ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 25, 2015

ಅವರವರ ಭಾವಕೆ . . . . ಅವರವರ ಭಕುತಿಗೆ . . .


ಭಕ್ತಿಯೆಂಬುದು ಕೇಳು ಒಳಗಿರುವ ಭಾವ
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||
     ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ ಮಾನವನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ, ಬೇರೆಯದನ್ನೇ ಮಾಡಬಲ್ಲ. ಆತ ಕೇವಲ ಸ್ವಾಭಾವಿಕ ಜ್ಞಾನದಿಂದ ತೃಪ್ತನಾಗುವುದಿಲ್ಲ. ಏಕೆಂದರೆ ಅವನ ಮನಸ್ಸು "ಏಕೆ?, ಹೇಗೆ?" ಎಂಬ ಪ್ರಶ್ನೆಗಳನ್ನು ಕೇಳುವ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಮಾನವನ ಪರಿಪೂರ್ಣ ವಿಕಾಸಕ್ಕೆ ಇಂದ್ರಿಯ ಗಮ್ಯವಾದ ಭೌತಿಕ ವಿಷಯಗಳ ಜ್ಞಾನದೊಂದಿಗೆ, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ, ಇತ್ಯಾದಿಗಳ ಕುರಿತು ಜಿಜ್ಞಾಸೆ ಸಹ ಇರಬೇಕಾಗುತ್ತದೆ. ಹೆಚ್ಚು ಹೆಚ್ಚು ಅಂತರ್ಮುಖಿಗಳಾದಾಗ, ಶ್ರವಣ, ಮನನ, ಮಥನ, ಮಂಥನಗಳನ್ನು ನಡೆಸಿದಷ್ಟೂ ಅವನ ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಸಂಗತಿಗಳನ್ನು ಅರಿಯಲಾಗುವುದಿಲ್ಲ, ಆದರೆ ಅನುಭವಿಸಬಹುದಾಗಿದೆ. ನಮಗೆ ಗೊತ್ತಿಲ್ಲದ ಸಂಗತಿಗಳನ್ನು ಗೊತ್ತು ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು ಅಥವ ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಬ್ರಹ್ಮಾಂಡವನ್ನು, ಅಖಿಲ ಜಗತ್ತನ್ನು ನಿಯಂತ್ರಿಸುವ ಶಕ್ತಿಯನ್ನು ಪರಮಾತ್ಮ ಅಥವ ವಿಶ್ವ ಚೇತನ ಎಂದಿಟ್ಟುಕೊಂಡರೆ ಆ ಶಕ್ತಿಯನ್ನು ಅರಿಯುವ ಪ್ರಯತ್ನವನ್ನು ಭಕ್ತ ಮಾಡುತ್ತಾನೆ. ಆ ಪ್ರಯತ್ನವನ್ನೇ ಭಕ್ತಿ ಎನ್ನಬಹುದು. ಆ ಭಕ್ತಿ ಭಕ್ತನ ಶಕ್ತ್ಯಾನುಸಾರ ಇರುತ್ತದೆ.
     ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು -ಅವರವರ ಭಕುತಿಗೆ- ಅವಲಂಬಿಸಿರುತ್ತದೆ. ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು ಭಗವದ್ಗೀತೆ ಹೇಳುತ್ತದೆ - ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮ ಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆರಲಿಲ್ಲ.
ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ |
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||
     ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಹೇಳುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ.
     ಭಕ್ತಿಯ ಒಂದು ದೊಡ್ಡ ಅನುಕೂಲವೆಂದರೆ ಅದು ಇರುವುದರಲ್ಲಿ ಅತಿ ಸುಲಭವಾದ ಮತ್ತು ಅತ್ಯಂತ ಸಹಜವಾದ ದಿವ್ಯತ್ವವನ್ನು ತಲುಪುವ ಮಾರ್ಗ; ಅದರ ದೊಡ್ಡ ಅನಾನುಕೂಲವೆಂದರೆ ಅದು ಕೆಳಸ್ತರದಲ್ಲಿ ಹೆಚ್ಚಿನ ಸಮಯ ಹುದುಗಿದ ಹುಚ್ಚಾಟಗಳಿಗೆ ದಾರಿ ಮಾಡಿಕೊಡುತ್ತದೆ. ವಿವಿಧ ಧರ್ಮಗಳ ಮತಾಂಧರು ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ಪ್ರೀತಿಯ ವಸ್ತುವಿಗೆ ಏಕನಿಷ್ಠೆ ಇರಬೇಕು, ಅದಿಲ್ಲದಿದ್ದರೆ ನಿಜವಾದ ಪ್ರೀತಿ ಬೆಳೆಯಲಾರದು ಎಂಬುದು ನಿಜ. ಆದರೆ ಅದು ಹೆಚ್ಚಿನ ಸಂದರ್ಭಗಳಲ್ಲಿ ಇತರ ಎಲ್ಲವನ್ನೂ ತಿರಸ್ಕರಿಸುವ ಕಾರಣವಾಗುತ್ತದೆ. ಪ್ರತಿ ಧರ್ಮದ ಎಲ್ಲಾ ದುರ್ಬಲ ಮತ್ತು ಅವಿಕಸಿತ ಮನಸ್ಸುಗಳು ತಮ್ಮ ಆದರ್ಶವನ್ನು ಪ್ರೀತಿಸುವ ಒಂದೇ ರೀತಿಯನ್ನು ಹೊಂದಿರುತ್ತವೆ, ಅದೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ತನ್ನ ದೇವರನ್ನು, ಆದರ್ಶಧ್ಯೇಯವನ್ನು ಉತ್ಕಟವಾಗಿ ಪ್ರೀತಿಸುವ, ತನ್ನ ಧರ್ಮದ ಆದರ್ಶಗಳಿಗೆ ಅಷ್ಟೊಂದು ಅಂಟಿಕೊಂಡಿರುವ ಅದೇ ವ್ಯಕ್ತಿ ಹೇಗೆ ಬೇರೆ ಯಾವುದೇ ಧರ್ಮದ, ಆದರ್ಶದ ಕುರಿತು ನೋಡಿದರೆ ಅಥವ ಕೇಳಿದರೆ ಏಕೆ ಕೆರಳುತ್ತಾನೆ ಎಂಬುದಕ್ಕೆ ಕಾರಣ ಇಲ್ಲಿದೆ.
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: 

ಬುಧವಾರ, ಡಿಸೆಂಬರ್ 23, 2015

ಸಾಧನೆಯ ಹಾದಿ - 2


ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ  ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು." ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ.
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ ||
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತನ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ.
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     'ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ?' ಎಂಬ ಪ್ರಶ್ನೆ ಮೂಡುತ್ತದೆ. 'ಹೌದು, ಇನ್ನೂ ಇದೆ' ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು 'ತಾನೇ ಸರಿ, ತನ್ನದೇ ಸರಿ' ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ 'ಕೇಳುವ' ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ 'ಪೂಜ್ಯ'ರುಗಳನ್ನು 'ಹೊರಗೆ' ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಮಾಡುವ ಸಾಧನೆಯೇ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 2.11.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಡಿಸೆಂಬರ್ 12, 2015

ಸಾಧನೆಯ ಹಾದಿ - 1



ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ ||
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, 'ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು' ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, 'ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ', 'ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ!' ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. 'ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ' ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ.
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     'ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ' ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
-ಕ.ವೆಂ.ನಾಗರಾಜ್.
*****************
ದಿನಾಂಕ 26.10.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 2, 2015

ತಪ್ಪು ನಮ್ಮಲ್ಲಿಯೇ ಇದೆ!


     'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನನ್ನು ಬಲಿಪಶು ಮಾಡಿದ್ದಾರೆ. ಅವನದ್ದೇನೂ ತಪ್ಪಿಲ್ಲ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು', 'ಅವನು ಶ್ರೀರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ', 'ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಅಂಶವೆಂದರೆ ತಪ್ಪು ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.
     ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ನಿಜವಾಗಿಯೂ ಹಾಳಾಗುತ್ತಾರೆಯೇ? ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರುತ್ತದೆ. ಒಂದು ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ ಆದರೂ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು 'ಕೆಟ್ಟವರಲ್ಲಿ ಒಳ್ಳೆಯವನು' ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು.
     ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ 'ಇಲ್ಲ, ಹಾಗಿಲ್ಲ' ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ.
     ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು 'ಅವನು ಎಷ್ಟು ಒಳ್ಳೆಯವನು' ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅದೇ 'ಕೆಟ್ಟವನು' ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಿಜವಾದ ದೋಷ ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು 'ಹೊರಗೆ' ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ 'ಒಳಗೆ' ಇದೆ! ಆ 'ಒಳಗಿನ' ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ?
     ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುತ್ತೇವೆ. 'ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?' ಅಂದರೆ ಸಿಗಬಹುದಾದ ಉತ್ತರ, 'ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ?' ಎಂಬುದೇ. ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ. ನಿಜವಾದ ಕಾರಣ ನಮ್ಮ 'ಒಳಗೇ' ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. 'ಒಳ್ಳೆಯತನ'ಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಪ್ರಯತ್ನ ಮಾಡೋಣ.
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||                                      
-ಕ.ವೆಂ.ನಾಗರಾಜ್.
***************
ದಿನಾಂಕ 19.10.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ನವೆಂಬರ್ 26, 2015

ಆದರ್ಶ ಪುರೋಹಿತರಾಗೋಣ!



     ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ  ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ 'ಪುರೋಹಿತಶಾಹಿ' ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ  ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ 'ಪುರೋಹಿತ' ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
     ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ 'ಪುರಸ್' ಎಂದರೆ ಮುಂದೆ 'ಹಿತ' ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ.
     ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, "ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ.
     ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ "ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ!" ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು!
     ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ನಿತ್ಯಾನಂದ, ರಾಘವೇಶ್ವರರ ಉದಾಹರಣೆಗಳು ಇಲ್ಲಿ ಪ್ರಸ್ತುತವೆನಿಸುತ್ತವೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ.  ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ 'ಅಸ್ತೇಯ'(ಕಳ್ಳತನ)ವೆನಿಸುತ್ತದೆ. 'ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್||'  ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
-ಕ.ವೆಂ.ನಾಗರಾಜ್.
***************
ದಿನಾಂಕ  13.10.1015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಅಕ್ಟೋಬರ್ 24, 2015

ಉತ್ತಮ ಸಂಬಂಧಕ್ಕೆ ಬೇಕು ಕ್ಷಮಿಸುವ ಗುಣ


     ಹಿರಿಯರೊಬ್ಬರು ನಿಧನರಾಗುವ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೆಲವರಿಗೆ ಅರಳು ಮರಳಿನ ಮಾತಿನಂತೆ ಕಂಡಿತ್ತು.  ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹದಿನೈದು ವರ್ಷಗಳ ಹಿಂದಿನ ಪ್ರಸಂಗವಿದು. ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮೃತ ವ್ಯಕ್ತಿ ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ವಿವಾದಕ್ಕೆ ಮೃತನ ಅಣ್ಣ ಕಾಲೇಜು ಪ್ರೊಫೆಸರರ ಪತ್ನಿಗೂ ಮೃತನ ಪತ್ನಿಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ಯಾವುದೋ ವಿಷಯಕ್ಕೆ ಜಗಳವಾಗಿದ್ದೇ ನೆಪವಾಗಿತ್ತು. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಂತಹ ಪ್ರಸಂಗಗಳು ಬರುವುದಿಲ್ಲ ಎಂದು ತಿಳಿಸುವ ಸಲುವಾಗಿ ಇದನ್ನು ಹೇಳಿದ್ದಷ್ಟೆ.
      ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡದಿರುವುದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರುವುದು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸದಿರುವುದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳುವುದು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡದಿರುವುದು. ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂದ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ. ಸ್ವಾಮಿ ವಿವೇಕಾನಂದರ ಈ ವಾಣಿ ಮನನೀಯವಾಗಿದೆ: "ಇತರರನ್ನು ಪ್ರೀತಿಸುವುದು ಧರ್ಮ; ದ್ವೇಷಿಸುವುದೇ ಅಧರ್ಮ. ಇತರರ ಬಗ್ಗೆ ದೂಷಿಸಿ ಮಾತನಾಡುವುದು ತಪ್ಪು. ಬಹಳಷ್ಟು ಸಂಗತಿಗಳು ಮನಸ್ಸಿನಲ್ಲಿ ಮೂಡಬಹುದು; ಅವುಗಳನ್ನು ವ್ಯಕ್ತಪಡಿಸುತ್ತಾ ಹೋದರೆ ಕ್ರಮೇಣ ಸಣ್ಣ ಮಣ್ಣುಗುಡ್ಡೆಯೇ ಬೆಟ್ಟವಾಗುತ್ತದೆ. ಕ್ಷಮಿಸಿದರೆ ಮತ್ತು ಕ್ಷಮಿಸಿ ಮರೆತುಬಿಟ್ಟರೆ ಎಲ್ಲವೂ ಸುಖಾಂತ್ಯವಾಗುತ್ತದೆ."  ಎಂತಹ ಸತ್ವಯುತವಾದ, ಸತ್ಯವಾದ ಮಾತಿದು!
                              -ಕ.ವೆಂ. ನಾಗರಾಜ್.
*************
ದಿನಾಂಕ 5.10.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಅಕ್ಟೋಬರ್ 18, 2015

ಅರವತ್ತೈದು . . .! ಈಗ ಅನಿಸುತಿಹುದು . . .!!


     ಅರವತ್ತೈದನೆಯ ವಯಸ್ಸಿಗೆ ಮುಂದಡಿಟ್ಟಿರುವ ಈ ಸಮಯದಲ್ಲಿ ಮೂಡಿರುವ ಕೆಲವು ಸಮ್ಮಿಶ್ರ ಭಾವಗಳಿಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿರುವೆ. ವಾನಪ್ರಸ್ಥಿಯಾಗಿ ಜೀವನ ಸಾಗಿಸಬೇಕಾದ ಅವಧಿಯಿದು. ತಕ್ಷಣದ ಮನಸ್ಥಿತಿಯ ಕುರಿತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ:
ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯ ನಿಂತು ನೋಡಿದೆ ಮನವು |
ಗುಣಿಸಿ ಭಾಗಿಸಿ ಕೂಡಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ  ವಿಷಣ್ಣಭಾವವು ||
     ಹುಟ್ಟಿದ ದಿನಾಂಕದಿಂದ ಲೆಕ್ಕ ಹಾಕಿದರೆ ಅರವತ್ತನಾಲ್ಕು ವರ್ಷಗಳು ಪೂರ್ಣಗೊಂಡಿವೆ.  ಮಾನಸಿಕವಾಗಿ ಲೆಕ್ಕ ಹಾಕಿದರೆ, ಇನ್ನೂ ಏನಾದರೂ ಮಾಡಬೇಕೆಂಬ ಮನಸ್ಸಿರುವುದರಿಂದ ಹತ್ತು ವರ್ಷ ಚಿಕ್ಕವನಿರಬಹುದು. ಆದರೆ ದೈಹಿಕವಾಗಿ ಕುಗ್ಗಿರುವೆ. ಅನುಭವಿಸಿದ ನೋವು-ನಲಿವುಗಳು, ಸುಖ-ದುಃಖಗಳು, ಬಿದ್ದ ದೈಹಿಕ-ಮಾನಸಿಕ ಪೆಟ್ಟುಗಳು, ಮಾನ-ಅವಮಾನಗಳು, ಪುರಸ್ಕಾರ-ತಿರಸ್ಕಾರಗಳು, ಈಡೇರಿದ ಮತ್ತು ಈಡೇರದ ಬಯಕೆಗಳು, ಮಾಡಬಯಸಿದರೂ ಮಾಡಲಾಗದ ಅಸಹಾಯಕತೆಯ ಪ್ರಸಂಗಗಳು, ವೈಯಕ್ತಿಕ ತಪ್ಪಿಲ್ಲದಿದ್ದರೂ ಅನುಭವಿಸಬೇಕಾಗಿ ಬಂದ ಮುಜುಗರದ ಪ್ರಸಂಗಗಳು, ಇತ್ಯಾದಿ ಕಾರಣಗಳಿಂದಾಗಿ ಭೌತಿಕ ದೇಹಕ್ಕೆ ಇನ್ನೂ ಹತ್ತು-ಹದಿನೈದು ವರ್ಷಗಳು ಜಾಸ್ತಿಯಾಗಿರಬಹುದು. ನನ್ನ ಪರಿಚಯದವರು, ಸ್ನೇಹಿತರು, ಸಹೋದ್ಯೋಗಿಗಳು ಯಾರಾದರೂ ನಿಧನರಾದಾಗಲೂ ಸರತಿಯ ಸಾಲಿನಲ್ಲಿ ಬದುಕಿನ ನಿಜಸತ್ಯವಾದ ಸಾವಿನೆಡೆಗೆ ಮುಂದುವರೆಯುತ್ತಿರುವಂತೆ ಭಾಸವಾಗುತ್ತಿದೆ. ಒಂದಂತೂ ಸತ್ಯ, ಸಾವು ನನ್ನನ್ನು ಹೆದರಿಸಿಲ್ಲ, ನಾನು ಹೆದರಿಯೂ ಇಲ್ಲ. ನಾನು ಅದು ಯಾವಾಗ ಬಂದರೂ ಸ್ವಾಗತಿಸಲು ಸಿದ್ಧನಿದ್ದೇನೆ. ಹಾಗೆಂದು ನಾನು ಸಾಯಬಯಸಿಲ್ಲ. ಸಾಯುವವರೆಗೂ ಬದುಕಿರಲು ಬಯಸಿರುವೆ. ಬದುಕಿರುವುದೆಂದರೆ ಅಂತಃಸಾಕ್ಷಿ ಒಪ್ಪುವಂತೆ ಬದುಕುವುದು ಮತ್ತು ಅಂತಹ ಪೂರಕ ಪರಿಸರಕ್ಕಾಗಿ ಶ್ರಮಿಸುವುದು, ಆಶಿಸುವುದು. ಸಾಯುವ ಮೊದಲು ಬಂಧುಗಳೆಲ್ಲರೂ ಸಾಮರಸ್ಯದಿಂದ ಇರುವುದನ್ನು ಕಾಣಬೇಕೆಂಬ ಬಯಕೆ ಜೀವಂತವಾಗಿದೆ. ಇದೊಂದು ವಿಚಿತ್ರ ಪ್ರಪಂಚ. ಯಾರ ಪರವಾಗಿಯೋ ಅಥವ ವಿರೋಧವಾಗಿಯೋ ಇರಬೇಕೆಂದು ಬಯಸುವವರೇ ಎಲ್ಲರೂ! ಎಲ್ಲರೂ ಚೆನ್ನಾಗಿರಲೆಂದು ಅಪೇಕ್ಷಿಸಿ ಎಲ್ಲರೊಡನೆ ಸಮಭಾವದಿಂದಿರಬಯಸಿದರೆ ಅವರ ಪರವೆಂದು ಇವರು, ಇವರ ಪರವೆಂದು ಅವರು, ಒಟ್ಟಾರೆಯಾಗಿ ಎಲ್ಲರೂ ತಿರಸ್ಕರಿಸಿಬಿಡುವರು! ನನ್ನ ಬಯಕೆ ಎಷ್ಟರ ಮಟ್ಟಿಗೆ ಈಡೇರೀತು ಎಂಬುದನ್ನು ಕಾಲವೇ ಹೇಳಲಿದೆ. ಸ್ವಭಾವತಃ ಆಶಾವಾದಿ ಮತ್ತು ಸುಲಭವಾಗಿ ಕೈಚೆಲ್ಲುವವನಲ್ಲವಾದರೂ, ಕಠಿಣ ವಾಸ್ತವತೆ ನನ್ನಲ್ಲಿ ಒಂದು ರೀತಿಯ ನಿರ್ಲಿಪ್ತಭಾವ ಪ್ರಧಾನವಾಗಿ ಆವರಿಸುವಂತೆ ಮಾಡುತ್ತಿದೆ. 
     ಹೌದು, ಈಗ ಲೆಕ್ಕ ಹಾಕುವ ಹೊತ್ತು. ಈ ದೇಹ ಧರಿಸಿ ಇದುವರೆಗೆ ಸಾಧಿಸಿದ್ದೇನು ಎಂದು ಅವಲೋಕಿಸುವ ಹೊತ್ತು. ಗಳಿಸಿದ್ದೇನು, ಕಳೆದಿದ್ದೇನು, ಉಳಿಸಿದ್ದೇನು, ಕೊಟ್ಟಿದ್ದೇನು, ಪಡೆದಿದ್ದೇನು ಎಂಬುದನ್ನು ಪರೀಕ್ಷಿಸುವ ಹೊತ್ತು. ಅಥರ್ವ ವೇದದಲ್ಲಿನ ಒಂದು ಮಂತ್ರ ಹೇಳುತ್ತದೆ:
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ.
     ಮಾತೃಋಣ, ಪಿತೃಋಣ, ಗುರುಋಣ, ಸಮಾಜಋಣ - ಈ ನಾಲ್ಕನ್ನು ಪ್ರಧಾನವಾಗಿ ಪ್ರತಿ ವ್ಯಕ್ತಿ ಹೊಂದಿರುತ್ತಾನೆ. ಆಯಾ ವ್ಯಕ್ತಿಯ ಗುಣಾವಗುಣಗಳು, ಸಾಧನೆಗಳು ಅವನು ಎಷ್ಟರಮಟ್ಟಿಗೆ ಋಣರಹಿತನಾಗಿದ್ದಾನೆ ಎಂಬುದನ್ನು ನಿರ್ಧರಿಸುತ್ತದೆ. ಎಷ್ಟರಮಟ್ಟಿಗೆ ಋಣರಹಿತರಾಗಿ ಬಾಳಲು ಸಾಧ್ಯ ಎಂಬುದು ವಿಚಾರಾರ್ಹ ಸಂಗತಿ. ಈ ಜನ್ಮದ ಶೇಷ ಆಯಸ್ಸಿನಲ್ಲಿ ಯಾರು ಯಾರಿಗೆ ಎಷ್ಟು ಋಣಿಯಾಗಿದ್ದೇನೋ ಅವರುಗಳ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಎಷ್ಟರಮಟ್ಟಿಗೆ ಋಣಮುಕ್ತನಾದೇನು ಎಂಬುದು ಗೊತ್ತಿಲ್ಲ. ಋಣಮುಕ್ತನಾಗುವ, ಮೇಲೇರುವ ಇಚ್ಛೆಯಂತೂ ಇದ್ದು, ಈ ದಿಸೆಯಲ್ಲಿ ಕ್ರಮಿಸಬೇಕಾದ ಹಾದಿ ಸುಲಭವಲ್ಲವೆಂಬ ಅರಿವು ನನಗಿದೆ. ಋಣಮುಕ್ತನಾಗಿಸೆಂದು ದೇವನಲ್ಲಿ ನನ್ನ ಮೊರೆಯಿದೆ.  
     ಮಾನಸಿಕವಾಗಿ ವಾನಪ್ರಸ್ಥ ಜೀವನದ ಬಗ್ಗೆ ಆಸಕ್ತಭಾವವಿದೆ. ವಾನಪ್ರಸ್ಥವೆಂದರೆ ಕಾಡಿಗೆ ಹೋಗಿ ಧ್ಯಾನ, ತಪಸ್ಸಿಗೆ ತೊಡಗುವುದೆಂದಲ್ಲ. ಮೋಕ್ಷ ಮತ್ತು ಧರ್ಮದ ಕುರಿತು ಚಿಂತನೆ ನಡೆಸುವುದು, ಆ ಹಾದಿಯಲ್ಲಿ ಕ್ರಮಿಸುವುದು, ಲೌಕಿಕ ಸಂಗತಿಗಳಲ್ಲಿ ಆಸಕ್ತಿ ಕಡಿಮೆ ಮಾಡಿಕೊಳ್ಳುವುದು. ಅಷ್ಟೆ.  ನನ್ನ ದೃಷ್ಟಿಯಲ್ಲಿ ಧರ್ಮ ಮತ್ತು ಮೋಕ್ಷದ ಚಿಂತನೆಯೆಂದರೆ ಸಮಾಜಮುಖಿಯಾಗಿ, ದೇಶಮುಖಿಯಾಗಿ ಅಂತರಂಗ  ಯಾವುದನ್ನು ಒಳ್ಳೆಯದು ಎಂದು ಹೇಳುತ್ತದೋ ಆ ಹಾದಿಯಲ್ಲಿ ಸಾಗುವುದು, ಪ್ರಯತ್ನಪೂರ್ವಕವಾಗಿ ಧನಾತ್ಮಕವಾಗಿರುವುದು(ಪಾಸಿಟಿವ್),  ಋಣಾತ್ಮಕ(ನೆಗೆಟಿವ್)  ವಿಚಾರಗಳಿಂದ ದೂರವಿರುವುದು. ಈ ಪಥ ಬದಲಾವಣೆ ಸುಲಭವಾದುದಲ್ಲವಾದರೂ ಈಗ ಆಗದಿದ್ದರೆ ಮತ್ತೆ ಯಾವಾಗ? 
     ಕಳೆದ ಆರು-ಏಳು  ವರ್ಷಗಳಿಂದ ಬರವಣಿಗೆಯ ಕಾರ್ಯದಲ್ಲಿ ಸಕ್ರಿಯನಾಗಿ ತೊಡಗಿಕೊಂಡಿದ್ದು  ಮನದ ಭಾವನೆಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುತ್ತಿವೆ. ನನಗೆ ಮಾನಸಿಕ ಶಕ್ತಿ ನೀಡುತ್ತಿರುವುದೂ ಇದೇ ಆಗಿದೆ. ಮೂರು ವರ್ಷಗಳಿಂದ ಹಾಸನ ಜಿಲ್ಲಾ ಪತ್ರಿಕೆ ಜನಮಿತ್ರದಲ್ಲಿ 'ಚಿಂತನ' ಅಂಕಣ ಕಾಲಂ ಮತ್ತು ಜನಹಿತ ಪತ್ರಿಕೆ ಪ್ರಾರಂಭವಾದಾಗಿನಿಂದ 'ಜನಕಲ್ಯಾಣ' ಅಂಕಣ ಕಾಲಮ್ಮುಗಳಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿವೆ. ಹಾಸನದ ಆಕಾಶವಾಣಿಯಲ್ಲಿ ನನ್ನ ಹಲವಾರು 'ಚಿಂತನ'ಗಳು ಬಿತ್ತರಗೊಂಡಿವೆ. ನಮ್ಮ ಕವಿಮನೆತನದ ಕುಟುಂಬ ಪತ್ರಿಕೆ 'ಕವಿಕಿರಣ'ದ ಸಂಪಾದಕನಾಗಿ ಇಲ್ಲಿಯವರೆಗೆ 15 ಅರ್ಧವಾರ್ಷಿಕ ಸಂಚಿಕೆಗಳು ಹೊರಬಂದಿದ್ದು ಮೆಚ್ಚುಗೆ ಗಳಿಸಿವೆ. ಕಾಲಾನಂತರದಲ್ಲಿ ನನ್ನದಾಗಿ ಏನಾದರೂ ಅಲ್ಪ ಸ್ವಲ್ಪ ಉಳಿದರೆ ಅದು ನನ್ನ ಬರವಣಿಗೆ ಮಾತ್ರ. ಅದೂ ನಂತರದ ಕೆಲವು ಅವಧಿಯವರೆಗೆ ಮಾತ್ರ ಹಾಗೂ ಯಾರಾದರೂ ಗುರುತಿಸಿದಾಗ ಮಾತ್ರ ಎಂಬುದರ ಅರಿವಿದೆ. ಮುನಿಶ್ರೀ ತರುಣಸಾಗರಜಿಯವರು ಹೇಳಿದ ಮಾತೊಂದು ನನ್ನಲ್ಲಿ ಅಚ್ಚೊತ್ತಿದೆ. ಅದೆಂದರೆ "ಸತ್ತ ನಂತರವೂ ಜನ ನಿಮ್ಮನ್ನು ಮರೆಯಬಾರದು ಎಂದು ನೀವು ಭಾವಿಸುವುದಾದರೆ ಎರಡರಲ್ಲಿ ಒಂದು ಕೆಲಸವನ್ನಾದರೂ ಖಂಡಿತವಾಗಿ ಮಾಡಿ. ಓದಲು ಸಾಧ್ಯವಿರುವ ಯಾವುದನ್ನಾದರೂ ಬರೆದುಬಿಡಿ ಅಥವಾ ಬರೆಯಲು ಸಾಧ್ಯವಿರುವಂಥದ್ದನ್ನು ಏನಾದರೂ ಬರೆದುಬಿಡಿ. ಓದಲು ಲಾಯಕ್ಕಾಗಿರುವಂಥಹದೇನಾದರೂ ಬರೆಯಿರಿ ಅಥವಾ ಬರೆಯುವುದಕ್ಕೆ ಲಾಯಕ್ಕಾಗಿರುವಂತಹ ಕೆಲಸವನ್ನೇನಾದರೂ ಮಾಡಿಬಿಡಿ. ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯನ್ನು ಆತನ ಬಹುಮೂಲ್ಯ ಕೃತಿಗಳಿಗಾಗಿ ಅಥವಾ ಕೃತ್ಯಗಳಿಗಾಗಿ ಮಾತ್ರ ನೆನಪು ಮಾಡಿಕೊಳ್ಳಲಾಗುತ್ತದೆ."  ವಿವಿಧ ಹುದ್ದೆಗಳಲ್ಲಿ ಮತ್ತು ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಅದು ದೇವರು ನನಗೆ ಸಾರ್ವಜನಿಕ ಸೇವೆ ಮಾಡಲು ಕೊಟ್ಟ ಸದವಕಾಶವೆಂದು ಭಾವಿಸಿ ಕೆಲಸ ಮಾಡಿರುವೆ. ಸ್ವಇಚ್ಛಾ ನಿವೃತ್ತಿ ಪಡೆದಿರದಿದ್ದರೆ ಹಿರಿಯ ಅಸಿಸ್ಟೆಂಟ್ ಕಮಿಷನರರಾಗಿ ನಿವೃತ್ತನಾಗಬಹುದಿತ್ತು. ನನ್ನ ಮನ ಹಗುರ ಮಾಡಿಕೊಳ್ಳಲೂ ಈ ಬರವಣಿಗೆ ನನಗೆ ನೆರವಾಗಿದೆ. ಅರಳು-ಮರಳು ಆವರಿಸುವ ಮುನ್ನ, ಶಕ್ತಿ ಕುಂದುವ ಮುನ್ನ, ಮರೆವು ಬರುವ ಮುನ್ನ, ಮನ ನುಡಿದಿದ್ದನ್ನು ಕಪ್ಪು-ಬಿಳಿಯಲ್ಲಿ ಮೂಡಿಸುವ ಬಯಕೆಯಿದೆ. ಮುಪ್ಪಿನಲ್ಲಿ 'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಎಂಬ ಭಾವ ಬರುವ ಮುನ್ನ ತೋಚಿದ್ದನ್ನು ಗೀಚಬೇಕೆನ್ನಿಸಿದೆ. ನಾನೊಬ್ಬ ಪಂಡಿತ, ದೊಡ್ಡ ಬರಹಗಾರನೆಂದಲ್ಲ, ನನಗೆ ಪಾಂಡಿತ್ಯವಿದೆಯೆಂದೂ ನಾನು ಅಂದುಕೊಂಡಿಲ್ಲ. ಇದನ್ನು ಮನದೊಳಗಣ ತುಂಬಿದ ಭಾವನೆಗಳನ್ನು ಹೊರಹಾಕಿ ಹಗುರಗೊಳ್ಳುವ ಇರಾದೆಯೆನ್ನಬಹುದು. 'ಬಿಟ್ಟರೂ ಬಿಡದೀ ಮಾಯೆ' ಅನ್ನುವುದು ಇದಕ್ಕೇ ಇರಬೇಕು. ಈ ಪ್ರವೃತ್ತಿಯನ್ನು ಸಮಾಜಮುಖಿಯಾಗಿ ಉಪಯೋಗಿಸಿಕೊಳ್ಳವುದೂ ವಾನಪ್ರಸ್ಥದ ಭಾಗವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. 
     ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಲ್ಲಿ ಸತ್ತನಂತರದಲ್ಲಿ ಅವನ ಇಚ್ಛೆಯಂತೆ ಮೃತ ಶರೀರವನ್ನು ವಿಲೇವಾರಿ ಮಾಡಿದರೆ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಬಯಸಿದಲ್ಲಿ ಮಾಡಬಹುದು ಅಥವ ಬಿಡಬಹುದು. ಶ್ರಾದ್ಧಾದಿ ಕಾರ್ಯಗಳು ತಮ್ಮ ಹಿರಿಯರನ್ನು ನೆನೆಸಿಕೊಂಡು ಸಲ್ಲಿಸುವ ಕೃತಜ್ಞತೆಯಾಗಿದ್ದು, ಅದರ ಫಲವೇನಿದ್ದರೂ ಮಾಡುವವರಿಗಷ್ಟೆ.  ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವಾಗ, ಅವನಿಗೆ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಪ್ರಳಯ, ಪ್ರವಾಹ, ಇತ್ಯಾದಿ ನೈಸರ್ಗಿಕ ಕಾರಣಗಳಿಂದ ಉತ್ತರಕ್ರಿಯೆ ಮಾಡುವವರೂ ಇಲ್ಲದಂತೆ ನಾಶವಾಗುವ ಸಹಸ್ರಾರು ಜೀವಗಳಿಗೆ ಸದ್ಗತಿ ದೊರೆಯುವುದಿಲ್ಲವೆಂದು ಹೇಳಲಾಗುವುದೆ? ಆದ್ದರಿಂದ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ಸಂಬಂಧಿಕರು ಮಾಡಬೇಕೆಂದು ಬಯಸುವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದು ನನ್ನ ಉಯಿಲು ಎಂದು ಭಾವಿಸಬಹುದು. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು. 
     ಹಿರಿಯ ನಾಗರಿಕರ ಸಾಲಿಗೆ ಸೇರಿ ದೈಹಿಕ ಶಕ್ತಿ ಕುಂದಲು ಮತ್ತು ಮುಪ್ಪು ತನ್ನ ಇರುವನ್ನು ತೋರಿಸಲು ಪ್ರಾರಂಭಿಸಿರುವ ಸಮಯವಿದು. ನಿಂದಾಸ್ತುತಿಗಳಿಗೆ ಪಕ್ಕಾಗುವ, ಅದನ್ನು ಯೋಗ್ಯತಾನುಸಾರ ಪಡೆಯುವ, ನಿಂದೆ, ಹೀಗಳಿಕೆಗಳನ್ನು ಎದುರಿಸಲು/ಪ್ರತಿಭಟಿಸಲು ಮನಸ್ಸಿದ್ದರೂ ವಸ್ತುಸ್ಥಿತಿ ವಿರುದ್ಧವಾಗಿರುವ, ಮೌನವಾಗಿ ನುಂಗಬೇಕಾಗಿ ಬರುವ ಸಮಯವಿದು. ಕಸುವು ಇದ್ದಾಗ ಮತ್ತು ಕಸುವು ಇಲ್ಲದಾಗ, ಅಧಿಕಾರವಿದ್ದಾಗ ಮತ್ತು ಇಲ್ಲದಿದ್ದಾಗ, ಆರೋಗ್ಯವಿದ್ದಾಗ ಮತ್ತು ಇಲ್ಲದಿದ್ದಾಗ, ವಯಸ್ಕನಾಗಿದ್ದಾಗ ಮತ್ತು ಮುಪ್ಪಡರಿದಾಗ ವ್ಯಕ್ತಿಯ ಬಗ್ಗೆ ಇತರರ ಮನೋಭಾವ ಹೇಗಿರುತ್ತದೆ, ಹೇಗೆ ಬದಲಾಗುತ್ತದೆ ಎಂಬುದರ ಅರಿವು ನನಗಿದೆ. ಇದನ್ನು ಸರಿ-ತಪ್ಪುಗಳ ಅಳತೆಗೋಲಿನಲ್ಲಿ ಅಳೆಯಲಾಗುವುದಿಲ್ಲ. ವಾಸ್ತವತೆಯ ಬೆಳಕಿನಲ್ಲಿ ನೋಡಬೇಕು. ವಯಸ್ಸಿದ್ದಾಗ ಆಶ್ರಯ ಕೊಡುತ್ತಿದ್ದವರು ಮುಪ್ಪಿನಲ್ಲಿ ಆಶ್ರಯ ಬಯಸುವಂತಹ ಸ್ಥಿತಿ ಬರುತ್ತದೆ. ನನಗೆ ಇಂತಹ ಸ್ಥಿತಿ ಬಂದಿದೆಯೆಂದು ನಾನು ಹೇಳುತ್ತಿಲ್ಲ. ವಸ್ತುಸ್ಥಿತಿಯ ವಿಶ್ಲೇಷಣೆ ಮಾಡುತ್ತಿದ್ದೇನಷ್ಟೆ. 'ಅದೀನಾ ಸ್ಯಾಮ ಶರದಃ ಶತಮ್' ಎಂಬಂತೆ ಇರುವಷ್ಟು ಕಾಲ ಯಾರಿಗೂ ಹೊರೆಯೆನಿಸದಂತೆ, ದೈನ್ಯತೆ ಬಾರದಂತೆ ಬಾಳಬೇಕೆಂಬ ಬಯಕೆ ಈಡೇರಲಿ ಎಂದು ಆ ದೇವನಲ್ಲಿ ನನ್ನ ಬೇಡಿಕೆಯಿದೆ. 
     ಇದು ಎಲ್ಲರಿಗೂ ಶುಭವ ಬಯಸುವ ಹೊತ್ತು, ಎಲ್ಲದರಲ್ಲೂ ಶುಭವ ಕಾಣುವ ಹೊತ್ತು. 
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||

'ಸರ್ವೇ ಜನಾಃ ಸುಖಿನೋ ಭವನ್ತು'
-ಕ.ವೆಂ.ನಾಗರಾಜ್.

ಶುಕ್ರವಾರ, ಅಕ್ಟೋಬರ್ 16, 2015

ಸತ್ಸಂಗದ ಸತ್ಯ



     "ನೀವು ಸತ್ಸಂಗಕ್ಕೆ ಏಕೆ ಹೋಗುತ್ತೀರಿ?" - ಸತ್ಸಂಗಕ್ಕೆ ಹೋಗುವ ಕೆಲವರನ್ನು ವಿಚಾರಿಸಿದಾಗ ಅವರಿಂದ ಬಂದ ಉತ್ತರಗಳಿವು:
'ಸತ್ಸಂಗಕ್ಕೆ ಹೋಗುವುದರಿಂದ ನೆಮ್ಮದಿ ಸಿಗುತ್ತದೆ.'
'ಮನಸ್ಸು ಹಗುರವಾಗುತ್ತದೆ.'
'ಮನೆ, ಕಛೇರಿಗಳ ಜಂಜಾಟದಿಂದ ರೋಸಿದ ಮನಸ್ಸಿಗೆ ಶಾಂತಿ ಸಿಗುತ್ತದೆ.'
     ಇದೇ ಅರ್ಥದ ಹಲವು ಉತ್ತರಗಳು ಬಂದರೆ, ಒಬ್ಬರು ಮಾತ್ರ, 'ಟೈಮ್ ಪಾಸ್ ಅಗುತ್ತದೆ' ಅಂದಿದ್ದರು. ಸತ್ಸಂಗದ ಅಂತರಂಗಕ್ಕಿಳಿಯಲು ಈ ಉತ್ತರಗಳು ಪ್ರೇರಿಸಿದವು. 'ಸತ್ಸಂಗ' ಎಂಬದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ 'ಸತ್ಯದೊಡನೆ ಇರುವುದು', 'ಸತ್ಯಕ್ಕಾಗಿ ಒಗ್ಗೂಡುವುದು' ಅರ್ಥಾತ್ ಸತ್ಯದ ಸಂಗ ಮಾಡುವುದು ಎಂದಾಗುತ್ತದೆ. ವ್ಯಾವಹಾರಿಕ ಬಳಕೆಯಲ್ಲಿ ಸದ್ವಿಚಾರಗಳನ್ನು ಪ್ರೇರಿಸುವ, ಪ್ರಸರಿಸುವ ಸಜ್ಜನರ ಕೂಟವೇ ಸತ್ಸಂಗ. ಅದು ಒಟ್ಟಿಗೆ ಭಜನೆ ಮಾಡುವುದಿರಬಹುದು, ಉಪನ್ಯಾಸಗಳನ್ನು ಕೇಳುವುದಿರಬಹುದು, ವಿಚಾರ ಕಮ್ಮಟವಿರಬಹುದು, ಧಾರ್ಮಿಕ/ಸಾಂಸ್ಕೃತಿಕ/ಸಾಹಿತ್ಯಿಕ ವಿಷಯಗಳ ಕಾರ್ಯಕ್ರಮಗಳಿರಬಹುದು, ಒಟ್ಟಾರೆಯಾಗಿ ಧನಾತ್ಮಕ ಅಂಶಗಳಿಗೆ ಒತ್ತು ಕೊಡುವ ಯಾವುದೇ ಚಟುವಟಿಕೆಗಳನ್ನು ಸತ್ಸಂಗದ ವ್ಯಾಪ್ತಿಯಲ್ಲಿ ತರಬಹುದು.
     ನಾನು ಭಾಗವಹಿಸಿರುವ ಒಂದು ಮಾದರಿ ಸತ್ಸಂಗದ ಬಗ್ಗೆ ಉದಾಹರಿಸಿ ವಿಷಯ ಮುಂದುವರೆಸುವೆ. ಬೆಂಗಳೂರಿನಲ್ಲಿರುವ 118ವರ್ಷಗಳ ಪಂ. ಸುಧಾಕರ ಚತುರ್‍ವೇದಿಯವರ ಮನೆಯಲ್ಲಿ ಪ್ರತಿ ಶನಿವಾರ ಸಂಜೆ 5.30ಕ್ಕೆ ಸರಿಯಾಗಿ ಸತ್ಸಂಗ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ ಸರಳ ಅಗ್ನಿಹೋತ್ರ ನಡೆಯುತ್ತದೆ. ದಿವ್ಯ ಮತ್ತು ಹಿತಕರ ವಾತಾವರಣ ಉಂಟುಮಾಡುವ ಈ ಅಗ್ನಿಹೋತ್ರ ಸುಮಾರು 15 ನಿಮಿಷಗಳ ಕಾಲ ನಡೆಯುತ್ತದೆ. ನಂತರದಲ್ಲಿ ಎರಡು ವೈದಿಕ ಭಜನೆಗಳನ್ನು ಸಾಮೂಹಿಕವಾಗಿ ಹಾಡಲಾಗುತ್ತದೆ. ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಆಸಕ್ತರು ಭಾಗವಹಿಸುತ್ತಾರೆ. ನಂತರದಲ್ಲಿ ಪಂ. ಸುಧಾಕರ ಚತುರ್‍ವೇದಿಯವರು ಸುಮಾರು 40 ನಿಮಿಷಗಳ ಕಾಲ ಮಾತನಾಡುತ್ತಾರೆ. ಯಾವುದಾದರೂ ಒಂದು ವೇದಮಂತ್ರದ ಅರ್ಥ, ವಿಸ್ತಾರ ತಿಳಿಸುತ್ತಾ, ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುತ್ತಾ ಮನುಕುಲ ಬಾಳಬೇಕಾದ ರೀತಿಯ ಕುರಿತು ಹೇಳುವ ಅವರ ಮಾತುಗಳು ಹೃದಯಸ್ಪರ್ಷಿಯಾಗಿರುತ್ತವೆ. ಕೊನೆಯಲ್ಲಿ ಬಂದವರ ಪೈಕಿಯೇ ಯಾರಾದರೂ ಒಬ್ಬರು ತಂದಿರುವ ಸಿಹಿ ಅಥವ ಪ್ರಸಾದವನ್ನು ಎಲ್ಲರಿಗೂ ಹಂಚುವುದರೊಂದಿಗೆ ಸತ್ಸಂಗ ಮುಗಿಯುತ್ತದೆ. ನನಗಂತೂ ಅವರ ಮಾತುಗಳು ಅಂತರಂಗವನ್ನು ಬಡಿದೆಬ್ಬಿಸಿವೆ, ಎಚ್ಚರಿಸಿವೆ, ಸರಿದಾರಿಯನ್ನು ತೋರಿಸಿವೆ. ನನ್ನಂತೆಯೇ ಹಲವರ ಅಭಿಪ್ರಾಯವೂ ಇದೇ ಆಗಿವೆ.
     ಸತ್ಸಂಗದ ಪೂರ್ಣ ಲಾಭ ಸಿಗಬೇಕೆಂದರೆ ಬಾಗಿಲ ಬಳಿಯಲ್ಲಿಯೇ ನಮ್ಮ ದಿನನಿತ್ಯದ ಚಿಂತೆಗಳು, ಮನದಲ್ಲಿ ಮೂಡುವ ವಿಚಾರಗಳು, ಹಳೆಯ ಎಲ್ಲಾ ಸಂಗತಿಗಳನ್ನು ಮರೆತು ಒಬ್ಬ ಹೊಸ ವಿದ್ಯಾರ್ಥಿಯಂತೆ, ಏನೂ ಗೊತ್ತಿಲ್ಲದವರಂತೆ, ಹೊಸದಾಗಿ ತಿಳಿಯಲು ಉತ್ಸುಕನಾಗಿ ಒಳಪ್ರವೇಶಿಸುವುದು ಉತ್ತಮ. ಯಾವಾಗಲೂ ಹೊಸಬರಂತೆ ಮತ್ತು ಹೊಸಬರಂತೆಯೇ ಇರಲು ಅಭ್ಯಾಸ ಮಾಡಿಕೊಂಡರೆ ಉತ್ತಮ ಅನುಭವ ನಮ್ಮದಾಗುವುದು. ಸತ್ಸಂಗದಲ್ಲಿ ಸಮಾನ ಮನಸ್ಕರು ಒಂದು ಸಮಾನ ಧನಾತ್ಮಕ ವಿಷಯದ ಸಲುವಾಗಿ ಒಟ್ಟುಗೂಡುತ್ತಾರೆ. ಈ ರೀತಿಯ ಒಟ್ಟುಗೂಡುವಿಕೆಯೇ ಪರಿಣಾಮಕಾರಿಯಾಗಿರುತ್ತದೆ. ಸುಮ್ಮನೆ ಸಮಯ ಕಳೆಯಲು ಬರುವವರಿಂದಲೂ ಉಪಯೋಗವಿದೆ. ಕನಿಷ್ಠ ಸತ್ಸಂಗ ನಡೆಯುವ ಒಂದು, ಒಂದೂವರೆ ಗಂಟೆಯವರೆಗಾದರೂ ಅವರು ಋಣಾತ್ಮಕ ವಿಷಯಗಳಿಂದ ದೂರವಿರುತ್ತಾರಲ್ಲಾ! ಅಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮ, ಭಜನೆ, ಇತ್ಯಾದಿಗಳಿಂದ ಒಂದು ಅಲೌಕಿಕ, ಸಂತಸಕರ, ಹಿತಕರ ತರಂಗಗಳು ಉಂಟಾಗುತ್ತವೆ. ಈ ತರಂಗಗಳು ಅಲ್ಲಿ ಸೇರಿದವರ ಮೇಲೆ ಒಳ್ಳೆಯ ಪ್ರಭಾವ ಬೀರಿ ಆನಂದವನ್ನುಂಟುಮಾಡುತ್ತವೆ. ಒಳ್ಳೆಯ ವಿಚಾರಗಳ ಕುರಿತು ಯೋಚಿಸುವಂತೆ, ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅಲ್ಲಿ ಪ್ರೇರೇಪಣೆ ಸಿಗುತ್ತದೆ. ಸತ್ಸಂಗದ ಯಶಸ್ಸು ಇರುವುದು ಇಲ್ಲಿಯೇ!
     ಆದಿ ಶಂಕರಾಚಾರ್ಯರ ಭಜಗೋವಿಂದಮ್ ಸ್ತೋತ್ರದ ಒಂಬತ್ತನೆಯ ಶ್ಲೋಕ ಹೀಗಿದೆ:
ಸತ್ಸಂಗತ್ವೇ ನಿಸ್ಸಂಗತ್ವಮ್ ನಿಸ್ಸಂಗತ್ವೇ ನಿರ್ಮೋಹತ್ವಮ್
ನಿರ್ಮೋಹತ್ವೇ ನಿಶ್ಚಲತತ್ತ್ವಮ್ ನಿಶ್ಚಲತತ್ವೇ ಜೀವನ್ಮುಕ್ತಿಃ||
     ಉತ್ತಮರಾದ ವಿದ್ವಜ್ಜನರ ಸಹವಾಸದಿಂದ ಒಬ್ಬ ವ್ಯಕ್ತಿ ಎಲ್ಲಾ ರೀತಿಯ ಬಂಧನಗಳಿಂದ ಮುಕ್ತನಾಗುತ್ತಾನೆ, ಈ ರೀತಿಯಾಗಿ ಭ್ರಮೆಗಳಿಂದ ಹೊರಬಂದವನು ತಪ್ಪುದಾರಿಯಲ್ಲಿ ಹೋಗುವದಿಲ್ಲ, ಸರಿದಾರಿಯಲ್ಲೇ ನಡೆಯುತ್ತಾನೆ. ಈ ನಿರ್ಮೋಹತ್ವದಿಂದ ಮನಸ್ಸು ಚಂಚಲವಾಗುವುದಿಲ್ಲ, ಪ್ರಾಪಂಚಿಕ ಆಕರ್ಷಣೆಗಳಿಂದ ವಿಚಲಿತಗೊಳ್ಳುವುದಿಲ್ಲ. ಈ ಗುಣದಿಂದಾಗಿ ಮುಕ್ತಿಯನ್ನು ಸಾಧಿಸುತ್ತಾನೆ ಎಂಬುದು ಈ ಶ್ಲೋಕದ ಅರ್ಥ. ಸತ್ಸಂಗದ ಉದ್ದೇಶ ಅರ್ಥಪೂರ್ಣವಾಗಿ, ಸಮರ್ಥವಾಗಿ ಈ ಶ್ಲೋಕದಲ್ಲಿ ಚುಟುಕಾಗಿ ಬಿಂಬಿತಗೊಂಡಿದೆ.
     ಈ ವೇದಮಂತ್ರದ ಆಶಯವೂ ಇದೇ ಆಗಿದೆ:
ಓಂ ತಚ್ಛಕ್ಷುರ್ದೇವಹಿತಂ ಪುರಸ್ತಾಚ್ಛುಕ್ರಮುಚ್ಛರತ್| ಪಶ್ಶೇಮ ಶರದಃ ಶತಂ ಜೀವೇಮ ಶರದದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಮದೀನಾಃ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್|| (ಯಜು.೩೬.೨೪.)
     ಅರ್ಥ: ವಿದ್ವಜ್ಜನರಿಗೆ ಹಿತಕಾರಿಯಾದ, ವಿದ್ವಜ್ಜನರಿಂದ ಪೂಜಿತನಾದ ಪರಮಾತ್ಮ ನಮ್ಮ ಮುಂದೆ ವಿರಾಜಿಸುತ್ತಿದ್ದಾನೆ. ಆ ಪರಮಾತ್ಮನ ಕೃಪೆಯಿಂದ ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ನೋಡುತ್ತಿರೋಣ, ನೂರು ವರ್ಷಗಳ ಕಾಲ (ಒಳ್ಳೆಯ ರೀತಿಯಲ್ಲಿ) ಜೀವಿಸೋಣ, ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ಕೇಳುತ್ತಿರೋಣ, ನೂರು ವರ್ಷಗಳ ಕಾಲ ದಾಸ್ಯತನಕ್ಕೆ ಒಳಪಡದೆ ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬಾಳೋಣ ಮತ್ತು ಈ ರೀತಿಯಾಗಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸೋಣ.
-ಕ.ವೆಂ.ನಾಗರಾಜ್.
***************
ದಿನಾಂಕ ರ 28.09.2015ರಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಅಕ್ಟೋಬರ್ 6, 2015

ನಿಂದಕರಿಗೆ ನಮಸ್ಕಾರ!


     ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ ನಿಂದಕರಿಂದಾಗಿ ಜನರು ತಪ್ಪು ಮಾಡಬಯಸುವುದಿಲ್ಲ. ದೂರುವುದು, ದೂಷಿಸುವುದು ಒಂದು ಹಂತದವರೆಗೆ ಒಳ್ಳೆಯದು. ತಪ್ಪನ್ನು ಸರಿಯಾಗಿಸುವ ದೃಷ್ಟಿಯಿಂದ ಮಾಡುವ ನಿಂದನೆಗಳು ಒಳ್ಳೆಯದು. ಆದರೆ ನಿಂದನೆ, ದೂಷಣೆಗಳನ್ನೇ ಹವ್ಯಾಸವಾಗಿರಿಸಿಕೊಂಡ, ದೂಷಣೆಯಲ್ಲೇ ಮತ್ತು ಅದರಿಂದ ಇತರರಿಗೆ ಆಗುವ ಹಿಂಸೆಯಿಂದಲೇ ಸಂತೋಷ ಪಡುವ ಮನೋಭಾವ ಹೊಂದಿದ ಕೆಲವು ವಿಕ್ಷಿಪ್ತ ಮನಸ್ಕರಿಂದ ಸಮಸ್ಯೆಗೆ ಪರಿಹಾರ ಸಿಗುವುದಿರಲಿ, ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ತಪ್ಪು ಕಂಡು ಹಿಡಿಯುವುದು ಸುಲಭ; ದೂರುವುದೂ ಸುಲಭ; ಆದರೆ ಅದಕ್ಕೆ ಪರಿಹಾರದ ದಾರಿಯನ್ನು ಸೂಚಿಸುವುದು ಮತ್ತು ಅದರಂತೆ ನಡೆಯುವುದು ಉತ್ತಮವಾದ ನಡವಳಿಕೆಯೆನಿಸುತ್ತದೆ. ಮನಸ್ಸು ಶಾಂತ ಸ್ಥಿತಿಯಲ್ಲಿ ಇರಬೇಕೆಂದರೆ ಮೊದಲು ಇತರರಲ್ಲಿ ತಪ್ಪು ಕಂಡು ಹಿಡಿಯಲು ಹೋಗದೆ, ತಮ್ಮ ತಪ್ಪುಗಳನ್ನು ಗುರುತಿಸಿಕೊಂಡು ತಿದ್ದಿ ನಡೆಯುವುದನ್ನು ಅಭ್ಯಸಿಸಬೇಕು. ಇತರರ ತಪ್ಪುಗಳ ಬಗ್ಗೆಯೇ ಚಿಂತಿಸುವುದು ಮತ್ತು ಎತ್ತಿ ಆಡುವುದರಿಂದ ನೆಮ್ಮದಿ ಹಾಳಾಗುತ್ತದೆ. ನೆಮ್ಮದಿ ಹಾಳಾಗುವುದೆಂದರೆ ನಾಶದ ಹಾದಿ ಹಿಡಿದಂತೆಯೇ ಸರಿ.
     ಅಷ್ಟಕ್ಕೂ ಒಬ್ಬರನ್ನೊಬ್ಬರು ದೂರುವುದಾದರೂ ಏಕೆ? ಈ ಪ್ರಪಂಚದಲ್ಲಿ ಒಬ್ಬರು ಇದ್ದಂತೆ ಇನ್ನೊಬ್ಬರು ಇರುವುದಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರಹ. ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮಂತೆಯೇ ವಿಚಾರ ಹೊಂದಿರಬೇಕು, ತಮ್ಮ ವಿಚಾರವನ್ನು ಎಲ್ಲರೂ ಒಪ್ಪಬೇಕು ಎಂಬ ಅಂತರ್ಗತ ಅನಿಸಿಕೆಯೇ ದೂರುವುದಕ್ಕೆ ಮೂಲ. ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥ.
     ಕೆಲವರು ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಬದಲಾಗದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅಂತಹವರು ಮುಂದೊಮ್ಮೆ ತಮ್ಮ ಅಭಿಪ್ರಾಯ ತಪ್ಪೆಂದು ಕಂಡಾಗಲೂ ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ. ತಾವು ತಿಳಿದಿರುವುದೇ ಸತ್ಯ, ಇತರರು ಹೇಳುವುದೆಲ್ಲಾ ಸುಳ್ಳು, ತಪ್ಪು ಎಂದೇ ವಾದಿಸುತ್ತಾರೆ. ಉದ್ವೇಗದಿಂದ ಅನುಚಿತ ಪದಗಳನ್ನೂ ಬಳಸುತ್ತಾರೆ. ಇದು ಹಲವರ ಮನಸ್ಸನ್ನು ನೋಯಿಸುತ್ತದೆ. ಇದಕ್ಕೆ ಮದ್ದಿಲ್ಲ. 'ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿ' ಎನ್ನುವಂತೆ ಅವರ ವರ್ತನೆ ಇರುತ್ತದೆ. ಪ್ರಪಂಚವನ್ನು ಅದು ಇದ್ದಂತೆಯೇ ನೋಡುವ, ಒಪ್ಪುವ ಮನಸ್ಸು ಇರಬೇಕು. ಮುಕ್ತ ಮನಸ್ಸಿನಿಂದ ಅಭಿಪ್ರಾಯಿಸಬೇಕು. ತಿದ್ದುವ, ತಿದ್ದಿಕೊಳ್ಳುವ  ಕೆಲಸವನ್ನು ಮೊದಲು ನಮ್ಮಿಂದಲೇ ಆರಂಭಿಸಬೇಕು. ಯಾರನ್ನಾದರೂ ದೂಷಿಸಿ, ಹಂಗಿಸಿ ಬದಲಾಯಿಸುತ್ತೇವೆ ಎನ್ನುವುದು ಅಸಾಧ್ಯದ ಮಾತು. ಪ್ರೀತಿಸುವವರ ಮಾತನ್ನು ಎಲ್ಲರೂ ಗೌರವಿಸುತ್ತಾರೆ, ದ್ವೇಷಿಸುವವರ ಮಾತನ್ನು ಯಾರೂ ಕೇಳಲಾರರು. ಬದಲಾವಣೆ ಹೃದಯದಿಂದ ಬರಬೇಕು, ಶುದ್ಧ ಮನಸ್ಸಿನಿಂದ ಬರಬೇಕು. ಶುದ್ಧ ಹೃದಯ, ಮನಸ್ಸುಗಳು ಇರುವವರಿಗೆ ಇತರರು ಅಶುದ್ಧರು ಎಂದು ಅನ್ನಿಸುವುದೇ ಇಲ್ಲ. ನಮ್ಮಲ್ಲೇ ಇಲ್ಲದುದನ್ನು ಇತರರಿಂದ ನಿರೀಕ್ಷಿಸಲಾಗುವುದೇ?
     ಇನ್ನು ಕೆಲವರು ಇರುತ್ತಾರೆ. ಅವರು ಪ್ರತಿ ವಿಷಯದಲ್ಲೂ ಮೂಗು ತೂರಿಸುವವರು, ಪ್ರತಿ ವಿಷಯದಲ್ಲೂ ಒಂದಲ್ಲಾ ಒಂದು ತಪ್ಪು ಕಂಡು ಹಿಡಿಯುವ ಮನೋಭಾವದವರು. ಸಾಮಾನ್ಯವಾಗಿ ತಾವೊಬ್ಬ ಪಂಡಿತ, ಹಿರಿಯ, ಹೆಚ್ಚು ತಿಳಿದವನು ಎಂದುಕೊಂಡಿರುವವರಲ್ಲಿ ಈ ಸ್ವಭಾವ ಕಾಣಬರುತ್ತದೆ. ತಮ್ಮ ಪಾಂಡಿತ್ಯದ ಕುರಿತು ಇತರರ ಗಮನ ಸೆಳೆಯುವುದು ಅವರ ಉದ್ದೇಶವಿರಬಹುದು. ದೂಷಿಸುವವರು ಒಂದು ರೀತಿಯಲ್ಲಿ ಒಳ್ಳೆಯದನ್ನೇ ಮಾಡುತ್ತಾರೆ.  ಸದುದ್ದೇಶದಿಂದ, ತಪ್ಪನ್ನು ಸರಿ ಮಾಡುವ ಕಾರಣದಿಂದ ಮಾಡುವ ದೂರು ಒಳಿತು ಮಾಡುತ್ತದೆ, ತಿದ್ದಿಕೊಂಡು ನಡೆಯಲು ಸಹಕಾರಿಯಾಗುತ್ತದೆ. ಮುಂದೆ ಎಚ್ಚರಿಕೆಯಿಂದ ನಡೆಯಬೇಕೆಂಬುದನ್ನು ಕಲಿಸುತ್ತದೆ. ಪೂರ್ವಾಗ್ರಹದ ಮತ್ತು ದುರುದ್ದೇಶದ ದೂರುಗಳೂ ಸಹ ನಮ್ಮ ಅನುಭವದ ಖಜಾನೆ ತುಂಬಲು ಸಹಕಾರಿಯಾಗುತ್ತವೆ. ಬೆಳೆಯುವ ಲಕ್ಷಣವೆಂದರೆ, ಇತರರ ತಪ್ಪುಗಳನ್ನು ಗಮನಿಸಿ ದೂರುವ ಪ್ರವೃತ್ತಿ ಬಿಟ್ಟು, ನಮ್ಮ ಸ್ವಂತದ ತಪ್ಪುಗಳನ್ನು ಗುರುತಿಸಿ ತಿದ್ದಿಕೊಂಡು ನಡೆಯಲು ಪ್ರಯತ್ನಿಸುವುದು. ನಾವು ನಮ್ಮ ಹಿರಿಯರನ್ನು, ಸೋದರ-ಸೋದರಿಯರನ್ನು, ಸಮಾಜವನ್ನು ದೂರುತ್ತೇವೆ, ನಮ್ಮನ್ನು ಮಾತ್ರ ದೂರಿಕೊಳ್ಳುವುದಿಲ್ಲ. ಬದಲಾಗಬೇಕಾದುದು ಅವರುಗಳಲ್ಲ, ನಾವೇ ಎಂಬ ಅರಿವು ಮೂಡಿದರೆ ನಾವು ಇತರರನ್ನು ದೂರುವುದಿಲ್ಲ. ನಮ್ಮ ಅತ್ಯಂತ ಘೋರವಾದ ತಪ್ಪುಗಳನ್ನೂ ನಾವು ಕ್ಷಮಿಸಿಕೊಂಡುಬಿಡುತ್ತೇವೆ. ಹಾಗಿರುವಾಗ, ಇತರರ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುವಷ್ಟಾದರೂ ನಾವು ದೊಡ್ಡವರಾಗಬಾರದೆ?  ದೂರುಗಳಿಂದ ಪಾಠ ಕಲಿಯೋಣ, ಪೂರ್ವಾಗ್ರಹದ ದೂರುಗಳನ್ನು ನಿರ್ಲಕ್ಷಿಸೋಣ, ಇತರರನ್ನು ದೂರದಿರೋಣ.
ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು |
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 21-09-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಅಕ್ಟೋಬರ್ 2, 2015

ಉದಾತ್ತ ವಿಚಾರದ ಬಲಿವೈಶ್ವದೇವಯಜ್ಞ


ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||
     ಒಂದು ಕಾಲವಿತ್ತು. ಯಾರಾದರೂ ಅತಿಥಿಗೆ, ಹಸಿದವರಿಗೆ, ಪ್ರಯಾಣಿಕರಿಗೆ ಊಟ ಹಾಕದೆ ಮನೆಯ ಯಜಮಾನ ಊಟ ಮಾಡುತ್ತಿರಲಿಲ್ಲ. ಯಾರೂ ಬರದಿದ್ದರೆ ಯಜಮಾನನೇ ಅಂತಹವರನ್ನು ಹುಡುಕಿಕೊಂಡು ಹೋಗುತ್ತಿದ್ದುದೂ ಉಂಟು. ಅನ್ನ ಮತ್ತು ವಿದ್ಯೆಗಳನ್ನು ಮಾರಾಟ ಮಾಡಬಾರದೆಂಬುದು ಅಂದು ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯವಾಗಿತ್ತು. ಆಹಾರ ಮತ್ತು ಶಿಕ್ಷಣ ವ್ಯಾಪಾರದ ಸರಕಾಗಿರುವ ಇಂದಿನ ಕಾಲದಲ್ಲಿ ಇಂತಹ ಆಚಾರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ.
     ಯಜ್ಞ ಎಂದಾಕ್ಷಣ ಹೋಮಕುಂಡದ ಮುಂದೆ ಕುಳಿತು ಮಂತ್ರ ಪಠಿಸುತ್ತಾ ಹವನ, ಹೋಮಗಳನ್ನು ನಡೆಸುವುದು ಮಾತ್ರ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಯಾವುದೆಲ್ಲಾ ಶ್ರೇಷ್ಠತಮವಾದ ಕಾರ್ಯಗಳೋ ಅವೆಲ್ಲವೂ ಯಜ್ಞವಾಗುತ್ತದೆ. ಬ್ರಹ್ಮಯಜ್ಞ (ಸಂಧ್ಯಾಕಾಲದಲ್ಲಿ, ಅಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಮಾಡುವ ಸಂಧ್ಯಾವಂದನೆ), ದೇವಯಜ್ಞ (ಪಂಚಭೂತಗಳಾದ ಭೂಮಿ, ಆಕಾಶ, ವಾಯು, ಜಲ, ಅಗ್ನಿಗಳ ಸಂರಕ್ಷಣೆ, ಪೋಷಣೆಯ ಸಂಕಲ್ಪದೊಡನೆ ಮಾಡುವ ಪರಮಾತ್ಮನ ಸ್ತುತಿ), ಪಿತೃಯಜ್ಞ (ಹಿರಿಯರು ಸತ್ತ ನಂತರ ಮಾಡುವ ಶ್ರಾದ್ಧಕಾರ್ಯಗಳಾಗಿರದೆ ಅವರು ಬದುಕಿರುವಾಗ ಅವರನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು), ಬಲಿವೈಶ್ವದೇವಯಜ್ಞ (ಮುಂದೆ ವಿವರಿಸಿದೆ) ಮತ್ತು ಅತಿಥಿ ಯಜ್ಞ (ಆಕಸ್ಮಿಕವಾಗಿ ಆಗಮಿಸುವ ಸಜ್ಜನರು, ಸಾಧು-ಸಂತರು, ವಿದ್ವಜ್ಜನರು, ಹಿರಿಯರು ಮುಂತಾದವರನ್ನು ಯಥೋಚಿತವಾಗಿ ಸತ್ಕರಿಸುವುದು) ಇವುಗಳನ್ನು ಪಂಚಮಹಾಯಜ್ಞಗಳೆಂದು ಹೆಸರಿಸಲಾಗಿದೆ.
     ಪಂಚಮಹಾಯಜ್ಞಗಳಲ್ಲಿ ನಾಲ್ಕನೆಯದಾದ ಬಲಿವೈಶ್ವದೇವಯಜ್ಞ - ನಿಜಕ್ಕೂ ಒಂದು ಅದ್ಭುತ ವಿಚಾರ, ಉದಾತ್ತ ಕಲ್ಪನೆಗಳನ್ನೊಳಗೊಂಡ ಪ್ರತಿದಿನ ಮಾಡಬೇಕಾದ ಯಜ್ಞವಾಗಿದೆ. ಇದನ್ನು ಪ್ರತ್ಯಕ್ಷ ಆಚರಣೆಗೆ ತಂದಿರುವವರನ್ನು ನಾನು ಕಂಡಿಲ್ಲ. ಅಂತಹವರು ಇದ್ದರೆ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಈ ಯಜ್ಞದ ಆಚರಣೆಯ ಕ್ರಮ ಹೀಗಿದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಸ್ವಲ್ಪ ಭಾಗವನ್ನು ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ, ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ, ಪ್ರಾಣಾಪಾನ ಪುಷ್ಟಿಗಾಗಿ, ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿ ಪ್ರಾಪ್ತಿಗಾಗಿ, ಶರೀರಧಾರ್ಢ್ಯ ಪ್ರಾಪ್ತಿಗಾಗಿ, ಅಧ್ಯಯನಾನುಕೂಲ ವಿದ್ವಾಂಸರ ಪ್ರಸನ್ನತೆಗಾಗಿ, ನಮ್ಮ ಹಿರಿಯರು ಮತ್ತು ಪರಮಾತ್ಮನ ತೃಪ್ತಿಗಾಗಿ ಒಂದು ಮಂತ್ರಕ್ಕೆ ಒಂದು ಸಲದಂತೆ ಅಗ್ನಿಗೆ ಆಹುತಿ ನೀಡಬೇಕು. ಶಕ್ತಿಮೂಲವಾದ ಆಹಾರದ ಕಣಗಳು ಅಗ್ನಿಯಲ್ಲಿ ವಿಭಜಿತವಾಗಿ ವಾತಾವರಣದಲ್ಲಿ ಹರಡಿ ಸೇವಿಸುವವರಿಗೆ ಶಕ್ತಿಯನ್ನು ಉತ್ತೇಜಿಸುತ್ತವೆಯೆನ್ನಲಾಗಿದೆ. ಆ ಸಂದರ್ಭದಲ್ಲಿ ಹೇಳಲಾಗುವ 10 ಮಂತ್ರಗಳು:
     ಓಂ ಅಗ್ನಯೇ ಸ್ವಾಹಾ|| ಓಂ ಸೋಮಾಯ ಸ್ವಾಹಾ|| ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ|| ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ|| ಓಂ ಧನ್ವಂತರಯೇ ಸ್ವಾಹಾ|| ಓಂ ಕುಹ್ವೈ ಸ್ವಾಹಾ|| ಓಂ ಅನುಮತ್ಯೈ ಸ್ವಾಹಾ|| ಓಂ ಪ್ರಜಾಪತಯೇ ಸ್ವಾಹಾ|| ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ|| ಓಂ ಸ್ವಿಷ್ಟಕೃತೇ ಸ್ವಾಹಾ||
     ನಂತರದಲ್ಲಿ ಒಂದು ಎಲೆಯ ಮೇಲೆ ಉಪ್ಪು ಹಾಕಲ್ಪಟ್ಟ ಸಿದ್ಧಪಡಿಸಿದ ಅನ್ನ, ಸಾರು, ಪಲ್ಯ, ರೊಟ್ಟಿ ಮುಂತಾದ ಆಹಾರಪದಾರ್ಥಗಳ ಒಂದು ಭಾಗವನ್ನು ಹರಡಿ, ಅದನ್ನು ಪುನಃ ಏಳು ಭಾಗಗಳಾಗಿ ವಿಂಗಡಿಸಿ, 'ಶ್ವಭ್ಯೋ ನಮಃ| ಪತಿತೇಭ್ಯೋ ನಮಃ| ಶ್ವಪಗ್ಯೋ ನಮಃ| ಪಾಪ ರೋಗಿಭ್ಯೋ ನಮಃ| ಗೋಭ್ಯೋ ನಮಃ| ವಾಯುಸೇಭ್ಯೋ ನಮಃ| ಕೃಮಿಭ್ಯೋ ನಮಃ|' ಎಂದು ಹೇಳಿ ಆ ಭಾಗಗಳನ್ನು ದೀನರಿಗೆ, ದುರ್ಬಲರಿಗೆ, ಹಸಿದವರಿಗೆ, ರೋಗಿಗಳಿಗೆ, ಗೋವು, ನಾಯಿ, ಮುಂತಾದ ಸಾಕುಪ್ರಾಣಿಗಳಿಗೆ, ಪಕ್ಷಿಗಳಿಗೆ, ಇರುವೆ ಮೊದಲಾದ ಕ್ರಿಮಿಕೀಟಗಳಿಗೆ ಕೊಡಬೇಕು. ನಂತರದಲ್ಲಿ ಸ್ವತಃ ಊಟ ಮಾಡುವುದು ಕ್ರಮ. ಸಾಮರಸ್ಯ, ಸ್ವಾರ್ಥತ್ಯಾಗ, ಪರಾರ್ಥ ಚಿಂತನೆಗೆ ಇಂಬು ಕೊಡುವ ಇಂತಹ ಕ್ರಿಯೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಮನುಷ್ಯ-ಮನುಷ್ಯರ ನಡುವೆಯೇ ಆ ಜಾತಿ, ಈ ಜಾತಿ, ಮೇಲು-ಕೀಳು, ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ, ಇತ್ಯಾದಿ ಭೇದ ಭಾವಗಳ ಮಹಾಪೂರವನ್ನೇ ಕಾಣುತ್ತಿರುವ ನಮಗೆ, ಮಾನವರಿರಲಿ, ಸಕಲ ಜೀವರಾಶಿಗಳ ಅಭ್ಯುದಯದ ಕಲ್ಪನೆ, ಮಾರ್ಗದರ್ಶನ ಮಾಡುವ ಈ ಕ್ರಿಯೆ ಅನುಕರಣೀಯವಾಗಿದೆ.
     ನೋಡುವ ಕಣ್ಣುಗಳಿದ್ದರೆ ನಮಗೆ ಬಲಿವೈಶ್ವದೇವ ಯಜ್ಞದ ಉದ್ದೇಶವನ್ನು ಬದುಕಿನ ಅಂಗವಾಗಿಸಿಕೊಂಡ ಹಲವಾರು ಮಹನೀಯರು ಕಂಡುಬರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ, ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶ್ರೀವೈಕುಂಠಮ್ ಕಲಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಿದ್ದ ಪಾಲಂ ಕಲ್ಯಾಣಸುಂದರಮ್ ತಮ್ಮ 30 ವರ್ಷಗಳ ಸೇವೆಯಲ್ಲಿ ಪಡೆದ ಸಂಬಳದ ಹಣವನ್ನು ಪೂರ್ಣವಾಗಿ ಬಡಬಗ್ಗರ ಸೇವೆಗಾಗಿ ವಿನಿಯೋಗಿಸಿದವರು. ಬ್ರಹ್ಮಚಾರಿಯಾಗಿದ್ದ ಇವರು ತಮ್ಮ ಅಗತ್ಯಗಳಿಗಾಗಿ ಹೋಟೆಲ್ ಮಾಣಿಯಂತಹ ಕೆಲಸಗಳನ್ನೂ ಮಾಡಿದವರು. ಪೆನ್ಶನ್ ಮತ್ತು ನಿವೃತ್ತಿ ಸಂಬಂಧವಾಗಿ ಬಂದ ಸುಮಾರು 10 ಲಕ್ಷ ರೂಗಳನ್ನೂ ಜಿಲ್ಲಾಧಿಕಾರಿಯವರ ನಿಧಿಗೆ ಕೊಟ್ಟು ನಿರಾಳರಾದವರು. ವಿಶ್ವಸಂಸ್ಥೆ ಇವರನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು,  ಅಮೆರಿಕಾದ ಒಂದು ಸಂಸ್ಥೆ 'ಸಹಸ್ರಮಾನದ ಪುರುಷ',  ಭಾರತ ಸರ್ಕಾರ 1990ರಲ್ಲಿ 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಇವರನ್ನು ಸನ್ಮಾನಿಸಿದೆ. 'ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು' ಎಂದು ಗುರುತಿಸಲ್ಪಟ್ಟವರಿವರು. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುನ್ನತ (noblest) ಉದಾತ್ತರಲ್ಲೊಬ್ಬರು' ಎಂದು ಗೌರವಿಸಿದೆ. ರೋಟರಿ ಇಂಟರ್‌ನ್ಯಾಷನಲ್ 2011ರಲ್ಲಿ ಇವರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಿದೆ. ಸಹಸ್ರಮಾನದ ವ್ಯಕ್ತಿ ಎಂದು ಗೌರವಿಸಿದಾಗ ಇವರಿಗೆ ಕೊಡಲಾಗಿದ್ದ 30 ಕೋಟಿ ರೂ.ಗಳನ್ನೂ ಬಿಡಿಗಾಸೂ ಇಟ್ಟುಕೊಳ್ಳದೆ ಸಮಾಜಕ್ಕೇ ಧಾರೆ ಎರೆದುಬಿಟ್ಟ ಪುಣ್ಯಾತ್ಮ ಇವರು. ಯಾರು ಯಾರನ್ನೋ 'ಹೀರೋ'ಗಳು ಎಂದು ಭಾವಿಸುವ ನಮಗೆ ಕಲ್ಯಾಣಸುಂದರಮ್‌ರಂತಹವರು 'ಹೀರೋ'ಗಳಾಗಬೇಕು.
-ಕ.ವೆಂ.ನಾಗರಾಜ್.
***************
ದಿನಾಂಕ 14.09.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಸೆಪ್ಟೆಂಬರ್ 24, 2015

ವಿಕೃತಿಯಿಂದ ಸುಕೃತಿಯೆಡೆಗೆ


     ಇಂದಿನ ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಯುಗದಲ್ಲಿ ಗಂಡು-ಹೆಣ್ಣು ಪರಸ್ಪರ ನೋಡಿ ವಿವಾಹವಾಗುವ ರೀತಿ-ನೀತಿಗಳೇ ಬದಲಾಗಿವೆ. ಹಿರಿಯರ ಪಾತ್ರ ಔಪಚಾರಿಕವಾಗಿ ಉಳಿದಿದೆಯೆನ್ನಬಹುದು. ಹಳೆಯ ರೀತಿ-ನೀತಿ, ಸಂಪ್ರದಾಯಗಳನ್ನು ಉಳಿಸಿಕೊಂಡಿರುವ ಕುಟುಂಬಗಳೂ ಇವೆಯೆನ್ನುವುದು ಸ್ವಲ್ಪ ಸಮಾಧಾನದ ಸಂಗತಿ. ಇಂತಹ ಒಂದು ಕುಟುಂಬದ ಹಿರಿಯರು ಮಗನಿಗೆ ಹೆಣ್ಣು ನೋಡುತ್ತಿದ್ದರು. ಸಾಫ್ಟ್‌ವೇರ್ ಇಂಜನಿಯರ್ ಆದ ಆ ಹುಡುಗನನ್ನು ನೋಡಿದ ಕೆಲವು ವಧು ಮತ್ತು ಅವರ ಮನೆಯವರು ಔಪಚಾರಿಕ ಮಾತುಕತೆಗಳ ನಂತರ ಹೊರಡುತ್ತಿದ್ದಾಗ ಸಂಬಂಧಗಳು ಕೂಡಿಬಂತೆಂದೇ ಎರಡೂ ಕುಟುಂಬಗಳವರಿಗೆ ಭಾಸವಾಗುತ್ತಿತ್ತು. ಆದರೆ ಮರುದಿನ ಅಥವ ಅಂದು ರಾತ್ರಿಯೇ ಹುಡುಗಿಯ ತಂದೆ ಅಥವ ತಾಯಿಯಿಂದ ಹುಡುಗನ ಮನೆಯವರಿಗೆ 'ಋಣಾನುಬಂಧವಿಲ್ಲ, ಅನ್ಯಥಾ ಭಾವಿಸದಿರಿ' ಎಂಬರ್ಥದ ದೂರವಾಣಿ ಸಂದೇಶ ಬರುತ್ತಿತ್ತು. ಹೀಗೆ ಹಲವು ಸಲ ಪುನರಾವರ್ತನೆಯಾದಾಗ ಇದರ ಕಾರಣ ತಿಳಿಯದೆ ಹುಡುಗನ ಮನೆಯವರು ಗೊಂದಲಕ್ಕೊಳಗಾಗಿದ್ದರು. ಇದರ ಕಾರಣ ತಿಳಿದದ್ದು, ಇನ್ನೊಬ್ಬ ಬಂಧುವಿನ ಮನೆಯ ಹುಡುಗಿಯೊಂದಿಗೆ ವಿವಾಹದ ಪ್ರಸ್ತಾಪ ಬಂದ ಸಂದರ್ಭದಲ್ಲಿ! ಹುಡುಗ-ಹುಡುಗಿ ಮನೆಯವರಿಬ್ಬರೂ ಮೊದಲಿನಿಂದಲೂ ಪರಿಚಿತರೇ ಆಗಿದ್ದರು. ಪರಸ್ಪರ ನೋಡಿದ, ಮಾತನಾಡಿದ ಶಾಸ್ತ್ರ ಮುಗಿಸಿ ವಾಪಸಾದ ನಂತರದಲ್ಲಿ ಹುಡುಗ ಇದ್ದ ಬಾಡಿಗೆ ಮನೆಯ ಮಾಲಕಿ ಹುಡುಗಿಯ ಮನೆಗೆ ದೂರವಾಣಿ ಮೂಲಕ 'ಹುಡುಗ ಸರಿಯಿಲ್ಲವೆಂದೂ, ಹುಡುಗನ ತಾಯಿ ಗಟವಾಣಿ ಆಗಿದ್ದು ನಿಮ್ಮ ಮಗಳು ಸುಖವಾಗಿರುವುದಿಲ್ಲವೆಂದೂ' ಹೇಳಿದ್ದರು. ಪರಿಚಿತರೇ ಆಗಿದ್ದರಿಂದ ಹುಡುಗಿಯ ತಂದೆ-ತಾಯಿ ಮರುದಿನ ಪುನಃ ಬಂದು ವಿಚಾರಿಸಿದಾಗ ಸತ್ಯ ಹೊರಬಿದ್ದಿತ್ತು. ಮನೆ ಮಾಲಕಿಯ ಮಗ ಉಡಾಳನಾಗಿದ್ದು ಅವನನ್ನು ಮದುವೆಯಾಗಲು ಯಾವ ಹುಡುಗಿಯೂ ಒಪ್ಪದೆ ವಿವಾಹವಾಗಿರಲಿಲ್ಲ, ವಿವಾಹದ ವಯಸ್ಸೂ ಸಹ ಮೀರುತ್ತಾ ಬಂದಿತ್ತು. ಇತರರ ಮನೆಯಲ್ಲಿ ವಿವಾಹಗಳಾಗುತ್ತಿದ್ದುದು ಉಡಾಳನ ತಾಯಿಗೆ ಸಹಿಸಲಾಗುತ್ತಿರಲಿಲ್ಲ. ಹೀಗಾಗಿ ಬೇರೆ ಮನೆಗಳಲ್ಲಿ ಮದುವೆ ಪ್ರಸ್ತಾಪಗಳು ಬಂದ ಸಂದರ್ಭದಲ್ಲಿ ಹೇಗೋ ಮಾಡಿ ವಿಳಾಸ/ದೂರವಾಣಿ ತಿಳಿದುಕೊಂಡು ದೂರವಾಣಿ ಮಾಡಿ ಸುಳ್ಳು ಆರೋಪ ಹೊರಿಸಿ ಮದುವೆ ಪ್ರಸ್ತಾಪಗಳು ಮುರಿದುಹೋಗುವಂತೆ ಮಾಡಿ ಸಂತೋಷಪಡುತ್ತಿದ್ದರು. ಇದು ಅಸೂಯೆಯಿಂದ ಮೂಡುವ ವಿಕೃತಿಗೆ ಒಂದು ಸಣ್ಣ ಉದಾಹರಣೆಯಷ್ಟೆ.
     ಇನ್ನೊಬ್ಬರಿಗೆ ಆಗುವ ಹಿಂಸೆ, ಅವಮಾನಗಳನ್ನು ಕಂಡು ಸಂತೋಷಿಸುವುದು, ಸ್ವತಃ ಇನ್ನೊಬ್ಬರಿಗೆ ಹಿಂಸೆ ನೀಡಿ, ಅವಮಾನಿಸಿ ಸಂತೋಷಿಸುವುದೇ ವಿಕೃತಿ. ಈ ವಿಕೃತಿ ಅನ್ನುವುದು ಮನುಷ್ಯನ ಅಂತರ್ಗತ ಸ್ವಭಾವವೆಂದರೆ ತಪ್ಪಾಗಲಾರದು. ಪ್ರಮಾಣ ಹೆಚ್ಚು, ಕಡಿಮೆ ಇರಬಹುದೇನೋ! ಯಾರನ್ನು ಕಂಡರೆ ಅಸೂಯೆಯೆನಿಸುವುದೋ, ಯಾರನ್ನು ಕಂಡರೆ ದ್ವೇಷವಿದೆಯೋ ಅಂತಹವರು ತೊಂದರೆಗೊಳಗಾದಾಗ, 'ಅವನಿಗೆ ಹಾಗೆಯೇ ಆಗಬೇಕು, ಮೆರೀತಿದ್ದ ಬಡ್ಡೀಮಗ' ಎಂದು ಸಂತೋಷಪಡದಿರುವವರು ವಿರಳರೇ ಸರಿ. ಕೆಟ್ಟವರು ಅನ್ನಿಸಿಕೊಂಡವರು ಹಿಂಸೆಗೊಳಪಟ್ಟಾಗ, ಅವಮಾನಿತರಾದಾಗ ಒಳ್ಳೆಯವರು ಅನ್ನಿಸಿಕೊಂಡವರೂ ಸಂತೋಷಿಸುವುದು ಸಾಮಾನ್ಯವಾಗಿ ನಡೆಯುವ ಕ್ರಿಯೆಯಾಗಿದೆ. ವಿಕೃತಿಯ ಕ್ರೂರ ಪರಾಕಾಷ್ಠೆಯೆಂದರೆ ಚಿತ್ರವಿಚಿತ್ರ ಹಿಂಸೆ ನೀಡಿ ಕೊಲ್ಲುವುದು, ಲೈಂಗಿಕವಾಗಿ ಶೋಷಿಸಿ ಸಿಕ್ಕಿಬೀಳಬಾರದೆಂದು ಹತ್ಯೆಗೈಯುವುದು, ಇತ್ಯಾದಿಗಳು. ವಿಕೃತಿಗೆ ಹಲವಾರು ಕಾರಣಗಳಿರುತ್ತವೆ. ಪ್ರಾರಂಭದಲ್ಲಿ ಹೇಳಿದ ಅಸೂಯೆ ಸಹ ಅಂತಹ ಒಂದು ಕಾರಣವಾಗಿದೆ. ಇತರ ಕಾರಣಗಳ ಕುರಿತೂ ಸಂಕ್ಷಿಪ್ತವಾಗಿ ನೋಡೋಣ.
     ದುರಾಸೆ ಅನ್ನುವುದು ಜಗತ್ತಿನ ಅನೇಕ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಲಂಚಗುಳಿತನ, ಭ್ರಷ್ಠಾಚಾರ, ಇತ್ಯಾದಿಗಳಿಗೆ ದುರಾಸೆಯೇ ಕಾರಣ. ಇದಕ್ಕೆ ಪಕ್ಕಾದವರು ಸಂವೇದನಾಶೀಲತೆಯನ್ನೇ ಕಳೆದುಕೊಳ್ಳುತ್ತಾರೆ. ಬಡವ, ದಿಕ್ಕಿಲ್ಲದವ ಎಂಬುದರ ಪರಿವೆಯೇ ಇಲ್ಲದೆ ಲಂಚಕ್ಕೆ ಕೈಚಾಚುವವರು ಹೃದಯಹೀನರಲ್ಲದೇ ಮತ್ತೇನು? ಸರ್ಕಾರದ ಖಜಾನೆಗೇ ಕನ್ನ ಕೊರೆಯುವ ಪುಡಾರಿಗಳು, ಅಧಿಕಾರಿಗಳಿಂದಾಗಿ ಸಾರ್ವಜನಿಕರ ಹಣ ಮತ್ತು ಸ್ವತ್ತುಗಳು ಕೆಲವೇ ಕೆಲವರ ಪಾಲಾಗುತ್ತವೆ. ಸಾಮಾನ್ಯರು ಇದರಿಂದ ಪಡುವ ಪಡಿಪಾಟಲುಗಳ ಬಗ್ಗೆ ಅವರಿಗೆ ಚಿಂತೆಯೇ ಇರುವುದಿಲ್ಲ. ಯಾರು ಹಾಳಾದರೆ ನನಗೇನು, ನಾನು ಸುಖವಾಗಿದ್ದರೆ ಆಯಿತು ಎನ್ನುವುದೂ ವಿಕೃತಿಯ ಒಂದು ಮುಖ. ಸ್ವಾರ್ಥದ ಸಲುವಾಗಿ ದೇಶದ ಹಿತವನ್ನೇ ಕಡೆಗಣಿಸುವ ಜನನಾಯಕರುಗಳನ್ನೂ ಕಾಣುತ್ತಿರುವ ದೌರ್ಭಾಗ್ಯ ನಮ್ಮದಾಗಿದೆ. ಹಣವಿದ್ದವರು ಎಂತಹ ಘೋರ ಅಪರಾಧ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬ ವಾತಾವರಣವಿರುವುದು ಮತ್ತು ಇದರಿಂದ ಆಘಾತಕ್ಕೊಳಗಾಗುವ ನೊಂದವರನ್ನು ಕಂಡು ಹರ್ಷಿಸುವ ವಿಕೃತತೆಯನ್ನೂ ಕಾಣುತ್ತಿದ್ದೇವೆ.
     ಕಾಮಾತುರರು ಮೆರೆಯುವ ವಿಕೃತತೆ ಮಾನವೀಯತೆಯನ್ನೇ ಅಣಕಿಸುತ್ತದೆ. ಪ್ರಿಯಕರನ ನೆರವಿನಿಂದ ಪತಿಯನ್ನೇ ಕೊಲೆ ಮಾಡುವುದು, ಅಡ್ಡಿಯಾಗುತ್ತಾರೆಂದು ಎಳೆ ಮಕ್ಕಳನ್ನೇ ಸಾಯಿಸುವುದು, ಅಸಹಾಯಕತೆ, ದೌರ್ಬಲ್ಯಗಳನ್ನು ದುರುಪಯೋಗಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸುವುದು, ಚಿಕ್ಕ ಕಂದಮ್ಮಗಳ ಮೇಲಿನ ಅತ್ಯಾಚಾರ ಮುಂತಾದ ಸುದ್ದಿಗಳು ದಿನಬೆಳಗಾದರೆ ರಾಚುತ್ತಿರುತ್ತವೆ. ಆಸ್ತಿಗಾಗಿ ಕುಟುಂಬದವರನ್ನೇ ಕೊಲೆ ಮಾಡುವುದು, ಮತ್ಸರದಿಂದಾಗಿ ಬೆಳೆದು ನಿಂತ ಪೈರಿಗೇ ಬೆಂಕಿ ಹಚ್ಚುವುದು, ಮದದ ಕಾರಣದಿಂದಾಗಿ ಅಸಹಾಯಕರು, ದುರ್ಬಲರನ್ನು ಹಂಗಿಸಿ, ಹಿಂಸಿಸಿ ಆನಂದಿಸುವುದು, ಒಂದೇ, ಎರಡೇ ವಿಕೃತಿಯ ನೂರಾರು ಉದಾಹರಣೆಗಳನ್ನು ಕೊಡಬಹುದು. ಧೃತರಾಷ್ಟ್ರನ ಪುತ್ರಮೋಹ ನ್ಯಾಯ, ನೀತಿ, ಧರ್ಮಗಳನ್ನೇ ನುಂಗಿ ನೀರು ಕುಡಿದಿದ್ದಲ್ಲದೆ ಮಹಾಭಾರತ ಯುದ್ಧಕ್ಕೇ ಕಾರಣವಾಯಿತು. ಇಂದಿನ ರಾಜಕಾರಣದಲ್ಲೂ ಪುತ್ರವ್ಯಾಮೋಹ, ವಂಶವ್ಯಾಮೋಹ, ಜಾತಿ ವ್ಯಾಮೋಹ, ಅಧಿಕಾರದ ಮೋಹಗಳು ದೇಶವನ್ನು ಅಧೋಗತಿಗೆ ಒಯ್ಯುತ್ತಿವೆ. ಯಾರು ವಿಕೃತಿಯ ನಿಯಂತ್ರಣ ಮಾಡಬೇಕೋ ಅವರುಗಳೇ ವಿಕೃತಿಯ ಪೋಷಕರಾಗಿದ್ದಾರೆ. ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಎಲ್ಲವೂ ಆಗಬೇಕು ಎಂದು ಬಯಸುವವರು ಅದಕ್ಕಾಗಿ ಹಲವಾರು ತಂತ್ರ-ಕುತಂತ್ರಗಳನ್ನು ಹೆಣೆಯುವುದಲ್ಲದೆ ಈ ಅಹಮ್ಮಿಗಾಗಿ ಕುಟುಂಬದ ಸದಸ್ಯರ - ಅವರು ಗಂಡ, ಹೆಂಡತಿ, ಮಕ್ಕಳು, ತಂದೆ, ತಾಯಿ ಯಾರೇ ಆಗಿರಲಿ -  ಭಾವನೆಗಳಿಗೂ ಬೆಲೆಕೊಡದೆ ಅವರುಗಳ ಮನಸ್ಸನ್ನು ಘಾಸಿಪಡಿಸುವುದನ್ನೂ ಕಾಣುತ್ತಿರುತ್ತೇವೆ. ಮನುಷ್ಯನನ್ನು ಕೊಲ್ಲುವುದಕ್ಕಿಂತ ಘೋರ ಅಪರಾಧ ಮನಸ್ಸುಗಳನ್ನು ಕೊಲ್ಲುವುದೇ ಆಗಿದೆ.
     ಐಸಿಸ್ ಉಗ್ರರು ನೂರಾರು ಜನರ ಸಮ್ಮುಖದಲ್ಲಿ ಹಲವರ ಶಿರಚ್ಛೇದವನ್ನು ವಿಕೃತಾನಂದ ಮೆರೆಯುತ್ತಾ ಮಾಡುವುದು, ನೆರೆದಿದ್ದವರೂ ಸಹ ಆನಂದದಿಂದ ಅದನ್ನು ವೀಕ್ಷಿಸುವ ಹಲವಾರು ವಿಡಿಯೋಗಳು, ಸೆರೆಹಿಡಿದ ಅಮಾಯಕ ಹೆಣ್ಣುಮಕ್ಕಳನ್ನು ಉಗ್ರರು ಕಾಮತೃಷೆ ತೀರಿಸಿಕೊಳ್ಳಲು ಬಳಸುವ ಮತ್ತು ಅವರನ್ನು ಹರಾಜಿನ ಮೂಲಕ ವಿಕ್ರಯಿಸುವ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವುದು ಪರಮವಿಕೃತ್ಯಗಳಿಗೆ ಸಾಕ್ಷಿಯಂತಿವೆ.
     ವಿಕೃತಿಯ ಮನೋಭಾವ ಮೂಡಲು ಹಲವಾರು ಕಾರಣಗಳನ್ನು ಕೊಡಬಹುದು. ಸ್ವತಃ ವಿಕೃತ್ಯಕ್ಕೆ ಬಲಿಯಾಗಿರುವುದು, ಮನೆಯ ವಾತಾವರಣ, ಹೊಂದಿರುವ ಸ್ನೇಹಿತರು, ಪರಿಸರ, ತಪ್ಪು ಮಾರ್ಗದರ್ಶನದ ಪ್ರಭಾವ, ಮತಾಂಧತೆ, ಸ್ವಾರ್ಥ, ದುರಾಸೆ, ಅಹಂ, ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ, ಇತ್ಯಾದಿ ಹಲವು  ಸಂಗತಿಗಳು ವಿಕೃತಿಯ ಪೋಷಕವಾಗಿವೆ. ಆದರೆ ಪ್ರಧಾನವಾದ ಕಾರಣ ಸೇವಿಸುವ ಆಹಾರ ಎಂದರೆ ಆಶ್ಚರ್ಯವಾಗಬಹುದಾದರೂ ಇದು ಸತ್ಯಸಂಗತಿಯಾಗಿದೆ. ಇಲ್ಲಿ ಆಹಾರವೆಂದರೆ ಕೇವಲ ತಿನ್ನುವ ಕ್ರಿಯೆ ಮಾತ್ರ ಅಲ್ಲ ಎಂಬುದನ್ನು ನೆನಪಿಡಬೇಕು. ಕಣ್ಣಿನಿಂದ ನೋಡುವ, ಕಿವಿಯಿಂದ ಕೇಳುವ, ಮೂಗಿನಿಂದ ಆಸ್ವಾದಿಸುವ, ಚರ್ಮದಿಂದ ಸ್ಪರ್ಷಿಸುವ ಸಂಗತಿಗಳಲ್ಲದೆ ಮನೋವ್ಯಾಪಾರಗಳೂ ಆಹಾರದ ವ್ಯಾಪ್ತಿಯಲ್ಲಿ ಬರುತ್ತವೆ. ಈಗ ವಿಷಯ ಸ್ಪಷ್ಟವಾಗಿರಬಹುದು. ಒಳ್ಳೆಯ ಆಹಾರ ಸೇವಿಸಿದರೆ ನಾವು ಒಳ್ಳೆಯವರು, ಕೆಟ್ಟ ಆಹಾರ ಸೇವಿಸಿದರೆ ನಾವು ಕೆಟ್ಟವರಾಗುತ್ತೇವೆ ಎಂಬುದು ಸರಳ ನಿಯಮ. ಈ ಕುರಿತು ಸ್ವಲ್ಪ ವಿವರವಾಗಿ ನೋಡೋಣ.
     'ನೀನು ಹೊಟ್ಟೆಗೆ ಏನು ತಿಂತೀಯ?'- ಯಾರಾದರೂ ಏನಾದರೂ ಅಚಾತುರ್ಯವೆಸಗಿದಾಗ, ತಪ್ಪು ಮಾಡಿದಾಗ ಈ ರೀತಿ ಪ್ರತಿಕ್ರಿಯಿಸುತ್ತಾರಲ್ಲವೇ? ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಇದರ ಅರ್ಥ. ಆಯುರ್‍ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳಾಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವವನ್ನು ಹೆಚ್ಚಿಸಿಕೊಳ್ಳಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗಗಳು, ಪ್ರಶಾಂತವಾದ ಮತ್ತು ಹಿತಕರ ವಾತಾವರಣಗಳು ಸಹಾಯಕಾರಿ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಅವಿಶ್ರಾಂತ ಮನಸ್ಸು ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ದುಬಿಡುತ್ತದೆ. ಹಿಡಿತದಲ್ಲಿರುವ ರಾಜಸಿಕತೆ ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಸಹಕಾರಿಯಾಗಿರುತ್ತದೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತುಗಳು, ಅತಿಯಾದ ಕೆಲಸಗಳು, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿ ಇವೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುವಂತಹವಾಗಿವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು.
     ಒಂದು ಒಳ್ಳೆಯ ಸುದ್ದಿಯೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿದ್ದು, ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ವಿಕೃತಿಯಿಂದ ಸುಕೃತಿಯೆಡೆಗೆ ಸಾಗಲು ಉತ್ತಮ 'ಆಹಾರ' (ಕೇವಲ ತಿನ್ನುವುದಲ್ಲ, ನೋಡುವುದು, ಕೇಳುವುದು, ಪಂಚೇಂದ್ರಿಯಗಳಿಂದ ಸ್ವೀಕರಿಸುವುದೂ ಸೇರಿದಂತೆ) ಸೇವಿಸುವುದೇ ಉಪಾಯವಾಗಿದೆ, ಪರ್ಯಾಯ ಮಾರ್ಗವಿಲ್ಲ.
-ಕ.ವೆಂ.ನಾಗರಾಜ್.
**************
ದಿನಾಂಕ 7-09-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಸೆಪ್ಟೆಂಬರ್ 16, 2015

ಜನಹಿತ ಪತ್ರಿಕೆಯ 'ಹಿತ-ಸಾಹಿತ್ಯ' ಅಂಕಣದಲ್ಲಿ ಮಿತ್ರ ಕೊಟ್ರೇಶ ಉಪ್ಪಾರರು ನನ್ನ ಕುರಿತು ಬರೆದ ಲೇಖನ


 ನಿಷ್ಠುರವಾದಿ ಆಡಳಿತಗಾರ, ಕವಿ, ಸಾಮಾಜಿಕ ಚಿಂತಕ - ಕ.ವೆಂ.ನಾಗರಾಜ್.

     ಕ.ವೆಂ.ನಾಗರಾಜ್ ಸಾಮಾಜಿಕ ಕಳಕಳಿಯ ಚಿಂತಕ, ವಿಚಾರವಾದಿ, ನ್ಯಾಯ, ನಿಷ್ಠುರವಾದ ವ್ಯಕ್ತಿತ್ತ್ವವುಳ್ಳವರು. ಆಡಳಿತಗಾರರಾಗಿ, ಸಾಮಾಜಿಕ ಚಳವಳಿಗಾರರಾಗಿ, ಸತ್ಸಂಗದ ವಿವೇಕಿಯಾಗಿ, ಸಾಹಿತಿಯಾಗಿ, ಅಂತರ್ಜಾಲ ಬರಹಗಾರರಾಗಿ ಚಿರಪರಿಚಿತವಾದವರು. ಮನೆ ಮನೆ ಕವಿಗೋಷ್ಠಿಯ ಸದಸ್ಯರಾಗಿಯೂ ಮುನ್ನೆಡೆದು ಬಂದವರು. ತಮ್ಮ  ಮೂಢ ಉವಾಚ ಮುಕ್ತಕಗಳ ಮೂಲಕ ಮುಕ್ತ ಕಂಠದಿಂದ ಸಮಾಜದ ಕೊಳೆಯನ್ನು ಕೀಳಲ್ಹೊರಟವರು.
ಬಾಲ್ಯ : ಶ್ರೀಯುತ ಕ.ವೆಂ.ನಾಗರಾಜ್ ರವರು 1951 ಅಕ್ಟೋಬರ್ 7 ರಂದು ತಾಯಿ ಮನೆ ಹಾಸನ ಜಿಲ್ಲೆಯ ಹಳೆಬೀಡಿನಲ್ಲಿ ಜನಿಸಿದರು. ತಂದೆ ಶ್ರೀ ಕೆ.ವೆಂಕಟಸುಬ್ಬರಾವ್, ತಾಯಿ ಶ್ರೀಮತಿ ಸೀತಮ್ಮ.
     ಚಿಕ್ಕಮಗಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡಿದ ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಚಿತ್ರದುರ್ಗದಲ್ಲಿ ಪ್ರೌಢ ಶಿಕ್ಷಣವನ್ನು, ಚಿಕ್ಕಮಗಳೂರಿನಲ್ಲಿ ಪಿಯುಸಿಯನ್ನು ಓದಿದ ಇವರು ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ವಿಜ್ಞಾನ ಪದವಿಯನ್ನು ಪಡೆದರು.
ವೃತ್ತಿ : 1971 ಡಿಸೆಂಬರ್ ನಲ್ಲಿ ಹಾಸನದ ಅಂಛೆ ಕಛೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ನಂತರ 1973 ಮೇ 3 ರಂದು ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಹಾರ ನಿರೀಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡರು.  1998 ರಲ್ಲಿ ಮಂಗಳೂರಿಗೆ ತಹಸಿಲ್ದಾರರಾಗಿ ಬಡ್ತಿ ಹೊಂದಿದರು. ಮುಂದೆ ಮುಜರಾಯಿ ತಹಸಿಲ್ದಾರರಾಗಿ, ಮುನಿಸಿಪಲ್ ತಹಸಿಲ್ದಾರರಾಗಿ, ಎಲೆಕ್ಷನ್ ತಹಸಿಲ್ದಾರರಾಗಿ, ಆಡಳಿತ ತಹಸಿಲ್ದಾರರಾಗಿ, ಪುತ್ತೂರಿನ ಕಡಬದಲ್ಲಿ ವಿಶೇಷ ತಹಸಿಲ್ದಾರರಾಗಿ, ಮಂಗಳೂರಿನಲ್ಲಿ ಪ್ರೋಟೋಕಾಲ್ ತಹಸಿಲ್ದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಹಾಸನ, ಕಲಬುರ್ಗಿ ಜಿಲ್ಲೆಯ ಸೇಡಮ್, ಮೈಸೂರು, ಹೊಳೆನರಸಿಪುರ, ಸಕಲೇಶುರ, ಬೇಲೂರು, ಮಂಗಳೂರು, ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಅರಕಲಗೂಡು, ಶಿವಮೊಗ್ಗ, ಶಿಕಾರಿಪುರ, ಸೊರಬ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸುತ್ತಲೂ ಒಂದು ಕಾರಣವಿದೆ. ಇವರ ನೇರ ನಡೆ-ನುಡಿ ಇವರನ್ನು ಒಂದೆಡೆ ನಿಲ್ಲಲು ಬಿಡಲಿಲ್ಲ ಎನ್ನುವುದಕ್ಕಿಂತಲೂ ಆಯಾ ಭಾಗದ ರಾಜಕೀಯ ವ್ಯವಸ್ಥೆಗೆ ಸಹಿಸಲು ಆಗಲಿಲ್ಲವೆಂದೇ ಹೇಳಬಹುದು. ಆದ್ದರಿಂದಲೇ ಇವರ ಸೇವಾವಧಿಯಲ್ಲಿ 26 ವರ್ಗಾವಣೆಗಳು - ಹೆಚ್ಚಿನವು ರಾಜಕೀಯ ಪ್ರೇರಿತವಾದವು ಎಂಬುದು ಗಮನಾರ್ಹ . ಇವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕಾರಿಪುರದಲ್ಲಿದ್ದಾಗ ಅತ್ಯುತ್ತಮ ಅಧಿಕಾರಿಯೆಂದು ಇಲಾಖೆ ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ನಿಷ್ಠುರವಾದಿ : ಕ.ವೆಂ.ನಾ.ರವರು ನಿಷ್ಠುರ ಅಧಿಕಾರಿಯಾಗಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳು ದೊರೆಯುತ್ತವೆ. ಯಾವುದೇ ಆಸೆ, ಆಕಾಂಕ್ಷೆ, ಸ್ವಾರ್ಥಗಳ ಕಡೆಗೆ ಮುಖ ಮಾಡದೆ ನ್ಯಾಯ, ಧರ್ಮ, ನೀತಿ, ಸಮಾನತೆ ಹಾಗೂ ವೈಚಾರಿಕ ಮನೋಧೋರಣೆ ಹೊಂದಿದ್ದ ಇವರು ರಾಜಕಾರಣಿಗಳಿಗೆ ದುಃಸ್ವಪ್ನವಾಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ರಾಜಕೀಯ ಕುತಂತ್ರತೆಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರೂ ಯಾರಿಗೂ ಸೊಪ್ಪಾಕಲಿಲ್ಲ. ಅಧಿಕಾರಕ್ಕಾಗಿಯೇ ಅಂಗಲಾಚುವ ಪ್ರಸ್ತುತ ಸಂದರ್ಭದಲ್ಲಿ ಕ.ವೆಂ.ನಾ. ನಮಗೆ ವ್ಯತಿರಿಕ್ತವಾಗಿ ನಿಲ್ಲುತ್ತಾರೆ. ಆದ್ದರಿಂದಲೇ 2009ರಲ್ಲಿ ಒಂದು ತಿಂಗಳು ಮುಂದುವರೆದಿದ್ದರೆ ಸಹಾಯಕ ಕಮಿಷನರ್ ಆಗುವ ಅವಕಾಶವಿದ್ದರೂ 3 ವರ್ಷಗಳ ಸೇವೆ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ ಹೊಂದಿದ ಧೀಮಂತ ವ್ಯಕ್ತಿ ಇವರು. ಇದೆ ಇವರ ಜೀವನದ ಆದರ್ಶ.
ಹೋರಾಟಗಾರ : ಕ.ವೆಂ.ನಾ. ಕೇವಲ ಉತ್ತಮ ಆಡಳಿತಗಾರರಷ್ಟೇ ಅಲ್ಲ ನಾಡು-ನುಡಿಯ ಬಗ್ಗೆ, ಸಾಮಾಜಿಕ ತೊಡಕುಗಳ ಬಗ್ಗೆ ಚಿಂತಿಸುವ ಪ್ರಗತಿಪರ ವ್ಯಕ್ತಿ. ಆದ್ದರಿಂದಲೇ 1975 ರಿಂದ 1977ರ ನಡುವೆ ಇಡಿ ದೇಶಾದ್ಯಂತ ತಲೆದೋರಿದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾ.ಸ್ವ. ಸಂಘದ ಕಾರ್ಯಕರ್ತನೆಂದು ಆರೋಪಿಸಿ ಈ ಕಾರಣಕ್ಕೆ ಬಂಧಿಸಿ ವೃತ್ತಿಯಿಂದ ವಜಾಗೊಳಿಸಲಾಯಿತು. ಇದರಿಂದ ಜಿಲ್ಲಾಧಿಕಾರಿಯವರೊಂದಿಗೆ ವಾಗ್ವಾದದ ಪರಿಣಾಮ ಮತ್ತಷ್ಟು ಮೊಕದ್ದಮೆಗಳನ್ನು ಎದುರಿಸಬೇಕಾಗಿ ಬಂದಿತು. ಭಾರತ ರಕ್ಷಣಾ ಕಾಯದೆಯನ್ವಯ 13 ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಯಾವುದೇ ತಪ್ಪು ಮಾಡದಿದ್ದರೂ ಇವರನ್ನು ಒಂದೂವರೆ ವರ್ಷದ ಕಾಲ ಸೇವೆಯಿಂದ ಅಮಾನತ್ತುಗೊಳಿಸಿ ಸತ್ಯಾಸತ್ಯತೆ ಮನಗಂಡು ನಂತರ ವಿಚಾರಣೆ ಕಾಯ್ದಿರಿಸಿ ಗುಲ್ಬರ್ಗಕ್ಕೆ ವರ್ಗಾವಣೆ ಮಾಡಲಾಯಿತು. ಕೆಲವು ಮೊಕದ್ದಮೆಗಳು ವಜಾ ಆದವು. ಉಳಿದ ಪ್ರಕರಣಗಳು ತುರ್ತು ಪರಿಸ್ಥಿತಿ ಹೋದನಂತರದಲ್ಲಿ ಸರ್ಕಾರ ಹಿಂತೆಗೆದುಕೊಂಡಿತು. ಪುನಃ ಹಾಸನಕ್ಕೆ ಮರು ವರ್ಗಾವಣೆಯಾಯಿತು. ಹೀಗೆ ಇವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇತ್ತೀಚೆಗೆ ಇವರ ಜೀವನಗಾಥೆಯನ್ನು ಬಿ-ಟಿವಿ ಪ್ರಸಾರ ಪಡಿಸಿದ ಸಂದರ್ಭದಲ್ಲಿ ಎಲ್ಲವನ್ನೂ ವೀಕ್ಷಿಸಿ ಆಶ್ಚರ್ಯಚಕಿತನಾದೆ. ಇವರ ಬಗ್ಗೆ ಗೌರವ ಹೆಚ್ಚಾಯಿತು.
ಸಾಮಾಜಿಕ ಚಟುವಟಿಕೆ ಮತ್ತು ಸಾಹಿತ್ಯ ಕ್ಷೇತ್ರ : ನಿವೃತ್ತಿಯ ನಂತರ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದಲೇ ಕವಿ ಹರಿಹರಪುರ ಶ್ರೀಧರ್ ಅವರ ಜೊತೆಗೂಡಿ ಪ್ರಸ್ತುತ ಪ್ರಖ್ಯಾತಿ ಪಡೆದಿರುವ ವೇದಭಾರತಿ ಸಂಸ್ಥೆಯನ್ನು ಹುಟ್ಟುಹಾಕಿ ಈ ಸಂಸ್ಥೆಯ ಗೌರವಾಧ್ಯಕ್ಷರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರ್ಜಾಲದಲ್ಲಿ ‘ಕವಿಮನ’ ಹಾಗೂ ‘ವೇದ ಜೀವನ’ ಎಂಬ ತಾಣಗಳನ್ನು ಹೊಂದಿರುವ ಇವರು ಆ ಮೂಲಕ ಸಾವಿರಾರು ಓದುಗರನ್ನು ಪಡೆದಿದ್ದಾರೆ. ಈ ಜಾಲತಾಣಗಳಲ್ಲಿ ಪ್ರಕಟವಾದ ಇವರ ‘ಮೂಢ ಉವಾಚ’ ಹೆಚ್ಚು ಜನಪ್ರಿಯವಾಯಿತು. ಇದೇ 2011ರಲ್ಲಿ ‘ಮೂಢ ಉವಾಚ’ ಎಂಬ ಕೃತಿಯಾಗಿ ಪ್ರಕಟಣೆಯಾಯಿತು. 80 ಪುಟಗಳ ಈ ಕೃತಿಯು 20 ರೂಗಳ ಮುಖ ಬೆಲೆಯನ್ನು ಹೊಂದಿದೆ. 2011ರಲ್ಲಿ ಹಾಸನದ ಶಂಕರಮಠದಲ್ಲಿ ವೇದಸುಧೆ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ಮನೆ ಮನೆ ಕವಿಗೋಷ್ಠಿಯ ವಾರ್ಷಿಕೋತ್ಸವದಲ್ಲಿ ಈ ಕೃತಿಯು ಬಿಡುಗಡೆಯಾಗಿತ್ತು. ಅದೇ ವೇದಿಕೆಯಲ್ಲಿ ನನ್ನ ‘ಮೃತ್ಯುವಿನಾಚೆಯ ಬದುಕು’ ಕವನ ಸಂಕಲನವೂ ಸಹ ಬಿಡುಗಡೆಯಾಗಿತ್ತು.
ಕವಿ ಮನೆತನ : ಕ.ವೆಂ.ನಾ.ರವರು ಕರ್ನಾಟಕದ ಪ್ರಸಿದ್ಧ ಕೆಳದಿ ಕವಿಮನೆತನದರು. ಇವರ ಪೂರ್ವಜ ಕವಿಲಿಂಗಣ್ಣಯ್ಯ ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದರು. ಕವಿಲಿಂಗಣ್ಣಯ್ಯ ರಚಿಸಿದ 'ಕೆಳದಿನೃಪ ವಿಜಯ' ಐತಿಹಾಸಿಕ ಕಾವ್ಯಕೃತಿಯಾಗಿದ್ದು, ಕೆಳದಿ ಇತಿಹಾಸ ಅಧ್ಯಯನಕ್ಕೆ ಪ್ರಮುಖವಾದ ಆಕರ ಗ್ರಂಥವಾಗಿದೆ. 13 ತಲೆಮಾರುಗಳ ವಂಶವೃಕ್ಷ ಇದರಲ್ಲಿ ಲಭ್ಯವಿದೆ. ಪ್ರತಿವರ್ಷ ಕೆಳದಿ ಕವಿ ಕುಟುಂಬದವರು ಒಟ್ಟಿಗೆ ಸೇರುವ ಮೂಲಕ ಸಮಾವೇಶಗಳ ನಡೆಸುತ್ತಾರೆ. ಈ ಕೆಳದಿ ಕವಿ ಮನೆತನದಿಂದ 'ಕವಿಕಿರಣ' ಎಂಬ ಹೆಸರಿನ ಅರ್ಧವಾರ್ಷಿಕ ಪತ್ರಿಕೆಯ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಸಂಪಾದಕರಾಗಿ ಕ.ವೆಂ.ನಾಗರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೆಳದಿ ಕವಿಕುಟುಂಬಗಳು, ಬಂಧುಗಳು ಮತ್ತು ಸ್ನೇಹಿತರ ಸಲುವಾಗಿ ಪ್ರಕಟವಾಗುವ ಪತ್ರಿಕೆಯಾಗಿದ್ದು ಇದುವರೆಗೆ 15 ಸಂಚಿಕೆಗಳು ಪ್ರಕಟವಾಗಿವೆ. ಮುಂದಿನ ಸಂಚಿಕೆ ಡಿಸೆಂಬರ್, 2015ರಲ್ಲಿ ಪ್ರಕಟವಾಗಲಿದೆ.

ಮೂಢ ಉವಾಚ : ಕ.ವೆಂ.ನಾಗರಾಜ್ ರವರು ಪ್ರಗತಿಪರ ಚಿಂತಕರೂ ಹೌದು. ಇವರ ;ಮೂಢ ಉವಾಚ’ ಓದಿದರೆ ಇವರ ಸಮಸಮಾಜದ ದೃಷ್ಟಿಕೋನ ಅರಿವಾಗದೇ ಇರದು. ಡಿ.ವಿ.ಗುಂಡಪ್ಪನವರ ಸುಪ್ರಸಿದ್ಧ ಕೃತಿ ‘ಮಂಕು ತಿಮ್ಮನ ಕಗ್ಗ’ ದಂತೆಯೇ ಸಾಮಾಜಿಕ ಕಳಕಳಿಯನ್ನು ಹೊಂದಿರುವ ‘ಮೂಢ ಉವಾಚ’ ವೂ ಸಹ ಒಂದು ಉತ್ತಮ ಕೃತಿಯಾಗಿದೆ. ಇದರಲ್ಲಿ 250 ಮುಕ್ತಕಗಳಿವೆ. 
ಕೇಳಲೊಲ್ಲದ ಕಿವಿಗೆ ನೀತಿ ಪಾಠವದೇಕೆ?
ತಿನ್ನಲೊಲ್ಲದ ಬಾಯ್ಗೆ ಷಡ್ರಸವದೇಕೆ?
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು
ಪಾತ್ರಾಪಾತ್ರರನರಿತಡಿಯನಿಡು ಮೂಢ ||
***
ಕಣ್ಣಿದ್ದು ಕುರುಡಾಗಿ, ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ, ಕ್ರೂರತ್ವ ತಾನೆರಗಿ
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ ||
ಹೀಗೆ ಇವರ ಮುಕ್ತಕಗಳು ಭ್ರಷ್ಟಾಚಾರ, ಸಮಾಜಿಕ ಜಾಡ್ಯತೆಗಳು, ಕ್ರೋಧ, ಮದ, ಮತ್ಸರಗಳನ್ನು ಅನಾವರಣಗೊಳಿಸುತ್ತವೆ.

ಕವಿ ಸುಬ್ರಹ್ಮಣ್ಯಯ್ಯ-ಒಂದು ಜೀವಗೀತೆ : ಕವಿ ಸುಬ್ರಹ್ಮಣ್ಯಯ್ಯ –ಒಂದು ಜೀವಗೀತೆ ಕೃತಿಯು 2008 ರಲ್ಲಿ ಪ್ರಕಟವಾಗಿದೆ. 60 ಪುಟಗಳನ್ನು ಹೊಂದಿರುವ ಈ ಕೃತಿಯು ಕೆಳದಿ ಕವಿಮನೆತನದ ಹಿರಿಯ ಚೇತನ ಕವಿ ಸುಬ್ರಹ್ಮಣ್ಯಯ್ಯನವರ ಜೀವನ ಕುರಿತದ್ದಾಗಿದೆ.
     ಇದರಲ್ಲಿ ಮಾಸದ ನೆನಪು, ಸಾಗರದ ಚಿಗುರು, ಅಪ್ಪಳಿಸಿದ ಆಘಾತ, ಕೊಪ್ಪಕ್ಕೆ ಸಾಗಿದ ಬಾಳಿನ ತೆಪ್ಪ, ದಾವಣಗೆರೆಗೆ ಪಯಣ, ಕರೆಯಿತು ಶಿವಮೊಗ್ಗ, ಆನಂದ ಲಕ್ಷ್ಮಮ್ಮ, ಸುಬ್ರಹ್ಮಣ್ಯನ ಹೆಗ್ಗಳಿಕೆ, ಆಶು ಕವಿ-ಹಾಸ್ಯಗಾರ ಸುಬ್ಬಣ್ಣ, ಸುಬ್ರಹ್ಮಣ್ಯನ ಪಂಚಾಂಗ ಶ್ರವಣ, ಕಳಚಿದ ಕೊಂಡಿ ಸೇರಿತು, ಜೀವನ ಸಂಧ್ಯಾಕಾಲದಲ್ಲಿ, ಕವಿ ಸುಬ್ರಹ್ಮಣ್ಯನ ವಂಶಾವಳಿ, ಮುಗಿಸುವ ಮುನ್ನ ಎಂಬ ಹದಿನಾಲ್ಕು ಬರಹಗಳು ಇಲ್ಲಿವೆ. ಈ ಎಲ್ಲ ಬರಹಗಳು ಕ.ವೆಂ.ನಾ.ರವರು ಅವರ ತಾತನೊಂದಿಗಿನ ನೆನಪುಗಳನ್ನು, ಅವರ ಹಿನ್ನಲೆಗಳನ್ನು, ಕವಿ ಮನೆತನದ ಕೊಡುಗೆಗಳನ್ನು , ಆ ಕಾಲದ ಕುಟುಂಬ ಬಾಂಧವ್ಯದ ಸುಮಧುರ ಕ್ಷಣಗಳನ್ನು ಅರ್ಥವತ್ತಾಗಿ ಚಿತ್ರಿಸಿದ್ದಾರೆ.

ಆದರ್ಶದ ಬೆನ್ನು ಹತ್ತಿ :  30 ರೂಗಳ ಮುಖಬೆಲೆಯ 100 ಪುಟಗಳ “ಆದರ್ಶದ ಬೆನ್ನು ಹತ್ತಿ”  ಕೃತಿಯು 1975 ರಿಂದ 1977 ಅವಧಿಯ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಕುರಿತ ವಿವರವಾದ ಚಿತ್ರಣಸಾಮಾನ್ಯ ನಾಗರಿಕನೊಬ್ಬ ಎದುರಿಸಿದ ಕಷ್ಟ ನಷ್ಟಗಳ ಅನುಭವ ಕಥನ ಇದಾಗಿದೆ.
    ಈ ಪುಸ್ತಕಕ್ಕೆ ಮುನ್ನುಡಿ ಬರೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಮಟ್ಟದ ಪ್ರಚಾರಕರು, ಕುಟುಂಬ ಪ್ರಬೋಧನ್ ಅಖಿಲ ಭಾರತ ಪ್ರಮಖರೂ ಆದ ಶ್ರೀ ಸು.ರಾಮಣ್ಣನವರು ಈ ಕೃತಿಯ ಬಗ್ಗೆ ಹೀಗೆ ಹೇಳಿದ್ದಾರೆ:  “ಎಮರ್ಜೆನ್ಸಿಯ ಕರಾಳ ದಿನಗಳ ಘಟನಾವಳಿಗಳಲ್ಲಿ ಪ್ರತ್ಯಕ್ಷ್ಯ ಇದ್ದು ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿದವರಲ್ಲಿ ಪ್ರಿಯ ನಾಗರಾಜರಂತಹವರ ಜೊತೆ  ನಾನೂ ಸಹ ಇದ್ದೆ ಎಂಬುದು ಅತ್ಯಂತ ಧನ್ಯತೆಯ ಸಂಗತಿ. ಈ ಪೀಳಿಗೆಯ ತರುಣರಿಗೆ ‘ಎಮರ್ಜೆನ್ಸಿ’ ಗೊತ್ತೇಯಿಲ್ಲ. ಗೊತ್ತಿರುವ ಹಿರಿಯರು ಅದೇಕೋ ಏನೋ ಮರೆತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾಗರಾಜರು ರಚಿಸಿರುವ ಈ ಪುಸ್ತಕವು ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಪಾತ್ರ ಬಹಳ ದೊಡ್ಡದು. ಈ ಪುಸ್ತಕವು ಅನ್ಯಾಯಕ್ಕೆ ತಲೆ ಬಾಗದೆ, ನ್ಯಾಯಕ್ಕಾಗಿ ಬದುಕಬೇಕೆಂಬ ಛಲವನ್ನು ತರುಣರಲ್ಲಿ ಬೆಳೆಸಬಲ್ಲದು. ದೇಶ ನನಗಾಗಿ ಅಲ್ಲ. ನಾನು ದೇಶಕ್ಕಾಗಿ ಎಂಬ ಜೀವನ ರಚನೆ ನಮ್ಮದಾಗಬೇಕಾಗಿದೆ. ಭ್ರಷ್ಟಾಚಾರ ಹಾಗೂ ದುರಾಡಳಿತಗಳ ವಿರುದ್ಧವಾಗಿ ಹೋರಾಡಲು ಬೇಕಾದ ಕಸುವು ನಮ್ಮಲ್ಲಿ ಜಾಗೃತವಾಗಬೇಕಿದೆ. ಅಂತಹದ್ದೊಂದು ಪ್ರೇರಣೆಯನ್ನು ಈ ಪುಸ್ತಕ ನೀಡಲು ಅರ್ಹವಾಗಿದೆ ಎಂಬ ಧೃಢ ಅಭಿಪ್ರಾಯ ನನ್ನದು.”
     ಇದುವರೆಗೂ 600ಕ್ಕೂ ಹೆಚ್ಚು ಇವರ ಲೇಖನಗಳು ರಾಜ್ಯದ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜನಮಿತ್ರದ 'ಚಿಂತನ' ಮತ್ತು ಜನಹಿತದ 'ಜನಕಲ್ಯಾಣ' ಅಂಕಣಗಳು ಹೆಚ್ಚು ಜನಪ್ರಿಯವಾಗಿವೆ. ವಿಕ್ರಮ, ಹೊಸದಿಗಂತಗಳಲ್ಲಿ ವೈಚಾರಿಕ ಲೇಖನಗಳು. ಆಕಾಶವಾಣಿಯಲ್ಲಿ ಇವರ ಹಲವಾರು 'ಚಿಂತನ'ಗಳು ಬಿತ್ತರಗೊಂಡಿವೆ. 
                                                     ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794