ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಜನವರಿ 23, 2011

ವೇದಸುಧೆ ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವ ಮತ್ತು ಮನೆಮನೆಕವಿಗೋಷ್ಠಿ

ವೇದಸುಧೆ ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವ ಮತ್ತು ಮನೆಮನೆಕವಿಗೋಷ್ಠಿಯ 14ನೆಯ ವಾರ್ಷಿಕೋತ್ಸವಕ್ಕೆ ಬನ್ನಿ
     ಹಾಸನದಲ್ಲಿ ದಿನಾಂಕ 30-01-2011ರಂದು  ವೇದಸುಧೆ ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವ ಮತ್ತು ಮನೆಮನೆಕವಿಗೋಷ್ಠಿಯ 14ನೆಯ ವಾರ್ಷಿಕೋತ್ಸವ ನಡೆಯಲಿದ್ದು ತಮಗೆ  ಆತ್ಮೀಯ ಆಹ್ವಾನವಿದೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆ


ಮಂಗಳವಾರ, ಜನವರಿ 18, 2011

ಮೂಢ ಉವಾಚ -41 : ಹಸಿವು

ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||


ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳೆನಿತೊಂದು |
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು
ಆತ್ಮಾಭಿಮಾನ ಮರೆಸುವುದೊ ಮೂಢ ||


ಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?
ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು? |
ಹಸಿವು ಹಿಂಗಿಸಲು ಅನ್ನವೇ ಬೇಕು
ಹೊಟ್ಟೆ ತುಂಬಿರಲೆಲ್ಲವೂ ಬೇಕು ಮೂಢ ||


ಪರಮಾತ್ಮನೆಂಬುವನು ಎಲ್ಲಿಹನು ಕೇಳಿ
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |
ದೇವನಿರದಿಹನೆ ಜೀವಿಗಳ ಉದರದಲಿ
ಹಸಿವಿರದಿರೆ ಪರಮಾತ್ಮನೆಲ್ಲಿ ಮೂಢ ||
-ಕವಿ ನಾಗರಾಜ್.

ಶ್ರೀಮತಿ ಲಲಿತಾ ರಮೇಶರವರ ಧ್ವನಿಯಲ್ಲಿ ಕೇಳಿ:


ಶುಕ್ರವಾರ, ಡಿಸೆಂಬರ್ 24, 2010

ಮೂಢ ಉವಾಚ -40

ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂವಿಕಲನಾಗದಿರೆಲೋ ಮೂಢ ||


ವಿಷಯ ಬಿಟ್ಟವನು ಸಂನ್ಯಾಸಿಯೆನಿಸುವನು
ಮುಕ್ತಿಮಾರ್ಗಕಿದು ಕಠಿಣತಮ ಹಾದಿ |
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ ||


ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||


ಮನಶುದ್ಧಿಯಿರದೆ ತಪವ ಮಾಡಿದೊಡೇನು
ದೇಹ ದಂಡಿಸಿದರೇನು ಅಂತರಂಗವ ಮರೆತು |
ಉಪವಾಸದಿಂ ಫಲವೇನು ವಿವೇಕವಿರದಲ್ಲಿ
ಆಚಾರದೊಳು ವಿಚಾರವಿರಲಿ ಮೂಢ ||
*************
-ಕವಿನಾಗರಾಜ್.

ಸೋಮವಾರ, ಡಿಸೆಂಬರ್ 20, 2010

ಮೂಢ ಉವಾಚ -39 : ಅರಿವು

ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ |
ದಾರಿ ಹಲವಿರಲು ಗುರಿಯಹುದು ಒಂದೆ
ಮನವೊಪ್ಪುವ ದಾರಿಯಲಿ ಸಾಗು ಮೂಢ ||


ಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥ
ಮನಕೊಪ್ಪುವ ಪಥದಿ ಸಾಗಲಿ ಸಕಲಜನ |
ಅವರ ದಾರಿ ಅವರಿಗಿರಲಿ ಗುರಿಯೊಂದೆ
ತಲುಪುವ ಗಮ್ಯವೊಂದೇ ಮೂಢ ||


ಬೆಳಕಿರುವೆಡೆಯಲ್ಲಿ ಕತ್ತಲೆಯು ಇದ್ದೀತೆ
ಜ್ಞಾನವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ |
ಅರಿವು ಬರಲಾಗಿ ತರತಮವು ಮಾಯ
ಅಭೇದಭಾವಿ ಅಮರನವನು ಮೂಢ ||


ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು |
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ ||
**************
-ಕವಿನಾಗರಾಜ್.

ಶನಿವಾರ, ಡಿಸೆಂಬರ್ 18, 2010

ಮೂಢ ಉವಾಚ -38

ಸತ್ಯಧರ್ಮಕೆ ಹೆಸರು ಕೋದಂಡರಾಮ 
ಹಿಡಿದನಾಯುಧವ ನೀತಿಪಾಲನೆಗಾಗಿ|
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ||


ಅನುರೂಪ ದಾಂಪತ್ಯವಿರೆ ಮನೆಯು ಸ್ವರ್ಗ
ಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ|
ರಸಭಾವದನುರೂಪ ಶಬ್ದಗಳ ಜೋಡಿಸಲು
ಒಡಮೂಡುವುದುತ್ತಮ ಕಾವ್ಯ ಮೂಢ||


ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು|
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನವನು ಮೂಢ||


ಸರ್ವಭೂತಾತ್ಮ ದೇವ ಸರ್ವರಿಗೆ ಸಮನು
ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ|
ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ
ಭಿನ್ನ ಫಲ ಪಡೆದಿಹರೋ ಮೂಢ||
********************
-ಕವಿನಾಗರಾಜ್.

ಸೇವಾ ಪುರಾಣ -31: ಹೀಗೊಬ್ಬ 'ಹೀರೋ' !

     ಸಮಾಜ ನಮ್ಮನ್ನು ಕಾಣುವ, ನಡೆಸಿಕೊಳ್ಳುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ನಾನು ಈಗ ಪ್ರಸ್ತಾಪಿಸುವ ಸಂಗತಿ ಪೂರಕವೆನಿಸುತ್ತದೆ. ರಮೇಶ (ಹೆಸರು ಬದಲಿಸಿದೆ) ಇತರರಂತೆ ಒಬ್ಬ ಸಾಮಾನ್ಯ ಯುವಕ. ಒಂದು ದಿನ ಸ್ನೇಹಿತನೊಂದಿಗೆ ಸಾಯಂಕಾಲದ ಹೊತ್ತಿನಲ್ಲಿ ಸಿನೆಮಾ ನೋಡಲು ಹೋಗಿದ್ದ. ಸಿನೆಮಾ ಪ್ರಾರಂಭವಾಗಿ ಹತ್ತು ನಿಮಿಷಗಳಾಗಿರಬಹುದು. ಆ ಯುವಕ ಕುಳಿತಿದ್ದ ಸೀಟಿನ ಹಿಂದಿನ ಸಾಲಿನಲ್ಲಿ ಮೊದಲೇ ಯಾರೂ ಕುಳಿತುಕೊಳ್ಳದಂತೆ ನೋಡಿಕೊಂಡು ಕಾದಿರಿಸಿದ್ದ ಎರಡು ಸೀಟುಗಳಲ್ಲಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಆತನ ಪತ್ನಿ ಆಸೀನರಾದರು. ಸಬ್‌ಇನ್ಸ್‌ಪೆಕ್ಟರ್ ಯೂನಿಫಾರಮ್ಮಿನಲ್ಲೇ ಇದ್ದರು. ಹಳೆಯ ಕಾಲದ ಟಾಕೀಸುಗಳಲ್ಲಿ ಆಸನಗಳ ವ್ಯವಸ್ಥೆ ಹೇಳಿಕೊಳ್ಳುವ ಮಟ್ಟದಲ್ಲಿದ್ದಿರದೆ ಹಿಂದೆ ಕುಳಿತವರಿಗೆ, ಅದರಲ್ಲೂ ಕುಳ್ಳರಿಗೆ, ಮುಂದಿನವರ ತಲೆಗಳು ಅಡ್ಡವಾಗಿ ಅಕ್ಕ ಪಕ್ಕ ಬಗ್ಗಿ ನೋಡುವ ಸಂದರ್ಭಗಳು ಸಾಮಾನ್ಯವಾಗಿತ್ತು. ರಮೇಶ ಮತ್ತು ಅವನ ಸ್ನೇಹಿತ ಪರಸ್ಪರ ನೋಡಿಕೊಂಡು ಮಾತನಾಡುತ್ತಾ ಸಿನೆಮಾ ನೋಡುತ್ತಿದ್ದರಿಂದ ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಅವನ ತಲೆ ಅಡ್ಡ ಬಂದು ಸಿನೆಮಾ ನೋಡಲು ಅಡಚಣೆಯಾಗುತ್ತಿತ್ತೆಂದು ತೋರುತ್ತದೆ. ಸಬ್‌ಇನ್ಸ್‌ಪೆಕ್ಟರ್‌ರು ತಮ್ಮ ಲಾಠಿಯಿಂದ ರಮೇಶನ ತಲೆ ಸರಿಸಿದರು. ರಮೇಶ ಹಿಂತಿರುಗಿ ದುರುಗುಟ್ಟಿ ನೋಡಿ ಸುಮ್ಮನಾದ. ಸಬ್‌ಇನ್ಸ್‌ಪೆಕ್ಟರ್ ರಮೇಶನ ಸೀಟಿನ ಹಿಂಭಾಗದ ಮೇಲೆ ಬೂಟುಕಾಲಿರಿಸಿ ಕುಳಿತಿದ್ದು ಅವನಿಗೆ ಅಸಹನೀಯವೆನಿಸಿದರೂ ಸುಮ್ಮನೆ ಇರಬೇಕಾಗಿದ್ದ ಸ್ಥಿತಿ ಅವನದಾಗಿತ್ತು. ಮತ್ತೆ ಹತ್ತು ಹದಿನೈದು ನಿಮಿಷಗಳಾಗಿರಬಹುದು. ಉದ್ದವಾಗಿ ಧೃಢಕಾಯನಾಗಿದ್ದ ರಮೇಶನ ಹಿಂದೆ ಕುಳಿತಿದ್ದ ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಸರಿಯಾಗಿ ಸಿನೆಮಾ ನೋಡಲಾಗದೆ ಚಡಪಡಿಸುತ್ತಿದ್ದರೆಂದು ತೋರುತ್ತದೆ. ಸಬ್‌ಇನ್ಸ್‌ಪೆಕ್ಟರ್‌ರು ಪುನಃ ಲಾಠಿಯಿಂದ ಸ್ವಲ್ಪ ಬಿರುಸಾಗಿ ಅವನ ತಲೆ ತಳ್ಳಿ 'ಸರಿಯಾಗಿ ಕೂತು ನೋಡಲೇ ಬದ್ಮಾಶ್' ಎಂದರಂತೆ. ರಮೇಶನಿಗೆ ತಲೆ ಕೆಟ್ಟುಹೋಯಿತು. ಎದ್ದು ತಿರುಗಿ ನಿಂತವನೇ ಸಬ್‌ಇನ್ಸ್‌ಪೆಕ್ಟರ್ ಕೈಲಿದ್ದ ಲಾಠಿ ಕಿತ್ತುಕೊಂಡವನೇ ಅವರಿಗೆ ಎರಡು ಬಾರಿಸಿಬಿಟ್ಟ. ಸಬ್‌ಇನ್ಸ್‌ಪೆಕ್ಟರ್ ಸಹ ಅವನಿಗೆ ಹೊಡೆದರು. ಜಗಳ ಜೋರಾಯಿತು. ರಮೇಶ ಸಬ್‌ಇನ್ಸ್‌ಪೆಕ್ಟರ್ ಕುತ್ತಿಗೆ ಪಟ್ಟಿ ಹಿಡಿದು ಹೊಡೆಯುತ್ತಾ ಅವರನ್ನು ಬಾಲ್ಕನಿಯಿಂದ ಕೆಳಕ್ಕೆ ಎಳೆದು ತಂದ. ಅವರ ಪತ್ನಿ ಇಬ್ಬರನ್ನೂ ಸುಮ್ಮನಿರಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಆಕೆ ಟಾಕೀಸಿನ ಹತ್ತಿರದಲ್ಲೇ ಇದ್ದ ಪೋಲಿಸ್ ಠಾಣೆಗೆ ಓಡಿಹೋಗಿ ಸುದ್ದಿ ಕೊಟ್ಟಿದ್ದೇ ತಡ ಧಾವಿಸಿ ಬಂದ ಪೋಲಿಸ್ ಪೇದೆಗಳು ರಮೇಶನನ್ನು ಬಂಧಿಸಿದರು. ಅಂದು ರಾತ್ರಿ ಠಾಣೆಯಲ್ಲಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಲಿಲ್ಲ ಎಂದರೆ ಯಾರೂ ಒಪ್ಪುವುದಿಲ್ಲ. ಮರುದಿನ ಬೆಳಿಗ್ಗೆ ಅವನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿ ಜೈಲಿಗೆ ದಾಖಲಿಸಿದರು. ಸ್ಥಳೀಯ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಮುಖವಾಗಿ ಪ್ರಕಟವಾಯಿತು. ಜನರು ಸಬ್‌ಇನ್ಸ್‌ಪೆಕ್ಟರ್‌ರ ದೌರ್ಜನ್ಯ ಖಂಡಿಸಿ  ಬಂದ್ ನಡೆಸಿದರು. ತಾಲ್ಲೂಕು ಕಛೇರಿಯ ಮುಂದೆ ಸಭೆ ನಡೆಸಿ ಭಾಷಣಗಳನ್ನು ಮಾಡಿ ರಮೇಶನನ್ನು ಬಿಡುಗಡೆಗೊಳಿಸಲು ಮನವಿ ಸಲ್ಲಿಸಿದರು. ಎರಡು ದಿನಗಳ ನಂತರ ಅವನು ಜಾಮೀನಿನ ಮೇಲೆ ಬಿಡುಗಡೆ ಹೊಂದುವ ವೇಳೆಗಾಗಲೇ ಅವನು 'ಹೀರೋ' ಎನ್ನಿಸಿಕೊಂಡಿದ್ದ.
     ಧೃಢ ಮೈಕಟ್ಟಿನ ಆದರೆ ಹುಂಬನಾದ ರಮೇಶನ ವ್ಯಕ್ತಿತ್ವವೇ ಬದಲಾಗಿತ್ತು. ಅವನನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರಿಗೆ ಕಡಿಮೆಯಿರಲಿಲ್ಲ. ನಂತರದ ದಿನಗಳಲ್ಲಿ ಪೋಲಿಸರೂ, ರಾಜಕಾರಣಿಗಳೂ, ಬಲಾಢ್ಯರೂ ಅವನಿಂದ ಉಪಯೋಗ ಪಡೆಯಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆ ಅವನ ಸ್ವಭಾವ ಬದಲಾಯಿತು. ಆಗಾಗ್ಯೆ ಪ್ರಕರಣಗಳು ದಾಖಲಾಗುತ್ತಿತ್ತು. ಒಮ್ಮೆ ಆತ ನನ್ನನ್ನು ಉದ್ದೇಶಿಸಿ "ಗುರುಗಳೇ, ಏನಾದರೂ ಕೆಲಸ ಇದ್ದರೆ ಸಂಕೋಚ ಮಾಡಿಕೊಳ್ಳದೆ ಕೇಳಿ. ನಿಮಗೆ ಯಾರಾದರೂ ತೊಂದರೆ ಕೊಟ್ಟರೆ ಹೇಳಿ, ಹೆದರಬೇಡಿ, ನಾನಿದ್ದೇನೆ. ಅವರ ಬೆಂಡೆತ್ತಿಬಿಡುತ್ತೇನೆ" ಎಂದು ಹೇಳಿದ್ದ. ಮುಗುಳ್ನಗೆ ಮಾತ್ರ ನನ್ನ ಪ್ರತಿಕ್ರಿಯೆಯಾಗಿತ್ತು.

ಶುಕ್ರವಾರ, ಡಿಸೆಂಬರ್ 17, 2010

ಮೂಢ ಉವಾಚ -37 : ಗುರುಮಾರ್ಗ

ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು
ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು|
ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು
ಸರಿಯಿರದ ದಾರಿಯಲಿ ಗುರಿ ದೂರ ಮೂಢ||


ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು|
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ||


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|
ಗುರುವಾಣಿ ಸುಜನವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ||


ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ
ಶಾಶ್ವತವದೊಂದೆ ಸಚ್ಚಿದಾನಂದ ಭಾವ|
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ
ಭದ್ರಪದವೊಲಿಯುವುದು ಮೂಢ||
*************
-ಕವಿನಾಗರಾಜ್.