ನಮ್ಮ ಸುತ್ತಲೂ, ಇದರಲ್ಲಿ ನಾವೂ ಸೇರಿರಬಹುದು, ಇಂತಹ ನಕಲಿಗಳು ಕಾಣಸಿಗುತ್ತಾರೆ. ಅವರು ನಮ್ಮ ಸ್ನೇಹಿತರಾಗಿರಬಹುದು, ಕುಟುಂಬದವರಾಗಿರಬಹುದು, ಸಹಪಾಠಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ಜಾತಿಯವರಾಗಿರಬಹುದು, ಸಹೋದ್ಯೋಗಿಗಳಾಗಿರಬಹುದು, ಯಾರೇ ಆಗಿರಬಹುದು ಎಂಬುದನ್ನು ಯಾರೂ ತಳ್ಳಿಹಾಕಲಾರರು. ಜನರೂ ಸಹ ನಕಲಿಗಳಾಗಿರುವುದನ್ನು ಒಪ್ಪಿಕೊಂಡುಬಿಡುತ್ತಾರೆ, ಏಕೆಂದರೆ ಅಸಲಿಗಿಂತ ನಕಲಿಯೇ ಹೆಚ್ಚು ಜನಾಕರ್ಷಕವಾಗಿರುತ್ತದೆ ಮತ್ತು ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸುತ್ತಾರೆ. ನೀವು ನಿಮ್ಮ ಒಬ್ಬ ಸ್ನೇಹಿತ ಮೊದಲು ನಿಮ್ಮನ್ನು ಮೆಚ್ಚಿಸಿ, ನಂತರ ನಿಮಗೆ ಮೋಸ ಮಾಡಿದರೆ ಒಪ್ಪುತ್ತೀರಾ? ಇಲ್ಲವೆಂದಾದರೆ ನಕಲಿಗಳನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಿ. ಫೇಸ್ ಬುಕ್ಕಿನಲ್ಲಿ ಒಂದು ಅಸಲಿ ಮತ್ತೊಂದು ನಕಲಿ ಖಾತೆ ಹೊಂದಿರುವವರು ಬಹಳ ಜನರಿದ್ದಾರೆ, ಅವರ ಒಂದೊಂದು ಮುಖಕ್ಕೆ ಒಂದರಂತೆ! ಅವರ ನಕಲಿ ಖಾತೆಯೇ ಅವರ ಅಸಲಿತನದ ದರ್ಶನ ಮಾಡಿಸುತ್ತದೆ. ಕಪಟಿ ಸ್ನೇಹಿತನಿಗಿಂತ ಪ್ರಾಮಾಣಿಕ ಶತ್ರುವೇ ಮೇಲು, ಅರ್ಥಾತ್ ನಕಲಿಗಿಂತ ಅಸಲಿಯೇ ಎಂದೆಂದಿಗೂ ಮೇಲು!
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 21, 2017

ಸಂಬಂಧಗಳ ಅಳಿವು ಮತ್ತು ಉಳಿವು (Relations)


     "ಏಯ್ ಮುಟ್ಠಾಳ, ಅವನ ಜೊತೆ ಯಾಕೆ ಮಾತಾಡ್ತಿದ್ದೆ? ಅವನಮ್ಮಂಗೂ ನಂಗೂ ಆಗಲ್ಲ ಅಂತ ನಿಂಗೆ ಗೊತ್ತಿಲ್ವಾ?" - ಒಬ್ಬ ತಾಯಿ ತನ್ನ ಮಗನನ್ನು ಗದರಿಸುತ್ತಿದ್ದರೆ, ಆ ಮಗು ಉತ್ತರಿಸಿತ್ತು, "ಅಮ್ಮಾ, ಅವನಮ್ಮ ನಿಂಗೆ ಎನೆಮಿ ಆದರೆ ಅವನ್ಯಾಕೆ ನಂಗೆ ಎನೆಮಿ ಆಗ್ತಾನಮ್ಮ? ಅವನು ನನ್ನ ಬೆಸ್ಟ್ ಫ್ರೆಂಡ್". ವಾಕಿಂಗಿಗೆ ಹೋಗುವ ಸಂದರ್ಭದಲ್ಲಿ ದಾರಿಯಲ್ಲಿ ಕೇಳಿ ಬಂದ ತಾಯಿ-ಮಗನ ಈ ಸಂಭಾಷಣೆ ನನಗೆ ಸಂಬಂಧಗಳ ಕುರಿತು, ಮನುಷ್ಯ ಸ್ವಭಾವದ ಕುರಿತು ಯೋಚಿಸುವಂತೆ ಮಾಡಿತ್ತು. ನಾವು ನಮ್ಮ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳುತ್ತೇವೆ, ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಮತ್ತು ನಮ್ಮ ಸಂಬಂಧಿಗಳ ಸಂತೋಷ ಅವಲಂಬಿಸಿರುತ್ತದೆ. ಸಂಬಂಧ ಉಳಿಸಿಕೊಂಡರೆ ಸಂತೋಷ, ಕಳೆದುಕೊಂಡರೆ ದುಃಖ ಸಹಜವಾಗಿ ಹಿಂಬಾಲಿಸುವ ಸಂಗತಿಗಳಾಗಿವೆ.
    ಅವರು ತಾವು ತಾವಾಗಿರುವುದಾದರೆ, ಒಬ್ಬರನ್ನು ಕಂಡು ಮತ್ತೊಬ್ಬರು ನಗದೆ ಜೊತೆಗೇ ನಕ್ಕರೆ, ಒಬ್ಬರಿಗಾಗಿ ಮತ್ತೊಬ್ಬರು ಅತ್ತರೆ, ಮತ್ತೊಬ್ಬರು ತಮ್ಮ ಕಾರಣದಿಂದ ಅಳುವಂತೆ ಆಗದಿದ್ದರೆ ಇಬ್ಬರ ನಡುವಿನ ಸಂಬಂಧಗಳು ಉತ್ತಮ ಪ್ರೀತಿಯ ಸಂಬಂಧಗಳಾಗಿರುತ್ತವೆ ಎನ್ನಬಹುದು. ಸಂಬಂಧಗಳು ಉತ್ತಮವಾಗಿರಬೇಕಾದರೆ ಒಬ್ಬರ ಸ್ವಾತಂತ್ರ್ಯವನ್ನು ಮತ್ತೊಬ್ಬರು ಗೌರವಿಸಬೇಕು. ಪ್ರೀತಿಸುತ್ತೇನೆ ಎಂಬ ಕಾರಣಕ್ಕಾಗಿ ಒಬ್ಬರು ತಾವು ಹೇಳಿದಂತೆ ಮತ್ತೊಬ್ಬರು ಕೇಳಬೇಕು ಎಂದು ಬಯಸುವುದು ಸಂಬಂಧಗಳಿಗೆ ಹಾನಿ ತರುತ್ತದೆ. ಇಂತಹ ಹಕ್ಕು ಸಾಧಿಸುವ (ಪೊಸೆಸಿವ್) ಗುಣ ಹೊಂದಿರುವವರು ತಾವು ಇಷ್ಟಪಡುವ ಜನರು ಅಥವ ವಸ್ತುಗಳನ್ನು ತಾನು ಪ್ರೀತಿಸುವವರೂ ಇಷ್ಟಪಡಬೇಕು, ತಾನು ದ್ವೇಷಿಸುವವರನ್ನು ಅವರೂ ದ್ವೇಷಿಸಬೇಕು ಎಂದು ಸಾಧಿಸುವುದನ್ನು ಕಾಣುತ್ತಿರುತ್ತೇವೆ. ಇಂತಹ ಅತಿ ಪ್ರೀತಿಯ ಕಾರಣದ ದ್ವೇಷವೂ ಸಂಬಂಧಗಳನ್ನು ಕೆಡಿಸುವುದರಲ್ಲಿ, ಸಂತೋಷ ಹಾಳು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 
     ಸಂಬಂಧಗಳ ತಾಳಿಕೆಗೆ ಇರುವ ದೊಡ್ಡ ಸಮಸ್ಯೆ ಎಂದರೆ ಏನನ್ನಾದರೂ ಪ್ರತಿಫಲವಾಗಿ ಬಯಸುವ ಕಾರಣದಿಂದ ಸಂಬಂಧಗಳನ್ನು ಹೊಂದುವುದು; ಬಯಸಿದುದು ಸಿಗದಿದ್ದರೆ ಅಥವ ಅದರಲ್ಲಿ ಕೊರತೆಯಾದರೆ ಸಂಬಂಧಕ್ಕೆ ಧಕ್ಕೆ ತಗಲಬಹುದು. ವಾಸ್ತವವಾಗಿ ಸಂಬಂಧ ಉಳಿಯಬೇಕೆಂದರೆ ಬಯಸುವುದಕ್ಕಿಂತ ಕೊಡುವುದಕ್ಕೆ ಆದ್ಯತೆ ಕೊಡಬೇಕು. ನಿರೀಕ್ಷಿಸುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿರುತ್ತದೆ. ನಾವು ಯಾವುದೋ ಒಂದು ಕೆಲಸವನ್ನು ಮಾಡಬೇಕೆಂದುಕೊಂಡಿದ್ದು, ಒಬ್ಬರೇ ಮಾಡಲಾಗದಿದ್ದಾಗ ಅದನ್ನು ಪೂರ್ಣಗೊಳಿಸಲು ಇನ್ನೊಬ್ಬರ ಸಹಾಯ ಪಡೆಯುತ್ತೇವೆ, ಬಯಸುತ್ತೇವೆ. ಆಗಲೂ ಆ ಕೆಲಸ ಪೂರ್ಣವಾಗದೆ ಉಳಿದರೆ ಅದಕ್ಕೆ ಅವರನ್ನು ದೂಷಿಸುತ್ತೇವೆ. ಬೇರೆ ಮತ್ತೊಬ್ಬರ ಸಹಾಯ ಪಡೆದೆವೆಂದು ಇಟ್ಟುಕೊಳ್ಳೋಣ. ಆಗಲೂ ನಮ್ಮ ಇಷ್ಟದಂತೆ ಪೂರ್ಣವಾಗಿ ಕೆಲಸ ಆಗದಿದ್ದರೆ? ಅವರನ್ನೂ ದೂಷಿಸುತ್ತೇವೆ. ಆ ಕೆಲಸ ಪರಿಪೂರ್ಣವಾಗಿ ಆಗದಿರುವುದಕ್ಕೆ ಮೂಲಕಾರಣ ನಾವೇ ಎಂಬ ಅರಿವು ಮೂಡುವಾಗ ವಿಳಂಬವಾಗಿಬಿಟ್ಟಿರುತ್ತದೆ. ಸಹಾಯಕರು, ಜೊತೆಗಾರರು ಯಾರೇ ಅಗಲಿ, ನಮ್ಮ ಕೆಲಸಕ್ಕೆ ಒತ್ತಾಸೆಯಾಗಬಹುದು, ಸಹಕರಿಸಬಹುದು. ಆದರೆ ಅದರ ಹೊಣೆ ನಮ್ಮದೇ ಎಂಬುದನ್ನು ಅರಿತಾಗ ಜೊತೆಗಾರರನ್ನು ದೂರುವ ಪ್ರವೃತ್ತಿ ದೂರವಾಗುತ್ತದೆ, ಸಂಬಂಧ ಉಳಿಯುತ್ತದೆ. ಎಲ್ಲಾ ರೀತಿಯ ಸಂಬಂಧಗಳು ಬೊಗಸೆಯಲ್ಲಿರುವ ಮರಳಿನಂತೆ! ತೆರೆದ ಕೈಗಳಲ್ಲಿ ಮರಳು ಇರುವಾಗ ಅದು ಹಾಗೆಯೇ ಇರುತ್ತದೆ. ಕೈಗಳನ್ನು ಮಡಿಸಿದಾಗ ಮತ್ತು ಮುಷ್ಟಿ ಬಿಗಿ ಹಿಡಿದಾಗ ಸ್ವಲ್ಪವೇ ಮರಳು ಉಳಿಯುವುದಾದರೂ, ಹೆಚ್ಚು ಭಾಗ ಚೆಲ್ಲಿ ಹೋಗುತ್ತದೆ. ಸಂಬಂಧಗಳೂ ಹಾಗೆಯೇ! ಹಗುರವಾಗಿದ್ದಾಗ, ಇನ್ನೊಬ್ಬರ ಸ್ವಾತಂತ್ರ್ಯ, ಅಭಿಪ್ರಾಯಗಳನ್ನು ಗೌರವಿಸಿದಾಗ ಸಂಬಂಧ ಬಾಳುತ್ತದೆ. ನಮ್ಮ ವಿಚಾರವನ್ನು ಅವರ ಮೇಲೆ ಹೇರಹೊರಟಾಗ, ಹಕ್ಕು ಸಾಧಿಸಲು ಪ್ರಯತ್ನಿಸಿದಾಗ ಸಂಬಂಧಗಳು ನಶಿಸುತ್ತವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಹಾಳಾಗುತ್ತವೆ.
     ಸೀತಾಮಾತೆಯನ್ನು ಹುಡುಕಿಹೊರಟ  ಹನುಮಂತ ಆಕೆಯನ್ನು ಅಶೋಕವನದಲ್ಲಿ ಗುರುತಿಸಿ ಶ್ರೀರಾಮ ಕೊಟ್ಟ ಚೂಡಾಮಣಿಯನ್ನು ಆಕೆಗೆ ತಲುಪಿಸಿ ಬರುತ್ತಾನೆ.  ನಂತರದಲ್ಲಿ ಶ್ರೀರಾಮನಿಗೆ ಅಲ್ಲಿನ ವಿಚಾರಗಳು, ಸೀತಾಮಾತೆಯ ಶೋಕ ಕುರಿತು ತಿಳಿಸುತ್ತಾನೆ. ಶ್ರೀ ರಾಮ ಹನುಮನನ್ನು ಆಲಂಗಿಸಿಕೊಂಡು ಹೇಳುತ್ತಾನೆ, "ಪ್ರಿಯ ಹನುಮಂತ, ನೀನು ನನಗೆ ಮಾಡಿದ ಈ ಉಪಕಾರವನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನೀನು ಮಾತ್ರ ಇದನ್ನು ಮರೆತುಬಿಡು. ಎಂದೂ ಈ ಉಪಕಾರಕ್ಕೆ ಪ್ರತ್ಯುಪಕಾರ ಬಯಸಬೇಡ. ನೀನು ಮಾಡಿದ ಉಪಕಾರ ಇಲ್ಲೇ ಜೀರ್ಣವಾಗಲಿ. ಏಕೆಂದರೆ, ಪ್ರತ್ಯುಪಕಾರವನ್ನು ಬಯಸುವ ವ್ಯಕ್ತಿ ತನಗರಿವಿಲ್ಲದಂತೆ ವಿಪತ್ತನ್ನೂ ಬಯಸುತ್ತಿರುತ್ತಾನೆ." ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳುವುದೂ ಇದನ್ನೇ, "ನಾವು  ಉಪಕಾರವನ್ನೋ ಅಥವಾ ದಾನವನ್ನೋ ಮಾಡುವುದಾದರೆ,  ಯಾರು ಅದಕ್ಕೆ ಪ್ರತಿಯಾಗಿ ಪ್ರತ್ಯುಪಕಾರ ಮಾಡಲು ಸಾಧ್ಯವಿಲ್ಲವೋ ಅಂತಹವರಿಗೆ ಮಾತ್ರ ಮಾಡಬೇಕು." ಇಂತಹ ಮನೋಭಾವ ಸಾಧ್ಯವಿರುವವರು ಮಹಾನುಭಾವರೇ ಸರಿ.
     ಒಂದು ವ್ಯಾವಹಾರಿಕವಾದ ಉದಾಹರಣೆಯನ್ನು ತೆಗೆದುಕೊಳ್ಳೋಣ. ನಿಮಗೆ ಏನೋ ಒಂದು ಕೆಲಸ ನನ್ನಿಂದ ಆಗಬೇಕಿರುತ್ತದೆ. ನನ್ನನ್ನು ನೀವು ಹೊಗಳುತ್ತೀರಿ, ಉಬ್ಬಿಸುತ್ತೀರಿ ಎಂದಿಟ್ಟುಕೊಳ್ಳಿ. ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ನನ್ನನ್ನು ಹೊಗಳುತ್ತಿದ್ದೀರೆಂದು ನಾನು ನಿಮ್ಮನ್ನು ನಂಬುವುದಿಲ್ಲ. ನನ್ನ ಕೆಲಸ ನೀನು ಮಾಡುವುದಿಲ್ಲ, ನೀನು ಸರಿಯಿಲ್ಲ ಎಂದು ನೀವು ದೂಷಿಸಿದರೆ ನಾನು ನಿಮ್ಮನ್ನು ಇಷ್ಟಪಡುವುದಿಲ್ಲ ಮತ್ತು ನಿಮ್ಮ ಕೆಲಸ ಮಾಡಿಕೊಡುವುದೂ ಇಲ್ಲ. ಕೆಲಸ ಹೇಗೂ ಮಾಡಿಕೊಡುವುದಿಲ್ಲವೆಂದು ನೀವು ನನ್ನನ್ನು ಅಲಕ್ಷಿಸಿದರೆ ನಿಮ್ಮನ್ನು ನಾನು ಕ್ಷಮಿಸುವುದಿಲ್ಲ. ಆದರೆ, ನೀವು ನನ್ನನ್ನು ಇಷ್ಟಪಡುವವರಾದರೆ, ನನ್ನನ್ನು ಪ್ರೀತಿಸುವುವರಾದರೆ ನಿಮ್ಮನ್ನು ನಾನೂ ಇಷ್ಟಪಡಬೇಕಾಗುತ್ತದೆ ಮತ್ತು ಕಷ್ಟವಾದರೂ ನಿಮ್ಮ ಕೆಲಸವನ್ನು ನಾನು ಮಾಡಿಕೊಡಬೇಕಾಗುತ್ತದೆ. ವ್ಯತ್ಯಾಸ ತಿಳಿಯಿತಲ್ಲವೇ? ಸಂಬಂಧಗಳನ್ನು ಬೆಸೆಯುವ, ಇಷ್ಟಾರ್ಥಗಳನ್ನು ಪೂರೈಸುವ ಸಂಗತಿ ಪ್ರೀತಿಯೇ ಹೊರತು ಮತ್ತಾವುದೂ ಅಲ್ಲ.
     ಸಾಮಾನ್ಯವಾಗಿ ಕಂಡುಬರುವ ಕಹಿಸತ್ಯ ಒಂದಿದೆ. ಅದೆಂದರೆ, ಯಾರು ಪ್ರೀತಿಸುತ್ತಾರೋ, ಯಾರು ಆತ್ಮೀಯರಾಗಿರುತ್ತಾರೋ ಅವರೇ ಹೆಚ್ಚು ನೋವು ಅನುಭವಿಸುವವರು! ಗೊತ್ತಿಲ್ಲದವರನ್ನು ಹೊಗಳುತ್ತಾರೆ, ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರೀತಿಪಾತ್ರರಿಗೇ ವಿವೇಕರಹಿತರಾಗಿ ಪೆಟ್ಟು ಕೊಡುತ್ತಾರೆ. ಸಂಬಂಧಗಳು ಉಳಿಯಬೇಕೆಂದರೆ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮನ್ನು ಇತರರು ಇಷ್ಟಪಡಬೇಕೆಂದರೆ ನಾವು ಅವರನ್ನು ಇಷ್ಟಪಡಬೇಕು. ಕ್ಷಮಿಸುವ ಗುಣವಿರಬೇಕು. ಒಳ್ಳೆಯವರೆನಿಸಿಕೊಳ್ಳಬೇಕೆಂದರೆ ಇತರರ ಒಳ್ಳೆಯತನವನ್ನು ಗುರುತಿಸುವ ಕೆಲಸ ಮಾಡಬೇಕು. ಒಳ್ಳೆಯ ಮಾತುಗಳನ್ನು ಕೇಳಬೇಕೆಂದರೆ ನಾವು ಒಳ್ಳೆಯ ಮಾತುಗಳನ್ನಾಡಬೇಕು. ಒಳ್ಳೆಯ ಮಾತುಗಳನ್ನು ಆಡುವುದು ಅಭ್ಯಾಸವಾಗಬೇಕು. ಕೆಟ್ಟ ಮಾತುಗಳನ್ನು ಆಡದಿರುವ ಸುಲಭ ಉಪಾಯವೆಂದರೆ ಮೌನವಾಗಿರುವುದು! ಮೌನವಾಗಿರುವುದಕ್ಕೆ ಖರ್ಚಿಲ್ಲ. ಬೇರೆಯವರು ನಮಗೆ ಏನು ಮಾಡಬಾರದೆಂದು ಬಯಸುತ್ತೇವೆಯೋ ಅದನ್ನು ಬೇರೆಯವರಿಗೆ ಮಾಡದಿರುವುದು! ಒಟ್ಟಿನಲ್ಲಿ ಹೇಳಬೇಕೆಂದರೆ, ಸಂಬಂಧಗಳನ್ನು ಸೃಷ್ಟಿಸುವ ಬ್ರಹ್ಮರು, ಉಳಿಸಿಕೊಳ್ಳುವ ವಿಷ್ಣುಗಳು ಮತ್ತು ಲಯಗೊಳಿಸುವ ಮಹೇಶ್ವರರು ನಾವೇನೇ! ನಾವೇ ಬ್ರಹ್ಮ, ವಿಷ್ಣು, ಮಹೇಶ್ವರರು!!
-ಕ.ವೆಂ. ನಾಗರಾಜ್.

ಗುರುವಾರ, ನವೆಂಬರ್ 9, 2017

ಪರಿಹಾರವಿಲ್ಲದ ಸಮಸ್ಯೆಗಳಿಲ್ಲ


     ಜೀವನದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ, ಕೆಲವು ಸಲ ಸೋಲುತ್ತೇವೆ, ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಹತಾಶರಾಗುತ್ತೇವೆ, ಕೈಚೆಲ್ಲುತ್ತೇವೆ, ಕೆಲವೊಮ್ಮೆ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೂ ಮನಸ್ಸು ಚಂಚಲವಾಗುತ್ತದೆ. ಆದರೆ, ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಉತ್ತಮವಾದ ರೀತಿ. ಸವಾಲುಗಳನ್ನು ಎದುರಿಸುವುದೇ ಜೀವನ, ಸವಾಲುಗಳಿಲ್ಲದ ಜೀವನ ಜೀವನವೇ ಅಲ್ಲ. ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಗಳಿಸಿಕೊಳ್ಳುವುದು ಸುಲಭವಲ್ಲವಾದರೂ ಅಸಾಧ್ಯವೇನಲ್ಲ. ಇದಕ್ಕೆ ಅನುಕೂಲವಾಗುವ ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಾವು ಅನುಸರಿಸಬಹುದಾದ ಮಾರ್ಗ ನಮಗೇ ತಿಳಿಯುತ್ತಾ ಹೋಗಬಹುದು.
೧. ಸವಾಲುಗಳಿಂದ ದೂರ ಹೋಗದಿರುವುದು: 
     ಯಾವುದಾದರೂ ಸಮಸ್ಯೆ ಎದುರಾದರೆ ಅದನ್ನು ಎದುರಿಸದೆ ದೂರವಿದ್ದಷ್ಟೂ ಸಮಸ್ಯೆ ದೊಡ್ಡದಾಗುತ್ತಾ ಹೋಗುತ್ತದೆ. ಉದಾಹರಣೆಗೆ, ಕಾನೂನು-ಸುವ್ಯವಸ್ಥೆ ಸಮಸ್ಯೆ, ಶಾಂತಿಭಂಗದ ಸಮಸ್ಯೆಗಳು ಉದ್ಭವಿಸಿದಾಗ ಅಧಿಕಾರಿಗಳು ಕೊಠಡಿಯಲ್ಲಿ ಕುಳಿತು ಸಂಬಂಧಿಸಿದವರಿಗೆ ದೂರವಾಣಿ ಮೂಲಕ ಸಲಹೆ, ಸೂಚನೆಗಳನ್ನು ಕೊಡುವುದರ ಬದಲು, ಅವರೇ ಸ್ವತಃ ಸ್ಥಳಕ್ಕೆ ಹೋಗಿ ಪರಿಶೀಲಿಸುವುದರಿಂದ ಕಾರ್ಯನಿರತ ಸಿಬ್ಬಂದಿಗೆ ಹೆಚ್ಚು ನೈತಿಕ ಬೆಂಬಲ ಸಿಗುತ್ತದೆ ಮತ್ತು ಪರಿಸ್ಥಿತಿ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ. ಅರ್ಧ ಸಮಸ್ಯೆ ಸ್ಥಳದಲ್ಲೇ ಬಗೆ ಹರಿಯುತ್ತದೆ. ಇದೇ ನೀತಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೂ ಅನ್ವಯವಾಗುತ್ತದೆ. ಹೆದರಿದರೆ ಹೆದರಿಸುವವರು ಮತ್ತಷ್ಟು ಹೆದರಿಸುತ್ತಾರೆ. ತಿರುಗಿ ನಿಂತರೆ? ಸಮಸ್ಯೆಯ ಪ್ರಮಾಣ ಖಂಡಿತ ಕುಗ್ಗುತ್ತದೆ. ಒಂದು ನಾಯಿಯೋ, ಕೋತಿಯೋ ರಸ್ತೆಯಲ್ಲಿ ಹೋಗುತ್ತಿರುವಾಗ ಅಟ್ಟಿಸಿಕೊಂಡು ಬಂದಿತೆಂದು ಓಡಿದರೆ ಅವು ಮತ್ತಷ್ಟು ಆರ್ಭಟ ಮಾಡುತ್ತಾ ಬೆನ್ನು ಹತ್ತುತ್ತವೆ. ತಿರುಗಿ ನಿಂತು ಕೆಳಗೆ ಬಗ್ಗಿ ಕಲ್ಲು ಆರಿಸಿಕೊಂಡರೆ ಅಥವ ಆರಿಸಿಕೊಂಡಂತೆ ಮಾಡಿದರೆ ಗಕ್ಕನೆ ನಿಂತು ಬಾಲ ಮುದುರಿ ಹಿಂತಿರುಗುತ್ತವೆ.
೨. ಸಮಸ್ಯೆಯ ಮೂಲ ತಿಳಿಯುವುದು: 
     ಪ್ರತಿಯೊಂದು ಸಮಸ್ಯೆಗೂ ಕಾರಣಗಳು ಇರುತ್ತವೆ. ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಿಂತ ಸಮಸ್ಯೆಗೆ ಮೂಲ ಕಾರಣ ತಿಳಿದು ಅದನ್ನು ನಿವಾರಿಸಿಕೊಳ್ಳುವುದು ಉತ್ತಮ. ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾದರೆ, ತೇಪೆ ಹಾಕುವುದಕ್ಕಿಂತ ಅದಕ್ಕೆ ಕಾರಣವಾದ ಅಂಶ -ಅದು ಮತ್ಸರವೋ, ಮೇಲರಿಮೆಯೋ ಅಥವ ಹಣಕಾಸಿನ ವ್ಯವಹಾರವೋ ಮತ್ತೊಂದೋ- ಗಮನಿಸದಿದ್ದರೆ ಕಂಟಕ ಬರದೇ ಇರುವುದಿಲ್ಲ.
೩. ಧನಾತ್ಮಕ ಮನೋಭಾವ ಹೊಂದುವುದು: 
     ನಾವು ಸಾಮಾನ್ಯವಾಗಿ ಋಣಾತ್ಮಕ ನಿಲುವಿನಿಂದ ನರಳುತ್ತೇವೆ. ನಮಗೆ ಆಗದವರಿರಬಹುದು, ಪರಿಚಯವಿರದವರು ಇರಬಹುದು ಅಂತಹವರ ಬಗ್ಗೆ ನಮಗೆ ಸಕಾರಾತ್ಮಕ ನಿಲುವು ಹೊಂದದಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರಪಂಚವನ್ನು, ಸುತ್ತಮುತ್ತಲಿನವರನ್ನು ಒಳ್ಳೆಯ ಭಾವನೆಯಿಂದ ನೋಡುವುದನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಸಮಸ್ಯೆಯ ಮೂಲವೇ ನಿವಾರಣೆಯಾಗುತ್ತದೆ.
೪. ಹಿಂದಿನ ಯಶಸ್ಸಿನ ಸಂಗತಿಗಳನ್ನು ನೆನಪಿಸಿಕೊಳ್ಳುವುದು: 
     ಹಿಂದಿನ ಕೆಲವು ಘಟನೆಗಳ ಸಂದರ್ಭದಲ್ಲಿ ನಂಬಿಕೆ ಕಳೆದುಕೊಂಡು ಹತಾಶರಾಗಿದ್ದ ಸಂದರ್ಭದಲ್ಲೂ ಅನಿವಾರ್ಯವಾಗಿ ಅದನ್ನು ಎದುರಿಸ ಬೇಕಾಗಿ ಬಂದು ಯಶಸ್ವಿಯಾಗಿದ್ದುದನ್ನು ನೆನಪಿಸಿಕೊಂಡರೆ ಭರವಸೆ ಮೂಡುತ್ತದೆ. ನಿಮ್ಮ ಕೈಗಳು ತಂತಾನೇ ಮುಷ್ಟಿ ಬಿಗಿ ಹಿಡಿಯುತ್ತವೆ ಮತ್ತು ನಿಮ್ಮ ಮನಸ್ಸು ಎದುರಾದ ಸಮಸ್ಯೆಯನ್ನು ಎದುರಿಸಲು ಸಜ್ಜಾಗುತ್ತದೆ.
೫. ಇನ್ನೊಬ್ಬರ ಸ್ಥಾನದಲ್ಲಿ ನಿಲ್ಲುವುದು: 
     ನಮಗೆ ಬಂದಂತಹ ಸಮಸ್ಯೆ ನಾವು ಮೆಚ್ಚುವಂತಹ ವ್ಯಕ್ತಿಗೆ ಬಂದಿದ್ದರೆ ಆತ ಹೇಗೆ ಪ್ರತಿಕ್ರಿಯಿಸುತ್ತಿದ್ದ, ಹೇಗೆ ಎದುರಿಸುತ್ತಿದ್ದ ಎಂಬುದನ್ನು ಕಲ್ಪಿಸಿಕೊಂಡರೆ ನಮಗೆ ಅದೇ ರೀತಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಇಂತಹುದೇ ಸಮಸ್ಯೆ ಇನ್ನು ಬೇರೆ ಯಾರಿಗಾದರೂ ಬಂದಿದ್ದು, ಅವರು ಅದನ್ನು ಹೇಗೆ ನಿಭಯಿಸಿದರು ಎಂಬುದನ್ನು ತಿಳಿದರೂ ನಮಗೆ ಹೊರಬರುವ ದಾರಿ ಕಾಣಿಸುತ್ತದೆ.
೬. ಎದೆ ಎತ್ತಿ ನಿಲ್ಲುವುದು: 
     ಸಮಸ್ಯೆ ಬಂದಿತೆಂದು ಕುಗ್ಗಿದರೆ ಮಾನಸಿಕವಾಗಿಯೂ ನಾವು ಬಲ ಕಳೆದುಕೊಳ್ಳುತ್ತೇವೆ. ಏನೂ ನಡೆದೇ ಇಲ್ಲವೇನೋ ಎಂಬಂತೆ ಅಥವ ಸಮಸ್ಯೆಯಿಂದ ನಾವು ಹೆದರಿಲ್ಲ ಎಂಬ ಭಾವನೆಯನ್ನು ಹೊರಗೆ ತೋರಿಸಿಕೊಂಡು ಎದೆ ಎತ್ತಿ ನಡೆದರೆ ನಮ್ಮ ಮನಸ್ಸೂ ಅದರಿಂದ ಮತ್ತಷ್ಟು ಬಲ ಗಳಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ, ಸಮಸ್ಯೆ ಎದುರಿಸುವುದು ಕಷ್ಟವೆನಿಸುವುದಿಲ್ಲ.
೭. ಆತ್ಮವಿಶ್ವಾಸದ ಭಾಷೆ ಬಳಸುವುದು: 
     ಅಯ್ಯೋ, ನನ್ನ ಆರೋಗ್ಯವೇ ಸರಿಯಿಲ್ಲ. ಏನು ಮಾಡಲೂ ಆಗುವುದಿಲ್ಲ ಎಂಬರ್ಥದ ಮಾತನಾಡುವವರನ್ನು ಗಮನಿಸಿದರೆ ಅವರು ನಿಶ್ಶಕ್ತಿಯಿಂದ ನಿಧಾನವಾಗಿ ನಡೆದಾಡುತ್ತಾರೆ, ಯಾವ ಕೆಲಸದಲ್ಲೂ ಉತ್ಸಾಹಿಗಳಾಗಿರುವುದಿಲ್ಲ. ಅದೇ ವ್ಯಕ್ತಿಯನ್ನು ಇನ್ನೊಂದು ಸಂದರ್ಭದಲ್ಲಿ, ನಿಮಗೆ ವಯಸ್ಸಾಗಿರುವುದೇ ಗೊತ್ತಾಗುವುದಿಲ್ಲ. ನಿಮ್ಮ ವಯಸ್ಸಿನವರು ಬೇರೆಯವರು ಮೂಲೆ ಹಿಡಿದಿರುತ್ತಾರೆ. ನೀವು ಚಟುವಟಿಕೆಯಿಂದ ಇದ್ದೀರಿ ಎಂದರೆ ಅವರಿಗೆ ಖುಷಿಯಾಗುತ್ತದೆ, ಎದೆ ಎತ್ತರಿಸುತ್ತಾರೆ, ಚಟುವಟಿಕೆಯಿಂದ ಹೆಜ್ಜೆ ಹಾಕುತ್ತಾರೆ. ಸಮಸ್ಯೆಯ ವಿಷಯವೂ ಹಾಗೆಯೇ. ನನ್ನ ಕೈಲಿ ಆಗದು ಎಂಬರ್ಥದಲ್ಲಿ ನಿರುತ್ಸಾಹದ ಮಾತುಗಳನ್ನಾಡದೆ, ಎಷ್ಟೋ ಸಮಸ್ಯೆಗಳಿದ್ದವು, ಬಗೆಹರಿದಿಲ್ಲವೇ, ಇದೇನು ಮಹಾ ಎಂಬ ರೀತಿಯಲ್ಲಿ ಮಾತುಗಳಿದ್ದರೆ ಸಮಸ್ಯೆಯೇ ಹೆದರದಿದ್ದೀತೆ? ಸಮಸ್ಯೆ ಬಂದಾಗ, ಇದರಿಂದ ಪಾರಾಗುವುದು ಹೇಗಪ್ಪಾ? ಎಂದು ಯೋಚಿಸದೆ, ನನ್ನಲ್ಲಿ ಏನು ತಪ್ಪಾಯಿತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರ ಹೊಳೆಯುತ್ತದೆ.
೮. ಕಾರ್ಯಯೋಜನೆ ಹಾಕಿಕೊಳ್ಳುವುದು: 
     ಯಾವುದಾದರೂ ವಿಷಯದ ಕುರಿತು ಮಾತನಾಡಿದರೆ, ಅದು ಕನಸು! ಅದನ್ನು ಸಾಕಾರಗೊಳಿಸಲು ನಿರ್ಧರಿಸಿದರೆ, ಅದು ಸಾಧ್ಯ! ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರೆ, ಅದು ವಾಸ್ತವ! ಸಮಸ್ಯೆ ಬಂದಾಗ ಅದನ್ನು ಎದುರಿಸುವ ರೀತಿ ಕುರಿತು ಚಿಂತಿಸಿ ಕಾರ್ಯಯೋಜನೆ ಹಾಕಿಕೊಂಡು ಮುಂದುವರೆದರೆ ಸಮಸ್ಯೆಗೆ ಉಳಿಗಾಲ ಇರದು.
೯. ಧ್ಯಾನ ಮಾಡುವುದು, ಪ್ರಕೃತಿಯೊಂದಿಗೆ ಇರುವುದು: 
     ಸಂಶೋಧನೆಗಳು ಧ್ಯಾನದಲ್ಲಿರುವವರ ಮೆದುಳಿನ ಭಾಗಗಳು ಧ್ಯಾನ ಮಾಡದವರಿಗಿಂತ ಹೆಚ್ಚು ಕ್ರಿಯಾಶೀಲವಾಗಿರುತ್ತವೆಯೆಂದು ಧೃಡಪಡಿಸಿವೆ. ದಿನದಲ್ಲಿ ೧೦ ನಿಮಿಷಗಳಾದರೂ ಧ್ಯಾನ ಮಾಡುವುದರಿಂದ, ಮೌನವಾಗಿ ಕುಳಿತುಕೊಳ್ಳುವುದರಿಂದ ಮನಸ್ಸಿನ ಕೇಂದ್ರೀಕರಣಕ್ಕೆ ಸಹಾಯವಾಗುತ್ತದೆ, ಪರಿಹಾರ ಕಾಣಲು ಮನಸ್ಸು ಸಶಕ್ತವಾಗುತ್ತದೆ. ವ್ಯಾಯಾಮ, ಯೋಗಾಸನಗಳೂ ಹಿತಕಾರಿ. ಗಿಡ-ಮರಗಳು, ಪ್ರಕೃತಿಯ ಸೌಂದರ್ಯ ಅನುಭವಿಸುತ್ತಾ ಕುಳಿತುಕೊಳ್ಳುವುದರಿಂದಲೂ ಮನಸ್ಸು ಹಗುರಗೊಳ್ಳುತ್ತದೆ. ಸಂದರ್ಭದ ಶಿಶುವಾಗುವ ಬದಲಿಗೆ ನಮ್ಮಂತೆ ನಾವಾಗುವ ಪ್ರೇರಣೆ ಸಿಗುತ್ತದೆ. ನಿಯಮಿತ ಅಭ್ಯಾಸಗಳು ಬಲ ಕೊಡುತ್ತವೆ.
೧೦. ಸೂಕ್ತ ಆಹಾರ ಸೇವನೆ: 
     ನಾವು ಸೇವಿಸುವ ಆಹಾರವೂ ಸವಾಲುಗಳನ್ನು ಎದುರಿಸಲು ಸಹಕಾರಿ. ಆಹಾರವೆಂದರೆ ನಮ್ಮ ಮೇಲೆ ಪರಿಣಾಮ ಬೀರುವ ತಿನ್ನುವುದು, ನೋಡುವುದು, ಕೇಳುವುದು ಸಹ ಒಳಗೊಳ್ಳುತ್ತದೆ. ಮಾದಕ ಪದಾರ್ಥಗಳು, ಹಳಸಿದ ಮತ್ತು ತಂಗಳು ಆಹಾರ ಸೇವನೆ ಮೆದುಳನ್ನು ದುರ್ಬಲಗೊಳಿಸುತ್ತದೆ. ನಮ್ಮನ್ನು ಹುರಿದುಂಬಿಸುವ ಸಂಗತಿಗಳನ್ನೇ ನೋಡುವುದು, ಕೇಳುವುದು, ಓದುವುದು, ಶಕ್ತಿದಾಯಕ ಆಹಾರ ಸೇವಿಸುವುದು ಮಾಡಿದರೆ ನಾವು ಧೃಡಗೊಳ್ಳುತ್ತೇವೆ.
೧೧. ಕೌಟುಂಬಿಕ ಸಮಸ್ಯೆಗಳು: 
     ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿ ನಂಬಿಕೆಯ ಕೊರತೆ, ಅಭದ್ರತೆಯ ಭಾವನೆ, ಮತ್ಸರ ಇತ್ಯಾದಿಗಳಿಂದ ಉದ್ಭವಿಸುತ್ತವೆ. ಸಂಬಂಧಿಸಿದವರು ಪರಸ್ಪರ ಮುಖಾಮುಖಿ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ ಮಾರ್ಗ. ಸಾಧ್ಯವಾಗದಾದಾಗ ಸಂಬಂಧಿಸಿದವರಿಗೆ ಒಪ್ಪಿತವಾಗುವ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಬಹುದು. ಕೌಟುಂಬಿಕ ಆಪ್ತ ಸಮಾಲೋಚನಾ ಕೇಂದ್ರಗಳ ನೆರವೂ ಪಡೆಯಬಹುದು. ಆಪ್ತ ಸಮಾಲೋಚನೆ ಮಾನಸಿಕ ರೋಗಿಗಳಿಗೆ ಮಾತ್ರ ಎಂಬ ಭಾವನೆ ಕೆಲವು ಶಿಕ್ಷಿತರಲ್ಲೂ ಕಂಡುಬರುತ್ತದೆ. ಅವರ ದೃಷ್ಟಿಯಲ್ಲಿ ತಾವೇ ಸರಿ, ತಮ್ಮದೇ ಸರಿ ಎಂಬ ಭಾವವಿರುತ್ತದೆ. ಅಂತಹ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರಾದರೂ ಸಮಾಲೋಚಕರ ಸಲಹೆಯಂತೆ ಮುಂದುವರೆಯುವುದು ಸೂಕ್ತ. ಋಣಾತ್ಮಕ(ನೆಗೆಟಿವಿಟಿ) ಭಾವಕ್ಕೆ  ಒತ್ತು ಕೊಡದೆ ಧನಾತ್ಮಕ(ಪಾಸಿಟಿವ್) ಅಂಶಗಳಿಗೆ ಒತ್ತು ಕೊಡುವುದು ಇಂತಹ ಸನ್ನಿವೇಶಗಳಲ್ಲಿ ಅತ್ಯಂತ ಅಗತ್ಯದ ಸಂಗತಿ.
     ಒಟ್ಟಾರೆಯಾಗಿ ಹೇಳಬೇಕೆಂದರೆ, ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ಅಸಾಧ್ಯ ಎಂಬುದೂ ಇಲ್ಲ. ಎಲ್ಲವೂ ನಮ್ಮ ಮನಸ್ಥಿತಿ ಮತ್ತು ಎದುರಿಸುವ ರೀತಿಯನ್ನು ಅವಲಂಬಿಸಿದೆ.
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 7, 2017

ತಾವರೆ ಎಲೆಯ ಮೇಲಿನ ನೀರು


ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ|
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ||
     ಈ ಜಗತ್ತಿನಲ್ಲಿ ನಡೆಯುವ ಜೀವನ ನಾಟಕಗಳು ಒಂದಕ್ಕಿಂತ ಒಂದು ಭಿನ್ನ, ರಮ್ಯ. ನವರಸಗಳೂ ತುಂಬಿ ತುಳುಕುವ ಈ ನಾಟಕದಲ್ಲಿ ಪ್ರತಿಯೊಬ್ಬರೂ ಪಾತ್ರಧಾರಿಗಳೇ. ವಿಶೇಷವೆಂದರೆ ಯಾರೊಬ್ಬರಿಗೂ ಇದು ನಾಟಕ ಎಂದು ಅನ್ನಿಸುವುದೇ ಇಲ್ಲ. ಪಾತ್ರವೇ ತಾವೆಂದು ತನ್ಮಯರಾಗಿ ನಟಿಸುವಾಗ ಉಸಿರು ನಿಲ್ಲುವವರೆಗೂ ನಾಟಕದಲ್ಲಿ ತಮ್ಮ ಪಾತ್ರ ಒಂದೊಮ್ಮೆ ಮುಕ್ತಾಯವಾಗುತ್ತದೆ ಎಂದು ಭಾವಿಸುವುದೇ ಇಲ್ಲ. ನಾಟಕದಲ್ಲಿನ ತಮ್ಮ ಪಾತ್ರ ಒಂದೊಮ್ಮೆ ಮುಗಿಯುತ್ತದೆ ಎಂದು ಮುಂಚೆಯೇ ಗೊತ್ತಿದ್ದರೆ, ಪಾತ್ರದ ಅಭಿನಯದಲ್ಲಿ ಮತ್ತಷ್ಟು ಜೀವಕಳೆ ತುಂಬುತ್ತಿದ್ದರೇನೋ! ಇದು ನಾಟಕ, ನಾವು ಪಾತ್ರಧಾರಿಗಳು ಎಂದು ಗೊತ್ತಾದರೆ ಪಾತ್ರ ಅನುಭವಿಸುವ ಕಷ್ಟ-ನಷ್ಟಗಳನ್ನು ಸಹಿಸಿಕೊಳ್ಳಲು ಅವಕಾಶವಾಗುತ್ತಿತ್ತು. ಭಗವದ್ಗೀತೆಯ ಒಂದು ಶ್ಲೋಕದಲ್ಲಿ (೫.೧೦) ನಿರ್ಲಿಪ್ತ ಭಾವದಿಂದ, ಫಲ ನಿರಪೇಕ್ಷೆಯಿಂದ ಕರ್ಮಗಳನ್ನು ಮಾಡುವವರಿಗೆ ತಾವರೆಯ ಎಲೆಯ ಮೇಲೆ ನೀರು ತನ್ನ ಇರುವನ್ನು ತೋರಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ, ಅವರಿಗೆ ಪಾಪಗಳು, ಕಷ್ಟಗಳು ತೊಂದರೆ ಕೊಡಲಾರವು ಎಂದು ಹೇಳಿದೆ. ಒಂದೆರಡು ಪ್ರಸಂಗಗಳನ್ನು ಗಮನಿಸೋಣ.
ಪ್ರಸಂಗ ೧:
     ಅದೊಂದು ಸಂತೃಪ್ತ, ಶ್ರೀಮಂತ ಕುಟುಂಬವಾಗಿತ್ತು. ಗಂಡ, ಹೆಂಡತಿ ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳು. ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವರು ಅನ್ನುವ ಹಾಗೆ ಬೆಳೆದ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದರು. ಮಕ್ಕಳಿಬ್ಬರಿಗೂ ಮುಂದೆ ಅಮೆರಿಕಾದಲ್ಲಿ ಒಳ್ಳೆಯ ಕೆಲಸಗಳೂ ಸಿಕ್ಕಿದವು. ಮದುವೆಯೂ ಆಗಿ ಅಲ್ಲಿಯೇ ನೆಲೆಸಿದರು. ಮಕ್ಕಳು ಆಗಾಗ್ಯೆ ಬಂದು ಹೋಗಿ ಮಾಡುತ್ತಿದ್ದರು. ಬರುಬರುತ್ತಾ ಬಂದು ಹೋಗುವುದು ಕಡಿಮೆಯಾಗುತ್ತಾ ಹೋಯಿತು. ಕೆಲವು ವರ್ಷಗಳಲ್ಲಿ ತಂದೆ ತೀರಿಹೋದರು. ತಾಯಿ ಒಂಟಿಯಾದರು. ಯಾವ ಕಾರಣಕ್ಕೋ ಏನೋ, ಒಂಟಿ ತಾಯಿಯನ್ನು ತಮ್ಮೊಂದಿಗೆ ಮಕ್ಕಳು ಕರೆದುಕೊಂಡು ಹೋಗಲು ಮನಸ್ಸು ಮಾಡಲಿಲ್ಲ. ಅಡಿಗೆಯವರು, ಕೆಲಸದವರುಗಳು ಇದ್ದರೂ ತಮ್ಮವರು ಎಂಬುವವರಿಲ್ಲದ ಬಾಧೆ ಅವರನ್ನು ಕಾಡುತ್ತಿತ್ತು. ಮಕ್ಕಳೂ ಹಣ ಕಳಿಸುತ್ತಿದ್ದು, ದೂರದಿಂದಲೇ ಮಾತನಾಡುತ್ತಿದ್ದರೂ ಒಂಟಿತನದಿಂದ ಕೊರಗುತ್ತಿದ್ದ ಆ ತಾಯಿ ಮಕ್ಕಳ ಸಲಹೆಯಂತೆ ವೃದ್ಧಾಶ್ರಮಕ್ಕೆ ಸೇರಿಕೊಂಡರು. ತಾವಿದ್ದ ವೃದ್ಧಾಶ್ರಮಕ್ಕೂ ಅವರು ಲಕ್ಷ, ಲಕ್ಷ ಹಣ ದಾನ ಮಾಡಿದ್ದರು. ಉದಾಸ ಭಾವದಿಂದ ಸೂರು ದಿಟ್ಟಿಸುತ್ತಾ ಕುಳಿತಿರುತ್ತಿದ್ದ ಅವರು ಮುಂದೊಮ್ಮೆ ಅನಾರೋಗ್ಯದಿಂದ ಕಾಲವಶರಾದಾಗ ಅವರ ಮಕ್ಕಳು ಅವರ ಜೊತೆಯಲ್ಲಿರಲಿಲ್ಲ. ಇಲ್ಲಿ ಯಾರದು ತಪ್ಪು ಎಂಬ ವಿಶ್ಲೇಷಣೆಗಿಂತ ಎಲ್ಲಿ ತಪ್ಪಾಗಿದೆ ಎಂಬುದು ಗಮನಿಸಬೇಕಾಗಿದೆ. ನೈತಿಕ ಮೌಲ್ಯಗಳನ್ನು ಬೋಧಿಸದ ಶಿಕ್ಷಣ ಪದ್ಧತಿ, ಸಂಸ್ಕಾರಗಳಿಗೆ ಮಹತ್ವ ಕೊಡದ ಕುಟುಂಬಗಳಿಂದಾಗಿ ಸಂಬಂಧಗಳ ಮಹತ್ವ ಕ್ಷೀಣವಾಗಿ ಇಂತಹ ಮತ್ತು ಇದಕ್ಕಿಂತ ದುರಂತ ಸ್ಥಿತಿಯಲ್ಲಿರುವ ಕುಟುಂಬಗಳು ಕಂಡು ಬರುತ್ತವೆ.
ಪ್ರಸಂಗ ೨:
     ಒಬ್ಬರು ಸಂತರನ್ನು ಒಮ್ಮೆ ಗೃಹಸ್ಥರೊಬ್ಬರು ತಮ್ಮ ಮನೆಗೆ ಆಹ್ವಾನಿಸಿದ್ದರು. ಆ ಕುಟುಂಬದವರೆಲ್ಲರೂ ಆ ಸಂತರ ಶಿಷ್ಯರು, ಅಭಿಮಾನಿಗಳು. ಆ ಮನೆಯಲ್ಲಿದ್ದ ಸುಮಾರು ೯೦-೯೨ರ ವಯಸ್ಸಿನ ವೃದ್ಧೆಯೊಬ್ಬರು ಸಂತರಿಗೆ ನಮಸ್ಕರಿಸಿ, ಪೂಜ್ಯರೇ, ನನಗೆ ಇನ್ನೇನೂ ಆಸೆಯಿಲ್ಲ. ನಿಮ್ಮ ಪಾದದ ಬಳಿಯಲ್ಲಿ ತಲೆಯಿಟ್ಟು ಪ್ರಾಣ ಬಿಡಬೇಕೆಂಬ ಆಸೆಯಿದೆ ಎಂದು ಹೇಳಿದಾಗ, ಆ ಸಂತರು ಕೂಡಲೇ ಸರಿಯಾಗಿ ಕುಳಿತುಕೊಂಡು, ಹಾಗೆಯೇ ಮಾಡಿ ಎಂದುಬಿಟ್ಟರು. ಗಾಬರಿಯಾದ ವೃದ್ಧೆ, ಅಯ್ಯೋ ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗನ ಮದುವೆ ನೋಡಬೇಕು. ಅವನ ಮಗುವನ್ನು ಎತ್ತಿ ಆಡಿಸಬೇಕು. ಆನಂತರ . .  ಎಂದು ರಾಗ ಎಳೆದರು. ಆಹಾ, ಮಾಯಾಮೋಹಿನಿಯ ಆಟವೇ ಆಟ! ಎಷ್ಟೇ ವಯಸ್ಸಾದರೂ ಮೋಹದ ಬಂಧ ಸಡಿಲಾಗುವುದೇ ಇಲ್ಲವಲ್ಲಾ!
ಪ್ರಸಂಗ ೩:
     ವೃದ್ಧ ವ್ಯಾಪಾರಿಯೊಬ್ಬ ಮರಣಶಯ್ಯೆಯಲ್ಲಿದ್ದು ಇನ್ನೇನು ಕೊನೆಯುಸಿರು ಎಳೆಯುತ್ತಾನೆ ಎಂಬ ಸ್ಥಿತಿಗೆ ತಲುಪಿದಾಗ, ಆತನ ಮಕ್ಕಳೆಲ್ಲರಿಗೂ ಬರಲು ಹೇಳಿಕಳುಹಿಸಿದರು. ಎಲ್ಲರೂ ಮನೆಗೆ ಧಾವಿಸಿ ಬಂದರು. ಹಿರಿಯ ಮಗನನ್ನು ಕಂಡ ಆ ವೃದ್ಧರು ಆತನಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಬಾಯಿಯಿಂದ ಸ್ವರ ಹೊರಡುತ್ತಿರಲಿಲ್ಲ. ಬಹಳ ಪ್ರಯತ್ನದ ನಂತರ ಕ್ಷೀಣವಾಗಿ ಹೇಳಿದ್ದೇನೆಂದರೆ, ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ? ಎಂದು! ಇಷ್ಟು ಹೇಳಿ ಅವರು ತಲೆ ವಾಲಿಸಿಬಿಟ್ಟರು. ಲೋಭದ ಅತ್ಯುನ್ನತ ಸ್ಥಿತಿ ಇದು. ಅವರಿಗೆ ಸಾಯುವ ಸಮಯದಲ್ಲಿಯೂ ಸಾಕು ಎಂಬ ಭಾವ ಬರಲೇ ಇಲ್ಲ.
     ಮೊದಲ ಪ್ರಸಂಗದಲ್ಲಿ ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಮತ್ತು ಸುಯೋಗ್ಯ ಸಂಸ್ಕಾರದ ಕೊರತೆ ಆ ಸ್ಥಿತಿಗೆ ಕಾರಣವಾಗಿದ್ದರೂ, ಮಕ್ಕಳನ್ನು ಸಾಕಿ ಸಲುಹಿದ್ದಕ್ಕೆ ಪ್ರತಿಯಾಗಿ ಮಕ್ಕಳು ತಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳಬೇಕೆಂಬ ನಿರೀಕ್ಷೆಯೇ ಆ ತಾಯಿಯನ್ನು ನೋವಾಗಿ ಕಾಡಿದ್ದುದು. ಅಂತಹ ನಿರೀಕ್ಷೆ ಇಟ್ಟುಕೊಂಡಿರದಿದ್ದಲ್ಲಿ ಬಹುಷಃ ದುಃಖದ ಪ್ರಮಾಣ ಕಡಿಮೆಯಿರುತ್ತಿತ್ತೇನೋ! ಇಂದಿನ ದಿನಮಾನಗಳಲ್ಲಿ ಮಕ್ಕಳನ್ನು ಬೆಳೆಸುವುದು ಕರ್ತವ್ಯ ಎಂಬ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ, ಪ್ರತಿಯಾಗಿ ಅವರು ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳದಿರುವುದು ಒಳಿತು. ಈ ಭಾವ ಬರಬೇಕೆಂದರೆ ಅಂಟಿಯೂ ಅಂಟದಂತೆ, ತಾವರೆ ಎಲೆಯ ಮೇಲಿನ ನೀರಿನಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಎರಡನೆಯ ಪ್ರಸಂಗದಲ್ಲಿ, ಒಟ್ಟು ಕುಟುಂಬದ ಹಿರಿಯರು ಇಳಿವಯಸ್ಸಿನ ಸಂದರ್ಭದಲ್ಲಿ ಕೌಟುಂಬಿಕ ಮೋಹಗಳನ್ನು ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯ ತೋರಿಸುತ್ತದೆ. ವಯೋಸಹಜ ಭಾವನೆಗೂ, ವಾಸ್ತವತೆಗೂ ಇರುವ ಅಂತರವನ್ನು ಆ ವೃದ್ಧೆಯ ಮಾತುಗಳೇ ಬಿಂಬಿಸುತ್ತವೆ. ಇನ್ನು ಮೂರನೆಯ ಪ್ರಸಂಗದಲ್ಲಿ ವಯಸ್ಸಾದಂತೆ ಪಕ್ವಗೊಳ್ಳಬೇಕಾಗಿದ್ದ ಮನಸ್ಸು ಲೋಭದ ಕಾರಣದಿಂದಾಗಿ ಕುಬ್ಜವಾಗಿಯೇ ಉಳಿದಿರುವುದರ ಸಂಕೇತ.
     ಮಾನವನ ಆರು ವೈರಿಗಳೆಂದೇ ಕರೆಯಲ್ಪಡುವ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳ ಹಿತವಾದ ಒಡನಾಟವಿದ್ದರೆ ಬದುಕು ಹಿತವಾಗಿರುತ್ತದೆ. ಯಾವುದಾದರೂ ಅತಿಯಾದರೆ ಹಾನಿ ಕಟ್ಟಿಟ್ಟ ಬುತ್ತಿ. ಇದಕ್ಕೆ ನಿದರ್ಶನವಾಗಿ ಹೇರಳವಾದ ಉದಾಹರಣೆಗಳು ಸಿಗುತ್ತವೆ ಮತ್ತು ಅವು ಪ್ರತ್ಯಕ್ಷವಾಗಿ ನಾವೇ ನಮ್ಮ ಜೀವನದಲ್ಲಿ ಕಾಣಬಹುದಾದಂತಹ ಸಂಗತಿಗಳಾಗಿವೆ. ನಮ್ಮ ಅನುಭವಗಳೇ ಗುರುವಾಗಿ ನಮ್ಮನ್ನು ತಿದ್ದಿದರೆ, ಅಂಟಿಯೂ ಅಂಟದಂತಿರುವ ಸ್ವಭಾವ ಬೆಳೆಸಿಕೊಂಡರೆ ನಾವು ಸಾಧಕರಾಗುತ್ತೇವೆ. ಇಂತಹ ಸಾಧನೆ ಸರಳವಲ್ಲ, ಆದರೆ ಅಸಾಧ್ಯವೂ ಅಲ್ಲ.
-ಕ.ವೆಂ.ನಾಗರಾಜ್.