ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜನವರಿ 29, 2018

ಕನ್ನಡ ಉಳಿಯಲಿ, ಬೆಳಗಲಿ! - Kannada remains, glows!


     ಬೆಂಗಳೂರಿನ ಬಡಾವಣೆಯೊಂದರಲ್ಲಿ "ತಮಿಳು ಭಾಷಿಕರು ಹಾಕಿರುವ ತಮಿಳು ಫ್ಲೆಕ್ಸ್ ಅನ್ನು ಕಿತ್ತುಹಾಕಲು ಕನ್ನಡ ಹೋರಾಟಗಾರರೆಲ್ಲಾ ಇಂತಹ ಸ್ಥಳದಲ್ಲಿ ಸೇರಿ" ಎಂಬ ಒಕ್ಕಣೆ ಫೇಸ್ ಬುಕ್ಕಿನಲ್ಲಿ ಪ್ರಚುರವಾಗಿತ್ತು. ಸನ್ನಿಲಿಯೋನ್ ಕಾರ್ಯಕ್ರಮ ನಡೆಸಲು ಅವಕಾಶ ಕೊಡುವುದಕ್ಕೆ 30 ಲಕ್ಷ ರೂ. ಕೇಳಿದ್ದ ಕನ್ನಡಪರ ಸಂಘಟನೆಯೊಂದರ ಪದಾಧಿಕಾರಿಯ ವಿಚಾರ ಹೆಚ್ಚು ಪ್ರಚಾರ ಮತ್ತು ಟೀಕೆಗೆ ಒಳಗಾಗಿದ್ದ ಸಂದರ್ಭದಲ್ಲೇ ಈ ಒಕ್ಕಣೆ ಪ್ರಕಟಗೊಂಡಿದ್ದು, ಬಹುಷಃ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಇದ್ದಿರಬೇಕು. ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ಖಂಡಿಸಿದ್ದ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣವೂ ಆಯಿತು. ಗೋವಾದ ಮಂತ್ರಿಯೊಬ್ಬರು ಕನ್ನಡಿಗರನ್ನು ತುಚ್ಚವಾಗಿ ಹೀಯಾಳಿಸಿದ್ದರು. ಹಿಂದಿ ಫಲಕಗಳ ವಿರುದ್ಧ ಆಗಾಗ್ಗೆ ಸಮೂಹ ಸನ್ನಿಯ ವಾತಾವರಣ ಮೂಡಿ ಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ರಮವೂ ಆಗುತ್ತಿರುತ್ತದೆ. ಹಿಂದೊಮ್ಮೆ ಮುಂಬಯಿಯಲ್ಲಿ ಕನ್ನಡಿಗರನ್ನು ಅಲ್ಲಿಂದ ಹೊರಹಾಕುವ ಚಳುವಳಿ ನಡೆದು ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಕಾವೇರಿ ವಿವಾದ ಭುಗಿಲೆದ್ದಾಗಲೆಲ್ಲಾ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಕನ್ನಡದ ಹೆಸರಿನಲ್ಲಿ ಚಂದಾ ವಸೂಲು ಮಾಡುವ ಸಂಘ-ಸಂಸ್ಥೆಗಳಿಗೆ ಕರುನಾಡಿನಲ್ಲಿ ಬರವಿಲ್ಲ. ಹಣಬಲವಿರುವ, ರಾಜಕೀಯ ಕೃಪಾಶ್ರಯಗಳಿರುವ ಅಂತಹ ಗುಂಪುಗಳವರು ಸಾಕಿಕೊಂಡಿರುವ ಗೂಂಡಾಪಡೆಗಳ ಭಯದಿಂದಾಗಿ ಸಾಮಾನ್ಯರು ಅವರ ವಿರುದ್ಧ ಮಾತನಾಡುವುದಿಲ್ಲ. ಆದರೆ ಈ ಎಲ್ಲಾ ಪ್ರಸಂಗಗಳಲ್ಲಿ ಕನ್ನಡ ಭಾಷೆಗೆ ಆದ ಅನುಕೂಲವೆಷ್ಟು ಎಂದು ನೋಡಿದರೆ ಉತ್ತರ ಸೊನ್ನೆಯೇ ಆಗಿದೆ. ಕನ್ನಡ ಸಾಹಿತ್ಯದ, ವ್ಯಾಕರಣದ ಗಂಧ-ಗಾಳಿ ಇಲ್ಲದಿದ್ದವರೂ ಕನ್ನಡದ ಹೋರಾಟಗಾರರಾಗಿದ್ದಾರೆ ಎಂಬುದು ವಿಪರ್ಯಾಸ.
     ಕನ್ನಡ ಭಾಷೆಯ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಅದನ್ನು ಉಳಿಸುವ, ಬೆಳೆಸುವ ಬಗ್ಗೆ ಚಿಂತಿಸಬೇಕು. ಅದನ್ನು ಬಿಟ್ಟು ಬೇರೆ ಭಾಷೆಗಳನ್ನು ದ್ವೇಷಿಸಿದರೆ ಕನ್ನಡಕ್ಕೆ ಆಗುವ ಉಪಕಾರವೇನು? ಇಂತಹ ದ್ವೇಷದಿಂದ ಇತರ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ತೊಂದರೆಯಾಗುವುದೇ ಹೊರತು ಮತ್ತೇನೂ ಆಗದು. ಅಮೆರಿಕಾ, ಬ್ರಿಟನ್, ದುಬಾಯಿ, ಆಸ್ಟ್ರೇಲಿಯ ಮುಂತಾದ ಪರದೇಶಗಳಲ್ಲಿ, ಭಾರತದ ಇತರ ರಾಜ್ಯಗಳಲ್ಲಿ ಕನ್ನಡದ ಅಭಿಮಾನಿಗಳು ಕನ್ನಡದ ಬಗ್ಗೆ ಕಾಳಜಿ ವಹಿಸಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ, ಅಂತಹ ಕಾರ್ಯಕ್ರಮಗಳಲ್ಲಿ ಕನ್ನಡದ ದಿಗ್ಗಜರು ಭಾಗವಹಿಸುವ ಬಗ್ಗೆ ನಮಗೆ ಹೆಮ್ಮೆ ಆಗುತ್ತದೆಯಲ್ಲವೇ? ಅದೇ ರೀತಿ ಇತರ ಭಾಷಿಕರು ಅವರವರ ಭಾಷೆಗಳ ಬಗ್ಗೆ ಹೆಮ್ಮೆ ಹೊಂದಿರುತ್ತಾರೆ. ಈ ಮೂಲ ಅಂಶವನ್ನು ಗಮನದಲ್ಲಿರಿಸಿ ಕನ್ನಡಿಗರು ಕನ್ನಡವನ್ನು ಮೆರೆಸುವ ಬಗ್ಗೆ ಒತ್ತು ಕೊಡಬೇಕಿದೆ. ಕನ್ನಡದ ಬಗ್ಗೆ ಕನ್ನಡದವರೇ ಅಸಡ್ಡೆ ಮಾಡಿ, ಇತರ ಭಾಷಿಕರು ಕನ್ನಡವನ್ನು ಬಳಸಲು ಒತ್ತಾಯಿಸುವುದು ಅರ್ಥಹೀನ. ಕರುನಾಡಿನ ರಾಜಧಾನಿ ಬೆಂಗಳೂರಿನ ಕನ್ನಡದಲ್ಲಿ ಕನ್ನಡವನ್ನು ಹುಡುಕಬೇಕು. ಅಲ್ಲಿ ಕಂಗ್ಲಿಷಿನದೆ ರಾಜ್ಯಭಾರ. ಅಷ್ಟೇ ಅಲ್ಲ, ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಉರ್ದು ಇತ್ಯಾದಿ ಹಲವಾರು ಭಾಷೆಗಳ ಕಲಸು ಮೇಲೋಗರ. ಕನ್ನಡಿಗರು ಸಕಲ ಭಾಷಾಪ್ರವೀಣರು. ಅವರು ತಮಿಳರೊಂದಿಗೆ ತಮಿಳಿನಲ್ಲಿ, ಹಿಂದಿಯವರೊಂದಿಗೆ ಹಿಂದಿಯಲ್ಲಿ, ಮುಸ್ಲಿಮರೊಂದಿಗೆ ಉರ್ದುವಿನಲ್ಲಿ, ತಮ್ಮ ತಮ್ಮಲ್ಲೇ ಆದರೆ ಶೇ. 70ರಷ್ಟು ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾರೆ. ಮಕ್ಕಳೆಲ್ಲರನ್ನೂ ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗೆ ಕಳಿಸುತ್ತಾರೆ, ಮನೆಯಲ್ಲಿಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲೇ ಬರದಿದ್ದರೂ ಮಾತನಾಡುತ್ತಾರೆ. ಕರ್ನಾಟಕ ಸಂಗೀತವನ್ನೂ ಇಂಗ್ಲಿಷ್ ಲಿಪಿಯ ಸಾಹಿತ್ಯದಲ್ಲಿ ಕಲಿಸುವ ಸಂಗೀತ ವಿದ್ವಾಂಸರುಗಳು ಬೆಂಗಳೂರಿನಲ್ಲಿದ್ದಾರೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುತ್ತಾರೆ. ಇನ್ನು ಕನ್ನಡ ಉಳಿಯಬೇಕೆಂದರೆ ಹೇಗೆ?
     ಕನ್ನಡ ನಮಗೆ ಹೇಗೆ ಮಾತೃಭಾಷೆಯೋ, ತಮಿಳರಿಗೆ ತಮಿಳು, ಆಂಧ್ರದವರಿಗೆ ತೆಲುಗು, ಕೇರಳಿಗರಿಗೆ ಮಲಯಾಳಿ, ಮಹಾರಾಷ್ಟ್ರಿಗರಿಗೆ ಮರಾಠಿ, ಉತ್ತರದ ರಾಜ್ಯಗಳವರಿಗೆ ಹಿಂದಿ, ಬಂಗಾಳಿ, ಬಿಹಾರಿ ಇತ್ಯಾದಿಗಳು ಮಾತೃಭಾಷೆಗಳಾಗಿವೆ. ಅವರವರ ಮಾತೃಭಾಷೆಗಳನ್ನು ಗೌರವಿಸುವುದು ಆಯಾ ಭಾಷಿಕರ ಕರ್ತವ್ಯ. ನಮ್ಮ ತಾಯಿ ಬಡವಾಗಿದ್ದಾಳೆ ಎಂದು ಇತರರ ಶ್ರೀಮಂತ ತಾಯಂದಿರನ್ನು ದ್ವೇಷಿಸಿದರೆ ನಮ್ಮ ತಾಯಿಯ ಬಡತನ ಹೋಗುವುದೇ? ಭಾರತದ ಸೋದರ ಭಾಷೆಗಳನ್ನು ನಾವೂ ಗೌರವಿಸುವುದು ಅಗತ್ಯ. ಹಾಗೆಯೇ ನಮ್ಮ ಮಾತೃಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವುದೂ ನಮ್ಮ ಕರ್ತವ್ಯ. ನಮ್ಮ ತಾಯಿಭಾಷೆಯನ್ನು ಶ್ರೀಮಂತಗೊಳಿಸಲು ಏನು ಮಾಡಬೇಕೋ ಅದನ್ನು ಮಾಡದೆ, ಕನ್ನಡ, ಕನ್ನಡ ಎಂದು ಬೀದಿಯಲ್ಲಿ ಬೊಬ್ಬೆ ಹೊಡೆದರೆ ಕನ್ನಡ ಉದ್ಧಾರವಾಗುವುದಿಲ್ಲ. ಕನ್ನಡವನ್ನು ವ್ಯವಹಾರಗಳಲ್ಲಿ ಉಳಿಸಬೇಕು, ಬಳಸಬೇಕು. ಹಾಗಾದಾಗ ಮಾತ್ರ ಕನ್ನಡ ಉಳಿದೀತು. ರಾಜ್ಯ ಸರ್ಕಾರ ಈ ದಿಸೆಯಲ್ಲಿ ವಿಫಲವಾಗಿದೆಯೆಂದರೆ ಕಠಿಣವಾದ ಮಾತಾದರೂ ಸತ್ಯವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳಿಗೆ ಉತ್ತೇಜನ ಏನೇನೂ ಸಾಲದು. ಕನ್ನಡದ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಡುತ್ತಿವೆ. ಖಾಸಗಿ ಶಾಲೆಗಳಲ್ಲಂತೂ ಕನ್ನಡಕ್ಕೆ ಸ್ಥಾನವೇ ಇಲ್ಲ. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಇತ್ಯಾದಿಗಳು ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಾಗಿದ್ದು, ಸರ್ಕಾರದ ಅನುದಾನ ಅವಲಂಬಿಸಿ ಆಡಳಿತದಲ್ಲಿರುವ ರಾಜಕಾರಣಿಗಳ ಹಸ್ತಕ್ಷೇಪಕ್ಕೆ, ಮುಲಾಜಿಗೆ ಒಳಗಾಗಿವೆ. ವರ್ಷಕ್ಕೊಮ್ಮೆ ಸಮ್ಮೇಳನಗಳು, ಕೆಲವು ಔಪಚಾರಿಕ ನಿರ್ಣಯಗಳನ್ನು ಅಂಗೀಕರಿಸಿದರೆ ಅವುಗಳ ಕೆಲಸ ಮುಗಿಯಿತು. ಅವು ಜಾರಿಯಾಗುತ್ತವೆಯೇ ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಲಾಬಿ ಮಾಡುವವರಿಗೆ, ಆಡಳಿತ ಪಕ್ಷದವರನ್ನು ಓಲೈಸುವವರಿಗೆ ಪ್ರಶಸ್ತಿ, ಸನ್ಮಾನಗಳು ಸಿಗುತ್ತವೆ ಎಂಬ ದೊಡ್ಡ ಆಪಾದನೆಯೇ ಇದೆ. ಇನ್ನು ಕನ್ನಡ ಮಾಧ್ಯಮದಲ್ಲಿ ಓದಿದರೆ ಭವಿಷ್ಯವಿಲ್ಲ ಎಂಬ ವಾತಾವರಣಕ್ಕೆ ಪೂರಕವಾಗಿ ಸರ್ಕಾರ ವರ್ತಿಸುತ್ತಿರುವದಕ್ಕೆ ಮುಖ್ಯ ಕಾರಣವೆಂದರೆ ಶಿಕ್ಷಣ ಕ್ಷೇತ್ರ ಬಹುತೇಕ ರಾಜಕಾರಣಿಗಳ ಹಿಡಿತದಲ್ಲಿಯೇ ಇರುವುದು! ಕನ್ನಡ ಮೂಲೆಪಾಲಾಗದೆ ಇನ್ನೇನಾಗುತ್ತದೆ? ರಾಜ್ಯದಲ್ಲಿಯೇ ಕನ್ನಡಕ್ಕೆ ಆದ್ಯತೆ, ಮಹತ್ವ ಕೊಡದವರು ವಿಶ್ವ ಕನ್ನಡ ಸಮ್ಮೇಳನ ಮಾಡುತ್ತಾರೆ.
     ಕನ್ನಡಕ್ಕೆ ನಿಜವಾಗಿಯೂ ಮಹತ್ವ ಸಿಗಬೇಕೆಂದರೆ, ಕನ್ನಡ ಉಳಿಯಬೇಕೆಂಬ ನೈಜ ಕಳಕಳಿ ಇದ್ದರೆ ಕನ್ನಡದಲ್ಲಿ ಶಿಕ್ಷಣ ಪಡೆದವರಿಗೆ ರಾಜ್ಯದಲ್ಲಿ ಪ್ರಥಮ ಆದ್ಯತೆ ನೀಡಬೇಕು, ಕನ್ನಡಿಗರಿಗೇ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕು, ಕನ್ನಡ ಮಾಧ್ಯಮ ಶಾಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು, ಹೊಸ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಿಯಂತ್ರಿಸಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಗುಣಮಟ್ಟ ಕನ್ನಡ ಶಾಲೆಗಳಲ್ಲೂ ಕಾಯ್ದುಕೊಳ್ಳಬೇಕು. ಕನ್ನಡದ ಕಟ್ಟಾಳುಗಳು, ಹೋರಾಟಗಾರರು ತಮ್ಮ ಹೋರಾಟವನ್ನು ಯಾವುದೋ ಸಿನೆಮಾ ಪ್ರದರ್ಶನ, ಫ್ಲೆಕ್ಸ್ ತೆಗೆಸುವುದು, ಯಾರೋ ಏನೋ ಮಾತನಾಡಿದರೆಂದು ಪ್ರತಿಭಟನೆ ಮಾಡುವುದು, ರಾಜಕಾರಣಿಗಳ ಕೈಗೊಂಬೆಗಳಾಗಿ ಅವರ ಮರ್ಜಿಯಂತೆ ಹೋರಾಟಗಳನ್ನು ಮಾಡುವುದು, ಇತ್ಯಾದಿಗಳಲ್ಲಿ ತೊಡಗಿ ತಮ್ಮ ಶ್ರಮವನ್ನು ವ್ಯರ್ಥಗೊಳಿಸುವುದಕ್ಕಿಂತ ಮೇಲೆ ಹೇಳಿದ ಸಂಗತಿಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಗಮನ ಹರಿಸಬೇಕು. ಯಾವುದೇ ಭಾಷೆಯಾದರೂ ಅದರ ಮೂಲ ಉದ್ದೇಶ ಭಾವನೆಗಳನ್ನು ವ್ಯಕ್ತಪಡಿಸುವುದೇ ಆಗಿದೆ. ಭಾಷೆ ವ್ಯವಹಾರಕ್ಕೆ ಉಪಯೋಗವಾಗುವ, ಭಾವನೆಗಳನ್ನು ಹೊರಹೊಮ್ಮಿಸಲು ಅವಕಾಶ ಕೊಡುವ ಸಾಧನ. ಕನ್ನಡಿಗರ ಭಾಷೆ ಕನ್ನಡ. ಅದು ಉಳಿಯಬೇಕು, ಬೆಳೆಯಬೇಕು ಅಂದರೆ ಅದರ ಹೊಣೆ ನಮ್ಮದೇ ಹೊರತು ಇತರರದಲ್ಲ. ನಮಗೆ ಬೇಕಿದ್ದರೆ ಅದು ಉಳಿಯುತ್ತದೆ, ಇಲ್ಲದಿದ್ದರೆ ಅಳಿಯುತ್ತದೆ. ಉಳಿಯಲಿ, ಬೆಳಗಲಿ ಎಂಬುದು ಎಲ್ಲರ ಸದಾಶಯ. ಆ ಆಶಯಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ.
-ಕ.ವೆಂ. ನಾಗರಾಜ್.

ಬುಧವಾರ, ಜನವರಿ 17, 2018

ಬೆಳೆಸಿದಂತೆ ಮಕ್ಕಳು!


     ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಮಗು ಹೋಮ್ ವರ್ಕ್ ಮಾಡುತ್ತಿತ್ತು. 'ಎಫ್‌ಆರ್‌ಇಎನ್‌ಡಿ-ಫ್ರೆಂಡ್' ಎಂದು ಹೇಳಿಕೊಳ್ಳುತ್ತಾ ಬರೆಯುತ್ತಿದ್ದುದನ್ನು ಗಮನಿಸಿದ ತಾಯಿ, ಅದು "ಎಫ್‌ಆರ್‌ಇಎನ್‌ಡಿ ಅಲ್ಲ, ಎಫ್‌ಆರ್‌ಐಇಎನ್‌ಡಿ- ಫ್ರೆಂಡ್" ಎಂದು ತಿದ್ದಿದಳು. ಮಗಳು, "ನಮ್ಮ ಮಿಸ್ ಹೇಳಿಕೊಟ್ಟಿದ್ದೇ ಹೀಗೆ. ಬೇರೆ ಬರೆದರೆ ಮಿಸ್ ತಪ್ಪು ಅಂತ ಇಂಟು ಮಾರ್ಕ್ ಹಾಕ್ತ್ತಾರೆ. ನನ್ನ ಫ್ರೆಂಡ್ ಶಾಂತಿ ಹೀಗೆ ಹೇಳಿದ್ದಕ್ಕೆ ಮಿಸ್ ಅವಳಿಗೆ ಹೊಡೆದರು" ಎಂದುದನ್ನು ಕೇಳಿಸಿಕೊಂಡ ತಂದೆ, "ನಡಿ, ನಾನೂ ಸ್ಕೂಲಿಗೆ ಬರ್ತೀನಿ, ಆ ಮಿಸ್ಸಿಗೆ ದಬಾಯಿಸ್ತೀನಿ" ಎಂದ. ಮಗಳು ಅಳುತ್ತಾ, "ಬೇಡಪ್ಪಾ, ಆಮೇಲೆ ನನಗೆ ಕಡಿಮೆ ಮಾರ್ಕ್ಸ್ ಕೊಡ್ತಾರೆ, ಫೇಲ್ ಮಾಡ್ತಾರೆ. ಎಲ್ಲರ ಎದುರಿಗೆ ನನಗೆ ಬೈತಾರೆ" ಅಂದಳು. ವಾಸ್ತವತೆ ಅರಿತ ತಂದೆ-ತಾಯಿ, "ನೋಡು, ನಾನು ಹೇಳಿಕೊಟ್ಟಿದ್ದೆನಲ್ಲಾ ಅದು ಸರಿ. ಮಿಸ್‌ಗೆ ತೋರಿಸೋದಿಕ್ಕೆ ಹಾಗೆ ಬರಿ, ಆದರೆ ಸರಿಯಾದ ಸ್ಪೆಲಿಂಗ್ ಹೀಗೆ ಅಂತ ತಿಳಿದುಕೊಂಡಿರು" ಎಂದು ಮಧ್ಯದ ದಾರಿಯನ್ನು ಮಗುವಿಗೆ ತೋರಿಸಿದರು. ಮಕ್ಕಳ ಬೆಳವಣಿಗೆ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯವಾಗಿದೆ. ಅದರಲ್ಲಿ ತಾಯಿ, ತಂದೆ ಮತ್ತು ಗುರುಗಳ ಪಾತ್ರ ಮಹತ್ವದ್ದಾಗಿದೆ. ಒಬ್ಬ ವ್ಯಕ್ತಿ ಸುಯೋಗ್ಯ ನಾಗರಿಕನಾಗಬೇಕಾದರೆ, ಅದರಲ್ಲಿ ತಂದೆ, ತಾಯಿ ಮತ್ತು ಗುರುಗಳ ಪಾತ್ರವೇ ನಿರ್ಣಾಯಕ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಕೆಟ್ಟವನೋ ಅಥವ ಒಳ್ಳೆಯವನೋ ಆಗುವುದರಲ್ಲಿ ಈ ಮೂವರ ಪಾತ್ರವೇ ಅಧಿಕವಾಗಿರುತ್ತದೆ. 
     ಮಕ್ಕಳ ಮನಸ್ಸು ಮತ್ತು ಸ್ವಭಾವ ಸೂಕ್ಷ್ಮವಾಗಿರುತ್ತದೆ. ೧೫ ವರ್ಷಗಳಾಗುವವರೆಗೆ ಅವರ ಸ್ವಭಾವಗಳು ಯಾರು ಯಾವ ರೀತಿ ತಿದ್ದುತ್ತಾರೋ ಆ ರೀತಿ ರೂಪಿತವಾಗುತ್ತದೆ. ಅವರಿಗೆ ತಂದೆ-ತಾಯಿಯರೇ ಆದರ್ಶ ಮತ್ತು ಮಾರ್ಗದರ್ಶಿಗಳು. ಅವರನ್ನು ಅನುಸರಿಸಿಯೇ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ತಂದೆ-ತಾಯಿಯರು ಜಾಗೃತರಾಗಿರಬೇಕು, ಮಕ್ಕಳ ಬೇಕು-ಬೇಡಗಳನ್ನು ಅರಿತಿರಬೇಕು, ಸೂಕ್ತ ಮಾರ್ಗದರ್ಶನ ಮಾಡಬೇಕು ಮತ್ತು ಮಕ್ಕಳಿಗೆ ಆದರ್ಶಪ್ರಾಯರಾಗಿ ನಡೆಯಬೇಕು ಅಥವ ಆ ರೀತಿ ಇರುವಂತೆಯಾದರೂ ತೋರಿಸಿಕೊಳ್ಳಬೇಕು. ಮಗುವೊಂದು ಶಾಲೆಯಿಂದ ಬರುವಾಗ ಯಾರದ್ದೋ ಪೆನ್ಸಿಲ್ ಕದ್ದುಕೊಂಡು ಬಂದಿತ್ತು. ಆ ಬಗ್ಗೆ ತಾಯಿ ಆಕ್ಷೇಪಿಸಿದಾಗ ತಂದೆ ಹೇಳಿದ್ದನಂತೆ, "ಮಗೂ, ಕದಿಯಬಾರದು. ನನಗೆ ಹೇಳಿದ್ದರೆ ನಾನೇ ಆಫೀಸಿನಿಂದ ತಂದುಕೊಡುತ್ತಿರಲಿಲ್ಲವಾ?" ಇಂತಹ ವ್ಯಕ್ತಿತ್ವದವರು ಮಕ್ಕಳಿಗೆ ಏನು ಸಂಸ್ಕಾರ ಕಲಿಸಿಯಾರು? ಮಕ್ಕಳು ದಡ್ಡರಾಗುವುದು, ಬುದ್ಧಿವಂತರಾಗುವುದು, ಚುರುಕಾಗುವುದು ಅಥವ ಮದ್ದರಾಗುವುದು ಪೋಷಕರ ಮೇಲೆಯೇ ಅವಲಂಬಿತವಾಗಿದೆ. ಅವರನ್ನು ಗದರಿಸಿ ತಿದ್ದಲು ಸಾಧ್ಯವಿಲ್ಲ. ಸ್ವತಃ ಆ ರೀತಿ ನಡೆದು ತೋರಿಸಿದರೆ ಮಕ್ಕಳು ಸಹಜವಾಗಿ ತಿದ್ದಿಕೊಳ್ಳುತ್ತಾರೆ, ಅನುಸರಿಸುತ್ತಾರೆ. ಒಂದೆರಡು ಉದಾಹರಣೆಗಳನ್ನು ಗಮನಿಸೋಣ.
     ಮನೆಯಲ್ಲಿ ಎಲ್ಲರೂ ಟಿವಿ ನೋಡುತ್ತಾ ಕುಳಿತಿರುತ್ತಾರೆ. ಮಗುವನ್ನು ಮಾತ್ರ, 'ಹೋಗು, ರೂಮಿನಲ್ಲಿ ಬಾಗಿಲು ಹಾಕಿಕೊಂಡು ಓದು, ಹೋಮ್ ವರ್ಕ್ ಮಾಡು' ಎಂದರೆ? ಆ ಸಂದರ್ಭದಲ್ಲಿ ಮಗುವಿನ ಮನಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕೂ ಎಲ್ಲರೊಂದಿಗೆ ಕುಳಿತು ಟಿವಿ ನೋಡುವ ಮನಸ್ಸಾಗುವುದಿಲ್ಲವೇ? ಎಲ್ಲರಿಗೂ ಇರುವುದು ನನಗಿಲ್ಲ ಎಂಬ ಭಾವನೆ ಬರುವುದಿಲ್ಲವೇ? ಓದಲು/ಬರೆಯಲು ಮನಸ್ಸು ಬರುತ್ತದೆಯೇ? ಆಗ ಪೋಷಕರಾದವರು ಸಂಯಮ ವಹಿಸಿ ತಾವೂ ಟಿವಿ ನೋಡಲು ಹೋಗಬಾರದು. ಮಕ್ಕಳೊಡನೆ ಟಿವಿ ನೋಡುವಾಗ ಒಳ್ಳೆಯ ಕಾರ್ಯಕ್ರಮಗಳನ್ನು ಮಾತ್ರ ನೋಡುವುದು ಒಳ್ಳೆಯದು. ಮಕ್ಕಳು ಏನಾದರೂ ಸಿಟ್ಟು ಮಾಡಿಕೊಂಡರೆ ರೇಗುವುದನ್ನು ಬಿಟ್ಟು, ನಾವು ಸಮಾಧಾನದಿಂದ, ಸಹನೆಯಿಂದ ಮಾತನಾಡುತ್ತಿದ್ದೇವೆಯೇ ಎಂದು ಆತ್ಮಶೋಧನೆ ಮಾಡಿಕೊಳ್ಳಬೇಕು. ನಾವು ಸಿಟ್ಟು ಮಾಡಿಕೊಳ್ಳಬಹುದು, ರೇಗಬಹುದು, ಮಕ್ಕಳು ಮಾತ್ರ ಸಿಟ್ಟು ಮಾಡಿಕೊಳ್ಳಬಾರದು ಎಂಬ ನೀತಿ ಸರಿಯಲ್ಲ. ಹೇಳುವುದನ್ನು ಕೇಳಿ ಅಲ್ಲ, ಮಾಡುವುದನ್ನು ನೋಡಿ ಮಕ್ಕಳು ಅನುಸರಿಸುತ್ತಾರೆ.
     'ನಾವೇನೋ ಕಷ್ಟಪಟ್ಟೆವು. ನಮ್ಮ ಮಕ್ಕಳಿಗೆ ಕಷ್ಟವಾಗಬಾರದು' ಎಂದು ಮಕ್ಕಳಿಗೆ ಸಕಲ ಸೌಲಭ್ಯಗಳನ್ನೂ ಒದಗಿಸಿ, ಅತಿ ಹೆಚ್ಚು ಫೀಸು ವಸೂಲು ಮಾಡುವ, ಒಳ್ಳೆಯ ಸೌಕರ್ಯಗಳಿರುವ, ಸುಂದರ ಕಟ್ಟಡದ ಶಾಲೆಗೇ ಸೇರಿಸುತ್ತಾರೆ. ಇದು ತಪ್ಪಲ್ಲ. ಕೇಳಿ ಕೇಳಿದ್ದನ್ನು, ಬೇಕು-ಬೇಕಾದದ್ದನ್ನೆಲ್ಲಾ ಕೊಡಿಸಿಬಿಟ್ಟರೆ ಪೋಷಕರ ಕರ್ತವ್ಯ ಮುಗಿದುಹೋಗುವುದಿಲ್ಲ. ಹೀಗೆ ಮಾಡಿದರೆ, ಕಷ್ಟವನ್ನೇ ಅರಿಯದ ಮಕ್ಕಳು ಮುಂದೆ ಜೀವನದಲ್ಲಿ ಸ್ವಾರ್ಥಿಗಳಾಗುತ್ತಾರೆ, ಸಣ್ಣ-ಪುಟ್ಟ ಕಷ್ಟಗಳಿಗೇ ಅಂಜುತ್ತಾರೆ, ಎದುರಿಸುವ ಧೈರ್ಯ ಬರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿನದನ್ನು ಒದಗಿಸಬಾರದು ಮತ್ತು ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂಬ ಭಾವನೆ ಬರದಂತೆ ನೋಡಿಕೊಳ್ಳಬೇಕು. ಬಡತನದಲ್ಲಿ ಬೆಳೆದ ಮಕ್ಕಳಿಗೆ ತಾಯಿ ಕೈತುತ್ತು ಹಾಕಿ, ಕೆಲವೊಮ್ಮೆ ಆಕೆ ಉಪವಾಸದಿಂದ ಇದ್ದುದು ತಿಳಿದಿರುತ್ತದೆ. ಮುಂದೆ ಪೋಷಕರನ್ನು ಸುಖವಾಗಿ ನೋಡಿಕೊಳ್ಳಬೇಕೆಂಬುದು ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಬಡತನವಿಲ್ಲದೆ ಸುಖವಾಗಿ ಬೆಳೆಯುತ್ತಿರುವ ಮಕ್ಕಳಿಗೂ ಸಹ, ತಮ್ಮ ಸಲುವಾಗಿ ಪೋಷಕರು ಕಷ್ಟ ಪಡುತ್ತಾರೆ, ತಮ್ಮ ಸಲುವಾಗಿ ಸಂಯಮದಿಂದ ವರ್ತಿಸಿ ತಮ್ಮ ಸುಖ-ಸಂತೋಷಗಳನ್ನು ತ್ಯಜಿಸುತ್ತಾರೆ ಎಂಬ ಭಾವನೆ ಬಂದರೆ ಅದೂ ಒಳ್ಳೆಯ ಬೆಳವಣಿಗೆಯೇ.
     ವಿವೇಕಾನಂದ ಬಾಲಕ ನರೇಂದ್ರನಾಗಿದ್ದಾಗಿನ ಘಟನೆ ಇಲ್ಲಿ ಪ್ರಸ್ತುತವೆನಿಸುತ್ತದೆ. ಶಾಲೆಯಲ್ಲಿ ಉಪಾಧ್ಯಾಯರು ಒಮ್ಮೆ ಕೇಳಿದ ಪ್ರಶ್ನೆಗೆ ನರೇಂದ್ರ ಸರಿಯಾದ ಉತ್ತರ ಕೊಡುತ್ತಾನೆ. ಉಪಾಧ್ಯಾಯರು ಆ ಉತ್ತರ ತಪ್ಪು ಎಂದಾಗ ನರೇಂದ್ರ, "ನನ್ನ ಉತ್ತರ ನಿಜಕ್ಕೂ ಸರಿಯಾಗಿದೆ" ಎಂದು ಸಮರ್ಥಿಸಿಕೊಳ್ಳುತ್ತಾನೆ. ಎದುರು ಮಾತನಾಡಿದ್ದಕ್ಕೆ ಮೇಷ್ಟರು ನರೇಂದ್ರನ ಕೈಗೆ ಬಾಸುಂಡೆ ಬರುವಂತೆ ಬಾರಿಸುತ್ತಾರೆ. ಅಳುತ್ತಾ ಬಂದ ಮಗನಿಂದ ತಾಯಿ ಭುವನೇಶ್ವರಿ ವಿಷಯ ತಿಳಿದು ಹೇಳುತ್ತಾಳೆ, "ಮಗೂ, ನೀನು ಸರಿಯಾಗಿಯೇ ಹೇಳಿದ್ದೀಯ. ಮೇಷ್ಟ್ರು ಹೇಳಿದ್ದನ್ನೇ ಸರಿ ಎಂದು ಒಪ್ಪಿಕೊಂಡಿದ್ದರೆ ನಿನಗೆ ಏಟು ಬೀಳುತ್ತಿರಲಿಲ್ಲ. ಆದರೆ ಎಂತಹ ಸಂದರ್ಭದಲ್ಲೂ ನೀನು ಸುಳ್ಳು ಒಪ್ಪಿಕೊಳ್ಳಬೇಡ. ಸುಳ್ಳಿನ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಡ". ಹೀಗೆ ಹೇಳದೆ 'ಇನ್ನು ಮುಂದೆ ಹೀಗೆಲ್ಲಾ ಏಟು ತಿಂದು ಬರಬೇಡ. ಒಪ್ಪಿಕೊಂಡುಬಿಡು' ಎಂದಿದ್ದರೆ, ನರೇಂದ್ರ ವಿವೇಕಾನಂದ ಆಗುತ್ತಲೇ ಇರಲಿಲ್ಲ. ವಿವೇಕಾನಂದರೂ ಮುಂದೆ, 'ಇಂದು ನಾನು ಏನು ಆಗಿದ್ದೇನೋ ಅದಕ್ಕೆ ನನ್ನ ತಾಯಿಯೇ ಕಾರಣ' ಎಂದು ಹೇಳುತ್ತಿದ್ದರು.   
     ಪೋಷಕರು ಮಕ್ಕಳ ಸಲುವಾಗಿ ಎಷ್ಟೇ ಕಷ್ಟ ಬಂದರೂ ತಮ್ಮ ಸಮಯವನ್ನು ಕೊಡಲೇಬೇಕು. ಈಗಂತೂ ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗುತ್ತಾರೆ. ಸಮಯವೇ ಸಾಕಾಗುವುದಿಲ್ಲ ಎಂಬ ನೆಪವೂ ಸೇರಿಕೊಳ್ಳುತ್ತದೆ. ಆದರೂ, ಸಮಯ ಕೊಡಲೇಬೇಕು; ಇಲ್ಲದಿದ್ದರೆ ಕರ್ತವ್ಯಚ್ಯುತಿ ಎಂದು ಹೇಳದೇ ವಿಧಿಯಿಲ್ಲ. ಸಮಯ ಕೊಡುವುದೆಂದರೆ ಮಕ್ಕಳನ್ನು ಕರೆದುಕೊಂಡು ಹೊರಗೆ ಸುತ್ತಾಡುವುದು, ಪಿಕ್‌ನಿಕ್ಕಿಗೆ ಹೋಗುವುದು, ಒಟ್ಟಾಗಿ ಮನರಂಜನೆಗಾಗಿ ಸಮಯ ಕೊಡುವುದು ಮಾತ್ರ ಅಲ್ಲ. ಮಕ್ಕಳು ಹೇಗೆ ಓದುತ್ತಿದ್ದಾರೆ, ಶಾಲೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುವುದರ ಜೊತೆಗೆ ವಾರಕ್ಕೆ ಒಂದೆರಡು ಗಂಟೆಗಳಾದರೂ ಶಾಲೆಯ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದೂ ಮುಖ್ಯವಾಗುತ್ತದೆ. ಇದು ಮಕ್ಕಳ ಮುಂದಿನ ಬೆಳವಣಿಗೆಗೆ, ಬಾಂಧವ್ಯ ವೃದ್ಧಿಗೆ, ಪೋಷಕರು ತಮ್ಮನ್ನು ಎಷ್ಟೊಂದು ಪ್ರೀತಿಸುತ್ತಾರೆ ಎಂಬ ಭಾವನೆ ಬರಲು ಅಗತ್ಯವಾಗಿದೆ. 
     ಲೇಖನ ವಿಸ್ತಾರವಾಗುವ ಕಾರಣದಿಂದ ಉಳಿದುದನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ:
೧. ಮಕ್ಕಳಿಗಾಗಿ ಕಡ್ಡಾಯವಾಗಿ ತಂದೆ-ತಾಯಿ ಇಬ್ಬರೂ ಸಮಯ ಮೀಸಲಿಡಬೇಕು; 
೨. ಮನೆಯಲ್ಲಿ ಮಕ್ಕಳ ಕಲಿಕೆ, ಅಭಿವೃದ್ಧಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು; 
೩. ಮಕ್ಕಳ ಶಾಲೆಯ ಶಿಕ್ಷಕರೊಡನೆ ಸಂಪರ್ಕವಿರಿಸಿಕೊಳ್ಳಬೇಕು; 
೪. ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಕೊಡಬೇಕು ಮತ್ತು ಅವರ ಚಟುವಟಿಕೆಗಳ ಬಗ್ಗೆ ಗಮನವಿರಬೇಕು; 
೫. ಮಕ್ಕಳಿಗೆ ಹೇಗೆ ವಿದ್ಯಾಭ್ಯಾಸ ಮಾಡಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡಬೇಕು; 
೬. ಪ್ರೀತಿ, ವಿಶ್ವಾಸಗಳು ಮತ್ತು ಶಿಸ್ತಿನ ವಿಚಾರದಲ್ಲಿ ಸಮತೋಲನ ಇಟ್ಟುಕೊಳ್ಳಬೇಕು; 
೭. ಮಕ್ಕಳ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದೆ ಬರಲು ಅಗತ್ಯದ ಸಹಕಾರ ಕೊಡಬೇಕು: ಆದರೆ, ಮೂಲ ವಿದ್ಯಾಭ್ಯಾಸದಲ್ಲಿ ಕೊರತೆ ಅಥವ ಹಿಂದುಳಿಯುವಿಕೆ ಆಗದಂತೆ ನೋಡಿಕೊಳ್ಳಬೇಕು. 
೮. ಕೊನೆಯದಾಗಿ, ಮಕ್ಕಳು ಏನಾಗಬೇಕೆಂದು ಬಯಸುತ್ತಾರೋ, ಆ ರೀತಿ ತಂದೆ-ತಾಯಿಗಳೂ ಇರಬೇಕು.
-ಕ.ವೆಂ. ನಾಗರಾಜ್.