ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 24, 2015

ತುರ್ತು ಪರಿಸ್ಥಿತಿ ಸ್ಮರಣೆ - ಜಾಗೃತಿಗೆ ಪ್ರೇರಣೆ

ಹಾಸನದಲ್ಲಿ ದಿನಾಂಕ 10.08.2015ರಂದು ನಡೆದ 'ತುರ್ತು ಪರಿಸ್ಥಿತಿ ಸ್ಮರಣೆ - ಜಾಗೃತಿಗೆ ಪ್ರೇರಣೆ' ಕಾರ್ಯಕ್ರಮದ ಕೆಲವು ಫೋಟೋಗಳು




















ಗುರುವಾರ, ಆಗಸ್ಟ್ 20, 2015

ತುರ್ತು ಪರಿಸ್ಥಿತಿ - 40 ವರ್ಷಗಳು - ಒಂದು ನೆನಪು

     5-07-2015ರಂದು ಮೈಸೂರಿನಲ್ಲಿ ನಡೆದ 'ತುರ್ತುಪರಿಸ್ಥಿತಿ-40 ವರ್ಷಗಳು- ಒಂದು ನೆನಪು' ಕಾರ್ಯಕ್ರಮದಲ್ಲಿ ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ನೂರಾರು ಸತ್ಯಾಗ್ರಹಿಗಳನ್ನು (ತುರ್ತುಪರಿಸ್ಥಿತಿಯಲ್ಲಿ ಬಂಧಿತರಾಗಿದ್ದವರು) ಅಭಿನಂದಿಸಲಾಯಿತು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ರಕ್ಷಣೆಗೆ ತೆರಬೇಕಾದ ಬೆಲೆ ಎಂದು ಸಾರಲಾಯಿತು. ತುರ್ತುಪರಿಸ್ಥಿತಿಯ ಅರಿವಿಲ್ಲದ ಇಂದಿನ ಪೀಳಿಗೆಗೆ ಅಂದಿನ ದಿನಗಳು ಮುಂದೆ ಬರದಂತೆ ನೋಡಿಕೊಳ್ಳಲು ಕರೆಕೊಡಲಾಯಿತು. ಶ್ರೀಯುತರಾದ ಹೆಚ್. ಗಂಗಾಧರನ್, ಡಿ.ಹೆಚ್. ಶಂಕರಮೂರ್ತಿ, ಸುರೇಶಕುಮಾರ್, ಕಲ್ಲಡ್ಕ ಪ್ರಭಾಕರ ಭಟ್, ಗೋ. ಮದುಸೂದನ್, ತೋಂಟದಾರಾಧ್ಯರವರು ಮಾತನಾಡಿದರು. ಪ್ರಮುಖ ಭಾಷಣಕಾರರಾದ ಶ್ರೀ ಸು.ರಾಮಣ್ಣನವರ ಭಾಷಣ ಹೃದಯಸ್ಪರ್ಶಿಯಾಗಿತ್ತು. ಕಾರ್ಯಕ್ರಮದ ಕೆಲವು ದೃಷ್ಯಗಳಿವು:


























ಮಂಗಳವಾರ, ಆಗಸ್ಟ್ 18, 2015

ನಾಗರಪಂಚಮಿ - ಬರದಿರಲಿ ನಾಗನ ನೆಮ್ಮದಿಗೆ ಭಂಗ!



     ನಾಳೆ ನಾಗರಪಂಚಮಿ! ನಾಗನ ನೆಮ್ಮದಿಗೆ ಭಂಗ ತರದಂತೆ ಹಬ್ಬ ಆಚರಿಸಿದರೆ ಅದು ನಿಜವಾದ ನಾಗಪೂಜೆ ಆದೀತು!! ಪ್ರಕೃತಿಯ ಸಮತೋಲನಕ್ಕೆ ನಾಗನ ಸಂತತಿಯ ರಕ್ಷಣೆ ಅತ್ಯಗತ್ಯ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಸಂಪ್ರದಾಯವನ್ನು ಅದರ ನಿಜಾರ್ಥದಲ್ಲಿ ಆಚರಿಸಲು ಈ ದಿನವನ್ನು ಆರಿಸಿಕೊಳ್ಳೋಣ.
   ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ ಮುಗಿವೆ, ಹಾಲನ್ನೀವೆ, ಈಗಲೆ ಹೊರಗೆ ಪೋ ಪೋ ಪೋ ಪೋ' ಎಂಬ ಪದ್ಯ ಈಗಲೂ ನೆನಪಿಗೆ ಬರುತ್ತಿರುತ್ತದೆ.  ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಕರ್ನಾಟಕದಲ್ಲಿ ದಕ್ಷಿಣಕನ್ನಡದ ಕುಕ್ಕೆ, ಕೋಲಾರದ ಘಾಟಿ ಹಾಗೂ ಉತ್ತರಕನ್ನಡದ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಗಳು ನಾಗಪೂಜೆಯ ಕಾರಣದಿಂದಲೇ ಪ್ರಸಿದ್ಧವಾಗಿವೆ. ನಾಗನನ್ನೇ ಆರಾಧ್ಯದೈವವಾಗಿಸಿಕೊಂಡಿರುವ ಜನರಿದ್ದಾರೆ, ಜನಾಂಗಗಳೇ ಇವೆ. ನಾಗ ಉತ್ತಮ ಮಳೆ-ಬೆಳೆಯ ಸಂಕೇತವಾಗಿದ್ದು, ಅರಿತೋ ಅರಿಯದೆಯೋ ಅವುಗಳಿಗೆ ತೊಂದರೆಯಾದರೆ ದೋಷ ಕಾಡುತ್ತದೆಯೆಂದು ಇಂತಹ ಪ್ರಾಯಶ್ಚಿತ್ತ ಕಾರ್ಯಗಳಾದ ನಾಗಬಲಿ ಅಥವಾ ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ನಾಗರಹಾವು ಸತ್ತಿದ್ದನ್ನು ಕಂಡರೆ ಅದಕ್ಕೆ ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರ ನಡೆಸುವುದನ್ನೂ ಕಾಣುತ್ತೇವೆ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ. ಪುರಾಣಗಳಲ್ಲಿ ನಾಗಲೋಕ ಪಾತಾಳದಲ್ಲಿದೆಯೆಂದು ಬಣ್ಣಿಸಲಾಗುತ್ತದೆ. ಹುತ್ತಗಳಲ್ಲಿ, ಬಿಲಗಳಲ್ಲಿ ವಾಸಿಸುವ ಉರಗಗಳು ಭೂಮಿಯ ಕೆಳಗೆ ಹೆಚ್ಚಾಗಿ ವಾಸಿಸುವುದರಿಂದ ಈ ಪ್ರತೀತಿ ಬಂದಿರಬಹುದು. ಕಾನನಗಳಲ್ಲಿರುವ ಹುತ್ತಗಳು ಮಳೆಗಾಲದಲ್ಲಿ ನೀರು ಭೂಮಿಯ ಒಳಗೆ ಬಸಿಯಲು ಸಹಾಯಕವಾಗಿ ಅಂತರ್ಜಲ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 
     ನಾಗರಪಂಚಮಿಯನ್ನು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ ಭಕ್ತಿಭಾವದಿಂದ ಆಚರಿಸುತ್ತಾರಾದರೂ, ತುಳುನಾಡಿನಲ್ಲಿ 'ನಾಗ'ನಿಗೆ ವಿಶೇಷ ಮಹತ್ವ ನೀಡುತ್ತಾರೆ. ನಾಗಾರಾಧನೆಗೆ ಮಹತ್ವವಿರುವ ಅಲ್ಲಿ, 'ನಾಗಬನ'ಗಳ ಹೆಸರಿನಲ್ಲಾದರೂ ಸ್ವಲ್ಪಮಟ್ಟಿಗೆ ಹಸಿರು ಉಳಿದಿದೆ ಎನ್ನಲು ಅಡ್ಡಿಯಿಲ್ಲ. ಆದರೆ ಆ ನಾಗಬನಗಳನ್ನೂ ಕಾಂಕ್ರೀಟೀಕರಣ ಮಾಡುತ್ತಿರುವುದು ದುರ್ದೈವ.
     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು.
      ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿರುವುದು ಎಂತಹ ವಿಪರ್ಯಾಸ! ಉದ್ದೇಶ 'ನಾಗದೇವ'ನನ್ನು ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ? 
1. ಬಾಂಧವ್ಯಗಳ ಬೆಸುಗೆ ಗಟ್ಟಿಗೊಳ್ಳಲು ಅಣ್ಣ-ತಮ್ಮಂದಿರು, ತಂಗಿಯರು ಒಂದೆಡೆ ಸೇರಿ ಒಟ್ಟಿಗೆ ಸಂಭ್ರಮದಿಂದ ಸೇರಿ ಹಬ್ಬವನ್ನಾಚರಿಸುವುದು. ಹಲವೆಡೆ ಆಚರಣೆಯಲ್ಲಿರುವ ಜೋಕಾಲಿ ಆಡುವುದು, ಮದರಂಗಿ (ಮೆಹಂದಿ) ಹಚ್ಚುವುದು, ಸೋದರರಿಗೆ ತನಿ ಎರೆಯುವುದು, ಮುಂತಾದವುಗಳಿಗೆ ಜೀವ ತುಂಬುವುದು. ಈ ದಿನದಂದು ಮಾಡುವ ತಂಬಿಟ್ಟು, ಕಡುಬು, ಮುಂತಾದ ವಿಶೇಷ ಖಾದ್ಯಗಳನ್ನು ಸೇವಿಸುವುದು.
2. ಮದುವೆಯಾದ ಹೆಣ್ಣು ಮಕ್ಕಳಿಗೆ ತವರಿನ ನೆನಪು ಕಾಡದಿರುವಂತೆ ಅವರಿಗೆ ಉಡುಗೊರೆಗಳನ್ನು ನೀಡಿ ಸಂತಸಗೊಳ್ಳುವಂತೆ ಮಾಡುವುದು.
3. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
4. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
5. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
6. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
7. ಇಂತಹ  ಸೂಕ್ತವೆನಿಸುವ  ಇತರ ಕಾರ್ಯಗಳನ್ನು ಕೈಗೊಳ್ಳಬಹುದು.
     ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸೋಣ ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ಪರವಾಗಿ ಈ 'ನಾಗರಾಜ'ನ ಆಶಯ!
-ಕ.ವೆಂ.ನಾಗರಾಜ್.

ಶುಕ್ರವಾರ, ಆಗಸ್ಟ್ 7, 2015

ರಾಷ್ಟ್ರದ ಭದ್ರತೆ ಮತ್ತು ಪೊಳ್ಳು ಜಾತ್ಯಾತೀತತೆ

     ಅಬ್ರಹಾಂ ಲಿಂಕನ್ ಹೇಳಿದ್ದ ಪ್ರಸಿದ್ಧ ನುಡಿಯಿದು: 'ಕೇವಲ ಸಂಖ್ಯಾಬಲದ ಬಹುಮತದಿಂದಾಗಿ ಒಂದು ಅಲ್ಪಸಂಖ್ಯಾತ ಗುಂಪನ್ನು ಲಿಖಿತ ಸಂವಿಧಾನದ ಹಕ್ಕಿನಿಂದ ವಂಚಿಸಿದರೆ, ನೈತಿಕತೆಯ ದೃಷ್ಟಿಯಿಂದ, (ಅದರ ವಿರುದ್ಧ) ಕ್ರಾಂತಿಯನ್ನು ಖಂಡಿತವಾಗಿ ಸಮರ್ಥಿಸಬಹುದು, ಅಂತಹ ಹಕ್ಕು ನಿಜಕ್ಕೂ ಒಂದು ಅಮೂಲ್ಯವಾದುದಾದರೆ!' ಭಾರತದಲ್ಲಿ ತದ್ವಿರುದ್ಧ ಪರಿಸ್ಥಿತಿ ಇದ್ದು, ರಾಜಕೀಯ ಕಾರಣಗಳಿಗಾಗಿ ಮತ್ತು ಓಟು ಬ್ಯಾಂಕ್ ಸೃಷ್ಟಿಗಾಗಿ ಅಲ್ಪ ಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು, ಇತ್ಯಾದಿಯವರನ್ನು  ವಿವಿಧ ರಾಜಕೀಯ ಪಕ್ಷಗಳವರು ಓಲೈಸುತ್ತಿರುವ ರೀತಿ ನೋಡಿದರೆ ಬಹುಸಂಖ್ಯಾತರು ಎನ್ನಿಸಿಕೊಂಡವರೇ ತಮ್ಮ ಹಕ್ಕಿಗೆ ಹೋರಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಅನ್ನಿಸುತ್ತದೆ. ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಇವರುಗಳನ್ನು ಒಟ್ಟುಗೂಡಿಸಿದರೆ ಉಳಿಯುವವರನ್ನು ಬಹುಸಂಖ್ಯಾತರು ಎನ್ನಲಾಗುವುದಿಲ್ಲ. ವಾಸ್ತವವಾಗಿ ಅವರೇ ಅಲ್ಪ ಸಂಖ್ಯಾತರಾಗಿ ತಮಗೆ ಬರಬೇಕಾದ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಅನ್ನಿಸುವುದಿಲ್ಲವೇ? ಹಿಂದುಳಿದ ಜಾತಿ, ವರ್ಗಗಳಿಗೆ ಸೇರಲು ಹಲವು ಜಾತಿಗಳವರು ಪೈಪೋಟಿ ನಡೆಸುತ್ತಿದ್ದಾರೆ. ಮೀಸಲಾತಿಯಲ್ಲೂ ಒಳಮೀಸಲಾತಿ ಬಗ್ಗೆ ಬೇಡಿಕೆಗಳಿವೆ. ಇದನ್ನೆಲ್ಲಾ ನೋಡಿದರೆ ದೇಶ ಅಭಿವೃದ್ಧಿ ಪಥದಲ್ಲಿ ಮೇಲೆ ಸಾಗುವ ಬದಲಿಗೆ ಕೆಳಕ್ಕೆ ಜಾರುತ್ತಿದೆಯೇನೋ ಎಂದು ಭಾಸವಾಗುತ್ತದೆ. 
     ಅಲ್ಪ ಸಂಖ್ಯಾತರು ಅಂದರೆ ಯಾರು? ವಿವಿಧ ಗುಂಪುಗಳಲ್ಲಿ ಸಣ್ಣ ಗುಂಪನ್ನು ಅಲ್ಪ ಸಂಖ್ಯಾತರೆನ್ನೋಣವೇ? ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಇತ್ಯಾದಿಗಳಲ್ಲಿ ಭಿನ್ನತೆ ಇದ್ದು ಸಂಖ್ಯಾತ್ಮಕವಾಗಿ ಕಡಿಮೆ ಇರುವವರನ್ನು ಅಲ್ಪ ಸಂಖ್ಯಾತರೆನ್ನಬೇಕೆ? ಭಾರತದ ಸಂವಿಧಾನದಲ್ಲಿ ಅಲ್ಪ ಸಂಖ್ಯಾತರು ಎಂಬ ಪದ ಬಳಕೆಯಾಗಿದ್ದರೂ ಅದರ ಅರ್ಥ, ವಿಸ್ತಾರಗಳ ಬಗ್ಗೆ ಏನನ್ನೂ ಹೇಳಿಲ್ಲ. ಅಲ್ಪ ಸಂಖ್ಯಾತರು ಎಂಬ ಕಾರಣದಿಂದ ಅವರ ಭಾಷೆ, ಲಿಪಿ ಅಥವ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಕ್ಕಿಗಾಗಿ ೨೯ನೆಯ ವಿಧಿ ರಕ್ಷಣೆ ನೀಡುತ್ತದೆ. ಅಲ್ಪಸಂಖ್ಯಾತರು ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ೩೦ನೆಯ ವಿಧಿ ಅವಕಾಶ ಕೊಡುತ್ತದೆ. ಧರ್ಮ ಅಥವ ಭಾಷೆ ಹೆಸರಿನಲ್ಲಿ ಇಂತಹ ಸಂಸ್ಥೆಗಳಿಗೆ ತಾರತಮ್ಯ ತೋರದಂತೆ ಸಹ ಹೇಳಲಾಗಿದೆ. ಅಲ್ಪ ಸಂಖ್ಯಾತರು ಎಲ್ಲರಂತೆ ಸಾಮಾನ್ಯ ನಾಗರಿಕ ಹಕ್ಕುಗಳನ್ನು ಹೊಂದಿದ್ದು, ಅನುಭವಿಸುತ್ತಿದ್ದು ಇದು ಭಾರತದ ಹೆಗ್ಗಳಿಕೆಯಾಗಿದೆ. ಆದರೂ ಅವರಿಗೆ ಇತರರಿಗಿಂತ ಹೆಚ್ಚು ಸೌಲಭ್ಯ, ಅವಕಾಶಗಳನ್ನು ಕೊಡಲು ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪೈಪೋಟಿ ಮಾಡುತ್ತಿರುವುದಕ್ಕೆ ಕಾರಣ ನಿಚ್ಛಳವಾಗಿದೆ. ಅವರನ್ನು ಓಟು ಬ್ಯಾಂಕುಗಳಾಗಿ ಪರಿವರ್ತಿಸುವ ಏಕೈಕ ಕಾರಣ ಇಂತಹ ಓಲೈಸುವಿಕೆಯಲ್ಲಿದೆ ಎಂದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಇದರ ಫಲವಾಗಿ ಅವರುಗಳೂ ಸಹ ತಮ್ಮ ಬೇಕುಗಳನ್ನು ಹಕ್ಕು ಎಂಬಂತೆಯೇ ಮಂಡಿಸಿ ಪಡೆದುಕೊಳ್ಳುತ್ತಿವೆ. ಅಲ್ಪಸಂಖ್ಯಾತರು ಎಂಬ ಕಾರಣದಿಂದ ಶೈಕ್ಷಣಿಕ ಹಕ್ಕುಗಳಿಗೆ ಸಂಬಂಧಿಸಿ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದಕ್ಕೆ ಮಾತ್ರ ಅವಕಾಶವಿದೆ. ಅವರ ಉಳಿದೆಲ್ಲಾ ಹಕ್ಕುಗಳು ಸಾಂವಿಧಾನಿಕವಾಗಿ ರಕ್ಷಿತವಾಗಿರುವುದರಿಂದ ಅವರಿಗಾಗಿಯೇ ಪ್ರತ್ಯೇಕ ಸೌಲಭ್ಯಗಳು, ವಿನಾಯಿತಿಗಳನ್ನು ಕೊಡುವುದು ಸಂವಿಧಾನ ವಿರೋಧಿ ಕ್ರಮವಷ್ಟೇ ಅಲ್ಲದೆ ಅವರನ್ನು ಇತರರಿಂದ ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳುವ ಹಾಗೂ  ಜಾತ್ಯಾತೀತತೆ ಎಂಬ ಪದಕ್ಕೆ ಅಪಚಾರ ಮಾಡುವ ಕ್ರಮವಾಗುತ್ತದೆ. ಮುಸ್ಲಿಮರಿಗಾಗಿಯೇ ಸರ್ಕಾರಿ ಉದ್ಯೋಗದಲ್ಲಿ ಶೇ. ೫ರಷ್ಟು ಮೀಸಲಾತಿ ನಿಗದಿಸಿದ ಆಂಧ್ರ ಸರ್ಕಾರದ ಕ್ರಮವನ್ನು ನ್ಯಾಯಾಲಯ ಅನೂರ್ಜಿತಗೊಳಿಸಿರುವುದು ಓಲೈಕೆ ರಾಜಕಾರಣ ಮಾಡುವವರ ಕಣ್ತೆರೆಸಬೇಕು. ಅಷ್ಟಾದರೂ ಲೋಕಸಭಾ ಚುನಾವಣೆಯ ವೇಳೆ ಇಂತಹ ಮೀಸಲಾತಿ ನಿಗದಿಸುವುದಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಮುಂತಾದ ಜಾತ್ಯಾತೀತವೆಂದು ಕರೆದುಕೊಳ್ಳುವ ಪಕ್ಷಗಳು ಘೋಷಿಸಿದ್ದು ಅವರುಗಳ ಓಟು ಪಡೆಯುವ ಸಲುವಾಗಿಯೇ ಆಗಿತ್ತು. ಓಟಿಗಾಗಿ ಸಂವಿಧಾನದ ವಿಧಿಗಳನ್ನೇ ಉಲ್ಲಂಘಿಸುವ ಮಾತನಾಡುವುದು ಎಷ್ಟು ಸರಿ ಎಂಬುದನ್ನು ಪ್ರಜ್ಞಾವಂತರು ಯೋಚಿಸಬೇಕು. ಭಾರತದ ಅಲ್ಪ ಸಂಖ್ಯಾತರ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಉದ್ದೇಶಿಸಿದ್ದ ೨೦೦೪ರ ಸಂವಿಧಾನ ತಿದ್ದುಪಡಿ ಮಸೂದೆ ಈಗ ಲ್ಯಾಪ್ಸ್ ಆದ ಸ್ಥಿತಿಯಲ್ಲಿದೆ. ಸರ್ವೋಚ್ಛ ನ್ಯಾಯಾಲಯವು ಅಲ್ಪ ಸಂಖ್ಯಾತರು ಎಂಬುದಕ್ಕೆ ನಿರ್ಧರಿಸಲು ಮಾನದಂಡಗಳ ಬಗ್ಗೆ ನಿಗದಿಸಲು ಸರ್ಕಾರಕ್ಕೆ ಸೂಚಿಸಿದೆ. ಈ ಕೆಲಸ ಇನ್ನೂ ಆಗಬೇಕಿದೆ. ಸರ್ಕಾರವು ಮುಸ್ಲಿಮರು, ಕ್ರಿಶ್ಚಿಯನರು, ಸಿಕ್ಖರು, ಬೌದ್ಧರು ಮತ್ತು ಪಾರ್ಸಿಗಳನ್ನು ಅಲ್ಪಸಂಖ್ಯಾತರೆಂದು ಗುರುತಿಸಿದೆ. 
     ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪ್ರೊ. ಜೋಯ ಹಸನ್ ಒಂದು ಲೇಖನದಲ್ಲಿ ಪ್ರತಿಪಾದಿಸಿರುವ ಅಂಶಗಳಿವು: "ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸಿ ಅಲ್ಪಸಂಖ್ಯಾತರನ್ನು ಗುರುತಿಸುವ ವಿಧಾನದ ಬಗ್ಗೆ ಕೇಂದ್ರ ಸಂಪುಟ ಪ್ರಸ್ತಾವನೆಯನ್ನು ಒಪ್ಪಿದೆಯೆಂದು ಹೇಳಲಾಗಿದೆ. ಈ ಸಮಾಲೋಚನೆಯಿಂದ ಮೇಲೆ ಹೇಳಿದ ಐದು ಅಲ್ಪಸಂಖ್ಯಾತರಲ್ಲದೆ (ಮುಸ್ಲಿಮರು, ಕ್ರಿಶ್ಚಿಯನರು, ಸಿಕ್ಖರು, ಬೌದ್ಧರು ಮತ್ತು ಪಾರ್ಸಿಗಳು) ಹೊಸದಾಗಿಯೂ ಅಲ್ಪಸಂಖ್ಯಾತರನ್ನು ಗುರುತಿಸಲು ಉದ್ದೇಶಿಸಿದೆ. ಸಂವಿಧಾನವು ಅಲ್ಪಸಂಖ್ಯಾತರ ಕುರಿತು ವಿವರಿಸಿಲ್ಲವಾದರೂ, ಈ ಅಲ್ಪಸಂಖ್ಯಾತ ಅನ್ನುವುದನ್ನು ರಾಷ್ಟ್ರಮಟ್ಟದಲ್ಲಿ ನಿರ್ಧರಿಸುವ ಅಗತ್ಯವಿದೆ. ಹಲವಾರು ವರ್ಷಗಳಲ್ಲಿ ನ್ಯಾಯಾಂಗವು ಅಲ್ಪಸಂಖ್ಯಾತ ಅನ್ನುವುದರ ವ್ಯಾಖ್ಯೆಯನ್ನು ಶಿಕ್ಷಣಕ್ಕೆ ಸೀಮಿತಗೊಳಿಸಿ ವ್ಯಾಖ್ಯಾನಿಸಿದೆ. ಈ ಕುರಿತು ರಾಷ್ಟ್ರವ್ಯಾಪಿ ನಿರ್ಧಾರಕ್ಕೆ ಬರಬೇಕು. ಅಂತರ ರಾಷ್ಟ್ರೀಯವಾಗಿ ಕೆಲವು ನಿದರ್ಶನಗಳಿವೆ. ಸಾಮಾನ್ಯವಾಗಿ ಗುಂಪುಗಳು ತಾರತಮ್ಯಕ್ಕೆ ಒಳಗಾಗುವ ಗುಣವಿಶೇಷಗಳೆಂದರೆ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಲಿಂಗ. ಅಲ್ಪಸಂಖ್ಯಾತ ಅನ್ನುವುದು ಅಧಿಕಾರದ ಸಂಬಂಧಕ್ಕೂ ಅನ್ವಯಿಸುತ್ತದೆ. ಈಗಿನ ಪ್ರಸ್ತಾವನೆ ಅಂಕಿ-ಅಂಶಗಳನ್ನು ಆಧರಿಸಿ ನಿರ್ಧಾರಕ್ಕೆ ಬರುವುದನ್ನು ಹೇಳುತ್ತದೆ. ಇದು ಗುಣಾತ್ಮಕವಾಗಿ ಸರಿಯಾಗಲಾರದು. ಅಲ್ಪಸಂಖ್ಯಾತ ಅನ್ನುವುದಕ್ಕೆ ಒಂದು ಹೆಚ್ಚಿನ ಅರ್ಥಪೂರ್ಣ ರೀತಿಯಲ್ಲಿ ನೋಡಬೇಕೆಂದರೆ ದೇಶದಲ್ಲಿ ಅವರು ದೇಶದಲ್ಲಿ (ನಿರ್ದಿಷ್ಟ ರಾಜ್ಯದಲ್ಲಲ್ಲ) ಪ್ರಭಾವಯುತವಾದ ಪ್ರಧಾನ ಅಧಿಕಾರದ ಸ್ಥಾನಗಳಲ್ಲಿ ಇರದಿರುವುದು, ಪ್ರತಿನಿಧಿಸದಿರುವುದು ಅಥವ ಕಡಿಮೆ ಸಂಖ್ಯೆಯಲ್ಲಿ ಪ್ರತಿನಿಧಿಸಿರುವುದು, ಇವುಗಳನ್ನು ಪರಿಗಣಿಸಬೇಕು. ಇದರಿಂದ ಅಲ್ಪಸಂಖ್ಯಾತರು ತಮ್ಮ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವದನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ." ಅಧಿಕಾರಕೇಂದ್ರಿತವಾಗಿ ಅಲ್ಪಸಂಖ್ಯಾತ ಅನ್ನುವುದನ್ನು ಗುರುತಿಸುವ ಕ್ರಮವನ್ನು ಒತ್ತಾಸುವ ಈ ವಿಚಾರದ ಹಿಂದಿರುವ ಅಪಾಯವನ್ನು ನಾಗರಿಕರು ಅರಿಯಬೇಕು. ಇದು ಸಂವಿಧಾನ ವಿರೋಧಿಯಾಗಿದ್ದು ಭಾರತದ ಜಾತ್ಯಾತೀತ ನೀತಿಗೆ ಸಲ್ಲದುದಾಗಿದೆ.

   ಸಂವಿಧಾನದ ೧೯ನೆಯ ವಿಧಿಯಲ್ಲಿ ಭಾರತದ ಪ್ರಜೆಗಳಿಗೆ ದತ್ತವಾಗಿರುವ ಸ್ವಾತಂತ್ರ್ಯಗಳ ವಿವರಗಳಿವೆ. ಇದರಲ್ಲಿ ಯಾರನ್ನೇ ಆಗಲಿ ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿ, ಇತ್ಯಾದಿಗಳ ಹೆಸರಿನಲ್ಲಿ ತಾರತಮ್ಯ ಮಾಡಲಾಗಿಲ್ಲ. ಆದರೆ ಅಂತಹ ಪ್ರತಿಯೊಂದು ಸ್ವಾತಂತ್ರ್ಯಕ್ಕೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ಬಂಧವಿದೆ - ಅದು ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದ ಸಮರ್ಥನೀಯ ನಿರ್ಬಂಧ - ಅದೆಂದರೆ ರಾಷ್ಟ್ರದ ಭದ್ರತೆ. ಸಂವಿಧಾನ ರಚನಾಕಾರರು ರಾಷ್ಟ್ರದ ರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಸರ್ವೋಚ್ಛ ನ್ಯಾಯಾಲಯದ ಜಸ್ಟಿಸ್ ಆಗಿದ್ದ ಶ್ರೀ ಕೆ.ಟಿ. ಥಾಮಸ್ ಅವರು 'ವೋಟು ಬ್ಯಾಂಕುಗಳ ಸಲುವಾಗಿ ದೇಶದ ಭದ್ರತೆಯ ವಿಷಯಗಳಲ್ಲಿ ಸರ್ಕಾರ ಅನೇಕ ರೀತಿಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡು ನಾನು ವಿಚಲಿತನಾಗಿದ್ದೇನೆ' ಎಂದು ಸಾರ್ವಜನಿಕವಾಗಿ ಹೇಳಿದ್ದುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಉಗ್ರಗಾಮಿಗಳು ಒಂದು ಕೋಮಿಗೆ ಸೇರಿದವರೆಂದು, ಅವರ ವಿರುದ್ಧದ ಕ್ರಮಗಳಿಂದ ಅವರ ಕೋಮಿನ ಮತಗಳಿಕೆಗೆ ಅಡ್ಡಿಯಾಗುತ್ತದೆಂದು ಮೃದುಧೋರಣೆ ವಹಿಸುವುದು, ನೆರೆರಾಷ್ಟ್ರದ ಅಪ್ರಚೋದಿತ ದಾಳಿಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದುದು, ಇತ್ಯಾದಿಗಳು ರಾಷ್ಟ್ರದ ಭದ್ರತೆಗಿಂತ ಮತಗಳಿಕೆ ಮುಖ್ಯವಾಗಿತ್ತಂಬುದನ್ನು ತೋರಿಸುತ್ತವೆ. ಅಪರಾಧಗಳನ್ನು ಯಾರು ಮಾಡಿದರೂ ಅಪರಾಧವೇ. ಆದರೆ ಅಲ್ಪಸಂಖ್ಯಾತರ ವಿರುದ್ಧದ ಆರೋಪಗಳನ್ನು ಮೃದುವಾಗಿ ಪರಿಗಣಿಸಬೇಕೆಂಬ ಸುತ್ತೋಲೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸುವುದರ ಹಿಂದಿನ ಉದ್ದೇಶ ತಿಳಿಯುವುದು ಕಷ್ಟವಲ್ಲ. ಬಾಂಗ್ಲಾ ನುಸುಳುಕೋರರ ಪರವಾಗಿ ಕಾಂಗ್ರೆಸ್ ಪಕ್ಷದ ಮತ್ತು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ನಾಯಕರು ಬಹಿರಂಗವಾಗಿ ಸಮರ್ಥಿಸುತ್ತಾರೆಂದರೆ ತಲುಪುವ ಸಂದೇಶವೇನು? ಗಡಿಯಾಚೆಗಿನ ನಿಷ್ಠೆ ಹೊಂದಿದ್ದು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವವರು, ದೇಶಕ್ಕಿಂತ ನಮಗೆ ಧರ್ಮ ಮುಖ್ಯವೆನ್ನುವವರು, ೧೫ ನಿಮಿಷ ಪೋಲಿಸರು ಸುಮ್ಮನಿದ್ದರೆ ಬಹುಸಂಖ್ಯಾತರನ್ನು ಹೊಸಕಿ ಹಾಕಿಬಿಡುತ್ತೇವೆಂದು ಘೋಷಿಸುವವರು, ಅವರನ್ನು ಬಹಿರಂಗವಾಗಿ ಬೆಂಬಲಿಸುವ ಸಾವಿರಾರು ಜನರು ಇರುವುದು, ಇತ್ಯಾದಿಗಳು ದೇಶದ ಭದ್ರತೆಗಿಂತ ಮತಗಳಿಕೆಗೆ ಪ್ರಾಧಾನ್ಯ ನೀಡಿ ಮಾಡಿದ ಓಲೈಕೆಯ ಫಲಗಳಾಗಿವೆ. ಭಾರತದ ರಕ್ಷಣಾ ಮಂತ್ರಿಯಾಗಿದ್ದ ಎ.ಕೆ. ಅಂಟನಿಯವರೇ, 'ಅಲ್ಪಸಂಖ್ಯಾತರ ಅತಿಯಾದ ಓಲೈಕೆಯೇ ಕಾಂಗ್ರೆಸ್ ಸೋಲಿಗೆ ಕಾರಣ' ಎಂದಿರುವುದು ಆಘಾತಕಾರಿ ನೈಜ ಸತ್ಯದ ಅನಾವರಣವಷ್ಟೆ. ಇತ್ತೀಚಿನ ಬೆಳವಣಿಗೆಯನ್ನೂ ನಾವು ಗಂಭೀರವಾಗಿ ನೋಡಬೇಕಿದೆ. ಇರಾಕಿಗೆ ತೆರಳಲು ಸಾವಿರಾರು ಮುಸ್ಲಿಮರು ವೀಸಾ ಕೇಳುತ್ತಿದ್ದಾರೆಂದು, ಹಲವರು ಶಿಯಾಗಳ ಪರವಾಗಿ, ಹಲವರು ಸುನ್ನಿಗಳ ಪರವಾಗಿ ಹೋರಾಡುವ ಸಲುವಾಗಿ ಹೋಗುತ್ತಿದ್ದಾರೆಂದು ಟಿವಿಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ದೇಶದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳು, ರಕ್ತಪಾತಗಳ ಬಗ್ಗೆ ಸುಮ್ಮನಿರುವ ಇವರು ಇರಾಕಿನ ಬೆಳವಣಿಗೆಗಳ ಬಗ್ಗೆ ಆಸಕ್ತರಾಗಿದ್ದಾರೆ ಅನ್ನುವುದು ಕಳವಳಕಾರಿ ವಿಷಯವಲ್ಲವೇ?  ದೇಶದ ಭದ್ರತೆ ಆಳುವ ಸರ್ಕಾರದ ಪ್ರಥಮ ಆದ್ಯತೆಯಾಗಲೇಬೇಕು. ಇಲ್ಲದಿದ್ದರೆ ವಿಭಜನಕಾರಿ ಶಕ್ತಿಗಳು ವಿಜೃಂಭಿಸುತ್ತವೆ. ಜಾತಿ, ಮತ, ಧರ್ಮದ ಹೆಸರಿನಲ್ಲಿ ಮಾಡುವ ಓಲೈಕೆಗಳು ಸಮಾಜವನ್ನು ವಿಭಜಿಸುವುದಷ್ಟೇ ಅಲ್ಲ, ದೇಶವನ್ನು ಕೆಳಕ್ಕೆ ಜಾರಿಸುವ ನಡೆಗಳು ಮತ್ತು ಜಾತ್ಯಾತೀತೆಗೆ ಮಾಡುವ ಅಪಚಾರವಾಗುತ್ತದೆ.
      ಝಾಕಿರ್ ಹುಸೇನರು ಭಾರತದ ರಾಷ್ಟ್ರಪತಿಯಾದಾಗ ಜರ್ನಲಿಸ್ಟ್ ಟಿ.ವಿ.ಆರ್. ಶೆಣೈರವರು ಅವರನ್ನು ಕಂಡು, "ರಾಷ್ಟ್ರಪತಿಜಿ, ನಾನು ತಮ್ಮನ್ನು ಅಭಿನಂದಿಸುತ್ತೇನೆ, ಎಕೆಂದರೆ ಇದು ಒಂದು ಭಾರತದಲ್ಲಿನ ಜಾತ್ಯಾತೀತೆಯ ದೊಡ್ಡ ಜಯ" ಎಂದಿದ್ದರು. ಝಾಕಿರ್ ಹುಸೇನರು 'ಇದು ಯಾವ ರೀತಿಯಲ್ಲಿ ಜಾತ್ಯಾತೀತತೆಯ ವಿಜಯ?' ಎಂದು ಕೇಳಿದರು. 'ಒಬ್ಬ ಮುಸ್ಲಿಮ್ ಭಾರತದ ರಾಷ್ಟ್ರಪತಿಯಾಗುತ್ತಾರೆಂದರೆ ಅದು ಜಾತ್ಯಾತೀತತೆಯ ದೊಡ್ಡ ವಿಜಯ'ವೆಂಬುದು ಶೆಣೈರವರ ಉತ್ತರ. ಝಾಕಿರ್ ಹುಸೇನರು ಅವರೆಡೆಗೆ ನೋಡಿ ಮುಗುಳ್ನಕ್ಕರು. ಶೆಣೈ ಕೇಳಿದರು, "ಏಕೆ ರಾಷ್ಟ್ರಪತಿಜಿ, ನೀವು ನನ್ನನ್ನು ನೋಡಿ ನಗುತ್ತಿದ್ದೀರಿ?" ಅವರು ಉತ್ತರಿಸಿದರು, "ಶೆಣೈ, ಜಾತ್ಯಾತೀತತೆಯ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ನನಗೆ ನಗು ಬಂತು." ಅವರು ಮುಂದೆ ಹೇಳಿದರು, "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!" ಇದು ಜಾತ್ಯಾತೀತತೆಯ ನೈಜ ವ್ಯಾಖ್ಯಾನ. ಜಾತ್ಯಾತೀತತೆಗೂ ಧರ್ಮಕ್ಕೂ, ಜಾತಿಗಳಿಗೂ ಯಾವುದೇ ಸಂಬಂಧವಿಲ್ಲ, ಸಂಬಂಧ ಕಲ್ಪಿಸಲೂಬಾರದು. ನಮ್ಮ ನಮ್ಮ ನಂಬಿಕೆಗಳು, ಜಾತಿಗಳು, ಧರ್ಮಗಳು ಏನೇ ಇರಲಿ ಅವು ನಮಗೆ ಸಂಬಂಧಿಸಿದ ವೈಯಕ್ತಿಕ ವಿಷಯಗಳು. ಅವನ್ನು ಉಳಿಸಿಕೊಳ್ಳುವುದು, ಬೆಳೆಸುವುದು ನಮಗೆ ಬಿಟ್ಟಿದ್ದು. ಆದರೆ ನಮ್ಮ ಪ್ರಾಥಮಿಕ ನಿಷ್ಠೆ ಮಾತ್ರ ಈ ದೇಶಕ್ಕೆ ಇರಬೇಕು. ಆಗ ಮಾತ್ರ ಈ ದೇಶಕ್ಕೆ ಉಳಿವು.
-ಕ.ವೆಂ.ನಾಗರಾಜ್.
**************
   Article 29 in The Constitution Of India 1949
    29. Protection of interests of minorities
(1) Any section of the citizens residing in the territory of India or any part thereof having a distinct language, script or culture of its own shall have the right to conserve the same
(2) No citizen shall be denied admission into any educational institution maintained by the State or receiving aid out of State funds on grounds only of religion, race, caste, language or any of them
Article 30 in The Constitution Of India 1949
30. Right of minorities to establish and administer educational institutions
(1) All minorities, whether based on religion or language, shall have the right to establish and administer educational institutions of their choice
(1A) In making any law providing for the compulsory acquisition of any property of an educational institution established and administered by a minority, referred to in clause ( 1 ), the State shall ensure that the amount fixed by or determined under such law for the acquisition of such property is such as would not restrict or abrogate the right guaranteed under that clause
(2) The state shall not, in granting aid to educational institutions, discriminate against any educational institution on the ground that it is under the management of a minority, whether based on religion or language.
***********
ದಿ.20.7.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:



ಮಂಗಳವಾರ, ಆಗಸ್ಟ್ 4, 2015

ಸಂಬಂಧದ ಅನುಬಂಧ


     ಈ ದೇವರ ಸೃಷ್ಟಿಯ ರಹಸ್ಯ ದೇವರು ಮಾತ್ರ ಬಲ್ಲ. ಜೀವಿಯ ಬದುಕು ತನ್ನಿಂದ ತಾನೇ ಪರಿಪೂರ್ಣ ಆಗದಂತಹ, ಒಂದಲ್ಲಾ ಒಂದು ರೀತಿಯಲ್ಲಿ ಇನ್ನೊಂದನ್ನು ಅವಲಂಬಿಸಲೇಬೇಕಿರುವ ಸ್ಥಿತಿ ಸಂಬಂಧಗಳಿಗೆ ಕಾರಣವಾಗಿದೆ. ಸೃಷ್ಟಿಯ ಮೂಲವೂ ಸಂಬಂಧದಿಂದಲೇ ಆರಂಭವಾಗುತ್ತದೆ. ಮೂರು ಸಂಗತಿಗಳು, ಜಗತ್ತು, ಜೀವ ಮತ್ತು ದೇವ, ಮೊದಲಿನಿಂದಲೂ ಬಹುತೇಕ ಎಲ್ಲಾ ಜಿಜ್ಞಾಸೆಗಳು, ತರ್ಕಗಳು, ಚರ್ಚೆಗಳು, ಸಿದ್ಧಾಂತಗಳ ಮೂಲವಾಗಿವೆ. ಪರಮಾತ್ಮ ಅನಾದಿ, ಅನಂತ, ಸ್ಟೃಕರ್ತ, ಸರ್ವವ್ಯಾಪಿ, ಸರ್ವಶಕ್ತನೆಂದು ಎಲ್ಲಾ ಆಸ್ತಿಕರು ನಂಬುತ್ತಾರೆ. ಆಸ್ತಿಕರಲ್ಲದವರೂ ಸಹ ಈ ಬ್ರಹ್ಮಾಂಡದ ಸ್ಥಿತಿಗೆ ಕಾರಣವಾದ ಯಾವುದೋ ಒಂದು ಶಕ್ತಿ ಇದೆಯೆನ್ನುವುದನ್ನು ಒಪ್ಪುತ್ತಾರೆ. ಈ ಮೂರು ಸಂಗತಿಗಳೂ ಪರಸ್ಪರ ಸಂಬಂಧವೆಂಬ ಬಂಧಕ್ಕೊಳಪಟ್ಟಿವೆ.
     ನಾವು ಪ್ರಕೃತಿ ಎಂದು ಕರೆಯುವ ಈ ಜಡಜಗತ್ತು ಸೃಷ್ಟಿಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ, ಶೂನ್ಯದಿಂದ ಸೃಷ್ಟಿಸಿದ ಎಂದು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಸಾಕ್ಷೀಭೂತನಾಗಿದ್ದು ಈ ಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವವನು ಭಗವಂತನೆನ್ನಬಹುದು.
     ಜೀವಾತ್ಮ ಸಹ ಪರಮಾತ್ಮನಂತೆ ಅನಾದಿ, ಅನಂತವೆಂಬುದು ಸನಾತನ ಧರ್ಮದ ತಿರುಳಾಗಿದೆ. ಕರ್ಮ ಸಿದ್ಧಾಂತ ಮತ್ತು ಪುನರ್ಜನ್ಮ ಸಿದ್ಧಾಂತಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಈ ವಿಚಾರದಲ್ಲಿ ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿರುವುದರಿಂದ ಇದನ್ನು ಇಲ್ಲಿ ವಿಸ್ತೃತವಾಗಿ ಚರ್ಚಿಸದೆ ಮುಂದುವರೆಯೋಣ. ಒಟ್ಟಾರೆಯಾಗಿ ಜಗತ್ತು, ಜೀವ ಮತ್ತು ದೇವರು ಸಂಬಂಧದ ಮೂಲಗಳಾಗಿದ್ದು, ಸಂಬಂಧ ಅನ್ನುವುದು ನಮ್ಮ ಬದುಕಿನ ಬಿಡಿಸಲಾಗದ ಬಂಧವಾಗಿದೆ. ಮಾನವ ಸಂಬಂಧಗಳ ಕುರಿತ ವಿಶ್ಲೇಷಣೆಗೆ ಇದು ಪೀಠಿಕೆಯಾಗಿದೆ.
     ಜೀವಿಯ ದೇಹ ಪಂಚಭೂತಗಳಿಂದ ಕೂಡಿದುದಾಗಿದೆ. ದೇವನ ಅದ್ಭುತ ಚಮತ್ಕಾರದ ದೇಹವೆಂಬ ರಚನೆಗೆ ಚೈತನ್ಯ ನೀಡಿರುವುದು ದೇಹದೊಳಗಿನ ಜೀವಾತ್ಮವಾಗಿದೆ. ಜೀವಾತ್ಮ ಅನಂತ, ಅನಾದಿಯೆಂದು ಕರೆಯಲ್ಪಟ್ಟುದಾದರೂ, ಹೊಸ ಜನ್ಮ ಅಥವ ಹುಟ್ಟಿನೊಂದಿಗೆ ಅಪ್ಪ-ಅಮ್ಮ ಎಂಬ ಮಾಧ್ಯಮದ ಮತ್ತು ಪಂಚಭೂತಗಳ ಸಂತುಲಿತ ಸಂಯೋಗದ ಸಂಬಂಧವನ್ನು ಹೊತ್ತು ತರುತ್ತದೆ. ಬೆಳೆಯುತ್ತಾ ಕುಟುಂಬದ ಇತರ ಸದಸ್ಯರು, ಸ್ನೇಹಿತರು, ಬಂಧುಗಳ ಸಂಬಂಧ ಉಂಟಾಗುತ್ತದೆ. ದೈನಂದಿನ ಅವಶ್ಯಕತೆ, ಬೆಳವಣಿಗೆ, ಇತ್ಯಾದಿಗಳಿಗಾಗಿ ಜೀವಿಗಳು ಕುಟುಂಬದ, ಸಮುದಾಯದ, ಗ್ರಾಮದ, ರಾಜ್ಯದ, ದೇಶದ ಇತರರ ಸಹಕಾರ ಪಡೆಯಬೇಕಾಗುತ್ತದೆ, ಅವಲಂಬಿಸಬೇಕಾಗುತ್ತದೆ. ಆಶ್ರಯ, ಆಹಾರ, ಮುಂತಾದುವುಗಳಿಗಾಗಿ ಪ್ರಕೃತಿಯನ್ನೂ ಅವಲಂಬಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಹಿರಿಯರು ಪ್ರತಿಯೊಬ್ಬರೂ ಮೂರು ವಿಧದ ಋಣಗಳಿಗೆ -ಪಿತೃಋಣ, ಆಚಾರ್ಯ ಋಣ ಮತ್ತು ದೇವ ಋಣ- ಬಾಧ್ಯಸ್ತರು ಎಂದಿರುವುದು!
     ಪಿತೃಋಣ ತೀರಿಸುವುದು ಎಂದರೆ ಸಾಮಾನ್ಯವಾಗಿ ಮೃತರಾದ ಹಿರಿಯರಿಗೆ ಮಾಡುದ ಶ್ರಾದ್ಧಾದಿ ಕರ್ಮಗಳು ಎಂತಲೇ ಭಾವಿಸುತ್ತಾರೆ. ಮೃತರಾದ ನಂತರದಲ್ಲಿ ಮಾಡಲಾಗುವ ಉತ್ತರಕ್ರಿಯೆ, ತಿಥಿ, ಶ್ರಾದ್ಧ, ಇತ್ಯಾದಿಗಳಿಂದ ಪಿತೃಋಣ ತೀರುತ್ತದೆಯೇ ಎಂಬುದು ಪ್ರಶ್ನೆ. ಯಾವುದೇ ಜನ್ಮದಲ್ಲಿ ಯಾವುದೇ ಜೀವಿ ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಮುಂತಾದುವನ್ನು, ಅಷ್ಟೇ ಏಕೆ, ತನ್ನ ಶರೀರ ಮಾತ್ರವಲ್ಲ, ಕನಿಷ್ಠ ತಾನು ಧರಿಸಿದ್ದ ವಸ್ತ್ರವನ್ನಾಗಲೀ ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿದ್ದಿಲ್ಲ. ಹೀಗಿರುವಾಗ ಬೇರೊಬ್ಬರು ಅವರಿಗೆ ಸದ್ಗತಿಗಾಗಿ ಸಹಾಯ ಮಾಡಲು ಸಾಧ್ಯವಿದೆಯೇ?   ವೇದದ ಈ ಮಂತ್ರ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಜೀವಿ ತಾನು ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗನುಸಾರವಾಗಿ ಫಲ ಅನುಭವಿಸುವುದು ಶತಸ್ಸಿದ್ಧವಂದಾದಾಗ ಅದನ್ನು ಬೇರೊಬ್ಬರು, ಮಧ್ಯವರ್ತಿಗಳು ಶ್ರಾದ್ಧಾದಿ ಕರ್ಮಗಳ ಮೂಲಕ ಬದಲಾಯಿಸಲು ಸಾಧ್ಯವೇ? ಸಾಧ್ಯವೆಂದಾದಲ್ಲಿ, ಇದು ವೇದಗಳು ಮತ್ತು ಭಗವದ್ಗೀತೆ ಉಪದೇಶಿಸುವ ನೀತಿಗೆ ವಿರುದ್ಧವಾಗುತ್ತದೆ. ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿದು ಆರೋಗ್ಯ ಸರಿಪಡಿಸಿಕೊಳ್ಳಬೇಕು. ಬೇರೆ ಯಾರೋ ಔಷಧಿ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬಳಕೆಯಲ್ಲಿರುವ ಶ್ರಾದ್ಧಾದಿ ಕರ್ಮಗಳಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆಂಬುದು, ಸಾಮಾನ್ಯ ಜ್ಞಾನವನ್ನು, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಅಲ್ಲಗಳೆಯುವ ಸಂಗತಿ. ಬದುಕಿದ್ದಾಗ ಏನು ಬೇಕಾದರೂ ಮಾಡಿಬಿಡಬಹುದು, ಯಾರ ತಲೆಯನ್ನಾದರೂ ಒಡೆದು ಸಂಪತ್ತು ದೋಚಬಹುದು, ಸತ್ತ ನಂತರದಲ್ಲಿ ಮಕ್ಕಳು ಲಕ್ಷಾಂತರ ರೂ. ವೆಚ್ಚ ಮಾಡಿ ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬ ವಾದದಂತೆಯೇ ಇದು! ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯೇಷ್ಟಿಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳಿಗೆ ಈಗ ತಿಳಿದಿರುವಂತೆ ಸಮರ್ಥನೆ ಕಾಣುವುದಿಲ್ಲ. ಇಂತಹ ಯಾವುದೇ ಕ್ರಿಯೆಗಳು ಮೃತರ ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.
     ಶ್ರಾದ್ಧ ಕರ್ಮಾದಿಗಳನ್ನು ಮಾಡುವುದರಿಂದ ಆತ್ಮ ಸದ್ಗತಿ ಪಡೆಯುವುದಿಲ್ಲವೆಂದಾದರೆ ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಈ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರು ಪೂರ್ಣ ಮಾಡದೆ ಉಳಿಸಿದ್ದ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಜವಾದ ಅರ್ಥದ ಶ್ರಾದ್ಧವೆನಿಸುತ್ತದೆ. ಮೃತರ ನೆನಪಿನಲ್ಲಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. ಈ ವೇದಮಂತ್ರ ಹೇಳುತ್ತದೆ:
ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ || (ಋಕ್.೧೦.೧೪.೮.)
     ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕನಾದ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ, ಶರೀರದೊಂದಿಗೆ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ? ಹಾಗಾದರೆ ಈ ಶ್ರಾದ್ಧವನ್ನು ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಅವರು ಜೀವಂತವಿದ್ದಾಗ ಕೀಳಾಗಿ ಕಂಡು, ಅವಮಾನಿಸಿ, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಏನು ಪ್ರಯೋಜನ? ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದೇ ಪಿತೃಋಣವನ್ನು ತೀರಿಸುವ ಉತ್ತಮ ರೀತಿಯಾಗಿದೆ.
     ಆಚಾರ್ಯ ಋಣವನ್ನು ತೀರಿಸುವುದೆಂದರೆ ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದೇ ಆಗಿದೆ. ಇಲ್ಲಿ ಆಚಾರ್ಯರು ಎಂದರೆ ಕೇವಲ ನಮಗೆ ಜ್ಞಾನ, ಅನುಭವಗಳನ್ನು ಕೊಡುವ ಎಲ್ಲರೂ ಆಚಾರ್ಯರೇ! ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳು, ವಿಸ್ಮಯಕರ ಪ್ರಕೃತಿ, ಮುಂತಾದ ಎಲ್ಲವುಗಳಿಂದಲೂ ನಾವು ಒಂದಿಲ್ಲೊಂದು ರೀತಿಯ ಪಾಠವನ್ನು ಕಲಿತಿರುತ್ತೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ.
     ದೇವಋಣವನ್ನು ತೀರಿಸುವುದೆಂದರೆ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಧೂಪ-ದೀಪ-ನೈವೇದ್ಯ ಮಾಡಿ ಕೃತಕೃತ್ಯರಾದೆವೆಂದುಕೊಳ್ಳುವುದಲ್ಲ, ಪ್ರಾರ್ಥಿಸುವುದಲ್ಲ. ಈ ಕ್ರಿಯೆಗಳು ಕೇವಲ ಆತ್ಮೋನ್ನತಿಯ ಸಲುವಾಗಿ ಅಷ್ಟೇ. ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿರ್ಮಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊತ್ತು, ನಮ್ಮ ಮುಂದಿನ ಪೀಳಿಗೆಗೂ ಅವುಗಳು ಉಪಯೋಗವಾಗುವಂತೆ ಉಳಿಸಿಹೋಗುವುದೇ ನಿಜವಾಗಿ ದೇವಋಣವನ್ನು ತೀರಿಸುವ ಬಗೆಯಾಗಿದೆ.
-ಕ.ವೆಂ.ನಾಗರಾಜ್.
****************
ದಿನಾಂಕ 3.08.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: