ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 30, 2010

ಮೂಢ ಉವಾಚ -15

ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು|
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು|
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ||


ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ|
ಕೋಪಿಷ್ಠರಾ ಮನೆಯು ಸೂತಕದ ಅಂಗಣವು
ಕೋಪವದು ನರಕದ್ವಾರವೋ ಮೂಢ||
*****************
-ಕವಿನಾಗರಾಜ್.

ಗುರುವಾರ, ಜುಲೈ 29, 2010

ಸೇವಾ ಪುರಾಣ -10: ಸರಳುಗಳ ಹಿಂದಿನ ಲೋಕ -3: ಹೃದಯ ಕಲಕಿದ ಘಟನೆ


ಹೊರಗೂ ಜೈಲು, ಒಳಗೂ ಜೈಲು!
     ತುರ್ತು ಪರಿಸ್ಥಿತಿ ಸಮಯದಲ್ಲಿ ನನ್ನ ಮಟ್ಟಿಗೆ ಎಲ್ಲವೂ ಜೈಲಿನಂತೆಯೇ ಆಗಿತ್ತು. ಮನೆಯಲ್ಲಿದ್ದರೆ ಮನೆಯವರೆಲ್ಲರೂ ನನಗೆ ಏನಾಗುತ್ತದೆಯೋ, ನಾನು ದುಡುಕಿ ಏನಾದರೂ ಆಪತ್ತು ತಂದುಕೊಳ್ಳುತ್ತೇನೋ ಎಂದು ಗಮನಿಸುತ್ತಿದ್ದರು. ಹೊರಗೆ ಹೋದರೆ ಮಫ್ತಿ ಪೋಲಿಸರ ಕಾಟ. ನನ್ನನ್ನು ಮಾತನಾಡಿಸಲು ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು ಹಿಂಜರಿಯುತ್ತಿದ್ದರು. ನನ್ನಿಂದಾಗಿ ಅವರಿಗೂ ತೊಂದರೆಯಾಗಬಾರದು, ಮುಜುಗುರವಾಗಬಾರದು ಎಂದು ನಾನೂ ಸಹ ಅವರನ್ನು ಮಾತನಾಡಿಸುತ್ತಿರಲಿಲ್ಲ. ಹೀಗಾಗಿ ಒಂದು ರೀತಿಯ ಒಂಟಿತನದಿಂದ ಜೀವನ ಸಾಗುತ್ತಿತ್ತು. ಲೈಬ್ರರಿಗೆ ಹೋಗಿ ಮಹಾಪುರುಷರ ಜೀವನ ಚರಿತ್ರೆಗಳು, ಇಷ್ಟವಾಗುವ ಪುಸ್ತಕಗಳನ್ನು ಓದುತ್ತಾ ಕುಳಿತುಕೊಳ್ಳುತ್ತಿದ್ದೆ. ಸ್ವಾಮಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳು, ಸುಭಾಷಚಂದ್ರ ಬೋಸರ ಸಾಹಸಗಾಥೆ, ಕ್ರಾಂತಿಕಾರಿಗಳ ಕುರಿತು ಪುಸ್ತಕಗಳನ್ನು ಓದಲು, ಅಭ್ಯಸಿಸಲು ಅವಕಾಶವಾಯಿತು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಯಾವುದೇ ಪುಸ್ತಕ, ಸಂಗತಿಗಳು ನನಗೆ ಇಷ್ಟವಾಗುತ್ತಿತ್ತು. ಲೈಬ್ರರಿಗೆ ಹೋಗಿ ತುರ್ತು ಪರಿಸ್ಥಿತಿ ವಿರುದ್ಧ ಕರಪತ್ರಗಳನ್ನು ಹಾಕುತ್ತಿದ್ದೆನೆಂದು ಒಂದು ಪ್ರಕರಣ ಸಹ ನನ್ನ ಮೇಲೆ ದಾಖಲಾಯಿತು. ಮನೆಯಿಂದ ಹೊರಗೆ ಹೊರಟರೆ ಮನೆಗೆ ವಾಪಸು ಬರುತ್ತೇನೋ ಇಲ್ಲವೋ ಎಂದು ಮನೆಯಲ್ಲಿ ಆತಂಕಪಡುತ್ತಿದ್ದರು. ಮನೆಯಲ್ಲೇ ಇರಲೂ ಆಗುತ್ತಿರಲಿಲ್ಲ. ಹಾಸನಕ್ಕೆ ಯಾರೇ ಪ್ರಮುಖ ಕಾಂಗ್ರೆಸ್ ನಾಯಕರುಗಳು ಬಂದಾಗಲೆಲ್ಲಾ ನಾನೂ ಸೇರಿದಂತೆ 15-20 ಜನರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಠಾಣೆಯಲ್ಲಿರಿಸಿಕೊಂಡು ಅವರು ಹೋದ ನಂತರ ಬಿಟ್ಟು ಕಳುಹಿಸುತ್ತಿದ್ದರು. ಪೋಲಿಸರ ಪ್ರಕಾರ ವಿಧ್ವಂಸಕರ, ರಾಷ್ಟ್ರದ್ರೋಹಿಗಳ ಪೈಕಿ ನಾನೂ ಒಬ್ಬನಾಗಿದ್ದೆ. ಹೀಗಾಗಿ ನನಗೆ ಹೊರಗಿನ ಜೈಲಿಗಿಂತ ಒಳಗಿನ ಜೈಲೇ ಹಿತವೆನಿಸುತ್ತಿತ್ತು, ಅಲ್ಲೇ ಮುಕ್ತ ವಾತಾವರಣವಿತ್ತೆಂದು ಅನ್ನಿಸುತ್ತಿತ್ತು.
ಹೃದಯ ಕಲಕಿದ ಘಟನೆ
     ವೈಯಕ್ತಿಕವಾಗಿ ನನಗೆ ಸಂಬಂಧಿಸಿರದಿದ್ದರೂ ಹೃದಯ ಕಲಕಿದ ಈ ಘಟನೆಯನ್ನು ಉಲ್ಲೇಖಿಸದೆ ಇರಲು ಆಗುತ್ತಿಲ್ಲ. ಕೇಂದ್ರ ಮಂತ್ರಿಯಾಗಿದ್ದ ಶ್ರೀ ಜಾಫರ್ ಶರೀಫ್ ಸಾಹೇಬರು ಎರಡು ದಿನಗಳ ಭೇಟಿಗಾಗಿ ಹಾಸನಕ್ಕೆ ಬರುತ್ತಾರೆಂದು ನಮ್ಮನ್ನು ಹಾಸನದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕೂಡಿಟ್ಟಿದ್ದರು. ಶರೀಫ್ ಸಾಹೇಬರು ಬರುತ್ತಾರೆಂದು ನಮ್ಮನ್ನು ಠಾಣೆಯಲ್ಲಿ ಇರಿಸಿದಾಗಲೇ ನಮಗೆ ಗೊತ್ತಾಗಿದ್ದು. ನಾವು ಅಲ್ಲಿದ್ದಂತೆ ಸಾಯಂಕಾಲದ ಹೊತ್ತಿಗೆ ಹಳ್ಳಿಯವರಂತೆ ಕಾಣುತ್ತಿದ್ದ ಒಬ್ಬ ವೃದ್ಧ ಮತ್ತು ಸುಮಾರು 25 ವರ್ಷದ ಒಬ್ಬ ಹೆಣ್ಣುಮಗಳನ್ನು ತಂದು ಸೆಲ್ ನಲ್ಲಿರಿಸಿದರು. ಹೆಣ್ಣುಮಗಳು ಆ ವೃದ್ಧನ ಮಗಳಿರಬಹುದೆಂದು ಅಂದುಕೊಂಡೆವು. ರಾತ್ರಿ ಸುಮಾರು 10 ಘಂಟೆ ವೇಳೆಗೆ ಮುದುಕನ ಗೋಳಾಟ ತೂಕಡಿಸುತ್ತಿದ್ದ ನಮ್ಮನ್ನೆಚ್ಚರಿಸಿತು. 'ಬೇಡ ಸ್ವಾಮಿ, ನಿಮ್ಮ ಕಾಲಿಗೆ ಬೀಳುತ್ತೇನೆ, ನನ್ನ ಮಗಳಿಗೆ ಏನೂ ಮಾಡಬೇಡಿ,ನಿಮ್ಮ ದಮ್ಮಯ್ಯ, ಬಿಟ್ಟುಬಿಡಿ' ಎಂದು ಆ ಮುದುಕ ಕಲ್ಲೂ ಕರಗುವಂತೆ ಅಂಗಲಾಚುತ್ತಿದ್ದರೆ ಒಬ್ಬ ಪೇದೆ ಅವಳನ್ನು ನಿರ್ದಯವಾಗಿ ಅಲ್ಲಿಂದ ಕರೆದೊಯ್ದ. ಸ್ವಲ್ಪ ಹೊತ್ತಿಗೆಲ್ಲಾ ಆ ಹೆಣ್ಣುಮಗಳ ಭಯಭೀತ ಆಕ್ರಂದನ ಕೇಳಲಾರಂಭಿಸಿತು. ನಮಗೆ ಪರಿಸ್ಥಿತಿಯ ಅರಿವಾದರೂ ನಾವು ಒಳಗಿದ್ದರಿಂದ ನಾವು ಏನೂ ಮಾಡುವಂತಿರಲಿಲ್ಲ. ಒಳಗಿನಿಂದಲೇ ನಾವೂ ಕೂಗಾಡಿ, ಕಿರುಚಾಡಿ ಮಾಡಿದೆವು. ನಮ್ಮ ಕೈಯಲ್ಲಿ ಮಾಡಲು ಸಾಧ್ಯವಿದ್ದದ್ದು ಅಷ್ಟೇ ಆಗಿತ್ತು. ಅದನ್ನು ಯಾರೂ ಲೆಕ್ಕಿಸಲೂ ಇಲ್ಲ, ಹೊರಜಗತ್ತಿಗೆ ಏನೂ ಗೊತ್ತಾಗಲೇ ಇಲ್ಲ. ಮರುದಿನ ಬೆಳಿಗ್ಗೆ ಆ ಮುದುಕ ಮತ್ತು ಅವನ ಮಗಳನ್ನು ಠಾಣೆಯಿಂದ ಕರೆದುಕೊಂಡು ಹೋದರು. ನಮ್ಮನ್ನೂ ಆದಿನ ಸಾಯಂಕಾಲ ಬಿಟ್ಟುಕಳಿಸಿದರು.
     ಈ ಘಟನೆ ನಡೆದ ಹಲವು ದಿನಗಳ ನಂತರ ಇನ್ನೊಂದು ಪ್ರಕರಣದ ಕಾರಣದಿಂದ ಹಾಸನದ ಜೈಲಿಗೆ ಮತ್ತೆ ಪ್ರವೇಶವಾಯಿತು. ಊಟಕ್ಕೆ ಬಿಟ್ಟ ವೇಳೆಯಲ್ಲಿ ಇನ್ನೊಂದು ಬ್ಯಾರಕ್ಕಿನಲ್ಲಿದ್ದ ವೃದ್ಧ ಕಣ್ಣಿಗೆ ಬಿದ್ದ. ಮಾತನಾಡಿಸಿ ವಿಚಾರಿಸಿದಾಗ ತಿಳಿದ ವಿಷಯ ಎಂತಹವರನ್ನೂ ಮರುಗಿಸದೆ ಇರಲಾರದು. ಆತನ ಮಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನದ ಸಮಯದಲ್ಲಿ ಆತನ ಮಗಳು ಅವನಿಗಾಗಿ ಊಟದ ಬುತ್ತಿ ತೆಗೆದುಕೊಂಡು ಹೋಗಿದ್ದಳು. ಊಟ ಮಾಡುತ್ತಿದ್ದ ಸಮಯದಲ್ಲಿ ಇವರ ಎತ್ತೊಂದು ಪಕ್ಕದ ಜಮೀನಿಗೆ ಹೋಗಿ ಮೇಯತೊಡಗಿತ್ತು. ಪಕ್ಕದ ಜಮೀನಿನವನು ದೊಣ್ಣೆಯಿಂದ ಎತ್ತಿಗೆ ಹೊಡೆದಾಗ ಎತ್ತಿನ ಮುಂಗಾಲು ಮುರಿದಿತ್ತು. ಸಿಟ್ಟಿಗೆದ್ದ ಇವನ ಮಗ ತಕ್ಷಣ ಕುಡುಗೋಲಿನಿಂದ ಪಕ್ಕದ ಜಮೀನಿನವನ ಕುತ್ತಿಗೆಗೆ ಹೊಡೆದಾಗ ಆತ ಅಲ್ಲೇ ಕುಸಿದು ಸತ್ತುಬಿದ್ದ. ಅಲ್ಲಿದ್ದ ಇವನ ಮಗಳು ತಮ್ಮನನ್ನು ಉಳಿಸುವ ಸಲುವಾಗಿ ಕುಡುಗೋಲನ್ನು ತಾನು ತೆಗೆದುಕೊಂಡು ತಮ್ಮನನ್ನು ಮನೆಗೆ ಕಳಿಸಿದಳು. ಜನ ಗುಂಪುಕೂಡಿದರು. ಇವನೂ ಅಲ್ಲಿಗೆ ಓಡಿ ಬಂದ. ಪೋಲಿಸರೂ ಬಂದರು. ಇವನ ಮಗಳು ಪಕ್ಕದ ಜಮೀನಿನವನು ತನ್ನನ್ನು ಕೆಡಿಸಲು ಬಂದನೆಂದೂ ರಕ್ಷಣೆಗಾಗಿ ತಾನು ಹಾಗೆ ಮಾಡಬೇಕಾಯಿತೆಂದು ಹೇಳಿಕೆ ಕೊಟ್ಟಳು. ಪೋಲಿಸರು ತನ್ನನ್ನೂ ಮತ್ತು ತನ್ನ ಮಗಳನ್ನೂ ಬಂಧಿಸಿ ಕರೆತಂದರೆಂದೂ, ಪೋಲಿಸ್ ಠಾಣೆಯಲ್ಲಿ ಪೋಲಿಸರು ತನ್ನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದರೆಂದು ಹೇಳುವಾಗ ಆ ವೃದ್ಧನ ಗಂಟಲಿನ ನರಗಳು ಉಬ್ಬಿ ಮಾತನಾಡಲಾರದಾಗಿದ್ದ.ನನ್ನ ಕಣ್ಣುಗಳೂ ನೀರಾಡಿದವು. ಇದೇ ಜೈಲಿನ ಇನ್ನೊಂದು ಬ್ಯಾರಕ್ಕಿನಲ್ಲಿರುವ ತನ್ನ ಮಗಳನ್ನು ನೋಡಲೂ ಅವಕಾಶವಾಗಿಲ್ಲವೆಂದು ಕಣ್ಣೀರಿಟ್ಟ. ಜೈಲಿನಲ್ಲಿದ್ದ ಹಳೆಯ ಕೈದಿಗಳು ಹೇಳಿದ ಪ್ರಕಾರ ಮಹಿಳಾ ಕೈದಿಗಳನ್ನು ನೋಡಿಕೊಳ್ಳಲು ಒಬ್ಬರು ಮಹಿಳಾ ವಾರ್ಡನ್ ಇದ್ದರೂ ಆಕೆ ರಾತ್ರಿ ಹೊತ್ತು ಇರುವುದಿಲ್ಲವೆಂದೂ ಯಾವುದೇ ಮಹಿಳಾ ಕೈದಿ ಬಂದರೂ ಜೈಲಿನ ಸಿಬ್ಬಂದಿ ಅವರನ್ನು ಲೈಂಗಿಕವಾಗಿ ಹಿಂಸಿಸುವುದು ಸಾಮಾನ್ಯವೆಂದೂ, ಹಣ ಕೊಡುವ ಹಳೆಯ ಕೈದಿಗಳಿಗೂ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆಂದೂ ಹೇಳಿದ ಸಂಗತಿ ಆಘಾತಕರವಾಗಿತ್ತು. ವಿಶ್ವಾಸದಿಂದಿದ್ದ ಜೈಲಿನ ಗಾರ್ಡ್ ಒಬ್ಬರು ಇದನ್ನು ಖಚಿತಪಡಿಸಿ ತನ್ನ ಸಹೋದ್ಯೋಗಿಗಳಿಂದ ಮುದುಕನ ಮಗಳಿಗೂ ತೊಂದರೆಯಾಗಿದೆಯೆಂದೂ ಹೇಳಿದರು. ಸುಮಾರು 90 ಸಂಖ್ಯೆಯಷ್ಟಿದ್ದ ನಾವುಗಳು ಪರಸ್ಪರ ಚರ್ಚಿಸಿ ಇದನ್ನು ಪ್ರತಿಭಟಿಸಲು ನಿರ್ಧರಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತೆವು. ಹೆದರಿಕೆ, ಬೆದರಿಕೆಗಳು ಬಂದರೂ ಜಗ್ಗಲಿಲ್ಲ. ನ್ಯಾಯಾಲಯಗಳಲ್ಲಿ ಹಿಯರಿಂಗ್ ಇದ್ದವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ಪೋಲಿಸರು ಬಂದಾಗ ಬಂದಿಗಳು ಹೋಗಲು ನಿರಾಕರಿಸಿದರು. ವಿಷಯ ತೀವ್ರಗೊಂಡಾಗ ಹಿರಿಯ ಅಧಿಕಾರಿಗಳು ಬಂದು ಇಬ್ಬರು ಗಾರ್ಡ್ ಗಳನ್ನು ಅಮಾನತ್ತಿನಲ್ಲಿಟ್ಟು ನ್ಯಾಯಯುತ ವಿಚಾರಣೆ ನಡೆಸುವುದಾಗಿ ಆಶ್ವಾಸನೆ ಕೊಟ್ಟ ನಂತರ ನಮ್ಮ ಎರಡು ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು. ಹೆಚ್ಚಿನ ವಿವರ ನೀಡದೇ ಕಥೆಯ ಅಂತ್ಯಕ್ಕೆ ಬಂದುಬಿಡುತ್ತೇನೆ. ಕೆಲವು ತಿಂಗಳುಗಳ ನಂತರದಲ್ಲಿ (ನಾನು ಆಗ ಜೈಲಿನಲ್ಲಿರಲಿಲ್ಲ)ಮುದುಕನ ಪತ್ನಿ ತೀರಿಕೊಂಡಾಗ ಅಂತ್ಯ ಸಂಸ್ಕಾರದ ಸಮಯದಲ್ಲಿ ಮುದುಕನನ್ನೂ ಆತನ ಮಗಳನ್ನೂ ಪೋಲಿಸ್ ರಕ್ಷಣೆಯಲ್ಲಿ ಕರೆದುಕೊಂಡು ಹೋಗಿದ್ದರಂತೆ. ಆ ಹುಡುಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳಂತೆ. ಆ ಸಂದರ್ಭದಲ್ಲಿ ಅವಳು ಪೋಲಿಸರ ಕಣ್ಣು ತಪ್ಪಿಸಿ ಮನೆಯ ಹಿಂದಿನ ಬಾವಿಗೆ ಹಾರಿದಳಂತೆ. ನಂತರ ಹೊರಬಂದಿದ್ದು ಆಕೆಯ ಹೆಣ. ಪತ್ರಿಕೆಗಳಲ್ಲಿ ಈ ವಿಷಯ ಆತ್ಮಹತ್ಯೆ ಎಂದು ಪ್ರಕಟವಾಗಿತ್ತು. ನಿಜಕ್ಕೂ ಅದು ಆತ್ಮಹತ್ಯೆಯೇ? ಕೊಲೆಯೇ?

ಸೋಮವಾರ, ಜುಲೈ 26, 2010

ಸೇವಾಪುರಾಣ -9: ಸರಳುಗಳ ಹಿಂದಿನ ಲೋಕ -2: ಪೋಲಿಸರ ಕುಯುಕ್ತಿ

ಪೋಲಿಸರ ಕುಯುಕ್ತಿ
     ನಾನು ಪೋಲಿಸ್ ಠಾಣೆಗೆ ಹಾಜರಾತಿ ಹಾಕಲು ಹೋಗಿದ್ದಾಗ ಸಬ್ ಇನ್ಸ್ ಪೆಕ್ಟರರು ನನ್ನನ್ನು ಜೀಪಿನಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ಏಕೆ ಎಂದು ಕೇಳಿದ್ದಕ್ಕೆ ಕೆಕ್ಕರಿಸಿ ನೋಡಿದರು. ನಾನು ಸುಮ್ಮನೆ ಹೋಗಿ ಜೀಪು ಹತ್ತಿ ಕುಳಿತೆ. ಒಬ್ಬ ಆರೆಸ್ಸೆಸ್ ಕಾರ್ಯಕರ್ತನನ್ನು ಬಂಧಿಸಲು ಹೋಗುತ್ತಿದ್ದರೆಂದು ಆತನ ಮನೆಯ ಮುಂದೆ ಜೀಪು ನಿಂತಾಗಲೇ ನನಗೆ ಗೊತ್ತಾಗಿದ್ದು. ನನ್ನನ್ನೂ ಅವರ ಮನೆಯ ಒಳಗೆ ಕರೆದುಕೊಂಡು ಹೋದರು.ನಾನು ಮನೆಯ ಸ್ಟೇರ್ ಕೇಸಿನ ಮೆಟ್ಟಿಲ ಮೇಲೆ ಹಿಡಿಯಾದ ಮನಸ್ಸಿನಿಂದ ಕುಳಿತಿದ್ದೆ. ಯಾರನ್ನು ಬಂಧಿಸಲು ಹೋಗಿದ್ದರೋ ಆತನೂ ನನ್ನ ಸ್ನೇಹಿತನೇ ಆಗಿದ್ದು ಆತನ ಮನೆಯವರೂ ನನಗೆ ಪರಿಚಿತರಿದ್ದರು. ಆತನ ಮನೆಯವರು ನನ್ನನ್ನು ಒಂದು ತರಹಾ ನೋಡುತ್ತಿದ್ದರು. ಅವರ ದೃಷ್ಟಿಯಲ್ಲಿ ಆತನನ್ನು ನಾನೇ ಹಿಡಿಸುತ್ತಿದ್ದೇನೆ ಎಂಬ ಭಾವನೆ ಬಂದಿತ್ತೆಂದು ನಂತರ ನನಗೆ ಗೊತ್ತಾಗಿ ಬಹಳ ನೊಂದುಕೊಂಡಿದ್ದೆ. ಆತ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ಪೇದೆಗಳು ಮನೆಯನ್ನೆಲ್ಲಾ ಜಾಲಾಡಿದರು. ಅವನನ್ನು ಕರೆಸಲು ಆತನ ತಂದೆಗೆ ಪೋಲಿಸ್ ಭಾಷೆಯಲ್ಲಿ ಆದೇಶಿಸಿದರು. ಬಂದ ತಕ್ಷಣ ಠಾಣೆಗೆ ಕಳಿಸಿಕೊಡುವುದಾಗಿ ಆತನ ವೃದ್ಧ ತಂದೆ ಹೇಳಿದರೂ, ಸಬ್ ಇನ್ಸ್ ಪೆಕ್ಟರರು ಆ ವೃದ್ಧರಿಗೆ ಹೇಳಿದ ಮಾತಿನಿಂದ ನನಗೇ ರೋಷ ಉಕ್ಕಿ ಬಂದಿದ್ದಾಗ ಆತನ ಮನೆಯವರಿಗೆ ಹೇಗಾಗಿರಬೇಕು!  ಅಸಹಾಯಕತೆ ಎಲ್ಲರನ್ನೂ ಷಂಡರನ್ನಾಗಿಸಿತ್ತು. ತುರ್ತು ಪರಿಸ್ಥಿತಿ ಅಂತಹ ವಾತಾವರಣ ನಿರ್ಮಿಸಿತ್ತು. ರಾಜಕೀಯಸ್ಥರು -ಅದರಲ್ಲೂ ಕಾಂಗ್ರೆಸ್ಸಿಗರು- ತಮಗಾಗದವರನ್ನು ಮಟ್ಟ ಹಾಕಲು ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಪೋಲಿಸರ ಕೈಗೆ ಸರ್ವಾಧಿಕಾರ ಸಿಕ್ಕಿಬಿಟ್ಟಿತ್ತು. ಅವರ ವಿಕೃತ ಕ್ರೌರ್ಯಕ್ಕೆ ಮಿತಿಯೇ ಇರಲಿಲ್ಲ.
ರಾಷ್ಟ್ರದ್ರೋಹದ ಕೇಸು!
     ಎರಡು ತಿಂಗಳ ನಂತರ ದಿನಾಂಕ 9-11-1975ರಂದು ವಿಧ್ವಂಸಕ ಕೃತ್ಯಕ್ಕಾಗಿ ಪಿತೂರಿ ಮಾಡುತ್ತಿದ್ದೇನೆಂದು ನಾನೂ ಸೇರಿದಂತೆ 11 ಜನರ ವಿರುದ್ಧ ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆ ಹೂಡಿದಾಗ ಪುನಃ ಜೈಲಿನ ದರ್ಶನವಾಯಿತು. ಹಾಸನದ ಇಂಜನಿಯರಿಂಗ್ ಕಾಲೇಜಿನ ಇನ್ಸ್ ಟ್ರಕ್ಟರ್ ಚಂದ್ರಶೇಖರ್, ಕರ್ನಾಟಕ ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಟೈಲರ್ ಜನಾರ್ಧನ ಐಯಂಗಾರ್, ಪೆಟ್ಟಿಗೆ ಅಂಗಡಿ ರಾಮಚಂದ್ರ (ಇವರನ್ನು ಕಛ್ ರಾಮಚಂದ್ರ ಎಂದು ಕರೆಯುತ್ತಿದ್ದರು, ಗೋವಾ ವಿಮೋಚನಾ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು),ಆರೆಸ್ಸೆಸ್ ಪ್ರಚಾರಕರಾಗಿದ್ದ ಪ್ರಭಾಕರ ಕೆರೆಕೈ (ಇವರು ತುರ್ತು ಪರಿಸ್ಥಿತಿ ನಂತರದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಯಾರನ್ನು ಕಂಡರೂ -ಪರಿಚಯದವರಾದರೂ- ಭಯಪಡುತ್ತಿದ್ದರು, ಮತ್ತು ಇದೇ ಕಾರಣದಲ್ಲಿ 30-32ರ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು.ಬಹುಷಃ ತುರ್ತು ಪರಿಸ್ಥಿತಿಯಲ್ಲಿ ಅವರು ಅನುಭವಿಸಿದ್ದ ಹಿಂಸೆ ಅದಕ್ಕೆ ಕಾರಣವಾಗಿದ್ದಿರಬಹುದು),ವಿದ್ಯಾರ್ಥಿಗಳಾದ ನಾಗಭೂಷಣ, ಪಾರಸಮಲ್, ಶ್ರೀನಿವಾಸ,ಪಟ್ಟಾಭಿರಾಮ, ಸದಾಶಿವ ಇವರುಗಳೇ ನನ್ನೊಂದಿಗೆ ಬಂದಿಗಳಾದವರು. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗಲಿಲ್ಲ. ಜೊತೆಯಲ್ಲಿದ್ದ ಕೆಲವರು ಹತಾಶರಾಗಿದ್ದರು. ಈ ಪ್ರಕರಣ ಮುಗಿಯುವವರೆಗೆ ಅಂದರೆ 3-4 ತಿಂಗಳುಗಳವರೆಗೆ ನಾವು ಕಾರಾಗೃಹದಲ್ಲೇ ಇರಬೇಕಾಯಿತು. ನನ್ನ ಜೊತೆಗೆ ನನ್ನಂತಹವರೇ ಇದ್ದುದರಿಂದ ಈಸಲ ಅಷ್ಟೊಂದು ಹಿಂಸೆಯೆನಿಸಲಿಲ್ಲ.ಇದೇ ತಿಂಗಳಿನಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ದೇಶವ್ಯಾಪಿ ಆಂದೋಲನ ಪ್ರಾರಂಭವಾಗಿ ಆರೆಸ್ಸೆಸ್, ಜನಸಂಘದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಸನದ ಜೈಲಿಗೆ ಬರತೊಡಗಿದರು. ಇಂತಹ ಹೊಸ ಹೊಸ ಬಂದಿಗಳು ಬಂದಾಗಲೆಲ್ಲಾ ಅವರಿಗೆ ಜೈಲಿನಲ್ಲಿ ವೀರೋಚಿತ ಸ್ವಾಗತ ಸಿಗುತ್ತಿತ್ತು. ಸತ್ಯಾಗ್ರಹಿಗಳ ಸಂಖ್ಯೆ ಜಾಸ್ತಿಯಾದಾಗ ಕಳ್ಳಕಾಕರೊಂದಿಗೆ ಇರಿಸದೆ ಪ್ರತ್ಯೇಕವಾಗಿ ಇರಿಸಬೇಕೆಂಬ ಒತ್ತಾಯಕ್ಕೆ ಜೈಲು ಸಿಬ್ಬಂದಿ ಮಣಿಯಲೇ ಬೇಕಾಯಿತು. ನಮ್ಮನ್ನೆಲ್ಲಾ ಒಂದು ಬ್ಯಾರಕ್ಕಿನಲ್ಲಿ, ಇತರ ಕೈದಿಗಳನ್ನು ಇನ್ನೊಂದು ಬ್ಯಾರಕ್ಕಿನಲ್ಲಿ ತುಂಬಿದರು. 35 ಬಂದಿಗಳನ್ನು ಇರಿಸಬಹುದಾದ ಕಾರಾಗೃಹದಲ್ಲಿ 200ಕ್ಕೂ ಹೆಚ್ಚು ಕೈದಿಗಳನ್ನು ಅಕ್ಷರಶಃ ತುಂಬಲಾಗಿತ್ತು.ನಂತರ ಬಂದವರನ್ನು ಬಳ್ಳಾರಿ, ಮೈಸೂರು ಜೈಲುಗಳಿಗೆ ಕಳಿಸುತ್ತಿದ್ದರು. ಜೈಲಿನ ಒಳಗಿದ್ದಾಗ ಹೊಸ ಕೇಸುಗಳ ಭಯವಿರಲಿಲ್ಲ.ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತೆಂದರೆ ತಪ್ಪಿರಲಿಲ್ಲ.
ಸುಧಾರಣೆ
     ನಮ್ಮ ಪ್ರತಿಭಟನೆಯಿಂದಾಗಿ ಜೈಲು ಸಿಬ್ಬಂದಿ ಕಟ್ಟಿದಾರಭ್ಯ ಶುಚಿಗೊಳ್ಳದಿದ್ದ ನೀರಿನ ತೊಟ್ಟಿ, ಅಡುಗೆ ಮನೆ, ಶೌಚಾಲಯ ಸ್ವಚ್ಛಗೊಳಿಸಲು ಕ್ರಮ ಕೈಗೊಂಡದ್ದು ಅದ್ಭುತ ಸಾಧನೆಯೆಂದೇ ಹೇಳಬಹುದು.ಮೊದಲು ನಮಗೆ ಕೊಡುತ್ತಿದ್ದ ಆಹಾರವನ್ನು ತಯಾರಿಸುವ ಕೆಲಸ ಅಡುಗೆ ಬಲ್ಲ ಕೈದಿಗಳೇ ಮಾಡುತ್ತಿದ್ದು ಅವರು ಇರುತ್ತಿದ್ದ ಸ್ಥಿತಿ ನೋಡಿದರೆ ಮಾಡಿದ ಊಟವೆಲ್ಲಾ ಹೊರಬರುತ್ತಿತ್ತು.ನಮ್ಮ ಅಡುಗೆಯನ್ನು ನಾವೇ ಸಿದ್ಧಪಡಿಸಿಕೊಳ್ಳಲು ಅವಕಾಶ ಪಡೆದೆವು.ನಾನು ಫುಡ್ ಇನ್ಸ್ ಪೆಕ್ಟರ್ ಆಗಿದ್ದರಿಂದ ಎಲ್ಲರೂ ನನ್ನನ್ನು ಫುಡ್ ನಾಗರಾಜ ಎಂತಲೇ ಕರೆಯುತ್ತಿದ್ದರು. ಜೈಲಿನಲ್ಲಿಯೂ ಆಹಾರ ವಿಭಾಗದ ಮೇಲ್ವಿಚಾರಣೆ ಕೆಲಸ ನನ್ನ ಹೆಗಲಿಗೇ ಬಿತ್ತು.ನಮಗೆ ಬರಬೇಕಾದ ಆಹಾರ ಧಾನ್ಯಗಳ ಪ್ರಮಾಣವನ್ನು (ಒಬ್ಬ ಕೈದಿಗೆ ಇಷ್ಟು ಹಿಟ್ಟು, ತರಕಾರಿ, ಬೇಳೆ, ಸೌದೆ, ಎಂದು ಪ್ರಮಾಣ ನಿಗದಿತವಾಗಿರುತ್ತದೆ) ಲೆಕ್ಕ ಹಾಕಿ ಪಡೆಯುವ ಕೆಲಸ ಮಾಡುತ್ತಿದ್ದೆ. ಜೈಲು ಸಿಬ್ಬಂದಿ ಈ ಮೊದಲು ಕೈದಿಗಳಿಗೆ ಕೊಡುತ್ತಿದ್ದ ಪ್ರಮಾಣ ಕಡಿಮೆ ಮಾಡಿ ತಮ್ಮ ಮನೆಗಳಿಗೆ ಸಾಗಿಸುತ್ತಿದ್ದುದು ನಾವು ಸರಿಯಾಗಿ ತೂಕ ಹಾಕಿಸಿ ಪಡೆಯುತ್ತಿದ್ದರಿಂದ ಇಂತಹ ಅಕ್ರಮಕ್ಕೆ ಅವಕಾಶವಾಗುತ್ತಿರಲಿಲ್ಲ.ಕಾಯಿಲೆಯಾದವರಿಗೆ ಹಾಲು, ಬ್ರೆಡ್ ಕೊಡಲು ಅವಕಾಶವಿದ್ದುದರಿಂದ ಮತ್ತು ನಮಗೆ ಮಜ್ಜಿಗೆ ಕೊಡುತ್ತಿರಲಿಲ್ಲವಾದ್ದರಿಂದ 6-7 ಜನರಿಗೆ ಕಾಯಿಲೆಯಾದವರೆಂದು ಲೆಕ್ಕ ಕೊಟ್ಟು ಅವರ ಪಾಲಿನ ಹಾಲು, ಬ್ರೆಡ್ ಪಡೆದು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದೆವು.ಜೈಲು ಸಿಬ್ಬಂದಿಗೆ ಸೌದೆ, ತರಕಾರಿ, ಇತ್ಯಾದಿಗಳನ್ನು ಮನೆಗೆ ಸಾಗಿಸಲು ಅವಕಾಶವಿಲ್ಲದ್ದರಿಂದ ಅವರಿಗೆ ನಮ್ಮಗಳ ಮೇಲೆ ಅಸಮಾಧಾನವಿತ್ತು.ಇದಕ್ಕಾಗಿ ಅವರು ಇತರ ಕೈದಿಗಳನ್ನು ನಮ್ಮ ಮೇಲೆ ಎತ್ತಿಕಟ್ಟಿದ್ದರಿಂದ ಅವರಿಗೂ, ನಮಗೂ ಎರಡು-ಮೂರು ಸಲ ಹೊಡೆದಾಟವಾಗಿತ್ತು. ಒಳ್ಳೆಯ ಕಂಬಳಿ, ತಟ್ಟೆ, ಲೋಟಗಳಿಗಾಗಿ ಸಹ ಸತ್ಯಾಗ್ರಹ ನಡೆಸಬೇಕಾಯಿತು. ಜೈಲು ಸೂಪರಿಂಟೆಂಡೆಂಟರು ತಟ್ಟೆ, ಲೋಟಗಳನ್ನು ತರಿಸಿಕೊಟ್ಟರು. ಕಂಬಳಿ ತರಿಸಲು ಅವರು ಸಮಯಾವಕಾಶ ಕೇಳಿದರೂ ತರಿಸಿಕೊಡಲಿಲ್ಲ. ಅವುಗಳನ್ನು ಯಾರೂ ಉಪಯೋಗಿಸುತ್ತಲೂ ಇರಲಿಲ್ಲ.ಮನೆಯಿಂದ ಹೊದಿಕೆ ತರಿಸಿಕೊಳ್ಳಲು ಅವಕಾಶ ನೀಡಿ ಉಪಕಾರ ಮಾಡಿದರು.ಹಾಡು, ಭಜನೆ, ಚರ್ಚೆಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದೆವು. 'ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನದಿನ' ಎಂಬುದು ನನ್ನ ಮೆಚ್ಚಿನ ಹಾಡಾಗಿದ್ದು ಅದನ್ನೇ ಇತರರಿಗೆ ಹೇಳಿಕೊಡುತ್ತಿದ್ದೆ. ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತು. ತುರ್ತು ಪರಿಸ್ಥಿತಿಯಲ್ಲಿ ನಾವು ಜೈಲಿನ ಒಳಗಡೆ ಮಾಡುತ್ತಿದ್ದಂತಹ ಚರ್ಚೆಗಳನ್ನು ಮುಕ್ತವಾಗಿ ಹೊರಗೆ ಮಾಡಲು ಸಾಧ್ಯವೇ ಇರಲಿಲ್ಲ!
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 25, 2010

ಮೂಢ ಉವಾಚ -14

ತನುಮನಗಳ ತೀರದ ದಾಹವದೆ ಕಾಮ|
ದಾಹವನು ತಣಿಸಲು ಮಾಡುವುದೆ ಕರ್ಮ||
ತಣಿಯದದು ಕಾಮ ನಿಲ್ಲದದು ಕರ್ಮ||
ದೇವನಾಟವನರಿತವರಾರಿಹರೋ ಮೂಢ||

ಹಿತಕಾಮ ಮಿತಕಾಮ ವಿಕಟಕಟಕಾಮ|
ಸತ್ಕಾಮ ದುಷ್ಕಾಮ ಸುರಾಸುರರ ಕಾಮ||
ಎಂತಪ್ಪ ಜನರಿಹರೋ ಅಂತಪ್ಪ ಕಾಮ||
ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ||

ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|
ಕಾಮವೆಂಬುದು ಪಾಶ ಕಾಮದಿಂದಲೆ ನಾಶ||
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|
ಕಾಮದಿಂದಲೆ ಸಕಲ ಸಂಪದವು ಮೂಢ||

ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು||
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ|
ದಿವ್ಯಕಾಮ ರಮ್ಯ ಕಾಮ ನಿನದಲ್ತೆ ಮೂಢ||
*************
-ಕ.ವೆಂ.ನಾಗರಾಜ್.

ಶುಕ್ರವಾರ, ಜುಲೈ 23, 2010

ಸೇವಾ ಪುರಾಣ -8

ಸೇವಾ ಪುರಾಣ -8
ಸರಳುಗಳ ಹಿಂದಿನ ಲೋಕ -1
     ಪಾಪಿಗಳ ಲೋಕವೆಂದೇ ಹೇಳಲಾಗುವ ಬಂದೀಖಾನೆಗೆ ನನ್ನ ಪ್ರಥಮ ಪ್ರವೇಶ ದಿನಾಂಕ 05-08-1975ರಲ್ಲಿ ಆಗಿ ಅಲ್ಲಿ ನನ್ನ ಹೆಸರು ನೋಂದಾವಣೆ ಆಯಿತು. ಹಾಸನದ ಬಂದೀಖಾನೆಯಲ್ಲಿ ನನ್ನ ಹೆಸರು, ಕುಲ, ಗೋತ್ರ, ಅಪರಾಧದ ವಿವರ, ನನ್ನ ಕೈಬೆರಳುಗಳ ಮುದ್ರೆಗಳು, ಇತ್ಯಾದಿಗಳನ್ನೆಲ್ಲಾ ಒಂದು ರಿಜಿಸ್ಟರಿನಲ್ಲಿ ಪಡೆದುಕೊಂಡರು. ನನ್ನ ಜೇಬಿನಲ್ಲಿದ್ದ ಪುಡಿಗಾಸು, ಕೈಯಲ್ಲಿದ್ದ ವಾಚು, ಎಲ್ಲವನ್ನೂ ತೆಗೆದಿರಿಸಿಕೊಂಡು ದಾಖಲಿಸಿ ಇಟ್ಟುಕೊಂಡರು. ನನ್ನ ಮೈಮೇಲಿದ್ದ ಜನಿವಾರ, ಉಡುದಾರಗಳನ್ನು ಹರಿದು ಕಿತ್ತೆಸೆದರು. ಗಬ್ಬು ವಾಸನೆ ಬರುತ್ತಿದ್ದ ಒಂದು ಹರಕಲು ಕಂಬಳಿ,ನೆಗ್ಗಿ ನುಗ್ಗೆಕಾಯಿ ಆಗಿದ್ದ ಒಂದು ಅಲ್ಯೂಮಿನಿಯಂ ಚಂಬು, ತಟ್ಟೆಯ ಅಕಾರವನ್ನೇ ಕಳೆದುಕೊಂಡಿದ್ದ ಒಂದು ಅಲ್ಯೂಮಿನಿಯಂ ತಟ್ಟೆಗಳನ್ನು ನನ್ನ ಕೈಗೆ ಕೊಟ್ಟರು. ಜೈಲಿನ ದೊಡ್ಡ ಬಾಗಿಲಿನ ಒಂದು ಭಾಗದಲ್ಲಿದ್ದ ಸಣ್ಣ ಬಾಗಿಲಿನಿಂದ ಬಗ್ಗಿ ನಡೆದು ಜೈಲಿನ ಒಳಾಂಗಣಕ್ಕೆ ಕಾಲಿಟ್ಟಾಗ ನನಗೆ ಹೇಗೆ ಹೇಗೋ ಆಯಿತು, ತಳಮಳವಾಯಿತು. ಅಲ್ಲಿ ಇದ್ದ ಎರಡು ದೊಡ್ಡ ಬ್ಯಾರಕ್ ಗಳ ಪೈಕಿ ಒಂದರ ಒಳಗೆ ನನ್ನನ್ನು ತಳ್ಳಿ ಮತ್ತೆ ಬ್ಯಾರಕ್ ಗೆ ಬೀಗ ಹಾಕಿದರು.ಒಳಗೆ ಹೋದ ಕೂಡಲೇ ಒಳಗಿದ್ದವರು ನನ್ನನ್ನು 'ಹೋ' ಎಂದು ಮುತ್ತಿಕೊಂಡರು. ನನಗೆ ಕಕ್ಕಾಬಿಕ್ಕಿಯಾಯಿತು. ಕಾಲೇಜುಗಳಲ್ಲಿ ಹೊಸ ವಿದ್ಯಾರ್ಥಿಗಳನ್ನು ಹಳಬರು ಗೋಳು ಹುಯ್ದುಕೊಳ್ಳುವಂತೆ ಕೆಲವರು ನನ್ನನ್ನು ಗೋಳಾಡಿಸಿದರು. ಕೆಲವರು ನಿರ್ಲಿಪ್ತರಾಗಿ ತಮ್ಮ ಪಾಡಿಗೆ ತಾವು ಇದ್ದರು. ನನ್ನ ಚರಿತ್ರೆ ಕೇಳಿ ತಿಳಿದುಕೊಂಡ ಅವರುಗಳು 'ಓ, ಇಂದಿರಾಗಾಂಧಿ ಕೇಸು' ಎಂದು ಚಪ್ಪಾಳೆ ಬಡಿದು ನಕ್ಕರು. ಆ ದೊಡ್ಡ ಹಾಲಿನಲ್ಲಿ ಸಮಾಧಿಗಳ ಆಕಾರದಲ್ಲಿ ಗಾರೆ,ಸಿಮೆಂಟಿನಲ್ಲಿ ಕಟ್ಟೆಗಳನ್ನು ಕೈದಿಗಳು ಮಲಗುವ ಸಲುವಾಗಿ ಕಟ್ಟಿಸಿದ್ದರು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ಕಟ್ಟೆಗಳ ನಡುವಿನ ಸ್ಥಳಗಳಲ್ಲೂ ಕೈದಿಗಳು ಮಲಗಬೇಕಾಗಿತ್ತು. ಕಟ್ಟೆಗಳನ್ನು ಸಮಾಧಿ ಎಂದೇ ಕರೆಯುತ್ತಿದ್ದರು. ಕಟ್ಟೆಯ ಮೇಲೆ ಮಲಗುವುದು ಎಂದರೆ ಸಮಾಧಿಯ ಮೇಲೆ ಮಲಗುವುದು ಎಂತಲೂ ಮಧ್ಯದ ಸ್ಥಳದಲ್ಲಿ ಮಲಗುವುದು ಎಂದರೆ ಸಮಾಧಿಯ ಒಳಗೆ ಮಲಗುವುದು ಎಂತಲೂ ಹೇಳುತ್ತಿದ್ದರು.ಅಂತಹ ಒಂದು ಸಮಾಧಿಯ ಒಳಗೆ ನಾನು ಮಲಗಬೇಕೆಂದು ಅಲ್ಲಿದ್ದ ಹಳಬರು ಅಪ್ಪಣೆ ಕೊಟ್ಟರು.ನನಗೆ ಕೊಟ್ಟಿದ್ದ ಹರಕಲು ಕಂಬಳಿಯಲ್ಲಿ ತಿಗಣೆಯೊಂದು ಹರಿಯುತ್ತಿದ್ದುದನ್ನು ನೋಡಿದ ನಾನು ಕಂಬಳಿಯನ್ನು ಪಕ್ಕಕ್ಕೆ ತಳ್ಳಿ ಅಲ್ಲಿದ್ದವರನ್ನು ಗಮನಿಸುತ್ತಾ ಗೋಡೆಗೆ ಒರಗಿ ಕುಳಿತುಕೊಳ್ಳಲು ಹೋದವನು ಒರಗಿಕೊಳ್ಳಲಿಲ್ಲ, ಏಕೆಂದರೆ ಗೋಡೆಯ ಮೇಲೆಲ್ಲಾ ತಿಗಣೆಗಳನ್ನು ತೀಡಿ ಸಾಯಿಸಿದ, ಸೊಳ್ಳೆಗಳನ್ನು ಸಾಯಿಸಿದ ರಕ್ತದ ಕಲೆಗಳು ರಾರಾಜಿಸುತ್ತಿದ್ದವು.ಅಲ್ಲಿದ್ದವರ ಮುಖಗಳಲ್ಲಿ ಕೆಲವರು ಕೇಡಿಗರಂತೆ ಕಂಡರೆ ಕೆಲವರು ಅಮಾಯಕರಂತೆ ಕಾಣುತ್ತಿದ್ದರು. ಕೆಲವರು ಚಿಂತಿತರಾಗಿದ್ದರೆ ಕೆಲವರು ಏನೂ ಆಗೇ ಇಲ್ಲವೆಂಬಂತೆ ಇದ್ದರು.ನಾಲ್ಕು ಗೋಡೆಗಳು, ಭದ್ರವಾದ ಬಾಗಿಲು, ಅಲ್ಲಿದ್ದ ಅದೇ ಜನಗಳು, ಇಷ್ಟೇ ಪ್ರಪಂಚ. ಆ ಮುಚ್ಚಿದ ಬ್ಯಾರಕ್ಕಿನ ಮೂಲೆಯಲ್ಲಿಯೇ ಶೌಚಾಲಯವಿತ್ತು. ನಾನು ಅಲ್ಲಿಗೆ ಹೋಗಿ ನೋಡಿದರೆ ವಾಂತಿ ಬರುವಂತಾಯಿತು. ಶೌಚ ಹೋಗುವ ಪೈಪು ಕಟ್ಟಿಕೊಂಡು ಶೌಚ ಹೊರಗೆ ಹೋಗುತ್ತಿರಲಿಲ್ಲ. ಶೌಚಾಲಯದ ಒಳಗೆ ಕಾಲಿಡಲು ಸಾಧ್ಯವೇ ಆಗದಷ್ಟು ಹೇಸಿಗೆ ತುಂಬಿಹೋಗಿತ್ತು. ನಾರುತ್ತಿದ್ದ ಗಬ್ಬು ವಾಸನೆ ಬ್ಯಾರಕ್ಕಿನಲ್ಲೂ ಹರಡಿತ್ತು. ಹಾಗೆಯೇ ವಾಪಸು ಬಂದೆ.
     ಊಟಕ್ಕಾಗಿ ಬೀಗ ತೆಗೆದು ಹೊರಬಿಟ್ಟಾಗ ಎಲ್ಲರ ಜೊತೆ ಸಾಲಿನಲ್ಲಿ ನಿಂತರೆ ನನ್ನ ತಟ್ಟೆಗೆ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ನೀರು ಸಾಂಬಾರು ಬಿತ್ತು. ಸಾಂಬಾರಿನಲ್ಲಿದ್ದ ಬೇಳೆ ಬೆಂದಿರಲೇ ಇಲ್ಲ.ಒಬ್ಬಿಬ್ಬರ ತಟ್ಟೆಯಲ್ಲಿ ತರಕಾರಿ ಹೋಳುಗಳು ಕಂಡವು. ಕಲ್ಲಿನಂತಿದ್ದ ಮುದ್ದೆ ಕಂಡು ತಿನ್ನಲು ಮನಸ್ಸಾಗದೆ ಹಾಗೆಯೇ ಹಿಡಿದುಕೊಂಡಿದ್ದೆ. ನನ್ನನ್ನು ಗಮನಿಸುತ್ತಿದ್ದವನೊಬ್ಬ ನನ್ನನ್ನು ಕೇಳಿ ನನ್ನ ಊಟವನ್ನೂ ತೆಗೆದುಕೊಂಡ.ಎಲ್ಲರೂ ಅದನ್ನೇ ತಿಂದರು.ಕೆಲವರು ತಟ್ಟೆಯನ್ನೇ ನೆಕ್ಕುತ್ತಿದ್ದರು. ತಿಂದಾದ ಮೇಲೆ ಕೈತೊಳೆಯಲು ಇದ್ದ ಪಾಚಿಗಟ್ಟಿದ್ದ ತೊಟ್ಟಿಯ ನೀರಿಗೆ ತಟ್ಟೆಯನ್ನೇ ಅದ್ದುತ್ತಿದ್ದರು.ಸ್ನಾನ ಮಾಡಲೂ ಅದೇ ತೊಟ್ಟಿಯ ನೀರನ್ನು ಬಳಸಬೇಕಾಗಿತ್ತು. ಅದನ್ನು ಕಟ್ಟಿಸಿದಾಗಿನಿಂದಲೂ ಸ್ವಚ್ಛಗೊಳಿಸಿರಲಿಲ್ಲವೆಂಬಂತೆ ಕಾಣುತ್ತಿತ್ತು. ಅದರಲ್ಲಿದ್ದ ನೀರು ಚರಂಡಿಯ ನೀರಿನಂತೆ ಇತ್ತು. ಅಲ್ಲಿದ್ದ ಸ್ಥಿತಿ ನೋಡಿದರೆ ಕಾರಾಗೃಹ ಕಾಯಿಲೆಗಳ ಉಗಮಸ್ಥಾನ ಎಂಬುದರಲ್ಲಿ ಅನುಮಾನ ಕಾಣಲಿಲ್ಲ. ಏಕೆಂದರೆ ಕಾಯಿಲೆಗಳಿಂದ ನರಳುವವರ ಸಂಖ್ಯೆ ಕಡಿಮೆಯಿರಲಿಲ್ಲ. ಕೆಮ್ಮುವವರು, ಸೀನುವವರು, ಎಲ್ಲೆಂದರಲ್ಲಿ ಉಗುಳುವವರು, ಇತ್ಯಾದಿ ನೋಡಿದಾಗ ಹಿಂಸೆಯೆನಿಸುತ್ತಿತ್ತು. ನೀರಿನ ತೊಟ್ಟಿಯ ಹತ್ತಿರದಲ್ಲೇ ಕ್ಷೌರಿಕನೊಬ್ಬ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುವ ಬಂದಿಗಳಿಗೆ ಕ್ಷೌರ ಮಾಡುತ್ತಿದ್ದ. ಕಟಿಂಗ್ ಮಾಡಿಸಿಕೊಂಡ ಒಬ್ಬ ಬಂದಿ ತನ್ನ ತಲೆಯನ್ನೇ ತೊಟ್ಟಿಗೆ ಅದ್ದಿ ಹೊರತೆಗೆದಿದ್ದುದನ್ನು ಕಂಡೆ. ಅದೇ ಮತ್ತು ಅಷ್ಟೇ ಅವನ ಸ್ನಾನವಾಗಿತ್ತು. ನಾನು ತೊಟ್ಟಿಗೆ ನೀರು ಬಿಡಲು ಇದ್ದ ನಲ್ಲಿಯಿಂದ ಸೋರುತ್ತಿದ್ದ ಚಂಬಿನಲ್ಲಿ ನೀರು ಹಿಡಿದುಕೊಂಡು ಮುಖ ತೊಳೆದುಕೊಂಡೆ. ಊಟಕ್ಕೆ ಬಿಟ್ಟಿದ್ದ ಸಮಯದಲ್ಲಿ ಕೆಲವು ಒಂಟಿ ಸೆಲ್ ಗಳು ಹಾಗೂ ಒಂದು ಸಣ್ಣ ಬ್ಯಾರಕ್ ಇದ್ದುದನ್ನು ಗಮನಿಸಿದೆ. ಒಂಟಿ ಸೆಲ್ ಗಳಲ್ಲಿ ಗಲಾಟೆ ಮಾಡುವವರು, ಅಪಾಯಕಾರಿಗಳೆಂದು ಕಂಡವರನ್ನು ಇಡುತ್ತಿದ್ದರು. ಸಣ್ಣ ಬ್ಯಾರಕ್ಕಿನಲ್ಲಿ ಮಹಿಳಾ ಕೈದಿಗಳಿದ್ದು ಅವರಿಗೆ ಬೇರೆ ಸಮಯದಲ್ಲಿ ಊಟ, ಸ್ನಾನಗಳಿಗೆ ಹೊರಬಿಡುತ್ತಿದ್ದರು. ಕೆಲವರು ಕೈದಿಗಳು ಮಹಿಳಾ ಕೈದಿಗಳ ಬ್ಯಾರಕ್ಕಿನ ಸರಳಿನ ಒಳಗೆ ಕೈಬೆರಳುಗಳನ್ನು (ಕೈ ಹಿಡಿಸುತ್ತಿರಲಿಲ್ಲ, ಒಳಗಿದ್ದವರು ಕಾಣುತ್ತಿರಲಿಲ್ಲ) ಹಾಕುತ್ತಿದ್ದರು.ಅದಕ್ಕೆ ಒಳಗಿದ್ದವರೂ ಬೆರಳುಗಳನ್ನು ಸ್ಪರ್ಶಿಸಿ ಪರಸ್ಪರ ಸಂತೋಷಿಸುತ್ತಿದ್ದರಂತೆ. ಬಹಳ ಕಾಲದಿಂದ ಜೈಲಿನಲ್ಲಿದ್ದವರು ಸ್ವಲಿಂಗಿಗಳೊಂದಿಗೇ ವಿಹರಿಸುತ್ತಿದ್ದುದು ವಿಶೇಷವಾಗಿರಲಿಲ್ಲ. ಲೈಂಗಿಕ ಹಸಿವು ಅವರನ್ನು ಹಾಗೆ ಮಾಡಿಸಿದ್ದಿರಬಹುದು. ಸ್ವಲ್ಪ ಸಮಯದ ನಂತರ ಎಲ್ಲರನ್ನೂ ಒಳಗೆ ಕಳಿಸಿ ತಲೆಗಳನ್ನು ಎಣಿಸಿ ಬೀಗ ಹಾಕಿದರು.ಸಾಯಂಕಾಲದ ಹೊತ್ತಿಗೆ ನನ್ನ ತಂದೆ ನನ್ನನ್ನು ಜಾಮೀನಿನ ಮೇಲೆ ಬಿಡಿಸಿ ಹೊರಕರೆತಂದರು.ಮನೆಗೆ ಹೋಗಿ ಸ್ನಾನ ಮಾಡಿದ ನಂತರವೇ ನನಗೆ ಉಸಿರಾಡುವಂತೆ ಆಗಿದ್ದು. ಸುದಾರಿಸಿಕೊಂಡನಂತರ ಮಾಡಿದ ಅಮ್ಮನ ಕೈಯಿನ ಊಟ ಅಮೃತಸಮಾನವಾಗಿತ್ತು!

ಬುಧವಾರ, ಜುಲೈ 21, 2010

ಸೇವಾ ಪುರಾಣ -7: ಸಂಕಷ್ಟದ ಸರಮಾಲೆ

ಸಂಕಷ್ಟದ ಸರಮಾಲೆ
     ಪ್ರಧಾನ ಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಉಳಿವಿಗಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ವಿಚಾರದಲ್ಲಿ ಬಹಳಷ್ಟು ಪರ-ವಿರೋಧದ ಚರ್ಚೆಗಳಾಗಿವೆ. ಆ ಕುರಿತು ನನ್ನ ಅಭಿಪ್ರಾಯವನ್ನೂ ಸಹ ದಾಖಲಿಸಲು ನಾನು ಬಯಸಿಲ್ಲ. ಆದರೆ ಆ ಪರಿಸ್ಥಿತಿಯ ದುರ್ಲಾಭ ಪಡೆದು ಅನೇಕ ರೀತಿಯ ಬಹಳಷ್ಟು ಅನ್ಯಾಯಗಳು ಖಂಡಿತಾ ಜರುಗಿವೆ. ನನಗೆ ಆದ ಅನ್ಯಾಯ, ಅನುಭವಗಳನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ವಾರಕ್ಕೊಂದು ಕೇಸು
     ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರು ನನ್ನನ್ನು ಗುಟ್ಟಾಗಿ ಕರೆದು ನಾನು ಕೂಗಾಡಿ ಹೋದ ಮೇಲೆ ಜಿಲ್ಲಾಧಿಕಾರಿಯವರು ಜಿಲ್ಲಾ ಪೋಲಿಸ್ ಸೂಪರಿಂಟೆಂಡೆಂಟರೊಂದಿಗೆ ಬಹಳ ಹೊತ್ತು ನನ್ನ ಬಗ್ಗೆ ಮಾತನಾಡಿದರೆಂದೂ ನಾನು ಹುಷಾರಾಗಿರಬೇಕೆಂದೂ ತಿಳಿಸಿದ್ದರು. ಅದಕ್ಕೆ ತಕ್ಕಂತೆ ನನ್ನ ಮೇಲೆ ವಾರ, ಹತ್ತು, ಹದಿನೈದು ದಿನಗಳಿಗೊಮ್ಮೆ ಸುಳ್ಳು ಕ್ರಿಮಿನಲ್ ಕೇಸುಗಳನ್ನು ಹಾಕಲು ಪ್ರಾರಂಭಿಸಿದರು. ಕೆಳ ಕೋರ್ಟಿನಲ್ಲಿ ಜಾಮೀನು ಸಿಕ್ಕಿದರೆ, ನನ್ನಂತೆ ತೀರ್ಪು ಬಂದರೆ ಸೆಷನ್ಸ್ ಕೋರ್ಟಿಗೆ ಸರ್ಕಾರದಿಂದ ಮೇಲುಮನವಿ ಸಲ್ಲಿಸುತ್ತಿದ್ದರು. ಅಲ್ಲೂ ನನ್ನ ಪರವಾಗಿ ಆದೇಶವಾದರೆ ಹೈಕೋರ್ಟಿನಲ್ಲಿ ಮೇಲು ಮನವಿ ಸಲ್ಲಿಸುತ್ತಿದ್ದರು. ನನಗೆ ಕೋರ್ಟುಗಳಿಗೆ ಹಾಜರಾಗಬೇಕಾದ ದಿನಾಂಕಗಳನ್ನು ನೆನಪಿಟ್ಟುಕೊಳ್ಳಲು ಒಂದು ದಿನಚರಿಯನ್ನೇ ಇಟ್ಟುಕೊಳ್ಳಬೇಕಾಯಿತು. ದಿನ ಬೆಳಗಾದರೆ ನಾನು ಮತ್ತು ನನ್ನ ತಂದೆ ಲಾಯರರ ಮನೆಗೆ ಎಡತಾಕುವುದೇ ಕೆಲಸವಾಯಿತು. ನನ್ನನ್ನು ಎಂತಹ ಭಯಂಕರ ಅಪರಾಧಿಯೆಂಬಂತೆ ಬಿಂಬಿಸಲಾಗಿತ್ತೆಂದರೆ ನಾನು ಪ್ರತಿದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಿ ಹಾಕಿ ಬರಬೇಕಾಗಿತ್ತು. ಹಾಸನಕ್ಕೆ ಯಾರೇ ರಾಜಕೀಯ ಮುಖಂಡರು, ನೇತಾರರು ಬಂದರೆ ಅವರು ಬಂದು ಹೋಗುವವರೆಗೆ ನನ್ನನ್ನು ಇತರರೊಂದಿಗೆ ಪೋಲಿಸ್ ಠಾಣೆಯಲ್ಲಿ ಕುಳ್ಳಿರಿಸಿ ಅವರು ಹೋದ ನಂತರ ಬಿಟ್ಟು ಕಳಿಸುತ್ತಿದ್ದರು. ಹೊತ್ತಲ್ಲದ ಹೊತ್ತಿನಲ್ಲಿ ಪೋಲಿಸ್ ಜೀಪು ನನ್ನ ಮನೆಯ ಬಳಿ ಬರುವುದು, ನನ್ನನ್ನು ಕರೆದುಕೊಂಡು ಹೋಗುವುದನ್ನು ನೋಡುತ್ತಿದ್ದ ಅಕ್ಕ ಪಕ್ಕದ ಮನೆಯವರಿಗೆ ನನ್ನ ಬಗ್ಗೆ ಏನೋ ಅನ್ನಿಸುತ್ತಿತ್ತು. ಗುಸುಗುಸು ಮಾತಾಡುತ್ತಿದ್ದರು. ನಮಗೆಲ್ಲಾ ಮಾನಸಿಕವಾಗಿ ಬಹಳ ಹಿಂಸೆಯಾಗುತ್ತಿತ್ತು. ಹೀಗಾಗಿ ಒಮ್ಮೆ ಕೇಸು ಹಾಕಿದಾಗ ಜಾಮೀನು ಪಡೆಯಲು ಇಚ್ಛಿಸದೆ ಜೈಲಿನಲ್ಲೇ ಉಳಿದೆ. ಹೊರಗಿನ ವಾತಾವರಣಕ್ಕಿಂತ ಜೈಲೇ ವಾಸಿಯೆಂದು ನನಗೆ ಅನ್ನಿಸಿತ್ತು. ಅಲ್ಲದೆ ಹೊಸ ಕೇಸುಗಳಿಂದಲೂ ಪಾರಾಗಲು ಅದೂ ಒಂದು ಮಾರ್ಗವಾಗಿತ್ತು. ಹೀಗಾಗಿ ಆರು ತಿಂಗಳು ಹಾಸನದ ಜೈಲಿನಲ್ಲಿಯೇ ಇದ್ದೆ. ಆ ಪ್ರಕರಣದಲ್ಲಿ ನನ್ನ ಪರವಾಗಿ ತೀರ್ಪು ಬಂದಾಗಲೇ ಹೊರಗೆ ಬಂದಿದ್ದು. ನಾನು ಎಷ್ಟು ರೋಸಿ ಹೋಗಿದ್ದೆನೆಂದರೆ ಕೇಸುಗಳ ಭರಾಟೆಯಿಂದ ನನ್ನ ನೌಕರಿ ಹೋಗುವುದೆಂದೇ ಭಾವಿಸಿದ್ದೆ. ನನ್ನ ಸ್ನೇಹಿತರು, ಕಛೇರಿಯ ಸಹೋದ್ಯೋಗಿಗಳು ನನ್ನೊಡನೆ ಮಾತನಾಡಲೇ ಹೆದರುತ್ತಿದ್ದರು. ಎಲ್ಲಿ ಅವರನ್ನೂ ನನ್ನೊಂದಿಗೆ ಸೇರಿಸಿಬಿಡುತ್ತಾರೋ ಎಂಬ ಭಯ ಅವರಿಗೆ ಇತ್ತು. ತುರ್ತು ಪರಿಸ್ಥಿತಿ ಮುಗಿಯುವವರೆಗೆ ಮಾತನಾಡಿಸಬೇಡವೆಂದು ಕೈಮುಗಿದು ಕೇಳಿಕೊಂಡವರೂ ಇದ್ದರು. ನಾನೊಬ್ಬ ಒಂಟಿಯಾಗಿದ್ದೆ. ಹಿರಿಯ ವಕೀಲರಾದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರ ಸಹಾಯವನ್ನು ನಾನು ಮರೆಯಲಾರೆ. ಹೆಚ್ಚಿನ ಪ್ರಕರಣಗಳು ನನ್ನಂತೆ ತೀರ್ಮಾನವಾಗಿದ್ದರೆ ಉಳಿದ ಪ್ರಕರಣಗಳನ್ನು ತುರ್ತು ಪರಿಸ್ಥಿತಿ ಹೋದ ನಂತರ ಸರ್ಕಾರವೇ ವಾಪಸು ಪಡೆದಿತ್ತು. ಅವರುಗಳು ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ನನ್ನಿಂದ ಶುಲ್ಕ ತೆಗೆದುಕೊಳ್ಳಲು ಒಪ್ಪಲಿಲ್ಲ. ನನ್ನ ತಂದೆಯವರು ಕೋರ್ಟಿನಲ್ಲಿ ಶಿರಸ್ತೇದಾರರಾಗಿದ್ದುದು ಒಂದು ಕಾರಣವಾಗಿದ್ದರೆ, ಪ್ರಮುಖ ಕಾರಣ ತುರ್ತು ಪರಿಸ್ಥಿತಿಯ ಅನ್ಯಾಯದ ಪ್ರಕರಣಗಳ ವಿರುದ್ಧ ವಾದಿಸಿದ್ದುದು ತಮ್ಮ ಕರ್ತವ್ಯವೆಂದು ಅವರುಗಳು ಭಾವಿಸಿದ್ದುದು!
ನಮಸ್ಕಾರ ಮಾಡದಿದ್ದಕ್ಕೆ ಕೇಸು!
     ಹಾಜರಾತಿ ಹಾಕಲು ಪೋಲಿಸ್ ಠಾಣೆಗೆ ಹೋದಾಗ ರಸ್ತೆಯಲ್ಲಿ ಓಡಾಡುವಾಗ ಎದುರಿಗೆ ಸಿಗುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಒಬ್ಬರು ನನ್ನಿಂದ ನಮಸ್ಕಾರ ನಿರೀಕ್ಷೆ ಮಾಡುತ್ತಿದ್ದರು. ನಾನು ಅವರನ್ನು ಗಮನಿಸದಂತೆ ಹೋಗುತ್ತಿದ್ದುದು ಅವರನ್ನು ಕೆರಳಿಸುತ್ತಿತ್ತೇನೋ! ನಾನು ನಮಸ್ಕಾರ ಮಾಡದಿದ್ದುದು ಅವರಿಗೆ ಸಹನೆಯಾಗುತ್ತಿರಲಿಲ್ಲವೆನ್ನುವುದು ಅವರ ವರ್ತನೆಯಿಂದ ನನಗೆ ಗೊತ್ತಾಗುತ್ತಿತ್ತು. 'ಇನ್ನೂ ಕೊಬ್ಬು ಇಳಿದಿಲ್ಲ ಮಗನಿಗೆ, ನಾನು ಇಳಿಸುತ್ತೇನೆ' ಎಂದು ನನಗೆ ಕೇಳುವಂತೆ ಹೇಳುತ್ತಿದ್ದರು. ಒಂದು ದಿನ ಸಾಯಂಕಾಲ ಪೇಟೆ ಬೀದಿಯಲ್ಲಿ ಸೈಕಲ್ಲಿನಲ್ಲಿ ಹೋಗುವಾಗ ಆ ಹೆಡ್ ಕಾನ್ಸ್ ಟೇಬಲ್ ತಮ್ಮ ಪತ್ನಿಯೊಂದಿಗೆ ಹೋಗುತ್ತಿದ್ದುದನ್ನು ನಾನು ಗಮನಿಸಿರದೆ ಅವರ ಪಕ್ಕದಲ್ಲೇ ಹಾದುಹೋದೆ. ಯಾವ ಕಾರಣಕ್ಕೋ ಹಿಂತಿರುಗಿ ನೋಡಿದರೆ ಆ ಮಹಾಶಯ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದ. ನಾನು ಉದ್ದೇಶ ಪೂರ್ವಕವಾಗಿ ಅವರ ಪಕ್ಕ ಹೋಗಿದ್ದೆನೆಂದು ಆತ ಭಾವಿಸಿರಬೇಕು. ನಾನು ಸುಮ್ಮನೆ ಮುಂದೆ ಹೋದೆ. ನಂತರ ಆ ವಿಷಯ ಮರೆತೇಹೋಗಿತ್ತು.

     ಮೇಲಿನ ಘಟನೆ ನಡೆದು ೨-೩ ದಿನಗಳಾಗಿರಬೇಕು. ಒಂದು ಭಾನುವಾರದ ದಿನ ಮಧ್ಯಾಹ್ನ ಊಟದ ಸಮಯದಲ್ಲಿ ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಆ ಸಮಯಕ್ಕೆ ಸರಿಯಾಗಿ ಒಬ್ಬ ಪೋಲಿಸ್ ಪೇದೆ ಬಂದು ನನ್ನನ್ನು 'ಸಾಹೇಬರು ಕರೆಯುತ್ತಿದ್ದಾರೆ,ಬರಬೇಕಂತೆ' ಎಂದು ಒತ್ತಾಯ ಮಾಡಿ ನನ್ನನ್ನು ಕರೆದುಕೊಂಡು ಹೋದ. ಮನೆಯಲ್ಲಿ ಎಲ್ಲರೂ ಊಟ ಮಾಡಿ ಬರುತ್ತಾನೆಂದು ಹೇಳಿದರೂ ಆತ ಕೇಳಿರಲಿಲ್ಲ. ದಾರಿಯಲ್ಲಿ ವಿಚಾರಿಸಿದರೆ ಆತನಿಗೆ ಏನೂ ವಿಷಯ ಗೊತ್ತಿರಲೇ ಇಲ್ಲ. ನಾನು ಠಾಣೆಯ ಒಳಗೆ ಕಾಲಿಡುತ್ತಿದ್ದಂತೆ ಒಬ್ಬ್ಬ ಧಡಿಯ ಪೇದೆ ನನ್ನ ಕುತ್ತಿಗೆ ಪಟ್ಟಿ ಹಿಡಿದು ಒಳಕ್ಕೆಳೆದು ತಳ್ಳಿದ ರಭಸಕ್ಕೆ ನಾನು ತತ್ತರಿಸಿ ಹೋಗಿ ಎದುರಿನ ಗೋಡೆಗೆ ಅಪ್ಪಳಿಸಿ ಡಿಕ್ಕಿ ಹೊಡೆದುಕೊಂಡು ಕೆಳಗೆ ಬಿದ್ದೆ. ಇನ್ನೊಬ್ಬ ನನ್ನ ಜುಟ್ಟು ಹಿಡಿದು ಮೇಲಕ್ಕೆ ಎತ್ತಿದ. ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಸಬ್ ಇನ್ಸ್ ಪೆಕ್ಟರರು ನನ್ನನ್ನು ಕುರಿತು 'ಯಾವತ್ತಾದರೂ ವಿಮಾನದಲ್ಲಿ ಹೋಗಿದ್ದೆಯಾ?' ಎಂದು ಕೇಳಿದರು. ನಾನು ಇಲ್ಲವೆಂದಾಗ 'ಇವನು ವಿಮಾನದಲ್ಲಿ ಹೋಗಬೇಕಂತೆ, ಹತ್ತಿಸಿರೋ' ಎಂದು ಅಪ್ಪಣೆ ಮಾಡಿದರು. ನನಗೆ ಇವರೆಲ್ಲಾ ಏಕೆ ಹೀಗೆ ಮಾಡುತ್ತಿದ್ದಾರೆಂದು ಗೊತ್ತೇ ಆಗಲಿಲ್ಲ. ಒಬ್ಬ ಪೇದೆ ನನ್ನ ಕೈಗಳನ್ನು ಹಿಂದಕ್ಕೆ ಮಾಡಿ ಹಗ್ಗದಿಂದ ಹೆಡೆಮುರಿ ಕಟ್ಟಿದ. ಅಷ್ಟರಲ್ಲಿ ಸರ್ಕಲ್ ಇನ್ಸ್ ಪೆಕ್ಟರರು ಅಲ್ಲಿಗೆ ಬಂದರು. (ಅವರು ಕೊಡಗು ಮೂಲದವರಾಗಿದ್ದು ಈ ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ಅಪಘಾತದಲ್ಲಿ ಮೃತರಾದರು.) ಅವರು ನನ್ನ ಕೈಗೆ ಕಟ್ಟಿದ್ದ ಹಗ್ಗ ಬಿಚ್ಚಿಸಿದರು. ಸಬ್ ಇನ್ಸ್ ಪೆಕ್ಟರರ ಕುರ್ಚಿಯಲ್ಲಿ ಕುಳಿತ ಅವರು ನನ್ನನ್ನುದ್ದೇಶಿಸಿ "ಏನೋ, ಚಾಕು, ಚೂರಿ ಹಾಕ್ತೀಯಾ? ನೋಡಕ್ಕೆ ಹೀಗಿದಿಯಾ, ದಾದಾಗಿರಿ ಮಾಡ್ತೀಯಾ?" ಎಂದು ಗದರಿಸಿದರು. ನಾನು "ನೋಡಿ, ನನಗೇನೂ ಗೊತ್ತಿಲ್ಲ. ವಿಷಯವೇ ತಿಳಿಯದೆ ನಾನು ಏನು ಹೇಳಲಿ?" ಎಂದಾಗ ಅವರು ಟೇಬಲ್ಲಿನ ಮೇಲೆ ಇದ್ದ ಕಾಗದ ಓದಲು ಕೊಟ್ಟರು. ಅದು ಹೆಡ್ ಕಾನ್ಸ್ ಟೇಬಲ್ ಮಹಾಶಯರು ನನ್ನ ಬಗ್ಗೆ ಕೊಟ್ಟ ದೂರಾಗಿತ್ತು. ಅದರಲ್ಲಿ 'ನಾನು ಹೆಡ್ ಕಾನ್ಸ್ ಟೇಬಲ್ಲರಿಗೆ ನನ್ನ ವಿರುದ್ಧ ಸಾಕ್ಷಿ ಹೇಳಿದರೆ ಚಾಕು ಹಾಕಿ ದೇವಿಗೆರೆಗೆ ಹಾಕುತ್ತೇನೆಂದು ಬೆದರಿಕೆ ಹಾಕಿದ್ದೇನೆಂದೂ, ತನಗೆ ರಕ್ಷಣೆ ಕೊಡಬೇಕೆಂದೂ' ಬರೆದಿದ್ದರು. (ದೇವಿಗೆರೆ ಅನ್ನುವುದು ಹಾಸನದ ಗಾಂಧಿಬಜಾರಿನಲ್ಲಿರುವ ದೇವಸ್ಥಾನದ ಕೊಳ.) ನಾನು "ಇದೆಲ್ಲಾ ಸುಳ್ಳು. ಅವರಿಗೆ ನಮಸ್ಕಾರ ಮಾಡಲಿಲ್ಲ, ಗೌರವ ಕೊಡಲಿಲ್ಲ ಎಂದು ಸುಳ್ಳು ದೂರು ಕೊಟ್ಟಿದ್ದಾರೆ, ನನಗೆ ಬುದ್ಧಿ ಕಲಿಸುತ್ತೇನೆಂದು ಹೇಳಿದ್ದಾರೆ" ಎಂದು ನಿಜ ಸಂಗತಿ ಹೇಳಿದೆ. ದೂರು ಕೊಟ್ಟ ಮಹಾಶಯ "ಮೊನ್ನೆ ನಾನು ಮತ್ತು ನನ್ನ ಹೆಂಡತಿ ಪೇಟೆಯಲ್ಲಿ ಹೋಗುವಾಗ ನನ್ನ ಹೆಂಡತಿಗೆ ಸೈಕಲ್ಲಿನಲ್ಲಿ ಡಿಕ್ಕಿ ಹೊಡೆದು ಹೋದ" ಎಂದು ಮತ್ತೊಂದು ಹಸಿಸುಳ್ಳು ಹೇಳಿದ. ಸರ್ಕಲ್ ಇನ್ಸ್ ಪೆಕ್ಟರರು ಕುರ್ಚಿಯಿಂದ ಧಡಕ್ಕನೆ ಎದ್ದು ನನಗೆ ಹೊಡೆಯಲು ಕೈ ಎತ್ತಿದಾಗ ನಾನು ಕೈ ಅಡ್ಡ ಇಟ್ಟು ತಡೆದು "ತಡೆಯಿರಿ. ಈ ದೂರಿನ ಮೇಲೆ ಕೇಸು ಹಾಕುವುದಿದ್ದರೆ ಹಾಕಿರಿ. ಹೊಡೆಯುವುದೇಕೆ? ಇರುವ ಹತ್ತು-ಹನ್ನೊಂದು ಕೇಸುಗಳ ಜೊತೆಗೆ ಈ ಕೇಸೂ ಆಗಲಿ. ಆದರೆ ಒಂದಂತೂ ನಿಜ. ಈ ಸುಳ್ಳು ದೂರಿನ ಮೇಲೆ ಕೇಸು ಹಾಕುವುದಾದರೆ ನಾನು ಈ ದೂರನ್ನು ಖಂಡಿತಾ ನಿಜ ಮಾಡುತ್ತೇನೆ. ನಾನು ಸತ್ತರೂ ಪರವಾಗಿಲ್ಲ. ಈ ಮನಷ್ಯನನ್ನು ಖಂಡಿತಾ ತೆಗೆದೇ ಸಾಯುತ್ತೇನೆ" ಎಂದು ಶಾಂತವಾಗಿ ಆದರೆ ಧೃಢವಾಗಿ ದೂರು ಕೊಟ್ಟಾತನನ್ನು ನೋಡುತ್ತಾ ಹೇಳಿದೆ. ಆತ ಬೆವೆತು ಹೋಗಿದ್ದ. ಇನ್ಸ್ ಪೆಕ್ಟರರೂ ಅವಾಕ್ಕಾಗಿದ್ದರು. ಅವರು ಸಾವರಿಸಿಕೊಂಡು "ಹೋಗಲಿ, ತಪ್ಪಾಯಿತೆಂದು ಬರೆದುಕೊಡು. ಬಿಟ್ಟುಬಿಡುತ್ತೇನೆ" ಎಂದರು. ಏನೂ ತಪ್ಪು ಮಾಡದೆ ತಪ್ಪಾಯಿತೆಂದು ಬರೆದುಕೊಡಲು ನಾನು ನಿರಾಕರಿಸಿ ಏನು ಬೇಕಾದರೂ ಮಾಡಬಹುದೆಂದು ಹೇಳಿದೆ. ಇನ್ಸ್ ಪೆಕ್ಟರರು ದೂರು ಕೊಟ್ಟಾತನನ್ನು ನೋಡಿದರು. ಅವನು ತಲೆತಗ್ಗಿಸಿ ತನ್ನ ದೂರು ಅರ್ಜಿಯನ್ನು ತೆಗೆದುಕೊಂಡು ಹೊರಗೆ ಹೋದ. ಅದೇ ಸಮಯಕ್ಕೆ ನನ್ನ ತಂದೆಯವರು ಶ್ರೀ ಹಾರನಹಳ್ಳಿ ರಾಮಸ್ವಾಮಿಯವರೊಂದಿಗೆ ಠಾಣೆಗೆ ಬಂದರು. ಇನ್ಸ್ ಪೆಕ್ಟರರು ಮೆಲ್ಲಗೆ ನನ್ನ ಕಿವಿಯಲ್ಲಿ "ಇಲ್ಲಿ ನಡೆದ ವಿಷಯ ಹೊರಗೆ ಬಾಯಿ ಬಿಟ್ಟರೆ ಹೂತುಹಾಕಿಬಿಡುತ್ತೇನೆ" ಎಂದು ಹೇಳಿ, ಶ್ರೀ ಹಾರನಹಳ್ಳಿ ರಾಮಸ್ವಾಮಿಯವರಿಗೆ 'ವಿಚಾರಣೆಗಾಗಿ ಕರೆಸಿದ್ದೆವೆಂದೂ ಕರೆದುಕೊಂಡು ಹೊಗಬಹುದೆಂದೂ' ಹೇಳಿದರು. ನಾನು ಮನೆಗೆ ಬಂದಾಗ ಸಂಜೆ ಐದು ಘಂಟೆಯಾಗಿತ್ತು. ಮನೆಯಲ್ಲಿ ಯಾರೂ ಊಟ ಮಾಡಿರಲಿಲ್ಲ. ಒಟ್ಟಿಗೇ ಊಟ ಮಾಡಿದೆವು. ನಾನು 'ಸರಿಯಾಗಿ' ಇರಬೇಕೆಂದು ಅಪ್ಪ, ಅಮ್ಮ ಬುದ್ಧಿ ಹೇಳಿದರು. ಒಂದಂತೂ ನಿಜ. ನನ್ನ ತಂದೆಯವರು ಕೋರ್ಟಿನಲ್ಲಿ ಶಿರಸ್ತೇದಾರರಾಗಿರದಿದ್ದಿದ್ದರೆ, ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರುಗಳ ಸಕಾಲಿಕ ಸಹಾಯ ದೊರೆಯದಿದ್ದಿದ್ದರೆ, ನಾನು ಹೆದರಿದ್ದರೆ ಮತ್ತು ಪರಿಸ್ಥಿತಿಯನ್ನು ಧೃಢವಾಗಿ ಎದುರಿಸದೇ ಇದ್ದಿದ್ದರೆ ಯಾವುದಾದರೂ ಸಂದರ್ಭದಲ್ಲಿ ನಾನು ಶಾಶ್ವತವಾಗಿ ಅಂಗವಿಕಲನಾಗಿರುತ್ತಿದ್ದೆ ಅಥವಾ ಈ ಲೋಕದಿಂದಲೇ ಕಣ್ಮರೆಯಾಗಿರುತ್ತಿದ್ದೆ!
-ಕ.ವೆಂ.ನಾಗರಾಜ್.

ಮಂಗಳವಾರ, ಜುಲೈ 20, 2010

ಮೂಢ ಉವಾಚ -13

ಆರು ಅರಿಗಳನು ಅರಿಯದವರಾರಿಹರು?
ದೇವಕಾಮದ ಫಲವಲ್ಲವೇ ಚರಾಚರರು|
ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ
ಕಾಮನಾಧೀನರಾಗಿಹರು ನರರು ಮೂಢ||


ಆತ್ಮನೇ ತಾನೆಂಬ ಅರಿವು ಮರೆಯಾಗಿ
ತನು-ಮನವೆ ತಾವೆಂದುಭ್ರಮಿತರಾಗಿರಲು|
ತುಂಬಿದಜ್ಞಾನದಿಂ ಜನಿಸುವುದು ಕಾಮ
ಕಾಮಫಲಿತಕ್ಕಾಗಿ ಕರ್ಮಗೈವರೋ ಮೂಢ||


ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ ಅದಕಿಲ್ಲ ಪೂರ್ಣ ವಿರಾಮ ಮೂಢ||


ಹೊನ್ನು ಕಾರಣವಲ್ಲ ಹೆಣ್ಣು ಕಾರಣವಲ್ಲ
ಮಣ್ಣು ಕಾರಣವಲ್ಲ ಮನಸು ಕಾರಣವಲ್ಲ|
ಬೇಕು ಬೇಕು ಬೇಕೆಂಬ ಅನಂತಾತೃಪ್ತತೆಗೆ
ಕಾಮ ಕಾರಣವಲ್ಲದೆ ಮತ್ತೊಂದಲ್ಲ ಮೂಢ||
-ಕ.ವೆಂ.ನಾಗರಾಜ್.

ಮೂಢ ಉವಾಚ -12

ಮತಿಗೆಟ್ಟು ಅರಚಾಡಿ ಬಂದ ಫಲವೇನು?
ಸಿಟ್ಟಿನಿಂ ನಡುನಡುಗಿ ಗುಡುಗಿದರೆ ಬಂತೇನು?|
ತಪ್ಪು ಒಪ್ಪುಗಳ ತಳ್ಳಿ ಪ್ರತಿಭಟಿಸದಿರರೇನು?
ಸಮಚಿತ್ತದಕ್ಕರೆಯೊಂದೆ ಒಲಿಸುವುದು ಮೂಢ||


ನೀ ಸರಿಯಾಗಿದ್ದರದುವೆ ಸಾಕು
ಪರರ ಗೊಡವೆ ನಿನಗೇಕೆ ಬೇಕು?|
ತಿದ್ದುವ ಹಂಬಲಕೆ ಕಡಿವಾಣ ಹಾಕು
ಮನವನನುಗೊಳಿಸಿ ಶಾಂತನಿರು ಮೂಢ||


ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?
ತಿನ್ನಲೊಲ್ಲದ ಬಾಯಿಗೆ ಷಡ್ರಸವದೇಕೆ?|
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು
ಪಾತ್ರಾಪಾತ್ರರನರಿತಡಿಯಿಡು ಮೂಢ||


ಹುಂಬರೊಟ್ಟಾಗಿ ಹಂಗಿಸುತ ಜರೆದಿರಲಿ
ಮನೆಮಂದಿಯೇ ನಿನ್ನ ಹೀಗಳೆಯುತಿರಲಿ|
ಕೆರಳದಿರಲಿ ಕೊರಗದಿರಲಿ ಮನವು
ಧೃತಿಗೆಟ್ಟು ದಾರಿ ತಪ್ಪದಿರಲಿ ಮೂಢ||
-ಕ.ವೆಂ.ನಾಗರಾಜ್.

ಮೂಢ ಉವಾಚ -11

ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು|
ಎಲ್ಲರ ಸೇವೆ ಬಯಸುವರು ತಾವಾರಿಗೂ ಆಗರು||
ಕಂಡರೂ ಕಾಣದೊಲು ನಟಿಸುವ ಚತುರರಿವರು|
ಇವರೊಳು ನೀಯಾರು ನಾಯಾರು ಹೇಳು ಮೂಢ||

ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು|
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು||
ಒಳಿತು ಮಾಡದ ಕೆಡಕು ಎಣಿಸಲರಿಯದವರಿಹರು|
ಇವರೊಳು ನೀಯಾರು ನಾಯಾರು ಹೇಳು ಮೂಢ||

ಪರರ ನಡವಳಿಕೆಗಳೆನ್ನ ಮನವ ಕದಡದಿರಲಿ|
ಕಿರಿಪಿರಿಯ ಮಾತುಗಳಿಗೆನ್ನ ಜಿಹ್ವೆ ಪ್ರತಿಯಾಡದಿರಲಿ||
ಆಲಿಸಲಿಚ್ಛಿಸದ ಕಿವಿಗಳಿಗೆ ಉಪದೇಶ ವ್ಯರ್ಥ|
ಎನ್ನ ಭಾವನೆಗಳೆನಗಿರಲೆಂಬುದಂತರಾರ್ಥ ಮೂಢ||

ಪರರೆಂತಿರಬೇಕೆಂದು ಬಯಸುವುದು ನೀನು?|
ಅಂತಪ್ಪ ಮಾದರಿಯು ಮೊದಲಾಗು ನೀನು||
ಬದಲಾಗು ನೀ ಮೊದಲು ಬದಲಾಗು ನೀನು|
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
**************
-ಕ.ವೆಂ.ನಾಗರಾಜ್.

ಮೂಢ ಉವಾಚ -10

ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ
ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ|
ನಿಂತ ನೀರು ಕೊಳೆತು ನಾರುವುದು ನೋಡ
ಕೂಡಿಟ್ಟವರ ಪಾಡು ಬೇರಲ್ಲ ಮೂಢ||


ಆಳಿದವರಳಿದುಳಿಸಿಹುದೇನು ಕೇಳು
ಮನೆ ಮಹಲು ಸಿರಿ ನಗವ ಕೊಂಡೊಯ್ವರೇನು?|
ಅವಗುಣವ ಶಪಿಸಿ ಜನರು ಗುಣವ ನೆನೆವರು
ಎರಡು ದಿನದಲಿ ಎಲ್ಲ ಮರೆಯುವರು ಮೂಢ||


ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ|
ಶುಭ ಹರಸಿ ತಿಲ ಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
-ಕ.ವೆಂ.ನಾಗರಾಜ್.

ಮೂಢ ಉವಾಚ -9

ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು|
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಓ ಮೂಢ||


ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳರೊಳಿತು ಮಾಡುವರೇ?|
ಕೊಂಕರಸುವ ಡೊಂಕ ಮನವೊಡೆವ ಕೆಡುಕನ
ಹುಣ್ಣನರಸುವ ನೊಣನೆಂದೆಣಿಸು ಮೂಢ||


ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||


ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣಕೆ ಮನ್ನಣ|
ಆವರಣ ಹೂರಣ ಚೆಂದವಿರೆ ಪ್ರೇರಣ
ಬದುಕು ಸುಂದರ ಪಯಣ ಕಾಣಾ ಮೂಢ||
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 18, 2010

ಸೇವಾ ಪುರಾಣ -6

ದುರಂತಕ್ಕೆ ಮುನ್ನುಡಿ

     ಅರಸಿಕೆರೆಯ ಇನ್ನೊಬ್ಬ ಪ್ರಸಿದ್ಧ ವರ್ತಕರು ಹಾಗೂ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಕಛೇರಿಗೆ ಬಂದು ಶಿವಮೊಗ್ಗದಿಂದ ಅರಸಿಕೆರೆಗೆ ಪ್ರತಿವಾರ 15ಲೋಡು ಅಕ್ಕಿ ತಂದು ಮಾರಾಟ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರಂತೆ.ಜಿಲ್ಲಾಧಿಕಾರಿಯವರನ್ನೂ 'ಕಂಡು' ಸ್ವತಃ ಮಾತನಾಡಿ ಬಂದಿದ್ದರಂತೆ. ಆ ವಿಷಯ ನನಗೆ ಗೊತ್ತಿರಲಿಲ್ಲ ಮತ್ತು ಅವರು ಬಂದು ನನ್ನನ್ನು ವಿಚಾರಿಸಿದಾಗ ಅವರ ಅರ್ಜಿ ಇನ್ನೂ ನನ್ನ ಬಳಿಗೆ ಬಂದಿರಲಿಲ್ಲ. ಅವರು ಕೂಗಾಡಿ ಮಧ್ಯಾಹ್ನ ಬರುತ್ತೇನೆಂದೂ ಅಷ್ಟರಲ್ಲಿ ಕೆಲಸ ಮಾಡಿರಬೇಕೆಂದು ತಾಕೀತು ಮಾಡಿ ಹೋಗಿದ್ದರು.ಆಗ ಅಂತರ ಜಿಲ್ಲಾ ಅಕ್ಕಿ ಸಾಗಾಣಿಕೆಗೆ ನಿರ್ಬಂಧವಿದ್ದ ಕಾಲ. ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 15 ಕ್ವಿಂಟಾಲ್ ಅಕ್ಕಿ ಸಾಗಣೆಗೆ ಮಾತ್ರ ಅವಕಾಶವಿತ್ತು.ನಾನು ಧುರೀಣ ಶೆಟ್ಟರ ಅರ್ಜಿ ಪಡೆದು ಇದ್ದ ವಿಷಯ ಟಿಪ್ಪಣಿ ಮಂಡಿಸಿ ಅವಕಾಶವಿಲ್ಲದ ಕಾರಣ ಅರ್ಜಿ ವಿಲೆಯಿಡಬಹುದೆಂದು ಫುಡ್ ಅಸಿಸ್ಟೆಂಟರಿಗೆ ಕಳಿಸಿದೆ. ಫುಡ್ ಅಸಿಸ್ಟೆಂಟರು ನನ್ನ ಟಿಪ್ಪಣಿ ಒಪ್ಪಿದ್ದರು. ಮಧ್ಯಾಹ್ನ ವರ್ತಕರು ಬಂದಾಗ ವಿಲೆಯಿಟ್ಟ ಬಗ್ಗೆ ತಿಳಿಸಿದಾಗ ಸಿಟ್ಟಿಗೆದ್ದ ಅವರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚಿಸಿದರು. ಜಿಲ್ಲಾಧಿಕಾರಿಯವರು ಫುಡ್ ಅಸಿಸ್ಟೆಂಟರನ್ನು ಕರಿಸಿ ಏನೋ ಸೂಚನೆ ನೀಡಿದರು. ಫುಡ್ ಅಸಿಸ್ಟೆಂಟರು ಬಂದು ನನಗೆ ಹೇಳಿಕಳಿಸಿ "ಹಾಳಾಗಿ ಹೋಗಲಿ, ಶೆಟ್ಟರ ಪರವಾಗಿ ಟಿಪ್ಪಣಿ ಬರೆದು ಕಡತ ಕಳಿಸು" ಎಂದು ನನಗೆ ಹೇಳಿದರು. ನಾನು ಒಪ್ಪಲಿಲ್ಲ. ನಾನು ಏನೇ ಟಿಪ್ಪಣಿ ಬರೆದರೂ ಆದೇಶ ಮಾಡುವವರು ಜಿಲ್ಲಾಧಿಕಾರಿಯವರೇ ಆದ್ದರಿಂದ ಅವರಿಗೆ ಬೇಕಾದ ಆದೇಶ ಮಾಡಬಹುದೆಂದು ಹೇಳಿದೆ.ಫುಡ್ ಅಸಿಸ್ಟೆಂಟರ ಒತ್ತಾಯ ಜಾಸ್ತಿಯಾದಾಗ ನಾನು ವಿವರವಾಗಿ ಹುಡುಕಿ ಅವರ ಸಗಟು ಪರವಾನಗಿ ನವೀಕರಿಸಿಲ್ಲದುದನ್ನು ಗಮನಿಸಿ ಸಗಟು ಪರವಾನಗಿ ನವೀಕರಣವಾದ ನಂತರ ಈ ವಿಷಯ ಪರಿಶೀಲಿಸಬಹುದೆಂದು ಟಿಪ್ಪಣಿ ಇಟ್ಟೆ. ತಾನು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದೆನೆಂದು ವರ್ತಕರು ವಾದಿಸಿದರೂ ಅದಕ್ಕೆ ಸಮರ್ಥನೆಯಿರಲಿಲ್ಲ. ಒಟ್ಟಿನಲ್ಲಿ ಅವರ ಕೆಲಸವಾಗಲಿಲ್ಲ. ಕೆಲಸ ಮಾಡಿಕೊಡದಿದ್ದಕ್ಕೆ ಜಿಲ್ಲಾಧಿಕಾರಿಯವರೂ ಅಸಮಾಧಾನಗೊಂಡಿದ್ದರು. ಈ ಪ್ರಕರಣ ನನ್ನ ಮುಂದಿನ ಕರಾಳ ಅನುಭವಗಳಿಗೆ ಮುನ್ನುಡಿ ಬರೆದಿದ್ದುದರ ಅರಿವು ನನಗಿರಲಿಲ್ಲ. ವರ್ತಕರಂತೂ "ಈಗ ತುರ್ತು ಪರಿಸ್ಥಿತಿಯಿರುವುದು ಗೊತ್ತಿಲ್ಲವಾ? ನಿನಗೊಂದು ಗತಿ ಕಾಣಿಸುತ್ತೇನೆ" ಎಂದು ಧಮಕಿ ಹಾಕಿ ಹೋಗಿದ್ದರು.
ಬಂಧನ
     ಮೇಲಿನ ಘಟನೆ ನಡೆದ ಮರುದಿನ ರಾತ್ರಿ ಸುಮಾರು 9-30ರ ವೇಳೆಯಲ್ಲಿ ಒಬ್ಬ ವ್ಯಕ್ತಿ ಬಂದು ನಮ್ಮ ಮನೆಯ ಬಾಗಿಲು ಬಡಿದ. ನಾನು ಬಾಗಿಲು ತೆರೆದಾಗ ಆ ವ್ಯಕ್ತಿ "ನಾಗರಾಜ್ ಇದ್ದಾರಾ?" ಎಂದು ಕೇಳಿದರು. 'ನಾನೇ ನಾಗರಾಜ್' ಎಂದಾಗ ತನ್ನ 'ಲೈಸೆನ್ಸ್ ರಿನ್ಯೂ ಮಾಡಿಸಿಕೊಳ್ಳಬೇಕಿತ್ತು' ಎಂದು ಆ ವ್ಯಕ್ತಿ ಹೇಳಿದರು. ಇಂತಹ ವಿಷಯಕ್ಕೆಲ್ಲಾ ಮನೆಯ ಹತ್ತಿರ ಬರಬಾರದೆಂದೂ ಮರುದಿನ ಕಛೇರಿಗೆ ಬರಬೇಕೆಂದೂ ಹೇಳಿಕಳಿಸಿದೆ. ಇದಾದ ಐದೇ ನಿಮಿಷಕ್ಕೆ ಪೋಲಿಸ್ ಜೀಪು ನನ್ನ ಮನೆಯ ಬಳಿಗೆ ಬಂದಿತು. ಸಬ್ ಇನ್ಸ್ ಪೆಕ್ಟರರು, ಐದಾರು ಪೇದೆಗಳು ಮತ್ತು ನನ್ನನ್ನು ಕೇಳಿಕೊಂಡು ಬಂದಿದ್ದ ವ್ಯಕ್ತಿಗಳು ಮನೆಯ ಒಳಗೆ ನುಗ್ಗಿದರು.ಆ ವ್ಯಕ್ತಿ ಮಫ್ತಿಯಲ್ಲಿದ್ದ ಪೋಲಿಸು ಎಂದು ನಂತರ ನನಗೆ ತಿಳಿಯಿತು. ಸರ್ಚ್ ವಾರೆಂಟ್ ಇದೆಯೆಂದು ಹೇಳಿ ನನ್ನ ಮನೆಯನ್ನೆಲ್ಲಾ ಜಾಲಾಡಿದರು. ಅವರಿಗೆ ಬೇಕಾಗಿದ್ದಂತಹ ಯಾವುದೇ ದಾಖಲೆಗಳು ಅವರಿಗೆ ಸಿಕ್ಕಿದಂತೆ ಕಾಣಲಿಲ್ಲ. ಆದರೂ ನನ್ನನ್ನು ಜೀಪಿನಲ್ಲಿ ಕೂರಿಸಿಕೊಂಡು ಕರೆದೊಯ್ದರು. ನನ್ನ ತಂದೆ ಗಾಬರಿಯಾಗಿ ಕೇಳಿದ್ದಕ್ಕೆ ಅಂತಹುದೇನೂ ಇಲ್ಲವೆಂದೂ ನನ್ನ ಹೇಳಿಕೆ ಪಡೆದು ವಾಪಸು ಕಳಿಸುವುದಾಗಿಯೂ ಸಬ್ ಇನ್ಸ್ ಪೆಕ್ಟರರು ತಿಳಿಸಿದರು. ಅಂದು ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದರು, ಯಾರೂ ನಿದ್ದೆ ಮಾಡಲಿಲ್ಲ. ನಾನೂ ಸಹ ಅಂದು ಪೋಲಿಸ್ ಠಾಣೆಯಲ್ಲಿ ರಾತ್ರಿ ಕಳೆಯಬೇಕಾಯಿತು. ನನ್ನನ್ನು ಠಾಣೆಯಲ್ಲಿ ಕುಳಿತಿರಲು ಹೇಳಿ ರಾತ್ರಿ ಪಾಳಿಯ ಪೋಲಿಸರನ್ನು ಹೊರತುಪಡಿಸಿ ಎಲ್ಲರೂ ಜಾಗ ಖಾಲಿ ಮಾಡಿದ್ದರು. ಸೊಳ್ಳೆ, ತಿಗಣೆಗಳ ಕೈಲಿ ಕಡಿಸಿಕೊಳ್ಳುತ್ತಾ, ಏಕೆ ಕರೆದುಕೊಂಡುಬಂದಿದ್ದಾರೆಂದು ತಲೆ ಕೆಡಿಸಿಕೊಂಡು ಅಂದಿನ ರಾತ್ರಿ ಪೂರ್ತಾ ಠಾಣೆಯ ಬೆಂಚಿನ ಮೇಲೆ ತೂಕಡಿಸುತ್ತಾ ಕಳೆದಿದ್ದೆ. ಮರುದಿನ ಬೆಳಿಗ್ಗೆ ಸುಮಾರು 9-00 ಘಂಟೆ ವೇಳೆಗೆ ಬಂದ ಸಬ್ ಇನ್ಸ್ ಪೆಕ್ಟರರು ಜಿಲ್ಲಾಧಿಕಾರಿಯವರೊಂದಿಗೆ ಫೋನಿನಲ್ಲಿ ಮಾತನಾಡಿ 'ಮನೆಯನ್ನೆಲ್ಲಾ ಸರ್ಚ್ ಮಾಡಿದರೂ ಏನೂ ಸಿಗಲಿಲ್ಲ, ಏನು ಮಾಡಬೇಕು?' ಎಂದು ವಿಚಾರಿಸದ್ದಕ್ಕೆ ಜಿಲ್ಲಾಧಿಕಾರಿಯವರು 'ಪ್ರೊಸೀಡ್' ಎಂದು ಹೇಳಿದ ಮಾತು ಅಲ್ಲೇ ಕುಳಿತಿದ್ದ ನನಗೆ ಸ್ಪಷ್ಟವಾಗಿ ಕೇಳಿಸಿತು. ನನ್ನನ್ನು ಆಗ ನಿಷೇಧಕ್ಕೆ ಒಳಗಾಗಿದ್ದ ಆರೆಸ್ಸೆಸ್ ನ ಕಾರ್ಯಕರ್ತ ಎಂದು ಎಫ್.ಐ.ಆರ್. ಸಿದ್ಧಪಡಿಸಿ ಠಾಣೆಯಲ್ಲೇ ಇದ್ದ ಕರಪತ್ರವೊಂದನ್ನು ನನ್ನ ಮನೆಯಲ್ಲಿ ಸಿಕ್ಕಿದ್ದೆಂಬಂತೆ ಪಂಚನಾಮೆ ಮಾಡಿದಂತೆ ಮಾಡಿ ಅಲ್ಲೇ ಇದ್ದ ಕೆಲವರನ್ನು ಕರೆದು ಹಿಂದಿನ ದಿನದ ದಿನಾಂಕದಲ್ಲಿ ಸಹಿ ಮಾಡಿಸಿಕೊಂಡರು. ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆ ದಾಖಲಿಸಿ ನನ್ನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿ ಹಾಸನದ ಜೈಲಿಗೆ ತಳ್ಳಿದರು. ಆರೆಸ್ಸೆಸ್ ನಿಷೇಧಕ್ಕೆ ಒಳಗಾಗುವ ಮುನ್ನ ನಾನೊಬ್ಬ ಆರೆಸ್ಸೆಸ್ ನ ಕಾರ್ಯಕರ್ತನಾಗಿದ್ದಿರಬಹುದು.ಆದರೆ ಯಾವುದೇ ದಾಖಲೆ,ಆಧಾರಗಳಿಲ್ಲದೆ ಬಂಧಿಸಿ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿಯವರ ಕುಮ್ಮಕ್ಕೇ ಕಾರಣವೆಂಬುದು ಸುಸ್ಪಷ್ಟವಾಗಿತ್ತು. ಏಕೆಂದರೆ ಬಂಧನಕ್ಕೆ ಒಳಗಾಗಿ 48 ಘಂಟೆಗಳಿಗೂ ಹೆಚ್ಚುಕಾಲವಿದ್ದರೆ ಸೇವೆಯಿಂದ ಅಮಾನತ್ತಿನಲ್ಲಿಡಲು ಅವಕಾಶವಿದ್ದು, 48 ಘಂಟೆಗಳ ಒಳಗೇ ನನ್ನನ್ನು ಅಮಾನತ್ತಿನಲ್ಲಿರಿಸಿ ಆದೇಶವನ್ನು ನನಗೆ ಜಾರಿ ಮಾಡಿಸಿದ್ದು ಜಿಲ್ಲಾಧಿಕಾರಿಯವರು ಪೂರ್ವ ನಿರ್ಧರಿತವಾಗಿಯೇ ಮಾಡಿಸಿದ ಕೆಲಸವೆಂದು ನನಗೆ ಖಚಿತಪಡಿಸಿತು.
ಜಾಮೀನಿನ ಮೇಲೆ ಬಿಡುಗಡೆ
  ಯಾವ ಮ್ಯಾಜಿಸ್ಟ್ರೇಟರ ಮುಂದೆ ಆರೋಪಿಯಾಗಿ ನನ್ನನ್ನು ಹಾಜರುಪಡಿಸಲಾಗಿತ್ತೋ ಅದೇ ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ನನ್ನ ತಂದೆಯವರು ಶಿರಸ್ತೇದಾರರಾಗಿ ಕೆಲಸ ಮಾಡುತ್ತಿದ್ದರು. ಅವರಿಗೂ ಮುಜುಗರವಾಗಿತ್ತು. ನನ್ನ ತಂದೆಯವರು ಆದಿನ ಸಾಂದರ್ಭಿಕ ರಜೆ ಹಾಕಿ ಸುಪ್ರಸಿದ್ಧ ಹಿರಿಯ ವಕೀಲರೂ ಹಿರಿಯ ಕಾಂಗ್ರೆಸ್ ನಾಯಕರೂ ಆಗಿದ್ದ ಶ್ರೀ ಹಾರನಹಳ್ಳಿ ರಾಮಸ್ವಾಮಿಯವರ ಮೂಲಕ ಜಾಮೀನು ಅರ್ಜಿ ನ್ಯಾಯಾಲಯಕ್ಕೆ ಸಲ್ಲಿಸಿ ಮರುದಿನವೇ ನನ್ನನ್ನು ಜಾಮೀನಿನ ಮೇಲೆ ಬಿಡಿಸಿದರು. ಸ್ವತಃ ತಂದೆಯವರೇ ನನಗೆ ಜಾಮೀನಾಗಿ ನ್ಯಾಯಾಲಯಕ್ಕೆ ಬಾಂಡು ಸಲ್ಲಿಸಿದ್ದರು.ಬಂಧನವಾದ 48 ಘಂಟೆಗಳ ಒಳಗೇ ನನ್ನ ಬಿಡುಗಡೆಯಾಗಿದ್ದರಿಂದ ನನ್ನ ಅಮಾನತ್ತಿನ ಆದೇಶಕ್ಕೆ ಅರ್ಥವಿರಲಿಲ್ಲ. ಮನೆಗೆ ಬಂದು ಸ್ನಾನ ಮಾಡಿ ಊಟ ಮಾಡುವಾಗ ಮನೆಮಂದಿಯೆಲ್ಲಾ ಆತಂಕದಿಂದ ನನ್ನನ್ನೇ ದಿಟ್ಟಿಸುತ್ತಿದ್ದರು. ನಮ್ಮಮ್ಮನ ಕಣ್ಣಿನಿಂದ ನೀರು ತುಳುಕಿತ್ತು. 'ನಾನೇನೂ ಕಳ್ಳತನ ಮಾಡಿ ಜೈಲಿಗೆ ಹೋಗಿಲ್ಲ. ಮಾಡಬಾರದ್ದು ಮಾಡಿಲ್ಲ' ಎಂದು ಹೇಳಿದರೂ ಅವರಿಗೆ ಅಸಮಾಧಾನವಿದ್ದುದು ಗೋಚರವಾಗುತ್ತಿತ್ತು.
ಜಿಲ್ಲಾಧಿಕಾರಿಯೊಂದಿಗೆ ಮುಖಾಮುಖಿ
     ಊಟ ಮಾಡಿದ ನಂತರದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಹೊರಟಾಗ ತಂದೆಯವರೂ ನನ್ನೊಂದಿಗೆ ಬಂದರು. ಜಿಲ್ಲಾಧಿಕಾರಿಯವರನ್ನು ಕಂಡಾಗ ಅವರು ನನ್ನನ್ನು ಅಸಹನೆಯಿಂದಲೇ ನೋಡಿದರು. ನಾನು ಅವರಿಗೆ "ಅಧೀನ ನೌಕರರನ್ನು ರಕ್ಷಿಸಬೇಕಾದ ಮೇಲಾಧಿಕಾರಿಯೇ ನೌಕರನ ವಿರುದ್ಧ ಪ್ರಕರಣ ದಾಖಲಿಸಲು ಹೇಳುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಪ್ರಶ್ನಿಸಿದೆ. ಅವರು ಉತ್ತರಿಸಲಿಲ್ಲ. ಬಂಧನವಾದ 48 ಘಂಟೆಗಳ ಕಾಲದ ಒಳಗೇ ನಾನು ಅವರ ಮುಂದೆಯೇ ನಿಂತಿರುವುದರಿಂದ ಅಮಾನತ್ತಿನ ಆದೇಶವನ್ನು ಹಿಂಪಡೆಯಲು ಕೋರಿದೆ. ಅಮಾನತ್ತು ಪಡಿಸಬೇಕೆಂಬುದೇ ಉದ್ದೇಶವಾಗಿದ್ದಲ್ಲಿ ಬೇರೆ ಕಾರಣ ತೋರಿಸಿ ಅಮಾನತ್ತಿನಲ್ಲಿಡಬೇಕೆಂದು ಹೇಳಿದೆ. ಮಾತಿನ ನಡುವೆ ಅವರು "ಒತ್ತಡ ಬಂದಿದ್ದರಿಂದ ಹಾಗೆ ಮಾಡಬೇಕಾಯಿತೆಂದೂ, ಅಮಾನತ್ತು ಹಿಂಪಡೆಯಲು ಪೋಲಿಸ್ ಪ್ರಕರಣ ಇತ್ಯರ್ಥವಾಗಲಿ" ಎಂದು ಹೇಳಿದಾಗ ನನ್ನ ಸಹನೆಯ ಕಟ್ಟೆ ಒಡೆಯಿತು. ಜಿಲ್ಲಾಧಿಕಾರಿಯವರನ್ನು ಕಠಿಣವಾಗಿ ನಿಂದಿಸಿದೆ. ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಲಾರದೆ ಸುಮ್ಮನಿದ್ದರು. ಆವೇಶದ ಭರದಲ್ಲಿ ಒಂದೆರಡು ಅವಾಚ್ಯ ಶಬ್ದಗಳೂ ಹೊರಬಂದಾಗ ಹೆದರಿದ ನನ್ನ ತಂದೆ ಮತ್ತು ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರು ನನ್ನ ಒಂದೊಂದು ತೋಳನ್ನು ಹಿಡಿದು ಹೊರಕ್ಕೆ ಎಳೆದೊಯ್ದರು. ನನ್ನ ಆವೇಶ ನನ್ನನ್ನು ಇನ್ನೂ ಹೆಚ್ಚಿನ ತೊಂದರೆಗೆ ಈಡು ಮಾಡುತ್ತದೆಂಬ ಅರಿವು ನನಗಾಗ ಇರಲಿಲ್ಲ.
     ಕಛೇರಿಯಿಂದ ನನಗೆ ನಿಷೇಧಕ್ಕೊಳಗಾದ ಆರೆಸ್ಸೆಸ್ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ನನ್ನ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದೆಂದು ಕಾರಣ ಕೇಳಿ ನೋಟೀಸು ನೀಡಲಾಯಿತು. ಆ ನೋಟೀಸಿಗೆ ನಾನು ಸಿದ್ಧಪಡಿಸಿದ ಉತ್ತರವನ್ನು ತಂದೆಯವರು ಲಾಯರಿಗೆ ತೊರಿಸಿ ಕೊಡು ಎಂದು ಹೇಳಿದರು. ಆಗೆಲ್ಲಾ ಕಛೇರಿಯಲ್ಲಿ ಕನ್ನಡದ ಬಳಕೆ ಪೂರ್ಣವಾಗಿ ಬಂದಿರಲಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಬಂದಿದ್ದ ನೋಟೀಸಿಗೆ ನಾನೂ ಇಂಗ್ಲಿಷ್ ಭಾಷೆಯಲ್ಲೇ ಉತ್ತರ ಸಿದ್ಧಪಡಿಸಿದ್ದೆ. ನಾನು ಉತ್ತರವನ್ನು 'In response to your notice, I am to state that...' ಎಂದು ಪ್ರಾರಂಭಿಸಿದ್ದನ್ನು ಜೂನಿಯರ್ ಲಾಯರರು 'In response to your kind notice, I am to submit that ..' ಎಂದು ತಿದ್ದಿದರು. ಹಿರಿಯ ವಕೀಲರು 'In response to your kind notice, I beg to submit that ...' ಎಂದು ಬದಲಾಯಿಸಿದರೆ ನನ್ನ ತಂದೆಯವರು 'In response to your kind notice, I humbly beg to submit that ..' ಎಂದು ತಿದ್ದಿಕೊಟ್ಟರು. ನನಗಿಷ್ಟವಿಲ್ಲದಿದ್ದರೂ ಈ ಒಕ್ಕಣೆಯಿದ್ದ ಪತ್ರಕ್ಕೆ ಸಹಿ ಹಾಕಿ ಉತ್ತರ ಸಲ್ಲಿಸಿದೆ. ಒಬ್ಬೊಬ್ಬರ ಮನೋಭೂಮಿಕೆ ಒಂದೊಂದು ತರಹ ಎಂಬುದಕ್ಕೆ ಈ ತಿದ್ದಪಡಿಗಳೇ ಸಾಕ್ಷಿ. ಒಂದೇ ವಿಷಯಕ್ಕೆ ಎರಡೆರಡು ಕಡೆ ವಿಚಾರಣೆಗೆ ಅವಕಾಶವಿಲ್ಲದ್ದರಿಂದ ಇಲಾಖಾ ವಿಚಾರಣೆ ನಡೆಯಲೇ ಇಲ್ಲ. 'ಬ್ರಾಹ್ಮಣರಿಗೆ ನೌಕರಿ ಸಿಕ್ಕುವುದೇ ಕಷ್ಟ. ಅಂತಹುದರಲ್ಲಿ ನಾನು ಇದ್ದ ಕೆಲಸವನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆಂದು' ನನ್ನ ತಂದೆಯವರು ನೋವಿನಿಂದ, ಬೇಸರದಿಂದ ಅಲವತ್ತುಕೊಳ್ಳುತ್ತಿದ್ದರು. ನನ್ನ ತಾಯಿ, ತಂಗಿ ಮತ್ತು ಮೂವರು ತಮ್ಮಂದಿರು ಆತಂಕಗೊಂಡಿದ್ದರು. ಒಂದೂವರೆ ವರ್ಷಗಳ ಕಾಲ ನಾನು ಸೇವೆಯಿಂದ ಅಮಾನತ್ತಿನಲ್ಲಿ ಕಳೆಯಬೇಕಾಯಿತು.
(ಕಾಲಘಟ್ಟ: 1975) ... ಮುಂದುವರೆಯಲಿದೆ.

ಶನಿವಾರ, ಜುಲೈ 17, 2010

ವಿಷಣ್ಣತೆ


ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|
ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||

-ಕ.ವೆಂ.ನಾಗರಾಜ್.

ಗೌಡರು ಬಂದರು

ಗೌಡರು ಬಂದರು ಸೂತ್ರವ ಹಿಡಿದು ಒಳಗೇ ನಗುನಗುತಾ|
ಕಣ್ಣೀರ್ಗರೆದರು ಮಕ್ಕಳ ಕಷ್ಟವು ತಮದೇ ಎಂದೆನುತಾ||

ಜಾತ್ಯಾತೀತತೆ ಲೇಬಲ್ ಹಚ್ಚಿದ ಶಾಲದು ಹೆಗಲಲ್ಲಿ
ಜಾತೀಯತೆಯ ಕರಾಳ ಬೀಜದ ಚೀಲವು ಬಗಲಲ್ಲಿ||

ಮೌಲ್ಯಾಧಾರಿತ ರಾಜಕಾರಣ ಪುಸ್ತಕದಿರಲೆನುತಾ
ಮಕ್ಕಳೇ ಮೌಲ್ಯವು ಕುರ್ಚಿಯೇ ದೇವರು ಥಕಥಕಥಕದಿಮಿತಾ||

ಗಿಳಿಪಾಠವನೊಪ್ಪಿಸೋ ಬ್ಯಾ ಬ್ಯಾ ಕುರಿಗಳು ಹಿಂದೆಯೆ ಬರುತಿರಲಿ|
ಸ್ವಂತಿಕೆ ತೋರುವ ಮಂದೆಯು ಸೇರಲಿ ಕಟುಕನ ಪಾಲಿನಲಿ||

ಹೆಗಡೆ ಹೊರಗಡೆ ಸಿದ್ಯಾ ಬಿದ್ಯಾ ಮತ್ತಿನ್ಯಾರಲ್ಲಿ|
ಹತ್ತಿದ ಏಣಿಯ ಒದೆಯುವ ಆಟಕೆ ಸಾಟಿ ಯಾರಿಲ್ಲಿ||

ಬಾಲವೆ ತಲೆಯನು ಆಡಿಸೋ ಸೋಜಿಗ ಕಂಡಿರಾ ನೀವೆಲ್ಲಿ|
ಕೊಟ್ಟಿಗೆಯೊಳಗಿನ ಶುನಕನ ಆರ್ಭಟ ಕಾಣಿರಾ ನೀವಿಲ್ಲಿ||

ಮಣ್ಣೂ ನಮದು ಹಣ್ಣೂ ನಮದು ತಿರುಳೂ ನಮಗಿರಲಿ|
ಕಣ್ ಕಣ್ ಬಿಡುತಾ ಬಾಯ್ ಬಾಯ್ ಬಿಡಲು ಕರಟವು ನಿಮಗಿರಲಿ||

[ಈ ವಿಡಂಬನಾತ್ಮಕ ರಚನೆ ಜನಪ್ರಿಯ 'ರಾಯರು ಬಂದರು ಮಾವನ ಮನೆಗೆ' ಧಾಟಿಯಲ್ಲಿ ರಚಿಸಿ ಮೂರು ವರ್ಷಗಳ ಮೇಲಾಗಿತ್ತು. ಮಾನ್ಯ ಕುಮಾರಸ್ವಾಮಿಯವರು ಮಾನ್ಯ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಷರತ್ತುಗಳನ್ನು ಮುಂದೊಡ್ಡಿದಾಗ ಮೂಡಿದ ರಚನೆಯಿದು. ಆಗ ನಾನು ತಹಸೀಲ್ದಾರನಾಗಿ ಕಾರ್ಯ ಮಾಡುತ್ತಿದ್ದರಿಂದ ನನ್ನ ಭಾವನೆಗಳನ್ನು ಮುಕ್ತವಾಗಿ ಹೊರಗೆಡವುವಂತಿರಲಿಲ್ಲ. ಈಗ ಇದು ಶೈತ್ಯಾಗಾರದಿಂದ ಹೊರಬಂದಿದೆ. ವ್ಯಂಗ್ಯ ಚಿತ್ರ/ವಿಡಂಬನೆಯ ರೀತಿಯಲ್ಲಿ ಸ್ವಾಗತಿಸಲು ಕೋರುವೆ.]
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು.]

ಹೀಗೊಂದು ವರ್ಗಾವಣೆ

     ಇದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆಯಾದರೂ ನನ್ನ ನೆನಪಿನಲ್ಲಿ ಉಳಿದಿದೆ. ನಾನಾಗ ಹೊಳೆನರಸಿಪುರದಲ್ಲಿ ಉಪತಹಸೀಲ್ದಾರನಾಗಿದ್ದೆ. ಆಗ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಛೇರಿ ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಳಿ ಇತ್ತು. ಈಗ ರಾಜ್ಯ ಮಟ್ಟದ ನಾಯಕರಾಗಿರುವವರು ಆಗ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ತಿಂಗಳಿಗೆ ಒಮ್ಮೆ ನಡೆಯುವ ತಾಲ್ಲೂಕು ಅಭಿವೃದ್ಧಿ ಮಂಡಳಿ ಸಭೆಗೆ ನಾನು ಹಾಜರಾಗುತ್ತಿದ್ದೆ. ಒಮ್ಮೆ ಸಭೆ ನಡೆಯುವ 15 ನಿಮಿಷಗಳ ಮುಂಚೆ ಸಭೆ ನಡೆಯುವ ಸಭಾಂಗಣದಲ್ಲಿ ಕುಳಿತಿದ್ದೆ. ಅಧ್ಯಕ್ಷರು ಅರ್ಧ ಘಂಟೆ ತಡವಾಗಿ ಬಂದರು. ಸಭಾಂಗಣಕ್ಕೆ ಬರುವ ಮುನ್ನ ಅಧ್ಯಕ್ಷರು ಅವರ ಕೊಠಡಿಯಲ್ಲಿ ಕುಳಿತು ಕೆಲಕಾಲ ಸಮಾಲೋಚಿಸಿ ಸಭೆಗೆ ಬರುತ್ತಿದ್ದರು. ಆ ಸಮಯದಲ್ಲಿ ಅವರ ಕೊಠಡಿಯ ಹೊರಗೆ ಕ್ಷೇತ್ರಾಭಿವೃದ್ಧಿ ಅಧಿಕಾರಿಯ ಜವಾನ ನಾರಾಯಣ (ಹೆಸರು ಬದಲಿಸಿದೆ) ಗಟ್ಟಿ ಧ್ವನಿಯಲ್ಲಿ ಕೂಗಾಡುತ್ತಿದ್ದ. ಇನ್ನೊಬ್ಬ ಜವಾನ ರಂಗೇಗೌಡ ಅವನನ್ನು ಸುಮ್ಮನಿರಿಸುತ್ತಿದ್ದ. ಅವರ ನಡುವಿನ ಸಂಭಾಷಣೆ ಹೀಗಿತ್ತು:-
ರಂಗೇಗೌಡ: ಏ ಸುಮ್ಮನಿರೋ. ಒಳಗಡೆ ಅಧ್ಯಕ್ಷರು ಅವ್ರೆ.
ನಾರಾಯಣ: ಇದ್ದರೆ ಇರಲಿ ಬಿಡೋ, ಅವರೇನು ದ್ಯಾವರಾ?
ರಂ: ಏನು ಕುಡಕೊಂಡು ಬಂದಿದೀಯಾ? ಸ್ವಲ್ಪ ನಿಧಾನಕ್ಕೆ ಮಾತಾಡು. ಅವರಿಗೆ ಕೇಳುತ್ತೆ.
ನಾ: ಕುಡಿಯಾಕೆ ನೀನು ದುಡ್ ಕೊಟ್ಟಿದ್ಯಾ? ಕೇಳಿದ್ರೆ ಕೇಳ್ಲಿ ಬುಡು. ನಾನೇನು ಆಡಬಾರದ್ದು ಮಾತಾಡ್ತಿದೀನಾ?
ರಂ: ಸುಮ್ಕಿರ್ಲಾ. ಆಮ್ಯಾಕೆ ಎಡವಟ್ಟಾಯ್ತದೆ.
ನಾ: ಏನ್ಲಾ ಆಯ್ತದೆ? ನರ್ಸೀಪುರದಲ್ಲಿ ಬರೀ ಅಪ್ಪ ಮಕ್ಕಳದೇ ದರಬಾರು. ಎಲ್ಲಾ ಅವರು ಏಳ್ದಾಗೇ ನಡೀಬೇಕು.ಬಡವರ ಕಸ್ಟ ಯಾವ ನನ್ಮಗ ಕೇಳ್ತಾನೆ?
ರಂ: ಬ್ಯಾಡ ಸುಮ್ಕಿರ್ಲಾ. ಯಾಕೋ ನಿಂಗೆ ಗಾಸಾರ ಸರಿ ಇರಾಂಗ್ ಕಾಣಾಕಿಲ್ಲ.
ನಾ: ಏನ್ ಮಾಡ್ತಾರ್ಲಾ? ಟ್ರಾನ್ ಫರ್ ಮಾಡ್ತಾರೇನ್ಲಾ? ಮಾಡ್ಲಿ ಬುಡ್ಲಾ? ಅದಕ್ಕೆಲ್ಲಾ ನಾ ಯದರಾಕಿಲ್ಲ. ಆಸನ ಬುಟ್ ಯಲ್ಲಿಗಾದರೂ ಟ್ರಾನ್ ಫರ್ ಮಾಡ್ಲಿ. ಓಗ್ತೀನ್ ಕಣ್ಲಾ.
     ಒಳಗಡೆ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸಮಾಲೋಚಿಸುವುದನ್ನು ಬಿಟ್ಟು ಹೊರಗಿನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದರು. ಬಿ.ಡಿ.ಓ.ರವರು 'ನಾರಾಯಣ ಒಳ್ಳೆಯವನೇ. ಯಾವತ್ತೂ ಹೀಗಾಡಿರಲಿಲ್ಲ. ಕುಡಕೊಂಡು ಬಂದಿದ್ದಾನೋ ಏನೋ' ಎಂದು ಸ್ವಗತದಂತೆ ಹೇಳಿದರು. ಆಮೇಲೆ ಅವರೇ ಹೊರಬಂದು ಗದರಿಸಿ ನಾರಾಯಣನನ್ನು ಗದರಿಸಿ ಕಳಿಸಿದರು. ಆಗಲೂ ನಾರಾಯಣ "ಏನಾಯ್ತದೆ ಆಗ್ಲಿ ಬುಡಿ ಸಾರ್. ಟ್ರಾನ್ ಫರ್ ಮಾಡಿದ್ರೆ ಮಾಡ್ಲಿ. ಆಸನ ಬುಟ್ ಎಲ್ ಆಕ್ತಾರೆ ಆಕ್ಲಿ, ಓಯ್ತೀನಿ" ಎನ್ನುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಿದ.
     ಅಧ್ಯಕ್ಷರಿಗೂ ಅಂದು ಮೂಡಿರಲಿಲ್ಲ. ಸಭೆ ಬೇಗ ಮುಕ್ತಾಯ ಕಂಡಿತು. ಸಭೆ ಮುಗಿದ ತಕ್ಷಣ ಅಧ್ಯಕ್ಷರು ಹಾಸನಕ್ಕೆ ಹೊರಟರು. ಮಧ್ಯಾಹ್ನ ನಾಲ್ಕು ಘಂಟೆ ವೇಳೆಗೆ ವಾಪಸು ಬರುವಾಗ ನಾರಾಯಣನನ್ನು ಹಾಸನಕ್ಕೆ ವರ್ಗಾವಣೆ ಮಾಡಿದ ಆದೇಶವನ್ನು ಕೈಲಿ ಹಿಡಿದುಕೊಂಡೇ ಬಂದಿದ್ದರು. ಬಿ.ಡಿ.ಓ.ರಿಗೆ ಹೇಳಿ ನಾರಾಯಣನನ್ನು ಆ ಕೂಡಲೇ ಕಛೇರಿಯಿಂದ ರಿಲೀವ್ ಮಾಡಿಸಿದರು. ಮರುದಿನ ಹಾಸನದ ಕಛೇರಿಯಲ್ಲಿ ಡ್ಯೂಟಿ ರಿಪೋರ್ಟು ಮಾಡಿಕೊಂಡು ಸಾಯಂಕಾಲ ಹೊಳೆನರಸೀಪುರಕ್ಕೆ ಬಂದ ನಾರಾಯಣ ಸೀದಾ ಅಧ್ಯಕ್ಷರ ಮನೆಗೆ ಹೋದ. ಅವರಿಗೆ ಅಡ್ಡಬಿದ್ದು "ಬುದ್ಧೀ, ತ್ಯಪ್ ತಿಳಿಬ್ಯಾಡಿ. ನಾನ್ ನಿಮ್ ಸಿಸ್ಯ. ಬಡವ. ನೆನ್ನೆ ನಾನು ಕುಡಿದಿರಲಿಲ್ಲ ಬುದ್ಧೀ. ನಂಗೆ ಆಸನಕ್ಕೇ ಟ್ರಾನ್ ಫರ್ ಬ್ಯಾಕಾಗಿತ್ತು ಬುದ್ಧೀ. ನನ್ನ ಎಂಡ್ರಿಗೆ ಉಸಾರಿಲ್ಲ. ಆಪ್ಲೇಸನ್ ಆಗಬ್ಯಾಕು. ಅದ್ಕೇ ಇಂಗ್ಮಾಡ್ದೆ. ನನ್ನ ತ್ಯಪ್ ಒಟ್ಟೆಗಾಕ್ಕಳಿ ಬುದ್ಧೀ" ಎಂದು ಹೇಳಿದಾಗ ಅಧ್ಯಕ್ಷರು ಸುಸ್ತು. "ಎಲಾ ಇವ್ನಾ!" ಅಂದುಕೊಂಡು ಸುಮ್ಕಾದರು.

ಚುಚ್ಚಾಣಿ

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ|| ||ಪ||


ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ
ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ ||ಚುಚ್ಚಾಣಿ||


ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ
ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ|| ||ಚುಚ್ಚಾಣಿ||


ಬಂಧು ಬಳಗದೆ ಕೂಡಿ ನಲಿಯುತಲಿದ್ದೆ
ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ
ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ|| ||ಚುಚ್ಚಾಣಿ||


ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ||


(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ಕೆಟ್ಟದಣ್ಣಾ"..)

ಎಂತು ಅರ್ಚಿಸಲಿ?


ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ|| 

ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಗಂಟಾನಾದವ ಮಾಡಿ ಬಾ ಎನ್ನಲೇನು?||


ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||


ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||


ಅನೂಹ್ಯ ಅನಂತ ಅಭೋಕ್ತ ಅಚ್ಯುತ ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||


ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||


ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||


ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕ.ವೆಂ.ನಾಗರಾಜ್.

ಪಾಪ ಶೇಷ

     ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದವನು ದೇವಸ್ಥಾನದ ಒಳಗೆ ದೇವರಿಗೆ ನಮಸ್ಕರಿಸಿ ಹೋಗಲು ಬಂದ.ಆಳೆತ್ತರದ ದೇವರ ವಿಗ್ರಹದ ಹಿಂದೆ ಇದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ದೇವಸ್ಥಾನದಲ್ಲಿ ಯಾರೂ ಇಲ್ಲವೆಂದುಕೊಂಡ ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ನಿವೇದನೆ ಮಾಡಿಕೊಂಡ: "ದೇವರೇ, ನನಗೆ ಜೀವನವೇ ಬೇಸರವಾಗಿದೆ. ಎಲ್ಲಾ ವಿಷಯದಲ್ಲೂ ನನ್ನ ಹೆಂಡತಿ ನನ್ನನ್ನು ತಪ್ಪು ಹುಡುಕಿ ಮೂದಲಿಸುತ್ತಿರುತ್ತಾಳೆ. ನಾನು ಎಷ್ಟು ಹೊಂದಿಕೊಂಡು ಹೋದರೂ ಅವಳ ಸ್ವಭಾವದಲ್ಲಿ ಬದಲಾವಣೆಯಾಗುತ್ತಿಲ್ಲ. ಯಾವಾಗಲೂ ಅವರಿವರ ಎದುರಿಗೆ, ಮಕ್ಕಳ ಎದುರಿಗೆ ಚುಚ್ಚಿ ಮಾತನಾಡುವುದು, ಪರೋಕ್ಷವಾಗಿ ಹಂಗಿಸುವುದು ಮಾಡುತ್ತಿರುತ್ತಾಳೆ. ನಾನು ಏನಾದರೂ ಹೇಳಹೋದರೆ ರಂಪ ರಾಮಾಯಣ ಮಾಡುತ್ತಾಳೆ.ನೀನೇ ಅವಳಿಗೆ ಒಳ್ಳೆಯ ಬುದ್ಧಿ ಕೊಡಬೇಕು."
     ವಿಗ್ರಹದ ಹಿಂದಿದ್ದ ಮೂಢನಿಗೆ ನಗು ಬಂತು. ಅಲ್ಲಿಂದಲೇ "ವತ್ಸಾ" ಎಂದ. ಮಂಕ ಗಾಬರಿಯಿಂದ ಕಣ್ಣು ಬಿಟ್ಟು ನೋಡಿದರೆ ಯಾರೂ ಕಾಣಲಿಲ್ಲ. ದೇವರೇ ಮಾತನಾಡಿದನೇ ಎಂದುಕೊಂಡು ಬಾಯಿ ಬಿಟ್ಟುಕೊಂಡು ನಿಂತಿದ್ದ. ಅಶರೀರವಾಣಿ ಮುಂದುವರೆಯಿತು: "ಇದಕ್ಕೆ ನಿನ್ನ ಪೂರ್ವಜನ್ಮದ ಕರ್ಮವೇ ಕಾರಣ. ನೀನು ತಿರುಗಿ ಮಾತನಾಡುತ್ತಲೇ ಇದ್ದರೆ ಪಾಪಶೇಷ ಹೋಗುವುದಿಲ್ಲ. ಹಿಂದಿನ ಜನ್ಮದ ದೋಷ ಹೋಗುವವರೆಗೆ ಸುಮ್ಮನಿದ್ದರೆ ನಿನಗೆ ಒಳ್ಳೆಯದಾಗುತ್ತದೆ. ಚಿಂತಿಸಬೇಡ."
     ಕಣ್ಣು ಕಣ್ಣು ಬಾಯಿ ಬಾಯಿ ಬಿಟ್ಟುಕೊಂಡಿದ್ದ ಮಂಕ ಮತ್ತೊಮ್ಮೆ ದೇವರಿಗೆ ಅಡ್ಡಬಿದ್ದ. ತಿರುಗಿ ನೋಡುತ್ತಾ ಹೊರಬಿದ್ದ.
     ಮನೆಗೆ ಕಾಲಿಡುತ್ತಿದ್ದಂತೆ ಹೆಂಡತಿ ಶುರು ಮಾಡಿದಳು: "ಹಾಲು ತರಲು ಹೋದವರು ಬರಿಕೈಲಿ ಬಂದಿದೀರಲ್ರೀ. ಏನು ಹೇಳೋದು ನಿಮ್ಮ ಮಂಕು ಬುದ್ಧಿಗೆ? . . . . . ."ಗಂಡ ಮರುಮಾತಾಡದೆ ಪುನಃ ಹೋಗಿ ಹಾಲು ತಂದ. ಹೆಂಡತಿ ಏನೇ ಅಂದರೂ ತನಗಲ್ಲವೆಂಬಂತೆ ಸುಮ್ಮನಿರುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವು ದಿನಗಳಲ್ಲಿ ಗಂಡ ಏನೇ ಅಂದರೂ ಸುಮ್ಮನಿರುವುದನ್ನು ಕಂಡ ಹೆಂಡತಿಗೆ ಕಸಿವಿಸಿಯಾಗತೊಡಗಿತು. ತನ್ನನ್ನು ಬಯ್ಯಲಿ ಎಂದು ಕಾಲು ಕೆರೆದು ಜಗಳ ಮಾಡಿದರೂ ಸುಮ್ಮನಿರುವುದನ್ನು ಕಂಡು 'ಇಂಥಾ ಒಳ್ಳೆಯ ಗಂಡನಿಗೆ ಅನ್ನುತ್ತಿದ್ದೆನಲ್ಲಾ!' ಅಂದುಕೊಂಡಳು.
     ದೇವರು 'ಅಭಯ' ಕೊಟ್ಟಿದ್ದಂತೆ ಮಂಕನಿಗೆ ಮುಂದೆ ಒಳ್ಳೆಯ ದಿನಗಳು ಬಂದವು!

ಶುಕ್ರವಾರ, ಜುಲೈ 16, 2010

ಸಾವು ಬದುಕಿದೆ ! !

ಸಾವು ಬದುಕಿದೆ ! !
     ಹೌದು, ಸಾವು ಬದುಕಿದೆ; ಬದುಕಿರುವುದು ಸಾವು ಮಾತ್ರ! ಆ ಸೃಷ್ಟಿಕರ್ತನಾದ ಬ್ರಹ್ಮ ಹುಟ್ಟುವಾಗಲೇ ಸಾವು ನಿಗದಿಸಿ ಕಳುಹಿಸುತ್ತಾನೆ. ಒಬ್ಬ ಮನುಷ್ಯ 100 ವರ್ಷ ಬದುಕಿರುತ್ತಾನೆಂದುಕೊಂಡರೆ ಆ ಕಾಲದಲ್ಲಿ ಸುಮಾರು 30x60x24x365x100 ಸಲ ಉಸಿರಾಡುತ್ತಾನೆ. ಪ್ರತಿಸಲ ಉಸಿರಾಡಿದಾಗಲೂ ಆಯಸ್ಸಿನಲ್ಲಿ ಅಷ್ಟು ಉಸಿರು ಕಡಿಮೆಯಾಗುತ್ತದೆ. ಅಂದರೆ ಆಗ ತಾನೇ ಹುಟ್ಟಿದ ಮಗು ಸಹ ಉಸಿರಾಡುತ್ತಾ ಆಡುತ್ತಾ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತದೆ. ಆ ಉಸಿರು ಯಾವಾಗ ನಿಲ್ಲುತ್ತದೆ ಯಾರಿಗೆ ಗೊತ್ತು? ಕಣ್ತೆರೆದು ಪ್ರಪಂಚ ನೋಡುವ ಮುನ್ನವೇ ಸಾವು ಬರಬಹುದು. ತಂದೆ ತಾಯಿಯರ ಅಜಾಗರೂಕತೆ, ಅನೈತಿಕ ಸಂಬಂಧ, ದ್ವೇಶ, ಕಾಯಿಲೆ, ಅಪಘಾತ, ಪ್ರಕೃತಿ ವಿಕೋಪ, ಕುತೂಹಲ, ಆತ್ಮಹತ್ಯೆ, ಭಯೋತ್ಪಾದನೆ, ದರೋಡೆ, ಇತ್ಯಾದಿ ಯಾವುದೇ ರೂಪದಲ್ಲಿ ಸಾವು ಅರಿವು ಮೂಡುವ ಮುನ್ನವೇ ಬರಬಹುದು. 'ಈ ದೇಹದಿಂದ ದೂರನಾದೆ ಏಕೆ ಆತ್ಮನೇ, ಈ ಸಾವು ನ್ಯಾಯವೇ' ಎಂದು ಶೋಕಿಸುವಂತಿಲ್ಲ. ಏಕೆಂದರೆ ಸಾವೇ ನ್ಯಾಯ! ಬದುಕಿನ ಅನ್ಯಾಯವೇ ಸಾವಿನ ನ್ಯಾಯ!
     ಆದರೆ. . . . ಓ ದೇವರೇ, ನೀನು ಹೀಗೇಕೆ ಮಾಡಿದೆ? ಜನರು ತಾವು ಸಾಯುವುದೇ ಇಲ್ಲವೆಂದು ಭಾವಿಸುವಂತೆ ಮಾಡುವ ಯಾವ ಭ್ರಾಮಕ, ಮಾದಕ ಅಂಶವನ್ನು ಅವರಲ್ಲಿ ಸೇರಿಸಿರುವೆ? ಸಾಯುವುದು ಅವರಿಗೆ ಗೊತ್ತಿದ್ದರೆ ಬದುಕುತ್ತಿದ್ದರು. ಕೊನೆಯ ಪಕ್ಷ ಯಾವಾಗ ಸಾಯುತ್ತೇವೆಂದಾದರೂ ಗೊತ್ತಾಗಿದ್ದರೆ ಸ್ವಲ್ಪಕಾಲವಾದರೂ ಬದುಕುತ್ತಿದ್ದರು. ಬದುಕಿಯೇ ಇರುತ್ತೇವೆಂದು ಅವರು ಭಾವಿಸಿ ಸಾಯುವಂತೆ ಮಾಡಿರುವೆ! ಒಂಟೆಗಳ ಕಾಲಿಗೆ ಮಕ್ಕಳನ್ನು ಕಟ್ಟಿ ಓಟದ ಸ್ಪರ್ಧೆ ಏರ್ಪಡಿಸಿ ಆನಂದಿಸುವ ಜನರು ಇರುವಲ್ಲಿ, ಧರ್ಮದ ಹೆಸರಿನಲ್ಲಿ ಬಾಂಬುಗಳನ್ನು ಸಿಡಿಸಿ ಮಾರಣ ಹೋಮ ಮಾಡುವ ಮನೋಭಾವದವರು ಇರುವಲ್ಲಿ, ಹಣಕ್ಕಾಗಿ ಹೆತ್ತವರು, ಬಂಧುಗಳೆನ್ನದೆ ಯಾರನ್ನಾದರೂ ಕೊಲ್ಲಲು ಹಿಂಜರಿಯದವರಿರುವಲ್ಲಿ, ಅಧಿಕಾರಕ್ಕಾಗಿ ಹಣ, ಹೆಂಡ, ಖಂಡಗಳನ್ನು ಬಳಸಿ ಗೆದ್ದುಬಂದು ಅಧಿಕಾರವನ್ನು ಹಣ ಗಳಿಸುವ ಸಾಧನವಾಗಿ ಮಾಡಿಕೊಳ್ಳುವವರಿರುವಲ್ಲಿ, ದೇಶವನ್ನೆ ಮಾರಲು ಹಿಂದು ಮುಂದು ನೋಡದವರಿರುವಲ್ಲಿ ಬದುಕು ಸಾಯುತ್ತಿದೆ; ಸಾವು ಗಹಗಹಿಸಿ ನಗುತ್ತಿದೆ!
     ಟಿಪ್ ಟಾಪ್ ಯೂನಿಫಾರಮ್ ಧರಿಸಿ ಚಾಕೋಬಾರ್ ಗಳನ್ನು ಮೆಲ್ಲುತ್ತಾ ಕಾರಿನಲ್ಲಿ ಓಡಾಡುವ ಮಕ್ಕಳನ್ನು ಆಸೆಗಣ್ಣಿಂದ ನೋಡುತ್ತಾ ಮಕ್ಕಳ ಆಕಾರದ ಜೀವಗಳು ಏನಾದರೂ ಸಿಕ್ಕೀತೆಂದು ತಿಪ್ಪೆಯನ್ನು ಕೆದಕುತ್ತಿರುವಲ್ಲಿ, ಸತ್ತು ಗಂಟೆಗಳಾಗಿದ್ದರೂ ಇಂಟೆನ್ಸಿವ್ ಕೇರ್ ಯೂನಿಟ್ ನಲ್ಲಿರಿಸಿ ಕೃತಕ ಉಸಿರಾಟದ ಯಂತ್ರ ಅಳವಡಿಸಿ, ಡ್ರಿಪ್ಸ್ ಹಾಕಿ ಬಿಲ್ಲು ಎಷ್ಟು ಹೆಚ್ಚು ಮಾಡಬಹುದೆಂದು ಲೆಕ್ಕ ಹಾಕುವ ವೈದ್ಯರಿರುವಲ್ಲಿ, ನಿರ್ಗತಿಕ ವಿಧವೆಯರಿಗೆ ಮಾಸಾಶನ ಮಂಜೂರು ಮಾಡುವ ನೆಪದಲ್ಲಿ ಶೋಷಿಸುವ ನೌಕರ, ಅಧಿಕಾರಿಗಳಿರುವಲ್ಲಿ, ಕಮಿಷನ್, ಪರ್ಸೆಂಟೇಜ್ ನಿಗದಿಪಡಿಸಿ ನಂತರ ಯೋಜನೆಗಳನ್ನು ಸಿದ್ಧಪಡಿಸುವವರಿರುವಲ್ಲಿ ಬದುಕು ಚಿಕಿತ್ಸೆ ಇಲ್ಲದ ರೋಗದಂತೆ ನರಳಿ, ನರಳಿ ಸಾಯುತ್ತಿದೆ!
    ನನಗೆ ಕೂಗಿ ಕೂಗಿ ಹೇಳಬೇಕನ್ನಿಸುತ್ತಿದೆ, ರಸ್ತೆಯ ಮಧ್ಯದಲ್ಲಿ ನಿಂತು ಗಂಟಲು ಹರಿಯುವಂತೆ ಚೀರಬೇಕನ್ನಿಸುತ್ತಿದೆ! ಓ ನನ್ನ ಮಿತ್ರರೇ, ನೀವು ಸತ್ತಿದ್ದೀರಿ; ಸಾಯುತ್ತಿದ್ದೀರಿ! ಬದುಕಿದ್ದೇವೆಂಬ ಭ್ರಮೆಯಲ್ಲಿದ್ದೀರಿ! ಸಾಯುತ್ತಿರುವುದು ನಿಮಗೆ ಗೊತ್ತಾಗುತ್ತಿಲ್ಲ! ಗೊತ್ತು ಮಾಡಿಕೊಳ್ಳಿರಿ! ಸಾಯುತ್ತಿದ್ದೇವೆಂದು ನಿಮಗೆ ಗೊತ್ತಾದರೆ ಬದುಕಲು ಪ್ರಯತ್ನಿಸುವಿರಿ. ಸಾಯುತ್ತಾ ಬದುಕದಿರಿ; ಬದುಕಿ ಸಾಯಿರಿ!

ಸೇವಾ ಪುರಾಣ -5: ಇವನು ಫುಡ್ಇನ್ಸ್ ಪೆಕ್ಟರಾ? -5: ಮುದ ನೀಡಿದ ಮೆಚ್ಚುಗೆ

ಹೊಕ್ಕಿದ್ದ ಕೆಲಸದ ಭೂತ
     ಫುಡ್ ಇನ್ಸ್ ಪೆಕ್ಟರ್ ಹುದ್ದೆಯಿಂದ ನನ್ನನ್ನು ಗುಮಾಸ್ತರ ಹುದ್ದೆಗೆ ತಳ್ಳಿದಾಗ ನನಗೆ ಉಪಯೋಗವಿಲ್ಲದ ಶಾಖೆ ಎಂದು ಕರೆಯಲಾಗುತ್ತಿದ್ದ ಆಡಿಟ್ ಶಾಖೆಯೊಂದಿಗೆ ಇನ್ನಿತರ ಸಣ್ಣ ಪುಟ್ಟ ಕೆಲಸಗಳನ್ನು ವಹಿಸಲಾಯಿತು. ನನ್ನ ದೃಷ್ಟಿಯಲ್ಲಿ ಯಾವುದೂ ಉಪಯೋಗವಿಲ್ಲದ ಶಾಖೆ ಎಂಬುದಿರಲಿಲ್ಲ. ಧೂಳು ತಿನ್ನುತ್ತಿದ್ದ ಕಡತಗಳನ್ನು ಕೊಡವಿ ವಿಲೇವಾರಿಗೆ ಕ್ರಮ ವಹಿಸಿದೆ. ಅಧೀನ ಕಛೇರಿಯವರು ನನ್ನ ಬರವಣಿಗೆಯ ಕಾಟ ತಡೆಯಲಾರದೆ ಉತ್ತರ ಕೊಡಲೇಬೇಕಾಗುತ್ತಿತ್ತು. ಬಹಳಷ್ಟು ಪ್ರಕರಣಗಳಲ್ಲಿ ಹಣವನ್ನು ತಾವೇ ಕಟ್ಟಿ ಅಥವಾ ಸಂಬಂಧಪಡದಿದ್ದವರಿಂದಲಾದರೂ ಕಟ್ಟಿಸಿ ಆಡಿಟ್ ಆಕ್ಷೇಪಣೆಗಳನ್ನು ಮುಕ್ತಾಯಗೊಳಿಸುತ್ತಿದ್ದರು. ಇದರಿಂದ ಒಳ್ಳೆಯ ಪ್ರಗತಿಯಾಯಿತು. ಒಮ್ಮೆ ರೆಕಾರ್ಡ್ ರೂಮಿನಲ್ಲಿ ಕಟ್ಟಿಟ್ಟಿದ್ದ ಗೋಣಿಚೀಲವನ್ನು ಬಿಚ್ಚಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಪ್ಲೆಡ್ಜ್ ಮಾಡಿದ ಮತ್ತು ಮಾಡಿರದ ರಾಷ್ತ್ರೀಯ ಉಳಿತಾಯ ಪತ್ರಗಳು ಕಂಡವು. ರದ್ದಿ ತುಂಬಿದಂತೆ ತುಂಬಿದ್ದ ಅವನ್ನು ವಿವಿಧ ಕಾರಣಗಳಿಗಾಗಿ ಭದ್ರತೆಯಾಗಿ ಮತ್ತು ಇನ್ನಿತರ ಕಾರಣಗಳಿಗಾಗಿ ಪಡೆದಿದ್ದವಾಗಿದ್ದವು. ಗುಮಾಸ್ತರುಗಳು ವರ್ಗಾವಣೆಯಾದಾಗ ಮತ್ತು ಇನ್ನಿತರ ಕಾರಣಗಳಿಗೆ ಬೇರೊಬ್ಬರಿಗೆ ಛಾರ್ಜು ವಹಿಸಿಕೊಡದೆ ಹೋಗಿದ್ದಂತಹ ಕಾಗದ ಪತ್ರಗಳನ್ನು ಆರೀತಿ ತುಂಬಿಸಿಡಲಾಗುತ್ತಿತ್ತಂತೆ. ಅದನ್ನು ಕೇಳುವವರು ಯಾರೂ ಇರಲಿಲ್ಲ. ಅಂತಹ ಯಾರೂ ಕೇಳದ ಕಾಗದ ಪತ್ರಗಳನ್ನು ಅಂಗಡಿಗೆ ತೂಕಕ್ಕೆ ಹಾಕಿ ಕಾಸು ಮಾಡಿಕೊಳ್ಲುವವರೂ ಇದ್ದರು. ಉಳಿತಾಯ ಪತ್ರಗಳನ್ನೆಲ್ಲಾ ಹೊರತೆಗೆದು ವಾರಸುದಾರರನ್ನು ಗುರುತಿಸಿ ನೋಟೀಸುಗಳನ್ನು ಕಳಿಸಿ ಅವರಿಗೆ ಹಿಂತಿರುಗಿಸಿದೆ. ವಾಯಿದೆ ಮುಗಿದಿದ್ದ, ಮರೆತೇ ಹೋಗಿದ್ದ ರಾಷ್ತ್ರೀಯ ಉಳಿತಾಯ ಪತ್ರಗಳು ಅನಿರೀಕ್ಷಿತವಾಗಿ ಕೈಗೆ ಸೇರಿದಾಗ ಅವರಿಗೆ ಸಂತೋಷವಾಗುತ್ತಿತ್ತು. ಎಷ್ಟೋ ಪ್ರಕರಣಗಳಲ್ಲಿ ಸಂಬಂಧಿಸಿದವರು ಸತ್ತೇ ಹೋಗಿದ್ದು ಅವರ ವಾರಸುದಾರರಿಗೆ ತಲುಪಿಸಿದಾಗ ಅವರಿಗೆ ಆಶ್ಚರ್ಯವಾಗಿತ್ತು. 'ಸ್ಮಶಾನಕ್ಕೆ ಹೋದ ಹೆಣ, ಸರ್ಕಾರಕ್ಕೆ ಸೇರಿದ ಹಣ' ಕುರಿತ ಗಾದೆ ಅವರ ಮಟ್ಟಿಗೆ ಸುಳ್ಳಾಗಿತ್ತು. ಒಂದಾನೊಂದು ಕಾಲದಲ್ಲಿ ರದ್ದಿ ಕಾಗದಕ್ಕೆ ಸಮನಾಗಿ ಹೋಗುತ್ತಿದ್ದುದನ್ನು ತಪ್ಪಿಸಿದೆನೆಂದು, ಏನೋ ಒಳ್ಳೆಯ ಕೆಲಸ ಮಾಡಿಬಿಟ್ಟೆನೆಂದು ನನಗೆ ಸಂತೋಷವಾಗಿತ್ತು.
     ಜನರು ಏನಾದರೂ ಕೆಲಸ ಮಾಡಿಸಿಕೊಳ್ಳಲು ಬರುವವರು ಹಣ ಕೊಡಲು ಬರುತ್ತಿದ್ದುದು ಸಾಮಾನ್ಯವಾಗಿತ್ತು. ನಾನು ಅದನ್ನು ತಿರಸ್ಕರಿಸಿ ಹಣ ದಾನ ಮಾಡಬಹುದಾದ ಸಂಘ ಸಂಸ್ಥೆಗಳು, ಯೋಜನೆಗಳು, ಕಾರ್ಯಗಳ ವಿವರ ಇಟ್ಟುಕೊಂಡಿದ್ದು ಅವುಗಳಿಗೆ ಕೊಡುವಂತೆ ಸೂಚಿಸುತ್ತಿದ್ದೆ. ಹಲವರು ಲಂಚದ ಬದಲು ಒಳ್ಳೆಯ ಕೆಲಸಕ್ಕೆ ಕೊಡುತ್ತಿದ್ದೇವೆಂಬ ಭಾವನೆಯಿಂದ ಹಣ ಕಳುಹಿಸಿ ನನಗೆ ತಿಳಿಸುತ್ತಿದ್ದುದು ನನಗೆ ಸಂತೋಷ ಕೊಡುತ್ತಿತ್ತು. ಏನನ್ನೋ ಸಾಧಿಸಿಬಿಡುತ್ತಿದ್ದೇನೆ ಎಂದು ಅಂದುಕೊಳ್ಳುತ್ತಿದ್ದೆ. ಕಛೇರಿಯಲ್ಲಿ ಮತ್ತು ಹೊರಗೆ ನಾನೊಬ್ಬ ಹುಚ್ಚ, ನಾಲಾಯಕ್ ಎಂದು ಅನ್ನಿಸಿಕೊಳ್ಳುತ್ತಿದ್ದರೆ ಮನೆಯಲ್ಲಿ 'ಮನೆಗೆ ಮಾರಿ, ಪರರಿಗುಪಕಾರಿ' ಎಂಬ ಬಿರುದು ಸಂಪಾದಿಸಿದ್ದೆ.
ಮುದ ನೀಡಿದ ಮೆಚ್ಚುಗೆ
     ಒಮ್ಮೆ ಅರಸಿಕೆರೆಯ ಸಿಮೆಂಟ್ ಡೀಲರ್ ನಾಗೇಂದ್ರಶೆಟ್ಟಿ ಎಂಬುವವರು ತಮ್ಮ ಸಿಮೆಂಟ್ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ ನನಗೆ ನೂರು ರೂ. ಕೊಡಬಂದಿದ್ದರು. ನಾನು ಬೇಡವೆಂದೆ. ಆ ಸಮಯಕ್ಕೆ ಸಾಹೇಬರು ನನಗೆ ಹೇಳಿಕಳಿಸಿದ್ದರಿಂದ ಛೇಂಬರಿಗೆ ಹೋಗಿ ವಾಪಸು ಬಂದಾಗ ಶೆಟ್ಟರು ಹೋಗಿದ್ದರು. ಆದರೆ ನನ್ನ ಡ್ರಾಯರಿನಲ್ಲಿ ನೂರು ರೂ. ಇತ್ತು. ಶೆಟ್ಟರೇ ಹಾಕಿಹೋಗಿದ್ದೆಂದು ಗೊತ್ತಾಯಿತು. ಶೆಟ್ಟರು ಅರಸಿಕೆರೆಯ ಜನಸಂಘದ ಸಕ್ರಿಯ ರಾಜಕಾರಣಿಯಾಗಿದ್ದರು. ನಾನು ಸಿಮೆಂಟ್ ಪರವಾನಗಿ ನವೀಕರಣವಾದ ನಂತರ ಅವರಿಗೆ ಒಂದು ಪತ್ರ ಬರೆದು "ನೀವು ಕೊಟ್ಟಿದ್ದ ಹಣವನ್ನು ಒಂದು ಸಮಾಜಸೇವಾ ಸಂಸ್ಥೆಗೆ ಕಳಿಸಿದ್ದು ರಸೀದಿಯನ್ನೂ ಪತ್ರದೊಂದಿಗೆ ಕಳಿಸಿರುವುದಾಗಿಯೂ, ನಿಮ್ಮಂತಹ ಹಿರಿಯರು ಬೇರೆಯವರಿಗೆ ಲಂಚ ಕೊಡದಿರಲು ಹೇಳುವುದು ಬಿಟ್ಟು ನೀವೇ ಲಂಚ ಕೊಡುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಕೇಳಿದ್ದೆ. ಈ ಪ್ರಕರಣ ನಡೆದು ಎಷ್ಟೋ ತಿಂಗಳ ನಂತರ ಯಾವುದೊ ಕೆಲಸಕ್ಕೆ ಅರಸಿಕೆರೆಗೆ ಹೋಗಿದ್ದಾಗ ಶೆಟ್ಟರು ದಾರಿಯಲ್ಲಿ ಸಿಕ್ಕು ನನ್ನನ್ನು ಕರೆದುಕೊಂಡು ಅವರ ಅಂಗಡಿಗೆ ಹೋದರು. ಚಹಾ ತರಿಸಿಕೊಟ್ಟರು. ಅಂಗಡಿಯಲ್ಲಿ ಒಂದು ಪತ್ರವನ್ನು ಫ್ರೇಮ್ ಹಾಕಿಸಿ ಎಲ್ಲರೂ ನೋಡುವಂತೆ ಇಟ್ಟಿದ್ದುದನ್ನು ನನಗೆ ತೋರಿಸಿದರು. ಅದು ನಾನೇ ಅವರಿಗೆ ಬರೆದಿದ್ದ ಪತ್ರವಾಗಿತ್ತು. ನನಗೆ ನಿಜಕ್ಕೂ ಸಂತೋಷವಾಗಿತ್ತು.
ಲೆವಿ ಬತ್ತ ಸಂಗ್ರಹ
     ಆಗೆಲ್ಲಾ ಬತ್ತವನ್ನು ಲೆವಿ ರೂಪದಲ್ಲಿ ರೈತರಿಂದ ಸಂಗ್ರಹಿಸಲಾಗುತ್ತಿತ್ತು. ಬೆಳೆ ಕಟಾವಿಗೆ ಬರುವ ಮುಂಚೆ ಫುಡ್ ಜಮಾಬಂದಿ ನಡೆಸಲಾಗುತ್ತಿತ್ತು. ಬತ್ತ ಬೆಳೆದ ರೈತರ ವಿವರಗಳನ್ನು ಗ್ರಾಮಲೆಕ್ಕಿಗರು ನಿಗದಿತ ನಮೂನೆಗಳಲ್ಲಿ ಬರೆಯುತ್ತಿದ್ದರು. ಅದನ್ನು ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರರು ಪರಿಶೀಲಿಸಿದ ನಂತರ ಜಿಲ್ಲಾ ಕಛೇರಿ ಸಿಬ್ಬಂದಿ ಬಂದು ಪರಿಶೀಲಿಸಿ ರೈತರು ಬತ್ತ ಬೆಳೆದ ವಿಸ್ತೀರ್ಣ ಆಧರಿಸಿ ರೈತರು ಕೊಡಬೇಕಾದ ಲೆವಿ ಬತ್ತದ ಪ್ರಮಾಣ ನಿರ್ಧರಿಸಲಾಗುತ್ತಿತ್ತು. ವಿವರ ಬರೆಯುವಾಗಲೇ ಗ್ರಾಮಲೆಕ್ಕಿಗರ ಮಟ್ಟದಲ್ಲೂ ಕೈಚಳಕ ನಡೆಯುತ್ತಿತ್ತು. ಜಿಲ್ಲೆಯಿಂದ ಎಷ್ಟು ಲೆವಿ ಸಂಗ್ರಹಿಸಬೇಕೆಂದು ಸರ್ಕಾರ ನಿರ್ಧರಿಸುತ್ತಿದ್ದು ತಾಲ್ಲೂಕುಗಳ ಗುರಿಯನ್ನು ಜಿಲ್ಲಾಧಿಕಾರಿಯವರು ನಿಗದಿಸುತ್ತಿದ್ದರು. ಗುರಿ ತಲುಪಲಾಗದಿದ್ದ ಸಂದರ್ಭಗಳಲ್ಲಿ ರೈತರುಗಳ ಮನೆಮನೆಗೆ ಹೋಗಿ ಜಪ್ತಿ ಮಾಡುವ ಸಂದರ್ಭಗಳೂ ಬರುತ್ತಿತ್ತು. ಬತ್ತ ಸಂಗ್ರಹಕ್ಕಾಗಿ ಕೆ.ಎಫ್.ಸಿ.ಎಸ್.ಸಿ., ಟಿ.ಎ.ಪಿ.ಸಿ.ಎಂ.ಎಸ್., ಇತ್ಯಾದಿಗಳ ಮೂಲಕ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಸಣ್ಣ, ಮಧ್ಯಮ ಮತ್ತು ದಪ್ಪ ಬತ್ತಗಳಿಗೆ ಸರ್ಕಾರ ಬೇರೆ ಬೇರೆ ದರಗಳನ್ನು ನಿಗದಿಸಿರುತ್ತಿತ್ತು. ರೈತರು ಸಣ್ಣ ಬತ್ತ ಬೆಳೆದಿದ್ದರೂ ದಪ್ಪ ಬತ್ತ ಖರೀದಿಸಿ ಲೆವಿ ಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಇದಕ್ಕೆಂದೇ ಮಧ್ಯವರ್ತಿಗಳೂ ಇರುತ್ತಿದ್ದರು. ಅಕ್ರಮಗಳು, ಲಂಚದ ವ್ಯವಹಾರ ಸಲೀಸಾಗಿ ಸಾಗುತ್ತಿತ್ತು. ಕೆಲವರು ಸಣ್ಣ ಬತ್ತವನ್ನೇ ಕೊಟ್ಟರೂ ಖರೀದಿ ಕೇಂದ್ರಗಳಲ್ಲಿ ಮತ್ತು ಸಂಗ್ರಹಣಾ ಕೇಂದ್ರಗಳಲ್ಲಿ ಅವು ದಪ್ಪ ಬತ್ತವಾಗಿ ಪರಿವರ್ತನೆ ಹೊಂದುತ್ತಿತ್ತು. ಮಧ್ಯವರ್ತಿಗಳಿಗೆ ಮತ್ತು ಆಹಾರ ಸಿಬ್ಬಂದಿಗೆ ಹಣ ಮಾಡಿಕೊಳ್ಳಲು ವಿಪುಲ ಅವಕಾಶವಿತ್ತು. ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕೆಂಪು ದಪ್ಪಕ್ಕಿಯೇ ಸಿಗುತ್ತಿದ್ದುದರ ಮೂಲ ಇದೇ ಆಗಿತ್ತು. ಹೆಚ್ಚು ಪಾಲಿಷ್ ಆಗಿರದೇ ಇರುತ್ತಿದ್ದುದರಿಂದ ಪೌಷ್ಟಿಕವಾಗಿತ್ತು ಎಂದು ಹೇಳಬಹುದಾಗಿತ್ತು!
ಗ್ರಾಮಸ್ಥರು ಕಲಿಸಿದ ಪಾಠ!
      ಮೊದಲೇ ಹೇಳಿದ್ದಂತೆ ಗುರಿ ತಲುಪಲಾಗದಿದ್ದಾಗ ಬಲವಂತದ ಲೆವಿ ವಸೂಲಿ ಮಾಡಬೇಕಾಗುತ್ತಿತ್ತು. ಇಂತಹ ಬಲವಂತದ ವಸೂಲಿಯಿಂದ ಅರಕಲಗೂಡು ತಾಲ್ಲೂಕಿನ ರೈತರು ಸಿಟ್ಟುಗೊಂಡಿದ್ದರು. ಒಮ್ಮೆ ಫುಡ್ ಅಸಿಸ್ಟೆಂಟರು ಇಬ್ಬರು ಸಿಬ್ಬಂದಿಯೊಂದಿಗೆ ಅರಕಲಗೂಡಿನ ರಾಮನಾಥಪುರಕ್ಕೆ ಲೆವಿ ವಸೂಲಿಗೆ ಹೋದಾಗ ಅಪರಾಹ್ನ ಸುಮಾರು 4-5 ಘಂಟೆಯಾಗಿತ್ತು. ರೈತರೊಂದಿಗೆ ಮಾತುಗಳು, ಚರ್ಚೆಗಳು ನಡೆದವು. ನಂತರದಲ್ಲಿ ಫುಡ್ ಅಸಿಸ್ಟೆಂಟರನ್ನು ಒಂದು ಮನೆಗೆ ಲಘು ಉಪಾಹಾರದ ಸಲುವಾಗಿ ಕರೆದೊಯ್ಯಲಾಯಿತು. ಹೊರಗೆ ಇದ್ದ ಅವರ ಜೀಪು ಡ್ರೈವರನನ್ನು ಸಾಹೇಬರಿಗೆ 'ಪಾನೀಯ'ದ ವ್ಯವಸ್ಥೆಯಿದೆಯೆಂದೂ ಅವರು ಬರುವುದು ತಡವಾಗುತ್ತಿದ್ದು ಅವರು ಹಿಂತಿರುಗಲು ಬೇರೆ ಕಾರು ಇದೆಯೆಂದೂ ತಿಳಿಸಿ ಆವನ ಕೈಗೆ ಸ್ವಲ್ಪ ಹಣ ತುರುಕಿ ಜೀಪಿನೊಂದಿಗೆ ಹಾಸನಕ್ಕೆ ಹಿಂತಿರುಗುವಂತೆ ಮಾಡಿದರು. ನಂತರ ಫುಡ್ ಅಸಿಸ್ಟೆಂಟರು ಮತ್ತು ಅವರ ಇಬ್ಬರು ಸಿಬ್ಬಂದಿಯನ್ನು ಆ ಮನೆಯಲ್ಲಿದ್ದಂತೆಯೇ ಹೊರಗಡೆಯಿಂದ ಬೀಗ ಹಾಕಿಬಿಟ್ಟರು. ಅದು ಒಂಟಿ ಮನೆಯಾಗಿದ್ದು ಕೂಗಿದರೂ ಕೇಳುವವರು ಇರಲಿಲ್ಲ. ಊರಿನವರಿಗೆ ವಿಷಯ ಗೊತ್ತಿದ್ದು ಅವರೂ ಸುಮ್ಮನಿದ್ದರು. ಆಗ ಮೊಬೈಲ್ ಫೋನೂ ಇರಲಿಲ್ಲ. ರಾತ್ರಿಯೆಲ್ಲಾ ಅವರು ಅಲ್ಲಿ ಊಟ, ನಿದ್ದೆಯಿಲ್ಲದೆ ಕಳೆಯಬೇಕಾಯಿತು. ಬೆಳಿಗ್ಗೆ ಯಾವುದೋ ಹೊತ್ತಿನಲ್ಲಿ ಹಾಕಿದ್ದ ಬೀಗ ತೆಗೆದಿದ್ದರು. ಅವರುಗಳು ಹೊರಗೆ ಬಂದು ನೋಡಿದರೆ ಅಲ್ಲಿ ಜೀಪೂ ಇರಲಿಲ್ಲ. ಜನರನ್ನು ಕೇಳಿದರೆ ತಮಗೆ ಗೊತ್ತಿಲ್ಲ, ಯಾರು ಮಾಡಿದರೋ ತಿಳಿದಿಲ್ಲ, ತಮಗೆ ಏನೂ ವಿಷಯವೇ ತಿಳಿದಿಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಿದ್ದರು. ಮುಸಿ ಮುಸಿ ನಗುತ್ತಿದ್ದರು. ಸಾಹೇಬರು ಮತ್ತು ಅವರ ಸಿಬ್ಬಂದಿ ಬಸ್ ಹಿಡಿದು ಹಾಸನಕ್ಕೆ ಮರಳಿದರು. ನಂತರದಲ್ಲಿ ಗ್ರಾಮಸ್ಥರ ವಿರುದ್ಧ ಪೋಲಿಸ್ ದೂರು ಸಲ್ಲಿಕೆಯಾಯಿತು. ಅಂದಿನಿಂದ ಸಾಹೇಬರು ಅವರ ಪ್ಯಾಂಟ್ ಬೆಲ್ಟಿಗೆ ಎಲ್ಲರಿಗೂ ಕಾಣುವಂತೆ ರಿವಾಲ್ವರ್ ಸಿಕ್ಕಿಸಿಕೊಂಡ ನಂತರವೇ ಪ್ರವಾಸಕ್ಕೆ ಹೋಗುತ್ತಿದ್ದರು!
-ಕ.ವೆಂ.ನಾಗರಾಜ್.
(ಕಾಲಘಟ್ಟ: 1974-75) ... ಮುಂದುವರೆಯುವುದು.

ಸೇವಾ ಪುರಾಣ -4: ಇವನು ಫುಡ್ಇನ್ಸ್ ಪೆಕ್ಟರಾ? -4: ತೊಳಲಾಟ

ತೊಳಲಾಟ
     ಅಂದ ಹಾಗೆ ನನ್ನ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವೇನಾಗಿರಲಿಲ್ಲ. ಕೆಳಮಧ್ಯಮ ವರ್ಗಕ್ಕೆ ಸೇರಿಸಬಹುದಾದ ಕುಟುಂಬ ನಮ್ಮದು. ತಿಂಗಳ ಕೊನೆಯ ವಾರದಲ್ಲಿ ಸಂಬಳ ಬರಲು ಇನ್ನೂ ಎಷ್ಟು ದಿನ ಇದೆ ಎಂದು ಲೆಕ್ಕ ಹಾಕುವ ಪರಿಸ್ಥಿತಿ ಇತ್ತು. ಇಂತಹುದೇ ಒಂದು ದಿನ ಕಾಲೇಜು ರಸ್ತೆಯಲ್ಲಿದ್ದ ಒಂದು ನ್ಯಾಯಬೆಲೆ ಅಂಗಡಿಗೆ ತಪಾಸಣೆ ಮಾಡಲು ಹೋದೆ. ಲೆಕ್ಕ ಪತ್ರಗಳು, ದಾಸ್ತಾನು ಪರಿಶೀಲಿಸಿ ಹೊರಡುವ ಸಮಯದಲ್ಲಿ ನನ್ನ ಸ್ವಭಾವದ ಅರಿವಿದ್ದ ಮಾಲಿಕ "ದಯವಿಟ್ಟು ತಪ್ಪು ತಿಳಿಯಬೇಡಿ, ಸ್ವಾಮಿ. ಇದು ಲಂಚ ಅಲ್ಲ. ಮನೆಗೆ ಹಣ್ಣು ತೆಗೆದುಕೊಂಡು ಹೋಗಿ ಸ್ವಾಮಿ" ಎಂದು ನನ್ನ ಜೇಬಿಗೆ ಬೇಡ ಎಂದರೂ 50 ರೂ. ನೋಟನ್ನು ಹಾಕಿದ. ನನಗೆ ಆಗ ಹಣದ ಅವಶ್ಯಕತೆ ಇತ್ತು. ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿತ್ತು. ಹಾಗಾಗಿ ಸುಮ್ಮನೆ ಹೊರಬಂದೆ. ಜೇಬಿನಲ್ಲಿ ಹಣವಿದೆ. ಉಪಯೋಗಕ್ಕೆ ಆಯಿತು ಎಂದುಕೊಂಡೆ. ಆದರೆ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಸರಿಯಾಗಿ ಊಟ ಸೇರಲಿಲ್ಲ. ರಾತ್ರಿ ನಿದ್ದೆ ಬರಲಿಲ್ಲ. ಹಣವನ್ನು ಅಂಗಡಿ ಮಾಲಿಕನಿಗೆ ವಾಪಸು ಕೊಡುವುದು ಒಳ್ಳೆಯದೆಂದು ನಿರ್ಧಾರಕ್ಕೆ ಬಂದ ನಂತರ ನಿದ್ದೆ ಬಂತು. ಬೆಳಿಗ್ಗೆ ಬೇಗ ಎದ್ದು ಸ್ನಾನ, ತಿಂಡಿ ಮುಗಿಸಿಕೊಂಡು ಹೋಗಿ ನೋಡಿದರೆ ಅಂಗಡಿ ಬಾಗಿಲು ಇನ್ನೂ ತೆರೆದಿರಲಿಲ್ಲ. ಮಾಲಿಕನಿಗೆ ಕಾಯುತ್ತಾ ಅಂಗಡಿಯ ಕಟ್ಟೆ ಮೇಲೆ ಕುಳಿತುಕೊಂಡೆ. ಸ್ವಲ್ಪ ಸಮಯದ ನಂತರ ಬಂದ ಅಂಗಡಿ ಮಾಲಿಕ ನನ್ನನ್ನು ಕಂಡು ಗಲಿಬಿಲಿಗೊಂಡ.ಏನೋ ಗ್ರಹಚಾರ ಕಾದಿದೆ ಎಂದು ಆತ ಅಂದುಕೊಂಡಿದ್ದನೆಂದು ನಂತರ ಆತನೇ ನನಗೆ ಹೇಳಿದ. ಆತನಿಗೆ ನಾನು 50 ರೂ. ಹಿಂತಿರುಗಿಸಿ "ನೀವು ಹಣ ಕೊಟ್ಟಾಗ ನನ್ನ ಮನಸ್ಸು ಚಂಚಲವಾಯಿತು. ದಯವಿಟ್ಟು ಇನ್ನೊಮ್ಮೆ ಹೀಗೆ ಮಾಡಬೇಡಿ" ಎಂದು ಹೇಳಿ ನಿರಾಳ ಮನಸ್ಸಿನಿಂದ ಅಲ್ಲಿಂದ ಹೊರಟೆ. ಅಂಗಡಿಯವನೂ ನಿಟ್ಟುಸಿರು ಬಿಟ್ಟಿದ್ದ!
ಫುಡ್ ಇನ್ಸ್ ಪೆಕ್ಟರ್ ಯಾರು?
     ಆಗ ಹಾಸ್ಟೆಲುಗಳಿಗೆ, ಸಂಸ್ಥೆಗಳಿಗೆ ವಿಶೇಷ ಪಡಿತರ ಪರ್ಮಿಟ್ಟುಗಳನ್ನು ಕೊಡಲಾಗುತ್ತಿತ್ತು. ಸೈಂಟ್ ಫಿಲೋಮಿನಾ ಶಾಲೆಯ ಹಾಸ್ಟೆಲ್ಲಿಗೆ ವಿಶೇಷ ಪರ್ಮಿಟ್ ಕೋರಿ ಬಂದಿದ್ದ ಅರ್ಜಿ ಕುರಿತು ನಾನು ಪರಿಶೀಲಿಸಿ ವರದಿಸಲು ಹೊರಟಿದ್ದ ವೇಳೆಯಲ್ಲಿ ಅಂತಿಮ ವರ್ಷದ ಪಾಲಿಟೆಕ್ನಿಕ್ ನಲ್ಲಿ ಹಾಸನದ ಎಲ್.ವಿ.ಪಾಲಿಟೆಕ್ನಿಕ್ ನಲ್ಲಿ ಓದುತ್ತಿದ್ದ ನನ್ನ ಸಂಬಂಧಿ ಚಿದಂಬರ ದಾರಿಯಲ್ಲಿ ಸಿಕ್ಕು ಜೊತೆಯಲ್ಲಿ ತಾನೂ ಬರುತ್ತೇನೆಂದು ನನ್ನೊಟ್ಟಿಗೆ ಬಂದ. ವಿದ್ಯಾರ್ಥಿಯಾಗಿದ್ದರೂ ಆತ ದಷ್ಟಪುಷ್ಟನಾಗಿದ್ದ. ನಾನು ಆತನ ಮುಂದೆ ಪೀಚು. ನಾನು ಹಾಸ್ಟೆಲ್ ನ ಮುಖ್ಯಸ್ಥರಾಗಿದ್ದ ಪಾದ್ರಿಯನ್ನು ವಿಚಾರಿಸುತ್ತಿದ್ದೆ. ಅವರು ಚಿದಂಬರನನ್ನೇ ಫುಡ್ ಇನ್ಸ್ ಪೆಕ್ಟರ್ ಎಂದು ಭಾವಿಸಿ ಅವನನ್ನು ಕರೆದು ಕುರ್ಚಿಯ ಮೇಲೆ ಕುಳ್ಳಿರಿಸಿದರು. ನನ್ನನ್ನು ಅವನ ಸಹಾಯಕ ಎಂದು (ನನ್ನ ಹತ್ತಿರ ಕಡತಗಳಿದ್ದ ಬ್ಯಾಗ್ ಇದ್ದರೆ ಆತ ಬಿಡುಬೀಸಾಗಿ ಬಂದಿದ್ದರಿಂದ ಇರಬಹುದು) ತಿಳಿದಿದ್ದರು. ನಂತರ ಕುರ್ಚಿಯಿಲ್ಲದೆ ನಿಂತಿದ್ದ ನನಗೂ ಒಂದು ಕುರ್ಚಿ ತರಿಸಿಕೊಟ್ಟರು. ನಾನು ಹಾಜರಾತಿ ಪುಸ್ತಕ, ಹಾಸ್ಟೆಲ್ಲಿನಲ್ಲಿರುವವರ ವಿವರ ಕೇಳುತ್ತಿದ್ದರೆ ಪಾದ್ರಿಗಳು ಚಿದಂಬರನ ಮುಖ ನೋಡಿ ಇಂಗ್ಲಿಷಿನಲ್ಲಿ ಉತ್ತರಿಸುತ್ತಿದ್ದರು. ಅವನು 'ಯಸ್. ಯಸ್' ಎನ್ನುತ್ತಿದ್ದ. ಒಂದು ಪ್ಲೇಟಿನಲ್ಲಿ ಗೋಡಂಬಿ, ದ್ರಾಕ್ಷಿ ತಂದು ಚಹಾದೊಟ್ಟಿಗೆ ಅವನ ಮುಂದೆ ಇಟ್ಟರು. ನನಗೆ ಬರಿ ಚಹಾ. ಅವನು ಗೋಡಂಬಿ ತಿನ್ನುತ್ತಾ 'ನಿನಗೆ ಬೇಕಾ?' ಎಂದು ನನ್ನನ್ನು ಕೇಳಿದಾಗ ಪಾದ್ರಿಗಳು "ನೀವು ತೆಗೆದುಕೊಳ್ಳಿ ಸಾರ್, ಅವರಿಗೂ ಬೇರೆ ಕೊಡುತ್ತಾರೆ" ಎಂದು ಹೇಳಿದರು. ನನ್ನನ್ನು ನೋಡಿ ನಗುತ್ತಾ ಚಿದಂಬರ ಗೋಡಂಬಿ, ದ್ರಾಕ್ಷಿ ಮೆಲ್ಲುತ್ತಿದ್ದ. ವಿಚಾರಣೆ ಮುಗಿಸಿ ಹೊರಟಾಗ ಚಿದಂಬರನಿಗೆ ಪಾದ್ರಿಗಳ ನಮಸ್ಕಾರ ಸಹ ಸಿಕ್ಕಿತು. ಹೊರಗೆ ಬಂದಾಗ "ಇನ್ನು ಮುಂದೆ ಯಾವುದೇ ತಪಾಸಣೆಗೆ ಹೋದಾಗ ನಿನ್ನ ಜೊತೆಗೆ ನಾನೂ ಬರುತ್ತೇನೆ, ಚೆನ್ನಾಗಿರುತ್ತೆ" ಎಂದ! ನಾನು ನಂತರ ಅವನನ್ನು ಜೊತೆಗೆ ಕರೆದೊಯ್ಯುತ್ತಿರಲಿಲ್ಲ!
ಇನ್ಸ್ ಪೆಕ್ಟರ್ ಗಿರಿ ಹೋಯಿತು!
     ಫುಡ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಾ ಒಂದು ವರ್ಷವಾಗಿತ್ತು. ಮೊದಲಿದ್ದ ಫುಡ್ ಅಸಿಸ್ಟೆಂಟರಿಗೆ ವರ್ಗವಾಗಿ ಹೊಸದಾಗಿ ಎಮ್. ಶಿವಯ್ಯ ಎಂಬುವವರು ಅವರ ಸ್ಥಾನಕ್ಕೆ ಬಂದಿದ್ದರು. ಅವರು ಮೂಲತಃ ಅಬಕಾರಿ ಇಲಾಖೆಗೆ ಸೇರಿದ್ದವರಾಗಿದ್ದು ಫುಡ್ ಅಸಿಸ್ಟೆಂಟರಾಗಿ ಹೇಗೆ ನೇಮಿಸಲಾಗಿತ್ತೋ ತಿಳಿಯದು. (ನಿವೃತ್ತಿ ನಂತರ ಅವರು ಮಂಡ್ಯದ ಮಳವಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 500 ಮತಗಳಿಂದ ಸೋತಿದ್ದರು.) ಒಂದು ಸಾಯಂಕಾಲ ಸುಮಾರು ಆರು ಗಂಟೆಯಾಗಿರಬಹುದು. ನಾನು ಮಾಡಬೇಕಾದ ಕೆಲಸ ಬಾಕಿಯಿರಲಿಲ್ಲ. ನನ್ನ ಅಟ್ಲಾಸ್ ಸೈಕಲ್ಲಿನ ಹ್ಯಾಂಡಲಿಗೆ ಕ್ಯಾಶ್ ಬ್ಯಾಗ್ ಸಿಕ್ಕಿಸಿ ಹೊರಟೆ. (ನನ್ನ ಶ್ರೇಣಿಯ ಇತರ ಅಧಿಕಾರಿಗಳು ಮೋಟರ್ ಬೈಕಿನಲ್ಲಿ ಓಡಾಡುತ್ತಿದ್ದರೆ, ನನ್ನ ಹತ್ತಿರ ಇದ್ದುದು ಒಂದು ಅಟ್ಲಾಸ್ ಸೈಕಲ್ ಮತ್ತು ಒಂದು ಕ್ಯಾಶ್ ಬ್ಯಾಗು.ಹೆಸರಿಗೆ ಕ್ಯಾಶ್ ಬ್ಯಾಗು ಆದರೂ ಅದರಲ್ಲಿ ಕಡತಗಳಿರುತ್ತಿದ್ದವು, ಕ್ಯಾಶ್ ಇರುತ್ತಿರಲಿಲ್ಲ.) ಅಜಾನುಬಾಹು ಸಾಹೇಬರು ಛೇಂಬರಿನ ಹೊರಗೆ ಕಾರಿಡಾರಿನಲ್ಲಿ ನಿಂತು ಸಿಗರೇಟು ಸೇದುತ್ತಾ ನಿಂತಿದ್ದರು. ಅವರ ಗಟ್ಟಿಧ್ವನಿ ಮೊಳಗಿತು:
 "ಏಯ್, ನಾಗರಾಜ, ಬಾ ಇಲ್ಲಿ".
 ಸೈಕಲ್ ನಿಲ್ಲಿಸಿ ಹೋದೆ. ಆಗ ನಡೆದ ಸಂಭಾಷಣೆ:
ಸಾಹೇಬರು: ನಾನಿಲ್ಲಿ ದೆವ್ವ ನಿಂತ ಹಾಗೆ ನಿಂತಿದ್ದೀನಿ. ಹೊರಟು ಬಿಟ್ಟೆಯಲ್ಲಾ?
ನಾನು: ಕೆಲಸ ಮುಗಿದಿತ್ತು, ಹೊರಟೆ.
ಸಾಹೇಬರು: ನೀನು ಎಗ್ಸಿಕ್ಯೂಟಿವ್. ನಾನು ಇರುವವರೆಗೂ ನೀನು ಇರಬೇಕು
ನಾನು: ಕ್ಷಮಿಸಿ. ಕೆಲಸ ಇದ್ದರೆ ರಾತ್ರಿಯೆಲ್ಲಾ ಇರುತ್ತೇನೆ. ಇಲ್ಲದಿದ್ದರೆ ಇರುವ ಅಗತ್ಯ ಕಾಣುತ್ತಿಲ್ಲ.
ಸಾಹೇಬರು: ಹಾಗಾದರೆ ನೀನು ಎಗ್ಸಿಕ್ಯೂಟಿವ್ ನೌಕರಿಗೆ ಏಕೆ ಬಂದೆ?
ನಾನು: ಕೆಲಸ ಇಲ್ಲದಿದ್ದರೂ ನೀವು ಇರುವವರೆಗೂ ನಾನು ಇರಬೇಕೆಂದಾದರೆ ನನಗೆ ಎಗ್ಸಿಕ್ಯೂಟಿವ್ ನೌಕರಿಯೇ ಬೇಡ.
ಸಾಹೇಬರು: ಹಾಗೆಂದು ಬರೆದುಕೊಡು.
     ನಾನು ನನ್ನ ಬ್ಯಾಗಿನಿಂದ ಒಂದು ಹಾಳೆ ತೆಗೆದುಕೊಂಡು ಸೈಕಲ್ ಸೀಟನ್ನೇ ಆಧಾರವಾಗಿಟ್ಟುಕೊಂಡು ಅದೇ ರೀತಿ ಬರೆದುಕೊಟ್ಟು ಅವರು ನೋಡ ನೋಡುತ್ತಿದ್ದಂತೆಯೇ ಸೈಕಲ್ ಹತ್ತಿ ಹೊರಟುಬಿಟ್ಟೆ. ನಾನು ಹೋಗುವುದನ್ನೇ ನೋಡುತ್ತಿದ್ದ ಸಾಹೇಬರಿಗೆ ಭಯಂಕರ ಸಿಟ್ಟು ಬಂದಿರಬೇಕು. ಆ ಕೂಡಲೇ ಅವರು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದರಂತೆ. ಮರುದಿನ ಬೆಳಿಗ್ಗೆ ಕಛೇರಿಗೆ ಬಂದಾಗ ನನ್ನನ್ನು ಕಛೇರಿಯ ಗುಮಾಸ್ತನನ್ನಾಗಿಯೂ, ಕಛೇರಿಯ ಗುಮಾಸ್ತರೊಬ್ಬರನ್ನು ಫುಡ್ ಇನ್ಸ್ ಪೆಕ್ಟರನನ್ನಾಗಿಯೂ ಬದಲಾಯಿಸಿ ಮಾಡಿದ ಆದೇಶ ನನಗೆ ತಲುಪಿಸಲಾಯಿತು. ನನಗೆ ಅದರಿಂದ ದುಃಖವೇನೂ ಆಗಲಿಲ್ಲ. ಯಾವುದೇ ಕೆಲಸವಾದರೂ ನಾನು ಮಾಡಲು ಸಿದ್ಧನಿದ್ದೆ.
(ಕಾಲಘಟ್ಟ:1974) ... ಮುಂದುವರೆಯಲಿದೆ.

ಸೇವಾ ಪುರಾಣ -3: ಇವನು ಫುಡ್ಇನ್ಸ್ ಪೆಕ್ಟರಾ? -3: ಕಿಸಿದಿದ್ದೇನು?

ಕಿಸಿದಿದ್ದೇನು?
      ಕೆಲಸಕ್ಕೆ ಸೇರಿ ಮೂರು ತಿಂಗಳಾಗುತ್ತಾ ಬಂದರೂ ನಾನು ಏನು ಕೆಲಸ ಮಾಡಬೇಕೆಂದು ಯಾರೂ ಹೇಳಲೂ ಇಲ್ಲ, ಏನು ಮಾಡುತ್ತಿದ್ದೇನೆಂದು ಕೇಳಲೂ ಇಲ್ಲ, ಯಾರೂ ಕೆಲಸ ಕಲಿಸಿಕೊಡಲೂ ಇಲ್ಲ. ಫುಡ್ ಅಸಿಸ್ಟೆಂಟ್ ಸಾಹೇಬರನ್ನು ಕೇಳಿದರೆ "ನೀನು ಏನೂ ಮಾಡಬೇಡ, ಆಫೀಸಿನಲ್ಲಿ ಕುಳಿತಿರು" ಎಂದು ಅಪ್ಪಣೆ ಮಾಡಿದ್ದರು. ನಾನು ಕಛೇರಿಯಲ್ಲೇ ಕುಳಿತು ಅಗತ್ಯ ವಸ್ತುಗಳ ಕಾಯದೆ, ನಿಯಮಗಳು, ಸುತ್ತೋಲೆಗಳು, ಇತ್ಯಾದಿಗಳನ್ನು ಓದುತ್ತಾ ಹಳೆಯ ಗುಮಾಸ್ತರ ಮರ್ಜಿ ನೋಡಿಕೊಂಡು ಫುಡ್ ಇನ್ಸ್ ಪೆಕ್ಟರನ ಅಧಿಕಾರ ಏನು, ಕೆಲಸ ಏನು, ಇತ್ಯಾದಿ ಮಾಹಿತಿ ಪಡೆದುಕೊಂಡೆ. ಒಂದೆರಡು ತಿಂಗಳು ಸುಮ್ಮನಿದ್ದು ಮೆಲ್ಲನೆ ನನ್ನ ಅಧಿಕಾರ ವ್ಯಾಪ್ತಿಯ ಕೆಲಸ ಪ್ರಾರಂಭಿಸಿದೆ. ನ್ಯಾಯ ಬೆಲೆ ಅಂಗಡಿಗಳು, ಸಹಕಾರ ಸಂಘಗಳ ತಪಾಸಣೆಗಳನ್ನು ಮಾಡತೊಡಗಿದೆ. ಕಂಡುಬಂದ ನ್ಯೂನತೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ವರದಿ ಮಾಡತೊಡಗಿದೆ. ಮೊದಮೊದಲು ನನ್ನ ಕೆಲಸದ ಬಗ್ಗೆ ಆಕ್ಷೇಪಿಸುತ್ತಿದ್ದ ಸಾಹೇಬರು ಆಮೇಲೆ ಸುಮ್ಮನಾಗಿದ್ದರು. ಅದಕ್ಕೆ ಕಾರಣವೆಂದರೆ ನಾನು ವರದಿಸಿದ ನ್ಯೂನತೆಗಳ ಬಗ್ಗೆ ಕಾರಣ ಕೇಳಿ ಅಂಗಡಿ ಮಾಲಿಕರುಗಳಿಗೆ ನೋಟೀಸು ಹೋಗುತ್ತಿತ್ತು. ಅವರುಗಳು ಬಂದು ಸಾಹೇಬರಿಗೆ, ಗುಮಾಸ್ತರಿಗೆ ಕೈ ಬೆಚ್ಚಗೆ ಮಾಡಿದ ನಂತರ ಕಡತಗಳು ಮೂಲೆ ಸೇರುತ್ತಿದ್ದವು. ನನ್ನ ವರದಿಗಳೇ ಅವರ ಹೆಚ್ಚಿನ ಆದಾಯಕ್ಕೆ ಕಾರಣವಾದವು. ಅಂಗಡಿಗಳವರು 'ನೀನೇನು ಕಿಸಿದೆ?' ಎಂಬಂತೆ ನನ್ನನ್ನು ನೋಡುತ್ತಿದ್ದರೂ, ಹಿಂದಿನಿಂದ ಆಡಿಕೊಳ್ಳುತ್ತಿದ್ದರೂ ಒಳಗೊಳಗೇ ನನಗೆ ಹೆದರುತ್ತಿದ್ದರು. ಪ್ರಾಮಾಣಿಕತೆಯೂ ಅಧಿಕಾರಿಯ ಹಾಗೂ ಸಹನೌಕರರ ಅಕ್ರಮ ಸಂಪಾದನೆಗೆ ಮಾರ್ಗವಾಗುತ್ತಿದ್ದುದನ್ನು ಕಂಡು ಬೇಸರವಾಗುತ್ತಿತ್ತು.
ನೀರಿನಲ್ಲಿ ಹೋಮ!
     ಒಂದು ದಿನ ಒಂದು ನ್ಯಾಯಬೆಲೆ ಅಂಗಡಿಯವನು ಎರಡು ಚೀಲ ಸಕ್ಕರೆ ಮತ್ತು ಐದು ಚೀಲ ಅಕ್ಕಿಯನ್ನು ಒಂದು ಹೋಟೆಲಿಗೆ (ಹಾಸನದ ಈ ಹೋಟೆಲ್ ಇರುವ ರಸ್ತೆಯನ್ನು ಹೋಟೆಲ್ ಹೆಸರಿನಿಂದಲೇ ಗುರುತಿಸುತ್ತಾರೆ) ಗಾಡಿಯಲ್ಲಿ ಸಾಗಿಸುತ್ತಿದ್ದಾಗ ನನ್ನ ಕೈಗೆ ಸಿಕ್ಕಿ ಬಿದ್ದ. ಮೇಲಾಧಿಕಾರಿಗೆ ವರದಿ ಮಾಡಿದರೆ ಪ್ರಯೋಜನವಾಗುವುದಿಲ್ಲವೆಂದು ಗೊತ್ತಿದ್ದ ನಾನು ದಾಸ್ತಾನನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನನ್ನ ಅಧಿಕಾರ ಉಪಯೋಗಿಸಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದೆ. ಸ್ಥಳೀಯ ಪತ್ರಿಕೆಯಲ್ಲೂ ವಿಷಯ ಪ್ರಕಟವಾಯಿತು. ಸಾಹೇಬರು ಕೆಂಡಾಮಂಡಲವಾಗಿ ನನ್ನನ್ನು ಛೇಂಬರಿಗೆ ಕರೆಯಿಸಿ ನಿಂದಿಸಿದರು. ಅಗತ್ಯ ವಸ್ತುಗಳ ಕಾಯದೆಯನ್ವಯ ದಾಖಲಾದ ಈ ಪ್ರಕರಣ ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಸುಮಾರು ಆರು ತಿಂಗಳ ಕಾಲ ನಡೆಯಿತು. ಅಂತ್ಯದಲ್ಲಿ ಅಪರಾಧ ಸಾಬೀತಾಗಿ ಆರೋಪಿಗೆ 5000 ರೂ. ದಂಡ ವಿಧಿಸಲಾಯಿತು. ಆತನ ನ್ಯಾಯ ಬೆಲೆ ಅಂಗಡಿ ಪರವಾನಗಿ ಸಹ ರದ್ದಾಯಿತು. ಆದರೆ, ಒಂದೇ ವಾರದಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ ಪರವಾನಗಿ ನೀಡಲಾಯಿತು. ಹೊಸ ಅಂಗಡಿಯ ಮಾಲಿಕ ಹಳೆಯ ಅಂಗಡಿ ಮಾಲಿಕನ ತಮ್ಮನೇ ಆಗಿದ್ದ!
ಕೆಲಸ ಮಾಡದಿರಲೂ ಲಂಚ!
     ಒಂದು ದಿನ ಬೆಳ್ಳಂಬೆಳಿಗ್ಗೆ ನ್ಯಾಯ ಬೆಲೆ ಅಂಗಡಿ ಮಾಲಿಕರುಗಳ ಸಂಘದ ಅಧ್ಯಕ್ಷ ನನ್ನ ಮನೆಗೆ ಬಂದು "ಸ್ವಾಮಿ, ನಾವು ಹೊಟ್ಟೆಪಾಡಿಗೆ ಹೇಗೋ ಜೀವನ ಮಾಡಿಕೊಂಡಿದ್ದೇವೆ. ಸರ್ಕಾರದ ನೀತಿ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಮಗೆ ನಷ್ಟ ಕಟ್ಟಿಟ್ಟ ಬುತ್ತಿ. ದಯವಿಟ್ಟು ನಮಗೆ ಸಹಕಾರ ನೀಡಿ. ನೀವು ಮಾಡಬೇಕಾದ್ದೇನೂ ಇಲ್ಲ. ಸುಮ್ಮನಿದ್ದು ಬಿಡಿ. ಪ್ರತಿ ತಿಂಗಳೂ ನಿಮಗೆ ಹತ್ತು ಸಾವಿರ ರೂ. ಕೊಡುತ್ತೇವೆ. ಹಿಂದಿನ 3-4 ತಿಂಗಳು ನಾವು ನಿಮಗೇನೂ ಕೊಟ್ಟಿಲ್ಲ. ಇದರಲ್ಲಿ ಇಪ್ಪತ್ತೈದು ಸಾವಿರ ರೂ. ಇದೆ. ತೆಗೆದುಕೊಳ್ಳಿ" ಎಂದು ಹಣವಿದ್ದ ಚೀಲ ನನಗೆ ಕೊಡಬಂದ. ನಾನು ಪಡೆಯಲಿಲ್ಲ. ಇಂತಹುದೆಲ್ಲಾ ನನಗಿಷ್ಟವಿಲ್ಲವೆಂದು ಹೇಳಿದೆ. ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡ ಆತ "ದಯವಿಟ್ಟು ಇದನ್ನು ಇಟ್ಟುಕೊಳ್ಳಿ. ಉಳಿದವರೊಂದಿಗೆ ಮಾತನಾಡಿ ಇನ್ನೂ ಹೆಚ್ಚಿಗೆ ಕೊಡಲು ವ್ಯವಸ್ಥೆ ಮಾಡುತ್ತೇನೆ" ಎಂದ. ನಾನು ಸಿಟ್ಟಿಗೆದ್ದು ಗದರಿಸಿದಾಗ ಹಣದ ಚೀಲ ಅಲ್ಲೇ ಬಿಟ್ಟು ಹೊರಡಲನುವಾದ. ಹಣ ತೆಗೆದುಕೊಂಡು ಹೋಗದಿದ್ದರೆ ಹೊರಗೆ ಎಸೆಯುವುದಾಗಿ ಹೇಳಿದಾಗ ನನ್ನನ್ನು ಒಂದು ವಿಚಿತ್ರ ಪ್ರಾಣಿಯೆಂಬಂತೆ ನೋಡಿ ಹಣದ ಚೀಲ ತೆಗೆದುಕೊಂಡು ವಾಪಸು ಹೋದ. ನಂತರದ ಬೆಳವಣಿಗೆಯಲ್ಲಿ ಅಂಗಡಿ ಮಾಲಿಕರುಗಳು ಒಟ್ಟಾಗಿ ಫುಡ್ ಅಸಿಸ್ಟೆಂಟ್ ಸಾಹೇಬರನ್ನು ಭೇಟಿ ಮಾಡಿ ಫುಡ್ ಇನ್ಸ್ ಪೆಕ್ಟರರಿಂದ ತಮ್ಮನ್ನು ರಕ್ಷಿಸಬೇಕೆಂದು ಕೇಳಿಕೊಂಡು 'ಅಭಯ' ಪಡೆದುಕೊಂಡರು. ಅಂದಿನಿಂದ ನಾನೊಬ್ಬ ನಾಲಾಯಕ್, ಬದುಕಲು ಕಲಿಯದವನು ಎಂದೆಲ್ಲಾ ಅನ್ನಿಸಿಕೊಳ್ಳಬೇಕಾಯಿತು. ಕೆಲವರು ಹಳೆಯ ಅನುಭವಿ ನೌಕರರು "ಈಗ ಹಾವನ್ನು ಹೊಡೆದು ಹದ್ದಿಗೆ ಹಾಕುವ ಕಾಲ. ನೀನಾಗೆ ಲಂಚ ತೆಗೆದುಕೊಳ್ಳಬೇಡ. ಅವರಾಗೇ ಕೊಟ್ಟರೆ ಏಕೆ ಬೇಡ ಅನ್ನುತ್ತೀಯ? ಹೀಗೇ ಇದ್ದರೆ ನಿನಗೇ ತೊಂದರೆ" ಎಂದು ಬುದ್ಧಿವಾದ ಹೇಳಿದ್ದರು. ಆದರೆ ಆದರ್ಶದ ಬೆನ್ನು ಹತ್ತಿ ಹೊರಟಿದ್ದ ನನಗೆ ಅವೆಲ್ಲಾ ರುಚಿಸುತ್ತಿರಲಿಲ್ಲ. ಹಣವಿಲ್ಲದಿದ್ದರೂ ನನ್ನ ಮನಸ್ಸಿಗೆ ನೆಮ್ಮದಿಯಿದೆ, ಸರಿಯಾಗಿ ನಡೆಯುತ್ತಿದ್ದೇನೆಂಬ ಸಮಾಧಾನವಿದೆ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ.
ಪರವಾಗಿಲ್ಲ, ರಸೀದಿ ಬೇಡ!
     ಲಂಚ ಕೊಡಲು ಬಂದವರನ್ನು ಕಂಡರೆ ನನಗೆ ಕಿಡಿಕಿಡಿಯಾಗುತ್ತಿತ್ತು. ಬೇಡವೆಂದು ಹೇಳಿದರೂ ಬಲವಂತವಾಗಿ ಕೊಟ್ಟ ಒಂದೆರಡು ಪ್ರಕರಣಗಳಲ್ಲಿ ನೋಟುಗಳನ್ನು ಹರಿದು ಹಾಕಿದ್ದೆ. ನಂತರ ನನ್ನ ತಪ್ಪಿನ ಅರಿವಾಗಿ ಹಾಗೆ ಮಾಡುತ್ತಿರಲಿಲ್ಲ. ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದ ಸಂಘ-ಸಂಸ್ಥೆಗಳ ವಿವರಗಳನ್ನು ನನ್ನಲ್ಲಿ ಇಟ್ಟುಕೊಂಡಿದ್ದು ಲಂಚ ಕೊಡಲು ಬಂದವರಿಗೆ ಲಂಚದ ಬದಲು ಅಂತಹ ಸಂಘ-ಸಂಸ್ಥೆಗಳಿಗೆ ದಾನ ಮಾಡಲು ಸೂಚಿಸುತ್ತಿದ್ದೆ. ರಾಷ್ತ್ರೋತ್ಥಾನ ಪರಿಷತ್ ನವರು ಮಹಾಪುರುಷರ, ಸಾಧು-ಸಂತರ ಜೀವನ ಚರಿತ್ರೆಗಳನ್ನು ಮಕ್ಕಳ ಸಲುವಾಗಿ (ಭಾರತ-ಭಾರತಿ) ಚಿಕ್ಕ ಚಿಕ್ಕ ವರ್ಣರಂಜಿತ ಪುಸ್ತಕಗಳನ್ನು ಕಡಿಮೆ ಬೆಲೆಗ ಸಿದ್ಧಪಡಿಸಿದ್ದರು. ಯಾರಾದರೂ ದಾನ ನೀಡಿದರೆ ಅವರು ನೀಡಿದಷ್ಟೇ ಮೊಬಲಗನ್ನು ಅವರೂ ಸೇರಿಸಿ ಒಟ್ಟು ಮೊಬಲಗಿನ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ಹಂಚುವ ಅವರ 'ಮಕ್ಕಳ ಕೈಗೆ ಸರಸ್ವತಿ' ಯೋಜನೆ ನನಗೆ ಇಷ್ಟವಾಗಿತ್ತು. ಈ ಯೋಜನೆಯ ವಿವರದ ಕರಪತ್ರಗಳನ್ನು ಅಂಗಡಿಗಳವರಿಗೆ ಕೊಟ್ಟು ಅವರು ಇಷ್ಟಪಡುವಷ್ಟು ಹಣವನ್ನು ಕೊಡಬಹುದೆಂದೂ ಸಾಯಂಕಾಲ ಬರುತ್ತೇನೆಂದೂ ಹೇಳಿ ಸಾಯಂಕಾಲ ಹೋದರೆ ನನಗೇ ಆಶ್ಚರ್ಯವಾಗುವಂತೆ ಕೆಲವೇ ಗಂಟೆಯಲ್ಲಿ ಇಪ್ಪತ್ತು ಸಾವಿರ ರೂ. ಸಂಗ್ರಹವಾಗಿತ್ತು. ಹೆಚ್ಚಿನವರು 'ನಮಗೇನೂ ರಸೀದಿ ಬೇಡ ಸಾರ್, ಪರವಾಗಿಲ್ಲ' ಎಂದಿದ್ದರು. ಅವರುಗಳು ನಾನು ಹಣ ಮಾಡಲು ಕಂಡುಕೊಂಡ ಹೊಸ ಮಾರ್ಗವಿದು ಎಂದು ಅಂದುಕೊಂಡಿದ್ದಿರಬಹುದು. ಅದರೆ ಅವರುಗಳ ಹೆಸರಿಗೆ ರಸೀದಿಗಳನ್ನು ತರಿಸಿಕೊಟ್ಟಾಗ ಅವರಿಗೆ ಆಶ್ದರ್ಯ ಆಗಿದ್ದಂತೂ ನಿಜ. ಒಬ್ಬರು ಅಂಗಡಿ ಮಾಲಿಕರಂತೂ (ಅವರ ಅಂಗಡಿ ಗಾಂಧಿಬಜಾರಿನಲ್ಲಿದೆ) "ಬೇರೆ ಫುಡ್ ಇನ್ಸ್ ಪೆಕ್ಟರ್ ಆಗಿದ್ದರೆ ಲಂಚವಾಗೇ ಬಹಳ ಹಣ ಹೋಗುತ್ತಿತ್ತು. ನೀವು ಒಳ್ಳೆಯ ಕಾರಣಕ್ಕಾಗಿ ಅದೂ ಬೇರೆಯವರಿಗಾಗಿ ಕೇಳಿದಿರಿ. ನಾನು ಪ್ರತಿ ತಿಂಗಳೂ ನೀವು ಹೇಳುವ ಕಾರ್ಯಕ್ಕಾಗಿ ಹಣ ಕೊಡುತ್ತೇನೆ" ಎಂದಿದ್ದರು. ನಾನು ಇದೇ ಉದ್ದೇಶಕ್ಕೆ ಹಣವನ್ನು ಅವರೇ ಕಳುಹಿಸಬಹುದೆಂದು ಹೇಳಿದೆ. ಅದರಂತೆ ಅವರು ಪ್ರತಿ ತಿಂಗಳೂ ಹಣ ಕಳಿಸಿ ನನಗೆ ರಸೀದಿ ತೋರಿಸುತ್ತಿದ್ದರು. ನಂತರದಲ್ಲಿ ನಾನು ಯಾವ ಒಳ್ಳೆಯ ಉದ್ದೇಶಕ್ಕೆ ಹಣ ಕೇಳಿದರೂ ಅಂಗಡಿ ಮಾಲಿಕರುಗಳು ಕೊಡುತ್ತಿದ್ದರು. ಅವರುಗಳ ವಿಶ್ವಾಸವನ್ನು ನಾನು ದುರುಪಯೋಗಪಡಿಸಿಕೊಳ್ಳಲಿಲ್ಲವೆಂದು ನನಗೆ ಸಮಾಧಾನವಿದೆ.
-ಕ.ವೆಂ.ನಾಗರಾಜ್.
(ಕಾಲಘಟ್ಟ: 1973-74) .. -ಮುಂದುವರೆಯಲಿದೆ.

ಸೇವಾ ಪುರಾಣ -2: ಇವನು ಫುಡ್ ಇನ್ಸ್ ಪೆಕ್ಟರಾ? -2: ವೇಶ್ಯಾ ಗೃಹಕ್ಕೂ ರೇಶನ್ ಕಾರ್ಡು!

ವೇಶ್ಯಾ ಗೃಹಕ್ಕೂ ರೇಶನ್ ಕಾರ್ಡು!
     ಹಾಸನ ನಗರದಲ್ಲಿ ಹೊಸ ರೇಶನ್ ಕಾರ್ಡುಗಳನ್ನು ವಿತರಿಸಲು ಹಲವು ತಂಡಗಳನ್ನು ರಚಿಸಿ ಆ ಮೂಲಕ ಮಾಡಿಸಲಾಗುತ್ತಿತ್ತು. ನಾನೂ ಒಂದು ತಂಡದ ಮುಖ್ಯಸ್ಥನಾಗಿದ್ದು ನನಗೆ ಸಹಾಯಕನಾಗಿ ನಗರಸಭೆಯ ಒಬ್ಬ ಬಿಲ್ ಕಲೆಕ್ಡರ್ ಇದ್ದ. ಒಂದು ಕಾರ್ಡಿನ ಬೆಲೆ 50 ಪೈಸೆ ಇದ್ದು ಬಿಲ್ ಕಲೆಕ್ಟರ್ 5-10 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದುದನ್ನು ತಡೆದು 50 ಪೈಸೆ ಮಾತ್ರ ಪಡೆಯುವಂತೆ ಮಾಡಿದ್ದಕ್ಕೆ ಅವನಿಗೆ ಅಸಮಾಧಾನವಿತ್ತು. "ಇತರ ತಂಡಗಳವರು ಕೈತುಂಬಾ, ಜೇಬುತುಂಬಾ ಹಣ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಸಾಯಂಕಾಲ ತುಂಡು-ಗುಂಡು ಸಮಾರಾಧನೆ ಮಾಡುತ್ತಿದ್ದಾರೆ. ನಿಮ್ಮ ಜೊತೆ ಬಂದಿರುವ ಈ ಪಾಪಿಗೆ ಒಂದು ಕಪ್ ಕಾಫಿ ಸಹ ಇಲ್ಲವಲ್ಲಾ ಸಾರ್" ಎಂದು ಅಲವತ್ತುಕೊಳ್ಳುತ್ತಿದ್ದ. ವಿಧಿಯಿಲ್ಲದೆ ಕಾರ್ಡುಗಳ ಕಟ್ಟು, ರಿಜಿಸ್ಟರ್ ಅನ್ನು ಹೊತ್ತುಕೊಂಡು ನನ್ನ ಜೊತೆ ಬರುತ್ತಿದ್ದ. ನಾನು ಕಾರ್ಡು ಕೊಡುವ ಮುನ್ನ ಕಾರ್ಡಿನಲ್ಲಿರುವ ವಿವರ ಮತ್ತು ಮನೆಯವರು ಹೇಳುವ ವಿವರ ಸರಿಯಿದೆಯೇ ಎಂದು ಪರಿಶೀಲಿಸಿಯೇ ಕಾರ್ಡು ಕೊಡುತ್ತಿದ್ದೆ. ಒಂದು ಮನೆಯ ಹತ್ತಿರ ಬಂದಾಗ "ನಾನು ಇಲ್ಲೇ ಇರುತ್ತೇನೆ. ನೀವು ಹೋಗಿಬನ್ನಿ" ಎಂದ. ನಾನು ಮನೆಯವರನ್ನು ಉದ್ದೇಶಿಸಿ "ಯಾರಿದ್ದೀರಿ?" ಎಂದಾಗ ಒಬ್ಬ ಧಡೂತಿ ಹೆಂಗಸು ಬಾಗಿಲು ತೆರೆದು ಒಳಕ್ಕೆ ಕರೆದು ನನ್ನನ್ನು ಸೋಫಾದ ಮೇಲೆ ಕುಳಿತುಕೊಳ್ಳಲು ಹೇಳಿದರು. ನಾನು ಕುಳಿತುಕೊಳ್ಳುವ ಹೊತ್ತಿಗೆ ಐದಾರು ಹುಡುಗಿಯರು ತುಂಡುಡುಗೆಯಲ್ಲಿ ಅಲ್ಲಿ ಬಂದು ನಿಂತುದನ್ನು ಕಂಡು ನನಗೆ ಮುಜುಗರವಾಯಿತು. ನಾನು ಮನೆಯ ಯಜಮಾನರ ಹೆಸರು ಕೇಳಿದೆ. "ಯಾಕೆ?" ಎಂಬ ಪ್ರಶ್ನೆಗೆ "ಕಾರ್ಡು ಕೊಡಲು" ಎಂದು ಉತ್ತರಿಸಿದೆ. ಧಡೂತಿ ಹೆಂಗಸು ಎಂಥದೋ ಒಂದು ಹೆಸರು ಹೇಳಿದರು. ನಾನು ಅಲ್ಲಿ ನಿಂತಿದ್ದ ಹುಡುಗಿಯರನ್ನು ಕಂಡು "ಇವರೆಲ್ಲಾ ನಿಮ್ಮ ಮಕ್ಕಳಾ?" ಎಂದು ಕೇಳಿದ್ದಕ್ಕೆ ಆ ಹೆಂಗಸು "ತಮಾಷೆ ಸಾಕು. ಯಾರು ಬೇಕೋ ಆರಿಸಿಕೊಳ್ಳಿ" ಎಂದು ಹೇಳಿದಾಗ ನನಗೆ ಧಸಕ್ಕೆಂದಿತು. ಒಂದು ಹುಡುಗಿ ಕಿಸಕ್ಕೆಂದು ನಕ್ಕಿತು. ಇಂತಹದ್ದೆಲ್ಲಾ ಕಲ್ಪನೆಯಿರದ ಮತ್ತು ನಿರೀಕ್ಷಿಸಿರದ ನಾನು ಯಾಕೋ ವಾತಾವರಣ ಸರಿಯಿಲ್ಲವೆಂದು ಮತ್ತು ಅಲ್ಲಿಂದ ಎದ್ದು ಹೋದರೆ ಸಾಕೆಂದು ಗಡಿಬಿಡಿ ಮತ್ತು ಗಾಬರಿಯಿಂದ ಕಾರ್ಡನ್ನು ಅಲ್ಲೇ ಬಿಟ್ಟು ಧಡೂತಿ ಹೆಂಗಸು 'ಏಯ್' ಎಂದು ಅರಚುತ್ತಿದ್ದಂತೆಯೇ ಹೊರಕ್ಕೆ ಓಡಿ ಬಂದೆ.ಹೊರಗಡೆಯಿದ್ದ ಬಿಲ್ ಕಲೆಕ್ಟರ್ "ಏಕೆ ಸಾರ್, ಇಷ್ಟು ಬೇಗ ಬಂದಿರಿ? ನಾನು ಇಲ್ಲೇ ಕಾಯುತ್ತಿರುತ್ತೇನೆ. ಹೋಗಿ ನಿಧಾನವಾಗಿ ಬನ್ನಿ ಸಾರ್" ಎಂದಾಗ ಮಾತನಾಡುವ ಸ್ಥಿತಿಯಲ್ಲಿಲ್ಲದಿದ್ದ ನಾನು ಅವನನ್ನು ದುರುಗುಟ್ಟಿಕೊಂಡು ನೋಡಿ ಏನೂ ಮಾತನಾಡದೆ ಸೀದಾ ಮನೆಗೆ ಹೋಗಿ ಸುಧಾರಿಸಿಕೊಂಡೆ. ಆದಿನ ಮತ್ತೆ ಕಾರ್ಡು ಕೊಡುವ ಕೆಲಸ ಮಾಡಲಿಲ್ಲ.
ಕುರುಡು ಕಾಂಚಾಣ ಕುಣಿಯುತಲಿತ್ತಾ; ಕಾಲಿಗೆ ಬಿದ್ದವರ ತುಳಿಯುತಲಿತ್ತಾ!
     ಲಂಚದ ಬಗ್ಗೆ ಲಂಚಕೋರರ ಬಗ್ಗೆ ಮಾತನಾಡುವವರೇ ಲಂಚದ ಮೂಲ. ಏಕೆಂದರೆ ಅವರೇ ಲಂಚ ಕೊಡುವವರು. ಲಂಚ ಕೊಡುವವರಿದ್ದರೆ ತೆಗೆದುಕೊಳ್ಳುವವರಿಗೇನು ಕಡಿಮೆ? ಲಂಚ ನೀಡಲು ಇರಬಹುದಾದ ಕಾರಣಗಳೆಂದರೆ: 1.ಕಾನೂನು/ನಿಯಮ ಮೀರಿ ಕೆಲಸ ಮಾಡಿಸಿಕೊಳ್ಳಲು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು, 2.ಕೆಲಸ ಬೇಗ ಮಾಡಿಸಿಕೊಳ್ಳಲು, 3.ಕೆಲಸ ಆಗುವುದೋ ಇಲ್ಲವೋ ಎಂಬ ಆತಂಕ, 4.ಕಾನೂನು ಕಟ್ಟಳೆಗಳನ್ನು ಗೌರವಿಸದಿರುವುದು, ಇತ್ಯಾದಿಯಾಗಿ ಪಟ್ಟಿ ಮಾಡಬಹುದು. ಲಂಚ ಪಡೆಯಲು ಇರಬಹುದಾದ ಕಾರಣಗಳೆಂದರೆ: 1. ಹಣ ಸಂಗ್ರಹದ ದಾಹ, 2.ಮೇಲಾಧಿಕಾರಿಗಳ ಒತ್ತಡ, 3.ಪರಿಸ್ಥಿತಿ /ಸಂದರ್ಭದ ಅನಿವಾರ್ಯತೆ, 4.ಕಾನೂನು/ನಿಯಮಗಳನ್ನು ಗೌರವಿಸದಿರುವುದು, ಇತ್ಯಾದಿ, ಇತ್ಯಾದಿ. ಹಣ ಪಡೆದು ಅಭ್ಯಾಸವಾಗಿರುವವರಿಗೆ ಸುಲಭವಾಗಿ ಹಣ ಮಾಡಿಕೊಳ್ಳುವ ಮಾರ್ಗ ಕಂಡು ಅದೇ ದಾರಿಯಲ್ಲಿ ಮುಂದುವರೆಯುವುದು ವಿಶೇಷವೇನಲ್ಲ. ಏನೇ ಅಂದರೂ ಒಟ್ಟಿನಲ್ಲಿ ಇದು ಒಂದು ವಿಷವರ್ತುಲ. ಇದರಲ್ಲಿ ಕೊಡುವವರು ಮತ್ತು ಪಡೆಯುವವರು ಸಮಾನ ಪಾಪಿಗಳು. ಕೆಲಸ ಆದ ನಂತರ ಪ್ರೀತಿ, ವಿಶ್ವಾಸ, ಗೌರವ, ಇತ್ಯಾದಿ ಹೆಸರಿನಲ್ಲಿ ಕೊಡುವ ಹಣ/ವಸ್ತುಗೂ ಲಂಚಕ್ಕೂ ಇರುವ ನಡುವಣ ವ್ಯತ್ಯಾಸದ ಗೆರೆ ತೆಳುವಾದುದು. ನೌಕರಿಯ ಪ್ರಾರಂಭದ ದಿನಗಳಲ್ಲೇ ನನಗೆ ಭ್ರಷ್ಟಾಚಾರದ ಕಬಂದಬಾಹುವಿನ ಶಕ್ತಿಯ ಪರಿಚಯವಾಗಲಾರಂಭಿಸಿತು. ನನ್ನ ಸಂಸ್ಕಾರ, ಸಹವಾಸಗಳು ಹಾಗೂ ನ್ಯಾಯ, ನೀತಿ, ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂಬ ಧ್ಯೇಯ ನನ್ನನ್ನು ತಳಮಳಕ್ಕೆ ಈಡು ಮಾಡಿದ್ದಂತೂ ಸತ್ಯ. ಲಂಚ ಪಡೆಯದೆ ಕೆಲಸ ಮಾಡುವುದು ನಾನು ಅಂದುಕೊಂಡಿದ್ದಷ್ಟು ಸುಲಭದ್ದಾಗಿರಲಿಲ್ಲ. ಲಂಚ ಪಡೆಯದಿದ್ದರಿಂದಲೇ, ನಿಯಮಾನುಸಾರ ಕೆಲಸ ಮಾಡಿದ್ದರಿಂದಲೇ ನಾನು ಬಹಳಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಯಿತೆಂದರೆ ಆಶ್ಚರ್ಯವೆನಿಸಬಹುದಾದರೂ ಅದು ಸತ್ಯ. ಕುರುಡು ಕಾಂಚಾಣ ಕುಣಿಯುತ್ತದೆ; ಕುಣಿಸುತ್ತದೆ!
ಪರ್ಮಿಟ್ ರಾಜ್ಯ!
     ಆ ಸಮಯದಲ್ಲಿ ಸಿಮೆಂಟಿಗೆ ಅಭಾವವಿದ್ದು ಆಹಾರ ಇಲಾಖೆಯಿಂದ ಪರ್ಮಿಟ್ ಪಡೆದವರಿಗಷ್ಟೇ ಸಿಮೆಂಟು ಸಿಗುತ್ತಿತ್ತು. ಫುಡ್ ಇನ್ಸ್ ಪೆಕ್ಟರ್ ಆಗಿದ್ದ ನಾನು ಅಥವ ಸಿವಿಲ್ ಸಪ್ಲೈ ಇನ್ಸ್ ಪೆಕ್ಟರರು ಕಟ್ಟಡಗಳನ್ನು ಪರಿಶೀಲಿಸಿ ನೀಡುವ ವರದಿ ಆಧರಿಸಿ ಸಿಮೆಂಟ್ ಪರ್ಮಿಟ್ ಕೊಡಲಾಗುತ್ತಿತ್ತು. ಆ ಪರ್ಮಿಟ್ ಗಳನ್ನು ನೀಡುವಾಗಲೂ ಲಂಚದ ಕಾರುಬಾರು ಜೋರಾಗಿ ಆಗುತ್ತಿತ್ತು. ನನ್ನ ಮಿತ್ರನೊಬ್ಬ ನನ್ನನ್ನು ಕುರಿತು "ನೀನೊಬ್ಬ ಸಾಚಾ ಎಂದುಕೊಂಡಿದ್ದೆ. ನನ್ನನ್ನೇ ಕೇಳಿದ್ದರೆ ನಾನೇ ಹಣ ಕೊಡುತ್ತಿರಲಿಲ್ಲವಾ?" ಎಂದಾಗ ನನಗೆ ಅರ್ಥವಾಗಲಿಲ್ಲ. ವಿಚಾರಿಸಿದಾಗ ಕಛೇರಿಯ ಗುಮಾಸ್ತರೊಬ್ಬರು ನನಗೂ ಕೊಡಬೇಕೆಂದು ಹೇಳಿ ತನ್ನ ಪಾಲಿನ ಜೊತೆಗೆ ನನ್ನದೂ ಸೇರಿಸಿ ಹೆಚ್ಚು ಹಣ ಪಡೆದಿದ್ದರು. ಮಿತ್ರನನ್ನೂ ಕರೆದುಕೊಂಡು ಹೋಗಿ ಗುಮಾಸ್ತರಿಗೆ ಛೀಮಾರಿ ಹಾಕಿ ಮಿತ್ರನಿಗೆ ಹಣ ವಾಪಸು ಕೊಡಿಸಿದೆ. ಅಂದಿನಿಂದ ಕಛೇರಿಯವರೆಲ್ಲರೂ ನನ್ನ ಮೇಲೆ ಕೆಂಡ ಕಾರಲು ಪ್ರಾರಂಭಿಸಿದ್ದರು.
     ಕೆಲಕಾಲ ಪೆಟ್ರೋಲು, ಡೀಸೆಲುಗಳಿಗೂ ಕೊರತೆಯಾಗಿ ಪರ್ಮಿಟ್ ಮೂಲಕ ವಿತರಣೆಯಾಗುತ್ತಿತ್ತು. ಆಗಿನ ಜಿಲ್ಲಾಧಿಕಾರಿಯವರು ಅವರ ಛೇಂಬರಿನ ಮುಂದೆ ಒಂದು ಕುರ್ಚಿ, ಟೇಬಲ್ಲು ಹಾಕಿಸಿ ಪರ್ಮಿಟ್ ಬರೆಯಲು ನನ್ನನ್ನು ಕೂರಿಸಿದ್ದರು. ಅರ್ಜಿಯ ಮೇಲೆ ಆದೇಶಿಸುವಾಗ ಜಿಲ್ಲಾಧಿಕಾರಿಯವರೇ ಸಣ್ನಪುಟ್ಟ ಮೊತ್ತದ ಹಣ ಪಡೆಯುತ್ತಿದ್ದುದು ಜನರ ಮಾತಿನಿಂದ ನನಗೆ ಗೊತ್ತಾಗುತ್ತಿದ್ದು ನನಗೆ ಅವರ ಮೇಲೆ ಒಂದು ರೀತಿಯ ತಿರಸ್ಕಾರ ಭಾವ ಮೂಡಿತ್ತು. ನನ್ನನ್ನು ಪರ್ಮಿಟ್ ಬರೆಯಲು ಕೂರಿಸಿದ್ದು 'ನಾನು ಲಂಚ ಪಡೆಯುವುದಿಲ್ಲ, ಹಾಗಾಗಿ ಲಂಚದ ಪಾಲುದಾರನಾಗುವುದಿಲ್ಲ' ಎಂಬ ಕಾರಣಕ್ಕಾಗಿ ಆಗಿತ್ತು. ಪರ್ಮಿಟ್ ಪಡೆದವರು ಐದು/ಹತ್ತು ರೂ. ಗಳನ್ನು ಕೊಡಬಂದಾಗ ನಾನು ಬೇಡವೆನ್ನುತ್ತಿದ್ದೆ. ಕೆಲವರು ನನ್ನನ್ನು ಅನುಕಂಪದಿಂದ ನೋಡಿ ಹೋಗುತ್ತಿದ್ದರೆ, ಕೆಲವರು 'ಯಾರಿಗೂ ಹೇಳುವುದಿಲ್ಲ, ಹೆದರಬೇಡ' ಎಂದು ಹೇಳುತ್ತಿದ್ದರು. ಬೆರಳೆಣಿಕೆಯಷ್ಟು ಜನ ಮಾತ್ರ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
(ಕಾಲಘಟ್ಟ: 1973) ....ಮುಂದುವರೆಯುವುದು.

ಸೇವಾ ಪುರಾಣ -1: ಇವನು ಫುಡ್ ಇನ್ಸ್ ಪೆಕ್ಟರಾ? -1

     ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ರಾಜ್ಯ ಸರ್ಕಾರದ ಪ್ರಥಮ ದರ್ಜೆ ಗುಮಾಸ್ತರ ಹುದ್ದೆಗೆ ನಡೆದ ಕೆ.ಪಿ.ಎಸ್.ಸಿ. ಪರೀಕ್ಷೆ ಕಟ್ಟಿ ಉತ್ತೀರ್ಣನಾಗಿದ್ದು ಕಂದಾಯ ಇಲಾಖೆಗೆ ನಿಯೋಜಿಸಲ್ಪಟ್ಟಿದ್ದೆ. ಹಾಸನ ಜಿಲ್ಲಾಧಿಕಾರಿಯವರ ಕಛೇರಿಯಿಂದ ಪ್ರಥಮ ದರ್ಜೆ ಆಹಾರ ನಿರೀಕ್ಷಕ (ಫುಡ್ ಇನ್ಸ್ ಪೆಕ್ಟರ್)ನಾಗಿ ನೇಮಕಾತಿ ಆದೇಶ ಬಂದಾಗ ಅಂಚೆ ಇಲಾಖೆ ಸೇವೆಗೆ ವಿದಾಯ ಹೇಳಿ 03-05-1973ರಲ್ಲಿ ಹಾಸನ ಜಿಲ್ಲಾಧಿಕಾರಿಯವರ ಮುಂದೆ ಕರ್ತವ್ಯಕ್ಕೆ ಹಾಜರಾದೆ. ಅವರು "ಫುಡ್ ಅಸಿಸ್ಟೆಂಟ್ ಹತ್ತಿರ ರಿಪೋರ್ಟ್ ಮಾಡಿಕೋ ಹೋಗು" ಎಂದರು. ನನ್ನನ್ನು ಅವರು ಏಕವಚನದಲ್ಲಿ ಮಾತನಾಡಿಸಿದಾಗ ಇರುಸುಮುರುಸಾಗಿದ್ದು ಸತ್ಯ. ಫುಡ್ ಅಸಿಸ್ಟೆಂಟರವರಲ್ಲಿ ವರದಿ ಮಾಡಿಕೊಂಡು ಪರಿಚಯಿಸಿಕೊಂಡೆ. ರಂಗು ರಂಗಿನ ಸೇವಾ ಯಾತ್ರೆಗ ಚಾಲನೆ ಸಿಕ್ಕಿತು. ನಾನಾಗ 21 ವರ್ಷದ ತರುಣನಾಗಿದ್ದು ಹೇಳಿಕೊಳ್ಳುವಂತಹ ಮೈಕಟ್ಟಿರದೆ ತೆಳ್ಳಗಿದ್ದರಿಂದ ನನ್ನ ಸ್ನೇಹಿತರು ನನ್ನನ್ನು "ಇವನು ಫುಡ್ ಇನ್ಸ್ ಪೆಕ್ಟರಾ? ಫುಡ್ ಇನ್ಸ್ ಪೆಕ್ಟರಿಗೇ ಫುಡ್ಡಿಲ್ಲ" ಎಂದು ಛೇಡಿಸುತ್ತಿದ್ದರು.
     'ಕಛೇರಿಯಲ್ಲಿದ್ದು ಗುಮಾಸ್ತರ ಬಳಿ ಹೋಗಿ ಕೆಲಸ ಕಲಿತುಕೋ' ಎಂದ ಸಾಹೇಬರ ಮಾತಿನಂತೆ ಕಛೇರಿಯ ಹಳೆಯ, ಹಿರಿಯ ಗುಮಾಸ್ತರ ಬಳಿಗೆ ಹೋದರೆ ಯಾರೂ ಸರಿಯಾಗಿ ಮಾತನಾಡಿಸಲೇ ಇಲ್ಲ. ನಾನು ಅವರ ಟೇಬಲ್ ಹತ್ತಿರ ನಿಂತಿದ್ದರೆ ಅವರು ನನ್ನನ್ನು ಗಮನಿಸದೆ ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡಿರುತ್ತಿದ್ದರು. ಒಂದೆರಡು ದಿನದ ನಂತರ ಒಬ್ಬ ಗುಮಾಸ್ತರಿಗೆ ಕರುಣೆ ಬಂದು ನನಗೆ ಒಂದು ದಪ್ಪ ಪುಸ್ತಕ ನೀಡಿ ಒಂದು ರೂಲರ್ ಮತ್ತು ಪೆನ್ಸಿಲ್ಲನ್ನೂ ಕೊಟ್ಟು ಪುಸ್ತಕ ಪೂರ್ತಿ ರೂಲ್ ಹಾಕು ಎಂದು ಅಪ್ಪಣೆ ಮಾಡಿದರು. ನಾನು ಹಾಗೆಯೇ ಮಾಡಿದೆ. ಇದನ್ನು ನೋಡಿ ಇತರ ಗುಮಾಸ್ತರೂ ನನಗೆ ಇಂತಹ ಕೆಲಸಗಳನ್ನೇ ಹೇಳಲು ಪ್ರಾರಂಭಿಸಿದರು.
ರೇಶನ್ ಕಾರ್ಡು ಕದ್ದರು!
     ನಾನು ಕೆಲಸಕ್ಕೆ ಸೇರಿ ಒಂದು ತಿಂಗಳಾಗಿರಬಹುದು. ಹಾಸನ ನಗರದಲ್ಲಿ ಹೊಸ ರೇಶನ್ ಕಾರ್ಡುಗಳನ್ನು ಕೊಡುವ ಸಲುವಾಗಿ ನಗರ ಸಭೆ ಸಿಬ್ಬಂದಿಯಿಂದ ಬರೆಸಿಟ್ಟಿದ್ದ ಕಾರ್ಡುಗಳನ್ನು ತರಲು ನನ್ನನ್ನು ನಗರಸಭೆಗೆ ಕಳಿಸಿದರು. ನಾನು ಕಾರ್ಡು ಪಡೆದಿದ್ದಕ್ಕೆ ಸ್ವೀಕೃತಿ ನೀಡಿ ಬರೆದಿಟ್ಟಿದ್ದ ಸುಮಾರು 18000 ಕಾರ್ಡುಗಳನ್ನು ತಂದು ಸಾಹೇಬರ ಛೇಂಬರಿನಲ್ಲಿ ಇಟ್ಟೆ. ಕಾರ್ಡುಗಳನ್ನು ವಿತರಿಸಲು ತಂಡಗಳನ್ನು ರಚಿಸಿ ಆದೇಶಿಸಲಾಯಿತು. ಮರುದಿನ ಕಾರ್ಡುಗಳನ್ನು ತಂಡಗಳಿಗೆ ಕೊಡುವಾಗ ನೋಡಿದರೆ ಸುಮಾರು 1200 ಕಾರ್ಡುಗಳು ಕಣ್ಮರೆಯಾಗಿದ್ದವು. ಉಳಿದ ಕಾರ್ಡುಗಳನ್ನು ತಂಡಗಳಿಗೆ ಕೊಡಲಾಯಿತು. ನಾನೂ ಒಂದು ತಂಡಕ್ಕೆ ಮುಖ್ಯಸ್ಥನಾಗಿದ್ದೆ. ಕಾರ್ಡುಗಳು ಕಾಣೆಯಾದುದಕ್ಕೆ ನನ್ನ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬಾರದು ಹಾಗೂ ಅದರ ಬೆಲೆ ರೂ. 600 ಅನ್ನು ನನ್ನಿಂದ ಏಕೆ ವಸೂಲು ಮಾಡಬಾರದೆಂದು ನನಗೆ ನೋಟೀಸು ಜಾರಿ ಮಾಡಿದರು. ನಾನು ಬೆಳಿಗ್ಗೆ 8-00 ರಿಂದ ಸಂಜೆ 5-00ರವರೆಗೆ ನನಗೆ ವಹಿಸಿದ್ದ ಬಡಾವಣೆಯ ಮನೆ ಮನೆಗಳಿಗೆ ನನಗೆ ಸಹಾಯಕನಾಗಿದ್ದ ಒಬ್ಬ ನಗರಸಭೆ ಬಿಲ್ ಕಲೆಕ್ಟರನೊಂದಿಗೆ ಹೋಗಿ ಕಾರ್ಡುಗಳನ್ನು ಕೊಡುತ್ತಿದ್ದು, ಸಾಯಂಕಾಲ ಕಛೇರಿಯಲ್ಲಿ ಕುಳಿತು ಕಳುವಾದ ಕಾರ್ಡುಗಳ ವಿವರ, ಅವು ಯಾವ ಅಂಗಡಿಗಳಿಗೆ ಸೇರಿದ್ದು, ಇತ್ಯಾದಿ ವಿವರ ಕಲೆ ಹಾಕುವ ಕೆಲಸ ಮಾಡುತ್ತಿದ್ದೆ. 3 ದಿನಗಳಲ್ಲಿ ಈ ವಿವರ ಸಿದ್ಧಪಡಿಸಿಕೊಂಡು ಸಾಹೇಬರಿಂದ 'ಈ ಕಾರ್ಡುಗಳಿಗೆ ಪರಿಶೀಲನೆಯಾಗುವವರೆಗೆ ಪಡಿತರ ಕೊಡಬಾರದು' ಎಂದು ಆದೇಶ ಮಾಡಿಸಿದೆ. ಒಂದು ತಿಂಗಳ ನಂತರ ಅಂಗಡಿಗಳಿಗೆ ಹೋಗಿ ನೋಡಿದರೆ ಆ ಕಾರ್ಡುಗಳಿಗೂ ರೇಶನ್ ಕೊಡಲಾಗಿದ್ದುದನ್ನು ಕಂಡು ಆಶ್ಚರ್ಯಪಟ್ಟೆ. ವಿಚಾರಿಸಿದಾಗ ಕಛೇರಿಯಿಂದ ಪರಿಶೀಲನೆಯಾದ ನಂತರವೇ ರೇಶನ್ ಕೊಡಲಾಯಿತೆಂದು ಉತ್ತರ ಸಿಕ್ಕಿ ನನಗೆ ಗಲಿಬಿಲಿಯಾಯಿತು. ಇನ್ನೊಂದು ಅಂಗಡಿಗೆ ಹೋದೆ. ಅಕಾಸ್ಮಾತ್ತಾಗಿ ಅಂಗಡಿಯ ಒಂದು ಮೇಲು ಹಲಗೆಯ ಬದಿಯಲ್ಲಿ ಕಾರ್ಡುಗಳ ಕಟ್ಟು ಒಂದು ನನ್ನ ಕಣ್ಣಿಗೆ ಬಿದ್ದು ತೆಗೆದು ನೋಡಿದರೆ ಅಲ್ಲಿ 70 ಕಾರ್ಡುಗಳು ಇದ್ದು ಎಲ್ಲವೂ ಕಳವಾದ ಕಾರ್ಡುಗಳ ಪೈಕಿಯವೇ ಆಗಿದ್ದವು. ಅದಕ್ಕೆ ಫುಡ್ ದೆಪ್ಯುಟಿ ತಹಸೀಲ್ದಾರರು 'ಪರಿಶೀಲಿಸಿದೆ' ಎಂದು ಬರೆದು ಸಹಿ ಹಾಕಿದ್ದರು. ಅದೇ ಸಮಯಕ್ಕೆ ಒಬ್ಬರು ಹತ್ತು ಕಾರ್ಡುಗಳನ್ನು ರೇಶನ್ ಪಡೆಯಲು ತಂದಿದ್ದು ನೋಡಿದರೆ ಅವೂ ಅಂತಹವೇ ಕಾರ್ಡುಗಳಾಗಿದ್ದವು. ಅಂಗಡಿಯವನು ಅವು ಇನ್ನೊಂದು ಅಂಗಡಿಯವರದೆಂದೂ ಅವರ ಬಳಿ ಇನ್ನೂ 70-80 ಕಾರ್ಡುಗಳು ಇವೆಯೆಂದೂ ಹೇಳಿದ. ನಾನು ತಕ್ಷಣ ಆ ಅಂಗಡಿಗೂ ಹೋಗಿ ಆ ಕಾರ್ಡುಗಳನ್ನೂ ಪಡೆದೆ. ಇನ್ನು ಕೆಲವು ಅಂಗಡಿಗಳಲ್ಲಿ ರೇಶನ್ ಕೊಡುವ ಸಮಯದಲ್ಲಿ ಕಾದಿದ್ದು ಮತ್ತಷ್ಟು ಕಾರ್ಡುಗಳನ್ನು ವಶಕ್ಕೆ ಪಡೆದೆ. ಹೀಗೆ ಕಳುವಾದ 1200 ಕಾರ್ಡುಗಳ ಪೈಕಿ ಸುಮಾರು 500 ಕಾರ್ಡುಗಳು ನನ್ನ ಕೈಗೆ ಸಿಕ್ಕಿದವು. ಆ ಕಾರ್ಡುಗಳಿಗೆ ಹಲವಕ್ಕೆ ಫುಡ್ ಡೆಪ್ಯಟಿ ತಹಸೀಲ್ದಾರ್ 'ಪರಿಶೀಲಿಸಿದೆ' ಎಂದು ಬರೆದು ಸಹಿ ಮಾಡಿದ್ದರೆ ಕೆಲವಕ್ಕೆ ಕಛೇರಿ ರೌಂಡ್ ಸೀಲು ಹಾಕಿ ಪರಿಶೀಲಿಸಿದ ಕುರಿತು ದಾಖಲಿಸಲಾಗಿತ್ತು. ನನಗೆ ಆಗ ತಿಳಿದ ಮಾಹಿತಿ ಆಘಾತಕಾರಿಯಾಗಿತ್ತು. ಕಾರ್ಡುಗಳನ್ನು ಫುಡ್ ಡೆಪ್ಯುಟಿ ತಹಸೀಲ್ದಾರ್ ಮತ್ತು ಒಬ್ಬರು ಬೆರಳಚ್ಚುಗಾರ್ತಿ ಹಣಕ್ಕಾಗಿ ಅಂಗಡಿಗಳವರಿಗೇ ಮಾರಿದ್ದರು! ಡೆಪ್ಯಟಿ ತಹಸೀಲ್ದಾರರು ಒಂದು ಸಂಜೆ ನನ್ನ ಮನೆಗೆ ಬಂದು ನನ್ನ ಕೈಹಿಡಿದು "ನಾಗರಾಜ, ಕೈ ಮುಗಿದು ಕೇಳುತ್ತೇನೆ. ಎಲ್ಲಾ ಕಾರ್ಡುಗಳನ್ನೂ ತರಿಸಿಕೊಡುತ್ತೇನೆ. ವಿಷಯ ಇಲ್ಲಿಗೇ ಮುಗಿಸಿಬಿಡು. ವರದಿ ಕೊಡಬೇಡ" ಎಂದು ಕೇಳಿಕೊಂಡಾಗ ನನಗೆ ಅಸಹ್ಯವೆನಿಸಿತು. ಬರವಣಿಗೆಯಲ್ಲಿ ವರದಿ ಕೊಡದಿದ್ದರೂ ಜಿಲ್ಲಾಧಿಕಾರಿಯವರಿಗೆ ಮೌಖಿಕವಾಗಿ ವಿಷಯ ತಿಳಿಸಿದಾಗ ಅವರಿಗೆ ಏನೂ ಅನ್ನಿಸಲಿಲ್ಲ. ಇದೆಲ್ಲಾ ಸಹಜವೆಂಬಂತೆ "ಹೋಗು, ನಿನ್ನ ಕೆಲಸ ನೋಡಿಕೋ ಹೋಗು" ಎಂದಾಗ ಪೆಚ್ಚಾದೆ. ಭ್ರಷ್ಟಾಚಾರದ ಒಂದು ಸಣ್ಣ ನಮೂನೆಯ ದರ್ಶನವಾಗಿತ್ತು. ಕಾರ್ಡುಗಳನ್ನು ವಿತರಿಸುವಾಗಲೂ ಸರಿಯಾಗಿ ವಿತರಿಸದೆ ಇದ್ದುದು, ಆ ಕಾರ್ಡುಗಳಲ್ಲೂ ಹಲವನ್ನು ಮಾರಿಕೊಂಡಿದ್ದು, ಬೇಕಾಬಿಟ್ಟಿಯಾಗಿ ಹಂಚಿದ್ದು, ಇತ್ಯಾದಿಗಳು ಜನರು ಕಛೇರಿಗೆ ಅಲೆದಾಡುವುದರಲ್ಲಿ, ದೂರಿಕೊಂಡು ಶಾಪ ಹಾಕುವುದರಲ್ಲಿ ಅಂತ್ಯ ಕಾಣುತ್ತಿತ್ತು.
(ಕಾಲಘಟ್ಟ: 1973) .... ಮುಂದುವರೆಯಲಿದೆ

ಅಂಚೆ ಪುರಾಣ -4

ಬಂದಳೋ ಬಂದಳು ಚೆಲುವೆ ಬಂದಳು!
      ಅಂಚೆ ಕಛೇರಿಯ ಏಕತಾನತೆಯ ಕೆಲಸಕಾರ್ಯಗಳಲ್ಲಿ ತೊಡಗಿದ್ದವರು ಪರಸ್ಪರ ಮಾತುಕಥೆಗಳಲ್ಲಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ವೃತ್ತಿ ವೈಷಮ್ಯ, ಅಸೂಯೆ, ಇತ್ಯಾದಿಗಳು ರಾಜ್ಯ ಸರ್ಕಾರದ ಕಛೇರಿಗಳಿಗೆ ಹೋಲಿಸಿದರೆ ಅಂಚೆ ಕಛೇರಿಯಲ್ಲಿ ಕಡಿಮೆಯಿತ್ತೆಂದೇ ಹೇಳಬಹುದು. ಆಗಾಗ ರಸಮಯ ಸನ್ನಿವೇಶಗಳೂ ಬರುತ್ತಿದ್ದವು. ಅಂಚೆ ಕಛೇರಿಯ ಪ್ರಾರಂಭದಲ್ಲೇ ತಂತಿ ಕಛೇರಿ ಇತ್ತು. ಅದರ ಪಕ್ಕದಲ್ಲೇ ನಾನು ಕೆಲಸ ಮಾಡುತ್ತಿದ್ದ ಉಳಿತಾಯ ಶಾಖೆ. ಆಗ ತಂತಿ ಸಂದೇಶಗಳನ್ನು ಮೋರ್ಸ್ ಲಿಪಿಯಲ್ಲಿ ಕಳುಹಿಸಲಾಗುತ್ತಿತ್ತು. ಸಂದೇಶ ಬರುವಾಗ 'ಕಟ್ಟ ಕಡ ಕಟ್ಟ ಕಡ ಕಡ ಕಟ್ಟ" ಇತ್ಯಾದಿ ಶಬ್ದ ಬರುತ್ತಿತ್ತು. ಅದನ್ನು ಡಿಕೋಡ್ ಮಾಡಿ ತಂತಿ ಸಂದೇಶವನ್ನು ನಮೂನೆಯಲ್ಲಿ ಕೈಬರಹದಲ್ಲಿ ಬರೆದು ಅಂಚೆಯ ಆಳಿನ ಮೂಲಕ ಸಂಬಂಧಿಸಿದವರಿಗೆ ತಲುಪಿಸಲಾಗುತ್ತಿತ್ತು. ಟೆಲಿಗ್ರಾಫ್ ಆಪರೇಟರ್ ಇನ್ನೂ ಹುಡುಗನಾಗಿದ್ದು ಕೀಟಲೆ ಸ್ವಭಾವ ಹೋಗಿರಲಿಲ್ಲ. ಅಂಚೆ ಕಛೇರಿಗೆ ಯಾರಾದರೂ ನೋಡಲು ಚೆನ್ನಾಗಿದ್ದ ಹುಡುಗಿ ಯಾವುದಾದರೂ ಕೆಲಸಕ್ಕಾಗಿ ಬಂದಾದ ಅವನು ಟೇಬಲ್ ಮೇಲೆ 'ಕಟ್ಟ-ಕಡ-ಕಟ್ಟ-ಕಟ್ಟ' ಇತ್ಯಾದಿ ಶಬ್ದ ಮಾಡುತ್ತಿದ್ದ. 'Beauty is coming'' ಎಂದು ಅದರ ಅರ್ಥವಂತೆ. ಇದು ಗೊತ್ತಿದ್ದ ಕಛೇರಿಯವರು ತಾವು ಮಾಡುತ್ತಿದ್ದ ಕೆಲಸ ಬಿಟ್ಟು ಬಂದವರನ್ನು ನೋಡುತ್ತಿದ್ದರು. ಇವನು ಕುಟ್ಟುವುದು, ಉಳಿದವರು ತಲೆ ಎತ್ತಿ ಗಮನಿಸುವುದನ್ನು ನೋಡಲು ತಮಾಷೆಯಾಗಿತ್ತು. ಹೀಗೆಯೇ ಒಮ್ಮೆ ಒಬ್ಬರು ಬಂದಾಗ ಅವನು ಯಥಾ ಪ್ರಕಾರ ಕಡಕಟ್ಟಿಸಿ ಸಂದೇಶ ನೀಡಿದ. ಇತರರು ನೋಡ ನೋಡುತ್ತಿದ್ದಂತೆಯೇ ಬಂದಿದ್ದ ಹುಡುಗಿ ಸಹ ಸೀದಾ ಒಳಗೆ ಬಂದು ಟೆಲಿಗ್ರಾಫ್ ಆಪರೇಟರನ ಟೇಬಲ್ ಮೇಲೆ ತಾನೂ ಕಡ ಕಟ್ಟ ಕಟ್ಟ ಕುಟ್ಟಿ ಹೆಡ್ ಪೋಸ್ಟ್ ಮಾಸ್ಟರರೊಂದಿಗೆ ಮಾತನಾಡಲು ಹೋದಳು. ನಂತರ ತಿಳಿದ ವಿಷಯವೆಂದರೆ ಆಕೆಯೂ ಟೆಲಿಗ್ರಾಫ್ ಆಪರೇಟರ್ ಆಗಿದ್ದಳು. ಹೆಡ್ ಪೋಸ್ಟ್ ಮಾಸ್ಟರರ ಸಂಬಂಧಿಯಾಗಿದ್ದು ಮಾತನಾಡಿಸಿಕೊಂಡು ಹೋಗಲು ಬಂದಿದ್ದಳಂತೆ. ಅವಳು ನೀಡಿದ್ದ ಸಂದೇಶ 'Thanks for the compliments' ಎಂದು ಆಗಿತ್ತಂತೆ. ಹೆಡ್ ಪೋಸ್ಟ್ ಮಾಸ್ಟರರೊಂದಿಗೆ ಆಕೆ ಈ ಸಂದೇಶ ವಿನಿಮಯಗಳ ವಿಷಯದಲ್ಲಿ ಯಾವುದೇ ಮಾತನ್ನಾಡಿರಲಿಲ್ಲ. ಆದರೂ ಅಂದಿನಿಂದ ಆಪರೇಟರ್ ಮಿತ್ರನ ಕಡಕಟ್ಟುವಿಕೆ ಸಂದೇಶ ನಿಂತುಹೋಯಿತು.
ಅಂಚೆ ಸೇವೆಗೆ ವಿದಾಯ
     ಅಂಚೆ ಕಛೇರಿಯಲ್ಲಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿ ನಂತರ ಕೆ.ಪಿ.ಎಸ್.ಸಿ.ಯಿಂದ ಆಯ್ಕೆಗೊಂಡಿದ್ದ ಕಂದಾಯ ಇಲಾಖೆಯ ಕೆಲಸಕ್ಕೆ ಸೇರಿದೆ. ಅಂಚೆ ಕಛೇರಿಯ ನೌಕರರೆಲ್ಲರೂ 'ಮೊದಲು ಅಂಚೆ ಕಛೇರಿ ಬಿಟ್ಟು ಹೋಗು. ಇಲ್ಲಿ ಕತ್ತೆ ಕೆಲಸ, ಸಂಬಳ ಕಡಿಮೆ. ಅಲ್ಲಿ ನಿನಗೆ ಮುಂದುವರೆಯಲು ಅವಕಾಶಗಳಿವೆ' ಎಂದು ಹೇಳುತ್ತಿದ್ದರು. ನನಗೆ ಗೊತ್ತಿದ್ದ ರಾಜ್ಯ ಸರ್ಕಾರಿ ನೌಕರರೆಲ್ಲಾ ಕೇಂದ್ರ ಸರ್ಕಾರದ ನೌಕರಿ ಬಿಟ್ಟುಬರಬೇಡವೆಂದು ಹೇಳುತ್ತಿದ್ದು ನನಗೆ ಏನು ಮಾಡಬೇಕೆಂದು ತೋಚದೆ ಜ್ವರ ಬಂದಿತ್ತು. 'ಪೋಸ್ಟ್ ಮಾಸ್ಟರಿಗೆ ಬುದ್ಧಿ ಇಲ್ಲ; ಸ್ಟೇಶನ್ ಮಾಸ್ಟರಿಗೆ ನಿದ್ದೆ ಇಲ್ಲ' ಎಂಬ ಗಾದೆ ಮಾತು ಆಗ ಚಾಲ್ತಿಯಲ್ಲಿತ್ತು. ಅಂಚೆ ಕಛೇರಿಯ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ನನ್ನ ಕೆಲಸ ಖಾಯಂ ಆಯಿತೆಂದು ಸಂದೇಶ ಬಂದ ದಿನವೇ ಅಂಚೆ ಕಛೇರಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬಂದೆ. ಈ ನನ್ನ ನಿರ್ಧಾರಕ್ಕೆ ಪದವೀಧರ ನೌಕರರಿಗೂ ಇತರ ನೌಕರರಿಗೂ ಅಲ್ಲಿ ವ್ಯತ್ಯಾಸವಿರದಿದ್ದುದು ಒಂದು ಕಾರಣವಾಗಿದ್ದರೆ, ಇನ್ನೊಂದು ಕಾರಣ ಹೊರಜಗತ್ತಿಗೆಲ್ಲಾ ಸಂಪರ್ಕ ಕಲ್ಪಿಸುವ ಅಂಚೆ ಕಛೇರಿ ನೌಕರರಿಗೇ ಹೊರಜಗತ್ತಿನ ಸಂಪರ್ಕ ಕಡಿಮೆಯಿತ್ತು. ಅವರು ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇರಬೇಕಿತ್ತು ಆ ಸಮಯದಲ್ಲಿದ್ದ ಹಿರಿಯ ನೌಕರರ ಸ್ಥಿತಿ ಸಹ ನನ್ನನ್ನು ಹೊರಬರಲು ಪ್ರೇರಿಸಿತ್ತು. ಒಬ್ಬರು ಹಿರಿಯ ನೌಕರರಂತೂ ರಸ್ತೆಯಲ್ಲಿ ಓಡಾಡುವಾಗ ತಮ್ಮಷ್ಟಕ್ಕೆ ತಾವೇ ಕೈಯಾಡಿಸಿಕೊಂಡು ಒಬ್ಬರೇ ಮಾತನಾಡಿಕೊಂಡು ಹೋಗುತ್ತಿದ್ದರು. ಯಾರಾದರೂ ಮಾತನಾಡಿಸಿದರೆ ಬೆಚ್ಚಿಬಿದ್ದು ವಾಸ್ತವ ಸ್ಥಿತಿಗೆ ಬರುತ್ತಿದ್ದುದನ್ನು ಕಂಡಿದ್ದ ನನಗೆ ಅವರ ಬಗ್ಗೆ ಮರುಕ ಭಾವನೆ ಬರುತ್ತಿತ್ತು. ಅವರು ನನ್ನನ್ನು ಆತ್ಮೀಯರಂತೆ ಮಾತನಾಡಿಸುತ್ತಿದ್ದುದನ್ನು ನಾನು ಮರೆಯುವುದಿಲ್ಲ. ಅಂಚೆ ಇಲಾಖೆ ಬಿಟ್ಟು ಹೊರಬಂದರೂ ನನಗೆ ಅಲ್ಲಿನ ವಾತಾವರಣ, ಸ್ನೇಹಿತರು ನೆನಪಾಗುತ್ತಿರುತ್ತದೆ. ದಶಕಗಳು ಕಳೆದರೂ ಅಂದಿನ ಸ್ನೇಹಿತರು ಈಗಲೂ ಸ್ನೇಹಿತರಾಗಿ ಉಳಿದಿರುವುದು ಅಂಚೆ ಇಲಾಖೆಯನ್ನು ಗೌರವಿಸುವಂತೆ ಮಾಡಿದೆ. ಅಂಚೆ ಕಛೇರಿಯ ವಾತಾವರಣ ನಾನು ಕೆಲಸ ಮಾಡುತ್ತಿದ್ದ ಅವಧಿಯಲ್ಲಿದ್ದಂತೆ ಈಗಿರಲಾರದು. ನಾನು ಪಡೆದಿದ್ದ ಅಂಚೆ ತರಬೇತಿ ಒಂದು ಅತ್ಯತ್ತಮ ತರಬೇತಿಯಾಗಿದ್ದು ನನ್ನ ಮೇಲೆ ಸತ್ಪ್ರಭಾವ ಬೀರಿದೆ.
(ಕಾಲಘಟ್ಟ; 1972-73)
[ಅಂಚೆ ಪುರಾಣ ಇಲ್ಲಿಗೆ ಮುಗಿಸುತ್ತಿದ್ದು ಇನ್ನು ಮುಂದೆ ನನ್ನ ನೆನಪುಗಳ ಹಂಚಿಕೆ ಸೇವಾಪುರಾಣದ ಮೂಲಕ ಮುಂದುವರೆಯಲಿದೆ.)

ಅಂಚೆ ಪುರಾಣ - 3

ಅಹರ್ನಿಶಿ ಸೇವಾಮಹೇ!
     ಮೈಸೂರಿನಿಂದ ಮೂರು ತಿಂಗಳ ತರಬೇತಿ ಮುಗಿಸಿಕೊಂಡು ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಪೋಸ್ಟ್ ಮಾಸ್ಟರ್ ಶಾನುಭಾಗರು ನನಗೆ ಪಾರ್ಸೆಲ್ ಶಾಖೆಯಲ್ಲಿ ಕೆಲಸ ಮಾಡಲು ಆದೇಶಿಸಿದರು. ಕೆಲಸದ ಅವಧಿ ಬೆಳಿಗ್ಗೆ 6-00ರಿಂದ 10-00 ಮತ್ತು ಮಧ್ಯಾಹ್ನ 2-00 ರಿಂದ 6-00 ಆಗಿತ್ತು. ಅಂಚೆ ಕಛೇರಿಗೆ ಸಮೀಪದ ಉತ್ತರ ಬಡಾವಣೆಯಲ್ಲಿ ಒಂದು ಕೊಠಡಿಯಲ್ಲಿ ಬಾಡಿಗೆಗೆ ವಾಸವಿದ್ದ ನಾನು ಬೆಳಿಗ್ಗೆ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಬೆಳಿಗ್ಗೆ 5-30ಕ್ಕೇ ಮನೆ ಬಿಡಬೇಕಾಗಿತ್ತು. ನನ್ನ ಹತ್ತಿರ ಕೈಗಡಿಯಾರವಿರಲಿಲ್ಲ. ಬೆಳಿಗ್ಗೆ ಎಚ್ಚರವಾದಾಗ ತಡವಾಯಿತೇನೋ ಎಂದು ಗಡಿಬಿಡಿಯಿಂದ ಎದ್ದು ತಣ್ಣೀರಿನಲ್ಲಿ ಸ್ನಾನ ಮುಗಿಸಿಕೊಂಡು ನನಗೆ ಇಷ್ಟವಾಗಿದ್ದ ಇಸ್ತ್ರಿ ಮಾಡಿದ ಹತ್ತಿ ಬಟ್ಟೆಯ ಬಿಳಿಯ ಪೈಜಾಮ ಮತ್ತು ಅರ್ಧ ತೋಳಿನ ಬಿಳಿಯ ಅಂಗಿ ಧರಿಸಿಕೊಂಡು ಲಗುಬಗೆಯಿಂದ ಹೊರಬಿದ್ದೆ. ಅರ್ಧ ದಾರಿಯಲ್ಲಿ ಬೀಟ್ ಪೋಲಿಸಿನವನೊಬ್ಬ ಅಡ್ಡಗಟ್ಡಿ "ಏಯ್, ಎಲ್ಲಿಗೆ ಹೊರಟೆ?" ಎಂದು ಗದರಿಸಿ ಕೇಳಿದ. ನಾನು "ಪೋಸ್ಟಾಫೀಸಿಗೆ" ಎಂದಾಗ ನನ್ನ ಕುತ್ತಿಗೆ ಪಟ್ಟಿ ಹಿಡಿದುಕೊಂಡು "ರಾತ್ರಿ ಒಂದು ಗಂಟೆಯಲ್ಲಿ ಎಂಥ ಪೋಸ್ಟಾಫೀಸು? ನಿಜ ಹೇಳು" ಎಂದಾಗ ನನಗೆ ಭಯವಾಯಿತು. ಅಂಜುತ್ತಲೇ "ಪೋಸ್ಟಾಫೀಸು 24 ಗಂಟೆ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಪೋಸ್ಟು ಎಲ್ಲರಿಗೆ ಸಮಯಕ್ಕೆ ಸರಿಯಾಗಿ ಹೇಗೆ ತಲುಪುತ್ತದೆ?" ಎಂದು ಉತ್ತರಿಸಿದೆ. ನನ್ನ ಸಮಜಾಯಿಷಿ ಆತನಿಗೆ ಸರಿಯಾಗಿ ಕಂಡಿರಬೇಕು. ನಾನು ಜಾಣನೋ, ಅವನು ದಡ್ಡನೋ ಗೊತ್ತಿಲ್ಲ. ನನ್ನನ್ನು ಮೇಲೆ ಕೆಳಗೆ ನೋಡಿದ ಆತನಿಗೆ ನಾನು ಕಳ್ಳನಲ್ಲ ಎಂದು ಕಂಡಿರಬೇಕು, "ಸರಿ, ಹೋಗು" ಎಂದು ಬಿಟ್ಟ. ನಾನು 'ಬದುಕಿದೆಯಾ, ಬಡಜೀವವೇ' ಎಂದುಕೊಂಡು ಹೊರಟೆ. 'ಈ ಮಧ್ಯ ರಾತ್ರಿಯಲ್ಲಿ ಏನು ಮಾಡುವುದಪ್ಪಾ, ಈ ಪೋಲೀಸು ಬೇರೆ ಇಲ್ಲೇ ಇದ್ದಾನೆ. ವಾಪಸು ರೂಮಿಗೆ ಹೋಗುವ ಹಾಗಿಲ್ಲ' ಎಂದುಕೊಂಡು ಮುಂದೆ ಹೋಗಿ ಬಸ್ ನಿಲ್ದಾಣಕ್ಕೆ ಹೋಗಿ ಕಲ್ಲು ಬೆಂಚಿನ ಮೇಲೆ ಬೆಳಗಾಗುವವರೆಗೆ ಕುಳಿತುಕೊಂಡೆ. ಪಕ್ಕದಲ್ಲಿದ್ದವರ ವಾಚು ನೋಡಿಕೊಂಡು ಬೆಳಿಗ್ಗೆ 5-45ಕ್ಕೆ ಅಂಚೆ ಕಛೇರಿಗೆ ಹೋದೆ. ಮೊದಲ ತಿಂಗಳ ಸಂಬಳವಾಗಿ 229 ರೂಪಾಯಿ ಸಿಕ್ಕಿತು. ಅದರಲ್ಲಿ 95 ರೂ. ಕೊಟ್ಟು ಒಂದು ಟೈಮ್ ಸ್ಟಾರ್ ವಾಚು ಕೊಂಡೆ. ನನ್ನ ಖರ್ಚಿಗೆ 34 ರೂ. ಇಟ್ಟುಕೊಂಡು 100 ರೂ. ಅನ್ನು ನನ್ನ ತಂದೆಗೆ ಮನಿಯಾರ್ಡರ್ ಮಾಡಿದೆ.
ಒದಗಿದ್ದ ಗಂಡಾಂತರ
     ಒಂದು ತಿಂಗಳು ಪಾರ್ಸೆಲ್ ಶಾಖೆಯಲ್ಲಿ ನನ್ನ ಕೆಲಸ ನೋಡಿ ಮೆಚ್ಚಿದ ಪೋಸ್ಟ್ ಮಾಸ್ಟರರು ನನ್ನನ್ನು ಉಳಿತಾಯ ಖಾತೆಯಲ್ಲಿ ಕೆಲಸ ಮಾಡಲು ಹಚ್ಚಿದರು. ಉಳಿತಾಯ ಶಾಖೆಯಲ್ಲಿ ಕೆಲಸ ಮಾಡುತ್ತಾ ಒಂದೆರಡು ತಿಂಗಳಾಗಿರಬಹುದು. ಆಗ ಈಗಿನಂತೆ ಜನರು ಹಣ ಜಮಾ ಮಾಡಲು ಚಲನ್ ಬರೆದುಕೊಡಬೇಕಾಗಿರಲಿಲ್ಲ. ಪಾಸ್ ಪುಸ್ತಕದ ಒಳಗೆ ಹಣ ಇಟ್ಟು ಕೊಟ್ಟರೆ ಸಾಕಿತ್ತು. ಅಂಚೆ ಗುಮಾಸ್ತ ಹಣ ಎಣಿಸಿ 'ಡಿಪಾಸಿಟ್ ಸ್ಲಿಪ್' ಎಂದು ಕತ್ತರಿಸಿ ಇಟ್ಟಿದ್ದ ತುಂಡು ಹಾಳೆಯಲ್ಲಿ ಖಾತೆ ವಿವರ ಮತ್ತು ಹಣದ ವಿವರ ಬರೆದುಕೊಂಡು, ಪಾಸ್ ಪುಸ್ತಕದಲ್ಲಿ ಮತ್ತು ಲೆಡ್ಜರ್ ನಲ್ಲಿ ದಾಖಲೆ ಮಾಡಿ ಸಬ್ ಪೋಸ್ಟ್ ಮಾಸ್ಟರರಿಗೆ ಸಹಿಗೆ ಕಳುಹಿಸುತ್ತಿದ್ದು, ಸಬ್ ಪೋಸ್ಟ್ ಮಾಸ್ಟರರು ತಮ್ಮ ಲಾಗ್ ಪುಸ್ತಕದಲ್ಲಿ ವಿವರ ಬರೆದುಕೊಂಡು ಪಾಸ್ ಪುಸ್ತಕಕ್ಕೆ ಸಹಿ ಮಾಡಿ ವಾಪಸು ಕೊಡುತ್ತಿದ್ದರು. ದಿನದ ವ್ಯವಹಾರದ ಸಮಯ ಮುಗಿದ ನಂತರ ಗುಮಾಸ್ತರ ಮತ್ತು ಸಬ್ ಪೋಸ್ಟ್ ಮಾಸ್ಟರರ ದಾಖಲಿತ ವಿವರಗಳು ತಾಳೆಯಾದ ನಂತರ ಹಣವನ್ನು ಲೆಕ್ಕಪತ್ರ ಶಾಖೆಗೆ ಜಮಾ ಮಾಡಬೇಕಾಗಿತ್ತು. ಒಮ್ಮೆ ಒಬ್ಬರು 1000 ರೂ. ಹಣವನ್ನು ಪಾಸ್ ಪುಸ್ತಕದ ಒಳಗೆ ಇಟ್ಟು ನನಗೆ ಕೊಟ್ಟಾಗ ನಾನು ಡಿಪಾಸಿಟ್ ಸ್ಲಿಪ್ ನಲ್ಲಿ 1000 ರೂ. ಎಂದು ಬರೆದುಕೊಂಡರೂ ಪಾಸ್ ಪುಸ್ತಕದಲ್ಲಿ ಮತ್ತು ಲೆಡ್ಜರಿನಲ್ಲಿ 10000 ರೂ. ಎಂದು ಬರೆದು ಸಹಿಗೆ ಕಳಿಸಿದ್ದೆ. ಸಹಿ ಆದ ಮೇಲೆ ಪಾಸ್ ಪುಸ್ತಕ ಖಾತೆದಾರರಿಗೆ ವಾಪಸು ಕೊಟ್ಟೆ. ಮಧ್ಯಾಹ್ನ ಲೆಕ್ಕ ತಾಳೆ ನೋಡಿದರೆ 9000 ರೂ. ಕಡಿಮೆ ಬಂತು. ನಾನು ಕೈತಪ್ಪಿನಿಂದ ಬರೆದಿದ್ದೆಂದು ಹೇಳಿದರೂ ಅದನ್ನು ಒಪ್ಪುವಂತಿರಲಿಲ್ಲ. 'Customer is never wrong' ಎಂಬುದು ಅಂಚೆ ಕಛೇರಿಯ ಧ್ಯೇಯ ವಾಕ್ಯವಾಗಿತ್ತು. ವಿಷಯ ಪೋಸ್ಟ್ ಮಾಸ್ಟರರ ಗಮನಕ್ಕೆ ಹೋಯಿತು. ಅವರು ಎಲ್ಲವನ್ನೂ ಕೇಳಿ "ನಾಗರಾಜ, ನಾನೇನೂ ಮಾಡುವಂತಿಲ್ಲ. ನಿನಗೆ ಅರ್ಧ ಗಂಟೆ ಸಮಯ ಕೊಡುತ್ತೇನೆ. ಅಷ್ಟರ ಒಳಗೆ ಸರಿ ಮಾಡಿ ತೋರಿಸು. ಇಲ್ಲದಿದ್ದರೆ 9000 ರೂ. ಕಟ್ಟು. ಇಲ್ಲದಿದ್ದರೆ ಪೋಲಿಸ್ ದೂರು ಕೊಡುವುದು ಅನಿವಾರ್ಯ" ಎಂದುಬಿಟ್ಟರು. ನನಗೆ ದಿಕ್ಕು ತೋಚಲಿಲ್ಲ. ನನಗೆ ಬರುವ 229 ರೂ. ಸಂಬಳದಲ್ಲಿ 9000 ರೂ. ಕಟ್ಟಲು ಸಾಧ್ಯವೇ? ಕೆಲಸಕ್ಕೆ ಸೇರಿ 3-4 ತಿಂಗಳಾಗಿದ್ದು ನನ್ನ ಹತ್ತಿರ ಬೇರೆ ಹಣವೂ ಇರಲಿಲ್ಲ. ಲೆಡ್ಜರಿನಲ್ಲಿದ್ದ ಖಾತದಾರರ ವಿಳಾಸ ನೋಡಿಕೊಂಡು ಆ ಭಾಗದ ಪೋಸ್ಟ್ ಮ್ಯಾನ್ ರನ್ನು ಕರೆದುಕೊಂಡು ಅವರನ್ನು ಹುಡುಕಿಕೊಂಡು ಹೊರಟೆ. ಅದೃಷ್ಟಕ್ಕೆ ಸ್ವಲ್ಪ ದೂರ ಹೋಗಿದ್ದಾಗ ದಾರಿಯಲ್ಲೇ ಅವರು ಸಿಕ್ಕರು. ನಾನು "ಸ್ವಲ್ಪ ನಿಮ್ಮ ಪಾಸ್ ಪುಸ್ತಕ ಕೊಡಿ, ನೋಡಬೇಕು" ಎಂದಾಗ ಪುಣ್ಯಕ್ಕೆ ಅವರ ಅಂಗಿ ಜೇಬಿನಲ್ಲೇ ಇಟ್ಟುಕೊಂಡಿದ್ದ ಪಾಸ್ ಪುಸ್ತಕ ತೆಗೆದುಕೊಟ್ಟರು. ನಾನು ಪಾಸ್ ಪುಸ್ತಕ ಕೈಗೆ ಬಂದ ತಕ್ಷಣ ಅದರಲ್ಲಿ 1000 ರೂ. ಎಂದು ತಿದ್ದುಪಡಿ ಮಾಡಿದೆ ಮತ್ತು ಅವರಿಗೆ ವಿಷಯ ತಿಳಿಸಿದೆ. ಅವರು "ನಾನು ಪಾಸ್ ಪುಸ್ತಕ ತೆಗೆದು ನೋಡಿರಲಿಲ್ಲ. ನೋಡಿದ್ದರೆ ನಿಮಗೆ ಪಾಸ್ ಪುಸ್ತಕ ಕೊಡುತ್ತಲೇ ಇರಲಿಲ್ಲ" ಎಂದರು. ಅವರು ತಮಾಷೆಗೆ ಹೇಳಿದರೋ, ನಿಜಕ್ಕೂ ಹೇಳಿದರೋ ಗೊತ್ತಿಲ್ಲ. ಅವರನ್ನು ಕೋರಿಕೊಂಡು ಅವರನ್ನೂ ಕರೆದುಕೊಂಡು ಪೋಸ್ಟ್ ಮಾಸ್ಟರರ ಬಳಿಗೆ ಬಂದೆ. ಲೆಕ್ಕ ತಾಳೆಯಾಗಿ ನನ್ನಲ್ಲಿದ್ದ ಅಂದಿನ ಹಣವನ್ನು ಲೆಕ್ಕ ಪತ್ರ ಶಾಖೆಗೆ ಜಮಾ ಮಾಡಿದಾಗಲೇ ನಾನು ಸರಾಗವಾಗಿ ಉಸಿರಾಡಿದ್ದು. ಹಿಂದೆಯೂ ಒಮ್ಮೆ ಒಬ್ಬ ಗುಮಾಸ್ತರು ಹೀಗೆಯೇ ಮಾಡಿ 9000 ರೂ. ಕಟ್ಟಿದ್ದರಂತೆ. ಇಲಾಖಾ ವಿಚಾರಣೆಯಾಗಿ ಅವರಿಗೆ ಶಿಕ್ಷೆಯೂ ಆಗಿತ್ತಂತೆ. ಈ ಘಟನೆ ನಂತರ ನಾನು ಹುಷಾರಾಗಿ ಕೆಲಸ ಮಾಡತೊಡಗಿದೆ.
-ಕ.ವೆಂ.ನಾಗರಾಜ್.
(ಕಾಲಘಟ್ಟ: 1972) ..... ಮುಂದುವರೆಯಲಿದೆ