ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಅಕ್ಟೋಬರ್ 23, 2017

ಪ್ರಗತಿಪರ ಪದದ ದುರ್ಬಳಕೆ ನಿಲ್ಲಲಿ!


     ಪ್ರಗತಿಪರರು, ಪ್ರಗತಿಪರ ಚಿಂತಕರು ಎಂಬ ಪದ ಮಾಧ್ಯಮ ವಲಯಗಳಲ್ಲಿ ಈಗ ಬಹುವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲದ ಅರ್ಥದಲ್ಲಿ ಬಳಕೆಯಾಗದೆ ಸವಕಲಾಗಿವೆ ಅಥವ ಅರ್ಥಹೀನವಾಗಿವೆ. ಹೀಗೆ ಸವಕಲಾಗಿರುವ ಜಾತ್ಯಾತೀತತೆ, ಸಮಾನತೆ, ಕೋಮುವಾದ, ಕೋಮುಸೌಹಾರ್ದ, ಬುದ್ಧಿಜೀವಿಗಳು ಇತ್ಯಾದಿ ಪದಗಳ ಸಾಲಿಗೆ ಈ ಪ್ರಗತಿಪರರು ಎಂಬುದೂ ಸೇರಿಬಿಟ್ಟಿದೆ. ಯಾರನ್ನು ಪ್ರಗತಿಪರರು ಎಂದು ಬಿಂಬಿಸಲಾಗುತ್ತಿದೆಯೋ ಅವರು ಹೇಳುವ ಮಾತುಗಳು, ಜೀವನಶೈಲಿ, ಅವರ ಸಂಸ್ಕಾರ, ಬರಹಗಳನ್ನು ಗಮನಿಸಿದರೆ ಪ್ರಗತಿಶೀಲ ಎಂದರೇನು ಎಂಬುದರ ಬಗ್ಗೆಯೇ ಸಂದೇಹ ಮೂಡುತ್ತದೆ. ಅವರು ಪ್ರಗತಿಪರರೆಂದಾದರೆ ಉಳಿದವರೆಲ್ಲಾ ಪ್ರಗತಿವಿರೋಧಿಗಳೇ? ಪ್ರಗತಿಪರರೆಂದು ಹೇಳಿಕೊಳ್ಳುವ ಕೆಲವರ ನಡೆ-ನುಡಿಗಳನ್ನು ನೋಡಿದರೆ ಭಯೋತ್ಪಾದಕರು ತಮ್ಮನ್ನು ತಾವು ಶಾಂತಿದೂತರು ಎಂದು ಕರೆದುಕೊಂಡಂತೆ ಇರುತ್ತದೆ.
     ಪ್ರಗತಿ ಎಂಬುದು ಮೂಲ ಸಂಸ್ಕೃತ ಪದ. ಪ್ರ ಎಂದರೆ ಮುಂದೆ, ಗತಿ ಎಂದರೆ ಚಲನೆ ಎಂಬುದು ಸರಳ ಅರ್ಥ. ಮುಂದಕ್ಕೆ ಹೋಗುವುದು ಅಂದರೆ ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದು ಎಂಬುದು ಈ ಪದ ಹೊಮ್ಮಿಸುವ ಉದ್ದೇಶ. ಮೌಲ್ಯ ವರ್ಧನೆ, ಶಕ್ತಿವರ್ಧನೆ, ಸಂಪತ್ತು ವರ್ಧನೆ, ಜ್ಞಾನ ವರ್ಧನೆ, ಹೀಗೆ ಹತ್ತು ಹಲವು ರಂಗಗಳಲ್ಲಿ ಮುಂದೆ ಹೋಗುವ ಕ್ರಿಯೆಯೇ ಪ್ರಗತಿ. ಇಂತಹ ಉದ್ದೇಶಕ್ಕಾಗಿ ಶ್ರಮಿಸುವವರು, ಅದರ ಪರವಾಗಿ ದ್ವನಿ ಎತ್ತುವವರನ್ನು ಪ್ರಗತಿಪರರು ಎನ್ನಬಹುದು. ಒಟ್ಟು ಸಮಾಜದ ಹಿತವನ್ನು ಗಮನದಲ್ಲಿಟ್ಟು ಅದರ ಪ್ರಗತಿಗೆ, ಅಭಿವೃದ್ಧಿಗೆ ಕಂಕಣ ಕಟ್ಟಿದವರನ್ನು ಪ್ರಗತಿಪರರು ಎನ್ನಬಹುದು. ಆದರೆ ಇಂದೇನಾಗುತ್ತಿದೆ?
     ಕಹಿಯೆನಿಸುವ ಸತ್ಯವೆಂದರೆ ಒಂದು ನಿರ್ದಿಷ್ಟ ಸಂಘಟನೆಗೆ ಸೇರಿದವರನ್ನು ಅಥವ ಅವರ ಪರ ಸಹಾನುಭೂತಿ ಹೊಂದಿದವರನ್ನು ವಿರೋಧಿಸುವವರು ತಮ್ಮನ್ನು ಪ್ರಗತಿಪರರು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಎಂದು ಕರೆದುಕೊಳ್ಳುತ್ತಿರುವುದು, ನಿರ್ದಿಷ್ಟ ರಾಜಕೀಯ ಪಕ್ಷದವರು ಮತ್ತು ಅವರ ಬೆಂಬಲಿಗರನ್ನು ಕೋಮುವಾದಿಗಳು ಎನ್ನುವುದು. ಇದು ಪ್ರಗತಿಪರ ಎಂಬ ಪದಕ್ಕೆ ಮಾಡುವ ಅವಮಾನವಲ್ಲದೆ ಮತ್ತೇನೂ ಅಲ್ಲ. ಯಾವುದೇ ವಿಷಯಕ್ಕೆ ಸಂಬಂದಿಸಿದಂತೆ ನಿಷ್ಪಕ್ಷಪಾತತೆಯಿಂದ ವಿಮರ್ಶಿಸಿ ಸರಿಯಿದ್ದರೆ ಬೆಂಬಲಿಸುವುದು, ಇಲ್ಲದಿದ್ದರೆ ವಿರೋಧಿಸುವುದು ಮಾಡಿದರೆ ಅದನ್ನು ಒಪ್ಪಿಕೊಳ್ಳಬಹುದು. ಅದನ್ನು ಬಿಟ್ಟು ಸರಿಯೋ, ತಪ್ಪೋ ನೋಡದೆ, ಪ್ರತಿಯೊಂದನ್ನೂ ವಿರೋಧಿಸುವ, ಅಡ್ಡಗಾಲು ಹಾಕುವ, ತಮ್ಮದೇ ದೇಶದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಶತಾಯ ಗತಾಯ ಪ್ರಯತ್ನ ಮಾಡುವವರು ತಮ್ಮನ್ನು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದು ಹಾಸ್ಯಾಸ್ಪದವೇ ಸರಿ.    
     ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಎರಡನೆಯದಾದ ದೇಶ ಇತರ ದೇಶಗಳೆದುರು ತನ್ನ ಮಾತು ನಡೆಯುವಂತೆ ನೋಡಿಕೊಳ್ಳಬೇಕು. ವಿದೇಶಗಳಲ್ಲಿ ಭಾರತವನ್ನು ಕಡೆಗಣಿಸುವ ಪರಿಸ್ಥಿತಿ ಹಿಂದೆ ಇದ್ದುದು ಈಗ ಬದಲಾವಣೆಯಾಗುತ್ತಿರುವುದು ಸಾಮಾನ್ಯರ ಗಮನಕ್ಕೇ ಬರುತ್ತಿದೆ. ಗಡಿಭಾಗದಲ್ಲಿ ಬಲಿಷ್ಠ ಚೀನಾದ ಎದುರಿಗೆ ಸಮ ಸಮನಾಗಿ ನಿಂತು ದೋಕ್ಲಾಮ್ ಕಗ್ಗಂಟನ್ನು ಎದುರಿಸಿದ ರೀತಿ ನಿಜಕ್ಕೂ ಹೆಮ್ಮೆ ಪಡುವಂತಹದು. ಆದರೆ ಬುದ್ಧಿಜೀವಿಗಳು ಎನಿಸಿಕೊಂಡವರು ಚೀನಾದ ಪರವಾಗಿ ನಿಂತು ನಮ್ಮವರ ಸ್ಥೆರ್ಯ ಕುಂದಿಸುವ ಪ್ರಯತ್ನ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡಲು ಪಾಕಿಸ್ತಾನದ ಕುಮ್ಮಕ್ಕು ಸ್ಪಷ್ಟವಾಗಿದ್ದರೂ, ಸಂಯಮದಿಂದ ವರ್ತಿಸಿ ಪರಿಸ್ಥಿತಿ ಸುಧಾರಣೆ ಮತ್ತು ಹತೋಟಿಗೆ ಕ್ರಮ ಅನುಸರಿಸಿದ್ದನ್ನು ವಿರೋಧಿಸುವ ಮತ್ತು ನಮ್ಮ ಸೈನಿಕರ ಕುರಿತು ಅವಹೇಳನಕರ ಮಾತುಗಳನ್ನಾಡುವ, ಅವರ ಮನೋಬಲ ಕುಂದಿಸುವ ಕೆಲಸ ಮಾಡಿದವರು ತಮ್ಮನ್ನು ಕರೆದುಕೊಂಡದ್ದು ಪ್ರಗತಿಪರ ಚಿಂತಕರೆಂದೇ, ಆಜಾದಿಯ ಹರಿಕಾರರೆಂದೇ! ವಿದೇಶಗಳ ಎದುರಿನಲ್ಲಿ ಭಾರತ ತಲೆ ಎತ್ತಿ ನಿಲ್ಲುವಂತಹ, ಒಂದು ಬಲಾಢ್ಯ ಶಕ್ತಿಯಾಗಿ ಗುರುತಿಸಿಕೊಳ್ಳುವಂತಹ ಕಾಲ ಬರುತ್ತಿರುವುದು ಪ್ರಗತಿಪರತೆಯೋ, ಅದನ್ನು ವಿರೋಧಿಸುವುದು ಪ್ರಗತಿಪರವೋ? ದೇಶವಿರೋಧಿ ಘೋಷಣೆಗಳನ್ನು ಕೂಗುವುದು, ದೇಶದ ಭದ್ರತೆಗೆ ಆತಂಕ ತರುವ ಕಾರ್ಯಕ್ರಮಗಳನ್ನು ಮಾಡುವುದು ಮತ್ತು ಅಂತಹುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮುಸುಕಿನಲ್ಲಿ ಸಮರ್ಥಿಸುವವರು, ಬೆಂಬಲಿಸುವವರು ಪ್ರಗತಿಪರರೇ?
     ರೂ.೫೦೦ ಮತ್ತು ರೂ.೧೦೦೦ದ ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಿದ ಕ್ರಮ ಕಪ್ಪುಹಣವನ್ನು ಹೊರತೆಗೆಯುವುದಷ್ಟೇ ಆಗಿರದೆ, ನೆರೆದೇಶಗಳಿಂದ ಬರುವ ಖೋಟಾ ನೋಟುಗಳನ್ನು ತಡೆಯುವುದೂ ಆಗಿದ್ದು ಆರ್ಥಿಕವಾಗಿ ಕ್ರಾಂತಿಕಾರಕವೆಂದು ಹೇಳಲಾಗಿದ್ದು, ತಮಗೆ ಕಷ್ಟವಾದರೂ ಜನಸಾಮಾನ್ಯರು ಮುಂದೆ ಒಳ್ಳೆಯದಾಗುವುದೆಂಬ ಕಾರಣಕ್ಕೆ ಸಹಿಸಿಕೊಂಡು ಸಹಕರಿಸಿದ್ದು ಈಗ ಇತಿಹಾಸ. ಅವರನ್ನು ಪ್ರತಿಭಟನೆಗೆ ಪ್ರಚೋದಿಸಲು, ಎತ್ತಿಕಟ್ಟಲು ಪ್ರಗತಿಪರರೆನಿಸಿಕೊಂಡವರು, ರಾಜಕೀಯ ನಾಯಕರು ಮತ್ತು ಕೆಲವು ಮಾಧ್ಯಮಗಳವರು ನಾನಾ ರೀತಿಯಲ್ಲಿ ಪ್ರಯತ್ನಿಸಿ ವಿಫಲವಾಗಿದ್ದುದನ್ನೂ ಕಂಡೆವು. ಈಗ ಅಪಮೌಲ್ಯಗೊಂಡ ನೋಟುಗಳ ಶೇ. ೯೫ಕ್ಕೂ ಹೆಚ್ಚು ಭಾಗ ಬ್ಯಾಂಕುಗಳಲ್ಲಿ ಜಮಾ ಅಗಿರುವುದೆಂದು ಹೇಳಲಾಗಿದ್ದು, ಇದು ಸರ್ಕಾರದ ಕ್ರಮದ ವಿಫಲತೆಯೆಂದು ಬಣ್ಣಿಸಲಾಗುತ್ತಿದೆ. ಹಣ ಬ್ಯಾಂಕಿನಲ್ಲಿ ಜಮೆ ಆಗಿದ್ದರೂ, ಅದಕ್ಕೆ ಲೆಕ್ಕವಿದೆ. ಅಕ್ರಮವಾಗಿ ಜಮಾ ಆದ ಹಣದ ಬಗ್ಗೆ ಸರಿಯಾದ ತನಿಖೆ ಆದರೆ ಆಗಲೂ ಅಕ್ರಮ ಹಣದ ಪತ್ತೆ ಮತ್ತು ಅಪರಾಧಿಗಳ ದಂಡನೆಗೆ ಅವಕಾಶ ಮುಕ್ತವಾಗಿದೆ. ಈಗಾಗಲೇ ಆ ಕ್ರಮ ಪ್ರಾರಂಭವಾಗಿದೆ. ಅಪನಗದೀಕರಣದಿಂದಾಗಿ ಹಲವಾರು ದೊಡ್ಡ ತಿಮಿಂಗಲಗಳು ನೆಲ ಕಚ್ಚಿರುವುದು, ಭಯೋತ್ಪಾದಕ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಬಿದ್ದಿರುವುದು ಗಮನಾರ್ಹವಾಗಿದೆ. ಸರ್ಕಾರಕ್ಕೆ ತೆರಿಗೆಯ ರೂಪದಲ್ಲಿ ಗಣನೀಯ ಪ್ರಮಾಣದಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದೆ. ಒಳ್ಳೆಯ ಉದ್ದೇಶದ ಕ್ರಮಕ್ಕೆ ಬೆಂಬಲಿಸುವುದು ಪ್ರಗತಿಪರವೋ, ಅದನ್ನು ವಿಫಲಗೊಳಿಸಲು ಪ್ರಯತ್ನಿಸುವುದು ಪ್ರಗತಿಪರವೋ?
     ಹಲವು ವಿದೇಶಗಳು ಈ ದೇಶದ ಮೇಲೆ ಅಘೋಷಿತ ಹತೋಟಿ ಹೊಂದುವ ಅಥವ ಇಲ್ಲಿನ ಸರ್ಕಾರವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಈ ದೇಶದಲ್ಲಿ ಹಲವಾರು ಸರ್ಕಾರೇತರ ಸಂಸ್ಥೆಗಳನ್ನು, ಸಂಘಟನೆಗಳನ್ನು ಸ್ಥಾಪಿಸಿ ಪ್ರತಿಷ್ಠಿತರು, ಗೌರವಾನ್ವಿತರು ಅನ್ನಿಸಿಕೊಂಡವರನ್ನು ಅದಕ್ಕೆ ನೇಮಿಸಿ ಹಣದ ಹೊಳೆ ಹರಿಸುತ್ತಾ ಇರುವುದು ಈಗ ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಸುಂದರ ಮುಖವಾಡದ ಹಿಂದೆ ಸರ್ಕಾರ ದುರ್ಬಲಗೊಳಿಸುವ ಕ್ರೂರ ಹುನ್ನಾರ ಹೊಂದಿರುವ ಚಿಂತಕರು ತಮ್ಮ ಪ್ರತಿಭೆಯನ್ನು ಹಣಕ್ಕಾಗಿ ಒತ್ತೆ ಇಟ್ಟಿದ್ದಾರೆ ಎಂಬ ಸತ್ಯವೂ ಹೊರಬರುತ್ತಿದೆ. ಹಲವರ ಮುಖವಾಡಗಳೂ ಕಳಚಿಬೀಳುತ್ತಿವೆ. ಇವರುಗಳು ಪ್ರಗತಿಪರರೋ ಅಥವ ಇವರುಗಳ ಬಣ್ಣ ಬಯಲು ಮಾಡುತ್ತಿರುವುದು ಪ್ರಗತಿಪರತೆಯೋ? ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರ ಹಿನ್ನೆಲೆಯಲ್ಲಿ ಹಣದ, ಅಧಿಕಾರದ, ವಶೀಲಿಯ, ಪ್ರಶಸ್ತಿಯ ಆಸೆ ಇರುವುದೂ ಇದೆ. ಆದರೆ ಇದನ್ನು ಸಾರಾಸಗಟಾಗಿ ಎಲ್ಲರ ವಿಷಯದಲ್ಲಿ ಹೇಳಲಾಗುವುದಿಲ್ಲವಾದರೂ ಕೆಲವರ ನಡೆ-ನುಡಿಗಳು ಇದನ್ನು ಸಮರ್ಥಿಸುತ್ತವೆ.
     ಮೇಲೆ ತಿಳಿಸಿದಂತಹ ಉದಾಹರಣೆಗಳು ಸಾಂಕೇತಿಕವಷ್ಟೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರಗತಿಪರರು ಎಂಬ ವಿಶೇಷಣವನ್ನು ಕೆಲವರ ಗುತ್ತಿಗೆಯೆಂಬಂತೆ ಬಳಸುವ ಪ್ರವೃತ್ತಿ ನಿಲ್ಲಬೇಕು. ಪ್ರಗತಿಪರತೆ ಎಂದರೆ ಯಾವುದೋ ಒಂದು ವಿಚಾರವನ್ನು ಸಮರ್ಥಿಸುವುದಲ್ಲ ಅಥವ ವಿರೋಧಿಸುವುದಲ್ಲ, ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರಾಗಬೇಕಿಲ್ಲ, ಜಾತಿ, ಧರ್ಮ, ಪಂಥದ ಹೆಸರಿನಲ್ಲಿ ಯಾರನ್ನೋ ತೆಗಳುವುದಲ್ಲ ಅಥವ ಓಲೈಸುವುದಲ್ಲ, ಒಂದೇ ಕಾನೂನನ್ನು ಬೆಂಬಲಿಗರಿಗೆ ಒಂದು ತರಹ, ವಿರೋಧಿಗಳಿಗೆ ಮತ್ತೊಂದು ತರಹ ಅನ್ವಯಿಸುವುದಲ್ಲ.  ಎಲ್ಲರನ್ನೂ ಮಾನವರನ್ನಾಗಿ ಕಾಣುವ ದೃಷ್ಟಿ ಹೊಂದಿ, ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದಕ್ಕೆ ಧ್ವನಿ ಎತ್ತುವವರು ನಿಜವಾಗಿ ಪ್ರಗತಿಪರರು. ಹೀಗೆ ಇರದವರು, ಸುಂದರ ಮುಖವಾಡ ಧರಿಸಿ ಮರುಳು ಮಾಡುವ ಢೋಂಗಿಗಳು. ಸಿಕ್ಕ ಸಿಕ್ಕವರನ್ನೆಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಚಿಂತಕರು ಎಂದು ಹೇಳುವ ಪ್ರವೃತ್ತಿಗೆ ಕಡಿವಾಣ ಬೀಳಲೇಬೇಕು.
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 22, 2017

ಕಥೆಯ ಕಥೆ (Story of a story)


     ಮಗುವೊಂದು ರಚ್ಚೆ ಹಿಡಿದು ಅಳುತ್ತಿತ್ತು. ಏನು ಮಾಡಿದರೂ, ಏನು ಕೊಟ್ಟರೂ ಅದಕ್ಕೆ ಸಮಾಧಾನವಾಗುತ್ತಿರಲಿಲ್ಲ. ಯಾರೆಷ್ಟೇ ಪ್ರಯತ್ನಿಸಿದರೂ ಅದಕ್ಕೆ ಏನು ಬೇಕೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಹೇಳಲು ತಿಳಿಯದ ಮಗುವೂ ಅಳು ನಿಲ್ಲಿಸುತ್ತಿರಲಿಲ್ಲ. ಪೇಪರ್ ಓದುತ್ತಾ ಕುಳಿತಿದ್ದ ಮಗುವಿನ ತಾತ ಪೇಪರ್ ತೆಗೆದಿಟ್ಟು, 'ಒಂದೂರಲ್ಲಿ ಒಂದು ಪಾಪ ಇತ್ತಂತೆ, ಆ ಪಾಪು ಏನ್ ಮಾಡ್ತೂ ಅಂದರೆ . .' ಎಂದು ಹೇಳತೊಡಗಿದಾಗ ಮಗು ಅಳು ನಿಲ್ಲಿಸಿ ತಾತನ ಕಡೆಗೆ ಗಮನ ಹರಿಸಿತ್ತು. ತಾತ ಮಗುವನ್ನು ಎತ್ತಿಕೊಂಡು ತೊಡೆಯ ಮೇಲೆ ಕೂರಿಸಿಕೊಂಡು ಕಥೆ ಮುಂದುವರೆಸಿದಾಗ ನಗುತ್ತಾ ಪ್ರತಿಕ್ರಿಯಿಸುತ್ತಿತ್ತು. ಕಥೆ ಕೇಳುತ್ತಾ ಇದ್ದಾಗ ಅಮ್ಮ ಅದಕ್ಕೆ ತುತ್ತು ತಿನ್ನಿಸುತ್ತಿದ್ದರೂ ಗಮನಿಸದೆ ತಿನ್ನುತ್ತಾ ಕಥೆ ಕೇಳುತ್ತಿತ್ತು. ಮಗುವಿನ ಹಸಿವೂ ಹಿಂಗಿತ್ತು, ಮನಸ್ಸಿಗೂ ಹಿತವಾಗಿತ್ತು, ಅಳು ಮರೆತೇ ಹೋಗಿತ್ತು. ತಾತ ಹೇಳಿದ್ದ ಕಥೆಗೆ ತುದಿಯೂ ಇರಲಿಲ್ಲ, ಬುಡವೂ ಇರಲಿಲ್ಲ. ಮಗುವಿಗೆ ಹಿತವಾಗುವ, ಇಷ್ಟಪಡುವ ಸಂಗತಿಗಳು ಮಾತ್ರ ಇದ್ದವು ಅಷ್ಟೆ. ಕಥೆಗಳು ಮಕ್ಕಳಿಗಿರಲಿ, ಎಲ್ಲರಿಗೂ ಇಷ್ಟವಾಗುವುದು ಈ ಕಾರಣಕ್ಕಾಗಿಯೇ, ತಾವು ಇಷ್ಟಪಡುವ ವಿಚಾರ ಅಲ್ಲಿ ಸಿಗುತ್ತದೆ, ಸಿಗಬಹುದು ಎಂಬ ಕಾರಣಕ್ಕಾಗಿ. ನನ್ನ ಚಿಕ್ಕಂದಿನಲ್ಲಿ ಸೋದರಮಾವನೊಬ್ಬ ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಧಾರಾವಾಹಿಯಾಗಿ ಕಟ್ಟುಕಥೆಯನ್ನು ಕಲ್ಪಿಸಿಕೊಂಡು ಸ್ವಾರಸ್ಯಕರವಾಗಿ ಹೇಳುತ್ತಿದ್ದರೆ ದೊಡ್ಡವರೂ ಸಹ ಗುಂಪುಕೂಡಿ ಕೇಳುತ್ತಿದ್ದರು. ಅದನ್ನೇ ಅವನು ಹರಿಕಥೆ ರೂಪದಲ್ಲೂ ಹೇಳುತ್ತಿದ್ದ. ಕಥೆಯನ್ನು ಸ್ವಾರಸ್ಯಕರ ಘಟ್ಟದಲ್ಲಿ ನಿಲ್ಲಿಸಿ, ತನ್ನ ಬಟ್ಟೆ ಇಸ್ತ್ರಿ ಮಾಡುವುದು ಮುಂತಾದ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳಿಂದಲೇ ಮಾಡಿಸಿಕೊಂಡು ನಂತರ ಕಥೆ ಮುಂದುವರೆಸುತ್ತಿದ್ದ. ಮಕ್ಕಳೂ ಕಥೆ ಕೇಳುವ ಕುತೂಹಲಕ್ಕೆ ದಡಬಡನೆ ಕೆಲಸ ಮುಗಿಸಿ ಓಡಿ ಬಂದು ಕೂರುತ್ತಿದ್ದವು. ಕಥೆಯಲ್ಲಿ ಹುರುಳಿರದಿದ್ದರೂ, ತಿರುಳಿರುತ್ತಿತ್ತು, ಒಳ್ಳೆಯವರಿಗೆ ಮೊದಲು ಕಷ್ಟವಾದರೂ ಕೊನೆಗೆ ಒಳ್ಳೆಯದಾಗುತ್ತದೆ ಎಂಬುದೇ ತಿರುಳು. ಹೇಳುವ ರೀತಿಯಲ್ಲಿ ಆಕರ್ಷಣೆಯಿರುತ್ತಿತ್ತಷ್ಟೆ.
     ಮೇಲಿನ ಉದಾಹರಣೆ ಕೊಡುವುದಕ್ಕೂ ಕಾರಣವಿದೆ. ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್ ಇರುವಂತೆ ಹಿಂದೂಗಳ ಪವಿತ್ರ ಗ್ರಂಥ ಯಾವುದು ಎಂದರೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಭಗವದ್ಗೀತೆ ಅನ್ನುತ್ತಾರೆ, ರಾಮಾಯಣ ಅನ್ನುತ್ತಾರೆ, ಮಹಾಭಾರತವೆನ್ನುತ್ತಾರೆ, ಶಿವಪುರಾಣ ಅನ್ನುತ್ತಾರೆ, ಹೀಗೆಯೇ ಇನ್ನೇನೋ ಹೇಳುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ವೇದಗಳು ನಮ್ಮ ಪವಿತ್ರ ಗ್ರಂಥವೆನ್ನಬೇಕು. 5000 ವರ್ಷಗಳ ಹಿಂದೆ ವೇದವ್ಯಾಸರು ವೇದಗಳನ್ನು ಲಿಖಿತರೂಪದಲ್ಲಿ ಲೋಕದ ಮುಂದಿಟ್ಟಿದ್ದು, ಇಂದಿಗೂ ಅದರಲ್ಲಿನ ಸಂಗತಿಗಳಲ್ಲಿ ಒಂದಕ್ಕೊಂದು ವಿರೋಧಾಭಾಸವಾದ ಅಂಶಗಳಿಲ್ಲ, ಲೋಕವಿರೋಧಿ ತತ್ವಗಳಿಲ್ಲ, ಸಕಲ ಜೀವರಾಶಿಯ ಹಿತ, ಶಾಂತಿ ಬಯಸುವ ಸಂಗತಿಗಳೇ ಸೂತ್ರ ರೂಪದಲ್ಲಿವೆ. ಹೀಗೆ ಲಿಖಿತ ರೂಪದಲ್ಲಿ ಬರುವ ಮುನ್ನ ವೇದ ಇರಲಿಲ್ಲವೇ? ಖಂಡಿತ ಇತ್ತು, ಋಷಿಮುನಿಗಳು, ದಾರ್ಶನಿಕರು ಅದನ್ನು ಮೌಖಿಕವಾಗಿ ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಮುಂದುವರೆಸಿಕೊಂಡು ಬರುತ್ತಿದ್ದರು. ಅದನ್ನೇ ವೇದವ್ಯಾಸರು ಜಗತ್ತಿಗೆ ಲಿಖಿತರೂಪದಲ್ಲಿ ಅರ್ಪಿಸಿದ್ದರು. ವೇದಗಳ ನಂತರದ ಸಾಹಿತ್ಯಗಳೇ, ಉಪನಿಷತ್ತುಗಳು, ಪುರಾಣಗಳು, ಪುಣ್ಯಕಥೆಗಳು, ರಾಮಾಯಣ, ಮಹಾಭಾರತದಂತಹ ಇತಿಹಾಸಗಳು, ಇತ್ಯಾದಿ. ಇವುಗಳು ವೇದದ ಸಾರವನ್ನು ಕಥೆ, ಪುರಾಣಗಳ ರೂಪದಲ್ಲಿ ತಿಳಿಸುವ ಪ್ರಯತ್ನಗಳು. ಅದನ್ನು ಹೇಳುವವರ, ಅರ್ಥೈಸುವವರ ಅನುಸಾರವಾಗಿ ಕೆಲವೊಮ್ಮೆ ವಿರೋಧಾಭಾಸಗಳೂ ಕಂಡುಬರುತ್ತವೆ. ಆದರೆ, ಮೂಲವೇದಗಳಲ್ಲಿ ಅಂತಹ ವಿರೋಧಾಭಾಸಗಳಿಲ್ಲ. ಆದ್ದರಿಂದ ವೇದಗಳೇ ಹಿಂದೂಗಳ ಧರ್ಮಗ್ರಂಥವೆಂದು ಕರೆಯಲ್ಪಡಲು ಅರ್ಹವಾಗಿದೆ. ವೈಚಾರಿಕತೆಗೆ ಮುಕ್ತ ಅವಕಾಶವಿರುವ ಚಲನಶೀಲ ಸನಾತನ ಧರ್ಮ, ಸ್ವಂತ ಅಧ್ಯಯನದಿಂದ ಸತ್ಯಾನ್ವೇಷಣೆಗೆ ಪ್ರೇರಿಸುವ ಧರ್ಮ ಬಹುಷಃ ಜಗತ್ತಿನಲ್ಲಿ ಇದೊಂದೇ ಆಗಿದೆ.
     ಅನೇಕ ಪುರಾಣಗಳಲ್ಲಿ ನಂಬಲು ಅಸಾಧ್ಯವೆನಿಸುವ, ಅರ್ಥರಹಿತವೆನಿಸುವ ಕೆಲವು ಘಟನೆಗಳ ಉಲ್ಲೇಖ ಕಂಡುಬರುತ್ತದೆ. ಇತರರು ಅದನ್ನು ಕುರಿತು ಗೇಲಿ ಮಾಡಿದರೆ, ಅದನ್ನು ಸಮರ್ಥಿಸಲು ಪಂಡಿತರು ಸಕಾರಣಗಳನ್ನು ಮುಂದಿಟ್ಟರೆ, ಸಾಮಾನ್ಯರು ಸುಮ್ಮನಾಗುವ ಸಂಗತಿಗಳೂ ಇವೆ. ಈ ಪುರಾಣ, ಪುಣ್ಯಕಥೆಗಳನ್ನು ಆಧರಿಸಿ ಅನೇಕ ಸಂಪ್ರದಾಯ, ಹಬ್ಬಗಳನ್ನೂ ಆಚರಿಸಲಾಗುತ್ತಿದೆ. ತಲೆ ತಲಾಂತರದಿಂದ ಆಚರಿಸಿಕೊಂಡು ಬರುವ ಸಂಪ್ರದಾಯಗಳ ಅರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದುವರೆಸಿಕೊಂಡು ಬರುವವರ ಸಂಖ್ಯೆ ಎಲ್ಲಾ ಧರ್ಮ, ಜಾತಿಗಳಲ್ಲೂ ಕಂಡುಬರುತ್ತದೆ. ಇಲ್ಲಿ ಇನ್ನೊಂದು ಅಂಶವನ್ನೂ ಪರಿಗಣಿಸಬೇಕಿದೆ. ವೇದದ ಸ್ಪಷ್ಟ, ನೇರ ವಿಚಾರಗಳು ಅಷ್ಟು ಸುಲಭವಾಗಿ ಜನರಿಗೆ ತಲುಪಲಾರವು. ಅಲ್ಲದೆ ಅಂತಹ ಸಂಗತಿಗಳು ಜನರಿಗೆ ರುಚಿಸುವುದೂ ಸುಲಭವಲ್ಲ. ಹಾಗಾಗಿ ರಂಜನೀಯವಾಗಿ ಕಥೆ, ಪುರಾಣಗಳ ರೂಪದಲ್ಲಿ ಹೇಳಿದರೆ ಜನರಿಗೆ ಪ್ರಿಯವೆನಿಸುವುದಲ್ಲದೆ, ಆ ಮೂಲಕ ವಿಚಾರಗಳನ್ನು ತಲುಪಿಸಬಹುದೆಂಬುದು ಇದರ ಉದ್ದೇಶವಿರಬಹುದು. ಕಥೆಗಳನ್ನು ಕೇಳುವವರ ಮನೋಸ್ಥಿತಿ, ಇಷ್ಟಾನಿಷ್ಟಗಳನ್ನು ಅನುಸರಿಸಿ ಹೇಳಬೇಕಾಗುತ್ತದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೂ, ಪದವಿ ಮಟ್ಟದಲ್ಲಿ ಓದುವ ವಿದ್ಯಾರ್ಥಿಗೂ ಒಂದೇ ರೀತಿಯಲ್ಲಿ ಪಾಠ ಹೇಳಿಕೊಡಬಹುದೆ? ಪುರಾಣಗಳು ಇತ್ಯಾದಿ ವೇದೋತ್ತರ ಕಾಲದ ರಚನೆಗಳನ್ನು ಒತ್ತಟ್ಟಿಗಿಟ್ಟರೆ, ಮೂಲವೇದಗಳಲ್ಲಿ ಸಕಲರ ಹಿತವೇ ಪ್ರಧಾನವಾಗಿರುವ ಸಂಗತಿಗಳಷ್ಟೇ ಕಂಡುಬರುತ್ತವೆ. ವೇದಗಳು ಸಾರುವ ಮಾನವಧರ್ಮದ ಸಾರ ಅರ್ಥ ಮಾಡಿಕೊಂಡರೆ ಯಾವ ಬೇರೆ ಧರ್ಮವೂ, ಹೊಸತಿರಲಿ, ಹಳೆಯದಿರಲಿ ಅಗತ್ಯವಿರುವುದಿಲ್ಲ.
     ಪುರಾಣ, ಪುಣ್ಯಕಥೆಗಳ ವಿಚಾರದಲ್ಲಿ ಹೇಳಬೇಕೆಂದರೆ, ಅವು ಸಾರುವ ತಿರುಳಿನ ಕಡೆಗೆ ಲಕ್ಷ್ಯವಹಿಸಬೇಕೇ ಹೊರತು, ಅಲ್ಲಿ ಬರುವ ಕೆಲವು ಸಂಗತಿಗಳ ಕುರಿತು ಅದು ಏಕೆ, ಹೇಗೆ ಎಂದು ಚರ್ಚಿಸಹೊರಟರೆ ನಾವು ಎಲ್ಲಿಗೂ ತಲುಪಲಾರೆವು. ಮಕ್ಕಳಿಗೆ ವರ್ಣಮಾಲೆ ಕಲಿಸುವಾಗ ಅ-ಅಗಸ, ಆ-ಆನೆ ಇತ್ಯಾದಿ ಹೇಳಿಕೊಡುತ್ತೇವೆ. ಇಂಗ್ಲಿಷಿನಲ್ಲಾದರೆ ಎ ಫಾರ್ ಆಪಲ್, ಬಿ ಫಾರ್ ಬಾಲ್, ಹೀಗೆ ಕಲಿಸುತ್ತೇವೆ. ಅಗಸ, ಆನೆಗಳಿಗೂ, ಅಆಇಈಗೂ, ಆಪಲ್, ಬಾಲ್‌ಗಳಿಗೂ ಎಬಿಸಿಡಿಗೂ ಏನಾದರೂ ಸಂಬಂಧವಿದೆಯೇ? ಮಕ್ಕಳಿಗೆ ಕಲಿಯುವ ಆಸಕ್ತಿ ಬರುವ ಸಲುವಾಗಿ ಹೀಗೆಲ್ಲಾ ಮಾಡುತ್ತೇವೆ. ಪುರಾಣ, ಪುಣ್ಯಕಥೆಗಳೂ ಅಷ್ಟೆ, ನಮ್ಮ ಸಾಧನೆಗೆ ಮೆಟ್ಟಲುಗಳಷ್ಟೆ. ಅಲ್ಲಿಂದ ಮುಂದಕ್ಕೆ ಹೋಗಬೇಕು. ಮೆಟ್ಟಲುಗಳಲ್ಲಿಯೇ ಕುಳಿತು ಬಿಟ್ಟರೆ ಮೇಲೇರುವುದಾದರೂ ಹೇಗೆ?
     ಭಗವದ್ಗೀತೆಯೂ ಒಂದು ಕಥೆಯೇ! ಮಹಾಭಾರತದ ಒಂದು ಭಾಗವಾದ ಇದು ಪಾಂಡವರು ಮತ್ತು ಕೌರವರ ನಡುವೆ ರಣರಂಗದಲ್ಲಿ ಏನು ನಡೆಯುತ್ತಿದೆಯೆಂಬುದನ್ನು ತನ್ನ ದಿವ್ಯದೃಷ್ಟಿಯಿಂದ ಸಂಜಯ ಧೃತರಾಷ್ಟ್ರನಿಗೆ ವಿವರಿಸುವ ಕಥೆ! ಅದರಲ್ಲಿ ಬರುವ ಅನೇಕ ಸಂಗತಿಗಳು, ವಿಚಾರಗಳು ಮೌಲ್ಯವನ್ನು ಪ್ರತಿಪಾದಿಸುವಂತಹವು, ಉತ್ತಮ, ಉನ್ನತ ಸ್ಥಿತಿಗೆ ಏರಲು ಪ್ರಚೋದಿಸುವಂತಹವು. ನಾವು ಆರಿಸಿಕೊಳ್ಳಬೇಕಾದುದು, ಅಳವಡಿಸಿಕೊಳ್ಳಬೇಕಾದುದು ಇವುಗಳನ್ನೇ ಹೊರತು, ಹಾಗೆ ನಡೆಯಿತೋ, ಇಲ್ಲವೋ, ಅದು ಸಾಧ್ಯವೇ, ಇತ್ಯಾದಿ ಒಣತರ್ಕದಲ್ಲಿ ತೊಡಗಿದರೆ ಪ್ರಯೋಜನ ಶೂನ್ಯ. ಋಗ್ವೇದದ ಈ ಮಂತ್ರ ನಾವು ಸಾಗಬಹುದಾದ ದಾರಿಯನ್ನು ತೋರಿಸುತ್ತಿದೆ: 'ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ| ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತ||' ಹೇ ಮಾನವರೇ, ಯಾವುದು ಪ್ರಾಚೀನವೋ ಅದನ್ನು ಗಮನಿಸಿರಿ. ಇತಿಹಾಸದಿಂದ ಪಾಠ ಕಲಿಯಿರಿ. ಯಾವುದು ನೂತನವೋ ಅದನ್ನೂ ಕೇಳಿರಿ. ಯಾವುದು ಶಾಸ್ತ್ರ ರೂಪದಲ್ಲಿ ಹೇಳಿದೆಯೋ ಅದನ್ನೂ ಕೇಳಿ. ನಿಮ್ಮ ಅಂತರಂಗ ನಿಮಗೆ ಏನು ಹೇಳುತ್ತದೋ ಅದನ್ನೂ ಕೇಳಿ. ಯಾರು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೋ ಅವರ ಹಿಂದೆಯೇ ನಿಮ್ಮ ಜೀವನ ರಥಗಳೂ ಸಾಗಲಿ ಎಂಬುದು ಇದರ ಅರ್ಥ. ವಿವೇಚಿಸಿ ಮುನ್ನಡೆಯುವ ಉದಾತ್ತತೆ ನಮ್ಮಲ್ಲಿ ಒಡಮೂಡಲಿ.
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 16, 2017

ಸ್ವರ್ಗವನ್ನೂ ನರಕವಾಗಿಸುವ ಋಣಾತ್ಮಕ ಮನೋಭಾವ (Negativity)


     ಆ ದೇವನ ಆಟವನ್ನು ಬಲ್ಲವರಾರು? ಅವನು ಮನುಷ್ಯನನ್ನು ಮನಸ್ಸು ಎಂಬ ವಿಚಿತ್ರ ಶಕ್ತಿಯ ಹಿಡಿತದಲ್ಲಿ ಸಿಕ್ಕಿಸಿಬಿಟ್ಟಿದ್ದಾನೆ. ಮನಸ್ಸಿನ ಒಡೆಯನಾಗಬೇಕಾದ ಮನುಷ್ಯ ಮನಸ್ಸಿನ ಆಳಾಗಿರುವುದೇ ಹತ್ತು ಹಲವು ಸಮಸ್ಯೆಗಳಿಗೆ ಮೂಲವಾಗಿದೆ. ಋಣಾತ್ಮಕ ಮನೋಭಾವ(ನೆಗೆಟಿವಿಟಿ) ಆ ಮನಸ್ಸಿನ ಆಟವೇ ಆಗಿದೆ. ಮನಸ್ಸಿನಲ್ಲಿ ಬೇರೂರಿ ಬೆಳೆಯುವ ಈ ಮನೋಭಾವ ಸ್ವರ್ಗವನ್ನೂ ನರಕವಾಗಿಸುತ್ತದೆ, ನರಕದ ಸ್ವರ್ಗವಾಗಿ ಮಾಡುತ್ತದೆ. ಈ ಮನೋಭಾವ ಮನುಷ್ಯನನ್ನು ಕುಬ್ಜನನ್ನಾಗಿಸಿ, ಅವನನ್ನು ಮಾತ್ರವಲ್ಲದೆ ಸಂಬಂಧಿಸಿದವರಿಗೂ ಹಾನಿ ಮಾಡುತ್ತದೆ. ವಸ್ತುಸ್ಥಿತಿಯನ್ನು ಒಪ್ಪದಿರುವುದು ಅಥವ ತಪ್ಪಾಗಿ ಭಾವಿಸುವುದು ಅಥವ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುವುದು ಮತ್ತು ತಪ್ಪು ಎಂದು ತಿಳಿದಿದ್ದರೂ ತಿದ್ದಿಕೊಳ್ಳದಿರುವುದು, ಇತ್ಯಾದಿ. ಋಣಾತ್ಮಕ ವಿಚಾರಧಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಂತೋಷದ ಹಾಲಿಗೆ ಹುಳಿ ಹಿಂಡುತ್ತದೆ, ಪ್ರಗತಿಗೆ ಅಡ್ಡಗಾಲಾಗುತ್ತದೆ, ಜೀವನ ಇಳಿಜಾರಿನಲ್ಲಿ ಸಾಗುತ್ತದೆ. ಋಣಾತ್ಮಕ ಮನೋಭಾವವನ್ನು ಹೋಗಲಾಡಿಸುವುದೆಂದರೆ ಭಯದ ವಿರುದ್ಧ ವಿಶ್ವಾಸ, ನಿರಾಶೆಯ ವಿರುದ್ಧ ಭರವಸೆ, ಸೋಲಿನ ವಿರುದ್ಧ ಗೆಲುವುಗಳ ಅಂತರ ತಿಳಿಯುವುದೇ ಆಗಿದೆ. ಋಣಾತ್ಮಕ ಮನೋಭಾವದ ಕೆಲವು ವಿಶಿಷ್ಟತೆಗಳನ್ನು ಗಮನಿಸೋಣ.
೧. ಕೀಳರಿಮೆ: ಸ್ವಂತವಾಗಿ ತಮ್ಮನ್ನು ತಾವು ಅಶಕ್ತರೆಂದು ಕರೆದುಕೊಳ್ಳುವುದು ವಿಶ್ವಾಸವನ್ನು ಕುಗ್ಗಿಸುತ್ತದೆ. ನನ್ನ ಕೈಯಲ್ಲಿ ಆಗಲ್ಲ, ನಾನು ಅಷ್ಟೊಂದು ತಿಳಿದವನಲ್ಲ, ನಾನು ಸೋತು ಹೋಗುತ್ತೇನೆ ಇತ್ಯಾದಿ ಮಾತುಗಳನ್ನು ಇನ್ನೊಬ್ಬರಿಗೆ ಹೇಳುವಂತೆ ಮಾಡುವುದೇ ಮನಸ್ಸಿನಲ್ಲಿ ಕುಳಿತಿರುವ ಋಣಾತ್ಮಕತೆ. ಯಾರಾದರೂ ನಿಮ್ಮ ಬಗ್ಗೆ, ನೀನೊಬ್ಬ ಮುಠ್ಠಾಳ, ಪ್ರಯೋಜನಕ್ಕೆ ಬಾರದವನು, ನಿನ್ನ ಕೈಯಲ್ಲಿ ಎಲ್ಲಿ ಆಗುತ್ತೆ, ಉಪಯೋಗಕ್ಕೆ ಬಾರದವನು ಎಂದರೆ ನಿಮಗೆ ಹೇಗೆ ಅನ್ನಿಸುತ್ತದೆ? ಇನ್ನೊಬ್ಬರು ಹೇಳಿದರೆ ಮುಜುಗರವಾಗುತ್ತದೆ, ನೋವಾಗುತ್ತದೆ. ಆದರೆ ಅದನ್ನು ನಮಗೆ ನಾವೇ ಹೇಳಿಕೊಂಡರೆ ಒಪ್ಪಿಕೊಳ್ಳುತ್ತೇವೆ, ಇದು ಸರಿಯೇ? ನಾನು ಅಶಕ್ತ, ನಾನು ಅಶಕ್ತ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಇದ್ದರೆ ಮನುಷ್ಯ ನಿಜಕ್ಕೂ ಅಶಕ್ತನೇ ಆಗುತ್ತಾನೆ ಎಂಬುದು ವಿವೇಕಾನಂದರು ಒತ್ತಿ ಹೇಳುತ್ತಿದ್ದ ಮಾತು. ಇದನ್ನು ಹೋಗಲಾಡಿಸುವುದು ಹೇಗೆ? ಋಣಾತ್ಮಕ ರೀತಿಯಲ್ಲಿ ಯೋಚಿಸುವುದನ್ನು ನಿಲ್ಲಿಸಿ ನಾನು ಮಾಡಬಲ್ಲೆ ಎಂಬ ವಿಶ್ವಾಸದ ಚಿಂತನೆಗಳು ಮೂಡುವಂತೆ ಮಾಡುವುದೇ ಇದಕ್ಕೆ ಪರಿಹಾರ. ಸತತ ಪ್ರಯತ್ನದಿಂದ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳೇ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾದರೆ ಕೀಳರಿಮೆಯಿಂದ ಹೊರಬರಲು ಸಾಧ್ಯವಿದೆ.
೨. ಋಣಾತ್ಮಕ ಭಾವನೆ: ಯಾವುದೇ ಸಂದರ್ಭ, ಪರಿಸ್ಥಿತಿಯನ್ನು ನಿರಾಶಾಭಾವದಿಂದ, ಹತಾಶೆಯಿಂದ ನೋಡುವುದರಿಂದ ಸಮಸ್ಯೆಯ ತಾಪ ಹೆಚ್ಚುವುದೇ ವಿನಃ ಕಡಿಮೆಯಾಗದು. ಬಿಲ್ಲು ಕಟ್ಟಲು ಹೋದರೆ ಅಲ್ಲಿ ದೊಡ್ಡ ಸರತಿಸಾಲು, ಈಗ ಎಲ್ಲದಕ್ಕೂ ಆಧಾರ್ ಕಾರ್ಡು ಕಡ್ಡಾಯ ಮಾಡಿರುವುದರಿಂದ ಆಧಾರ್ ನೋಂದಣೆಗೆ ಹೋದರೆ ಅಲ್ಲಿ ನೂಕು ನುಗ್ಗಲು, ಧಾರಾಕಾರ ಮಳೆ ಬರುತ್ತಿದೆ, ಎಲ್ಲೂ ಹೋಗಲಾಗುತ್ತಿಲ್ಲ ಇಂತಹ ಸಂಗತಿಗಳೆಲ್ಲಾ ಭೂತಾಕಾರದ ಸಮಸ್ಯೆಗಳೆನಿಸಿಬಿಡುತ್ತವೆ. ಹಾಗೆ ನೋಡಿದರೆ ಇಂತಹ ಪರಿಸ್ಥಿತಿಗಳಲ್ಲಿ ಋಣಾತ್ಮಕತೆಯೂ ಇಲ್ಲ, ಧನಾತ್ಮಕತೆಯೂ ಇಲ್ಲ. ಅವು ಹೇಗಿರಬಹುದೋ ಹಾಗೆಯೇ ಇವೆ. ಅದನ್ನು ನಾವು ನಿಭಾಯಿಸುವ ರೀತಿಯಲ್ಲಿ ಕೆಟ್ಟದ್ದೋ, ಒಳ್ಳೆಯದೋ ಇದೆ, ಸಂತೋಷವೋ, ಬೇಸರವೋ ಇದೆ. ನಿಧಾನವಾಗಿ ಪರಾಮರ್ಶಿಸಿದರೆ ಪರಿಹಾರ ಸಿಗುತ್ತದೆ. ಮಳೆಯ ಕಾರಣದಿಂದ ಇರುವಲ್ಲೇ ಇರುವಂತಾದರೆ ಒಳ್ಳೆಯ ಸಂಗೀತ ಹಾಕಿಕೊಂಡು ಕೇಳಬಹುದು, ಬಾಕಿ ಉಳಿದಿದ್ದ ಮತ್ತೇನೋ ಕೆಲಸಗಳನ್ನು ಮುಗಿಸುವಲ್ಲಿ ಗಮನ ಹರಿಸಬಹುದು.
೩. ಋಣಾತ್ಮಕ ಹೋಲಿಕೆ: ತಮ್ಮನ್ನು ತಾವೇ ಹಿಂದಿದ್ದೇವೆ ಎಂದು ಭಾವಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಸಂಗತಿಯೆಂದರೆ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಕುಗ್ಗುವುದು. ಇನ್ನೊಬ್ಬರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ, ಹೆಚ್ಚು ಸಾಧನೆ ಮಾಡಿದ್ದಾರೆ, ಇತ್ಯಾದಿ ಕಾರಣಗಳಿಂದ ಅವರೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು ಸುಲಕ್ಷಣವಲ್ಲ. ತಾನು ಏನನ್ನು ಹೊಂದಲು ಬಯಸಿರುವೆನೋ ಅದನ್ನು ಬೇರೊಬ್ಬರು ಹೊಂದಿದ್ದಾರೆ ಎಂಬ ಕಾರಣಕ್ಕೆ ಅಸೂಯೆಪಡುವುದು, ಕೀಳರಿಮೆಯಿಂದ ನರಳುವುದರಿಂದ ಋಣಾತ್ಮಕ ಭಾವ ಹೊಂದಿರುವುದು ಸ್ಪಷ್ಟವಾಗುತ್ತದೆ. ಇದರಿಂದಾಗಿ ಹೆಚ್ಚಿನ ಮನಸ್ಸಿನ ಒತ್ತಡ, ಕಾತರತೆ, ಖಿನ್ನತೆಗೆ ಒಳಗಾಗುವ ಅವಕಾಶಗಳಿವೆ. ಸತತ ಪರಿಶ್ರಮ, ಪಟ್ಟು ಬಿಡದ ಪ್ರಯತ್ನಕ್ಕೆ ಸಾಧಿಸಲಾಗದುದು ಏನೂ ಇಲ್ಲವೆಂಬ ಅರಿವಿನೊಂದಿಗೆ ಮುನ್ನಡೆದರೆ ಈ ಭಾವವನ್ನು ಹಿಮ್ಮೆಟ್ಟಿಸಬಹುದು.
೪. ಹಿಂದಿನ ಘಟನೆಗಳ ಛಾಯೆ: ಕೆಲವೊಮ್ಮೆ ಹಿಂದಿನ ಘಟನೆಗಳು, ಆಗು-ಹೋಗುಗಳು ಭೂತವಾಗಿ ಕಾಡುತ್ತಲೇ ಇದ್ದು ವರ್ತಮಾನಕ್ಕೆ ಅಡ್ಡಿಯಾಗಿ ನಿಲ್ಲುತ್ತಿರುತ್ತವೆ, ಸಾಧನೆಗೆ ಅಡ್ಡಿಯಾಗುತ್ತವೆ. ಇದು ನಿರಾಶೆಗೆ ಎಡೆ ಮಾಡಿ ಹೊಸ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡಿ ಸ್ಥೈರ್ಯ ಕುಗ್ಗಿಸುತ್ತದೆ. ಆಗಿಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲವೆಂಬುದನ್ನು ಅರಿತು ಧೃಢವಾಗಿ ನಿಲ್ಲಬೇಕು. ಏನು ಆಗಬೇಕಿದೆಯೋ ಆ ದಿಸೆಯಲ್ಲಿ ಮುನ್ನಡೆಯಬೇಕು. ಇಷ್ಟೇ ಇದಕ್ಕಿರುವ ಪರಿಹಾರ. ದಾರಿಹೋಕರ ತಲೆ ಒಡೆದು ಜೀವನ ಸಾಗಿಸುತ್ತಿದ್ದ ಡಕಾಯಿತನೊಬ್ಬನಿಗೆ ಸತ್ಯದ ಸಾಕ್ಷಾತ್ಕಾರವಾದಾಗ ಮುಂದೆ ಆತ ವಾಲ್ಮೀಕಿ ಎನಿಸಿ ಇಂದಿಗೂ ಪ್ರಸಿದ್ಧವಾಗಿರುವ ರಾಮಾಯಣ ರಚಿಸಿದ. ಅಬ್ರಹಾಂ ಲಿಂಕನ್ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗುವ ಮುನ್ನ ಎಂಟು ಚುನಾವಣೆಗಳಲ್ಲಿ ಸೋತಿದ್ದ, ವ್ಯಾಪಾರ ವಹಿವಾಟಿನಲ್ಲಿ ಎರಡು ಸಲ ವಿಫಲನಾಗಿ ಕುಸಿದುಹೋಗಿದ್ದ. ಹಳೆಯ ಅನುಭವಗಳಿಂದಾಗಿ ಆತ ನಿರಾಶೆಯಿಂದ ಕೈಚೆಲ್ಲಿದ್ದಿದ್ದರೆ ಇಂದು ಯಾರಿಗೂ ಆತನ ನೆನಪೂ ಇರುತ್ತಿರಲಿಲ್ಲ.
೫. ಬಲಿಷ್ಠರೆನಿಸಿಕೊಂಡವರು ಎದುರಾಳಿಗಳಾದಾಗ: ಕೆಲವು ಸಂದರ್ಭಗಳಲ್ಲಿ ಬಲಾಢ್ಯರೆನಿಸಿಕೊಂಡವರು ಸವಾಲೊಡ್ಡಿದಾಗ ತಮ್ಮ ತಪ್ಪಿಲ್ಲದಿದ್ದರೂ, ನ್ಯಾಯ ತಮ್ಮ ಕಡೆಗೆ ಇದ್ದರೂ ಹಿಂಜರಿಯುವ ಪ್ರವೃತ್ತಿ ಅಥವ ಸೋಲೊಪ್ಪಿಕೊಳ್ಳುವ ಮನೋಭಾವ ಉಂಟಾಗುತ್ತದೆ. ಬಲಾಢ್ಯರಿಗೆ ತಮಗಿರುವ ತೋಳ್ಬಲ, ಅಧಿಕಾರ, ಇತ್ಯಾದಿಯೇ ಆಸರೆಯಾಗಿದ್ದರೂ ಸತ್ಯ ತಮ್ಮ ಪಕ್ಷದಲ್ಲಿ ಇಲ್ಲದಿರುವ ಅಳುಕು ಇದ್ದೇ ಇರುತ್ತದೆ. ಎಂತಹ ಸಂದರ್ಭದಲ್ಲೂ ಎದೆಗುಂದದೆ ಸೂಕ್ತ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸುವ ಚಾಕಚಕ್ಯತೆ ಅಗತ್ಯವಿರುತ್ತದೆ. ಸರ್ವಾಧಿಕಾರವಿರುವ, ಮಿಲಿಟರಿ ಆಡಳಿತವಿರುವ ದೇಶಗಳಲ್ಲಿ ಕೆಲವೊಮ್ಮೆ ಸರ್ಕಾರವೇ ತನ್ನ ಪಾಶವೀಬಲವನ್ನು ಅಮಾಯಕರ ಮೇಲೆ ಪ್ರದರ್ಶಿಸುವುದಿದೆ. ಋಣಾತ್ಮಕ ಭಾವದವರು ಸೋತು ಸುಣ್ಣವಾದರೆ, ಮನೋಬಲವಿರುವವರು ತಮ್ಮಲ್ಲಿ ಶಕ್ತಿ ಇರುವವರೆಗೂ ಅದನ್ನು ತಾಳಿಕೊಳ್ಳುತ್ತಾರೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಮ್ಯಾನ್ಮಾರಿನ ಸೂಕಿ, ವೀರ ಸಾವರ್ಕರ್ ಮಹಾತ್ಮ ಗಾಂಧಿ ಮೊದಲಾದವರು ಇದಕ್ಕೆ ಉದಾಹರಣೆಗಳಾಗಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದ ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮೊದಲಾದ ಅಸಂಖ್ಯರು ನಗುನಗುತ್ತಾ ಪ್ರಾಣ ಕಳೆದುಕೊಂಡು ಅದ್ಭುತ ಮನೋಬಲ ತೋರಿಸಿದ್ದವರು. ೧೯೭೫-೭೭ರ ತುರ್ತು ಪರಿಸ್ಥಿತಿಯನ್ನು ಎದುರಿಸಿ ಕಷ್ಟ-ನಷ್ಟಗಳನ್ನು ಸಹಿಸಿದವರೂ ಮನೋಬಲಕ್ಕೆ ಉದಾಹರಣೆಗಳಾಗಿದ್ದಾರೆ.
೬. ದೂರುವ ಗುಣ: ಋಣಾತ್ಮಕತೆಯ ಮತ್ತೊಂದು ಅನಿಷ್ಟ ಲಕ್ಷಣವೆಂದರೆ ತಮ್ಮ ತಪ್ಪುಗಳಿಗೆ, ವಿಫಲತೆಗಳಿಗೆ ಬೇರೆಯವರನ್ನು ಹೊಣೆಗಾರರನ್ನಾಗಿಸಿ ದೂರುವುದು. ಆ ಬೇರೆಯವರು ತಂದೆ-ತಾಯಿಗಳಾಗಬಹುದು, ಗಂಡ/ಹೆಂಡತಿ ಆಗಬಹುದು, ರಕ್ತ ಸಂಬಂದಿಗಳಾಗಬಹುದು, ಮಿತ್ರರು, ಶತ್ರುಗಳು, ಹೀಗೆ ಯಾರು ಬೇಕಾದರೂ ಆಗಬಹುದು. ಭ್ರಷ್ಠ ರಾಜಕಾರಣಿಗಳು, ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ತಾವು ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ರಾಜಕೀಯ ದ್ವೇಷ ಎಂಬಿತ್ಯಾದಿ ಕಾರಣಗಳನ್ನು ಕೊಡುವುದನ್ನು ಗಮನಿಸಬಹುದು. ಆದರೆ ಈ ಕಾರಣಗಳು ತಾಳಿಕೆ ಬರುವುದು ಕಡಿಮೆ. ಅಂತಿಮವಾಗಿ ದೂರುವವರೇ ತಪ್ಪಿತಸ್ಥರೆಂದು ತಿಳಿದಾಗ ಅವರು ಕುಬ್ಜರಾಗುವರು, ಶಕ್ತಿ ಕಳೆದುಕೊಳ್ಳುವರು.
೭. ತಪ್ಪಿತಸ್ಥ ಮನೋಭಾವ: ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಕೆಲವು ಗಂಭೀರತರ ತಪ್ಪುಗಳಿಂದ, ದೋಷಯುತ ನಿರ್ಧಾರಗಳಿಂದ ಕೇವಲ ತಮಗಲ್ಲದೆ ಇತರರಿಗೂ ಕೆಡುಕಾಗಿರಬಹುದು. ಅದರಿಂದಾಗಿ ತಪ್ಪಿತಸ್ಥನೆಂಬ ಕೊರಗು, ಅಳುಕು ಉಳಿದು ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬಹುದು. ಇದರಿಂದ ಹೊರಬರಲು, ಹೌದು, ತಪ್ಪು ಮಾಡಿದ್ದೇನೆ. ಅದು ಆ ವಿಷಘಳಿಗೆಯಲ್ಲಿ ಮಾಡಿದ್ದು ಅದಕ್ಕಾಗಿ ಪಶ್ಚಾತ್ತಾಪವಿದೆ. ನಾನು ಕೆಟ್ಟವನಲ್ಲ. ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳಬೇಕು. ತಮ್ಮನ್ನು ತಾವೇ ಕ್ಷಮಿಸಿಕೊಳ್ಳದಿದ್ದರೆ ಇತರರು ಹೇಗೆ ಕ್ಷಮಿಸಿಯಾರು?
೮. ತಪ್ಪುಗಳನ್ನು ಮಾಡುವ ಭಯ: ತಪ್ಪುಗಳನ್ನು ಮಾಡುವ ಭಯ, ಪರಿಪೂರ್ಣವಾಗಿರಬೇಕೆಂಬ ಒತ್ತಡಗಳು ಮನಸ್ಸಿನ ಸಂತೋಷವನ್ನು ಕಿತ್ತುಕೊಳ್ಳುತ್ತವೆ. ನಮಗೆ ನಾವೇ ಉನ್ನತ ಮಾನದಂಡಗಳನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಾವಿಲ್ಲವೆಂದಾದಾಗ ಒಂದು ರೀತಿಯ ಕೀಳರಿಮೆ ಕಾಡದೇ ಇರದು. ಇದು ನಮ್ಮ ಶಕ್ತಿಯನ್ನು ಬಸಿದುಬಿಡುತ್ತದೆ. ಪರಿಪೂರ್ಣತೆಯ ಹಂಬಲ ಮತ್ತು ಅಸಂತೋಷಗಳಿಗೆ ಒಂದಕ್ಕೊಂದು ಸಂಬಂಧವಿದೆ. ಉನ್ನತ ಸ್ಥಿತಿಗೆ ಏರುವ ನಮ್ಮ ಪ್ರಯತ್ನಗಳ ಜೊತೆಗೆ ಇರುವ ಸ್ಥಿತಿಯಲ್ಲಿನ ಸಂತೋಷ ಕಡಿಮೆಯಾಗದಂತೆ ಎಚ್ಚರ ವಹಿಸಿದರೆ ಮನಸ್ಸಿಗೆ ಹಿತವಾದೀತು. ಎಷ್ಟಾದರೂ ನಾವು ಮಾನವರು, ಎಷ್ಟೇ ಪ್ರಯತ್ನಿಸಿದರೂ, ಎಲ್ಲಾಕಾಲಕ್ಕೂ ಪರಿಪೂರ್ಣತೆ ಸಿದ್ಧಿಸುವುದು ಸುಲಭವಲ್ಲ. ಇದನ್ನು ಒಪ್ಪಿ, ಇರುವ ಸ್ಥಿತಿಯಲ್ಲೇ ತೃಪ್ತಿ ಕಂಡರೆ ಅದೇ ದೊಡ್ಡದು.
-ಕ.ವೆಂ.ನಾಗರಾಜ್.

ಶನಿವಾರ, ಅಕ್ಟೋಬರ್ 14, 2017

ಘನತೆ ಮತ್ತು ಉಡುಪು

     ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ ಎಂಬ ಕನ್ನಡದ ಹಾಡು ಯಾರಿಗೆ ಗೊತ್ತಿಲ್ಲ? ನೀವು ವೇದದ ವಿಚಾರಗಳ ಬಗ್ಗೆ ಬರೆಯುತ್ತೀರಿ, ಮಾತನಾಡುತ್ತೀರಿ, ಆದರೆ ಪ್ಯಾಂಟು ಷರಟು ಹಾಕಿಕೊಳ್ಳುತ್ತೀರಲ್ಲಾ ಎಂದು ಹಿರಿಯರೊಬ್ಬರು ನನ್ನನ್ನು ವಿಚಾರಿಸಿದ್ದರು. ಇಂತಹವರು ಇಂತಹ ರೀತಿಯಲಿಯ್ಲೇ ದಿರಿಸು ಹಾಕಿಕೊಳ್ಳಬೇಕು ಎಂಬುದು ಜನರ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಸಾಹಿತಿಗಳ ಉಡುಗೆ, ರಾಜಕಾರಣಿಗಳ ಉಡುಗೆ, ಸಮಾಜಸೇವೆ ಮಾಡುವವರ ಉಡುಗೆ, ಸಾಂಪ್ರದಾಯಿಕರ ಉಡುಗೆ, ಹೀಗೆ ಅವರುಗಳ ವೃತ್ತಿ, ಪ್ರವೃತ್ತಿಗಳಿಗೆ ತಕ್ಕಂತೆ ವೇಷ ಇರಬೇಕು ಎಂಬುದು ಅವರ ಅಂತರಾಳದಲ್ಲಿ ಕುಳಿತುಬಿಟ್ಟಿದೆ. ಹೀಗಾಗಿ ನಾವು ಧರಿಸುವ ಬಟ್ಟೆಗೂ ಇಂದು ಸಾಮಾಜಿಕ ಪ್ರಾಧಾನ್ಯತೆಯಿದೆ. ವಸ್ತ್ರಸಂಹಿತೆ ಕುರಿತು ಲಿಖಿತ, ಅಲಿಖಿತ ನಿಯಮಗಳಿವೆಯೆಂದರೆ ಆಶ್ಚರ್ಯಪಡಬೇಕಿಲ್ಲ. ದಿನವೊಂದರಲ್ಲೇ ನಾವು ಹಲವು ರೀತಿಯ ಉಡುಪುಗಳನ್ನು ಧರಿಸುತ್ತೇವೆ. ಮನೆಯಲ್ಲಿರುವಾಗ ಒಂದು ತರಹ, ಹೊರಗೆ ಹೋಗುವಾಗ ಮತ್ತೊಂದು ತರಹ, ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗುವಾಗ, ಕಛೇರಿಯ ಕೆಲಸಕ್ಕೆ ಹೋಗುವಾಗ, ವಿಶೇಷ ಸಂದರ್ಭಗಳಲ್ಲಿ ಹೀಗೆ ಸಮಯ, ಸಂದರ್ಭಗಳಿಗೆ ತಕ್ಕಂತೆ ನಮ್ಮ ವೇಷ-ಭೂಷಣಗಳೂ ಬದಲಾಗುತ್ತಿರುತ್ತವೆ. ಸಮುದಾಯ, ಜಾತಿ, ಲಿಂಗ, ವರಮಾನ, ಉದ್ಯೋಗ, ರಾಜಕೀಯ, ಸಂಪ್ರದಾಯ, ಅನುಕೂಲತೆ, ವೈಶಿಷ್ಟ್ಯತೆ, ಅಂತಸ್ತು, ಪ್ರದೇಶ, ವಿದೇಶೀಯರ ಅಂಧಾನುಕರಣೆ, ಹವಾಮಾನ ಇತ್ಯಾದಿಗಳೂ ವಿವಿಧ ರೀತಿಯ ವಸ್ತ್ರ ಧರಿಸುವಿಕೆಗೆ ಕಾರಣಗಳಾಗಿವೆ.
     ಸುಮಾರು ೮೪ ಲಕ್ಷ ವಿವಿಧ ಜೀವಸಂಕುಲಗಳಲ್ಲಿ ಮಾನವ ಜೀವಿ ಮಾತ್ರ ಬಟ್ಟೆಗೆ ಮಹತ್ವ ನೀಡಿದ್ದಾನೆ. ಇದು ಅವನ ವಿವೇಚನಾಶಕ್ತಿಯ ಕಾರಣದಿಂದಿರಬಹುದು. ಬಟ್ಟೆ ಧರಿಸುವುದು ಕೇವಲ ತಮಗಾಗಿ ಅಲ್ಲದೆ ಇತರರ ಸಲುವಾಗಿಯೂ ಅಗಿರುವುದು ವಿಶೇಷ. ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಎಂಬ ಗಾದೆ ಬಂದಿರುವುದು ಈ ಕಾರಣದಿಂದಲೇ! ಬಟ್ಟೆಗಳ ವಿನ್ಯಾಸವೂ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ನಾಯಕರುಗಳು, ಕ್ರೀಡಾಪಟುಗಳು, ಸಿನೆಮಾ ತಾರೆಯರುಗಳ ಕೇಶ ಮತ್ತು ವಸ್ತ್ರವಿನ್ಯಾಸಗಳನ್ನು ಹಿಂಬಾಲಕರು ಮೆಚ್ಚುತ್ತಾರೆ, ಅನುಕರಿಸುತ್ತಾರೆ.
     ಧಾರ್ಮಿಕ ಸ್ಥಳಗಳಲ್ಲಿ ಅಲ್ಲಿನ ಪಾವಿತ್ರ್ಯ ಅಥವ ಮಹತ್ವಕ್ಕೆ ತಕ್ಕಂತೆ ಉಡುಪಿನ ಕೆಲವು ನಿರ್ಬಂಧಗಳು ಇರುವುದನ್ನು ಕಾಣುತ್ತೇವೆ. ವ್ಯಾಟಿಕನ್ನಿನ ಸಂತ ಬೆಸಿಲಿಯ ಚರ್ಚಿನ ಮುಂಭಾಗದಲ್ಲಿ ಚರ್ಚಿಗೆ ಭೇಟಿ ಕೊಡುವವರು ಧರಿಸಬೇಕಾದ ಕನಿಷ್ಠ ಉಡುಪುಗಳ ಕುರಿತು ಫಲಕವಿದೆ. ಕ್ವತಾರ್‌ನಲ್ಲಿ, ನೀವು ಈ ಪ್ರದೇಶದಲ್ಲಿದ್ದೀರಿ, ನೀವು ನಮ್ಮಲ್ಲಿ ಒಬ್ಬರು. ಆದ್ದರಿಂದ ಸಾರ್ವಜನಿಕ ಸಭ್ಯತೆಯನ್ನು ಗೌರವಿಸಿ ಎಂಬ ಫಲಕ ಗಮನ ಸೆಳೆಯುತ್ತದೆ. ಹಲವು ಮುಸ್ಲಿಮ್ ದೇಶಗಳಲ್ಲಿ ಅಲ್ಲಿನ ರೀತಿ-ನೀತಿಗಳಿಗೆ ತಕ್ಕಂತೆ ಉಡುಪು ಧರಿಸುವುದು ಕಡ್ಡಾಯವಾಗಿರುತ್ತದೆ. ಕೆಲವು ದೇವಸ್ಥಾನಗಳು, ಮಸೀದಿಗಳು ಮತ್ತು ಚರ್ಚುಗಳಲ್ಲೂ ಸಹ ಯಾವ ರೀತಿಯ ಉಡುಪು ಧರಿಸಿ ಪ್ರವೇಶಿಸಬೇಕೆಂಬ ಬಗ್ಗೆ ನಿರ್ಬಂಧಗಳಿರುವುದನ್ನು ಗಮನಿಸಬಹುದು. ಗಂಡಸರು ಮತ್ತು ಹೆಂಗಸರುಗಳು ಧರಿಸುವ ಉಡುಪುಗಳಲ್ಲೂ ಪ್ರತ್ಯೇಕತೆಗಳು ವಿಶೇಷವಾಗಿವೆ. ವಸ್ತ್ರವಿರಲಿ, ತಲೆಯ ಕೂದಲು ಬೆಳೆಸುವುದರಲ್ಲೂ ವಿಶೇಷತೆ ಗಮನಿಸಬಹುದು, ಹೆಂಗಸರಿಗೆ ಉದ್ದ ತಲೆಯಕೂದಲು ಮತ್ತು ಗಂಡಸರಿಗೆ ಗಿಡ್ಡ ತಲೆ ಕೂದಲುಗಳಿರುವುದು ಸಂಪ್ರದಾಯದಂತೆ ಆಗಿದೆ.
     ಸಮವಸ್ತ್ರಗಳೂ ಸಾಮಾನ್ಯವಾಗಿ ಬಳಕೆಯಲ್ಲಿವೆ. ಪೊಲೀಸ್, ಮಿಲಿಟರಿ, ಅಗ್ನಿಶಾಮಕ ದಳ, ವೈದ್ಯಕೀಯ ವೃತ್ತಿಯವರು, ವಕೀಲರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳವರು, ಕಾರ್ಖಾನೆಯ ಕೆಲಸಗಾರರು, ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಸಮವಸ್ತ್ರಗಳನ್ನು ಬಳಸುತ್ತಾರೆ. ಇದು ಅಗತ್ಯದ್ದೂ ಆಗಿದೆ. ಸಮವಸ್ತ್ರಗಳಿಂದಾಗಿ ಅವರುಗಳು ಗುರುತಿಸಲ್ಪಡುತ್ತಾರೆ. ಕೆಲವು ಪ್ರತಿಷ್ಠಿತ ಹೋಟೆಲುಗಳು, ಕ್ಲಬ್ಬುಗಳಲ್ಲಿ ಧರಿಸಬೇಕಾದ ವಸ್ತ್ರಗಳ ಕುರಿತೂ ನಿಬಂಧನೆಗಳನ್ನು ಮಾಡಿಕೊಂಡಿರುತ್ತಾರೆ. ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಕ್ಲಬ್ ಒಂದರ ಕಾರ್ಯಕ್ರಮಕ್ಕೆ ಪಂಚೆ, ಚಪ್ಪಲಿ ಧರಿಸಿ ಹೋಗಿದ್ದ ಪ್ರತಿಷ್ಠಿತರನ್ನು ಒಳಗೆ ಪ್ರವೇಶಿಸದಂತೆ ತಡೆ ಹಿಡಿದಿದ್ದು ದೊಡ್ಡ ಸುದ್ದಿಯಾಗಿತ್ತು.  
     ಧಾರ್ಮಿಕ, ಮತೀಯ, ಪಾರಂಪರಿಕ ಸಂಪ್ರದಾಯಗಳೂ ಉಡುಪಿನ ವಿಶಿಷ್ಠತೆಗೆ ಕಾಣಿಕೆಯಿತ್ತಿವೆ. ಮುಸ್ಲಿಮ್ ಪುರುಷರು ಧರಿಸುವ ಜುಬ್ಬಾ, ಪೈಜಾಮ, ತಲೆಗೆ ಹಾಕುವ ಟೋಪಿ ಇತ್ಯಾದಿಗಳು, ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಕಾ, ಸಿಕ್ಖರು ಧರಿಸುವ ಪೇಟ, ಜುಟ್ಟು ಕಟ್ಟುವ ರೀತಿ, ಹಾಕುವ ಉಡುಗೆಗಳಿಂದ ಅವರುಗಳನ್ನು ಸುಲಭವಾಗಿ ಗುರುತಿಸಬಹುದು. ಸ್ವಾತಂತ್ರ್ಯದ ಹೆಸರಿನಲ್ಲಿ ಬತ್ತಲೆಯಾಗಿರಬಯಸುವ ಅಥವ ಸ್ವೇಚ್ಛೆಯಾಗಿರಬಯಸುವ ಜನರಿಗಾಗಿ ಅಮೆರಿಕಾದಲ್ಲಿ ಕೆಲವು ಖಾಸಗಿ ಬೀಚುಗಳಲ್ಲಿ, ರೆಸಾರ್ಟುಗಳಲ್ಲಿ, ಕ್ಲಬ್ಬುಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ, ಮುಜಗರವಾಗದಂತೆ ಸಭ್ಯತೆಯ ಎಲ್ಲೆಯನ್ನು ಮೀರದಂತೆ ವಸ್ತ್ರ ಧರಿಸುವುದು ನಾಗರಿಕ ನಡವಳಿಕೆ. ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಚೋದನಕಾರಿ ಉಡುಪು ಧರಿಸುವುದು ಒಳ್ಳೆಯದಲ್ಲ. ವ್ಯಕ್ತಿಗೆ ಘನತೆ ತಂದುಕೊಡುವುದು ಆತ ಧರಿಸುವ ಉಡುಪು. ಸಾರ್ವಜನಿಕ ಕಛೇರಿಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಯೊಬ್ಬ ಟಿ ಷರ್ಟು, ಬರ್ಮುಡ ಧರಿಸಿ ಬಂದರೆ ಹೇಗಿದ್ದೀತು? ಮನೆಯಲ್ಲಿ, ಮಲಗುವ ಸಮಯದಲ್ಲಿ ಧರಿಸುವ ಉಡುಪುಗಳನ್ನು ಹೊರಗೆ ಹೋಗುವಾಗ ಹಾಕಿಕೊಳ್ಳಬಹುದೆ? ಉಡುಪಿನ ರೀತಿಯೂ ವ್ಯಕ್ತಿಯೊಬ್ಬ ಸರಳನೋ, ಶೋಕಿಲಾಲನೋ, ಶಿಸ್ತುಗಾರನೋ, ಸೋಮಾರಿಯೋ ಎಂಬುದನ್ನು ಬಿಂಬಿಸಬಲ್ಲದು. 
     ಸರಳ ಉಡುಪನ್ನು ಧರಿಸಿದವರನ್ನು ನಿಕೃಷ್ಟವಾಗಿ ಕಾಣುವ ಮನೋಭಾವದವರೂ ಇರುತ್ತಾರೆ. ಶ್ರೀಮತಿ ಸುಧಾ ನಾರಾಯಣಮೂರ್ತಿಯವರ ಸ್ವಂತದ ಅನುಭವವನ್ನು ಅವರ ಇತ್ತೀಚಿನ ಪುಸ್ತಕ ತ್ರೀ ಥೌಸಂಡ್ ಸ್ಟಿಚಸ್ನಲ್ಲಿ ಹಂಚಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ. ಅವರು ಲಂಡನ್ನಿನ ಹೀತ್ರೋ ವಿಮಾನನಿಲ್ದಾಣದಲ್ಲಿ ಸರತಿಯ ಸಾಲಿನಲ್ಲಿ ನಿಂತಿದ್ದಾಗ ಒಬ್ಬ ಠಾಕು ಠೀಕಾಗಿ ಉಡುಪು ಧರಿಸಿದ್ದ ಹೈಹೀಲ್ಡ್ ಮಹಿಳೆ ಅವರನ್ನು ಕುರಿತು, ಹೋಗಿ ಎಕಾನಮಿ ಶ್ರೇಣಿಯ ಸಾಲಿನಲ್ಲಿ ನಿಲ್ಲು. ಇದು ಬಿಸಿನೆಸ್ ಶ್ರೇಣಿಯ ಸಾಲು ಎಂದಳಂತೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆಕೆ, ಜಾನುವಾರು ಜಾತಿ ವ್ಯಕ್ತಿ(ಛಿಚಿಣಣಟe-ಛಿಟಚಿss ಠಿeಡಿsoಟಿ) ಎಂದು ಗೊಣಗಿದ್ದಳಂತೆ. ಸಲ್ವಾರ್ ಕಮೀಜ್ ಧರಿಸಿ ನಿಂತಿದ್ದ ದೊಡ್ಡ ಉದ್ಯಮಿ ನಾರಾಯಣಮೂರ್ತಿಯವರ ೬೬ ವರ್ಷಗಳ ಪತ್ನಿ ತಾಳ್ಮೆಗೆ ಹೆಸರಾದ ಸುಧಾಮೂರ್ತಿಯವರಿಗೆ ಕೋಪ ಬಂದರೂ ಸುಮ್ಮನಿದ್ದರು. ಅವರು ಧರಿಸಿದ್ದ ಉಡುಪಿನಿಂದಾಗಿ ಇಂತಹ ಉಡುಪು ಧರಿಸಿ ಬಿಸಿನೆಸ್ ಶ್ರೇಣಿಯ ಸಾಲಿನಲ್ಲಿ ನಿಲ್ಲುವುದಕ್ಕೆ ಲಾಯಕ್ಕಿಲ್ಲವೆಂದು ಆಕೆ ಭಾವಿಸಿದ್ದಕ್ಕಾಗಿ ಕೋಪಕ್ಕಿಂತ ಹೆಚ್ಚು ದುಃಖವೆನಿಸಿತು. ಅವರು ತಮ್ಮ ಬೋರ್ಡಿಂಗ್ ಪಾಸ್ ತೋರಿಸಿ ಮಹಿಳೆಯ ಅನುಮಾನ ಪರಿಹರಿಸಬಹುದಾಗಿದ್ದರೂ ಹಾಗೆ ಮಾಡಲಿಲ್ಲ. ಕಾಕತಾಳೀಯವೆಂಬಂತೆ ಅದೇ ಮಹಿಳೆ ಅಂದಿನ ದಿನವೇ ಇನ್ಫೋಸಿಸ್ ಸಂಸ್ಥೆ ಸರ್ಕಾರಿ ಶಾಲೆಯೊಂದರ ಜೀರ್ಣೋದ್ಧಾರಕ್ಕಾಗಿ ಹಣ ಪ್ರಾಯೋಜಿಸುವುದಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಿದ್ದಳು. ಅತಿ ಆಡಂಬರದ ದಿರಿಸು ಧರಿಸಿ ವಿಮಾನ ನಿಲ್ದಾಣದಲ್ಲಿದ್ದ ಆ ಮಹಿಳೆ ಸಭೆಯ ಉದ್ದೇಶಕ್ಕೆ ತಕ್ಕದೆಂಬಂತೆ ಖಾದಿ ಸೀರೆ ಧರಿಸಿ ಬಂದಿದ್ದಳು. ಸಭೆಯ ಅಧ್ಯಕ್ಷತೆಯನ್ನು ತಾನು ಯಾರನ್ನು ಜಾನುವಾರು ಜಾತಿ ಎಂದು ಹಂಗಿಸಿದ್ದಳೋ ಆ ಸುಧಾಮೂರ್ತಿಯವರೇ ವಹಿಸಿದ್ದುದನ್ನು ಕಂಡು ಅವಾಕ್ಕಾಗಿದ್ದಳು. ಅಂತಸ್ತು ಅನ್ನುವುದು ಹಣದಿಂದ ಬರುವುದಿಲ್ಲ, ಧರಿಸುವ ಆಡಂಬರದ ಉಡುಪಿನಿಂದ ಬರುವುದಿಲ್ಲ ಎಂಬ ಅರಿವು ಜನಕ್ಕೆ ಬರಬೇಕಾಗಿದೆ. ಹೆಚ್ಚು ಬೆಲೆಯ ಉಡುಪುಗಳ ಖರೀದಿಯ ಸಲುವಾಗಿಯೇ ಕೆಟ್ಟ ದಾರಿ ಹಿಡಿಯುವವರೂ ಇದ್ದಾರೆ ಎಂದು ಅವರು ತಮ್ಮ ಪುಸ್ತಕದಲ್ಲಿ ವಿಷಾದಿಸಿದ್ದಾರೆ. ಸಭ್ಯ ಉಡುಪು ಇರಬೇಕು, ಉಡುಪೇ ಎಲ್ಲವೂ ಅಲ್ಲ ಎಂಬ ಅರಿವೂ ಬರಬೇಕು!
ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||
-ಕ.ವೆಂ.ನಾಗರಾಜ್.

ಬುಧವಾರ, ಅಕ್ಟೋಬರ್ 11, 2017

ಸಜ್ಜನಶಕ್ತಿ ಜಾಗೃತವಾಗಲಿ!


     ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ ಕಟುಕರಿದ್ದಾರೆ, ನಯವಂಚಕರಿದ್ದಾರೆ, ಮುಖವಾಡಧಾರಿಗಳಿದ್ದಾರೆ, ಜಾತಿವಾದಿಗಳಿದ್ದಾರೆ, ವಿಚಾರವಾದಿಗಳಿದ್ದಾರೆ, ಕಾನೂನು-ಕಟ್ಟಳೆಗಳಿಗೆ ಬೆಲೆ ಕೊಡುವವರಿದ್ದಾರೆ, ಅದನ್ನು ಕಾಲಕಸವಾಗಿ ಕಾಣುವವರಿದ್ದಾರೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ, ಎಂಥೆಂತಹವರೋ ಇದ್ದಾರೆ.  ಅವರವರಿಗೆ ಅವರದೇ ಆದ ಮಾನದಂಡಗಳು, ಅವರವರ ಪಾಲಿಗೆ ಅವರದೇ ಸರಿ. ಎಲ್ಲರಿಗೂ ಸಮಾನವಾದ ಮಾನದಂಡ ಅನ್ನುವುದು ಪುಸ್ತಕದ ಬದನೆಕಾಯಿಯಷ್ಟೆ. 
     ಹಿಂದೆ ಪಿಪ್ಪಲಾದ ಎಂಬ ಋಷಿ ಇದ್ದನಂತೆ. ಆತನ ನಿಜವಾದ ಹೆಸರು ಏನಿತ್ತೋ ಗೊತ್ತಿಲ್ಲ. ಆದರೆ ಆತ ಮರದಿಂದ ಕಳಿತು ಕೆಳಗೆ ಬಿದ್ದಿದ್ದ ಹಣ್ಣು ಹಂಪಲುಗಳನ್ನು ಮಾತ್ರ ಆಯ್ದು ತಿನ್ನುತ್ತಿದ್ದರಿಂದ ಆತನಿಗೆ ಆ ಹೆಸರು ಬಂದಿತ್ತು. ಅದೇ ರೀತಿ ಅಕ್ಷಪಾದ (ಪಾದದಲ್ಲಿ ಕಣ್ಣುಳ್ಳವನು) ಎಂಬ ಹೆಸರಿನ ಋಷಿಗೂ, ಆತ ನಡೆಯುವಾಗ ಕಾಲಿನ ಕೆಳಗೆ ಯಾವ ಕ್ರಿಮಿ-ಕೀಟಗಳೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಡೆಯುತ್ತಿದ್ದರಿಂದ ಆ ಹೆಸರು ಬಂದಿತ್ತು. ಅಂತಹವರು ಇದ್ದ ಕಾಲದಲ್ಲೂ ಋಷಿಮುನಿಗಳು ಮಾಡುತ್ತಿದ್ದ ಯಜ್ಞ ಯಾಗಗಳ ಹೋಮಕುಂಡದಲ್ಲಿ ಮಾಂಸದ ತುಂಡುಗಳನ್ನು ಹಾಕಿ ಯಜ್ಞಗಳಿಗೆ ಭಂಗ ತರುತ್ತಿದ್ದವರೂ ಇದ್ದರು. ಅವರನ್ನು ರಾಕ್ಷಸರು ಅನ್ನುತ್ತಿದ್ದರು.  ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆ ಹೊಂದಿರುತ್ತಾರೋ, ದುರ್ವಿಚಾರಗಳನ್ನು ಹೊಂದಿರುತ್ತಾರೋ, ಯಾರು ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರು ರಾಕ್ಷಸರು, ಅಷ್ಟೆ. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸ ಎಂದು ಕರೆಯಲ್ಪಡುವ ರಾವಣ, ಕುಂಭಕರ್ಣ, ಶೂರ್ಪಣಖಿ ಇವರುಗಳ ತಂದೆ ವಿಶ್ರವಸು ಎಂಬ ಒಬ್ಬ ಮುನಿ, ವಿಪ್ರಕುಲಕ್ಕೆ ಸೇರಿದವನು. ಅವರುಗಳು ರಾಕ್ಷಸರೆನಿಸಲು ಪ್ರಮುಖ ಕಾರಣ ಅವರಲ್ಲಿದ್ದ ದುರ್ವಿಚಾರ, ದುರ್ಭಾವನೆ ಮತ್ತು ದುಷ್ಕಾರ್ಯಗಳು. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆ ಪ್ರಕಾರದ ಜೀವಿಯಲ್ಲ. ಹೀಗಿರುವಾಗ ಒಬ್ಬ ಮಾನವ ರಾಕ್ಷಸನಾಗುವುದು ಅಥವ ಆದರ್ಶ ಮಾನವನಾಗುವುದು ಆತನ ನಡವಳಿಕೆಯಿಂದ ಎಂಬ ಪ್ರಾಥಮಿಕ ಸಂಗತಿಯನ್ನು ಗಮನದಲ್ಲಿಡಬೇಕು. 
     ಇಂದಿನ ಸ್ಥಿತಿ-ಗತಿಗಳ ಕುರಿತು ನೋಡೋಣ. ಗೋವಿನ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಂಡವರಿದ್ದಾರೆ. ಅದು ನಮ್ಮ ಆಹಾರ ಅನ್ನುವವರೂ ಇದ್ದಾರೆ. ನಮ್ಮ ಸಂವಿಧಾನದಲ್ಲೂ ಗೋವಿನ ಬಗ್ಗೆ ಆದರ ಅಭಿಮಾನಗಳು ಲಿಖಿತವಾಗಿ ದಾಖಲಿತವಾಗಿದೆ. ಈಗ ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಬೆಂಬಲ ಮತ್ತು ಆಕ್ರೋಷಗಳೆರಡೂ ಅತಿರೇಕವಾಗಿ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿಪರೀತವೆನಿಸುವಷ್ಟು ಕೆಸರೆರಚಾಟಗಳು ನಡೆಯುತ್ತಿದೆ. ಬಹಿರಂಗವಾಗಿ ಗೋವನ್ನು ಕತ್ತರಿಸಿ ಹಸಿ ಹಸಿಯಾದ ಮಾಂಸವನ್ನು ಸಾರ್ವಜನಿಕವಾಗಿ ಭಕ್ಷಿಸುವ ಪ್ರತಿಭಟನೆಯೂ ಕೇರಳದಲ್ಲಿ ಯುವ ಕಾಂಗ್ರೆಸ್ಸಿಗರಿಂದ ಆಗಿದೆ. ಇದರಲ್ಲಿ ಗೋವಿನ ತಪ್ಪೇನಿದೆ? ಅದು ತನ್ನನ್ನು ಪೂಜೆ ಮಾಡಿ ಎಂದೂ ಹೇಳಿಲ್ಲ, ತನ್ನನ್ನು ಕಡಿದು ತಿನ್ನಿ ಎಂತಲೂ ಹೇಳಿಲ್ಲ. ಪಾಪ, ಅದಕ್ಕೆ ಅದು ಯಾವುದೂ ಗೊತ್ತೇ ಇಲ್ಲ. ಗೋವನ್ನು ಪೂಜ್ಯ ಭಾವನೆಯಿಂದ ಕಾಣುವವರನ್ನು ಕೆಣಕುವ ಏಕಮಾತ್ರ ಉದ್ದೇಶದ ಈ ಕೃತ್ಯ ರಾಕ್ಷಸೀಕೃತ್ಯ ಅಲ್ಲದೆ ಮತ್ತೇನು? ಪ್ರತಿಭಟನೆಗೂ ಯೋಗ್ಯ ಮಾರ್ಗಗಳಿವೆ, ಸಮಸ್ಯೆ ಇತ್ಯರ್ಥಕ್ಕೆ ಹಲವು ದಾರಿಗಳಿವೆ, ನ್ಯಾಯಾಲಯಗಳಿವೆ, ಶಾಸಕಾಂಗವಿದೆ. ಅವುಗಳಿಂದ ಇತ್ಯರ್ಥವಾಗದ ಸಂದರ್ಭಗಳಲ್ಲಿ ಅತಿರೇಕದ ನಡವಳಿಕೆಗಳು ಸಾಮಾನ್ಯವೆನಿಸಿದರೂ, ಈ ಪ್ರಸಂಗದಲ್ಲಿ ಅಂತಹ ರಕ್ಕಸ ನಡವಳಿಕೆಯ ತೋರ್ಪಡಿಕೆ ಅಗತ್ಯವಿರಲಿಲ್ಲ. 
     ಇಂದು ಸಮಾಜವನ್ನು, ದೇಶವನ್ನು ಜಾತಿಗಳ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ವಿವಿಧ ವಿಚಾರಗಳ ಹೆಸರಿನಲ್ಲಿ ಛಿದ್ರಗೊಳಿಸುವ ಕೆಲಸವನ್ನು ರಾಜಕಾರಣಿಗಳು, ಜಾತ್ಯಂಧರು ಮತ್ತು ಮತಾಂಧರುಗಳು ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಮಾನವೀಯತೆ ಅನ್ನುವುದೂ ಸಹ ದೇಶ, ಮತ, ಧರ್ಮ, ಜಾತಿ, ವಿಚಾರಗಳಿಗೆ ಥಳಕು ಹಾಕಿಕೊಂಡುಬಿಟ್ಟಿದೆ. ಮತಾಂಧ ಮುಸ್ಲಿಮ್ ಉಗ್ರ ಸಂಘಟನೆಗೆ ಸೇರಿದವರಿಗೆ ತಮ್ಮ ಮತದವರನ್ನು ಯಾರು ಟೀಕಿಸಿದರೂ ಸಹನೆಯಾಗುವುದಿಲ್ಲ. ಆದರೆ ಅವರು ಇತರ ಮತೀಯರನ್ನು ನಿರ್ದಯೆಯಿಂದ ಕತ್ತು ಸೀಳಿ ಕೊಲೆಗೈಯಬಲ್ಲರು. ಜನನಿಬಿಡ ಪ್ರದೇಶಗಳಲ್ಲಿ ಬಾಂಬು ಸಿಡಿಸಿ ನೂರಾರು ಜನರ ಹತ್ಯೆಯಾದರೂ ಅವರು ಅದರಿಂದ ಸಂಭ್ರಮಪಡುತ್ತಾರೆ. ತಮ್ಮವರು ಸತ್ತಾಗ ದುಃಖಿಸುವ ಅವರು ಇತರರು ಕೊಲೆಯಾದಾಗ ಸಂತೋಷಿಸುತ್ತಾರೆ. ಸತ್ತವರು ತಮ್ಮಂತೆಯೇ ಇರುವ ಮಾನವ ಜೀವಿಗಳು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಇದು ಮತ/ಧರ್ಮದ ಹೆಸರಿನಲ್ಲಿ ಮರೆಯಾಗಿರುವ ಮಾನವೀಯತೆ. ಕೇರಳದಲ್ಲಿ ಜಯಕೃಷ್ಣನ್ ಮಾಸ್ತರ್ ಎಂಬ ಶಿಕ್ಷಕರನ್ನು ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗಲೇ ಮಕ್ಕಳ ಎದುರಿನಲ್ಲೇ ಸಿ.ಪಿ.ಎಂ. ಕಾರ್ಯಕರ್ತರು ಕೊಚ್ಚಿ ಕೊಲೆ ಮಾಡಿದ್ದರು. ಅವರ ದೇಹದ ೪೮ ಕಡೆಗಳಲ್ಲಿ ಕೊಚ್ಚಲಾಗಿತ್ತು. ಇದಕ್ಕೆ ಕಾರಣ ವೈಚಾರಿಕ ಭಿನ್ನತೆ. ಅವರು ಆರೆಸ್ಸೆಸ್ಸಿನವರಾಗಿದ್ದರು ಎಂಬುದೊಂದೇ ಅವರ ಹತ್ಯೆಗೆ ಕಾರಣವಾಗಿತ್ತು. ಕೇರಳದಲ್ಲಿ ಇಂತಹ ವೈಚಾರಿಕ ವಿರೋಧಿಗಳ ಹತ್ಯೆ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಇತರೆಡೆಗಳಲ್ಲಿರುವ ಕಮ್ಯುನಿಸ್ಟರು ಮತ್ತು ಅವರ ಹಿತೈಷಿಗಳು ಖಂಡಿಸುವುದೇ ಇಲ್ಲ. ಆದರೆ ಹೈದರಾಬಾದಿನಲ್ಲಿ ಒಬ್ಬ ಕಮ್ಯುನಿಸ್ಟ್ ಹಿತೈಷಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದರ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆಯುತ್ತವೆ. ವೈಚಾರಿಕ ಭಿನ್ನತೆಯಿಂದ ಯಾರದಾದರೂ ಕೊಲೆಯಾದರೆ ಅದನ್ನು ಮಾನವೀಯ ಕಳಕಳಿ ಇರುವ ಯಾರಾದರೂ ಖಂಡಿಸಲೇಬೇಕು. ಎಡಪಂಥೀಯನಾಗಲೀ, ಬಲಪಂಥೀಯನಾಗಲೀ ದುಷ್ಕೃತ್ಯ ಯಾರೇ ಮಾಡಿದರೂ ಅದನ್ನು ಸಮಾನ ರೀತಿಯಲ್ಲಿ ನೋಡುವ ಪರಿಪಾಠ ಮರೆಯಾಗಿದೆ. ಇಲ್ಲಿ ಮಾನವತೆಯನ್ನು ವಿಚಾರವಾದ ನುಂಗಿಬಿಟ್ಟಿದೆ. ಸತ್ತವರು, ದೌರ್ಜನ್ಯಕ್ಕೊಳಗಾದವರ ಜಾತಿ, ಮತ, ರಾಜಕೀಯ ಪಕ್ಷ, ವೈಚಾರಿಕ ಒಲವು/ನಿಲುವುಗಳನ್ನು ಆಧರಿಸಿ ಅಂತಹ ದುರ್ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಇರುತ್ತದೆಯೆಂದರೆ ಅದು ಮಾನವೀಯತೆಯ ಒರತೆ ಬತ್ತುತ್ತಿರುವುದನ್ನು ತೋರಿಸುತ್ತದೆ.
     ಅಧಿಕಾರದ ಸಲುವಾಗಿ ಏನು ಮಾಡಲೂ ಹೇಸದ ರಾಜಕಾರಣಿಗಳು, ಮತಾಂಧರು, ಸ್ವಂತದ ಲಾಭಕ್ಕಾಗಿ ಸತ್ಯದ ಹತ್ಯೆ ಮಾಡಲು ಸಿದ್ಧರಾಗಿರುವ ವಿಚಾರವ್ಯಾಧಿಗಳು, ಹಣ ಮತ್ತು ಟಿ.ಆರ್.ಪಿ. ಸಲುವಾಗಿ ಋಣಾತ್ಮಕ ಸಂಗತಿಗಳಿಗೆ ನೀರೆರೆಯುತ್ತಿರುವ ಹಲವು ಮಾಧ್ಯಮಗಳವರು ಮತ್ತು ಇಂತಹವನ್ನು ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಸಹಿಸುವ ಸಜ್ಜನ ಸುಬ್ಬಣ್ಣರುಗಳು ಇಂದಿನ ಪರಿಸ್ಥಿತಿಗೆ ನೇರ ಕಾರಣರೆಂದರೆ ಅತಿಶಯೋಕ್ತಿಯಲ್ಲ. ನಮಗೆ ತೊಂದರೆಯಾದರೆ ಮಾತ್ರ ಗೊಣಗುಟ್ಟುವ, ನಮಗೇನೂ ತೊಂದರೆಯಿಲ್ಲವೆನಿಸಿದಾಗ ಮತ್ತು ಇತರರಿಗೆ ಮಾತ್ರ ತೊಂದರೆಯಾದಾಗ ಅದನ್ನು ಕಟ್ಟಿಕೊಂಡು ನಮಗೇನು ಎಂಬ ಭಾವ ತೋರುವವರ ಮನೋಭಾವ ಬದಲಾಗುವವರೆಗೆ ಇಂತಹ ಪರಿಸ್ಥಿತಿ ಇದ್ದೇ ಇರುತ್ತದೆ. ಕೆಟ್ಟವರು ಕೆಲವೇ ಜನರಿದ್ದರೂ ಅವರ ಉಪಟಳ, ಶಕ್ತಿ ಏಕೆ ಹೆಚ್ಚಾಗಿರುತ್ತದೆಯೆಂದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯವರು ನಮಗೇಕೆ ಅವರ ಉಸಾಬರಿ, ನಮಗೆ ಅವರಿಂದ ತೊಂದರೆಯಾಗದಿದ್ದರೆ ಸಾಕು ಎಂದು ಅಂದುಕೊಳ್ಳುವುದೇ ಆಗಿದೆ. ಸಜ್ಜನ ಶಕ್ತಿಯನ್ನು ಬಡಿದೆಬ್ಬಿಸಿ ಜಾಗೃತಗೊಳಿಸುವ ಕೆಲಸ ಈಗ ತುರ್ತಾಗಿ ಆಗಬೇಕಿದೆ.
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 9, 2017

ಅಪ್ಪ (Daddy)


     ಅಂತರ್ಜಾಲ ತಾಣಗಳಲ್ಲಿ ಇತ್ತೀಚೆಗೆ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ ನೆನಪುಗಳು ಉಮ್ಮಳಿಸಿ ಬರುವಂತೆ ಮಾಡುವಲ್ಲಿ ಗೀತೆಯ ಸಾಹಿತ್ಯ ಯಶಸ್ವಿಯಾಗಿದೆ. ಈ ಲೇಖನದ ವಿಷಯಕ್ಕೂ ಇದೇ ಪ್ರೇರಣೆ. ಭೋಗವಾದ, ಕೊಳ್ಳುಬಾಕತನ, ಸ್ವಾರ್ಥಪರತೆಯೇ ಆದ್ಯತೆಯಾಗಿ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರರಲ್ಲಿ ಬಾಂಧವ್ಯಗಳನ್ನು ನೆನಪಿಸುವ, ಬೆಸೆಯುವ ಇಂತಹ ಪ್ರಯತ್ನಗಳು ಅಭಿನಂದನೀಯ. ತಂದೆ-ತಾಯಿ-ಮಕ್ಕಳ ನಡುವಿನ ಸಂಬಂಧಗಳಿರಲಿ, ಗಂಡ-ಹೆಂಡಿರ ಸಂಬಂಧಗಳೂ ಅರ್ಥ, ಪಾವಿತ್ರ್ಯ ಕಳೆದುಕೊಳ್ಳುತ್ತಿರುವುದು ಸಮಾಜ ನೈತಿಕ ದಿವಾಳಿತನದತ್ತ ಜಾರುತ್ತಿದೆಯೇನೋ ಎಂದು ಭಾವಿಸುವಂತೆ ಮಾಡುತ್ತಿರುವ ದಿನಗಳಲ್ಲಿ ಇಂತಹ ಪ್ರಯತ್ನ ಕಾರ್ಮೋಡಗಳ ನಡುವಿನ ಮಿಂಚಿನಂತಿದೆ.
     ಅಪ್ಪ ಎನ್ನುವ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಕೇವಲ ಮಕ್ಕಳಿಗೆ ತಂದೆ ಎಂಬ ಅರ್ಥವಲ್ಲದೆ ಹಿರಿಯ, ಶ್ರೇಷ್ಠ, ಗುರು, ಸ್ವಾಮಿ, ದೇವರು ಇತ್ಯಾದಿ ಅರ್ಥಗಳಲ್ಲೂ ಈ ಪದ ಬಳಸಲ್ಪಡುತ್ತಿದೆ. ತಾಯಿಯನ್ನು ಭೂಮಿಗೆ ಹೋಲಿಕೆ ಮಾಡುವಂತೆ ತಂದೆಯನ್ನು ಆಕಾಶಕ್ಕೆ ಹೋಲಿಸುವ ಪರಿಪಾಠವೂ ಇದೆ. ಈ ಹೋಲಿಕೆಗಳು ಆದರ್ಶ ತಂದೆ-ತಾಯಿಗಳಿಗೆ ಅನ್ವಯವಾಗುತ್ತದೆ. ಸಕಲ ಜೀವಿಗಳಿಗೆ ಭೂಮಿ ಹೇಗೆ ಆಧಾರಪ್ರಾಯವಾಗಿದೆಯೋ ಹಾಗೆಯೇ ತಾಯಿ ತನ್ನ ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೂ ಅವರ ಪಾಲನೆ-ಪೋಷಣೆಗೆ ಹೆಚ್ಚಿನ ಗಮನ ನೀಡುತ್ತಾಳೆ. ಈ ಕಾರ್ಯಕ್ಕೆ ತಂದೆ ಆಧಾರಪ್ರಾಯನಾಗಿ, ಪೋಷಕನಾಗಿ ನಿಲ್ಲುತ್ತಾನೆ. ಅಮ್ಮನ ಮಹತ್ವ ಮಕ್ಕಳಿಗೆ ಹುಟ್ಟಿನ ಕ್ಷಣದಿಂದ ಅನುಭವಕ್ಕೆ ಬರುತ್ತದೆ. ಆದರೆ ಅಪ್ಪನ ಮಹತ್ವ ಮಕ್ಕಳಿಗೆ ತಿಳಿಯುವುದು ಅವರು ಸ್ವತಃ ಅಪ್ಪಂದಿರಾದ ನಂತರವೇ! ಆಕಾಶ ಹೇಗೆ ಭೂಮಿಯೂ ಸೇರಿದಂತೆ ಬ್ರಹ್ಮಾಂಡದ ಸಕಲ ಕಾಯಗಳಿಗೂ ಹೇಗೆ ಆಧಾರ ಮತ್ತು ಆಶ್ರಯಪ್ರಾಯವಾಗಿದೆಯೋ, ಹಾಗೆ ತಂದೆಯಾದವನು ಕುಟುಂಬಕ್ಕೆ ಆಶ್ರಯ ಮತ್ತು ಆಧಾರದಾತನಾಗಿರುತ್ತಾನೆ. ಆಕಾಶದ ಇರುವಿಕೆ ಹೇಗೆ ಗಮನಕ್ಕೆ ಬರುವುದಿಲ್ಲವೋ, ಹಾಗೆಯೇ ತಂದೆಯ ಮಹತ್ವ ಅಷ್ಟಾಗಿ ಮಕ್ಕಳ ಗಮನಕ್ಕೆ ಬರುವುದು ಕಡಿಮೆ. 
     ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರಗಳು ಪರಸ್ಪರ ಪೂರಕವಾಗಿರುವುದು ವಿಶೇಷವೇ ಸರಿ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ ತಂದೆ ಪ್ರಪಂಚವನ್ನು ಮಕ್ಕಳಿಗೆ ಪರಿಚಯಿಸುತ್ತಾನೆ. ತಾಯಿಯಿಂದ ಜೀವ, ತಂದೆಯಿಂದ ಜೀವನ! ಮಕ್ಕಳು ಕಷ್ಟಪಡಬಾರದೆಂದು ತಾಯಿ ಬಯಸಿದರೆ, ತಂದೆ ಕಷ್ಟಗಳನ್ನು ಎದುರಿಸಿ ಮುಂದೆಬರಲು ಹುರಿದುಂಬಿಸುತ್ತಾನೆ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ತಾಯಿ ಅವರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಅದಕ್ಕೆ ಪೋಷಕವಾಗಿ ಹಿನ್ನೆಲೆಯಲ್ಲಿ ತಂದೆಯ ಶ್ರಮವಿರುತ್ತದೆ. ತಾಯಿಯದು ಮಧುರಗಾನವಾದರೆ, ಗಾನಕ್ಕೆ ಕಳೆಕಟ್ಟುವ ಹಿಮ್ಮೇಳ ತಂದೆಯದು! ಈ ತಾಳ-ಮೇಳಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಮತ್ತು ಸಂಸಾರ ಹದಗೆಡುತ್ತದೆ. 
     ಎಲ್ಲಾ ವಿಷಯಗಳಿಗೂ ಅಪವಾದವಿರುತ್ತದೆಯಾದರೂ, ಹೆಚ್ಚಿನ ಕುಟುಂಬಗಳಲ್ಲಿ ಕುಟುಂಬದ ಸದಸ್ಯರುಗಳ ಭದ್ರತೆ, ಅಭಿವೃದ್ಧಿಗಳ ಬಗ್ಗೆ ತಂದೆಯ ಪಾತ್ರ ಪ್ರಧಾನವಾಗಿರುತ್ತದೆ. ಇರಲೊಂದು ಸೂರು, ಮಕ್ಕಳಿಗೆ ಶಿಕ್ಷಣ, ಅವರಗಳು ಸ್ವಂತ ಕಾಲಿನ ಮೇಲೆ ನಿಲ್ಲಿಸಲು ಶ್ರಮಪಡುವ ತಂದೆಯರು ಕುಟುಂಬದ ಮುಖ್ಯಸ್ಥರೆಂದೇ ಪರಿಗಣಿಸಲ್ಪಡುತ್ತಾರೆ. ಮಕ್ಕಳ ಮದುವೆಯಾಗಿ ಅವರುಗಳದೇ ಆದ ಸಂಸಾರ ಪ್ರಾರಂಭವಾದ ಮೇಲೆ ಅಪ್ಪಂದಿರ ಪಾತ್ರ ಅಷ್ಟೊಂದು ಗಣನೆಗೆ ಬರದೆ ಉಳಿದುಬಿಡುವುದನ್ನೂ ಕಾಣುತ್ತೇವೆ. ಎಲ್ಲರನ್ನೂ ದಡ ಸೇರಿಸುವಲ್ಲಿ ಸಫಲನಾಗುವ ಹೊತ್ತಿಗೆ ಹಣ್ಣಾಗಿರುವ ಅಪ್ಪನಿಗೆ ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಂಡಿರುತ್ತದೆ. ಹೊಳೆ ದಾಟಿದ ಮೇಲೆ ಅನ್ನುವ ಪರಿಸ್ಥಿತಿ ಬಾರದ ಅಪ್ಪಂದಿರೇ ಭಾಗ್ಯವಂತರು.
     ಅಪ್ಪನ ಸ್ಥಾನ ವಿವಾದಗಳಿಗೆ ತುತ್ತಾಗುವ ಉದಾಹರಣೆಗಳೂ ಸಿಗುತ್ತವೆ. ಅಕ್ರಮ ಸಂಬಂಧದಿಂದ ಜನಿಸುವ ಮಕ್ಕಳಿಗೆ ಅಪ್ಪನೆನಿಸಿಕೊಳ್ಳಲು ಹಿಂದೇಟು ಹಾಕುವವರು, ಅತ್ಯಾಚಾರ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಸಂಬಂಧಗಳಿಂದ ಜನಿಸುವ ಮಕ್ಕಳ ಅಪ್ಪಂದಿರು ಯಾರೆಂದು ತಿಳಿಯದ ಪ್ರಸಂಗಗಳು ಕಂಡುಬರುತ್ತಿರುತ್ತವೆ. ಪ್ರತಿಷ್ಠಿತರೆನಿಸಕೊಂಡವರೇ ಅಕ್ರಮ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಸೌಲಭ್ಯಗಳನ್ನು ಗುಟ್ಟಾಗಿ ಮಾಡಿಕೊಟ್ಟರೂ ಅವರನ್ನು ತಮ್ಮ ಮಕ್ಕಳೆಂದು ಒಪ್ಪಿಕೊಳ್ಳದ ಪ್ರಕರಣ, ಪಿತೃತ್ವ ಸಾಬೀತಿಗೆ ಮಕ್ಕಳೇ ನ್ಯಾಯಾಲಯದ ಮೆಟ್ಟಲೇರಿದ ಪ್ರಕರಣಗಳೂ ಇವೆ. ನೋವಿನ ಸಂದರ್ಭಗಳಲ್ಲಿ ಅಪ್ಪನೊಬ್ಬ ತನ್ನ ಮಕ್ಕಳಿಗೆ, ನಿಮಗಾಗಿ ಎಷ್ಟು ಕಷ್ಟಪಟ್ಟಿದ್ದೇನೆ, ಗೊತ್ತೆ? ಎಂಬರ್ಥದ ಮಾತುಗಳನ್ನು ಆಡಿದಾಗ ಪ್ರತಿಯಾಗಿ ಕೇಳಬಾರದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುವುದೂ ಇದೆ. ಇಂತಹವನ್ನು ಒತ್ತಟ್ಟಿಗಿಟ್ಟು ಸಾಮಾನ್ಯ ಅಪ್ಪಂದಿರ ಬಗ್ಗೆ ನೋಡೋಣ.
     ಒಬ್ಬ ಸಾಮಾನ್ಯ ಅಪ್ಪ ತನ್ನ ಕೈಯಲ್ಲಿ ಮಾಡಲಾಗದಿದ್ದ ಕೆಲಸಗಳನ್ನು ಮಕ್ಕಳು ಮಾಡಲೆಂದು ಬಯಸುತ್ತಾನೆ. ತಾನು ಆಸೆಪಟ್ಟು ಪಡೆಯಲಾಗದಿದ್ದುದನ್ನು ಮಕ್ಕಳಾದರೂ ಪಡೆಯಲೆಂದು ಆಶಿಸುತ್ತಾನೆ. ಅದರ ಸಲುವಾಗಿ ತಾನು ಮಾಡಬಹುದಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತಾನೆ, ಕಷ್ಟಪಡುತ್ತಾನೆ. ಅವರುಗಳ ಏಳಿಗೆಗಾಗಿ ಸ್ವಂತದ ಅವಶ್ಯಕತೆಗಳನ್ನು ತ್ಯಾಗ ಮಾಡುತ್ತಾನೆ. ಈ ಗುಣವೇ ಅಪ್ಪ-ಅಮ್ಮಂದಿರನ್ನು ಸಜ್ಜನರನ್ನಾಗಿ ರೂಪಿಸುವುದು, ಆದರ್ಶರನ್ನಾಗಿಸುವುದು. ನಮ್ಮ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಮರು ಹೇಳುತ್ತಿದ್ದ ಈ ಮಾತು ಪಾಲನೀಯವಾಗಿದೆ: ಒಂದು ದೇಶ ಭ್ರಷ್ಠಾಚಾರ ಮುಕ್ತವಾಗಬೇಕಾದರೆ, ಸುಂದರ ಮನಸ್ಸುಗಳಿಂದ ಕೂಡಿರಬೇಕೆಂದಾದರೆ ಮೂವರಿಂದ ಮಾತ್ರ ಸಾಧ್ಯ. ಆ ಮೂವರೆಂದರೆ ಅಪ್ಪ, ಅಮ್ಮ ಮತ್ತು ಶಿಕ್ಷಕ. ಈ ಮೂವರಲ್ಲಿ ಕುಟುಂಬದ ಮುಖ್ಯಸ್ಥನಾಗಿ ಅಪ್ಪನ ಜವಾಬ್ದಾರಿಯೇ ಹೆಚ್ಚಿನದಾಗಿದೆ. ಅವನ ನಡವಳಿಕೆ, ಮೇಲ್ಪಂಕ್ತಿ, ತೆಗೆದುಕೊಳ್ಳುವ ನಿರ್ಧಾರಗಳು ಗುರುತರವಾದ ಬದಲಾವಣೆ ತರಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಅವನು ನೋಡಿಕೊಳ್ಳಬೇಕಿದೆ. 
     ಮಕ್ಕಳ ದೃಷ್ಟಿಯಲ್ಲಿ ಅಪ್ಪ ಮಾದರಿಯಾಗಿರುತ್ತಾನೆ. ಮಕ್ಕಳ ಬೇಕು-ಬೇಡಗಳನ್ನು ಗಮನಿಸುವುದು, ಅವರ ರಕ್ಷಣೆ, ಭದ್ರತೆ ವಿಚಾರಗಳಿಗೆ ಗಮನ ಕೊಡುವುದು, ಇತ್ಯಾದಿಗಳಿಂದಾಗಿ ಅವರ ದೃಷ್ಟಿಯಲ್ಲಿ ಅವನೇ ಹೀರೋ ಆಗಿರುತ್ತಾನೆ. ಏನು ಆಗಿರದಿದ್ದರೂ, ತಾವು ಏನಾಗಬೇಕು ಎಂಬುದಕ್ಕೆ ಅಪ್ಪನೇ ಅವರಿಗೆ ಮಾರ್ಗದರ್ಶಿ, ಮಾನದಂಡ ಆಗಿರುತ್ತಾನೆ. ಅಪ್ಪ ಅನ್ನಿಸಿಕೊಳ್ಳುವುದೇ ಹೆಮ್ಮೆಯ ವಿಷಯ, ಅದರಲ್ಲೂ ಒಳ್ಳೆಯ ಅಪ್ಪ ಅನ್ನಿಸಿಕೊಂಡರೆ ಅದೊಂದು ಶ್ರೇಷ್ಠ ಸಾಧನೆಯೇ ಸರಿ. ದೇಶ ಸಧೃಢವಾಗಿರಬೇಕಾದರೆ ರಾಜ್ಯಗಳು ಸಧೃಢವಾಗಿರಬೇಕು. ರಾಜ್ಯಗಳು ಸಮೃದ್ಧಿಯಾಗಿರಬೇಕೆಂದರೆ ಜಿಲ್ಲೆಗಳು, ಜಿಲ್ಲೆಗಳಿಗೆ ತಾಲ್ಲೂಕುಗಳು, ತಾಲ್ಲೂಕುಗಳಿಗೆ ನಗರ, ಹಳ್ಳಿಗಳು! ನಗರ, ಹಳ್ಳಿಗಳು ಮಾದರಿ ಎನ್ನಿಸಿಕೊಳ್ಳಬೇಕಾದರೆ ಅಲ್ಲಿರುವ ಕುಟುಂಬಗಳು ನಾಗರಿಕ ಪ್ರಜ್ಞೆ ಹೊಂದಿರಬೇಕು. ಕುಟುಂಬಗಳು ಹೀಗಿರಬೇಕಾದರೆ ಆ ಕುಟುಂಬಗಳ ಮುಖ್ಯಸ್ಥರು, ಅಂದರೆ ಅಪ್ಪಂದಿರುಗಳು ಸುಯೋಗ್ಯರಾಗಿರಬೇಕು. ಒಟ್ಟಾರೆಯಾಗಿ, ದೇಶಕ್ಕೆ ಒಳ್ಳೆಯದಾಗಬೇಕೆಂದರೆ, ಕುಟುಂಬದ ಆಧಾರಗಳಾದ ಅಪ್ಪ-ಅಮ್ಮಂದಿರುಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
-ಕ.ವೆಂ.ನಾಗರಾಜ್.


ಶನಿವಾರ, ಅಕ್ಟೋಬರ್ 7, 2017

ಸಜ್ಜನಿಕೆ ಮತ್ತು ಕ್ಷಾತ್ರತೆ


     ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕೊಂಡ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಸುಮಾರು 1200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಲ್ಲೆಕೋರರ ಗುಂಪಿನಿಂದ ಸಂಭವಿಸಬಹುದಾಗಿದ್ದ 12 ಸೇನಾ ಸಿಬ್ಬಂದಿಯ ಜೀವಹಾನಿ ತಪ್ಪಿಸುವ ಸಲುವಾಗಿ ಸಾಂದರ್ಭಿಕವಾಗಿ ತೆಗೆದುಕೊಂಡ ಆ ನಿರ್ಧಾರ ಸರಿಯೆಂಬುದು ಬಹುತೇಕರ ಅಭಿಪ್ರಾಯವಾಗಿದೆ. ಮಾನವ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದವರೂ ಇದ್ದಾರೆ. ಸಾಮಾಜಿಕ ಅಂತರ್ಜಾಲ ತಾಣಗಳು, ಫೇಸ್ ಬುಕ್, ಟ್ಡಿಟರ್‌ಗಳಲ್ಲಿ ಸಹ ಚರ್ಚೆ ಗಂಭೀರ ಸ್ವರೂಪದಲ್ಲಿ ನಡೆದಿದೆ, ವೈಯಕ್ತಿಕ ಕೆಸರೆರಚಾಟಗಳೂ ನಡೆದಿವೆ. ಪಾಕಿಸ್ತಾನದ ನೇರ ಹಸ್ತಕ್ಷೇಪವೂ ಸಮಸ್ಯೆ ಬಿಗಡಾಯಿಸಲು ಕಾರಣವೆಂಬುದು ಸುಸ್ಪಷ್ಟ. ಸೇನೆಯ ಸ್ಥೈರ್ಯ ಕುಸಿಯುವಂತೆ ಮಾಡುವ ಕೆಲವು ಮಾಧ್ಯಮಗಳ ಜನರು ಹಾಗೂ ಒಂದು ಕಾಲದಲ್ಲಿ ಗಣ್ಯರೆನ್ನಿಸಿಕೊಂಡಿದ್ದವರ ಹೇಳಿಕೆಗಳು, ಪ್ರಯತ್ನಗಳು ಮಾತ್ರ ದೇಶದ ಹಿತದ ದೃಷ್ಟಿಯಿಂದ ಸಮರ್ಥನೀಯವೆನ್ನಿಸುವುದಿಲ್ಲ. ಟ್ವಿಟರಿನಲ್ಲಿ ಬರುವ ಹೇಳಿಕೆಗಳೂ ಒಂದಕ್ಕೊಂದು ಟಾಂಗ್ ಕೊಡುವ ರೀತಿಯಲ್ಲಿವೆ. ಉದಾಹರಿಸಬೇಕೆಂದರೆ, ಒಬ್ಬರು ಬರೆಯುತ್ತಾರೆ: ಕಣ್ಣು ಮುಚ್ಚಿಕೊಂಡು ಕಲ್ಪಿಸಿಕೊಳ್ಳಿ. ನಿಮ್ಮ ಕುಟುಂಬದ ಒಬ್ಬ ಸದಸ್ಯರನ್ನೇ ಸೈನ್ಯದ ಜೀಪಿನ ಮುಂದೆ ಕಟ್ಟಿ ಅಶಾಂತ ಸ್ಥಿತಿಯಿರುವ ಎಡೆಯಲ್ಲಿ ಕರೆದೊಯ್ಯುತ್ತಿದ್ದಾರೆಂದು ಕಲ್ಪಿಸಿಕೊಳ್ಳಿ. ಈಗ ಕಣ್ಣು ಬಿಡಿ. ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಇದಕ್ಕೆ ಪ್ರತಿಕ್ರಿಯೆಯೂ ಬರುತ್ತದೆ: ನಿಮ್ಮ ತಂದೆ ಜೀಪು ಚಾಲನೆ ಮಾಡುತ್ತಿದ್ದಾರೆ. ನಿಮ್ಮ ತಾಯಿ ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದಾರೆ. ಸಾವಿರಾರು ಜನರು ಗುಂಪು ಕೂಡಿ ಜೀಪಿನ ಮೇಲೆ ಕಲ್ಲುಗಳನ್ನು ತೂರುತ್ತಿದ್ದಾರೆ ಎಂಬ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಈಗ ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಹಿಂದಿನ ದಶಕಗಳಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜೊತೆಗೆ ದೇಶಹಿತಕ್ಕಿಂತ ರಾಜಕೀಯ ಲಾಭದ ಕಡೆಗೆ ಹೆಚ್ಚಿನ ಗಮನ ಕೊಟ್ಟದ್ದೇ ಸಮಸ್ಯೆ ಉಲ್ಬಣಗೊಂಡು, ನುಸುಳುಕೋರರದೇ ಪ್ರಾಬಲ್ಯವಾಗಲು ಕಾರಣವಾಗಿದೆಯೆಂದರೆ ಅದರಲ್ಲಿ ಸುಳ್ಳಿಲ್ಲ. ಇಂತಹುದೇ ಸಮಸ್ಯೆ ಪಶ್ಚಿಮ ಬಂಗಾಳದಲ್ಲೂ ಇದೆ. ಪಶ್ಚಿಮ ಬಂಗಾಳವನ್ನೂ ಬಾಂಗ್ಲಾದೇಶದೊಂದಿಗೆ ಸೇರಿಸಿಕೊಳ್ಳುವ ಹುನ್ನಾರವೂ ಬಾಂಗ್ಲಾದೇಶೀಯರ ಅಕ್ರಮ ನುಸುಳುವಿಕೆಯ ಹಿನ್ನೆಲೆಯಲ್ಲಿದೆ. ಈಗ ದಿಟ್ಟ ಮತ್ತು ಧೃಢ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದೆ ಕೇರಳದಲ್ಲೂ ಈ ಸ್ಥಿತಿ ಬರಲಿದೆ. ಕ್ಯಾನ್ಸರ್ ರೋಗದಂತೆ ದೇಶದ ವಿವಿದೆಡೆಗಳಲ್ಲಿ ಸಮಸ್ಯೆ ಹರಡಿದರೂ ಆಶ್ಚರ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಸಮಗ್ರತೆ ಮತ್ತು ಹಿತಕ್ಕೆ ಧಕ್ಕೆ ಬರುವಂತಹ ನಡವಳಿಕೆಗಳನ್ನು ಪ್ರದರ್ಶಿಸುವವರ ವಿರುದ್ಧವೂ ಕಠಿಣ ಕ್ರಮ ಅನುಸರಿಸುವುದು ಕಾಲದ ಅಗತ್ಯವಾಗಿದೆ.
     ಭಾರತ ಶಾಂತಿಪ್ರಿಯ ರಾಷ್ಟ್ರ. ತಾನಾಗಿಯೇ ಅದು ನೆರೆ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಹೋಗಿಲ್ಲ. ಆದರೆ ಕೇವಲ ರಕ್ಷಣಾತ್ಮಕ ನೀತಿ ಅನುಸರಿಸಿದರೆ ಅದು ಒಂದು ರೀತಿಯಲ್ಲಿ ಸೋತಂತೆಯೇ ಎಂಬುದು ಇದುವರೆಗಿನ ಅನುಭವ. ಇಂತಹ ನೀತಿಯ ಅನುಸರಣೆಯಿಂದ ಭಾರತ ಕಳೆದುಕೊಂಡಿದ್ದೇ ಹೆಚ್ಚು. ಹಿಂದಿನ ಸರ್ಕಾರಗಳು ಸೇನೆಯ ಕೈಗಳನ್ನು ಕಟ್ಟಿಹಾಕಿದ್ದವು. ಒಂದು ಗುಂಡು ಹಾರಿಸಲೂ, ಪ್ರತೀಕಾರ ತೆಗೆದುಕೊಳ್ಳಲೂ ರಾಜಕಾರಣಿಗಳು ಬಿಡುತ್ತಿರಲಿಲ್ಲ. ಸೇನೆಗೆ  ಪ್ರತೀಕಾರ ತೆಗೆದುಕೊಳ್ಳಲು ಮುಕ್ತ ಹಸ್ತ ನೀಡಿದ್ದಿದ್ದರೆ ಸಮಸ್ಯೆ ತಾರ್ಕಿಕ ಅಂತ್ಯ ಕಂಡು ಬಹಳ ವರ್ಷಗಳಾಗಿರುತ್ತಿದ್ದವು. ಆದರೆ, ರಾಜಕೀಯ ಲಾಭವನ್ನು ಮಾತ್ರ ಗಮನದಲ್ಲಿರಿಸುವ ರಾಜಕಾರಣಿಗಳು ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥವಾಗದ ಹಂತಕ್ಕೆ ತಂದು ನಿಲ್ಲಿಸಿವೆ. ಪಾಕಿಸ್ತಾನ ತಾನು ಆಕ್ರಮಿಸಿದ ಕಾಶ್ಮೀರದ ಪ್ರಮುಖ ಭಾಗವನ್ನು ಚೀನಾಕ್ಕೆ ಧಾರೆಯೆರೆದಿದೆ. ತನ್ನ ವಶದಲ್ಲಿರುವ ಭಾಗವನ್ನು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸಲು ಬಳಸುತ್ತಿದೆ. ಪಾಕ್ ಸೇನೆ ನುಸುಳುವಿಕೆಗೆ ಬೆಂಗಾವಲಾಗಿದೆ. ಇಂತಹ ಸ್ಥಿತಿಯಲ್ಲಿ ಕಾಶ್ಮೀರ ಕಣಿವೆಯಲ್ಲಿದ್ದ ಮೂಲ ನಿವಾಸಿಗಳನ್ನು ಹೊರದೂಡಿರುವ ನುಸುಳುಕೋರರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸರ್ಕಾರವೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಅತ್ಯಂತ ತಾಳ್ಮೆಯಿಂದ ದೇಶ ಕಾಯುವ ಕೆಲಸ ಮಾಡುತ್ತಿರುವ ಯೋಧರು ಜೀವವನ್ನು ಅಂಗೈಯಲ್ಲಿ ಹಿಡಿದು ಕರ್ತವ್ಯ ಮಾಡುತ್ತಿದ್ದಾರೆ. ಹೊರದೂಡಲ್ಪಟ್ಟಿರುವ ಕಾಶ್ಮೀರಿ ಪಂಡಿತರ ಪುನರ್ವಸತಿ ಆಗಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಸೇನೆಯ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಮತ್ತು ಮಾನವ ಹಕ್ಕು ಉಲ್ಲಂಘನೆ, ಇತ್ಯಾದಿ ಮುಖವಾಡದ ಹಿನ್ನೆಲೆಯಲ್ಲಿ ಉಗ್ರರ ಮತ್ತು ನೆರೆರಾಷ್ಟ್ರದ ಪರವಾಗಿ ಪರೋಕ್ಷ ಬೆಂಬಲ ನೀಡುವ ಅನವಶ್ಯಕ ಮತ್ತು ಅನಪೇಕ್ಷಿತ ಹೇಳಿಕೆಗಳನ್ನು ಕೊಡುವ ಕಪಟಿಗಳನ್ನು ನಿಯಂತ್ರಿಸಬೇಕಿದೆ. ಪಾಕಿಸ್ತಾನ ನಿರಂತರವಾಗಿ ತನ್ನ ಚಟುವಟಿಕೆಗಳನ್ನು ನೇರ ಮತ್ತು ಪರೋಕ್ಷವಾಗಿ ಭಾರತದ ವಿರುದ್ಧ ನಡೆಸುತ್ತಲೇ ಇರುವಾಗ, ಶಾಂತಿಮಂತ್ರದ ಪಾಠ ಜಪಿಸಲು ಹೇಳುವ ಇಂತಹ ಕಪಟ ಮಾನವತಾವಾದಿಗಳು ಅಪಾಯಕಾರಿಗಳು ಎನ್ನಲೇಬೇಕಾಗುತ್ತದೆ. ಭಾರತಕ್ಕೆ ಹಾನಿಯಾದರೆ ಅದಕ್ಕೂ ಟೀಕಿಸುವುದು, ತಿರುಗಿಬಿದ್ದರೆ ಮಾನವ ಹಕ್ಕು ಉಲ್ಲಂಘನೆ ಅನ್ನುವುದು ಅವರ ನೀತಿಯಾಗಿದೆ.
     ಶಾಂತಿ ನಮ್ಮ ಮಂತ್ರವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಒಮ್ಮುಖವಾದರೆ ಪ್ರಯೋಜನವಿಲ್ಲ. ನಾವಾಗಿ ಆಕ್ರಮಣ ಮಾಡಬೇಕಿಲ್ಲ. ಆದರೆ ಏಟಿಗೆ ಪ್ರತಿ ಏಟು ಎಂಬುದು ನೀತಿಯಾಗಲೇಬೇಕು. ಹಾಗಾದರೆ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದೀತು. ಸಮಸ್ಯೆ ಇತ್ಯರ್ಥಕ್ಕೆ ದಾರಿಗಳು ಕಂಡಾವು. ಭಯೋತ್ಪಾದಕರಿಗೆ ನಮ್ಮ ದೇಶದೊಳಗಿನವರೇ ಬೆಂಬಲ ಕೊಡುತ್ತಿರುವುದು ಈಗ ಮುಚ್ಚುಮರೆಯಾಗಿ ಉಳಿದಿಲ್ಲ. ಅಂತಹ ಸಹಕಾರ ಕೊಡುವ ಜನರನ್ನು ಗುರುತಿಸಿ ನಿಯಂತ್ರಿಸಲೇಬೇಕು. ರಾಜಕೀಯದ ಕಾರಣಕ್ಕಾಗಿ ಮತ್ತು ಮತಗಳಿಕೆಯ ಸಲುವಾಗಿ ಇದನ್ನು ನಿರ್ಲಕ್ಷಿಸಿದ್ದೇ ಆದರೆ ಗಂಡಾಂತರ ತಪ್ಪಿದ್ದಲ್ಲ. ದೇಶ ಹಲವಾರು ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವಾಗ, ದೇಶದ ಬೆಂಗಾವಲಿಗಿರುವ ಸೇನೆಯ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಬೇಕಾಗಿರುವುದು ನಾಗರಿಕರೆನ್ನಿಸಿಕೊಂಡವರೆಲ್ಲರ ಕರ್ತವ್ಯವಾಗಿದೆ. ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ನಾವು ಸಜ್ಜನ ಸುಬ್ಬಣ್ಣರಾದರೆ ಪ್ರಯೋಜನವಿಲ್ಲ. ನಮಗೆ ಹೋರಾಡಲು, ಪ್ರತಿಭಟಿಸಲು ಶಕ್ತಿಯಿಲ್ಲದಿರಬಹುದು. ಆದರೆ ಅನ್ಯಾಯದ ವಿರುದ್ಧ ಧ್ವನಿಯೆತ್ತುವವರಿಗೆ ಬೆಂಬಲವಾಗಿ ಇರಲಾದರೂ ಸಾಧ್ಯವಿದೆಯಲ್ಲವೇ? ಅಂತಹವರ ಪರವಾಗಿ ನಿಲ್ಲುವವರ ಸಂಖ್ಯೆ ಹೆಚ್ಚಾಗಿದ್ದರೂ ತೋರ್ಪಡಿಸಿಕೊಳ್ಳಲು ಸಜ್ಜನಿಕೆ, ಹಿಂಜರಿಕೆ, ಭಯ ಅವರನ್ನು ತಡೆಯುತ್ತಿರಬಹುದು. ಇದನ್ನು ಮೆಟ್ಟಿ ನಿಂತರೆ, ಈಗ ಕ್ಷೀಣವಾಗಿ ಕೇಳಿಬರುತ್ತಿರುವ ಧ್ವನಿ ಮುಂದೊಮ್ಮೆ ಶತ್ರುವನ್ನು ನಡುಗಿಸುವ ಸಿಂಹಘರ್ಜನೆಯಾಗುತ್ತದೆ. ಸಜ್ಜನ ಶಕ್ತಿ ಮತ್ತು ಕ್ಷಾತ್ರ ಶಕ್ತಿ ಒಟ್ಟುಗೂಡಿದರೆ ದುಷ್ಟಶಕ್ತಿಗಳ ಆಟ ನಡೆಯುವುದಿಲ್ಲ.
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 1, 2017

ವ್ಯಕ್ತಿಪೂಜೆಯ ಅಪಾಯ


     ನಮ್ಮ ಆದ್ಯತೆ ಜೀವನ ಮೌಲ್ಯ, ನೈತಿಕ ಸಿದ್ಧಾಂತ, ಉತ್ತಮ ವಿಚಾರ, ಸದ್ಗುಣಗಳಿಗೆ ಇರಬೇಕೇ ಹೊರತು ವ್ಯಕ್ತಿಗಳಿಗೆ ಇರಬಾರದು. ವ್ಯಕ್ತಿಯನ್ನು ಪೂಜಿಸುವುದು, ಗೌರವಿಸುವುದು ತಪ್ಪಲ್ಲ. ಸಂದರ್ಭ, ಸನ್ನಿವೇಶ ಮತ್ತು ವ್ಯಕ್ತಿಗಳನ್ನು ಅವಲಂಬಿಸಿ ಇದನ್ನು ಮಾಡಬೇಕಿದೆ. ಇದನ್ನು ಹೊರತುಪಡಿಸಿದರೆ, ವ್ಯಕ್ತಿಪೂಜೆ ಮಾಡುವುದು ವ್ಯಕ್ತಿಯ ಹಿತಕ್ಕಾಗಲೀ, ಸಮಾಜದ ಹಿತಕ್ಕಾಗಲೀ ಸೂಕ್ತವಲ್ಲ. ಯಾವುದೇ ವಸ್ತುನಿಷ್ಠ ಮತ್ತು ವಿಷಯನಿಷ್ಠ ಸಂಗತಿಗಳ ಕುರಿತು ನಮ್ಮ ದೃಷ್ಟಿಕೋನ ಅರ್ಥಪೂರ್ಣವೆನಿಸಬೇಕಾದರೆ, ನಮ್ಮ ವಿಶ್ಲೇಷಣೆ ವಸ್ತು ಮತ್ತು ವಿಷಯವನ್ನು ಅವಲಂಬಿಸಿದರೆ ಮಾತ್ರ ಸಾಧ್ಯ, ವ್ಯಕ್ತಿಯನ್ನು ಗಣನೆಗೆ ತೆಗೆದುಕೊಂಡರೆ ಆಗಲಾರದು. ಯಾವುದೇ ಪ್ರಶಂಸೆಯಿರಬಹುದು, ಸಮರ್ಥನೆಯಿರಬಹುದು, ಟೀಕೆಯಿರಬಹುದು, ವಿರೋಧವಿರಬಹುದು, ಅವು ವಿಚಾರಾರ್ಹ ವಿಷಯಗಳಿಗೆ ಸಂಬಂಧಿಸಿದಂತೆ ಇರಬೇಕೇ ಹೊರತು ವ್ಯಕ್ತಿ ಗಣನೆಗೆ ಬರಬಾರದು. ಅಭಿವ್ಯಕ್ತಿಯ ಸಾರ್ಥಕತೆ ವಸ್ತುನಿಷ್ಠತೆಯಲ್ಲಿದೆ, ವ್ಯಕ್ತಿನಿಷ್ಠತೆಯಲ್ಲಿಲ್ಲ. ಆದರೆ ನಮ್ಮಲ್ಲಿ ಬಹುತೇಕರು ಇದಕ್ಕೆ ವಿಪರೀತವಾಗಿ ವರ್ತಿಸುವುದು ಸಾಮಾನ್ಯವಾಗಿದೆ. ನಾವು ಚರ್ಚೆಯ ಭರಾಟೆಯಲ್ಲಿ ವಿಷಯವನ್ನೇ ಮರೆತು, ವ್ಯಕ್ತಿಯನ್ನೇ ವೈಭವೀಕರಿಸತೊಡಗುತ್ತೇವೆ ಅಥವ ವಿರೋಧಿಸುತ್ತೇವೆ. ಹೀಗಾದಾಗ ನಮ್ಮ ಭಾವನೆ, ಪೂರ್ವಾಗ್ರಹಗಳು ಪ್ರಧಾನವಾಗುತ್ತದೆಯೇ ಹೊರತು, ತರ್ಕ ಮತ್ತು ಸತ್ಯಗಳು ಮರೆಯಾಗಿಬಿಡುತ್ತವೆ. ಅಭಿವ್ಯಕ್ತಿ ಸಂತುಲನೆ ಕಳೆದುಕೊಂಡು ಅತಿರೇಕವಾಗುತ್ತಿದೆ. ಚರ್ಚೆಯ ಭರಾಟೆಯಲ್ಲಿ ಸಂಯಮ ಕಳೆದುಕೊಂಡು ವ್ಯಕ್ತಿಯ ಕುರಿತು ನಮ್ಮಲ್ಲಿನ ಭಾವನೆಗಳನ್ನು ಪರವಾಗಿಯೋ, ವಿರೋಧವಾಗಿಯೋ ಸಭ್ಯತೆಯ ಎಲ್ಲೆ ಮೀರಿ ಹೊರಹಾಕುವುದನ್ನೂ ಕಾಣುತ್ತೇವೆ. ತರ್ಕ ಗೌಣವಾದಾಗ, ಸಮರ್ಥನೆ ಅಥವ ವಿರೋಧಗಳು ಬಲವಂತವಾಗಿ ಒಬ್ಬರು ಇನ್ನೊಬ್ಬರನ್ನು ಒಪ್ಪಿಸುವ ಅಥವ ಹಳಿಯುವ ಹಂತಕ್ಕೆ ಹೋಗಿ ಅಸಹ್ಯಕರ ವಾತಾವರಣ ಸೃಷ್ಟಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇಂತಹ ಅನೇಕ ಚರ್ಚೆಗಳು ಕೊನೆಗೆ ಪೊಲೀಸು, ನ್ಯಾಯಾಲಯಗಳವರೆಗೂ ಹೋದದ್ದಿದೆ.
     ವೈಜ್ಞಾನಿಕ ಮತ್ತು ತರ್ಕಸಮ್ಮತ ವಿಚಾರಗಳಿಗೆ ಮಹತ್ವವಿರುವ ಈ ಕಾಲದಲ್ಲಿಯೂ ವ್ಯಕ್ತಿಪೂಜೆ ಪ್ರಭಾವಿ ಅಗಿರುವುದು ಕಾಣುವ ಸಂಗತಿ. ಗೌರವ, ಪ್ರತಿಷ್ಠೆಗೆ ಹಂಬಲಿಸುವ ವ್ಯಕ್ತಿ ತನ್ನ ಪ್ರಭಾವವನ್ನು ಸಮಾಜ ಗುರುತಿಸುವಂತೆ ಮಾಡಲು ಅನೇಕ ಕಸರತ್ತುಗಳನ್ನು ಸ್ವತಃ ಮತ್ತು ತನ್ನ ಸ್ವಯಂಘೋಷಿತ ಹಿಂಬಾಲಕರ ಸಹಾಯದಿಂದ ಮಾಡುವುದನ್ನು ಕಾಣುತ್ತಿದ್ದೇವೆ. ಇಂತಹ ಕಸರತ್ತುಗಳಿಂದ ಮಾಡಿಸಿಕೊಳ್ಳುವ ವ್ಯಕ್ತಿಪೂಜೆ ಸಮಾಜಹಿತಕ್ಕೆ ಎಂದೂ ಪೂರಕವಾಗದು. ತಾತ್ಕಾಲಿಕವಾಗಿ ಇಂತಹ ವ್ಯಕ್ತಿ ಗೌರವಿಸಲ್ಪಟ್ಟರೂ, ಮುಂದೊಮ್ಮೆ ಆತನ ದೌರ್ಬಲ್ಯಗಳು ಜಾಹೀರಾಗಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದವರು ಪಾತಾಳಕ್ಕೆ ಜಾರಿದ ನಿದರ್ಶನಗಳೂ ನಮ್ಮ ಮುಂದೆ ಸಿಗುತ್ತವೆ.
     ಕರ್ನಾಟಕದ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್, ಜನರು ತನ್ನನ್ನು ಪ್ರಶಂಸಿಸಿದಾಗ ಉಬ್ಬಿಹೋಗದೆ ಸಂಯಮ ಉಳಿಸಿಕೊಳ್ಳುತ್ತಿದ್ದರು. ಏಕೆಂದರೆ ಕ್ರಿಕೆಟ್ ಆಟದಲ್ಲಿ ಜೈಕಾರಗಳು ಎಷ್ಟು ಬೇಗ ಬರುತ್ತವೋ, ಟೀಕೆಗಳೂ ಅಷ್ಟೇ ಬೇಗ ಬರುತ್ತವೆಯೆಂದು ಅವರಿಗೆ ಗೊತ್ತಿತ್ತು. ಸಿನೆಮಾ ತಾರೆ ಖುಷ್ಬೂ, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್ ಅಥವ ಮಹೇಂದ್ರ ಸಿಂಗ್ ಧೋನಿ ಮುಂತಾದವರ ದೇವಸ್ಥಾನಗಳನ್ನು ಕಟ್ಟಿರುವ ಅವರ ಅತ್ಯುತ್ಸಾಹಿ ಅಭಿಮಾನಿಗಳು ಅವರ ಕ್ಷೇತ್ರಗಳಲ್ಲಿ ಅವರುಗಳ ಸಾಧನೆ ಸದಾ ಒಂದೇ ರೀತಿಯಲ್ಲಿ ಇರುವುದಿಲ್ಲವೆನ್ನುವುದನ್ನು ಮರೆತುಬಿಡುತ್ತಾರೆ. ಹೀಗಿರುವಾಗ ಗುಣ-ದೋಷಗಳಿಂದ ಕೂಡಿರುವ ಸಾಮಾನ್ಯ ಮಾನವನನ್ನು ಬದುಕಿರುವಾಗಲೇ ದೇವರ ರೂಪದಲ್ಲಿ ಪ್ರತಿಷ್ಠಿತಗೊಳಿಸುವುದು ಅನುಚಿತವಷ್ಟೇ ಅಲ್ಲ, ಹಾಸ್ಯಾಸ್ಪದ ಮತ್ತು ಅವರಿಗೆ ಮಾಡುವ ಅನ್ಯಾಯವೂ ಆಗುತ್ತದೆ. ಅನೇಕ ಶತಮಾನಗಳ ಕಾಲ ಸಾಮಂತವಾದಿ ವ್ಯವಸ್ಥೆಯಲ್ಲಿ ಇದ್ದ ಭಾರತದ ಬಹಪಾಲು ಜನರಿಗೆ ವ್ಯಕ್ತಿಪೂಜೆಯ ಅಭ್ಯಾಸ ಬಂದುಬಿಟ್ಟಿದೆ. ಇದರ ಛಾಯೆಯನ್ನು ಅನೇಕ ಸಂಸ್ಥೆಗಳು, ಪ್ರತಿಷ್ಠಾನಗಳು, ಪೀಠಗಳಲ್ಲಿ ಈಗಲೂ ಕಾಣಬಹುದು. ಯಾವ ವ್ಯಕ್ತಿ ಈ ಪೀಠ, ಇತ್ಯಾದಿಗಳ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೋ ಆ ವ್ಯಕ್ತಿ ಪೂಜಾರ್ಹನೆನಿಸಿಬಿಡುತ್ತಾರೆ. ಆ ಸ್ಥಾನದಲ್ಲಿ ಕುಳಿತವರು ವಿವೇಕಶೀಲ, ಪರಿಪಕ್ವರಾಗಿದ್ದರೆ ಅವರಿಗೆ ತಮಗೆ ಸಲ್ಲುತ್ತಿರುವ ಗೌರವ ಕುಳಿತ ಪೀಠದಿಂದ ಬಂದದ್ದೆಂಬ ಅರಿವಿರುತ್ತದೆ. ಅವರು ಆ ಗೌರವದಿಂದ ಭ್ರಮಿತರಾಗುವುದಿಲ್ಲ ಮತ್ತು ತಮ್ಮ ಅನುಯಾಯಿಗಳನ್ನೂ ಮಿತಿ ಮೀರಿ ಗೌರವಿಸಲು ಅವಕಾಶ ಕೊಡುವುದಿಲ್ಲ. ಇಂತಹ ಅರಿವಿಲ್ಲದಿದ್ದವರು ತಮ್ಮ ಬಗ್ಗೆಯೇ ತಾವು ಬಹಳ ಎತ್ತರದಲ್ಲಿದ್ದೇನೆಂದು ಭ್ರಮಿಸಿ ವರ್ತಿಸುತ್ತಾರೆ ಮತ್ತು ಭವಿಷ್ಯದಲ್ಲಿ ಇದರ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
     ಭಾರತದಲ್ಲಿ ವ್ಯಕ್ತಿಪೂಜೆಯ ಅತಿ ದೊಡ್ಡ ಕ್ಷೇತ್ರವೆಂದರೆ ರಾಜಕೀಯ ಕ್ಷೇತ್ರವಾಗಿದೆ. ಅಧಿಕಾರದ ಉನ್ನತ ಗದ್ದುಗೆಯಲ್ಲಿ ಕುಳಿತ ವ್ಯಕ್ತಿಗಳಿಗೆ ಸ್ಥಾನದ ಮಹಿಮೆಯಿಂದ ಅಸೀಮಿತ ಬಲ ಬರುತ್ತದೆ. ಆ ಬಲ ಅವರ ಅನುಯಾಯಿಗಳು ಮತ್ತು ಜನರು ಅವರನ್ನು ಉನ್ನತ ಗೌರವಕ್ಕೆ ಪಾತ್ರರಾಗುವಂತೆ ಮಾಡುತ್ತದೆ. ಸಾಮಾನ್ಯ ಜನರಿರಲಿ, ಚುನಾಯಿತ ಶಾಸಕರುಗಳೇ ಸರತಿಯ ಸಾಲಿನಲ್ಲಿ ನಿಂತು ಒಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದವರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದುದನ್ನು ಕಂಡಿದ್ದೇವೆ. ಅವರ ನಂತರದಲ್ಲಿ, ಇನ್ನೇನು ಮುಖ್ಯಮಂತ್ರಿ ಆಗೇಬಿಟ್ಟರು ಎಂದು ಭಾವಿಸಲಾಗಿದ್ದ ವ್ಯಕ್ತಿಗೂ (ಅವರು ಈಗ ಜೈಲಿನಲ್ಲಿದ್ದಾರೆ) ಸಹ ಇದೇ ರೀತಿಯ ಗೌರವ ಸಿಕ್ಕಿತ್ತು. ಯಾವಾಗ ಅವರು ಆ ಸ್ಥಾನವನ್ನು ಏರಲಾರರು ಎಂದು ಸ್ಪಷ್ಟವಾಯಿತೋ ಆಗ ಅವರು ನಗಣ್ಯರಾಗಿಬಿಟ್ಟರು. ನಾಯಕರು ವಿವೇಕವಿದ್ದವರಾದರೆ ಅನುಯಾಯಿಗಳು ಅಂತಹ ಅತಿರೇಕಕ್ಕೆ ಹೋಗದಂತೆ ತಡೆಯುತ್ತಾರೆ. ಉನ್ನತ ಸ್ಥಾನದಲ್ಲಿರುವ ನಾಯಕರಿಗೆ ಗೌರವ ಅನೇಕ ಕಾರಣಗಳಿಂದ ಸಿಗುತ್ತದೆ. ಸ್ವಲಾಭದ ದೃಷ್ಟಿ, ಪರಿಸ್ಥಿತಿಯ ಅನಿವಾರ್ಯತೆ, ತೊಂದರೆ ಕೊಡದಿರಲಿ ಎಂಬ ಉದ್ದೇಶ ಇತ್ಯಾದಿಗಳೂ ಅವರಿಗೆ ಇತರರು ಗೌರವಿಸುವಂತೆ ಮಾಡುತ್ತದೆ. ಅಧಿಕಾರ ಯಾರಿಗೆ ಸಿಗುತ್ತದೋ ಅವರು ಪೂಜಾರ್ಹರಾಗಿ ಬಿಡುತ್ತಾರೆ ಮತ್ತು ಭಕ್ತರೂ ತಾನೇತಾನಾಗಿ ಸಿಕ್ಕಿಬಿಡುತ್ತಾರೆ. ದಿನದಿಂದ ದಿನಕ್ಕೆ ಅದು ಏರಿಕೆಯಾಗುತ್ತಾ ಹೋಗುತ್ತದೆ. ಪ್ರಚಾರದ ಸಾಧನಗಳು, ಅಧಿಕಾರದ ಪ್ರತ್ಯಕ್ಷ ಅಥವ ಪರೋಕ್ಷ ಹಸ್ತಕ್ಷೇಪ ಸಾಧ್ಯವಿರುವ ಎಲ್ಲೆಡೆಗಳಲ್ಲಿ ನಾಯಕರ ಅನುಯಾಯಿಗಳು ತುಂಬಿಕೊಳ್ಳುತ್ತಾರೆ. ಈಗ ಮಾಧ್ಯಮಗಳು, ಪತ್ರಕರ್ತರುಗಳಲ್ಲೂ ನಿಷ್ಪಕ್ಷತೆಯನ್ನು ನಿರೀಕ್ಷಿಸಲಾಗದ ಸ್ಥಿತಿಯಿದೆ. ಅವರುಗಳಲ್ಲೂ ಬಹುತೇಕರು ಒಬ್ಬರಲ್ಲಾ ಒಬ್ಬರು ನೇತಾರರ ಭಕ್ತರೇ ಆಗಿರುತ್ತಾರೆ. ಒಬ್ಬನೇ ನೇತಾರ ಅನುಯಾಯಿಗಳಿಗೆ ದೇವರು, ಆಪದ್ಭಾಂಧವನಂತೆ ತೋರಿದರೆ ವಿರೋಧಿಗಳಿಗೆ ಘನಘೋರ ಶತ್ರುವಾಗಿ ಕಂಡುಬರುತ್ತಾನೆ. ನೇತಾರನ ವಿಚಾರಕ್ಕಿಂತ ಅವನ ವ್ಯಕ್ತಿತ್ವ ಮಹತ್ವ ಪಡೆದಾಗ ಆಗುವ ಅಪಾಯವಿದಾಗಿದೆ.
     ವ್ಯಕ್ತಿಪೂಜೆ ಮಾಡುವ ಅಂಧ ಅನುಯಾಯಿಗಳಿಗೆ ದ್ವಂದ್ವವಿರುವುದಿಲ್ಲ. ಆದರೆ ವಿಚಾರಶೀಲರಿಗೆ ಕೆಲವೊಮ್ಮೆ ದ್ವಂದ್ವ ಉತ್ಪನ್ನವಾಗುತ್ತದೆ. ತಮ್ಮ ಅಂತರಂಗಕ್ಕೆ ಒಪ್ಪದ ಕೆಲವು ಸಂಗತಿಗಳನ್ನೂ ಅವರು ಸಮರ್ಥಿಸಿಕೊಳ್ಳಬೇಕಾಗಿ ಬರಬಹುದು. ಜಾತಿ ಆಧಾರಿತ ಮೀಸಲಾತಿ ರಾಷ್ಟ್ರಹಿತಕ್ಕೆ ಒಳಿತಲ್ಲವೆಂದು ಭಾವಿಸುವವರೂ ಸಹ ಅದನ್ನು ತಮ್ಮ ನೇತಾರರ ಸಲುವಾಗಿ ನ್ಯಾಯಸಮ್ಮತವೆಂದು ಸಮರ್ಥಿಸಿಕೊಳ್ಳಬೇಕಾಗಿ ಬರುತ್ತದೆ. ರಾಷ್ಟ್ರಮಟ್ಟದ ನಾಯಕರು, ಅವರು ಯಾವುದೇ ಪಕ್ಷದವರಿರಬಹುದು, ಕೈಗೊಳ್ಳುವ ನಿರ್ಧಾರ ತಮ್ಮ ರಾಜ್ಯದ ಹಿತಕ್ಕೆ ವಿರುದ್ಧವಾದರೂ ರಾಜ್ಯದ ಅನುಯಾಯಿಗಳು ಸಮರ್ಥಿಸಿಕೊಳ್ಳುವ ಅನಿವಾರ್ಯತೆಯನ್ನೂ ಗಮನಿಸಬಹುದು. ಬೀರಬಲ್ ಅಕ್ಬರನಿಗೆ ಒಮ್ಮೆ ಹೀಗೆ ಹೇಳಿದ್ದನಂತೆ: ಹುಜೂರ್, ನಿಮಗೆ ಬದನೆಕಾಯಿ ಇಷ್ಟವಾಗಿದ್ದರೆ ನನಗೂ ಇಷ್ಟ. ನಿಮಗೆ ಇಷ್ಟವಿಲ್ಲದಿದ್ದರೆ ನನಗೂ ಇಷ್ಟವಿಲ್ಲ. ಏಕೆಂದರೆ ನಾನು ನಿಮ್ಮ ನೌಕರ, ಬದನೆಕಾಯಿಗೆ ಅಲ್ಲ. ಇಂತಹ ಮನೋಭಾವ ಬೆಳೆಸಿಕೊಂಡರೆ ವಿವೇಚನೆ ಮಾಡುವ ಶಕ್ತಿ ನಷ್ಟವಾಗಿ, ಸರಿ-ತಪ್ಪುಗಳ ತುಲನೆ ಅಸಾಧ್ಯವಾಗುತ್ತದೆ. ನಿರ್ಮಲ ಮನಸ್ಸೂ ಕೊಳಕಾಗುತ್ತದೆ. ರಾಜಕೀಯ ಪಕ್ಷಗಳ ಏಕಮಾತ್ರ ಉದ್ದೇಶ ಅಧಿಕಾರಗ್ರಹಣ ಎಂಬುದನ್ನು ನೆನಪಿನಲ್ಲಿಡಬೇಕಾಗಿದೆ. ಅವುಗಳಲ್ಲಿರುವ ಭಿನ್ನತೆ ತೋರಿಕೆಯದು ಮಾತ್ರ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಬಹುತೇಕ ರಾಜಕೀಯ ನಾಯಕರ ಅಂತರಂಗದ ಉದ್ದೇಶ ಅಧಿಕಾರಪ್ರಾಪ್ತಿಯೇ ಆಗಿದೆ.
     ವ್ಯಕ್ತಿ ಎಷ್ಟೇ ಆದರೂ ವ್ಯಕ್ತಿಯೇ ಆಗಿದ್ದು ಗುಣ-ಅವಗುಣಗಳಿಂದ ಕೂಡಿರುತ್ತಾನೆ. ಅವನು ಪ್ರತಿಪಾದಿಸುವ ವಿಚಾರ ಎಷ್ಟೇ ಉನ್ನತವಾಗಿದ್ದರೂ, ಆ ವಿಚಾರಗಳು ಪೂಜಾರ್ಹವೇ ಹೊರತು ವ್ಯಕ್ತಿಯಲ್ಲ. ವ್ಯಕ್ತಿ ಪತನಗೊಳ್ಳುವ ಸಾಧ್ಯತೆಯಿರುತ್ತದೆ. ಅಲ್ಲದೆ ಅವನು ಶಾಶ್ವತನೂ ಅಲ್ಲ. ಪೂಜೆ ಮಾಡುವುದೇ ಆದಲ್ಲಿ ಪರಮಾತ್ಮನ ಪೂಜೆ ಮಾಡೋಣ. ವ್ಯಕ್ತಿಗಳನ್ನು ಸಾಂದರ್ಭಿಕವಾಗಿ ಅಗತ್ಯವಿದ್ದಾಗ ಗೌರವಿಸೋಣ. ಅವರನ್ನು ಬದುಕಿದ್ದಾಗಲೇ ಮಹಾಮಹಿಮರಂತೆ ಬಿಂಬಿಸದಿರೋಣ. ವಿಚಾರ ಮುಖ್ಯವೇ ಹೊರತು ವ್ಯಕ್ತಿಯಲ್ಲ. ನಾವು ತತ್ವಪೂಜಕರಾಗೋಣ, ಸದ್ವಿಚಾರಗಳ ಆರಾಧಕರಾಗೋಣ.
-ಕ.ವೆಂ.ನಾಗರಾಜ್.