ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಸೆಪ್ಟೆಂಬರ್ 30, 2018

ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೨


ಆರ್ಥಿಕ ಸಂಪನ್ಮೂಲ ಕ್ರೋಢೀಕರಣ
     ಕವಿಕಿರಣ ಪತ್ರಿಕೆಗೆ ಭಾರತದ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಇಂದ ಶೀರ್ಷಿಕೆಗೆ ಒಪ್ಪಿಗೆ ಪಡೆದ ನಂತರದಲ್ಲಿ ಸೋದರ ಸುರೇಶನನ್ನು ಮುದ್ರಕ ಮತ್ತು ಪ್ರಕಾಶಕ ಎಂದು ಅಧಿಕೃತಗೊಳಿಸಿ ಆವನಿಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ಅಗತ್ಯದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅಧಿಕಾರ ಪತ್ರ ನೀಡಿದೆ. ಪ್ರಮಾಣ ಪತ್ರ ಸಲ್ಲಿಸಿದ ನಂತರ ಪತ್ರಿಕೆಯ ನೋಂದಣಿ ಪತ್ರ ಬಂದಿತು. ಪತ್ರಿಕೆ ಅಧಿಕೃತವಾಗಿ ಬೆಂಗಳೂರಿನಲ್ಲಿ ನಡೆದ ಕವಿಮನೆತನದವರ ಮೂರನೆಯ ಕುಟುಂಬ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಯೂ ಆಯಿತು. ಪ್ರಾರಂಭದ ಸಂಚಿಕೆಗೆ ಅಮೆರಿಕಾದಲ್ಲಿರುವ ನನ್ನ ಕಿರಿಯ ಸಹೋದರ ಅನಂತ ಪ್ರಾಯೋಜಕನಾಗಿ ಮುಂದೆ ಬಂದಿದ್ದ. ಬೆಂಗಳೂರಿನ ಸಮಾವೇಶದಲ್ಲಿಯೇ ಜಾವಗಲ್ಲಿನಲ್ಲಿದ್ದ ನನ್ನ ತಾಯಿಯ ತಮ್ಮ ಪುಟ್ಟರಾಜುವನ್ನು ಮುಂದಿನ ಸಂಚಿಕೆಗೆ ಪ್ರಾಯೋಜಕನಾಗಲು ಒಪ್ಪಿಸಿದ್ದೆ. ಹೀಗೆ ಅಡಿಗಳನ್ನಿಟ್ಟು ಕವಿಕಿರಣ ಮುನ್ನಡೆಯಲಾರಂಭಿಸಿತು. ಮೊದಲ ಎರಡು ಸಂಚಿಕೆಗಳನ್ನು ಶಿವಮೊಗ್ಗದ ರಾಯಲ್ ಪ್ರಿಂಟರ್ಸಿನಲ್ಲಿ ಮುದ್ರಿಸಿ ಪಡೆಯಲಾಗಿತ್ತು. ಆ ವೇಳಗೆ ೧೪-೦೭-೨೦೦೯ರಲ್ಲಿ ನನ್ನ ತಂದೆ ಕವಿ ವೆಂಕಟಸುಬ್ಬರಾಯರು ಕೀರ್ತಿಶೇಷರಾದರು. ನಾನೂ ಸ್ವ ಇಚ್ಛಾ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ನಂತರದ ಕವಿಕಿರಣ ಪತ್ರಿಕೆಗಳ ಮುದ್ರಣ ಮಿತ್ರ ಪಾಂಡುರಂಗರವರ (ಈಗ ಅವರು ಕವಿಕಿರಣ ಚಾರಿಟಬಲ್ ಟ್ರಸ್ಟಿನ ಸದಸ್ಯರುಗಳ ಪೈಕಿ ಒಬ್ಬರು) ಬಾಲಾಜಿ ಪ್ರಿಂಟರ್ಸಿನಲ್ಲಿ ಮುದ್ರಣ ಮಾಡಿಸಲು ಪ್ರಾರಂಭವಾಗಿದ್ದು, ಅದು ಅವಿರತವಾಗಿ ಮುಂದುವರೆದುಕೊಂಡು ಬಂದಿದೆ. ಪಾಂಡುರಂಗರವರ ಸಹಕಾರದ ಬಗ್ಗೆ ತಿಳಿಸಲೇಬೇಕು. ಅವರು ಮುದ್ರಣಕ್ಕೆ ಸಂಬಂಧಿಸಿದ ಕಾಗದ ಮತ್ತು ಇತರ ಕನಿಷ್ಠ ವೆಚ್ಚವನ್ನು ಮಾತ್ರ ಪಡೆಯುತ್ತಿದ್ದು, ಅವರ ಲಾಭಾಂಶವನ್ನು ತೆಗೆದುಕೊಳ್ಳುತ್ತಲೇ ಇರಲಿಲ್ಲ. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ನನ್ನದೂ ಒಂದು ಸಣ್ಣ ಪಾಲಿರಲಿ ಎಂದು ಅವರು ಹೇಳುತ್ತಿದ್ದರು. ಅವರೇ ಒಂದೆರಡು ಸಲ ತಮ್ಮ ಪಾಲಿನ ದೇಣಿಗೆ ಎಂದು ಹಣ ನೀಡಿದ್ದೂ ಇದೆ. 

     ಮೂಲ ವಿಷಯಕ್ಕೆ ಬರುತ್ತೇನೆ. ಕವಿಕಿರಣ ಪತ್ರಿಕೆಗೆ ಒಬ್ಬೊಬ್ಬ ಕವಿ ಕುಟುಂಬಗಳವರು ವಾರ್ಷಿಕವಾಗಿ ರೂ. ೫೦೦/- ಕೊಡಬೇಕೆಂಬುದು ಸಮಾವೇಶದ ಸಂದರ್ಭದಲ್ಲಿ ಮಾತಾಗಿತ್ತು. ಪ್ರಾರಂಭದ ಒಂದೆರಡು ವರ್ಷ ಹಲವರು ನೀಡಿದರು. ನಂತರ ಅವರ ಸಂಖ್ಯೆ ಕ್ಷೀಣಿಸಿತು. ಆದರೂ ಪತ್ರಿಕೆಗೆ ಯಾವುದೇ ಚಂದಾದರ ನಿಗದಿಸದೆ ಉಚಿತವಾಗಿ ಎಲ್ಲಾ ಕವಿ ಕುಟುಂಬಗಳವರಿಗೂ, ಬಂದುಗಳಿಗೂ ಮತ್ತು ಮಿತ್ರರಿಗೂ ಅಂಚೆಯ ಮೂಲಕ ಮತ್ತು ಖುದ್ದಾಗಿ ವಿತರಣೆ ಆಗುತ್ತಿತ್ತು. ಇಂತಹ ಪರಿಸ್ಥಿತಿ ಬರಬಹುದೆಂಬ ನಿರೀಕ್ಷೆ ಇದ್ದುದರಿಂದ ಪ್ರತಿ ಸಂಚಿಕೆಗೂ ಒಬ್ಬರನ್ನು ಪ್ರಾಯೋಜಕರಾಗುವಂತೆ ಪ್ರೇರಿಸಿ ಸಂಚಿಕೆ ಮುನ್ನಡೆಸಿಕೊಂಡು ಬರಲಾಯಿತು. ಪ್ರಾಯೋಜಕರಾಗಲು ಒಪ್ಪಿ ನಂತರ ಹಿಂದೆ ಸರಿದಿದ್ದ ಇಬ್ಬರು ಮಹನೀಯರೂ ಇದ್ದರು. ಪ್ರಾಯೋಜಕರಾಗಿ ಮುಂದೆ ಬಂದು ಸಹಕರಿಸಿದ್ದ ಮಹನೀಯರುಗಳಿವರು:
೧. ಶ್ರೀ ಕ.ವೆಂ. ಅನಂತ, ಕಾಲೇಜ್‌ವಿಲೆ, ಪಿಎ,  ಯು.ಎಸ್.ಎ. (ಎರಡು ಸಂಚಿಕೆಗಳು)
೨. ಶ್ರೀ ಹೆಚ್,ಎಸ್. ಪುಟ್ಟರಾಜು, ಜಾವಗಲ್, ಅರಸಿಕೆರೆ ತಾ.
೩. ಕವಿಮನೆತನದ ಓರ್ವ ಹಿರಿಯರು, ಬೆಂಗಳೂರು (ಇವರು ಹೆಸರು ಪ್ರಕಟಿಸಲು ಇಚ್ಛಿಸಿರಲಿಲ್ಲ)
೪. ಶ್ರೀ ಬಿ.ವಿ. ಹರ್ಷ, ಬೆಂಗಳೂರು. (ಈಗ ಲಂಡನ್)
೫. ದಿ. ಶ್ರೀ ಕವಿ ವೆಂಕಟಸುಬ್ಬರಾಯರ ಮಕ್ಕಳು.(ವಿಶೇಷ ಪೂರಕ ಸಂಚಿಕೆ-೧)
೬. ಶ್ರೀ ಎನ್. ಶ್ರೀನಿವಾಸ, ಬೆಂಗಳೂರು.
೭. ಶ್ರೀ ಹೆಚ್..ಕೆ.  ಸತ್ಯನಾರಾಯಣ, ಶಿಕಾರಿಪುರ.
೮. ಶ್ರೀ ಬಿ.ಎಲ್. ಸತೀಶಕುಮಾರ್, ಬೆಂಗಳೂರು..
೯. ಶ್ರೀ ಎಮ್.ಎಸ್. ನಾಗೇಂದ್ರ, ಬೆಂಗಳೂರು..
೧೦. ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು..
೧೧. ಶ್ರೀ ವಿನಯ್ ನಾಗರಾಜ್, ಬೆಂಗಳೂರು..
೧೨. ಶ್ರೀ ಕ.ವೆಂ.ನಾಗರಾಜ್, ಹಾಸನ.
೧೩. ಕೆಳದಿ ಜೋಯಿಸ್ ಮನೆತನದವರು
೧೪. ದಿ. ಶ್ರೀ ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು..
೧೫. ದಿ. ಶ್ರೀಮತಿ ರತ್ನಮ್ಮ ಬ.ನ.ಸುಂದರರಾವ್ ಕುಟುಂಬವರ್ಗ, ಬೆಂಗಳೂರು.
೧೬. ಶ್ರೀ ಹೆಚ್.ಎಸ್.ರಾಮಸ್ವಾಮಿ, ಹಾಸನ, ಶ್ರೀಮತಿಯರಾದ ಸೀತಮ್ಮ ವೆಂಕಟಸುಬ್ಬರಾವ್, 
   ಸಾವಿತ್ರಮ್ಮಸತ್ಯನಾರಾಯಣ, ಬೆಂಗಳೂರು.
೧೭. ಶ್ರೀ ಎಸ್.ಕೆ. ಪ್ರಕಾಶ್, ಶ್ರೀ ಎಸ್.ಕೆ. ಗೋಪಿನಾಥ್, ಬೆಂಗಳೂರು. (ವಿಶೇಷ  ಪೂರಕ ಸಂಚಿಕೆ-೨)
೧೮. ಶ್ರೀಮತಿ ಬಿಂದುರಾಘವೇಂದ್ರ, ಬೆಂಗಳೂರು.
೧೯. ಶ್ರೀ ಕವಿ ವೆಂ. ಸುರೇಶ್, ಶಿವಮೊಗ್ಗ.
೨೧. ಡಾ|| ಕೆ. ಕೃಷ್ಣಜೋಯಿಸ್, ಶ್ರೀ ಹೆಚ್.ಎಸ್.ಜಯಶಂಕರ, ಶ್ರೀಮತಿ ಹೆಚ್.ಎಸ್. ಸಾವಿತ್ರಮ್ಮ,  
    ಬೆಂಗಳೂರು.

     ವಿಶೇಷವೆಂದರೆ ವಾರ್ಷಿಕ ಚಂದಾ ಹಣವನ್ನು ನೀಡಲು ಯಾವುದೇ ಕುಟುಂಬಗಳನ್ನವರನ್ನಾಗಲೀ, ಬಂಧುಗಳನ್ನಾಗಲೀ ಒತ್ತಾಯಿಸಲೇ ಇಲ್ಲ. ಸಂಗ್ರಹಕ್ಕಾಗಿ ಯಾರನ್ನೂ ನಿಯೋಜಿಸಲಿಲ್ಲ. ಸ್ವಪ್ರೇರಣೆಯಿಂದ ನೀಡಲಿ ಎಂಬುದು ಅಪೇಕ್ಷೆಯಾಗಿತ್ತು. ಅದಕ್ಕೆ ಸ್ಪಂದಿಸಿದ್ದವರು ಕೆಲವರು ಮಾತ್ರ. ಅಂತಹ ಸತತ ಪ್ರೋತ್ಸಾಹಕರನ್ನು ನೆನೆಯಲೇಬೇಕು. ಹೆಸರಿಸಬೇಕೆಂದರೆ:
ಶ್ರೀ/ಶ್ರೀಮತಿಯರಾದ:
೧. ದಿ. ಕವಿ ವೆಂಕಟಸುಬ್ಬರಾಯರು, ಶಿವಮೊಗ್ಗ
೨. ದಿ. ಸಾ.ಕ. ಕೃಷ್ಣಮೂರ್ತಿಯವರು, ಬೆಂಗಳೂರು
೩. ಕ.ವೆಂ. ನಾಗರಾಜ್, ಹಾಸನ,
೪. ಕವಿ ವೆಂ. ಸುರೇಶ್, ಶಿವಮೊಗ್ಗ,
೫. ಡಾ. ಕೆಳದಿ ಗುಂಡಾಜೋಯಿಸ್, ಕೆಳದಿ,
೬. ಸಾ.ಕ. ರಾಮರಾವ್, ಬೆಂಗಳೂರು,
೭. ಸೀತಮ್ಮ ವೆಂಕಟಸುಬ್ಬರಾವ್, ಬೆಂಗಳೂರು,
೮. ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು, 
೯. ಡಾ. ಕೆಳದಿ ಕೃಷ್ಣಜೋಯಿಸ್, ಬೆಂಗಳೂರು,

     ಮೇಲೆ ಹೆಸರಿಸಿದವರಲ್ಲದೆ, ಭೇಟಿಯಾದ ಸಂದರ್ಭಗಳಲ್ಲಿ ಆಗಾಗ್ಗೆ ವಂತಿಕೆ ನೀಡುವವರೂ ಇದ್ದರು. ಎಲ್ಲರೂ ಅಭಿನಂದನಾರ್ಹರು. ಮಿತ್ರರ ಪೈಕಿ ಕವಿಕಿರಣದ ಕಾರ್ಯ ಮೆಚ್ಚಿ ಕೇಳದಿದ್ದರೂ ಸ್ವ ಇಚ್ಛೆಯಿಂದ ಆಗಾಗ್ಗೆ ಹಣ ನೀಡುತ್ತಿದ್ದ ಶ್ರೀಯುತ ರಮೇಶ ಕಾಮತ್, ಗುರುಪ್ರಸಾದ ಕಾಮತ್, ಸುಮಂಗಲಿ ಸಿಲ್ಕ್ಸ್‌ನ ಗೋಪಾಲಕೃಷ್ಣ ಮೊದಲಾದವರೂ ಅಭಿನಂದನೆಗೆ ಪಾತ್ರರು. ಇಷ್ಟೆಲ್ಲದರ ನಡುವೆ, ಚಂದಾ ಇಲ್ಲದೆ, ಸಂಗ್ರಹಕ್ಕೆ ತೊಡಗದೆ, ಜಾಹಿರಾತು ಇಲ್ಲದೆ ೧೧ ವರ್ಷಗಳ ನಂತರದಲ್ಲಿಯೂ, ಪತ್ರಿಕೆಯ ನಿಧಿಯಾಗಿ ರೂ. ೬೪೧೦೮/- ಶಿಲ್ಕು ಉಳಿದಿದೆ. ಜಮಾ-ಖರ್ಚುಗಳ ಪ್ರತಿ ಪೈಸೆಗೂ ಲೆಕ್ಕ ಇಟ್ಟಿದೆ. ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಲೂ ಇತ್ತು. ಈ ಹಣ ಈಗ ಕವಿಕಿರಣ ಚಾರಿಟಬಲ್ ಟ್ರಸ್ಟಿನ ಪ್ರಾರಂಭಿಕ ನಿಧಿಯಾಗಲಿದೆ. ಎಲ್ಲಾ ವಿಶ್ವಸ್ತರುಗಳೂ ತಮ್ಮ ದೇಣಿಗೆಯಾಗಿ ತಲಾ ರೂ. ೧೫೦೦೦/- ನೀಡಲಿದ್ದಾರೆ. ಸತ್ಕಾರ್ಯಕ್ಕೆ ನಾಂದಿಯಾಗಲಿದೆ. ಸಜ್ಜನ ಬಂದುಗಳೂ ತಮ್ಮ ಸಹಾಯ ಹಸ್ತ ಚಾಚಲು ಅವಕಾಶವಿದೆ. 
-ಕ.ವೆಂ.ನಾಗರಾಜ್. 

ಶುಕ್ರವಾರ, ಸೆಪ್ಟೆಂಬರ್ 28, 2018

ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೧


     ಕವಿಕಿರಣ ಪತ್ರಿಕೆ ಸಾರ್ಥಕ ೧೧ ವರ್ಷಗಳನ್ನು ಪೂರ್ಣಗೊಳಿಸಿ, ಹೊಸ ರೀತಿಯಲ್ಲಿ ೧೨ನೆಯ ವರ್ಷಕ್ಕೆ ಕಾಲಿಡಲು ಸಿದ್ಧವಾಗಿದೆ. ೧೧ ವರ್ಷಗಳಲ್ಲಿ ನಾನು ಬರೆದ ಸಂಪಾದಕೀಯದ ವಿಷಯಗಳು ಸುಮಧುರ ಬಾಂಧವ್ಯ, ಉತ್ತಮ ವ್ಯಕ್ತಿತ್ವದ ಆಶಯ, ಸಜ್ಜನ ಶಕ್ತಿಯ ಉದ್ದೀಪನೆಗೆ ಸಂಬಂಧಿಸಿದವೇ ಆಗಿದ್ದವು. ಸಂಪಾದಕೀಯದ ವಿಷಯಗಳ ಸಂಕ್ಷಿಪ್ತ ವಿವರಣೆ ಕೊಡುವ ಪ್ರಯತ್ನ ಇದು:
ಡಿಸೆಂಬರ್, ೨೦೦೮: ಕವಿಕಿರಣದ ಆಶಯ
ಜೂನ್, ೨೦೦೯: ಉತ್ತಮ ಬಾಂಧವ್ಯದೆಡೆಗೆ
ಡಿಸೆಂಬರ್, ೨೦೦೯: ಕಹಿ ನೆನಪುಗಳನ್ನು ಮರೆತು ಕ್ಷಮಿಸಿ ಚೆನ್ನಾಗಿರಬೇಕು.
ಜೂನ್, ೨೦೧೦: ಕವಿಮನೆತನದ ಕಳೆದುಹೋದ ಕೊಂಡಿಗಳನ್ನು ಸೇರಿಸುವ ಪ್ರಯತ್ನ ಆಗಲಿ.
ಜೂನ್, ೨೦೧೦: ದಿ. ಕವಿ ವೆಂಕಟಸುಬ್ಬರಾಯರ ನೆನಪಿನಲ್ಲಿ. (ವಿಶೇಷ ಸಂಚಿಕೆ)
ಡಿಸೆಂಬರ್, ೨೦೧೦: ನಾವೆಷ್ಟು ಒಳ್ಳೆಯವರು? ಒಳಗಿನ ಕಶ್ಮಲಗಳ ನಿವಾರಣೆಯ ಅಗತ್ಯ.
ಜೂನ್, ೨೦೧೧: ಸಂಪ್ರದಾಯಗಳು ಸಂಕೋಲೆಗಳಾಗಬಾರದು.
ಡಿಸೆಂಬರ್, ೨೦೧೧: ಸಹವಾಸ ದೋಷ ಕಾರಣ ಅಲ್ಲ; ನಮ್ಮ ತಪ್ಪುಗಳಿಗೆ ನಾವೇ ಕಾರಣ.
ಜೂನ್, ೨೦೧೨: ಎಂದೆಂದೂ ಇರುವ ಪರಮಾತ್ಮ ಹೊಸದಾಗಿ ಅವತರಿಸುವುದಿಲ್ಲ. ಅವನು ನಮ್ಮೊಳಗೂ ಇದ್ದಾನೆ. ಜಾಗೃತರಾಗೋಣ. ಸಜ್ಜನ ಶಕ್ತಿಗೆ ಬಲ ತುಂಬೋಣ.
ಡಿಸೆಂಬರ್, ೨೦೧೨: ನಾವು ಬದಲಾದರೆ ಜಗತ್ತು ಬದಲಾಗುತ್ತದೆ.
ಜೂನ್, ೨೦೧೩: ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು.
ಡಿಸೆಂಬರ್, ೨೦೧೩: ಜಾತಿ ಪದ್ಧತಿ ಒಳ್ಳೆಯದಲ್ಲ. ಯಾರೂ ಮೇಲಲ್ಲ, ಯಾರೂ ಕೀಳಲ್ಲ.
ಜೂನ್, ೨೦೧೪: ಸಾಧಕನ ರೀತಿ, ಸಾಧನೆಯ ಹಾದಿ.
ಡಿಸೆಂಬರ್, ೨೦೧೪: ಆಹಾರದ ಪೋಲು ಸಮಾಜಕ್ಕೆ ಬಗೆಯುವ ದ್ರೋಹ.
ಜೂನ್, ೨೦೧೫: ದುರ್ವಿಚಾರಗಳು ದೂರವಾಗಲಿ.
ಡಿಸೆಂಬರ್, ೨೦೧೫: ನಮ್ಮ ಹಣೆಯ ಬರಹಕ್ಕೆ ನಾವೇ ಹೊಣೆ. ಅದನ್ನು ದೇವರೂ ಬದಲಾಯಿಸಲಾರ. ಬದಲಾಯಿಸುವ ಶಕ್ತಿ ಇದ್ದರೆ ಅದು ನಮಗೇ!
ಜೂನ್, ೨೦೧೬: ಕವಿಕಿರಣ ಪತ್ರಿಕೆ ನಡೆದು ಬಂದ ಹಾದಿಯ ಅವಲೋಕನ.
ಜೂನ್, ೨೦೧೬: ದಿ. ಸಾ. ಕ. ಕೃಷ್ಣಮೂರ್ತಿಯವರ ನೆನಪಿನಲ್ಲಿ (ವಿಶೇಷ ಸಂಚಿಕೆ).
ಡಿಸೆಂಬರ್, ೨೦೧೭: ಋಣಾತ್ಮಕ ಮನೋಭಾವ ತ್ಯಜಿಸೋಣ; ಭರವಸೆಯಿರಲಿ.
ಜೂನ್, ೨೦೧೮: ಇಂದೇನೋ, ಮುಂದೇನೋ ಎಂಬ ಅನಿಶ್ಚಿತ ಸ್ಥಿತಿಯಲ್ಲಿರುವ ಮನುಷ್ಯ ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಸಮಚಿತ್ತ ಮನೋಭಾವ ಬೆಳೆಸಿಕೊಳ್ಳಬೇಕು. ಇರುವ ಅಲ್ಪ ಕಾಲದಲ್ಲಿ ಸಮಾಜೋಪಯೋಗಿಯಾಗಿ ಬಾಳಬೇಕು.
-ಕ.ವೆಂ.ನಾಗರಾಜ್.

ಸೋಮವಾರ, ಸೆಪ್ಟೆಂಬರ್ 24, 2018

'ಕವಿಕಿರಣ' ಪತ್ರಿಕೆ 2008ರಲ್ಲಿ ಆರಂಭವಾದಾಗ ಶುಭ ಹಾರೈಸಿ ಬಂದಿದ್ದ ಸಂದೇಶಗಳು


'ಕವಿಕಿರಣ' ಪತ್ರಿಕೆ 2008ರಲ್ಲಿ ಆರಂಭವಾದಾಗ ಅನೇಕರು ಶುಭ ಹಾರೈಸಿ ಹರಸಿದ್ದರು. ಕೆಲವು ಆಯ್ದ ಸಂದೇಶಗಳು ಇವು:

ದಿ. ಕವಿ ವೆಂಕಟಸುಬ್ಬರಾಯರು ಸ್ವಹಸ್ತಾಕ್ಷರದಲ್ಲಿ ನೀಡಿದ ಸಂದೇಶ

ಶೃಂಗೇರಿ ಶ್ರೀ ಶಾರದಾ ಪೀಠದ ವತಿಯಿಂದ

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಿಂದ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಿಂದ

ಸಾಗರದ ಅಸಿಸ್ಟೆಂಟ್ ಕಮಿಷನರರವರಿಂದ

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಿಂದ


ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ

ಗುರುವಾರ, ಸೆಪ್ಟೆಂಬರ್ 20, 2018

’ಕವಿಕಿರಣ’ ಮೂಡಿದ್ದು ಹೀಗೆ!

     ’ಕವಿಕಿರಣ’ ಪತ್ರಿಕೆ ಪ್ರಾರಂಭವಾದ ಹಿನ್ನೆಲೆ ಅವಲೋಕಿಸಿದಾಗ ಸುಮಧುರ ಬಾಂಧವ್ಯದ ಕನಸು ನನಸಾಗಿಸುವ ಸಹೃದಯತೆ ಅದರಲ್ಲಿರುವುದು ಗೋಚರವಾಗುತ್ತದೆ. ವಂಶವೃಕ್ಷದ ಸರಪಳಿಗಳನ್ನು ಹುಡುಕಿ, ಜೋಡಿಸಿ, ಬೆಸೆಯುವ ಕಾರ್ಯಕ್ಕೆ ಮನ್ನಣೆ ಬಂದಿದ್ದು ಹಾಗೂ ಆ ಹಾದಿಯಲ್ಲಿ ಮುನ್ನಡೆಯುವ ಪ್ರೇರಣೆ ಸಾಕಾರವಾದದ್ದು ಸಹೋದರ ಕವಿ ಸುರೇಶರ ಮನೆಯಲ್ಲಿ ದಿನಾಂಕ 28-01-2007ರಂದು ಅವರು ಪ್ರಾಯೋಜಿಸಿದ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ಸಮಾವೇಶದಲ್ಲಿ. 
     ಕೆಳದಿಯಲ್ಲಿ ದಿ. ಶ್ರೀ ರಾಮಮೂರ್ತಿ ಸಹೋದರರು ದಿನಾಂಕ 25-12-2007ರಲ್ಲಿ ನಡೆಸಿಕೊಟ್ಟ ಎರಡನೆಯ ಕುಟುಂಬ ಸಮಾವೇಶದಲ್ಲಿ ಕೆಲವು ಧೃಢ ಹೆಜ್ಜೆಗಳನ್ನಿಡಲಾಯಿತು. ಅವುಗಳಲ್ಲಿ ಒಂದು ಸಂವಹನ ಮಾಧ್ಯಮವಾಗಿ ಪತ್ರಿಕೆಯನ್ನು ಹೊರತರಬೇಕೆಂಬ ನಿರ್ಣಯ. ಕವಿ ಸುರೇಶ್ ಒಂದು ಮಾದರಿ ವಾರ್ಷಿಕ ಪತ್ರಿಕೆಯನ್ನು ’ಕೆಳದಿ ಕವಿವಾಹಿನಿ’ ಎಂಬ ಹೆಸರಿನಲ್ಲಿ ಸಿದ್ಧಪಡಿಸಿ ತಂದಿದ್ದರು. (ಚಿತ್ರ ಗಮನಿಸಿ). 

     ಪತ್ರಿಕೆ ಪ್ರಾರಂಭಿಸುವ ಬಗ್ಗೆ ಒಂದು ಸಮಿತಿ ರಚಿಸಲಾಯಿತು. ಸಮಿತಿಯಲ್ಲಿದ್ದವರು: ಶ್ರೀ/ಶ್ರೀಮತಿಯರಾದ ೧. ಕ.ವೆಂ.ನಾಗರಾಜ್ -ಸಂಪಾದಕರು, ೨. ಕವಿ ಸುರೇಶ್ -ಸಹಸಂಪಾದಕರು, ೩. ಎಸ್.ಕೆ. ಗೋಪಿನಾಥ್, ೪. ಶೈಲಜಾ ಪ್ರಭಾಕರ್, ೫. ಕೆ.ಎನ್. ಶಿವಪ್ರಸಾದ್, ೬. ಎಂ.ಎಸ್. ನಾಗೇಂದ್ರ, ೭. ಕೆ.ವೆಂಕಟೇಶ ಜೋಯಿಸ್ ಮತ್ತು ೮. ಕೆ.ಶ್ರೀಕಂಠ - ಸದಸ್ಯರುಗಳು. ಪತ್ರಿಕೆ ಹೇಗಿರಬೇಕು, ಏನು ಶೀರ್ಷಿಕೆ, ಕಾಲಾವಧಿ, ಎಷ್ಟು ಪ್ರತಿ ಮುದ್ರಿಸಬೇಕು, ವಿತರಣೆ ಹೇಗೆ, ವೆಚ್ಚ ಹೇಗೆ ಭರಿಸುವುದು, ಇತ್ಯಾದಿ ಹಲವು ವಿಷಯಗಳ ಕುರಿತು ಮೇಲ್ಕಂಡವರೊಂದಿಗೆ ಪತ್ರವ್ಯವಹಾರ ನಡೆಸಿ ಚರ್ಚಿಸಲಾಯಿತು. 
     ದಿನಾಂಕ 15-06-2008ರಂದು ಬೆಂಗಳೂರಿನ ಹಿರಿಯರಾದ ಶ್ರೀ ಎಸ್.ಕೆ.ಕೃಷ್ಣಮೂರ್ತಿಯವರ ನಿವಾಸದಲ್ಲಿ ಸಮಿತಿ ಸದಸ್ಯರಾದ ನಾಗರಾಜ್, ಸುರೇಶ್ ಮತ್ತು ಗೋಪಿನಾಥ್ ಮತ್ತು ಆಸಕ್ತರು ಸಭೆ ಸೇರಿ ಕೈಗೊಂಡ ಪ್ರಮುಖ ನಿರ್ಧಾರಗಳು:
೧. ’ಕವಿಕಿರಣ’ ಎಂಬ ಹೆಸರಿನಲ್ಲಿ ಪತ್ರಿಕೆ ಹೊರತರಬೇಕು. 
(ಸೂಚಿತವಾಗಿದ್ದ ಶೀರ್ಷಿಕೆಗಳು: ಕವಿಪ್ರಭಾ, ಕವಿಪ್ರಭೆ, ಕವಿಪತ್ರಿಕೆ, ಕವಿಚಕ್ಷು, ಕವಿವಾಣಿ, ಕವಿವಾರ್ತೆ, ಕವಿನೋಟ, ಕವಿವಾಹಿನಿ, ಪರಸ್ಪರ, ಸ್ನೇಹಧಾರಾ, ಕವಿಕಿರಣ, ಪ್ರೇರಣಾ, ಏನೆಂದರೆ, ಹೊಂಗಿರಣ, ಹೊಸದಿಗಂತ, ಅನ್ವೇಷಣೆ, ಆಶಾಕಿರಣ, ಸ್ನೇಹಸೇತು);
೨. ವರ್ಷಕ್ಕೊಮ್ಮೆ ಹೊರತರಬೇಕೆಂದಿದ್ದ ಪತ್ರಿಕೆಯನ್ನು ಅರ್ಧವಾರ್ಷಿಕವಾಗಿ ಹೊರತರಬೇಕೆಂಬ ನಾಗರಾಜರ ಸಲಹೆಯನ್ನು ಒಪ್ಪಲಾಯಿತು.
೩. ಎ-೪ ಅಳತೆಯಲ್ಲಿ ೨೪ ಪುಟಗಳಿರಬೇಕು;
೪. ಪ್ರತಿ ಕವಿಕುಟುಂಬಗಳವರು ವಾರ್ಷಿಕ ರೂ. ೫೦೦/- ಚಂದಾ ನೀಡಬೇಕು. ಈ ಹಣವನ್ನು ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಬಳಸಲು ಚಿಂತಿಸಬಹುದು; ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳವರು ಮತ್ತು ಹಿತೈಷಿಗಳು ಸ್ವಪ್ರೇರಣೆಯಿಂದ ನೀಡಿದ ಹಣವನ್ನು ಸ್ವೀಕರಿಸಬಹುದು;
೫. ಸಂಗ್ರಹವಾಗುವ ಹಣವನ್ನು ಶ್ರೀ ಎಸ್.ಕೆ.ಕೃಷ್ಣಮೂರ್ತಿ ಮತ್ತು ಶ್ರೀ ಸುರೇಶರ ಹೆಸರಿನಲ್ಲಿ ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದು ಇರಿಸಬೇಕು;
೬. ರೂ. 5000/- ಮತ್ತು ಮೇಲ್ಪಟ್ಟು ಹಣ ನೀಡಿ ಸಂಚಿಕೆಯ ಪ್ರಾಯೋಜಕರಾಗಬಹುದು;
೭. ಪ್ರಥಮ ಸಂಚಿಕೆಯನ್ನು ಮೂರನೆಯ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಗೊಳಿಸಬೇಕು.
     ಪ್ರಥಮ ಸಂಚಿಕೆಯ ಪ್ರಾಯೋಜಕರಾಗಿ ಅಮೆರಿಕಾದಲ್ಲಿರುವ ಸಹೋದರ ಶ್ರೀ ಕ.ವೆಂ. ಅನಂತ ಮುಂದೆ ಬಂದು ಸಹೃದಯತೆ ಮೆರೆದರು. ಪ್ರಥಮ ಸಂಚಿಕೆಯ ಕರಡು ಸಿದ್ಧಪಡಿಸಿ ಹಿರಿಯರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಿ ದಿನಾಂಕ 28-12-2008ರಂದು ಬೆಂಗಳೂರಿನಲ್ಲಿ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್ ಮತ್ತು ಶ್ರೀಮತಿ ಮತ್ತು ಎಂ.ಎಸ್.ನಾಗೇಂದ್ರರವರು ಆಯೋಜಿಸಿದ ತೃತೀಯ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು.
-ಕ.ವೆಂ.ನಾಗರಾಜ್.
28-12-2008ರಂದು ಬೆಂಗಳೂರಿನಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧು-ಬಳಗದವರ ಸಮಾವೇಶದಲ್ಲಿ  'ಕವಿಕಿರಣ' ಬಿಡುಗಡೆಯಾದ ಸಂದರ್ಭದ ಕೆಲವು ದೃಷ್ಯಗಳು

ಶುಭ ಹಾರೈಸಿದ ಶ್ರೀ ಸಾ.ಕ.ಕೃಷ್ಣಮೂರ್ತಿಯವರು

ವಯೋವೃದ್ಧ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರಿಂದ ಸಂಚಿಕೆ ಬಿಡುಗಡೆ
ವೇದಿಕೆಯಲ್ಲಿ: ಶ್ರೀಯುತ ಸಾ.ಕ.ಕೃಷ್ನಮೂರ್ತಿ, ಡಾ.ಕೆಳದಿ ಕೃಷ್ಣಜೋಯಿಸ್, ಹೆಬ್ಬೈಲು ಕೃಷ್ಣಮೂರ್ತಿ, ದಿ. ಕವಿ ವೆಂಕಟಸುಬ್ಬರಾವ್, ಎಂ.ಎಸ್. ನಾಗೇಂದ್ರ, ಮೊಮ್ಮಗಳು ಅಕ್ಷಯಳೊಂದಿಗೆ ಕವಿನಾಗರಾಜ್.

ಕವಿಕಿರಣದ ಆಶಯದ ಕುರಿತು ಸಂಪಾದಕ ಕವಿನಾಗರಾಜರ ಮಾತು

ಕವಿ ವೆಂಕಟಸುಬ್ಬರಾಯರು ಹರಸಿದ ಸಂದರ್ಭ



ಸಾಕ್ಷಿಯಾದ ಬಂಧು - ಬಳಗದ ಸಮೂಹ


ಮಂಗಳವಾರ, ಸೆಪ್ಟೆಂಬರ್ 18, 2018

ಕವಿಕಿರಣ ಚಾರಿಟಬಲ್ ಟ್ರಸ್ಟ್


     ಸಧೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ನಮ್ಮ ಅಳಿಲು ಸೇವೆಯೂ ಸಲ್ಲಲಿ ಎಂಬ ಉದ್ದೇಶದಿಂದ ಈ ವಿಶ್ವಸ್ತ ಸಂಸ್ಥೆಯ ರಚನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವಾದ ಈ ಲಾಭರಹಿತ ಸಂಸ್ಥೆ ದಿನಾಂಕ   ೫-೦೯-೨೦೧೮ರಂದು ಅಧಿಕೃತವಾಗಿ ನೋಂದಾವಣೆಯಾಗಿದ್ದು, ಅಂದು ಶಿಕ್ಷಕರ ದಿನಾಚರಣೆಯ ದಿನವಾಗಿ ಗುರುಗಳನ್ನು ಸ್ಮರಿಸಿಕೊಳ್ಳುವ ದಿನವಾಗಿರುವುದೂ ವಿಶೇಷ. ಹಾಸನದಲ್ಲಿ ಪ್ರಧಾನ ಕಛೇರಿ ಹೊಂದಿರುವ ಈ ಸಂಸ್ಥೆ, ಬೆಂಗಳೂರು ಮತ್ತು ಶಿವಮೊಗ್ಗಗಳಲ್ಲಿ ತನ್ನ ಶಾಖಾ ಕಛೇರಿಗಳನ್ನು ತೆರೆದಿದೆ.
ಧ್ಯೇಯ ಮತ್ತು ಉದ್ದೇಶ:
* ಸಾಂಸ್ಕೃತಿಕ ಮತ್ತು ಸನಾತನ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಅಥವ ಅಂತಹ ಸಂಸ್ಥೆಗಳಿಗೆ ಅಗತ್ಯದ ನೆರವು, ಸಹಕಾರ ನೀಡುವುದು; ಗುರುಕುಲ ಪದ್ಧತಿಯ ಶಿಕ್ಷಣಕ್ಕೆ ಒತ್ತು ನೀಡುವುದು; ವೇದಾಧ್ಯಯನಕ್ಕೆ ಪ್ರೋತ್ಸಾಹ; 
* ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸಮವಸ್ತ್ರ, ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಇತ್ಯಾದಿ ಒದಗಿಸುವುದು; ಬೋಧನೆ, ತರಬೇತಿ, ವೃತ್ತಿಪರ ಕೌಶಲ್ಯ ತರಬೇತಿಗಳು, ಮಾರ್ಗದರ್ಶನ ನೀಡುವುದು ಅಥವ ಈ ರೀತಿಯ ಕಾರ್ಯಗಳನ್ನು ಮಾಡುವವರಿಗೆ ಸಹಕಾರ ನೀಡುವುದು;
* ಪುರಾತನ ಸಾಂಸ್ಕೃತಿಕ, ಐತಿಹಾಸಿಕ ವಿಷಯಗಳಲ್ಲಿ ಅಧ್ಯಯನ, ಸಂಶೋಧನೆಗಳನ್ನು ನಡೆಸಲು ಅಗತ್ಯದ ಪ್ರೋತ್ಸಾಹ ಮತ್ತು ಸಹಕಾರ ನೀಡುವುದು; ವಿಶೇಷವಾಗಿ ಕೆಳದಿ ಸಂಸ್ಥಾನದ ಮತ್ತು ಕೆಳದಿ ಕವಿಮನೆತನಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ; 
* ಸಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡುವ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳ ಮುದ್ರಣ ಮತ್ತು ಪ್ರಕಾಶನ ಮಾಡುವುದು ಅಥವ ಇಂತಹ ಸದುದ್ದೇಶದ ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳ ಪ್ರಕಟಣೆಗೆ ನೆರವು ನೀಡುವುದು; ಇತಿಹಾಸ, ಸಂಸ್ಕೃತಿ, ಸಂಸ್ಕಾರ, ವೇದಗಳು, ಯೋಗ, ರಾಷ್ಟ್ರೀಯತೆಯ ಉದ್ದೀಪನೆ, ಕೋಮು ಸಾಮರಸ್ಯ, ಸಾಹಿತ್ಯ, ಇತ್ಯಾದಿಗಳಿಗೆ ಪ್ರಕಟಣೆಗಳಲ್ಲಿ ಆದ್ಯತೆ ನೀಡುವುದು; ನಕಾರಾತ್ಮಕ ವಿಷಯಗಳಿಗೆ ಆದ್ಯತೆ ಸಿಗುತ್ತಿರುವ ಇಂದಿನ ಕಾಲದಲ್ಲಿ ಸಜ್ಜನಶಕ್ತಿಯನ್ನು ಪ್ರಚೋದಿಸುವ ಕಾರ್ಯಕ್ಕೆ ಒತ್ತು ನೀಡುವುದು;
* ರಾಷ್ಟ್ರೀಯ ವಿಪತ್ತು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವುದು;
* ಮೇಲಿನ ವಿಷಯಗಳಿಗೆ ಪೂರಕವಾದ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ನಡೆಸುವುದು.
     ಮೊದಲ ಕಾರ್ಯವಾಗಿ ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ' ಅರ್ಧವಾರ್ಷಿಕ ಪತ್ರಿಕೆಯನ್ನು ಪ್ರಕಟಿಸುವ ಹೊಣೆಯನ್ನು ಟ್ರಸ್ಟ್ ವಹಿಸಿಕೊಂಡಿದ್ದು, ಇದನ್ನು ಸಾರ್ವಜನಿಕ ಪತ್ರಿಕೆಯಾಗಿಸಿ ಪ್ರಥಮ ಹಂತದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿ ಹೊರತರಲಾಗುವುದು. ನಂತರದ ವರ್ಷದಿಂದ ಇದನ್ನು ಮಾಸಿಕ ಪತ್ರಿಕೆಯಾಗಿ ಪರಿವರ್ತಿಸಲಾಗುವುದು. ಈ ಪತ್ರಿಕೆಯಲ್ಲಿ ಇತಿಹಾಸ, ವೇದಗಳ ಸಂದೇಶ, ಯೋಗದ ಮಹತ್ವ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ, ದೇಶದ ಸಮಗ್ರತೆ, ಭಾವೈಕ್ಯತೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಲೇಖನಗಳು ಇರಲಿವೆ. ಆಯಾ ವಿಷಯಗಳಲ್ಲಿ ಅಧ್ಯಯನ ಮಾಡಿರುವ ವಿದ್ವಜ್ಜನರ ಬರಹಗಳು ಶೋಭಿಸಲಿವೆ. 
     ಸಾವಿರಾರು ಮೈಲುಗಳ ಪ್ರಯಾಣವಾಗಲೀ, ಹಿಮಾಲಯ ಪರ್ವತ ಏರುವುದಾಗಲೀ ಪ್ರಾರಂಭವಾಗುವುದು ಇಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಸಾಧಿಸುವ ಛಲ ಮತ್ತು ವಿಶ್ವಾಸದೊಂದಿಗೆ ಈ ಸಮಾಜಸೇವೆಯ ಕಾರ್ಯ ಪ್ರಾರಂಭಿಸಲಾಗಿದೆ. ಸಜ್ಜನ ಬಂಧುಗಳು ಸಹಕಾರಿಯಾಗಲಿದ್ದಾರೆ. ಅಂತಹ ಸಜ್ಜನ ಬಂಧುಗಳಲ್ಲಿ ನೀವೂ ಒಬ್ಬರಾಗಿ; ಸೇವಾಕಾರ್ಯಗಳಿಗೆ ದೇಣಿಗೆ ನೀಡಿ ಸಹಕರಿಸಿ, ನಮ್ಮೊಡನೆ ಹೆಜ್ಜೆ ಹಾಕಿರಿ ಎಂಬುದು ನಮ್ಮ ನಮ್ರ ವಿನಂತಿ.
         ಕ.ವೆಂ.ನಾಗರಾಜ್,  ಅಧ್ಯಕ್ಷರು ;   
ಕವಿ ವೆಂ. ಸುರೇಶ್,   ಉಪಾಧ್ಯಕ್ಷರು;   
ಹರಿಹರಪುರ ಶ್ರೀಧರ್,  ಕಾರ್ಯದರ್ಶಿ;  
ಡಾ.ಕೆ.ಜಿ. ವೆಂಕಟೇಶಜೋಯಿಸ್, ಸಹಕಾರ್ಯದರ್ಶಿ;  
ಎಂ.ಜೆ. ಪಾಂಡುರಂಗಸ್ವಾಮಿ,     ಪ್ರಕಟಣಾ ವಿಭಾಗದ ಮುಖ್ಯಸ್ಥರು;
ಎನ್.ಬಿಂದುರಾಘವೇಂದ್ರ, ಕೋಶಾಧಿಕಾರಿ. 
                     .