ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಅಕ್ಟೋಬರ್ 21, 2012

ಮೂಢ ಉವಾಚ - 92


ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ || ..೩೨೧

ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು
ಒಂದಿದ್ದು ಎರಡಾಗಿ ಮೂರಾಗಿ ಕಾಣುವುದು |
ದೇಹವೇ ನಾನೆನಿಸಿ ಭೇದ ಮೆರೆಯುವುದು
ಮಾಯಾ ಮೋಹಿನಿಗೆ ಶರಣು ಮೂಢ || ..೩೨೨

ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ |
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ ||..೩೨೩

ತಳಮಳಿಪ ಮನವನ್ನು ತಣಿಪುವುದೆ ಪೂಜೆ
ಕುಣಿಕುಣಿವ ಮನವನ್ನು ನಿಲಿಸುವುದೆ ಧ್ಯಾನ |
ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ || ..೩೨೪
****************
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 15, 2012

ಸಬಕೋ ಸನ್ಮತಿ ದೇ ಭಗವಾನ್!

     ಮೂರು ದಿನಗಳ ಹಿಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿನ ಒಳಪುಟವೊಂದರಲ್ಲಿನ ಈ ಸುದ್ದಿ ನನ್ನ ಮನ ಕಲಕಿತು. ನೈಜೀರಿಯಾ ದೇಶದ ಅಡಮಾವಾದಲ್ಲಿನ ಮುಬಿ ಪಾಲಿಟೆಕ್ನಿಕ್ಕಿನ ಹಾಸ್ಟೆಲ್ಲಿಗೆ ಸೈನಿಕರ ಸಮವಸ್ತ್ರ ಧರಿಸಿದ ಕೆಲವರು ಬಂದೂಕುಧಾರಿಗಳು ನುಗ್ಗಿ ಅಲ್ಲಿನ 46 ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಂದರು ಎಂಬುದು ಆ ಸುದ್ದಿ. ಅವರು ವಿದ್ಯಾರ್ಥಿಗಳನ್ನು ಹೆಸರುಗಳನ್ನು ಕೇಳಿ ಕೇಳಿ ಕೊಂದಿದ್ದರು. ಹೆಸರಿನ ಆಧಾರದ ಮೇಲೆಯೇ ಕೆಲವು ವಿದ್ಯಾರ್ಥಿಗಳನ್ನು ಕೊಲ್ಲದೆ ಬಿಟ್ಟಿದ್ದರು. ಇದಕ್ಕೆ ಮುಂಚೆ ಸಹ ಮೂವರು ವಿದ್ಯಾರ್ಥಿಗಳನ್ನು ಕೊಂದಿದ್ದರು. ಈ ಕೃತ್ಯವನ್ನು ಬೊಕೊ ಹರಮ್ ಎಂಬ ಮೂಲಭೂತವಾದಿ ಮುಸ್ಲಿಮ್ ಸಂಘಟನೆ ಮಾಡಿದ್ದೆಂದು ಶಂಕಿಸಿದ್ದಾರೆ. ವಿದ್ಯಾರ್ಥಿಗಳು ಕಾಲೇಜನ್ನು ಬಿಟ್ಟು ಹೋಗಲು ಮೊದಲು ಎಚ್ಚರಿಕೆ ನೀಡಲಾಗಿತ್ತಂತೆ. ಈ ಸಂಸ್ಥೆ ನೈಜೀರಿಯಾದ ಜನರನ್ನು ಬಂದೂಕಿನ ಬಲದಿಂದ ಮುಸ್ಲಿಮರನ್ನಾಗಿಸಲು ಮತ್ತು ಶರಿಯಾ ಸರ್ಕಾರ ಸ್ಥಾಪಿಸಲು ಬದ್ಧವಾಗಿದ್ದು, ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಯೂಸುಫ್ ೨೦೦೯ರಲ್ಲಿ ಪೋಲಿಸರ ಗುಂಡಿಗೆ ಬಲಿಯಾದಾಗಿನಿಂದಲೂ ಇಂತಹ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ. ನೈಜೀರಿಯಾದಲ್ಲಿರುವ ೧೫೦ ಮಿಲಿಯನ್ ಜನಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನರು ಸಮಸಂಖ್ಯೆಯಲ್ಲಿದ್ದಾರೆ. ಕಳೆದ ೩ ವರ್ಷಗಳಿಂದ ನಡೆಯುತ್ತಿರುವ ಇಂತಹ ಭೀಕರ ಚಟುವಟಿಕೆಗಳ ಪರಿಣಾಮದ ಕುರಿತು ವಿಚಾರವಾದಿಗಳೆನಿಸಿಕೊಂಡವರು, ಮಾನವತಾವಾದಿಗಳೆನಿಸಿಕೊಂಡವರು ಚಿಂತಿಸಿ ಪರಿಹಾರ ಕಂಡುಕೊಳ್ಳದಿದ್ದರೆ ಈ ಭೂಖಂಡ ಮತೀಯ ಕಾರಣಗಳಿಗಾಗಿ ಹೊತ್ತಿ ಉರಿಯುವುದರಲ್ಲಿ ಅನುಮಾನವಿಲ್ಲ. ಮುಸ್ಲಿಮ್ ಮತಾಂಧರು ಭಯೋತ್ಪಾದನೆ ಮೂಲಕ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಲು ಉದ್ಯುಕ್ತರಾಗಿದ್ದರೆ, ಕ್ರಿಶ್ಚಿಯನರು ಆಸೆ, ಆಮಿಷಗಳು, ನಯವಂಚಕತನದಿಂದ ಮತಾಂತರ ನಡೆಸುತ್ತಿರುವುದು ಸುಳ್ಳಲ್ಲ. ೪೬ ಮಕ್ಕಳನ್ನು ಕಳೆದುಕೊಂಡ ಆ ಕುಟುಂಬಗಳವರಿಗೆ ಇಸ್ಲಾಮ್ ಬಗ್ಗೆ ಯಾವ ಭಾವನೆ ಬರಬಹುದೆಂದು ಯೋಚಿಸಬೇಕಲ್ಲವೇ? ಹಿಂಸೆ ಹಿಂಸೆಯನ್ನೇ ಪ್ರಚೋದಿಸುತ್ತದೆ. ಅದರಿಂದ ಹಾನಿಯೇ ಹೊರತು ಉಪಯೋಗವಂತೂ ಇಲ್ಲ. ಭಾರತದಲ್ಲಿ ಇಂತಹ ಘಟನೆ ನಡೆದು, ಪ್ರತಿಯಾಗಿ ಕೋಮು ದಳ್ಳುರಿ ಎದ್ದಿದ್ದರೆ ಹಿಂದೂಗಳ ಮೇಲೆ, ಅವರ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ರಾಜಕೀಯ, ಮತೀಯ ಕಾರಣಗಳಿಗಾಗಿ, ಏನಕೇನ ಪ್ರಕಾರೇಣ ಹೆಸರು ಪಡೆಯುವ ಇಚ್ಛೆಯ ವಿಚಾರವಾದಿಗಳಿಂದಾಗಿ ಆಗುತ್ತಿತ್ತೆಂಬುದರಲ್ಲಿ ಅನುಮಾನವಿಲ್ಲ. ಇಂತಹ ಲೇಖನ ಬರೆದವರಿಗೂ ಯಾವುದಾದರೂ ಹಣೆಪಟ್ಟಿ ಹಚ್ಚಲಾಗುತ್ತಿತ್ತು. ನೈಜಿರಿಯಾದಲ್ಲಿನ ಈ ಘಟನೆಯಲ್ಲಿ ಸತ್ತವರು ಹಿಂದೂಗಳಲ್ಲವಾದ್ದರಿಂದ ನನ್ನ ಕಳಕಳಿ ವಿನಾಕಾರಣದ ಮಾನವ ಹತ್ಯೆಯ ಬಗ್ಗೆ ಮಾತ್ರ ಎಂದು ಅರ್ಥ ಮಾಡಿಕೊಂಡಲ್ಲಿ ಸಂತೋಷ. ಮನುಷ್ಯರನ್ನು ಮನುಷ್ಯರಂತೆ ಕಾಣದ ಯಾವುದೇ ಮತ/ಧರ್ಮ ಮಾನವತೆಗೆ ಕಳಂಕ. ಯಾವುದೇ ಮತದವರ ಸಂಖ್ಯೆ ಎಷ್ಟೇ ಹೆಚ್ಚಾದರೂ ಮಾನವತೆಗೆ, ವೈಜ್ಞಾನಿಕ ಚಿಂತನೆಗೆ, ವೈಚಾರಿಕತೆಯ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವುದಾದಲ್ಲಿ ಅದಕ್ಕೆ ಬೆಲೆಯೆಲ್ಲಿ ಬಂದೀತು? ಆದರೆ ಮಾನವತೆಗೆ ಬೆಲೆ ಕೊಡುವ, ವೈಚಾರಿಕತೆಯನ್ನು ಉಳಿಸಿಕೊಂಡಿರುವ, ಮಾನವಧರ್ಮವನ್ನು ಒತ್ತಿ ಹೇಳುವ ಧರ್ಮ/ಮತದವರ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ, ಅಂತಹವರು ಜಗತ್ತಿನ ಶಾಂತಿಗೆ, ನೆಮ್ಮದಿಗೆ ಅತ್ಯಗತ್ಯ. ಅಂತಹ ಮಾನವಧರ್ಮ ಪಾಲಿಸುವವರನ್ನು, ಆ ಮನೋಭಾವದವರನ್ನು ಪ್ರೋತ್ಸಾಹಿಸುವ, ಬೆಳೆಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿದೆ.