ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಫೆಬ್ರವರಿ 14, 2016

ಪರಮಾತ್ಮನ ಸಂವಿಧಾನ - God's Constitution


ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ದೇಶದ ಸಂವಿಧಾನವೆಂದರೆ ಆ ದೇಶದ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ವಿವರಗಳೊಂದಿಗೆ ದೇಶದ ರೀತಿ-ನೀತಿಗಳನ್ನು ವ್ಯಕ್ತಪಡಿಸುವ ಒಂದು ಪವಿತ್ರ ಪುಸ್ತಕ. ಇತಿಹಾಸ ಅಧ್ಯಯನ ಮಾಡುವವರು ವಿವಿಧ ದೇಶಗಳ ಸಂವಿಧಾನಗಳ ಕುರಿತು ತಿಳಿದುಕೊಳ್ಳುತ್ತಾರೆ. ದೇಶದ ಮುತ್ಸದ್ದಿಗಳು, ಚಿಂತಕರುಗಳು ಸೇರಿ ರಚಿಸಿರುವ ಸಂವಿಧಾನದ ಮೂಲ ಉದ್ದೇಶ ಪ್ರಜೆಗಳು ಸಾಮರಸ್ಯದಿಂದ, ನೆಮ್ಮದಿಯಿಂದ ಬಾಳಬೇಕು ಎಂಬುದಾಗಿರುತ್ತದೆ. ಎಷ್ಟೇ ದೂರದೃಷ್ಟಿಯಿಂದ ಸಂವಿಧಾನದ ರಚನೆಯಾದರೂ ಕುತಂತ್ರಿ, ಸ್ವಾರ್ಥಪರ ನಾಯಕರುಗಳು ಇದಕ್ಕೆ ತಮ್ಮದೇ ಆದ ಅರ್ಥ ವ್ಯಾಖ್ಯಾನ ಮಾಡಿ, ಅನೇಕ ತಿದ್ದುಪಡಿಗಳನ್ನು ತಂದು ಸಂವಿಧಾನದ ಮೂಲ ಅರ್ಥ ಮತ್ತು ಉದ್ದೇಶಗಳಿಗೆ ಭಂಗ ತಂದಿರುವದು ಮತ್ತು ತರುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿಗೆ ವಿಶ್ರಾಂತಿ ಇಲ್ಲವಾಗಿದೆ. ದೇಶದ ಸಂವಿಧಾನ, ಕಾನೂನು-ಕಾಯದೆಗಳಿಗಿಂತ ತಮ್ಮ ಧರ್ಮಗ್ರಂಥವೇ ದೊಡ್ಡದೆಂದು ವಾದಿಸುವ ಮತಾಂಧರೂ ಸಂವಿಧಾನಕ್ಕೆ ಅಪಚಾರ ಬಗೆಯುತ್ತಿರುವುದನ್ನೂ ಕಾಣುವ ದೌರ್ಭಾಗ್ಯ ಸಹ ನಮ್ಮದಾಗಿದೆ. ಹಕ್ಕುಗಳು ಬೇಕು, ಕರ್ತವ್ಯಗಳು ಬೇಡವೆಂದು ಅರಾಜಕತೆ ಪೋಷಿಸುವ ರಾಜಕೀಯ ಪಕ್ಷಗಳೂ, ಗುಂಪುಗಳೂ, ಸಂಸ್ಥೆಗಳೂ ಇಲ್ಲಿವೆ. ಪ್ರಜಾಸತ್ತೆಯ ಹೆಸರಿನಲ್ಲಿ ಸಮುದಾಯಗಳ ಓಲೈಕೆ, ಶೋಷಣೆಗಳು ಹೊಸ ಹೊಸ ರೀತಿಗಳಲ್ಲಿ ತಲೆಯೆತ್ತಿವೆ. ಹಣವಿದ್ದರೆ ಅಧಿಕಾರ, ಕಾನೂನು, ನ್ಯಾಯಗಳೂ ಹೇಳಿದಂತೆ ಕೇಳುತ್ತವೆ ಎಂಬ ವಾತಾವರಣ ಸೃಷ್ಟಿಯಾಗುತ್ತಿರುವುದು ಅಪಾಯದ ಎಚ್ಚರಿಕೆಯ ಗಂಟೆಯಾಗಿದೆ. ದೇಶದ ಹಿತ ಬಯಸುವವರು ಇದಕ್ಕೆ ಆದಷ್ಟು ಬೇಗ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ ಕ್ಷೋಭೆ ಉಂಟಾಗಿ ಪ್ರಜಾಪ್ರಭುತ್ವಕ್ಕೆ ಗ್ರಹಣ ಹಿಡಿದೀತು.
     ಜಗತ್ತಿನಲ್ಲಿರುವ ನೂರಾರು ಸಂಖ್ಯೆಯ ದೇಶಗಳು ತಮ್ಮವೇ ಆದ ರೀತಿ-ರಿವಾಜುಗಳನ್ನು ನೀತಿಯಾಗಿ, ಸಂವಿಧಾನವಾಗಿ ಆರಿಸಿಕೊಂಡಿವೆ. ಆದರೂ ಎಲ್ಲಾ ದೇಶಗಳನ್ನೂ ಒಂದಲ್ಲಾ ಒಂದು ಕೊರತೆ, ನ್ಯೂನತೆ, ಸಮಸ್ಯೆಗಳು ಕಾಡುತ್ತಲೇ ಇವೆ. ಇದಕ್ಕೆ ಕಾರಣ ಎಲ್ಲರಿಗೂ ಒಪ್ಪಿತವಾಗುವ ವಿಚಾರಗಳು ಇರುವುದಿಲ್ಲವೆಂಬದೇ ಆಗಿದೆ. ದೇಶಗಳು ತಮ್ಮ ಅಭಿವೃದ್ಧಿಗಾಗಿ ಇಷ್ಟೊಂದು ಕಷ್ಟಪಡಬೇಕಾಗಿರುವಾಗ ಇಡೀ ಬ್ರಹ್ಮಾಂಡವನ್ನೇ ನಿಯಂತ್ರಿಸುತ್ತಿರುವ ಆ ಪರಮಾತ್ಮನಿಗೆ ಎಷ್ಟು ಕಷ್ಟವಿರಬೇಕು, ಆ ಪರಮಾತ್ಮನ ಸಂವಿಧಾನವಾದರೂ ಹೇಗಿದ್ದೀತು?
     ದೇವರು, ಪರಮಾತ್ಮ ಎಂದಾಕ್ಷಣ ಆಸ್ತಿಕರು, ನಾಸ್ತಿಕರು ಇತ್ಯಾದಿ ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಇದನ್ನೆಲ್ಲಾ ಬದಿಗಿರಿಸಿ ವಿಚಾರ ಮಾಡೋಣ. ಆಕಾಶವನ್ನೇ ದೇವರ ಪ್ರತಿನಿಧಿ ಅಥವ ದೇವರು ಎಂದೇ ಭಾವಿಸಿಕೊಂಡು ನೋಡೋಣ. ಆಕಾಶ ಇಲ್ಲದ ಸ್ಥಳವಿಲ್ಲ. ಇಡೀ ಬ್ರಹ್ಮಾಂಡ ಎಷ್ಟಿದೆಯೋ ಅದನ್ನೆಲ್ಲಾ ಆವರಿಸಿಕೊಂಡಿರುವುದು ಆಕಾಶ. ಭೋರ್ಗರೆಯುವ ಸಮುದ್ರದ ಜೊತೆಗೆ, ಸುಡುವ ಅಗ್ನಿಯೊಡನೆ, ಯಾರೂ ಹೋಗಲಾಗದ, ನೋಡಲಾಗದ ಸ್ಥಳಗಳಲ್ಲಿ, ಒಟ್ಟಾರೆಯಾಗಿ ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ ಆಕಾಶವಿದೆ. ಈ ಆಕಾಶ ಅದೆಷ್ಟೋ ಸೂರ್ಯಮಂಡಲಗಳನ್ನು ಅವುಗಳು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇರುವಂತೆ ನೋಡಿಕೊಂಡಿದೆ! ಎಲ್ಲಕ್ಕೂ ಆಧಾರವಾಗಿರುವ ಆಕಾಶಕ್ಕೆ ಆಧಾರದ ಅಗತ್ಯವೇ ಇಲ್ಲ! ಆಕಾಶವನ್ನು ಕತ್ತರಿಸಲಾಗುವುದಿಲ್ಲ, ಸುಡಲಾಗುವುದಿಲ್ಲ, ತೋಯಿಸಲಾಗುವುದಿಲ್ಲ, ನಾಶ ಮಾಡಲೂ ಆಗುವುದಿಲ್ಲ, ಸೃಷ್ಟಿಸಲೂ ಆಗುವುದಿಲ್ಲ. ದೇವರನ್ನೂ ಹೀಗೆಯೇ ಇದ್ದಾನೆ ಎನ್ನುತ್ತೇವಲ್ಲವೇ? ಇಂತಹ ದೇವರ ಸಂವಿಧಾನವಾದರೂ ಹೇಗಿದೆ?
ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ
ರವಿ ಸೋಮ ನೆಲ ಜಲ ವಾಯು ಆಗಸ |
ಪೂರ್ಣ ಜಗವನಿತ್ತಿಹನು ಸಕಲ ಜೀವಿಗೆ
ಭೇದವೆಣಿಸದಾತನಿಗೆ ಶರಣಾಗು ಮೂಢ ||
     ಪರಮಾತ್ಮನ ಸಂವಿಧಾನದಲ್ಲಿ ಇರುವಷ್ಟು ಸ್ವಾತಂತ್ರ್ಯ, ನ್ಯಾಯ, ನೀತಿ, ಧರ್ಮಗಳು ಮನುಷ್ಯ ನಿರ್ಮಿತ ಸಂವಿಧಾನದಲ್ಲಿ ಇರುವುದು ಅಸಾಧ್ಯ, ಇದ್ದರೂ ಜಾರಿ ಮಾಡುವುದು ದುಸ್ಸಾಧ್ಯ. ಪರಮಾತ್ಮನ ಸಂವಿಧಾನದ ಪಂಚತತ್ವಗಳು - ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶ -  ಸಕಲ ಚರಾಚರಗಳ ಅಸ್ತಿತ್ವಕ್ಕೆ ಕಾರಣವಾಗಿವೆ. ಈ ಐದೂ ತತ್ವಗಳು ಯಾವುದೇ ಜೀವಿಗೆ, ಅದು ಪಶು-ಪಕ್ಷಿಯಿರಬಹುದು, ಮಾನವನಿರಬಹುದು, ಕ್ರಿಮಿ-ಕೀಟವಿರಬಹುದು ಎಲ್ಲರಿಗೂ ಸಮಾನವಾಗಿವೆ. ಜೀವಿ, ನಿರ್ಜೀವಿ ಎಂಬ ಭೇದವನ್ನೂ ಸಹ ಅವು ಮಾಡವು. ಭೂಮಿಯಲ್ಲಿ ಇಂತಹವರು ಮಾತ್ರ ಇರಬೇಕು, ಇಂತಹವರು/ಇಂತಹವು ಇರಬಾರದು ಎಂದು ನಿರ್ಬಂಧವಿಲ್ಲ. ನಿರ್ಬಂಧವೇನಾದರೂ ಇದ್ದರೆ ಅವು ಮನುಷ್ಯನಿರ್ಮಿತವಷ್ಟೇ! ಇಡೀ ಭೂಮಿ ಒಂದೇ ಆಗಿದ್ದು, ಅದನ್ನು ದೇಶಗಳು, ರಾಜ್ಯಗಳು ಎಂದು ತುಂಡು-ತುಂಡುಗಳಾಗಿಸಿರುವವರು ನಾವೇನೇ! ನದಿ, ತೊರೆಗಳ ನೀರು ತಗ್ಗಿರುವೆಡೆಗೆ ಹರಿಯುತ್ತವೆ. ಆ ದೇಶ, ಈ ದೇಶ, ಆ ರಾಜ್ಯ, ಈ ರಾಜ್ಯ ಎಂಬ ಭೇದ ಅದಕ್ಕಿಲ್ಲ. ಈ ನಿಯಮಕ್ಕೆ ಅಪವಾದವೇ ಇಲ್ಲ, ಇದನ್ನು ಮುರಿಯಲೂ ಸಾಧ್ಯವಿಲ್ಲ. ಇನ್ನು ಬೆಂಕಿಯ ವಿಷಯವನ್ನೇ ತೆಗೆದುಕೊಂಡರೆ ಅದರ ದಹಿಸುವ ಗುಣ ಎಲ್ಲೆಡೆಯೂ ಒಂದೇ! ಬೆಂಕಿ ಸುಡುತ್ತದೆ ಎಂದು ಗೊತ್ತಿರುವವರನ್ನೂ ಅದು ಸುಡುತ್ತದೆ, ಗೊತ್ತಿಲ್ಲದವರನ್ನೂ ಅದು ಸುಡುತ್ತದೆ. ಆ ಜಾತಿಯವರನ್ನು ಮಾತ್ರ ಸುಡಬೇಕು, ಈ ಜಾತಿಯವರನ್ನು ಸುಡುವಾಗ ಸ್ವಲ್ಪ ರಿಯಾಯಿತಿ ಕೊಡಬೇಕು ಎಂಬ ತಾರತಮ್ಯ ಅದಕ್ಕೆ ಇಲ್ಲವೇ ಇಲ್ಲ. ಯಾವ ದೇಶದ ಕಾನೂನುಗಳೂ ಬೆಂಕಿಯ ಗುಣ ಬದಲಾಯಿಸಲು ಸಾಧ್ಯವೇ ಇಲ್ಲ. ಇಡೀ ದೇಶದ ಜನರು ಒಗ್ಗೂಡಿ ಬೆಂಕಿ ಸುಡಬಾರದು ಎಂದು ತೀರ್ಮಾನ ತೆಗೆದುಕೊಂಡರೂ ಬೆಂಕಿಯ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ.
     ವಾಯು ಎಲ್ಲೆಡೆಯೂ, ಎಲ್ಲರಿಗೂ ಸಮನಾಗಿ ಬೀಸುತ್ತದೆ. ಮಳೆ ಸಹ ಅಷ್ಟೇ. ಸೂರ್ಯನ ಪ್ರಕಾಶವೂ ಯಾವುದೇ ತಾರತಮ್ಯ ಮಾಡದು. ಇವನು ಬುದ್ಧಿವಂತ, ಒಳ್ಳೆಯವನು ಇವನಿಗೆ ಜಾಸ್ತಿ ಫಲ ಸಿಗಲಿ; ಇವನು ದಡ್ಡ, ಇವನಿಗೆ ಕಡಿಮೆ ಸಿಗಲಿ ಎಂದು ಪಂಚತತ್ವಗಳು ತಮ್ಮ ರೀತಿ-ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಇವನು ನಾಸ್ತಿಕ, ದೇವರನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದು ಅವನಿಗೆ ಅನ್ನ, ನೀರು, ಆಶ್ರಯ ಸಿಗದಂತೆ ದೇವರು ಮಾಡಿದ ಉದಾಹರಣೆಗಳಂತೂ ಕಂಡಿಲ್ಲ. ಇವನು ಪರಮ ದೇವರ ಭಕ್ತ, ಸದಾ ದೇವರ ಧ್ಯಾನದಲ್ಲೇ ಇರುತ್ತಾನೆ ಎಂದು ಆತನಿಗೆ ವಿಶೇಷ ಸವಲತ್ತುಗಳನ್ನು ದೇವರು ಒದಗಿಸಿದ ಉದಾಹರಣೆಗಳೂ ಇಲ್ಲ. ಮನುಷ್ಯ ಇಂತಹ ವ್ಯತ್ಯಾಸಗಳನ್ನು ಮಾಡಿಯಾನು. ನಮ್ಮ ದೇವರನ್ನೇ ನಂಬಬೇಕು, ಪೂಜಿಸಬೇಕು ಎಂದು ಆಗ್ರಹಿಸಿ ನರಹತ್ಯೆಗಳನ್ನು ಮಾಡುವ ಮತಾಂಧರ ನಡುವೆ ನಾವು ಬಾಳುತ್ತಿದ್ದೇವೆ. ಆದರೆ, ಸ್ವತಃ ದೇವರೇ ತನ್ನನ್ನು ಪೂಜಿಸಲಿ, ಪೂಜಿಸದಿರಲಿ ಯಾರಿಗೇ ಆಗಲಿ ತೊಂದರೆ ಕೊಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ದೇವರು ದೊಡ್ಡ ಸಮತಾವಾದಿ. ಬರುವಾಗ ಏನನ್ನೂ ತರಲು ಅವಕಾಶವಿಲ್ಲ. ಹೋಗುವಾಗಲೂ ಏನನ್ನೂ ತೆಗೆದುಕೊಂಡುಹೋಗಲು ಸಾಧ್ಯವಿಲ್ಲ. ಇರುವಾಗ ಇಡೀ ವಿಶ್ವವನ್ನೇ ಶಕ್ತ್ಯಾನುಸಾರ ಬಳಸಲು ಅವಕಾಶ ಕೊಟ್ಟಿದ್ದಾನೆ. ಎಲ್ಲರಿಗೂ ಇರುವುದು ಒಂದೇ ಸಮಯ. ಕೆಲವರಿಗೆ ಹೆಚ್ಚು ಸಮಯ, ಕೆಲವರಿಗೆ ಕಡಿಮೆ ಎಂಬುದಿಲ್ಲವೇ ಇಲ್ಲ. ದೇವರೇ ತಾರತಮ್ಯ ಮಾಡದಿರುವಾಗ ದೇವರ ಹೆಸರಿನಲ್ಲಿ ಕ್ಷುದ್ರ ಮಾನವರು ತಾರತಮ್ಯ ಮಾಡುವುದು, ಭಯೋತ್ಪಾದನೆಗೆ ತೊಡಗುವುದು, ಮುಂತಾದುವನ್ನು ನಿಯಂತ್ರಿಸುವ ಕೆಲಸವನ್ನು ಪ್ರಜ್ಞಾವಂತರು ಮಾಡಲೇಬೇಕಿದೆ. ಈ ಕೆಲಸ ಮಾಡಿದರೆ ಅದು ತಾರತಮ್ಯ ಮಾಡದ ದೇವರಿಗೆ ಸಲ್ಲಿಸುವ ನೈಜ ಪೂಜೆಯಾಗುತ್ತದೆ.  
ಏನಿಲ್ಲ ಏನಿಹುದು ಪೂರ್ಣ ಜಗವಿಹುದು
ಶಕ್ತನಿರೆ ಪಡೆಯುವೆ ದೇವನ ಕರುಣೆಯಿದು |
ಪಡೆದಿರುವೆ ನೀನು ಕೊಡದಿರಲು ದ್ರೋಹ
ಕೊಟ್ಟಷ್ಟು ಪಡೆಯುವೆ ನಿಜವು ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 11.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಗುರುವಾರ, ಫೆಬ್ರವರಿ 11, 2016

ಹೊರಬರಲಾಗದ ಮಾತುಗಳು


     'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಕಾರಣಗಳು ಹಲವಾರು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು! ಆಡಲಾಗದ ಮಾತುಗಳು ಒಳಗೇ ಇದ್ದು ಮಾಡುವ ಅವಾಂತರಗಳು ಅಷ್ಟಲ್ಲ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. ನ್ಯಾಯಾಲಯಗಳಲ್ಲಿ 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಎಂದು ಪ್ರಮಾಣ ಮಾಡಿಸುತ್ತಾರೆ. ಆದರೆ ಪ್ರಮಾಣ ಮಾಡಿದವರು ತಮಗೆ ಅನುಕೂಲವಾಗಲೆಂದು ಸತ್ಯವನ್ನು ಹೇಳದೇ ಒಳಗೆ ಉಳಿಸಿಕೊಂಡಿರುತ್ತಾರಲ್ಲಾ, ಅವೇ ಆಡಲಾಗದ ಮಾತುಗಳು! ಮಾತುಗಳನ್ನು ಮುಟ್ಟಲಾಗುವುದಿಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ.
     ಒಬ್ಬ ಒಂದು ಸುಂದರ ಹುಡುಗಿಯನ್ನು ನೋಡಿ ಅವಳು ಹೆಂಡತಿಯಾಗಿ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಂದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳೋಣ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ಅವಳ ಅಪ್ಪ ದೊಡ್ಡ ಶ್ರೀಮಂತ. ಇವನಾದರೋ ಒಂದು ಅಟ್ಲಾಸ್ ಸೈಕಲ್ ಮಾಲಿಕ.  ಅವನು ಆ ಹುಡುಗಿಯನ್ನು ಅಥವ ಅವಳ ಅಪನನ್ನು ಮಾತನಾಡಿಸಿ ತನ್ನ ಆಸೆಯ ಬಗ್ಗೆ ಹೇಳಿಕೊಳ್ಳಲು ಆಗುತ್ತಾ? ಅದು ಅವನ ಗಂಟಲ ಕೆಳಗೇ ಹೂತುಹೋಗುತ್ತೆ. ಹಾಗೆಂದು ಮಾತುಗಳು ಒಳಗೇ ಉಳಿದುಬಿಡಬಾರದು ಎಂಬುದಕ್ಕೆ ಇನ್ನೊಂದು ಉದಾಹರಣೆ ನೋಡೋಣ. ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಹೇಳೋಕೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಹುಡುಗಿಯದೂ ಅದೇ ಪರಿಸ್ಥಿತಿ! ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಒಳಗಿನ ಮಾತುಗಳನ್ನು ಹೊರಗೆ ಹೇಳಲಾಗದೆ ಸುಮ್ಮನೆ ಇದ್ದಾಗ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ!
     ಒಬ್ಬ ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದನಂತೆ. ಆ ದೇವರು ಅವನನ್ನು ದುರ್ಬಲನಾಗಿ ಮಾಡಿಬಿಟ್ಟನಂತೆ, ಏಕೆಂದರೆ ವಿಧೇಯತೆ ಕಲಿಯಲಿ ಎಂದು!. ಆರೋಗ್ಯ ಕೊಡು ಎಂದದ್ದಕ್ಕೆ ಎಡವಟ್ಟು ಮಾಡಿದ, ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲೆಂದು! ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಎಂದರೆ ಬಡತನ ಕೊಟ್ಟನಂತೆ, ಬುದ್ಧಿವಂತನಾಗಲೆಂದು! ಅಧಿಕಾರ ಕೊಡು ಅಂದರೆ ಜವಾನನ್ನಾಗಿಸಿದನಂತೆ, ಏಕೆಂದರೆ ತನ್ನನ್ನು ನೆನೆಸಿಕೊಳ್ಳುತ್ತಿರಲೆಂದು! ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂದರೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂದುಬಿಟ್ಟನಂತೆ. ಆಮೇಲೆ ಅವನು ಏನು ಕೇಳಿಕೊಳ್ಳಬೇಕು ಅಂತ  ಇದ್ದನೋ ಅದನ್ನು ಕೇಳಿಕೊಳ್ಳಲೇ ಇಲ್ಲವಂತೆ. ಏಕೆಂದರೆ ಆ ದೇವರು ಕೇಳದೆ ಬಿಟ್ಟದ್ದನ್ನು ಅವನಿಗೆ ಕೊಟ್ಟನಂತೆ. ಕೇಳದೇ ಇದ್ದರೂ ದೇವರು ಕೊಟ್ಟಿದ್ದೇನು ಎಂದು ಮಿತ್ರ ಕೇಳಿದರೆ ನಗುತ್ತಾ ಹೇಳಿದನಂತೆ, "ಅದನ್ನು ಕೇಳಬಾರದು, ನಾನು ಹೇಳಲೂಬಾರದು." ಇದೇ 'ಆಡಲಾಗದ ಮಾತು!'
     ಆಡಲಾಗದ ಮಾತುಗಳು ಹೊರಬರದಿದ್ದಾಗ ಒಳಗೇ ಕುಣಿಯುತ್ತಿರುತ್ತವೆ, ಹೊರಗೆ ಬರಲು ಚಡಪಡಿಸುತ್ತಿರುತ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರುವುದಿಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುತ್ತದೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು. ಏಕೆಂದರೆ ಮಾತುಗಳಾಗಿ ಹೊರಬರುವುದು ಅವೇ!
     'ಇದ್ದದ್ದನ್ನು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!' ಎಂಬ ಗಾದೆ ಸತ್ಯವನ್ನು ಹೇಳುವಾಗ ಎಚ್ಚರಿಕೆ ಇರಬೇಕೆಂದು ಹೇಳುತ್ತದೆ. 'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನಬ್ರೂಯಾತ್ ಸತ್ಯಮಪ್ರಿಯಮ್'- ಸತ್ಯವನ್ನು ಹೇಳಬೇಕು, ಪ್ರಿಯವಾಗಿ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಒಬ್ಬ ದುಷ್ಟ ಪೈಲ್ವಾನನಿಂದ ತೊಂದರೆಯಾದರೂ ಮಾತನಾಡದೆ ಸುಮ್ಮನಿರಬೇಕಾಗುತ್ತದೆ. ಇಷ್ಟವಿರಲಿ, ಇಲ್ಲದಿರಲಿ ಸಂಬಳ ಕೊಡುವ ಧಣಿಯನ್ನು ಹೊಗಳಲೇಬೇಕು. ಬೈದುಕೊಳ್ಳುವುದೇನಾದರೂ ಇದ್ದರೆ ಹೊರಗೆ ತೋರಿಸಿಕೊಳ್ಳದಂತೆ ಒಳಗೊಳಗೇ ಶಪಿಸಬೇಕು. ಒಳ್ಳೆಯ ಕಾರಣಗಳಿಂದಲೂ ಕೆಲವೊಮ್ಮೆ ಮಾತುಗಳನ್ನು ಅದುಮಿಡಬೇಕಾಗುತ್ತದೆ. ಒಂದು ಉದಾಹರಣೆ ನೋಡೋಣ. ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಮನೆಯ ಬಾಗಿಲು ಬಡಿಯುತ್ತಾನೆ ಎಂದಿಟ್ಟುಕೊಳ್ಳೋಣ. ಬಾಗಿಲು ತೆರೆದ ತಕ್ಷಣ ಆ ಅಪರಿಚಿತ ಒಳಗೆ ನುಗ್ಗಿ ಬಾಗಿಲು ಹಾಕಿ ಮನೆಯ ಮಾಲಿಕನ ಕಾಲು ಹಿಡಿದು ತನ್ನನ್ನು ಕಾಪಾಡಲು ಕೋರುತ್ತಾನೆ ಎಂದುಕೊಳ್ಳೋಣ. ಏನಾಗುತ್ತಿದೆ ಎಂದು ತಿಳಿಯದೆ ಮಾಲಿಕ ಕಕ್ಕಾಬಿಕ್ಕಿಯಾಗಿದ್ದಾಗ ಪುನಃ ಮನೆಯ ಬಾಗಿಲು ದಬದಬ ಬಡಿಯುವ ಸದ್ದಾಗುತ್ತದೆ. ಒಳಗಿದ್ದವನು ಕರುಣಾಜನಕವಾಗಿ ನೋಡುತ್ತಾನೆ. ತಕ್ಷಣದಲ್ಲಿ ಆತನನ್ನು ಬಚ್ಚಲುಮನೆಯಲ್ಲಿ ಅಡಗಿಕೊಳ್ಳಲು ಸನ್ನೆಯಿಂದ ಸೂಚಿಸಿ ಬಾಗಿಲು ತೆರೆದಾಗ ಐದಾರು ಜನರು ದೊಣ್ಣೆ ಮಚ್ಚುಗಳನ್ನು ಹಿಡಿದು, 'ಮನೆಯೊಳಗೆ ಯಾರಾದರೂ ಬಂದರಾ?' ಎಂದು ಕೇಳುತ್ತಾರೆ. ಅವನು ಸತ್ಯಸಂಧನಂತೆ 'ಹೌದು' ಎಂದರೆ ಕಣ್ಣ ಮುಂದೆಯೇ ಒಂದು ಕೊಲೆ ನಡೆದುಹೋಗಿಬಿಡಬಹುದು. ಬದಲಾಗಿ, 'ಯಾರು? ಇಲ್ಲಿ ಯಾರೂ ಬರಲಿಲ್ಲವಲ್ಲಾ!' ಅಂದರೆ? ಬಂದವರು ಹೊರಗೆ ಹುಡುಕಲು ಓಡುತ್ತಾರೆ. ಅಡಗಿಕೊಂಡಿದ್ದವನು ನಂತರ ಕೈಮುಗಿದು ಕೃತಜ್ಞತೆಯಿಂದ ಕಣ್ಣೀರಿಡುತ್ತಾ ಹೊರಗೆ ಬೇರೊಂದು ದಾರಿಯಲ್ಲಿ ಓಡಿಹೋಗುತ್ತಾನೆ. 'ಏನು? ಏಕೆ?' ಏನನ್ನೂ ತಿಳಿಯದವನು ಮುಂದೆ ತನಗೆ ಏನೂ ಗೊತ್ತಿಲ್ಲದಂತೆ ಸುಮ್ಮನೇ ಇರಬೇಕಾಗುತ್ತದೆ.
     ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆಯ ಮಾತುಗಳೆಂದು ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಎಂದು ಪ್ರಾರ್ಥಿಸಬೇಕು.
     ಸ್ವಾಮಿ ದಯಾನಂದ ಸರಸ್ವತಿಯವರು ಹೇಳುತ್ತಿದ್ದರು, "ಸತ್ಯವನ್ನೇ ಹೇಳುತ್ತೇನೆಂದು ಶಪಥ ಮಾಡಬೇಡಿ. ಆದರೆ, ಸತ್ಯವನ್ನೇ ಹೇಳಿ. ಏಕೆಂದರೆ, ಶಪಥ ಮಾಡುವ ಕಾಲಕ್ಕೆ ಸತ್ಯ ಅನ್ನುವುದನ್ನು ನೀವೇ ತಪ್ಪು ತಿಳಿದುಕೊಂಡಿರಬಹುದು, ಅಥವ ಯಾವುದನ್ನೋ ಸತ್ಯವೆಂದು ತಪ್ಪು ತಿಳಿದಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ನಿಜ, ಬೇರೆಯವರಿಗೆ ಹಾನಿ ಉಂಟುಮಾಡುವಂತಹದು ಸತ್ಯವಲ್ಲ. ತಮಗೆ ಮಾತ್ರ ಒಳ್ಳೆಯದಾಗಬೇಕೆಂದು ಬಯಸುವುದೂ ಸತ್ಯವಲ್ಲ. ನಮ್ಮ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ರೀತಿ ಇದ್ದಲ್ಲಿ ಆಡಲಾಗದ ಮಾತುಗಳು ಹುಟ್ಟಲಾರವು, ಯಾರಿಗೂ ತೊಂದರೆ ಕೊಡಲಾರವು.
-ಕ.ವೆಂ.ನಾಗರಾಜ್.
***************
ದಿನಾಂಕ 18.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಫೆಬ್ರವರಿ 4, 2016

ಹೀಗೆಯೇ ಇರುವುದಿಲ್ಲ!


ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||
     'ಇದು ಹೀಗೆಯೇ ಇರುವುದಿಲ್ಲ' ಎಂಬ ಅರಿವು ನಮಗೆ ಬರುವುದೇ ಇಲ್ಲ; ಬಂದಿದ್ದರೆ ನಾವು ಹೀಗೆ ಇರುತ್ತಿರಲಿಲ್ಲ. ಈ ಭೂಮಿಯನ್ನು ಎಂತೆಂತಹ ರಾಜರು, ಮಹಾರಾಜರು, ಚಕ್ರವರ್ತಿಗಳು ಆಳಿಹೋಗಿದ್ದಾರೆ| ಒಬ್ಬರಿಗಿಂತ ಒಬ್ಬರು ಪ್ರಚಂಡರೇ! ಸಮುದ್ರಕ್ಕೇ ಸೇತುವೆ ಕಟ್ಟಿ ದುಷ್ಟ ರಾವಣನನ್ನು ಸದೆಬಡಿದ ರಾಮಚಂದ್ರ, ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಿಷ್ಠರಾಗಿದ್ದ ಕೌರವರನ್ನು ಸೋಲಿಸಿ ಚಕ್ರಾಧಿಪನೆನಿಸಿದ ಧರ್ಮರಾಯ ಮುಂತಾದವರು ಈ ಭೂಮಿಗೆ ಒಡೆಯರೆನಿಸಿದ್ದರು. ಸೂರ್ಯ ಮುಳುಗದ ಸಾಮ್ಯಾಜ್ಯದ ನಾಯಕರೆನಿಸಿದ್ದ ಬ್ರಿಟಿಷರು ಶತಮಾನಗಳ ಕಾಲ ಈ ದೇಶವನ್ನು ಆಳಿದ್ದರು. ಹಲವು ಶತಮಾನಗಳ ಕಾಲ ಮೊಗಲರ ಅಧಿಪತ್ಯದಲ್ಲಿ ದೇಶವಿತ್ತು. ಛತ್ರಪತಿ ಶಿವಾಜಿ, ಅಶೋಕ, ವಿಷ್ಣುವರ್ಧನ, ಕೃಷ್ಣದೇವರಾಯ, ರಾಣಾ ಪ್ರತಾಪಸಿಂಹರಂತಹವರೂ ದೊಡ್ಡ ಸಾಮ್ರಾಜ್ಯಗಳಿಗೆ ರಾಜರಾಗಿದ್ದರು. ಅವರುಗಳು ಯಾರೂ ಈಗ ಇಲ್ಲ. ಆದರೆ ಅವರು ಆಳಿದ್ದ ಭೂಮಿ ಮಾತ್ರ ಅವರೊಡನೆ ಹೋಗದೆ ಇಲ್ಲಿಯೇ ಇದೆ. ಹುಟ್ಟುವಾಗ ನಮ್ಮೊಡನೆ ಏನೂ ಇರಲಿಲ್ಲ, ಸಾಯುವಾಗಲೂ ನಮ್ಮೊಡನೆ ಯಾವುದೂ ಬರುವುದಿಲ್ಲ. ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಹೆಸರುಗಳನ್ನು ಕೇಳುತ್ತಿರುತ್ತೇವೆ. ಅವರ ಶ್ರೀಮಂತಿಕೆ ಅವರು ಬದುಕಿರುವವರೆಗೆ ಮಾತ್ರ! ಸತ್ತಾಗ ಒಂದು ಗುಂಡುಸೂಜಿಯನ್ನೂ ಅವರು ತೆಗೆದುಕೊಂಡುಹೋಗಲಾರರು! ಸ್ವಿಸ್ ಬ್ಯಾಂಕಿನಲ್ಲಿ ಗುಟ್ಟಾಗಿ ಸಾವಿರಾರು ಕೋಟಿ ಸಂಪತ್ತು ಇಟ್ಟು ದೇಶಕ್ಕೆ ಮೋಸ ಮಾಡಬಹುದು. ಆದರೆ ಸಾಯುವಾಗ ಗುಟ್ಟಾಗಿ ತೆಗೆದುಕೊಂಡು ಹೋಗಲು ಮಾತ್ರ ಆಗದು!
     'ಹೀಗೆಯೇ ಇರುವುದಿಲ್ಲ!' ನೀವು ಒಬ್ಬ ದೊಡ್ಡ ಅಧಿಕಾರಸ್ಥಾನದಲ್ಲಿರುವಿರೇ? ಈ ಅಧಿಕಾರ ನಿಮ್ಮೊಂದಿಗೆ ಸದಾ ಇರಲಾರದು. ಮುಂದೊಮ್ಮೆ ನಿಮಗಿಂತ ಅರ್ಹ ವ್ಯಕ್ತಿಯೊಬ್ಬರು ಆ ಸ್ಥಾನದಲ್ಲಿ ಬಂದು ಕುಳಿತಾರು! ಯಾವುದೋ ಕಾರಣದಿಂದ ನೀವು ಅಧಿಕಾರ ಕಳೆದುಕೊಳ್ಳಬಹುದು. ಅದಕ್ಕೆ ನಿಮ್ಮ ವಯಸ್ಸು, ಅನಾರೋಗ್ಯ, ವೈಫಲ್ಯ ಇತ್ಯಾದಿಗಳು ಕಾರಣವಾಗಬಹುದು. ಗಳಿಸಿಕೊಂಡ ಅಧಿಕಾರ ಕಳೆದುಹೋಗುವುದು ಅಸಹಜವಲ್ಲ, ಆದರೆ ನೋವು ಕೊಡುವಂತಹದು. ಅಧಿಕಾರ ಶಾಶ್ವತವಲ್ಲ ಎಂಬ ಅರಿವಿದ್ದರೆ ದುಃಖದ ಪ್ರಮಾಣ ಕಡಿಮೆಯಾಗುತ್ತದೆ.
ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲ |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||
     'ಹೀಗೆಯೇ ಇರುವುದಿಲ್ಲ!' ನಿಜ, ಸ್ವತಃ ನಾವು ಹೀಗೆಯೇ ಇರುತ್ತೇವೆಯೇ? ಹುಟ್ಟಿದಾಗ ಸಣ್ಣ ಮಗುವಾಗಿ ಮುದ್ದು ಮುದ್ದಾಗಿದ್ದವರು ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಾ ಹೋಗುತ್ತೇವೆ. ತುಂಟಾಟ ಮಾಡುವ ಬಾಲಕರಾಗುತ್ತೇವೆ, ಏನು ಬೇಕಾದರೂ ಮಾಡಬಲ್ಲೆವೆಂಬ ಹುಮ್ಮಸ್ಸಿನ ತರುಣರಾಗುತ್ತೇವೆ, ಪ್ರೌಢರಾಗಿ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತೇವೆ, ಮುಂದೊಮ್ಮೆ ವೃದ್ಧರಾಗಿ ಕೈಕಾಲುಗಳಲ್ಲಿ ಶಕ್ತಿ ಕುಂದಿ ನಿತ್ರಾಣರಾಗುತ್ತೇವೆ. ವಯಸ್ಸಿನಲ್ಲಿದ್ದಾಗ, ಅಧಿಕಾರವಿದ್ದಾಗ ಯಜಮಾನರಾಗಿ ಮೆರೆದಿದ್ದವರು ಇತರರ ಆಶ್ರಯ ಬಯಸುವ ಪ್ರಸಂಗ ಬರುತ್ತದೆ. ನಡು ವಯಸ್ಸಿನಲ್ಲಿ ಇರುವ ಒಳ್ಳೆಯ ವರಮಾನ ಬರುವ ನೌಕರಿ ಅಥವ ವಹಿವಾಟು, ಸುಂದರ ಪತ್ನಿ, ಚುರುಕಿನ ಮಕ್ಕಳು, ಭವ್ಯವಾದ ವಾಸದ ಬಂಗಲೆ, ಓಡಾಡಲು ಐಷಾರಾಮಿ ಕಾರು, ಇತ್ಯಾದಿಗಳೆಲ್ಲವೂ ಮೊದಲು ಇರಲಿಲ್ಲ ಅಲ್ಲವೇ? ಕಾಲ ಸರಿದಂತೆ ನಮಗೂ ವಯಸ್ಸಾಗುತ್ತದೆ, ಪತ್ನಿಗೂ ವಯಸ್ಸಾಗುತ್ತದೆ. ಸೌಂದರ್ಯ ಮಾಸುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ವಿವಿಧ ಕಾಯಿಲೆಗಳು ಅಡರಿಕೊಳ್ಳುತ್ತವೆ, ತಲೆಕೂದಲು ನೆರೆಯುತ್ತದೆ, ಉದುರುತ್ತದೆ. ಇದು ಸಹಜ ಕ್ರಿಯೆ. ಮೊದಲು ಇಲ್ಲದುದು ಕೊನೆಯಲ್ಲೂ ಇರುವುದಿಲ್ಲ. ಈ ಅರಿವು ಇದ್ದರೆ ಪೂರ್ವ ತಯಾರಿ ಮಾಡಿಕೊಂಡು ಸಂಧ್ಯಾಕಾಲವನ್ನು ಸಾಧ್ಯವಾದಷ್ಟು ಹಿತವಾಗಿ ಕಳೆಯಲು ಅವಕಾಶವಿರುತ್ತದೆ.
ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ ||
     'ಹೀಗೆಯೇ ಇರುವುದಿಲ್ಲ!' ಹಗಲು, ರಾತ್ರಿಗಳು ಒಂದಾದ ನಂತರ ಒಂದು ಬರುತ್ತವೆ, ಹೋಗುತ್ತವೆ. ಕಷ್ಟಗಳು ಬಂದು ಅನುಭವಿಸಲಾಗದೆ ಒದ್ದಾಡುವಾಗ ತಾಳ್ಮೆಯಿಂದಿರಲು ಈ ಸೂತ್ರ ನೆರವಾಗುತ್ತದೆ. ಕಷ್ಟಗಳು ಹೊಸದಾಗಿ ಬಂದದ್ದಲ್ಲವೇ? ಒಂದೊಮ್ಮೆ ಹೋಗುತ್ತವೆ. ಅಲ್ಲಿಯವರೆಗೂ ಸಹಿಸುವ ಮತ್ತು ಅದನ್ನು ಎದುರಿಸುವ ಶಕ್ತಿ ಇಟ್ಟುಕೊಳ್ಳಬೇಕಷ್ಟೆ. ಈಸಬೇಕು, ಇದ್ದು ಜೈಸಬೇಕು! ಬಂದದ್ದು ಹೋಗಲೇಬೇಕು, ಹೋದದ್ದು ಬರಲೇಬೇಕು, ಇದು ಪ್ರಕೃತಿನಿಯಮವೆಂದು ಅರಿತರೆ ಅರ್ಧ ಕಷ್ಟ ಕಡಿಮೆಯಾದಂತೆಯೇ.
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢ ||
     'ಹೀಗೆಯೇ ಇರುವುದಿಲ್ಲ!' - ಇದು ಸಮದರ್ಶಿಗೆ, ಸಾಧಕನಿಗೆ ಅರ್ಥವಾಗುವ ವಿಚಾರ. ಜನಸಾಮಾನ್ಯರಾದ ನಮಗೆ ಇದು ಅರ್ಥವಾಗುವುದು ಕಷ್ಟ. ಆ ದೇವರು ಅದು ಯಾವ ಭ್ರಾಮಕ ಅಂಶವನ್ನು ನಮ್ಮೊಳಗೆ ತುರುಕಿದ್ದಾನೋ ಗೊತ್ತಿಲ್ಲ. ನಾವು ಚಿರಂಜೀವಿಗಳಂತೆ ವರ್ತಿಸುತ್ತೇವೆ, ಎಲ್ಲವೂ ನಮಗೆ ಬೇಕು ಎಂಬ ಹಪಾಹಪಿಯಲ್ಲೇ ಜೀವನ ಕಳೆದುಬಿಡುತ್ತೇವೆ. ಕಳೆದುಕೊಳ್ಳಲು ಏನೂ ಇರದವನಿಗೆ ಇರುವ ನೆಮ್ಮದಿ ಎಲ್ಲವೂ ಇರುವ ಶ್ರೀಮಂತನಿಗೆ ಇರಲಾರದು. ನೈಜ ಪರಿವ್ರಾಜಕರು, ಅವಧೂತರಲ್ಲಿ ಈ ಗುಣವನ್ನು ಕಾಣಬಹುದು. ಯಾವುದೇ ವಸ್ತು, ಸಂಗತಿ, ಜೀವಿ ಇರುವಂತೆಯೇ ಇರುವುದಿಲ್ಲ, ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಎಂಬ ಅರಿವು ಮೂಡಿದಾಗ ಅದು ಚಮತ್ಕಾರವನ್ನೇ ಮಾಡುತ್ತದೆ. ನವಕೋಟಿ ನಾರಾಯಣನೆಂದು ಹೆಸರು ಪಡೆದಿದ್ದ ಅಂದಿನ ಕಾಲಕ್ಕೆ ಆಗರ್ಭ ಶ್ರೀಮಂತನಾಗಿದ್ದವನು ಎಲ್ಲವನ್ನೂ ದಾನ ಮಾಡಿ ತಂಬೂರಿ ಹಿಡಿದು ಮನೆ ಬಿಟ್ಟು ಹೊರಟು ಪುರಂದರದಾಸನಾದದ್ದು, ಪರರನ್ನು ದೋಚಿ ಜೀವಿಸುತ್ತಿದ್ದ ಬೇಟೆಗಾರ ವಾಲ್ಮೀಕಿಯಾದದ್ದು, ಬುದ್ಧ ಮತ್ತು ಮಹಾವೀರರು ಐಹಿಕ ಸುಖ-ಭೋಗಗಳನ್ನು ತ್ಯಜಿಸಿ ವಿರಾಗಿಗಳಾದದ್ದು, ಇತ್ಯಾದಿಗಳೆಲ್ಲವೂ ಈ ಅರಿವು ಅವರಲ್ಲಿ ಮೂಡಿದುದರ ಫಲವೇ ಆಗಿದೆ. ಶಾಂತರಾಗಿ ಕುಳಿತು ಚಿಂತಿಸಿದರೆ ಮೂಡುವ ಈ ಅರಿವು ಕಷ್ಟ ಬಂದರೆ ಅಳುಕದ, ಸುಖದಲ್ಲಿ ಹಿಗ್ಗದ, ನಮ್ಮಲ್ಲಿ ಮಾನವೀಯತೆಯ ಒರತೆಯನ್ನು ಚಿಮ್ಮಿಸುವ ಸಾಧನವಾಗದೇ ಇರದು.
-ಕ.ವೆಂ.ನಾಗರಾಜ್.
**************
ದಿನಾಂಕ 4.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜನವರಿ 28, 2016

ಪಾದ ಪುರಾಣ - Paada Purana


     ಭೂಮಿತಾಯಿ ಜೀವಿಗಳ ಪಾದಸ್ಪರ್ಷದಿಂದ ಪುಲಕಿತಳಾಗುತ್ತಾಳೆ! ಭೂಮಿಯೊಂದಿಗೆ ಅತ್ಯಂತ ನಿಕಟ ಮತ್ತು ಅತ್ಯಂತ ದೀರ್ಘಕಾಲ ಸಂಪರ್ಕ ಹೊಂದಿರುವ ಅಂಗ ಪಾದಗಳೇ ಆಗಿವೆ! ಬೆಳಿಗ್ಗೆ ಎದ್ದ ತಕ್ಷಣ ಕೆಲವರು 'ಕರಾಗ್ರೇ ವಸತೇ ಲಕ್ಷ್ಮೀ . .' ಮಂತ್ರ ಪಠಿಸುತ್ತಾ ಕರಗಳನ್ನು ನೋಡಿಕೊಂಡು ಕಣ್ಣಿಗೆ ಸ್ಪರ್ಷಿಸುತ್ತಾರೆ. ಹಾಗೆಯೇ ಭೂಮಿತಾಯಿಯನ್ನು ನೆನೆಯುತ್ತಾ 'ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ತಮ್ಮ ಪಾದಗಳು ಭೂಮಿತಾಯಿಯನ್ನು ಸ್ಪರ್ಷಿಸುತ್ತಿರುವುದಕ್ಕೆ ಕ್ಷಮೆಯಿರಲಿ ಎಂದು ವಿನೀತರಾಗಿ ಪ್ರಾರ್ಥಿಸುತ್ತಾರೆ. ಹಾಗೆಂದು ಪಾದಗಳು ಭೂಮಿಯನ್ನು ಸ್ಪರ್ಷಿಸದೆ ಇರುವುದಕ್ಕೆ ಸಾಧ್ಯವೇ? ಪಾದಗಳು ಇರುವುದೇ ಆ ಕಾರ್ಯಕ್ಕಾಗಿ! ಕೈಯಿಂದ, ತಲೆಯಿಂದ ನಡೆಯುವುದಕ್ಕೆ ಆಗುತ್ತದೆಯೇ? ನೀವು ಹೆಮ್ಮೆಯಿಂದ ತಲೆ ಎತ್ತಿ ನಿಂತಿರಬಹುದು, ನಿಮ್ಮ ಕಣ್ಣುಗಳು ಆಕಾಶದಲ್ಲಿನ ಚಂದ್ರ, ನಕ್ಷತ್ರಗಳನ್ನು ದಿಟ್ಟಿಸುತ್ತಿರಬಹುದು, ನಿಮ್ಮ ಬಾಹುಗಳು ಚಾಚಿಕೊಂಡು ಎಲ್ಲವನ್ನೂ ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಿರಬಹುದು. ಆದರೆ, ಇವೆಲ್ಲವೂ ನಿಮಗೆ ಸಾಧ್ಯವಾಗುವುದು ನಿಮ್ಮ ಪಾದಗಳು ಭದ್ರವಾಗಿ ನೆಲದ ಮೇಲೆ ಊರಿ ನಿಂತಿರುವುದರಿಂದ ಎಂಬುದನ್ನು ಮರೆಯಲಾಗದು.
     ಆಹಾ! ಪಾದಗಳ ಹಿರಿಮೆಯೇ ಹಿರಿಮೆ! ಹಿರಿಯರಿಗೆ, ಗೌರವ ಸಲ್ಲಿಸಲು ಅರ್ಹರಾದವರಿಗೆ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ಸಂಪ್ರದಾಯ. ಅವರ ಕಾಲುಗಳನ್ನು ತೊಳೆದು ಪೂಜಿಸುವವರೂ ಇದ್ದಾರೆ. ಯಾರಾದರೂ ತಲೆಗೆ, ಹೊಟ್ಟೆಗೆ, ಬೆನ್ನಿಗೆ, ಕೈಕಾಲುಗಳಿಗೆ ನಮಸ್ಕಾರ ಮಾಡುತ್ತಾರೆಯೇ? ಯಾರಾದರೂ ಸತ್ತರೆ ದೇವರ ಪಾದ ಸೇರಿದ ಅನ್ನುತ್ತಾರೆ. ರಾಮ ವನವಾಸಕ್ಕೆ ಹೋದ ಸಂದರ್ಭದಲ್ಲಿ ಭರತ ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ತಂದು ರಾಮನ ಪ್ರತಿನಿಧಿಯೆಂಬಂತೆ ಅವನು ಬರುವವರೆಗೂ ರಾಜ್ಯವಾಳಿದ್ದ. 'ಕ್ಷಮಿಸುವವರೆಗೂ ನಿಮ್ಮ ಕಾಲು ಬಿಡುವುದಿಲ್ಲ' ಎಂದು ಬೇಡುವವರನ್ನೂ ಕಂಡಿದ್ದೇವೆ. ಅಪರಾಧ ಮಾಡಿದವರು ಕಾಲು ಹಿಡಿದುಕೊಂಡರೆ ಕ್ಷಮೆ ಸಿಕ್ಕೀತು! ತಲೆಯನ್ನೋ ಮತ್ತೇನನ್ನೋ ಹಿಡಿದರೆ ಏಟುಗಳು ಬಿದ್ದಾವು! ನಮ್ಮ ರಾಜಕೀಯ ಪುಡಾರಿಗಳನ್ನೇ ನೋಡಿ, ಅವರು ಬಿದ್ದರೆ ಕಾಲು ಹಿಡಿಯುತ್ತಾರೆ, ಎದ್ದರೆ ಎದೆಗೇ ಒದೆಯುತ್ತಾರೆ! ಎರಡರಲ್ಲೂ ಪ್ರಧಾನವಾಗಿರುವುದು ಕಾಲುಗಳೇ! ಇಂತಹ ಮಹಾಮಹಿಮ ಕಾಲುಗಳಿಗೆ ನಮಸ್ಕಾರ!
     ಹಿಂದೆ ಅವರವರ ವೃತ್ತಿ, ಕರ್ಮಗಳನ್ನು ಅನುಸರಿಸಿ ನಾಲ್ಕು ವರ್ಣಾಶ್ರಮಗಳನ್ನು -ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ- ಎಂದು ವಿಂಗಡಿಸಿದ್ದರು. ಯಾವುದೋ ನಮಗೆ ಗೊತ್ತಿಲ್ಲದಷ್ಟು ಹಿಂದಿನ ಕಾಲದಲ್ಲಿ ಇದು ವಿರೂಪಗೊಂಡು ಜಾತಿಗಳಾಗಿಬಿಟ್ಟವು. ವರ್ಣವ್ಯವಸ್ಥೆಯನ್ನು ಕುರೂಪಗೊಳಿಸಿ, ಸ್ವಾರ್ಥಕ್ಕೆ ಆದ್ಯತೆ ನೀಡಿ, ವ್ಯಕ್ತಿಯ ಘನತೆ ಗಾಂಭೀರ್ಯಗಳನ್ನು ಕಡೆಗಣಿಸಿ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯ ಕೊಟ್ಟಿರುವ ಇಂದಿನ ಜಾತಿಪದ್ಧತಿಗೂ, ವೈಜ್ಞಾನಿಕವೂ, ಬುದ್ಧಿಸಂಗತವೂ ಆದ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. ಮುಖದಿಂದ ಬ್ರಾಹ್ಮಣರೂ, ಉದರದಿಂದ ವೈಶ್ಯರೂ, ಬಾಹುಗಳಿಂದ ಕ್ಷತ್ರಿಯರೂ ಮತ್ತು ಪಾದಗಳಿಂದ ಶೂದ್ರರು ಜನಿಸಿದರೆಂದು ಹೇಳಿದ್ದರು. ಈ ವಿಭಾಗಗಳನ್ನು ಜಾತಿಸೂಚಕವಾಗಿ ನೋಡಬಾರದು. ಇದೊಂದು ರೂಪಕವಷ್ಟೆ. ಈ ಅಂಗಗಳಿಂದ ಜೀವಿಗಳ ಜನನವಾಗುವುದಿಲ್ಲವೆಂಬುದು ಸಿದ್ಧಸಂಗತಿ. ಪ್ರಪಂಚದಲ್ಲಿ ವಿಭಿನ್ನತೆ ಅನ್ನುವುದು ಸಹಜವಾದ ಸಂಗತಿ. ಎಲ್ಲರೂ ಒಂದೇ ರೀತಿಯ, ಒಂದೇ ಆಕಾರದ, ಒಂದೇ ವಿಚಾರದವರು ಇರಲು ಸಾಧ್ಯವಿದೆಯೇ? ವಿಭಿನ್ನತೆಯಲ್ಲಿ ಏಕತೆ, ಸಮಾನತೆಗಳನ್ನು ರೂಢಿಸಿಕೊಂಡಾಗಲೇ ಸಮಾಜ ಸ್ವಸ್ಥವಾಗಿರುತ್ತದೆ. ನಾಸ್ತಿಕವಾದದ ಕಮ್ಯೂನಿಸ್ಟ್ ದೇಶಗಳಲ್ಲಿ ಸಹ ವಿದ್ಯಾವಂತರು, ವ್ಯಾಪಾರಿಗಳು, ಸೈನಿಕರು ಮತ್ತು ಶ್ರಮಜೀವಿಗಳು ಇದ್ದೇ ಇರುತ್ತಾರೆ. ಅವರುಗಳಿಗೂ ಮೇಲೆ ಹೇಳಿದ ನಾಲ್ಕು ವಿಭಾಗಗಳು ಅನ್ವಯವಾಗುತ್ತದೆಯಲ್ಲವೇ? ಬ್ರಾಹ್ಮಣ, ಶೂದ್ರ ಇತ್ಯಾದಿ ಪದಗಳ ಬಳಕೆ ಅಪಥ್ಯವೆನಿಸಿದರೆ ಈ ನಾಲ್ಕು ವಿಭಾಗಗಳ ಹೆಸರನ್ನೇ ಇಟ್ಟುಕೊಳ್ಳಬಹುದು. ಶ್ರಮ ಅಥವ ಕರ್ಮ ಪ್ರಧಾನವಾದ ಸಂಗತಿಗಳಿಗೆ ಪಾದಗಳು ಅತ್ಯಾವಶ್ಯಕ. ಆಗಿರುವುದರಿಂದಲೇ ಉಳಿದ ವಿಭಾಗಗಳಿಗೆ ಬೆಲೆ ಅಥವ ಗೌರವ ಸಾಧ್ಯ. ಒಂದು ಕಟ್ಟಡ ಸುಂದರವಾಗಿರಬೇಕಾದರೆ ತಳಪಾಯ ಭದ್ರವಾಗಿರಬೇಕು. ಪಾದಗಳೂ ಸಹ ಶರೀರವೆಂಬ ಅರಮನೆಯ ತಳಪಾಯವೇ ಆಗಿವೆ. ಪಾದಗಳನ್ನು ಕೀಳು ಎಂಬ ಭಾವನೆಯಿಂದ ನೋಡಿದರೆ, ಅರ್ಥ ಮಾಡಿಕೊಂಡರೆ ಅದು ಅಲ್ಪಜ್ಞಾನದ ಸಂಕೇತವಲ್ಲದೆ ಮತ್ತೇನೂ ಅಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಯಾವುದೂ ಕೀಳಲ್ಲ, ಯಾರೂ ಕೀಳಲ್ಲ. ಎಲ್ಲವೂ ಉತ್ತಮವೇ, ಎಲ್ಲರೂ ಉತ್ತಮರೇ.
     ಸಮಾನತೆಯ ಪಾಠವನ್ನು ನಮ್ಮ ನಡೆಯುವ ರೀತಿ ನಮಗೆ ಕಲಿಸುತ್ತಿದೆ. ಒಂದು ಕಾಲು ಮುಂದಿಡಬೇಕಾದರೆ ಇನ್ನೊಂದು ಕಾಲು ನೆಲವನ್ನು ಭದ್ರವಾಗಿ ಊರಿ ಸಹಕರಿಸುತ್ತದೆ. ನಂತರದಲ್ಲಿ ಮುಂದೆ ಹೋದ ಕಾಲು ಊರಿ ನಿಂತು ಹಿಂದಿನ ಕಾಲನ್ನು ಮುಂದೆ ಹೋಗಲು ಅನುವು ಮಾಡಿಕೊಡುತ್ತದೆ. ಎಂತಹ ಹೊಂದಾಣಿಕೆ! ನಾವು ಮುಂದುವರೆಯಬೇಕು. ಜೊತೆಜೊತೆಗೆ ಹಿಂದಿರುವವರನ್ನು ಮುಂದೆ ಬರಲು ಸಹಕಾರ ನೀಡಬೇಕು, ಮತ್ತೆ ಮುಂದೆ ಹೋಗಬೇಕು, ಮತ್ತೆ ಹಿಂದಿರುವವರನ್ನು ಮುಂದೆ ಬರಲು ಪ್ರೇರಿಸಬೇಕು. ಇದು ನೈಜ ಸಮಾನತೆಯ ರೀತಿ. ಸಮಾನತೆ ಎಂದರೆ ಎಲ್ಲರೂ ಒಂದೇ ಕಡೆ ನಿಲ್ಲುವುದಲ್ಲ ಆಥವ ಮುಂದೆ ಹೋಗುವವರನ್ನು ತಡೆದು ನಿಲ್ಲಿಸುವುದಲ್ಲ. ಅಭಿವೃದ್ಧಿ ಹೊಂದಲು ಮುಂದೆ ಹೋಗಲೇಬೇಕು, ಹಿಂದುಳಿದವರನ್ನು ಮುಂದೆ ಬರಲು ಸಹಕರಿಸಲೇಬೇಕು. ಸಮಾಜದ ವಿಭಿನ್ನ ಅಂಗಗಳ ಪ್ರತಿನಿಧಿಗಳು ಪೂರ್ವಾಗ್ರಹ ಪೀಡಿತ ವಿಚಾರಗಳನ್ನು ಬದಿಗಿರಿಸಿ, ಪರಸ್ಪರ ದ್ವೇಷಿಗಳಂತೆ ನೋಡದೆ ಒಬ್ಬರು ಇನ್ನೊಬ್ಬರಿಗೆ ಪೂರಕ ಅಥವ ಆಧಾರವಾಗಿದ್ದೇವೆಂಬುದನ್ನು ಕಂಡುಕೊಂಡರೆ ಸಮಾಜದಲ್ಲಿ ನೆಮ್ಮದಿ, ಶಾಂತಿ ನೆಲೆಸೀತು!
     ಕಾಲುಗಳ ಮಹಿಮೆಯನ್ನು ಹೇಳುವ ಕೆಲವು ಪದಬಳಕೆಗಳನ್ನು ಗಮನಿಸೋಣ. ಕಾಲೆಳೆಯುವುದು ಅಂದರೆ ಪ್ರಗತಿಗೆ ಅಡ್ಡಿಯಾಗುವುದು, ಕಾಲಿಗೆ ಬೀಳುವುದು ಅಂದರೆ ಶರಣಾಗುವುದು, ಅಡ್ಡಗಾಲು ಹಾಕುವುದು/ಕಾಲು ಕೊಡುವುದು ಅಂದರೆ ತೊಂದರೆ ಕೊಡುವುದು, ಕಾಲು ಮುರೀತೀನಿ ಅಂದರೆ ನನ್ನ ತಂಟೆಗೆ ಬಂದರೆ ಹುಷಾರ್ ಎನ್ನುವುದು, ಕಾಲು ಕಟ್ಟಿಕೊಳ್ಳುವುದು ಅಂದರೆ ಉಪಕಾರ ಬಯಸಿ ಬೇಡಿಕೊಳ್ಳುವುದು, ಕಾಲು ಚಾಚು ಅಂದರೆ ಆರಾಮವಾಗಿರುವುದು, ಹೆಜ್ಜೆಗೆ ಹೆಜ್ಜೆ ಸೇರಿಸು ಅಂದರೆ ಜೊತೆಯಾಗಿ ಹೋಗುವುದು, ಸ್ವಂತ ಕಾಲಿನ ಮೇಲೆ ನಿಲ್ಲುವುದು ಅಂದರೆ ಪರಾವಲಂಬಿಯಾಗದಿರುವುದು- ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಅವನು ಕಾಲಿಟ್ಟ ಕಡೆ ಸ್ಮಶಾನವಾಗುತ್ತದೆ ಎಂದು ದುಷ್ಟರ ಕುರಿತು ಹೇಳುವಂತೆ, ಅವರು ಕಾಲಿಟ್ಟಲ್ಲಿ ಒಳ್ಳೆಯ ಮಳೆ, ಬೆಳೆ ಆಗುತ್ತದೆ ಎಂದು ಸತ್ಪುರುಷರ ಕುರಿತು ಹೇಳುತ್ತಾರೆ. ಒಟ್ಟಿನಲ್ಲಿ ಕರ್ಮಯೋಗಿ ಪಾದಗಳು ನಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಕಾಲುಗಳನ್ನು ಇಡುವ ಮುನ್ನ ಅದು ಸರಿಯಾದ ಸ್ಥಳವೇ ಎಂದು ಪರೀಕ್ಷಿಸಿ ಭದ್ರವಾಗಿ ಕಾಲೂರಿ ಮುಂದುವರೆಯೋಣ. ಆಗ ಸ್ವರ್ಗ ಕೇವಲ ನಮ್ಮ ತಲೆಯ ಮೇಲೆ ಮಾತ್ರ ಅಲ್ಲ, ನಮ್ಮ ಕಾಲುಗಳ ಅಡಿಯೂ ಇದೆ ಎಂಬ ಅರಿವು ಮೂಡದಿರದು.
-ಕ.ವೆಂ.ನಾಗರಾಜ್.
***************
ದಿನಾಂಕ 28.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಮಂಗಳವಾರ, ಜನವರಿ 26, 2016

ತಾಯಿ ಭಾರತಿಗೆ ನಮಿಸೋಣ!


     26.01.2016ಕ್ಕೆ ಭಾರತದ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೆ ತಂದು 66 ವರ್ಷಗಳಾದವು.      ಇದರ ನೆನಪಿನಲ್ಲಿ ಪ್ರತಿವರ್ಷ ಈ ದಿನವನ್ನು ಗಣರಾಜ್ಯೋತ್ಸವವಾಗಿ ಅಚರಿಸಲಾಗುತ್ತಿದೆ. ಭಾರತದ ಸಂವಿಧಾನ ಭಾರತೀಯರೆಲ್ಲರಿಗೆ ಬಹಳ ಪವಿತ್ರವಾದ ಗ್ರಂಥವಾಗಿದೆ. ಸಂವಿಧಾನ ಮೊದಲು ಜಾರಿಗೆ ಬಂದಾಗ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಹೆಸರಿಸಲಾಗಿತ್ತು. 1975-77ರ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇದಕ್ಕೆ ಸಮಾಜವಾದಿ ಮತ್ತು ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿ, ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಫ್ರಭುತ್ವವಾದಿ ಗಣರಾಜ್ಯವಾಗಿ ಮಾಡಲಾಯಿತು. ಸಂವಿಧಾನ ಪರಮೋಚ್ಛವಾದ ಸಂಗತಿಯಾಗಿದ್ದು ಭಾರತದ ಎಲ್ಲಾ ಕಾನೂನು, ಕಾಯದೆಗಳು, ಸರ್ಕಾರದ ನಡವಳಿಗಳು ಎಲ್ಲವೂ ಸಂವಿಧಾನದ ಆಶಯದಂತೆಯೇ ಇರಬೇಕಾಗಿದೆ. ಸಾರ್ವಭೌಮ ಎಂಬ ಪದದ ಅರ್ಥ ಭಾರತ ಯಾವುದೇ ವಿದೇಶೀ ಅಥವ ಬಾಹ್ಯ ಶಕ್ತಿಗಳ ನಿಯಂತ್ರಣದಲ್ಲಿರದೆ ತನ್ನದೇ ಆದ ಆಡಳಿತವನ್ನು ತನ್ನ ಪ್ರಜೆಗಳ ಮೂಲಕ ಆರಿಸಲ್ಪಟ್ಟ ಸರ್ಕಾರದ ಮೂಲಕ ನಡೆಸುತ್ತದೆ ಎಂದು. ಸಮಾಜವಾದಿ ಎಂಬ ಪದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಎಲ್ಲರಿಗೂ ಒದಗಿಸುವುದಾಗಿದೆ. ಸಾಮಾಜಿಕ ಸಮಾನತೆಯೆಂದರೆ ಯಾವುದೇ ಜಾತಿ, ಮತ, ಪಂಥ, ಲಿಂಗ ಅಥವ ಭಾಷೆಯ ಆಧಾರದಲ್ಲಿ ತಾರತಮ್ಯ ಮಾಡದಿರುವುದು ಮತ್ತು ಆರ್ಥಿಕ ಸಮಾನತೆಯೆಂದರೆ ಎಲ್ಲರಿಗೂ ಯಾವುದೇ ತಾರತಮ್ಯ ಮಾಡದೆ ಸಮಾನ ಆರ್ಥಿಕ ಅವಕಾಶಗಳನ್ನು ಒದಗಿಸುವುದು ಮತ್ತು ಸಮಾನ ಜೀವನ ಮಟ್ಟವನ್ನು ಕಲ್ಪಿಸುವುದು ಎಂಬುದಾಗಿದೆ. ಇನ್ನು ಜಾತ್ಯಾತೀತ ಎಂದರೆ ಎಲ್ಲಾ ಧರ್ಮಗಳ ಕುರಿತು ಸಮಾನ ಧೋರಣೆ ಹೊಂದುವುದು ಎಂದು. ಸರ್ಕಾರ ಯಾವುದೇ ಒಂದು ಧರ್ಮದ ಪರ ಅಥವ ವಿರೋಧ ನಿಲುವು ತಳೆಯುವಂತಿಲ್ಲ. ಪ್ರಜಾಪ್ರಭುತ್ವವಾದಿ ಎಂದರೆ ಸರ್ಕಾರಗಳು ಜನರಿಂದ ನೇರವಾಗಿ ಚುನಾವಣೆ ಮೂಲಕ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ಕೂಡಿರುವುದು. ಗಣರಾಜ್ಯವೆಂದರೆ ರಾಜಪ್ರಭುತ್ವವಿರದೆ ಮತ್ತು ವಂಶಪಾರಂಪರ್ಯ ಆಡಳಿತವಿರದೆ ಜನರಿಂದ ಆರಿಸಲಪ್ಟಟ್ಟವರಿಂದ ಆಡಳಿತವಿರುವ ವ್ಯವಸ್ಥೆ ಆಗಿದೆ. ಸಂವಿಧಾನ ರಚನೆಯಾದ ಮತ್ತು ಘೋಷಿತವಾದ ಸಂದರ್ಭದಲ್ಲಿ ಇದ್ದಂತೆ ಮೂಲ ಆಶಯದಲ್ಲಿದ್ದ ಸಂವಿಧಾನದ ವಿಧಿಗಳಲ್ಲಿ ಅನೇಕ ತಿದ್ದುಪಡಿಗಳಾಗಿದ್ದು ಮೂಲ ಆಶಯಕ್ಕೆ ವಿರೋಧವಾಗಿರುವ ಹಲವಾರು ಅಂಶಗಳು ಈಗ ಸೇರಿವೆ. ಕಳೆದ ಆಗಸ್ಟ್, 2015ರವರೆಗೆ ಬರೋಬ್ಬರಿ 100 ತಿದ್ದುಪಡಿಗಳನ್ನು ಸಂವಿಧಾನಕ್ಕೆ ತರಲಾಗಿದೆ. ತಿದ್ದುಪಡಿಗಳು ಜನಹಿತಕ್ಕೆ ಪೂರಕವಾಗಿದ್ದರೆ ಸ್ವಾಗತಾರ್ಹ. ಆದರೆ ಆಡಳಿತ ನಡೆಸುವವರ ಹಿತವೇ ಪ್ರಾಮುಖ್ಯವಾದ ತಿದ್ದುಪಡಿಗಳು ಸಂವಿಧಾನಕ್ಕೆ ಅಪಚಾರ ತರುತ್ತವೆ. ಉದಾಹರಣೆಗೆ ಹೇಳಬೇಕೆಂದರೆ 1975ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಭ್ರಷ್ಠಾಚಾರದ ಆರೋಪದ ಮೇಲೆ ಅಲಹಾಬಾದ್ ನ್ಯಾಯಾಲಯ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಅರ್ಹಗೊಳಿಸಿದಾಗ ಅಧಿಕಾರ ಉಳಿಸಿಕೊಳ್ಳಲು ಅವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಅಲಹಾಬಾದ್ ನ್ಯಾಯಾಲಯದ ಆದೇಶವನ್ನು ನಿರರ್ಥಕಗೊಳಿಸಿದರು. ಈ ತಿದ್ದುಪಡಿಗೆ ಆಗ ಕಾಂಗ್ರೆಸ್ ಅಧಿಕಾರದಲ್ಲಿದ್ದ 17 ರಾಜ್ಯಗಳು ಬೆಂಬಲಿಸಿದವು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಮೇಲೆ ನಿರ್ಬಂಧ ಹೇರುವ ಅಂಶಗಳನ್ನು ಅಳವಡಿಸಲಾಯಿತು. ಇಂದು ಸಾಮಾಜಿಕ ಆರ್ಥಿಕ ಸಮಾನತೆ, ಜಾತ್ಯಾತೀತತೆ ಅನ್ನುವುದು ನಗೆಪಾಟಲಿನ ಸಂಗತಿಗಳಾಗಿವೆ. ಜಾತಿ, ಮತ, ಪಂಥ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡಬಾರದೆಂದಿದ್ದರೂ ಇಂದು ಎಲ್ಲವೂ ಜಾತಿ, ಮತ ಮತ್ತು ಧರ್ಮದ ಆಧಾರದಲ್ಲೇ ನಡೆಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ. ಇರಲಿ ಬಿಡಿ.
     ಇದೇ ತಿಂಗಳು 12ನೆಯ ದಿನಾಂಕದಂದು ಸ್ವಾಮಿ ವಿವೇಕಾನಂದರ 153ನೆಯ ಜನ್ಮದಿನವನ್ನು ಆಚರಿಸಿದೆವು. ಒಳ್ಳೆಯ ಬದಲಾವಣೆಯನ್ನು ನಿರೀಕ್ಷಿಸುವ ಸಂಕ್ರಾಂತಿಯನ್ನು 15ನೆಯ ದಿನಾಂಕದಂದು ಆಚರಿಸಿದೆವು. ನಿಜಕ್ಕೂ ಭಾರತಕ್ಕೆ ಇದೊಂದು ಪರ್ವಕಾಲವಾಗಿದೆ, ಮಹತ್ವದ ಕಾಲಘಟ್ಟವಾಗಿದೆ. ಭಾರತ ವಿಶ್ವದ ಪ್ರಮುಖ ಶಕ್ತಿ ಆಗುವುದಕ್ಕೆ ಎಲ್ಲಾ ಅರ್ಹತೆ ಪಡೆದಿದ್ದರೂ ಅದನ್ನು ತಡೆಯುವಂತಹ ವಿದೇಶೀ ಶಕ್ತಿಗಳು ಮತ್ತು ನಮ್ಮ ನಡುವೆಯೇ ಇರುವ ವಿಚ್ಛಿದ್ರಕಾರಿ ಶಕ್ತಿಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿವೆ. ಇದನ್ನು ತಡೆಯಬೇಕಾದರೆ ನಮ್ಮ ನಿಮ್ಮ ಯೋಗದಾನವೂ ಈಗ ಅತ್ಯಂತ ಅಗತ್ಯವಾಗಿದೆ. ಪ್ರಪಂಚದ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯಿರುವ ದೊಡ್ಡ ಪ್ರಜಾಪ್ರಭುತ್ವವಾದಿ ದೇಶಕ್ಕೆ ವಿಶ್ವಸಂಸ್ಥೆಯ ಭದ್ರತಾಸಂಸ್ಥೆಯ ಸದಸ್ಯತ್ವವಿಲ್ಲ. ಎಂತಹ ನಾಚಿಕೆಗೇಡು! ನಾವು ಮಾತ್ರ ಸಜ್ಜನ, ಸಂಭಾವಿತರಂತೆ 'ನಾವು ಯಾರ ತಂಟೆಗೂ ಹೋಗುವುದಿಲ್ಲ, ನಮ್ಮ ತಂಟೆಗೂ ಯಾರೂ ಬರುವುದು ಬೇಡ' ಎಂಬಂತೆ ಕುಳಿತುಕೊಂಡರೆ ಮುಂದೆ ಆಗುವ ಅಪಾಯಗಳನ್ನು ಎದುರಿಸಬೇಕಾದವರು, ಸಹಿಸಬೇಕಾದವರು ನಾವೇ ಎಂಬುದನ್ನು ಮರೆಯಬಾರದು. ನಾವು ಯಾರ ತಂಟೆಗೂ ಹೋಗದೇ ಇದ್ದರೂ ನಮ್ಮನ್ನು ಕೆಣಕುವ, ಅಪಮಾನಿಸುವ ಶಕ್ತಿಗಳು ಪ್ರಬಲವಾಗಿವೆ, ನಮ್ಮ ಸಹಜ ಸಹನೆಯ ಗುಣವನ್ನು ಹೇಡಿತನವೆಂಬಂತೆ ಬಿಂಬಿಸುವ ಘಟನೆಗಳು ನಡೆಯುತ್ತಿವೆ. 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತದ ಬಹುದೊಡ್ಡ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತು. ಆಗಿನ ಪ್ರಧಾನಿ ನೆಹರೂ 'ಅಲ್ಲಿ ಹುಲ್ಲೂ ಸಹ ಬೆಳೆಯುವುದಿಲ್ಲ, ಅದಕ್ಕಾಗಿ ಏಕೆ ಚಿಂತಿಸಬೇಕು?' ಎಂಬ ಹೇಳಿಕೆ ನೀಡಿದ್ದರು. ನೆರೆಯ ಪಾಕಿಸ್ತಾನ ಕಾಶ್ಮೀರದ ದೊಡ್ಡ ಭಾಗವನ್ನು ಆಕ್ರಮಿಸಿಕೊಂಡಿದೆ. ಆಯಕಟ್ಟಿನ ಪ್ರದೇಶವನ್ನು ಚೀನಾಕ್ಕೆ ಧಾರೆ ಎರೆದಿದೆ. ಚೀನಾ ಈಗಲೂ ಸಹ ಭಾರತದ ಪ್ರದೇಶದ ಮೇಲೆ ಹತೋಟಿ ಸಾಧಿಸುವ ಪ್ರಯತ್ನ ನಡೆಸುತ್ತಲೇ ಇದೆ, ಯಶಸ್ವಿಯೂ ಆಗುತ್ತಿದೆ. ಜನರನ್ನು ಇಂತಹ ವಿಷಯಗಳಲ್ಲಿ ರಾಷ್ಟ್ರೀಯ ಹಾಗೃತಿ ಉಂಟು ಮಾಡಬೇಕಾದ ಮಾಧ್ಯಮಗಳು ಶಾರುಕ್ ಖಾನ್, ಅಮೀರ್ ಖಾನ್ ಮುಂತಾದ ಕಡೆಗೆ ಹೊರಳಿಸಿ ದಿಕ್ಕು ತಪ್ಪಿಸುತ್ತಿವೆ. ಮತಾಂತರಗಳಿಂದ ದೇಶದ ಸಮಗ್ರತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಉತ್ತರ ಭಾರತದ ಏಳು ರಾಜ್ಯಗಳಲ್ಲಿ ಕ್ರೈಸ್ತ ಮತಾವಲಂಬಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರತ್ಯೇಕ ರಾಜ್ಯ, ದೇಶಗಳಾಗುವ ಹಂಬಲ ಹೊಂದಿವೆ. ಪಕ್ಕದ ಕೇರಳ ಮತ್ತು ಪಶ್ಚಿಮ ಬಂಗಾಳಗಳು ಹೊಸ ಕಾಶ್ಮೀರಗಳಾಗುವತ್ತ ದಾಪುಗಾಲಿಡುತ್ತಿವೆ. ಇದಕ್ಕೆ ಪೋಷಕರಾಗಿ, ಬೆಂಬಲವಾಗಿ ಜಾತ್ಯಾತೀತತೆಯ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜಕೀಯ ಪಕ್ಷಗಳು ನಿಂತಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಡುವೆಯೇ ಇದ್ದುಕೊಂಡು ನಮಗೇ ದ್ರೋಹ ಬಗೆಯುತ್ತಿರುವ ಮತಾಂಧರುಗಳು ಭಯೋತ್ಪಾದಕರುಗಳಿಗೆ ರಾಜಾರೋಷವಾಗಿ ಬೆಂಬಲ ಕೊಡುತ್ತಿದ್ದಾರೆ. 15 ನಿಮಿಷಗಳ ಕಾಲ ಪೋಲಿಸರು ಸುಮ್ಮನಿದ್ದರೆ 25 ಕೋಟಿ ಮುಸ್ಲಿಮರು 75 ಕೋಟಿ ಹಿಂದೂಗಳನ್ನು ಹೊಸಕಿಹಾಕಿಬಿಡುತ್ತಾರೆ ಎಂಬಂತಹ ಹೇಳಿಕೆಗಳನ್ನು ಬಹಿರಂಗವಾಗಿ ಹೇಳುವಷ್ಟು ಧಾರ್ಷ್ಟ್ಯ ಅವರಿಗೆ ಇದೆ. ಅವರು ನಮ್ಮ ಲೋಕಸಭಾ ಸದಸ್ಯರೂ ಆಗಿದ್ದಾರೆ ಎಂಬುದು ಆಘಾತಕಾರಿ ಸಂಗತಿಯಾಗಿದೆ. ಪ್ರಚೋದನಕಾರೀ ಭಾಷಣಕ್ಕಾಗಿ ಅವರನ್ನು ಬಂಧಿಸಿದಾಗ ಸಾವಿರಾರು ಜನ ಮತಾಂಧರು ಅವರ ಪರವಾಗಿ ಬೀದಿಗಿಳಿದು ಪ್ರತಿಭಟಿಸುತ್ತಾರೆ!
     ಇತಿಹಾಸದಿಂದ ನಾವು ಪಾಠ ಕಲಿಯುವುದೇ ಇಲ್ಲವೆನ್ನುವುದು ದೊಡ್ಡ ದುರಂತ. ಹಿಂದೆ ಪೃಥ್ವೀರಾಜನ ಏಳಿಗೆ ಸಹಿಸದ ನೆರೆಯ ರಾಜ ಜಯಚಂದ್ರ ಅವನ್ನು ಮಟ್ಟ ಹಾಕಬೇಕೆಂದು ಮಹಮದ್ ಘೋರಿಗೆ ಎಲ್ಲಾ ನೆರವು ನೀಡಿದ್ದ. ಪರಿಣಾಮ ಇಡೀ ಭಾರತ ಮುಂದಿನ ಎಂಟು ಶತಮಾನಗಳ ಮೊಘಲರ ಗುಲಾಮಗಿರಿಗೆ ಒಳಗಾಯಿತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿದ್ದ ಮಂತ್ರಿ ಮಣಿಶಂಕರ ಐಯರ್ ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಟಿವಿಯಲ್ಲಿ ಸಂದರ್ಶನ ನೀಡುತ್ತಾ ಹೇಳುತ್ತಾರೆ: "ಮೋದಿಯರನ್ನು ಅಧಿಕಾರದಿಂದ ಇಳಿಸಲು ನಮಗೆ ಸಹಾಯ ಮಾಡಿ." ನಮ್ಮದೇ ಸರ್ಕಾರವನ್ನು, ಜನರಿಂದ ಆಯ್ಕೆಗೊಂಡ ಸರ್ಕಾರವನ್ನು, ಕೆಳಗಿಳಿಸಲು ಶತ್ರುರಾಷ್ಟ್ರದ ಸಹಕಾರ ಕೇಳುವ ಇಂತಹ ದೇಶದ್ರೋಹಿಗಳ ಸಂಖ್ಯೆ ಕಡಿಮೆಯೇನಲ್ಲ. ಜಯಚಂದ್ರನ ಸಂತತಿಯವರಾದ ಇವರಿಗೆ ಅಧಿಕಾರ ಮುಖ್ಯವೇ ಹೊರತು, ದೇಶದ ಹಿತ ಮುಖ್ಯವಲ್ಲ. ಅಧಿಕಾರಕ್ಕಾಗಿ ಯಾವ ಕೆಳಮಟ್ಟಕ್ಕೂ ಇವರು ಹೋಗಬಲ್ಲರು. ನಮ್ಮ ಕೆಲವು ಮಾಧ್ಯಮಗಳೂ ಸಹ ಹಣದ ಆಸೆಗೆ ಬಲಿಯಾಗಿ ದೇಶದ ಗೌರವಕ್ಕೆ ಧಕ್ಕೆ ತರುವಂತಹ ಸುಳ್ಳು ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಿರುವುದು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿರುವುದು ಎದ್ದು ಕಾಣುತ್ತಿದೆ.
     ಇಂತಹ ಸಂದರ್ಭದಲ್ಲಿ ಸಜ್ಜನಶಕ್ತಿಯನ್ನು ಜಾಗೃತಿಗೊಳಿಸುವ ಕೆಲಸವನ್ನು ನಾವು-ನೀವೇ ಮಾಡಬೇಕಿದೆ. ಈ ಕೆಲಸ ಈಗಲೇ ಆಗಬೇಕೆನ್ನುವುದಕ್ಕೆ ಮಹತ್ವದ ಕಾರಣವೂ ಇದೆ. ಭಾರತದಲ್ಲಿ ಈಗ ಯುವಜನರ ಸಂಖ್ಯೆ ಒಟ್ಟು ಜನಸಂಖ್ಯೆಯ 3/2 ರಷ್ಟಿದೆ. ಇನ್ನು 25 ವರ್ಷಗಳಲ್ಲಿ ಯುವಭಾರತ ವೃದ್ಧಭಾರತ ಆಗಿಬಿಡುತ್ತದೆ. ಆಗ ವೃದ್ಧರ ಸಂಖ್ಯೆಯೇ ಜಾಸ್ತಿಯಾಗಿರುತ್ತದೆ. ಆದ್ದರಿಂದ ಈಗ ಮಾಡದಿದ್ದರೆ ಮುಂದೆ ಮಾಡಲಾಗುವುದಿಲ್ಲ. ಒಂದು ವೇದಮಂತ್ರ ಹೇಳುತ್ತದೆ: ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.) 'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಕಾರ್ಯಪ್ರವೃತ್ತವಾಗುತ್ತವೋ, ಎಲ್ಲಿ ಸಜ್ಜನರಾದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ! ಆ ಶಕ್ತಿ ಈಗ ಒಟ್ಟಗೂಡಿ ಕೆಲಸ ಮಾಡುವಂತಹ ಪರ್ವಕಾಲ ಇದೇ ಆಗಿದೆ. ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ | ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.  

ಬುಧವಾರ, ಜನವರಿ 20, 2016

ಅನ್ಯಾಯದ ವಿರುದ್ಧ ಯುವಶಕ್ತಿ ಧ್ವನಿ ಎತ್ತಿದರೆ ತಡೆಯುವವರು ಯಾರು?


ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ!
     ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಈ ಜಗತ್ತು ಭಿನ್ನತೆಗಳ ಗೂಡು. ಭಿನ್ನತೆಯಿಂದಲೇ ಜಗತ್ತು ನಡೆಯಲು ಸಾಧ್ಯ. ಎಲ್ಲರೂ ಬುದ್ಧಿವಂತರು, ಜ್ಞಾನವಂತರಾಗಬೇಕು ಎಂದು ಬಯಸಿದರೂ ಅದು ಸಾಧ್ಯವಿಲ್ಲ. ಎಲ್ಲರೂ ಆರೋಗ್ಯವಂತರಾಗಿರುತ್ತಾರೆಯೇ? ಎಲ್ಲರೂ ಶಕ್ತಿವಂತರಾಗಿರುತ್ತಾರೆಯೇ? ಎಲ್ಲರೂ ವ್ಯಾಪಾರಿಗಳಾಗಲು ಸಾಧ್ಯವೇ? ಎಲ್ಲರೂ ಧೃಢಕಾಯರಾಗಿರುವ ಯೋಧರಾಗಬೇಕೆಂದು ಇಷ್ಟಪಟ್ಟರೂ ಆಗುತ್ತದೆಯೇ? ಹೀಗಿರುವಾಗ ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಪರಸ್ಪರ ಪೂರಕರಾಗಿ ಕೆಲಸ ಮಾಡಿದರೆ ದೇಶಕ್ಕೆ ಒಳಿತಲ್ಲವೇ? ಇವರೆಲ್ಲರನ್ನೂ ಸಮನ್ವಯದಿಂದ ಕರೆದೊಯ್ಯಬಲ್ಲ ಆಡಳಿತವೇ ಉತ್ತಮ ಆಡಳಿತವೆನಿಸಿಕೊಳ್ಳುತ್ತದೆ. ಸ್ವಾರ್ಥಕ್ಕಾಗಿ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಆಡಳಿತದ ಚುಕ್ಕಾಣಿ ಹಿಡಿದರೆ ಅಥವ ಅಂತಹವರೇ ಆಡಳಿತಗಾರರಿಗೆ ಸಲಹೆ ಕೊಡುವವರಾದರೆ ದೇಶ ಅಧಃಪತನದ ಹಾದಿ ಹಿಡಿದಂತೆಯೇ! ಆಡಳಿತ ಮಾಡುವ ಸ್ಥಾನದಲ್ಲಿರುವವರು ತಾವು ಪ್ರತಿನಿಧಿಸುವ ಸಮೂಹದ ಅಥವ ಜನಾಂಗದ ಅಥವ ತಮ್ಮನ್ನು ಬೆಂಬಲಿಸುವವರ ಹಿತವನ್ನು ಮಾತ್ರ ಪ್ರಧಾನವಾಗಿರಿಸಿಕೊಂಡರೆ ಉಳಿದವರು ಸಹಜವಾಗಿ ಅಸಂತುಷ್ಟರಾಗುತ್ತಾರೆ. ಶಾಸನಾಧೀಶರು ಇಡೀ ಸಮಾಜದ ಹಿತವನ್ನು ಸಮಾನವಾಗಿ ನೋಡುವವರಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
     ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ಅಣ್ಣಾ ಹಜಾರೆಯವರು ಭ್ರಷ್ಠಾಚಾರದ ವಿರುದ್ಧ ದ್ವನಿಯೆತ್ತಿದಾಗ ದೇಶದ ವಿದ್ವಜ್ಜನರು ಮತ್ತು ಪ್ರಚಂಡ ಯುವಶಕ್ತಿ ಅವರ ಬೆನ್ನಿಗೆ ನಿಂತಿತ್ತು. ದೇಶದಲ್ಲಿ ಏನೋ ಬದಲಾವಣೆ ಆಗಿಬಿಡುತ್ತದೆಂದು ಬಹುಜನರು ನಿರೀಕ್ಷಿಸಿದ್ದರು. ಆದರೆ ಆಡಳಿತಶಾಹಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿ ಚಳುವಳಿಯನ್ನು ಹತ್ತಿಕ್ಕಿಬಿಟ್ಟಿತು. ಅದರ ಪರಿಣಾಮವನ್ನು ಆಡಳಿತ ಪಕ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಸೋಲುವ ಮೂಲಕ ಅನುಭವಿಸಿತು.
     ಅಧಿಕಾರದ ಬಲದಿಂದ ಬಹುಜನರ ಅಭಿಪ್ರಾಯಗಳನ್ನು ಮೀರಿ ನಡೆದುಕೊಳ್ಳುವ ನಡವಳಿಕೆಗಳನ್ನು ಆಡಳಿತಗಾರರಲ್ಲಿ ಕಾಣುತ್ತಿದ್ದೇವೆ. ಭ್ರಷ್ಠಾಚಾರದ ಆರೋಪಗಳನ್ನು ಹೊತ್ತ ಮಂತ್ರಿಗಳು, ಶಾಸಕರನ್ನು ರಾಜಾರೋಷಾಗಿ ಸಮರ್ಥಿಸಿಕೊಳ್ಳಲಾಗುತ್ತದೆ. ಎಲ್ಲರನ್ನೂ ಸಮನಾಗಿ ಕಾಣಬೇಕಾದ ಕಾನೂನುಗಳನ್ನು ಸರ್ಕಾರದ ಕ್ರಮಗಳನ್ನು ಒಪ್ಪದವರ ವಿರುದ್ಧ ಕಠಿಣವಾಗಿ ಬಳಸುವುದನ್ನು ಮತ್ತು ಸಮರ್ಥಕರ ಅಪರಾಧಗಳನ್ನು ಕಾಣದಂತಿರುವುದು ಅಥವ ಮುಚ್ಚಿ ಹಾಕುವ ಪ್ರಯತ್ನಗಳನ್ನು ಎಗ್ಗಿಲ್ಲದೆ ಮಾಡುವುದನ್ನು ಕಾಣುತ್ತಿದ್ದೇವೆ. ಭ್ರಷ್ಠಾಚಾರ ತಡೆಯಬೇಕಾದ ಲೋಕಾಯುಕ್ತ ಸಂಸ್ಥೆಯೇ ಭ್ರಷ್ಠಾಚಾರದ ಕೂಪವಾಗುವುದಕ್ಕೆ ಆಡಳಿತದಲ್ಲಿರುವವರು ಸಹಕಾರಿಗಳಲ್ಲವೆಂದು ಹೇಳಲಾಗುವುದಿಲ್ಲ. ತನಿಖಾ ಸಂಸ್ಥೆಗಳು, ಆಯೋಗಗಳು ಆಡಳಿತದ ಮರ್ಜಿಯಂತೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡೂ ಕಾಣದಂತೆ ಇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಗೆ ಆಡಳಿತಗಾರರಿಗೆ ಸಲಹೆ ಕೊಡುವವರ, ಅವರ ಬೆನ್ನಿಗೆ ನಿಂತಿರುವ ಸ್ವಹಿತಾಸಕ್ತಿ ಪ್ರಧಾನ ಶಕ್ತಿಗಳ ಕುಮ್ಮಕ್ಕು ಇರುವುದು ಗುಟ್ಟಾಗಿ ಉಳಿದಿಲ್ಲ. ಕೆಲವು ಮಾಧ್ಯಮಗಳೂ ಸಹ ಪಕ್ಷಪಾತದಿಂದ ವರ್ತಿಸುತ್ತಿವೆ. ಇಂದು ಅಸಹನೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಅಸಹನೆ ಅನ್ನುವುದು ಒಮ್ಮುಖವಾಗಿಲ್ಲ ಎಂಬುದನ್ನು ಅಸಹನೆಯನ್ನು ದಾಳವಾಗಿ ಬಳಸುತ್ತಿರುವವರ ವಿರುದ್ಧದ ಅಸಹನೆಯೂ ಪ್ರಖರವಾಗಿರುವುದು ತೋರಿಸುತ್ತಿದೆ.
     ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಇಂದು ಅಂತರ್ಜಾಲ ತಾಣಗಳು ಪ್ರಭಾವಿಯಾಗಿವೆ. ಸಮಯಸಾಧಕರ ಬಂಡವಾಳಗಳು ಬಯಲಾಗುತ್ತಿವೆ. ಇದರ ಮುಂದೆ ಎಷ್ಟೋ ಸಲ ಮಾಧ್ಯಮಗಳೂ ಮಂಕಾಗಿವೆ. ನಮ್ಮ ಗೋಳು ಕೇಳುವವರಾರು ಎಂದು ಹತಾಶೆಗೊಳ್ಳುತ್ತಿದ್ದ ಸ್ಥಿತಿ ಈಗ ಬದಲಾಗುತ್ತಿದೆ. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.
***************
ದಿನಾಂಕ 31.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಜನವರಿ 15, 2016

ಕಳೆಯುವುದು ಸಮಯವಲ್ಲ, ಜೀವನ!


ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ
ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು |
ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ
ಕಾಲದ ಮಹತಿಯಿದು ಕಾಣು ಮೂಢ ||
     'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?' ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, 'ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ.' ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ ಅವನಿಗೆ ಪುರುಸೊತ್ತಿರಲಿಲ್ಲ. ಅಷ್ಟಕ್ಕೂ ಈ 'ಪುರುಸೊತ್ತು' ಅಂದರೆ ಏನು? ಏನಾದರೂ ಮಾಡಲು ಅಗತ್ಯವಾದ ಸಮಯ ಅಷ್ಟೇ. ನಾವು ಸಮಯದೊಂದಿಗೇ  ಇರುತ್ತೇವೆ, ಆದರೂ ನಮಗೆ ಸಮಯವಿರುವುದಿಲ್ಲ! ಈ ಸಮಯ ಒಬ್ಬರಿಗೆ ಒಂದೊಂದು ತರಹ ಇರುತ್ತದೆಯೇ? ಒಬ್ಬರಿಗೆ 24 ಗಂಟೆ, ಇನ್ನೊಬ್ಬರಿಗೆ 20 ಗಂಟೆಯಂತೆ ಇರುತ್ತದೆಯೇ? ಎಲ್ಲರಿಗೂ ಇರುವುದು ಇಪ್ಪನಾಲ್ಕೇ ಗಂಟೆಗಳು! ವಿವೇಕಾನಂದ, ಬುದ್ಧ, ಬಸವಣ್ಣ, ಮಹಾವೀರ, ಮಹಾತ್ಮ ಗಾಂಧಿ, ಗೋಳ್ವಾಲ್ಕರ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕ್ ಉಲ್ಲಾ ಮುಂತಾದವರಿಗೆ ಇದ್ದದ್ದು, ಈಗ ನಮ್ಮ ನಡುವೆಯೇ ಇರುವ ಸಿದ್ಧಗಂಗಾ ಶ್ರೀಗಳು, ಪಂ. ಸುಧಾಕರ ಚತುರ್‍ವೇದಿಯವರು, ನರೇಂದ್ರ ಮೋದಿ ಮುಂತಾದವರಿಗೂ ಇರುವುದು ಇತರ ನಮ್ಮ ನಿಮ್ಮೆಲ್ಲರಿಗೂ ಇರುವಷ್ಟೇ ಸಮಯ! ಸಮಯ ನಿಜವಾದ ಸಮತಾವಾದಿ. ಅದು ಶ್ರೀಮಂತರಿಗೆ, ಬಡವರಿಗೆ, ಆ ಜಾತಿಯವರಿಗೆ, ಈ ಜಾತಿಯವರಿಗೆ, ದಲಿತರಿಗೆ, ಬಲಿತರಿಗೆ, ಕರಿಯರಿಗೆ, ಬಿಳಿಯರಿಗೆ, ದಡ್ಡರಿಗೆ, ಜಾಣರಿಗೆ, ಚಿಕ್ಕವರಿಗೆ, ದೊಡ್ಡವರಿಗೆ, ಗಂಡಸರಿಗೆ, ಹೆಂಗಸರಿಗೆ, ಇತ್ಯಾದಿ ಯಾವುದೇ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಸಮಯ ಕೊಡುತ್ತದೆ.
     ಒಬ್ಬ ಯಶಸ್ವಿ ವ್ಯಕ್ತಿಗೆ, ಮಾಡಲು ಬೇಕಾದಷ್ಟು ಕೆಲಸಗಳು ಇದ್ದವರಿಗೆ ಸಮಯ ಸಿಗುತ್ತದೆ. ಆದರೆ ಸೋಮಾರಿಗಳಿಗೆ ಸಿಗುವುದಿಲ್ಲ. ಚಟುವಟಿಕೆಯಿಂದ ಕೂಡಿದ ವ್ಯಕ್ತಿ ಎಲ್ಲಾ ಕೆಲಸಗಳಿಗೂ ಪುರುಸೊತ್ತು ಮಾಡಿಕೊಳ್ಳುತ್ತಾನೆ, ಸಿಗುವ ಸಣ್ಣ ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾನೆ. ಅದು ಯಶಸ್ವಿಯ ಗುಣ, ಸಾಧಕನ ಲಕ್ಷಣ. ಪುರುಸೊತ್ತಿಲ್ಲ ಅನ್ನುವವರು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಗೊತ್ತು ಗುರಿಯಿಲ್ಲದೆ ಹೇಗೋ ಕೆಲಸ ಮಾಡುವವರಾಗಿರುತ್ತಾರೆ. ಸಾಧಕರಿಗೂ, ಸಾಮಾನ್ಯರಿಗೂ ಇರುವ ವ್ಯತಾಸ ಉಪಯೋಗಿಸಿಕೊಳ್ಳುವ ಸಮಯದ ರೀತಿಯಲ್ಲಿದೆ. ಸಮಯ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ, ಯಾರೂ ಹಣ ಕೊಡಬೇಕಿಲ್ಲ. ಹಾಗೆಂದು ಅದಕ್ಕೆ ಬೆಲೆಯಿಲ್ಲ ಎಂದಲ್ಲ. ಅದು ಅಮೂಲ್ಯವಾದುದು. ಅದನ್ನು ಕೊಳ್ಳಲಾಗುವುದಿಲ್ಲ. ಅದನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಅದನ್ನು ಪುನಃ ಪಡೆಯಲಾಗುವುದೇ ಇಲ್ಲ!
     'ಹೇಗೋ ಜೀವನ ನಡೆಸಿದರಾಯಿತು' ಅನ್ನುವವರು ಸಮಯದ ಬಗ್ಗೆ ಮಹತ್ವ ಕೊಡಲಾರರು. 'ಹುಟ್ಟಿದ, ಇದ್ದ, ಒಂದು ದಿನ ಸತ್ತ' ಎಂಬ ರೀತಿಯಲ್ಲಿ ಬಾಳಿದವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರೇ ಕಾಲಾನಂತರದಲ್ಲಿ ಮರೆತುಬಿಡುತ್ತಾರೆ. ನೂರು ವರ್ಷಗಳು ಪೂರ್ಣವಾಗಿ ಬಾಳುವವರ ಸಂಖ್ಯೆ ಕಡಿಮೆ. ಸರಾಸರಿ 80ರಿಂದ90 ವರ್ಷದವರೆಗೆ ಬದುಕುತ್ತಾರೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು, ಕೆಲವರಿಗೆ ಅದಕ್ಕೂ ಹೆಚ್ಚು,  ಅವಧಿ ನಿದ್ದೆಯಲ್ಲಿ ಕಳೆದುಹೋಗುತ್ತದೆ. ಬಾಲ್ಯ ಮತ್ತು ಮುಪ್ಪಿನ ಅವಧಿಯಲ್ಲಿ ಸುಮಾರು ಮೂರನೆಯ ಒಂದು ಭಾಗ ಕಳೆಯುತ್ತದೆ. ಉಳಿಯುವ ಮೂರನೆಯ ಒಂದರಷ್ಟು ಭಾಗದಲ್ಲಿ ಸಂಸಾರದ ಜಂಜಾಟ, ಕಾಯಿಲೆ-ಕಸಾಲೆಗಳು, ಇನ್ನಿತರ ಸಂಗತಿಗಳಿಗೆ ಸಮಯ ಕೊಡಬೇಕು. ಇಷ್ಟೆಲ್ಲಾ ಆಗಿ ಉಳಿಯುವ ಅವಧಿಯಲ್ಲಿ ಏನಾದರೂ ಸಾಧನೆ ಮಾಡುವುದಾದರೆ ಮಾಡಬೇಕು ಎಂದರೆ ಸಮಯದ ಮಹತ್ವದ ಅರಿವು ಆಗುತ್ತದೆ. ಇಷ್ಟಾಗಿಯೂ ಸಾಧನೆ ಮಾಡುವವರಿದ್ದಾರೆ ಎಂದರೆ ಅವರು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವವರು, ಸಮಯದ ಮಹತ್ವ ಅರಿತವರೇ ಸರಿ. ನಿಜವಾಗಿಯೂ ಸಮಯದ ಅಭಾವವಿಲ್ಲ. ಇರುವುದು ಸಮಯವನ್ನು ಉಪಯೋಗಿಸಿಕೊಳ್ಳುವ ಜಾಣತನದ ಅಭಾವ ಅಷ್ಟೆ. ಹೆಚ್ಚಿನ ಸಮಯ ಹಳೆಯ ಕಷ್ಟ-ನಷ್ಟಗಳ ಕುರಿತು ಚಿಂತಿಸುವುದರಲ್ಲಿ, ಹಗಲು ಕನಸು ಕಾಣುವಲ್ಲಿ ಕಳೆದುಹೋಗುತ್ತದೆ. ಸಮಯದ ಒಂದೊಂದು ಕ್ಷಣವೂ ಅಂತಿಮವೇ, ಏಕೆಂದರೆ ಆ ಕ್ಷಣಗಳು ಮತ್ತೆ ಸಿಗುವುದೇ ಇಲ್ಲ. ನಿಜವಾದ ಸಂಗತಿಯೆಂದರೆ ಸಮಯ ವ್ಯರ್ಥವಾಗುವುದಿಲ್ಲ, ವ್ಯರ್ಥವಾಗುವುದು ನಮ್ಮ ಜೀವನ, ಇರುವ ಸಮಯವನ್ನು ಉಪಯೋಗಿಸಿಕೊಳ್ಳದಿದ್ದರೆ!
     'ಹೊತ್ತೇ ಹೋಗುವುದಿಲ್ಲ' ಎನ್ನುವವರು, 'ಟೈಮ್ ಕಳೆಯಲು' ಏನಾದರೂ ಮಾಡಬೇಕಲ್ಲಾ ಅನ್ನುವವರು, ಇಸ್ಪೀಟು ಆಡುವವರು, ಪಾರ್ಕಿನ ಕಟ್ಟೆಗಳು, ಬೆಂಚುಗಳಲ್ಲಿ ಕುಳಿತು ಹರಟುವವರು, ಇತರರ ವಿಚಾರಗಳಲ್ಲಿ ಮೂಗು ತೂರಿಸುವವರು, ಮುಂತಾದವರು ನಮ್ಮ ನಡುವೆ ಕಂಡುಬರುತ್ತಾರೆ. ಇವರಿಗೆ 'ಮಾಡಬೇಕಾದ' ಕೆಲಸಗಳಿಗೆ ಮಾತ್ರ ಪುರುಸೊತ್ತು ಸಿಗುವುದಿಲ್ಲ. ಸಮಯ ಕಳೆಯುವವರಿಗೆ ವಾಸ್ತವವಾಗಿ ಸಮಯವೇ ಅವರನ್ನು ಕಳೆಯುತ್ತಿದೆ ಎಂಬುದರ ಅರಿವಾಗುವುದಿಲ್ಲ. ಟೈಮ್ ಪಾಸ್ ಅಲ್ಲ, ಲೈಫ್ ಲಾಸ್! ಇದರಿಂದಾಗಿ ಸ್ವತಃ ತೊಂದರೆಗಳನ್ನೂ ಅನುಭವಿಸುತ್ತಾರೆ. ಆದರೆ ಆಗ 'ಕಾಲ ಮಿಂಚಿದ ಮೇಲೆ ಚಿಂತಿಸಿದಂತೆ' ಆಗಿರುತ್ತದೆ. 'ನಮ್ಮ ಟೈಮೇ ಸರಿಯಿಲ್ಲ' ಎಂದು ಉದ್ಗರಿಸುತ್ತಾರೆ. ಸರಿಯಿಲ್ಲದಿರುವುದು ಟೈಮೋ. ಅವರೋ? ಇಲ್ಲಿ ಇನ್ನೊಂದು ಅಪಾಯವೂ ಇದೆ. ದುಡಿದು ಉಣ್ಣುವವರು ಸಮಯವನ್ನು ಗೌರವಿಸುವವರಾದರೆ, 'ದುಡಿಯದೇ' ಉಣ್ಣಬಯಸುವವರಲ್ಲಿ ಕೆಲವರಾದರೂ ಶ್ರಮಪಡದೇ ಹಣ ಗಳಿಸಲು ಕಳ್ಳತನ, ದರೋಡೆ, ವಂಚನೆ, ಇತ್ಯಾದಿಗಳಲ್ಲಿ ತೊಡಗಿ ಸಮಾಜಕಂಟಕರೂ ಆಗುವವರಿರುತ್ತಾರೆ.
     ಸಮಯ ಅದ್ಭುತ ಸಂಜೀವಿನಿ ಇದ್ದಂತೆ. ಅದು ನೋವನ್ನು ಮರೆಸುತ್ತದೆ, ಸತ್ಯವನ್ನು ಹೊರತರುತ್ತದೆ, ಪಾಪಿಗಳನ್ನು ಶಿಕ್ಷಿಸುತ್ತದೆ, ನ್ಯಾಯ ನೀಡುತ್ತದೆ. ಅದು ಕಿಲಾಡಿ ಕೂಡಾ! ಕಾಯುವವರಿಗೆ ದೀರ್ಘವಾಗಿರುತ್ತದೆ, ಭಯಪಡುವವರ ಹತ್ತಿರ ಧಾವಿಸುತ್ತದೆ, ಶೋಕಿಸುವವರಿಗೆ, ಚಿಂತಿಸುವವರಿಗೆ ಅತಿ ಉದ್ದವಾಗಿರುತ್ತದೆ, ಸಂತೋಷಪಡುವವರಿಗೆ ಚಿಕ್ಕದಾಗಿರುತ್ತದೆ, ಆದರೆ ಅದನ್ನು ಪ್ರೀತಿಸುವವರಿಗೆ ಮಾತ್ರ ಶಾಶ್ವತವಾಗಿರುತ್ತದೆ. ಸಂತೋಷವಾಗಿರುವುದಕ್ಕೆ ಸಮಯ ಕಂಡುಕೊಳ್ಳದಿದ್ದರೆ, ದುಃಖ ಪಡುವುದಕ್ಕೆ ಸಮಯ ಬಂದುಬಿಡುತ್ತದೆ.      'ಕಾಲಾಯ ತಸ್ಮೈ ನಮಃ'. ಕನಸು ನನಸಾಗಬೇಕಾದರೆ ಅದಕ್ಕಾಗಿ ನಿಶ್ಚಿತ ಸಮಯವನ್ನು ಕೊಡಲೇಬೇಕು.
     ನಮ್ಮ ಏಳಿಗೆಯಲ್ಲಿ, ಅಭಿವೃದ್ಧಿಯಲ್ಲಿ ಸುತ್ತಲಿನ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಋಣ ತೀರಿಸಲು ಸಮಾಜಕ್ಕಾಗಿಯೂ ದಿನದ ಸ್ವಲ್ಪ ಕಾಲವನ್ನಾದರೂ ಮೀಸಲಿಡುವುದು ನಮ್ಮ ಕರ್ತವ್ಯವಾಗಬೇಕು. ದಿನನಿತ್ಯದ ಕೆಲಸಗಳು, ನಿದ್ದೆ, ಮನೆಕೆಲಸಗಳು, ವ್ಯಾಯಾಮ, ಅಧ್ಯಯನ, ಧ್ಯಾನ, ಇತ್ಯಾದಿಗಳಿಗೆ ನಿಗದಿತ ಸಮಯವನ್ನು ಧಾರಾಳವಾಗಿ ಕೊಟ್ಟರೂ, ದಿನಕ್ಕೆ ಒಂದೆರಡು ಗಂಟೆಗಳನ್ನಾದರೂ ಸಮಾಜ, ದೇಶ, ಧರ್ಮ ಸಂಬಂಧಿತ ಕೆಲಸಗಳಿಗೆ ಸಮಯಾವಕಾಶ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕಷ್ಟ ಸಮಯದ ಅಭಾವದ್ದಲ್ಲ, ಸೋಮಾರಿ ಮನಸ್ಸಿನದು. ಸ್ವಂತ ಕೆಲಸಗಳಿಗಲ್ಲದೆ ಸಮಾಜ, ದೇಶಕ್ಕಾಗಿ, ಜನಸೇವೆಗಾಗಿ ಸಮಯವನ್ನು ಮೀಸಲಾಗಿಡುವವರೇ ದೊಡ್ಡವರು. ಮನಸ್ಸು ಮಾಡಿದರೆ ನಾವೂ ದೊಡ್ಡವರಾಗಬಹುದು! ನಮಗೂ ಸಮಯವಿದೆ!!
-ಕ.ವೆಂ.ನಾಗರಾಜ್.
***************
ದಿನಾಂಕ 14.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: