ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 21, 2016

ಜಂಬೂದ್ವೀಪದ ಭರತಖಂಡ


      'ಸಪ್ತದ್ವೀಪಾ ವಸುಂಧರಾ' - ಈ ಭೂಮಂಡಲ ಏಳು ದ್ವೀಪಗಳನ್ನೊಳಗೊಂಡಿದೆ ಎಂಬುದು ಇದರ ಅರ್ಥ. ಆ ಏಳು ದ್ವೀಪಗಳೆಂದರೆ ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ. ಜಂಬೂದ್ವೀಪಕ್ಕೆ ಸುದರ್ಶನ ದ್ವೀಪವೆಂಬ ಹೆಸರೂ ಇದೆ. ಈ ದ್ವೀಪದಲ್ಲಿ ಹೇರಳವಾಗಿದ್ದ ಜಂಬೂ ಮರಗಳಿಂದಲೂ ಈ ಹೆಸರು ಬಂದಿತ್ತೆನ್ನಲಾಗಿದೆ. ವಿಷ್ಣುಪುರಾಣದ ಪ್ರಕಾರ ಜಂಬೂವೃಕ್ಷದಲ್ಲಿ ಬಿಡುತ್ತಿದ್ದ ಜಂಬೂಫಲಗಳು ಆನೆಗಳ ಗಾತ್ರವಿರುತ್ತಿದ್ದವೆಂದೂ, ಕಳಿತ ಫಲಗಳು ಪರ್ವತಗಳ ಮೇಲೆ ಬಿದ್ದು ಹೊರಸೂಸಿದ ರಸದಿಂದ ಜಂಬೂನದಿ ಉಗಮವಾಯಿತೆಂದೂ ಆ ನೀರನ್ನು ಜಂಬೂದ್ವೀಪದ ಜನರು ಬಳಸುತ್ತಿದ್ದರೆಂದೂ ಹೇಳಲಾಗಿದೆ. ಬೌದ್ಧ ಧರ್ಮ ಮತ್ತು ಜೈನ ಧರ್ಮದ ಕಥೆಗಳಲ್ಲೂ ಜಂಬೂದ್ವೀಪದ ಉಲ್ಲೇಖ ಕಂಡುಬರುತ್ತದೆ. ಜಂಬೂದ್ವೀಪ ಒಂಬತ್ತು ವಿಭಾಗಗಳು ಮತ್ತು ಎಂಟು ಪ್ರಮುಖ ಪರ್ವತಗಳಿಂದ ಪ್ರಸಿದ್ಧವಾಗಿತ್ತು. ವಾಯುಪುರಾಣ, ಮಾರ್ಕಂಡೇಯ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲೂ ಬರುವ ಉಲ್ಲೇಖಗಳಂತೆ ಜಂಬೂದ್ವೀಪ ಕಮಲದ ಹೂವಿನ ನಾಲ್ಕು ದೊಡ್ಡ ಎಸಳುಗಳಂತೆ ವಿಭಾಗಿಸಲ್ಪಟ್ಟಿದ್ದು ಆ ಹೂವಿನ ಮಧ್ಯಭಾಗದ ದಿಂಡಿನ ಪ್ರದೇಶದಲ್ಲಿ ಬೃಹತ್ ಮೇರು ಪರ್ವತವಿತ್ತು. ಶಿವನ ಪಾದದಿಂದ ಉಗಮಿಸಿ ಬ್ರಹ್ಮಪುರಿಯನ್ನು ಸುತ್ತುವರೆದಿರುವ ಆಕಾಶಗಂಗೆ ಆಕಾಶದ ಮೂಲಕ ಮೇರುಪರ್ವತದ ಮೇಲೆ ಬಿದ್ದು ನಾಲ್ಕು ವಿರುದ್ಧ ದಿಕ್ಕುಗಳಲ್ಲಿ ಹರಿಯುವ ದೊಡ್ಡ ನದಿಗಳಾಗಿ ಜೀವಿಗಳಿಗೆ ಜೀವನದಿಗಳಾಗಿದ್ದವೆಂದೂ ವರ್ಣನೆಗಳಿವೆ.
   ಭಾಗವತದ 16ನೆಯ ಅಧ್ಯಾಯದಲ್ಲೂ ಜಂಬೂದ್ವೀಪದ ವಿಷದವಾದ ವರ್ಣನೆಯಿದೆ. ಅದರ ಪ್ರಕಾರ ಭೂಮಂಡಲದ ವ್ಯಾಪ್ತಿಯೆಂದರೆ ಸೂರ್ಯನ ಬೆಳಕು ಮತ್ತು ಶಾಖ ಎಲ್ಲಿಯವರೆಗೆ ವಿಸ್ತರಿಸಿರುವುದೋ ಮತ್ತು ಎಲ್ಲಿಯವರೆಗೆ ಚಂದ್ರ, ನಕ್ಷತ್ರಗಳು ಕಾಣುವುವವೋ ಅಲ್ಲಿಯವರೆಗೆ. ಈ ಭೂಂಡಲವು ಏಳು ಸಾಗರಗಳಿಂದ ಸುತ್ತುವರೆಯಲ್ಪಟ್ಟ ಏಳು ದ್ವೀಪಗಳಾಗಿ ವಿಭಜಿತವಾಗಿವೆ. ಈ ದ್ವೀಪಗಳ ಪೈಕಿ ಜಂಬೂದ್ವೀಪವು ಒಂಬತ್ತು ವಿಭಾಗಗಳಾಗಿ ಎಂಟು ಪರ್ವತಗಳಿಂದ ಬೇರ್ಪಡಿಸಲ್ಪಟ್ಟಿದ್ದು ಪ್ರತಿಯೊಂದು ವಿಭಾಗವೂ 9000 ಯೋಜನಗಳಷ್ಟು (72000 ಮೈಲುಗಳು) ವಿಸ್ತಾರವುಳ್ಳದ್ದಾಗಿದೆ. ಈ ಒಂಬತ್ತು ವಿಭಾಗಗಳಲ್ಲಿ ಇಳಾವರ್ತವೆಂದು ಕರೆಯಲ್ಪಡುವ ಮಧ್ಯಭಾಗದಲ್ಲಿ ಬಂಗಾರದ ಪರ್ವತ ಮೇರುಪರ್ವತವಿದ್ದು ಅದು 100,000 ಯೋಜನಗಳಷ್ಟು ಅಗಲ ಮತ್ತು 84,000 ಯೋಜನಗಳಷ್ಟು ಎತ್ತರವಿತ್ತು. ಇಳಾವರ್ತದ ಉತ್ತರದಲ್ಲಿ ನೀಲ, ಶ್ವೇತ ಮತ್ತು ಸಾರಂಗವನ ಪರ್ವತಗಳಿದ್ದು, ಪೂರ್ವ, ಪಶ್ಚಿಮ ಭಾಗದಲ್ಲಿ ಮಾಲ್ಯವನ ಮತ್ತು ಗಂಧಮಾದನ ಪರ್ವತಗಳಿದ್ದರೆ, ದಕ್ಷಿಣದಲ್ಲಿ ನಿಷಾದ, ಹೇಮಕೂಟ ಮತ್ತು ಹಿಮಾಲಯ ಪರ್ವತಗಳಿವೆ. ಹಿಮಾಲಯ ಪರ್ವತದಿಂದ ವಿಂಗಡಿಸಲ್ಪಟ್ಟ ವಿಭಾಗವೇ ಭಾರತವರ್ಷ. ಮೇರು ಪರ್ವತದ ನಾಲ್ಕು ಬದಿಗಳಲ್ಲಿ ಮಂದಾರ, ಮೇರುಮಂದಾರ, ಸುಪಾರ್ಶ್ವ ಮತ್ತು ಕುಮುದಗಳೆಂಬ ಪರ್ವತಗಳಿದ್ದು ಈ ಪರ್ವತಗಳ ಧ್ವಜಗಳಂತೆ ಕಂಗೊಳಿಸುವ ನಾಲ್ಕು ಮರಗಳು - ಮಾವು, ಸೇಬು, ಕದಂಬ ಮತ್ತು ಬಾಳೆ - ಇದ್ದು ಇವುಗಳು 100 ಯೋಜನಗಳಷ್ಟು ಅಗಲ (800 ಮೈಲುಗಳು) ಮತ್ತು 1100 ಯೋಜನಗಳಷ್ಟು ಎತ್ತರ (8800 ಮೈಲುಗಳು) ಇದ್ದವಂತೆ. ಅವುಗಳ ಕೊಂಬೆಗಳೂ 1100 ಯೋಜನಗಳಷ್ಟು ಹರಡಿದ್ದವಂತೆ. ಅಷ್ಟು ಎತ್ತರದಿಂದ ಬಿದ್ದ ಮರದ ಹಣ್ಣುಗಳ ರಸ ಹರಿಯುವ ನದಿಗಳಾಗಿ ಸುಗಂಧ ಬೀರುತ್ತಿದ್ದವಂತೆ.
     ಪುಣ್ಯಭೂಮಿ, ಮಾತೃಭೂಮಿ, ಪಿತೃಭೂಮಿ, ಕರ್ಮಭೂಮಿ ಭಾರತದ ನೆಲೆವೀಡು ಜಂಬೂದ್ವೀಪ. ಜಂಬೂದ್ವೀಪದ ಎಲ್ಲೆಡೆ ಭಾರತದ ಹಿರಿಮೆ, ಗರಿಮೆ ಮತ್ತು ಸಂಸ್ಕೃತಿಯ ಪ್ರಭಾವ ಹರಡಿತ್ತು. ಆಗಿನ ಭಾರತದ ಮೇರೆಗಳು ಈಗಿನಂತಿರಲಿಲ್ಲ. ಕಾಲಾಂತರದಲ್ಲಿ ಭೌಗೋಳಿಕ ಕಾರಣವೂ ಸೇರಿದಂತೆ ಅನೇಕ ಕಾರಣಗಳಿಂದ ಮೇರೆಗಳು, ಭೂರಚನೆಗಳು ಮಾರ್ಪಾಡಾಗಿವೆ. ಆದರೂ ಜಂಬೂದ್ವೀಪೇ ಭರತವರ್ಷೇ ಭರತಖಂಡೇ. . . ಎಂಬ ಪದಗಳ ಪ್ರಯೋಗ ಮಾತ್ರ ಇಂದಿಗೂ ನಿಂತಿಲ್ಲ.
     ಪುರಾಣ, ಪುಣ್ಯಕಥೆಗಳಲ್ಲಿನ ವರ್ಣನೆ ತಿಳಿದೆವು. ಇನ್ನು ಕೆಳದಿ ಸಂಸ್ಥಾನದ ಆಸ್ಥಾನಕವಿ ಲಿಂಗಣ್ಣನ ಐತಿಹಾಸಿಕ ಕೃತಿ ಕೆಳದಿನೃಪ ವಿಜಯದಲ್ಲಿ ಬರುವ ಜಂಬೂದ್ವೀಪದ ಸುತ್ತಲೂ ಆವರಿಸಿದ್ದ ಸಮುದ್ರದ ಕಲ್ಪನೆ, ವಿವರಣೆ  ನೋಡೋಣ. ಕವಿಯೇ ಹೇಳಿಕೊಂಡಿರುವಂತೆ ಕೆಳದಿಪರಾಮೇಶ್ವರನೊಲಿದುಸುರ್ದ ಪ್ರಾಕೃತ ಸಂಸ್ಕೃತ ಮೃದುಭಾಷಾ ಕವನದಿನಧಿಕರಮ್ಯಮಾಗಿರ್ಪುದರಿಂ ಶ್ರೀಕೆಳದಿನೃಪವಿಜಯಮೆನಿಪೀಕಾವ್ಯಂ ಸೇವ್ಯಮೆನಿಸಿ ಶೋಭಿಸುತಿರ್ಕಂ. ಈ ಶೋಭಿತ, ಸೇವ್ಯ ಕಾವ್ಯದಲ್ಲಿ ಬರುವ ಸಮುದ್ರದ ವರ್ಣನೆ ರಂಜನೀಯವಾಗಿದೆ.
     ಎತ್ತರೆತ್ತರಕ್ಕೆ ಚಿಮ್ಮುವ ಹೊಳೆಯುವ ಅಲೆಗಳು, ಅಲೆಗಳಲ್ಲಿ ಓಡಾಡುವ ಭಯಂಕರ ಮೀನುಗಳು, ಆಮೆಗಳು, ಏಡಿಗಳು, ಮೊಸಳೆಗಳು, ನೀರಾನೆಗಳು, ಹಾವುಗಳೇ ಮುಂತಾದ ವಿಧವಿಧ ಜಲಚರಗಳು, ಅವುಗಳು ಚಿಮ್ಮಿಸುವ ನೀರಹನಿಗಳು, ನೊರೆಗಳು, ಶಂಖ, ಚಕ್ರಗಳಿಂದ ಶೋಭಿಸುವ ಆ ಸಾಗರವು ಶಿವನ ನಿಷಂಗ (ಬತ್ತಳಿಕೆ), ಅಚ್ಯುತನ ಪಾಸು (ವಿಷ್ಣುವಿನ ಹಾಸಿಗೆ), ವರುಣನ ಅರಮನೆ, ಚಂದಿರನ ಜನ್ಮಸ್ಥಳ, ಮೈನಾಕ ಪರ್ವತದ ರಕ್ಷಾಕವಚ, ವಡಬಾಗ್ನಿಯ ಉಷ್ಣ ಶಮನಗೊಳಿಸುವ ಜಲಪಾತ್ರೆ ಹಾಗೂ ಲಕ್ಷ್ಮಿಯ ತವರುಮನೆಯಾಗಿ ಶ್ರೇಷ್ಠ ರತ್ನ, ಮುತ್ತುಗಳ ಭಂಡಾರವಾಗಿದೆ. ಸಮುದ್ರವನ್ನು ಶ್ರೀಹರಿಗೆ ಹೋಲಿಸುವ ಕವಿ  ದೊಡ್ಡ ದೊಡ್ಡ ಅಲೆಗಳನ್ನು ಅವನ ತೋಳುಗಳಿಗೂ, ಸುಳಿಯನ್ನು ಸುದರ್ಶನ ಚಕ್ರಕ್ಕೂ, ಸಮುದ್ರದ ನೊರೆಯನ್ನು ಅವನ ಮಂದಹಾಸಕ್ಕೂ, ಸಮುದ್ರದ ಆಳ ವಿಸ್ತಾರಗಳು ಉದರದೊಳಗಣಜಾಂಡ (ಹೊಟ್ಟೆಯಲ್ಲಿ ಇರುವ ಬ್ರಹ್ಮಾಂಡ), ಹೊಳೆಯುವ ಜಲ ಅವನ ಕಾಂತಿ ಮತ್ತು ಬಡಬಾನಲವೇ ಅವನುಟ್ಟ ಪೀತಾಂಬರಕ್ಕೂ ಸಮೀಕರಿಸಿ ವರ್ಣಿಸುತ್ತಾನೆ.
     ಅಸಂಖ್ಯಾತ ನದಿಗಳು, ತೊರೆಗಳನ್ನು ತನ್ನಲ್ಲಿ ಅಡಗಿಸಿ ಅರಗಿಸಿಕೊಳ್ಳುವ ಚಕ್ರವರ್ತಿ ಸಾರ್ವಭೌಮ ಸಮುದ್ರ ಹರಿಯ ನಂದಗೋಕುಲದಂತೆ ರಮಣೀಯ, ರುದ್ರಮನೋಹರ, ಮನ್ಮಥನಂತೆ ಸದಾ ಸುಂದರ, ಅತುಲ ಜಲಚರಗಳ ಸಮೂಹದಿಂದ ವೈಭವಯುತ, ಸೂರ್ಯನಂತೆ ಹೊಳೆಯುವ, ರೋಗವಿಲ್ಲದ, ಸೌಂದರ್ಯ ಮತ್ತು ಉಪ್ಪುಗಳ ಸಮ್ಮಿಳಿತ ಲಾವಣ್ಯ ಹೊಂದಿದ, ಚಂದ್ರೋದಯದಂತೆ ಭೂಮಿಗೆ ಶೀತಲ ಅನುಭವ ನೀಡುವ ಸಮುದ್ರಕ್ಕೆ ಸಮುದ್ರವೇ ಸಾಟಿ. ಇಷ್ಟಾದರೂ ಆ ಸಮುದ್ರರಾಜನಿಗೂ ಚಿಂತೆ ತಪ್ಪಿಲ್ಲ. ಮಗಳು ಲಕ್ಷ್ಮಿ ಅತಿ ಚಂಚಲೆ, ಅಳಿಯ ವಿಷ್ಣು ಹೂಗಣ್ಣ (ತಾವರೆ ಕಣ್ಣಿನವನು), ಮಗ ಚಂದ್ರನೋ ಕ್ಷಯರೋಗಿ, ಮೊಮ್ಮಗ ಮನ್ಮಥನಿಗೆ ದೇಹವೇ ಇಲ್ಲದೆ ಅನಂಗನಾಗಿದ್ದಾನೆ. ಅವನ ವಿಷಾದದ ನಿಟ್ಟುಸಿರೇ ಸಮುದ್ರದ ಅಲೆಗಳ ಭೋರ್ಗರೆತವಾಗಿ ಹೊರಹೊಮ್ಮುತ್ತಿದೆ.
     ದೇವತೆಗಳಿಗೆ ಅಮೃತವನ್ನು ಕೊಟ್ಟ, ಶಿವನಿಗೆ ನೀಲಕಂಠನೆಂಬ ಹೆಸರು ಬರಲು ಕಾರಣವಾದ, ವಿಷ್ಣುವಿಗೆ ಲಕ್ಷ್ಮೀಪತಿಯೆಂದು ಹೆಸರು ಬರಲು ಕಾರಣವಾದ ಆ ಜಲರಾಜನ ಹಿರಿಮೆಯನ್ನು ಕವಿಯ ಮಾತಿನಲ್ಲೇ ಕೇಳುವುದು ಸೊಗಸು!
                      ಅಮರರ್ಗಮೃತಾಶನರೆಂ
                      ದುಮೆಯಾಣ್ಯಗೆ ನೀಲಕಂಠನೆಂದಚ್ಯುತಗಂ
                      ಕ್ರ್ರಮದಿಂ ಕಮಲಾಪತಿಯೆಂ
                   ದಮರ್ದಿರೆ ಪೆಸರಿತ್ತ ಜಲಧಿಯೇಂ ರಂಜಿಸಿತೋ || . . (ಕೆ.ನೃ.ವಿ.1.5)
      ಈರೀತಿ ಶೋಭಿಸುವ ಸಮುದ್ರದ ನಡುವೆ ವಿರಾಜಿಸುತ್ತಿದ್ದ ಭವ್ಯ ಕಮಲವೇ ಜಂಬೂದ್ವೀಪ !! ಈ ಜಂಬೂದ್ವೀಪದ ಮಧ್ಯಭಾಗದಲ್ಲಿದ್ದುದು ಕನಕಾಚಲ (ಬಂಗಾರದ ಪರ್ವತ-ಮೇರುಪರ್ವತ). ಹಿಂದೊಂದು ಕಲ್ಪದಲ್ಲಿ ಯಾರು ಶ್ರೇಷ್ಠರು ಎಂಬ ಕುರಿತು ಬ್ರಹ್ಮ ಮತ್ತು ವಿಷ್ಣುಗಳ ನಡುವೆ ವಿವಾದ ನಡೆದ ಸಂದರ್ಭದಲ್ಲಿ ಆ ವಿವಾದವನ್ನು ನಿಲ್ಲಿಸುವ ಸಲುವಾಗಿ ಸೃಷ್ಟಿಯಾದ ಆದಿ-ಅಂತ್ಯಗಳಿಲ್ಲದ ಮಹಾದಿವ್ಯಲಿಂಗದ ರೀತಿಯಲ್ಲಿ ಚೆಲ್ವಾಯ್ತು ಕಣ್ಗೆ ಕಾಂಚನಶೈಲ ಪರ್ವತ. ಮೇರು ಪರ್ವತದ ದಕ್ಷಿಣ ದಿಕ್ಕಿನಲ್ಲಿ ಪೂರ್ವ ಪಶ್ಚಿಮ ಸಮುದ್ರಗಳೇ ಅಂಚಾಗಿದ್ದು ಎತ್ತರೆತ್ತರದಲ್ಲಿ ಆಕಾಶವನ್ನು ಮುಟ್ಟಿ ಸೆಟೆದು ನಿಂತಿದ್ದುದು ಹಿಮವತ್ಪರ್ವತ. ಆ ಗಿರಿರಾಜನಾದರೋ ವಿಷ್ಣುವಿನ ವಾಹನವಾದ ಗರುಡನಿಗೆ ಆಧಾರವಾಗಿ, ಸಾಧು-ಸಜ್ಜನರಿಗೆ ಆಶ್ರಯತಾಣವಾಗಿ, ಅನೇಕ ಸಹಶಿಖರಗಳೊಡಗೂಡಿದ್ದು, ಆದಿಶೇಷನೆಂಬ ಕಾಲ್ಗಡಗ ಧರಿಸಿದ ಪಾದ ಉಳ್ಳವನು. ಹೈಮಾಚಲದ ದಕ್ಷಿಣಭಾಗದಲ್ಲಿ ಸಂಪತ್ಭರಿತವಾದ ಪುಣ್ಯದ ಭಂಡಾರವೆನಿಸಿ ಕರ್ಮಭೂಮಿಯಾಗಿ ಕಂಗೊಳಿಸುತ್ತಿದ್ದುದೇ ಭರತಖಂಡ.
-ಕ.ವೆಂ.ನಾಗರಾಜ್.
***************
ದಿನಾಂಕ 14.03.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಭಾನುವಾರ, ಜೂನ್ 19, 2016

ಒಂಟಿತನವೋ? ಏಕಾಂತವೋ?


     ಒಂಟಿತನ - ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ ಅನಿವಾರ್ಯ ಕ್ರಿಯೆಯಂತೆ ಜರುಗುವುದು. ಯಾವುದರಲ್ಲೂ ಆಸಕ್ತಿ ಬರದು. ಆಲಸ್ಯತನ ಮೈವೆತ್ತುವುದು. ಸಮಯ ನಿಧಾನವಾಗಿ ಚಲಿಸುವುದು. ತಾತ್ಕಾಲಿಕ ಒಂಟಿತನ ಸಹ್ಯ; ದೀರ್ಘಕಾಲದ ಒಂಟಿತನ ಖಿನ್ನತೆಗೆ ದಾರಿ. ಒಂಟಿತನದಿಂದ ಬರುವ ಹತಾಶೆ, ಸಿಟ್ಟು, ಅಸಹಾಯಕತೆಗಳು ಹುದುಗಿಸಿಟ್ಟಿದ್ದ ಆಕ್ರೋಶ ಒಮ್ಮೆಲೇ ಹೊರನುಗ್ಗಿ ಅಸಹ್ಯಕರ ವಾತಾವರಣ ಸೃಷ್ಟಿಸುವುದರ ಜೊತೆಗೆ, ಸಂಬಂಧಗಳನ್ನು ಶಾಶ್ವತವಾಗಿ ಮುರಿಯುವಂತೆ ಮಾಡಬಹುದು. ಪರಿಸ್ಥಿತಿ ಬಿಗಡಾಯಿಸಿ ಸರಿಪಡಿಸಲಾಗದ ಹಾನಿ ಉಂಟು ಮಾಡಬಹುದು. ದುರ್ಬಲ ಮನಸ್ಕರು ಆತ್ಮಹತ್ಯೆ ಸಹ ಮಾಡಿಕೊಳ್ಳಬಹುದು. ಒಂಟಿತನ ಸ್ನೇಹಕ್ಕಾಗಿ ಹಪಹಪಿಸುವ ಹಂಬಲಿಕೆಯ ಸೂಚಿ.
     ಅವನೊಬ್ಬ ಆದರ್ಶವಾದಿ ಯುವಕ. ಕನಸುಗಳನ್ನು ಕಟ್ಟಿಕೊಂಡವನು, ನ್ಯಾಯ, ನೀತಿ, ಧರ್ಮ ಎಂದು ಹೋರಾಡುವ ಮನೋಭಾವದ ಅವನಿಗೆ ಕುಟುಂಬದ ಸದಸ್ಯರ ಸಹಕಾರ, ಬೆಂಬಲ ಸಿಗುವುದಿಲ್ಲ. ನಾಲ್ಕು ಜನರಂತೆ ಅವನಿಲ್ಲ, ಉದ್ಧಾರವಾಗುವುದಿಲ್ಲವೆಂಬ ಆತಂಕ ಪೋಷಕರಿಗೆ. ಅನೇಕ ರೀತಿಯಲ್ಲಿ ತಿಳಿ ಹೇಳುತ್ತಾರೆ, ಬೈದು ಬುದ್ಧಿ ಹೇಳುತ್ತಾರೆ, ಅವರಿವರಿಂದ ಉಪದೇಶ ಮಾಡಿಸುತ್ತಾರೆ. ಆದರೆ ಆದರ್ಶದ ಬೆನ್ನು ಬಿದ್ದ ಯುವಕನಿಗೆ ಅವಾವುದೂ ರುಚಿಸುವುದಿಲ್ಲ. ಒಳ್ಳೆಯ ವಿಚಾರಕ್ಕೆ ಮನೆಯವರೇ ಬೆಂಬಲಿಸದಿದ್ದರೆ ಹೇಗೆ ಎಂಬುದು ಅವನ ವಾದ. ಕೊನೆಗೆ ಮನೆಯವರು ಸುಮ್ಮನಾದರೂ ಅವರ ಕಿರಿಕಿರಿ, ಗೊಣಗಾಟಗಳು ತಪ್ಪುವುದೇ ಇಲ್ಲ. ಕಠಿಣ ಆದರ್ಶದ ಹಾದಿ ಹಿಡಿದ ಅವನಿಗೆ ಮನೆಯ ಹೊರಗೂ ಪ್ರೋತ್ಸಾಹ ಸಿಗುವುದಿಲ್ಲ. ತಾನು ಮಾಡುತ್ತಿರುವುದು ಸರಿ ಎಂಬ ಅವನ ಅಂತರಂಗದ ಒಪ್ಪಿಗೆ ಮಾತ್ರ ಅವನ ಜೊತೆಗಾರನಾಗಿರುತ್ತದೆ. ಬೆನ್ನು ತಟ್ಟುವವರಿಲ್ಲದ ಅವನನ್ನು ಪ್ರಿಯರ ಹೀನೈಕೆ ಕುಗ್ಗಿಸುತ್ತದೆ, ಒಂಟಿತನದ ಅನುಭವ ಮಾಡಿಸುತ್ತದೆ. ಒಳ್ಳೆಯವನಾಗು, ನೀನು ಒಂಟಿಯಾಗುವೆ ಎಂಬುದಕ್ಕೆ ಉದಾಹರಣೆಯಿದು.
     ಹದಿಹರೆಯದ ಹುಚ್ಚು ಪ್ರೇಮಿಗಳ ಒಂಟಿತನ ಮತ್ತೊಂದು ತರಹ. ಪ್ರೇಮಿಯಿಲ್ಲದೆ ಬಾಳು ಶೂನ್ಯವೆಂದು ಭಾವಿಸಿ ಕೊರಗುವ, ಹುಚ್ಚಾಗುವ ದೇವದಾಸಗಳದ್ದು ಒಂದೆಡೆಯಾದರೆ, ತನಗೆ ದಕ್ಕದವರು ಬೇರೆಯವರಿಗೂ ಸಿಗಬಾರದೆಂದು ಆಸಿಡ್ ಎರಚುವ, ಕೊಲೆ ಮಾಡುವವರದು ಮತ್ತೊಂದೆಡೆ! ಆತ್ಮಹತ್ಯೆ ಮಾಡಿಕೊಳ್ಳುವವರದೂ ಒಂಟಿತನವನ್ನು ಎದುರಿಸಲಾಗದವರ ಮಗದೊಂದು ರೀತಿ. ಅವನ/ಅವಳ ನೆನಪಿನಲ್ಲಿ ಕೊನೆಯವರೆಗೂ ಮದುವೆಯಾಗದೇ ಉಳಿಯುವ ಪ್ರೇಮಿಗಳನ್ನೂ, ಮಾನಸಿಕ ಕಾಯಿಲೆಗಳಿಂದ ನರಳುವವರನ್ನೂ ಕಾಣಬಹುದು. ಕೇವಲ ಇವರಷ್ಟೇ ಅಲ್ಲ, ಅತಿಯಾಗಿ ಹಚ್ಚಿಕೊಂಡ ಸ್ನೇಹಿತರು, ಬಂಧುಗಳು, ಕುಟುಂಬದವರು ಯಾರೇ ಆಗಲಿ ದೂರವಾದಾಗ/ಕಾಲವಾದಾಗ ಸಹ ಒಂಟಿತನ ಕಾಡುತ್ತದೆ. ವೃದ್ಧಾಪ್ಯದಲ್ಲಿ ಮಕ್ಕಳು ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಿದರೆ ಸಾಕು ಎಂದು ಹಂಬಲಿಸುವವರಿರುತ್ತಾರೆ.
     ಪ್ರೀತಿ, ವಿಶ್ವಾಸ, ಸ್ನೇಹದ ಕೊರತೆ ಒಂಟಿತನದ ಮೂಲ. ಒಂಟಿತನ ಕಾಡಬಾರದೆಂದರೆ ಪರಸ್ಪರ ಪ್ರೀತಿ, ವಿಶ್ವಾಸಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಗ ಅಂತರಂಗವಾದರೂ ಜೊತೆಗೆ ಇದ್ದು ಸಮಾಧಾನಿಸುತ್ತದೆ. ತಪ್ಪಿದ್ದು ತಿದ್ದಿಕೊಳ್ಳದಿದ್ದರೆ ಅಂತರಂಗವೂ ಜೊತೆಗಿರುವುದಿಲ್ಲ. ಕಳೆದುಕೊಳ್ಳುವವರು ಇನ್ನು ಯಾರೂ ಉಳಿದಿಲ್ಲದಾಗ, ಸ್ವಂತಿಕೆಗೆ ಬೆಲೆಯಿಲ್ಲವಾದಾಗ ಅದನ್ನು ಜೀವನದ ಸಾವು (ಜೀವದ ಸಾವಲ್ಲ) ಎನ್ನಬಹುದು. ಅಂತಹ ಸಾವು ಜೀವನಕ್ಕೆ ಬರಬಾರದೆಂದರೆ ಒಳಗಿನ ಮಾತುಗಳಿಗೆ ಕಿವಿಗೊಡಬೇಕು.
     ಮತ್ತೊಂದು ರೀತಿಯ ಒಂಟಿತನವಿದೆ. ಅದರಲ್ಲಿ ಹಿತವಿದೆ. ಅದೆಂದರೆ ವಿವಿಧ ರಂಗಗಳಲ್ಲಿ ಸುಪ್ರಸಿದ್ಧರಾದವರ, ಮುಖಂಡರ, ಹಿರಿಯ ಅಧಿಕಾರಿಗಳ ಒಂಟಿತನ. ಅವರುಗಳು  ಒಂಟಿತನವನ್ನು ಒಪ್ಪಿಕೊಳ್ಳಲೇಬೇಕು, ಅಪ್ಪಿಕೊಳ್ಳಲೇಬೇಕು. ಒಂಟಿಯಾಗಿರುವುದೆಂದರೆ ಇತರರಿಗಿಂತ ಭಿನ್ನವಾಗಿರುವುದು, ಇತರರಿಗಿಂತ ಭಿನ್ನವೆಂದರೆ ಒಂಟಿಯಾಗಿರುವುದು ಎಂದು ಅವರ ಮಟ್ಟಿಗೆ ಹೇಳಬಹುದು. ಅವರುಗಳನ್ನು ಸಮನಾಗಿ ಪರಿಗಣಿಸುವವರ ಸಂಖ್ಯೆ  ಬಹಳ ಕಡಿಮೆ. ಅವರ ಒಂಟಿತನದಲ್ಲೇ ಅವರ ಸೃಜನಾತ್ಮಕ ಶಕ್ತಿ ಹೊರಹೊಮ್ಮುತ್ತದೆ. ಇದರಲ್ಲೂ ಒಂದು ಅಪಾಯವಿದೆ. ಅದೆಂದರೆ ಸುಪ್ರಸಿದ್ಧರಾದವರು ಕಾರಣಾಂತರಗಳಿಂದ ಪ್ರಸಿದ್ಧಿ ಕಳೆದುಕೊಂಡರೆ, ಅಧಿಕಾರ ಚ್ಯುತಿಯಾದರೆ ಅವರ ಜೊತೆಗಿದ್ದು ಬಹುಪರಾಕ್ ಹೇಳುತ್ತಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಅನುಭವವಾಗುವ ಒಂಟಿತನದ ನೋವು ವರ್ಣನಾತೀತ. ಕ್ಷಣಿಕ ವ್ಯಾಮೋಹದಿಂದ, ಹಣದ ದಾಹದಿಂದ ಅಧಿಕಾರ, ಸ್ಥಾನ, ಮಾನಗಳನ್ನು ಕಳೆದುಕೊಂಡ ಮಂತ್ರಿಗಳ/ಹಿರಿಯ ನಾಯಕರ ಜೊತೆಗೆ ಯಾರಿರುತ್ತಾರೆ?
     ಇನ್ನೊಂದು ಅಪಾಯಕಾರಿ ಒಂಟಿತನವಿದೆ! ಒಟ್ಟಿಗಿದ್ದರೂ ಕಾಡುವ ಒಂಟಿತನ! ಎಲ್ಲೆಲ್ಲೂ ನೀರು, ಕುಡಿಯಲು ತೊಟ್ಟೂ ನೀರಿಲ್ಲ ಎಂಬಂತಹ ಸ್ಥಿತಿಯದು. ಒಂದು ಉದಾಹರಣೆ ನೋಡೋಣ. ಎಲ್ಲರೂ ಒಟ್ಟಿಗೇ ಟಿವಿ ನೋಡುತ್ತಿರುತ್ತಾರೆ. ಪರಸ್ಪರ ಮಾತುಗಳು ಅನಿವಾರ್ಯವಾದರೆ ಮಾತ್ರ ಆಡುತ್ತಾರೆ. ಅವರವರ ಪಾಡು ಅವರಿಗೆ. ಪರಸ್ಪರರನ್ನು ಸಹಿಸಿಕೊಂಡು ಹೋಗುತ್ತಿರುತ್ತಾರೆ,  ಅಸಹನೀಯವಾದಾಗ ಕಿರುಚಾಡುತ್ತಾರೆ, ಜಗಳವಾಡುತ್ತಾರೆ, ಅನಿವಾರ್ಯವೆಂಬಂತೆ ಸುಮ್ಮನಾದರೂ ಎಲ್ಲರೂ ಅಲ್ಲಿ ಒಂಟಿಗಳೇ. ನೆಂಟರು, ಸ್ನೇಹಿತರು ಬಂದರೂ ಔಪಚಾರಿಕವಾದ ಮಾತುಗಳನ್ನಾಡಿ ಪುನಃ ಟಿವಿಯ ಕಡೆ ಗಮನ ಕೊಡುತ್ತಾರೆ. ಬಂದವರಿಗೆ ಏಕಾದರೂ ಬಂದೆವಪ್ಪಾ ಅನ್ನುವ ಸ್ಥಿತಿ. ಕಛೇರಿಗಳಲ್ಲೂ ಅಷ್ಟೇ. ಒಂಟಿತನವನ್ನು ಅನುಭವಿಸುವ ಅಧಿಕಾರಿಗಳು, ನೌಕರರನ್ನು ಕಾಣಬಹುದು. ಇಲ್ಲಿ ಗಮನಿಸುವ ಅಂಶವೆಂದರೆ ಸ್ವಂತಿಕೆಗೆ, ಅಹಂಗೆ ಬೀಳುವ ಪೆಟ್ಟು ಒಂಟಿತನವಾಗಿ ಕಾಡುವುದು! ಪರಸ್ಪರರ ಅಪನಂಬಿಕೆಯಿಂದ ಉಂಟಾಗುವ ಒಂಟಿತನ ನರಕಸದೃಶ. ಉದ್ದೇಶೂರ್ವಕವಾಗಿ ಅಹಂಗೆ ಪೆಟ್ಟು ಕೊಡುವ ಕುಟುಂಬದವರೇ, ಜೊತೆಗಾರರೇ, ಸಹೋದ್ಯೋಗಿಗಳೇ ಒಂಟಿತನದ ನೋವು ಕೊಡುವವರು!
     ಒಂಟಿತನದ ತಾಪ ಕಡಿಮೆ ಮಾಡಿಕೊಳ್ಳಲು ಓದುವುದು, ಬರೆಯುವುದು, ಸಂಗೀತ ಕೇಳುವುದು, ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಅಭ್ಯಾಸಗಳಾದರೆ, ದುಶ್ಚಟಗಳಿಗೆ ದಾಸರಾಗುವುದು ಇನ್ನೊಂದು ರೀತಿಯ ಪಲಾಯನ. ಸಿಗರೇಟು ಸೇದುವುದು, ಕುಡಿಯುವುದು, ಜೂಜಾಡುವುದು, ವೇಶ್ಯಾಸಂಗ, ಇತ್ಯಾದಿಗಳು ಇದರಲ್ಲಿ ಸೇರುತ್ತವೆ. ಕ್ರಮೇಣ ದುಶ್ಚಟಗಳು ಅವರನ್ನೇ ಆಕ್ರಮಿಸಿ ಅವರನ್ನಲ್ಲದೆ ಅವರನ್ನು ನಂಬಿದವರಿಗೂ ನಾನಾ ರೀತಿಯ ತೊಂದರೆ ಕೊಡುತ್ತವೆ, ಹೆಚ್ಚಿದ ಒಂಟಿತನದಿಂದ ಬಳಲುವಂತೆ ಮಾಡುತ್ತವೆ. ಒಂಟಿತನ ಅನುಭವ ಕೊಡುತ್ತದೆ. ಸರಿಯಾಗಿ ಬಳಸಿಕೊಂಡಲ್ಲಿ ವರವಾಗುತ್ತದೆ. ಒಳ್ಳೆಯ ಸಾಹಿತ್ಯ, ಸಂಗೀತ, ಇತ್ಯಾದಿಗಳು ಕುಡಿಯೊಡೆಯುವುದು ಆಗಲೇ. ಪ್ರೀತಿಸುವವರ, ತನ್ನನ್ನು ಗುರುತಿಸುವವರ ಕೊರತೆ ನೀಗಿಸಿಕೊಳ್ಳಲು ಅವರೇ ಇತರರನ್ನು ಪ್ರೀತಿಸಲು, ಗೌರವಿಸಲು ಮುಂದಾದರೆ ಪ್ರತಿಪ್ರೀತಿ, ಪ್ರತಿಗೌರವ ಸಿಗಲಾರದೆ? ಬಂದದ್ದೂ ಒಂಟಿ, ಹೋಗುವುದೂ ಒಂಟಿ, ಆದರೆ ನಡುವಿನ ಜೀವನದಲ್ಲಿ ಪರಸ್ಪರರ ಅವಲಂಬನೆ, ಅಗತ್ಯತೆ ಬರುವುದರಿಂದ ಒಂಟಿತನ ಹೆಚ್ಚು ಕಾಡುತ್ತದೆ. ಪ್ರೀತಿ, ವಿಶ್ವಾಸಗಳು ಒಂಟಿಯಲ್ಲವೆಂದು ಭಾವಿಸುವಂತೆ ಮಾಡುತ್ತದೆ. ಆಳವಾಗಿ ಯೋಚಿಸಿದರೆ ಸಮುದಾಯ, ಸಂಘಟನೆ, ಜಾತಿ, ಧರ್ಮ, ಗುಂಪು, ಇತ್ಯಾದಿಗಳೂ ಸಹ ಒಂಟಿತನವನ್ನು ಹೋಗಲಾಡಿಸುವ ಸಲುವಾಗಿಯೇ ಹುಟ್ಟಿಕೊಂಡದ್ದು ಎಂದು ಅನ್ನಿಸದಿರದು. ದುಃಖ ಅನುಭವಿಸಲು ಒಬ್ಬರು ಇದ್ದರೂ ಆಗುತ್ತದೆ, ಆದರೆ ಸಂತೋಷ ಹಂಚಿಕೊಳ್ಳಲು ಇಬ್ಬರಾದರೂ ಇರಬೇಕು. ಆದ್ದರಿಂದ ಮನುಜ-ಮನುಜರ ನಡುವೆ ಗೋಡೆಗಳನ್ನು ಕಟ್ಟದೆ ಸೇತುವೆಗಳನ್ನು ಕಟ್ಟಿದರೆ ಒಂಟಿತನ ಕಡಿಮೆಯಾದೀತು. ಒಂಟಿಯಾಗಿ ಇರಬಯಸುವವರು ಯಶಸ್ವಿ ಮಾನವರಲ್ಲ. ಇತರ ಹೃದಯಗಳ ಮಿಡಿತ ಕೇಳದವರ ಹೃದಯ ಬಾಡುತ್ತದೆ, ಇತರರ ಮಾತುಗಳನ್ನು ಕೇಳದವನ ಮೆದುಳು ಕುಗ್ಗುತ್ತದೆ.
     ಒಂಟಿತನದಂತೆಯೇ ತೋರುವ, ಆದರೆ ಒಂಟಿತನವಲ್ಲದ ಸಂಗತಿಯೊಂದಿದೆ. ಅದೇ ಏಕಾಂತ! ಒಂಟಿತನ ತನ್ನತನದ ಬಡತನವಾದರೆ, ಏಕಾಂತ ತನ್ನತನದ ವೈಭವದ ಸ್ಥಿತಿ. ಒಂಟಿತನ ಒಬ್ಬನೇ ಇರುವ ನೋವ ಹೇಳಿದರೆ, ಏಕಾಂತ ಒಬ್ಬನೇ ಇರುವ ಸೊಬಗ ತೋರುವುದು. ಏಕಾಂತದಲ್ಲಿ ಬರಹಗಾರನೊಬ್ಬ ಅರ್ಥವಾಗದ ಸಂಗತಿಗಳಿಗೆ ಅರ್ಥ ಹುಡುಕುತ್ತಾನೆ, ಸಂಗೀತಗಾರ ಹೊಸ ಆಯಾಮಗಳ ಕುರಿತು ಧ್ಯಾನಿಸುತ್ತಾನೆ, ವಿವಿಧ ಸ್ತರಗಳವರು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಮುಂದುವರೆಯುವ ಕುರಿತು ಚಿಂತಿಸುತ್ತಾರೆ, ಸಾಧಕ ಬದುಕಿನ ಅರ್ಥ ತಿಳಿಯುವ ಪ್ರಯತ್ನ ನಡೆಸುತ್ತಾನೆ. ಆಗ ಅವರುಗಳ ಜೊತೆಗಿರುವುದು, ದಾರಿ ತೋರುವುದು ಅವರ ಅಂತರಂಗ. ತಪ್ಪುಗಳನ್ನು ಇತರರ ಎದುರಿಗೆ ಒಪ್ಪಿಕೊಳ್ಳದಿದ್ದರೂ ಅಂತರಂಗದ ಎದುರು ತಲೆಬಾಗಲೇಬೇಕು, ಗೋಚರಿಸದ ಸತ್ಯ ಗೋಚರಿಸುವುದು ಆಗಲೇ. ಅದೇ ಏಕಾಂತದ ಮಹಿಮೆ. ಏಕಾಂತ ಪ್ರೌಢತೆಯ ಸಂಕೇತ. ಏಕಾಂತದಲ್ಲಿ ಚಟುವಟಿಕೆಗಳ ಉದಯವಾಗುತ್ತದೆ, ಅಲ್ಲಿ ಚಲನೆಯಿಲ್ಲದ ಕ್ರಿಯೆಯಿದೆ, ಶ್ರಮವಿರದ ಕೆಲಸವಿದೆ, ಕಣ್ಣು ಮೀರಿದ ದೃಷ್ಟಿಯಿದೆ, ಬಯಕೆ ಮೀರಿದ ಆಸೆಯಿದೆ, ಅನಂತ ತೃಪ್ತಿಯ ಭಾವವಿದೆ. ಏಕಾಂತ ತನ್ನತನವನ್ನು ಬೆಳೆಸುತ್ತದೆ. ಅಂತರಂಗ ಬಹಿರಂಗಕ್ಕೆ ಹೊಂದಿಕೆಯಾಗದಿದ್ದರೆ ಒಂಟಿತನ ಕಾಡುತ್ತದೆ. ಏಕಾಂತ ಹೊಂದಿಕೆ ಮಾಡಿಕೊಳ್ಳುವ ದಾರಿ ತೋರುತ್ತದೆ, ಒಂಟಿಯಲ್ಲವೆಂಬ ಭಾವಕ್ಕೆ ಇಂಬು ಕೊಡುತ್ತದೆ, ನಾವು ನಾವಾಗಿರಲು ಏಕಾಂತದಲ್ಲಿ ಮಾತ್ರ ಸಾಧ್ಯ. ಸಮೂಹದಲ್ಲಿ ಮತ್ತು ಇತರರೊಂದಿಗೆ ಇದ್ದಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ ಎಂಬುದು ನಿತ್ಯ ಸತ್ಯ. ಇತರರು ಏನೆಂದುಕೊಳ್ಳುತ್ತಾರೆಂದೋ, ತಪ್ಪು ತಿಳಿಯುತ್ತಾರೆಂದೋ ಅಥವಾ ಯಾರನ್ನಾದರೂ ಮೆಚ್ಚಿಸುವುದಕ್ಕಾಗಿಯೋ ಇಷ್ಟವಿಲ್ಲದಿದ್ದರೂ ನಮ್ಮತನಕ್ಕೆ ಹೊರತಾಗಿ ವರ್ತಿಸುತ್ತೇವೆ, ಪರಿಸ್ಥಿತಿಯೊಂದಿಗೆ ರಾಜಿಯಾಗುತ್ತೇವೆ. ಏಕಾಂತದಲ್ಲಿ ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಿರುತ್ತದೆ ಮತ್ತು ಅದರಿಂದಾಗಿ ಸಂತೋಷವಿರುತ್ತದೆ. ಸಾಧನೆಗೆ, ಧ್ಯಾನಕ್ಕೆ, ಮನನಕ್ಕೆ, ವಿಮರ್ಶೆಗೆ, ಹೇಗಿರಬೇಕೆಂದು ನಿರ್ಧರಿಸುವುದಕ್ಕೆ, ಉತ್ತಮ ರೀತಿಯಲ್ಲಿ ಮುಂದುವರೆಯುವುದಕ್ಕೆ ಏಕಾಂತದಲ್ಲಿ ಅವಕಾಶವಿದೆ. ಇತರರನ್ನು ಕೈಯಿಂದ ಮುಟ್ಟುವುದಕ್ಕೂ ಹೃದಯದಿಂದ ಮುಟ್ಟುವುದಕ್ಕೂ ವ್ಯತ್ಯಾಸ ತಿಳಿಯುವುದು ಏಕಾಂತದಲ್ಲೇ.
 -ಕ.ವೆಂ.ನಾಗರಾಜ್.
***************
ದಿನಾಂಕ 28.03.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಜೂನ್ 17, 2016

ಒಳ್ಳೆಯತನದ ಅಳತೆಗೋಲು


ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ||
     ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ  ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿಯೇ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ.
     ಕಲ್ಮಶಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಲ್ಮಶಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೋಡೋಣ: ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಿದ್ದಾಗ ಅವರ ೩ ವರ್ಷದ  ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು "ನೀನು ಪೆದ್ದ, ದಂಡ" ಎಂದಿತು. ಚಿಕ್ಕ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು  "ಮಗು  ಸರಿಯಾಗಿ ಹೇಳಿತು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ"  ಎಂದರು.  ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಹಿರಿಯರಿಗೂ ಆ  ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ ಹೊರತು ಅದು ಮಗುವಿನ ಸ್ವಂತ ಮಾತಾಗಿರಲಿಲ್ಲ. ಈಗ ಅವರು ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂಬ ಶಹಭಾಸಗಿರಿ ಕೊಟ್ಟಂತಾಗಿ ಮುಂದೆ ಇಂತಹ ಮಾತುಗಳನ್ನು ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದ್ದರು. ಮಕ್ಕಳು ನಿಷ್ಕಲ್ಮಶವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಶಗಳನ್ನು ತುಂಬಬಾರದಲ್ಲವೇ?
     ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. ಆತ್ಮೀಯರು ಸೀನಿದರೂ ಏನೋ ಆಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಇನ್ನೂ ಎಷ್ಟು ಜನರನ್ನು ಹಾಳುಮಾಡಬೇಕೋ? ಎಂದು ಉದ್ಗರಿಸುತ್ತಾರೆ. ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
     ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಜನ ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ! ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಯಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಉಳಿಯುವ ಮಾರ್ಗ. ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ನಾವು ಆಡುವ ಮಾತುಗಳು ಹೇಗಿರಬೇಕೆಂದು ಋಗ್ವೇದದ ಈ ಮಂತ್ರ ಹೇಳುತ್ತಿದೆ:
ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ || (ಋಕ್. ೧೦.೭೧.೨.)
     ಜರಡಿಯಿಂದ ಹಿಟ್ಟನ್ನು ಶೋಧಿಸುವಂತೆ ಬುದ್ಧಿವಂತರು ಆಡುವ ಮಾತನ್ನು ಮನಸ್ಸಿನಲ್ಲಿ ಶೋಧಿಸಿ ಮಾತನಾಡುತ್ತಾರೆ. ಆಲೋಚಿಸಿ ಮಾತನಾಡುವವರಿಂದ ಜನರಲ್ಲಿ ಸ್ನೇಹಭಾವನೆ ಬೆಳೆಯುತ್ತದೆ. ಮನುಷ್ಯನ ನಿಜವಾದ ಸಂಪತ್ತು ಮಾತಿನಲ್ಲಿಯೇ ಅಡಗಿದೆ ಎಂಬುದು ಈ ಮಂತ್ರದ ಅರ್ಥ.
     ಒಳ್ಳೆಯತನದ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡೋಣ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಮ್ಮ ದೃಷ್ಟಿಯಲ್ಲಿ  ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ, ಇನ್ನೊಂದಲ್ಲಿ ಅವರ ದೃಷ್ಟಿಯಲ್ಲಿ ನಾವು  ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸೋಣ. ಆಶ್ಚರ್ಯವೆಂದರೆ ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನಾವು ಒಳ್ಳೆಯವರೆಂದು ಹೇಳುವವರು ನಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನಾವು ಕೆಟ್ಟವರೆನ್ನುವವರು ನಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿದಾಗ ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನಾವು ಒಳ್ಳೆಯವರೇ. ಕೆಟ್ಟವರು ಎಂಬುದು ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ.
     ಈ ಬದುಕು ಮೂರುದಿನದ್ದು ಎಂದು ಗೊತ್ತಿದ್ದರೂ ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ? ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಅನ್ವಯಿಸಿಕೊಳ್ಳುತ್ತೇವೆಯೇ? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿ.
     ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ  ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು  ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ.  ಬರ್ನಾರ್ಡ್ ಶಾ ಹೇಳಿದಂತೆ ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ. ಸಂತೋಷ ಹಂಚಿಕೊಳ್ಳೋಣ; ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ; ಅದು ಅರ್ಧ ಕಡಿಮೆಯಾಗುತ್ತದೆ.
 -ಕ.ವೆಂ.ನಾಗರಾಜ್.
***************
ದಿನಾಂಕ 07-03-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:



ಗುರುವಾರ, ಜೂನ್ 2, 2016

ಮುಪ್ಪು ಶಾಪವಾಗದಿರಲಿ - 3


    ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ ನಿವಾಸಿಗಳೊಂದಿಗೆ ಮಾತನಾಡಿದಾಗ, ಕುಟುಂಬದವರೊಡನೆ ಇದ್ದರೂ ಖಿನ್ನತೆಯಿಂದ ಬಳಲುತ್ತಿರುವ ಹಲವು ವೃದ್ಧರನ್ನು ಮಾತನಾಡಿಸಿದಾಗ ಆದ ಮನಕಲಕುವ ಅನುಭವಗಳನ್ನು ಹಂಚಿಕೊಂಡರೆ ಅದೊಂದು ದೀರ್ಘ ಲೇಖನವೇ ಆಗುತ್ತದೆ. ಹಾಗೆಂದು ಅವರ ಕಥೆಗಳು ಹೊಸವನಲ್ಲ, ನಮ್ಮ-ನಿಮ್ಮ ಸುತ್ತಲಿನಲ್ಲೇ ಕಾಣುವಂತಹುದು!  ನೋಡುವ ಕಣ್ಣುಗಳಿರಬೇಕು, ಮಿಡಿಯುವ ಹೃದಯಗಳಿರಬೇಕಷ್ಟೇ! ಎಲ್ಲಾ ವೃದ್ಧರುಗಳೂ ಹೀಗೆಯೇ ಬಳಲುತ್ತಾರೆ ಎಂದು ಹೇಳಲಾಗದು. ಪ್ರತಿಯೊಂದಕ್ಕೂ ಅಪವಾದಗಳಿದ್ದು, ಸುಖ-ಸಂತೋಷಗಳಿಂದ, ಮಕ್ಕಳು, ಬಂಧುಗಳಿಂದ ಪ್ರೀತಿ, ವಿಶ್ವಾಸ ಪಡೆಯುವ ಭಾಗ್ಯವಿರುವವರೂ ಇರುತ್ತಾರೆ. ಆದರೆ ಹತ್ತರಲ್ಲಿ ಆರು ಕುಟುಂಬಗಳಲ್ಲಿ ಭಾಗ್ಯವಂಚಿತರೇ ಇರುತ್ತಾರೆಂಬುದು ವಾಸ್ತವವಾಗಿದೆ. ವೃದ್ಧರ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಹೀಗೆ ಪಟ್ಟಿ ಮಾಡಬಹುದು:
೧. ಆರ್ಥಿಕ ಸಮಸ್ಯೆ,
೨. ಆಶ್ರಯದ ಸಮಸ್ಯೆ,
೩. ಆರೋಗ್ಯದ ಸಮಸ್ಯೆ,
೪. ಪ್ರೀತಿಯ ಕೊರತೆ ಅಥವ ಭಾವನಾತ್ಮಕ ಆಧಾರದ ಕೊರತೆ.
     ದುಡಿದರೆ ಮಾತ್ರ ಅನ್ನ ಎಂಬ ಸ್ಥಿತಿಯಲ್ಲಿದ್ದವರು ವೃದ್ಧರಾದಾಗ ಇನ್ನೊಬ್ಬರ ಆಶ್ರಯದಲ್ಲಿ ಬಾಳಬೇಕಾಗಿ ಬಂದಾಗ ಅವರುಗಳು ಪಡುವ ಪಾಡು ಅವರಿಗೆ ಮಾತ್ರ ಗೊತ್ತಾಗಲು ಸಾಧ್ಯ. ಹಣ, ಆಸ್ತಿಯಿದ್ದವರೂ ಸಹ ಶಕ್ತಿಗುಂದಿದ ಸ್ಥಿತಿಯಲ್ಲಿ ಅನಾಥ ಸ್ಥಿತಿಯಲ್ಲಿ ಪಾಡುಪಡುವ ಉದಾಹರಣೆಗಳೂ ಇವೆ. ಅವರ ಮಕ್ಕಳು, ಸಂಬಂಧಿಗಳು ಅವರ ಹಣ ಮತ್ತು ಆಸ್ತಿಗಳ ಅನಧಿಕೃತ ಒಡೆಯರಾಗಿಬಿಡುತ್ತಾರೆ! ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಭಾವನಾತ್ಮಕ ಬೆಂಬಲದ ಕೊರತೆ! ತಮಗೆ ಏನೂ ಬೇಡ, ಪ್ರೀತಿಯ ಎರಡು ಮಾತುಗಳು ಸಾಕು ಎಂದು ಹಂಬಲಿಸುವ ಜೀವಗಳು ಕೊರಗಿನಲ್ಲೇ ಅಂತ್ಯ ಕಾಣುತ್ತವೆ ಎಂಬುದು ನೋವು ತರುತ್ತದೆ. ವೃದ್ಧಾಶ್ರಮದ ನಿವಾಸಿಗಳಲ್ಲಿ ಹೆಚ್ಚಿನವರು ಸೊಸೆಯರ ವಿರುದ್ಧ ದೂರಿದ್ದರು. ಗಂಡ-ಹೆಂಡತಿಯರಲ್ಲಿ ಜಗಳಗಳಾದಾಗ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆಂದು ದೂರು ಸಲ್ಲಿಸಿ ಪೋಲಿಸ್ ಠಾಣೆ, ನ್ಯಾಯಾಲಯಗಳ ಮೆಟ್ಟಲು ಹತ್ತಬೇಕಾಗಿ ಬಂದ ಅತ್ತೆ-ಮಾವಂದಿರು, ಹಿರಿಯ ಅಧಿಕಾರಿಯಾಗಿದ್ದು ಮನೆಯಲ್ಲಿ ತಾತ್ಸಾರ, ಅವಮಾನಗಳಿಗೆ ಒಳಗಾಗಿ ವೃದ್ಧಾಶ್ರಮ ಸೇರಿದ್ದವರು, ಇದ್ದ ಒಬ್ಬಳೇ ಮಗಳು ಮತ್ತು ಅಳಿಯ ಸೇರಿಕೊಂಡು ಮೋಸದಿಂದ ಹಣವನ್ನು ಮತ್ತು ಜಮೀನನನ್ನು ಲಪಟಾಯಿಸಿ ಹೊರಗಟ್ಟಲ್ಪಟ್ಟ ಮುದುಕಿ, ಮಕ್ಕಳಾಗಲೀ, ಬಂಧುಗಳಾಗಲೀ ಇರದೆ ಅನಿವಾರ್ಯವಾಗಿ ಬಂದವರು, ಹೊಂದಿಕೊಳ್ಳದೆ ಜಗಳವಾಡಿಕೊಂಡು ಬಂದವರು ಅಥವ ಹೊರದಬ್ಬಲ್ಪಟ್ಟವರು, ಹೀಗೆ ಅನೇಕ ರೀತಿಯ ಹಿರಿಯ ಜೀವಗಳು ಅಲ್ಲಿದ್ದವು. ಒಬ್ಬೊಬ್ಬರದು ಒಂದೊಂದು ಸಮಸ್ಯೆಯಾದರೂ, ಎಲ್ಲರ ಸಾಮಾನ್ಯವಾದ ಸಮಸ್ಯೆಯೆಂದರೆ ಕೊನೆಗಾಲದಲ್ಲಿ ತಮ್ಮವರು ತಮಗೆ ಪ್ರೀತಿ ತೋರಿಸುತ್ತಿಲ್ಲವಲ್ಲಾ ಎಂಬುದೇ! ಬೇಸಿಗೆಯ ತಾಪದಿಂದ ಬಾಯಾರಿ ಬಳಲಿ ಬೆಂಡಾದವರು ನೀರಿಗೆ ಹಂಬಲಿಸುವಂತೆ ಅವರು ಪ್ರೀತಿಯ ಎರಡು ಮಾತುಗಳಿಗಾಗಿ ಹಂಬಲಿಸುತ್ತಿದ್ದಾರೆ ಎಂಬ ಅರಿವು ಸಂಬಂಧಿಸಿದವರಿಗೆ ಬಂದರೆ ಅವರ ಪುಣ್ಯ!
     ಸರ್ಕಾರದ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಮುಂತಾದ ಯೋಜನೆಗಳು ಹಲವರಿಗೆ ಉಪಕಾರಿಯಾಗಿವೆ. ಆದರೆ ಈ ಸೌಲಭ್ಯ ನಿಜವಾಗಿ ಸಿಗಬೇಕಾದ ಎಲ್ಲರಿಗೂ ಸಿಕ್ಕಿದೆಯೇ ಎಂಬುದು ಪ್ರಶ್ನಾರ್ಹ. ಅರ್ಹತೆಯಿದ್ದವರಿಗೆ ಕಛೇರಿಗೆ ಅಲೆದಾಡಿ ಸೌಲಭ್ಯ ಪಡೆಯಲೂ ಆಗದು. ಈ ಸೌಲಭ್ಯಗಳನ್ನು ಅನುಕೂಲಸ್ಥರೇ ದುರುಪಯೋಗಪಡಿಸಿಕೊಂಡ ಪ್ರಕರಣಗಳಿಗೆ ಕೊರತೆಯಿಲ್ಲ. ಸಾಮಾಜಿಕ ಕಳಕಳಿಯುಳ್ಳ ಅಧಿಕಾರಿಗಳಿದ್ದರೆ ಹಲವು ಹಿರಿಯ ಜೀವಗಳಿಗೆ ಆಸರೆ ಸಿಗುತ್ತದೆ. ಇಲ್ಲದಿದ್ದರೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬಲ್ಲವರಿಗೆ ಸೌಲಭ್ಯಗಳು ಸಿಕ್ಕೀತು. ಧಾರ್ಮಿಕ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ನಡೆಸುವ ವೃದ್ಧಾಶ್ರಮಗಳಲ್ಲೂ ಇಲ್ಲವೂ ಸರಿಯಾಗಿ ನಿರ್ವಹಿಸಲ್ಪಡುತ್ತವೆ ಎಂದೇನೂ ಇಲ್ಲ. ಹಣ ಪಡೆದು ಸೌಲಭ್ಯ ಒದಗಿಸುವ ಮತ್ತು ಹಣ ಮಾಡುವ ಸಲುವಾಗಿಯೇ ಇರುವ ವ್ಯಾವಹಾರಿಕ ಆಶ್ರಯತಾಣಗಳೂ ಇವೆ. ವಿಚಾರಿಸುವವರಿಲ್ಲ, ವಾರಸುದಾರರಿಲ್ಲ ಎಂಬಂತಹ ಪ್ರಕರಣಗಳಲ್ಲಿ ಶೋಷಣೆ ಸಾಮಾನ್ಯದ ಸಂಗತಿ. ಚೆನ್ನಾಗಿ ನಿರ್ವಹಿಸಲ್ಪಡುತ್ತಿರುವ ಸಂಸ್ಥೆಗಳನ್ನೂ ಸಂಶಯದಿಂದ ನೋಡುವಂತೆ ಇಂತಹವರು ಮಾಡುತ್ತಾರೆ. ಬೆರಳೆಣಿಕೆಯಷ್ಟು ಸಂಸ್ಥೆಗಳು ಉತ್ತಮ ರೀತಿಯಲ್ಲಿ ವೃದ್ಧರ ಆರೈಕೆಯನ್ನು ಮಾಡುತ್ತಿದ್ದು, ಅವುಗಳಲ್ಲಿ ಹಾಸನದ ಚೈತನ್ಯ ವೃದ್ಧಾಶ್ರಮವೂ ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ಡಾ. ಗುರುರಾಜ ಹೆಬ್ಬಾರರು ಮತ್ತು ಅವರ ಎಲ್ಲಾ ಸಹಕಾರಿಗಳೂ ಅಭಿನಂದನಾರ್ಹರಾಗಿದ್ದಾರೆ.
     ಪೋಷಕರ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ನಿರ್ವಹಣಾ ಕಾಯದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದು ಅದರ ಪ್ರಕಾರ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ಮೂರು ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವ ದಂಡ ವಿಧಿಸಲು ಅವಕಾಶವಿದೆ. ಆದರೆ, ತಮ್ಮ ತೊಂದರೆಗಳ ಕುರಿತು ದೂರು ನೀಡುವುದಿರಲಿ, ಆಪ್ತರ ಬಳಿ ಕಷ್ಟ ಹಂಚಿಕೊಳ್ಳಲೂ ಹಿಂಜರಿಯುವವರ ಸಂಖ್ಯೆಯೇ ಹೆಚ್ಚಿದೆ. ಹೀಗೆ ಕಷ್ಟ-ಸುಖ ಹಂಚಿಕೊಂಡದ್ದೇ ನೆಪವಾಗಿ ಮತ್ತಷ್ಟು ದೂಷಣೆ, ಹಿಂಸೆಗಳಿಗೆ ಒಳಗಾಗುವ ಭಯ ಅವರನ್ನು ಕಾಡುತ್ತದೆ.
     ಇಂದಿನ ಯುವಪೀಳಿಗೆಯ ಮನೋಭಾವ ಬದಲಾಗಬೇಕಿದೆ. ನೈತಿಕ ಮೌಲ್ಯಗಳಿಗೆ ಬೆಲೆ ಕೊಡದ ಶಿಕ್ಷಣ ಪದ್ಧತಿ ಈ ಸಮಸ್ಯೆಯ ಮೂಲಕಾರಣವಾಗಿದೆ. ಮದುವೆ ಆದ ತಕ್ಷಣ ಹಿರಿಯರನ್ನು ಬಿಟ್ಟು ಪ್ರತ್ಯೇಕವಾಗಿ ಬೇರೆ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮದುವೆ ಆಗಬೇಕಾದರೆ ಲಗ್ಗೇಜುಗಳಿರಬಾರದು, ದಂಡ-ಪಿಂಡಗಳಿರಬಾರದು ಎಂದು ಷರತ್ತು ವಿಧಿಸುವುದನ್ನು ಕೇಳಿದ್ದೇವೆ. ತಾವೂ ಸಹ ಮುಂದೊಮ್ಮೆ ಲಗೇಜುಗಳಾಗುತ್ತೇವೆ, ದಂಡ-ಪಿಂಡಗಳಾಗುತ್ತೇವೆ; ಇಂತಹ ದಂಡ-ಪಿಂಡಗಳಿಂದಲೇ ತಾವು ಈಗ ಇರುವ ಉತ್ತಮ ಸ್ಥಿತಿಗೆ ಬಂದದ್ದು ಎಂಬುದನ್ನು ಈ ಮಹಾನ್ ಪಿಂಡಗಳು ಮರೆತುಬಿಟ್ಟಿರುತ್ತವೆ! ಇನ್ನು ೨೫ ವರ್ಷಗಳಲ್ಲಿ ಭಾರತದ ಮೂರನೆಯ ಎರಡರಷ್ಟು ಸಂಖ್ಯೆಯ ಜನರು ವೃದ್ಧರಾಗಿರುತ್ತಾರೆ ಎಂಬುದನ್ನು ಈಗ ಹಿರಿಯರನ್ನು ಕಡೆಗಣಿಸಿರುವ, ಮುಂದೆ ವೃದ್ಧರಾಗಲಿರುವ ಯುವಸಮೂಹ ಮರೆಯಬಾರದು.
     ಬರೆದಷ್ಟೂ ಮುಗಿಯದಷ್ಟು ಸಮಸ್ಯೆಗಳ ಸರಮಾಲೆಯೇ ಕಂಡುಬರುತ್ತದೆ. ಸಮಸ್ಯೆಯ ಪರಿಹಾರೋಪಾಯಗಳನ್ನು ಹೀಗೆ ಪಟ್ಟಿ ಮಾಡಬಹುದೆಂದೆನಿಸುತ್ತದೆ:
೧. ನೈತಿಕ ಮೌಲ್ಯಗಳಿಗೆ ಮಹತ್ವ ಕೊಡುವ ಶಿಕ್ಷಣ ಪದ್ಧತಿ ಅಳವಡಿಸಬೇಕು;
೨. ಸರ್ಕಾರದಿಂದ ವೃದ್ಧರಿಗೆ ಸಿಗುವ ಸೌಲಭ್ಯಗಳು ಸರಿಯಾಗಿ ಸಿಗುವಂತೆ ಸರ್ಕಾರ ಮತ್ತು ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾಸಂಸ್ಥೆಗಳು ನೋಡಿಕೊಳ್ಳಬೇಕು; ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸುವ ಮಕ್ಕಳ ವಿರುದ್ಧ ಕ್ರಮ ಜರುಗುವಂತೆ ನೋಡಿಕೊಳ್ಳಬೇಕು;
೩. ಕೌಟುಂಬಿಕ ಸಲಹಾ ಕೇಂದ್ರಗಳಲ್ಲಿ ಸರ್ಕಾರ ಮತ್ತು ಸೇವಾ ಸಂಸ್ಥೆಗಳು ವೃದ್ಧರ ಕುರಿತ ಸಮಸ್ಯೆಗಳಿಗೆ ಆದ್ಯತೆ ಸಿಗುವಂತೆ ಮಾಡಬೇಕು. ಈಗ ಗಂಡ-ಹೆಂಡಿರ ಸಮಸ್ಯೆಗಳ ಕುರಿತು ಮಾತ್ರ ಹೆಚ್ಚು ಗಮನ ಸಿಗುತ್ತಿದೆ:
೪. ವೃದ್ಧರಿಗಾಗಿಯೇ ಪ್ರತ್ಯೇಕವಾಗಿ ಉಪನ್ಯಾಸ ಕೇಂದ್ರಗಳು, ಸಲಹಾ ಕೇಂದ್ರಗಳು, ಭಜನಾಕೇಂದ್ರಗಳು, ಮನರಂಜನಾ ಚಟುವಟಿಕೆಗಳನ್ನು ಪ್ರತಿನಿತ್ಯ ನಡೆಯುವಂತೆ ನೋಡಿಕೊಂಡರೆ ಅವರಲ್ಲಿ ಒಂಟಿತನದ ಭಾವನೆ ದೂರ ಮಾಡಲು ಅನುಕೂಲವಾಗುತ್ತದೆ. ಚಿಕ್ಕ ಮಕ್ಕಳ ಸಲುವಾಗಿ ನಡೆಸಲಾಗುತ್ತಿರುವ ಡೇ ಕೇರ್ಗಳನ್ನು ಗಮನ ಅಗತ್ಯವಿರುವ ಹಿರಿಯರ ಸಲುವಾಗಿಯೂ ನಡೆಸುವ ಬಗ್ಗೆ ಚಿಂತಿಸಬೆಕು;
೫. ಟಿ.ಆರ್.ಪಿ. ಸಲುವಾಗಿ ಸ್ವೇಚ್ಛಾಚಾರದ ನಡವಳಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ, ಸಾಮಾಜಿಕ, ಕೌಟುಂಬಿಕ ಸಂಬಂಧಗಳನ್ನು ಹಾಳುಗೆಡವುವ ಕಾರ್ಯಕ್ರಮಗಳು, ಧಾರಾವಾಹಿಗಳಿಗೆ ಆದ್ಯತೆ ಕೊಡುತ್ತಿರುವ ಮಾಧ್ಯಮಗಳು ಯುವ ಸಮೂಹವನ್ನು ಹಿರಿಯರನ್ನು ಗೌರವಿಸುವಂತೆ ಮಾಡುವ ಕರ್ಯಕ್ರಮಗಳನ್ನು ಬಿತ್ತರಿಸಬೇಕು;
೫. ವೃದ್ಧರ ಅನುಭವ ಮತ್ತು ಸೇವೆಯನ್ನು ಸಮುದಾಯದ ಒಳಿತಿಗೆ ಬಳಸಿಕೊಳ್ಳಲು ಒತ್ತು ಕೊಡಬೇಕು;
೬. ಪೂರಕವಾದ ಇಂತಹ ಇತರ ಕಾರ್ಯಕ್ರಮಗಳನ್ನು ಸಾಮಾಜಿಕ, ಧಾರ್ಮಿಕ ಮುಖಂಡರುಗಳು, ರಾಜಕೀಯ ದುರೀಣರು, ಸೇವಾಸಂಸ್ಥೆಗಳವರು ಚಿಂತಿಸಿ ರೂಪಿಸಿ ಚಾಲನೆ ಕೊಡಬೇಕು.
     ಮುಗಿಸುವ ಮುನ್ನ, ಒಂದು ಮಾತು: ಒಬ್ಬ ಅಶಕ್ತ ವೃದ್ಧನೋ. ವೃದ್ಧೆಯೋ ರಸ್ತೆಯನ್ನು ತಡವರಿಸುತ್ತಾ ದಾಟುತ್ತಿರುವಾಗ, ಅಲ್ಲಿ ಚಲಿಸುವ ಬೈಕ್ ಸವಾರನೋ, ಆಟೋ ಚಾಲಕನೋ ಏಯ್, ಮುದುಕಾ, ಸಾಯುವುದಕ್ಕೆ ಏಕೆ ಬರುತ್ತೀಯಾ? ತೆಪ್ಪನೆ ಮನೆಯಲ್ಲಿ ಬಿದ್ದಿರಬಾರದೇ? ಎಂದು ಗದರಿಸುತ್ತಾನೆ. ಬದಲಾಗಿ ವಾಹನ ಚಾಲಕರು ವೃದ್ಧರು ದಾಟುವವರೆಗೆ ತಾಳ್ಮೆಯಿಂದ ಇದ್ದರೆ, ಅಕ್ಕಪಕ್ಕದವರು ಅವರನ್ನು ರಸ್ತೆ ದಾಟಿಸಲು ನೆರವಾದರೆ ಎಷ್ಟು ಚೆನ್ನಾಗಿರುತ್ತದೆ! ಸಹಾಯ ಮಾಡಿದವರೆಡೆಗೆ ವೃದ್ಧರು ಬೀರಬಹುದಾದ ಕೃತಜ್ಞತೆಯ ನೋಟಕ್ಕಿಂತ ಹೆಚ್ಚಿನ ಪುಣ್ಯದ ಸಂಪಾದನೆ ಏನಿರುತ್ತದೆ? ಯುವ ಸಮೂಹವೇ, ನಿಮ್ಮ ಈಗಿನ ಹಮ್ಮು-ಬಿಮ್ಮುಗಳಿಗೆ ನಿಮ್ಮ ಹಿರಿಯರ ತ್ಯಾಗ, ಸೇವೆಗಳೇ ಕಾರಣವೆಂಬುದನ್ನು ಮರೆಯದಿರಿ, ಅವರನ್ನು ಕಡೆಗಣಿಸದಿರಿ. ಅದರಲ್ಲೂ ಅವರಿಗೆ ನಿಮ್ಮ ಸಹಾಯ, ನೆರವು ಅಗತ್ಯವಿರುವಾಗ ಕನಿಷ್ಠ ಬೊಗಸೆಯಷ್ಟು ಪ್ರೀತಿಯ ಮಾತುಗಳನ್ನಾದರೂ ಆಡಿರಿ. ಪ್ರತಿಯಾಗಿ ಬೆಟ್ಟದಷ್ಟು ಪ್ರೀತಿ ಪಡೆಯಿರಿ. ದೇವರು ಮೆಚ್ಚುವ ಕಾರ್ಯವೆಂದರೆ ಇದೇ ಆಗಿದೆ.
-ಕ.ವೆಂ.ನಾಗರಾಜ್.
***************
ದಿನಾಂಕ 29-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಮೇ 31, 2016

ಮುಪ್ಪು ಶಾಪವಾಗದಿರಲಿ - 2


     ಎಷ್ಟು ವೈಪರೀತ್ಯ! ಪೋಷಕರು ತಮ್ಮ ಮಕ್ಕಳು ಮುಂದೆ ಬರಲಿ, ಸಮಾಜದಲ್ಲಿ ಪ್ರತಿಷ್ಠಿತರಾಗಲಿ ಎಂದು ಬಯಸಿ ಶ್ರಮಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಏನೆಲ್ಲಾ ಕಷ್ಟ ಪಡುತ್ತಾರೆ! ತಮಗೆ ವಂಚನೆ ಮಾಡಿಕೊಂಡು, ಮಕ್ಕಳಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಮಕ್ಕಳು ತಮ್ಮನ್ನು ಮುಪ್ಪಿನಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ, ಆರಾಮವಾಗಿ ವಿಶ್ರಾಂತಿ ಪಡೆಯೋಣ ಎಂದು ಬಯಸುವ ಅವರಿಗೆ ಪ್ರತಿಯಾಗಿ ಮಕ್ಕಳು ತಮ್ಮನ್ನು ಹೊರೆ ಎಂಬಂತೆ ನೋಡಿದಾಗ ಆಗುವ ವೇದನೆ ಅವರ್ಣನೀಯ.
     ವೃದ್ಧಾಪ್ಯದ ಸಮಸ್ಯೆಗಳು ಆರ್ಥಿಕವಾಗಿ ಕೆಳಮಟ್ಟದವರು, ಮಧ್ಯಮವರ್ಗದವರು, ಮೇಲ್ಮಧ್ಯಮ ವರ್ಗದವರು ಮತ್ತು ಮೇಲ್ವರ್ಗದವರುಗಳಲ್ಲಿ ಭಿನ್ನ ರೀತಿಯವಾಗಿದ್ದರೂ ಅವರುಗಳು ಪಡುವ ಪರಿತಾಪಗಳು ಮಾತ್ರ ಸಂಬಂಧಿಸಿದವರಿಗೆ ಸಹಿಸಲು ಕಷ್ಟವಾಗಿರುತ್ತದೆ. ಉದಾಹರಣೆ ಕೊಟ್ಟರೆ ಅರ್ಥವಾದೀತು. ಅವರು ಒಬ್ಬ ನಿವೃತ್ತ ಹಿರಿಯ ಅಧಿಕಾರಿ. ಪತ್ನಿ ಮೃತಳಾಗಿ ಕೆಲವು ವರ್ಷಗಳಾಗಿದ್ದವು. ಪ್ರತಿನಿತ್ಯ ಬೆಳಿಗ್ಗೆ ೫.೩೦ಕ್ಕೆ ವಾಕಿಂಗಿಗೆ ಹೋಗುವಾಗ ಸಿಗುತ್ತಿದ್ದ ಕಾಫಿ ಈಗ ಸಿಗದು. ಕಾಫಿಗಾಗಿ ಕಾಯುತ್ತಾ ಕುಳಿತರೆ ವಾಕಿಂಗ್ ಸಮಯ ಮುಗಿದೇ ಹೋಗುತ್ತದೆ. ಪೇಪರ್ ಓದಲು ಸಿಗುವುದು ಎಲ್ಲರೂ ಓದಿದ ನಂತರವೇ. ಟಿವಿಯಲ್ಲಿ ತನಗೆ ಬೇಕಾದ ಚಾನೆಲ್ ವೀಕ್ಷಿಸುವ ಅವಕಾಶ ಸಿಗದು. ಇತರರು ನೋಡುವ ಚಾನೆಲ್ ಅನ್ನೇ ನೋಡಬೇಕು. ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಇವರಿಂದಲೇ ಮಾಡಿಸುತ್ತಿದ್ದರು - ಲೈಟ್ ಬಿಲ್ ಕಟ್ಟುವುದು, ಫೋನ್ ಬಿಲ್ ಕಟ್ಟುವುದು, ತರಕಾರಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಕರೆತರುವುದು, ಇತ್ಯಾದಿ. ಯಾವಾಗ ಇವರಿಗೆ ಓಡಾಡಲು ಕಷ್ಟವಾಗಿ ಇಂತಹ ಕೆಲಸ ಮಾಡುವುದು ದುಸ್ತರವಾಯಿತೋ ಇವರನ್ನು ಒಂದು ಹೊರೆಯೆಂಬಂತೆ ನೋಡಲಾರಂಭಿಸಿದ್ದರು. ತನ್ನದೇ ಮನೆಯಲ್ಲಿ ಊಟ, ತಿಂಡಿ, ಕಾಫಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಬಂದ ಮೇಲಂತೂ ತನ್ನ ಬಗ್ಗೆಯೇ ಆತನಿಗೆ ಜಿಗುಪ್ಸೆ ಮೂಡಿತ್ತು. ಈ ಕುರಿತು ಏನಾದರೂ ಹೇಳಿದರೆ ದೊಡ್ಡ ರಂಪ ರಾಮಾಯಣವೇ ಆಗಿಬಿಡುತ್ತಿತ್ತು. ಮೊದಲು ಇರುತ್ತಿದ್ದ ದೊಡ್ಡ ಬೆಡ್ ರೂಮಿನಲ್ಲಿ ಈಗ ಮಗ-ಸೊಸೆ ಇರುತ್ತಾರೆ. ಇವರ ಮಲಗುವ ಕೋಣೆ ಸ್ಟೋರ್ ರೂಮಿಗೆ ಬದಲಾಗಿದೆ. ಅವರು ಒಬ್ಬರೇ ಗೋಡೆ ನೋಡುತ್ತಾ ವಟಗುಟ್ಟುತ್ತಿರುತ್ತಾರೆ. ಈ ವಟಗುಟ್ಟುವಿಕೆ ವಿಚಾರದಲ್ಲಿ ಸಹ ಅವರು ಜಾಗೃತರಾಗಿರಬೇಕಿದೆ. ಯಾರಿಗೂ ಕೇಳದಂತೆ ಒಬ್ಬರೇ ಅಲವತ್ತುಗೊಳ್ಳಬೇಕು. ಇತರರಿಗೆ ಕೇಳಿದರೆ ಇವರ ಜನ್ಮ ಜಾಲಾಡಿಬಿಡುತ್ತಾರೆ. ದೊಡ್ಡ ಅಧಿಕಾರಿಯಾಗಿ ಎಲ್ಲರಿಂದಲೂ ಸಲಾಮ್ ಮಾಡಿಸಿಕೊಳ್ಳುತ್ತಿದ್ದವರಿಗೆ ಬಂದ ಇಂತಹ ಪರಿಸ್ಥಿತಿ ಕುರಿತು ಅಪರೂಪಕ್ಕೆ ಸಿಗುವ ಗೆಳೆಯರಲ್ಲಿ ಗೋಳಿಡುವ ಇವರು ಸಾವು ಬೇಗ ಬರಬಾರದೇ ಎಂದು ಕೊರಗುತ್ತಾರೆ.
ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಂದವಾಗಿರಲು |
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ ||
     ಇನ್ನೊಂದು ಪ್ರಸಂಗ ಗಮನಿಸೋಣ. ಸುಕ್ಕುಗಟ್ಟಿದ ಚರ್ಮ, ನರೆತ ತಲೆ, ಕುಗ್ಗಿದ, ಬಾಗಿದ ಶರೀರ, ಕಿವಿ ಕೇಳದ, ದೃಷ್ಟಿ ಮಂದವಿರುವ ಹಣ್ಣು ಮುದುಕಿ ಸಣ್ಣಮ್ಮ ತನ್ನ ಹಳ್ಳಿಯ ಮನೆಯ ಜಗಲಿಯ ಕಟ್ಟೆಯ ಮೇಲೆ ಗೋಣಿಚೀಲದ ಹಾಸಿನ ಮೇಲೆ ಕುಳಿತಿದ್ದಾಳೆ. ಅವಳು ರಾತ್ರಿ ಮಲಗುವುದೂ ಅಲ್ಲಿಯೇ! ಪೋಸ್ಟ್‌ಮನ್ ಬಂದವನು ಆಕೆಗೆ ವಿಧವಾವೇತನದ ಹಣ ಕೊಟ್ಟು ಫಾರಮ್ಮಿಗೆ ಸಹಿ ಹಾಕಿಸಿಕೊಂಡು ಹೋಗುತ್ತಾನೆ. ಕೊಡುವಾಗ ತನ್ನ ಮಾಮೂಲನ್ನೂ ಹಿಡಿದುಕೊಂಡು ಕೊಟ್ಟಿರುತ್ತಾನೆ. ಆಕೆಯ ಕೈಯಲ್ಲಿ ಇನ್ನೂ ಹಣ ಇರುವಂತೆಯೇ ಧಾವಿಸಿ ಬಂದ ಮಗರಾಯ ಆ ಹಣವನ್ನು ಕಿತ್ತುಕೊಂಡು ಜೇಬಿಗಿಟ್ಟುಕೊಂಡು ನಡೆಯುತ್ತಾನೆ. ಆಕೆ ಮೊದಲಿನಂತೆಯೇ ನಿರ್ಲಿಪ್ತ ನೋಟ ಬೀರುತ್ತಾ ಕುಳಿತೇ ಇರುತ್ತಾಳೆ. ಆಕೆಗೆ ಅದು ಅಭ್ಯಾಸವಾಗಿ ಹೋಗಿದೆ. ಜವರಾಯನನ್ನು ನೆನೆಯುತ್ತಾ ಮಣಮಣ ಗುನುಗುತ್ತಾ ತಿನ್ನಲು ಏನಾದರೂ ತಂಗಳು ಕೊಟ್ಟಾರೇನೋ ಎಂದು ಬಗ್ಗಿ ನೋಡುತ್ತಾಳೆ.
     ಇಂತಹುದೇ ಹಲವಾರು ಸಂಗತಿಗಳು ಎಲ್ಲರಿಗೂ ಅರಿವಿರುವಂತಹುದೇ ಆಗಿದೆ. ವೃದ್ಧಾಪ್ಯದಲ್ಲಿ ಗಂಡ-ಹೆಂಡತಿಯರು ಒಬ್ಬರೊಬ್ಬರಿಗೆ ಆಶ್ರಯವಾಗಿರುತ್ತಾರೆ. ಇಬ್ಬರನ್ನೂ ನೋಡಿಕೊಳ್ಳುವುದು ಕಷ್ಟವೆಂದು ತಂದೆಯನ್ನು ಒಬ್ಬ ಮಗ ಮತ್ತು ತಾಯಿಯನ್ನು ಇನ್ನೊಬ್ಬ ಮಗ ಪ್ರತ್ಯೇಕವಾಗಿ ತಮ್ಮ ಮನೆಗಳಲ್ಲಿ ಇರಿಸಿಕೊಂಡಿರುವ ಸಂದರ್ಭಗಳಲ್ಲಿ ಹಿರಿಯ ಜೀವಗಳಿಗೆ ಆಗುವ ನೋವಿನ ಅನುಭವ ಅನುಭವಿಸಿದವರಿಗೇ ಗೊತ್ತು. ಇಬ್ಬರಲ್ಲಿ ಒಬ್ಬರು ಮೃತರಾದರೆ ಉಳಿದವರಿಗೆ ಉಂಟಾಗುವ ಅನಾಥ ಭಾವದ ಶೂನ್ಯ ತುಂಬುವುದೂ ಕಷ್ಟವೇ. ೫-೬ ಮಕ್ಕಳಿದ್ದರೂ ಇರುವ ಒಬ್ಬ ತಂದೆ ಅಥವ ತಾಯಿಯನ್ನು ಯಾರು ನೋಡಿಕೊಳ್ಳಬೇಕೆಂಬ ವಿಷಯದಲ್ಲಿ ಜಗಳಗಳಾಗುತ್ತವೆ. ಒಬ್ಬೊಬ್ಬರ ಮನೆಯಲ್ಲಿ ಕೆಲವು ತಿಂಗಳುಗಳಂತೆ ಸರತಿಯಲ್ಲಿ ನೊಡಿಕೊಳ್ಳುವ ಕುಟುಂಬಗಳೂ ಅಪರೂಪವಲ್ಲ. ಆಗುವ ಖರ್ಚಿಗೂ ಲೆಕ್ಕ ಹಾಕಿ ಜಗಳವಾಡುವವರೂ ಇರುತ್ತಾರೆ. ಕೈ-ಕಾಲುಗಳು ಗಟ್ಟಿಯಾಗಿರುವ ಹಿರಿಯರನ್ನು ಮಕ್ಕಳು ತಮಗೆ ಅನುಕೂಲವಾಗುವರೆಂಬ ಕಾರಣದಿಂದ ಇರಿಸಿಕೊಳ್ಳುವವರೂ ಇರುತ್ತಾರೆ. ಮನೆಯ ಕೆಲಸಗಳಿಗಾಗಿ ಅವರುಗಳನ್ನು ಬಳಸಿಕೊಂಡರೂ ಅವರನ್ನು ಮನೆಯ ಉಪೇಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ. ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗುವ ನಗರಗಳಲ್ಲಿ ಇದು ಸಾಮಾನ್ಯ. ಆದರೆ ಹಿರಿಯರಿಗೆ ಆರೋಗ್ಯ ಕೈಕೊಟ್ಟರೆ ನಿಜವಾದ ಸಮಸ್ಯೆ ಪ್ರಾರಂಭವಾಗುತ್ತದೆ. ಮಕ್ಕಳು ಹಿರಿಯರ ಅನಾರೋಗ್ಯದ ವಿಷಯದಲ್ಲಿ ತೀವ್ರವಾಗಿ ಅಸಹಿಷ್ಣುಗಳಾಗಿರುವುದು, ವಿಶೇಷವಾಗಿ ಸುಶಿಕ್ಷಿತರಿರುವ ನಗರಗಳಲ್ಲೇ ಹೀಗಾಗುತ್ತಿರುವುದು ಕಳವಳಕಾರಿಯಾಗಿದೆ.
     ವೃದ್ಧರು ತಮ್ಮದೇ ಸ್ವಂತದ ಮನೆ, ಆಸ್ತಿ-ಪಾಸ್ತಿ ಹೊಂದಿದ್ದರೂ ಅಭದ್ರತೆ ಕಾಡದಿರುವುದಿಲ್ಲ. ಮಕ್ಕಳು ಮನೆ, ಆಸ್ತಿಗಳಿಗಾಗಿ ಅವರನ್ನು ಗೋಳುಗುಟ್ಟಿಸುವ ಪ್ರಸಂಗಗಳು ಸಾಮಾನ್ಯವಾಗಿವೆ. ಅವರು ಹೊಂದಿದ್ದ ಆಸ್ತಿ, ಮನೆಗಳನ್ನು ತಮ್ಮ ಹೆಸರಿಗೆ ಬರೆಯಲು ಅಥವ ಮಾರಿ ಹಣ ಕೊಡಲು ಕಾಡುತ್ತಾರೆ, ಹಿಂಸಿಸುತ್ತಾರೆ. ಪ್ರತಿ ೧೦ರಲ್ಲಿ ೬ರಷ್ಟು ಹಿರಿಯರು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯ. ಆಶ್ರಯ ತಪ್ಪಿದವರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯಬೇಕು ಅಥವ ಮಕ್ಕಳೇ ಅವರನ್ನು ಅಲ್ಲಿಗೆ ಕಳುಹಿಸಿಬಿಡುತ್ತಾರೆ. ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ ವೇಳೆಯಲ್ಲಿ ಇಂತಹ ನೂರಾರು ಸಮಸ್ಯೆಗಳು ನನ್ನ ಮುಂದೆ ಬಂದಿದ್ದವು. ಮಕ್ಕಳು/ವಾರಸುದಾರರು ಇಲ್ಲದ ಪ್ರಕರಣಗಳಲ್ಲಿ ಅವರ ಅಶಕ್ತತೆಯನ್ನು ಬಳಸಿಕೊಂಡು ಅವರುಗಳನ್ನು ಮನೆಯಿಂದ ಹೊರದಬ್ಬಿ ಆಸ್ತಿಯನ್ನು ತಮ್ಮದಾಗಿಸಿಕೊಂಡ ಬಲಾಢ್ಯರೂ ಇರುತ್ತಾರೆ. ಇಂತಹ ಕಾರಣಕ್ಕಾಗಿಯೇ ಕೊಲೆಯಾಗುವ ಒಂಟಿ ವೃದ್ಧರುಗಳ ಕುರಿತೂ ಸುದ್ದಿ ಬರುತ್ತಿರುತ್ತದೆ. ಕುಟುಂಬದ ಗೌರವ ಕಾಪಾಡುವ ಸಲುವಾಗಿ ಬಹುತೇಕ ಹಿರಿಯರ ಸಮಸ್ಯೆಗಳು ಬೀದಿಗೆ ಬರುವುದಿಲ್ಲ. ಬಂದರೂ  ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗದು, ಪ್ರಯೋಜನಕ್ಕೆ ಬಾರದ ಅನುಕಂಪ ಸಿಗಬಹುದು. ಅನಾಯಾಸದ ಮರಣ ಮತ್ತು ದೈನ್ಯತೆಯಿಲ್ಲದ ಜೀವನ ಸಾಧ್ಯವಾಗುವ ಹಿರಿಯರು ಮಾತ್ರ ಭಾಗ್ಯಶಾಲಿಗಳೆನ್ನಬಹುದು. ಅಂತಹ ಭಾಗ್ಯ ಎಲ್ಲರಿಗೂ ಸಿಗಲಾರದು. ಈ ಸಮಸ್ಯೆಗಳಿಗೆ ಪರಿಹಾರವೇನು? ಮುಂದಿನ ಲೇಖನದಲ್ಲಿ ಗಮನಿಸೋಣ.
-ಕ.ವೆಂ.ನಾಗರಾಜ್.
****************
ದಿನಾಂಕ 22-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಮೇ 30, 2016

ಮುಪ್ಪು ಶಾಪವಾಗದಿರಲಿ - 1


     ಮೊದಲಿಗೆ ಒಂದೆರಡು ಘಟನೆಗಳನ್ನು ಹಂಚಿಕೊಳ್ಳುವೆ. ಅದೊಂದು ಹೋಬಳಿ ಕೇಂದ್ರ. ಅಲ್ಲಿನ ದಿನಸಿ ಅಂಗಡಿಯ ಮಾಲಿಕ ಗ್ರಾಮದ ಅತಿ ದೊಡ್ಡ ಶ್ರೀಮಂತ. ಪ್ರತಿದಿನ ರಾತ್ರಿ ಮನೆಗೆ ನೋಟುಗಳ ಕಂತೆಗಳನ್ನೇ ಚೀಲದಲ್ಲಿ ಹೊತ್ತು ತಂದು ಎಣಿಸಿ ಕೂಡಿಡುತ್ತಿದ್ದಾತ. ಕ್ರಮೇಣ ಆತನಿಗೆ ವಯಸ್ಸಾಯಿತು. ಮಕ್ಕಳು ಪ್ರವರ್ಧಮಾನಕ್ಕೆ ಬಂದು ಅಂಗಡಿಯ ಉಸ್ತುವಾರಿ ನೋಡಿಕೊಳ್ಳಹತ್ತಿದರು. ಅಪ್ಪನನ್ನು ಮನೆಯಲ್ಲೇ ಇರಲು ನಿರ್ಬಂಧಿಸಿದರು. ಒಂದೊಮ್ಮೆ ರಾಜನಂತೆ ಮೆರೆದಿದ್ದಾತ ಮನೆಯಲ್ಲಿ ಆಳಿನಂತೆ ಇರಬೇಕಾಗಿ ಬಂದು, ಸೊಸೆಯರ ಕಿರುಕುಳವೂ ಸೇರಿಕೊಂಡು ಮತಿಭ್ರಮಣೆಗೊಳಗಾದ. ಇದೇ ನೆವವಾಗಿ ಆತನನ್ನು ಮನೆಯ ಹಿಂದಿದ್ದ ಕೋಣೆಯೊಂದರಲ್ಲಿ ಕೂಡಿಡಲಾಯಿತು. ಕೊಟ್ಟಾಗ ಊಟ, ಇಲ್ಲದಿದ್ದರೆ ಉಪವಾಸ. ಶೌಚಕ್ರಿಯೆಯೂ ಅದೇ ಕೋಣೆಯೊಳಗೇ! ಹಿಂಸೆಯಿಂದ ಅವನ ಕಿರುಚಾಟ, ಕೂಗಾಟ, ಬಾಗಿಲು ಬಡಿಯುವಿಕೆ ಜೋರಾದಾಗ ಅವನನ್ನು ಸರಪಳಿ ಹಾಕಿ ನಾಯಿಯಂತೆ ಕಟ್ಟಿಹಾಕಲಾಗಿತ್ತು. ಕೆಲವೇ ತಿಂಗಳಲ್ಲಿ ಅವನು ಅದೇ ಸ್ಥಿತಿಯಲ್ಲಿ ಅಸು ನೀಗಿದಾಗ ಮಕ್ಕಳಿಗೆ ಗೊತ್ತಾದದ್ದು ಸತ್ತ ಎರಡನೆಯ ದಿನದಂದು! ನಂತರದಲ್ಲಿ ಮಕ್ಕಳು ವಿಜೃಂಭಣೆಯಿಂದ ತಿಥಿ ಮಾಡಿ ಊರಿನವರಿಗೆಲ್ಲಾ ಊಟ ಹಾಕಿದ್ದರು.
     ಜಿಲ್ಲಾ ಕೇಂದ್ರದಲ್ಲಿ ವಾಸವಿದ್ದ ಒಂದು ಶ್ರೀಮಂತ ಕುಟುಂಬದ ಕಥೆಯಿದು. ಇಬ್ಬರು ಗಂಡು ಮಕ್ಕಳು ಸುಖವಾಗಿ ಬೆಳೆದು ಇಂಜನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪೆನಿಯಲ್ಲಿ ಅಧಿಕಾರಿಗಳಾಗಿ ಇಬ್ಬರೂ ಅಮೆರಿಕಾ ಸೇರಿಕೊಂಡರು. ಅಲ್ಲೇ ಸಂಸಾರಸ್ಥರಾಗಿ ಅಲ್ಲಿಯ ಪ್ರಜೆಗಳೇ ಆಗಿಬಿಟ್ಟರು. ಮಕ್ಕಳು ವಿದೇಶಕ್ಕೆ ಸೇರಿಕೊಂಡ ಕೆಲವು ವರ್ಷಗಳಲ್ಲಿ ಮನೆಯ ಯಜಮಾನ ತೀರಿಕೊಂಡ. ಹೃದ್ರೋಗಿಯಾದ ಮುಪ್ಪಿನ ತಾಯಿ ಒಬ್ಬರೇ ಆದರು. ಮಕ್ಕಳು ತಾಯಿಯನ್ನು ಕರೆಸಿಕೊಳ್ಳಲಿಲ್ಲ. ಎಷ್ಟು ಬೇಕೋ ಅಷ್ಟು ಹಣ ಕಳಿಸುತ್ತೇವೆ, ವೃದ್ಧಾಶ್ರಮಕ್ಕೆ ಸೇರಿಕೋ ಎಂದರು. ವಿಧಿಯಿಲ್ಲದೆ ವೃದ್ಧಾಶ್ರಮದ ನಿವಾಸಿಯಾದ ಆಕೆಯ ಕಣ್ಣೀರಿನ ನೋವು ಅರಿತವರು ಯಾರು? ಆಕೆಯಲ್ಲಿ ಸಾಕಷ್ಟು ಹಣವಿತ್ತು. ಆದರೆ ಆಕೆಗೆ ಬೇಕಾಗಿದ್ದದ್ದು ಹಣವಲ್ಲ. ಹಿಡಿಯಷ್ಟು ಪ್ರೀತಿ! ಜೀವನೋತ್ಸಾಹ ಬತ್ತಿದ ಆಕೆಯ ಕಣ್ಣುಗಳು ಶೂನ್ಯವನ್ನು ದಿಟ್ಟಿಸುತ್ತಿದ್ದವು. ಮುಂದೊಮ್ಮೆ ಶೂನ್ಯದಲ್ಲೇ ಆಕೆ ಲೀನವಾದಳು.
     ವೃದ್ಧಾಪ್ಯದ ತಾಪ, ಸಮಸ್ಯೆಗಳ ಕುರಿತು ಕಿರುನೋಟ ಬೀರುವ ಸಲುವಾಗಿ ಮೇಲಿನ ಎರಡು ಘಟನೆಗಳನ್ನು ಉದಾಹರಿಸಿದ್ದಷ್ಟೆ. ವೃದ್ಧರನ್ನು, ಮನೆಯ ಹಿರಿಯರನ್ನು ಗೌರವದಿಂದ, ಪ್ರೀತಿಯಿಂದ ಕಾಣುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತದಲ್ಲಿ ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಪೀಳಿಗೆಯಿದೆ, ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜ, ಭಾರತದಲ್ಲಿ ಮೂರನೆಯ ಎರಡು ಭಾಗದಷ್ಟು ಸಂಖ್ಯೆಯ ೩೦ ವರ್ಷಗಳ ಒಳಗಿನ ಯುವಜನರಿದ್ದಾರೆ. ಇದರ ಅರ್ಥ ಮೂರನೆಯ ಒಂದರಷ್ಟು ಭಾಗ ವೃದ್ಧರಿದ್ದಾರೆ. ಈ ವೃದ್ಧರ ಸ್ಥಿತಿ-ಗತಿಗಳು ಹೇಗಿವೆ ಎಂಬುದೂ ಚಿಂತನಾರ್ಹ ವಿಷಯವಲ್ಲವೇ? ಕೆಲವೇ ದಶಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಯುವಪೀಳಿಗೆ ವೃದ್ಧರಾಗುತ್ತಾರೆ. ಹೆಚ್ಚಿನ ಕುಟುಂಬಗಳಲ್ಲಿ ಒಂದೊಂದೇ ಮಕ್ಕಳಿರುವುದರಿಂದ ಸಹಜವಾಗಿ ವೃದ್ಧರ ಸಂಖ್ಯೆಯೇ ಹೆಚ್ಚಾಗಲಿದೆ. ಭಾರತದಲ್ಲಿ ಸುಮಾರು ೮೦ ಮಿಲಿಯನ್ ವೃದ್ಧರ ಸಂಖ್ಯೆ ಇದ್ದು ಆ ಸಂಖ್ಯೆ ಮುಂದಿನ ೨೫ ವರ್ಷಗಳಲ್ಲಿ ೧೮೦ ಮಿಲಿಯನ್ ಆಗಲಿದೆಯೆನ್ನಲಾಗಿದೆ. ಈಗಿನ ಯುವಪೀಳಿಗೆ ವೃದ್ದರ ಕುರಿತ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಮುಂದೆ ಅವರಿಗೇ ಅದು ತಿರುಗುಬಾಣವಾಗಿ ಬಾಧಿಸದೇ ಇರದು.
     ಹಿಂದಿನ ಕಾಲದಲ್ಲಿ ವೃದ್ಧಾಪ್ಯ ಒಂದು ಸಮಸ್ಯೆಯಾಗಿರಲಿಲ್ಲ. ಅವಿಭಕ್ತ ಕುಟುಂಬಗಳಿದ್ದ ಸಮಯದಲ್ಲಿ ವೃದ್ಧರನ್ನು ಗೌರವದಿಂದ ಕಾಣಲಾಗುತ್ತಿತ್ತು. ಅವರ ಆರೈಕೆ, ಶುಶ್ರ್ರೂಷೆಗಳನ್ನು ಒಬ್ಬರಲ್ಲಾ ಒಬ್ಬರು ಮುತುವರ್ಜಿಯಿಂದ ಮಾಡುತ್ತಿದ್ದರು. ಈಗಿನ ವೃದ್ಧರು ಅವಿಭಕ್ತ ಕುಟುಂಬಗಳನ್ನೂ ಕಂಡಿದ್ದವರು ಮತ್ತು ಇವರುಗಳ ಕಾಲಘಟ್ಟದಲ್ಲೇ ಕುಟುಂಬಗಳು ವಿಭಜನೆಯತ್ತ ಧಾವಿಸಿದ್ದುದಾಗಿದ್ದು ಬದಲಾವಣೆಗೆ ಹೊಂದಿಕೊಳ್ಳಲಾಗದ ಸ್ಥಿತಿಯಲ್ಲಿರುವವರು. ಈಗಿನ ಯುವಪೀಳಿಗೆಗೆ ಅವಿಭಕ್ತ ಕುಟುಂಬದ ಕಲ್ಪನೆಯೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಅವಿಭಕ್ತವಿರಲಿ, ವಿಭಕ್ತ ಕುಟುಂಬಗಳ ಅಡಿಪಾಯವೇ ಭದ್ರವಾಗಿಲ್ಲ. ಬೆಂಗಳೂರು ಭಾರತದಲ್ಲಿ ಅತಿ ಹೆಚ್ಚು ವಿವಾಹ ವಿಚ್ಛೇದನಗಳನ್ನು ಕಾಣುತ್ತಿರುವ ಎರಡನೆಯ ನಗರವಾಗಿದೆ. ರಾಜ್ಯದ ಉಳಿದೆಡೆಯಲ್ಲೂ ಇದರ ಹಾವಳಿ ಕಡಿಮೆಯೇನಲ್ಲ. ಹೀಗಿರುವಾಗ ವೃದ್ಧರ ಕಡೆ ಗಮನ ಹರಿಸುವವರಾದರೂ ಯಾರು? ಸ್ವಾರ್ಥವೇ ಪ್ರಧಾನವಾಗುತ್ತಿರುವ ಇಂದಿನ ಸ್ಥಿತಿಗೆ ಪಾಶ್ಚಾತ್ಯರ ಭೋಗವಾದದ ಪ್ರಭಾವ, ನೈತಿಕ ಮೌಲ್ಯಗಳನ್ನು ಕಡೆಗಣಿಸಿರುವ ಶಿಕ್ಷಣ ಪದ್ಧತಿ ಪ್ರಧಾನ ಕೊಡುಗೆ ಇತ್ತಿವೆ. ತಮ್ಮ ದುಸ್ಥಿತಿಗಾಗಿ ಗೋಳಿಡುತ್ತಿರುವ ಇಂದಿನ ವೃದ್ಧರು ತಮ್ಮ ಮಕ್ಕಳಿಗೆ ಸುಯೋಗ್ಯ ಶಿಕ್ಷಣ, ನೈತಿಕ ಶಿಕ್ಷಣ ನೀಡುವತ್ತ ಗಮನ ಹರಿಸದಿದ್ದುದೂ ಒಂದು ಕಾರಣವೆಂದರೆ ತಪ್ಪಿಲ್ಲ. ಮೈಯಲ್ಲಿ ಕಸುವಿದ್ದಾಗ ಆಡಿದ ಆಟಗಳು, ತೋರಿದ ದರ್ಪಗಳು ಸಹ ತಿರುಗುಬಾಣವಾಗಿ ವೃದ್ಧಾಪ್ಯದಲ್ಲಿ ಕಾಡುವಾಗ ಅದನ್ನು ಎದುರಿಸುವ ಶಕ್ತಿ, ಸಾಮರ್ಥ್ಯಗಳು ಅವರಲ್ಲಿರುವುದಿಲ್ಲ.  
ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ |
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ ||
     ವೃದ್ಧಾಪ್ಯದ ಸಮಸ್ಯೆಗಳ ಕುರಿತು ಹೇಳಬೇಕೆಂದರೆ ಮೂರು ಪ್ರಧಾನ ಸಮಸ್ಯೆಗಳು ಗೋಚರಿಸುತ್ತವೆ - ಆಶ್ರಯದ ಅಭದ್ರತೆ, ಆರ್ಥಿಕ ಅಭದ್ರತೆ ಮತ್ತು ಆರೋಗ್ಯದ ಸಮಸ್ಯೆ. ಮೂರೂ ಸಮಸ್ಯೆಗಳಿಗೆ ಮೂಲ ಕುಟುಂಬದ ಸದಸ್ಯರುಗಳು ಅವರುಗಳಿಗೆ ತೋರುತ್ತಿರುವ ಅಸಡ್ಡೆ ಅಥವ ಪ್ರೀತಿಯ ಕೊರತೆಯೆಂದರೆ ತಪ್ಪಿಲ್ಲ. ವೃದ್ಧರು, ಅಶಕ್ತರ ಗೋಳನ್ನು ಕೇಳಬೇಕಾದವರೇ ಕೇಳದಿರುವಾಗ, ಅವರ ನೋವಿನ ಕುರಿತು ಧ್ವನಿಯೆತ್ತುವವರಾದರೂ ಯಾರು? ಎತ್ತಿದರೂ ಪರಿಹಾರ ಅಂದುಕೊಂಡಷ್ಟು ಸುಲಭವಲ್ಲ. ನಾವು-ನೀವು ಕಂಡಿರುವ, ಕೇಳಿರುವ ಉದಾಹರಣೆಗಳೊಂದಿಗೆ ವೃದ್ಧರ ಸಮಸ್ಯೆಗಳು ಮತ್ತು ಅದರ ನಿವಾರಣೆಗೆ ಮಾಡಬಹುದಾದುದಾದರೂ ಏನು ಎಂಬ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸೋಣ.
-ಕ.ವೆಂ.ನಾಗರಾಜ್.
****************
ದಿನಾಂಕ 15-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮೇ 22, 2016

ಬ್ರಹ್ಮಚರ್ಯವೆಂದರೇನು? - 3


   ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ ಮತ್ತು ತಿರುಚಿದ ಇತಿಹಾಸದ ಕಲಿಕೆ! ನೈತಿಕ ಶಿಕ್ಷಣ, ಮೌಲ್ಯಗಳಿಗೆ ಅಲ್ಲಿ ಅವಕಾಶವೇ ಇಲ್ಲ, ಎಲ್ಲವೂ ವ್ಯವಹಾರ, ಹಣವೇ ಅಳತೆಗೋಲು! ಭಾರತೀಯರು ಮೆಕಾಲೆ ಹಿಂದೆ ನುಡಿದಿದ್ದ ಭವಿಷ್ಯದಂತೆ ಕರಿಚರ್ಮದ ಪಾಶ್ಚಾತ್ಯರಾಗಿದ್ದಾರೆ! ಇಷ್ಟಾಗಿಯೂ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುವ ಉದ್ದೇಶವೆಂದರೆ ಮುಂದೆ ತಮ್ಮ ಮಕ್ಕಳು ಡಾಕ್ಟರೋ, ಇಂಜನಿಯರೋ ಆಗಿ ಲಕ್ಷ ಲಕ್ಷ ಸಂಪಾದಿಸಲಿ ಎಂದು! ಶಿಕ್ಷಣವಿಂದು ವ್ಯಾಪಾರವಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣದ ಮೂಲ ಉದ್ದೇಶವೇ ನಾಶವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದ, ಶಿಕ್ಷಕರ ಕೊರತೆಯಿರುವ, ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿನಾಲಿ ಮಾಡುವವರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. 
     ನೈತಿಕ ಶಿಕ್ಷಣವಿಲ್ಲದಿರುವುದರಿಂದ ಮತ್ತು ಎಲ್ಲೆಲ್ಲೂ ಸ್ಪರ್ಧಾತ್ಮಕ ಮನೋಭಾವವಿರುವುದರಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕಡಿಮೆ ಅಂಕ ಬಂದರೆ ಬಯಸಿದ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದರೂ ಮುಂದೆ ನೌಕರಿ ಸಿಗುವ ಸಾಧ್ಯತೆ ಕಡಿಮೆ. ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಬಯಸಿದ ಶಿಕ್ಷಣ ಕೊಡಿಸಬಹುದು, ಬಡವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿರುವುದು ಅನುಮಾನ. ಹೀಗೆ ಶಿಕ್ಷಣದ ಮೂಲ ಉದ್ದೇಶವೇ ಅರ್ಥ ಕಳೆದುಕೊಂಡಿದೆ.      ಮಕ್ಕಳು ಇಂದು ಎಷ್ಟು ಒತ್ತಡದಲ್ಲಿರುತ್ತಾರೆಂದರೆ, ಪರೀಕ್ಷೆಗೆ ಮುನ್ನವೇ ಅಥವ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಬರುವ ಮುನ್ನವೇ ಅಥವ ನಿರೀಕ್ಷಿತ ಫಲಿತಾಂಶ ಬಾರದಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಆತ್ಮಸ್ಥೈರ್ಯವನ್ನೇ ಕಲಿಸದ ಶಿಕ್ಷಣವನ್ನು ಶಿಕ್ಷಣವೆನ್ನಬಹುದೇ? ಇದು ಒಂದು ಮಗ್ಗುಲಾದರೆ ಇನ್ನೊಂದು ಕರಾಳ ಮುಖವೂ ಇದೆ. ಅದೆಂದರೆ ಮಕ್ಕಳು ನೈತಿಕವಾಗಿ ಹಾದಿ ತಪ್ಪುತ್ತಿರುವುದು. ಚಿಕ್ಕ ವಯಸ್ಸಿನಲ್ಲೇ ಸಿಗರೇಟು ಸೇದುವುದು, ಮಾದಕದ್ರವ್ಯಗಳ ಸೇವನೆ, ಡ್ರಗ್ಸ್ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಪೋಷಕರ ನಿರ್ಲಕ್ಷ್ಯವೂ ಇವುಗಳಿಗೆ ಕೊಡುಗೆ ನೀಡಿದೆಯೆಂದರೆ ತಪ್ಪಲ್ಲ. ಹಣ ಕೊಟ್ಟು ಪದವಿ, ಡಾಕ್ಟರೇಟ್ ಕೊಂಡುಕೊಳ್ಳಬಹುದೆನ್ನುತ್ತಾರೆ. ನೈತಿಕತೆ ಕೊಡದ ಶಿಕ್ಷಣ ಒಂದು ಶಿಕ್ಷಣವೇ?
     ಹಾಗಾದರೆ ಇದಕ್ಕೆ ಪರಿಹಾರವೇನು? ಶಿಕ್ಷಣಪದ್ಧತಿಯಲ್ಲಿ ಸೂಕ್ತ ಪರಿವರ್ತನೆಯಾಗದೆ, ಪೋಷಕರ ಮನೋಭಾವ ಬದಲಾಗದೆ ಪರಿಹಾರ ಕಷ್ಟಸಾಧ್ಯ. ಹಿಂದಿನ ಬ್ರಹ್ಮಚರ್ಯಾಶ್ರಮ, ಗುರುಕುಲ ಪದ್ಧತಿಯ ಶಿಕ್ಷಣದ ಮಹತ್ವದ ಮತ್ತು ಉತ್ತಮ ಅಂಶಗಳನ್ನು ಒಳಗೊಂಡಂತೆ ಹೊಸ ಶಿಕ್ಷಣ ಪದ್ಧತಿ ಜಾರಿಗೆ ತರುವುದೇ ಇರುವ ಉತ್ತಮ ಪರಿಹಾರವಾಗಿದೆ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಭಾರತ ಮೂಲತಃ ಆಧ್ಯಾತ್ಮಿಕ ಪ್ರಧಾನ ದೇಶವಾಗಿದ್ದು, ಆಧ್ಯಾತ್ಮಿಕತೆಗೆ ಬಲ ಬಂದರೆ ಪುನಃ ಪರಿಸ್ಥಿತಿ ಬದಲಾಗಬಹುದು. ವಿವೇಕಾನಂದರು ಹೇಳಿದಂತೆ ಕೆಲವೊಮ್ಮೆ ಆಧ್ಯಾತ್ಮಿಕತೆ ಮೇಲುಗೈ ಪಡೆದರೆ, ಕೆಲವೊಮ್ಮೆ ಭೋಗವಾದ ಮೇಲುಗೈ ಪಡೆಯುತ್ತದೆ. ಸಮುದ್ರದ ಅಲೆಗಳಂತೆ ಒಂದನ್ನೊಂದು ಹಿಂಬಾಲಿಸುತ್ತವೆ. ಹೀಗಾಗಲೆಂದು ಹಾರೈಸೋಣ. ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಪ್ರತಿಷ್ಠೆಗಳನ್ನು ಬದಿಗಿಟ್ಟು ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಆದರೆ, ವೈಚಾರಿಕತೆ ನಮ್ಮ ಮೂಲಮಂತ್ರ ಆಗಬೇಕು. ಈ ಮಂತ್ರ ಹೇಳುವುದು ಇದನ್ನೇ: ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ| ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತ || (ಋಕ್.೫.೫೫.೮) ಹೇ ಮಾನವರೇ, ಯಾವುದು ಪ್ರಾಚೀನವೋ ಅದನ್ನೂ ಗಮನಿಸಿರಿ. ಇತಿಹಾಸದಿಂದ ಪಾಠ ಕಲಿಯಿರಿ. ಯಾವುದು ನೂತನವೋ ಅದನ್ನೂ ಕೇಳಿರಿ. ಯಾವುದು ಶಾಸ್ತ್ರ ರೂಪದಲ್ಲಿ ಹೇಳಿದೆಯೋ ಅದನ್ನೂ ಕೇಳಿ. ನಿಮ್ಮ ಅಂತರಂಗ ನಿಮಗೆ ಏನು ಹೇಳುತ್ತದೋ ಅದನ್ನೂ ಕೇಳಿ. ಯಾರು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೋ ಅವರ ಹಿಂದೆಯೇ ನಿಮ್ಮ ಜೀವನ ರಥಗಳೂ ಸಾಗಲಿ. ವಿವೇಚನೆ ಮಾಡಿ ಮುನ್ನಡೆಯಿರಿ ಎನ್ನುವ ಈ ಉದಾತ್ತತೆ ನಮ್ಮಲ್ಲಿ ಬೆಳೆಯಬೇಕು.
     ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯)      ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಜನರೇ, ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಸತ್ಯವನ್ನು ಕಂಡುಕೊಳ್ಳಿರಿ, ಅದನ್ನು ಹೊರಕ್ಕೆ ತನ್ನಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಶಕ್ತಿಯಿಂದ ತೊಡೆದುಹಾಕಿ. ಜಗತ್ತಿನಲ್ಲಿ ಇರುವ ಸುಮಾರು ೮೪ ಲಕ್ಷ ಜೀವಜಂತುಗಳ ಪೈಕಿ ಮಾನವನಿಗೆ ಮಾತ್ರ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದನ್ನು ಬಳಸಿಕೊಂಡು ಸತ್ಯ ಯಾವದು, ಒಳ್ಳೆಯದು ಯಾವುದು ಎಂಬುದನ್ನು ಕಂಡುಕೊಂಡು ಕೆಟ್ಟದ್ದನ್ನು ದೂರ ಮಾಡಲು ನೀಡುವ ಕರೆ ಎಷ್ಟು ಸುಂದರ ಅಲ್ಲವೇ? ನೈತಿಕತೆಯನ್ನು ಬಲಪಡಿಸುವ, ಆತ್ಮಸ್ಥೈರ್ಯವನ್ನು ಕೊಡುವಂತಹ, ದೇಶ ಹಾಗೂ ಸಮಾಜದ ಹಿತ ಬಯಸುವ ಸತ್ಪ್ರಜೆಗಳನ್ನು ನಿರ್ಮಿಸುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ. ಆ ನಿಟ್ಟಿನಲ್ಲಿ ಜನನಾಯಕರು, ಪೋಷಕರು, ಮನೋಶಾಸ್ತ್ರಜ್ಞರು, ಶಿಕ್ಷಣತಜ್ಞರು ಚಿಂತಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ಕಾಲವೀಗ ಬಂದಿದೆ. 
-ಕ.ವೆಂ.ನಾಗರಾಜ್.
*********************
ದಿನಾಂಕ 01.02.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: