ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಜುಲೈ 24, 2011

ಮೂಢ ಉವಾಚ - 61

ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ
ಶಾಶ್ವತವದೊಂದೆ ಸಚ್ಚಿದಾನಂದ ಭಾವ |
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ
ಭದ್ರಪದವೊಲಿಯುವುದು ಮೂಢ ||

ಸತ್ಯಧರ್ಮಕೆ ಹೆಸರು ಕೋದಂಡರಾಮ
ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ |
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ ||


ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ |
ದಾರಿ ಹಲವಿರಲು ಗುರಿಯದು ಒಂದೆ
ಮನ ತೋರ್ವ ದಾರಿಯಲಿ ಸಾಗು ಮೂಢ ||


ಬೆಳಕಿರುವ ತಾಣದಲಿ ತಮವು ಇದ್ದೀತೆ
ಅರಿವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ |
ಅರಿವು ಬರಲಾಗಿ ತರತಮವು ಮಾಯ
ಅಭೇದಭಾವಿ ಅಮರನಲ್ಲವೆ ಮೂಢ ||
***************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ