ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಫೆಬ್ರವರಿ 21, 2014

ಶ್ರಾದ್ಧ - ಏಕೆ ಮತ್ತು ಹೇಗೆ?

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು 
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಶ್ರಾದ್ಧ ಎಂಬ ಪದವನ್ನು ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ತಿಥಿ, ವೈದಿಕ, ಪುಣ್ಯಸ್ಮರಣೆ, ಶಾಂತಿ, ಉತ್ತರ ಕ್ರಿಯೆ, ಇತ್ಯಾದಿಗಳಿಗೆ ಬಳಸಲಾಗುತ್ತಿದೆ. ಆದರೆ ಶ್ರಾದ್ಧ ಎಂದರೆ ಶ್ರದ್ಧೆಯಿಂದ ಮಾಡುವ ಕೆಲಸ ಎಂದಷ್ಟೇ ಅರ್ಥ. ಶ್ರದ್ಧೆಯಿಂದ ಮಾಡುವ ಯಾವುದೇ ಕೆಲಸವೂ ಶ್ರಾದ್ಧವೇ! ಒಬ್ಬ ಶಿಕ್ಷಕ, ನೌಕರ, ಅಧಿಕಾರಿ, ಕಾರ್ಮಿಕ, ವಿದ್ಯಾರ್ಥಿ, ವ್ಯಾಪಾರಿ, ರಾಜಕಾರಣಿ, ಹೀಗೆ ಯಾರೇ ಆಗಿರಲಿ, ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದೇ ನಿಜವಾದ ಶ್ರಾದ್ಧ. ಇರಲಿ ಬಿಡಿ, ಸಾಮಾನ್ಯ ಅರ್ಥದಲ್ಲಿ ಬಳಸುವ ಶ್ರಾದ್ಧದ ಬಗ್ಗೆ ಚಿಂತಿಸೋಣ. ವೈದಿಕ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ಅಂತ್ಯ ಸಂಸ್ಕಾರವೇ ಮಾನವನ ಕೊನೆಯ ಸಂಸ್ಕಾರವಾಗಿದೆ. ಅಂತ್ಯ ಸಂಸ್ಕಾರವನ್ನು ಹಲವರು ಹಲವು ರೀತಿಯಲ್ಲಿ ಮಾಡುತ್ತಾರೆ. ತಮ್ಮ ಸಂಪ್ರದಾಯಗಳಿಗೆ ಅನುಸಾರವಾಗಿ ಕೆಲವರು ಹೂಳುತ್ತಾರೆ, ಕೆಲವರು ಸುಡುತ್ತಾರೆ, ಕೆಲವರು ಶವಪೆಟ್ಟಿಗೆಗಳಲ್ಲಿಡುತ್ತಾರೆ, ಕೆಲವರು ನದಿಯಲ್ಲಿ ತೇಲಿಬಿಡುತ್ತಾರೆ, ಕೆಲವರು ಹದ್ದುಗಳಿಗೆ ಆಹಾರವಾಗಿಸುತ್ತಾರೆ. ವೇದವು 'ಭಸ್ಮಾಂತಂ ಶರೀರಮ್||' [ಯಜು.೪೦.೧೫]-(ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ) ಎಂದು ಹೇಳುತ್ತದೆ. ಮೃತ ಶರೀರವನ್ನು ದಹನದ ಮೂಲಕ ಪಂಚಭೂತಗಳಲ್ಲಿ ಲೀನವಾಗಿಸುವುದು ವೈಜ್ಞಾನಿಕವಾಗಿ ಸೂಕ್ತವೆನಿಸುತ್ತದೆ. ಸತ್ತವರನ್ನೆಲ್ಲಾ ಹೂಳುತ್ತಾ ಹೋದರೆ ಸ್ಮಶಾನಗಳಿಗಾಗಿ ಹೆಚ್ಚು ಹೆಚ್ಚು ಭೂಮಿಯ ಅಗತ್ಯ ಬೀಳುತ್ತಾ ಹೋಗುತ್ತದೆ, ಅಲ್ಲದೆ ಪರಿಸರ ಮಾಲಿನ್ಯವೂ ಆಗುತ್ತದೆ. ನದಿಯಲ್ಲಿ ತೇಲಿಬಿಟ್ಟರೆ ಜಲಮಾಲಿನ್ಯವಾಗುತ್ತದೆ, ಹದ್ದು-ಪಕ್ಷಿಗಳಿಗೆ ಆಹಾರವಾಗಿಸಲು ಮುಕ್ತವಾಗಿರಿಸಿದರೆ ವಾಯುಮಾಲಿನ್ಯವಾಗುತ್ತದೆ. ದಹನದ ಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನು ಬಳಸಿದರೆ ದುರ್ಗಂಧದ ಹರಡುವಿಕೆ ಇಲ್ಲವಾಗುತ್ತದೆ. ಹಲವಾರು ಕಾರಣಗಳಿಗಾಗಿ ದಹನದ ಮೂಲಕ ಮಾಡುವ ಸಂಸ್ಕಾರವೇ ಸರಿಯೆಂಬ ವಾದ ಈಗ ವಿದೇಶಗಳಲ್ಲೂ ಕೇಳಿಬರುತ್ತಿದೆ. 
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ ||
     ಶ್ರಾದ್ಧ ಮಾಡುವುದು ಏತಕ್ಕಾಗಿ ಮತ್ತು ಯಾರಿಗಾಗಿ? ಯೋಚಿಸೋಣ. ದೇಹದಲ್ಲಿ ಪ್ರಾಣವಿರುವವರೆಗೂ ಅದು ವ್ಯಕ್ತಿಯಾಗಿ ಗುರುತಿಸಲ್ಪಡುತ್ತದೆ. ಪ್ರಾಣ ಹೋದ ತಕ್ಷಣದಲ್ಲಿ ಅದು ಹೆಣವೆನಿಸುತ್ತದೆ. ಆತ್ಮವಿಲ್ಲದ ಶರೀರಕ್ಕೆ ಬೆಲೆಯಿಲ್ಲ. ಅದು ಕೇವಲ ಒಂದು ಜಡವಸ್ತು. ಹೀಗಾಗಿ ಅದನ್ನು ಶೀಘ್ರವಾಗಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಇಡೀ ಜಗತ್ತನ್ನೇ ಆಳಿದ ಚಕ್ರವರ್ತಿಯ ಹೆಣವೆಂದು ಅದನ್ನು ಯಾರಾದರೂ ಇಟ್ಟುಕೊಳ್ಳಬಯಸುತ್ತಾರೆಯೇ? ಮೃತ ಶರೀರವನ್ನು ದಹನ ಮಾಡಿಯೋ, ಇನ್ನು ಯಾವುದೋ ರೀತಿಯಲ್ಲಿ ವಿಲೇವಾರಿ ಮಾಡಿದ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡಿದರೆ ಅದು ಶರೀರಕ್ಕಂತೂ ಅಲ್ಲ. ಇನ್ನು ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ಕರ್ಮಗಳು ಎಂದೆನ್ನಬಹುದೆ? ವೇದಗಳು ಆತ್ಮ ಅವಿನಾಶಿ, ಅನಾದಿ, ಅನಂತವಾದುದು ಎನ್ನುತ್ತವೆ. ತನ್ನ ಕರ್ಮಫಲಕ್ಕನುಸಾರವಾಗಿ ಜನನ-ಮರಣಗಳ ಚಕ್ರದಲ್ಲಿ ನಿರಂತರ ಸುತ್ತುತ್ತಿರುತ್ತದೆ ಎಂಬುದು ತಿಳಿದವರ ನುಡಿ. ಯಾವುದೇ ಜನ್ಮದಲ್ಲಿ ಯಾವುದೇ ಜೀವ ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಮುಂತಾದುವನ್ನು, ಅಷ್ಟೇ ಏಕೆ, ತನ್ನ ಶರೀರ ಮಾತ್ರವಲ್ಲ, ಕನಿಷ್ಠ ತಾನು ಧರಿಸಿದ್ದ ವಸ್ತ್ರವನ್ನಾಗಲೀ ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿದ್ದಿಲ್ಲ. ವೇದದ ಈ ಮಂತ್ರ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಜೀವಿ ತಾನು ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗನುಸಾರವಾಗಿ ಫಲ ಅನುಭವಿಸುವುದು ಶತಸ್ಸಿದ್ಧವಂದಾದಾಗ ಅದನ್ನು ಬೇರೊಬ್ಬರು, ಮಧ್ಯವರ್ತಿಗಳು ಶ್ರಾದ್ಧಾದಿ ಕರ್ಮಗಳ ಮೂಲಕ ಬದಲಾಯಿಸಲು ಸಾಧ್ಯವೇ? ಸಾಧ್ಯವೆಂದಾದಲ್ಲಿ, ಇದು ವೇದಗಳು ಮತ್ತು ಭಗವದ್ಗೀತೆ ಉಪದೇಶಿಸುವ ನೀತಿಗೆ ವಿರುದ್ಧವಾಗುತ್ತದೆ. ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿದು ಆರೋಗ್ಯ ಸರಿಪಡಿಸಿಕೊಳ್ಳಬೇಕು. ಬೇರೆ ಯಾರೋ ಔಷಧಿ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬಳಕೆಯಲ್ಲಿರುವ ಶ್ರಾದ್ಧಾದಿ ಕರ್ಮಗಳಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆಂಬುದು, ಸಾಮಾನ್ಯ ಜ್ಞಾನವನ್ನು, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಅಲ್ಲಗಳೆಯುವ ಸಂಗತಿ. ಬದುಕಿದ್ದಾಗ ಏನು ಬೇಕಾದರೂ ಮಾಡಿಬಿಡಬಹುದು, ಯಾರ ತಲೆಯನ್ನಾದರೂ ಒಡೆದು ಸಂಪತ್ತು ದೋಚಬಹುದು, ಸತ್ತ ನಂತರದಲ್ಲಿ ಮಕ್ಕಳು ಲಕ್ಷಾಂತರ ರೂ. ವೆಚ್ಚ ಮಾಡಿ ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬ ವಾದದಂತೆಯೇ ಇದು! ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯ್ಟೇಷ್ಟಿ ಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳಿಗೆ ಈಗ ತಿಳಿದಿರುವಂತೆ ಸಮರ್ಥನೆ ಕಾಣುವುದಿಲ್ಲ. ಇಂತಹ ಯಾವುದೇ ಕ್ರಿಯೆಗಳು ಮೃತರ ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.
     ಶ್ರಾದ್ಧ ಕರ್ಮಾದಿಗಳನ್ನು ಮಾಡುವುದರಿಂದ ಆತ್ಮ ಸದ್ಗತಿ ಪಡೆಯುವುದಿಲ್ಲವೆಂದಾದರೆ ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಈ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರು ಪೂರ್ಣ ಮಾಡದೆ ಉಳಿಸಿದ್ದ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಜವಾದ ಅರ್ಥದ ಶ್ರಾದ್ಧವೆನಿಸುತ್ತದೆ. ಮೃತರ ನೆನಪಿನಲ್ಲಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. ಶಾಶ್ವತವಲ್ಲದ ಜೀವನದ ಅನುಭವವನ್ನು ಈ ಕ್ರಿಯೆ ಉಂಟುಮಾಡುತ್ತದೆ. ಈ ವೇದಮಂತ್ರ ಹೇಳುತ್ತದೆ:
ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ || (ಋಕ್.೧೦.೧೪.೮.)
     ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕನಾದ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ, ಶರೀರದೊಂದಿಗೆ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ?
     ಅಂತ್ಯ ಸಂಸ್ಕಾರದ ಸಂದರ್ಭದ ಕ್ರಿಯೆಗಳಿಂದ ಜೀವನದ ನಶ್ವರತೆ ಗೋಚರವಾಗುತ್ತದೆ. ಇರುವುದು ಮೂರು ದಿನ, ಅಷ್ಟರಲ್ಲಿ ನಾವು ಚಿರಂಜೀವಿಗಳಂತೆ ವರ್ತಿಸುತ್ತೇವಲ್ಲಾ, ಮಾಡಬಾರದ್ದನ್ನೆಲ್ಲಾ ಮಾಡುತ್ತೇವಲ್ಲಾ ಎಂಬ ಅರಿವು ಮೂಡಿಸುತ್ತದೆ. ಮುಂದಾದರೂ ಅರ್ಥಪೂರ್ಣವಾಗಿ ಬಾಳೋಣವೆಂಬ ಭಾವನೆ ಬರಿಸುತ್ತದೆ. ಇದನ್ನು ಸ್ಮಶಾನ ವೈರಾಗ್ಯವೆನ್ನುತ್ತಾರೆ. ವಿಪರ್ಯಾಸವೆಂದರೆ ಈ ಭಾವನೆ ಹೆಚ್ಚು ಕಾಲ ಇರುವುದಿಲ್ಲ. ನಂತರ ನಾಯಿಯ ಬಾಲದ ಡೊಂಕಿನಂತೆ ಹಿಂದಿನ ಮಾಮೂಲು ಜೀವನದಲ್ಲಿ ತೊಡಗಿಕೊಳ್ಳುತ್ತೇವೆ. 
     ಮೃತರ ಆತ್ಮ ಸದ್ಗತಿ ಅರ್ಥಾತ್ ಮೋಕ್ಷ ಪಡೆಯಲೆಂಬ ಉದ್ದೇಶದಿಂದ ಶ್ರಾದ್ಧ ಮಾಡುವುದೇನೋ ಸರಿ. ಆದರೆ ಹಿಂದೆಯೇ ಹೇಳಿದಂತೆ ಆತ್ಮ ಮೋಕ್ಷ ಪಡೆಯಲು ಸ್ವಪ್ರಯತ್ನದಿಂದ ಮಾತ್ರ ಸಾಧ್ಯ, ಇತರರು ಸದ್ಗತಿ ನೀಡಲಾರರು. ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ಹಾಗಾದರೆ ಈ ಶ್ರಾದ್ಧವನ್ನು ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಅವರು ಜೀವಂತವಿದ್ದಾಗ ಕೀಳಾಗಿ ಕಂಡು, ಅವಮಾನಿಸಿ, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಏನು ಪ್ರಯೋಜನ? ಜಗಳದ ಸಂದರ್ಭದಲ್ಲಿ ಬಳಸುವ 'ನಿನ್ನ ತಿಥಿ ಮಾಡಿಬಿಡ್ತೀನಿ' ಎಂಬ ಮಾತಿಗೂ ಈ ರೀತಿಯ ಕೃತಿಗೂ ಹೆಚ್ಚು ವ್ಯತ್ಯಾಸವೇನಿಲ್ಲ. ಸತ್ತ ಮೇಲೆ ಭೂತ-ಪ್ರೇತವಾಗಿ ಕಾಡಿಯಾರು ಎಂಬ ಭಯದಿಂದ ಈ ಕ್ರಿಯೆಗಳನ್ನು ಮಾಡುವವರೂ ಇರುತ್ತಾರೆ. ಇಂತಹ ಆಚಾರಗಳಲ್ಲಿ ನಂಬಿಕೆಯಿಲ್ಲದವರೂ ಸಹ ಇತರರು ಏನಾದರೂ ಅಂದುಕೊಂಡಾರು ಎಂಬ ಲೋಕಾಪವಾದದ ಭಯದಿಂದ ಮಾಡುವವರೂ ಇರುತ್ತಾರೆ. ಮಾಡಿದರೆ ಕಳೆದುಕೊಳ್ಳುವುದೇನು ಎಂದು ಮಾಡುವವರೂ ಸಿಗುತ್ತಾರೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಧರಿಸುವ ಯಜ್ಞೋಪವೀತದ ಮೂರು ಎಳೆಗಳು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಅವುಗಳನ್ನು ತೀರಿಸುವ ಸಂಕಲ್ಪದ ಸಂಕೇತ. ಇವು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತವೆಂದರೆ ಅದಕ್ಕೆ ಅರ್ಥವಿಲ್ಲ.  ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿರ್ಮಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ರೀತಿಯಾಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ನಿಜವಾದ ಶ್ರಾದ್ಧವೆಂದರೆ ಇದೇ! ಸತ್ಸಂಗಗಳು, ವೇದಾಧ್ಯಾಯಿ ಸುಧಾಕರ ಶರ್ಮರು, ಪಂ. ಸುಧಾಕರ ಚತುರ್ವೇದಿಯವರು ಮುಂತಾದವರ ಮಾರ್ಗದರ್ಶನ, ಓದಿದ ಪುಸ್ತಕಗಳು, ಇತ್ಯಾದಿ ಪ್ರಭಾವಗಳಿಂದ ಹಾಗೂ ಮನನ, ಮಂಥನಗಳಿಂದ ಒಡಮೂಡಿದ ಮನದ ಭಾವನೆಗಳನ್ನು ಹಂಚಿಕೊಂಡಿರುವೆ. ಶ್ರಾದ್ಧವನ್ನು ಹೇಗೆ ಮಾಡಬೇಕೆಂಬುದು ಓದುಗರ ವಿವೇಚನೆಗೆ ಬಿಟ್ಟಿದ್ದು.
     ಕೆಲವು ಪ್ರಸ್ತುತವೆನಿಸಿದ ಘಟನೆಗಳನ್ನು ನೋಡೋಣ. ಸಂನ್ಯಾಸಿಯ ರೀತಿಯಲ್ಲಿ ಬಾಳಿ ಅನೇಕರಿಗೆ ಜೀವನ ದರ್ಶನ ಮಾಡಿಸಿದ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾವುದೇ ಶ್ರಾದ್ಧಾದಿ ಕರ್ಮಗಳಲ್ಲಿ ನಂಬಿಕೆಯಿರಿಸಿರಲಿಲ್ಲ. 'ಸತ್ತಾಗ ಬೆಂಕಿಗೆ ಬಿಸಾಕಿ' ಎನ್ನುತ್ತಿದ್ದವರು. ಅವರ ಅಭಿಲಾಷೆಯಂತೆಯೇ ನಡೆಯಿತು. ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರೂ ಸಹ ತಾವು ಸತ್ತ ನಂತರದಲ್ಲಿ ಯಾವುದೇ ಸಾಂಪ್ರದಾಯಿಕ ಕ್ರಿಯೆಗಳನ್ನು ಮಾಡದೇ, ತಮ್ಮ ಶರೀರವನ್ನು ಅಗ್ನಿಗೆ ಅರ್ಪಿಸಬೇಕೆಂದು ಬಯಸಿದ್ದರು. ಹಾಗೆಯೇ ಆಯಿತು. ಕೆಲವು ವರ್ಷಗಳ ಹಿಂದೆ ಮೃತ ತಂದೆಯವರ ದೇಹವನ್ನು ಮೃತರ ಇಚ್ಛೆಯಂತೆಯೇ ಅವರ ಮಗ ಡಾ. ಮಹಾಂತೇಶ ರಾಮಣ್ಣವರ್ ಅವರೇ ಬೆಳಗಾವಿಯ ಕಂಕನವಾಡಿ ಆಯರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೃತರ ಎರಡನೆಯ ವರ್ಷದ ಪುಣ್ಯತಿಥಿಯ ದಿನದಂದು ಅಂಗವಿಚ್ಛೇದನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಹಾಸನದ ಪತ್ರಕರ್ತ ಮಿತ್ರ ಮತ್ತು ಬಂಧು ಹೆಚ್.ಎಸ್. ಪ್ರಭಾಕರರವರು ತಮ್ಮ ಕಿರಿಯ ಸಹೋದರ ರಮೇಶಬಾಬು ನಿಧನರಾದ ಸಂದರ್ಭದಲ್ಲಿ ಅವರ ಇಚ್ಛೆಯಂತೆ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ಸಾಂಪ್ರದಾಯಿಕವಾಗಿ ಮಾಡಿದರೂ ವೈಕುಂಠ ಸಮಾರಾಧನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿದರು. ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದಿದ್ದವರು ರಮೇಶಬಾಬು. ಮೂರ್ಛೆ ರೋಗದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವುದರೊಂದಿಗೆ ಅನುಸರಿಸಬೇಕಾದ ಚಿಕಿತ್ಸಾಕ್ರಮದ ಬಗ್ಗೆ ಡಾ. ಹಾಲಪ್ರಶಾಂತರಿಂದ, ದೇಹದಾನದ ಮಹತ್ವದ ಕುರಿತು ಹಿಮ್ಸ್ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರಿಂದ ಮತ್ತು ವೇದದ ಹಿನ್ನೆಲೆಯಲ್ಲಿ ದೇಹ, ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂದು ವಿವರಿಸಲು ಬೇಲೂರಿನ ವೇದಾಧ್ಯಾಯಿ ವಿಶ್ವನಾಥ ಶರ್ಮರಿಂದ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಿ ಪ್ರಭಾಕರ್ ವಿಶಿಷ್ಟತೆ ಮೆರೆದರು. ವೈಯಕ್ತಿಕವಾಗಿ ನಾನಂತೂ ಸತ್ತ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳಿಗೆ ಸಮಯ, ಹಣ, ಶ್ರಮ ವಿನಿಯೋಗಿಸದೆ ಜನೋಪಯೋಗಿ ಕಾರ್ಯಗಳಿಗೆ ಮನ ಹರಿಸುವಂತೆ ನನ್ನ ಬಂಧುಗಳಿಗೆ ತಿಳಿಸಿರುವೆ. ತಲೆ ತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವತ್ತ ಮುನ್ನಡೆಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.
[ಚಿತ್ರಕೃಪೆ: http://technoayurveda.wordpress.com/2010/11/11/dissect/]

ದಿನಾಂಕ 10-02-2014ರ 'ಜನಮಿತ್ರ' ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.

ಸೋಮವಾರ, ಫೆಬ್ರವರಿ 10, 2014

'ನಾನಿದ್ದೂ ನನ್ನದೇನಿಲ್ಲ' - ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೆ ಒಂದು ಅಪೂರ್ವ ಶ್ರದ್ಧಾಂಜಲಿ

     ಶ್ರೀಪಾದ ಪೂಜಾರರ 'ನಾನಿದ್ದೂ ನನ್ನದೇನಿಲ್ಲ' ಕೃತಿ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕುರಿತ ನೆನಪುಗಳನ್ನು ಪೋಣಿಸುತ್ತಾ ಅವರ ಧೀಮಂತ ವ್ಯಕ್ತಿತ್ವವನ್ನು ಕಣ್ಣ ಮುಂದೆ ನಿಲ್ಲಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ೨೩-೦೩-೨೦೧೩ರಲ್ಲಿ ತಮ್ಮ ೯೭ನೆಯ ವಯಸ್ಸಿನಲ್ಲಿ ಕಣ್ಮರೆಯಾದ ಅಪೂರ್ವ ಚೇತನಕ್ಕೆ ಸಲ್ಲಿಸಿದ ಅನುಪಮ ಶ್ರದ್ಧಾಂಜಲಿಯಾಗಿದೆ. ಬೆಂಗಳೂರಿನ ಕಾಮಧೇನು ಪ್ರಕಾಶನದಿಂದ ಪ್ರಥಮವಾಗಿ ಮೇ, ೨೦೧೩ರಲ್ಲಿ ಪ್ರಕಾಶಿತವಾದ ೨೧೬ ಪುಟಗಳ ಈ ಕೃತಿ ಕೇವಲ ೭ ತಿಂಗಳುಗಳಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆಯೆಂದರೆ "ಶೇಷವೇ ಸರಿ. ಬೆಳಗೆರೆ ಕೃಷ್ಣಶಾಸ್ತ್ರಿಗಳ ವ್ಯಕ್ತಿತ್ವ ಜನರ ಮೇಲೆ ಬೀರಿದ್ದ ಪ್ರಭಾವದಿಂದ ಇದು ಸಾಧ್ಯವಾಗಿದೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಹೆಗ್ಗೆರೆಯ ಶ್ರೀ ನಾಗರಾಜು ಮತ್ತು ಶ್ರೀಮತಿ ಗಾಯತ್ರಿ ನಾಗರಾಜು ದಂಪತಿಗಳು ಶಿವಮೊಗ್ಗದ ತಮ್ಮ ನೂತನ ಮನೆ 'ನಂದನ'ದ ಗೃಹಪ್ರವೇಶದ ಸಂದರ್ಭದಲ್ಲಿ ಈ ಪುಸ್ತಕವನ್ನು ಸಮಾರಂಭಕ್ಕೆ ಆಗಮಿಸಿದ್ದ ಬಂಧು-ಮಿತ್ರರುಗಳಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದರು. ಅವರ ಅಳಿಯ ಶಿವಮೊಗ್ಗದ ಡಾ. ವೆಂಕಟಕೃಷ್ಣರವರಿಂದ ನನಗೆ ಈ ಪುಸ್ತಕದ ಪ್ರತಿ ತಲುಪಿದ್ದು, ಓದಲು ಪ್ರಾರಂಭಿಸಿದಾಗ ಸುಲಲಿತವಾಗಿ ಓದಿಸಿಕೊಂಡುಹೋದ ಪುಸ್ತಕವಿದು. ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಓದಿದವರ ಮೇಲೆ ಮುಕುಂದೂರು ಸ್ವಾಮಿಗಳ ಬಗ್ಗೆ ಗೌರವ ಮತ್ತು ಅವರ ಒಡನಾಡಿಯಾಗಿದ್ದ ಕೃಷ್ಣಶಾಸ್ತ್ರಿಗಳ ಬಗ್ಗೆ ಅಭಿಮಾನ ಮೂಡದೇ ಇರಲು ಸಾಧ್ಯವೇ ಇಲ್ಲ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರು ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದಂತೆ ಕೃಷ್ಣಶಾಸ್ತ್ರಿಗಳು 'ಎಲೆಯ ಮರೆಯ ಅಲರು'.
     ಕೃಷ್ಣಶಾಸ್ತ್ರಿಗಳ ಕುರಿತ ನೆನಪುಗಳ ಎಳೆಗಳನ್ನು ಕೂಡಿಸುತ್ತಾ ಅವರ ವ್ಯಕ್ತಿತ್ವದ ಅನಾವರಣ ಮಾಡುವ ಲೇಖಕರ ರೀತಿ ಕೃಷ್ಣಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಪರಿಚಯ ಮಾಡಿದ ರೀತಿಗೆ ಹೋಲುತ್ತದೆ. 'ಯೇಗ್ದಾಗೆಲ್ಲಾ ಐತೆ' ಪುಸ್ತಕ ಓದಿ ಪ್ರಭಾವಿತರಾಗಿದ್ದ ಲೇಖಕರು ತಮಗೆ ಕೃಷ್ಣಶಾಸ್ತ್ರಿಗಳ ಪರಿಚಯ ಹೇಗೆ ಪ್ರಾರಂಭವಾಯಿತೆಂದು ವಿವರಿಸುವುದರೊಂದಿಗೆ ನೆನಪುಗಳ ಸರಮಾಲೆ ಆರಂಭವಾಗುತ್ತದೆ. ಮೊದಲ ಭೇಟಿಯಲ್ಲಿ ತಾವು ಭಾವಿಸಿದ್ದ ರೀತಿಯಲ್ಲಿ ಕಂಡು ಬರದಿದ್ದ ಈ ಬಿಳಿಬಟ್ಟೆಯ ವ್ಯಕ್ತಿಯ ಬಗ್ಗೆ ನಿರಾಶರಾಗಿದ್ದ ಅವರು ಕ್ರಮೇಣ ಶಾಸ್ತ್ರಿಗಳ ಒಳವ್ಯಕ್ತಿತ್ವದ ಅನುಭವ ಪಡೆದಾಗ ಧನ್ಯತೆಯ ಭಾವಕ್ಕೆ ಬದಲಾದುದನ್ನು ವಿವರಿಸಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ತೀವ್ರ ಹೃದ್ರೋಗದಿಂದ ಬಳಲಿ ಐ.ಸಿ.ಯು. ನಲ್ಲಿ ಇದ್ದಾಗ ಅವರ ಕೈಗೆ ಹಾಕಿದ್ದ ಡ್ರಿಪ್ಸ್ ಅಲ್ಲಾಡದಂತೆ ಇರಲು ಕೈಯನ್ನು ಹಿಡಿದು ಲೇಖಕರು ಕುಳಿತಿದ್ದಾಗ ಒಬ್ಬರು ಬಂದು 'ನಾನು ಸ್ವಲ್ಪ ಹೊತ್ತು ಅವರ ಕೈ ಹಿಡಿದುಕೊಳ್ಳಲೇ' ಎಂದು ಕೋರಿ ಅವಕಾಶ ಪಡೆದಿದ್ದರು. ಶಾಸ್ತ್ರಿಗಳು ಕಣ್ಣು ತೆರೆದು ಅವರನ್ನು ನೋಡಿ ಮುಗುಳ್ನಕ್ಕು ಮತ್ತೆ ಕಣ್ಣು ಮುಚ್ಚಿ ಮಲಗಿದರು. ಅರ್ಧ ಗಂಟೆಯ ನಂತರ ಲೇಖಕ ಬಂದಾಗ ಇನ್ನೂ ಸ್ವಲ್ಪ ಹೊತ್ತು ಇರುವುದಾಗಿ ಹೇಳಿದ್ದ ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ಹಾಗೆ ಕುಳಿತಿದ್ದರು. ಆ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್.ಪಿ. ಆಗಿದ್ದ ಐ.ಪಿ.ಎಸ್. ಅಧಿಕಾರಿ ಶ್ರೀ ರಾಮಕೃಷ್ಣರವರು. ಓರ್ವ ಸಾಮಾನ್ಯ ಶಿಕ್ಷಕರಾಗಿದ್ದವರು ಯಾವ ಮಟ್ಟಕ್ಕೆ ಬೆಳೆದಿದ್ದರು ಎಂಬುದನ್ನು ಸೂಚಿಸುವ ಒಂದು ಸಣ್ಣ ಘಟನೆಯಿದು.
     ಈ ಬಿಳಿಬಟ್ಟೆಯ ಸಂನ್ಯಾಸಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಈ ಚಟುವಟಿಕೆಗಳ ಸಂದರ್ಭದ ಘಟನೆಗಳು ಒಂದಕ್ಕಿಂತಾ ಒಂದು ರೋಚಕವಾಗಿವೆ. ತಂದೆ ಸಂಸ್ಕೃತ ವಿದ್ವಾಂಸರಾಗಿದ್ದ ಚಂದ್ರಶೇಖರ ಶಾಸ್ತ್ರಿಗಳ ಗಾಢ ಪ್ರಭಾವ ಕೃಷ್ಣಶಾಸ್ತ್ರಿಗಳ ಮೇಲೆ ಆಗಿದೆ. ಜಾತಿ, ಮತ, ವರ್ಗ, ವರ್ಣ ಮುಂತಾದುವುಗಳಿಂದ ಗಾವುದ ದೂರವಿದ್ದ ಶಾಸ್ತ್ರಿಗಳ ಅಂತರಂಗ ಅವರ ಕೃತಿಗಳಲ್ಲಿ, ನಾಟಕಗಳಲ್ಲಿ, ನಡೆನುಡಿಗಳಲ್ಲಿ ಎದ್ದು ಕಾಣುವಂತಹದು. ಮುಕುಂದೂರು ಸ್ವಾಮಿಗಳ ಬಗ್ಗೆ ಮತ್ತು ರಮಣರ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುತ್ತಿದ್ದವರು. ಅವರ ಬದುಕೇ ಒಂದು ತೆರೆದ ಪುಸ್ತಕ. 'ಮಕ್ಕಳಿಗೆ ಎರಡಕ್ಷರ ಕಲಿಸು, ನಾಲ್ಕು ತುತ್ತು ಅನ್ನ ಹಾಕು' ಎಂಬ ತಂದೆಯ ಮರಣಕಾಲದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ ಶಾಸ್ತ್ರಿಗಳು, ಈ ಸಾಧನೆ ಮಾಡುವಾಗ ಪಟ್ಟ ಕಷ್ಟ-ನಷ್ಟಗಳು, ಶ್ರಮ, ಸಾಫಲ್ಯ ಇವುಗಳನ್ನು ತೆರೆದಿಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ೧೯೬೬ರಲ್ಲಿ ಹೀಗೆ ಪ್ರಾರಂಭವಾದದ್ದು ಬೆಳಗೆರೆಯ 'ಶ್ರೀ ಶಾರದಾ ಮಂದಿರ ವಿದ್ಯಾಸಂಸ್ಥೆ'. ತಮ್ಮ ವಿರೋಧಿಗಳಿಂದಲೂ ಮನ್ನಣೆ ಗಳಿಸಿದ ಕುರಿತ ಪ್ರಸಂಗಗಳು ಆಶ್ಚರ್ಯ ಮೂಡಿಸುತ್ತವೆ. ತಮ್ಮ ನೇರ ಮತ್ತು ದಿಟ್ಟ ನಡೆ ಮತ್ತು ಮಾತುಗಳಿಂದ ಸಾಕಷ್ಟು ವಿರೋಧಿಗಳನ್ನೂ ಹೊಂದಿದ್ದ ಅವರಿಗೆ ಜೀವ ಬೆದರಿಕೆ ಇದ್ದುದನ್ನು ಕಂಡ ಜಿಲ್ಲಾ ಪೋಲಿಸ್ ಅಧಿಕಾರಿ ಶ್ರೀ ಕೆ.ಆರ್. ಶ್ರೀನಿವಾಸನ್ ಅವರು ಶಾಸ್ತ್ರಿಗಳಿಗೆ ತಮ್ಮ ಗುಡಿಸಲ ವಾಸ ಬಿಟ್ಟು ವಾಸಸ್ಥಳವನ್ನು ಬದಲಾಯಿಸಲು ಹೇಳಿದ್ದರೂ ಅವರು ಕೇಳಲಿಲ್ಲ. ಅವರ ಮಾತಿಗೆ ಬೆಲೆ ಕೊಡದಿದ್ದಾಗ ಆ ಅಧಿಕಾರಿ ಕೆರಳಿ, 'ಇದರ ಪರಿಣಾಮ ನೆಟ್ಟಗಿರುವುದಿಲ್ಲ. ನೀವು ಕಂಬಿ ಎಣಿಸಬೇಕಾಗುತ್ತದೆ' ಎಂದು ಬೆದರಿಸಿದ್ದರು. ಶಾಸ್ತ್ರಿಗಳು, 'ಸತ್ಯ ಎಂಬುದೊಂದಿದ್ದು ಅದು ಸತ್ತು ಹೋದರೆ ಕಂಬಿ ಎಣಿಸಲು ತಯಾರಾಗಿದ್ದೇನೆ ಬಿಡಿ ಸಾರ್' ಎಂದಿದ್ದರು. ಧಡಕ್ಕನೆ ಎದ್ದು ಮನೆಯ ಒಳಗೆ ಹೋದ ಅಧಿಕಾರಿ ತಮ್ಮನ್ನು ಬಂಧಿಸಲು ಬೇಡಿ ತರಲು ಹೋಗಿದ್ದಾರೆ ಎಂದು ಶಾಸ್ತ್ರಿಗಳು ಅಂದುಕೊಂಡಿದ್ದರೆ, ಅಧಿಕಾರಿ ಬರುತ್ತಾ ಎರಡು ಲೋಟ ಕಾಫಿ ಹಿಡಿದುಕೊಂಡು ಬಂದಿದ್ದರು. ಶಾಸ್ತ್ರಿಯವರ ಮೇಲಿನ ಅಭಿಮಾನದಿಂದ ಒರಟಾಗಿ ನಡೆದುಕೊಂಡಿದ್ದಾಗಿಯೂ ತಿಳಿಸಿ ಕ್ಷಮಿಸಲು ಕೇಳುವುದರೊಂದಿಗೆ ಜಾಗರೂಕರಾಗಿ ಇರಲು ಕೇಳಿಕೊಂಡಿದ್ದರು. ಇಂತಹ ನೆನಪುಗಳ ಮೂಟೆಯನ್ನೇ ಈ ಪುಸ್ತಕ ಹೊಂದಿದೆ. 
     ಹೆಸರು ಬೆಳಗೆರೆ ಕೃಷ್ಣಶಾಸ್ತ್ರಿಯಾದರೂ ಒಂದು ಅಹಿತಕರ ಘಟನೆಯಿಂದ ಬೆಳಗೆರೆಯಿಂದ ಉಟ್ಟ ಬಟ್ಟೆಯಲ್ಲೇ ಹೊರಬಂದಿದ್ದ ಅವರು ತಮ್ಮ ಜಮೀನಿನಲ್ಲೇ ಒಂದು ಬಾಗಿಲಿಲ್ಲದ ಗುಡಿಸಲು ಕಟ್ಟಿಕೊಂಡು ಜೀವನದ ಬಹುಭಾಗ, ಸುಮಾರು ೪೫ ವರ್ಷಗಳನ್ನು ಅಲ್ಲಿ ಕಳೆದಿದ್ದರು. ವಿದ್ಯಾಮಂದಿರ ಮತ್ತು ಹಾಸ್ಟೆಲನ್ನು ಪೋಷಿಸುತ್ತಿದ್ದ ಜಮೀನಿನಲ್ಲೇ ವಾಸವಿದ್ದು ಇಪ್ಪತ್ತನಾಲ್ಕು ಗಂಟೆಗಳೂ ಜಾಗೃತನಾಗಿದ್ದ ಶಿಕ್ಷಕರಾಗಿದ್ದ ಅವರ ಬದುಕಿನ ರೀತಿಯನ್ನು ರೂಪಿಸಿಬಿಟ್ಟಿದ್ದವರು ರಮಣರು, ಮುಕುಂದೂರು ಸ್ವಾಮಿಗಳು ಮತ್ತು ಗಾಂಧೀಜಿ ಎಂದರೆ ಅತಿಶಯೋಕ್ತಿಯಲ್ಲವೆಂಬುದನ್ನು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ. 'ತಂದೆ ಚಂದ್ರಶೇಖರ ಶಾಸ್ತ್ರಿಗಳಿಗೆ ಗುಡಿಸಲೇ ಇರಲಿಲ್ಲ, ಮಗನ ಗುಡಿಸಲಿಗೆ ಬಾಗಿಲೇ ಇರಲಿಲ್ಲ' - ಎಂಬುದನ್ನು ಹೇಳುತ್ತಾ ಅನಿಕೇತನರಾದ ತಂದೆ, ನಿಕೇತನವಿದ್ದರೂ ಅದನ್ನು ಬಯಲಾಗಿಸಿದ ಮಗನ ಬಗ್ಗೆ ಕೃಷ್ಣಮೂರ್ತಿ ಹನೂರರು ಚಂದ್ರಶೇಖರ ಶಾಸ್ತ್ರಿಗಳ ಪುತ್ಥಳಿ ಬಿಡುಗಡೆ ಮಾಡುವಾಗ ಹೇಳಿದ ಮಾತಿನ ಉಲ್ಲೇಖ ಗಮನ ಸೆಳೆಯುತ್ತದೆ. ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಪತ್ನಿವಿಯೋಗವಾದಾಗ ಪುನರ್ವಿವಾಹದ ಪ್ರಸ್ತಾಪ ಬರಬಾರದೆಂದು ಗಟ್ಟಿಯಾಗಿದ್ದ ತಮ್ಮ ಹಲ್ಲುಗಳನ್ನು ಕೀಳಿಸಿಕೊಂಡು ಅಕಾಲವೃದ್ಧಾಪ್ಯ ಆವಾಹಿಸಿಕೊಂಡಿದ್ದ ಶಾಸ್ತ್ರಿಗಳ ವಿಲಕ್ಷಣ ನಡೆ ಗರಬಡಿಸುತ್ತದೆ. ತಂಗಿ ಪಾರ್ವತಮ್ಮನ ಒತ್ತಾಯದಿಂದ ಕಟ್ಟಿಕೊಂಡಿದ್ದ ಹಲ್ಲಿನ ಸೆಟ್ಟನ್ನೂ ವೇದಾವತಿ ನದಿಗೆ ಅರ್ಪಿಸಿ ಕೈ ತೊಳೆದುಕೊಂಡಿದ್ದ ಅವರ ಚರ್ಯೆ ಬೆರಗು ಮೂಡಿಸುತ್ತದೆ. ಕಾಮನಿಗ್ರಹಕ್ಕೆ ಇದು ಅವರು ಕಂಡುಕೊಂಡಿದ್ದ ರೀತಿಯೇ, ಹರಯದಲ್ಲೂ ಕಾಮ ಅವರನ್ನು ಕಾಡಿರಲಿಲ್ಲವೇ ಎಂಬ ಲೇಖಕರ ಪ್ರಶ್ನೆಗೆ ಶಾಸ್ತ್ರಿಗಳು ಕೊಟ್ಟಿದ್ದ ಉತ್ತರವೆಂದರೆ, 'ಹರೆಯದಲ್ಲೂ ಕಾಮ ನನ್ನನ್ನು ಕಾಡಲಿಲ್ಲ. ರಮಣರ ದರ್ಶನವಾದ ನಂತರ ಮನಸ್ಸು ಆ ಕಡೆ ಎಳೆಯಲೇ ಇಲ್ಲ' ಎಂಬುದು! ತಮ್ಮ ಎದುರಿಗೆ ಬಂದ ಹಾಲುಹಲ್ಲು ಬಿದ್ದ ಪುಟ್ಟಮಕ್ಕಳನ್ನು ಕಂಡಾಗ ಶಾಸ್ತ್ರಿಗಳು ತಮಾಷೆ ಮಾಡುತ್ತಿದ್ದರಂತೆ, "ನೋಡು, ನಿನಗೆ ಮತ್ತೆ ಹಲ್ಲು ಹುಟ್ಟಿಬಂದು ದೊಡ್ಡವನಾಗುತ್ತೀಯ. ನನಗೆ ಹಲ್ಲು ಬರುವುದೇ ಇಲ್ಲ. ನಾನು ಮಗುವಾಗಿಯೇ ಇರುತ್ತೇನೆ". ಸ್ತ್ರೀಯರ ಕುರಿತ ಇವರ ಭಾವನೆ ಅರ್ಥ ಮಾಡಿಕೊಳ್ಳಬೇಕೆಂದರೆ ಇನ್ನೊಂದು ಘಟನೆ ಉಲ್ಲೇಖಿಸಬೇಕು. ಚಿತ್ರದುರ್ಗದ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಉಷಾಲತಾ ಅವರಿಗೆ ಭದ್ರಾವತಿಗೆ ವರ್ಗವಾದ ಸಂದರ್ಭದಲ್ಲಿ ನಡೆದ ಬೀಳ್ಕೊಡುಗೆ ಸಂದರ್ಭದಲ್ಲಿ ಶಾಸ್ತ್ರಿಗಳೂ ಇಚ್ಛೆಪಟ್ಟು ಹೋದಾಗ ಅವರನ್ನು ಗೌರವದಿಂದ ವೇದಿಕೆಯಲ್ಲಿ ಕೂರಿಸಿದ್ದರು. ಉಷಾಲತಾ ಅವರಿಗೆ ಶಾಸ್ತ್ರಿಗಳ ಬಗ್ಗೆ ಗೌರವ ಮತ್ತು ಆತ್ಮೀಯತೆಯ ಸಂಬಂಧವಿತ್ತು. ಅಂದು ಮಾತನಾಡಿದವರೆಲ್ಲರೂ ಶಾಸ್ತ್ರಿಗಳು ಉಷಾಲತಾ ಅವರ ಪಿತೃಸಮಾನರೆಂದು ಹೇಳಿದ್ದರು. ಶಾಸ್ತ್ರಿಗಳ ಮಾತನಾಡುವ ಸರದಿ ಬಂದಾಗ ಅವರು ಹೇಳಿದ್ದರು, "ಮಾತನಾಡಿದವರೆಲ್ಲರೂ ಒಂದು ತಪ್ಪು ಮಾಡಿದ್ದಾರೆ. ಉಷಾಲತಾ ನನ್ನ ಮಗಳ ಸಮಾನ ಎಂದಿದ್ದಾರೆ. ಅದು ತಪ್ಪು. ಅವರು ನನ್ನ ತಾಯಿ".
     ಎಸ್.ಎಲ್. ಭೈರಪ್ಪನವರಿಗೆ ಸರಸ್ವತೀ ಸಮ್ಮಾನ್ ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಲು ತುಡಿದವರು ಶಾಸ್ತ್ರಿಗಳು. ಭೈರಪ್ಪನವರು 'ಹಿರಿಯರು ತೊಂದರೆ ತೆಗೆದುಕೊಳ್ಳಬಾರದೆಂದೂ, ತಾವೇ ಬರುವುದಾಗಿಯೂ' ತಿಳಿಸಿದರೂ ಅವರನ್ನು ಕಾಣಲು ಮೈಸೂರಿಗೇ ಹೋಗಿದ್ದರು. ಭೈರಪ್ಪನವರೂ ಶಾಸ್ತ್ರಿಗಳ ಬಗ್ಗೆ ಗೌರವಭಾವನೆ ಹೊಂದಿದ್ದು ಎರಡೆರಡು ಸಲ ಶಾಸ್ತ್ರಿಗಳ ಗುಡಿಸಲಿಗೆ ಬಂದು, ಅಲ್ಲೇ ಕೆಲವು ದಿನಗಳು ಕಳೆದಿದ್ದರು. ಅನಗತ್ಯ ಮಾತುಗಳಿಗಿಂತ ಮೌನದ ಮಹತ್ವ ಸಾರುವ ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ ಬರುವ ಮಹದೇವಯ್ಯನವರು ನಿಜವಾಗಲೂ ಇದ್ದವರು. ಮಹದೇವಯ್ಯನವರು ಆಗಾಗ ಹೇಳುತ್ತಿದ್ದ ಮಾತು, "ಉತ್ಸವ ದೇವರು ಊರಾಡಿದಷ್ಟೂ ಮೂಲ ದೇವರ ಮಹಿಮೆ ಕಡಿಮೆ ಆಗುತ್ತೆ". (ಭೈರಪ್ಪನವರು ತಮ್ಮ ನಾಭಿಂದ ಕುತ್ತಿಗೆಯವರೆಗೆ ಕೈಯಾಡಿಸಿ ಅದನ್ನು ಮೂಲದೇವರು ಎಂಬಂತೆ ಸಂಕೇತಿಸಿದ್ದರಂತೆ). ಅನೇಕ ಹಿರಿಯರು, ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ, ನಿಟ್ಟೂರರು, ಕರೀಂಖಾನರು, ಹಿರಿಯ ಅಧಿಕಾರಿಗಳು, ಸಾಹಿತಿಗಳು, ಮಠಾಧಿಪತಿಗಳು ಇವರೊಡನೆ ಆತ್ಮೀಯ ಮತ್ತು ಗೌರವಭಾವನೆಯ ಸಂಬಂಧ ಹೊಂದಿದ್ದು ಅವರುಗಳ ಭೇಟಿಯ ಕ್ಷಣಗಳ ವಿವರಗಳು ದೊಡ್ಡವರ ದೊಡ್ಡತನದ ದರ್ಶನ ಮಾಡಿಸುತ್ತವೆ. ಶಾಸ್ತ್ರಿಗಳ ನಡೆ ನುಡಿಗಳು ಅವರ ಕಲ್ಪನೆಯ ವಿದ್ಯಾಮಂದಿರದ ಕಟ್ಟಡಗಳು, ಹಾಸ್ಟೆಲುಗಳು, ಮಕ್ಕಳ ಊಟದ ವ್ಯವಸ್ಥೆಗೆ ಹಣ ಹೊಂದಿಸಲು ನೆರವಾದ ಕುರಿತ ವಿವರಗಳು ಗಮನ ಸೆಳೆಯುತ್ತವೆ. ವಿಶೇಷವಾಗಿ ಅವರ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಪ್ರಭಾವ ಸಹಾಯಕವಾಗಿ ಎದ್ದು ಕಾಣುತ್ತಿದ್ದ ಅಂಶವೆಂದರೆ ತಪ್ಪಲ್ಲ. ನಿಗದಿತವಾಗಿ ಧನಸಹಾಯ ಮಾಡುವವರ ದೊಡ್ಡ ಸಮೂಹವೇ ಅವರ ಬೆನ್ನಿಗಿತ್ತು.
     ಶಾಸ್ತ್ರಿಗಳು ತಮ್ಮ ಇಳಿವಯಸ್ಸಿನಲ್ಲಿ ಶಸ್ತ್ರಕ್ರಿಯೆ ನಂತರದಲ್ಲಿ ತಂಗಿಯ ಮಗ ರವಿ ಬೆಳಗೆರೆಯ ಮನೆಯಲ್ಲಿ ಇರಲು ಪ್ರಾರಂಭಿಸಿದ್ದು ಹಲವರಿಗೆ ಇಷ್ಟವಾಗಿರಲಿಲ್ಲ. ಶಾಸ್ತ್ರಿಗಳ ಮನೋಭಾವಕ್ಕೂ ರವಿ ಬೆಳಗೆರೆಯವರ ಸ್ವಭಾವಕ್ಕೂ ಅಜಗಜಾಂತರ ವೈರುಧ್ಯವಿದ್ದುದೇ ಇದಕ್ಕೆ ಕಾರಣ. "ಶಾಸ್ತ್ರಿಗಳು ರವಿ ಬೆಳಗೆರೆಯ ಮನೆಯಲ್ಲಿ ಇದ್ದಾರೆಯೇ?" ಎಂದು ಆಶ್ಚರ್ಯ ಪಡುವ, ಆಕ್ಷೇಪಿಸುವ ಮಂದಿಗೆ ಕೊರತೆಯಿರಲಿಲ್ಲ. ರವಿ ಬೆಳಗೆರೆ ಮತ್ತು ಶಾಸ್ತ್ರಿಗಳ ಅಂತರ್ವೈಯುಕ್ತಿಕ ಸಂಬಂಧ ಕುರಿತು ಒಂದು ಅಧ್ಯಾಯವೇ ಇದೆ. ಈ ಬಗ್ಗೆ ಪುಸ್ತಕ ಓದಿಯೇ ತಿಳಿಯುವುದು ಒಳ್ಳೆಯದು. ಒಂದಂತೂ ನಿಜ, ಶಾಸ್ತ್ರಿಗಳ ಆಯಸ್ಸು ಹತ್ತು ವರ್ಷ ಹೆಚ್ಚಾಗಲು ಅವರು ರವಿಯವರ ಮನೆಯಲ್ಲಿದ್ದುದೇ ಕಾರಣವೆಂದು ಲೇಖಕರ ಮತ್ತು ಅವರನ್ನು ಅರಿತವರ ಖಚಿತ ಅಭಿಪ್ರಾಯ. ಅಂತ್ಯಕಾಲ ಸಮೀಪಿಸಿದ್ದ ದಿನದಲ್ಲಿ ಒಂದು ದಿನ ಲೇಖಕರಿಂದ ಡಿವಿಜಿಯವರ 'ವನಸುಮ' ಪದ್ಯವನ್ನು ಓದಿಸಿ ಹೇಳಿಸಿ, ರವಿಯವರಿಗೆ ಆ ಪದ್ಯದ ಪ್ರತಿ ಕೊಡುತ್ತಾ, "ನೋಡಪ್ಪಾ, ಹೆಚ್ಚಿಗೆ ಏನೂ ಹೇಳುವುದಿಲ್ಲ. ಇದರಂತೆ ಬಾಳಬೇಕು ನೀನು" ಎಂದಿದ್ದರು. ರವಿ ಭಾವುಕರಾಗಿ, "ನಿನ್ನ ಕಾಲ ಬಳಿ ಜಾಗ ಕೊಡು, ನನಗೆ ಇನ್ನೇನೂ ಬೇಡ" ಎಂದು ಕಣ್ಣೀರು ಸುರಿಸಿದ್ದರು.
     ಗಾಂಧೀಜಿಯವರ ಸತ್ಯ, ಅಹಿಂಸೆ, ಆಸ್ತೇಯ, ಇತ್ಯಾದಿ ಏಕಾದಶವ್ರತಗಳು ಶಾಸ್ತ್ರಿಯವರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಇವುಗಳಿಗೆ ಪೂರಕವಾಗಿ ಅವರ ಜೀವನದ ವಿವಿಧ ಘಟನೆಗಳನ್ನು ಪೋಣಿಸಿ ನಿರೂಪಿಸಿರುವುದು ಮನಸ್ಸಿಗೆ ಹಿತವೆನಿಸುತ್ತವೆ. ಜಾತಿ, ವರ್ಗ, ವರ್ಣಬೇಧ ಮಾಡದ ಶಾಸ್ತ್ರಿಯವರ ಬಗ್ಗೆ ತಿಳಿಸಿರುವ ಈ ಘಟನೆ ಅವರ ಬಗ್ಗೆ ಪೂಜ್ಯಭಾವ ಮೂಡಿಸುತ್ತದೆ. ಮೀರಾಸಾಬಿಹಳ್ಳಿಯಲ್ಲಿ ಶಾಸ್ತ್ರಿಯವರು ಶಿಕ್ಷಕರಾಗಿದ್ದಾಗ ಅವರ ಜೊತೆ ಶಿಕ್ಷಕರಾಗಿದ್ದ ಮಾದಯ್ಯ ಒಬ್ಬ ದಲಿತ ವರ್ಗಕ್ಕೆ ಸೇರಿದವರು. ಅವರು ನಿವೃತ್ತರಾದ ನಂತರದಲ್ಲಿ ಅವರಿಗೆ ಸೌಖ್ಯವಿಲ್ಲವೆಂದು ತಿಳಿದು ಶಾಸ್ತ್ರಿಗಳು ಅವರನ್ನು ಕಾಣಲು ಅವರಿದ್ದ ಹಳ್ಳಿಗೆ ಹೋದರು. ಸಂತೋಷಪಟ್ಟ ಮಾದಯ್ಯ ಸಂಕೋಚದಿಂದ ತಮಗೆ ಒಂದು ಆಸೆಯಿದೆಯೆಂದು ಹೇಳಿದಾಗ ಶಾಸ್ತ್ರಿಯವರು 'ಹೇಳಿ ಮಾದಯ್ಯ, ಯಾಕೆ ಸಂಕೋಚ' ಎಂದಿದ್ದರು. ಶಾಸ್ತ್ರಿಯವರೊಂದಿಗೆ ಊಟ ಮಾಡುವ ಆಸೆ ವ್ಯಕ್ತಪಡಿಸಿದಾಗ. ಜಾತೀಯತೆ ತೋರದಿದ್ದ ತಮ್ಮನ್ನು ಕೇಳಲು ಸಂಕೋಚವೇಕೆಂದು ಅರ್ಥವಾಗದ ಶಾಸ್ತ್ರಿಯವರು 'ಅದಕ್ಕೇನಂತೆ? ತಾಯಿ, ಅಡುಗೆ ಮಾಡಿ. ನಾನು ಇಲ್ಲೇ ಊಟ ಮಾಡುತ್ತೇನೆ' ಎಂದಿದ್ದರು. ತೀವ್ರ ಅಸ್ವಸ್ಥರಾಗಿದ್ದ ಮಾದಯ್ಯನವರಿಗೆ ಶಾಸ್ತ್ರಿಯವರೇ ಕಲಸಿ ಅವರಿಗೆ ಪ್ರೀತಿಯಿಂದ ಊಟ ಮಾಡಿಸಿ, ತಾವೂ ಊಟ ಮಾಡಿ ಅವರ ಸಂತೃಪ್ತಿಗೆ ಕಾರಣರಾಗಿದ್ದರು. ಮುಂದೆ ನಾಲ್ಕೇ ದಿನದಲ್ಲಿ ಮಾದಯ್ಯನವರು ತೀರಿಹೋದರೆಂದು ಸುದ್ದಿ ಬಂದು ಶಾಸ್ತ್ರಿಯವರು ಮತ್ತೆ ಅವರ ಮನೆಗೆ ಹೋದರು. ಮಾದಯ್ಯನವರ ಮಡದಿ, "ನಿಮ್ಮ ಕೈಯಿಂದ ಊಟ ಮಾಡಿದ್ದೇ ಕೊನೆ ಸಾರ್. 'ದೇವರ ಕೈಯಲ್ಲಿಯೇ ಪ್ರಸಾದ ಸ್ವೀಕರಿಸಿದ ಮೇಲೆ ಮತ್ತೆ ಊಟ ಮಾಡಲೇ?' ಎಂದು ನಂತರ ಊಟ ಮಾಡದೇ ಶಾಂತಿಯಿಂದ ಹೋಗಿಬಿಟ್ಟರು ಸಾರ್" ಎಂದು ಹೇಳಿದ್ದರು. ಈ ಆತ್ಮಬಂಧ ವಿವರಿಸಲು ಸಾಧ್ಯವಿದೆಯೇ?
     ಲೇಖಕರು ಅಭಿಪ್ರಾಯ ಪಡುವಂತೆ ಆಚರಿಸುವ ತತ್ವಗಳಿಂದ ವ್ಯಕ್ತಿ ದೊಡ್ಡವನಾಗುವುದಿಲ್ಲ. ಉನ್ನತ ವ್ಯಕ್ತಿಗಳಲ್ಲಿ ತತ್ವಗಳು ಪ್ರಕಾಶಿಸುತ್ತವೆ. ಒಟ್ಟಾರೆಯಾಗಿ, 'ನಾನಿದ್ದೂ ನನ್ನದೇನಿಲ್ಲ' ಕೃತಿಯು ಅವರ ಕುರಿತ ನೆನಪುಗಳ, ಘಟನೆಗಳ ಮೂಲಕ ಕೃಷ್ಣಶಾಸ್ತ್ರಿಗಳ ಗುಣಗಳ ಅನಾವರಣ ಮಾಡುವಲ್ಲಿ ಸಾಫಲ್ಯತೆ ಪಡೆದಿದೆ. ಓದಬೇಕಾದ ಪುಸ್ತಕವಿದು.
-ಕ.ವೆಂ.ನಾಗರಾಜ್.

ಬುಧವಾರ, ಫೆಬ್ರವರಿ 5, 2014

ಹಣೆ ಬರಹಕ್ಕೆ ಹೊಣೆ ಯಾರು?

     'ಹಣೆ ಬರಹಕ್ಕೆ ಹೊಣೆ ಯಾರು? ಬಂದದ್ದನ್ನು ಅನುಭವಿಸಲೇಬೇಕು', 'ಎಲ್ಲಾ ವಿಧಿಲಿಖಿತ, ನಾವೇನು ಮಾಡೋಕಾಗುತ್ತೆ?' - ಇಂತಹ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವಲ್ಲವೇ? ಇದಕ್ಕೆ ವಿಧಿ, ಅದೃಷ್ಟ, ಕರ್ಮ, ಕಿಸ್ಮತ್, ಮುಂತಾದ  ಹೆಸರುಗಳನ್ನೂ ಕೊಡುತ್ತೇವೆ.  ಯಾವುದೇ ವ್ಯಕ್ತಿ ಅನಿವಾರ್ಯವಾಗಿ ಎದುರಿಸಲೇಬೇಕಾಗುತ್ತದೆ, ಅದನ್ನು ಬದಲಾಯಿಸಲಾಗದು, ಅನುಭವಿಸಲೇಬೇಕು ಎಂಬ ಸಂಗತಿಯನ್ನು ವಿಧಿ, ಹಣೆಬರಹ ಎನ್ನಬಹುದು. ಅಂತಹ ಹಣೆಬರಹಗಳು ನಮ್ಮ ಜೀವನವನ್ನು ನಿರ್ದೇಶಿಸುತ್ತವೆ. ನಾವು ಹೇಗೆ ಜೀವಿಸಬೇಕೆಂಬುದನ್ನು ನಾವು ನಿರ್ಧರಿಸಬಲ್ಲೆವು, ಆದರೆ ಎಂದು ಹುಟ್ಟಬೇಕು, ಎಲ್ಲಿ ಹುಟ್ಟಬೇಕು ಎಂಬುದನ್ನು ನಿರ್ಧರಿಸಲಾರೆವು. ನಮ್ಮ ಅಪ್ಪ-ಅಮ್ಮ ಯಾರಾಗಬೇಕು ಎಂಬುದೂ ನಮ್ಮ ಕೈಯಲ್ಲಿಲ್ಲ. ನಮ್ಮ ಕುಟುಂಬದವರನ್ನು ನಾವು ಪ್ರೀತಿಸಬಹುದು ಅಥವ ದ್ವೇಷಿಸಬಹುದು, ಆದರೆ ನಮ್ಮ ಕುಟುಂಬವನ್ನು ಆರಿಸಿಕೊಳ್ಳಲಾರೆವು. ಎಂತಹ ವಿಚಿತ್ರ! ನಾವು ನಮ್ಮ ಸ್ನೇಹಿತರು, ಪ್ರೀತಿಪಾತ್ರರನ್ನು ಆಯ್ಕೆ ಮಾಡಿಕೊಳ್ಳಬಹುದು, ಅದರೆ ಅವರು ಅವರು ನಮ್ಮನ್ನು ಅರಿಸಿಕೊಳ್ಳುವಂತೆ ಬಲವಂತ ಮಾಡಲಾರೆವು. ಎಂತಹ ಚಿಕಿತ್ಸೆ ಬೇಕೆಂದು ಆರಿಸಿಕೊಳ್ಳಬಹುದು, ಎಂತಹ ಕಾಯಿಲೆ ಬೇಕೆಂದು ಆರಿಸಿಕೊಳ್ಳಬಹುದೇ? ನಾನು ಪ್ರಯಾಣ ಮಾಡುವ ರಸ್ತೆಯನ್ನು ಆರಿಸಿಕೊಳ್ಳಬಹುದು, ಆದರೆ ಆ ರಸ್ತೆ ಎಲ್ಲಿ ತಲುಪಬೇಕೆಂದು ನಿರ್ಧರಿಸಲಾಗದು. ಎಲ್ಲಾ ಬರೀ ಗೊಂದಲವೇ! ನಾವು ಎಂದೂ ಸಾಯಬಾರದು ಎಂದುಕೊಂಡರೆ ಸಾಧ್ಯವೇ? ಒಬ್ಬ ಅದೃಷ್ಟವಂತ ಒಂದೇ ಪ್ರಯತ್ನದಲ್ಲಿ ಅಸಾಧ್ಯವಾದುದನ್ನು ಸಾಧಿಸಿಬಿಡಬಹುದು; ಆದರೆ ದುರದೃಷ್ಟವಂತ ಅದೇ ಕೆಲಸವನ್ನು ನೂರು ಸಲ ನೂರು ವಿಧದಲ್ಲಿ ಮಾಡಲು ಪ್ರಯತ್ನಿಸಿ ವಿಫಲನಾಗಿಬಿಡಬಹುದು. ಹಾಗಾದರೆ ಇದನ್ನು ಹಣೆಬರಹ ಎನ್ನಬಹುದೇ? ಇಂತಹ ನೂರಾರು ಸಂದಿಗ್ಧಗಳು, ಸನ್ನಿವೇಶಗಳು ಮನುಷ್ಯನನ್ನು ಗೊಂದಲಕ್ಕೆ ಈಡು ಮಾಡುವುದಂತೂ ನಿರ್ವಿವಾದ. ಮೈಸೂರು ಸಂಸ್ಥಾನವನ್ನು ಕೈವಶ ಮಾಡಿಕೊಂಡು, ಕೆಳದಿ ಸಂಸ್ಥಾನವನ್ನೂ ನುಂಗಿ ನೀರು ಕುಡಿದಿದ್ದ ಹೈದರಾಲಿ ನಿರಕ್ಷರಕುಕ್ಷಿ. ಪತ್ರಗಳಿಗೆ ಸಹಿ ಮಾಡಬೇಕಾದಾಗ ಹೆಬ್ಬೆರಳಿನ ಗುರುತು ಹಾಕುತ್ತಿದ್ದ. ಆಗ ಅದನ್ನು ಆಶ್ಚರ್ಯದಿಂದ ನೋಡುತ್ತಿದ್ದವರಿಗೆ ಹೈದರಾಲಿ, "ಅಲ್ಲೇಕೆ ನೋಡುತ್ತೀರಿ? ಇಲ್ಲಿ ನೋಡಿ" ಎಂದು ತನ್ನ ಹಣೆ ಮುಟ್ಟಿ ತೋರಿಸುತ್ತಿದ್ದ.
     ಹಣೆಬರಹ, ವಿಧಿಲಿಖಿತ ಮುಂತಾದುವಕ್ಕೆ ಅರ್ಥ ಬರಬೇಕೆಂದರೆ ಸನಾತನ ಧರ್ಮೀಯರು ನಂಬುವಂತೆ ಪುನರ್ಜನ್ಮ ಮತ್ತು ಕರ್ಮಫಲವಿರಬೇಕು ಅನ್ನಿಸುತ್ತದೆ. ಇಲ್ಲದಿದ್ದರೆ ಯಾವುದೇ ಒಂದು ಜೀವಿ ಬಡತನದ ಮನೆಯಲ್ಲಿ ಏಕೆ ಜನಿಸಬೇಕು, ಹದ್ದು, ಗೂಬೆಯಾಗಿ ಏಕೆ ಹುಟ್ಟಬೇಕು, ತನ್ನ ಯಾವುದೇ ತಪ್ಪಿಲ್ಲದೆ ಅಂಗವಿಕಲವಾಗಿ ಹುಟ್ಟಬೇಕು ಅಥವ ಶ್ರೀಮಂತರ ಮನೆಯಲ್ಲಿ ಬಾಳುವಂತಾಗಬೇಕು? ಕ್ರೈಸ್ತರು, ಮಹಮದೀಯರು ಪುನರ್ಜನ್ಮ ನಂಬುವುದಿಲ್ಲ. ಹಾಗಾದರೆ ಹುಟ್ಟುವಾಗಲೇ ಬರುವ ಇಂತಹ ವೈಪರೀತ್ಯಗಳಿಗೆ ಏನು ಕಾರಣ ಕೊಡಬೇಕು? ಸತ್ತ ಮೇಲೆ ಒಂದು ನಿಶ್ಚಿತ ದಿನದಂದು ಮಾತ್ರವೇ ತನ್ನ ಪಾಪ/ಪುಣ್ಯಗಳಿಗೆ ತಕ್ಕಂತೆ ಫಲ ಅನುಭವಿಸುವುದಾದರೆ, ಪುನರ್ಜನ್ಮವಿಲ್ಲವೆಂದಾದರೆ, ಹುಟ್ಟುತ್ತಲೇ ಈ ರೀತಿಯ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಗೆ ವಿವರಣೆ ಕೊಡುವುದು ಕಷ್ಟವಾಗುತ್ತದೆ. ಯಾವುದೇ ಕಾರಣವಿಲ್ಲದೆ, ತಮ್ಮ ಯಾವುದೇ ತಪ್ಪಿಲ್ಲದೆ ಕೆಲವರನ್ನು ಸುಖಿಗಳನ್ನಾಗಿ, ಕೆಲವರನ್ನು ದುಃಖಿಗಳನ್ನಾಗಿ ಹುಟ್ಟಿಸಿದರೆ ದೇವರು ನಿಷ್ಕರುಣಿ ಅಥವ ಪಕ್ಷಪಾತಿ ಎನ್ನಬೇಕಾಗುತ್ತದೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಜೀವಿಗಳು ಮಾಡುವ ಕೆಟ್ಟ ಮತ್ತು ಒಳ್ಳೆಯ ಕೆಲಸಗಳಿಗೆ ದೇವರೇ ಹೊಣೆಗಾರನಾಗಬೇಕಾಗುತ್ತದೆ. ಹಾಗೆ ಇರಲಾರದು! ಅಲ್ಲದಿದ್ದರೆ ಈ ಸ್ಥಿತಿಗೆ ಕಾರಣವೇನಿರಬಹುದು? ಇದಕ್ಕೆ ಕೊಡಬಹುದಾದ ಮತ್ತು ಒಪ್ಪಬಹುದಾದ ವಿವರಣೆಯೆಂದರೆ ಜೀವಿಯು ತಾನು ಮಾಡಿದ ಕರ್ಮಫಲವಾಗಿ ಈ ರೀತಿ ಆಗುತ್ತದೆಂಬುದು! ಒಬ್ಬರೇ ತಂದೆ-ತಾಯಿಗಳಿಗೆ ಹುಟ್ಟಿದ ಮಕ್ಕಳೆಲ್ಲರೂ ಒಂದೇ ಗುಣ, ಸ್ವಭಾವದವರು, ಸಾಮರ್ಥ್ಯ, ಅಭಿರುಚಿಯುಳ್ಳವರಾಗಿರುವುದಿಲ್ಲ ಅಲ್ಲವೇ? ಹಿಂದಿನ ಕುಸಂಸ್ಕಾರ, ಸುಸಂಸ್ಕಾರಗಳ ಫಲವಿರುವುದಿಲ್ಲ, ಪುನರ್ಜನ್ಮವಿಲ್ಲ ಎಂದಾಗಿದ್ದರೆ ಎಲ್ಲರೂ ಸಮಾನ ವ್ಯಕ್ತಿತ್ವ ಹೊಂದಿದವರಾಗಿರುತ್ತಿದ್ದರು.
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||
     ಪ್ರತಿ ಜೀವಿಯೂ ಹಿಂದೆ ಮಾಡಿದ ಒಳ್ಳೆಯ, ಕೆಟ್ಟ ಕೆಲಸಗಳಿಗನುಗುಣವಾಗಿ ಕಟ್ಟಿಕೊಂಡು ಬಂದ ಬುತ್ತಿಯ ಗಂಟನ್ನು ಹೊತ್ತುಕೊಂಡೇ ಬರುತ್ತಾರೆ ಎಂಬುದನ್ನು ಒಪ್ಪಿಕೊಂಡರೆ ಮಾತ್ರ ದೇವರು ಕ್ರೂರಿಯಲ್ಲ, ಪಕ್ಷಪಾತಿಯಲ್ಲ, ಅನ್ಯಾಯಗಾರನಲ್ಲ ಎನ್ನಬಹುದು. ಅಥರ್ವವೇದದ ಒಂದು ಮಂತ್ರ ಹೀಗೆ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ಈ ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ, ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಸಹಕಾರಿಗಳ ಸಹಾಯದಿಂದ ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ, ಕರ್ಮಫಲವಿಪಾಕ ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಈ ಮಂತ್ರದ ಅರ್ಥ. 'ಮಾಡಿದ್ದುಣ್ಣೋ ಮಹರಾಯ'! ತಾನು ಮಾಡಿದ ಪಾಪವನ್ನು ಇತರರ ಹೆಗಲಿಗೆ ಹೊರಿಸಿ ಪಾರಾಗಬಹುದೆಂದಾಗಲೀ, ಯಾವುದೇ ಪೂಜಾರಿ, ಪಾದ್ರಿ, ಮೌಲ್ವಿಗಳ ಮಧ್ಯಸ್ತಿಕೆಂದ ಪುಣ್ಯ ಗಳಿಸಬಹುದೆಂದಾಗಲೀ, ಮುಕ್ತಿ ಹೊಂದಬಹುದೆಂಬುದಾಗಲೀ, ತಪ್ಪುಕಾಣಿಕೆ ಒಪ್ಪಿಸಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಬಹುದೆಂದಾಗಲೀ ಇಲ್ಲವೇ ಇಲ್ಲ. ಮಾಡಿದ್ದನ್ನು ಅನುಭವಿಸಲೇಬೇಕು. ನಮ್ಮ ಹಣೆಬರಹಕ್ಕೆ ಹೊಣೆಗಾರರು ನಾವೇ!
     ಭಗವದ್ಗೀತೆಯ ಒಂದು ಅಧ್ಯಾಯವೇ ಕರ್ಮಯೋಗಕ್ಕೆ ಮೀಸಲಾಗಿದೆ. ಯಾರೂ ಕರ್ಮ ಮಾಡದೇ ಇರಲಾರರು, ಸದ್ವಿಚಾರಗಳಿಂದ ಒಡಗೂಡಿದ ಕರ್ಮವೇ ಮೋಕ್ಷಕ್ಕೊಯ್ಯಬಲ್ಲದು ಎಂಬುದು ಇದರ ಸಾರ. ಒಳ್ಳೆಯ ಕೆಲಸಗಳಿಂದ ಒಳ್ಳೆಯದಾಗುತ್ತದೆ ಎಂಬುದು ಇದರ ನೀತಿ. ನಾವು ಬದುಕಬೇಕೆಂದರೆ ಅದಕ್ಕಾಗಿ ಪ್ರತಿ ಕ್ಷಣವೂ ಸಾಯಬೇಕು. ನಾವು ಬಿಡುವ ಪ್ರತಿ ಉಸಿರೂ ನಮ್ಮನ್ನು ಸಾವಿನ ಸಮೀಪಕ್ಕೆ ಒಯ್ಯುತ್ತಿರುತ್ತದೆ. ಬದುಕು ಮತ್ತು ಸಾವು ಎನ್ನುವುದು ಒಂದೇ ವಸ್ತುವಿನ ಬೇರೆ ಬೇರೆ ಮುಖಗಳಷ್ಟೆ. ಸಮುದ್ರದ ಅಲೆಗಳಂತೆ ಒಮ್ಮೆ ಮೇಲೆ ಏಳುತ್ತದೆ, ಒಮ್ಮೆ ಕೆಳಗೆ ಬೀಳುತ್ತದೆ. ಬದುಕು ಮತ್ತು ಸಾವು ಎರಡೂ ಸೇರಿದರೆ ಮಾತ್ರ ಒಂದು ಪೂರ್ಣವಾದ ಸಂಗತಿ, ಇಲ್ಲದಿದ್ದರೆ ಅದು ಅಪೂರ್ಣ.
ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||
     ನಾವು ಈಗ ಏನಾಗಿದ್ದೇವೋ ಅದಕ್ಕೆ ನಾವೇ ಕಾರಣರು ಎಂದಾದಾಗ ದೇವರನ್ನಾಗಲೀ, ಇತರರನ್ನಾಗಲೀ ಏಕೆ ದೂಷಿಸಬೇಕು? ಸಾವಧಾನದಿಂದ, ಪೂರ್ವಾಗ್ರಹ ಪೀಡಿತರಾಗದೆ ಯೋಚಿಸಿದರೆ ಈ ಸತ್ಯದ ಅರಿವು ಆಗಲು ಸಾಧ್ಯ. ನಮ್ಮ ತಪ್ಪುಗಳಿಗೆ ಹೊಣೆಗಾರರು ನಾವೇ ಎಂಬುದು ನಾವು ಕಲಿಯಬೇಕಾದ ಮೊದಲ ಪಾಠ. ಯಾರನ್ನೂ ಹೊಗಳುವಂತಿಲ್ಲ, ಯಾರನ್ನೂ ತೆಗಳುವಂತಿಲ್ಲ. ತಿಳಿಯೋಣ, ಕೆಲವೊಮ್ಮೆ ನಮ್ಮ ದುರದೃಷ್ಟ ಮತ್ತು ಸೋಲುಗಳೇ ನಾವು ಉನ್ನತವಾದುದನ್ನು ಸಾಧಿಸಬೇಕೆಂಬ ಛಲ ಮೂಡಿಸುತ್ತದೆ. ಹಿಂದೆ ಮಾಡಿದ ಕೆಲಸಗಳ ಫಲವೇ ಇಂದು ನಾವು ಏನಾಗಿದ್ದೇವೆಯೋ ಅದು ಎನ್ನುವುದಾದರೆ, ಮುಂದೆ ನಾವು ಏನಾಗಬೇಕು ಎಂದು ನಿರ್ಧರಿಸಿ ಅದರಂತೆ ನಮ್ಮ ಈಗಿನ ಕೆಲಸಗಳಿಂದ ಸಾಧಿಸಬಹುದು ಎಂಬುದನ್ನೂ ಒಪ್ಪಬೇಕು. ಮಾಡಬೇಕಿರುವುದೆಂದರೆ ಅದನ್ನು ಹೇಗೆ ಸಾಧಿಸಬೇಕು ಎಂಬುದನ್ನು ಅರಿತು ಮುಂದುವರೆಯುವುದಷ್ಟೆ. ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ ಆಗಿದ್ದು, ಯಶಸ್ಸಿಗೆ ಬೇಕಾದ ಎಲ್ಲಾ ಸಲಕರಣೆಗಳೂ ನಮ್ಮೊಳಗೇ ಇವೆ. 'ಇದು ನನ್ನ ಹಣೆಯ ಬರಹ ಎಂದು ಹೇಳುವವನು ಹೇಡಿ ಮತ್ತು ಮೂರ್ಖ' ಎಂದು ಸಂಸ್ಕೃತದ ಒಂದು ಗಾದೆ ಹೇಳುತ್ತದೆ. ಬಲಶಾಲಿ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ ದುರ್ಬಲ ಮನಸ್ಕರು, ಅಶಕ್ತರು ಮಾತ್ರ ತಮ್ಮ ಹಣೆಯಬರಹದ ಬಗ್ಗೆ ಚಿಂತಿಸಿ ಜ್ಯೋತಿಷಿಗಳ ಮೊರೆ ಹೋಗುವುದನ್ನು ಕಾಣುತ್ತೇವೆ. ಅಂತಹವರು ತಮ್ಮ ಹಣೆಬರಹವನ್ನು ಇತರರಿಂದ ಬರೆಸಿಕೊಳ್ಳುವ ಬಲಿಪಶುಗಳಾಗುತ್ತಾರೆಂದರೆ ಕಠಿಣವಾದ ಮಾತಾಗಬಹುದು. ಹಣೆಬರಹ, ವಿಧಿಲಿಖಿತ ಮುಂತಾದ ಪದಗಳು ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಗತಿಯ ಜರುಗುವಿಕೆಗೆ ತಾವೇ ಕಾರಣರೆಂಬುದನ್ನು ಅರಗಿಸಿಕೊಳ್ಳಲಾಗದವರು ಹೇಳಬಹುದಾದ ಪದಗಳು! ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ, ಇದೇ ಸತ್ಯ. ನಮ್ಮ ಹಣೆಯಬರಹವನ್ನು ಬರೆಯುವವರು, ನಿರ್ಧರಿಸುವವರು ನಾವೇ ಎಂಬುದನ್ನು ಅರಿತಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯುವ ಮನಸ್ಸು ಮಾಡುತ್ತೇವೆ.
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರು ಮಾಡುವುದೇನು ನಿನದೆ ತಪ್ಪಿರಲು |
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣವಿರುತ್ತದೆ. ಅದರಲ್ಲಿನ ಸತ್ಯ, ವಾಸ್ತವತೆ ಅರಿತು ತಪ್ಪು ತಿದ್ದಿಕೊಂಡು ಮುನ್ನಡೆದರೆ ಹಣೆಬರಹವನ್ನು ಬದಲಾಯಿಸಬಹುದು. ತಮಾಷೆಯ ವಿಷಯವೆಂದರೆ ಗೆದ್ದವರು ತಮ್ಮ ಗೆಲುವಿಗೆ ಹಣೆಬರಹ ಕಾರಣವೆನ್ನುವುದಿಲ್ಲ, ಸೋತವರು ಮಾತ್ರ ಸೋಲಿಗೆ ನೆಪವಾಗಿ ಹಣೆಬರಹವೆಂದುಬಿಡುತ್ತಾರೆ. ಬಲಶಾಲಿಗಳನ್ನು ಹಣೆಬರಹ ಇಷ್ಟಪಡುತ್ತದೆ.


-ಕ.ವೆಂ.ನಾಗರಾಜ್