ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮೇ 14, 2014

ಇಲಾಖಾ ವಿಚಾರಣೆ: ಸುಧಾರಣೆ ಹೇಗೆ?

    ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಶಿಸ್ತು ಪ್ರಾಧಿಕಾರಿಂದ ನೇಮಿಸಲ್ಪಡುವ ವಿಚಾರಣಾಧಿಕಾರಿ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ಆರೋಪಗಳು ರುಜುವಾತಾದವೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ. ಆರೋಪಗಳು ರುಜುವಾತಾಗಿದ್ದರೆ, ವಿಚಾರಣಾಧಿಕಾರಿಯ ಆದೇಶದ ಪ್ರತಿಯೊಂದಿಗೆ ನೌಕರನಿಗೆ ಸೂಕ್ತ ಶಿಕ್ಷೆ ನೀಡಬಾರದೇಕೆಂಬ ಬಗ್ಗೆ ಪುನಃ ನೋಟೀಸು ನೀಡಿ, ಆತನಿಂದ ಬರುವ ಉತ್ತರ ಗಮನಿಸಿ ಶಿಕ್ಷೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಚ್ಚರಿಕೆ ನೀಡುವುದು, ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯುವುದು, ಹಿಂಬಡ್ತಿ ನೀಡುವುದು, ಇತ್ಯಾದಿಗಳು ಸೇರಿದಂತೆ ಸೇವೆಯಿಂದ ವಜಾಗೊಳಿಸುವ ಶಿಕ್ಷೆ ನೀಡಲು ಶಿಸ್ತು ಪ್ರಾಧಿಕಾರಿಗೆ ಅಧಿಕಾರವಿರುತ್ತದೆ.
     ಸರ್ಕಾರದ ಇಲಾಖೆಗಳಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು, ಸುಗಮ, ಜನಪರ ಆಡಳಿತ ನೀಡಲು ಇಲಾಖಾ ವಿಚಾರಣೆಗಳು ಪ್ರಮುಖ ಪಾತ್ರ ವಹಿಸಬಲ್ಲವು. ದೌರ್ಭಾಗ್ಯವಶಾತ್ ಭ್ರಷ್ಟಾಚಾರದ ಕರಿನೆರಳು ಬಿದ್ದು ಇವು ಕೇವಲ ಅರ್ಥಹೀನ ಪ್ರಕ್ರಿಯೆಗಳಾಗಿಬಿಟ್ಟಿರುವುದು ದುರ್ದೈವ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಕೆಲವೊಮ್ಮೆ ಭ್ರಷ್ಠರನ್ನು ರಕ್ಷಿಸುವ ಸಾಧನಗಳೂ ಆಗಿವೆ ಎಂದರೆ ಬೇಸರವಾಗುತ್ತದೆ. ಎಲ್ಲಾ ಇಲಾಖಾ ವಿಚಾರಣೆಗಳೂ ಹೀಗಾಗಿವೆ ಎಂದು ಹೇಳಲಾಗದಿದ್ದರೂ ನೈಜ ಮತ್ತು ಅರ್ಥಪೂರ್ಣ ವಿಚಾರಣೆಗಳು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದು. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದಾಗ ಕಂಡು ಬರುವ ಸಂಗತಿಗಳಿವು: .
ಹುಟ್ಟುವ ಮೊದಲೇ ಸಾಯುವ ವಿಚಾರಣೆಗಳು:
    ಸಣ್ಣ ಪುಟ್ಟ ತಪ್ಪುಗಳನ್ನು ಮಾನವೀಯತೆಯ ನೆಲೆಯಲ್ಲಿ ಕ್ಷಮಿಸುವ ಸಂಗತಿಗಳನ್ನು ಈ ವ್ಯಾಪ್ತಿಯಲ್ಲಿ ಸೇರಿಸಿಲ್ಲ. ಅಪರೂಪಕ್ಕೆ ಅನಿವಾರ್ಯವಾಗಿ ತಡವಾಗಿ ಬರುವ ನೌಕರರು, ಉದ್ದೇಶವಿಲ್ಲದೆ, ಗೊತ್ತಿಲ್ಲದೆ ಮಾಡುವ ಸಣ್ಣ ತಪ್ಪುಗಳು, ಮುಂತಾದುವನ್ನು ಎಚ್ಚರಿಕೆ ನೀಡಿ ಮುಂದೆ ಈ ರೀತಿ ಮಾಡದಿರಲು ತಿಳುವಳಿಕೆ ನೀಡಿ ಮಂಗಳ ಹಾಡಲಾಗುವ ಪ್ರಕರಣಗಳನ್ನೂ ಗಣಿಸುವ ಅಗತ್ಯವಿಲ್ಲ. ಅದರೆ ಶಿಸ್ತು ಕ್ರಮ ಅಗತ್ಯವಿದ್ದೂ ಯಾವ ಕ್ರಮವನ್ನೂ ಅನುಸರಿಸದೆ ಮುಕ್ತಾಯ ಮಾಡುವ ಸಂಗತಿಗಳೇ ಹೆಚ್ಚು ಎಂಬುದು ಸಾಮಾನ್ಯ ಅನುಭವ. ೧೫ ದಿನಗಳಿಗಿಂತ ಹೆಚ್ಚು ಕಾಲ ಒಬ್ಬ ನೌಕರ ಅನಧಿಕೃತ ಗೈರುಹಾಜರಾದನೆಂದರೆ ಅದು ಗುರುತರ ಅಪರಾಧವೇ. ಸಾಬೀತಾದರೆ ನೌಕರಿಂದ ವಜಾ ಮಾಡಬಹುದಾಗಿರುತ್ತದೆ. ಕೆಲವರು ತಿಂಗಳುಗಟ್ಟಲೆ ಗೈರುಹಾಜರಾದ ಪ್ರಕರಣಗಳಲ್ಲೂ ಕಛೇರಿಯ ಮುಖ್ಯಸ್ಥರ ಅದಕ್ಷತೆಯ ಕಾರಣದಿಂದ ಯಾವುದೇ ಕ್ರಮ ಆಗದೆ, ಅವರುಗಳು ಸಂಬಳವನ್ನೂ ಪಡೆದ ನಿದರ್ಶನಗಳಿವೆ. ಇಂತಹ ಅದಕ್ಷತೆಯಿಂದ ವಯೋನಿವೃತ್ತಿ ಅವಧಿ ನಂತರವೂ ಸೇವೆಯಲ್ಲಿ ಮುಂದುವರೆದು ಸಂಬಳ ಪಡೆದವರೂ ಇದ್ದಾರೆ. ಇಂತಹ ಪ್ರಕರಣಗಳಿಗೆ ಕಾರಣಗಳೆಂದರೆ: ೧. ಕಛೇರಿ ಮುಖ್ಯಸ್ಥರ ಅಸಮರ್ಪಕ ಕಾರ್ಯವೈಖರಿ, ೨. ಭ್ರಷ್ಟಾಚಾರ - ಸಂಬಂಧಿಸಿದವರಿಂದ ಲಂಚ ಪಡೆದು ಪ್ರಕರಣ ಮುಚ್ಚಿಹಾಕುವುದು, ಈ ತಪ್ಪನ್ನೇ ಬಂಡವಾಳ ಮಾಡಿಕೊಂಡು ಆ ನೌಕರನನ್ನು ಆಗಾಗ್ಗೆ ಶೋಷಿಸುವುದು, ೩. ಶಿಸ್ತು ಪ್ರಾಧಿಕಾರದ ಅಧಿಕಾರಿಗಳ ಹಸ್ತಕ್ಷೇಪ (ಇಲ್ಲೂ ಭ್ರಷ್ಟಾಚಾರವೇ ಪ್ರಧಾನ ಅಂಶ), ೪. ರಾಜಕಾರಣಿಗಳ ಹಸ್ತಕ್ಷೇಪ.
ವಿಫಲಗೊಳ್ಳುವ ವಿಚಾರಣೆಗಳು:
     ದಕ್ಷ ಅಧಿಕಾರಿಗಳಿದ್ದು ಶಿಸ್ತುಕ್ರಮ ಕೈಗೊಂಡ ಪ್ರಕರಣಗಳಲ್ಲೂ ಹೆಚ್ಚಿನ ವಿಚಾರಣೆಗಳು ವಿಫಲವಾಗಿ ಆರೋಪಿಗಳು ಪಾರಾಗುತ್ತಾರೆ ಎಂಬುದು ವಿಡಂಬನೆಯೇ ಸರಿ. ಇದಕ್ಕೆ ಮೂಲಕಾರಣಗಳನ್ನು ವಿಶ್ಲೇಷಿಸಿದರೆ ಕಾಣುವ ಸಂಗತಿಗಳು ಇವು: ೧. ದಕ್ಷ ವಿಚಾರಣಾಧಿಕಾರಿಗಳು ಮತ್ತು ಮಂಡನಾಧಿಕಾರಿಗಳನ್ನು ನೇಮಿಸದಿರುವುದು, ೨. ಆರೋಪ ಪಟ್ಟಿ ತಯಾರಿಸುವಲ್ಲಿ ಲೋಪ, ೩. ವಿಚಾರಣಾ ನಿಯಮಗಳು, ಕಾನೂನುಗಳ ತಿಳುವಳಿಕೆಯಲ್ಲಿನ ಕೊರತೆ, ೩. ಭ್ರಷ್ಟತೆ, ೪. ಇತರ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹಸ್ತಕ್ಷೇಪ, ೪. ವಕೀಲರುಗಳು ಸರ್ಕಾರದ ಪರವಾಗಿ ಆಗಲೀ, ಆರೋಪಿ ನೌಕರರ ಪರವಾಗಿ ಆಗಲೀ ಹಾಜರಾಗಲು ಅವಕಾಶವಿಲ್ಲದಿರುವುದು. ೫. ಮಂಡನಾಧಿಕಾರಿ ಆರೋಪಗಳನ್ನು ಸಾಬೀತುಪಡಿಸಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸದಿರುವುದು. ೬. ಆರೋಪಿಗಳು, ವಿಚಾರಣಾಧಿಕಾರಿಗಳು, ಮಂಡನಾಧಿಕಾರಿಗಳು ಸಹೋದ್ಯೋಗಿಗಳಾಗಿರುವುದು ಅಥವ ಆಪ್ತರಾಗಿರುವುದು, ಇತ್ಯಾದಿ, ಇತ್ಯಾದಿ.
ಕುರಿ ಕಾಯುವ ತೋಳಗಳು:
     ಒಂದು ಶಿಸ್ತು ಕ್ರಮ ಯಶಸ್ವಿಯಾಗಿ ಜರುಗಬೇಕೆಂದರೆ ಪ್ರಾಥಮಿಕವಾಗಿ ಆರೋಪಿಯ ವಿರುದ್ಧದ ಆರೋಪ ಪಟ್ಟಿಯನ್ನು ಸರಿಯಾಗಿ ಸಿದ್ಧಪಡಿಸುವುದಲ್ಲದೆ, ಆರೋಪಗಳನ್ನು ಸಮರ್ಥಿಸುವ ಪೂರಕ ದಾಖಲೆಗಳು ಮತ್ತು ಸಾಕ್ಷಿದಾರರ ವಿವರಗಳನ್ನು ವಿಚಾರಣಾಧಿಕಾರಿಯವರಿಗೆ ಒದಗಿಸಬೇಕು. ಆದರೆ, ಅಸಮರ್ಪಕ ಕಾರ್ಯವೈಖರಿಯಿಂದಾಗಿ ಮತ್ತು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಆರೋಪ ಪಟ್ಟಿ ಸಿದ್ಧಪಡಿಸುವಾಗಲೇ ಅದರಲ್ಲಿ ಹುರುಳಿಲ್ಲದಂತೆ ಆಗಿರುತ್ತದೆ. ಅಗತ್ಯದ ದಾಖಲೆಗಳನ್ನು ಉಲ್ಲೇಖಿಸಿಯೇ ಇರುವುದಿಲ್ಲ. ಸಂಬಂಧಪಟ್ಟ ಸಾಕ್ಷಿಗಳನ್ನು ಕೈಬಿಟ್ಟು, ಸಂಬಂಧಪಡದವರನ್ನು ಸಾಕ್ಷಿಗಳಾಗಿ ಹೆಸರಿಸಿರುವ ಪ್ರಕರಣಗಳು ಇವೆ. 
     ಒಬ್ಬ ಅಸಮರ್ಪಕ ಮತ್ತು ಇಲಾಖಾ ವಿಚಾರಣೆ ನಡೆಸುವ ರೀತಿ ಗೊತ್ತಿಲ್ಲದ ಅಧಿಕಾರಿಯನ್ನು ವಿಚಾರಣಾಧಿಕಾರಿಯಾಗಿ ನೇಮಿಸಿದರೆ ಎಷ್ಟರಮಟ್ಟಿಗೆ ವಿಚಾರಣೆಯಲ್ಲಿ ಸತ್ಯಾಸತ್ಯತೆ ತಿಳಿದೀತು? ಅದೇ ರೀತಿ ಇಲಾಖಾ ವಿಚಾರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕಾದ ಮಂಡನಾಧಿಕಾರಿಗಳು ಸರಿಯಾಗಿ ತಮ್ಮ ಕಾರ್ಯ ನಿರ್ವಹಿಸದ ಕಾರಣಕ್ಕಾಗಿಯೇ ಬಹುತೇಕ ವಿಚಾರಣೆಗಳು ವಿಫಲಗೊಳ್ಳುತ್ತವೆ. ಮಂಡನಾಧಿಕಾರಿ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷಿಗಳ ವಿಚಾರಣೆ ಸರಿಯಾಗಿ ಮಾಡಬೇಕು, ಪೂರಕ ದಾಖಲೆಗಳನ್ನು ವಿಚಾರಣಾಧಿಕಾರಿಗಳ ಮುಂದೆ ಇಡಬೇಕು, ಅಗತ್ಯವಿದ್ದರೆ ಆರೋಪ ಪಟ್ಟಿಯಲ್ಲಿ ಸೇರಿರದ, ಆದರೆ ವಿಚಾರಣೆಗೆ ಅಗತ್ಯವೆನಿಸಿದ ದಾಖಲೆಗಳನ್ನು ಹಾಜರುಪಡಿಸುವ, ಹೊಸ ಸಾಕ್ಷಿಗಳನ್ನು ಕರೆಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಈ ಕಾರಣದಿಂದ ಸ್ವತಃ ಪ್ರಾಮಾಣಿಕ ಜಿಲ್ಲಾಧಿಕಾರಿಯವರೇ ಖುದ್ದು ಆಸಕ್ತಿ ವಹಿಸಿದ ಪ್ರಕರಣಗಳಲ್ಲೂ ಗುರುತರ ಆರೋಪಗಳಿಂದ ಆರೋಪಿಗಳು ಪಾರಾಗಿದ್ದ ಬಗ್ಗೆ ಹಿಂದಿನ ಲೇಖನಗಳಲ್ಲಿ ನೋಡಿದೆವಲ್ಲವೆ?
ಏನು ಮಾಡಬಹುದು?
೧. ಇಲಾಖಾ ವಿಚಾರಣೆಗಳನ್ನು ನಡೆಸುವ ಸಲುವಾಗಿಯೇ ಪ್ರತ್ಯೇಕ ವಿಭಾಗ ತೆರೆದು, ಅಲ್ಲಿ ಸೇವಾ ನಿಯಮಗಳು, ಕಾಯದೆಗಳ ಅರಿವು ಇರುವವರು ಮಾತ್ರ ಇರಬೇಕು. ನಿಷ್ಪಕ್ಷಪಾತಿಗಳು ಮತ್ತು ಪ್ರಾಮಾಣಿಕರೆಂದು ಗುರುತಿಸಲ್ಪಟ್ಟವರನ್ನು ಅಲ್ಲಿ ನೇಮಕವಾಗುವಂತೆ ನೋಡಿಕೊಂಡರೆ ಉತ್ತಮ.
೨. ಆರೋಪ ಪಟ್ಟಿಗಳನ್ನು ಲೋಪಗಳಿಲ್ಲದಂತೆ ಸಿದ್ಧಪಡಿಸಬೇಕು. ಪೂರಕ ದಾಖಲೆ ಮತ್ತು ಸಾಕ್ಷ್ಯಗಳ ವಿವರವಿರುವಂತೆ ನೋಡಿಕೊಳ್ಳಬೇಕು. ನ್ಯೂನತೆಗಳಿಗೆ ಸಂಬಂಧಿಸಿದ ಕಛೇರಿ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು.
೩. ರಾಜಕೀಯ ಮತ್ತು ಇತರರ ಹಸ್ತಕ್ಷೇಪಗಳು ಶಿಕ್ಷಾರ್ಹ ಅಪರಾಧಗಳಾಗಬೇಕು.
೪. ಸ್ವತಃ ಇಲಾಖಾ ವಿಚಾರಣೆಗಳನ್ನಾಗಲೀ, ಇನ್ನಿತರ ವಿಚಾರಣೆಗಳನ್ನಾಗಲೀ ಎದುರಿಸುತ್ತಿರುವವರನ್ನು, ನೌಕರರು ಕೆಲಸ ಮಾಡುತ್ತಿರುವ ಕಛೇರಿಯ ಆಧಿಕಾರಿಗಳನ್ನು ವಿಚಾರಣಾಧಿಕಾರಿ ಅಥವ ಮಂಡನಾಧಿಕಾರಿಯಾಗಿ ನೇಮಿಸಬಾರದು.
೫. ವಿಚಾರಣೆ ಅಸಮರ್ಪಕವಾಗಿ ನಡೆದುದು ತಿಳಿದರೆ, ಪುನರ್ವಿಚಾರಣೆಗೆ ಆದೇಶಿಸುವುದಲ್ಲದೆ, ಪುನರ್ವಿಚಾರಣೆಯಲ್ಲಿ ಅಸಮರ್ಪಕ ವಿಚಾರಣೆ ನಡೆದುದು ಖಚಿತವಾದರೆ, ಅದಕ್ಕೆ ಕಾರಣರಾದವರಿಗೆ ದಂಡ ವಿಧಿಸಲು ಅವಕಾಶವಿರಬೇಕು.
೬. ಇಲಾಖಾ ವಿಚಾರಣೆಗಳ ಕುರಿತು ಸೂಕ್ತ ತರಬೇತಿಯನ್ನು ಕಾಲಕಾಲಕ್ಕೆ ಎಲ್ಲಾ ಕಛೇರಿ ಮುಖ್ಯಸ್ಥರುಗಳಿಗೆ ಮತ್ತು ಹಿರಿಯ ನೌಕರರುಗಳಿಗೆ ನೀಡುತ್ತಿರಬೇಕು.
     ಒಟ್ಟಾರೆಯಾಗಿ ಹೇಳಬೇಕೆಂದರೆ, ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ. ಆದರೆ ಮೇಲಾಧಿಕಾರಿಗಳ, ಆಡಳಿತದ ಮುಖ್ಯಸ್ಥರುಗಳ, ನಮ್ಮನ್ನಾಳುವವರ ಮನೋಭಾವದಲ್ಲಿ ಬದಲಾವಣೆಯಾಗದಿದ್ದರೆ ಎಲ್ಲವೂ ವ್ಯರ್ಥವಾಗುತ್ತವೆ. ಯಾವುದೇ ಸುಧಾರಣೆ ಮೇಲಿನಿಂದ ಬರಬೇಕು. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಉನ್ನತ ಸ್ಥಾನಗಳಲ್ಲಿರುವವರು ಭ್ರಷ್ಟಾತಿಭ್ರಷ್ಟರಾಗಿದ್ದು ಇತರರನ್ನು, ಕೆಳಗಿನವರನ್ನು ಮಾತ್ರ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ತೋಳಗಳು ಕುರಿಗಳನ್ನು ಕಾಯುತ್ತಿವೆ. ಜನಜಾಗೃತಿಯೇ ಇದಕ್ಕೆ ಮದ್ದು.
-ಕ.ವೆಂ. ನಾಗರಾಜ್.
***************
14.5.2014ರ ಜನಹಿತ ಪತ್ರಿಕೆಯ ಅಂಕಣ 'ಜನಕಲ್ಯಾಣ'ದಲ್ಲಿ ಪ್ರಕಟಿತ.

ಶನಿವಾರ, ಮೇ 10, 2014

ಹೆಸರಿನ ಹಂಬಲ


     ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:
     "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ, ಅವರಿಗೂ ಈಗ ಸಿಕ್ಕಿರುವ ಗೌರವದಿಂದ ಸಮಾಧಾನ ಆಗಿರುವುದಿಲ್ಲ. ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದೇನೆ, ಎಷ್ಟು ಹಣ, ಸಮಯ ಖರ್ಚು ಮಾಡಿದ್ದೇನೆ. ಅದಕ್ಕೆ ಹೋಲಿಸಿದರೆ ಈಗ ಸಿಕ್ಕಿರುವ ಗೌರವ ತುಂಬಾ ಕಡಿಮೆ ಆಯಿತು ಅಂತ ಕೊರಗುತ್ತಿರುತ್ತಾರೆ. ಇನ್ನೊಂದು ವಿಷಯ ಗೊತ್ತಾ? ಸಿಕ್ಕಿರುವ ಆ ಗೌರವವನ್ನು ಉಳಿಸಿಕೊಳ್ಳಲು ಅವರು ಇನ್ನು ಮುಂದೆಯೂ ಒದ್ದಾಡುತ್ತಲೇ ಇರಬೇಕು. ಒಣ ಹೆಸರು ಅನ್ನುವುದನ್ನು ಬಿಟ್ಟರೆ ಗೌರವ ಅನ್ನುವುದರಲ್ಲಿ ಏನಿದೆ?"
     "ಏನೆಂದೆ? ಸತ್ತವರಿಗೆ ಸಿಗುವ ಗೌರವವಾ? ಒಣ ಹೆಸರು ಮಾತ್ರ ಅಂತೀಯಾ?"
     "ಅಷ್ಟಲ್ಲದೇ ಏನು? ಒಂದು ಕಥೆ ಹೇಳ್ತೀನಿ, ಕೇಳು. ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ. ಒಂದು ದಿನ ಅಶರೀರವಾಣಿ ಅವನಿಗೆ ಕೇಳಿಸಿತು: 'ಎಲೈ ರಾಜನೇ, ಯಾರು ಹೆಚ್ಚು ದಾನ ಮಾಡುತ್ತಾರೋ ಅವರು ಸ್ವರ್ಗಕ್ಕೆ ಹೋಗುತ್ತಾರೆ. ಅವರ ಹೆಸರನ್ನು ಸ್ವರ್ಗದಲ್ಲಿರುವ ಬಂಗಾರದ ಬೆಟ್ಟದಲ್ಲಿ ಬರೆಯಲಾಗುವುದು'. ಸರಿ, ರಾಜನಿಗೆ ಬಂಗಾರದ ಬೆಟ್ಟದಲ್ಲಿ ತನ್ನ ಹೆಸರು ಕಾಣುವ ಬಯಕೆ ಗರಿಗಟ್ಟಿತು. ಪ್ರತಿದಿನ ಬಡಬಗ್ಗರಿಗೆ ಊಟ ಹಾಕಿಸಿದ, ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಕಟ್ಟಿಸಿದ, ಧರ್ಮಛತ್ರಗಳನ್ನು ಕಟ್ಟಿಸಿದ. ಪ್ರವಾಸಿಗರಿಗೆ ಅನುಕೂಲವಾಗಲು ವಿಶ್ರಾಂತಿಧಾಮಗಳನ್ನು ಕಟ್ಟಿಸಿದ. ದೇವಸ್ಥಾನಗಳನ್ನು ನಿರ್ಮಿಸಿದ, ಅದು ಮಾಡಿದ, ಇದು ಮಾಡಿದ, ಏನೇನೋ ಮಾಡಿದ. ಎಲ್ಲಾ ಕಟ್ಟಡಗಳಲ್ಲೂ ರಾಜನ ಹೆಸರೋ ಹೆಸರು. ಎಲ್ಲೆಲ್ಲಿ ನೋಡಿದರೂ ರಾಜನ ದಾನ ಮಾಡಿದ ಕುರಿತು ಫಲಕಗಳೇ ಫಲಕಗಳು. ಒಂದು ದಿನ ರಾಜ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ಹೋದವನೇ ಮೊದಲು ಮಾಡಿದ ಕೆಲಸ ಎಂದರೆ ಬಂಗಾರದ ಬೆಟ್ಟ ಎಲ್ಲಿದೆ ಅಂತ ವಿಚಾರಿಸಿದ್ದು. ಬೆಟ್ಟದ ಹತ್ತಿರ ಹೋಗಿ ನೋಡಿದರೆ ಬೆಟ್ಟದ ತುಂಬೆಲ್ಲಾ ಜಾಗವೇ ಇಲ್ಲದಷ್ಟು ಹೆಸರುಗಳು ತುಂಬಿಹೋಗಿದ್ದವು. ಅಲ್ಲಿದ್ದ ಮೇಲ್ವಿಚಾರಕರನ್ನು ತನ್ನ ಹೆಸರು ಎಲ್ಲಿದೆ ಅಂತ ವಿಚಾರಿಸಿದ. ಅವನು ಒಂದು ಬರೆಯುವ ಸಾಧನ ಕೊಟ್ಟು ಹೇಗೆ ಬೇಕೋ ಹಾಗೆ, ಎಲ್ಲಿ ಬೇಕೋ ಅಲ್ಲಿ ಹೆಸರನ್ನು ಬರೆದುಕೊಳ್ಳಬಹುದೆಂದು ಹೇಳಿದ. ಬರೆಯಲು ಜಾಗವೇ ಇಲ್ಲವಲ್ಲಾ ಅಂದಿದ್ದಕ್ಕೆ, ತಿರುಗಿಯೂ ನೋಡದೆ ಆತ ಹೇಳಿದ್ದೇನೆಂದರೆ, 'ಇರುವ ಯಾವುದಾದರೂ ಹೆಸರನ್ನು ಅಳಿಸಿ ನಿನ್ನ ಹೆಸರು ಬರೆದುಕೊಳ್ಳಬಹುದು' ಅಂತ."
     "ಹಾಂ??"
     "ಆ ರಾಜನಿಗಾದರೋ ಸತ್ತ ಮೇಲೆ ತನ್ನ ಹೆಸರು ಬರೆದುಕೊಳ್ಳುವ ಅವಕಾಶವಾದರೂ ಸಿಕ್ಕಿತ್ತು. ನಿನಗೇನು ಸಿಗುತ್ತೆ? ಮಣ್ಣು. ಸತ್ತ ಮೇಲೆ ನಿನಗೇ ನೀನು ಯಾರು ಅಂತ ಗೊತ್ತಿರುತ್ತೋ ಇಲ್ಲವೋ! ಸತ್ತ ಮೇಲೆ ಗೌರವ ಸಿಗುತ್ತೆ ಅಂತ ಈಗ ಯಾಕೆ ಒದ್ದಾಡುತ್ತೀಯಾ?"
     "ಹಾಂ??"
     "ಹೌದು ಕಣೋ ಮಂಕೆ. ಆದರೆ ಒಂದು ಸಮಾಧಾನವಿದೆ. ಈಗ ಬದುಕಿದ್ದಾಗ ನಿನ್ನ ಕಾಲು ಎಳೆದವರೇ ಮುಂದೆ  ನೀನು ಸತ್ತ ಮೇಲೆ ನಿನ್ನ ಫೋಟೋಗೆ ಹಾರ ಹಾಕಿ 'ಅವರು ಎಷ್ಟು ದೊಡ್ಡ ವ್ಯಕ್ತಿ. ಆದರೆ ಅವರಿಗೆ ಬದುಕಿದ್ದಾಗ ಸಿಗಬೇಕಾದ ಗೌರವ ಸಿಗಲಿಲ್ಲ. ಅಂತಹ ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಅವರ ಸಾವಿನಿಂದ ತುಂಬಲಾರದ ನಷ್ಟ ಆಗಿದೆ' ಅಂತ ಕಣ್ಣೀರು ಹಾಕ್ತಾರೆ. ನಿನ್ನದು ಒಂದು ಒಳ್ಳೆಯ ಪೋಸ್ ಇರುವ ಫೋಟೋ ಇಲ್ಲದಿದ್ದರೆ ಈಗಲೇ ತೆಗೆಸಿಟ್ಟಿರು. ಮುಂದೆ ಉಪಯೋಗಕ್ಕೆ ಬರುತ್ತೆ."
     "ಹಾಂ??"
     "ಈ ಹೆಸರಿನ ಹಂಬಲ ಇದೆಯಲ್ಲಾ, ಅದು ಮಾಡಬಾರದ್ದು ಮಾಡಿಸುತ್ತೆ. ತನಗಿಂತಾ ಹೆಚ್ಚು ಹೆಸರು ಇನ್ನೊಬ್ಬರಿಗೆ ಬರಬಾರದು ಅಂತ ಇತರರನ್ನು ಕೀಳಾಗಿ ನೋಡುವಂತೆ ಮಾಡುತ್ತೆ. ಅಧಿಕಾರ, ಹೆಸರು ಬರಲು ಕಾರಣರಾದವರನ್ನೇ ಮುಂದೆ ಅವರಿಂದ ತನ್ನ ಅಧಿಕಾರ, ಹೆಸರಿಗೆ ಕುತ್ತು ತರುತ್ತಾರೆಂದು ದ್ವೇಷಿಸುವಂತೆ ಮಾಡುತ್ತೆ. ಸ್ನೇಹಿತರು, ಬಂಧುಗಳೇ ಶತ್ರುಗಳಂತೆ ಕಾಣಿಸುವಂತೆ ಮಾಡುತ್ತೆ. ಈ ಹೆಸರು ದುಂಬಿ ಇದ್ದಂತೆ. ಅದು ಹಾಡೂ ಹೇಳುತ್ತೆ. ಚುಚ್ಚಿಯೂ ಚುಚ್ಚುತ್ತೆ."
     "ನಿಜ, ನಿಜ. ಈಗಿನ ರಾಜಕಾರಣಿಗಳನ್ನು ನೋಡಿದರೇ ಗೊತ್ತಾಗುತ್ತೆ."
     "ಬರೀ ರಾಜಕಾರಣಿಗಳೇನು, ಸಾಹಿತಿಗಳು, ಅಧಿಕಾರಿಗಳು, ವರ್ತಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಇಂಥವರು, ಅಂಥವರು, ನಾವು ಎಲ್ಲರೂ ಹೀಗೆ ಮಾಡುವವರೇ. ಅವರಿಗೂ ಶಾಂತಿಯಿಲ್ಲ, ಅವರಿಂದ ಬೇರೆಯವರಿಗೂ ಶಾಂತಿಯಿಲ್ಲ."
     "ಹಂಗಂತೀಯ??"
     "ಹಂಗನ್ನದೆ ಇನ್ನು ಹ್ಯಾಂಗನ್ನಲಿ, ಮಂಕಣ್ಣ. ಇನ್ನೊಂದು ವಿಷಯ ಗೊತ್ತಾ? ಈ ಹೆಸರು ಬಂದವರು ಇದ್ದಾರಲ್ಲಾ, ಅವರು ಮೊದಲು ಇದ್ದಂತೆ ಇರುವುದಿಲ್ಲ. ತಾವು ಎಲ್ಲರಿಗಿಂತ ಮೇಲು ಅಂದುಕೊಂಡು ಬೇರೆಯವರನ್ನು, ಬೇರೆಯವರಿರಲಿ, ತನ್ನ ಸ್ನೇಹಿತರು, ಬಂಧುಗಳನ್ನೇ ಹಗುರವಾಗಿ ಕಂಡು ಅವಮಾನ ಮಾಡುತ್ತಾರೆ. ಈ ಸ್ವಭಾವದಿಂದ ವಿನಾಕಾರಣ ಇತರರ ದ್ವೇಷ ಕಟ್ಟಿಕೊಳ್ಳುತ್ತಾರೆ."
     "ಅಯ್ಯಪ್ಪಾ! ನನಗೆ ಹಾರ ಹಾಕದಿದ್ದದ್ದೇ ಒಳ್ಳೆಯದಾಯಿತು ಬಿಡು."
     "ಈಗ ಹಾಕದಿದ್ದರೇನಂತೆ, ಮುಂದೆ ಒಂದು ದಿನ ಹಾಕುತ್ತಾರೆ, ಬಿಡು. ಈ ಹೆಸರಿನ ಹಂಬಲ ಇದೆಯಲ್ಲಾ, ಇದು ಎಂಥಾ ದೊಡ್ಡ ವ್ಯಕ್ತಿಗಳನ್ನೂ ಬಿಡುವುದಿಲ್ಲ. ಹೆಸರು, ಅಧಿಕಾರಕ್ಕಾಗಿ ಅವರು ಸ್ವಂತ ವ್ಯಕ್ತಿತ್ವವನ್ನೇ ಮರೆತುಬಿಡುತ್ತಾರೆ."
     "ಅದೇನೋ ಸರಿ, ಈಗಿನ ದೇಶದ ನಾಯಕರು ಇರೋದೇ ಹಾಗೆ. ಆದರೂ ಅವರು ನಾಯಕರು. ನೀನು ಮಾತನ್ನು ಎಲ್ಲೆಲ್ಲಿಗೋ ತಿರುಗಿಸುತ್ತಿದ್ದೀಯಾ. ಈಗಿನ ಸಂದರ್ಭದ ಬಗ್ಗೆ ಮಾತನಾಡು. ಕೊನೆಯ ಪಕ್ಷ ಬಾಯಿಮಾತಿನಲ್ಲಾದರೂ ಹಾಳು ಬಿದ್ದು ಹೋಗಲಿ ಅಂದುಕೊಂಡು ನನ್ನ ಬಗ್ಗೆ ಎರಡು ಒಳ್ಳೆಯ ಮಾತು ಹೇಳಬಹುದಿತ್ತಲ್ಲವಾ?"
      "ಹೇಳಿದ್ದರೆ ನಿನಗೆ ಏನು ಸಿಗುತ್ತಿತ್ತು? ಅವರಿಗೆ ಹೇಳಲು ಬೇಕಿಲ್ಲದಿರಬಹುದು. ನಿನ್ನನ್ನು ಹೊಗಳಿದರೆ ಅವರಿಗೆ ಬೆಲೆ ಕಡಿಮೆ ಆಗುತ್ತೆ ಅಂದುಕೊಂಡಿರಬಹುದು. ಸೇರಿರುವ ಜನ ಯಾರನ್ನು ಯಾರು ಗೌರವಿಸಿದರೂ ಅಷ್ಟೆ, ಗೌರವಿಸದಿದ್ದರೂ ಅಷ್ಟೆ, ತಲೆ ಕೆಡಿಸಿಕೊಳ್ಳದವರು. ಹಾಗಿರುವಾಗ ನಿನಗೆ ಅವರಿಂದ ಗೌರವಿಸಿಕೊಳ್ಳಬೇಕು ಅನ್ನುವ ಹಂಬಲ ಯಾಕೆ? ಒಂದು ಮಾತು ಹೇಳ್ತೀನಿ ಕೇಳು, ಪ್ರತಿಭೆ ಅನ್ನುವುದು ದೇವರ ಕೊಡುಗೆ. ದೇವರಿಗೆ ತಲೆಬಾಗಬೇಕು. ಗೌರವ ಜನರು ಕೊಡುವುದು. ಕೊಟ್ಟರೆ  ಅವರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ನಮಗೆ ನಾವೇ ಕೊಟ್ಟುಕೊಳ್ಳುವುದು. ಎಚ್ಚರವಿರಬೇಕು."
     ಅಷ್ಟರಲ್ಲಿ ಧ್ವನಿವರ್ಧಕದಲ್ಲಿ ಮೊಳಗಲು ಪ್ರಾರಂಭವಾಯಿತು, "ಮಂಕಣ್ಣನವರು ಎಲ್ಲಿದ್ದರೂ ಬರಬೇಕು. ಮಾನ್ಯ ಅತಿಥಿಗಳು ಅವರಿಗೆ ಮಾಲಾರ್ಪಣೆ ಮಾಡಲಿದ್ದಾರೆ". ಮಂಕಣ್ಣ ಕೂಡಲೇ ಅಡ್ಡವಿದ್ದವರನ್ನು ಪಕ್ಕಕ್ಕೆ ಸರಿಸುತ್ತಾ ವೇದಿಕೆಯ ಕಡೆಗೆ ಧಾವಿಸಿದ! ಹಾರ ಹಾಕಿಸಿಕೊಂಡು ಬೀಗುತ್ತಾ ಬಂದ ಮಂಕನನ್ನು ಮೂಢ ಕೆಣಕಿದ, "ಅಂತೂ ಹಾರ ಹಾಕಿಸಿಕೊಂಡೆಯಲ್ಲಾ! ಸಮಾಧಾನವಾಯಿತಾ?" ಈ ಮಾತು ಕೇಳಿ ಮಂಕಾದ ಮಂಕನನ್ನು ಕಂಡು ಮರುಕಪಟ್ಟು ಹೇಳಿದ:
     "ನಿಜ, ನೀನು ನಿಜವಾಗಿಯೂ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೀಯಾ. ಆದರೆ ಅಲ್ಲಿ ವೇದಿಕೆಯ ಮೇಲೆ ಕುಳಿತವರನ್ನೊಮ್ಮೆ ನೋಡು. ಅವರು ನಿನ್ನ, ನಿನ್ನಂತಹವರ ಶ್ರಮದಲ್ಲಿ ಕೆಲಸ ಮಾಡದೇ ಗೌರವ ಪಡೆಯುತ್ತಿದ್ದಾರೆ. ಜನ ಅವರಿಗೇ ಹಾರ ಹಾಕಿ, ಅವರ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ. ಅದು ಅವರ ಸಾಮರ್ಥ್ಯ. ಎಲ್ಲರಿಗೂ ಅದು ಬರಲ್ಲ."
     "ಅದೇನೋ ಸರಿ ಬಿಡು. ನಾನು ಪಡೆದದ್ದು ನನಗೆ. ಅವರು ಪಡೆದದ್ದು ಅವರಿಗೆ."
     "ಕನ್ನಡದ ಸುಪ್ರಸಿದ್ಧ ಗೀತ ರಚನಕಾರ ಎಸ್.ಕೆ. ಕರೀಮ್‌ಖಾನರ ಹೆಸರು ಕೇಳಿದ್ದೀಯಲ್ಲವಾ? ಅವರ ಬಡತನವನ್ನು ದುರುಪಯೋಗಿಸಿಕೊಂಡು ಅವರಿಂದ ಗೀತೆಗಳನ್ನು ಬರೆಸಿ ತಮ್ಮ ಹೆಸರಿನಲ್ಲಿ ಹಾಕಿಕೊಂಡು ಪ್ರಸಿದ್ಧರಾದವರೂ ಈ ನೆಲದಲ್ಲಿ ಇದ್ದರು."
     "ಹೌದಾ?"
     "ನಿಜ ಕಣೋ. ಈಗ ಹೆಸರಿನ ಹಿಂದೆ ಡಾಕ್ಟರ್ ಅಂತ ಸೇರಿಸಿಕೊಳ್ಳೋದು ಕಷ್ಟವೇನಿಲ್ಲ. ಹಣ ಖರ್ಚು ಮಾಡಿದರೆ ಡಾಕ್ಟೊರೇಟ್ ಕೊಡಿಸುವ ದಲ್ಲಾಳಿಗಳು ಡಾಕ್ಟೊರೇಟ್ ಕೊಡಿಸುತ್ತಾರೆ. ನೀನು ಸಾಹಿತಿಯಾಗಿ ಒಂದೆರಡು ಪುಸ್ತಕ ಬರೆದು, ಲೇಖನಗಳನ್ನು ಬರೆದುಬಿಟ್ಟೆಯೋ ನಿನ್ನ ಅಂತಸ್ತು ಸ್ವಲ್ಪ ಏರುತ್ತದೆ. ಶ್ರಮ ಪಟ್ಟರೆ, ರಾಜಕಾರಣಿಗಳ ಬೆನ್ನು ಬಿದ್ದರೆ ಪ್ರಶಸ್ತಿಯೂ ಸಿಕ್ಕಿಬಿಡುತ್ತದೆ."
     "ಹಾಗಾದರೆ ಪ್ರಶಸ್ತಿ ಪಡೆದವರೆಲ್ಲಾ ಹೀಗೆಯೇ ಪಡೆದವರಾ?"
     "ಛೇ, ಛೇ. ಹಾಗೆಂದರೆ ಬಾಯಲ್ಲಿ ಹುಳ ಬೀಳುತ್ತದೆ. ಅರ್ಹತೆಯಿದ್ದು ಪ್ರಶಸ್ತಿ ಪಡೆದವರು ತಮ್ಮ ತೂಕ ಉಳಿಸಿಕೊಂಡಿರುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಹಾಗೆ. ಆದರೆ ಲಾಬಿ ಮಾಡಿ ಪ್ರಶಸ್ತಿ ಪಡೆದವರ ತಲೆಯೇ ನಿಲ್ಲುವುದಿಲ್ಲ. ಎಡಬಿಡಂಗಿ ಹೇಳಿಕೆಗಳನ್ನು ಕೊಡುತ್ತಾ, ವಿವಾದ ಸೃಷ್ಟಿಸುತ್ತಾ ಸದಾ ತಮ್ಮ ಹೆಸರು ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿರುತ್ತಾರೆ."
     "ದೊಡ್ಡವರ ವಿಷಯ ನಮಗೇಕೆ ಬಿಡು. ಭೋಗಿ ಪಡೆದಿದ್ದು ಭೋಗಿಗೆ, ಜೋಗಿ ಪಡೆದಿದ್ದು ಜೋಗಿಗೆ."
     "ಹೋಗಲಿ ಬಿಡು. ಏನೋ, ಹಾರ ಹಾಕಲಿಲ್ಲ ಅಂತ ನೀನು ಪೇಚಾಡ್ತಾ ಇದ್ದಿಯಲ್ಲಾ, ಅದಕ್ಕೆ ನಾಲ್ಕು ಮಾತಾಡಿದೆ ಅಷ್ಟೆ. ಈ ಮನುಷ್ಯರ ಪ್ರಪಂಚ ನಡೀತಿರೋದೇ ಈ ನಾನು, ನಾನು ಅನ್ನೋ ಹೆಸರಿನ ಹಂಬಲದಿಂದ. ನಾನೂ, ನೀನೂ ಇದಕ್ಕೆ ಹೊರತಾದವರೇನಲ್ಲ."
     ಅಕ್ಕ ಪಕ್ಕದಲ್ಲಿದ್ದವರಿಗೆ ಇವರ ಮಾತುಗಳಿಂದ ಕಿರಿಕಿರಿಯಾಗುತ್ತಿದ್ದರಿಂದ ಇವರನ್ನು ಅಸಹನೆಯಿಂದ ನೋಡುತ್ತಿದ್ದರು. ಇದನ್ನು ಗಮನಿಸಿದ ಇವರೂ ಸುಮ್ಮನೆ ಕುಳಿತು ಸಭಾಕಲಾಪ ವೀಕ್ಷಿಸತೊಡಗಿದರು.
-ಕ.ವೆಂ.ನಾಗರಾಜ್.
**************
23.6.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.




ಬುಧವಾರ, ಮೇ 7, 2014

ನಾಟಕವಾದ ಇಲಾಖಾ ವಿಚಾರಣೆ

     ಇಲಾಖಾ ವಿಚಾರಣೆಗಳು ಎಷ್ಟು ಅರ್ಥಹೀನವಾಗಿವೆ ಎಂಬ ಬಗ್ಗೆ ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿದೆವು. ಇಲಾಖಾ ವಿಚಾರಣೆ ಏಕೆ ಅರ್ಥ ಕಳೆದುಕೊಳ್ಳುತ್ತವೆ ಎಂಬುದಕ್ಕೆ ನಿದರ್ಶನವಾಗಿ ಒಂದು ಪ್ರಕರಣ ನಿಮ್ಮ ಮುಂದಿಡುವೆ. ಅದಕ್ಕೆ ಮುಂಚೆ ಒಂದು ಸ್ವಾರಸ್ಯಕರ ವಿಷಯ ಹೇಳುವೆ. ನಾನು ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಒಂದು ಮಧ್ಯಾಹ್ನ ಒಂದು ಗ್ರಾಮದ ಸುಮಾರು ೨೦-೨೫ ಜನರು ನನಗೆ ಜೈಕಾರ ಘೋಷಣೆ ಮಾಡುತ್ತಾ ಬಂದಿದ್ದವರು ನನ್ನ ಛೇಂಬರಿಗೆ ಬಂದು ಮಾಲಾರ್ಪಣೆ ಮಾಡಿ ತಮ್ಮ ಗ್ರಾಮದ ಶಾಲೆಯ ಪಕ್ಕದ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿದ್ದಕ್ಕೆ ನನ್ನನ್ನು ಅಭಿನಂದಿಸಿ ಹೋದರು. ನನಗೆ ಆಶ್ಚರ್ಯವಾಗಿತ್ತು, ಏಕೆಂದರೆ ಅಂತಹ ಯಾವುದೇ ಕ್ರಮ ನಾನು ತೆಗೆದುಕೊಂಡಿರಲಿಲ್ಲ. ಆ ಜಮೀನಿನ ವಿಷಯ ನ್ಯಾಯಾಲಯದಲ್ಲಿದ್ದು ಯಥಾಸ್ಥಿತಿ ಕಾಪಾಡಲು ನ್ಯಾಯಾಲಯದ ಆದೇಶವಿತ್ತು. ಹಾಗಾಗಿ ತಕ್ಷಣ ಗ್ರಾಮಕ್ಕೆ ಹೊರಡುವ ಸಲುವಾಗಿ ರೆವಿನ್ಯೂ ಇನ್ಸ್‌ಪೆಕ್ಟರರಿಗೆ ಕರೆಕಳುಹಿಸಿದರೆ ಆತ ಕೈಗೆ ಸಿಗಲಿಲ್ಲ. ಜಮೀನಿನ ಹತ್ತಿರ ಹೋಗಿ ನೋಡಿದರೆ ಆ ಜಮೀನಿನ ಸುತ್ತ ತಂತಿ ಬೇಲಿ ಹಾಕಿ ಒಂದು ಫಲಕ ನೇತುಹಾಕಿದ್ದರು. 'ಒತ್ತುವರಿ ತೆರವುಗಳಿಸಿ ಈ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ. ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು - ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿ' ಎಂದು ಆ ಫಲಕದಲ್ಲಿತ್ತು. ಆ ಫಲಕವನ್ನು ತೆಗೆಸಿ, ಆರೀತಿ ಯಾರು ಮಾಡಿದವರು ಎಂದು ವಿಚಾರಿಸಿದರೆ ಗ್ರಾಮದಲ್ಲಿ ಯಾರೂ ಸರಿಯಾಗಿ ಮಾಹಿತಿ ಕೊಡಲಿಲ್ಲ. ಜೈಕಾರ ಹಾಕಿಕೊಂಡು ಬಂದಿದ್ದವರು ಅಲ್ಲಿರಲೇ ಇಲ್ಲ. ವಾಪಸು ಬಂದ ಮೇಲೆ ಸೂಕ್ಷ್ಮವಾಗಿ ಪಡೆದ ಮಾಹಿತಿಯ ಪ್ರಕಾರ ಸ್ಥಳೀಯ ರಾಜಕಾರಣಿಗಳೊಂದಿಗೆ ಷಾಮೀಲಾದ ರೆವಿನ್ಯೂ ಇನ್ಸ್‌ಪೆಕ್ಟರನ ಕುಮ್ಮಕ್ಕಿನಿಂದಲೇ ಇದು ನಡೆದಿದ್ದುದು ಗೊತ್ತಾಯಿತು. ಅಂದು ರಾತ್ರಿಯೇ ರೆವಿನ್ಯೂ ಇನ್ಸ್‌ಪೆಕ್ಟರನನ್ನು ಕರೆಸಿ ವಿಚಾರಿಸಿದರೆ ಆತ ತನಗೇನೂ ಗೊತ್ತಿಲ್ಲವೆಂದೇ ವಾದಿಸಿದ್ದ. ಅವನ ಕಾರ್ಯವ್ಯಾಪ್ತಿಯ ಗ್ರಾಮದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆ ಪ್ರಕರಣ ನಡೆಯಲು ಕಾರಣರಾದವರು ಯಾರು, ಆ ಫಲಕವನ್ನು ಹಾಕಿಸಿದವರು ಯಾರು ಈ ಕುರಿತು ವಿಚಾರಿಸಿ ಒಂದು ದಿನದ ಒಳಗೆ ವರದಿ ಸಲ್ಲಿಸಲು ತಿಳಿಸಿದೆ ಮತ್ತು ಇಂತಹ ಘಟನೆ ನಡೆಯಲು ಅವಕಾಶ ಕೊಟ್ಟಿದ್ದಕ್ಕೆ ಆತನ ಮತ್ತು ಸಂಬಂಧಿಸಿದ ಗ್ರಾಮಲೆಕ್ಕಿಗರ ಮೇಲೆ ಕ್ರಮ ತೆಗೆದುಕೊಳ್ಳಬಾರದೇಕೆಂದು ವಿವರಣೆ ಕೇಳಿ ನೋಟೀಸನ್ನೂ ನೀಡಿದೆ. ಊಹಿಸಿದ್ದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದವರು ಫಲಕದ ಫೋಟೋ ಸಹಿತ ನ್ಯಾಯಾಲಯಕ್ಕೆ ದೂರು ಅರ್ಜಿ ಸಹ ಸಲ್ಲಿಸಿದ್ದರು. ನನಗೆ ನ್ಯಾಯಾಲಯದಿಂದ ವಿವರಣೆ ಕೇಳಿ ಸಮನ್ಸ್ ಸಹ ಬಂದಿತ್ತು. ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ನೀಡಿದ್ದೆ. ರೆವಿನ್ಯೂ ಇನ್ಸ್ ಪೆಕ್ಟರ್ ಕಿತಾಪತಿ ಸ್ವಭಾವದವನಾಗಿದ್ದು ನಾನು ಮೇಲಾಧಿಕಾರಿಯಾಗಿದ್ದುದು ಅವನಿಗೆ ಕಷ್ಟವಾಗಿತ್ತು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಅಡ್ಡಿಯಾಗಿತ್ತು. ರಾಜಕೀಯ ಶಕ್ತಿ ಕೇಂದ್ರವಾಗಿದ್ದ ಆ ತಾಲ್ಲೂಕಿನ ರಾಜಕೀಯ ಪುಡಾರಿಗಳೊಂದಿಗೆ ಸಂಪರ್ಕವಿದ್ದ ಆತ ಅವರುಗಳ ಮೂಲಕ ಮತ್ತು ಜನರನ್ನು ಗುಂಪು ಕೂಡಿಸಿ ದೂರುಗಳನ್ನು ಹೇಳಿಸುವ ಮೂಲಕ ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಲು ಸತತ ಪ್ರಯತ್ನ ನಡೆಸಿದ್ದ. ಅವು ಫಲಪ್ರದವಾಗಿರಲಿಲ್ಲ. ಹೀಗಾಗಿ ಅವನು ನನಗೆ ಕೆಟ್ಟ ಹೆಸರು ಬರುವಂತಹ ಪ್ರಕರಣಗಳನ್ನು ಸೃಷ್ಟಿಸುತ್ತಿದ್ದ. ಆದರೆ, ಅವನ ಇಂತಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಪೂರಕವಾದ ಸಾಕ್ಷ್ಯ/ದಾಖಲೆ ಸಿಗುತ್ತಿರಲಿಲ್ಲ. 
     ಹೀಗಿರುವಾಗ ಒಮ್ಮೆ ನನಗೆ ಮಾಹಿತಿ ಹಕ್ಕು ಆಯೋಗದಿಂದ ಒಂದು ಪ್ರಕರಣದಲ್ಲಿ ಅರ್ಜಿದಾರರಿಗೆ ಸೂಕ್ತ ಮಾಹಿತಿಯನ್ನು ಸಕಾಲದಲ್ಲಿ ಒದಗಿಸದಿದ್ದುದಕ್ಕೆ ನನಗೆ ದಂಡ ವಿಧಿಸಬಾರದೇಕೆಂದು ಕೇಳಿ ನೋಟೀಸು ಬಂದಿತು. ನನ್ನ ಹಿಂದಿನ ತಹಸೀಲ್ದಾರರ ಕಾಲದ ಆ ಪ್ರಕರಣದ  ವಿಷಯ ನನ್ನ ಗಮನಕ್ಕೇ ಬಂದಿರಲಿಲ್ಲ. ಕಡತಗಳನ್ನು ತೆಗೆಸಿ ನೋಡಲಾಗಿ ಸಂಬಂಧಿಸಿದ ಕಡತ ಕಾಣೆಯಾಗಿದ್ದು, ಇದೇ ರೆವಿನ್ಯೂ ಇನ್ಸ್‌ಪೆಕ್ಟರ್ ಹಿಂದೆ ಕಛೇರಿಯ ಗುಮಾಸ್ತನಾಗಿದ್ದ ಸಂದರ್ಭದಲ್ಲಿ ಸಂಬಂಧಿಸಿದ ಕಡತ ಕಣ್ಮರೆ ಮಾಡಿದ್ದು, ತನ್ನ ನಂತರದ ಗುಮಾಸ್ತರಿಗೆ ದುರುದ್ದೇಶಪೂರ್ವಕವಾಗಿ ಛಾರ್ಜು ಕೊಟ್ಟಿರದಿದ್ದುದು ಗೊತ್ತಾಯಿತು. ಆಗಲೇ ಹಿಂದಿನ ತಹಸೀಲ್ದಾರರು ಅವನಿಗೆ ನೋಟೀಸನ್ನೂ ಕೊಟ್ಟಿದ್ದರು. ರಾಜಕೀಯ ಪ್ರಭಾವದಿಂದ ವಿಷಯವನ್ನು ಮುಚ್ಚಿಹಾಕಲಾಗಿತ್ತು. ಇದನ್ನು ಬಳಸಿ ಅವನಿಗೆ ಪಾಠ ಕಲಿಸಲು ನಿರ್ಧರಿಸಿದ ನಾನು ಪುನಃ ಅವನಿಗೆ ನೋಟೀಸು ನೀಡಿ ೭ ದಿನಗಳ ಕಾಲಾವಕಾಶದಲ್ಲಿ ಕಡತ ಹಾಜರುಪಡಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸೂಚನೆ ಕೊಟ್ಟೆ. ಅವನಿಂದ ಉತ್ತರ ಬರದಿದ್ದರಿಂದ ಜಿಲ್ಲಾಧಿಕಾರಿಯವರಿಗೆ ಪೂರಕ ದಾಖಲೆಗಳೊಂದಿಗೆ ವರದಿ ನೀಡಿದೆ. ಈ ಹಂತದಲ್ಲಿ ಕಳೆದ ೩-೪ ವರ್ಷಗಳಿಂದ ಸಿಕ್ಕದಿದ್ದ ಕಡತ ರೆಕಾರ್ಡು ಕೋಣೆಯಲ್ಲಿ ಸಿಕ್ಕಿತೆಂಬಂತೆ ಮಾಡಿದರು. ಮಾಹಿತಿ ಕೇಳಿದವರಿಗೆ ಪೂರ್ಣ ಮಾಹಿತಿ ನೀಡಿ ಮಾಹಿತಿ ಹಕ್ಕು ಆಯೋಗಕ್ಕೆ ವಿಳಂಬ ಮನ್ನಿಸುವಂತೆ ಕೋರಿ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದೆ. ನನ್ನ ಒತ್ತಾಯದಿಂದಾಗಿ ಕಡತ ಕಣ್ಮರೆ ಮತ್ತು ಮಾಹಿತಿ ಹಕ್ಕು ಆಯೋಗದಿಂದ ನೋಟೀಸು ಬರಲು ಕಾರಣನಾದ ಆರೋಪಗಳ ಕುರಿತು ಆ ರೆವಿನ್ಯೂ ಇನ್ಸ್‌ಪೆಕ್ಟರನ ವಿರುದ್ಧ ಇಲಾಖಾ ವಿಚಾರಣೆಗೆ ಜಿಲ್ಲಾಧಿಕಾರಿಯವರು ಆದೇಶಿಸಿ, ಪಕ್ಕದ ತಾಲ್ಲೂಕಿನ ತಹಸೀಲ್ದಾರರನ್ನು ವಿಚಾರಣಾಧಿಕಾರಿಯಾಗಿ ಮತ್ತು ಅದೇ ಕಛೇರಿಯ ಶಿರಸ್ತೇದಾರರನ್ನು ಮಂಡನಾಧಿಕಾರಿಯಾಗಿ ನೇಮಿಸಿದ್ದರು. ಅಪರ ಜಿಲ್ಲಾಧಿಕಾರಿಯವರು ನನಗೆ, 'ಹೋಗಲಿ, ಬಿಟ್ಟುಬಿಡು' ಎಂದು ನನಗೆ ಹೇಳಿದ್ದಾಗಲೇ ವಿಚಾರಣೆ ಹೇಗಾಗಬಹುದೆಂದು ನನಗೆ ಗೊತ್ತಾಗಿತ್ತು ಮತ್ತು ಅವರು ಹಾಗೆ ಹೇಳಿದ್ದರ ಹಿನ್ನೆಲೆ ತಿಳಿದುಹೋಗಿತ್ತು. ವಿಚಾರಣಾಧಿಕಾರಿಯವರು ಈಚೆಗೆ ತಹಸೀಲ್ದಾರರಾಗಿ ಬಡ್ತಿ ಹೊಂದಿದವರಾಗಿದ್ದು ಆರೋಪಿ ನೌಕರರ ಸ್ನೇಹಿತರಾಗಿದ್ದರು. ಇನ್ನು ಮಂಡನಾಧಿಕಾರಿಯೂ ಆತನಿಗೆ ಪರಮಾಪ್ತ ಸ್ನೇಹಿತನಾಗಿದ್ದ. ಆ ಮಂಡನಾಧಿಕಾರಿ ಹಿಂದೊಮ್ಮೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದವನಾಗಿದ್ದು, ಆ ಕುರಿತು ವಿಚಾರಣೆ ಇನ್ನೂ ನಡೆಯುತ್ತಿತ್ತು. ಆ ಸಮಯದಲ್ಲಿ ನಾನು ಸೇವೆಯಿಂದ ಸ್ವ-ಇಚ್ಛಾ ನಿವೃತ್ತಿ ಪಡೆದೆ. ನಿವೃತ್ತನಾಗಿದ್ದರೂ, ವಿಚಾರಣೆ ಸಮಯದಲ್ಲಿ ಹಾಜರಾಗಿ ಸಾಕ್ಷ್ಯ ಹೇಳಿದೆ. ಮಂಡನಾಧಿಕಾರಿ ಪೂರಕ ದಾಖಲೆಗಳನ್ನು ವಿಚಾರಣೆ ಕಾಲದಲ್ಲಿ ಹಾಜರು ಪಡಿಸಿ ಗುರುತು ಮಾಡಿಸಲಿಲ್ಲ. ಅಲ್ಲೂ 'ಮ್ಯಾಚ್ ಫಿಕ್ಸ್' ಆಗಿತ್ತು. ಸಹಜವಾಗಿ ಆರೋಪಗಳು ಸಾಬೀತಾಗಲಿಲ್ಲವೆಂದು ವಿಚಾರಣಾಧಿಕಾರಿ ವರದಿ ಕೊಟ್ಟರು. ಸರಿಯಾಗಿ ವಿಚಾರಣೆ ನಡೆಸಲಿಲ್ಲವೆಂದು ಜಿಲ್ಲಾಧಿಕಾರಿಯವರಿಗೆ ನಾನು ದೂರಿದಾಗ ಅವರು ಅಪರ ಜಿಲ್ಲಾಧಿಕಾರಿಯವರಿಗೆ ವಿಚಾರಿಸಲು ಸೂಚಿಸಿದ್ದರು. ಆದರೆ ಆ ಅಪರ ಜಿಲ್ಲಾಧಿಕಾರಿಯವರು ಆರೋಪಿಯ ಬಗ್ಗೆ ಮೊದಲಿನಿಂದಲೇ ಮೃದುಧೋರಣೆ ಹೊಂದಿದ್ದುದರ ಹಿನ್ನೆಲೆ ಅರ್ಥವಾಗದುದಾಗಿರಲಿಲ್ಲ. ಪುನರ್ವಿಚಾರಣೆ ನಡೆಯಲಿಲ್ಲ. ಆ ರೆವಿನ್ಯೂ ಇನ್ಸ್ ಪೆಕ್ಟರ್ ಶಿರಸ್ತೇದಾರನಾಗಿ ಬಡ್ತಿ ಹೊಂದಿದ.
     ಇಲ್ಲಿಗೆ ಅರ್ಥಹೀನ ಇಲಾಖಾ ವಿಚಾರಣೆಗಳ ಕುರಿತ ನಿದರ್ಶನಗಳ ಸರಣಿಯನ್ನು ಮುಕ್ತಾಯಗೊಳಿಸುವೆ. ಮುಂದಿನ ಲೇಖನದಲ್ಲಿ ಇಲಾಖಾ ವಿಚಾರಣೆಗಳು ಅರ್ಥಪೂರ್ಣವೆನಿಸಲು ಅನುಸರಿಸಬಹುದಾದ ಕ್ರಮಗಳ ಕುರಿತು ವಿವೇಚಿಸೋಣ.
-ಕ.ವೆಂ.ನಾಗರಾಜ್.
**************
7.05.2014ರ ಜನಹಿತ ಪತ್ರಿಕೆಯಲ್ಲಿ ಪ್ರಕಟಿತ.

ಶುಕ್ರವಾರ, ಮೇ 2, 2014

ತಿಂದರೂ ದಕ್ಕಿಸಿಕೊಳ್ಳಲಾಗಲಿಲ್ಲ!

ಅರ್ಥವಿಲ್ಲದ ಇಲಾಖಾ ವಿಚಾರಣೆಗಳು - ೫
ತಿಂದರೂ ದಕ್ಕಿಸಿಕೊಳ್ಳಲಾಗಲಿಲ್ಲ!
     ಇಲಾಖಾ ವಿಚಾರಣೆ ನಡೆಯದಿರಲು ನಾನೇ ಕಾರಣನಾಗಿದ್ದ ಪ್ರಸಂಗವೊಂದನ್ನು ಇಲ್ಲಿ ಉಲ್ಲೇಖಿಸುವೆ. ಇದೂ ಸಹ ದಶಕಗಳ ಹಿಂದಿನ ಕಥೆ. ತಿಮ್ಮೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗ -ಹೆಸರು ರಾಮೇಗೌಡ ಎಂದಿರಲಿ, ನಿವೃತ್ತಿಗೆ ೩ ವರ್ಷಗಳಿದ್ದವು- ಒಳ್ಳೆಯ ಕೆಲಸಗಾರನೇನೂ ಆಗಿರಲಿಲ್ಲ. ಸರ್ಕಾರಿ ಬಾಕಿ ವಸೂಲಿಯಲ್ಲಿ ಇತರ ಎಲ್ಲಾ ಗ್ರಾಮಲೆಕ್ಕಿಗರುಗಳಿಗಿಂತಲೂ ತೀರಾ ಹಿಂದಿರುತ್ತಿದ್ದ ಈತ ಈ ಕಾರಣಕ್ಕಾಗಿ ಪ್ರತಿ ಸಿಬ್ಬಂದಿ ಸಭೆಯಲ್ಲೂ ನನ್ನಿಂದ ಬೈಸಿಕೊಳ್ಳುತ್ತಿದ್ದ. ಸರ್ಕಾರಿ ಬಾಕಿ ವಸೂಲಿಗೆ ಆದ್ಯತೆ ಕೊಟ್ಟಿದ್ದ ನಾನು ಒಂದು ಅಲಿಖಿತ ನಿಯಮ ಪಾಲಿಸುತ್ತಿದ್ದೆ. ಜನರು ತಮ್ಮ ಕೆಲಸಗಳಿಗೆ ಬಂದ ಸಂದರ್ಭದಲ್ಲಿ ಅವರು ಸರ್ಕಾರಿ ಬಾಕಿ ಪಾವತಿಸಿರುವುದನ್ನು ಖಚಿತಪಡಿಸಿಕೊಂಡು, ಪಾವತಿಸಿರದಿದ್ದಲ್ಲಿ ಪಾವತಿಸಿದ ನಂತರ ಅವರ ಕೆಲಸ ಮಾಡಿಕೊಡುತ್ತಿದ್ದೆ. ಹೀಗಾಗಿ ಜನರಿಗೂ ಅದು ಅಭ್ಯಾಸವಾಗಿ ಕಛೇರಿಗೆ ಬರುವಾಗ ಕಂದಾಯ, ಇತ್ಯಾದಿ ಪಾವತಿಸಿದ ರಸೀದಿಗಳನ್ನು ತೆಗೆದುಕೊಂಡು ಬರುತ್ತಿದ್ದರು. ಒಮ್ಮೆ ತಿಮ್ಮೇನಹಳ್ಳಿಯ ಒಬ್ಬ ರೈತ ಖಾತೆ ಬದಲಾವಣೆಗೆ ಬಂದಿದ್ದವನು ತಾನು ಕಟ್ಟಿದ್ದ ರೂ.೨೫೦೦ರ ರಸೀದಿ ನನಗೆ ತೋರಿಸಿದ್ದ. ನನಗೆ ಆಶ್ಚರ್ಯವಾಯಿತು. ಏಕೆಂದರೆ ರಾಮೇಗೌಡ ಹಿಂದಿನ ತಿಂಗಳು ಸರ್ಕಾರಕ್ಕೆ ಕಟ್ಟಿದ್ದ ವಸೂಲು ಮಾಡಿದ ಒಟ್ಟು ಮೊಬಲಗೇ ರೂ. ೯೫೦ ಆಗಿತ್ತು. ಆ ರಸೀದಿಯನ್ನು ಸ್ವೀಕೃತಿ ಪತ್ರ ನೀಡಿ ಆ ರೈತನಿಂದ ಪಡೆದು ಅವನ ಕೆಲಸ ಮಾಡಿಕೊಟ್ಟು, ರಾಮೇಗೌಡನ ಮೂಲ ರಸೀದಿ ತರಿಸಿ ಪರಿಶೀಲಿಸಿದೆ. ಮೂಲ ರಸೀದಿಯಲ್ಲಿ ಆ ರೈತನ ಹೆಸರಿನಲ್ಲಿ ಇದ್ದ ಮೊಬಲಗು ೧೫೦ ಮಾತ್ರ ಆಗಿತ್ತು. ತಕ್ಷಣ ಅವನು ವಸೂಲಿ ಮಾಡಿದ ಇತರ ಕೆಲವು ರೈತರುಗಳ ರಸೀದಿಗಳನ್ನೂ ಪಡೆದು ಪರಿಶೀಲಿಸಿದಾಗ ರೈತರ ಹೆಸರಿನಲ್ಲಿ ಇದ್ದ ಮತ್ತು ಮೂಲ ರಸೀದಿಯಲ್ಲಿ ಇದ್ದ ಮೊಬಲಗುಗಳು ಬೇರೆಯೇ ಆಗಿದ್ದವು. ರಸೀದಿ ಹಾಕುವಾಗ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ರಸೀದಿ ಬರೆದು ಎರಡನೆಯ ಪ್ರತಿಯನ್ನು ರೈತರಿಗೆ ಕೊಡಬೇಕಿತ್ತು. ಮೂಲ ರಸೀದಿಯ ಹಿಂಭಾಗದಲ್ಲಿ ಸಹ ಕಾರ್ಬನ್ ಅಚ್ಚು ದಾಖಲಾಗಿ ತಿದ್ದುವಿಕೆಗೆ ಅವಕಾಶವಾಗದಿರಲಿ ಎಂಬುದು ಅದರ ಉದ್ದೇಶವಿತ್ತು. ರೈತರಿಗೆ ಎರಡನೆಯ ಪ್ರತಿಯನ್ನು ಮಾತ್ರ ಪ್ರತ್ಯೇಕ ಬರೆದುಕೊಟ್ಟು, ನಂತರ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ಮೂಲ ರಸೀದಿಯನ್ನು ಕಡಿಮೆ ಮೊಬಲಗಿಗೆ ಪ್ರತ್ಯೇಕವಾಗಿ ಬರೆದು ರಾಮೇಗೌಡ ಚಾಣಾಕ್ಷತನ ತೋರಿದ್ದ. ಇದು ಗೊತ್ತಾಗಿ ಆತನ ಎಲ್ಲಾ ಕಡತಗಳು, ಖಾತೆ, ಖಿರ್ದಿಗಳನ್ನು ವಶಪಡಿಸಿಕೊಂಡೆ. 
     ಅಂದು ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ನನ್ನ ಮನೆಗೆ ಬಂದ ರಾಮೇಗೌಡ ನನ್ನ ಕಾಲು ಹಿಡಿದುಕೊಂಡು ಜೋರಾಗಿ ಅಳತೊಡಗಿದ. ಮನೆಯಲ್ಲಿದ್ದ ನನ್ನ ಪತ್ನಿ ಮತ್ತು ಪುಟ್ಟ ಮಕ್ಕಳು ಗಾಬರಿಯಾಗಿದ್ದರು. ಅವನನ್ನು ಬಲವಂತವಾಗಿ ಕುರ್ಚಿಯಲ್ಲಿ ಕೂರಿಸಿ "ಏನು ಹೇಳಬೇಕೋ ಸರಿಯಾಗಿ ಹೇಳು, ನಾಟಕ ಬೇಡ" ಎಂದು ಗದರಿಸಿದೆ. ಅವನು, "ಸಾರ್, ನನ್ನ ಸರ್ವಿಸಿನಲ್ಲೇ ಇಂಥಾ ಕೆಲಸ ಮಾಡಿರಲಿಲ್ಲ. ವಿಧಿಯಿಲ್ಲದೆ ಈಗ ಹೀಗೆ ಮಾಡಿದೆ. ಎರಡು ತಿಂಗಳಿನಿಂದ ಮಾತ್ರ ಈ ರೀತಿ ಮಾಡಿದೀನಿ ಸಾರ್. ನನ್ನ ಅಳಿಯ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದವನು ಉಡುಗೊರೆಯಾಗಿ ಮಾವ ಸ್ಕೂಟರ್ ತೆಗೆಸಿಕೊಡಲಿ ಅಂತ ಮಗಳ ಮೂಲಕ ಬಲವಂತ ಮಾಡಿದ್ದ ಸಾರ್. ನನ್ನ ಹತ್ತಿರ ಹಣ ಇರಲಿಲ್ಲ. ೧೮೦೦೦ ರೂ. ಸಾಲ ಮಾಡಿ ಸ್ಕೂಟರ್ ತೆಗೆದುಕೊಟ್ಟೆ. ಅದಕ್ಕೋಸ್ಕರ ಹೀಗೆ ಮಾಡಿದೆ. ಕ್ರಮೇಣ ಹೊಂದಿಸಿ ಸರಿ ಮಾಡ್ತೀನಿ ಸಾರ್. ನೀವು ಡಿ.ಸಿ.ಗೆ ಬರೆದರೆ ನನ್ನ ನೌಕರಿ ಹೋಗುತ್ತೆ. ನನಗೆ ಇರೋದು ಒಂದೆರಡು ವರ್ಷ ಸರ್ವಿಸು ಅಷ್ಟೆ. ನಾನು ಮುಳುಗಿ ಹೋಗ್ತೀನಿ. ಅದೂ ಅಲ್ಲದೆ ಮರ್ಯಾದೆ ಪ್ರಶ್ನೆ ಸಾರ್. ತಲೆ ಎತ್ತಿ ನಡೆಯೋಕ್ಕೆ ಆಗಲ್ಲ. ನೀವು ಕೈಬಿಟ್ಟರೆ ನಾನು ಖಂಡಿತಾ ನೇಣು ಹಾಕಿಕೊಂಡು ಸಾಯ್ತೀನಿ, ಫಾಲಿಡಾಲ್ ಕುಡೀತೀನಿ. ಇದು ನಿಮ್ಮಾಣೆ ಸತ್ಯ ಸಾರ್" ಅಂದಾಗ ನನಗೆ ಏನು ಹೇಳಬೇಕೋ ತೋಚಲಿಲ್ಲ. "ಆಯ್ತು, ಎರಡು ದಿನ ಯೋಚಿಸಿ ನಿನಗೆ ಹೇಳಿಯೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಭರವಸೆ ಕೊಟ್ಟ ಮೇಲೆಯೇ ಅವನು ಕಣ್ಣು ಒರೆಸಿಕೊಂಡು ಹೋದದ್ದು. ನನ್ನ ಪತ್ನಿ 'ಅವನಿಗೆ ತೊಂದರೆ ಮಾಡಬೇಡಿ' ಅಂದರೆ, ನನ್ನ ಪುಟ್ಟ ಮಕ್ಕಳು ನನ್ನನ್ನು ಕೆಟ್ಟವನೆಂಬಂತೆ ನೋಡಿದ್ದರು. ಅಂದು ರಾತ್ರಿಯೆಲ್ಲಾ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ.
     ಮರುದಿನ ಮಧ್ಯಾಹ್ನ ರಾಮೇಗೌಡನನ್ನು ಕರೆದುಕೊಂಡು ಹೋಗಿ ಪ್ರವಾಸಿ ಮಂದಿರದ ಕೊಠಡಿಯಲ್ಲಿ ಕುಳಿತು, ಅವನಿಂದಲೇ ಖಾತೆ, ಖಿರ್ದಿಗಳನ್ನು ಪರಿಶೀಲಿಸಿ ಅವನ ವೃತ್ತದ ಎಲ್ಲಾ ರೈತರುಗಳಿಂದ ವಸೂಲು ಮಾಡಲು ಬಾಕಿಯಿರುವ ಮೊಬಲಗನ್ನು ಲೆಕ್ಕ ಹಾಕಿಸಿದೆ. ಅವುಗಳಲ್ಲಿ ಮೂಲ ರಸೀದಿಯಲ್ಲಿ ಬರೆದ ಮೊಬಲಗುಗಳನ್ನು ಮಾತ್ರ ವಸೂಲಾದಂತೆ ತೋರಿಸಿದ್ದು, ಉಳಿದ ವಸೂಲು ಮಾಡಬೇಕಾದ ಮೊಬಲಗು ರೂ. ೪೨೦೦೦ ಆಗಿತ್ತು. ಪ್ರತಿ ಬಾಕಿ ಮೊಬಲಗಿಗೂ ರಸೀದಿಗಳನ್ನು ಹಾಕಿ, ಪೂರ್ಣ ರೂ. ೪೨೦೦೦ ಮೊಬಲಗನ್ನು ಸರ್ಕಾರಕ್ಕೆ ಜಮಾ ಮಾಡಿದರೆ ಮಾತ್ರ ಬಿಡುವುದಾಗಿ ಅವನಿಗೆ ತಿಳಿಸಿದೆ. "ಸಾರ್, ನಾನು ಉಪಯೋಗಿಸಿಕೊಂಡದ್ದು ರೂ. ೧೫೦೦೦ ಮಾತ್ರ. ನನಗೆ ಬರೆ ಹಾಕಬೇಡಿ ಸಾರ್" ಅಂತ ಗೋಗರೆದ. "ನೋಡು, ನೀನು ಕಳೆದುಕೊಳ್ಳುವುದು ಏನೂ ಇಲ್ಲ. ಈಗಾಗಲೇ ವಸೂಲು ಮಾಡಿರುವವರಿಂದ ನೀನು ವಸೂಲು ಮಾಡುವ ಅಗತ್ಯ ಬರುವುದಿಲ್ಲ. ವಸೂಲು ಮಾಡಿರದಿದ್ದವರಿಂದ ರಸೀದಿ ಕೊಟ್ಟು ಹಣ ಪಡೆದುಕೋ. ಹೇಗೂ ನಿನಗೆ ವಸೂಲು ಮಾಡಲು ಈ ತಿಂಗಳಿನಲ್ಲಿ ಇನ್ನೂ ಹತ್ತು ದಿವಸ ಸಮಯ ಇದೆ. ಅವರಿಂದ ಹಣ ಬರಲಿ, ಬಿಡಲಿ. ಈ ತಿಂಗಳಂತೂ ನೀನು ಪೂರ್ತಾ ಹಣ ಕಟ್ಟಲೇಬೇಕು. ಕೊಡದಿದ್ದವರಿಂದ ನಿಧಾನವಾಗಿಯಾದರೂ ನೀನು ಹಣ ಕಟ್ಟಿರುವುದರಿಂದ ವಸೂಲು ಮಾಡಿಕೊಂಡೇ ಮಾಡಿಕೊಳ್ಳುತ್ತೀಯ. ನಿನಗೆ ನಷ್ಟವೇನೂ ಆಗುವುದಿಲ್ಲ" ಎಂದೆ. ಅವನು ಎರಡು ತಿಂಗಳ ಕಾಲಾವಕಾಶ ಕೇಳಿದರೂ ನಾನು ಒಪ್ಪಲಿಲ್ಲ. ಆ ತಿಂಗಳು ಅವನು ಕಷ್ಟಪಟ್ಟು ರೂ.೨೫೦೦೦ ವಸೂಲು ಮಾಡಿ, ಉಳಿದ ರೂ. ೧೭೦೦೦ ಅನ್ನು ಸಾಲ ಮಾಡಿ ಪೂರ್ಣ ಬಾಕಿ ಮೊಬಲಗನ್ನು ಸರ್ಕಾರಕ್ಕೆ ಕಟ್ಟಿದ. ಆ ತಿಂಗಳ ಸಿಬ್ಬಂದಿ ಸಭೆಯಲ್ಲಿ ಸರ್ಕಾರಿ ಬಾಕಿಯನ್ನು ಪೂರ್ಣವಾಗಿ ವಸೂಲು ಮಾಡಿದ ಅವನನ್ನು ಅಭಿನಂದಿಸಿ ಹೂವಿನಹಾರ ತರಿಸಿ ಅವನ ಕೊರಳಿಗೆ ಹಾಕಿದಾಗ ಅವನು ತೋರಿದ್ದ ಮುಖಭಾವ ಇನ್ನೂ ನೆನಪಿಗೆ ಬರುತ್ತಿದೆ. 'ರಾಮೇಗೌಡನಂತಹವರೇ ಪೂರ್ಣ ಸರ್ಕಾರಿ ಬಾಕಿ ವಸೂಲು ಮಾಡಿರುವಾಗ ನಿಮಗೇನಾಗಿದೆ' ಎಂದು ಇತರ ಸಿಬ್ಬಂದಿಗೂ ವಸೂಲಿ ಕಾರ್ಯ ಚುರುಕುಗೊಳಿಸಲು ಹುರಿದುಂಬಿಸಿದ್ದೆ. ನಾನು ಇಲಾಖಾ ವಿಚಾರಣೆಗೆ ವರದಿಸದಿದ್ದುದಕ್ಕೆ ಕಾರಣಗಳಿದ್ದವು. ಅವನು ಹೆಚ್ಚು ವಸೂಲು ಮಾಡಿ ಕಡಿಮೆ ರಸೀದಿ ಹಾಕಿದ್ದ ಎಲ್ಲಾ ರಸೀದಿಗಳನ್ನೂ ಸಂಗ್ರಹಿಸಬೇಕಿತ್ತು. ಇಲ್ಲದಿದ್ದರೆ ಎಷ್ಟು ರಸೀದಿಗಳು ಇದ್ದವೋ ಅಷ್ಟು ಮಾತ್ರ ಆರೋಪ ಪಟ್ಟಿಯಲ್ಲಿ ಸೇರಿಸಬಹುದಾಗಿತ್ತು. ಇನ್ನೊಂದು, ಅನತಿ ಸಮಯದ ಹಿಂದೆ ಹಣ ದುರುಪಯೋಗವಾಗಿದ್ದರೂ ಲಂಚ ಪಡೆದು ವಿಚಾರಣೆಯೇ ನಡೆಯದಂತೆ ನೋಡಿಕೊಂಡಿದ್ದ ಹಿರಿಯ ಅಧಿಕಾರಿಯೇ ಆ ಸ್ಥಾನದಲ್ಲಿ ಇನ್ನೂ ಇದ್ದುದು. ಮತ್ತೊಂದು, ಈ ಕಾರಣದಿಂದಲಾದರೂ, ಸಂಪೂರ್ಣ ಸರ್ಕಾರಿ ಬಾಕಿ ವಸೂಲು ಮಾಡಲು ಸಾಧ್ಯವಿದ್ದುದು. ಅಂದಿನ ಪರಿಸ್ಥಿತಿಯಲ್ಲಿ ಇದಕ್ಕಿಂತ ಒಳ್ಳೆಯ ಮಾರ್ಗ ನನಗೆ ತೋಚಿರಲಿಲ್ಲ. ರಾಮೇಗೌಡ ಮುಂದೆ ಪೂರ್ಣ ಸೇವೆ ಸಲ್ಲಿಸಿ ನಿವೃತ್ತನೂ ಆದ, ಕೆಲವು ವರ್ಷಗಳ ಹಿಂದೆ ದೈವಾಧೀನನೂ ಆದ. ನಾನೂ ನಿವೃತ್ತನಾಗಿರುವೆ. ನನ್ನ ಮತ್ತು ರಾಮೇಗೌಡನ ಮಧ್ಯೆ ಮಾತ್ರ ಇದ್ದ ಸತ್ಯ ಈಗ ಹೊರಗೆಡವಿ ನಿರಾಳನಾಗಿರುವೆ. 
-ಕ.ವೆಂ.ನಾಗರಾಜ್.
**************
'ಜನಹಿತ' ಪತ್ರಿಕೆಯ ನನ್ನ ಅಂಕಣ 'ಜನಕಲ್ಯಾಣ'ದಲ್ಲಿ 30-04-2014ರಲ್ಲಿ ಪ್ರಕಟಿತ: