ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಅಕ್ಟೋಬರ್ 18, 2015

ಅರವತ್ತೈದು . . .! ಈಗ ಅನಿಸುತಿಹುದು . . .!!


     ಅರವತ್ತೈದನೆಯ ವಯಸ್ಸಿಗೆ ಮುಂದಡಿಟ್ಟಿರುವ ಈ ಸಮಯದಲ್ಲಿ ಮೂಡಿರುವ ಕೆಲವು ಸಮ್ಮಿಶ್ರ ಭಾವಗಳಿಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿರುವೆ. ವಾನಪ್ರಸ್ಥಿಯಾಗಿ ಜೀವನ ಸಾಗಿಸಬೇಕಾದ ಅವಧಿಯಿದು. ತಕ್ಷಣದ ಮನಸ್ಥಿತಿಯ ಕುರಿತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ:
ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯ ನಿಂತು ನೋಡಿದೆ ಮನವು |
ಗುಣಿಸಿ ಭಾಗಿಸಿ ಕೂಡಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ  ವಿಷಣ್ಣಭಾವವು ||
     ಹುಟ್ಟಿದ ದಿನಾಂಕದಿಂದ ಲೆಕ್ಕ ಹಾಕಿದರೆ ಅರವತ್ತನಾಲ್ಕು ವರ್ಷಗಳು ಪೂರ್ಣಗೊಂಡಿವೆ.  ಮಾನಸಿಕವಾಗಿ ಲೆಕ್ಕ ಹಾಕಿದರೆ, ಇನ್ನೂ ಏನಾದರೂ ಮಾಡಬೇಕೆಂಬ ಮನಸ್ಸಿರುವುದರಿಂದ ಹತ್ತು ವರ್ಷ ಚಿಕ್ಕವನಿರಬಹುದು. ಆದರೆ ದೈಹಿಕವಾಗಿ ಕುಗ್ಗಿರುವೆ. ಅನುಭವಿಸಿದ ನೋವು-ನಲಿವುಗಳು, ಸುಖ-ದುಃಖಗಳು, ಬಿದ್ದ ದೈಹಿಕ-ಮಾನಸಿಕ ಪೆಟ್ಟುಗಳು, ಮಾನ-ಅವಮಾನಗಳು, ಪುರಸ್ಕಾರ-ತಿರಸ್ಕಾರಗಳು, ಈಡೇರಿದ ಮತ್ತು ಈಡೇರದ ಬಯಕೆಗಳು, ಮಾಡಬಯಸಿದರೂ ಮಾಡಲಾಗದ ಅಸಹಾಯಕತೆಯ ಪ್ರಸಂಗಗಳು, ವೈಯಕ್ತಿಕ ತಪ್ಪಿಲ್ಲದಿದ್ದರೂ ಅನುಭವಿಸಬೇಕಾಗಿ ಬಂದ ಮುಜುಗರದ ಪ್ರಸಂಗಗಳು, ಇತ್ಯಾದಿ ಕಾರಣಗಳಿಂದಾಗಿ ಭೌತಿಕ ದೇಹಕ್ಕೆ ಇನ್ನೂ ಹತ್ತು-ಹದಿನೈದು ವರ್ಷಗಳು ಜಾಸ್ತಿಯಾಗಿರಬಹುದು. ನನ್ನ ಪರಿಚಯದವರು, ಸ್ನೇಹಿತರು, ಸಹೋದ್ಯೋಗಿಗಳು ಯಾರಾದರೂ ನಿಧನರಾದಾಗಲೂ ಸರತಿಯ ಸಾಲಿನಲ್ಲಿ ಬದುಕಿನ ನಿಜಸತ್ಯವಾದ ಸಾವಿನೆಡೆಗೆ ಮುಂದುವರೆಯುತ್ತಿರುವಂತೆ ಭಾಸವಾಗುತ್ತಿದೆ. ಒಂದಂತೂ ಸತ್ಯ, ಸಾವು ನನ್ನನ್ನು ಹೆದರಿಸಿಲ್ಲ, ನಾನು ಹೆದರಿಯೂ ಇಲ್ಲ. ನಾನು ಅದು ಯಾವಾಗ ಬಂದರೂ ಸ್ವಾಗತಿಸಲು ಸಿದ್ಧನಿದ್ದೇನೆ. ಹಾಗೆಂದು ನಾನು ಸಾಯಬಯಸಿಲ್ಲ. ಸಾಯುವವರೆಗೂ ಬದುಕಿರಲು ಬಯಸಿರುವೆ. ಬದುಕಿರುವುದೆಂದರೆ ಅಂತಃಸಾಕ್ಷಿ ಒಪ್ಪುವಂತೆ ಬದುಕುವುದು ಮತ್ತು ಅಂತಹ ಪೂರಕ ಪರಿಸರಕ್ಕಾಗಿ ಶ್ರಮಿಸುವುದು, ಆಶಿಸುವುದು. ಸಾಯುವ ಮೊದಲು ಬಂಧುಗಳೆಲ್ಲರೂ ಸಾಮರಸ್ಯದಿಂದ ಇರುವುದನ್ನು ಕಾಣಬೇಕೆಂಬ ಬಯಕೆ ಜೀವಂತವಾಗಿದೆ. ಇದೊಂದು ವಿಚಿತ್ರ ಪ್ರಪಂಚ. ಯಾರ ಪರವಾಗಿಯೋ ಅಥವ ವಿರೋಧವಾಗಿಯೋ ಇರಬೇಕೆಂದು ಬಯಸುವವರೇ ಎಲ್ಲರೂ! ಎಲ್ಲರೂ ಚೆನ್ನಾಗಿರಲೆಂದು ಅಪೇಕ್ಷಿಸಿ ಎಲ್ಲರೊಡನೆ ಸಮಭಾವದಿಂದಿರಬಯಸಿದರೆ ಅವರ ಪರವೆಂದು ಇವರು, ಇವರ ಪರವೆಂದು ಅವರು, ಒಟ್ಟಾರೆಯಾಗಿ ಎಲ್ಲರೂ ತಿರಸ್ಕರಿಸಿಬಿಡುವರು! ನನ್ನ ಬಯಕೆ ಎಷ್ಟರ ಮಟ್ಟಿಗೆ ಈಡೇರೀತು ಎಂಬುದನ್ನು ಕಾಲವೇ ಹೇಳಲಿದೆ. ಸ್ವಭಾವತಃ ಆಶಾವಾದಿ ಮತ್ತು ಸುಲಭವಾಗಿ ಕೈಚೆಲ್ಲುವವನಲ್ಲವಾದರೂ, ಕಠಿಣ ವಾಸ್ತವತೆ ನನ್ನಲ್ಲಿ ಒಂದು ರೀತಿಯ ನಿರ್ಲಿಪ್ತಭಾವ ಪ್ರಧಾನವಾಗಿ ಆವರಿಸುವಂತೆ ಮಾಡುತ್ತಿದೆ. 
     ಹೌದು, ಈಗ ಲೆಕ್ಕ ಹಾಕುವ ಹೊತ್ತು. ಈ ದೇಹ ಧರಿಸಿ ಇದುವರೆಗೆ ಸಾಧಿಸಿದ್ದೇನು ಎಂದು ಅವಲೋಕಿಸುವ ಹೊತ್ತು. ಗಳಿಸಿದ್ದೇನು, ಕಳೆದಿದ್ದೇನು, ಉಳಿಸಿದ್ದೇನು, ಕೊಟ್ಟಿದ್ದೇನು, ಪಡೆದಿದ್ದೇನು ಎಂಬುದನ್ನು ಪರೀಕ್ಷಿಸುವ ಹೊತ್ತು. ಅಥರ್ವ ವೇದದಲ್ಲಿನ ಒಂದು ಮಂತ್ರ ಹೇಳುತ್ತದೆ:
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ.
     ಮಾತೃಋಣ, ಪಿತೃಋಣ, ಗುರುಋಣ, ಸಮಾಜಋಣ - ಈ ನಾಲ್ಕನ್ನು ಪ್ರಧಾನವಾಗಿ ಪ್ರತಿ ವ್ಯಕ್ತಿ ಹೊಂದಿರುತ್ತಾನೆ. ಆಯಾ ವ್ಯಕ್ತಿಯ ಗುಣಾವಗುಣಗಳು, ಸಾಧನೆಗಳು ಅವನು ಎಷ್ಟರಮಟ್ಟಿಗೆ ಋಣರಹಿತನಾಗಿದ್ದಾನೆ ಎಂಬುದನ್ನು ನಿರ್ಧರಿಸುತ್ತದೆ. ಎಷ್ಟರಮಟ್ಟಿಗೆ ಋಣರಹಿತರಾಗಿ ಬಾಳಲು ಸಾಧ್ಯ ಎಂಬುದು ವಿಚಾರಾರ್ಹ ಸಂಗತಿ. ಈ ಜನ್ಮದ ಶೇಷ ಆಯಸ್ಸಿನಲ್ಲಿ ಯಾರು ಯಾರಿಗೆ ಎಷ್ಟು ಋಣಿಯಾಗಿದ್ದೇನೋ ಅವರುಗಳ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಎಷ್ಟರಮಟ್ಟಿಗೆ ಋಣಮುಕ್ತನಾದೇನು ಎಂಬುದು ಗೊತ್ತಿಲ್ಲ. ಋಣಮುಕ್ತನಾಗುವ, ಮೇಲೇರುವ ಇಚ್ಛೆಯಂತೂ ಇದ್ದು, ಈ ದಿಸೆಯಲ್ಲಿ ಕ್ರಮಿಸಬೇಕಾದ ಹಾದಿ ಸುಲಭವಲ್ಲವೆಂಬ ಅರಿವು ನನಗಿದೆ. ಋಣಮುಕ್ತನಾಗಿಸೆಂದು ದೇವನಲ್ಲಿ ನನ್ನ ಮೊರೆಯಿದೆ.  
     ಮಾನಸಿಕವಾಗಿ ವಾನಪ್ರಸ್ಥ ಜೀವನದ ಬಗ್ಗೆ ಆಸಕ್ತಭಾವವಿದೆ. ವಾನಪ್ರಸ್ಥವೆಂದರೆ ಕಾಡಿಗೆ ಹೋಗಿ ಧ್ಯಾನ, ತಪಸ್ಸಿಗೆ ತೊಡಗುವುದೆಂದಲ್ಲ. ಮೋಕ್ಷ ಮತ್ತು ಧರ್ಮದ ಕುರಿತು ಚಿಂತನೆ ನಡೆಸುವುದು, ಆ ಹಾದಿಯಲ್ಲಿ ಕ್ರಮಿಸುವುದು, ಲೌಕಿಕ ಸಂಗತಿಗಳಲ್ಲಿ ಆಸಕ್ತಿ ಕಡಿಮೆ ಮಾಡಿಕೊಳ್ಳುವುದು. ಅಷ್ಟೆ.  ನನ್ನ ದೃಷ್ಟಿಯಲ್ಲಿ ಧರ್ಮ ಮತ್ತು ಮೋಕ್ಷದ ಚಿಂತನೆಯೆಂದರೆ ಸಮಾಜಮುಖಿಯಾಗಿ, ದೇಶಮುಖಿಯಾಗಿ ಅಂತರಂಗ  ಯಾವುದನ್ನು ಒಳ್ಳೆಯದು ಎಂದು ಹೇಳುತ್ತದೋ ಆ ಹಾದಿಯಲ್ಲಿ ಸಾಗುವುದು, ಪ್ರಯತ್ನಪೂರ್ವಕವಾಗಿ ಧನಾತ್ಮಕವಾಗಿರುವುದು(ಪಾಸಿಟಿವ್),  ಋಣಾತ್ಮಕ(ನೆಗೆಟಿವ್)  ವಿಚಾರಗಳಿಂದ ದೂರವಿರುವುದು. ಈ ಪಥ ಬದಲಾವಣೆ ಸುಲಭವಾದುದಲ್ಲವಾದರೂ ಈಗ ಆಗದಿದ್ದರೆ ಮತ್ತೆ ಯಾವಾಗ? 
     ಕಳೆದ ಆರು-ಏಳು  ವರ್ಷಗಳಿಂದ ಬರವಣಿಗೆಯ ಕಾರ್ಯದಲ್ಲಿ ಸಕ್ರಿಯನಾಗಿ ತೊಡಗಿಕೊಂಡಿದ್ದು  ಮನದ ಭಾವನೆಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುತ್ತಿವೆ. ನನಗೆ ಮಾನಸಿಕ ಶಕ್ತಿ ನೀಡುತ್ತಿರುವುದೂ ಇದೇ ಆಗಿದೆ. ಮೂರು ವರ್ಷಗಳಿಂದ ಹಾಸನ ಜಿಲ್ಲಾ ಪತ್ರಿಕೆ ಜನಮಿತ್ರದಲ್ಲಿ 'ಚಿಂತನ' ಅಂಕಣ ಕಾಲಂ ಮತ್ತು ಜನಹಿತ ಪತ್ರಿಕೆ ಪ್ರಾರಂಭವಾದಾಗಿನಿಂದ 'ಜನಕಲ್ಯಾಣ' ಅಂಕಣ ಕಾಲಮ್ಮುಗಳಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿವೆ. ಹಾಸನದ ಆಕಾಶವಾಣಿಯಲ್ಲಿ ನನ್ನ ಹಲವಾರು 'ಚಿಂತನ'ಗಳು ಬಿತ್ತರಗೊಂಡಿವೆ. ನಮ್ಮ ಕವಿಮನೆತನದ ಕುಟುಂಬ ಪತ್ರಿಕೆ 'ಕವಿಕಿರಣ'ದ ಸಂಪಾದಕನಾಗಿ ಇಲ್ಲಿಯವರೆಗೆ 15 ಅರ್ಧವಾರ್ಷಿಕ ಸಂಚಿಕೆಗಳು ಹೊರಬಂದಿದ್ದು ಮೆಚ್ಚುಗೆ ಗಳಿಸಿವೆ. ಕಾಲಾನಂತರದಲ್ಲಿ ನನ್ನದಾಗಿ ಏನಾದರೂ ಅಲ್ಪ ಸ್ವಲ್ಪ ಉಳಿದರೆ ಅದು ನನ್ನ ಬರವಣಿಗೆ ಮಾತ್ರ. ಅದೂ ನಂತರದ ಕೆಲವು ಅವಧಿಯವರೆಗೆ ಮಾತ್ರ ಹಾಗೂ ಯಾರಾದರೂ ಗುರುತಿಸಿದಾಗ ಮಾತ್ರ ಎಂಬುದರ ಅರಿವಿದೆ. ಮುನಿಶ್ರೀ ತರುಣಸಾಗರಜಿಯವರು ಹೇಳಿದ ಮಾತೊಂದು ನನ್ನಲ್ಲಿ ಅಚ್ಚೊತ್ತಿದೆ. ಅದೆಂದರೆ "ಸತ್ತ ನಂತರವೂ ಜನ ನಿಮ್ಮನ್ನು ಮರೆಯಬಾರದು ಎಂದು ನೀವು ಭಾವಿಸುವುದಾದರೆ ಎರಡರಲ್ಲಿ ಒಂದು ಕೆಲಸವನ್ನಾದರೂ ಖಂಡಿತವಾಗಿ ಮಾಡಿ. ಓದಲು ಸಾಧ್ಯವಿರುವ ಯಾವುದನ್ನಾದರೂ ಬರೆದುಬಿಡಿ ಅಥವಾ ಬರೆಯಲು ಸಾಧ್ಯವಿರುವಂಥದ್ದನ್ನು ಏನಾದರೂ ಬರೆದುಬಿಡಿ. ಓದಲು ಲಾಯಕ್ಕಾಗಿರುವಂಥಹದೇನಾದರೂ ಬರೆಯಿರಿ ಅಥವಾ ಬರೆಯುವುದಕ್ಕೆ ಲಾಯಕ್ಕಾಗಿರುವಂತಹ ಕೆಲಸವನ್ನೇನಾದರೂ ಮಾಡಿಬಿಡಿ. ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯನ್ನು ಆತನ ಬಹುಮೂಲ್ಯ ಕೃತಿಗಳಿಗಾಗಿ ಅಥವಾ ಕೃತ್ಯಗಳಿಗಾಗಿ ಮಾತ್ರ ನೆನಪು ಮಾಡಿಕೊಳ್ಳಲಾಗುತ್ತದೆ."  ವಿವಿಧ ಹುದ್ದೆಗಳಲ್ಲಿ ಮತ್ತು ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಅದು ದೇವರು ನನಗೆ ಸಾರ್ವಜನಿಕ ಸೇವೆ ಮಾಡಲು ಕೊಟ್ಟ ಸದವಕಾಶವೆಂದು ಭಾವಿಸಿ ಕೆಲಸ ಮಾಡಿರುವೆ. ಸ್ವಇಚ್ಛಾ ನಿವೃತ್ತಿ ಪಡೆದಿರದಿದ್ದರೆ ಹಿರಿಯ ಅಸಿಸ್ಟೆಂಟ್ ಕಮಿಷನರರಾಗಿ ನಿವೃತ್ತನಾಗಬಹುದಿತ್ತು. ನನ್ನ ಮನ ಹಗುರ ಮಾಡಿಕೊಳ್ಳಲೂ ಈ ಬರವಣಿಗೆ ನನಗೆ ನೆರವಾಗಿದೆ. ಅರಳು-ಮರಳು ಆವರಿಸುವ ಮುನ್ನ, ಶಕ್ತಿ ಕುಂದುವ ಮುನ್ನ, ಮರೆವು ಬರುವ ಮುನ್ನ, ಮನ ನುಡಿದಿದ್ದನ್ನು ಕಪ್ಪು-ಬಿಳಿಯಲ್ಲಿ ಮೂಡಿಸುವ ಬಯಕೆಯಿದೆ. ಮುಪ್ಪಿನಲ್ಲಿ 'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಎಂಬ ಭಾವ ಬರುವ ಮುನ್ನ ತೋಚಿದ್ದನ್ನು ಗೀಚಬೇಕೆನ್ನಿಸಿದೆ. ನಾನೊಬ್ಬ ಪಂಡಿತ, ದೊಡ್ಡ ಬರಹಗಾರನೆಂದಲ್ಲ, ನನಗೆ ಪಾಂಡಿತ್ಯವಿದೆಯೆಂದೂ ನಾನು ಅಂದುಕೊಂಡಿಲ್ಲ. ಇದನ್ನು ಮನದೊಳಗಣ ತುಂಬಿದ ಭಾವನೆಗಳನ್ನು ಹೊರಹಾಕಿ ಹಗುರಗೊಳ್ಳುವ ಇರಾದೆಯೆನ್ನಬಹುದು. 'ಬಿಟ್ಟರೂ ಬಿಡದೀ ಮಾಯೆ' ಅನ್ನುವುದು ಇದಕ್ಕೇ ಇರಬೇಕು. ಈ ಪ್ರವೃತ್ತಿಯನ್ನು ಸಮಾಜಮುಖಿಯಾಗಿ ಉಪಯೋಗಿಸಿಕೊಳ್ಳವುದೂ ವಾನಪ್ರಸ್ಥದ ಭಾಗವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. 
     ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಲ್ಲಿ ಸತ್ತನಂತರದಲ್ಲಿ ಅವನ ಇಚ್ಛೆಯಂತೆ ಮೃತ ಶರೀರವನ್ನು ವಿಲೇವಾರಿ ಮಾಡಿದರೆ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಬಯಸಿದಲ್ಲಿ ಮಾಡಬಹುದು ಅಥವ ಬಿಡಬಹುದು. ಶ್ರಾದ್ಧಾದಿ ಕಾರ್ಯಗಳು ತಮ್ಮ ಹಿರಿಯರನ್ನು ನೆನೆಸಿಕೊಂಡು ಸಲ್ಲಿಸುವ ಕೃತಜ್ಞತೆಯಾಗಿದ್ದು, ಅದರ ಫಲವೇನಿದ್ದರೂ ಮಾಡುವವರಿಗಷ್ಟೆ.  ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವಾಗ, ಅವನಿಗೆ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಪ್ರಳಯ, ಪ್ರವಾಹ, ಇತ್ಯಾದಿ ನೈಸರ್ಗಿಕ ಕಾರಣಗಳಿಂದ ಉತ್ತರಕ್ರಿಯೆ ಮಾಡುವವರೂ ಇಲ್ಲದಂತೆ ನಾಶವಾಗುವ ಸಹಸ್ರಾರು ಜೀವಗಳಿಗೆ ಸದ್ಗತಿ ದೊರೆಯುವುದಿಲ್ಲವೆಂದು ಹೇಳಲಾಗುವುದೆ? ಆದ್ದರಿಂದ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ಸಂಬಂಧಿಕರು ಮಾಡಬೇಕೆಂದು ಬಯಸುವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದು ನನ್ನ ಉಯಿಲು ಎಂದು ಭಾವಿಸಬಹುದು. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು. 
     ಹಿರಿಯ ನಾಗರಿಕರ ಸಾಲಿಗೆ ಸೇರಿ ದೈಹಿಕ ಶಕ್ತಿ ಕುಂದಲು ಮತ್ತು ಮುಪ್ಪು ತನ್ನ ಇರುವನ್ನು ತೋರಿಸಲು ಪ್ರಾರಂಭಿಸಿರುವ ಸಮಯವಿದು. ನಿಂದಾಸ್ತುತಿಗಳಿಗೆ ಪಕ್ಕಾಗುವ, ಅದನ್ನು ಯೋಗ್ಯತಾನುಸಾರ ಪಡೆಯುವ, ನಿಂದೆ, ಹೀಗಳಿಕೆಗಳನ್ನು ಎದುರಿಸಲು/ಪ್ರತಿಭಟಿಸಲು ಮನಸ್ಸಿದ್ದರೂ ವಸ್ತುಸ್ಥಿತಿ ವಿರುದ್ಧವಾಗಿರುವ, ಮೌನವಾಗಿ ನುಂಗಬೇಕಾಗಿ ಬರುವ ಸಮಯವಿದು. ಕಸುವು ಇದ್ದಾಗ ಮತ್ತು ಕಸುವು ಇಲ್ಲದಾಗ, ಅಧಿಕಾರವಿದ್ದಾಗ ಮತ್ತು ಇಲ್ಲದಿದ್ದಾಗ, ಆರೋಗ್ಯವಿದ್ದಾಗ ಮತ್ತು ಇಲ್ಲದಿದ್ದಾಗ, ವಯಸ್ಕನಾಗಿದ್ದಾಗ ಮತ್ತು ಮುಪ್ಪಡರಿದಾಗ ವ್ಯಕ್ತಿಯ ಬಗ್ಗೆ ಇತರರ ಮನೋಭಾವ ಹೇಗಿರುತ್ತದೆ, ಹೇಗೆ ಬದಲಾಗುತ್ತದೆ ಎಂಬುದರ ಅರಿವು ನನಗಿದೆ. ಇದನ್ನು ಸರಿ-ತಪ್ಪುಗಳ ಅಳತೆಗೋಲಿನಲ್ಲಿ ಅಳೆಯಲಾಗುವುದಿಲ್ಲ. ವಾಸ್ತವತೆಯ ಬೆಳಕಿನಲ್ಲಿ ನೋಡಬೇಕು. ವಯಸ್ಸಿದ್ದಾಗ ಆಶ್ರಯ ಕೊಡುತ್ತಿದ್ದವರು ಮುಪ್ಪಿನಲ್ಲಿ ಆಶ್ರಯ ಬಯಸುವಂತಹ ಸ್ಥಿತಿ ಬರುತ್ತದೆ. ನನಗೆ ಇಂತಹ ಸ್ಥಿತಿ ಬಂದಿದೆಯೆಂದು ನಾನು ಹೇಳುತ್ತಿಲ್ಲ. ವಸ್ತುಸ್ಥಿತಿಯ ವಿಶ್ಲೇಷಣೆ ಮಾಡುತ್ತಿದ್ದೇನಷ್ಟೆ. 'ಅದೀನಾ ಸ್ಯಾಮ ಶರದಃ ಶತಮ್' ಎಂಬಂತೆ ಇರುವಷ್ಟು ಕಾಲ ಯಾರಿಗೂ ಹೊರೆಯೆನಿಸದಂತೆ, ದೈನ್ಯತೆ ಬಾರದಂತೆ ಬಾಳಬೇಕೆಂಬ ಬಯಕೆ ಈಡೇರಲಿ ಎಂದು ಆ ದೇವನಲ್ಲಿ ನನ್ನ ಬೇಡಿಕೆಯಿದೆ. 
     ಇದು ಎಲ್ಲರಿಗೂ ಶುಭವ ಬಯಸುವ ಹೊತ್ತು, ಎಲ್ಲದರಲ್ಲೂ ಶುಭವ ಕಾಣುವ ಹೊತ್ತು. 
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||

'ಸರ್ವೇ ಜನಾಃ ಸುಖಿನೋ ಭವನ್ತು'
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ