ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 21, 2016

ಜಂಬೂದ್ವೀಪದ ಭರತಖಂಡ


      'ಸಪ್ತದ್ವೀಪಾ ವಸುಂಧರಾ' - ಈ ಭೂಮಂಡಲ ಏಳು ದ್ವೀಪಗಳನ್ನೊಳಗೊಂಡಿದೆ ಎಂಬುದು ಇದರ ಅರ್ಥ. ಆ ಏಳು ದ್ವೀಪಗಳೆಂದರೆ ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ. ಜಂಬೂದ್ವೀಪಕ್ಕೆ ಸುದರ್ಶನ ದ್ವೀಪವೆಂಬ ಹೆಸರೂ ಇದೆ. ಈ ದ್ವೀಪದಲ್ಲಿ ಹೇರಳವಾಗಿದ್ದ ಜಂಬೂ ಮರಗಳಿಂದಲೂ ಈ ಹೆಸರು ಬಂದಿತ್ತೆನ್ನಲಾಗಿದೆ. ವಿಷ್ಣುಪುರಾಣದ ಪ್ರಕಾರ ಜಂಬೂವೃಕ್ಷದಲ್ಲಿ ಬಿಡುತ್ತಿದ್ದ ಜಂಬೂಫಲಗಳು ಆನೆಗಳ ಗಾತ್ರವಿರುತ್ತಿದ್ದವೆಂದೂ, ಕಳಿತ ಫಲಗಳು ಪರ್ವತಗಳ ಮೇಲೆ ಬಿದ್ದು ಹೊರಸೂಸಿದ ರಸದಿಂದ ಜಂಬೂನದಿ ಉಗಮವಾಯಿತೆಂದೂ ಆ ನೀರನ್ನು ಜಂಬೂದ್ವೀಪದ ಜನರು ಬಳಸುತ್ತಿದ್ದರೆಂದೂ ಹೇಳಲಾಗಿದೆ. ಬೌದ್ಧ ಧರ್ಮ ಮತ್ತು ಜೈನ ಧರ್ಮದ ಕಥೆಗಳಲ್ಲೂ ಜಂಬೂದ್ವೀಪದ ಉಲ್ಲೇಖ ಕಂಡುಬರುತ್ತದೆ. ಜಂಬೂದ್ವೀಪ ಒಂಬತ್ತು ವಿಭಾಗಗಳು ಮತ್ತು ಎಂಟು ಪ್ರಮುಖ ಪರ್ವತಗಳಿಂದ ಪ್ರಸಿದ್ಧವಾಗಿತ್ತು. ವಾಯುಪುರಾಣ, ಮಾರ್ಕಂಡೇಯ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲೂ ಬರುವ ಉಲ್ಲೇಖಗಳಂತೆ ಜಂಬೂದ್ವೀಪ ಕಮಲದ ಹೂವಿನ ನಾಲ್ಕು ದೊಡ್ಡ ಎಸಳುಗಳಂತೆ ವಿಭಾಗಿಸಲ್ಪಟ್ಟಿದ್ದು ಆ ಹೂವಿನ ಮಧ್ಯಭಾಗದ ದಿಂಡಿನ ಪ್ರದೇಶದಲ್ಲಿ ಬೃಹತ್ ಮೇರು ಪರ್ವತವಿತ್ತು. ಶಿವನ ಪಾದದಿಂದ ಉಗಮಿಸಿ ಬ್ರಹ್ಮಪುರಿಯನ್ನು ಸುತ್ತುವರೆದಿರುವ ಆಕಾಶಗಂಗೆ ಆಕಾಶದ ಮೂಲಕ ಮೇರುಪರ್ವತದ ಮೇಲೆ ಬಿದ್ದು ನಾಲ್ಕು ವಿರುದ್ಧ ದಿಕ್ಕುಗಳಲ್ಲಿ ಹರಿಯುವ ದೊಡ್ಡ ನದಿಗಳಾಗಿ ಜೀವಿಗಳಿಗೆ ಜೀವನದಿಗಳಾಗಿದ್ದವೆಂದೂ ವರ್ಣನೆಗಳಿವೆ.
   ಭಾಗವತದ 16ನೆಯ ಅಧ್ಯಾಯದಲ್ಲೂ ಜಂಬೂದ್ವೀಪದ ವಿಷದವಾದ ವರ್ಣನೆಯಿದೆ. ಅದರ ಪ್ರಕಾರ ಭೂಮಂಡಲದ ವ್ಯಾಪ್ತಿಯೆಂದರೆ ಸೂರ್ಯನ ಬೆಳಕು ಮತ್ತು ಶಾಖ ಎಲ್ಲಿಯವರೆಗೆ ವಿಸ್ತರಿಸಿರುವುದೋ ಮತ್ತು ಎಲ್ಲಿಯವರೆಗೆ ಚಂದ್ರ, ನಕ್ಷತ್ರಗಳು ಕಾಣುವುವವೋ ಅಲ್ಲಿಯವರೆಗೆ. ಈ ಭೂಂಡಲವು ಏಳು ಸಾಗರಗಳಿಂದ ಸುತ್ತುವರೆಯಲ್ಪಟ್ಟ ಏಳು ದ್ವೀಪಗಳಾಗಿ ವಿಭಜಿತವಾಗಿವೆ. ಈ ದ್ವೀಪಗಳ ಪೈಕಿ ಜಂಬೂದ್ವೀಪವು ಒಂಬತ್ತು ವಿಭಾಗಗಳಾಗಿ ಎಂಟು ಪರ್ವತಗಳಿಂದ ಬೇರ್ಪಡಿಸಲ್ಪಟ್ಟಿದ್ದು ಪ್ರತಿಯೊಂದು ವಿಭಾಗವೂ 9000 ಯೋಜನಗಳಷ್ಟು (72000 ಮೈಲುಗಳು) ವಿಸ್ತಾರವುಳ್ಳದ್ದಾಗಿದೆ. ಈ ಒಂಬತ್ತು ವಿಭಾಗಗಳಲ್ಲಿ ಇಳಾವರ್ತವೆಂದು ಕರೆಯಲ್ಪಡುವ ಮಧ್ಯಭಾಗದಲ್ಲಿ ಬಂಗಾರದ ಪರ್ವತ ಮೇರುಪರ್ವತವಿದ್ದು ಅದು 100,000 ಯೋಜನಗಳಷ್ಟು ಅಗಲ ಮತ್ತು 84,000 ಯೋಜನಗಳಷ್ಟು ಎತ್ತರವಿತ್ತು. ಇಳಾವರ್ತದ ಉತ್ತರದಲ್ಲಿ ನೀಲ, ಶ್ವೇತ ಮತ್ತು ಸಾರಂಗವನ ಪರ್ವತಗಳಿದ್ದು, ಪೂರ್ವ, ಪಶ್ಚಿಮ ಭಾಗದಲ್ಲಿ ಮಾಲ್ಯವನ ಮತ್ತು ಗಂಧಮಾದನ ಪರ್ವತಗಳಿದ್ದರೆ, ದಕ್ಷಿಣದಲ್ಲಿ ನಿಷಾದ, ಹೇಮಕೂಟ ಮತ್ತು ಹಿಮಾಲಯ ಪರ್ವತಗಳಿವೆ. ಹಿಮಾಲಯ ಪರ್ವತದಿಂದ ವಿಂಗಡಿಸಲ್ಪಟ್ಟ ವಿಭಾಗವೇ ಭಾರತವರ್ಷ. ಮೇರು ಪರ್ವತದ ನಾಲ್ಕು ಬದಿಗಳಲ್ಲಿ ಮಂದಾರ, ಮೇರುಮಂದಾರ, ಸುಪಾರ್ಶ್ವ ಮತ್ತು ಕುಮುದಗಳೆಂಬ ಪರ್ವತಗಳಿದ್ದು ಈ ಪರ್ವತಗಳ ಧ್ವಜಗಳಂತೆ ಕಂಗೊಳಿಸುವ ನಾಲ್ಕು ಮರಗಳು - ಮಾವು, ಸೇಬು, ಕದಂಬ ಮತ್ತು ಬಾಳೆ - ಇದ್ದು ಇವುಗಳು 100 ಯೋಜನಗಳಷ್ಟು ಅಗಲ (800 ಮೈಲುಗಳು) ಮತ್ತು 1100 ಯೋಜನಗಳಷ್ಟು ಎತ್ತರ (8800 ಮೈಲುಗಳು) ಇದ್ದವಂತೆ. ಅವುಗಳ ಕೊಂಬೆಗಳೂ 1100 ಯೋಜನಗಳಷ್ಟು ಹರಡಿದ್ದವಂತೆ. ಅಷ್ಟು ಎತ್ತರದಿಂದ ಬಿದ್ದ ಮರದ ಹಣ್ಣುಗಳ ರಸ ಹರಿಯುವ ನದಿಗಳಾಗಿ ಸುಗಂಧ ಬೀರುತ್ತಿದ್ದವಂತೆ.
     ಪುಣ್ಯಭೂಮಿ, ಮಾತೃಭೂಮಿ, ಪಿತೃಭೂಮಿ, ಕರ್ಮಭೂಮಿ ಭಾರತದ ನೆಲೆವೀಡು ಜಂಬೂದ್ವೀಪ. ಜಂಬೂದ್ವೀಪದ ಎಲ್ಲೆಡೆ ಭಾರತದ ಹಿರಿಮೆ, ಗರಿಮೆ ಮತ್ತು ಸಂಸ್ಕೃತಿಯ ಪ್ರಭಾವ ಹರಡಿತ್ತು. ಆಗಿನ ಭಾರತದ ಮೇರೆಗಳು ಈಗಿನಂತಿರಲಿಲ್ಲ. ಕಾಲಾಂತರದಲ್ಲಿ ಭೌಗೋಳಿಕ ಕಾರಣವೂ ಸೇರಿದಂತೆ ಅನೇಕ ಕಾರಣಗಳಿಂದ ಮೇರೆಗಳು, ಭೂರಚನೆಗಳು ಮಾರ್ಪಾಡಾಗಿವೆ. ಆದರೂ ಜಂಬೂದ್ವೀಪೇ ಭರತವರ್ಷೇ ಭರತಖಂಡೇ. . . ಎಂಬ ಪದಗಳ ಪ್ರಯೋಗ ಮಾತ್ರ ಇಂದಿಗೂ ನಿಂತಿಲ್ಲ.
     ಪುರಾಣ, ಪುಣ್ಯಕಥೆಗಳಲ್ಲಿನ ವರ್ಣನೆ ತಿಳಿದೆವು. ಇನ್ನು ಕೆಳದಿ ಸಂಸ್ಥಾನದ ಆಸ್ಥಾನಕವಿ ಲಿಂಗಣ್ಣನ ಐತಿಹಾಸಿಕ ಕೃತಿ ಕೆಳದಿನೃಪ ವಿಜಯದಲ್ಲಿ ಬರುವ ಜಂಬೂದ್ವೀಪದ ಸುತ್ತಲೂ ಆವರಿಸಿದ್ದ ಸಮುದ್ರದ ಕಲ್ಪನೆ, ವಿವರಣೆ  ನೋಡೋಣ. ಕವಿಯೇ ಹೇಳಿಕೊಂಡಿರುವಂತೆ ಕೆಳದಿಪರಾಮೇಶ್ವರನೊಲಿದುಸುರ್ದ ಪ್ರಾಕೃತ ಸಂಸ್ಕೃತ ಮೃದುಭಾಷಾ ಕವನದಿನಧಿಕರಮ್ಯಮಾಗಿರ್ಪುದರಿಂ ಶ್ರೀಕೆಳದಿನೃಪವಿಜಯಮೆನಿಪೀಕಾವ್ಯಂ ಸೇವ್ಯಮೆನಿಸಿ ಶೋಭಿಸುತಿರ್ಕಂ. ಈ ಶೋಭಿತ, ಸೇವ್ಯ ಕಾವ್ಯದಲ್ಲಿ ಬರುವ ಸಮುದ್ರದ ವರ್ಣನೆ ರಂಜನೀಯವಾಗಿದೆ.
     ಎತ್ತರೆತ್ತರಕ್ಕೆ ಚಿಮ್ಮುವ ಹೊಳೆಯುವ ಅಲೆಗಳು, ಅಲೆಗಳಲ್ಲಿ ಓಡಾಡುವ ಭಯಂಕರ ಮೀನುಗಳು, ಆಮೆಗಳು, ಏಡಿಗಳು, ಮೊಸಳೆಗಳು, ನೀರಾನೆಗಳು, ಹಾವುಗಳೇ ಮುಂತಾದ ವಿಧವಿಧ ಜಲಚರಗಳು, ಅವುಗಳು ಚಿಮ್ಮಿಸುವ ನೀರಹನಿಗಳು, ನೊರೆಗಳು, ಶಂಖ, ಚಕ್ರಗಳಿಂದ ಶೋಭಿಸುವ ಆ ಸಾಗರವು ಶಿವನ ನಿಷಂಗ (ಬತ್ತಳಿಕೆ), ಅಚ್ಯುತನ ಪಾಸು (ವಿಷ್ಣುವಿನ ಹಾಸಿಗೆ), ವರುಣನ ಅರಮನೆ, ಚಂದಿರನ ಜನ್ಮಸ್ಥಳ, ಮೈನಾಕ ಪರ್ವತದ ರಕ್ಷಾಕವಚ, ವಡಬಾಗ್ನಿಯ ಉಷ್ಣ ಶಮನಗೊಳಿಸುವ ಜಲಪಾತ್ರೆ ಹಾಗೂ ಲಕ್ಷ್ಮಿಯ ತವರುಮನೆಯಾಗಿ ಶ್ರೇಷ್ಠ ರತ್ನ, ಮುತ್ತುಗಳ ಭಂಡಾರವಾಗಿದೆ. ಸಮುದ್ರವನ್ನು ಶ್ರೀಹರಿಗೆ ಹೋಲಿಸುವ ಕವಿ  ದೊಡ್ಡ ದೊಡ್ಡ ಅಲೆಗಳನ್ನು ಅವನ ತೋಳುಗಳಿಗೂ, ಸುಳಿಯನ್ನು ಸುದರ್ಶನ ಚಕ್ರಕ್ಕೂ, ಸಮುದ್ರದ ನೊರೆಯನ್ನು ಅವನ ಮಂದಹಾಸಕ್ಕೂ, ಸಮುದ್ರದ ಆಳ ವಿಸ್ತಾರಗಳು ಉದರದೊಳಗಣಜಾಂಡ (ಹೊಟ್ಟೆಯಲ್ಲಿ ಇರುವ ಬ್ರಹ್ಮಾಂಡ), ಹೊಳೆಯುವ ಜಲ ಅವನ ಕಾಂತಿ ಮತ್ತು ಬಡಬಾನಲವೇ ಅವನುಟ್ಟ ಪೀತಾಂಬರಕ್ಕೂ ಸಮೀಕರಿಸಿ ವರ್ಣಿಸುತ್ತಾನೆ.
     ಅಸಂಖ್ಯಾತ ನದಿಗಳು, ತೊರೆಗಳನ್ನು ತನ್ನಲ್ಲಿ ಅಡಗಿಸಿ ಅರಗಿಸಿಕೊಳ್ಳುವ ಚಕ್ರವರ್ತಿ ಸಾರ್ವಭೌಮ ಸಮುದ್ರ ಹರಿಯ ನಂದಗೋಕುಲದಂತೆ ರಮಣೀಯ, ರುದ್ರಮನೋಹರ, ಮನ್ಮಥನಂತೆ ಸದಾ ಸುಂದರ, ಅತುಲ ಜಲಚರಗಳ ಸಮೂಹದಿಂದ ವೈಭವಯುತ, ಸೂರ್ಯನಂತೆ ಹೊಳೆಯುವ, ರೋಗವಿಲ್ಲದ, ಸೌಂದರ್ಯ ಮತ್ತು ಉಪ್ಪುಗಳ ಸಮ್ಮಿಳಿತ ಲಾವಣ್ಯ ಹೊಂದಿದ, ಚಂದ್ರೋದಯದಂತೆ ಭೂಮಿಗೆ ಶೀತಲ ಅನುಭವ ನೀಡುವ ಸಮುದ್ರಕ್ಕೆ ಸಮುದ್ರವೇ ಸಾಟಿ. ಇಷ್ಟಾದರೂ ಆ ಸಮುದ್ರರಾಜನಿಗೂ ಚಿಂತೆ ತಪ್ಪಿಲ್ಲ. ಮಗಳು ಲಕ್ಷ್ಮಿ ಅತಿ ಚಂಚಲೆ, ಅಳಿಯ ವಿಷ್ಣು ಹೂಗಣ್ಣ (ತಾವರೆ ಕಣ್ಣಿನವನು), ಮಗ ಚಂದ್ರನೋ ಕ್ಷಯರೋಗಿ, ಮೊಮ್ಮಗ ಮನ್ಮಥನಿಗೆ ದೇಹವೇ ಇಲ್ಲದೆ ಅನಂಗನಾಗಿದ್ದಾನೆ. ಅವನ ವಿಷಾದದ ನಿಟ್ಟುಸಿರೇ ಸಮುದ್ರದ ಅಲೆಗಳ ಭೋರ್ಗರೆತವಾಗಿ ಹೊರಹೊಮ್ಮುತ್ತಿದೆ.
     ದೇವತೆಗಳಿಗೆ ಅಮೃತವನ್ನು ಕೊಟ್ಟ, ಶಿವನಿಗೆ ನೀಲಕಂಠನೆಂಬ ಹೆಸರು ಬರಲು ಕಾರಣವಾದ, ವಿಷ್ಣುವಿಗೆ ಲಕ್ಷ್ಮೀಪತಿಯೆಂದು ಹೆಸರು ಬರಲು ಕಾರಣವಾದ ಆ ಜಲರಾಜನ ಹಿರಿಮೆಯನ್ನು ಕವಿಯ ಮಾತಿನಲ್ಲೇ ಕೇಳುವುದು ಸೊಗಸು!
                      ಅಮರರ್ಗಮೃತಾಶನರೆಂ
                      ದುಮೆಯಾಣ್ಯಗೆ ನೀಲಕಂಠನೆಂದಚ್ಯುತಗಂ
                      ಕ್ರ್ರಮದಿಂ ಕಮಲಾಪತಿಯೆಂ
                   ದಮರ್ದಿರೆ ಪೆಸರಿತ್ತ ಜಲಧಿಯೇಂ ರಂಜಿಸಿತೋ || . . (ಕೆ.ನೃ.ವಿ.1.5)
      ಈರೀತಿ ಶೋಭಿಸುವ ಸಮುದ್ರದ ನಡುವೆ ವಿರಾಜಿಸುತ್ತಿದ್ದ ಭವ್ಯ ಕಮಲವೇ ಜಂಬೂದ್ವೀಪ !! ಈ ಜಂಬೂದ್ವೀಪದ ಮಧ್ಯಭಾಗದಲ್ಲಿದ್ದುದು ಕನಕಾಚಲ (ಬಂಗಾರದ ಪರ್ವತ-ಮೇರುಪರ್ವತ). ಹಿಂದೊಂದು ಕಲ್ಪದಲ್ಲಿ ಯಾರು ಶ್ರೇಷ್ಠರು ಎಂಬ ಕುರಿತು ಬ್ರಹ್ಮ ಮತ್ತು ವಿಷ್ಣುಗಳ ನಡುವೆ ವಿವಾದ ನಡೆದ ಸಂದರ್ಭದಲ್ಲಿ ಆ ವಿವಾದವನ್ನು ನಿಲ್ಲಿಸುವ ಸಲುವಾಗಿ ಸೃಷ್ಟಿಯಾದ ಆದಿ-ಅಂತ್ಯಗಳಿಲ್ಲದ ಮಹಾದಿವ್ಯಲಿಂಗದ ರೀತಿಯಲ್ಲಿ ಚೆಲ್ವಾಯ್ತು ಕಣ್ಗೆ ಕಾಂಚನಶೈಲ ಪರ್ವತ. ಮೇರು ಪರ್ವತದ ದಕ್ಷಿಣ ದಿಕ್ಕಿನಲ್ಲಿ ಪೂರ್ವ ಪಶ್ಚಿಮ ಸಮುದ್ರಗಳೇ ಅಂಚಾಗಿದ್ದು ಎತ್ತರೆತ್ತರದಲ್ಲಿ ಆಕಾಶವನ್ನು ಮುಟ್ಟಿ ಸೆಟೆದು ನಿಂತಿದ್ದುದು ಹಿಮವತ್ಪರ್ವತ. ಆ ಗಿರಿರಾಜನಾದರೋ ವಿಷ್ಣುವಿನ ವಾಹನವಾದ ಗರುಡನಿಗೆ ಆಧಾರವಾಗಿ, ಸಾಧು-ಸಜ್ಜನರಿಗೆ ಆಶ್ರಯತಾಣವಾಗಿ, ಅನೇಕ ಸಹಶಿಖರಗಳೊಡಗೂಡಿದ್ದು, ಆದಿಶೇಷನೆಂಬ ಕಾಲ್ಗಡಗ ಧರಿಸಿದ ಪಾದ ಉಳ್ಳವನು. ಹೈಮಾಚಲದ ದಕ್ಷಿಣಭಾಗದಲ್ಲಿ ಸಂಪತ್ಭರಿತವಾದ ಪುಣ್ಯದ ಭಂಡಾರವೆನಿಸಿ ಕರ್ಮಭೂಮಿಯಾಗಿ ಕಂಗೊಳಿಸುತ್ತಿದ್ದುದೇ ಭರತಖಂಡ.
-ಕ.ವೆಂ.ನಾಗರಾಜ್.
***************
ದಿನಾಂಕ 14.03.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


3 ಕಾಮೆಂಟ್‌ಗಳು: