ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 29, 2011

ಸಾಧಕರಿವರು: ಕಾಶಿ ಶೇಷಾದ್ರಿ ದೀಕ್ಷಿತ್

ಸೈಕಲ್ಲಿನಲ್ಲಿ ಭಾರತ ಸುತ್ತಿದ
ಕಾಶಿ ಶೇಷಾದ್ರಿ ದೀಕ್ಷಿತರ ಅಪ್ರತಿಮ ಸಾಧನೆಯ ಕಿರುಪರಿಚಯ



     ಕಾಶಿ ದೀಕ್ಷಿತರೆಂದೇ ಕರೆಯಲ್ಪಡುವ ತೀರ್ಥಹಳ್ಳಿಯ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರಿಗೆ ನವದೆಹಲಿಯ ಸಿ ಎನ್ ಆರ್ ಐ ಸಂಸ್ಥೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಕಳೆದ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ  ಹಿಂದೆ ಭಾರತ, ನೇಪಾಳ, ಭೂತಾನಗಳಲ್ಲಿ ಸುಮಾರು ೩ ವರ್ಷ ಬೈಸಿಕಲ್ ಪ್ರವಾಸ ಮಾಡಿದ ಹಾಗೂ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡ ಇವರ ಸಾಧನೆ ಗುರುತಿಸಿ ನೀಡಿದೆ. ಅಂತರರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಸುಧಾರಣಾ ಸಂಸ್ಥೆ, ಭಾರತೀಯ ಅಭಿವೃದ್ಧಿ ನಿಗಮದ ವಾರ್ಷಿಕೋತ್ಸವದಲ್ಲಿ ಶ್ರೀ ದೀಕ್ಷಿತರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಕೆ.ಹೆಚ್.ಮುನಿಯಪ್ಪ 'ಭಾರತೀಯ ಸಮಾಜರತ್ನ' ಪ್ರಶಸ್ತಿ ನೀಡಿ ಗೌರವಿಸಿದರು. ಕೆಳದಿ ಕವಿಮನೆತನದ ಮತ್ತು ಬಂಧು-ಬಳಗದವರ ನಾಲ್ಕನೆಯ ವಾರ್ಷಿಕ ಸಮಾವೇಶವನ್ನು ಶ್ರೀಯುತರು ತೀರ್ಥಹಳ್ಳಿಯಲ್ಲಿ ೨೭-೧೨-೨೦೦೯ರಲ್ಲಿ ಶ್ರೀಯುತರು ಆಯೋಜಿಸಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಯಸುತ್ತೇನೆ. ಇವರ ಸಾಧನೆಯ ಕಿರುಪರಿಚಯವನ್ನು ಈ ಮೂಲಕ ಮಾಡಿಕೊಡಲು ನನಗೆ ಸಂತೋಷವಾಗುತ್ತಿದೆ.


ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಂದರವಿರೆ ಯಶ ನಿನದೆ ಮೂಢ ||


     ಏನಾದರೂ ಸಾಧನೆ ಮಾಡಬೇಕೆಂದು ಬಯಸಿದವರೆಲ್ಲರೂ ಗುರಿ ಸಾಧಿಸುವುದಿಲ್ಲ, ಅದು ಸುಲಭದ ಕೆಲಸವೂ ಅಲ್ಲ. ಮನೋಬಲ, ಛಲ ಇರುವವರಿಗಷ್ಟೇ ಇದು ಸಾಧ್ಯ. ಅಂದುಕೊಂಡದ್ದನ್ನು ಸಾಧಿಸಿದ ವಿರಳ ವ್ಯಕ್ತಿಗಳಲ್ಲಿ ಒಬ್ಬರು ಕಾಶಿ ಶೇಷಾದ್ರಿ ದೀಕ್ಷಿತ್. ೧೯೭೮ರ ಮೇ ೩೧ರಂದು ಸೈಕಲ್ಲಿನಲ್ಲಿ ಅಖಿಲ ಭಾರತ ಪ್ರವಾಸ ಮಾಡಲು ಹೊರಟಾಗ ತೀರ್ಥಹಳ್ಳಿಯ ತರುಣ ಕೆ.ಜಿ. ಶೇಷಾದ್ರಿ ದೀಕ್ಷಿತರ ವಯಸ್ಸು ೨೬ ವರ್ಷಗಳು. ಮೃದು ಸ್ವಭಾವದ ಹಾಗೂ ಅಂತಹ ಹೇಳಿಕೊಳ್ಳುವಂತಹ ದೇಹಧಾರ್ಢ್ಯತೆಯನ್ನು ಹೊಂದಿರದಿದ್ದ ಈ ತರುಣ ಇಂತಹ ಸಾಧನೆ ಮಾಡಿಯಾನೆಂದು ಹೆಚ್ಚಿನವರು ಭಾವಿಸಿರಲಿಲ್ಲ. ಸಾಧನೆ ಮಾಡಲು ಮನೋಬಲ ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದ ಈ ತರುಣ ಪ್ರವಾಸಕ್ಕೆ ತೆಗೆದುಕೊಂಡ ಅವಧಿ ೩ ವರ್ಷ ೨ ತಿಂಗಳುಗಳು. ಕ್ರಮಿಸಿದ ದೂರ ಸುಮಾರು ೫೫ಸಾವಿರ ಕಿ.ಮೀ.ಗಳು. ಗಳಿಸಿದ ಅನುಭವ ಅಪಾರ. ಪ್ರವಾಸ ಮುಗಿಸಿ ದಿನಾಂಕ ೨೦-೦೭-೧೯೮೧ರಂದು ತೀರ್ಥಹಳ್ಳಿಗೆ ಬಂದಾಗ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಊರಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಆರತಿ ಬೆಳಗಿದರು. ಮನದುಂಬಿ ಹರಸಿದರು. ಸನ್ಮಾನ, ಪ್ರಶಸ್ತಿಗಳು ಅರಸಿ ಬಂದವು.

ಸೈಕಲ್ ಪ್ರವಾಸ ಮಾಡಿದ 26 ವರ್ಷದ ತರುಣ ದೀಕ್ಷಿತ್

     ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ದೀಕ್ಷಿತರು ಇತರ ಕಾರ್ಯಕರ್ತರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಅನೇಕ ಪ್ರೇಕ್ಷಣಿಯ ಹಾಗೂ ಯಾತ್ರಾಸ್ಥಳಗಳಿಗೆ ಚಿಕ್ಕಂದಿನಿಂದಲೇ ಸೈಕಲ್ಲಿನಲ್ಲೇ ಪ್ರವಾಸ ಮಾಡಿದ ಹಿಂದಿನ ಅನುಭವ ಇಂತಹ ಸಾಹಸಕ್ಕೆ ಕೈಹಾಕಲು ಸ್ಫೂರ್ತಿ ನೀಡಿತ್ತು. ಕೇವಲ ಕಂಬ ಮುಟ್ಟಿ ವಾಪಸು ಬಂದಿದ್ದಲ್ಲಿ ಪ್ರವಾಸವನ್ನು ಇನ್ನೂ ಕ್ಷಿಪ್ರ ಅವಧಿಯಲ್ಲಿ ಅವರು ಪೂರ್ಣಗೊಳಿಸಬಹುದಿತ್ತು. ಆದರೆ ಪ್ರತಿ ರಾಜ್ಯದ ಪ್ರತಿ ಸ್ಥಳವನ್ನು ಒಳಹೊಕ್ಕು ನೋಡುವ ಅಭಿಲಾಷೆ ಪ್ರವಾಸದ ಅವಧಿಯನ್ನು ೩ವರ್ಷಕ್ಕೂ ಮೇಲ್ಪಟ್ಟು ಹೆಚ್ಚಿಸಿತು. ದಿನವೊಂದಕ್ಕೆ ಸುಮಾರು ೬೦ ರಿಂದ ೮೦ ಕಿ.ಮೀ. ಸೈಕಲ್ ತುಳಿಯುತ್ತಿದ್ದ ಅವರು ತ್ರಿಪುರ ಮತ್ತು ನಾಗಾಲ್ಯಾಂಡ್‌ಗಳನ್ನು ಬಿಟ್ಟು ಉಳಿದೆಲ್ಲಾ ರಾಜ್ಯಗಳಿಗೆ ಭೇಟಿ ಕೊಟ್ಟಿದ್ದಾರೆ. ನಿರ್ಬಂಧದ ಕಾರಣ ಈ ಎರಡು ರಾಜ್ಯಗಳನ್ನು ನೋಡಲಾಗಲಿಲ್ಲವೆಂದು ಹೇಳುತ್ತಾರೆ. ಈ ಪ್ರವಾಸಕ್ಕೆ ಅವರಿಗೆ ಸುಮಾರು ಐದು ಸಾವಿರ ರೂ. ಖರ್ಚಾಗಿದ್ದು ಮನೆಯವರಿಂದ ಬಂದ ಎರಡು ಸಾವಿರ ರೂ. ಬಿಟ್ಟರೆ ಉಳಿದ ಹಣವೆಲ್ಲಾ ಪ್ರಯಾಣಕಾಲದಲ್ಲಿ ಅಭಿಮಾನಿಗಳು, ಸಂಘ ಸಂಸ್ಥೆಗಳಿಂದ ದೇಣಿಗೆಯಾಗಿ ಬಂದದ್ದು. ಪ್ರವಾಸ ಕಾಲದಲ್ಲಿ ಆಹಾರ, ವಸತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ ರಾಷ್ಟ್ರೀಯ ಸ್ವಯಂಸೇವಕಸಂಘದ ಸಹಾಯವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಹಲವರು ಗಣ್ಯರೂ ಸಹ ನೆರವು ನೀಡಿದ ಕುರಿತು ಸ್ಮರಿಸುತ್ತಾರೆ. ಇವರ ಜೊತೆಗೆ ಪ್ರವಾಸ ಹೊರಟಿದ್ದ ಸಂಗಡಿಗ ಶ್ರೀ ಅನಂತ ಪದ್ಮನಾಭ ಕರ್ನಾಟಕ ಪ್ರವಾಸದುದ್ದಕ್ಕೂ ಜೊತೆಗಿದ್ದು ಮಹಾರಾಷ್ಟ್ರದಲ್ಲಿ ಪ್ರವಾಸ ಮೊಟಕುಗೊಳಿಸಿ ಹಿಂತಿರುಗಿದರೂ ಇವರು ಧೃತಿಗೆಡದೆ ಏಕಾಂಗಿಯಾಗಿ ಪ್ರವಾಸ ಮುಂದುವರೆಸಿ ಪೂರ್ಣಗೊಳಿಸಿದ ಸಾಹಸಿ.
ಇವರ ಪ್ರವಾಸಕಾಲದ ಅನುಭವಗಳ ತುಣುಕುಗಳು:
*ಸುದೀರ್ಘ ಪ್ರಯಾಣಕಾಲದಲ್ಲಿ ೧೦ ಟೈರುಗಳನ್ನು, ೧೨ ಟ್ಯೂಬುಗಳನ್ನು ಮತ್ತು ಒಮ್ಮೆ ಚೈನನ್ನು ಬದಲಾಯಿಸಬೇಕಾಯಿತು.
*ಮಹಾರಾಷ್ಟ್ರದ ಮುಲ್ಕಾಪುರ ಸೈಕಲ್ ರೇಸ್ ಅಸೋಸಿಯೇಷನ್ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ೧೬೦ ಕಿ.ಮೀ. ದೂರವನ್ನು ೫ ಗಂಟೆ ೧೨ ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದರು. ಸ್ಪರ್ಧೆ ಪ್ರಾರಂಭವಾಗುವ ಸಮಯಕ್ಕೆ ಅಲ್ಲಿಗೆ ಹೋಗಿದ್ದ ಅವರು ಆಯೋಜಕರನ್ನು ಕೋರಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸಮಯದ ಅಭಾವದಿಂದ ತಿಂಡಿಯನ್ನೂ ತಿಂದಿರಲಿಲ್ಲ. ಉಳಿದ ಸ್ಪರ್ಧಿಗಳಂತೆ ದಾರಿಯಲ್ಲಿ ಬಳಸಲು ಗ್ಲೂಕೋಸ್ ಇರಲಿ, ನೀರೂ ಹೊಂದಿರಲಿಲ್ಲ. ಹೀಗಾಗಿ ಗಮ್ಯಸ್ಥಾನ ತಲುಪಿದ ನಂತರ ಬಳಲಿ ಕುಸಿದ ಇವರಿಗೆ ಆಯೋಜಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ತೀವ್ರ ಸ್ನಾಯು ಸೆಳೆತದಿಂದ ನರಳಿದ ಅವರು ವಾಪಸು ತೀರ್ಥಹಳ್ಳಿಗೆ ಬಂದು ಕೆಲವು ದಿನಗಳು ವಿಶ್ರಾಂತಿ ಪಡೆದು ಪುನಃ ಪ್ರವಾಸ ಮುಂದುವರೆಸಿದರು.
*ಮರಾಠಿ, ಹಿಂದಿ, ಗುಜರಾತಿ ಭಾಷೆಗಳನ್ನೂ ಪ್ರವಾಸ ಇವರಿಗೆ ಕಲಿಸಿಕೊಟ್ಟಿತು.
*ಮಧ್ಯಪ್ರದೇಶದ ಇಂದೂರಿಗೆ ೮೦ ಕಿ.ಮೀ. ದೂರದ ಭೋಂರ್ಗ್ ಎಂಬಲ್ಲಿ ಬಿಲ್ಲು, ಬಾಣಗಳಿಂದ ಶಸ್ತ್ರಸಜ್ಜಿತರಾದ ಸುಮಾರು ೧೨ ನಗ್ನ ಆದಿವಾಸಿಗಳು ಇವರ ಮೇಲೆ ಹಲ್ಲೆ ಮಾಡಿ ಹೊಡೆದು ಕ್ಯಾಮರಾ, ವಾಚು, ಹಣ, ಬಟ್ಟೆ ಎಲ್ಲವನ್ನೂ ದೋಚಿದರು. ಅರಣ್ಯ ಕಾವಲುಗಾರ ಅಲ್ಲಿಗೆ ಬಂದಿದ್ದರಿಂದ ಸೈಕಲ್ ಬಿಟ್ಟು ಓಡಿಹೋಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರನ್ನು ಆತ ಉಪಚರಿಸಿ ಸಹಕರಿಸಿದ.
*ಉತ್ತರ ಭಾರತದ ಹಲವೆಡೆ ಇವರಿಗೆ ಕೆಲಸ ಹುಡುಕಿಕೊಂಡು ಬಂದಿದ್ದರೂ ಗುರಿ ಸಾಧನೆ ಸಲುವಾಗಿ ನಿರಾಕರಿಸಿದ್ದು ಹೆಗ್ಗಳಿಕೆ.
*ಮಾಜಿ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ, ಮಾಜಿ ಉಪರಾಷ್ರಪತಿ ಶ್ರೀ ಬಿ.ಡಿ. ಜತ್ತಿ, ಜನತಾ ಪಕ್ಷದ ನೇತಾರ ಶ್ರೀ ಅಟಲ್ ಬಿಹಾರಿ ವಾಜಪೇಯಿ (ಆಗ ಅವರು ಪ್ರಧಾನ ಮಂತ್ರಿಯಾಗಿರಲಿಲ್ಲ), ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರುಗಳನ್ನು ಭೇಟಿ ಮಾಡಿದ್ದಾರೆ.
*ಬಿಲಾಸಪುರದ ಬಳಿ ಕಾಡಿನಲ್ಲಿ ಕರಡಿ ಎದುರಿಗೆ ಬಂದಿದ್ದು, ಹತ್ತಿರವಿದ್ದ ಕಾಗದ, ತರಗೆಲೆಗಳನ್ನು ಸೇರಿಸಿ ಬೆಂಕಿ ಹೊತ್ತಿಸಿದ್ದರಿಂದ ಸುಮ್ಮನೆ ಹೋಯಿತು.
*ಕೊಳೆತ ಸಗಣಿಯಲ್ಲಿರುವ ಹುಳುಗಳನ್ನು ಎಣ್ಣ್ಣೆಯಲ್ಲಿ ಹುರಿದು ಅತಿಥಿಗಳನ್ನು ಸತ್ಕರಿಸುವ ಸಂಪ್ರದಾಯದ ಪರಿಚಯ ಇವರಿಗೆ ಭೂತಾನಿನಲ್ಲಾಯಿತು.
*ಚಂಬಲ್ ಕಣಿವೆ ಬಳಿ ಡಕಾಯಿತರು ಇವರನ್ನು ಪೋಲಿಸ್ ಬೇಹುಗಾರನಿರಬೇಕೆಂದು ಶಂಕಿಸಿ ಅಪಹರಿಸಿಕೊಂಡು ಹೋಗಿದ್ದರೂ, ನಿಜಸಂಗತಿ ತಿಳಿದು ಹೂಹಾರ ಹಾಕಿ ಸನ್ಮಾನಿಸಿ ಖರ್ಚಿಗೆ ಹಣ ಕೊಟ್ಟು ಬೀಳ್ಕೊಟ್ಟಿದ್ದರು.
*ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಲ್ಲೂ ಯುವಕರಿಂದ ನಿರೀಕ್ಷಿತ ಪ್ರೋತ್ಸಾಹ ಅವರಿಗೆ ಸಿಗಲಿಲ್ಲ.
     ಪ್ರವಾಸಕಾಲದಲ್ಲಿ ದೀಕ್ಷಿತರಿಗೆ ಭಾರತದ ವಿವಿಧತೆಯ ಪ್ರತ್ಯಕ್ಷ ದರ್ಶನವಾಯಿತು. ಜನರನ್ನು, ಸ್ಥಳಗಳನ್ನು ಸಮೀಪದಿಂದ ನೋಡಿದರು. ಓದಿ ತಿಳಿಯುವುದಕ್ಕಿಂತ ನೋಡಿ ತಿಳಿಯುವ ಅನುಬವವೇ ವಿಶಿಷ್ಟವೆಂದು ಮನಗಂಡ ಅವರು ಜನರ ದಯನೀಯ ಸ್ಥಿತಿ ಕಂಡು ಮರುಗಿದರು. ಸಮಾಜಕ್ಕೆ ಉಪಯುಕ್ತವಾಗಿ ಬಾಳಬೇಕೆಂಬ ಅವರ ಮನೋಭಾವ ಗಟ್ಟಿಗೊಂಡಿತು. ದೀಕ್ಷಿತರು ಮಾಡಬೇಕಾದ ಒಂದು ಕೆಲಸ ಬಾಕಿ ಉಳಿದಿದೆ. ಅದೆಂದರೆ ತಮ್ಮ ಅನುಭವಗಳನ್ನು ಬರಹ ರೂಪದಲ್ಲಿಳಿಸಿ ಇತರರಿಗೆ ಪ್ರೇರಣೆ ನೀಡುವುದು. ಅದನ್ನೂ ಶೀಘ್ರವಾಗಿ ಪೂರ್ಣಗೊಳಿಸಲೆಂದು ಹಾರೈಸೋಣ.

ಗುರುವಾರ, ಜುಲೈ 28, 2011

ಮೂಢ ಉವಾಚ - 62

ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು |
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ ||


ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ
ಮುಕ್ತಿಮಾರ್ಗಕಿದು ಕಠಿಣತಮ ಹಾದಿ |
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ ||


ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||


ಮನಶುದ್ಧಿಯಿರದೆ ತಪವ ಮಾಡಿದೊಡೇನು
ದೇಹ ದಂಡಿಸಿದೊಡೇನು ಅಂತರಂಗವ ಮರೆತು |
ಉಪವಾಸದಿಂ ಫಲವೇನು ವಿವೇಕವಿರದಲ್ಲಿ
ಆಚಾರದೊಳು ವಿಚಾರವಿರಲಿ ಮೂಢ ||
***************
-ಕ.ವೆಂ.ನಾಗರಾಜ್.

ಸೋಮವಾರ, ಜುಲೈ 25, 2011

ಅಧಿಕಾರ ಮತ್ತು ದರ್ಪ

     ಒಬ್ಬರು ಜಿಲ್ಲಾಧಿಕಾರಿಯವರ (ಈಗ ಅವರು ರಾಜ್ಯಮಟ್ಟದ ಅಧಿಕಾರಿ) ಕುಟುಂಬದವರು ಅಮ್ಯೂಸ್‌ಮೆಂಟ್ ಪಾರ್ಕ್‌ನ ಖಾಯಂ ಬಳಕೆದಾರರಾಗಿದ್ದು ಬಿಲ್ಲಿನ ಮೊತ್ತ ರೂ. ೫ ಲಕ್ಷ ದಾಟಿದಾಗ ಮಾಲಿಕರು ಬಿಲ್ ಪಾವತಿಗೆ ಒತ್ತಾಯಿಸಿದರು. ಪರಿಣಾಮ, ಆ ಜಿಲ್ಲಾಧಿಕಾರಿ ಸರಕಾರಿ ಭೂಮಿ ಒತ್ತುವರಿ ಮಾಡಿ ಪಾರ್ಕ್ ನಿರ್ಮಿಸಿದ ಆರೋಪ ಮಾಡಿ ನೋಟೀಸು ಹೊರಡಿಸಿ, ಕೆಎಟಿಯಿಂದ ತಡೆಯಾಜ್ಞೆ ಇದ್ದರೂ ಲೆಕ್ಕಿಸದೆ ತೆರವು ಕಾರ್ಯಾಚರಣೆ ನಡೆಸಿದರೆಂದು ಆರೋಪಿಸಿ ಅವರ ವಿರುದ್ಧ ಅಮ್ಯೂಸ್‌ಮೆಂಟ್ ಪಾರ್ಕಿನ ಮಾಲಿಕರು ಉಚ್ಛನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಬಗ್ಗೆ ೨೯-೦೬-೨೦೧೧ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ವರದಿ ಓದಿದೆ. ಆ ವರದಿಗೆ 'ತಿಂದು ಹೋದ ಕೆಡವಿ ಹೋದ' ಎಂಬ ಆಕರ್ಷಕ ಶೀರ್ಷಿಕೆ ಕೊಟ್ಟಿದ್ದಾರೆ. ಹಿಂದಿ ಚಲನಚಿತ್ರ ನೋಡಲು ಥಿಯೇಟರ್‌ಗೆ ಕುಟುಂಬ ಸಮೇತ ಹೋದಾಗ ಹಣ ಕೇಳಿದರೆಂದು ಥಿಯೇಟರ್ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದ ಬಗ್ಗೆ, ಯಾವುದೇ ವಾಣಿಜ್ಯ ಮಳಿಗೆಗೆ ಹೋದರೂ ಹಣ ನೀಡದ ಬಗ್ಗೆ ಸಹ ಪತ್ರಿಕೆಯಲ್ಲಿ ಪ್ರಕಟವಾಗಿದೆ. ನಾನು ಪುತ್ತೂರು ತಾಲ್ಲೂಕಿನಲ್ಲಿ ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅಧಿಕಾರಿ ಅಲ್ಲಿ ಪುತ್ತೂರು ಉಪವಿಭಾಗಾಧಿಕಾರಿಯಾಗಿದ್ದರು. ಅವರ ಕುರಿತು ನನ್ನ ಒಂದೆರಡು ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳಬಯಸಿ ಈ ಬರಹ.
     ಆಗ ಪುತ್ತೂರಿನ ಎ.ಪಿ.ಎಂ.ಸಿ.ಯ ಆಡಳಿತಾಧಿಕಾರಿಯೂ ಅವರೇ ಆಗಿದ್ದು ಅಡಿಕೆಯ ಅಕ್ರಮ ಸಾಗಾಣಿಕೆ ಮೇಲೆ ನಿಗಾ ಇರಿಸಿದ್ದ ಅವರು ರಾತ್ರೋರಾತ್ರಿ ಒಬ್ಬರೇ ಜೀಪಿನಲ್ಲಿ ಹೊರಟು ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಮಾಡುತ್ತಿದ್ದರು. ಆರೀತಿ ಒಬ್ಬರೇ ಹೋಗುವುದು ಸೂಕ್ತವಲ್ಲವೆಂದು, ಅಪಾಯ ಒದಗಬಹುದಾದ್ದರಿಂದ ಜೊತೆಯಲ್ಲಿ ಒಬ್ಬರು ಪೋಲಿಸರನ್ನಾದರೂ ಕರೆದೊಯ್ಯಬೇಕೆಂದು ನಾನು ಸಲಹೆ ಮಾಡಿದ್ದರೂ ಅವರು ಯಾರನ್ನೂ ನಂಬುತ್ತಿರಲಿಲ್ಲ. ಲೆಕ್ಕಪತ್ರಗಳನ್ನು ಸರಿಯಾಗಿ ಇಡದ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ವರ್ತಕರು ಮತ್ತು ಅವರ ನಡುವೆ ಮನಸ್ತಾಪಗಳು ಜರುಗುತ್ತಲೇ ಇತ್ತು. ಕೊನೆಗೊಮ್ಮೆ ಎಲ್ಲಾ ವರ್ತಕರು ತಮಗಾಗುತ್ತಿರುವ ಕಿರುಕುಳ ಪ್ರತಿಭಟಿಸಿ ಅವರ ಕಛೇರಿಯ ಮುಂದೆ ಧರಣಿ ಪ್ರತಿಭಟನೆ ಪ್ರಾರಂಭಿಸಿದರು. ಉಪವಿಭಾಗಾಧಿಕಾರಿ ಕಛೇರಿಗೆ ಹೋಗುವಾಗ, ಬರುವಾಗ ಮತ್ತು ಅವರನ್ನು ಕಂಡಾಗಲೆಲ್ಲಾ ಅವರ ವಿರುದ್ಧ ಧಿಕ್ಕಾರದ ಕೂಗು ಮೊಳಗುತ್ತಿತ್ತು. ಎರಡು ದಿನಗಳಾದರೂ ಆ ಅಧಿಕಾರಿ ಕ್ಯಾರೇ ಅನ್ನಲಿಲ್ಲ. ನಾನು ಅಲ್ಲಿನ ತಹಸೀಲ್ದಾರನಾದ್ದರಿಂದ ಕಾನೂನು - ಸುವ್ಯವಸ್ಥೆ ದೃಷ್ಟಿಯಿಂದ ಅಧಿಕಾರಿಯೊಂದಿಗೆ ಚರ್ಚಿಸಿದರೆ ಅವರು 'ಎಷ್ಟು ದಿವಸ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ, ಅವರನ್ನು ವಿಚಾರಿಸುವುದು ಬೇಡ' ಅಂದರು. ನಾನು ವರ್ತಕರೊಂದಿಗೆ ಮಾತನಾಡಲೇ ಎಂದು ಕೇಳಿದರೆ, 'ಮಾತನಾಡಿ, ಆದರೆ ನಾನು ಅವರ ಹತ್ತಿರ ಹೋಗುವುದೂ ಇಲ್ಲ, ಅವರನ್ನು ಕರೆಸುವುದೂ ಇಲ್ಲ'ವೆಂದರು. ಮೂರು ದಿನದಿಂದ ಧರಣಿ ಕುಳಿತು ಬಸವಳಿದಿದ್ದ ವರ್ತಕರು ಸಿಟ್ಟಾಗಿದ್ದರು, ಆಗ ಅಲ್ಲಿನ ವಿಧಾನಸಭಾ ಸದಸ್ಯರಾಗಿದ್ದ ಶ್ರೀ ಸದಾನಂದಗೌಡರು ಸಹ ಉಪವಿಭಾಗಾಧಿಕಾರಿಯವರ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಾನು ಮಧ್ಯಸ್ತಿಕೆ ವಹಿಸಿ ಮುಕ್ತಾಯಗೊಳಿಸಲು ಕೋರಿದ್ದರು. ವರ್ತಕರೊಂದಿಗೆ ಹಲವು ಗಂಟೆಗಳ ಕಾಲ ಮಾತನಾಡಿ ಅವರ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದಾಗ ಈ ಮಾತು ಉಪವಿಭಾಗಾಧಿಕಾರಿಯವರು ಹೇಳಿದರೆ ಸಾಕು, ಧರಣಿ ಮುಗಿದರೆ ಸಾಕು ಎಂದು ನಮಗೂ ಅನ್ನಿಸಿದೆ ಎಂಬ ಅಂತರಂಗದ ಅಭಿಪ್ರಾಯ ಧುರೀಣರಿಂದ ಬಂದಿತು. ಉಪವಿಭಾಗಾದಿಕಾರಿಯವರಿಗೆ ಬಾಯಿಮಾತಿಗೆ ಆದರೂ 'ಪರಿಶೀಲಿಸುವೆ, ಮುಕ್ತಾಯಗೊಳಿಸಿ' ಎಂದು ಹೇಳಲು ಕೇಳಿದರೆ ಅವರು ಒಪ್ಪಲಿಲ್ಲ. ಕೊನೆಗೆ 'ನಿಮ್ಮ ಪರವಾಗಿ ನಾನೇ ಹೇಳುತ್ತೇನೆ, ವರ್ತಕರ ಸಂಘದ ಪದಾಧಿಕಾರಿಗಳನ್ನು ತಮ್ಮ ಛೇಂಬರಿಗೆ ಕರೆಸಿದಾಗಿ ನೀವು ಸುಮ್ಮನಿರಿ' ಎಂದು ಅವರನ್ನು ಒಪ್ಪಿಸಿ ಧುರೀಣರನ್ನು ಕರೆಯಿಸಿ ಅವರಿಗೆಲ್ಲಾ ಚಹ ತರಿಸಿಕೊಟ್ಟು 'ತಮ್ಮ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲು ಒಪ್ಪಿದ್ದಾರೆ, ಜಿಲ್ಲಾಧಿಕಾರಿ ಸಹ ಗಮನಿಸಲಿದ್ದಾರೆ' ಎಂದು ಆಶ್ವಾಸನೆ ಕೊಟ್ಟಾಗ ಮುಷ್ಕರ ಕೊನೆಗೊಂಡಿತು. ಹೊರಗೆ ಇದ್ದ ವರ್ತಕರು 'ಅಸಿಸ್ಟೆಂಟ್ ಕಮಿಷನರ್‌ಗೆ ಧಿಕ್ಕಾರ, ತಹಸೀಲ್ದಾರರಿಗೆ ಜೈ' ಎಂದು ಘೋಷಣೆ ಹಾಕಿದಾಗ ನನಗೆ ಇರುಸು ಮುರುಸಾಗಿತ್ತು. ಇಲ್ಲಿ ಒಂದು ಮಾತು ಹೇಳಲು ಮರೆತೆ. ಮುಷ್ಕರ ನಡೆಯುವಾಗ ಅವರು ಕಛೇರಿಯಲ್ಲಿ ಹೆಚ್ಚು ಕಾಲ ಇರುತ್ತಿರಲಿಲ್ಲ. ಮನೆಯಲ್ಲೇ ಕಡತಗಳನ್ನು ನೋಡುತ್ತಿದ್ದರು, ಅಥವ ಪ್ರವಾಸ ಮಾಡುತ್ತಿದ್ದರು. ಆಗ ಅವರನ್ನು ಮಾತನಾಡಿಸಲು ಅವರ ಮನೆಗೆ ಹೋದಾಗ ಮನೆಯ ಒಳಗೆ ಕರೆಯದೆ ಗೇಟಿನ ಬಳಿಯಲ್ಲೇ ನಿಲ್ಲಿಸಿ ನನ್ನೊಡನೆ ಮಾತನಾಡಿದ್ದರು. ಸೌಜನ್ಯಕ್ಕಾದರೂ ಒಳಗೆ ಕರೆಯದ ಅವರ ಮನೆಗೆ ನಾನು ಮುಂದೆ ಎಂತಹ ತುರ್ತು ಸಮಯದಲ್ಲೂ ಮತ್ತೆಂದೂ ಹೋಗಿರಲಿಲ್ಲ.
     ಆಗ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದ ಸಮಯ. ಚುನಾವಣೆಯ ಹಿಂದಿನ ದಿನ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕಳುಹಿಸಿಯಾಗಿತ್ತು. ಕೈಕರ ಎಂಬ ಗ್ರಾಮ ಪಂಚಾಯಿತಿಯ ಚುನಾವಣೆಯ ರಿಟರ್ನಿಂಗ್ ಅಧಿಕಾರಿಯೊಬ್ಬರು ಒಂದು ಪ್ರಮಾದ ಎಸಗಿದ್ದರು. ಅದೆಂದರೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ತೆಗೆದುಹಾಕಲ್ಪಟ್ಟಿದ್ದರೂ ಅದನ್ನು ಗಮನಿಸದೆ ಅವರ ನಾಮಪತ್ರವನ್ನು ಅಂಗೀಕರಿಸಿದ್ದರು. ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದ್ದರಿಂದ ಆ ವ್ಯಕ್ತಿಗೆ ಮತದಾನ ಮಾಡಲು ಸಂಬಂಧಿಸಿದ ಮತಗಟ್ಟೆ ಅಧಿಕಾರಿ ಸಹಜವಾಗಿ ಅವಕಾಶ ಕೊಡಲಿಲ್ಲ. ಅಭ್ಯರ್ಥಿಗೇ ಮತ ನೀಡಲು ಅವಕಾಶ ಕೊಡದಿದ್ದಾಗ ಅಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ಆ ಅಭ್ಯರ್ಥಿ ಬಿಜೆಪಿಯ ಅಭ್ಯರ್ಥಿಯಾಗಿದ್ದು, ಪಕ್ಷದ ಅಭಿಮಾನಿಗಳೂ ಗುಂಪುಕೂಡಲಾರಂಭಿಸಿದ್ದರು. ಜನ ನೂರಾರು ಸಂಖ್ಯೆಯಲ್ಲಿ ಒಟ್ಟುಗೂಡಿ ಮತದಾನ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಉಪವಿಭಾಗಾಧಿಕಾರಿಯವರೂ ಮತ್ತು ನಾನೂ ಆ ಗ್ರಾಮಕ್ಕೆ ಧಾವಿಸಿದೆವು. ಅಭ್ಯರ್ಥಿಗೆ ನಿಯಮಾನುಸಾರ ಮತ ನೀಡಲು ಅವಕಾಶವಿಲ್ಲವೆಂದು ತಿಳಿ ಹೇಳಿದರೂ ಅದನ್ನು ಒಪ್ಪುವ ಸ್ಥಿತಿಯಲ್ಲಿ ಜನರು ಇರಲಿಲ್ಲ. ಆ ಗಲಾಟೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರಚಾಡುತ್ತಿದ್ದಾಗ ಎಲ್ಲರೂ ಮಾತನಾಡುವುದು ಸರಿಯಲ್ಲ, ನಿಮ್ಮಲ್ಲೇ ೩-೪ ಜನ ಮುಖಂಡರನ್ನು ಆರಿಸಿ ಮಾತನಾಡಿರಿ, ನಾವು ಇಲ್ಲೇ ಇರುತ್ತೇವೆ ಎಂದು ಪಕ್ಕದ ಶಾಲಾ ಕೊಠಡಿಯಲ್ಲಿ ಕುಳಿತೆವು. ಜನರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದು, ನೋಡ ನೋಡುತ್ತಿದ್ದಂತೆ ನಾವು ಕೊಠಡಿಯ ಒಳಗೆ ಇದ್ದಂತೆಯೇ ಹೊರಗಿನಿಂದ ಚಿಲಕ ಹಾಕಿ ಬೀಗ ಹಾಕಿಬಿಟ್ಟರು. ನನ್ನೊಡನೆ ಒಳಗಿದ್ದ ಅಧಿಕಾರಿ ಸಿಟ್ಟಿನಿಂದ ಕೊತಕೊತನೆ ಕುದಿಯುತ್ತಿದ್ದರು. ಬೆಳ್ಳಗಿದ್ದ ಅವರ ಮುಖ ಕೆಂಪೇರಿತ್ತು. ಆಗ ಮೊಬೈಲ್ ಫೋನು ಬಳಕೆಗೆ ಬಂದಿರಲಿಲ್ಲ. ನಮ್ಮ ಜೀಪುಗಳಲ್ಲಿ ವೈರ್ ಲೆಸ್ ಸೆಟ್ ಇದ್ದರೂ ನಾವು ಶಾಲಾಕೊಠಡಿಯಲ್ಲಿ ಬಂದಿಗಳಾಗಿದ್ದೆವು. ಅವರು ೧೪೪ನೆ ಸೆಕ್ಷನ್ ಜಾರಿ ಹೇಗೆ ಮಾಡುವುದು?, ಲಾಠಿ ಚಾಜ್ ಮಾಡಲು, ಫೈರಿಂಗ್ ಮಾಡಲು ಪ್ರೊಸೀಜರ್ ಹೇಗೆ? ಎಂದು ನನ್ನನ್ನು ವಿಚಾರಿಸುತ್ತಿದ್ದರು. ನಾನು ಅವರನ್ನು ಸಮಾಧಾನಿಸಿ ಅದೆಲ್ಲಾ ಅಗತ್ಯ ಬರುವುದಿಲ್ಲ. ಎಲ್ಲಾ ಸರಿಯಾಗುತ್ತದೆ ಎಂದು ಅವರಿಗೆ ಹೇಳಿ, ಕಿಟಕಿಯಿಂದಲೇ ಮುಖ್ಯರೆಂದು ಕಂಡ ಕೆಲವರೊಡನೆ ಮಾತಾಡಿದೆ. 'ನೀವು ದಕ್ಷಿಣ ಕನ್ನಡದವರು ಬುದ್ಧಿವಂತರು, ಕಾನೂನಿಗೆ ಬೆಲೆ ಕೊಡುವವರು ಎಂದು ತಿಳಿದಿದ್ದೇನೆ. ನೀವು ಏನು ಮಾಡುತ್ತಿದ್ದೀರೆಂಬ ಅರಿವು ನಿಮಗಿದೆಯೇ? ಚುನಾವಣೆ ಕೇವಲ ನಿಮ್ಮ ಒಂದು ಗ್ರಾಮದಲ್ಲಿ ನಡೆಯುತ್ತಿಲ್ಲ. ಇಡೀ ತಾಲ್ಲೂಕಿನ ಚುನಾವಣೆ ನಡೆಸುವ ಜವಾಬ್ದಾರಿ ನನಗಿದೆ. ಇಡೀ ಉಪವಿಭಾಗದ ಚುನಾವಣೆ ಹೊಣೆ ಉಪವಿಭಾಗಾಧಿಕಾರಿಯವರದ್ದು. ನೀವು ಹೀಗೆ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಗೊತ್ತಿದೆಯೇ?' ಎಂದು ಕೇಳಿದಾಗ ಅವರು ಅಳುಕಿದರು. ಅವರು 'ದಯವಿಟ್ಟು ತಪ್ಪು ತಿಳಿಯಬೇಡಿ, ಶಾಸಕರು ಬರ್ತಾ ಇದಾರೆ. ಅವರು ಬರಲಿ ಅಂತ ಹೀಗೆ ಮಾಡಿದಿವಿ' ಅಂದರು. ನಾನು ಸ್ವಲ್ಪ ಸಿಟ್ಟಿನಿಂದಲೇ 'ಶಾಸಕರು ಬರಲಿ ಅಂತ ಕೂಡಿ ಹಾಕಿದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇದು ಚುನಾವಣೆ ಸಮಯ, ಹೀಗೆಲ್ಲಾ ಮಾಡಿದರೆ ಅದರ ಪರಿಣಾಮ ಸಹ ಎದುರಿಸಲೇ ಬೇಕು. ಶಾಸಕರ ಜೊತೆ ಮಾತಾಡಬೇಕು ಅಂದರೆ ನಾನು ಮಾತಾಡುತ್ತೇನೆ. ಈಗ ಮೊದಲು ಬಾಗಿಲು ತೆಗೆಯಿರಿ' ಎಂದು ಹೇಳಿದೆ. ಜನರು 'ನಿಮ್ಮನ್ನು ಬಿಟ್ಟರೆ ಮತ್ತೆ ನೀವು ಇಲ್ಲಿಗೆ ಬರುವುದಿಲ್ಲ. ಬಂದರೂ ಪೋಲಿಸರನ್ನು ಕರೆದುಕೊಂಡು ಬರುತ್ತೀರಿ. ಲಾಠಿಚಾರ್ಜು ಮಾಡಿಸುತ್ತೀರಿ' ಎಂದು ಹೇಳಿದರು. 'ನೀವು ತೆಗೆಯದಿದ್ದರೆ ಅದರ ಪರಿಣಾಮ ಇನ್ನೂ ಗಂಭೀರವಾಗುತ್ತದೆ. ನಿಮ್ಮ ಶಾಸಕರು ಬಂದ ಮೇಲೆ ತಿಳಿಸಿ. ನಾನು ಖಂಡಿತಾ ಬರುತ್ತೇನೆ. ಈಗ ಕೆಲಸ ಮಾಡಲು ಬಿಡಿ' ಎಂದಾಗ 'ತಪ್ಪು ತಿಳಿಯಬೇಡಿ, ಶಾಸಕರು ಬಂದಾಗ ಬಂದು ಪರಿಹರಿಸಬೇಕು, ನಮ್ಮ ಅಭ್ಯರ್ಥಿಗೆ ಓಟು ಹಾಕಲು ಅವಕಾಶ ಕೊಡಬೇಕು, ಅಲ್ಲಿಯವರೆಗೂ ಯಾರಿಗೂ ಓಟು ಹಾಕಲು ಬಿಡುವುದಿಲ್ಲ' ಎಂದು ಹೇಳಿ ಬಾಗಿಲು ತೆರೆದರು. ನಾವು ವಾಪಸು ಪುತ್ತೂರಿಗೆ ಹೊರಟೆವು. ದಾರಿಯಲ್ಲಿ ಉಪವಿಭಾಗಾಧಿಕಾರಿ ಪೋಲಿಸರನ್ನು ಕಳಿಸಿ ಜನರನ್ನು ಚದುರಿಸಲು ವ್ಯವಸ್ಥೆ ಮಾಡುವಂತೆ ಡಿವೈಎಸ್ಪಿರವರಿಗೆ ವೈರ್‌ಲೆಸ್‌ನಿಂದ ಮಾತನಾಡಿಯೇಬಿಟ್ಟರು. ನಾನು ಅವರಿಗೆ 'ಅಂತಹುದೆಲ್ಲಾ ಬೇಡ ಸಾರ್, ಅಲ್ಲಿ ಚುನಾವಣೆ ನಡೆದರೆ ನಡೆಯಲಿ, ಇಲ್ಲದಿದ್ದರೆ ಆ ಒಂದು ಮತಗಟ್ಟೆಯಲ್ಲಿ ಚುನಾವಣೆ ರದ್ದಾದರೆ ಮರುಚುನಾವಣೆಗೆ ವ್ಯವಸ್ಥೆ ಮಾಡಬಹುದು. ಲಾಠಿ ಚಾರ್ಜು ಆಗಿ ೪-೫ ಜನರಿಗೆ ಪೆಟ್ಟಾದರೆ, ಫೈರಿಂಗ್ ಆಗಿ ಯಾರಾದರೂ ಸತ್ತರೆ, ಅದು ದೊಡ್ಡ ಸುದ್ದಿಯಾಗುತ್ತದೆ, ಕಛೇರಿಯ ಮುಂದೆ ಸಾವಿರಾರು ಜನ ಸೇರುತ್ತಾರೆ, ಗಲಾಟೆಗೆ ಅವಕಾಶವಾಗುತ್ತದೆ, ಅಲ್ಲೂ ಸಮಸ್ಯೆ ಆಗಿ ರಾಜ್ಯಮಟ್ಟದಲ್ಲೂ ಸುದ್ದಿಯಾಗುತ್ತದೆ' ಎಂದು ಹೇಳುತ್ತಿದ್ದೆ. ಅರ್ಧ ದಾರಿ ಹೋದಾಗ ಎಮ್.ಎಲ್.ಎ. ಸದಾನಂದಗೌಡರು ಗ್ರಾಮಕ್ಕೆ ಬರುತ್ತಿದ್ದವರು ಎದುರಿಗೆ ಸಿಕ್ಕರು. ನಾನು ಅವರಿಗೆ ಎಲ್ಲಾ ವಿಷಯ ವಿವರಿಸಿ ಈಗ ಏನೇ ಮಾಡಿದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅಭ್ಯರ್ಥಿಗೆ ಓಟು ಹಾಕಲು ಅವಕಾಶವಿಲ್ಲ. ಸ್ಪರ್ಧಿಸಿದವರಲ್ಲಿ ಇತರರು ಯಾರಾದರೂ ಕೋರ್ಟಿನಲ್ಲಿ ಕೇಸು ಹಾಕಿದರೆ ಮಾತ್ರ ಅಭ್ಯರ್ಥಿಗೆ ಅನಾನುಕೂಲವಾಗಬಹುದು. ಇಲ್ಲದಿದ್ದರೆ ಏನೂ ತೊಂದರೆಯಿಲ್ಲ. ಸಂಬಂಧಿಸಿದ ಚುನಾವಣಾಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಾಗ ಅವರು ಅರ್ಥ ಮಾಡಿಕೊಂಡರೂ ಸಹ ತಮ್ಮ ಪಕ್ಷದ ಅಭ್ಯರ್ಥಿಗೆ ಅನಾನುಕೂಲವಾದ ಬಗ್ಗೆ ಅಸಮಾಧಾನ ತೋರ್ಪಡಿಸಿದರು. ನಾನು ಉಪವಿಭಾಗಾಧಿಕಾರಿಯವರಿಗೆ ಪುತ್ತೂರಿಗೆ ಹೋಗಲು ಕೋರಿ ನಾನು ಶಾಸಕರೊಂದಿಗೆ ಪುನಃ ಗ್ರಾಮಕ್ಕೆ ಹೋದೆ. ಅಲ್ಲಿ ಸಾಕಷ್ಟು ಬಿಸಿಬಿಸಿ ವಾಗ್ವಾದಗಳಾದರೂ ಕೊನೆಗೆ ಶಾಸಕರ ಸಹಕಾರದಿಂದ ಚುನಾವಣೆ ಮುಂದುವರೆಸುವಲ್ಲಿ ನಾನು ಸಫಲನಾದೆ. ಅಷ್ಟು ಹೊತ್ತಿಗೆ ಅಲ್ಲಿಗೆ ಉಪವಿಭಾಗಾಧಿಕಾರಿ ಕಳಿಸಿದ್ದ ಎರಡು ಪೋಲಿಸ್ ವ್ಯಾನುಗಳ ಭರ್ತಿ ಪೋಲಿಸರು ಅಲ್ಲಿ ಬಂದಿಳಿದರು. ನಾನು ಮಾತನಾಡಿ ಸೀಮಿತ ಪೋಲಿಸರನ್ನು ಮಾತ್ರ ಅಲ್ಲಿ ಉಳಿಸಿ ಉಳಿದವರನ್ನು ವಾಪಸು ಕಳಿಸಿದೆ. ನನ್ನ ಆ ಕೆಲಸ ಗಮನಿಸುತ್ತಿದ್ದ ಜನರ ಮೆಚ್ಚುಗೆ ಗಳಿಸಿತು. ಅಲ್ಲಿ ಅಂದು ಶೇ. ೭೮ ಮತದಾನ ಆಯಿತು. ಚುನಾವಣೆ ನಂತರ ಎಣಿಕೆಯಾದಾಗ ಆ ಅಭ್ಯರ್ಥಿ ಸೋತಿದ್ದರಿಂದ ಮುಂದೆ ಬೇರೆ ಸಮಸ್ಯೆ ಬರಲಿಲ್ಲ.
     ಈ ಅಧಿಕಾರಿ ಐ.ಎ.ಎಸ್. ಕೇಡರ್ ಗೆ ಸೇರಿದವರಾಗಿದ್ದು ೨-೩ ವರ್ಷಗಳಲ್ಲಿ ಜಿಲ್ಲಾಧಿಕಾರಿಯಾಗಿ ಹೋಗಲಿದ್ದರಿಂದ ಅವರ ಮಾತು ನಡೆಯುತ್ತಿತ್ತು. ಅವರು ಪ್ರಭಾವ ಬೀರಿ ಆಪತ್ತು ನಿರ್ವಹಣೆಗೆ ಮೀಸಲಿದ್ದ ಹಣದಲ್ಲಿ ರೂ. ೨-೩ ಲಕ್ಷ ಹಣವನ್ನು ಪುತ್ತೂರಿನ ತಮ್ಮ ಸರ್ಕಾರಿ ನಿವಾಸದ ದುರಸ್ತಿಗೆ ಅವಕಾಶವಿಲ್ಲದಿದ್ದರೂ ಬಳಸಿಕೊಂಡರು. ಕಛೇರಿಯ ತಮ್ಮ ಛೇಂಬರಿನ ನವೀಕರಣಕ್ಕೂ ಮಳೆ ಕಾರಣ ಕಟ್ಟಡಕ್ಕೆ ಹಾನಿಯಾಯಿತೆಂದು ಆ ಹಣ ಬಳಸಿದರು. ಜಿಲ್ಲೆಯ ಪತ್ರಿಕೆಗಳಲ್ಲಿ ಈ ಬಗ್ಗೆ ಬಂದರೂ ಕ್ರಮೇಣ ವಿಷಯ ತಣ್ಣಗಾಯಿತು. ಅವರ ಸ್ವಭಾವ, ಗುಣಗಳ ಪರಿಚಯವಿರುವ ನನಗೆ ಅವರ ಮೇಲೆ ಈಗ ಬಂದಿರುವ ಆರೋಪಗಳಲ್ಲಿ ಸತ್ಯಾಂಶವಿದ್ದರೂ ಇರಬಹುದೆಂದು ಅನ್ನಿಸುತ್ತಿದೆ. ರೀತಿ, ನೀತಿಗಳು ಸರಿಯಿದ್ದರೆ ದರ್ಪವನ್ನು ಕೆಲಮಟ್ಟಿಗೆ ಸಹಿಸಬಹುದು. ಆದರೆ ಎಲ್ಲಾ ಕಾಲಕ್ಕೂ ದರ್ಪದಿಂದ ಅಧಿಕಾರ ನಡೆಸುವುದು ಅಪೇಕ್ಷಣೀಯವಲ್ಲವೆಂದು ನನ್ನ ವೈಯಕ್ತಿಕ ಅಭಿಪ್ರಾಯ. ನನಗೆ ಹೆಚ್ಚು ಕಾಡುವ ವಿಷಯವೆಂದರೆ ಈ ಅಧಿಕಾರಿಯ ದರ್ಪದ ಅಧಿಕಾರದ ಫಲ (ಬಿಟ್ಟಿ ಮೋಜು, ಮಸ್ತಿ, ಶಾಪಿಂಗ್, ಇತ್ಯಾದಿ) ಅನುಭವಿಸುತ್ತಿರುವ ಇವರ ಮಕ್ಕಳು ಮುಂದೆ ಎಷ್ಟು ಉತ್ತಮ ನಾಗರಿಕರಾಗಬಹುದು ಎಂಬುದು!

ಭಾನುವಾರ, ಜುಲೈ 24, 2011

ಮೂಢ ಉವಾಚ - 61

ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ
ಶಾಶ್ವತವದೊಂದೆ ಸಚ್ಚಿದಾನಂದ ಭಾವ |
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ
ಭದ್ರಪದವೊಲಿಯುವುದು ಮೂಢ ||

ಸತ್ಯಧರ್ಮಕೆ ಹೆಸರು ಕೋದಂಡರಾಮ
ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ |
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ ||


ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ |
ದಾರಿ ಹಲವಿರಲು ಗುರಿಯದು ಒಂದೆ
ಮನ ತೋರ್ವ ದಾರಿಯಲಿ ಸಾಗು ಮೂಢ ||


ಬೆಳಕಿರುವ ತಾಣದಲಿ ತಮವು ಇದ್ದೀತೆ
ಅರಿವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ |
ಅರಿವು ಬರಲಾಗಿ ತರತಮವು ಮಾಯ
ಅಭೇದಭಾವಿ ಅಮರನಲ್ಲವೆ ಮೂಢ ||
***************
-ಕ.ವೆಂ.ನಾಗರಾಜ್.

ಬುಧವಾರ, ಜುಲೈ 20, 2011

ಬಾಲ್ಯದ ನೆನಪುಗಳು

     ಎದುರಿಗಿದ್ದ ಕನ್ನಡಿಯಲ್ಲಿ ನನ್ನ ಮುಖ ನಾನು ನೋಡಿಕೊಂಡೆ. ನೋಡುತ್ತಿದ್ದ ಹಾಗೆ ನನ್ನ ಹಳೆಯ ಮುಖಗಳು ನೆನಪಿಗೆ ಬಂದವು. ಚಿಕ್ಕ ಮಗುವಿದ್ದಾಗ ಮಗುವಿಗೆ ದೃಷ್ಟಿಯಾಗದಿರಲಿ ಎಂದು ಕೆನ್ನೆಯ ಮೇಲೆ ದೃಷ್ಟಿಬೊಟ್ಟು ಇಡುತ್ತಿದ್ದ ಕಾಲದಲ್ಲಿ ತೆಗೆದಿದ್ದ ಫೋಟೋದಲ್ಲಿ ನಾನು ದುಂಡು ದುಂಡಗಿದ್ದೆ. ಬಿಳಿಯ ಸಫಾರಿ ಶೈಲಿಯ ಹೊಸ ಅಂಗಿ, ಚಡ್ಡಿ, ಕೈಗೆ ಫೋಟೋ ತೆಗೆಸುವ ಸಲುವಾಗಿ ಹಾಕಿದ್ದ ಸ್ಟೀಲ್ ಚೈನಿನ ವಾಚು (ಬಹುಷಃ ನಮ್ಮಪ್ಪನದೇ ಇರಬೇಕು), ನೀಟಾಗಿ ತಲೆ ಬಾಚಿ ಎರಡು ಜುಟ್ಟು ಹಾಕಿ ಮುಡಿಸಿದ ಹೂವು, ಹಣೆಯಲ್ಲಿ ದುಂಡಗೆ ಇಟ್ಟಿದ್ದ ಸಾದು, ಕ್ಯಾಮರಾ ಕಡೆಗೆ ದಿಟ್ಟಿಸಿದ್ದ ಕಣ್ಣುಗಳು, ಒಟ್ಟಾರೆಯಾಗಿ ನನ್ನ ಕಣ್ಣಿಗೆ ಸುಂದರವಾಗೇ ಕಾಣುತ್ತಿದೆ.

08-05-1953ರಲ್ಲಿ ತೆಗೆದಿದ್ದ ಫೋಟೋ - ಒಂದೂವರೆ ವರ್ಷದವನಿದ್ದಾಗ
      ಪ್ರಾಥಮಿಕ ಶಾಲಾದಿನಗಳಲ್ಲಿ ಶಾಲೆಯಲ್ಲಿ ಬುದ್ಧಿವಂತನೆಂದು ಕರೆಸಿಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಕ್ಲಾಸಿಗೆ ಮಾನಿಟರ್ ಆಗುತ್ತಿದ್ದರಿಂದ ನೋಡಲು ಸುಂದರವಾಗಿದ್ದಿರಬಹುದು. ಮೇಷ್ಟ್ರು, ಮೇಡಮ್ಮುಗಳಿಗೆ ವಿಧೇಯನಾಗಿರುತ್ತಿದ್ದರಿಂದಲೂ ಮಾನಿಟರ್ ಮಾಡುತ್ತಿದ್ದರೇನೋ! ಆ ಕಾಲದಲ್ಲಿ ಚಿಕ್ಕ ಹುಡುಗರಾದ ನಾವು ಬಾಹ್ಯ ಸುಂದರತೆಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲವೆಂಬುದು ಸತ್ಯ ಸಂಗತಿ. ಆಟ ಆಡಿ ಕುಣಿದು ಕುಪ್ಪಳಿಸಿ ಮೈ,ಕೈ, ಬಟ್ಟೆಯೆಲ್ಲಾ ಕೊಳೆ ಮಾಡಿಕೊಂಡು ಮನೆಗೆ ಬಂದಾಗ ಅಮ್ಮ ಶುಚಿಗೊಳಿಸಿ ಬೇರೆ ಬಟ್ಟೆ ಹಾಕುತ್ತಿದ್ದಳು. ಆಗ ಈಗಿನಂತೆ ಸರಿಯಾದ ಅಳತೆಯ ಅಂಗಿ-ಚಡ್ಡಿಗಳನ್ನು ಹೊಲೆಸುತ್ತಿರಲಿಲ್ಲ. ಬೆಳೆಯುವ ವಯಸ್ಸೆಂದು ಸ್ವಲ್ಪ ದೊಡ್ಡ ಅಳತೆಯ ಬಟ್ಟೆಯನ್ನೇ ತರುತ್ತಿದ್ದರು. ಹೆಚ್ಚು ಸಮಯ ಬಾಳಿಕೆ ಬರಲಿ ಎಂಬ ಕಾರಣವೂ ಇತ್ತು. ಚಡ್ಡಿ ಬೀಳದಿರಲಿ ಎಂದು >< ಆಕಾರದ ಲಾಡಿಗಳು (ಹಿಂಭಾಗದಿಂದ ಭುಜದ ಮೇಲೆ ಹಾದು ಬಂದು ಮುಂಭಾಗದಲ್ಲಿನ ಲೂಪ್ ಅಥವ ಗುಂಡಿಗಳಿಗೆ ಸೇರಿಸುವ) ಇರುತ್ತಿದ್ದವು. ಅದು ಆಗ ಫ್ಯಾಷನ್ ಅನ್ನಿಸಿಕೊಳ್ಳುತ್ತಿತ್ತು. ತಲೆಯ ಕೂದಲು ಬೇಗ ಬೆಳೆದುಬಿಡುತ್ತದೆ ಎಂದು ವರ್ಷದ ಯಾವುದೇ ಕಾಲದಲ್ಲಿ ಸಮ್ಮರ್ ಕಟ್ ಮಾಡಿಸುತ್ತಿದ್ದರು. ತಿಂಗಳಲ್ಲಿ ೧೦-೧೫ ದಿನ ದಿನಗಳು ತಲೆ ಬಾಚುವ ಪ್ರಮೇಯವೇ ಬರುತ್ತಿರಲಿಲ್ಲ. ಆಗ ರೆಡಿಮೇಡ್ ಬಟ್ಟೆಗಳನ್ನು ಮೂಟೆಯ ಗಂಟಿನಲ್ಲಿ ಕಟ್ಟಿ ಹೊತ್ತು ಬೀದಿಯಲ್ಲಿ ಮಾರಲು ಬರುತ್ತಿದ್ದರು. ಒಂದು ರೂಪಾಯಿಗೆ ಒಂದು ಅಂಗಿ ಸಿಗುತ್ತಿತ್ತು. ಸಾಮಾನ್ಯವಾಗಿ ತೆಗೆದುಕೊಡುತ್ತಿದ್ದ ಅರ್ಧ ತೋಳಿನ ಬಣ್ಣ ಬಣ್ಣದ ಅಂಗಿ ಮತ್ತು ಚಡ್ಡಿಗಳನ್ನು ಸಂಭ್ರಮದಿಂದ ಧರಿಸಿ ಖುಷಿ ಪಡುತ್ತಿದ್ದೆವು. ಇನ್ನೊಂದು ವಿಷಯವೆಂದರೆ ಆಗ ಈಗಿನಂತೆ ಖಾಸಗಿ ಶಾಲೆಗಳು ಇರುತ್ತಿರಲಿಲ್ಲ. ಶ್ರೀಮಂತರು, ಬಡವರು ಎಲ್ಲರೂ ಸರ್ಕಾರಿ ಕನ್ನಡ ಶಾಲೆಗಳಿಗೇ ಮಕ್ಕಳನ್ನು ಕಳಿಸುತ್ತಿದ್ದರು. ೫ನೆಯ ತರಗತಿಯಿಂದ ಎ,ಬಿ,ಸಿ,ಡಿ ಕಲಿಸಲಾಗುತ್ತಿತ್ತು. ಶ್ರೀಮಂತರ ಮಕ್ಕಳು ಠಾಕು-ಠೀಕಾಗಿ ಬರುತ್ತಿದ್ದರೆ ಬಡ ಮಕ್ಕಳು ಹರಕಲು ಬಟ್ಟೆ ಹಾಕಿಕೊಂಡು, ಹರುಕು ಚೀಲದಲ್ಲಿ ಸ್ಲೇಟು-ಬಳಪ ತರುತ್ತಿದ್ದರು. ಮಧ್ಯಮ ವರ್ಗಕ್ಕೆ ಸೇರಿದ ನಮ್ಮಂತಹವರು ಎರಡು ವರ್ಗಗಳ ಮಕ್ಕಳಿಗೂ ಹೊಂದುತ್ತಿದ್ದೆವು.

06-10-1959ರಲ್ಲಿ 8ವರ್ಷದವನಿದ್ದಾಗ ತೆಗೆದ ಫೋಟೋ
     ನಮ್ಮಪ್ಪ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ವರ್ಗಾವಣೆಯಾದಾಗಲೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ವರ್ಗಾವಣೆಯಾದ ಊರಿಗೆ ಹೋಗುತ್ತಿದ್ದೆವು. ಹಾಗಾಗಿ ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಚಿಕ್ಕಮಗಳೂರಿನಲ್ಲಿ, ಮಾಧ್ಯಮಿಕ ಶಾಲೆ ಭದ್ರಾವತಿಯಲ್ಲಿ, ಹೈಸ್ಕೂಲು ಚಿತ್ರದುರ್ಗದಲ್ಲಿ, ಪಿ.ಯು.ಸಿ. ಚಿಕ್ಕಮಗಳೂರಿನಲ್ಲಿ ಆಯಿತು. ನಂತರದಲ್ಲಿ ಅವರಿಗೆ ನರಸಿಂಹರಾಜಪುರಕ್ಕೆ ವರ್ಗವಾದ್ದರಿಂದ ಮತ್ತು ಅಲ್ಲಿ ಕಾಲೇಜು ಇರದಿದ್ದರಿಂದ ಹಾಸನದಲ್ಲಿ ಒಂದು ಬಾಡಿಗೆ ಕೋಣೆಯಲ್ಲಿದ್ದು ಬಿ.ಎಸ್.ಸಿ.ಡಿಗ್ರಿ ಮುಗಿಸಿದೆ. ಹೈಸ್ಕೂಲಿನಲ್ಲಿ ಓದುವಾಗಲೂ ಚಡ್ಡಿ ಧರಿಸುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮನಾಗಿ ತೇರ್ಗಡೆಯಾದಾಗ ಚಿತ್ರದುರ್ಗದ ಪುರಸಭೆಯವರು (ನಾನು ಓದಿದ್ದು ಮುನಿಸಿಪಲ್ ಹೈಸ್ಕೂಲಿನಲ್ಲಿ) ನನಗೆ ಹಾರ ಹಾಕಿ ೫೦ ರೂಪಾಯಿ ಬಹುಮಾನ ಕೊಟ್ಟಿದ್ದರು. ಹೈಸ್ಕೂಲಿನಲ್ಲಿ ಶಾಲಾ ಪ್ರತಿನಿಧಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ನನ್ನ ಪ್ರತಿಸ್ಪರ್ಧಿ ಅಶೋಕನಿಗಿಂತ ಕೇವಲ ಒಂದು ಮತ ಹೆಚ್ಚು ಪಡೆದು ಆಯ್ಕೆಯಾಗಿದ್ದೆ. ನನಗೆ ೫೦ ಮತಗಳು, ಅಶೋಕನಿಗೆ ೪೯ ಮತಗಳು ಬಂದಿದ್ದವು. ೧೨ ಮತಗಳು ಇಬ್ಬರಿಗೂ ಒಟ್ಟಿಗೆ ಹಾಕಲ್ಪಟ್ಟಿದ್ದರಿಂದ ಕುಲಗೆಟ್ಟಿದ್ದವು. ವಿಶೇಷವೆಂದರೆ ನಾನು ನನ್ನ ಮತವನ್ನು ಅಶೋಕನಿಗೆ ಮತ್ತು ಅಶೋಕ ತನ್ನ ಮತವನ್ನು ನನಗೆ ಹಾಕಿದ್ದ! ಆಗ ಕ್ರೀಡಾಮನೋಭಾವ ಹೊಂದಿದ್ದ ನಾವುಗಳು ಚುನಾವಣೆ ನಂತರವೂ ಸ್ನೇಹಿತರಾಗೇ ಇದ್ದೆವು. ಈಗ ಅವನು ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಗೊತ್ತಿಲ್ಲ, ಚಿತ್ರದುರ್ಗ ಬಿಟ್ಟನಂತರ ಪರಸ್ಪರ ಇಬ್ಬರಿಗೂ ಸಂಪರ್ಕವೇ ಆಗಲಿಲ್ಲ.
1965ರಲ್ಲಿ 14 ವರ್ಷದವನಿದ್ದಾಗ ಹೈಸ್ಕೂಲಿನಲ್ಲಿ 'ತ್ರಿಬ್ಬಲ್ ತಾಳಿ' ನಾಟಕವಾಡಿದಾಗ ತೆಗೆದದ್ದು; ಕುರ್ಚಿಯಲ್ಲಿ ಕುಳಿತ ಮೊದಲನೆಯವನು ಅಶೋಕ; ನಾನು ಯಾರು ಊಹಿಸಿ.


ಮಂಗಳವಾರ, ಜುಲೈ 19, 2011

ಮೂಢ ಉವಾಚ - 60

ಸತ್ಯ ಮಿಥ್ಯಗಳರಿತವರು ಹೇಳಿಹರು
ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ |
ಕಾಣಿಪುದ ಕಾರಣವೆ ಕಾಣದಿಹ ಸತ್ಯ
ಕಾಣದುದ ಕಾಣುವುದೆ ಜ್ಞಾನ ಮೂಢ ||


ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು
ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು |
ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು
ಸರಿಯಿರದ ದಾರಿಯಲಿ ಗುರಿ ದೂರ ಮೂಢ ||


ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು |
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ ||


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ |
ಸುಜನವಾಣಿ ಗುರುವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ ||
**************
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 17, 2011

'ಐ ಡೋಂಟ್ ವಾಂಟ್ ಟು ಡೈ'


     ಐದು ವರ್ಷದ ಮಗಳು ಅಂದು ಶಾಲೆಯಿಂದ ಮರಳಿ ಬಂದಾಗ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಗಂಭೀರಳಾಗಿದ್ದಳು. ಮಗಳ ಯೂನಿಫಾರಮ್ ಕಳಚಿ ಬೇರೆ ಬಟ್ಟೆ ಹಾಕುತ್ತಿದ್ದ ತಾಯಿಗೆ ಮಗು ಹೇಳಿತು:
"ಮಮ್ಮಿ, ನನ್ನ ಫ್ರೆಂಡ್ ಪಿಂಕಿ ತಾತ ಸತ್ತು ಹೋದರಂತೆ".
"ಹೌದಾ ಪುಟ್ಟಾ, ಪಾಪ".
"ಮಮ್ಮಿ, ಎಲ್ರೂ ಸಾಯ್ತಾರಾ?"
"ಹೌದು ಪುಟ್ಟಿ, ವಯಸ್ಸಾದ ಮೇಲೆ ಎಲ್ರೂ ಸಾಯ್ತಾರೆ."
"ನನ್ ತಾತಾನೂ ಸಾಯ್ತಾರಾ?"
     ಅಮ್ಮನಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ತನ್ನ ತಂದೆಯ ಸಾವಿನ ಬಗ್ಗೆ ಮಗು ಕೇಳಿದಾಗ ತಕ್ಷಣ ಏನು ಉತ್ತರಿಸಿಯಾಳು? ಸಾವರಿಸಿಕೊಂಡು ಹೇಳಿದಳು:
"ಇನ್ನೂ ತುಂಬಾ ವರ್ಷ ಪುಟ್ಟೂ. ಹಂಡ್ರಡ್ ವರ್ಷ ಆದ ಮೇಲೆ ಎಲ್ರೂ ಸಾಯ್ತಾರೆ. ಈ ವಿಷಯ ಎಲ್ಲಾ ಮಾತಾಡಬಾರದು. ಹೋಗ್ಲಿ ಬಿಡು, ಸ್ಕೂಲಲ್ಲಿ ಇವತ್ತು ಏನು ಹೇಳಿಕೊಟ್ರು?"
     ಮಗು ಪಟ್ಟು ಬಿಡದೆ ಕೇಳಿತು:
'ಮಮ್ಮಿ, ನಾನೂ ಸಾಯ್ತೀನಾ?"
     ಮಗುವಿನ ಬಾಯಿಯ ಮೇಲೆ ಕೈಮುಚ್ಚಿ ತಾಯಿ ಅವಳನ್ನು ಅಪ್ಪಿಕೊಂಡು ಹೇಳಿದಳು:
"ನಾನು ಆಗಲೇ ಹೇಳಲಿಲ್ಲವಾ? ಹೀಗೆಲ್ಲಾ ಮಾತಾಡಬೇಡ. ನಿನಗಿನ್ನೂ ಐದೇ ವರ್ಷ. ಒಳ್ಳೆಯವರು ಸಾಯುವುದಿಲ್ಲ. ಆ ವಿಷಯ ಇನ್ನು ಸಾಕು. ನಡಿ, ಕೈಕಾಲು ಮುಖ ತೊಳೆಸುತ್ತೀನಿ. ಊಟ ಮಾಡುವಂತೆ."
"ಹಾಗಾದ್ರೆ ಸತ್ತೋರೆಲ್ಲಾ ಬ್ಯಾಡ್ ಬಾಯ್ಸಾ?"
     ತಾಯಿ ಏನು ಉತ್ತರಿಸಿಯಾಳು? ಸುಮ್ಮನೆ ಮಗುವನ್ನು ಬಚ್ಚಲಮನೆಗೆ ಕರೆದುಕೊಂಡು ಹೋಗಿ ಮುಖ ತೊಳೆಸಿದಳು. ಬೇರೆ ಬೇರೆ ವಿಷಯ ಮಾತನಾಡಿ ಗಮನ ಬೇರೆಡೆಗೆ ಸೆಳೆಯಲು ಅಮ್ಮನ ಪ್ರಯತ್ನ ಸಾಗಿತ್ತು. ಮಗುವಿನ ಮುಖವನ್ನು ಟವೆಲಿನಿಂದ ಒರೆಸುತ್ತಿದ್ದಾಗ ಮಗು ಮುಂದುವರೆಸಿತು:
"ಮಮ್ಮಿ, ಪ್ಲೀಸ್, ಐ ಡೋಂಟ್ ವಾಂಟ್ ಟು ಡೈ."
     ಮಗುವಿನಲ್ಲಿ ಅಮ್ಮ ಏನಾದರೂ ಮಾಡಲೆಂಬ ನಿರೀಕ್ಷೆಯಿತ್ತು, ಏನಾದರೂ ಮಾಡಬಹುದೆಂಬ ಭರವಸೆಗಾಗಿ ಕಾದಿತ್ತು. ಮಗಳ ಮಾತು ಕೇಳಿ ಅವಾಕ್ಕಾದ ಅಮ್ಮನ ಕಣ್ಣಂಚಿನಲ್ಲಿ ನೀರು ತುಳುಕಿತು. ಮಗುವನ್ನು ಅಪ್ಪಿ ಬಿಗಿಯಾಗಿ ಹಿಡಿದುಕೊಂಡಳು.
"ಇಲ್ಲಾ ಕಂದಾ, ನೀನು ಸಾಯುವುದಿಲ್ಲ. ನಿನ್ನನ್ನು ನಾನು ಸಾಯಲು ಬಿಡುವುದಿಲ್ಲ. ನೀನು ಸಾಯುವುದೇ ಇಲ್ಲ. ಏಕೆಂದರೆ ನೀನು ಒಳ್ಳೆಯವಳು. ನೀನು ತುಂಬಾ, ತುಂಬಾ, ತುಂಬಾ ಗುಡ್ ಗರ್ಲ್."
     ಹೀಗೆ ಹೇಳುತ್ತಾ ಮಗುವನ್ನು ಮುದ್ದಿಸಿದಾಗ ಮಗುವಿಗೆ ಸಮಾಧಾನವಾಗಿತ್ತು, ಸಂತೋಷವಾಗಿತ್ತು. ಸ್ಕೂಲಿನ ಅಂದಿನ ಆಟ ಪಾಠದ ಬಗ್ಗೆ ಕಣಿ ಹೇಳಲು ಶುರು ಮಾಡಿತು.
(ಚಿತ್ರ ಕೃಪೆ: ಅಂತರ್ಜಾಲದಿಂದ)
**********************
-ಕ.ವೆಂ.ನಾಗರಾಜ್.

ಶನಿವಾರ, ಜುಲೈ 16, 2011

ಮೂಢ ಉವಾಚ - 59

ಜೀವನ್ಮುಕ್ತ

ಅಹಮಿಕೆಯ ಅಂತ್ಯವದು ಅರಿವಿನ ಶಿಖರ
ವಿಷಯವಾಸನೆಯ ಕೊನೆ ವಿರಾಗ ಪ್ರಖರ |
ಭೂತವದು ಕಾಡದು ಭವಿಷ್ಯದ ಭಯವಿಲ್ಲ
ಜೀವನ್ಮುಕ್ತನವ ನಿರ್ವಿಕಾರಿ ಮೂಢ ||

ಸುಖ-ದುಃಖ
ಸುಖವನಾಳೆ ಭೋಗಿ ಮನವನಾಳೆ ಯೋಗಿ
ಸುಖವನುಂಡೂ ದುಃಖಪಡುವವನೆ ಭೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ಸುಖ ಬಯಸದಿರೆ ದುಃಖವೆಲ್ಲಿ ಮೂಢ ||

ಸಮಸ್ಯೆ
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢ ||


ಗುರು
ಗುರುಹಿರಿಯರನನುಸರಿಸಿ ಜನರು ಸಾಗುವರು
ಗುರುವು ಸರಿಯೆನಲು ಜನರಿಗದು ಸರಿಯು |
ಗುರುವಿಗಿಹುದು ಗುರುತರದ ಹೊಣೆಯು
ಎಡವದಲೆ ನಡೆಯಬೇಕವನು ಮೂಢ ||
**************
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 14, 2011

ಉತ್ತರ ಸಿಕ್ಕಿತು!

    
     ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************

ಮಂಗಳವಾರ, ಜುಲೈ 5, 2011

ಮೂಢ ಉವಾಚ - 58

ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ ||


ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು |
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನು ಮೂಢ ||


ತಪನಿರತಗಾಸಕ್ತಿ ಕಾಮಿತಫಲದಲಿ
ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ |
ಕರ್ಮಿಗಿಹುದಾಸಕ್ತಿ ಬರುವ ಫಲದಲಿ
ಯೋಗಿಗಾಸಕ್ತಿ ಪರಮಪದದಲ್ಲಿ ಮೂಢ ||


ಫಲವ ಬಯಸದೆ ಮಾಡುವನು ಕರ್ಮ
ಸಮಚಿತ್ತದೆಸಗಿದ ಮಮರಹಿತ ಕರ್ಮ |
ರಾಗ ರೋಷಗಳ ಸೋಂಕಿರದ ಕರ್ಮ
ಕರ್ಮಯೋಗಿಯ ಮರ್ಮವಿದುವೆ ಮೂಢ ||
******************
-ಕ.ವೆಂ.ನಾಗರಾಜ್.