ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 19, 2011

ಮೂಢ ಉವಾಚ - 60

ಸತ್ಯ ಮಿಥ್ಯಗಳರಿತವರು ಹೇಳಿಹರು
ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ |
ಕಾಣಿಪುದ ಕಾರಣವೆ ಕಾಣದಿಹ ಸತ್ಯ
ಕಾಣದುದ ಕಾಣುವುದೆ ಜ್ಞಾನ ಮೂಢ ||


ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು
ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು |
ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು
ಸರಿಯಿರದ ದಾರಿಯಲಿ ಗುರಿ ದೂರ ಮೂಢ ||


ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು |
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ ||


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ |
ಸುಜನವಾಣಿ ಗುರುವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ ||
**************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ