ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಜೂನ್ 17, 2017

ಅಪ್ಪ


     ಅಂತರ್ಜಾಲ ತಾಣಗಳಲ್ಲಿ ಇತ್ತೀಚೆಗೆ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ ನೆನಪುಗಳು ಉಮ್ಮಳಿಸಿ ಬರುವಂತೆ ಮಾಡುವಲ್ಲಿ ಗೀತೆಯ ಸಾಹಿತ್ಯ ಯಶಸ್ವಿಯಾಗಿದೆ. ಈ ಲೇಖನದ ವಿಷಯಕ್ಕೂ ಇದೇ ಪ್ರೇರಣೆ. ಭೋಗವಾದ, ಕೊಳ್ಳುಬಾಕತನ, ಸ್ವಾರ್ಥಪರತೆಯೇ ಆದ್ಯತೆಯಾಗಿ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರರಲ್ಲಿ ಬಾಂಧವ್ಯಗಳನ್ನು ನೆನಪಿಸುವ, ಬೆಸೆಯುವ ಇಂತಹ ಪ್ರಯತ್ನಗಳು ಅಭಿನಂದನೀಯ. ತಂದೆ-ತಾಯಿ-ಮಕ್ಕಳ ನಡುವಿನ ಸಂಬಂಧಗಳಿರಲಿ, ಗಂಡ-ಹೆಂಡಿರ ಸಂಬಂಧಗಳೂ ಅರ್ಥ, ಪಾವಿತ್ರ್ಯ ಕಳೆದುಕೊಳ್ಳುತ್ತಿರುವುದು ಸಮಾಜ ನೈತಿಕ ದಿವಾಳಿತನದತ್ತ ಜಾರುತ್ತಿದೆಯೇನೋ ಎಂದು ಭಾವಿಸುವಂತೆ ಮಾಡುತ್ತಿರುವ ದಿನಗಳಲ್ಲಿ ಇಂತಹ ಪ್ರಯತ್ನ ಕಾರ್ಮೋಡಗಳ ನಡುವಿನ ಮಿಂಚಿನಂತಿದೆ.
     ಅಪ್ಪ ಎನ್ನುವ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಕೇವಲ ಮಕ್ಕಳಿಗೆ ತಂದೆ ಎಂಬ ಅರ್ಥವಲ್ಲದೆ ಹಿರಿಯ, ಶ್ರೇಷ್ಠ, ಗುರು, ಸ್ವಾಮಿ, ದೇವರು ಇತ್ಯಾದಿ ಅರ್ಥಗಳಲ್ಲೂ ಈ ಪದ ಬಳಸಲ್ಪಡುತ್ತಿದೆ. ತಾಯಿಯನ್ನು ಭೂಮಿಗೆ ಹೋಲಿಕೆ ಮಾಡುವಂತೆ ತಂದೆಯನ್ನು ಆಕಾಶಕ್ಕೆ ಹೋಲಿಸುವ ಪರಿಪಾಠವೂ ಇದೆ. ಈ ಹೋಲಿಕೆಗಳು ಆದರ್ಶ ತಂದೆ-ತಾಯಿಗಳಿಗೆ ಅನ್ವಯವಾಗುತ್ತದೆ. ಸಕಲ ಜೀವಿಗಳಿಗೆ ಭೂಮಿ ಹೇಗೆ ಆಧಾರಪ್ರಾಯವಾಗಿದೆಯೋ ಹಾಗೆಯೇ ತಾಯಿ ತನ್ನ ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೂ ಅವರ ಪಾಲನೆ-ಪೋಷಣೆಗೆ ಹೆಚ್ಚಿನ ಗಮನ ನೀಡುತ್ತಾಳೆ. ಈ ಕಾರ್ಯಕ್ಕೆ ತಂದೆ ಆಧಾರಪ್ರಾಯನಾಗಿ, ಪೋಷಕನಾಗಿ ನಿಲ್ಲುತ್ತಾನೆ. ಅಮ್ಮನ ಮಹತ್ವ ಮಕ್ಕಳಿಗೆ ಹುಟ್ಟಿನ ಕ್ಷಣದಿಂದ ಅನುಭವಕ್ಕೆ ಬರುತ್ತದೆ. ಆದರೆ ಅಪ್ಪನ ಮಹತ್ವ ಮಕ್ಕಳಿಗೆ ತಿಳಿಯುವುದು ಅವರು ಸ್ವತಃ ಅಪ್ಪಂದಿರಾದ ನಂತರವೇ! ಆಕಾಶ ಹೇಗೆ ಭೂಮಿಯೂ ಸೇರಿದಂತೆ ಬ್ರಹ್ಮಾಂಡದ ಸಕಲ ಕಾಯಗಳಿಗೂ ಹೇಗೆ ಆಧಾರ ಮತ್ತು ಆಶ್ರಯಪ್ರಾಯವಾಗಿದೆಯೋ, ಹಾಗೆ ತಂದೆಯಾದವನು ಕುಟುಂಬಕ್ಕೆ ಆಶ್ರಯ ಮತ್ತು ಆಧಾರದಾತನಾಗಿರುತ್ತಾನೆ. ಆಕಾಶದ ಇರುವಿಕೆ ಹೇಗೆ ಗಮನಕ್ಕೆ ಬರುವುದಿಲ್ಲವೋ, ಹಾಗೆಯೇ ತಂದೆಯ ಮಹತ್ವ ಅಷ್ಟಾಗಿ ಮಕ್ಕಳ ಗಮನಕ್ಕೆ ಬರುವುದು ಕಡಿಮೆ. 
     ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರಗಳು ಪರಸ್ಪರ ಪೂರಕವಾಗಿರುವುದು ವಿಶೇಷವೇ ಸರಿ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ ತಂದೆ ಪ್ರಪಂಚವನ್ನು ಮಕ್ಕಳಿಗೆ ಪರಿಚಯಿಸುತ್ತಾನೆ. ತಾಯಿಯಿಂದ ಜೀವ, ತಂದೆಯಿಂದ ಜೀವನ! ಮಕ್ಕಳು ಕಷ್ಟಪಡಬಾರದೆಂದು ತಾಯಿ ಬಯಸಿದರೆ, ತಂದೆ ಕಷ್ಟಗಳನ್ನು ಎದುರಿಸಿ ಮುಂದೆಬರಲು ಹುರಿದುಂಬಿಸುತ್ತಾನೆ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ತಾಯಿ ಅವರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಅದಕ್ಕೆ ಪೋಷಕವಾಗಿ ಹಿನ್ನೆಲೆಯಲ್ಲಿ ತಂದೆಯ ಶ್ರಮವಿರುತ್ತದೆ. ತಾಯಿಯದು ಮಧುರಗಾನವಾದರೆ, ಗಾನಕ್ಕೆ ಕಳೆಕಟ್ಟುವ ಹಿಮ್ಮೇಳ ತಂದೆಯದು! ಈ ತಾಳ-ಮೇಳಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಮತ್ತು ಸಂಸಾರ ಹದಗೆಡುತ್ತದೆ. 
     ಎಲ್ಲಾ ವಿಷಯಗಳಿಗೂ ಅಪವಾದವಿರುತ್ತದೆಯಾದರೂ, ಹೆಚ್ಚಿನ ಕುಟುಂಬಗಳಲ್ಲಿ ಕುಟುಂಬದ ಸದಸ್ಯರುಗಳ ಭದ್ರತೆ, ಅಭಿವೃದ್ಧಿಗಳ ಬಗ್ಗೆ ತಂದೆಯ ಪಾತ್ರ ಪ್ರಧಾನವಾಗಿರುತ್ತದೆ. ಇರಲೊಂದು ಸೂರು, ಮಕ್ಕಳಿಗೆ ಶಿಕ್ಷಣ, ಅವರಗಳು ಸ್ವಂತ ಕಾಲಿನ ಮೇಲೆ ನಿಲ್ಲಿಸಲು ಶ್ರಮಪಡುವ ತಂದೆಯರು ಕುಟುಂಬದ ಮುಖ್ಯಸ್ಥರೆಂದೇ ಪರಿಗಣಿಸಲ್ಪಡುತ್ತಾರೆ. ಮಕ್ಕಳ ಮದುವೆಯಾಗಿ ಅವರುಗಳದೇ ಆದ ಸಂಸಾರ ಪ್ರಾರಂಭವಾದ ಮೇಲೆ ಅಪ್ಪಂದಿರ ಪಾತ್ರ ಅಷ್ಟೊಂದು ಗಣನೆಗೆ ಬರದೆ ಉಳಿದುಬಿಡುವುದನ್ನೂ ಕಾಣುತ್ತೇವೆ. ಎಲ್ಲರನ್ನೂ ದಡ ಸೇರಿಸುವಲ್ಲಿ ಸಫಲನಾಗುವ ಹೊತ್ತಿಗೆ ಹಣ್ಣಾಗಿರುವ ಅಪ್ಪನಿಗೆ ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಂಡಿರುತ್ತದೆ. ಹೊಳೆ ದಾಟಿದ ಮೇಲೆ ಅನ್ನುವ ಪರಿಸ್ಥಿತಿ ಬಾರದ ಅಪ್ಪಂದಿರೇ ಭಾಗ್ಯವಂತರು.
     ಅಪ್ಪನ ಸ್ಥಾನ ವಿವಾದಗಳಿಗೆ ತುತ್ತಾಗುವ ಉದಾಹರಣೆಗಳೂ ಸಿಗುತ್ತವೆ. ಅಕ್ರಮ ಸಂಬಂಧದಿಂದ ಜನಿಸುವ ಮಕ್ಕಳಿಗೆ ಅಪ್ಪನೆನಿಸಿಕೊಳ್ಳಲು ಹಿಂದೇಟು ಹಾಕುವವರು, ಅತ್ಯಾಚಾರ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಸಂಬಂಧಗಳಿಂದ ಜನಿಸುವ ಮಕ್ಕಳ ಅಪ್ಪಂದಿರು ಯಾರೆಂದು ತಿಳಿಯದ ಪ್ರಸಂಗಗಳು ಕಂಡುಬರುತ್ತಿರುತ್ತವೆ. ಪ್ರತಿಷ್ಠಿತರೆನಿಸಕೊಂಡವರೇ ಅಕ್ರಮ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಸೌಲಭ್ಯಗಳನ್ನು ಗುಟ್ಟಾಗಿ ಮಾಡಿಕೊಟ್ಟರೂ ಅವರನ್ನು ತಮ್ಮ ಮಕ್ಕಳೆಂದು ಒಪ್ಪಿಕೊಳ್ಳದ ಪ್ರಕರಣ, ಪಿತೃತ್ವ ಸಾಬೀತಿಗೆ ಮಕ್ಕಳೇ ನ್ಯಾಯಾಲಯದ ಮೆಟ್ಟಲೇರಿದ ಪ್ರಕರಣಗಳೂ ಇವೆ. ನೋವಿನ ಸಂದರ್ಭಗಳಲ್ಲಿ ಅಪ್ಪನೊಬ್ಬ ತನ್ನ ಮಕ್ಕಳಿಗೆ, ನಿಮಗಾಗಿ ಎಷ್ಟು ಕಷ್ಟಪಟ್ಟಿದ್ದೇನೆ, ಗೊತ್ತೆ? ಎಂಬರ್ಥದ ಮಾತುಗಳನ್ನು ಆಡಿದಾಗ ಪ್ರತಿಯಾಗಿ ಕೇಳಬಾರದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುವುದೂ ಇದೆ. ಇಂತಹವನ್ನು ಒತ್ತಟ್ಟಿಗಿಟ್ಟು ಸಾಮಾನ್ಯ ಅಪ್ಪಂದಿರ ಬಗ್ಗೆ ನೋಡೋಣ.
     ಒಬ್ಬ ಸಾಮಾನ್ಯ ಅಪ್ಪ ತನ್ನ ಕೈಯಲ್ಲಿ ಮಾಡಲಾಗದಿದ್ದ ಕೆಲಸಗಳನ್ನು ಮಕ್ಕಳು ಮಾಡಲೆಂದು ಬಯಸುತ್ತಾನೆ. ತಾನು ಆಸೆಪಟ್ಟು ಪಡೆಯಲಾಗದಿದ್ದುದನ್ನು ಮಕ್ಕಳಾದರೂ ಪಡೆಯಲೆಂದು ಆಶಿಸುತ್ತಾನೆ. ಅದರ ಸಲುವಾಗಿ ತಾನು ಮಾಡಬಹುದಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತಾನೆ, ಕಷ್ಟಪಡುತ್ತಾನೆ. ಅವರುಗಳ ಏಳಿಗೆಗಾಗಿ ಸ್ವಂತದ ಅವಶ್ಯಕತೆಗಳನ್ನು ತ್ಯಾಗ ಮಾಡುತ್ತಾನೆ. ಈ ಗುಣವೇ ಅಪ್ಪ-ಅಮ್ಮಂದಿರನ್ನು ಸಜ್ಜನರನ್ನಾಗಿ ರೂಪಿಸುವುದು, ಆದರ್ಶರನ್ನಾಗಿಸುವುದು. ನಮ್ಮ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಮರು ಹೇಳುತ್ತಿದ್ದ ಈ ಮಾತು ಪಾಲನೀಯವಾಗಿದೆ: "ಒಂದು ದೇಶ ಭ್ರಷ್ಠಾಚಾರ ಮುಕ್ತವಾಗಬೇಕಾದರೆ, ಸುಂದರ ಮನಸ್ಸುಗಳಿಂದ ಕೂಡಿರಬೇಕೆಂದಾದರೆ ಮೂವರಿಂದ ಮಾತ್ರ ಸಾಧ್ಯ. ಆ ಮೂವರೆಂದರೆ ಅಪ್ಪ, ಅಮ್ಮ ಮತ್ತು ಶಿಕ್ಷಕ." ಈ ಮೂವರಲ್ಲಿ ಕುಟುಂಬದ ಮುಖ್ಯಸ್ಥನಾಗಿ ಅಪ್ಪನ ಜವಾಬ್ದಾರಿಯೂ ಹೆಚ್ಚಿನದಾಗಿದೆ. ಅವನ ನಡವಳಿಕೆ, ಮೇಲ್ಪಂಕ್ತಿ, ತೆಗೆದುಕೊಳ್ಳುವ ನಿರ್ಧಾರಗಳು ಗುರುತರವಾದ ಬದಲಾವಣೆ ತರಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಅವನು ನೋಡಿಕೊಳ್ಳಬೇಕಿದೆ. 
     ಮಕ್ಕಳ ದೃಷ್ಟಿಯಲ್ಲಿ ಅಪ್ಪ ಮಾದರಿಯಾಗಿರುತ್ತಾನೆ. ಮಕ್ಕಳ ಬೇಕು-ಬೇಡಗಳನ್ನು ಗಮನಿಸುವುದು, ಅವರ ರಕ್ಷಣೆ, ಭದ್ರತೆ ವಿಚಾರಗಳಿಗೆ ಗಮನ ಕೊಡುವುದು, ಇತ್ಯಾದಿಗಳಿಂದಾಗಿ ಅವರ ದೃಷ್ಟಿಯಲ್ಲಿ ಅವನೇ ಹೀರೋ ಆಗಿರುತ್ತಾನೆ. ಏನು ಆಗಿರದಿದ್ದರೂ, ತಾವು ಏನಾಗಬೇಕು ಎಂಬುದಕ್ಕೆ ಅಪ್ಪನೇ ಅವರಿಗೆ ಮಾರ್ಗದರ್ಶಿ, ಮಾನದಂಡ ಆಗಿರುತ್ತಾನೆ. ಅಪ್ಪ ಅನ್ನಿಸಿಕೊಳ್ಳುವುದೇ ಹೆಮ್ಮೆಯ ವಿಷಯ, ಅದರಲ್ಲೂ ಒಳ್ಳೆಯ ಅಪ್ಪ ಅನ್ನಿಸಿಕೊಂಡರೆ ಅದೊಂದು ಶ್ರೇಷ್ಠ ಸಾಧನೆಯೇ ಸರಿ. ದೇಶ ಸಧೃಢವಾಗಿರಬೇಕಾದರೆ ರಾಜ್ಯಗಳು ಸಧೃಢವಾಗಿರಬೇಕು. ರಾಜ್ಯಗಳು ಸಮೃದ್ಧಿಯಾಗಿರಬೇಕೆಂದರೆ ಜಿಲ್ಲೆಗಳು, ಜಿಲ್ಲೆಗಳಿಗೆ ತಾಲ್ಲೂಕುಗಳು, ತಾಲ್ಲೂಕುಗಳಿಗೆ ನಗರ, ಹಳ್ಳಿಗಳು! ನಗರ, ಹಳ್ಳಿಗಳು ಮಾದರಿ ಎನ್ನಿಸಿಕೊಳ್ಳಬೇಕಾದರೆ ಅಲ್ಲಿರುವ ಕುಟುಂಬಗಳು ನಾಗರಿಕ ಪ್ರಜ್ಞೆ ಹೊಂದಿರಬೇಕು. ಕುಟುಂಬಗಳು ಹೀಗಿರಬೇಕಾದರೆ ಆ ಕುಟುಂಬಗಳ ಮುಖ್ಯಸ್ಥರು, ಅಂದರೆ ಅಪ್ಪಂದಿರುಗಳು ಸುಯೋಗ್ಯರಾಗಿರಬೇಕು. ಒಟ್ಟಾರೆಯಾಗಿ, ದೇಶಕ್ಕೆ ಒಳ್ಳೆಯದಾಗಬೇಕೆಂದರೆ, ಕುಟುಂಬದ ಆಧಾರಗಳಾದ ಅಪ್ಪ-ಅಮ್ಮಂದಿರುಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
-ಕ.ವೆಂ.ನಾಗರಾಜ್.

ಸೋಮವಾರ, ಜೂನ್ 12, 2017

ಸಜ್ಜನಶಕ್ತಿ ಜಾಗೃತವಾಗಲಿ

     ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ ಕಟುಕರಿದ್ದಾರೆ, ನಯವಂಚಕರಿದ್ದಾರೆ, ಮುಖವಾಡಧಾರಿಗಳಿದ್ದಾರೆ, ಜಾತಿವಾದಿಗಳಿದ್ದಾರೆ, ವಿಚಾರವಾದಿಗಳಿದ್ದಾರೆ, ಕಾನೂನು-ಕಟ್ಟಳೆಗಳಿಗೆ ಬೆಲೆ ಕೊಡುವವರಿದ್ದಾರೆ, ಅದನ್ನು ಕಾಲಕಸವಾಗಿ ಕಾಣುವವರಿದ್ದಾರೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ, ಎಂಥೆಂತಹವರೋ ಇದ್ದಾರೆ.  ಅವರವರಿಗೆ ಅವರದೇ ಆದ ಮಾನದಂಡಗಳು, ಅವರವರ ಪಾಲಿಗೆ ಅವರದೇ ಸರಿ. ಎಲ್ಲರಿಗೂ ಸಮಾನವಾದ ಮಾನದಂಡ ಅನ್ನುವುದು ಪುಸ್ತಕದ ಬದನೆಕಾಯಿಯಷ್ಟೆ. 
     ಹಿಂದೆ ಪಿಪ್ಪಲಾದ ಎಂಬ ಋಷಿ ಇದ್ದನಂತೆ. ಆತನ ನಿಜವಾದ ಹೆಸರು ಏನಿತ್ತೋ ಗೊತ್ತಿಲ್ಲ. ಆದರೆ ಆತ ಮರದಿಂದ ಕಳಿತು ಕೆಳಗೆ ಬಿದ್ದಿದ್ದ ಹಣ್ಣು ಹಂಪಲುಗಳನ್ನು ಮಾತ್ರ ಆಯ್ದು ತಿನ್ನುತ್ತಿದ್ದರಿಂದ ಆತನಿಗೆ ಆ ಹೆಸರು ಬಂದಿತ್ತು. ಅದೇ ರೀತಿ ಅಕ್ಷಪಾದ (ಪಾದದಲ್ಲಿ ಕಣ್ಣುಳ್ಳವನು) ಎಂಬ ಹೆಸರಿನ ಋಷಿಗೂ, ಆತ ನಡೆಯುವಾಗ ಕಾಲಿನ ಕೆಳಗೆ ಯಾವ ಕ್ರಿಮಿ-ಕೀಟಗಳೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಡೆಯುತ್ತಿದ್ದರಿಂದ ಆ ಹೆಸರು ಬಂದಿತ್ತು. ಅಂತಹವರು ಇದ್ದ ಕಾಲದಲ್ಲೂ ಋಷಿಮುನಿಗಳು ಮಾಡುತ್ತಿದ್ದ ಯಜ್ಞ ಯಾಗಗಳ ಹೋಮಕುಂಡದಲ್ಲಿ ಮಾಂಸದ ತುಂಡುಗಳನ್ನು ಹಾಕಿ ಯಜ್ಞಗಳಿಗೆ ಭಂಗ ತರುತ್ತಿದ್ದವರೂ ಇದ್ದರು. ಅವರನ್ನು ರಾಕ್ಷಸರು ಅನ್ನುತ್ತಿದ್ದರು.  ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆ ಹೊಂದಿರುತ್ತಾರೋ, ದುರ್ವಿಚಾರಗಳನ್ನು ಹೊಂದಿರುತ್ತಾರೋ, ಯಾರು ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರು ರಾಕ್ಷಸರು, ಅಷ್ಟೆ. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸ ಎಂದು ಕರೆಯಲ್ಪಡುವ ರಾವಣ, ಕುಂಭಕರ್ಣ, ಶೂರ್ಪಣಖಿ ಇವರುಗಳ ತಂದೆ ವಿಶ್ರವಸು ಎಂಬ ಒಬ್ಬ ಮುನಿ, ವಿಪ್ರಕುಲಕ್ಕೆ ಸೇರಿದವನು. ಅವರುಗಳು ರಾಕ್ಷಸರೆನಿಸಲು ಪ್ರಮುಖ ಕಾರಣ ಅವರಲ್ಲಿದ್ದ ದುರ್ವಿಚಾರ, ದುರ್ಭಾವನೆ ಮತ್ತು ದುಷ್ಕಾರ್ಯಗಳು. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆ ಪ್ರಕಾರದ ಜೀವಿಯಲ್ಲ. ಹೀಗಿರುವಾಗ ಒಬ್ಬ ಮಾನವ ರಾಕ್ಷಸನಾಗುವುದು ಅಥವ ಆದರ್ಶ ಮಾನವನಾಗುವುದು ಆತನ ನಡವಳಿಕೆಯಿಂದ ಎಂಬ ಪ್ರಾಥಮಿಕ ಸಂಗತಿಯನ್ನು ಗಮನದಲ್ಲಿಡಬೇಕು.

     ಇಂದಿನ ಸ್ಥಿತಿ-ಗತಿಗಳ ಕುರಿತು ನೋಡೋಣ. ಗೋವಿನ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಂಡವರಿದ್ದಾರೆ. ಅದು ನಮ್ಮ ಆಹಾರ ಅನ್ನುವವರೂ ಇದ್ದಾರೆ. ನಮ್ಮ ಸಂವಿಧಾನದಲ್ಲೂ ಗೋವಿನ ಬಗ್ಗೆ ಆದರ ಅಭಿಮಾನಗಳು ಲಿಖಿತವಾಗಿ ದಾಖಲಿತವಾಗಿದೆ. ಈಗ ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಬೆಂಬಲ ಮತ್ತು ಆಕ್ರೋಷಗಳೆರಡೂ ಅತಿರೇಕವಾಗಿ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿಪರೀತವೆನಿಸುವಷ್ಟು ಕೆಸರೆರಚಾಟಗಳು ನಡೆಯುತ್ತಿದೆ. ಬಹಿರಂಗವಾಗಿ ಗೋವನ್ನು ಕತ್ತರಿಸಿ ಹಸಿ ಹಸಿಯಾದ ಮಾಂಸವನ್ನು ಸಾರ್ವಜನಿಕವಾಗಿ ಭಕ್ಷಿಸುವ ಪ್ರತಿಭಟನೆಯೂ ಕೇರಳದಲ್ಲಿ ಯುವ ಕಾಂಗ್ರೆಸ್ಸಿಗರಿಂದ ಆಗಿದೆ. ಇದರಲ್ಲಿ ಗೋವಿನ ತಪ್ಪೇನಿದೆ? ಅದು ತನ್ನನ್ನು ಪೂಜೆ ಮಾಡಿ ಎಂದೂ ಹೇಳಿಲ್ಲ, ತನ್ನನ್ನು ಕಡಿದು ತಿನ್ನಿ ಎಂತಲೂ ಹೇಳಿಲ್ಲ. ಪಾಪ, ಅದಕ್ಕೆ ಅದು ಯಾವುದೂ ಗೊತ್ತೇ ಇಲ್ಲ. ಗೋವನ್ನು ಪೂಜ್ಯ ಭಾವನೆಯಿಂದ ಕಾಣುವವರನ್ನು ಕೆಣಕುವ ಏಕಮಾತ್ರ ಉದ್ದೇಶದ ಈ ಕೃತ್ಯ ರಾಕ್ಷಸೀಕೃತ್ಯ ಅಲ್ಲದೆ ಮತ್ತೇನು? ಪ್ರತಿಭಟನೆಗೂ ಯೋಗ್ಯ ಮಾರ್ಗಗಳಿವೆ, ಸಮಸ್ಯೆ ಇತ್ಯರ್ಥಕ್ಕೆ ಹಲವು ದಾರಿಗಳಿವೆ, ನ್ಯಾಯಾಲಯಗಳಿವೆ, ಶಾಸಕಾಂಗವಿದೆ. ಅವುಗಳಿಂದ ಇತ್ಯರ್ಥವಾಗದ ಸಂದರ್ಭಗಳಲ್ಲಿ ಅತಿರೇಕದ ನಡವಳಿಕೆಗಳು ಸಾಮಾನ್ಯವೆನಿಸಿದರೂ, ಈ ಪ್ರಸಂಗದಲ್ಲಿ ಅಂತಹ ರಕ್ಕಸ ನಡವಳಿಕೆಯ ತೋರ್ಪಡಿಕೆ ಅಗತ್ಯವಿರಲಿಲ್ಲ. 

     ಇಂದು ಸಮಾಜವನ್ನು, ದೇಶವನ್ನು ಜಾತಿಗಳ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ವಿವಿಧ ವಿಚಾರಗಳ ಹೆಸರಿನಲ್ಲಿ ಛಿದ್ರಗೊಳಿಸುವ ಕೆಲಸವನ್ನು ರಾಜಕಾರಣಿಗಳು, ಜಾತ್ಯಂಧರು ಮತ್ತು ಮತಾಂಧರುಗಳು ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಮಾನವೀಯತೆ ಅನ್ನುವುದೂ ಸಹ ದೇಶ, ಮತ, ಧರ್ಮ, ಜಾತಿ, ವಿಚಾರಗಳಿಗೆ ಥಳಕು ಹಾಕಿಕೊಂಡುಬಿಟ್ಟಿದೆ. ಮತಾಂಧ ಮುಸ್ಲಿಮ್ ಉಗ್ರ ಸಂಘಟನೆಗೆ ಸೇರಿದವರಿಗೆ ತಮ್ಮ ಮತದವರನ್ನು ಯಾರು ಟೀಕಿಸಿದರೂ ಸಹನೆಯಾಗುವುದಿಲ್ಲ. ಆದರೆ ಅವರು ಇತರ ಮತೀಯರನ್ನು ನಿರ್ದಯೆಯಿಂದ ಕತ್ತು ಸೀಳಿ ಕೊಲೆಗೈಯಬಲ್ಲರು. ಜನನಿಬಿಡ ಪ್ರದೇಶಗಳಲ್ಲಿ ಬಾಂಬು ಸಿಡಿಸಿ ನೂರಾರು ಜನರ ಹತ್ಯೆಯಾದರೂ ಅವರು ಅದರಿಂದ ಸಂಭ್ರಮಪಡುತ್ತಾರೆ. ತಮ್ಮವರು ಸತ್ತಾಗ ದುಃಖಿಸುವ ಅವರು ಇತರರು ಕೊಲೆಯಾದಾಗ ಸಂತೋಷಿಸುತ್ತಾರೆ. ಸತ್ತವರು ತಮ್ಮಂತೆಯೇ ಇರುವ ಮಾನವ ಜೀವಿಗಳು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಇದು ಮತ/ಧರ್ಮದ ಹೆಸರಿನಲ್ಲಿ ಮರೆಯಾಗಿರುವ ಮಾನವೀಯತೆ. ಕೇರಳದಲ್ಲಿ ಜಯಕೃಷ್ಣನ್ ಮಾಸ್ತರ್ ಎಂಬ ಶಿಕ್ಷಕರನ್ನು ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗಲೇ ಮಕ್ಕಳ ಎದುರಿನಲ್ಲೇ ಸಿ.ಪಿ.ಎಂ. ಕಾರ್ಯಕರ್ತರು ಕೊಚ್ಚಿ ಕೊಲೆ ಮಾಡಿದ್ದರು. ಅವರ ದೇಹದ ೪೮ ಕಡೆಗಳಲ್ಲಿ ಕೊಚ್ಚಲಾಗಿತ್ತು. ಇದಕ್ಕೆ ಕಾರಣ ವೈಚಾರಿಕ ಭಿನ್ನತೆ. ಅವರು ಆರೆಸ್ಸೆಸ್ಸಿನವರಾಗಿದ್ದರು ಎಂಬುದೊಂದೇ ಅವರ ಹತ್ಯೆಗೆ ಕಾರಣವಾಗಿತ್ತು. ಕೇರಳದಲ್ಲಿ ಇಂತಹ ವೈಚಾರಿಕ ವಿರೋಧಿಗಳ ಹತ್ಯೆ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಇತರೆಡೆಗಳಲ್ಲಿರುವ ಕಮ್ಯುನಿಸ್ಟರು ಮತ್ತು ಅವರ ಹಿತೈಷಿಗಳು ಖಂಡಿಸುವುದೇ ಇಲ್ಲ. ಆದರೆ ಹೈದರಾಬಾದಿನಲ್ಲಿ ಒಬ್ಬ ಕಮ್ಯುನಿಸ್ಟ್ ಹಿತೈಷಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದರ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆಯುತ್ತವೆ. ವೈಚಾರಿಕ ಭಿನ್ನತೆಯಿಂದ ಯಾರದಾದರೂ ಕೊಲೆಯಾದರೆ ಅದನ್ನು ಮಾನವೀಯ ಕಳಕಳಿ ಇರುವ ಯಾರಾದರೂ ಖಂಡಿಸಲೇಬೇಕು. ಎಡಪಂಥೀಯನಾಗಲೀ, ಬಲಪಂಥೀಯನಾಗಲೀ ದುಷ್ಕೃತ್ಯ ಯಾರೇ ಮಾಡಿದರೂ ಅದನ್ನು ಸಮಾನ ರೀತಿಯಲ್ಲಿ ನೋಡುವ ಪರಿಪಾಠ ಮರೆಯಾಗಿದೆ. ಇಲ್ಲಿ ಮಾನವತೆಯನ್ನು ವಿಚಾರವಾದ ನುಂಗಿಬಿಟ್ಟಿದೆ. ಸತ್ತವರು, ದೌರ್ಜನ್ಯಕ್ಕೊಳಗಾದವರ ಜಾತಿ, ಮತ, ರಾಜಕೀಯ ಪಕ್ಷ, ವೈಚಾರಿಕ ಒಲವು/ನಿಲುವುಗಳನ್ನು ಆಧರಿಸಿ ಅಂತಹ ದುರ್ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಇರುತ್ತದೆಯೆಂದರೆ ಅದು ಮಾನವೀಯತೆಯ ಒರತೆ ಬತ್ತುತ್ತಿರುವುದನ್ನು ತೋರಿಸುತ್ತದೆ.
     ಅಧಿಕಾರದ ಸಲುವಾಗಿ ಏನು ಮಾಡಲೂ ಹೇಸದ ರಾಜಕಾರಣಿಗಳು, ಮತಾಂಧರು, ಸ್ವಂತದ ಲಾಭಕ್ಕಾಗಿ ಸತ್ಯದ ಹತ್ಯೆ ಮಾಡಲು ಸಿದ್ಧರಾಗಿರುವ ವಿಚಾರವ್ಯಾಧಿಗಳು, ಹಣ ಮತ್ತು ಟಿ.ಆರ್.ಪಿ. ಸಲುವಾಗಿ ಋಣಾತ್ಮಕ ಸಂಗತಿಗಳಿಗೆ ನೀರೆರೆಯುತ್ತಿರುವ ಹಲವು ಮಾಧ್ಯಮಗಳವರು ಮತ್ತು ಇಂತಹವನ್ನು ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಸಹಿಸುವ ಸಜ್ಜನ ಸುಬ್ಬಣ್ಣರುಗಳು ಇಂದಿನ ಪರಿಸ್ಥಿತಿಗೆ ನೇರ ಕಾರಣರೆಂದರೆ ಅತಿಶಯೋಕ್ತಿಯಲ್ಲ. ನಮಗೆ ತೊಂದರೆಯಾದರೆ ಮಾತ್ರ ಗೊಣಗುಟ್ಟುವ, ನಮಗೇನೂ ತೊಂದರೆಯಿಲ್ಲವೆನಿಸಿದಾಗ ಮತ್ತು ಇತರರಿಗೆ ಮಾತ್ರ ತೊಂದರೆಯಾದಾಗ ಅದನ್ನು ಕಟ್ಟಿಕೊಂಡು ನಮಗೇನು ಎಂಬ ಭಾವ ತೋರುವವರ ಮನೋಭಾವ ಬದಲಾಗುವವರೆಗೆ ಇಂತಹ ಪರಿಸ್ಥಿತಿ ಇದ್ದೇ ಇರುತ್ತದೆ. ಕೆಟ್ಟವರು ಕೆಲವೇ ಜನರಿದ್ದರೂ ಅವರ ಉಪಟಳ, ಶಕ್ತಿ ಏಕೆ ಹೆಚ್ಚಾಗಿರುತ್ತದೆಯೆಂದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯವರು ನಮಗೇಕೆ ಅವರ ಉಸಾಬರಿ, ನಮಗೆ ಅವರಿಂದ ತೊಂದರೆಯಾಗದಿದ್ದರೆ ಸಾಕು ಎಂದು ಅಂದುಕೊಳ್ಳುವುದೇ ಆಗಿದೆ. ಸಜ್ಜನ ಶಕ್ತಿಯನ್ನು ಬಡಿದೆಬ್ಬಿಸಿ ಜಾಗೃತಗೊಳಿಸುವ ಕೆಲಸ ಈಗ ತುರ್ತಾಗಿ ಆಗಬೇಕಿದೆ.
-ಕ.ವೆಂ.ನಾಗರಾಜ್.
**************
ದಿನಾಂಕ 12.6.2017ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ: