ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 30, 2010

ಮೂಢ ಉವಾಚ -31

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆಂಬುದು ಜ್ಞಾನ|
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ ಮಾನ್ಯ ಮೂಢ||


ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು|
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||


ಪ್ರೀತಿಯಂದಲೆ ನಲಿವು ಪ್ರೀತಿಯಿಂದಲೆ ನೋವು
ಪ್ರೀತಿಯಂದಲೆ ರಕ್ಷೆ ಪ್ರೀತಿಯಿಂದಲೆ ಭಯವು|
ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ
ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ||


ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು
ದುಃಖ ಭಯಗಳೆಲ್ಲಿ ಆಸೆಗಳ ತೊರೆದವಗೆ|
ಸಂತಸದ ಬೆನ್ನೇರಿ ದುಃಖ ಭಯ ಬರದಿರದೆ
ಬುದ್ಧವಾಣಿಯಿದು ಮರೆಯದಿರು ಮೂಢ||
***************
-ಕವಿನಾಗರಾಜ್.

ಸೇವಾ ಪುರಾಣ -27:ಜೈಲಿನ ಕೈದಿಯಾಗಿದ್ದವನು ಜೈಲು ಸೂಪರಿಂಟೆಂಡೆಂಟ್ ಆದದ್ದು

ಒಳಗೂ ನರಸಿಪುರ, ಹೊರಗೂ ನರಸಿಪುರ
     ತ್ರಿಕುಟಾಚಲವೆಂದು ಕರೆಯಲ್ಪಡುತ್ತಿದ್ದ ಹೊಳೆನರಸಿಪುರ ಪ್ರಸಿದ್ಧ ಹೇಮಾವತಿ ನದಿ ತಟದಲ್ಲಿರುವುದರಿಂದ ಮತ್ತು ಲಕ್ಷ್ಮಿನರಸಿಂಹನ ಭವ್ಯ ದೇವಾಲಯದ ಕಾರಣದಿಂದ ಊರಿಗೆ ನರಸಿಂಹಪುರ, ನರಸಿಪುರ, ಹೊಳೆನರಸಿಪುರ ಎಂಬ ಹೆಸರು ಬರಲು ಕಾರಣವಾಗಿದೆ. ಒಂದೊಮ್ಮೆ ಐತಿಹಾಸಿಕವಾಗಿ, ಪೌರಾಣಿಕವಾಗಿ, ಧಾರ್ಮಿಕವಾಗಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಗರವಾಗಿದ್ದ ಈ ಹೊಳೆನರಸಿಪುರ ಎಂದರೆ ಈಗ ಎಲ್ಲರಿಗೂ ನೆನಪಿಗೆ ಬರುವುದೆಂದರೆ ಅಲ್ಲಿನ ರಾಜಕೀಯ. ಇಷ್ಟವಿರಲಿ ಇಲ್ಲದಿರಲಿ ಆ ತಾಲ್ಲೂಕಿನ ಜನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯದ ಝಳ ತಾಕುತ್ತಲೇ ಇರುತ್ತದೆ. ಇಂತಹ ಸ್ಥಿತಿಗೆ ಕಾರಣಕರ್ತರಾದವರ ಬಗ್ಗೆ ಹೊಸದಾಗಿ ತಿಳಿಸುವ ಅಗತ್ಯ ಕಾಣುವುದಿಲ್ಲ. ಒಂದೊಂದು ಊರಿಗೆ ಅದರದೇ ಆದ ವೈಶಿಷ್ಟ್ಯವಿರುತ್ತದೆ, ಉದಾ: ಕಳ್ಳ ಅರಸಿಕೆರೆ, ಸುಳ್ಳು ಬಾಣಾವರ, ಹೊನ್ನಾಳಿ ಹೊಡೆತ, ಇತ್ಯಾದಿಗಳಂತೆ ಹೊಳೆನರಸಿಪುರಕ್ಕೆ ಒಳಗೂ ನರಸಿಪುರ, ಹೊರಗೂ ನರಸಿಪುರ ಎಂಬ ಖ್ಯಾತಿ ಅಂಟಿಕೊಂಡಿದೆ. ಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರನ ವಿರುದ್ಧ ಆತನ ಆಪ್ತರೇ ಸಂಚು ಹೂಡಿ ಪಕ್ಕದ ಸಾಮಂತನೊಂದಿಗೆ ಕೈಜೋಡಿಸಿ ಯುದ್ಧ ನಡೆಯುವಂತೆ ಮಾಡಿದ್ದರು. ಪಾಳೆಯಗಾರ ಕೋಟೆಯ ರಕ್ಷಣೆಗಾಗಿ ಹೋರಾಡಲು ನೋಡಿದರೆ ವಿರುದ್ಧವಾಗಿ ಕಾದಾಡುವವರ ಜೊತೆಗೆ ನರಸಿಪುರದ ಸೈನಿಕರೂ ಇದ್ದರು. ತಮ್ಮವರ ಜೊತೆಗೆ ತಮ್ಮವರೇ ಕಾದಾಡಬೇಕಾಗಿ ಬಂದ ಪ್ರಸಂಗದಿಂದ ಒಳಗೂ ನರಸಿಪುರ, ಹೊರಗೂ ನರಸಿಪುರ ಎಂಬ ಮಾತು ಆಗ ಚಾಲ್ತಿಗೆ ಬಂದಿತು. ರಾಜಕೀಯ ನಾಯಕರುಗಳ ನಡವಳಿಕೆಗಳು ಈ ಮಾತಿಗೆ ಪುಷ್ಟಿ ನೀಡುತ್ತಿದೆಯಲ್ಲವೇ? ಈ ಖ್ಯಾತಿಯ ಹೊಳೆನರಸಿಪುರ ನನಗೆ ಅನೇಕ ರೀತಿಯ ಅನುಭವಗಳನ್ನು ನೀಡಿದ ಊರು.
ಜೈಲಿನ ಕೈದಿಯಾಗಿದ್ದವನು ಜೈಲು ಸೂಪರಿಂಟೆಂಡೆಂಟ್ ಆದದ್ದು
     ಹೊಳೆನರಸಿಪುರದ ತಾಲ್ಲೂಕು ಕಛೇರಿಯಲ್ಲಿ ಉಪತಹಸೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾದಾಗ ನನಗೆ ಇನ್ನೊಂದು ಜವಾಬ್ದಾರಿ ಸಹ ನಿರ್ವಹಿಸಬೇಕಾಯಿತು. ಅದೆಂದರೆ ಹೊಳೆನರಸಿಪುರದ ಜೈಲಿನ ಸೂಪರಿಂಟೆಂಡೆಂಟ್ ಕೆಲಸ. ಆಗ ಕರ್ನಾಟಕದಲ್ಲಿದ್ದ ಜೈಲುಗಳ ಪೈಕಿ ೨೨ ಉಪಕಾರಾಗೃಹಗಳನ್ನು ಕಂದಾಯ ಇಲಾಖೆಯ ಮೇಲ್ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಪೈಕಿ ಹೊಳೆನರಸಿಪುರದ ಕಾರಾಗೃಹವೂ ಒಂದಾಗಿತ್ತು. ಉಪತಹಸೀಲ್ದಾರರು ಪದನಿಮಿತ್ತ ಜೈಲು ಸೂಪರಿಂಟೆಂಡೆಂಟ್ ಆಗಿರುತ್ತಿದ್ದರು. ಆ ಕೆಲಸಕ್ಕಾಗಿ ಅವರಿಗೆ ಗೌರವ ವೇತನವಾಗಿ ತಿಂಗಳಿಗೆ ೨೫ ರೂ. ಕೊಡಲಾಗುತ್ತಿತ್ತು. ಅವರಿಗೆ ಸಹಾಯಕನಾಗಿ ಒಬ್ಬ ತಾಲ್ಲ್ಲೂಕು ಕಛೇರಿಯ ನೌಕರರ ಸೇವೆಯನ್ನೇ ಬಳಸಿಕೊಳ್ಳಬೇಕಾಗಿದ್ದು ಅದಕ್ಕಾಗಿ ಆ ಸಹಾಯಕನಿಗೆ ಹತ್ತು ರೂ. ಸಂಭಾವನೆ ಕೊಡಲಾಗುತ್ತಿತ್ತು. ೧೩ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಿದ ೬ ತಿಂಗಳು ಜೈಲಿನಲ್ಲಿ ಕಳೆದಿದ್ದ ಕೈದಿಯೊಬ್ಬ ಜೈಲಿನ ಸುಪರಿಂಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುವ ಅವಕಾಶ ಎಲ್ಲರಿಗೂ ಸಿಗಲಾರದು. ಅಂತಹ ಅವಕಾಶ ನನಗೆ ಒದಗಿತ್ತು. ಜೈಲಿನ ಗಾರ್ಡುಗಳು ಪೋಲಿಸ್ ಇಲಾಖೆಯಿಂದ ಎರವಲು ಸೇವೆಯ ಮೇಲೆ ಕೆಲಸ ಮಾಡುತ್ತಿದ್ದರು. ಕೈದಿಗಳಿಗೆ ಆಹಾರ ಸಾಮಗ್ರಿಗಳನ್ನು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಒದಗಿಸುತ್ತಿದ್ದರು. ಒಟ್ಟಿಗೆ ಎಂಟು ಕೈದಿಗಳಿಗೆ ಅಲ್ಲಿ ಸ್ಥಳಾವಕಾಶವಿತ್ತು.
ಪ್ರಾರಂಭಿಕ ಸಂಘರ್ಷ
     ಜೈಲಿನ ಗಾರ್ಡುಗಳು ಪೋಲಿಸ್ ಇಲಾಖೆಯವರಾಗಿದ್ದು ಠಾಣೆಯ ಸಬ್ ಇನ್ಸ್‌ಪೆಕ್ಟರರು ಸರತಿಯಂತೆ ಅವರನ್ನು ಬದಲಾಯಿಸುತ್ತಿದ್ದರು. ಗಾರ್ಡುಗಳ ವೇತನ ಠಾಣೆಯಲ್ಲಿಯೇ ಪಾವತಿಯಾಗುತ್ತಿತ್ತು. ಹೀಗಾಗಿ ಆಡಳಿತಾತ್ಮಕವಾಗಿ ಅವರನ್ನು ನಿಯಂತ್ರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೆಚ್ಚಾಗಿ ಜೈಲಿನ ಕೆಲಸ ಮಾಡಲು ಪೋಲಿಸರು ಇಷ್ಟಪಡುತ್ತಿರಲಿಲ್ಲ. ನಾನು ಜೈಲಿನ ಅಧೀಕ್ಷಕನಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಗಾರ್ಡುಗಳ ಕುಮ್ಮಕ್ಕಿನೊಂದಿಗೆ ಅಲ್ಲಿನ ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕೊಡುತ್ತಿದ್ದ ಆಹಾರ ಕಡಿಮೆ ಮತ್ತು ಕಳಪೆ ಎಂಬ ಕಾರಣದಿಂದ ಅಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದ ಕೈದಿಗಳನ್ನು ಅವರು ಬರುವುದಿಲ್ಲ ಎಂದು ಹೇಳುತ್ತಿದ್ದಾರೆಂದು ಗಾರ್ಡುಗಳು ನನಗೆ ತಿಳಿಸಿದರು. ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವುದು ಪೋಲಿಸರಿಗೆ ಕಷ್ಟವೇನಾಗಿರಲಿಲ್ಲ. ಆದರೆ ಅವರದೇ ಕುಮ್ಮಕ್ಕಿದ್ದುದರಿಂದ ಕರೆದೊಯ್ದಿರಲಿಲ್ಲ ಎಂದು ನನಗೆ ಅರ್ಥವಾಗಿತ್ತು. ಒಳ ಉದ್ದೇಶ ಜೈಲು ಸುಪರಿಂಟೆಂಡೆಂಟರು ತಾವು ಹೇಳಿದಂತೆ ಕೇಳುವಂತೆ ಮಾಡಬೇಕೆಂಬುದಾಗಿತ್ತು. ತಹಸೀಲ್ದಾರರ ಮಧ್ಯಪ್ರವೇಶಕ್ಕೆ ನಾನು ಕೋರಿದರೆ ಅವರು ನೀನುಂಟು, ನಿನ್ನ ಜೈಲುಂಟು ಎಂದಿದ್ದರು. ಮಧ್ಯಾಹ್ನದ ವೇಳೆಗೆ ನ್ಯಾಯಾಲಯದಿಂದ ನನಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಇದ್ದುದಕ್ಕೆ ಕಾರಣ ವಿವರಿಸಲು ನೋಟೀಸು ಬಂದಿತು. ನಾನು ಅಂದು ಸಾಯಂಕಾಲವೇ ನ್ಯಾಯಾಲಯದ ಕಲಾಪ ಮುಗಿದ ನಂತರ ನ್ಯಾಯಾಧೀಶರ ಅನುಮತಿ ಪಡೆದು ಅವರನ್ನು ಅವರ ಛೇಂಬರಿನಲ್ಲೇ ಭೇಟಿ ಮಾಡಿ ವಿವರಣೆ ನೀಡಿದೆ. ನಾನು ಆಗಿನ್ನೂ ಅಧಿಕಾರ ವಹಿಸಿಕೊಂಡಿದ್ದು ಸಂಬಂಧಿಸಿದವರೊಂದಿಗ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿಯೂ, ವಿಷಯ ಮುಂದುವರೆಸಬಾರದೆಂದು ಮಾಡಿಕೊಂಡ ಮನವಿಯನ್ನು ಅವರು ಪುರಸ್ಕರಿಸಿದರು. ಅಲ್ಲಿಂದ ಬಂದವನೇ ಪೋಲಿಸ್ ಇನ್ಸ್‌ಪೆಕ್ಟರರನ್ನು ಕಂಡು ಮಾತನಾಡಿದೆ. ವಿಷಯ ಅರಿತ ಅವರು ಗಾರ್ಡುಗಳಿಗೆ ಗದರಿಸಿದರಲ್ಲದೆ ಜೈಲಿನಲ್ಲಿದ್ದ ಕೈದಿಗಳಿಗೆ ಪೋಲಿಸ್ ಭಾಷೆಯಲ್ಲೇ ಧಮಕಿ ಹಾಕಿದಾಗ ಅವರು ತೆಪ್ಪಗಾದರು ಮತ್ತು ಸತ್ಯಾಗ್ರಹ(?) ಮುಗಿಸಿದರು. ನಂತರ ಆಹಾರ ಸರಬರಾಜು ಮಾಡುವ ಗುತ್ತಿಗೆದಾರನನ್ನು ಕರೆದು ವಿಚಾರಿಸಿದೆ. ಸರಬರಾಜಾಗುವ ಆಹಾರ ಸಾಮಗ್ರಿಗಳಲ್ಲಿ ಪೋಲಿಸರಿಗೂ ಭಾಗ ಕೊಡಬೇಕಾಗಿದ್ದ ಬಗ್ಗೆ ಆತ ತಿಳಿಸಿದ. ಈ ಸಂಗತಿ ನನ್ನ ಅನುಭವದಿಂದಲೇ ತಿಳಿದಿದ್ದ ನಾನು ಕಟ್ಟುನಿಟ್ಟಾಗಿ ಯಾವುದೇ ಕಾರಣಕ್ಕೂ ಕೈದಿಗಳಿಗೆ ಕೊಡಬೇಕಾದ ಪ್ರಮಾಣ ಕಡಿತವಾಗಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ ನನ್ನ ಗುಮಾಸ್ತರಿಗೆ ಖುದ್ದಾಗಿ ಅಳತೆ/ತೂಕ ಮಾಡಿಸಿ ಒಳ್ಳೆಯ ಸಾಮಗ್ರಿ ಪಡೆದು ಕೈದಿಗಳಿಗೆ ಒದಗಿಸುವಂತೆ ಆದೇಶ ಮಾಡಿದೆ. ಪ್ರಾರಂಭದಲ್ಲಿ ಅಸಮಾಧಾನ, ಅಸಹಕಾರಗಳನ್ನು ಎದುರಿಸಬೇಕಾಯಿತಾದರೂ ಕ್ರಮೇಣ ಎಲ್ಲಾ ಸರಿಯಾಯಿತು.
(ಕಾಲಘಟ್ಟ:1982).

ಸೋಮವಾರ, ನವೆಂಬರ್ 29, 2010

ಮೂಢ ಉವಾಚ -30

ಪರರ ಮೆಚ್ಚಿಸಲು ಸಾಧ್ಯವೇ ಜಗದೊಳು
ಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು|
ತಾಳುವವ ದುರ್ಬಲ ಗಟ್ಟಿಗ ಕ್ರೂರಿಯೊಲು
ಕಾಣಲಚ್ಚರಿ ಪಡುವುದೇಕೋ ಮೂಢ ||


ಜೀವನದಲರ್ಧ ನಿದ್ದೆಯಲಿ ಕಳೆಯುವೆ
ಕಾಲುಭಾಗ ಬಾಲ್ಯ ಮುಪ್ಪಿನಲಿ ಕಳೆಯೆ|
ಕಷ್ಟ ಕೋಟಲೆ ಕಾಯಿಲೆ ಉದರಭರಣೆಗೆ
ಕಳೆದುಳಿದ ಬಾಳು ಹಾಳಾಗದಿರಲಿ ಮೂಢ||


ಒಂದು ಕಾಲದ ಭವ್ಯ ನಗರ ರಾಜರುಗಳೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ|
ಆ ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಮ್ಮ ಕಥೆಯದೇನು ಹೊರತೆ ಮೂಢ||


ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು|
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲಿಹರು ತಿಳಿಯೋ ಮೂಢ||
***************
-ಕವಿನಾಗರಾಜ್.

ಶನಿವಾರ, ನವೆಂಬರ್ 27, 2010

ಮೂಢ ಉವಾಚ -29: ಮುಪ್ಪು

ಮದಭರಿತ ಯೌವನವ ಮುಪ್ಪು ತಿನ್ನುವುದು
ಸಾಕೆಂಬ ಭಾವವನು ಬೇಕೆಂಬುದಳಿಸುವುದು|
ಗುಣವನಸೂಯೆ ತಿನ್ನುವುದು ಒಂದನಿನ್ನೊಂದು
ನುಂಗದಿರುವುದಿದೆಯೇ ಜಗದಿ ಮೂಢ||


ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು
ಮುಪ್ಪು ಬಂದಡರಿ ಕೈಕಾಲು ನಡುಗಿಹುದು|
ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು
ತೀರದಿಹ ಆಸೆಗೆ ಮುಪ್ಪಿಲ್ಲವೋ ಮೂಢ||


ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಂದವಾಗಿರಲು|
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ||


ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು|
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ||
****************
-ಕವಿನಾಗರಾಜ್.

ಶುಕ್ರವಾರ, ನವೆಂಬರ್ 26, 2010

ಸೇವಾಪುರಾಣ -26: ಮುಳುವಾದ ಹಣದ ದಾಹ

     ಅಭಿವೃದ್ಧಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನನ್ನ ಮದುವೆ ಆಯಿತು. ಒಂದೆರಡು ವರ್ಷಗಳಲ್ಲಿ ನನಗೆ ಉಪತಹಸೀಲ್ದಾರನಾಗಿ ಬಡ್ತಿ ಸಿಕ್ಕಿ ಮೈಸೂರು ಭೂಸುಧಾರಣೆ ವಿಶೇಷ ತಹಸೀಲ್ದಾರರ ಕಛೇರಿಗೆ ವರ್ಗಾವಣೆ ಆಯಿತು. ಮೈಸೂರಿನಲ್ಲಿ ಮನೆ ಬಾಡಿಗೆಗೆ ಹಣ ಜಾಸ್ತಿಯೆಂಬ ಕಾರಣದಿಂದ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಮನೆ ಬಾಡಿಗೆಗೆ ಹಿಡಿದು ಅಲ್ಲಿಂದ ಮೈಸೂರಿಗೆ ಓಡಾಡುತ್ತಿದ್ದೆ. ಮೈಸೂರಿನಲ್ಲಿ ಕೇವಲ ಎಂಟು ತಿಂಗಳು ಕೆಲಸ ಮಾಡಿದ್ದು, ವಿಶೇಷ ತಹಸೀಲ್ದಾರರ ಕಛೇರಿ ರದ್ದಾದ ಕಾರಣ ಅಲ್ಲಿಂದ ವರ್ಗಾವಣೆಯಾಗಿ ಹೊಳೆನರಸಿಪುರಕ್ಕೆ ಉಪತಹಸೀಲ್ದಾರನಾಗಿ ಬಂದೆ.
ಮುಳುವಾದ ಹಣದ ದಾಹ
     ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಒಂದು ಘಟನೆ ನೆನಪಿನಲ್ಲಿದೆ. ತಾಲ್ಲೂಕು ಕಛೇರಿ ಮತ್ತು ವಿಶೇಷ ತಹಸೀಲ್ದಾರರ ಕಛೇರಿ ಒಂದೇ ಕಟ್ಟಡದಲ್ಲಿದ್ದವು. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ ಕುಳಿತು ಕೆಲಸ ಮಾಡುತ್ತಿದ್ದ ಸ್ಥಳವಿತ್ತು. ಒಮ್ಮೆ ಒಬ್ಬರು ಯಾವುದೋ ಧೃಢೀಕರಣ ಪತ್ರದ ಸಲುವಾಗಿ ಕೇಶವನನ್ನು ಕಾಣಲು ಬಂದಿದ್ದರು. ಕೆಲಸ ಮಾಡಿಕೊಡಲು ಕೋರಿದ ವ್ಯಕ್ತಿ ಕೇಶವನಿಗೆ ೫೦ ರೂಪಾಯಿ ಕೊಟ್ಟರು. ಕೇಶವ ತಿರಸ್ಕಾರದಿಂದ ಆ ನೋಟನ್ನು ಅವರ ಮುಖಕ್ಕೇ ವಾಪಸು ಎಸೆದ. ನೋಟು ಕೆಳಗೆ ಬಿತ್ತು. ಆ ವ್ಯಕ್ತಿ ನೋಟನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಕೇಶವನನ್ನು ಉದ್ದೇಶಿಸಿ "ಹಣವನ್ನು ಹೀಗೆಲ್ಲಾ ಎಸೆಯಬೇಡಿ. ಅದು ಲಕ್ಷ್ಮಿ. ನಿಮಗೆ ಅನ್ನ ಕೊಡುವ ದೇವರು. ನಿಮಗೆ ಹೆಚ್ಚು ಹಣ ಬೇಕಾದರೆ ಕೇಳಿ. ಕೊಡುತ್ತೇನೆ. ಐವತ್ತಲ್ಲದಿದ್ದರೆ ಐನೂರು ಕೊಡುತ್ತೇನೆ. ಈಗ ನನ್ನಲ್ಲಿ ನೂರು ರೂ. ಇದೆ. ಉಳಿದ ನಾಲ್ಕು ನೂರು ನಾಳೆ ಬೆಳಿಗ್ಗೆ ಕೊಡುತ್ತೇನೆ. ಅದರೆ ಒಂದು ಷರತ್ತು. ನಾಳೆ ಬೆಳಿಗ್ಗೆ ಬರುವಾಗ ಯಾವುದೇ ನೆಪ ಹೇಳದೆಂತೆ ನನ್ನ ಕೆಲಸ ಆಗಿರಬೇಕು" ಎಂದು ಹೇಳಿ ನೂರು ರೂ. ಕೊಟ್ಟರು. ಕೇಶವ ಹಣ ಇಟ್ಟುಕೊಂಡ. ವ್ಯಕ್ತಿ ಮರುದಿನ ಬರುವುದಾಗಿ ಹೊರಟುಹೋದರು. ಮರುದಿನ ಬೆಳಿಗ್ಗೆ -ಸುಮಾರು ೧೦-೪೫ ಗಂಟೆ ಇರಬಹುದು_ ಆ ವ್ಯಕ್ತಿ ಬಂದರು. "ಹೇಳಿದ ಕೆಲಸ ಆಗಿದೆಯಾ?" ಎಂದು ಕೇಳಿದರು. ಕೇಶವ ಆಗಿದೆಯೆಂದಾಗ ನಾಲ್ಕು ನೂರು ರೂ. ಕೊಟ್ಟರು. ಕೇಶವ ಆ ಹಣ ಪಡೆಯುತ್ತಿದ್ದಂತೆ, ಹಣ ಅವನ ಕೈಯಲ್ಲಿದ್ದಂತೆ ಧಿಢೀರನೆ ಇಬ್ಬರು ಹಾರಿಬಂದು ಕೇಶವನ ಎರಡೂ ಕೈಗಳನ್ನು ಹಿಡಿದುಕೊಂಡರು. ಅವರು ಲೋಕಾಯುಕ್ತ ಪೋಲೀಸರಾಗಿದ್ದರು. ಕೇಶವ ಬಿಳಿಚಿಹೋಗಿದ್ದ, ಮರಗಟ್ಟಿಹೋಗಿದ್ದ. ಅನುಕಂಪದ ಆಧಾರದಲ್ಲಿ ನೇಮಕ ಹೊಂದಿದ್ದ ಆತ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತಷ್ಟೇ. ಆತನ ದುರಾಸೆ, ಅಹಂಕಾರ ಅವನಿಗೇ ಮುಳುವಾಗಿತ್ತು.
(ಕಾಲಘಟ್ಟ: 1981, ಮೈಸೂರು).

ಬುಧವಾರ, ನವೆಂಬರ್ 24, 2010

ಮೂಢ ಉವಾಚ -28: ದೇಹ-2

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದಾದರೂ ಹೇಗೆ?|
ಶುದ್ಧ ಬುದ್ಧಿಯಲಿ ನೋಡೆ ತಿಳಿಯುವುದು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ||


ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮ ನೀನಲ್ಲದೆ
ತನುವು ನೀನಲ್ಲವೆಂಬುದರಿಯೋ ಮೂಢ||


ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ?|
ಬಸವಳಿಯದಿರಳಿವ ದೇಹದಭಿಮಾನದಲಿ
ಜೀವರಹಸ್ಯವನರಿತವನೆ ಜ್ಞಾನಿ ಮೂಢ||


ಪರಮಾತ್ಮ ರಚಿಸಿಹನು ನವರಸದರಮನೆಯ
ನಡೆದಾಡುವೀ ಮಹಲಿನರಸನೆ ಜೀವಾತ್ಮ|
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
ಇಂದ್ರಿಯಗಳು ಕಾವಲಿಗಿಹವು ಮೂಢ||
****************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 23, 2010

ಮೂಢ ಉವಾಚ -27: ದೇಹ

ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ|
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು ನಾನೆನಲೆ ಮೂಢ||


ಈ ದೇಹವೆಂಬುದನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ|
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ||


ತನುವು ಸುಂದರವೆಂದು ಉಬ್ಬದಿರು ಮನುಜ
ಹೊಳೆವ ಚರ್ಮದೊಳಗಿಹುದು ಹೊಲಸು|
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ||


ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು|
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ||
****************
-ಕವಿನಾಗರಾಜ್.

ಸೋಮವಾರ, ನವೆಂಬರ್ 22, 2010

ಸೇವಾ ಪುರಾಣ -25: ಮರಳಿ ಹಾಸನಕ್ಕೆ -3: ವಿಷಾದ ಉಳಿಯಿತು

ವಿಷಾದ ಉಳಿಯಿತು!
     ಅಮಾನತ್ತಾಗಿದ್ದ ಅವಧಿಯಲ್ಲಿ ಪೋಲಿಸ್ ಕೇಸುಗಳು ಬಿಟ್ಟರೆ ನನ್ನ ವಿರುದ್ಧ ಯಾವುದೇ ಇಲಾಖಾ ವಿಚಾರಣಾ ಪ್ರಕರಣಗಳನ್ನು ದಾಖಲಿಸಿರಲಿಲ್ಲ. ಹೀಗಾಗಿ ಕೇಸುಗಳು ನನ್ನ ಪರವಾಗಿ ಮುಗಿದ ನಂತರ ನಿಂತಿದ್ದ ನನ್ನ ಬಾಕಿ ವೇತನ, ವಾರ್ಷಿಕ ವೇತನ ಬಡ್ತಿಗಳನ್ನು ಕೊಡುವಂತೆ ಮನವಿ ಸಲ್ಲಿಸಿ ಹಿರಿಯ ವಯಸ್ಸಿನ ಸಿಬ್ಬಂದಿ ಗುಮಾಸ್ತರನ್ನು ಬೇಗ ಕೆಲಸ ಮಾಡಿಕೊಡುವಂತೆ ಕೋರಿದೆ. ನನಗೆ ಸುಮಾರು ನಾಲ್ಕು ವರ್ಷಗಳ ಬಾಕಿ ಬರಬೇಕಿತ್ತು. ಅವರು ನನ್ನಿಂದ ಹಣ ಬಯಸಿದ್ದರೋ, ಯಾವ ಕಾರಣಕ್ಕೋ ಬೇಗ ಕೆಲಸ ಮಾಡಿಕೊಡಲಿಲ್ಲ. ಕೇಳಿದಾಗಲೆಲ್ಲಾ ಕೆಲಸ ಜಾಸ್ತಿಯಿದೆ. ೮ ದಿನಗಳ ಒಳಗೆ ಮಾಡಿಕೊಡುತ್ತೇನೆ ಎಂತಲೇ ಹೇಳುತ್ತಿದ್ದರು. ನಾನೂ ಅವರು ಹೇಳಿದ ದಿನಗಳವರೆಗೆ ಕಾಯ್ದು ಭೇಟಿ ಮಾಡಿದರೆ ಪುನಃ ಸಬೂಬು ಹೇಳುತ್ತಿದ್ದರು. ಈ ರೀತಿ ಸುಮಾರು ಒಂದು ವರ್ಷದವರೆಗೆ ಸತಾಯಿಸಿದರು. ಅಲ್ಲಿಯವರೆಗೆ ನಾನು ತಾಳ್ಮೆಯಿಂದಲೇ ಅವರು ಹೇಳಿದ್ದನ್ನು ಕೇಳಿ ತಪ್ಪದೆ ಕೆಲಸ ಮಾಡಿಕೊಡುವಂತೆ ಕೋರುತ್ತಲೇ ಇದ್ದೆ ಮತ್ತು ಅವರು ಹೇಳಿದ ದಿನ ಬಂದು ವಿಚಾರಿಸುತ್ತಲೇ ಇದ್ದೆ. ಅಕ್ಕಪಕ್ಕ ಇದ್ದ ಗುಮಾಸ್ತರುಗಳು ಇದನ್ನು ನೋಡಿ ಸುಮ್ಮನಿರುತ್ತಿದ್ದರು. ನಂತರದಲ್ಲಿ ಒಂದು ದಿನ ಅವರು ಉದಾಸೀನದಿಂದ ಇದೇ ಉತ್ತರ ನೀಡಿದಾಗ ನನಗೆ ಕೆರಳಿಹೋಯಿತು. ಅನಾಮತ್ತಾಗಿ ಅವರ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಕುರ್ಚಿಯ ಆಚೆಗೆ ಎಳೆದುಕೊಂಡು "ಕೆಲಸ ಮಾಡಲು ಆಗುತ್ತದೆಯೋ, ಇಲ್ಲವೋ? ನಡಿ, ಜಿಲ್ಲಾಧಿಕಾರಿಯವರ ಹತ್ತಿರ ಹೋಗೋಣ. ಇವತ್ತು ಎರಡರಲ್ಲಿ ಒಂದು ಇತ್ಯರ್ಥವಾಗಲೇಬೇಕು"  ಎಂದಾಗ ಆತ ಗರಬಡಿದು ಹೋಗಿದ್ದ. ಉಳಿದವರೂ ಸುಮ್ಮನೇ ಇದ್ದರು. ಆತ "ತಪ್ಪಾಯಿತು, ತಕ್ಷಣ ಮಾಡುತ್ತೇನೆ" ಎಂದ. ನಾನು "ನಿನಗೆ ಒಂದು ದಿನ ಮಾತ್ರ ಅವಕಾಶ ಕೊಡುತ್ತೇನೆ. ನಾಳೆ ಬೆಳಿಗ್ಗೆ ನಾನು ಬರುವ ವೇಳೆಗೆ ಕೆಲಸ ಆಗದಿದ್ದರೆ ಏನು ಆಗುತ್ತದೆಯೋ ಆಗಲಿ, ಚಪ್ಪಲಿಯಲ್ಲಿ ಹೊಡೆಯುತ್ತೇನೆ" ಎಂದು ಗದರಿಸಿ ವಾಪಸು ನನ್ನ ಕೊಠಡಿಗೆ ಹೋದೆ. ಟಿಪ್ಪಣಿ ಬರೆದು ಅದೇಶ ಪಡೆಯುವುದು, ಬಿಲ್ಲು ಮಾಡುವುದು, ಸಹಿ ಪಡೆಯುವುದು, ಖಜಾನೆಗೆ ಕೊಟ್ಟು ಚೆಕ್ಕು ತರಿಸುವುದು, ಇತ್ಯಾದಿಗಳಿಗೆ ಸಾಮಾನ್ಯ ಸ್ಥಿತಿಯಲ್ಲಿ ಒಂದು ವಾರವಾದರೂ ಆಗುತ್ತದೆ. ಆತ ಹೇಗೆ ಮಾಡಿದನೋ ಗೊತ್ತಿಲ್ಲ, ಮರುದಿನ ಬೆಳಿಗ್ಗಯೇ ಆತನೇ ಖುದ್ದಾಗಿ ಬಂದು ನನಗೆ ಬರಬೇಕಾಗಿದ್ದ ನಾಲ್ಕು ವರ್ಷಗಳ ಬಾಕಿ ವೇತನದ ಹಣವನ್ನು ನನಗೆ ಕೊಟ್ಟು ಹೋದ. ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿದ ಆದೇಶ ಸಹ ಸಿಕ್ಕಿತು. ಧನ್ಯವಾದ ಹೇಳಿದೆ. ನನ್ನ ಧನ್ಯವಾದ ಆತನಿಗೆ ಬೇಕಿರಲಿಲ್ಲ. ಕೆಲಸ ಮಾಡಿಕೊಡದಿದ್ದರೆ ನಾನೇನಾದರೂ ಮಾಡಿಬಿಡುತ್ತಿದ್ದೆ, ಅದರಿಂದ ತಪ್ಪಿಸಿಕೊಂಡೆನಲ್ಲಾ ಎಂಬ ಭಾವ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು.
     ಆ ಹಿರಿಯ ಸಿಬ್ಬಂದಿ ಗುಮಾಸ್ತರು ಹೊಸದಾಗಿ ಮನೆ ಕಟ್ಟಿದ್ದರು. ಹೊಸಮನೆಗೆ ವಾಸ ಹೋಗದೆ ಅದನ್ನು ಬಾಡಿಗೆಗೆ ಕೊಟ್ಟು ತಾವು ಇದ್ದ ಹಳೆಯ ಬಾಡಿಗೆ ಮನೆಯಲ್ಲೇ ವಾಸವಿದ್ದರು. ಮಳೆಗಾಲದಲ್ಲಿ ಒಂದು ದಿನ ಅವರ ಮಕ್ಕಳಿಬ್ಬರು ಮನೆಯಲ್ಲಿ ಓದುತ್ತಾ ಕುಳಿತಿದ್ದಾಗ ಗೋಡೆ ಕುಸಿದು ಇಬ್ಬರು ಮಕ್ಕಳೂ ಸ್ಥಳದಲ್ಲೇ ಸತ್ತರು. ತಾಯಿ ಉಪಾಧ್ಯಾಯಿನಿಯಾಗಿದ್ದು ಅವರೂ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ವಿಷಯ ತಿಳಿದು ಎದೆಯೊಡೆದು ಅವರೂ ಮೃತರಾದರು. ಆರು ತಿಂಗಳು ಕೊರಗಿನಲ್ಲೇ ಕಳೆದ ಹಿರಿಯ ಗುಮಾಸ್ತರೂ ಹ್ರದಯಾಘಾತದಿಂದ ಮೃತರಾದರು. ಇಡೀ ಸಂಸಾರ ನಿರ್ನಾಮವಾದ ಘಟನೆ ನನ್ನ ಮನಸ್ಸನ್ನು ತುಂಬಾ ಕಲಕಿತ್ತು. ಸಕಾರಣವಾಗಿಯಾದರೂ ಅವರ ವಿರುದ್ಧ ಒರಟಾಗಿ ಹಿಂದೊಮ್ಮೆ ನಡೆದುಕೊಂಡಿದ್ದ ಬಗ್ಗೆ ಮನಸ್ಸಿನಲ್ಲಿ ವಿಷಾದ ಉಳಿಯಿತು.

ಗುರುವಾರ, ನವೆಂಬರ್ 18, 2010

ಮೂಢ ಉವಾಚ -26

ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು
ಚಾಡಿಯನು ಹೇಳುವರು ಸಂಬಂಧ ಕೆಡಿಸುವರು|
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು
ಸಂಬಂಧ ಉಳಿಸಿ ಬೆಳೆಸುವರವರು ಮೂಢ||


ಕ್ಷಮಿಸುವರು ನರರು ಬಲಹೀನತೆಯಿಂದ
ಆಸೆ ಪಡದಿಹರು ದೊರೆಯದಿರುವುದರಿಂದ|
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ
ನಿರ್ಮೋಹತೆಗೆ ಬಲವುಂಟು ಮೂಢ||


ದೇವರನು ಅರಸದಿರಿ ಗುಡಿ ಗೋಪುರಗಳಲ್ಲಿ
ದೇವನಿರುವನು ನಮ್ಮ ಹೃದಯ ಮಂದಿರದಲ್ಲಿ|
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮನೊಲಿಯದಿಹನೇ ಮೂಢ||


ಕೋಲುಗಳು ಕಲ್ಲುಗಳು ದೇಹವನು ಘಾತಿಪವು
ಸಿಟ್ಟಿನಾ ಮಾತುಗಳು ಮನಸನು ನೋಯಿಪವು|
ಮಡುಗಟ್ಟಿದಾ ಮೌನ ಹೃದಯವನು ತಿಂದಿರಲು
ಕೆಡುಕನೆಣಿಸಿದವರಿಗೊಳಿತನೆ ಬಯಸು ಮೂಢ||
**************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 16, 2010

ಮೂಢ ಉವಾಚ -25:

ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು
ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು|
ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ
ಭ್ರಮೆಯದೆನಿತು ಬಲಶಾಲಿ ಮೂಢ||


ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳು ಎಷ್ಟೊಂದು|
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು
ಆತ್ಮಾಭಿಮಾನ ಮರೆಸುವುದಯ್ಯೋ ಮೂಢ||


ನಾಚಿಕೆಯ ಪಡದೆ ಏನೆಲ್ಲ ಮಾಡಿಹರು
ಆಸ್ತಿ ಅಂತಸ್ತಿಗಾಗಿ ಬಡಿದಾಡುತಿಹರು|
ಸುಖವನೇ ಹಂಬಲಿಸಿ ದುಃಖವನು ಕಾಣುವರು
ದುಃಖದ ಮೂಲವರಿಯರವರು ಮೂಢ||


ಗೊತ್ತಿಲ್ಲದವರನ್ನು ಹಾಡಿ ಹೊಗಳುವರು
ಪ್ರೀತಿಸುವ ಜನರನ್ನು ಘಾಸಿಗೊಳಿಸುವರು|
ನಂಬದವರನೋಲೈಸಿ ನಂಬಿದವರ ಹೀನೈಸಿ
ಪಡೆದುಕೊಂಬುವುದೇನೋ ಮೂಢ?||
****************
-ಕವಿನಾಗರಾಜ್.

ಸೋಮವಾರ, ನವೆಂಬರ್ 15, 2010

ಸೇವಾ ಪುರಾಣ -24: ಮರಳಿ ಹಾಸನಕ್ಕೆ-2: ಬಿಡದ ಪೋಲಿಸ್ ನಂಟು

ಜಿಲ್ಲಾಧಿಕಾರಿಯವರ ಮಾದರಿ
      ಜಿಲ್ಲಾಧಿಕಾರಿ ಶ್ರೀ ಬಿ.ಕೆ.ದಾಸ್ ರವರಿಗೆ ವರ್ಗವಾಗಿ ಅವರ ಸ್ಥಾನಕ್ಕೆ ಶ್ರೀ ಬಿ.ಎನ್. ಬೆಟ್‌ಕೆರೂರರವರು ಬಂದಿದ್ದರು. ಆಹಾರ ಶಾಖೆಯಲ್ಲಿ ನಾನು ಸುಮಾರು ನಾಲ್ಕು ತಿಂಗಳು ಮಾತ್ರ ಕೆಲಸ ಮಾಡಿದ್ದು ನನ್ನನ್ನು ಜಿಲ್ಲಾಧಿಕಾರಿಯವರ ಅಭಿವೃದ್ಧಿ ಶಾಖೆಗೆ ವರ್ಗಾಯಿಸಲಾಯಿತು. ಶ್ರೀಮತಿ ಇಂದಿರಾಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದ ಕೆಲಸ, ಜಿಲ್ಲಾ ಆಬಿವೃದ್ದಿ ಸಮಿತಿ ಮತ್ತು ಇತರ ಸಭೆಗಳಿಗೆ ಮಾಹಿತಿ ಮತ್ತು ಪ್ರಗತಿ ವರದಿ ಸಿದ್ಧಪಡಿಸುವ ಕೆಲಸ ನನಗೆ ಕೊಡಲಾಯಿತು. ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಮತ್ತು ಜಿಲ್ಲಾ ಮಟ್ಟದ ಸಭೆಗಳು ನಡೆಯುವ ಸಂದರ್ಭಗಳಲ್ಲಿ ಸಭಾಹ್ವಾನ ಪತ್ರ ಕಳಿಸುವುದು, ಸಭಾ ಸದಸ್ಯರುಗಳ ಮಾಹಿತಿಗೆ ಅಂಕಿ ಅಂಶಗಳ ಬುಕ್ ಲೆಟ್ ತಯಾರಿಸುವುದು ದೊಡ್ಡ ಕೆಲಸವೇ ಆಗುತ್ತಿತ್ತು. ಕಲ್ಲಚ್ಚು ಯಂತ್ರದಿಂದ ಭೌತಿಕವಾಗಿ ಪ್ರತಿಗಳನ್ನು ತೆಗೆದು ಜೋಡಿಸಿ ಸುಮಾರು ೨೦೦ ಪುಟಗಳನ್ನು ಪುಸ್ತಕರೂಪದಲ್ಲಿ (೨೦೦ ಪುಸ್ತಕಗಳು) ಸಿದ್ಧಪಡಿಸಬೇಕಿತ್ತು. ಮಾಹಿತಿಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ಸಭೆಯ ಹಿಂದಿನ ದಿನ ರಾತ್ರಿಯೆಲ್ಲಾ ಕೆಲಸ ಮಾಡಬೇಕಾಗುತ್ತಿತ್ತು. ಇಂತಹುದೇ ಒಂದು ದಿನ ಮಧ್ಯರಾತ್ರಿ ಸುಮಾರು ೧೨-೩೦ ಆಗಿರಬಹುದು. ಸಾಯಂಕಾಲ ೫-೩೦ರ ವೇಳೆಗೇ ಕಛೇರಿಯ ಜವಾನರು ಮತ್ತು ಇತರ ಸಹೋದ್ಯೋಗಿಗಳು ಹೊರಟು ಹೋಗಿದ್ದರು. ನಾನೊಬ್ಬನೇ ಕಲ್ಲಚ್ಚು ಯಂತ್ರದಿಂದ ಮರುದಿನದ ಸಭೆಗಾಗಿ ಪ್ರತಿಗಳನ್ನು ತೆಗೆಯುತ್ತಿದ್ದೆ. ಸೊಳ್ಳೆಗಳ ಕಾಟ ಬೇರೆ. ಪ್ರತಿ ಪ್ರತಿಯ ೨೦೦ ಪ್ರತಿಗಳನ್ನು ತೆಗೆದು ಜೋಡಿಸಬೇಕಾಗಿತ್ತು. ಒಟ್ಟು ಸುಮಾರು ೧೫೦ ಪುಟಗಳಷ್ಟು ಮಾಹಿತಿ ಒಟ್ಟುಗೂಡಿಸಬೇಕಿತ್ತು. ಕಛೇರಿಯ ಅಭಿವೃದ್ಧಿ ಶಾಖೆಯ ಕೊಠಡಿಯ ದೀಪ ಉರಿಯುತ್ತಿದ್ದುದನ್ನು ಗಮನಿಸಿದ ಜಿಲ್ಲಾಧಿಕಾರಿ ಶ್ರೀ ಬಿ.ಎನ್ ಬೆಟ್‌ಕೆರೂರ್‌ರವರು (ಜಿಲ್ಲಾಧಿಕಾರಿಯವರ ನಿವಾಸ ಕಛೇರಿಯ ಎದುರಿಗೇ ಇದೆ) ನಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ನನ್ನ ಹಿಂದೆ ನಿಂತುದನ್ನು ನಾನು ಗಮನಿಸಿರಲಿಲ್ಲ. ಮಧ್ಯರಾತ್ರಿಯಲ್ಲಿ ಏಕಾಏಕಿ ಅವರು ನನ್ನ ಭುಜದ ಮೇಲೆ ಕೈ ಹಾಕಿದಾಗ ನಾನು ಬೆಚ್ಚಿ ಬಿದ್ದಿದ್ದೆ. ಈ ಕೆಲಸ ಜವಾನರು ಏಕೆ ಮಾಡಲಿಲ್ಲವೆಂಬ ಅವರ ಪ್ರಶ್ನೆಗೆ ಜವಾನರು ಕಛೇರಿ ಅವಧಿಯವರೆಗೆ ಮಾತ್ರ ಕೆಲಸ ಮಾಡಿದರೆಂದೂ ನಂತರದಲ್ಲಿ ನಾನೇ ಮಾಡಬೇಕಾಗಿ ಬಂದಿತೆಂದೂ ತಿಳಿಸಿದೆ. ನನಗೆ ಆಶ್ಚರ್ಯವಾಗುವಂತೆ ಜಿಲ್ಲಾಧಿಕಾರಿಯವರು ಸ್ವತಃ ಕಲ್ಲಚ್ಚು ಯಂತ್ರದಿಂದ ಪ್ರತಿಗಳನ್ನು ತೆಗೆಯುವುದೂ ಸೇರಿದಂತೆ ಬುಕ್‌ಲೆಟ್ ಜೋಡಿಸಿ ಪೂರ್ಣಗೊಳ್ಳುವವರೆಗೂ ನನ್ನೊಂದಿಗೆ ಕೈಜೋಡಿಸಿದರು. ಕಲ್ಲಚ್ಚು ಯಂತ್ರದ ಕಪ್ಪು ಮಸಿ ಅವರ ಅಂಗಿಗೂ ಹತ್ತಿತು. ಮನೆಗೆ ದೂರವಾಣಿ ಮಾಡಿ ಎರಡು ಸಲ ಚಹ ಮಾಡಿಸಿ ತರಿಸಿ ನನ್ನೊಂದಿಗೆ ಕುಡಿದರು. ಎಲ್ಲಾ ಕೆಲಸ ಮುಗಿದಾಗ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಒತ್ತಾಯ ಮಾಡಿ ಅವರ ಕಾರಿನಲ್ಲಿ ನನ್ನನ್ನು ಮನೆಗೆ ಕಳಿಸಿದ ಜಿಲ್ಲಾಧಿಕಾರಿಯವರು ಆ ದಿನ ಕಛೇರಿಗೆ ನಾನು ಬರುವ ಅಗತ್ಯವಿಲ್ಲವೆಂದೂ, ವಿಶ್ರಾಂತಿ ಪಡೆಯಬೇಕೆಂದೂ ತಿಳಿಸಿದ್ದು ಅವರ ಮಾನವೀಯ ಮುಖದ ಪರಿಚಯ ಮಾಡಿಸಿತ್ತಲ್ಲದೆ ನನ್ನ ಶ್ರಮಕ್ಕೆ ಅರ್ಥ ಕೊಟ್ಟ್ಕಿತ್ತು. ಜಿಲ್ಲಾಧಿಕಾರಿಯವರು ರಾತ್ರಿ ಸಮಯದಲ್ಲಿ ಸ್ವತಃ ನನ್ನೊಂದಿಗೆ ಕೆಲಸ ಮಾಡಿದ ವಿಷಯ ಕಛೇರಿಯ ಅಧಿಕಾರಿ ಮತ್ತು ಇತರರಿಗೆ ತಿಳಿದ ನಂತರ ಕಛೇರಿಯಲ್ಲಿ ನನ್ನ ಕೆಲಸ ಸುಲಭವಾಗತೊಡಗಿತು. ಹಣ ಇರದಿದ್ದರೂ ಆಡಿಟ್ ಆಕ್ಷೇಪಣೆ ಬರುತ್ತದೆಂದು ಗೊತ್ತಿದ್ದರೂ ಜಿಲ್ಲಾಧಿಕಾರಿಯವರು ಹಿಂದೆ ಮುಂದೆ ನೋಡದೆ ಬೇರೆ ಸಂಬಂಧಪಡದ ನಿಧಿಯಿಂದ ಯಾಂತ್ರೀಕೃತ ಬಹುಪ್ರತಿ ಸಿದ್ಧಪಡಿಸುವ ಯಂತ್ರ, ಜೆರಾಕ್ಸ್ ಯಂತ್ರ, ಇತ್ಯಾದಿಗಳನ್ನು ಮುಂದಿನ ಮೂರೇ ದಿನದಲ್ಲಿ ತರಿಸಿ ಅಭಿವೃದ್ಧಿ ಶಾಖೆಗೆ ಕೊಡಿಸಿದರು.
ಬಿಡದ ಪೋಲಿಸ್ ನಂಟು
     ತುರ್ತು ಪರಿಸ್ಥಿತಿ ಹೋಗಿ ಎರಡು ವರ್ಷಗಳಾಗಿದ್ದರೂ ಅದರ ಛಾಯೆ ಹೋಗಿರಲಿಲ್ಲ. ಕರ್ನಾಟಕದಲ್ಲಿನ್ನೂ ಕಾಂಗ್ರೆಸ್ ಸರ್ಕಾರವಿತ್ತು. ನಮಸ್ಕಾರ ಮಾಡದಿದ್ದಕ್ಕೆ ನನ್ನ ಮೇಲೆ ಕೇಸು ಹಾಕಲು ಹೋಗಿ ಮುಖಭಂಗ ಅನುಭವಿಸಿದ್ದ ಎ.ಎಸ್.ಐ. ಮಹಾಶಯನಿಗೆ ನನ್ನ ಮೇಲೆ ಮುನಿಸು ಹೋಗಿರಲಿಲ್ಲ. ೧೫ ದಿನಗಳಿಗೆ ಒಮ್ಮೆ ಕಾನೂನು-ಸುವ್ಯವಸ್ಥೆ ಬಗ್ಗೆ ಜಿಲ್ಲಾ ದಂಡಾಧಿಕಾರಿಯವರಿಗೆ ರಹಸ್ಯ ವರದಿಗಳು ಆರಕ್ಷಕ ಅಧಿಕಾರಿಗಳಿಂದ ಸಲ್ಲಿಕೆಯಾಗುತ್ತಿದ್ದು ಆ ವರದಿಗಳಲ್ಲಿ ನಾನು ಆರೆಸ್ಸೆಸ್ ಚಟುವಟಿಕಗಳಲ್ಲಿ ಭಾಗವಹಿಸುತ್ತಿದ್ದ ಬಗ್ಗೆ ಕಲ್ಪಿತ ವರದಿಗಳೂ ಇರುತ್ತಿದ್ದವು. ನನ್ನನ್ನು ೪ ತಿಂಗಳ ಅವಧಿಗೆ ಬೆಂಗಳೂರಿಗೆ ಲೆಕ್ಕಪತ್ರಗಳು, ಅಭಿವೃದ್ದಿ ನಿಯಮಗಳ ಕುರಿತು ತರಬೇತಿಗೆ ನಿಯೋಜಿಸಿದ್ದ ಅವಧಿಯಲ್ಲೂ ಹಾಸನದಲ್ಲಿ ವಿವಿಧ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ ಬಗ್ಗೆ ರಹಸ್ಯ ವರದಿಗಳಿದ್ದವು. ತರಬೇತಿ ಮುಗಿಸಿಕೊಂಡು ಬಂದ ನಂತರದಲ್ಲೂ ಇಂತಹ ವರದಿ ಮುಂದುವರೆಯುತ್ತಿದ್ದು ತಡವಾಗಿ ನನ್ನ ಗಮನಕ್ಕೆ ಬಂತು. ಆಗ ನಮ್ಮ ಕಛೇರಿಯ ವ್ಯವಸ್ಥಾಪಕರಾಗಿದ್ದವರು ಶ್ರೀ ರಮೇಶರಾವ್. ಅವರು ನನ್ನನ್ನು, ನನ್ನ ಕೆಲಸವನ್ನು ಬಹಳ ಮೆಚ್ಚಿಕೊಂಡಿದ್ದವರು, ಪ್ರೀತಿ ವಿಶ್ವಾಸಗಳಿಂದ ಕಾಣುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರೂ ನನ್ನ ವಿರುದ್ಧದ ಪೋಲಿಸ್ ವರದಿಗಳ ಬಗ್ಗೆ ವಿಷಯ ತಿಳಿದು ನೊಂದುಕೊಂಡರು. ನನ್ನನ್ನು ಒಂದು ಭಾನುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಶ್ರೀ ಬೆಟ್‌ಕೆರೂರ್‌ರವರ ಮನೆಗೆ ಕರೆದುಕೊಂಡು ಹೋಗಿ ಸುಳ್ಳು ವರದಿಗಳ ಬಗ್ಗೆ ಗಮನಿಸಬೇಕೆಂದು ಕೋರಿದರು. ನನ್ನ ಒಳ್ಳೆಯತನದ ಬಗ್ಗೆ ಬಿಡಿಸಿ ಹೇಳುತ್ತಾ ಗದ್ಗದಿತರಾಗಿ ಕಣ್ಣೀರು ಹಾಕಿದ್ದು ಕಂಡು ನನಗೆ ಒಂದು ತರಹ ಮುಜುಗರವಾಯಿತು. ಅವರ ನಿಷ್ಕಳಂಕ ವಿಶ್ವಾಸದ ಪರಿಚಯ ನನಗಾಯಿತು. ನಾನೇ ಅಂತಹ ವರದಿ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಜಿಲ್ಲಾಧಿಕಾರಿಯವರಿಗೂ ನನ್ನ ಕೆಲಸದ ಬಗ್ಗೆ ಸದಭಿಪ್ರಾಯವಿತ್ತು. ತರಬೇತಿಗೆ ಬೆಂಗಳೂರಿಗೆ ಹೋಗಿದ್ದ ಅವಧಿಯಲ್ಲೂ ಸುಳ್ಳು ವರದಿ ಬಂದಿದ್ದುದನ್ನು ನೋಡಿ ಖಚಿತಪಡಿಸಿಕೊಂಡ ಜಿಲ್ಲಾಧಿಕಾರಿಯವರು ಆರಕ್ಷಕ ಅಧಿಕಾರಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಸಂಬಂಧಿಸಿದ ಪೋಲಿಸ್ ಮಹಾಶಯ ಮತ್ತೊಮ್ಮೆ ಛೀಮಾರಿ ಹಾಕಿಸಿಕೊಂಡನೆಂದು ತಿಳಿಯಿತು. ಅಂದಿನಿಂದ ನನ್ನ ವಿರುದ್ಧ ಬರುತ್ತಿದ್ದ ವರದಿಗಳಿಗೆ ಪೂರ್ಣವಿರಾಮ ಬಿದ್ದಿತ್ತು.
(ಕಾಲಘಟ್ಟ: 1978, ಸ್ಥಳ: ಹಾಸನ).

ಭಾನುವಾರ, ನವೆಂಬರ್ 14, 2010

ಮೂಢ ಉವಾಚ -24 : ನಾಯಕ

                ನಾಯಕ
ಕೆಲಸಕಾರ್ಯವ ನೋಡೆ ಒಂದು ಕೈಮೇಲು
ಧೃಢ ನಿಲುವು ಇರಲು ಕಾಲದ ಅರಿವು|
ಸರಳ ನಡೆಯೊಡನೆ ಜಾಣತನ ಮೇಳವಿಸೆ
ನಾಯಕನು ಉದಯಿಸುವ ಕಾಣು ಮೂಢ||


ನುಡಿದಂತೆ ನಡೆದು ಮಾದರಿಯು ತಾನಾಗಿ
ಪರರ ಮನವರಿತು ನಡೆದು ಕರುಣೆಯಿರಲಾಗಿ|
ಕೆಲಸ ಮಾಡಿಸುವ ಕಲೆಯು ಕರಗತವು ತಾನಾಗೆ
ನಾಯಕನು ಉದಯಿಸುವ ಕಾಣು ಮೂಢ||


ಅಚಲ ವಿಶ್ವಾಸ ಹಿಡಿದ ಕಾರ್ಯದಲಿರಲು
ಧೃಢವಾದ ಮಾತು ನಿರ್ಭೀತ ನಡೆನುಡಿಯು|
ಸ್ನೇಹಕ್ಕೆ ಬದ್ಧ ಸಮರಕೂ ಸಿದ್ಧನಿಹ
ಗುಣವಿರುವ ನಾಯಕನೆ ಗೆಲುವ ಮೂಢ||


ಮೊಂಡುವಾದಗಳಿಲ್ಲ ಗರ್ವ ಮೊದಲಿಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ|
ಸೋಲು ಗೆಲುವುಗಳ ಸಮನಾಗಿ ಕಾಣಬಲ್ಲ
ಧೀರನವನೆ ನಿಜನಾಯಕನು ಮೂಢ||
*****************
-ಕವಿನಾಗರಾಜ್.

ಶನಿವಾರ, ನವೆಂಬರ್ 13, 2010

ಸೇವಾ ಪುರಾಣ -23 : ಮರಳಿ ಹಾಸನಕ್ಕೆ -1: ಬದಲಾಗದ ವೈಖರಿ

ಮರಳಿ ಹಾಸನಕ್ಕೆ
      ಹಾಸನದ ಯಾವ ಕಛೇರಿಯಿಂದ ನನಗೆ ಗುಲ್ಬರ್ಗ ಜಿಲ್ಲೆಯ ಸೇಡಂಗೆ ವರ್ಗವಾಗಿತ್ತೋ ಅದೇ ಆಹಾರ ಶಾಖೆಗೆ ಪ್ರಥಮ ದರ್ಜೆ ಗುಮಾಸ್ತನಾಗಿ ಕರ್ತವ್ಯಕ್ಕೆ ಹಾಜರಾದೆ. ಯಾರು ನನ್ನನ್ನು ಹಿಂದೆ ಮಾತನಾಡಿಸಲೂ ಹಿಂಜರಿಯುತ್ತಿದ್ದರೋ ಅವರೆಲ್ಲಾ ನನ್ನನ್ನು ಅಭಿನಂದಿಸಿ ಹೊಗಳತೊಡಗಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ನನ್ನನ್ನು ಪ್ರಥಮವಾಗಿ ಬಂಧಿಸಿದ್ದ ಸಬ್‌ಇನ್ಸ್‌ಪೆಕ್ಟರರು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿ ಮಡಿಕೇರಿಯಲ್ಲಿದ್ದರು. ಕೋರ್ಟಿನ ಕೆಲಸಕ್ಕೆ ಹಾಸನಕ್ಕೆ ಬಂದಿದ್ದವರು ನನ್ನನ್ನು ಹುಡುಕಿಕೊಂಡು ಬಂದು ಕ್ಷಮೆ ಕೇಳಿಹೋಗಿದ್ದರು. ಜಿಲ್ಲಾಧಿಕಾರಿಯವರು ಮತ್ತು ಎಸ್.ಪಿ.ಯವರ ಆದೇಶದಂತೆ ಆ ಕೆಲಸ ಮಾಡಬೇಕಾಯಿತೆಂದು ತಿಳಿಸಿದ ಅವರು ನಾನು ಊಹಿಸಿದ್ದ ಸಂಗತಿ ಖಚಿತ ಪಡಿಸಿದರು. ನನ್ನ ತಂದೆಯವರು ನನ್ನನ್ನು ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರಲ್ಲಿಗೆ ಕರೆದುಕೊಂಡು ಹೋಗಿ ಇನ್ನು ಮುಂದಾದರೂ ಸರಿ(?)ಯಾಗಿರುವಂತೆ ಬುದ್ಧಿವಾದ ಹೇಳಿಸಿದರು. ತುರ್ತು ಪರಿಸ್ಥಿತಿ ವಿರುದ್ಧ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದ ಆರೆಸ್ಸೆಸ್ ಮತ್ತು ಪ್ರತಿಪಕ್ಷಗಳು ಎಲ್ಲ್ಲೆಡೆ ವಿಜಯೋತ್ಸವ ಆಚರಿಸಿದಂತೆ ಹಾಸನದಲ್ಲೂ ನಡೆಯಿತು.
ಬದಲಾಗದ ವೈಖರಿ
     ಕಛೇರಿಯಲ್ಲಿ ವಿಷಯನಿರ್ವಾಹಕರುಗಳು ಅನುಪಯುಕ್ತವೆಂದು ಭಾವಿಸಿದ ಮತ್ತು ಇಷ್ಟಪಡದ ವಿಷಯಗಳನ್ನು ನನಗೆ ನಿರ್ವಹಿಸಲು ಆದೇಶವಾಯಿತು. ಅದರಲ್ಲಿ ಕೋರ್ಟು ಪ್ರಕರಣಗಳೂ ಸೇರಿದ್ದವು. ನಾನು ಪ್ರಭಾರ ವಹಿಸಿಕೊಂಡಾಗ ಸುಮಾರು ೫೦ ಕೋರ್ಟು ಪ್ರಕರಣಗಳು ಇದ್ದು ಆ ಪೈಕಿ ಸುಮಾರು ೧೨-೧೫ ಪ್ರಕರಣಗಳಲ್ಲಿ ೧-೨ ವರ್ಷಗಳಿಂದ ಪ್ರಕರಣ ಮುಂದುವರೆದಿರಲೇ ಇಲ್ಲ. ಹಾಗೆಯೇ ಕಟ್ಟಿಡಲಾಗಿತ್ತು. ನಾನು ಇಂತಹ ಪ್ರಕರಣಗಳಲ್ಲಿ ಏನು ಮಾಡಬೇಕೆಂಬ ನಿರ್ದೇಶನ ಕೋರಿ ಫುಡ್ ಅಸಿಸ್ಟೆಂಟರ ಮೂಲಕ ಜಿಲ್ಲಾಧಿಕಾರಿಯವರಿಗೆ ಟಿಪ್ಪಣಿ ಕಳಿಸಿದೆ. ಮುಂದಿನ ವಿಚಾರಣಾ ದಿನಾಂಕ ನಿಗದಿಸಲು ಫುಡ್ ಅಸಿಸ್ಟೆಂಟರು ಮಾಡಿದ ಶಿಫಾರಸನ್ನು ಆಗ ಜಿಲ್ಲಾಧಿಕಾರಿಯವರಾಗಿದ್ದ ಶ್ರೀ ಬಿ.ಕೆ.ದಾಸ್‌ರವರು ಒಪ್ಪಿದರು. ನಿಗದಿತ ದಿನಾಂಕಗಳಲ್ಲಿ ಹಾಜರಾಗಲು ಸಂಬಂಧಿಸಿದವರಿಗೆ ತಿಳುವಳಿಕೆ ಕಳಿಸಿದೆ. ಜಿಲ್ಲಾಧಿಕಾರಿಯವರು ವಿಚಾರಣಾ ದಿನಾಂಕದಂದು ಮೊದಲು ಜಮೀನಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ಮಾಡಿದ ನಂತರ ಆಹಾರ ಪ್ರಕರಣಗಳನ್ನು ಕೈಗೆತ್ತಿಕೊಂಡರು. ಮೊದಲ ಪ್ರಕರಣವೇ ಹಳೆಯ ಪ್ರಕರಣವಾಗಿದ್ದು ಕಕ್ಷಿಗಾರರು ಹಾಜರಾದರು. ಅವರ ಪರ ಹಾಜರಾದ ಹಿರಿಯ ವಕೀಲರು ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಏಕಾಏಕಿ ಕೆದಕಲಾಗಿದೆಯೆಂದೂ, ತಮ್ಮ ಕಕ್ಷಿಗಾರರಿಗೆ ತೊಂದರೆ ಕೊಡುವ ಮತ್ತು ಹಣ ಕೀಳುವ ಉದ್ದೇಶದಿಂದ ನೋಟೀಸು ಕೊಡಲಾಗಿದೆಯೆಂದೂ ದೂರಿದರು. ಜಿಲ್ಲಾಧಿಕಾರಿಯವರು ಕಡತ ನೋಡಿದಾಗ ಹಿಂದಿನ ವಿಚಾರಣಾ ದಿನಾಂಕ ಎರಡು ವರ್ಷಗಳ ಹಿಂದಿನದಾಗಿತ್ತು. ಸಿಟ್ಟಿಗೆ ಹೆಸರಾಗಿದ್ದ ಜಿಲ್ಲಾಧಿಕಾರಿಯವರು ಕಡತವನ್ನು ರೊಯ್ಯನೆ ನನ್ನ ಹತ್ತಿರ ಎಸೆದರು. ಕಡತದ ಹಾಳೆಗಳು ಚೆಲ್ಲಾಪಿಲ್ಲಿಯಾದವು. ಕೋರ್ಟು ಹಾಲಿನಲ್ಲಿ ತುಂಬಿದ್ದ ಹಿರಿಯ, ಕಿರಿಯ ವಕೀಲರುಗಳು, ಕಕ್ಷಿಗಾರರು, ಸಿಬ್ಬಂದಿ, ಹೀಗೆ ಬಹಳ ಜನರಿದ್ದರೂ ಆ ಸಂದರ್ಭದಲ್ಲಿ ಮುಂದೇನಾಗುವುದೋ ಎಂದು ನಿರೀಕ್ಷಿಸಿ ನೀರವ ಮೌನ ಏರ್ಪಟ್ಟಿತು. ನನಗೆ ಅವಮಾನವಾದಂತಾಗಿತ್ತು. ಸುಮ್ಮನಿದ್ದೆ. ಪಕ್ಕದಲ್ಲಿದ್ದ ಶಿರಸ್ತೇದಾರರು ಕೆಳಗೆ ಬಿದ್ದಿದ್ದ ಕಡತವನ್ನು ಎತ್ತಿಕೊಳ್ಳಲು ಪಿಸುಮಾತಿನಲ್ಲಿ ನನಗೆ ಸೂಚಿಸಿದರೂ ನಾನು ಸುಮ್ಮನೇ ಕುಳಿತಿದ್ದೆ. ಜಿಲ್ಲಾಧಿಕಾರಿಯವರು ಎಲ್ಲಾ ಪ್ರಕರಣಗಳನ್ನು ಮುಂದೂಡಲಾಗಿದೆಯೆಂದು ತಿಳಿಸಿ ತಮ್ಮ ಛೇಂಬರಿಗೆ ಹೊರಟು ಹೋದರು. ನಾನೂ ಕಡತ ತೆಗೆದುಕೊಳ್ಳದೆ ನನ್ನ ಕಛೇರಿಗೆ ವಾಪಸು ಬಂದು ಕುರ್ಚಿಯಲ್ಲಿ ಕುಳಿತೆ. ಶಿರಸ್ತೇದಾರರು ಕಡತ ಜೋಡಿಸಿ ನನಗೆ ಕಳುಹಿಸಿದರು. ಅವರು, ಆಪ್ತ ಸಹಾಯಕರು, ಇತರೆ ಸಿಬ್ಬಂದಿ ಸಹ ನಾನು ಕಡತ ತೆಗೆದುಕೊಂಡು ಬರಬೇಕಿತ್ತ್ತೆಂದೂ, ನನ್ನನ್ನು ಸಸ್ಪೆಂಡ್ ಮಾಡುವುದು ಗ್ಯಾರೆಂಟಿ ಎಂತಲೂ ಮಾತಾಡಿಕೊಳ್ಳುತ್ತಿದ್ದರು. ನನ್ನದಲ್ಲದ ತಪ್ಪಿಗೆ ನಾನು ತಲೆಬಾಗುವಂತಹ ನಡವಳಿಕೆ ನನಗಿನ್ನೂ ಅಭ್ಯಾಸವಾಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿಯವರು ನನ್ನನ್ನು ಮತ್ತು ಫುಡ್ ಅಸಿಸ್ಟೆಂಟರನ್ನು ಕರೆಸಿದರು. ಫುಡ್ ಅಸಿಸ್ಟೆಂಟರು ಜಿಲ್ಲಾಧಿಕಾರಿಯವರಿಗೆ ಈ ತಪ್ಪು ಹಿಂದಿನ ವಿಷಯನಿರ್ವಾಹಕರದೆಂದೂ, ನಾನು ಬಂದು ಕೇವಲ ಇಪ್ಪತ್ತು ದಿನಗಳಾಯಿತೆಂದು ಹಾಗೂ ಟಿಪ್ಪಣಿ ಮೇಲೆ ಆದೇಶ ಪಡೆದೇ ವಿಚಾರಣೆಗೆ ಕಡತ ಇಡಲಾಗಿತ್ತೆಂದೂ ವಿವರಿಸಿ ಆದೇಶ ತೋರಿಸಿದಾಗ ಜಿಲ್ಲಾಧಿಕಾರಿಯವರು ಒಂದು ಕ್ಷಣ ಸುಮ್ಮನಿದ್ದರು. ನಂತರ ನನ್ನ ಮುಖ ನೋಡುತ್ತಾ 'ಸಾರಿ' ಎಂದರು. ಇಂತಹ ಕಡತಗಳನ್ನು ಫುಡ್ ಅಸಿಸ್ಟೆಂಟರು ಸ್ವತಃ ಇನ್ನೊಮ್ಮೆ ನೋಡಿ ಅಗತ್ಯವಿದ್ದರೆ ಮಾತ್ರ ನೋಟೀಸು ಕೊಡಲು ತಿಳಿಸಿದರು. ನಾನು ಮಾತನಾಡದೆ ಸುಮ್ಮನಿದ್ದು ಕೊನೆಗೆ ಫುಡ್ ಅಸಿಸ್ಟೆಂಟರೊಂದಿಗೆ ಛೇಂಬರಿನಿಂದ ಹೊರಬಂದಾಗ ಏನೋ ಆಗುವುದೆಂದು ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿತ್ತು. ಸರಿ ಅನ್ನಿಸಿದುದನ್ನು ಪರಿಣಾಮ ಲೆಕ್ಕಿಸದೆ ಮಾಡಲು ಹೊರಟರೆ ತೊಂದರೆಯಾಗುವುದೆಂದು ಗೊತ್ತಿದ್ದರೂ ನನ್ನ ಕೆಲಸದ ವೈಖರಿ ಬದಲಿಸಿಕೊಳ್ಳಲು ನನಗೆ ಮನಸ್ಸು ಒಪ್ಪುತ್ತಿರಲಿಲ್ಲ. ಒಂದು ರೀತಿಯಲ್ಲಿ ಇದೂ ಒಂದು ನನ್ನ ದೌರ್ಬಲ್ಯ.
(ಕಾಲಘಟ್ಟ: 1977)                                                              .. ಮುಂದುವರೆಯುವುದು.

ಬುಧವಾರ, ನವೆಂಬರ್ 10, 2010

ಮೂಢ ಉವಾಚ -23: ಗೆಲುವು

ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ|
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಕಾಣು ಮೂಢ||


ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು
ಆಸೆ ಆಮಿಷಗಳು ದಾರಿ ತಪ್ಪಿಸಬಹುದು|
ಮೈಮರೆತು ಜಾರದೆ ನಿರಾಶೆಗೆಡೆಗೊಡದೆ
ಅಡಿಯ ಮುಂದಿಡಲು ಗೆಲುವೆ ಮೂಢ||


ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?|
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ||


ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ
ಆತ್ಮವಿಶ್ವಾಸವದು ತುಂಬಿ ತುಳುಕಿರಲು|
ಅಪಾಯವೆದುರಿಸುವ ಗಟ್ಟಿತನವಿರಲು
ನಾಯಕನು ಉದಯಿಸುವ ಕಾಣು ಮೂಢ||
********************
-ಕವಿನಾಗರಾಜ್.

ಮೂಢ ಉವಾಚ -22

                    ಭಯ
ಕೆಡುಕಾಗುವ ಭಯ ಕೆಡುಕ ತಡೆದೀತು
ರೋಗದ ಭಯ ಚಪಲತೆಯ ತಡೆದೀತು|
ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು
ಗುಣ ರಕ್ಷಕ ಭಯಕೆ ಜಯವಿರಲಿ ಮೂಢ||


ನರಕದ ಭಯ ಉಳಿಸೀತು ಸ್ವರ್ಗವ
ಭಯವಿರೆ ಮಾನವ ಇಲ್ಲದಿರೆ ದಾನವ|
ಭಯದಿಂ ವ್ಯಷ್ಟಿ ಸಮಷ್ಟಿಗೆ ಕ್ಷೇಮಭಾವ
ಲೋಕಹಿತ ಕಾರಕವು ಭಯವೆ ಮೂಢ||

               ಗೊಂದಲ
ಮನದಲ್ಲಿ ಒಂದು ಹೇಳುವುದು ಮತ್ತೊಂದು
ಹೇಳಿದ್ದು ಒಂದು ಮಾಡುವುದು ಮತ್ತೊಂದು|
ಒಂದನಿನ್ನೊಂದು ನುಂಗಿರಲು ಗೊಂದಲವು
ನೆಮ್ಮದಿಯ ನುಂಗುವುದು ಮೂಢ||

                ನಿಜವೈರಿ
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು|
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ||

****************
-ಕವಿನಾಗರಾಜ್.

ಸೋಮವಾರ, ನವೆಂಬರ್ 8, 2010

ಸೇವಾಪುರಾಣ22: ಗುಲ್ಬರ್ಗ ತೋರಿಸಿದರು-7 : ತುರ್ತು ಪರಿಸ್ಥಿತಿಯ ಕೊನೆಯ ದಿನಗಳು

ತುರ್ತು ಪರಿಸ್ಥಿತಿಯ ಕೊನೆಯ ದಿನಗಳು
     ತುರ್ತು ಪರಿಸ್ಥಿತಿ ವಿರುದ್ಧದ ಪ್ರತಿಭಟನೆಯ ಕಾವು ಹೆಚ್ಚಾದಂತೆ ಕೇಂದ್ರ ಸರ್ಕಾರದ ನಾಯಕರು ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡು ಲೋಕಸಭೆಗೆ ಚುನಾವಣೆ ಘೋಷಿಸಬೇಕಾಯಿತು. ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ವಿರುದ್ಧ ಹೇರಿದ್ದ ನಿಷೇಧ ರದ್ದಾಯಿತು. ಕಮ್ಯುನಿಷ್ಟರನ್ನು ಹೊರುಪಡಿಸಿ ಭಿನ್ನಮತೀಯ ಕಾಂಗ್ರಸ್ಸಿಗರೂ ಒಳಗೊಂಡಂತೆ ಎಲ್ಲಾ ಪ್ರಮುಖ ಪ್ರತಿಪಕ್ಷಗಳೂ ಒಗ್ಗೂಡಿ ಜನತಾಪಕ್ಷ ಎಂಬ ಹೊಸ ರಾಜಕೀಯ ಪಕ್ಷ ರಚಿಸಿಕೊಂಡು ಕಾಂಗ್ರೆಸ್ ವಿರುದ್ಧ ಚುನಾವಣೆಗೆ ಸಡ್ಡು ಹೊಡೆದವು. ಪ್ರಥಮ ಬಾರಿಗೆ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರ ಪಡೆದು ಸ್ವಾತಂತ್ರ್ಯಾನಂತರದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಯಿತು. ಇಡೀ ಕರ್ನಾಟಕದಲ್ಲಿ ಜನತಾಪಕ್ಷದಿಂದ ಇಬ್ಬರು ಮಾತ್ರ ಆಯ್ಕೆಯಾಗಿದ್ದು, ಹಾಸನದಿಂದ ಎಸ್. ನಂಜೇಶಗೌಡ ಆಯ್ಕೆಯಾಗಿದ್ದರು. ಉಳಿದ ಎಲ್ಲಾ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗನಾಗಿರದಿದ್ದರೂ ಪರಿಸ್ಥಿತಿಯ ಕಾರಣದಿಂದ ಕಾಂಗ್ರೆಸ್ ಪಕ್ಷದ ಸೋಲನ್ನು ಬಯಸಿದ್ದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ, ಯಾರು ಅಭ್ಯರ್ಥಿ ಎಂಬುದೂ ಸಹ ಗೊತ್ತಿಲ್ಲದಿದ್ದ ನನ್ನ ತಾಯಿಯವರು ನಮ್ಮ ಮನೆಯ ಬೀದಿಯಲ್ಲಿದ್ದ ಎಲ್ಲಾ ಮನೆಗಳಿಗೆ ಅವರೊಬ್ಬರೇ ಹೋಗಿ 'ದಯವಿಟ್ಟು ಇಂದಿರಾಗಾಂಧಿಗೆ ಓಟು ಹಾಕಬೇಡಿ, ನನ್ನ ಮಗನಿಗೆ ತೊಂದರೆ ಕೊಟ್ಟಂತೆ ನಿಮ್ಮ ಮಕ್ಕಳಿಗೂ ತೊಂದರೆ ಕೊಡುತ್ತಾಳೆ' ಎಂದು ಕೈಮುಗಿದು ಕಣ್ಣೀರು ಹಾಕಿಕೊಂಡು ಹೇಳಿಬರುತ್ತಿದ್ದರು. ಹಾಸನದಿಂದ ಅಂಚೆ ಮತಪತ್ರ ತರಿಸಿಕೊಂಡು ನಾನೂ ನನ್ನ ಮತ ಚಲಾಯಿಸಿದ್ದೆ. ಸುಮಾರು 1000 ಮತಗಳ ಅಲ್ಪ ಬಹುಮತದಿಂದ ಹಾಸನದಲ್ಲಿ ಜನತಾಪಕ್ಷದ ಅಭ್ಯರ್ಥಿ ಜಯಗಳಿಸಿದ್ದು ನನಗೆ ಖುಷಿ ತಂದಿತ್ತು. ಅಂಚೆ ಮತಪ್ರಗಳೇ ಅವರಿಗೆ ಗೆಲುವು ತಂದಿತ್ತದ್ದು ವಿಶೇಷವಾಗಿತ್ತು.
ಚುನಾವಣೆ ಕೆಲಸ
     ಚುನಾವಣೆ ಕಾರ್ಯದಲ್ಲಿ ಕಂದಾಯ ಇಲಾಖೆ ಹಿಂದಿನಿಂದಲೂ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ಒಬ್ಬ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ನನಗೂ ಚುನಾವಣೆ ಸಂಬಂಧದ ಬಿಡುವಿಲ್ಲದ ಕೆಲಸವಿತ್ತು. ಚುನಾವಣೆಯ ಹಿಂದಿನ ದಿನ ಎಲ್ಲಾ ಮತಗಟ್ಟೆ ಸಿಬ್ಬಂದಿಗಳನ್ನು ಅಗತ್ಯದ ಸಲಕರಣೆಗಳೊಂದಿಗೆ ಮತಗಟ್ಟೆಗಳಿಗೆ ಸಾಗಹಾಕುವ ವೇಳೆಗೆ ನಮಗೆ ಸಾಕೋಸಾಕಾಗಿತ್ತು. ಅಂದು ಮಧ್ಯಾಹ್ನ ಸುಮಾರು 4-30ರ ವೇಳೆಗೆ ಇಟ್ಕಲ್ ಗ್ರಾಮದ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಿದ್ದ ಒಬ್ಬರು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಮತಗಟ್ಟೆ ಮುಂದೆ ನಿಂತಿದ್ದ ಸಮಯದಲ್ಲಿ ಯಾರೋ ಅಪರಿಚಿತರು ಬಂದು ಚೂರಿ ಹಾಕಿ ಕೊಲೆ ಮಾಡಿದ ಸುದ್ದಿ ಬಂದಿತು. ಇಟ್ಕಲ್ ಎಂಬುದು ಆಂಧ್ರ ಗಡಿಯಲ್ಲಿ ಇದ್ದ ಒಂದು ಹಳ್ಳಿ. ಅವರ ಬದಲಿಗೆ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಲು ಮೀಸಲು ಸಿಬ್ಬಂದಿಯವರು ಯಾರೂ ಸಿದ್ಧರಿರಲಿಲ್ಲ. ಆಗ ಅಸಿಸ್ಟೆಂಟ್ ಕಮಿಷನರರು ನನ್ನನ್ನು ಕರೆಸಿ ನಾನು ಅಲ್ಲಿಗೆ ಹೋಗಬೇಕೆಂದೂ ಏನೂ ಗಲಾಟೆಯಾಗದಂತೆ ಪೋಲಿಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರು. ನಾನು ಒಪ್ಪಿ ಹೋದೆ. ಸುಗಮ ಚುನಾವಣೆಗಾಗಿ ಆ ಮತಗಟ್ಟೆಗೆ ಎಲ್ಲರೂ ಹೆಚ್ಚಿನ ಗಮನ ಕೊಟ್ಟಿದ್ದರಿಂದ ಮತ್ತು ಬಲವಾದ ಪೋಲಿಸ್ ಬಂದೋಬಸ್ತು ಇದ್ದುದರಿಂದ ಶಾಂತಯುತವಾಗಿ ಮತದಾನವಾಗಿ ಆ ಮತಗಟ್ಟೆಯಲ್ಲಿ ಸುಮಾರು ಶೇ. 45ರಷ್ಟು ಮತದಾನವಾಗಿತ್ತು.
ಮರಳಿ ಹಾಸನಕ್ಕೆ
     ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಎಲ್ಲಾ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನೆಲ್ಲಾ ಹಿಂತೆಗೆದುಕೊಳ್ಳಲು ಆದೇಶ ಮಾಡಲಾಯಿತು. ನನ್ನ ವಿರುದ್ಧದ 13 ಮೊಕದ್ದಮೆಗಳ ಪೈಕಿ 6 ನನ್ನಂತೆ ಇತ್ಯರ್ಥವಾಗಿತ್ತು. ಆರೆಸ್ಸೆಸ್ ಮೇಲಿನ ನಿಷೇಧ ಹಿಂತೆಗೆದುಕೊಂಡಿದ್ದರಿಂದ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿದ್ದ 7 ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲು ಅನುಮತಿ ಕೋರಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದುದನ್ನು ಒಪ್ಪಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ದಿನಾಂಕ 23-04-1977ರಲ್ಲಿ ಅನುಮತಿಸಿತು. ಹೀಗಾಗಿ ನಾನು ಸಂಪೂರ್ಣ ಆರೋಪಮುಕ್ತನಾದೆ. ಹೀಗಾಗಿ ನಾನು ಪುನಃ ಹಾಸನಕ್ಕೆ ಮರಳಿ ವರ್ಗಾಯಿಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡೆ. ನನ್ನ ಮನವಿಯನ್ನು ಒಪ್ಪಿ ಸರ್ಕಾರದಿಂದ ಹಾಸನ ಯೂನಿಟ್ ಗೆ ವರ್ಗಾಯಿಸಿದ ಆದೇಶ ದಿನಾಂಕ 03-09-1977ರಲ್ಲಿ ಬಂದಿತು. ಇದೇ ಸಮಯದಲ್ಲಿ, ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದರಿಂದ ನನ್ನನ್ನು ಸೇಡಂ ತಾಲೂಕು ಕಛೇರಿಗೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ವರ್ಗಾಯಿಸುವಂತೆ ಅಸಿಸ್ಟೆಂಟ್ ಕಮಿಷನರರು ಮಾಡಿದ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿಯವರಿಂದ ಅದೇ ರೀತಿ ವರ್ಗಾಯಿಸಿದ ಆದೇಶ ಸಹ ಬಂದಿತು. ಸರ್ಕಾರದ ಆದೇಶಕ್ಕೆ ಮಾನ್ಯತೆ ನೀಡಿ ನನ್ನನ್ನು ದಿನಾಂಕ 01-10-1977ರಲ್ಲಿ ಅಲ್ಲಿನ ಕರ್ತವ್ಯದಿಂದ ಬಿಡುಗಡೆಗೊಳಿಸಿದರು. ನಾನು ಹಾಸನ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ 03-10-1977ರಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ. ಸೇಡಂನಿಂದ ವಾಪಸು ಬರುವಾಗ ತಹಸೀಲ್ದಾರ್ ಶ್ರೀ ಬಿ.ವಿ.ಸ್ವಾಮಿಯವರು ನನ್ನೊಂದಿಗೆ ಶೋರಾಪುರದವರೆಗೆ ಬಂದು (ಸೇಡಂನಿಂದ ಶೋರಾಪುರಕ್ಕೆ ಸುಮಾರು ನಾಲ್ಕು ಗಂಟೆ ಪ್ರಯಾಣ) ಅಲ್ಲಿನ ಹೋಟೆಲಿನಲ್ಲಿ ಊಟ ಹಾಕಿಸಿ  ಶುಭ ಹಾರೈಸಿ ಬೀಳ್ಕೊಟ್ಟಿದ್ದು ನಾನು ಮರೆಯಲಾರೆ. ಅವರು ನನ್ನ ತಂದೆಯವರಿಗೆ 01-05-1979ರಲ್ಲಿ ಬರೆದ ಪತ್ರದಲ್ಲಿ ಹೀಗೆ ಬರೆದಿದ್ದರು: 
     “ . . . I had the pleasure of working with your son  at Sedam for a very short period. There are no words in English language to describe your son’s efficiency, honesty, loyalty to his superiors, straightforwardness, promptness and sympathy towards poor people. In fact, I would have been very glad if he had been continued here till my transfer from this place. But that was not be. I have no doubt that with all the good qualities your son possesses, he would be a first class citizen of our country. …. ”
     ಈ ಪತ್ರವನ್ನು ನಾನು ಈಗಲೂ ನನ್ನ 'ಪ್ರಶಸ್ತಿ ಪತ್ರ'ವೆಂಬಂತೆ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಇವರ ಮತ್ತು ಇಂತಹವರ ಆಶಯಗಳೇ ನನ್ನನ್ನು ಹಾದಿ ತಪ್ಪದಂತೆ ಕಾವಲು ಕಾಯುತ್ತಿರುವುದು!
    
                                                                                   ..ಮುಂದುವರೆಯುವುದು.

ಶನಿವಾರ, ನವೆಂಬರ್ 6, 2010

ಮೂಢ ಉವಾಚ -21: ಭಯ

ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?|
ನಿಶಾಭಯ ಏಕಾಂತಭಯ ಅಭದ್ರತೆಯ ಭಯ
ಭಯದಿಂದ ಮೂಡಿಹನೆ ಭಗವಂತ ಮೂಢ||

ಭೋಗಿಯಾದವಗೆ ರೋಗಿಯಾಗುವ ಭಯ
ರೋಗಿಯಾದವಗೆ ಸಾವು ಬಂದೆರಗುವ ಭಯ|
ಅಭಿಮಾನಧನನಿಗೆ ಮಾನಹಾನಿಯ ಭಯ
ಭಯದ ಕಲ್ಪನೆಯೇ ಭಯಾನಕವು ಮೂಢ||

ಸತ್ಕುಲಜಾತನಿಗೆ ಹೆಸರು ಕೆಡುವ ಭಯ
ಧನವಿರಲು ಚೋರಭಯ ಮೇಣ್ ರಾಜಭಯ|
ಸಜ್ಜನರಿಂಗೆ ಕುಜನರು ಕಾಡುವ ಭಯ
ಭಯ ಭಯ ಭಯಮಯವೀ ಲೋಕ ಮೂಢ||

ಸಿರಿವಂತನಿಗೆ ದಾರಿದ್ರ್ಯ ಬಂದೀತೆಂಬ ಭಯ
ಬಲಶಾಲಿಯಾದವಗೆ ಶತ್ರು ಸಂಚಿನ ಭಯ|
ಮೇಲೇರಿದವಗೆ ಕೆಳಗೆ ಬಿದ್ದೇನೆಂಬ ಭಯ
ಭಯಮುಕ್ತನವನೊಬ್ಬನೇ ವಿರಾಗಿ ಮೂಢ||
*************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 2, 2010

ಸೇವಾಪುರಾಣ21: ಗುಲ್ಬರ್ಗ ತೋರಿಸಿದರು-6: ಭುಗಿಲೆದ್ದ ಸಿಟ್ಟು

ಭುಗಿಲೆದ್ದ ಸಿಟ್ಟು
     ನನ್ನ ತಂಗಿಯ ಮದುವೆಗೆ ತಹಸೀಲ್ದಾರರು ರಜೆ ಕೊಡದೆ ಸತಾಯಿಸಿದ್ದ ಮತ್ತು ಜಿಲ್ಲಾಧಿಕಾರಿಯವರ ಮಾನವೀಯತೆ ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಈ ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ ತಹಸೀಲ್ದಾರರು ನನ್ನನ್ನು ಛೇಂಬರಿಗೆ ಕರೆಸಿ 4-5 ನಮೂನೆ ಲಗ್ನಪತ್ರಿಕೆಗಳನ್ನು ತೋರಿಸಿ ಯಾವುದು ಚೆನ್ನಾಗಿದೆ ಎಂದು ಆರಿಸಲು ಹೇಳಿದರು. ನಾನು ಒಂದನ್ನು ಆರಿಸಿದೆ. ಬಹುಷಃ ಅವರಿಗೂ ಅದೇ ಚೆನ್ನಾಗಿದೆ ಅನ್ನಿಸಿದ್ದಿರಬಹುದು. ತಮ್ಮ ಮಗಳ ಲಗ್ನ ಪತ್ರಿಕೆಯ ಕರಡನ್ನು ಕೊಟ್ಟು ಆರಿಸಿದ ಮಾದರಿಯಲ್ಲಿ 500 ಲಗ್ನಪತ್ರಿಕೆಗಳನ್ನು ಮುದ್ರಿಸಿಕೊಂಡು ತರಲು ನನಗೆ ತಿಳಿಸಿದರು. ನನ್ನ ತಂಗಿಯ ಮದುವೆಗೆ ರಜೆ ಕೊಡದಿದ್ದ ಅವರು ತಮ್ಮ ಮಗಳ ಮದುವೆಯ ಲಗ್ನಪತ್ರಿಕೆಗಳನ್ನು ಮುದ್ರಿಸಿ ತರಲು ನನಗೆ ಹೇಳಿದ್ದು ನನ್ನಲ್ಲಿ ಅದುಮಿಟ್ಟಿದ್ದ ಸಿಟ್ಟು ಭುಗಿಲೇಳಲು ಕಾರಣವಾಯಿತು. ಅವರ ಮೇಜಿನ ಮೇಲೆ ಇದ್ದ ತ್ರಿಭುಜಾಕೃತಿಯ ಮರದ ಅವರ ನಾಮಫಲಕವನ್ನು ತೆಗೆದುಕೊಂಡು ಅವರಿಗೆ ಬಾರಿಸಲು ಮೇಲೆತ್ತಿದೆ. ಅದೇ ಸಮಯಕ್ಕೆ ಛೇಂಬರಿನ ಒಳಗೆ ಬಂದಿದ್ದ ಸಹೋದ್ಯೋಗಿಯೊಬ್ಬರು ಹಿಂದಿನಿಂದ ಕೂಡಲೇ ಆ ನಾಮಫಲಕವನ್ನು ಹಿಡಿದುಕೊಳ್ಳದೇ ಹೋಗಿದ್ದರೆ ತಹಸೀಲ್ದಾರರಿಗೆ ಬಲವಾದ ಪೆಟ್ಟೇ ಬಿದ್ದಿರುತ್ತಿತ್ತು. ನಾನು ಸಿಟ್ಟಿನಿಂದ ಬುಸುಗುಡುತ್ತಾ ತಹಸೀಲ್ದಾರರಿಗೆ ಬಯ್ಯುತ್ತಿದ್ದೆ. ಗದ್ದಲ ಕೇಳಿ ಉಳಿದ ಸಿಬ್ಬಂದಿ ಮತ್ತು ಜನರು ಗುಂಪುಕೂಡಿದರು. ಅಜಾನುಬಾಹು ತಹಸೀಲ್ದಾರರು ದಿಗ್ಭ್ರಮೆ ಮತ್ತು ಗಾಬರಿಯಿಂದ ಕುರ್ಚಿಯಲ್ಲಿ ಕುಸಿದು ಕುಳಿತು ನೋಡುತ್ತಿದ್ದರು. ನಮ್ಮ ಕಛೇರಿಯ ಎದುರಿಗೇ ಅಸಿಸ್ಟೆಂಟ್ ಕಮಿಷನರರ ಕಛೇರಿಯಿದ್ದು ಅವರಿಗೂ ವಿಷಯ ತಿಳಿದು ನನಗೆ ಕರೆಕಳುಹಿಸಿದರು. ಉಪವಿಭಾಗಾಧಿಕಾರಿ ಶ್ರೀ ಅಷ್ಟಮೂರ್ತಿಯವರು ನನ್ನನ್ನು ಉದ್ದೇಶಿಸಿ "ಅಯ್ಯೋ ಮುಠ್ಠಾಳ, ನಿನಗೇನಾದರೂ ತಲೆ ಕೆಟ್ಟಿದೆಯಾ?  ತಹಸೀಲ್ದಾರರಿಗೆ ಹೊಡೆದಿದ್ದರೆ ಮತ್ತೆ ಜೈಲಿಗೆ ಹೋಗುತ್ತಿದ್ದೆಯಲ್ಲೋ! ನಿನಗೇನಾದರೂ ತೊಂದರೆಯಾದರೆ ನನಗೆ ಬಂದು ಹೇಳು, ದುಡುಕಬೇಡ" ಎಂದು ಬುದ್ಧಿ ಹೇಳಿ ಕಳಿಸಿದರು. ತಹಸೀಲ್ದಾರರನ್ನೂ ಕರೆಯಿಸಿ ಅವರಿಗೆ ಪ್ರತ್ಯೇಕವಾಗಿ ಕಿವಿಮಾತು ಹೇಳಿದ್ದರು.

     ಮೇಲೆ ತಿಳಿಸಿದ ಘಟನೆ ನಡೆದ ಕೆಲವು ದಿನಗಳಲ್ಲೇ ತಹಸೀಲ್ದಾರರಿಗೆ ಬೇರೆ ಸ್ಥಳಕ್ಕೆ ವರ್ಗವಾಯಿತು. ಅವರು ಮನೆಯ ಸಾಮಾನುಗಳನ್ನು ಒಂದು ಲಾರಿಯಲ್ಲಿ ತುಂಬಿಸಿ ಸಾಗಿಸಲು ವ್ಯವಸ್ಥೆ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಆ ಮಾರ್ಗವಾಗಿ ವಾಕಿಂಗ್ ಹೋಗುತ್ತಿದ್ದವನು ಹಾಗೆಯೇ ಸುಮ್ಮನೆ ಗಮನಿಸಿದಾಗಿ ಕೆಲವು ಕಛೇರಿಯ ಪೀಠೋಪಕರಣಗಳನ್ನು ಸಹ ಲಾರಿಯಲ್ಲಿ ಇಟ್ಟಿದ್ದುದನ್ನು ನೋಡಿದೆ. ನಾನು ಇದನ್ನು ಆಕ್ಷೇಪಿಸಿದಾಗ ತಹಸೀಲ್ದಾರರು ಮರುಮಾತಾಡದೆ ಅವನ್ನು ಕೆಳಗಿಳಿಸಿ ಕಛೇರಿಗೆ ಕಳಿಸಿಕೊಟ್ಟರು. ನಂತರ ಶ್ರೀ ಬಿ.ವಿ. ಸ್ವಾಮಿ ಎಂಬುವವರು ತಹಸೀಲ್ದಾರರಾಗಿ ಬಂದರು. ಅವರು ಆ ಸ್ಥಾನಕ್ಕೆ ಬರುವ ಮುನ್ನ ಗುಲ್ಬರ್ಗ ವಿಭಾಗಾಧಿಕಾರಿಯವರ ಆಪ್ತ ಸಹಾಯಕರಾಗಿದ್ದು ಬಡ್ತಿ ಹೊಂದಿ ಬಂದವರಾಗಿದ್ದರು. ಅವರು ಲಂಚ ತೆಗೆದುಕೊಳ್ಳುವವರಾಗಿರಲಿಲ್ಲ. ಹೀಗಾಗಿ ಅವರಿಗೂ ನನಗೂ ಹೊಂದಾಣಿಕೆಯಾಗುತ್ತಿತ್ತು. ಅವರೂ ನನ್ನನ್ನು ಸ್ನೇಹಿತನಂತೇ ಕಾಣುತ್ತಿದ್ದರು. ಸಾಯಂಕಾಲದ ಹೊತ್ತು ವಾಕಿಂಗ್ ಹೋಗುವಾಗ ನನ್ನ ಜೊತೆ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುತ್ತಾ ಬರುತ್ತಿದ್ದರು. ಅವರ ನಡವಳಿಕೆಯಿಂದ ನನಗೂ ಕೆಲಸ ಮಾಡಲು ಉತ್ಸಾಹ ಬರುತ್ತಿತ್ತು. ಒಮ್ಮೆ ಗುಲ್ಬರ್ಗದ ಅವರ ಮನೆಗೂ ನನ್ನನ್ನು ಕರೆದುಕೊಂಡು ಹೋಗಿ ಊಟ ಹಾಕಿಸಿದ್ದರು. (ಅವರು ನಿವೃತ್ತರಾಗಿ ಬಹಳ ವರ್ಷಗಳೇ ಆಗಿದ್ದು ನಿವೃತ್ತಿ ನಂತರದಲ್ಲಿ ಹಾಸನದಲ್ಲಿ ನೆಲೆಸಿದ್ದರು. ಹೆಂಡತಿ ಚಿಕ್ಕ ವಯಸ್ಸಿನಲ್ಲೇ ತೀರಿಹೋಗಿದ್ದು ಮಗ ದೂರದಲ್ಲೆಲ್ಲೋ ಕೆಲಸದಲ್ಲಿದ್ದು ಅವರು ಒಂಟಿಯಾಗಿದ್ದರು.) ಅವರ ಜೊತೆ ಕೆಲವು ತಿಂಗಳುಗಳಷ್ಟೇ ಕೆಲಸ ಮಾಡಿದ್ದರೂ ಅವರು ನನ್ನನ್ನು ಮರೆತಿರಲಿಲ್ಲ. ಕಂಡಾಗಲೆಲ್ಲಾ ಆಡಳಿತದಲ್ಲಿನ ಅವ್ಯವಸ್ಥೆ, ಹೊಲಸು ರಾಜಕೀಯದ ಬಗ್ಗೆ ಕಳವಳಿಸುತ್ತಿದ್ದರು. ನನ್ನ ಕೆಲಸದ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದಷ್ಟೇ ಅಲ್ಲದೆ ಎಷ್ಟೇ ಕಷ್ಟವಾದರೂ ಅದೇ ರೀತಿ ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಅವರ ಭೇಟಿಯಾಗಿಲ್ಲ, ಅವರು ಎಲ್ಲಿದ್ದಾರೋ ತಿಳಿದಿಲ್ಲ. ಎಲ್ಲಾದರೂ ಇರಲಿ, ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ.