ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜನವರಿ 30, 2015

ಮನೋಕೇಂದ್ರೀಕರಣ - ಯಶಸ್ಸಿಗೆ ಕಾರಣ



     ಹಿಂದಿನ ಲೇಖನದಲ್ಲಿ ನೆನಪಿನ ಶಕ್ತಿ ಅನ್ನುವುದು ಇಚ್ಛಾಶಕ್ತಿ ಅಥವ ಸಂಕಲ್ಪಕ್ಕಿಂತ ಮಿಗಿಲೆಂಬುದನ್ನು ಕಂಡುಕೊಂಡೆವು. ಈ ನೆನಪಿನ ಶಕ್ತಿಗಿಂತ ಮೇಲಿನ ಸಂಗತಿಯೊಂದಿದೆ. ಸಾಮಾನ್ಯ ನೆನಪಿಗಿಂತ ಮೇಲಿನದು ಮನೋಕೇಂದ್ರೀಕರಣ ಅಥವ ಧ್ಯಾನ. ಅದೊಂದು ಉತ್ತಮವಾದ ಗುಣ. ನಾವು ನಮ್ಮ ಎಷ್ಟರಮಟ್ಟಿಗೆ ಕೇಂದ್ರೀಕರಿಸಲು ಸಾಧ್ಯವೋ, ಅರ್ಥಾತ್ ಧ್ಯಾನಿಸುತ್ತೇವೆಯೋ, ಅಷ್ಟರ ಮಟ್ಟಿಗೆ ಇತರರಿಗಿಂತ ಮೇಲಿರುತ್ತೇವೆ. ಕೇಂದ್ರೀಕರಿಸುವುದೆಂದರೆ ಮನಸ್ಸಿನ ಸ್ಥಿರತೆ ಹೊಂದುವುದು. ಎಲ್ಲೆಲ್ಲಿ ನಾವು ಯಾವುದೇ ರೀತಿಯ ಧೃಡತೆಯನ್ನು, ಯಾವುದೇ ರೀತಿಯ ಸ್ಥಿರತೆಯನ್ನು ಕಾಣುತ್ತೇವೆಯೋ, ಅಲ್ಲಿ ಕೇಂದ್ರೀಕರಣ ಇರುವುದನ್ನು ಕಾಣುತ್ತೇವೆ. ಭೂಮಿ ತನ್ನ ಗುಣದಲ್ಲಿನ ಸ್ಥಿರತೆ, ಧೃಡತೆಯ ಕಾರಣದಿಂದ ಕೇಂದ್ರೀಕರಿಸಿದ ಸ್ಥಿತಿಯಲ್ಲಿದೆ. ಇದರಿಂದಾಗಿ ಪ್ರಕೃತಿಯಲ್ಲಿ ಯಾವುದೇ ಗೊಂದಲವನ್ನು ನಾವು ಕಾಣುವುದಿಲ್ಲ. ಪ್ರಕೃತಿಯ ವಿವಿಧ ಸಂಗತಿಗಳಲ್ಲಿ ಸ್ಥಿರತೆ ಇದೆ. ಈ ಸ್ಥಿರತೆಯ ಕಾರಣದಿಂದಲೇ ಭೂಮಿ, ಜಲ, ಸೂರ್ಯ, ಚಂದ್ರ, ನಕ್ಷತ್ರಗಳು, ಇವೆಲ್ಲವೂ ಇರುವೆಡೆಯಲ್ಲಿ ತಮ್ಮ ಸ್ವಭಾವಕ್ಕನುಗುಣವಾಗಿ ಸ್ಥಿರವಾಗಿವೆ, ಅರ್ಥಾತ್ ಧ್ಯಾನಿಸುತ್ತಿವೆ. (ಇಲ್ಲಿ ಸ್ಥಿರವಾಗಿವೆ ಎಂದರೆ ಚಲನೆಯಿಲ್ಲದೆ ಇವೆ ಎಂದು ಅರ್ಥವಲ್ಲ. ತಮ್ಮ ಚಲನೆ, ಇತ್ಯಾದಿ ಕಾರ್ಯ, ಗುಣಗಳ ವಿಚಾರದಲ್ಲಿ ಸ್ಥಿರವಾಗಿವೆ ಎಂದು!) ಅವುಗಳಿಗ್ಲೆ ತಮ್ಮ ತಮ್ಮಲ್ಲಿ ಗೊಂದಲವಿಲ್ಲ, ಸಂದೇಹವಿಲ್ಲ. ಯಾರಾದರೂ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಿದ್ದರೆ, ಅದು ಕೇಂದ್ರೀಕರಿಸುವ ಶಕ್ತಿಯ ಕಾರಣದಿಂದ ಆದದ್ದಾಗಿದೆ. ಅದು ದೇವರೇ ಆಗಿರಬಹುದು, ಮನುಷ್ಯನೇ ಆಗಿರಬಹುದು, ಮನಸ್ಸು ಕೇಂದ್ರೀಕರಿಸಿ ಮಾಡಿದ ಕಾರಣದಿಂದಲೇ ಯಶಸ್ಸು ಲಭಿಸಿರುವುದಾಗಿದೆ. ಯೋಚನೆಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದೇ ಯಶಸ್ಸಿನ ಕಾರಣವಾಗಿದೆ. ಮನಸ್ಸನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದು ಮತ್ತು ಆ ದಿಕ್ಕಿನಲ್ಲೇ ಸತತ ಪ್ರಯತ್ನದಿಂದ ಮನಸ್ಸನ್ನು ಆ ನಿರ್ದಿಷ್ಟ ವಿಚಾರದಿಂದ ಹೊರಳದಿರುವಂತೆ ನೋಡಿಕೊಳ್ಳುವುದೇ ಕೇಂದ್ರೀಕರಣ. ಒಂದು ನಿರ್ದಿಷ್ಟ ಸಂಗತಿಯೊಂದಿಗೆ ಕುರಿತು ಆತ್ಮಪೂರ್ವಕವಾಗಿ, ಬೇರೆ ಯೋಚನೆಗಳು ಬರದಂತೆ ನೋಡಿಕೊಂಡು, ಒಂದಾಗುವುದೇ ಕೇಂದ್ರೀಕರಣ. ಇದೇ ಧ್ಯಾನ!

     ಮನಸ್ಸಿನ ಇಂತಹ ಕ್ರಿಯೆಯಿಂದಾಗಿಯೇ ಪ್ರಪಂಚದಲ್ಲಿ ಜನರು ಮಹಿಮರಾಗುತ್ತಾರೆಯೇ ಹೊರತು, ಚಂಚಲಿತ ಚಿಂತನೆಗಳಿಂದಲ್ಲ. ನಾವು ನೂರು ಸಂಗತಿಗಳ ಕುರಿತು ಮನಸ್ಸನ್ನು ತೊಡಗಿಸಿಕೊಂಡರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಒಂದು ಸಲಕ್ಕೆ, ಒಂದು ಸಮಯಕ್ಕೆ ಒಂದು ವಿಷಯದ ಬಗ್ಗೆ ಆತ್ಮಪೂರ್ವಕವಾಗಿ, ಹೃದಯಪೂರ್ವಕವಾಗಿ ತೊಡಗಿಸಿಕೊಂಡರೆ ನಾವು ಯಶಸ್ವಿಯಾಗುತ್ತೇವೆ. ಇದೇ ಕೇಂದ್ರೀಕರಿಸುವ ಶಕ್ತಿಯ ಮಹತ್ವವಾಗಿದೆ. ಇಲ್ಲಿ ಮತ್ತೆ ಉತ್ತರಪ್ರದೇಶದ ಅರುಣಿಮಾ ಸಿನ್ಹ ನೆನಪಾಗುತ್ತಾಳೆ. ೧೧.೪.೨೦೧೧ರಂದು ಚಲಿಸುತ್ತಿದ್ದ ರೈಲಿನಲ್ಲಿ ದರೋಡೆಗೊಳಗಾಗಿ ಹೊರಗೆ ಎಸೆಯಲ್ಪಟ್ಟು ಪಕ್ಕದ ಹಳಿಯ ಮೇಲೆ ಬಿದ್ದಾಗ ಎದುರಿನಿಂದ ಬಂದಿದ್ದ ರೈಲಿನ ಅಡಿಯಲ್ಲಿ ಸಿಕ್ಕು ಎರಡು ಕಾಲುಗಳನ್ನೂ ಕಳೆದುಕೊಂಡ ೨೩ ವರ್ಷಗಳ ನತದೃಷ್ಟ ತರುಣಿ ಅವಳು. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಆಕೆಯನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಹಲವಾರು ತಿಂಗಳುಗಳು ನರಳಿದ ಅವಳಿಗೆ ಕೃತಕ ಮರದ ಕಾಲುಗಳನ್ನು ಅಳವಡಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಆಕೆ ಹಿಮಾಲಯ ಪರ್ವತ ಏರುವ ಕನಸು ಕಂಡಳು. ಆಸ್ಪತ್ರೆಯಿಂದ ಹೊರಬಿದ್ದ ಕೂಡಲೇ ಆಕೆ ಆ ದಿಸೆಯಲ್ಲಿ ಕಾರ್ಯಪ್ರವೃತ್ತಳಾದಳು. ಅಗತ್ಯ ತರಬೇತಿ, ಮಾರ್ಗದರ್ಶನ ಪಡೆದಳು. ೧.೪.೨೦೧೩ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ ೫೧ ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು ೨೧.೫.೨೦೧೩ರಂದು ತಲುಪಿಯೇಬಿಟ್ಟಳು! ಇದು ಅವಳ ಧೃಢ ಮನೋನಿರ್ಧಾರದಿಂದ ಲಭಿಸಿದ ವಿಜಯವಾಗಿತ್ತು! ಕೈ ಕಾಲುಗಳು ಗಟ್ಟಿಯಾಗಿರುವವರಿಗೇ ದುಸ್ಸಾಧ್ಯವೆನಿಸುವ ಸಾಹಸವನ್ನು ಈ ತರುಣಿಗೆ ಮಾಡಲು ಸಾಧ್ಯವಾಯಿತೆಂದರೆ ಆಕೆಯ ಮನೋಕೇಂದ್ರೀಕರಣದ ಶಕ್ತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ.
     ಕೇಂದ್ರೀಕರಿಸುವ ಶಕ್ತಿಯ ಕೊರತೆಯಿರುವವರು ಪ್ರಪಂಚದಲ್ಲಿ ಜಗಳಗಂಟರು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರಾಗಿರುತ್ತಾರೆ. ಅವರು ತಮ್ಮ ವಿಫಲತೆಗಳಿಗೆ ಕಥೆ ಕಟ್ಟುವವರಾಗಿರುತ್ತಾರೆ. ಮನಸ್ಸಿನ ಶಕ್ತಿಯನ್ನು ಕೇಂದ್ರೀಕರಿಸಬಲ್ಲವರು ಹಾಗಲ್ಲ, ಅವರು ತಮ್ಮ ಉದ್ದೇಶಗಳಿಗಾಗಿ ತಮ್ಮನ್ನು ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆಂದರೆ, ಅವರಿಗೆ ಉಪಯೋಗವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಅಂತಹವರೇ ದೊಡ್ಡವರು. ಆದ್ದರಿಂದ ಕೇಂದ್ರೀಕರಿಸಲು, ಧ್ಯಾನಿಸಲು ಮನಸ್ಸು ಮಾಡಬೇಕು.
     ಮನಸ್ಸನ್ನು ಕೇಂದ್ರೀಕರಿಸುವ ಅಭ್ಯಾಸದಿಂದ ಆಗುವ, ಸಿಗುವ ಫಲಿತಗಳ ಕುರಿತು ವಿವರಿಸುವುದು ಕಷ್ಟ, ಆದರೆ ಅದರಿಂದ ಬಹಳ ಅನುಕೂಲಗಳಿವೆ ಎಂಬುದು ನಿರ್ವಿವಾದ. ಯೋಗಾಭ್ಯಾಸ ಸಹ ಕೇಂದ್ರೀಕರಿಸುವ ಶಕ್ತಿಯ ಗಳಿಕೆಯ ಮಾರ್ಗವೇ ಆಗಿದೆ.  ಈ ಯೋಗಾಭ್ಯಾಸ ದೇಹ ಮತ್ತು ಮನಸ್ಸುಗಳ ಚೈತನ್ಯವೃದ್ಧಿಗೆ ಸಹಕಾರಿ. ಇದು ದೈಹಿಕ ಮತ್ತು ಮಾನಸಿಕ ಅಂಗಗಳನ್ನು ಸಹಜಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಕೃತಕ ಮಾರ್ಗಗಳಿಂದ, ಔಷಧಿಗಳಿಂದ ಗಳಿಸುವ ಆರೋಗ್ಯ ಸ್ಥಿರವಲ್ಲ. ಇದರಿಂದ ಅಡ್ಡಪರಿಣಾಮಗಳೂ ಆಗುತ್ತವೆ. ಆದರೆ ಯೋಗಾಭ್ಯಾಸದಿಂದ ದೀರ್ಘ ಮತ್ತು ಸ್ಥಿರವಾದ, ಅಡ್ಡಪರಿಣಾಮಗಳಿಲ್ಲದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಧ್ಯವಿದೆ. ಧೃಡವಾದ ಮಾನಸಿಕ ಆರೋಗ್ಯವಂತ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಲ್ಲ. ಮನೋನಿಗ್ರಹ, ಮನೋಕೇಂದ್ರೀಕರಣವಿಲ್ಲದಿದ್ದರೆ ಜೀವನದ ಯಾವುದೇ ಸಂಗತಿ ಅರ್ಥ ಕಳೆದುಕೊಳ್ಳುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದೋ ಅಷ್ಟರಮಟ್ಟಿಗೆ ಬಂಧಮುಕ್ತನಾಗಬಹುದು, ಸ್ವತಂತ್ರನಾಗಬಹುದು ಮತ್ತು ಜೀವನದಲ್ಲಿ ಯಶಸ್ವಿಯಾಗಬಹುದು.
     ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗುವುದು, ಮನಸ್ಸು ಹಗುರಾಗುವುದು, ಆಂತರಿಕ ಶಾಂತಿ ಲಭಿಸುವುದು. ಈ ಸ್ಥಿತಿಯಲ್ಲಿ ಸ್ಥಿತಪ್ರಜ್ಞತೆ ನಮ್ಮದಾಗುವುದು. ನೆನಪಿನ ಶಕ್ತಿ ಜಾಗೃತಗೊಳ್ಳುವುದು. ಮನಸ್ಸು ಸರಿಯಾದ ದಿಕ್ಕಿನಲ್ಲಿ ಚಲಿಸುವುದು. ಋಣಾತ್ಮಕ ಚಿಂತನೆಗಳು ಸರಿಯುವುವು. ಗುರಿ ಸಾಧನೆಗೆ ಇದು ಹೇಳಿ ಮಾಡಿಸಿದ ಸ್ಥಿತಿ. ಖಿನ್ನತೆ, ಉದ್ವೇಗ, ಆಸ್ತಮಾ, ರಕ್ತದ ಒತ್ತಡ, ನಿದ್ರಾಹೀನತೆ, ಕ್ಯಾನ್ಸರ್ ಮುಂತಾದ ಹಲವಾರು ಕಾಯಿಲೆಗಳಿಗೂ ಧ್ಯಾನ ಪರಿಣಾಮಕಾರಿಯಾದ ಪರಿಹಾರ ನೀಡುವುದೆಂದು ಸಂಶೋಧನೆಗಳು ಹೇಳುತ್ತವೆ.
     ಮನಸ್ಸನ್ನು ಕೇಂದ್ರೀಕರಿಸುವ ಮೊದಲು ಕೇಂದ್ರೀಕರಿಸುವುದರಿಂದ ಆಗುವ ಪರಿಣಾಮಗಳ ಅರಿವು ಮೊದಲು ಮನಸ್ಸಿಗೆ ಸ್ಪಷ್ಟವಾಗಬೇಕು. ಮನಸ್ಸನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕು, ಯಾವುದರ ಕುರಿತು ಧ್ಯಾನಿಸಬೇಕು ಎಂಬುದರ ಅರಿವಿಲ್ಲದೆ ಮಾಡುವ ಅರ್ಥವಿಲ್ಲದ ಧ್ಯಾನ ಫಲ ಕೊಡಲಾರದು. ಧ್ಯಾನಿಸುವ ವಿಧಾನ, ಧ್ಯಾನಿಸುವ ರೀತಿ, ಯಾವ ಉದ್ದೇಶಕ್ಕಾಗಿ ಮನಸ್ಸನ್ನು ಕೇಂದ್ರೀಕರಿಸುವುದು, ಧ್ಯಾನದ ಅಭ್ಯಾಸದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಇತ್ಯಾದಿಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಅರಿವು ಧ್ಯಾನ ಮಾಡುವ ಮೊದಲು ಇರಬೇಕಾದುದು ಅತ್ಯಂತ ಅಗತ್ಯ.
     ಎಲ್ಲಾ ಸಂಗತಿಗಳು, ಪಂಚಭೂತಗಳು (ವಾಯು, ಆಕಾಶ, ಜಲ, ನೆಲ, ಅಗ್ನಿ), ಪಡೆಯುವ ಯಾವುದೇ ವಿದ್ಯೆ, ದೇವರು ಮತ್ತು ಮಾನವ ಜೀವಿಗಳು, ಪ್ರಾಣಿಗಳು ಮತ್ತು ಪಕ್ಷಿಗಳು, ಗುಣಗಳು ಮತ್ತು ದೋಷಗಳು, ಒಳ್ಳೆಯದು ಮತ್ತು ಕೆಟ್ಟದ್ದು, ಸತ್ಯ ಮತ್ತು ಅಸತ್ಯ, ಸಂತೋಷಕರವಾದದ್ದು ಮತ್ತು ದುಃಖಕರವಾದದ್ದು, ಮತ್ತು ಇಂತಹ ಜೀವನದ ಏನೆಲ್ಲಾ ಸಂಗತಿಗಳಿಗೆ ಅರ್ಥ ಬರುವುದು ಅವುಗಳ ಕುರಿತು ಅರಿವು ಇದ್ದರೆ ಮಾತ್ರ. ಯಾವುದಾದರೂ ವಿಷಯದ ಕುರಿತು ನಮಗೆ ಗೊತ್ತಿದೆಯೆಂದರೆ ಅದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಅರ್ಥ. ಅರ್ಥ ತಿಳಿದಿಲ್ಲವೆಂದರೆ ಏನೂ ಗೊತ್ತಿಲ್ಲವೆಂದೇ ತಿಳಿಯಬೇಕು. ಜೀವನದ ಬಗ್ಗೆ ನಾವು ಎಷ್ಟು ತಿಳಿದುಕೊಳ್ಳುತ್ತೇವೆಯೋ ಅಷ್ಟರ ಮಟ್ಟಿಗೆ ನಾವು ಜೀವನವನ್ನು ಆಸ್ವಾದಿಸಬಲ್ಲೆವು. ವ್ಯಕ್ತಿಗತವಾಗಿ, ಸಾಮಾಜಿಕವಾಗಿ ಅಥವ ಬೇರೆ ಯಾವುದೇ ಮಾರ್ಗದಲ್ಲಿ ನಾವು ಗಳಿಸುವ ಶಕ್ತಿ ನಮ್ಮ ಜ್ಞಾನವನ್ನು ಅವಲಂಬಿಸಿದೆ. ಜ್ಞಾನಿ ಅಂದರೆ ಅರಿವಿರುವವನು ಶಕ್ತಿವಂತನಾಗಿರುತ್ತಾನೆ. ಅವನ ಶಕ್ತಿಯ ಪ್ರಮಾಣ ಅವನು ಹೊಂದಿರುವ ಜ್ಞಾನವನ್ನವಲಂಬಿಸಿದೆ.
     ಜ್ಞಾನ ಮಿಗಿಲು; ಜ್ಞಾನಮೂಲವಾದ ವಾಕ್ಕು ಅದಕ್ಕಿಂತ ಮಿಗಿಲು; ಇವೆರಡಕ್ಕಿಂತ ಇದವುಗಳನ್ನು ಸಾಧಿಸಲು ಅವಶ್ಯಕವಾದ ಮನಸ್ಸು ಮಿಗಿಲು; ಮನಸ್ಸಿನ ಇಚ್ಛಾಶಕ್ತಿ ಇದಕ್ಕೂ ಮಿಗಿಲು; ನೆನಪಿನ ಶಕ್ತಿಯಿಲ್ಲದಿದ್ದರೆ ಮೇಲಿನದೆಲ್ಲವೂ ವ್ಯರ್ಥವಾದ್ದರಿಂದ ಇದು ಮತ್ತೂ ಹೆಚ್ಚು; ಮೇಲಿನದೆಲ್ಲವೂ ಇದ್ದು ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಇಲ್ಲದಿದ್ದರೆ, ಧ್ಯಾನ ಮಾಡಲಾಗದಿದ್ದರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲವಾದ್ದರಿಂದ ಇದರ ಕೈಮೇಲು; ಯಾವುದರ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಅಥವ ಧ್ಯಾನಿಸುವುದು ಎಂಬುದರ ಸ್ಪಷ್ಟ ಅರಿವೂ ಇರಬೇಕಾದುದರಿಂದ ಇದು ಮತ್ತೂ ಹೆಚ್ಚಿನದು. ಆದ್ದರಿಂದ ಸಾಧನೆಯ ಆರನೆಯ ಹಂತವಾದ ಮನಸ್ಸನ್ನು ಕೇಂದ್ರೀಕರಿಸುವ, ಉದ್ದೇಶಿತ ಗುರಿಯ ಸಾಧನೆಗೆ ತನು-ಮನಗಳನ್ನು ತೊಡಗಿಸುವ ಶಕ್ತಿ ಮತ್ತು ಏಳನೆಯ ಹಂತವಾದ ಧ್ಯಾನದ ವಿಷಯ ಕುರಿತ ಸ್ಪಷ್ಟ ತಿಳುವಳಿಕೆಯನ್ನು ಗಳಿಸಿಕೊಂಡರೆ ನಾವು ಯಶಸ್ವಿ ವ್ಯಕ್ತಿಗಳಾಗಿಯೇ ಆಗುವೆವು!
-ಕ.ವೆಂ.ನಾಗರಾಜ್.
**************
ದಿನಾಂಕ 27.1.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಜನವರಿ 25, 2015

ಇಚ್ಛಾಶಕ್ತಿಯ ರಕ್ಷಕ ಚಿತ್ತ


"ನಿನ್ನೆ ಅನ್ನುವುದು ಇಂದಿನ ನೆನಪಾದರೆ ನಾಳೆ ಅನ್ನುವುದು ಇಂದಿನ ಕನಸು."
     ಸಾಧಕನೊಬ್ಬನ ಸಾಧನವಾದ ಜ್ಞಾನ ಮಿಗಿಲು, ಜ್ಞಾನಕ್ಕಿಂತ ಅದರ ಆಧಾರವಾದ ವಚನ(ವಾಕ್ಕು) ಮಿಗಿಲು, ಮನಸ್ಸು ಇವೆರಡಕ್ಕೂ ಮಿಗಿಲು ಮತ್ತು ಸಂಕಲ್ಪ(ಇಚ್ಛಾಶಕ್ತಿ) ಮನಸ್ಸಿಗಿಂತಲೂ ಮೇಲಿನದೆಂದು ಹಿಂದಿನ ಲೇಖನಗಳಲ್ಲಿ ಅರಿತೆವು. ಈ ಇಚ್ಛಾಶಕ್ತಿ ನಮ್ಮ ಮನೋವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಂಬುದರಲ್ಲಿ ಅನುಮಾನವೇ ಇಲ್ಲ. ಇದು ಮನಸ್ಸಿನ ವಿಚಾರಗಳನ್ನು ಒಂದೆಡೆ ಕೇಂದ್ರೀಕರಿಸಿದ ಶಕ್ತಿಯೇ ಹೊರತು ಮತ್ತೇನಲ್ಲ. ಮನಸ್ಸನ್ನು ಒಂದು ನಿರ್ದಿಷ್ಟ ರೀತಿಯಲ್ಲಿ, ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದೇಶಿಸುವುದನ್ನೇ ನಾವು ಇಚ್ಛಾಶಕ್ತಿ ಅಥವ ಸಂಕಲ್ಪ ಎನ್ನುತ್ತೇವೆ. ಇನ್ನೊಂದು ಸಂಗತಿ ಇಲ್ಲದಿದ್ದರೆ ಈ ಇಚ್ಛಾಶಕ್ತಿ ಸಹ ಅರ್ಥ ಕಳೆದುಕೊಳ್ಳುತ್ತದೆ ಮತ್ತು ಅದು ಕೆಲಸ ಮಾಡಲು ಸಾಧ್ಯವಾಗದು. ಅದೇ ಸ್ಮರಣಶಕ್ತಿ! ಇದನ್ನು ಚಿತ್ತ ಎಂದೂ ಕರೆಯುತ್ತಾರೆ. ನೆನಪಿನ ಶಕ್ತಿ ಇಲ್ಲದ ವ್ಯಕ್ತಿ, ಒಂದು ಘಳಿಗೆಯ ಹಿಂದೆ ಏನಾಯಿತು ಎಂಬುದೇ ನೆನಪಿನಲ್ಲಿ ಇಟ್ಟುಕೊಳ್ಳಲಾಗದವನು, ಇಚ್ಛಾಶಕ್ತಿಯನ್ನು ಬಳಸಿ ಮನಸ್ಸನ್ನು ಕೇಂದ್ರೀಕರಿಸಲಾರ. ಏಕೆಂದರೆ ಹಿಂದಿನ ಸಂಗತಿಗಳು, ಅನುಭವಗಳು, ನಿಶ್ಚಯಗಳು, ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮನಸ್ಸಿನಲ್ಲಿ ಸಂಕಲ್ಪ ಮೂಡಲು ಅತ್ಯಗತ್ಯವಾಗಿದೆ. ನೆನಪಿಟ್ಟುಕೊಳ್ಳುವ ಮತ್ತು ಅದನ್ನು ಉಳಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಇಚ್ಛಾಶಕ್ತಿ ಕೆಲಸ ಮಾಡಬಲ್ಲದು, ಮನಸ್ಸು ಕೇಳಬಲ್ಲುದು, ಸರಿಯಾದ ಮಾತು ಹೊರಬರುವುದು ಮತ್ತು ಜ್ಞಾನಕ್ಕೆ ಅರ್ಥ ಬರುವುದು! ಇವೆಲ್ಲವೂ ಒಂದು ಸರಪಳಿಯಿದ್ದಂತೆ!
     ಒಬ್ಬ ದೊಡ್ಡ ಪಂಡಿತನಿದ್ದಾನೆ ಎಂದುಕೊಳ್ಳೋಣ. ಅವನಿಗೆ ಎಷ್ಟೇ ದೊಡ್ಡ ಪಾಂಡಿತ್ಯವಿರಬಹುದು, ಅವನು ಎಷ್ಟೋ ವಿದ್ಯೆಗಳನ್ನು ಕಲಿತು ಅರಗಿಸಿಕೊಂಡಿರಬಹುದು, ಆದರೆ ಸ್ಮರಣ ಶಕ್ತಿ ಇಲ್ಲದಿದ್ದರೆ ಅವನ ಪಾಂಡಿತ್ಯವೆಲ್ಲವೂ ವ್ಯರ್ಥ. ಸ್ಮರಣಶಕ್ತಿ ಇರುವ ಜ್ಞಾನಿಗಳ ಮಾತಿಗೆ ಜನ ಬೆಲೆ, ಗೌರವ ಕೊಡುತ್ತಾರೆ. ಆದ್ದರಿಂದ ಮನುಷ್ಯನ ವ್ಯಕ್ತಿತ್ವ ಪಾಂಡಿತ್ಯದೊಡನೆ ಅವನ ನೆನಪಿನ ಶಕ್ತಿಯನ್ನೂ ಆಧರಿಸಿರುತ್ತದೆ. ಓದಿದ ಎಷ್ಟೋ ವರ್ಷಗಳ ನಂತರದಲ್ಲೂ ಇಂತಹ ವಿಷಯ ಇಂತಹ ಗ್ರಂಥದ ಇಷ್ಟನೇ ಪುಟದಲ್ಲಿದೆ ಎಂದು ಹೇಳಬಲ್ಲ ಅದ್ಭುತ ವ್ಯಕ್ತಿಗಳೂ ಕಾಣಸಿಗುತ್ತಾರೆ.
     ನೆನಪು ಯಾವಾಗಲೂ ಹೃದಯದ ಮಾತನ್ನು ಕೇಳುತ್ತದೆ! ಹೃದಯದ ಮಾತು ಎಂದರೆ ನಮಗೆ ಇಷ್ಟವೆನಿಸುವ, ನಮಗೆ ಮಹತ್ವದ್ದೆನಿಸುವ ಸಂಗತಿಗಳು! ಅವು ನೆನಪಿನಲ್ಲಿ ಉಳಿಯುತ್ತವೆ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಟ್ಟಿದ್ದು ೧೯೬೭ರಲ್ಲಿ. ಸುಮಾರು ೪೮ ವರ್ಷಗಳ ಹಿಂದೆ ಕಟ್ಟಿದ್ದ ಆ ಪರೀಕ್ಷೆಯ ರಿಜಿಸ್ಟರ್ ನಂ. ೪೭೯೮೩ ಅನ್ನುವುದು ಈಗಲೂ ನೆನಪಿದೆ. ಪಿಯುಸಿಯ ನಂ. ೧೭೨೫೩ ಆಗಿತ್ತು. ಆದರೆ ಪದವಿ ಪರೀಕ್ಷೆಯ ನಂ. ನನಗೆ ನೆನಪಿಲ್ಲ. ಇದರ ಅರ್ಥ ಇಷ್ಟೇ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಿಗೆ ಕೊಟ್ಟಿದ್ದಷ್ಟು ಮಹತ್ವವನ್ನು ನಾನು ಪದವಿ ಪರೀಕ್ಷೆಗೆ ಕೊಡಲಾಗಿರಲಿಲ್ಲ ಅಥವ ಕೊಟ್ಟಿರಲಿಲ್ಲ. ನಿಮಗೆ ನಿಮ್ಮ ಸ್ನೇಹಿತನೋ, ನಿಮ್ಮ ಮನೆಯ ಯಾರಾದರೂ ಸದಸ್ಯರೋ ನಿಮಗೆ ಏನನ್ನಾದರೂ ಹೇಳಿರುತ್ತಾರೆಂದು ಇಟ್ಟುಕೊಳ್ಳಿ. ನೀವು ಅದಕ್ಕೆ ಮಹತ್ವ ಕೊಟ್ಟಿದ್ದರೆ ಮಾತ್ರ ನಿಮಗೆ ಅದು ನೆನಪಿರುತ್ತದೆ. ಇಲ್ಲದಿದ್ದರೆ ಅವರು ಎದುರಿಗೆ ಬಂದಾಗ ಮಾತ್ರ ನೆನಪಾಗಿ, 'ಅಯ್ಯೋ ಮರೆತೇಬಿಟ್ಟೆ' ಅನ್ನುತ್ತೀರಿ.
     ಒಳ್ಳೆಯ ಅನುಭವಗಳಿಗಿಂತ ಕೆಟ್ಟ ಅನುಭವಗಳು ನೆನಪಿನಲ್ಲಿ ಉಳಿಯುತ್ತವೆ! ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ, ಸ್ವಾಭಿಮಾನವನ್ನು ಕೆಣಕುವ ಮಾತುಗಳನ್ನು ನಾವು ಮರೆಯುವುದಿಲ್ಲ. 'ನಾನು ಸತ್ತರೂ ಇದನ್ನು ಮಾತ್ರ ಮರೆಯುವುದಿಲ್ಲ' ಎಂಬಂತಹ ಮಾತುಗಳನ್ನು ಕೇಳಿರುತ್ತೇವಲ್ಲವೇ? ಸ್ವಾಭಿಮಾನವನ್ನು ಕೆಣಕುವ ಮಾತುಗಳು, ಅವಮಾನಗಳು, ಸೋಲುಗಳು ದೀರ್ಘಕಾಲ ನೆನಪಿನಲ್ಲಿರುತ್ತವೆ. ಇವು ಅಸಾಧಾರಣವಾದುದನ್ನು ಸಾಧಿಸಲೂ ಉತ್ತೇಜಿಸುತ್ತವೆ. ಹುಟ್ಟುಕುರುಡನಾಗಿ ಜನಿಸಿದ್ದ ಬಾಲಕ ಚಿಕ್ಕಂದಿನಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡು ಅಣ್ಣ-ಅತ್ತಿಗೆಯರಿಂದ ದಂಡಪಿಂಡ, ಶನಿ, ಕೂಳಿಗೆ ಭಾರ, ಇತ್ಯಾದಿ ದೂಷಣೆಗಳನ್ನು ಪ್ರತಿನಿತ್ಯ ಕೇಳಿ ಸಹಿಸಿಕೊಳ್ಳಲಾಗದೆ ಮನೆಬಿಟ್ಟು ಹೊರಟಾಗ ಅವನಿಗೆ ಕೇವಲ ಎಂಟು ವರ್ಷಗಳು. ಮುಂದೆ ಆ ಬಾಲಕ  ವಿರಜಾನಂದ ಸರಸ್ವತಿಯಾಗಿ ರೂಪುಗೊಂಡಿದ್ದ. ತಮ್ಮ ಶಿಷ್ಯ ಮಹರ್ಷಿ ದಯಾನಂದ ಸರಸ್ವತಿಯಂತಹ ಮಹಿಮಾನ್ವಿತರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು ಈ ವಿರಜಾನಂದರೇ! ವಿರಜಾನಂದರ ಸಾಧನೆಗೆ ಪ್ರೇರಣೆಯಾಗಿದ್ದು ಅವರು ದಂಡಪಿಂಡ ಎಂದು ಬೈಸಿಕೊಂಡ ನೆನಪು ಅಚ್ಚಳಿಯದೇ ಉಳಿದಿದ್ದು!
     ನೆನಪಿನ ಶಕ್ತಿ ಇಲ್ಲದಿದ್ದರೆ ಜ್ಞಾನ, ವಚನ, ಮನಸ್ಸು, ಇಚ್ಛಾಶಕ್ತಿಗಳಿಗೆ ಅರ್ಥ ಉಳಿಯುವುದಿಲ್ಲವೆಂಬುದು ಖಚಿತವಾಯಿತು. ಈ ನೆನಪಿನ ಶಕ್ತಿ ಉಳಿಯಲು ಕೆಲವು ಆಂತರಿಕ ಮತ್ತು ಬಾಹ್ಯ ಸಂಗತಿಗಳು ಸಹಾಯಕವಾಗುತ್ತವೆ. ಈ ಸಂಗತಿಗಳೆಂದರೆ ಮನಸ್ಸನ್ನು ನಿಯಂತ್ರಿಸುವುದು, ಜ್ಞಾನ ಸಂಪಾದನೆ, ಸಜ್ಜನ ಸಹವಾಸ (ಸತ್ಸಂಗ), ಸುಯೋಗ್ಯ ಗುರುಗಳ ಮಾರ್ಗದರ್ಶನ, ನಿಯಮಿತವಾದ ವ್ಯಾಯಾಮ, ಧ್ಯಾನ, ಇತ್ಯಾದಿಗಳು. ಹಿಂದೆ ಹಿರಿಯರು ಮರೆಗುಳಿಗಳಿಗೆ ಏನಾದರೂ ಸಂಗತಿಯ ನೆನಪು ಮರೆಯದಿರಲು ಜೇಬಿನಲ್ಲಿ ಒಂದು ಕಲ್ಲು ಇಟ್ಟುಕೋ, ಸೆರಗಿನಲ್ಲಿ ಒಂದು ಕಲ್ಲು ಕಟ್ಟಿಕೋ, ಇತ್ಯಾದಿ ಸಲಹೆ ಕೊಡುತ್ತಿದ್ದರು. ಆ ಕಲ್ಲನ್ನು ಕಂಡಾಗ, 'ಓಹ್, ಈ ಕೆಲಸ ಮಾಡಬೇಕಾಗಿತ್ತು' ಎಂಬುದು ಅವರುಗಳಿಗೆ ನೆನಪಾಗುತ್ತಿತ್ತು. ಈಗ ಉಪನಯನವನ್ನು ಯಾವ ಯಾವ ಸಮಯದಲ್ಲೋ ಮಾಡುತ್ತಾರೆ. ಇಂದಿನ ಸಾಮಾಜಿಕ ವ್ಯವಸ್ಥೆ ಸಹ ಈ ಏರುಪೇರಿಗೆ ಕಾರಣವಾಗಿದೆ. ಮೊದಲಾದರೋ ಇದನ್ನು ಯಾವುದೇ ಜಾತಿ, ಮತ, ಪಂಥ, ಲಿಂಗಬೇಧವಿಲ್ಲದೆ ಮಕ್ಕಳನ್ನು ಶಿಕ್ಷಣದ ಸಲುವಾಗಿ ಗುರುಕುಲಗಳಿಗೆ ಕಳುಹಿಸುವ ಮುನ್ನ ಮಾಡಿ ಕಳುಹಿಸಲಾಗುತ್ತಿತ್ತು. ಸುಯೋಗ್ಯ ಶಿಕ್ಷಣ ಪಡೆಯುವ ಸಂಕಲ್ಪದ ಜೊತೆಗೆ ಉಪವೀತದ ಮೂರು ಎಳೆಗಳು ಒಬ್ಬ ಮಾನವ ಜೀವಿತಕಾಲದಲ್ಲಿ ತೀರಿಸಬೇಕಾದ ಮೂರು ಋಣಗಳ-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಕುರಿತು ಸದಾಕಾಲ ನೆನಪಿರಲಿ ಎಂಬ ಉದ್ದೇಶವನ್ನು ಧರಿಸಿದವರಿಗೆ ನೆನಪಿಸುತ್ತಿದ್ದವು. ಇಂದು ಇದು ಕೇವಲ ಜಾತಿಸೂಚಕವಾಗಿ ಬಳಸಲಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಶುಭಕಾರ್ಯಗಳ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಕಂಕಣವೂ ಸಹ ಸ್ಮರಣಶಕ್ತಿಯ ಜಾಗೃತಿಗಾಗಿಯೇ ಆಗಿದೆ.
ಚಿತ್ತ ಚಪಲತೆಯಿಂ ಚಿತ್ತ ಚಂಚಲತೆ
ಚಿತ್ತ ಚಂಚಲತೆಯಿಂ ಚಿತ್ತ ತಳಮಳವು |
ತಳಮಳ ಕಳವಳ ಹಾಳುಗೆಡವದೆ ಶಾಂತಿ
ಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ ||
     ನೆನಪಿನ ಶಕ್ತಿ ಹಾಳಾಗಲು ಚಿತ್ತ ಚಪಲತೆ ಪ್ರಧಾನ ಕಾರಣವಾಗಿದೆ. ಒಂದು ತರಬೇತಿ ಕೇಂದ್ರದಲ್ಲಿ ಚಿತ್ರಕಲೆ, ಕರಕುಶಲಕಲೆ, ಶಿಲ್ಪಕಲೆ, ನಟನೆಗಳನ್ನು ಕಲಿಸಲಾಗುತ್ತಿತ್ತು. ಪ್ರತಿಯೊಂದೂ ಆರು ತಿಂಗಳ ಕಾಲಾವಧಿಯ ತರಬೇತಿಯಾಗಿದ್ದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುತ್ತಿತ್ತು. ರಾಮಣ್ಣ ಮತ್ತು ಶಾಮಣ್ಣ ತರಬೇತಿಗೆ ಸೇರಿದರು. ರಾಮಣ್ಣ ಮೊದಲಿಗೆ ಚಿತ್ರಕಲೆ ಆರಿಸಿಕೊಂಡರೆ ಶಾಮಣ್ಣ ಕರಕುಶಲಕಲೆ ಆರಿಸಿಕೊಂಡ. ಒಂದು ತಿಂಗಳ ನಂತರ ಶಾಮಣ್ಣನಿಗೆ ಕರಕುಶಲಕಲೆ ಕಷ್ಟ, ನಂತರ ಕಲಿತರಾಯಿತು ಎಂದು ಶಿಲ್ಪಕಲೆ ಕಲಿಯಲು ಆರಂಭಿಸಿದ. ಅಲ್ಲೂ ಒಂದೆರಡು ತಿಂಗಳ ನಂತರ ಅದನ್ನು ಬಿಟ್ಟು ನಟನೆಗೆ ಸೇರಿದ. ಅಲ್ಲೂ ಬೇಸರವಾಗಿ ಚಿತ್ರಕಲೆ ಕಲಿಯಲು ಆರಂಭಿಸಿದ. ಇಷ್ಟರಲ್ಲಿ ರಾಮಣ್ಣ ಚಿತ್ರಕಲೆ, ಕರಕುಶಲಕಲೆ ತರಬೇತಿಗಳನ್ನು ಪೂರ್ಣವಾಗಿ ಮುಗಿಸಿ ಶಿಲ್ಪಕಲೆಯಲ್ಲಿ ತರಬೇತಿ ಪಡೆಯತೊಡಗಿದ್ದ. ತರಬೇತಿ ಅವಧಿ ಪೂರ್ಣಗೊಂಡಾಗ ರಾಮಣ್ಣ ಎಲ್ಲದರಲ್ಲೂ ಪರಿಣಿತನಾಗಿದ್ದರೆ, ಶಾಮಣ್ಣ ಯಾವುದರಲ್ಲೂ ಪ್ರಯೋಜನವಿಲ್ಲದವನಾಗಿದ್ದ. ಅವನ ಚಿತ್ತ ಚಂಚಲತೆ ಅವನನ್ನು ಹಾಳು ಮಾಡಿತ್ತು. ರಾಮಣ್ಣನನ್ನು ಕಂಡು ಅಸೂಯೆಪಟ್ಟು ಮನಃಶಾಂತಿ ಹಾಳು ಮಾಡಿಕೊಂಡದ್ದೇ ಅವನಿಗೆ ಬಂದ ಲಾಭ! ಸಾತತ್ಯವಿಲ್ಲದಿದ್ದರೆ ಯಾವುದೂ ಸಿದ್ಧಿಸದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.
     ದೈಹಿಕ ತೊಂದರೆಗಳು, ಮಾನಸಿಕ ಕಾಯಿಲೆಗಳು, ಭಯ, ದುರಭ್ಯಾಸಗಳು ಮುಂತಾದವು ಸಹ ನೆನಪಿನ ಶಕ್ತಿ ಹಾಳಾಗಲು ಕಾರಣವಾಗುತ್ತವೆ. ವೃದ್ಧಾಪ್ಯದಲ್ಲಿ ಮೆದುಳಿನ ನರಗಳು ಶಕ್ತಿ ಕಳೆದುಕೊಳ್ಳುತ್ತವೆ. ಆಗಲೂ ನೆನಪು ಕೈಕೊಡುತ್ತದೆ. ಆದ್ದರಿಂದ ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿದ್ದರೆ ನೆನಪಿನ ಶಕ್ತಿಗೆ ಬಲ ಇರುತ್ತದೆ. ನಮ್ಮ ಜೀವನಶೈಲಿ ಒಳ್ಳೆಯದಾಗಿದ್ದರೆ ನಾವು ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿರಲು ಸಾಧ್ಯವಿದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ನಮ್ಮ ನೆನಪಿನ ಶಕ್ತಿ ಅಬಾಧಿತವಾಗಿರುತ್ತದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ಇತರರ ನೆನಪಿನಲ್ಲೂ ಉಳಿಯುತ್ತೇವೆ!
     ಕೆಲವು ಸಂಗತಿಗಳನ್ನು ಮರೆಯುವುದೂ ಅಗತ್ಯವಿರುತ್ತದೆ. ಹಲವು ಕಹಿ ನೆನಪುಗಳು, ಘಟನೆಗಳು ನಮ್ಮ ನೆಮ್ಮದಿಯನ್ನು ಹಾಳುಗೆಡವುತ್ತವೆ. ಅಂತಹವುಗಳನ್ನು ಮರೆಯಲು ಅಥವ ನೆನಪಿನ ಬುತ್ತಿಯಿಂದ ಅಳಿಸಲು ನಮ್ಮ ಮನಸ್ಸನ್ನು ಟ್ಯೂನ್ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಮೆದುಳು ಅಂತಹ ಕೆಲಸವನ್ನೂ ಆಗಾಗ ಸಹಜವೆಂಬಂತೆ ಮಾಡುತ್ತಿರುತ್ತದೆ. ನಮ್ಮ ಸನಾತನ ಧರ್ಮ ಪುನರ್ಜನ್ಮವನ್ನು ಪ್ರತಿಪಾದಿಸುತ್ತದೆ. ಒಂದು ವೇಳೆ ಹಿಂದಿನ ಜನ್ಮದ ನೆನಪುಗಳು ಮುಂದಿನ ಜನ್ಮದಲ್ಲೂ ನೆನಪಿನಲ್ಲಿ ಉಳಿಯುತ್ತಿದ್ದರೆ ವ್ಯವಸ್ಥೆಯಲ್ಲಿ ಏರುಪೇರು ಆಗುವ ಸಂಭವವಿರುತ್ತದೆ. ಹಾಗಾಗಿ ಅಂತಹ ನೆನಪು ಉಳಿಯದಿದ್ದರೇ ಒಳಿತು. (ಪುನರ್ಜನ್ಮ ಎಂಬ ಲೇಖನದಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿರುವುದರಿಂದ ಇಲ್ಲಿ ಅದನ್ನು ವಿಸ್ತರಿಸುವುದಿಲ್ಲ.)
     ಜಗತ್ತಿನ ಇತಿಹಾಸ ಅನ್ನುವುದು ನೆನಪಿನ ದಾಖಲೆಯೇ ಹೊರತು ಮತ್ತೇನಲ್ಲ! ಆಯಾ ಕಾಲದ ಇತಿಹಾಸಕಾರರು, ಕವಿಗಳು, ಲೇಖಕರು ತಮ್ಮ ಕಾಲದ ಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ದಾಖಲು ಮಾಡಿರುವುದನ್ನು ಆಧರಿಸಿ ಇತಿಹಾಸವನ್ನು ಅರಿಯಬಹುದಾಗಿದೆ. ಇತಿಹಾಸ ಅನ್ನುವುದು ಹಿಂದೆ ಹೀಗಿತ್ತು ಎಂದು ತೋರಿಸಿ ಹೇಗಿದ್ದರೆ ಚೆನ್ನಾಗಿರುತ್ತಿತ್ತು ಎಂಬುದರ ಅರಿವು ಮೂಡಿಸುವ ದಾಖಲೆ. ಇತಿಹಾಸ ಕಲಿಸುವ ಪಾಠಗಳನ್ನು 'ಮರೆತು' ಮತ್ತೆ ಅದೇ ತಪ್ಪುಗಳನ್ನು ಮಾಡಿ ಇತಿಹಾಸ ಪುನರಾವರ್ತಿಸುವಂತೆ ಮಾಡುತ್ತಿರುವುದು 'ಜನರ ನೆನಪು ಕ್ಷಣಿಕ' ಎಂಬುದರ ದ್ಯೋತಕ. ಕೆಲವರು ರಾಜಕಾರಣಿಗಳು ನೂರೆಂಟು ಅಕ್ರಮಗಳು, ಅನ್ಯಾಯಗಳನ್ನು ಮಾಡಿದವರು, ಮಾಡುವವರು ಎಂದು ತಿಳಿದಿದ್ದೂ ಅವರುಗಳನ್ನು ಚುನಾವಣೆಗಳಲ್ಲಿ ಮತ್ತೆ ಮತ್ತೆ ಗೆಲ್ಲಿಸುವುದಕ್ಕೆ ಕಾರಣ ಅವರ ತಪ್ಪುಗಳನ್ನು ನಾನಾ ಕಾರಣಗಳಿಗಾಗಿ 'ಮರೆಯುವುದೂ' ಕಾರಣವಾಗಿದೆ. ಇರಲಿ ಬಿಡಿ, ನೆನಪು ಮತ್ತು ಮರೆವು ಒಂದೇ ನಾಣ್ಯದ ಎರಡು ಮುಖಗಳು!
     ಜ್ಞಾನವಿರಲಿ, ಜ್ಞಾನಕ್ಕೆ ಮುಕುಟವಾದ ಸುವಾಕ್ಕುವಿರಲಿ, ಸುವಾಕ್ಕುವಾಡುವ ಮನಸ್ಸಿರಲಿ, ಮನಸ್ಸು ನಿಯಂತ್ರಿಸುವ ಸುಸಂಕಲ್ಪವಿರಲಿ ಮತ್ತು ಈ ಸುಸಂಕಲ್ಪವನ್ನು ಮರೆಯದಿರುವ ನೆನಪು ನಮ್ಮದಿರಲಿ. ಹೀಗಾದರೆ ಸಾಧನೆಯ ಐದು ಮೆಟ್ಟಲುಗಳನ್ನು ಏರಿದವರು ನಾವಾಗುತ್ತೇವೆ.
-ಕ.ವೆಂ.ನಾಗರಾಜ್.
****************
ದಿನಾಂಕ 19.1.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಜನವರಿ 13, 2015

ಇಚ್ಛಾಶಕ್ತಿ


     ಮನಸ್ಸು ಅನ್ನುವುದು ಜ್ಞಾನ ಮತ್ತು ಮಾತಿನ ಕ್ರಿಯೆಗಳಿಗೆ ಮೇಲಿನದೆಂದು ನಾವೀಗಾಗಲೇ ಅರಿತಿದ್ದೇವೆ. ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆಯೂ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದಾಗಿದೆ. ಅದೇ ಇಚ್ಛಾಶಕ್ತಿ! ಸಂಸ್ಕೃತದಲ್ಲಿ ಇದನ್ನು 'ಸಂಕಲ್ಪ' ಎನ್ನುತ್ತಾರೆ. ಈ ಇಚ್ಛಾಶಕ್ತಿ ಮನಸ್ಸಿಗಿಂತ ಮೇಲಿನದಾಗಿದೆ. ಈ ಇಚ್ಛಾಶಕ್ತಿ ಅನುಸರಿಸಿ ಮನಸ್ಸು ಕೆಲಸ ಮಾಡುತ್ತದೆ.
     ಪ್ರತಿಯೊಂದು ಸಂಗತಿ/ವಿಷಯದ ಹಿಂದೆ ಒಂದು ನಿರ್ದಿಷ್ಟ ಇಚ್ಛಾಶಕ್ತಿ ಇರುತ್ತದೆ. ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಭೂಮಿ, ನೀರುಗಳಿಗೂ ತಮ್ಮದೇ ಆದ ಇಚ್ಛಾಶಕ್ತಿ ಇರುತ್ತದೆ. ಅವುಗಳ ಗುಣ, ಸ್ವಭಾವಗಳ ಹಿಂದೆ ಅವುಗಳದೇ ಆದ ಇಚ್ಛಾಶಕ್ತಿ ಅಡಗಿರುತ್ತದೆ. ಅದು ಅವುಗಳ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಾಗೆ ಇರದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಎಲ್ಲವೂ ಒಂದೇ ಆಗಿಬಿಡುತ್ತಿದ್ದವು. ಈ ವಿಶ್ವದಲ್ಲಿ ಇಚ್ಛಾಶಕ್ತಿಯಿಲ್ಲದ ಯಾವ ಒಂದು ಸೃಷ್ಟಿಯೂ ಇಲ್ಲ, ಅಣುವೂ ಇಲ್ಲ. ಇದು ವಿಶ್ವಶಕ್ತಿ! ಜೀವಿಗಳೂ ಸಹ ಇಚ್ಛಾಶಕ್ತಿಯಿಂದಲೇ ಅಸ್ತಿತ್ವ ಕಂಡುಕೊಂಡಿವೆ. ನಮ್ಮ ದೇಹರಚನೆ, ಉಸಿರಾಟ, ಹೃದಯದ ಬಡಿತ, ರಕ್ತಪರಿಚಲನೆ ಮುಂತಾದುವುಗಳನ್ನೂ ನಿರ್ದಿಷ್ಟ ಇಚ್ಛಾಶಕ್ತಿ ನಿಯಂತ್ರಿಸುತ್ತಿದೆ.
     ಇಂತಹ ಪ್ರಬಲ ಇಚ್ಛಾಶಕ್ತಿಯಿಂದ ಮನಸ್ಸನ್ನು ನಿಯಂತ್ರಿಸಬಹುದಾಗಿದೆ. ಎಲ್ಲರಿಗೂ ಇಚ್ಛಾಶಕ್ತಿ ಇರುತ್ತದೆ. ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯ. ಉತ್ತರಪ್ರದೇಶದ ಅಂಬೇಡ್ಕರ್ ನಗರದ ಅರುಣಿಮಾ ಸಿನ್ಹಾ ಪ್ರಬಲ ಇಚ್ಛಾಶಕ್ತಿಗೆ ಇತ್ತೀಚಿನ ಮಾದರಿಯಾಗಿದ್ದಾಳೆ. ಸಿ.ಐ.ಎಸ್.ಎಫ್ ಪರೀಕ್ಷೆಗೆ ಹೋಗುವ ಸಲುವಾಗಿ ಲಕ್ನೌನಿಂದ ದೆಹಲಿಗೆ ಹೋಗುವ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿಗೆ ೧೧.೪.೨೦೧೧ರಲ್ಲಿ ಹತ್ತಿ ಕುಳಿತಾಗ ಆಕೆಯ ವಯಸ್ಸು ೨೩ ವರ್ಷಗಳು. ಮಾರ್ಗಮಧ್ಯದಲ್ಲಿ ಕಳ್ಳರು ಆಕೆಯ ಚೀಲ ಮತ್ತು ಸರವನ್ನು ಕಿತ್ತುಕೊಳ್ಳಲು ಬಂದಾಗ ಪ್ರತಿಭಟಿಸಿದ್ದ ಅವಳನ್ನು ಚಲಿಸುತ್ತಿದ್ದ ರೈಲಿನಿಂದ ಅವರು ಹೊರಗೆ ಎಸೆದುಬಿಟ್ಟಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬರುತ್ತಿದ್ದ ರೈಲಿಗೆ ಸಿಕ್ಕಿ ಅವಳ ಕಾಲು ಜರ್ಜರಿತವಾಗಿತ್ತು. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವಳನ್ನು ಆ ಸ್ಥಿತಿಯಲ್ಲಿ ಕಂಡಿದ್ದವರಿಗೆ ಅವಳು ಬದುಕುವ ಬಗ್ಗೆ ಸಂದೇಹವಿತ್ತು. ಜೀವ ಉಳಿಸಲು ಆಸ್ಪತ್ರೆಯಲ್ಲಿ ಆಕೆಯ ಕಾಲನ್ನು ಮೊಳಕಾಲಿನಿಂದ ಕೆಳಕ್ಕೆ ಕತ್ತರಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಆಕೆಗೆ ಇದರಿಂದ ಆಘಾತವಾಗಿತ್ತು. ಆಕೆಗೆ ಕೇಂದ್ರ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕ ನೆರವು ದೊರೆಯಿತು. ಖಾಸಗಿ ಕಂಪೆನಿಯೊಂದು ಆಕೆಗೆ ಉಚಿತವಾಗಿ ಕೃತಕ ಕಾಲು ಅಳವಡಿಸಲು ನೆರವಾಯಿತು. ಅಲಹಾಬಾದ್ ಉಚ್ಛನ್ಯಾಯಾಲಯ ರೈಲ್ವೆಯವರು ಆಕೆಗೆ ರೂ.೫.೦೦ ಲಕ್ಷ ಪರಿಹಾರಧನ ನೀಡಬೇಕೆಂದು ಆದೇಶಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಕೆ ಎವರೆಸ್ಟ್ ಶಿಖರವನ್ನು ಏರುವ ಕನಸು ಕಂಡದ್ದು. ಕ್ಯಾನ್ಸರ್ ಗೆದ್ದು ಬಂದಿದ್ದ ಕ್ರಿಕೆಟಿಗ ಯುವರಾಜಸಿಂಗನಿಂದ ಆಕೆ 'ಏನನ್ನಾದರೂ ಸಾಧಿಸಬೇಕೆಂದು' ಪ್ರೇರಿತಳಾಗಿದ್ದಳು. ಮೌಂಟನಿಯರಿಂಗ್ ಕೋರ್ಸಿಗೆ ಸೇರಿದ ಅಕೆ ಅದರ ಪ್ರಾಥಮಿಕ ವಿಷಯಗಳಲ್ಲಿ ಅಗ್ರಗಣ್ಯತೆ ಗಳಿಸಿದಳು. ವಡೋದರದ ಸ್ವಾಮಿ ರಾಮಕೃಷ್ಣ ಮಿಶನ್ನಿನ ಸಹಾಯದಿಂದ ಕೃತಕ ಕಾಲಿನಿಂದ ಎವರೆಸ್ಟ್ ಏರುವ ಆಸೆಗೆ ಬೆಂಬಲ ಸಿಕ್ಕಿತು. ಎವರೆಸ್ಟ್ ಏರಿದ ಪ್ರಥಮ ಮಹಿಳೆ ಬಚೇಂದ್ರಿಪಾಲಳಿಂದ ಅಗತ್ಯದ ತರಬೇತಿ ಪಡೆದಳು. ಪೂರ್ವಭಾವಿಯಾಗಿ ೬೧೫೦ ಮೀಟರ್ ಎತ್ತರದ ಐಲೆಂಡ್ ಶಿಖರವನ್ನು ೨೦೧೨ರಲ್ಲಿ ಯಶಸ್ವಿಯಾಗಿ ಏರಿದ್ದಳು. ೧.೪.೨೦೧೩ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ ೫೧ ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು ೨೧.೫.೨೦೧೩ರಂದು ತಲುಪಿಯೇಬಿಟ್ಟಳು! ಶಿಖರವೇರಿದ ಆಕೆ ಒಂದು ಸಂದೇಶವನ್ನು ಬರೆದು ಬಟ್ಟೆಯಲ್ಲಿ ಸುತ್ತಿ ಹಿಮದಲ್ಲಿ ಹೂತಿಟ್ಟಳು. ಆಕೆಯೇ ಹೇಳಿದಂತೆ ಅದು, "ಶಂಕರ ಭಗವಾನ್ ಮತ್ತು ಜೀವನದುದ್ದಕ್ಕೂ ತನಗೆ ಚೈತನ್ಯದಾಯೆನಿಸಿದ್ದ ಸ್ವಾಮಿ ವಿವೇಕಾನಂದರಿಗೆ ಕೃತಜ್ಞತೆಯಾಗಿತ್ತು". ಕೈಕಾಲುಗಳು ಗಟ್ಟಿಯಾಗಿರುವವರಿಗೇ ಕಷ್ಟವೆನಿಸುವ ಆ ಕೆಲಸ ಆಕೆಗೆ ಸಾಧ್ಯವಾಗಿಸಿದ್ದು ಆಕೆಯ ಇಚ್ಛಾಶಕ್ತಿ!
     ನಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಬಗ್ಗೆಯೇ ನಮಗೆ ನಂಬಿಕೆ ಮತ್ತು ವಿಶ್ವಾಸಗಳಿರಬೇಕು. ದೂರದೃಷ್ಟಿ, ಕಠಿಣ ಶ್ರಮ, ಧೃಢ ನಿರ್ಧಾರ ಮತ್ತು ಅದಕ್ಕೋಸ್ಕರ ಅರ್ಪಣಾ ಮನೋಭಾವಗಳಿದ್ದರೆ ಎಂತಹುದನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೂರಾರು ನಿದರ್ಶನಗಳು ಸಿಗುತ್ತವೆ. ಹಿಂದೆ ಆಗಿಹೋದ ಹಲವಾರು ಸಾಧು-ಸಂತರು, ಸಾಧಕರುಗಳು, ವಿವಿಧ ಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆಗಳನ್ನು ಮಾಡಿದವರು, ಮಾಡುತ್ತಿರುವವರನ್ನು ಕಾಣುತ್ತಿರುತ್ತೇವೆ, ಅವರ ಬಗ್ಗೆ ತಿಳಿಯುತ್ತಿರುತ್ತೇವೆ. ದೌರ್ಭಾಗ್ಯವೆಂದರೆ ಅಂತಹ ಹಲವಾರು ಸಾಧಕರುಗಳನ್ನು ನಾವು ದೇವರುಗಳಂತೆ ಕಂಡು ಗುಡಿ ಕಟ್ಟಿ ಪೂಜಿಸಿ ಧನ್ಯರಾದೆವೆಂದುಕೊಂಡುಬಿಡುತ್ತೇವೆ. ಅವರುಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರುಗಳು ತೋರಿದ ಹಾದಿಯಲ್ಲಿ ನಡೆದು ನಾವುಗಳೂ ಸಹ ಅಂತಹ ಸಾಧನಾ ಪರಂಪರೆ ಮುಂದುವರೆಸುವುದು. ಪ್ರತಿಯೊಂದು ಸಾಧನೆಯೂ ಸುಮ್ಮನೆ ಆದುದಲ್ಲ. ಪ್ರಯತ್ನಿಸುವ ನಿರ್ಧಾರದಿಂದ ಆ ಸಾಧನೆ ಆರಂಭವಾಗುತ್ತದೆ ಅಷ್ಟೆ. ಸಾವಿರ ಮೈಲುಗಳ ಪ್ರಯಾಣ ಆರಂಭವಾಗುವುದೂ ನಾವಿಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಆ ಹೆಜ್ಜೆಯಿಡಲು ಬೇಕಿರುವುದು ಇಚ್ಛಾಶಕ್ತಿ! ವಿವೇಕಾನಂದರು ಹೇಳುತ್ತಿದ್ದುದೂ ಅದನ್ನೇ- "ಧೃಢನಿರ್ಧಾರದ ಒಬ್ಬ ವ್ಯಕ್ತಿ ಗಮನಾರ್ಹ ಬದಲಾವಣೆ ತರಬಲ್ಲ; ಧೃಢ ನಿರ್ಧಾರ ಹೊಂದಿದ ಒಂದು ಸಣ್ಣ ಜನರ ಗುಂಪು ಇತಿಹಾಸದ ಗತಿಯನ್ನೇ ಬದಲಾಯಿಸಬಲ್ಲದು!"
     ಇಚ್ಛಾಶಕ್ತಿಯ ಮಹಿಮೆ ತಿಳಿದೆವು. ಅದನ್ನು ಗಳಿಸಿಕೊಳ್ಳುವುದಾದರೂ ಹೇಗೆ? ಅದನ್ನು ಹೊಸದಾಗಿ ಗಳಿಸಿಕೊಳ್ಳಬೇಕಿಲ್ಲ, ಅದು ನಮ್ಮೊಳಗೆಯೇ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕಷ್ಟೆ. ಕುಡಿಯುವುದು ಕೆಟ್ಟದ್ದು, ಸಿಗರೇಟು ಸೇದುವುದರಿಂದ ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವೂ ಹಾಳಾಗುತ್ತದೆ ಎಂಬುದು ಕುಡಿಯುವವರಿಗೂ ಗೊತ್ತು, ಧೂಮಪಾನಿಗಳಿಗೂ ಗೊತ್ತು. ಆದರೂ ಅವರು ಕುಡಿಯುತ್ತಾರೆ, ಸಿಗರೇಟು ಸೇದುತ್ತಾರೆ. ಏಕೆಂದರೆ ಅವರಲ್ಲಿನ ಇಚ್ಛಾಶಕ್ತಿಯನ್ನು ಅವರು ಉಪಯೋಗಿಸಿಕೊಳ್ಳಲು ಅವರ ಮನಸ್ಸು ಬಿಡುವುದಿಲ್ಲ. ಮಧುಮೇಹದಿಂದ ನರಳುತ್ತಿರುವವನ ಮನಸ್ಸು 'ಇದೊಂದು ಸಲ ಹೋಳಿಗೆ ತಿಂದುಬಿಡು, ಒಂದು ಮಾತ್ರೆ ಜಾಸ್ತಿ ತೆಗೆದುಕೊಂಡರಾಯಿತು' ಎಂದು ಪುಸಲಾಯಿಸುತ್ತದೆ. ಚಂಚಲ ಮನಸ್ಸಿಗೆ ಕಡಿವಾಣ ಹಾಕಬೇಕೆಂದರೆ ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡಲೇಬೇಕು.
     ಮನಸ್ಸಿನ ನಿಯಂತ್ರಣಕ್ಕೆ ಮತ್ತು ಇಚ್ಛಾಶಕ್ತಿಯ ಉಪಯೋಗಕ್ಕೆ ಕೆಲವು ಆಂತರಿಕ ಮತ್ತು ಬಾಹ್ಯ ಆಚರಣೆಗಳು ನೆರವಾಗುತ್ತವೆ. ಯಾವುದಾದರೂ ಶುಭ ಕಾರ್ಯ ಮಾಡುವ ಮುನ್ನ ಸಂಕಲ್ಪ ಮಾಡುವ, ಕಂಕಣ ಕಟ್ಟಿಕೊಳ್ಳುವ ಸಂಪ್ರದಾಯವಿದೆ. ನಾವು ಮಾಡುವ ಈ ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ನಿಶ್ಚಯದಿಂದ ಆ ಕೆಲಸ ಮುಗಿಯುವವರೆಗೂ ಶ್ರದ್ಧೆಯಿಂದ ಮಾಡುವವರು ಇರುತ್ತಾರೆ. ಅಂತಹ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ, ಸಂತೋಷವೂ ಸಿಗುತ್ತದೆ. ಸ್ವಾಮಿ ಅಯ್ಯಪ್ಪನ ದರ್ಶನ ಮತ್ತು ಪೂಜೆಯ ಸಲುವಾಗಿ ಮಾಲೆ ಧರಿಸುವವರ ನಡವಳಿಕೆಗಳನ್ನು ನಾವು ಕಂಡಿರುತ್ತೇವೆ ಅಲ್ಲವೇ? ಅವರು ವ್ರತದಲ್ಲಿರುವ ಅವಧಿಯಲ್ಲಿ ಅವರು ಎಲ್ಲರನ್ನೂ 'ಸ್ವಾಮಿ' ಎಂದೇ ಸಂಬೋಧಿಸುತ್ತಾರೆ, ಸ್ತ್ರೀ ಸಂಗ ಮಾಡುವುದಿಲ್ಲ, ಯಾರ ಮೇಲೂ ಸಿಟ್ಟಿಗೇಳುವುದಿಲ್ಲ, ಕುಡಿಯುವ, ಮಾಂಸ ತಿನ್ನುವ ಅಭ್ಯಾಸವಿರುವವರು ಆ ಅವಧಿಯಲ್ಲಿ ಅವನ್ನೆಲ್ಲಾ ವರ್ಜಿಸುತ್ತಾರೆ. ಇದನ್ನೆಲ್ಲಾ ಅವರುಗಳು ಮಾಡುವುದು ಅವರ 'ಸಂಕಲ್ಪ'ದ/ಇಚ್ಛಾಶಕ್ತಿಯ ಕಾರಣದಿಂದ! ಒಳ್ಳೆಯ ನಿರ್ಧಾರಗಳನ್ನು ಮುಂದುವರೆಸಲು ಅವಕಾಶವಿದೆ ಅಲ್ಲವೇ? ಇದು ಅವರವರ ವೈಯಕ್ತಿಕ ಸ್ವಭಾವಗಳನ್ನು ಅವಲಂಬಿಸಿರುತ್ತದೆ. ಭಜನೆ, ಪೂಜೆ, ಪುನಸ್ಕಾರ, ಇತ್ಯಾದಿಗಳು ಮನಸ್ಸನ್ನು ನಿಯಂತ್ರಿಸಲು, ಶಾಂತಗೊಳಿಸಲು ಪೂರಕ ಸಹಕಾರ ಕೊಡುತ್ತವೆ. ಇವುಗಳನ್ನು ಅಂತರಂಗ ಒಪ್ಪುವ ರೀತಿಯಲ್ಲಿ ಮಾಡಬೇಕಷ್ಟೆ. ತೋರಿಕೆಯ ಆಚರಣೆಗಳು ತೋರಿಕೆಯ ಫಲ ಕೊಟ್ಟಾವು! ಸಜ್ಜನರ ಸಹವಾಸ, ಗುರು-ಹಿರಿಯರ ಮಾರ್ಗದರ್ಶನಗಳು, ಸಂಸ್ಕಾರಯುತ ನಡವಳಿಕೆಗಳು, ಸುಯೋಗ್ಯ ಶಿಕ್ಷಣ, ಉತ್ತಮ ವೃತ್ತಿ, ಪ್ರವೃತ್ತಿಗಳು ಸಹ ಹುಚ್ಚು ಕುದುರೆಯಂತೆ ಓಡುವ ಮನಸ್ಸಿಗೆ ಕಡಿವಾಣ ಹಾಕಲು ಸಹಕಾರಿ. ಮನಸ್ಸು ಹೀಗೆ ನಮ್ಮ ಅಧೀನಕ್ಕೆ ಬರಲು ಇಂತಹ ಸತ್ಸಂಗಗಳು, ಸಜ್ಜನ ಸಹವಾಸ, ಗುರು-ಹಿರಿಯರ ಮಾರ್ಗದರ್ಶನ ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿಯಮಿತವಾದ ಒಳ್ಳೆಯ ಅಭ್ಯಾಸಗಳು- ಪ್ರತಿನಿತ್ಯ ವಾಕಿಂಗ್ ಮಾಡುವುದು, ವ್ಯಾಯಾಮ, ಯೋಗಾಭ್ಯಾಸ, ಇತ್ಯಾದಿಗಳಲ್ಲಿ ತೊಡಗುವುದು, ಉತ್ತಮ ಸಾಹಿತ್ಯವನ್ನು ಓದಲು ಸಮಯ ಮಾಡಿಕೊಳ್ಳುವುದು, ಆರೋಗ್ಯಕರವಾದ ಆಹಾರ ಸೇವನೆ, ಇತ್ಯಾದಿಗಳೂ ಸಹ ಮನಸ್ಸನ್ನು ಹಿಡಿತದಲ್ಲಿಡಲು ಉಪಯೋಗಕಾರಿ. ಹಿಡಿತದಲ್ಲಿರುವ ಮನಸ್ಸಿಗೆ ಇಚ್ಛಾಶಕ್ತಿಯ ಆದೇಶವನ್ನು ಪಾಲಿಸುವ ಮನಸ್ಸು ಬರುತ್ತದೆ.
     "ಯಶಸ್ಸು ಮುಕ್ತಾಯವಲ್ಲ, ಸೋಲು ಹೀನಾಯವಲ್ಲ; ಆದರೆ ಸತತ ಪ್ರಯತ್ನ ಮಾಡುತ್ತಿರುವುದು ಮಾತ್ರ ಲೆಕ್ಕಕ್ಕೆ ಬರುತ್ತದೆ! ಗೆಲ್ಲಬೇಕೆಂಬ ಇಚ್ಛಾಶಕ್ತಿ ಪ್ರಬಲವಾಗಿದ್ದರೆ ಸೋಲು ಅದನ್ನು ಹಿಮ್ಮೆಟ್ಟಿಸಲಾರದು. ಅಸಾಧ್ಯ ಮತ್ತು ಸಾಧ್ಯಗಳ ನಡುವಣ ವ್ಯತ್ಯಾಸ ಇಚ್ಛಾಶಕ್ತಿಯಲ್ಲಿದೆ. ಗೆಲ್ಲುವ ಧೃಢನಿರ್ಧಾರ ಗೆಲ್ಲುವುದಕ್ಕಿಂತಲೂ ದೊಡ್ಡದು. ಸೋಲಿಗೆ ನಿಜವಾದ ಕಾರಣವೆಂದರೆ ಇಚ್ಛಾಶಕ್ತಿಯ ಕೊರತೆಯಷ್ಟೆ."
     ಇಚ್ಛಾಶಕ್ತಿಯಿರುವ ವ್ಯಕ್ತಿ ಹೇಗೆ ಯೋಚಿಸುತ್ತಾನೆ, ಗೊತ್ತೇ? ಆರ್ಕಿಮಿಡಿಸ್ ಹೇಳುತ್ತಿದ್ದ ಮಾತು ಇದು: 'ನನಗೆ ಒಂದು ದೊಡ್ಡ ಮೀಟುಕೋಲು ಮತ್ತು ಅದನ್ನು ಸನ್ನೆಯಂತೆ ಬಳಸಲು ಒಂದು ಕಲ್ಲು ಹಾಗೂ ನಿಲ್ಲಲು ಸರಿಯಾದ ಸ್ಥಳ ಸಿಕ್ಕರೆ ಪ್ರಪಂಚವನ್ನೇ ಮೀಟುವೆ." ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಗೆಲ್ಲುವ ಪದಕಗಳು ಚಿನ್ನದ್ದಿರಬಹುದು, ಆದರೆ ಅವುಗಳು ನಿಜವಾಗಿಯೂ ಚಿನ್ನದ್ದಲ್ಲ, ಸ್ಪರ್ಧಿಗಳ ಬೆವರು, ಧೃಢನಿರ್ಧಾರ ಮತ್ತು ಅದಮ್ಯ ಶಕ್ತಿಗಳಿಂದ ಕೂಡಿದ್ದಾಗಿರುತ್ತವೆ. ರಾಹುಲ್ ದ್ರಾವಿಡರ ಈ ಮಾತು ಮನನೀಯ: "ನಾವು ಕೌಶಲ್ಯವನ್ನು ತಪ್ಪಾಗಿ ಅರ್ಥೈಸುತ್ತೇವೆ. ನಾನೂ ಸಹ ಆ ತಪ್ಪು ಮಾಡಿದ್ದೇನೆ. ಕ್ರಿಕೆಟ್ ಚೆಂಡನ್ನು ಹೊಡೆಯುವ ರೀತಿ, ಹೊಡೆಯುವ ಆ ಸರಿಯಾದ ಸಮಯಗಳನ್ನು ಕೌಶಲ್ಯವಾಗಿ ಕಾಣುತ್ತೇವೆ. ಆದರೆ ಅದರ ಹಿಂದಿನ ಧೃಢನಿರ್ಧಾರ, ಧೈರ್ಯ, ಶಿಸ್ತು, ಮನೋಭಾವ, ಇತ್ಯಾದಿಗಳೂ ಕೌಶಲ್ಯಗಳಾಗಿವೆ." ದ್ರಾವಿಡರ ಆ ಇಚ್ಛಾಶಕ್ತಿಯೇ ಅವರನ್ನು ಬೌಲರುಗಳು ಬೀಳಿಸಲಾಗದ 'ಗೋಡೆ'ಯಾಗಿ ಅವರನ್ನು ರೂಪಿಸಿದ್ದು, ಭಾರತವನ್ನು ಅನೇಕ ಸಂದರ್ಭಗಳಲ್ಲಿ ಸಂಕಷ್ಟದ ಸ್ಥಿತಿಯಿಂದ ಪಾರು ಮಾಡಿದ್ದು! ನಾವೂ ಸಹ ನಮ್ಮೊಳಗೇ ಇರುವ ಇಚ್ಛಾಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿಕೊಳ್ಳಬಹುದಲ್ಲವೇ?
-ಕ.ವೆಂ.ನಾಗರಾಜ್.
**************
ದಿನಾಂಕ 12.1.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಜನವರಿ 12, 2015

ವಿವೇಕಾನಂದ ಜಯಂತಿ

     ದಿನಾಂಕ 11.1.2015ರಂದು ಸ್ಪಂದನ ವೇದಿಕೆಯ ಕಲಾವತಿ ಮಧುಸೂದನ್ ಮತ್ತು ಅವರ ಸಹಕಾರಿಗಳು ವಿವೇಕಾನಂದರ 152ನೆಯ ಜನ್ಮದಿನಾಚರಣೆ ನಿಮಿತ್ತ ಜಿಲ್ಲಾಮಟ್ಟದ ವಚನ ಗಾಯನ ಸ್ಪರ್ಧೆ ಮತ್ತು ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಕಲಚೇತನರಿಗೆ ಉಪಯುಕ್ತ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾನೂ ಸಹ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದೆ. ವೇದಭಾರತಿಯ ಸಕ್ರಿಯ ಕಾರ್ಯಕರ್ತೆಯೂ ಆದ ಕಲಾವತಿಯವರು ಕಾರ್ಯಕ್ರಮವನ್ನು ಅಗ್ನಿಹೋತ್ರದಿಂದ ಆರಂಭಿಸಲು ವ್ಯವಸ್ಥೆ ಮಾಡಿದ್ದು ವಿಶೇಷ. ಕಾರ್ಯಕ್ರಮದ ಕೆಲವು ಫೋಟೋಗಳಿವು:








ಮಂಗಳವಾರ, ಜನವರಿ 6, 2015

ಮನಸ್ಸೇ ಪ್ರಪಂಚ, ಪ್ರಪಂಚವೇ ಮನಸ್ಸು !


     ಜ್ಞಾನ ದೊಡ್ಡದು, ಜ್ಞಾನಕ್ಕೆ ಆಧಾರವಾದ ಮಾತು ಅದಕ್ಕಿಂತ ದೊಡ್ಡದು ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಮತ್ತು ಮಾತುಗಳಿಗೂ ಒಬ್ಬ ಯಜಮಾನನಿದ್ದಾನೆ. ಅವನೇ ಮನಸ್ಸು! ಭಾಷೆಯ ಮೂಲಕ ಮೂಡುವ ಎಲ್ಲಾ ಅಭಿವ್ಯಕ್ತಿಗಳು ಮನಸ್ಸಿನಿಂದಲೇ ನಿಯಂತ್ರಿತವಾದವು. ಮನಸ್ಸು ನಿಷ್ಕ್ರಿಯವಾಗಿದ್ದರೆ, ಮಾತೂ ಇಲ್ಲ, ಜ್ಞಾನವೂ ಸೊನ್ನೆ. ಆದ್ದರಿಂದ ಮನಸ್ಸು ಈ ಎರಡಕ್ಕಿಂತಲೂ ದೊಡ್ಡದಾಗಿದೆ. ಮನಸ್ಸಿನಲ್ಲಿ ಜ್ಞಾನವೂ ಇದೆ, ಮಾತೂ ಇದೆ. ಇದೇ ಮನಸ್ಸಿನ ಶಕ್ತಿ. ನಾವು ಏನನ್ನೇ ಮಾಡಲಿ, ಏನನ್ನೇ ಮಾತನಾಡಲಿ, ಮೊದಲು ಮನಸ್ಸು ಅದನ್ನು ನಿರ್ಧರಿಸುತ್ತದೆ. ನಾವು, "ಹೀಗೆ ಮಾಡೋಣ, ಹಾಗೆ ಮಾಡೋಣ" ಎಂದು ಮೊದಲು ಅಂದುಕೊಳ್ಳುತ್ತೇವೆ, ನಂತರ ಮಾಡಲು ಹೊರಡುತ್ತೇವೆ, ಮಾಡುತ್ತೇವೆ.
     ಜೀವನದಲ್ಲಿ ಮನಸ್ಸು ಪ್ರಧಾನವಾದದ್ದು, ಇದು ಎಲ್ಲರಿಗೂ ತಿಳಿದದ್ದೇ. ವ್ಯಾವಹಾರಿಕವಾಗಿ ಹೇಳಬೇಕೆಂದರೆ ನಾವು ಅಂದರೆ ನಮ್ಮ ಮನಸ್ಸೇ ಆಗಿದೆ. 'ನಾನು' ಅನ್ನುತ್ತೇವೆ. ಈ 'ನಾನು' ಅಂದರೆ ಯಾರು? ಈ 'ನಾನು' ಎಂದರೆ ಮನಸ್ಸು ಬಿಟ್ಟು ಮತ್ತೇನೂ ಅಲ್ಲವೆಂದು ಅಂದುಕೊಳ್ಳುತ್ತೇವೆ. ಹಾಗಾದರೆ ಈ ಮನಸ್ಸು ನಮ್ಮತನವನ್ನು ಹೊಂದಿದೆ. 'ನಾನು' ಎಂದರೆ ಮನಸ್ಸಲ್ಲವೆಂಬುದು ತರ್ಕಿಸಿದಾಗ ಗೊತ್ತಾಗುತ್ತಾ ಹೋಗುತ್ತದೆ. ಕನ್ನಡಿ ಬೆಳಕನ್ನು ಪ್ರತಿಫಲಿಸಿದಂತೆ ಮನಸ್ಸು ಆತ್ಮನನ್ನು ಪ್ರತಿಫಲಿಸುತ್ತಿದೆಯಷ್ಟೆ. ಆದ್ದರಿಂದ ವ್ಯಾವಹಾರಿಕ ಉದ್ದೇಶಗಳಿಗೆ ಮನಸ್ಸು ಎಂದರೆ ಆತ್ಮ ಅರ್ಥಾತ್ 'ನಾನು' ಆಗಿರುತ್ತದೆ. ಈ ಪ್ರಪಂಚದಲ್ಲಿ ನಾವು ಏನು ಸಾಧಿಸುತ್ತೇವೆಯೋ ಅದೆಲ್ಲದಕ್ಕೂ ಮನಸ್ಸೇ ಕಾರಣವಾಗಿದೆ, ಏಕೆಂದರೆ ಪ್ರಪಂಚವೆಂದರೆ ನಮ್ಮ ಅನುಭವಕ್ಕೆ ಏನು ಬರುತ್ತದೆಯೋ ಅದೇ ಆಗಿದೆ. ನಮ್ಮ ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ನಮ್ಮ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ಮನಸ್ಸು ಕೆಲಸ ಮಾಡಿದೆ. ಆದ್ದರಿಂದ ನಮ್ಮ ಅನುಭವಗಳು, ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ಮನಸ್ಸಿನಿಂದಲೇ ಆಗಿದೆ. ಆದ್ದರಿಂದ ಒಂದು ಅರ್ಥದಲ್ಲಿ ಮನಸ್ಸೇ ಪ್ರಪಂಚವಾಗಿದೆ.
     ಧ್ಯಾನದಲ್ಲಿ ಮನಸ್ಸು ಪ್ರಧಾನ ಪಾತ್ರ ವಹಿಸುತ್ತದೆ. ಮನಸ್ಸು ಏನನ್ನು ಚಿಂತಿಸಲು ಸಾಧ್ಯವೋ ಅಷ್ಟನ್ನು ಧ್ಯಾನದ ಮಿತಿಯಲ್ಲಿ ತರಲು ಸಾಧ್ಯ. ಸಾಮಾನ್ಯರಾದ ನಾವುಗಳು ಧ್ಯಾನದಲ್ಲಿ ತಲುಪಬಹುದಾದ ಅಂತಿಮ ಘಟ್ಟ ಇದು. ಮನಸ್ಸಿನ ಚಿಂತನಾಧಾಟಿಯನ್ನು ಮೀರಿ ಏನು ಮಾಡಲಾದೀತು? ಆದ್ದರಿಂದ ಮನಸ್ಸಿನ ಎಲ್ಲಾ ಸಾಧ್ಯತೆಗಳನ್ನು ಒಟ್ಟುಗೂಡಿಸಿ ಕಲಾತ್ಮಕವಾಗಿ, ಸುಂದರವಾಗಿ, ನಮ್ಮ ತಿಳುವಳಿಕೆಯ ಮಟ್ಟಕ್ಕೆ ಪರಿಪೂರ್ಣ ಅನ್ನುವ ಒಂದು ನಿರ್ದಿಷ್ಟ ರೀತಿಗೆ ತಂದುಕೊಂಡಲ್ಲಿ 'ಪರಿಪೂರ್ಣ' ಅನ್ನುವುದರ ಕಲ್ಪನೆ ನಮಗೆ ಬಂದೀತು! ಯಾವುದೇ ಸಂಗತಿಯಿರಲಿ, ವಿಚಾರವಿರಲಿ, ಅದರ ಪರಿಪೂರ್ಣತೆಯ ಹಂತಕ್ಕೆ ಮನಸ್ಸನ್ನು ಕರೆದೊಯ್ಯಬೇಕು. ಮನಸ್ಸು ಚಂಚಲಗೊಳ್ಳಲು ಕಾರಣವೆಂದರೆ ನಾವು ಏನನ್ನು ಧ್ಯಾನಿಸುತ್ತಿರುತ್ತೇವೆಯೋ ಅದಕ್ಕಿಂತ ಹೊರತಾಗಿ, ಅದಕ್ಕಿಂತ ಮೇಲಿನದು ಮತ್ತೇನೋ ಇದೆಯೆಂಬ ಸೂಕ್ಷ್ಮ ಭಾವನೆ ಬರುವುದೇ ಆಗಿದೆ. ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸಲು ಮನಸ್ಸು ಚಿಂತಿಸಲು ಸಾಧ್ಯವಿರುವ ಪ್ರತಿಯೊಂದು ಒಳ್ಳೆಯ ವಿಚಾರಗಳನ್ನು ಒಳಗೊಂಡಂತೆ ಇರುವಂತಹ ಸಂಗತಿಯಾದರೆ ಉತ್ತಮವಾಗಿರುತ್ತದೆ.
     'ನಾನು' ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು 'ನಾನು' ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ 'ನಾನು' ಅಥವ ಆತ್ಮ ಆಗಲಾರದು. ಧ್ಯಾನ ಅನ್ನುವುದು ಈ 'ನಾನು' ಮತ್ತು ಮನಸ್ಸನ್ನು ಒಟ್ಟುಗೂಡಿಸಿ ಮನಸ್ಸನ್ನು ನಿಯಂತ್ರಿಸಲು ಇರುವ ಸಾಧನವಾಗಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಾವು ಯಜಮಾನರೆನಿಸಿಕೊಳ್ಳಬೇಕೆಂದರೆ ಅದರ ಮೇಲೆ ನಮ್ಮ ನಿಯಂತ್ರಣವಿರಬೇಕು. ಮನಸ್ಸನ್ನು ನಿಯಂತ್ರಿಸಿ ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾದ ಸಾಧನವೆಂದರೆ ಧ್ಯಾನವೇ ಆಗಿದೆ.
     ಮನಸ್ಸಿನ ಚಂಚಲತೆ ಕುರಿತು ಈ ಉದಾಹರಣೆಯನ್ನು ಒಮ್ಮೆ ಹೇಳಿದ್ದೆ. ಪ್ರಸ್ತುತವೆನಿಸಿರುವುದರಿಂದ ಮತ್ತೆ ಉಲ್ಲೇಖಿಸುವೆ. ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ: 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. ಖ ಅಂದರೆ ಇಂದ್ರಿಯ, ಸು-ಖ ಅಂದರೆ,  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ ಅಂದರೆ, ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
     ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ.
     ಭಗವದ್ಗೀತೆಯಲ್ಲಿ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮ ಪ್ರಶ್ನೆಯೂ ಆಗಿದೆ: ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || (೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಈ ಪ್ರಶ್ನೆ 'ಕುಡಿಯುವುದು ಕೆಟ್ಟದ್ದು ಎಂದು ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ?' ಎಂದು ಕೇಳಿದಂತೆ ಇದೆ. ಶ್ರೀಕೃಷ್ಣ ಹೇಳುತ್ತಾನೆ: "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು." ಮುಂದುವರೆದು ಹೇಳುತ್ತಾನೆ: 'ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು.' ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ ಸತ್ಯಾಸತ್ಯತೆಯ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
      ಸಾಧನೆಯ ಮೊದಲ ಹಂತ ಜ್ಞಾನದೊಡೆಯರಾಗುವುದು. ಎರಡನೆಯ ಹಂತ ನಾವಾಡುವ ಮಾತುಗಳಿಗೆ ಒಡೆಯರಾಗುವುದು. ಮೂರನೆಯ ಹಂತವೇ 'ನಾನು' ಎಂದು ನಾವು ಅಂದುಕೊಂಡಿರುವ ನಮ್ಮ ಮನಸ್ಸುಗಳಿಗೆ ಯಜಮಾನರಾಗುವುದು!
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
-ಕ.ವೆಂ.ನಾಗರಾಜ್.  
***************
ದಿನಾಂಕ 5.1.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಗುರುವಾರ, ಜನವರಿ 1, 2015

ವಾಕ್ಕೊಡೆಯರಾಗೋಣ !


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|
ಸುಜನವಾಣಿ ಗುರುವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ||
     ಮಾನವನಿಗೆ ಅಗತ್ಯವಿರುವ ಜ್ಞಾನ ಮತ್ತು ಜ್ಞಾನದ ಅಂತಸ್ಸತ್ವದ ಅರಿವಿರದಿದ್ದರೆ ಜ್ಞಾನ ಹೇಗೆ ಅರ್ಥಹೀನವಾಗುತ್ತದೆ ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಅನ್ನುವುದು ಹೇಗೆ ಪ್ರಾಪ್ತವಾಗುತ್ತದೆ? ಜ್ಞಾನದ ಮೂಲ ಯಾವುದು?  ಈ ಜ್ಞಾನದ ಉಗಮದ ಮೂಲ ವಾಕ್ಕುವೇ ಆಗಿದೆ. ವೇದ ಸಾಹಿತ್ಯ ಈಗ ಲಭ್ಯವಿರುವ ಸಾಹಿತ್ಯಗಳ ಪೈಕಿ ಅತ್ಯಂತ ಪುರಾತನವಾದುದು. ಸುಮಾರು ೫೦೦೦ ವರ್ಷಗಳ ಹಿಂದೆ ವೇದಸಾಹಿತ್ಯ ರಚಿತವಾಯಿತೆನ್ನುತ್ತಾರೆ. ಅದಕ್ಕೂ ಮುಂಚೆ ವೇದವಿರಲಿಲ್ಲವೇ? ಇತ್ತು, ಅದರೆ ಅದನ್ನು ಲಿಪಿಯಲ್ಲಿ ಒಡಮೂಡಿಸಿದ್ದು ಆ ಸಮಯದಲ್ಲಿ ಅಷ್ಟೆ. ಅಪೌರುಷೇಯವೆನ್ನಲಾಗುವ ವೇದಗಳು ಮಂತ್ರದ್ರಷ್ಟಾರರಾದ ಋಷಿಮುನಿಗಳ ಮೂಲಕ ಪ್ರಕಟವಾಗಿ ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಕಲಿಸಲ್ಪಟ್ಟು ಮುಂದುವರೆದುಕೊಂಡು ಬಂದಿತ್ತು. ವೇದವ್ಯಾಸರು ಅವುಗಳನ್ನು ಸಂಗ್ರಹಿಸಿ ಒಂದು ರೂಪವಿತ್ತರು.
      ಮಾತು ಅನ್ನುವುದು ಒಳಗೆ ಉತ್ಪನ್ನವಾಗುವ ಭಾವದ ಪ್ರಕಟರೂಪ. ತಮ್ಮೊಳಗಿನ ಭಾವಗಳನ್ನು ಇನ್ನೊಬ್ಬರಿಗೆ ವ್ಯಕ್ತಪಡಿಸುವ ಸಲುವಾಗಿ ಹೊರಡಿಸಿದ ಶಬ್ದ/ಧ್ವನಿ/ಸಂಜ್ಞೆಗಳೇ ಮಾತುಗಳಾದವು. ಒಂದು ಪ್ರದೇಶದಲ್ಲಿನ ಜನರಿಗೂ, ಬೇರೆ ಪ್ರದೇಶಗಳಲ್ಲಿನ ಜನರ ಅಭಿವ್ಯಕ್ತಿಯ ಸ್ವರೂಪದ ಶಬ್ದಗಳು/ರೀತಿಗಳು ಬೇರೆ ಬೇರೆ ರೀತಿಯಲ್ಲಿದ್ದುದರಿಂದ ಆ ಮಾತುಗಳು ಬೇರೆ ಬೇರೆ ಭಾಷೆಗಳೆನಿಸಿದವು. ಇದನ್ನು ಭಾಷಾವಿಜ್ಞಾನವೆನ್ನಬಹುದು. ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ಲಿಪಿಗಳು ರಚಿಸಲ್ಪಟ್ಟವು. ಈ ಎಲ್ಲಾ ರಚನೆಗಳಿಗೂ ಮೂಲವಾದುದು ಒಡಮೂಡಿದ ಮಾತುಗಳೇ! ನಾವು ಜ್ಞಾನಭಂಡಾರವೆಂದು ಪರಿಗಣಿಸುವ ವೇದಗಳು, ಬೈಬಲ್, ಕುರಾನ್ ಮೊದಲಾದ ಧರ್ಮಗ್ರಂಥಗಳು, ವಿಜ್ಞಾನ, ಗಣಿತ ಮುಂತಾದವುಗಳು ರಚಿತವಾಗಬೇಕಾದರೆ ಅವು ಮೊದಲು ಮಾತುಗಳ ಮೂಲಕವೇ ಮೂಡಿದವು ಅಲ್ಲವೇ? ಆದುದರಿಂದ ಯಾವುದರಿಂದ ಜ್ಞಾನ ಮೂಡಿತೋ ಆ ಮಾತುಗಳು ಜ್ಞಾನಕ್ಕಿಂತ ಮೇಲಿನದು. ಎಲ್ಲ ಜ್ಞಾನಗಳ ಹಿಂದಿನ ಬೆನ್ನೆಲುಬು, ಹಿನ್ನೆಲೆ ಮಾತುಗಳೇ ಆಗಿವೆ. ಕಾರಣವು ಪರಿಣಾಮಕ್ಕಿಂತ ಹಿರಿದು. ಈ ಭೂಮಿ, ಈ ವಿಶ್ವ, ಪ್ರತಿಯೊಂದು ವಸ್ತು, ಸಂಗತಿಗಳು ಜ್ಞಾನದ ಮೂಲಕ ಅರ್ಥಾತ್ ಅದರ ಹಿಂದಿನ ಮಾತು/ಅಭಿವ್ಯಕ್ತಿಗಳ ಮೂಲಕವೇ ನಮ್ಮ ಅರಿವಿಗೆ ಬಂದಿದೆ.
     ಮುಖವು ವ್ಯಕ್ತಿತ್ವದ ಸೂಚಿ ಎನ್ನುತ್ತಾರೆ. ಆದರೆ ಮಾತು ನಿಜವಾಗಿ ಮನುಷ್ಯನ ಸ್ವಭಾವದ ಕನ್ನಡಿ ಅನ್ನಬಹುದು. ನೋಡಲು ಕೆಲವರು ದೊಡ್ಡ ಜ್ಞಾನಿಯಂತೆ ತೋರುತ್ತಾರೆ. ಆದರೆ ಅವರು ಮಾತನಾಡಿದಾಗ ಗೊತ್ತಾಗುತ್ತದೆ ದಡ್ಡಶಿಖಾಮಣಿಗಳೆಂದು! ಅಂತಹವರನ್ನೇ ಕುರಿತು ಇರುವ ಗಾದೆ ಮಾತು ಇದು: 'ಬಾಯಿ ಬಿಟ್ಟರೆ ಬಣ್ಣಗೇಡು'. ನಯ-ವಿನಯದ ಮಾತುಗಳು ಸುಸಂಸ್ಕಾರವನ್ನು ತೋರಿಸಿದರೆ, ಸಭ್ಯತೆಯ ಎಲ್ಲೆ ಮೀರಿದ ಮಾತುಗಳು ಕುಸಂಸ್ಕಾರವನ್ನು ಬಿಂಬಿಸುತ್ತವೆ. ಮಾತುಗಳು ಹೊರಡುವ ರೀತಿಯಿಂದ ವ್ಯಕ್ತಿ ಕೋಪದಲ್ಲಿದ್ದಾನೋ, ತಾಳ್ಮೆಯಿಂದಿದ್ದಾನೋ, ವ್ಯಂಗ್ಯವಿದೆಯೋ, ಪ್ರೀತಿಯಿದೆಯೋ, ದ್ವೇಷವಿದೆಯೋ, ದರ್ಪಿಷ್ಟನೋ, ಅಹಂಕಾರಿಯೋ, ಇತ್ಯಾದಿಗಳು ತಿಳಿದುಬಿಡುತ್ತವೆ. ಜ್ಞಾನಕ್ಕೂ ಮಾತಿಗೂ ಅವಿನಾಭಾವ ಸಂಬಂಧವಿದೆ. ಜ್ಞಾನ ಹೆಚ್ಚಿದಷ್ಟೂ ಮಾತಿನ ಸೌಂದರ್ಯ ಹೆಚ್ಚುತ್ತಾ ಹೋಗುತ್ತದೆ.
ಮಾತಿನಲಿ ವಿಷಯ ಭಾಷೆಯಲಿ ಭಾವ
ಅನುಭವದಿ ಪಾಂಡಿತ್ಯ ಮೇಳವಿಸಿ|
ಕೇಳುಗರಹುದಹುದೆನುವ ಮಾತುಗಾರ
ಸರಸತಿಯ ವರಸುತನು ಮೂಢ||
     ನಾನು ಹೊಳೆನರಸಿಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಗೊಂಬೆ ಸುಬ್ಬಯ್ಯ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ಅವಿದ್ಯಾವಂತ, ಶಾಲೆಯ ಮೆಟ್ಟಲು ಹತ್ತಿದವನಲ್ಲ. ತೊಗಲು ಗೊಂಬೆ ಆಡಿಸಿ ಜೀವನ ನಡೆಸುತ್ತಿದ್ದವನು. ಅವನು ಊರೂರು ಸುತ್ತಿ ತೊಗಲು ಗೊಂಬೆ ಆಡಿಸಲು ಹೋಗುತ್ತಿದ್ದರಿಂದ ಆ ಅವಕಾಶ ಉಪಯೋಗಿಸಿಕೊಂಡು, ಸರ್ಕಾರದಿಂದ ಅವನಿಗೆ ಮಂಜೂರಾಗಿದ್ದ ದರ್ಖಾಸ್ತು ಜಮೀನನ್ನು ಗ್ರಾಮದ ಒಬ್ಬ ಬಲಾಢ್ಯ ಅತಿಕ್ರಮಿಸಿಕೊಂಡಿದ್ದ. ಅದನ್ನು ಮರಳಿ ಸುಬ್ಬಯ್ಯನಿಗೆ ಬಿಡಿಸಿಕೊಟ್ಟಿದ್ದೆ. ಈ ವಿಷಯ ಒತ್ತಟ್ಟಿಗಿರಲಿ. ಒಮ್ಮೆ ಬಿಡುವಾಗಿದ್ದಾಗ ಆತನಿಂದ ಗೊಂಬೆ ಆಡಿಸುವ ಸಲುವಾಗಿ ಹಿನ್ನೆಲೆಯಾಗಿ ಹೇಳುತ್ತಿದ್ದ ಪದ್ಯಗಳು, ಕಥೆಗಳು ಇವುಗಳನ್ನು ಹೇಳಿಸಿ ಕೇಳಿದ್ದೆ. ಪುರಾಣದ, ಜನಪದದ ಕಥೆಗಳನ್ನು ಆತ ಹೇಳುತ್ತಿದ್ದ ರೀತಿ, ಸುಶ್ರಾವ್ಯವಾಗಿ ಹೇಳುತ್ತಿದ್ದ ಪದ್ಯಗಳು, ಅದರಲ್ಲಿ ಬರುವ ಪಾತ್ರಗಳ ಸಂಭಾಷಣೆಗಳು ಇತ್ಯಾದಿಗಳನ್ನು ಕೇಳಿ ಬೆರಗಾಗಿದ್ದೆ. ಭೀಮ ದುರ್ಯೋಧನ, ಇತ್ಯಾದಿ ಪಾತ್ರಗಳ ಕುರಿತು ಅವನ ವಿಮರ್ಶೆ ಮಾಡುತ್ತಿದ್ದ ರೀತಿ ಯಾವ ಪಂಡಿತೋತ್ತಮರಿಗಿಂತಲೂ ಕಡಿಮೆಯಿರಲಿಲ್ಲ. ವಂಶ ಪಾರಂಪರ್ಯವಾಗಿ ಈ ಕಲೆ ಅವನಿಗೆ ಒಲಿದಿತ್ತಾದರೂ, ಜೀವನಾನುಭವಗಳು ಕಲೆಯ ಮೆರುಗನ್ನು ಹೆಚ್ಚಿಸಿದ್ದವು. ಆತ ತನ್ನ ಕಲಾಪ್ರದರ್ಶನದ ಹೊರತಾಗಿಯೂ ಮಾತನಾಡುತ್ತಿದ್ದ ರೀತಿ-ನೀತಿಗಳು ಅವನೊಬ್ಬ ಜ್ಞಾನಿ ಎಂಬುದನ್ನು ತೋರಿಸುತ್ತಿದ್ದವು. ಆತನ ಜ್ಞಾನದ ಮೂಲ ಮಾತೇ ಆಗಿತ್ತು!
     ಮಾತು ಎಂತಹ ಪವಾಡ ಮಾಡುತ್ತದೆ ಎಂಬುದಕ್ಕೆ ತಮಿಳುನಾಡಿನ ಪಾಲಂ ಕಲ್ಯಾಣಸುಂದರಮ್ ಜೀವಂತ ನಿದರ್ಶನವಾಗಿದ್ದಾರೆ. ವಿಶ್ವಸಂಸ್ಥೆ ಇವರನ್ನು '೨೦ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾದ ಒಂದು ಸಂಸ್ಥೆ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು 'ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು' ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುಚ್ಛ ಗೌರವಾನ್ವಿತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಇವರು ತಮ್ಮ ವೈಯಕ್ತಿಕ ಖರ್ಚುವೆಚ್ಚಗಳಿಗಾಗಿ ಹೋಟೆಲು ಮಾಣಿಯಾಗಿಯೂ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದರೆ ನಂಬಲು ಕಷ್ಟವಾದರೂ ಸತ್ಯವಾದ ಸಂಗತಿ. 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ ೩೦ ಕೋಟಿ ರೂ. ಹಣವನ್ನೂ ಸಹ ಬಿಡಿಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದ ಪುಣ್ಯಾತ್ಮರಿವರು. ಇವರ ಈ ರೀತಿಯ ಜೀವನಕ್ಕೆ ಪ್ರೇರಣೆ ನೀಡಿದ್ದು ಅವರು ಕೇಳಿದ ಮಾತುಗಳು! ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿ. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗಾಗಿ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರನ್ನು ಕಂಡು ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದಾಗ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ಹೇಳಿ ವಾಪಸು ಕಳಿಸಿದ್ದರು. ಈ ಮಾತು ಪವಾಡವನ್ನೇ ಮಾಡಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗೀ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು ೩೦ ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವನ್ನೂ, ಪಿಂಚಣಿ ಸೇರಿದಂತೆ. ಸಮಾಜಕ್ಕೆ ಅರ್ಪಿಸಿದ ಆ ಅಸಾಮಾನ್ಯ ಪುಣ್ಯಾತ್ಮ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ.
     ಧೀಮಂತ ಸಿಂಹ ಸಂನ್ಯಾಸಿ ಮರ್ಹ ದಯಾನಂದ ಸರಸ್ವತಿಯವರನ್ನು ಜಗತ್ತಿಗೆ ಪರಿಚಯಿಸಿದ ಗುರು ವಿರಜಾನಂದರು ರೂಪಿತವಾಗಿದ್ದೂ ನಿಂದನೆಯ ಮಾತುಗಳಿಂದ! ವಿರಜಾನಂದರು ಹುಟ್ಟು ಕುರುಡರು, ಚಿಕ್ಕಂದಿನಲ್ಲೇ ಅವರ ತಂದೆ-ತಾಯಿ ತೀರಿಹೋಗಿದ್ದರು. ಅವರ ಅಣ್ಣ, ಅತ್ತಿಗೆ ಆ ಚಿಕ್ಕ ಬಾಲಕನನ್ನು ಪ್ರತಿನಿತ್ಯವೆಂಬಂತೆ ದಂಡಪಿಂಡ, ಶನಿ, ಇತ್ಯಾದಿ ಮೂದಲಿಸುತ್ತಿದ್ದುದಲ್ಲದೆ, 'ಎಲ್ಲಿಗಾದರೂ ತೊಲಗಿ ಹೋಗಬಾರದೇ' ಎಂದು ಶಪಿಸುತ್ತಿದ್ದರು. ಇನ್ನು ಸಹಿಸುವುದು ಸಾಧ್ಯವಿಲ್ಲವೆನಿಸಿದಾಗ, ಪಂಜಾಬಿನ ಕರ್ತಾರಪುರದಲ್ಲಿದ್ದ ಆ ಎಂಟು ವರ್ಷದ ಕುರುಡ ಬಾಲಕ ಕೈಯಲ್ಲಿ ಒಂದು ಕೋಲು ಹಿಡಿದುಕೊಂಡು ಮನೆ ಬಿಟ್ಟು ಹೊರಟ. ೧೮ನೆಯ ಶತಮಾನದ ಆ ಸಂದರ್ಭದಲ್ಲಿ ಈಗಿನಂತೆ ರಸ್ತೆಗಳಾಗಲೀ, ವಾಹನ ಸೌಲಭ್ಯಗಳಾಗಲೀ ಇರಲಿಲ್ಲ. ಧೃಢಕಾಯರೇ ಒಬ್ಬರೇ ಓಡಾಡಲು ಹಿಂಜರಿಯುತ್ತಿದ್ದ ಆ ಸಮಯದಲ್ಲಿ ಕುರುಡ ಬಾಲಕ ಸುಮಾರು ೨೦೦೦ ಮೈಲುಗಳ ದೂರ ಕ್ರಮಿಸಿ ಹರಿದ್ವಾರ ತಲುಪಿದ್ದೇ ಒಂದು ಸಾಧನೆ. ಆತನ ಸಾಧನೆ ಇಲ್ಲಿಗೇ ನಿಲ್ಲಲಿಲ್ಲ. ಏಕಗ್ರಾಹಿಯಾಗಿದ್ದ ಅವರು ಗುರುಗಳಿಂದ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತದ್ದಲ್ಲದೇ, ಕೇವಲ ಕೇಳಿಯೇ ವೇದಗಳನ್ನು ಕಲಿತರು. ಅನೇಕ ವರ್ಷಗಳ ಕಾಲ ಗಾಯತ್ರಿ ಮಂತ್ರ ಪಠಿಸಿದ್ದರಿಂದ ದಿವ್ಯಜ್ಞಾನ ಪ್ರಾಪ್ತವಾಯಿತೆನ್ನುತ್ತಾರೆ. ಅದೇನೇ ಇರಲಿ, ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಪಡೆದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು. ಕಣ್ಣಿರುವವರಿಗೂ ಕಷ್ಟವಾದ ಆ ಜ್ಞಾನಪ್ರಾಪ್ತಿ ಪ್ರಜ್ಞಾಚಕ್ಷು ವಿರಜಾನಂದರಿಗೆ ಆಗಿತ್ತು.
ಮಾತಾಗಲಿ ಮುತ್ತು ತರದಿರಲಿ ಆಪತ್ತು
ಮಾತು ನಿಜವಿರಲಿ ನೋವು ತರದಿರಲಿ |
ಪ್ರಿಯವಾದ ಹಿತವಾದ ನುಡಿಗಳಾಡುವನು
ನುಡಿಯೋಗಿ ಜನಾನುರಾಗಿ ಮೂಢ ||
     ಈ ಮಾತಿನಿಂದಲೇ ಜಗತ್ತು ನಡೆಯುತ್ತಿದೆ! ಮಾತಿನಿಂದ ಸೃಷ್ಟಿಯಾಗುತ್ತಿದೆ, ಮಾತಿನಿಂದ ವಿನಾಶವಾಗುತ್ತಿದೆ, ಮಾತಿನಿಂದಲೇ ಎಲ್ಲವೂ ಆಗುತ್ತಿದೆ. ಮಾತಿನ ಮಹತ್ವದ ಕುರಿತು ಅದೆಷ್ಟು ಗಾದೆಗಳು, ನೀತಿಮಾತುಗಳು, ಅದೆಷ್ಟು ವಚನಗಳು, ದಾಸರ ಪದಗಳು, ಅದೆಷ್ಟು ಸಾಧು-ಸಂತರ ಮಾರ್ಗದರ್ಶನಗಳು!  ಕೇವಲ ಮಾತಿನಿಂದಲೇ ಒಬ್ಬರ ನೋವನ್ನು ಶಮನಗೊಳಿಸಬಹುದು, ಮಾತುಗಳಿಂದಲೇ ಒಬ್ಬರಿಗೆ ಚಿತ್ರಹಿಂಸೆ ಕೊಡಬಹುದು! ನಿಜವಾದ ಸಾಧಕ ಮಾತುಗಳಿಗೆ ಒಡೆಯನಾಗಿರುತ್ತಾನೆ. ದೇವರು ಎರಡು ಕಣ್ಣುಗಳು, ಎರಡು ಕಿವಿಗಳನ್ನು ಕೊಟ್ಟಿದ್ದರೂ ಬಾಯಿ ಒಂದೇ ಇದೆ. ಏಕೆಂದರೆ ಮಾತನಾಡುವುದಕ್ಕಿಂತ ನೋಡಲು, ಕೇಳಲು ಹೆಚ್ಚು ಆದ್ಯತೆ ಕೊಡಬೇಕಿದೆ. ವಾಕ್ಕೊಡೆಯನಾದವನು ಕೇವಲ ತಾನು ಆಡುವ ಮಾತುಗಳ ಮೇಲೆ ಹತೋಟಿ ಹೊಂದಿರುವುದಲ್ಲದೆ, ಇತರರ ಸ್ತುತಿ, ನಿಂದೆಗಳ ಕುರಿತೂ ನಿರ್ಲಿಪ್ತನಾಗಿರುತ್ತಾನೆ. ಜೈನ ಮುನಿ ಶ್ರೀ ತರುಣಸಾಗರರು ಹೇಳಿದ ಈ ಸಾಂದರ್ಭಿಕ ಉದಾಹರಣೆ ಮನನೀಯವಾಗಿದೆ. ಒಮ್ಮೆ ಶಿಷ್ಯ ಗುರುವಿಗೆ, "ಗುರುಗಳೇ, ಆಶ್ರಮಕ್ಕೆ ಭಕ್ತನೊಬ್ಬ ಹಸು ನೀಡಿದ್ದಾನೆ" ಎಂದಾಗ ಗುರು, "ಒಳ್ಳೆಯದಾಯಿತು. ಹಾಲು ಸಿಗುತ್ತದೆ" ಎಂದರು. ಒಂದು ವಾರದ ನಂತರದಲ್ಲಿ ಶಿಷ್ಯ, "ಗುರುಗಳೇ, ಯಾರು ಹಸುವನ್ನು ನೀಡಿದ್ದರೋ ಆ ಭಕ್ತ ಹಸುವನ್ನು ವಾಪಸು ತೆಗೆದುಕೊಂಡು ಹೋಗಿದ್ದಾನೆ" ಎಂದಾಗ ಗುರು, "ಒಳ್ಳೆಯದಾಯಿತು. ಸಗಣಿ ಬಾಚುವ ಕೆಲಸ ತಪ್ಪಿತು" ಎಂದರಂತೆ! ಬಂದದ್ದನ್ನು ಬಂದಂತೆ ಸ್ವೀಕರಿಸುವ, ಒಪ್ಪುವ ಮನೋಭಾವ ಸಾಧಕರಿಗೆ ಸುಲಭವಾಗಿರುತ್ತದೆ. ನಾವೂ ಸಹ 'ವಾಕ್ಕೊಡೆಯ'ರಾಗುವ ಪ್ರಯತ್ನ ಮಾಡೋಣ.
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು|
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ||
-ಕ.ವೆಂ.ನಾಗರಾಜ್.
***************
29.12.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: