ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 21, 2015

ಅನ್ನಭಾಗ್ಯವೂ, ತಳಪಾಯ ಸರಿಯಿರದ ಕಟ್ಟಡವೂ!


     ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸುವ ಮತ್ತು ವಿರೋಧಿಸುವ ಅನೇಕ ಲೇಖನಗಳು, ಪ್ರತಿಷ್ಠಿತರೆನಿಸಿಕೊಂಡವರ ಹೇಳಿಕೆಗಳು, ಪ್ರತಿಹೇಳಿಕೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಎರಡೂ ಕಡೆಯವರ ವಾದಗಳಲ್ಲಿ ಹುರುಳೂ ಇದೆ, ಜೊಳ್ಳೂ ಇದೆ. ಆದರೆ ಸಮರ್ಥಿಸುವ ಮತ್ತು ವಿರೋಧಿಸುವ ಭರದಲ್ಲಿ ಕಟು ವಾಸ್ತವತೆಯನ್ನು ಕಡೆಗಾಣಿಸುತ್ತಿರುವುದು ವಿಪರ್ಯಾಸವಾಗಿದೆ. ತುತ್ತು ಅನ್ನಕ್ಕೂ ಪರದಾಡುವವರಿಗೆ ಅನ್ನ ಒದಗಿಸುವುದು ಎಷ್ಟು ಅಗತ್ಯವೋ, ಅಷ್ಟೇ ಅಗತ್ಯ ಅವರುಗಳು ಅನ್ನ ಸಂಪಾದಿಸಲು ಅಗತ್ಯವಾದ ಉದ್ಯೋಗಾವಕಾಶಗಳನ್ನು ಒದಗಿಸುವುದೂ ಆಗಿದೆ. ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಅದರ ಸಾಧಕ-ಬಾಧಕಗಳನ್ನು ಪರಿಗಣಿಸಬೇಕು, ಪೂರ್ವ ತಯಾರಿ ಸಮರ್ಪಕವಾಗಿರಬೇಕು. ಆದರೆ ಯೋಜನೆಗಳನ್ನು ಕೇವಲ ಜನಾಕರ್ಷಣೆಯ ಸಲುವಾಗಿ, ಮತ ಗಳಿಸುವ ಸಾಧನಗಳಾಗಿ ಘೋಷಿಸುತ್ತಿರುವುದು ಸುಯೋಗ್ಯ ಆಡಳಿತದ ಲಕ್ಷಣವಂತೂ ಅಲ್ಲ. ಅನ್ನಭಾಗ್ಯ ಯೋಜನೆಯೂ ಸಹ ಅಗ್ಗದ ಜನಪ್ರಿಯತೆಯ ದೃಷ್ಟಿಯಿಂದ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಬೇಕಾದ ವಸ್ತುಸ್ಥಿತಿ ಇರುವುದು ವಿಷಾದದ ಸಂಗತಿಯಾಗಿದೆ.
     ಬಡತನದ ರೇಖೆಗಿಂತ ಕೆಳಗಿರುವವರು (ಬಿಪಿಎಲ್) ಎಂದರೆ ದಿನನಿತ್ಯದ ಅಗತ್ಯಕ್ಕೆ ಬೇಕಾದ ಆಹಾರ ಮತ್ತು ಇತರ ಅತ್ಯಾವಶ್ಯಕ ಸಂಗತಿಗಳನ್ನು ಹೊಂದಿಸಿಕೊಳ್ಳಲು ತಕ್ಕಂತೆ ಆದಾಯ ಹೊಂದದವರು ಎಂಬುದು ಸಾಮಾನ್ಯ ವಿವರಣೆಯಾಗುತ್ತದೆ. ಇಂತಹ ಕುಟುಂಬಗಳನ್ನು ಗುರುತಿಸಲು ಬೇಕಾದ ರೀತಿ-ನೀತಿಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿವೆ. ಒಪ್ಪೊತ್ತಿನ ಗಂಜಿಗೂ ಗತಿಯಿಲ್ಲದ, ಉದ್ಯೋಗಾವಕಾಶವೂ ಲಭ್ಯವಿರದ ಸಾವಿರಾರು ಕುಟುಂಬಗಳು ಇವೆ. ಇವರುಗಳನ್ನು ಗುರುತಿಸಿ ಬಡತನ ನಿರ್ಮೂಲನೆಗೆ ಕ್ರಮ ವಹಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ. ಸುಪ್ರೀಮ್ ಕೋರ್ಟಿನ ನಿರ್ದೇಶನದಂತೆ (ಪ್ರಕರಣ ಸಂ. ಸಂಖ್ಯೆ (ಸಿ).೧೯೬/೨೦೦೧)  ಪಡಿತರ ಅವ್ಯವಸ್ಥೆ ಸರಿಪಡಿಸುವ ದಿಕ್ಕಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ರಚಿತವಾದ ವಾಧ್ವಾ ಸಮಿತಿ ವಿವರವಾದ ವರದಿ ಸಲ್ಲಿಸಿದ್ದು, ಆ ವರದಿಯಂತೆ ಕ್ರಮ ಅನುಸರಿಸಲು ಸರ್ವೋಚ್ಛ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಾಧ್ವಾ ಸಮಿತಿಯ ವರದಿಯಲ್ಲಿ ಕರ್ನಾಟಕದಲ್ಲಿ ಸುಮಾರು 31,29,000 ಅರ್ಹ ಬಿಪಿಎಲ್ ಕುಟುಂಬಗಳಿರುವುದನ್ನು ದಾಖಲಿಸಲಾಗಿದೆ.
     ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಗಳ ಸಮೀಕ್ಷೆಯನ್ನು ಸರಿಯಾಗಿ ನಡೆಸಿದೆಯೇ ಮತ್ತು ಅರ್ಹರೆಲ್ಲರಿಗೆ ಪಡಿತರ ಚೀಟಿಗಳನ್ನು ಕೊಟ್ಟಿದೆಯೇ ಎಂದರೆ ಸಿಗುವ ಉತ್ತರ ಇಲ್ಲ ಎಂಬುದೇ ಆಗಿದೆ. ಇದು ಸತ್ಯ ಸಂಗತಿಯಾಗಿದೆ. ಜನಗಣತಿಯಲ್ಲಿ ದಾಖಲಾದ ಕುಟುಂಬಗಳ ಸಂಖ್ಯೆಗೂ, ಬಿಪಿಎಲ್ ಕುಟುಂಬಗಳ ಸಮೀಕ್ಷೆ ನಡೆಸಿದಾಗ ಮತ್ತು ಪಡಿತರ ಚೀಟಿಗಳಿಗಾಗಿ ನಡೆಸಿದ ಸಮೀಕ್ಷೆ ಮಾಡಿದಾಗ ಕಂಡು ಬಂದ ಕುಟುಂಬಗಳ ಸಂಖ್ಯೆಗೂ ಅಜ-ಗಜಾಂತರ ವ್ಯತ್ಯಾಸ ಎದ್ದು ಕಾಣುತ್ತದೆ. ವರ್ಷಗಟ್ಟಲೇ ಸಿಬ್ಬಂದಿಯನ್ನು ನಿಯೋಜಿಸಿ ಪಟ್ಟಿಗಳನ್ನು ಸಿದ್ಧಪಡಿಸಿದಾಗ ಅಗಾಧವಾದ ವ್ಯತ್ಯಾಸ ಕಂಡು ಬಂದಾಗ ಹೊಸ ರೀತಿ-ನೀತಿಗಳನ್ನು ಸೂಚಿಸಿ ಪುನರ್ ಸಮೀಕ್ಷೆ ಮಾಡಲು 'ಸೂಚನೆ' ಬರುತ್ತದೆ ಮತ್ತು 'ಸಂಖ್ಯೆ ಕಡಿತಗೊಳಿಸಲೂ' ಸೂಚನೆ ಅಧಿಕಾರಿಗಳಿಗೆ ಸಿಗುತ್ತದೆ. ಇರುವ ಪಟ್ಟಿಗಳನ್ನೇ ತೇಪೆ ಹಚ್ಚಿ ಹೊಸ ಪಟ್ಟಿ ಸಿದ್ಧವಾದರೂ ಅದೂ ನ್ಯೂನತೆಗಳ ಕಂತೆಗಳನ್ನೇ ಹೊತ್ತಿರುತ್ತದೆ. ಕಹಿ ಸತ್ಯವೆಂದರೆ ರಾಜಕಾರಣಿಗಳ, ಸ್ಥಳೀಯ ನಾಯಕರುಗಳ ಒತ್ತಡಗಳು, ಭ್ರಷ್ಠಾಚಾರ ಪ್ರೇರಿತರಾದ ಕೆಲವು ಸಿಬ್ಬಂದಿಗಳು, ಸಮರ್ಪಕ ಮೇಲ್ವಿಚಾರಣೆಯ ಕೊರತೆ, ಆಡಳಿತಾತ್ಮಕ ಅವ್ಯವಸ್ಥೆಗಳು ಇಂತಹ ನ್ಯೂನತೆಗೆ ಇಂಬು ಕೊಡುತ್ತವೆ. ಪಡಿತರ ಚೀಟಿಗಳ ವಿತರಣೆ ದಶಕಗಳ ಕಾಲದಿಂದ ನಡೆಯುತ್ತಲೇ ಇದೆ, ಇಂದಿಗೂ ಮುಗಿದಿಲ್ಲ. ಮುಗಿಯುವ ಲಕ್ಷಣಗಳೂ ಇಲ್ಲ. ಒಮ್ಮೆ ಕೊಟ್ಟ ಕಾರ್ಡುಗಳು ಸರಿಯಿಲ್ಲವೆಂದು ರದ್ದುಪಡಿಸಿ ಹೊಸದಾಗಿ ಕೊಡುವುದಾಗಿ ಹೇಳುತ್ತಾರೆ. ಪುನಃ ಇಂತಹ ಎಡವಟ್ಟುಗಳ ಪುನರಾವರ್ತನೆ ಆಗುತ್ತದೆ. ಆದರೆ ಈ ಎಲ್ಲಾ ಸರ್ಕಸ್ಸುಗಳ ಎಡೆಯಲ್ಲಿ ನಿಜಕ್ಕೂ ಅನ್ನಕ್ಕೂ ಗತಿಯಿಲ್ಲದವರ ಕುಟುಂಬಗಳು ಬಿಪಿಎಲ್ ಕಾರ್ಡುಗಳನ್ನು ಶಕ್ತವಾಗುತ್ತವೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬಿಪಿಎಲ್ ಕಾರ್ಡುಗಳನ್ನು ಪಡೆಯುವಾಗ ವಾಸವಿರುವ ಮನೆಯ ವಿವರಗಳು, ಆಧಾರ್ ಕಾರ್ಡಿನ ವಿವರ ಮುಂತಾದುವನ್ನು ಒದಗಿಸಬೇಕು. ಸರ್ಕಾರವೇ ಹೇಳಿರುವಂತೆ ರಾಜ್ಯದಲ್ಲಿ ಸುಮಾರು 15 ಲಕ್ಷ ಕುಟುಂಬಗಳು ವಸತಿರಹಿತವಾಗಿವೆ. ಇಂತಹವರಿಗೆ ಕಾರ್ಡುಗಳು ಸಿಗಬೇಕು. ಆದರೆ ವಿಳಾಸ ಸರಿಯಾಗಿ ಕೊಡದ ಕಾರಣದಿಂದ ಇಂತಹವರಿಗೆ ಕಾರ್ಡುಗಳು ಸಿಗುವುದೇ ಇಲ್ಲ. ಇಂತಹವರಿಗೆ ಧ್ವನಿಯಾಗಿ ನಿಲ್ಲುವವರು ಯಾರೂ ಇರುವುದಿಲ್ಲ ಎಂಬುದು ವಿಷಾದದ ಸಂಗತಿಯೇ ಸರಿ.
     ಸರ್ಕಾರವೇ ಪ್ರಕಟಿಸಿರುವ ಮಾಹಿತಿಯಂತೆ 14.07.2015ರಲ್ಲಿ ಇದ್ದಂತೆ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ವಿವರ ಹೀಗಿದೆ:
ಜನಗಣತಿ ಪ್ರಕಾರ ಕುಟುಂಬಗಳ ಸಂಖ್ಯೆ: 1,31,79,911
ಅಂತ್ಯೋದಯ ಕಾರ್ಡುಗಳು:                    9,66,560
ಎಪಿಎಲ್ ಕಾರ್ಡುದಾರರು:                      33,71,982
ಬಿಪಿಎಲ್ ಕಾರ್ಡುದಾರರು:                    1,03,70,172
ಒಟ್ಟು ಕಾರ್ಡುದಾರ ಕುಟುಂಬಗಳು:          1,47,08,714
ಅಂದರೆ, ಕಾರ್ಡುಗಳ ಸಲುವಾಗಿ ಸುಮಾರು 16 ಲಕ್ಷ ಕುಟುಂಬಗಳು ಹೆಚ್ಚಾಗಿ ಗುರುತಿಸಲ್ಪಟ್ಟಿವೆ. ಲೆಕ್ಕದಲ್ಲಿ ಕೊಡಲಾಗಿದೆಯೆಂದು ತೋರಿಸಲಾಗಿರುವ ಕಾರ್ಡುಗಳ ಪೈಕಿಯೂ ಕಾರ್ಡುದಾರರಿಗೆ ಕಾರ್ಡುಗಳು ವಾಸ್ತವವಾಗಿ ತಲುಪಿಲ್ಲದವರ ಸಂಖ್ಯೆಯೂ ಗಣನೀಯವಾಗಿದೆ. ಇದು ಇಲ್ಲಿಗೇ ಮುಗಿಯಲಿಲ್ಲ. ಇನ್ನೂ 9,83,474ಕುಟುಂಬಗಳು ಕಾರ್ಡು ಕೊಡಲು ಕೋರಿ ಸಲ್ಲಿಸಿದ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಆದರೆ ಅರ್ಜಿಗಳನ್ನೇ ಸಲ್ಲಿಸಲಾಗದಿರುವ (ಏಕೆಂದರೆ ಈಗ ಆನ್ ಲೈನಿನಲ್ಲಿ ಅರ್ಜಿ ಸಲ್ಲಿಸಬೇಕಿದೆ, ಮೊಬೈಲುಗಳನ್ನು ಹೊಂದಿರಬೇಕಿದೆ!), ಸಲ್ಲಿಸಲು ತಿಳಿಯದಿರುವ, ದೀನಸ್ಥಿತಿಯ ಕಾರಣದಿಂದಾಗಿ ಇತರರ ಸಹಾಯ ಪಡೆಯಲಾಗದಿರುವ, ಇತರರು ಸಹಾಯ ಮಾಡದಿರುವ ಕುಟುಂಬಗಳ ಸಂಖ್ಯೆ ಕಡಿಮೆಯೇನಲ್ಲ. ಇದು ಏನು ತೋರಿಸುತ್ತದೆ? ಬಡತನ ನಿರ್ಮೂಲನೆ ಮಾಡುವ ನೈಜ ಕಾಳಜಿ ಇದ್ದಿದ್ದರೆ, ರಾಜಕೀಯ ಕಾರಣಗಳನ್ನು ಮೀರಿದ ಇಚ್ಛಾಶಕ್ತಿ ಪ್ರದರ್ಶಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಯಾರಿಗೆ ಅನ್ನಭಾಗ್ಯದ ನಿಜಲಾಭ ಸಿಗಬೇಕೋ ಅವರುಗಳಲ್ಲಿ ಹೆಚ್ಚಿನವರಿಗೆ ಕಾರ್ಡುಗಳೇ ಸಿಕ್ಕಿಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ.
     ಇನ್ನೊಂದು ಮಗ್ಗುಲಿಗೆ ಬರೋಣ. ಇಷ್ಟೊಂದು ಅಗಾಧ ಪ್ರಮಾಣದಲ್ಲಿರುವ ಕಾರ್ಡುದಾರರಿಗೆ (ಕಾರ್ಡು ಹೊಂದಿರುವವರೆಲ್ಲರೂ ಅರ್ಹರೇ ಎಂಬ ಪ್ರಶ್ನೆಯನ್ನು ಬದಿಗಿರಿಸಿ) ಎಷ್ಟು ಪ್ರಮಾಣದ ಅಕ್ಕಿ ಬೇಕಾಗುತ್ತದೆ, ಅದಕ್ಕೆ ತಗಲುವ ಸಾವಿರಾರು ಕೋಟಿಗಳಷ್ಟು ಮೊತ್ತವನ್ನು ಹೇಗೆ ಕ್ರೋಢೀಕರಿಸಲಾಗುತ್ತದೆ ಎಂಬುದಕ್ಕೆ ಸಮರ್ಪಕ ಉತ್ತರ ಸರ್ಕಾರದ ಕಡೆಯಿಂದ ಸಿಗಲಾರದು. ಅಕ್ಕಿಯ ದಾಸ್ತಾನು ಕಡಿಮೆಯಾದರೆ, ಹಣ ಹೊಂದಿಸಲಾಗದಿದ್ದರೆ ಕೇಂದ್ರದ ಕಡೆಗೆ ಬೆಟ್ಟು ತೋರಿಸುವ ಕೆಲಸವಂತೂ ಆಗುತ್ತದೆ. ಅನ್ನಭಾಗ್ಯ ಯೋಜನೆ ಘೋಷಣೆಯಾದ ಸಂದರ್ಭದಲ್ಲೇ ವಿತರಣೆಗೆ ಅಗತ್ಯವಾದಷ್ಟು ಧಾನ್ಯ ಲಭ್ಯವಿರದೇ ಪ್ರಾರಂಭದ ಹಲವು ತಿಂಗಳುಗಳಲ್ಲಿ ಅಕ್ಕಿ ಸಮರ್ಪಕವಾಗಿ ವಿತರಣೆ ಆಗಿರಲಿಲ್ಲ. ಹೀಗಾಗಿ ಮಿಲ್ ಮಾಲಿಕರುಗಳಿಂದ ಬಲವಂತವಾಗಿ ನವೆಂಬರ್, 2013ರಿಂದ ಫೆಬ್ರವರಿ, 2014ರವರೆಗೆ ಸಂಗ್ರಹಿಸಿದ್ದ 1.61 ಲಕ್ಷ ಟನ್ ಅಕ್ಕಿ ಬಹುತೇಕ ಹಾಳಾದ ಅಥವ ಹಾಳಾಗುವ ಸ್ಥಿತಿಯಲ್ಲಿತ್ತು. ಅದರಲ್ಲಿ 93 ಸಾವಿರ ಟನ್ ಅಕ್ಕಿಯನ್ನು ಅದೇ ಸ್ಥಿತಿಯಲ್ಲಿ ಜನರಿಗೆ ವಿತರಿಸಲಾಯಿತು. ವಿತರಿಸಲು ಸಾಧ್ಯವೇ ಇಲ್ಲದಷ್ಟು ಹಾಳಾದ 68 ಸಾವಿರ ಟನ್ ಅಕ್ಕಿಯ ವಿತರಣೆ ತಡೆ ಹಿಡಿಯಲಾಯಿತು. ವಿಪರ್ಯಾಸವೆಂದರೆ ಮಿಲ್ ಮಾಲಿಕರುಗಳಿಗೆ ಪೂರ್ಣ ಹಣ ಪಾವತಿಸಲಾಯಿತು. ಸರ್ಕಾರಕ್ಕೆ, ಅರ್ಥಾತ್ ಸಾರ್ವಜನಿಕರಿಗೆ, ಇದರಿಂದ ಆದ ನಷ್ಟ ಸುಮಾರು 200 ಕೋಟಿ ರೂ.ಗಳು! ಈ ಕುರಿತು ಯಾರೇ ಬುದ್ಧಿಜೀವಿಗಳು, ಪ್ರಗತಿಪರರು ಎಂದು ಹಣೆಪಟ್ಟಿ ಹಚ್ಚಿಕೊಂಡವರು ಸೊಲ್ಲೆತ್ತಲೇ ಇಲ್ಲ. ಯಾರ ವಿರುದ್ಧವೂ ಸರ್ಕಾರವೂ ಕ್ರಮ ಕೈಗೊಳ್ಳಲೇ ಇಲ್ಲ!
     ಪಡಿತರ ವಿತರಣೆಯ ಲೋಪಗಳ ಕುರಿತು ಹೇಳುವುದೇ ಬೇಡ. ಹೆಚ್ಚಿನ ದಾಸ್ತಾನು ಕಾಳಸಂತೆಯ ಪಾಲಾಗುವುದು ಗುಟ್ಟಾಗಿ ಉಳಿದಿಲ್ಲ. ಉಚಿತವಾಗಿ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ಮೊದಲೇ ಧಾನ್ಯಗಳು ಕಾಳಸಂತೆಗೆ ಹೋಗುತ್ತಿದ್ದುದು, ಹೊಸ ಯೋಜನೆ ಜಾರಿಗೆ ಬಂದ ಮೇಲೆ ಹೆಚ್ಚಾಯಿತಷ್ಟೇ ಅಲ್ಲದೆ ಸಂಬಂಧಿಸಿದವರಿಗೆ ಲೂಟಿ ಹೊಡೆಯಲು ಹೆಚ್ಚಿನ ಅವಕಾಶವಾಯಿತು. ವಿತರಣೆಯ ಕಾಲದಲ್ಲಿ ಹೇಗೆಲ್ಲಾ ಅವ್ಯವಹಾರಗಳು ನಡೆಯುತ್ತವೆ ಎಂಬುದನ್ನು ವಿವರಿಸುತ್ತಾ ಹೋದರೆ ದೀರ್ಘವಾಗುವ ಕಾರಣದಿಂದ ಒಂದು ಉದಾಹರಣೆಯನ್ನಷ್ಟೇ ಕೊಡುವೆ. ಈಗ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಶ್ರೀ ಮದನಗೋಪಾಲರು ಬಿಜಾಪುರದ ಡಿ.ಸಿ. ಆಗಿದ್ದಾಗ ನಡೆದಿದ್ದ ಸಂಗತಿ. ಅಲ್ಲಿನ ಆಹಾರ ಇಲಾಖೆಯ ಉಪನಿರ್ದೇಶಕರು ಪ್ರತಿ ತಿಂಗಳು 300 ನ್ಯಾಯಬೆಲೆ ಅಂಗಡಿಗಳ ಪೈಕಿ 50 ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ, 50 ಅಂಗಡಿಗಳಿಗೆ ಗೋಧಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳು ಬೇರೆ ಬೇರೆ 50 ಅಂಗಡಿಗಳಿಗೆ ಕೊಡುತ್ತಿರಲಿಲ್ಲ, ಉಳಿದ 250 ಅಂಗಡಿಗಳಿಗೆ ಬಿಡುಗಡೆ ಆಗುತ್ತಿತ್ತು. ಹೀಗೆ ರೊಟೇಶನ್ನಿನಂತೆ ಮಾಡುತ್ತಿದ್ದರು. ಆ 50 ಅಂಗಡಿಗಳ ಅಕ್ಕಿ ಮತ್ತು ಗೋಧಿ ಸೋಲಾಪುರಕ್ಕೆ ಹೋಗುತ್ತಿತ್ತು. ಅಲ್ಲಿ ಅದನ್ನು ಹಿಟ್ಟು, ರವೆ ಮಾಡಿ ಮಾರಲಾಗುತ್ತಿತ್ತು. ಒಮ್ಮೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದರು. ಜಿಲ್ಲಾಧಿಕಾರಿ ಸ್ವತಃ ಮುತುವರ್ಜಿ ವಹಿಸಿ ಪ್ರಕರಣ ದಾಖಲಾಗುವಂತೆ ನೋಡಿಕೊಂಡರು. ಅಂದಿನ ಆಹಾರ ಮಂತ್ರಿ ಶ್ರೀಮತಿ ಮನೋರಮಾ ಮಧ್ವರಾಜ್ ಅವರನ್ನೂ ಒಪ್ಪಿಸಿ ಸಿ.ಒ.ಡಿ. ತನಿಖೆ ನಡೆಯುವಂತೆ ಮಾಡಿದರು. ಉಪನಿರ್ದೇಶಕರು, ಫುಡ್ ಇನ್ಸ್‌ಪೆಕ್ಟರರನ್ನು ಬಂಧಿಸಲಾಯಿತು. ಸಿಓಡಿ ತನಿಖೆಯಲ್ಲಿ ಆರೋಪಗಳು ಸಾಬೀತಾದವು. ಆದರೆ ಸಿಓಡಿಯವರಿಗೆ ಶಿಕ್ಷೆ ಕೊಡಲು ಬರುವುದಿಲ್ಲ. ತನಿಖೆ ನಡೆಸಿ ವರದಿ ಕೊಡುವುದಷ್ಟೆ ಅವರ ಕೆಲಸ. ನಂತರ ಇಲಾಖಾ ವಿಚಾರಣೆ ನಡೆಯಿತು. 1994ರಲ್ಲಿ ನಡೆದ ಈ ಪ್ರಕರಣ 14 ವರ್ಷಗಳವರೆಗೆ ಮುಂದುವರೆಯಿತು. ಏನಾಯಿತೋ ಗೊತ್ತಿಲ್ಲ, ಕೊನೆಗೆ ಆರೋಪಗಳು ಸಾಬೀತಾಗಲಿಲ್ಲವೆಂದು ತೀರ್ಮಾನವಾಗಿ ಅಧಿಕಾರಿಗಳು ಪಾರಾದರು, ಬಡ್ತಿಯನ್ನೂ ಪಡೆದರು. ಕಾನೂನನ್ನು ಹೇಗೆ ತಿರುಚಬಹುದು ಎಂಬುದಕ್ಕೆ ಉದಾಹರಣೆ ಇದು. ಕೆಲವು ನಿರ್ದಿಷ್ಟ ನ್ಯಾಯಬೆಲೆ ಅಂಗಡಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಪಡಿತರ ಬಿಡುಗಡೆ ಮಾಡಿ ಹೆಚ್ಚುವರಿ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಸಿ ಕಾಳಸಂತೆಕೋರರು, ನ್ಯಾಯಬೆಲೆ ಅಂಗಡಿ ಮಾಲಿಕರು ಮತ್ತು ಕೆಳಗಿನ ಅಧಿಕಾರಿಗಳಿಂದಲೂ ಕಮಿಷನ್, ಮಾಮೂಲು ವಸೂಲು ಮಾಡುವ ಹಿರಿಯ ಆಹಾರ ಅಧಿಕಾರಿಗಳೂ ಕಾಣಸಿಗುತ್ತಾರೆ.
     ಅಗತ್ಯ ಪ್ರಮಾಣದ ಅಕ್ಕಿಯ ಅಲಭ್ಯತೆ, ಹಣಕಾಸಿನ ಮುಗ್ಗಟ್ಟು ಮತ್ತು ವ್ಯವಸ್ಥೆಯ ಲೋಪಗಳು ಈ ಯೋಜನೆಯನ್ನು ಹೀಗೆಯೇ ಮುಂದುವರೆಸಲು ಬಿಡುತ್ತದೆ ಎಂದು ಹೇಳುವುದು ಕಷ್ಟ. ಮೊದಲು 1 ರೂ.ಗೆ 1 ಕೆಜಿಯಂತೆ ಕಾರ್ಡಿಗೆ 30 ಕೆಜಿ ಕೊಡುತ್ತಿದ್ದದ್ದು ನಂತರ ಉಚಿತವಾಯಿತು. ಈಗ ಸದಸ್ಯರ ಸಂಖ್ಯೆ ಅನುಸರಿಸಿ ಪ್ರಮಾಣವನ್ನೂ ಕಡಿತ ಮಾಡಲಾಗಿದೆ. ಮುಂದೆ ಇದು ಕಾರ್ಡಿಗೆ ಗರಿಷ್ಠ ಹತ್ತು ಕೆಜಿಗೂ ಇಳಿಯಬಹುದು. ಕಾರ್ಡುಗಳ ಸಂಖ್ಯೆ ಕಡಿತಗೊಳಿಸಲು ಮತ್ತು ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಲು ಸೂಚನೆ ಹೊರಡಬಹುದು. ಇದರ ಅರ್ಥ ನಿಜಕ್ಕೂ ಅಗತ್ಯವಿರುವ, ಕಾರ್ಡು ಸಿಗದಿರುವ ಅರ್ಹರಿಗೆ ಹೊಸ ಕಾರ್ಡುಗಳ ವಿತರಣೆ ನಿಲ್ಲಿಸಿಬಿಡಬಹುದು. ಕಾಲಕ್ರಮೇಣ ಈ ಯೋಜನೆ ದಾಖಲೆಯಲ್ಲಿ ಮಾತ್ರ ಉಳಿಯಬಹುದು. ತಳಪಾಯ ಭದ್ರವಿಲ್ಲದ ಕಟ್ಟಡ ಕುಸಿಯುವಂತೆ ಅನ್ನಭಾಗ್ಯ ಯೋಜನೆಯೂ ಆಗಬಾರದೆಂದರೆ ಸರ್ಕಾರ ಮೊದಲು ವಸ್ತುನಿಷ್ಠವಾಗಿ ಮತ್ತು ರಾಜಕೀಯ ಕಾರಣಗಳನ್ನು ಇಟ್ಟುಕೊಳ್ಳದೆ ನೈಜ ಬಡವರನ್ನು ಗುರುತಿಸಿ ಅವರುಗಳಿಗೆ ಮಾತ್ರ ಉಚಿತ ಪಡಿತರ ಸಿಗುವಂತೆ ನೋಡಿಕೊಳ್ಳಬೇಕಿದೆ. ಅಗತ್ಯದ ಪ್ರಮಾಣದ ಅಕ್ಕಿ ಸಂಗ್ರಹಣೆ ಮತ್ತು ಹಣಕಾಸಿನ ಕ್ರೋಢೀಕರಣಕ್ಕೆ ಸಂಪನ್ಮೂಲಗಳನ್ನು ಹೊಂದಿಸುವ ಯೋಜನೆ ಮಾಡಬೇಕಿದೆ. ಯಾವುದೇ ಯೋಜನೆ ರಾಜಕೀಯ ಪಕ್ಷದ ಕಾರ್ಯಕ್ರಮವಾಗದೆ ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪಿತವಾಗಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಅದನ್ನು ಮುಂದುವರೆಸಿಕೊಂಡು ಹೋಗುವ ಹೊಣೆಗಾರಿಕೆ ಹೊತ್ತರೆ ಮಾತ್ರ ಬಡವರ ಉದ್ಧಾರ ಸಾಧ್ಯ.
-ಕ.ವೆಂ.ನಾಗರಾಜ್.
***************
ವಿಕ್ರಮ ವಾರಪತ್ರಿಕೆಯ 16.8.2015ರ ಸಂಚಿಕೆಯಲ್ಲಿ ಪ್ರಕಟಿತ:

17.8.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ದಿನಾಂಕ 19.8.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:



ಸೋಮವಾರ, ಜುಲೈ 20, 2015

ಹೆಸರಿಗಾಗಿ ಕೊಸರಾಟ


     ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:
     "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ, ಅವರಿಗೂ ಈಗ ಸಿಕ್ಕಿರುವ ಗೌರವದಿಂದ ಸಮಾಧಾನ ಆಗಿರುವುದಿಲ್ಲ. ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದೇನೆ, ಎಷ್ಟು ಹಣ, ಸಮಯ ಖರ್ಚು ಮಾಡಿದ್ದೇನೆ. ಅದಕ್ಕೆ ಹೋಲಿಸಿದರೆ ಈಗ ಸಿಕ್ಕಿರುವ ಗೌರವ ತುಂಬಾ ಕಡಿಮೆ ಆಯಿತು ಅಂತ ಕೊರಗುತ್ತಿರುತ್ತಾರೆ. ಇನ್ನೊಂದು ವಿಷಯ ಗೊತ್ತಾ? ಸಿಕ್ಕಿರುವ ಆ ಗೌರವವನ್ನು ಉಳಿಸಿಕೊಳ್ಳಲು ಅವರು ಇನ್ನು ಮುಂದೆಯೂ ಒದ್ದಾಡುತ್ತಲೇ ಇರಬೇಕು. ಒಣ ಹೆಸರು ಅನ್ನುವುದನ್ನು ಬಿಟ್ಟರೆ ಗೌರವ ಅನ್ನುವುದರಲ್ಲಿ ಏನಿದೆ?"
     "ಏನೆಂದೆ? ಸತ್ತವರಿಗೆ ಸಿಗುವ ಗೌರವವಾ? ಒಣ ಹೆಸರು ಮಾತ್ರ ಅಂತೀಯಾ?"
     "ಅಷ್ಟಲ್ಲದೇ ಏನು? ಒಂದು ಕಥೆ ಹೇಳ್ತೀನಿ, ಕೇಳು. ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ. ಒಂದು ದಿನ ಅಶರೀರವಾಣಿ ಅವನಿಗೆ ಕೇಳಿಸಿತು: 'ಎಲೈ ರಾಜನೇ, ಯಾರು ಹೆಚ್ಚು ದಾನ ಮಾಡುತ್ತಾರೋ ಅವರು ಸ್ವರ್ಗಕ್ಕೆ ಹೋಗುತ್ತಾರೆ. ಅವರ ಹೆಸರನ್ನು ಸ್ವರ್ಗದಲ್ಲಿರುವ ಬಂಗಾರದ ಬೆಟ್ಟದಲ್ಲಿ ಬರೆಯಲಾಗುವುದು'. ಸರಿ, ರಾಜನಿಗೆ ಬಂಗಾರದ ಬೆಟ್ಟದಲ್ಲಿ ತನ್ನ ಹೆಸರು ಕಾಣುವ ಬಯಕೆ ಗರಿಗಟ್ಟಿತು. ಪ್ರತಿದಿನ ಬಡಬಗ್ಗರಿಗೆ ಊಟ ಹಾಕಿಸಿದ, ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಕಟ್ಟಿಸಿದ, ಧರ್ಮಛತ್ರಗಳನ್ನು ಕಟ್ಟಿಸಿದ. ಪ್ರವಾಸಿಗರಿಗೆ ಅನುಕೂಲವಾಗಲು ವಿಶ್ರಾಂತಿಧಾಮಗಳನ್ನು ಕಟ್ಟಿಸಿದ. ದೇವಸ್ಥಾನಗಳನ್ನು ನಿರ್ಮಿಸಿದ, ಅದು ಮಾಡಿದ, ಇದು ಮಾಡಿದ, ಏನೇನೋ ಮಾಡಿದ. ಎಲ್ಲಾ ಕಟ್ಟಡಗಳಲ್ಲೂ ರಾಜನ ಹೆಸರೋ ಹೆಸರು. ಎಲ್ಲೆಲ್ಲಿ ನೋಡಿದರೂ ರಾಜನ ದಾನ ಮಾಡಿದ ಕುರಿತು ಫಲಕಗಳೇ ಫಲಕಗಳು. ಒಂದು ದಿನ ರಾಜ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ಹೋದವನೇ ಮೊದಲು ಮಾಡಿದ ಕೆಲಸ ಎಂದರೆ ಬಂಗಾರದ ಬೆಟ್ಟ ಎಲ್ಲಿದೆ ಅಂತ ವಿಚಾರಿಸಿದ್ದು. ಬೆಟ್ಟದ ಹತ್ತಿರ ಹೋಗಿ ನೋಡಿದರೆ ಬೆಟ್ಟದ ತುಂಬೆಲ್ಲಾ ಜಾಗವೇ ಇಲ್ಲದಷ್ಟು ಹೆಸರುಗಳು ತುಂಬಿಹೋಗಿದ್ದವು. ಅಲ್ಲಿದ್ದ ಮೇಲ್ವಿಚಾರಕರನ್ನು ತನ್ನ ಹೆಸರು ಎಲ್ಲಿದೆ ಅಂತ ವಿಚಾರಿಸಿದ. ಅವನು ಒಂದು ಬರೆಯುವ ಸಾಧನ ಕೊಟ್ಟು ಹೇಗೆ ಬೇಕೋ ಹಾಗೆ, ಎಲ್ಲಿ ಬೇಕೋ ಅಲ್ಲಿ ಹೆಸರನ್ನು ಬರೆದುಕೊಳ್ಳಬಹುದೆಂದು ಹೇಳಿದ. ಬರೆಯಲು ಜಾಗವೇ ಇಲ್ಲವಲ್ಲಾ ಅಂದಿದ್ದಕ್ಕೆ, ತಿರುಗಿಯೂ ನೋಡದೆ ಆತ ಹೇಳಿದ್ದೇನೆಂದರೆ, 'ಇರುವ ಯಾವುದಾದರೂ ಹೆಸರನ್ನು ಅಳಿಸಿ ನಿನ್ನ ಹೆಸರು ಬರೆದುಕೊಳ್ಳಬಹುದು' ಅಂತ."
     "ಹಾಂ??"
     "ಆ ರಾಜನಿಗಾದರೋ ಸತ್ತ ಮೇಲೆ ತನ್ನ ಹೆಸರು ಬರೆದುಕೊಳ್ಳುವ ಅವಕಾಶವಾದರೂ ಸಿಕ್ಕಿತ್ತು. ನಿನಗೇನು ಸಿಗುತ್ತೆ? ಮಣ್ಣು. ಸತ್ತ ಮೇಲೆ ನಿನಗೇ ನೀನು ಯಾರು ಅಂತ ಗೊತ್ತಿರುತ್ತೋ ಇಲ್ಲವೋ! ಸತ್ತ ಮೇಲೆ ಗೌರವ ಸಿಗುತ್ತೆ ಅಂತ ಈಗ ಯಾಕೆ ಒದ್ದಾಡುತ್ತೀಯಾ?"
     "ಹಾಂ??"
     "ಹೌದು ಕಣೋ ಮಂಕೆ. ಆದರೆ ಒಂದು ಸಮಾಧಾನವಿದೆ. ಈಗ ಬದುಕಿದ್ದಾಗ ನಿನ್ನ ಕಾಲು ಎಳೆದವರೇ ಮುಂದೆ  ನೀನು ಸತ್ತ ಮೇಲೆ ನಿನ್ನ ಫೋಟೋಗೆ ಹಾರ ಹಾಕಿ 'ಅವರು ಎಷ್ಟು ದೊಡ್ಡ ವ್ಯಕ್ತಿ. ಆದರೆ ಅವರಿಗೆ ಬದುಕಿದ್ದಾಗ ಸಿಗಬೇಕಾದ ಗೌರವ ಸಿಗಲಿಲ್ಲ. ಅಂತಹ ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಅವರ ಸಾವಿನಿಂದ ತುಂಬಲಾರದ ನಷ್ಟ ಆಗಿದೆ' ಅಂತ ಕಣ್ಣೀರು ಹಾಕ್ತಾರೆ. ನಿನ್ನದು ಒಂದು ಒಳ್ಳೆಯ ಪೋಸ್ ಇರುವ ಫೋಟೋ ಇಲ್ಲದಿದ್ದರೆ ಈಗಲೇ ತೆಗೆಸಿಟ್ಟಿರು. ಮುಂದೆ ಉಪಯೋಗಕ್ಕೆ ಬರುತ್ತೆ."
     "ಹಾಂ??"
     "ಈ ಹೆಸರಿನ ಹಂಬಲ ಇದೆಯಲ್ಲಾ, ಅದು ಮಾಡಬಾರದ್ದು ಮಾಡಿಸುತ್ತೆ. ತನಗಿಂತಾ ಹೆಚ್ಚು ಹೆಸರು ಇನ್ನೊಬ್ಬರಿಗೆ ಬರಬಾರದು ಅಂತ ಇತರರನ್ನು ಕೀಳಾಗಿ ನೋಡುವಂತೆ ಮಾಡುತ್ತೆ. ಅಧಿಕಾರ, ಹೆಸರು ಬರಲು ಕಾರಣರಾದವರನ್ನೇ ಮುಂದೆ ಅವರಿಂದ ತನ್ನ ಅಧಿಕಾರ, ಹೆಸರಿಗೆ ಕುತ್ತು ತರುತ್ತಾರೆಂದು ದ್ವೇಷಿಸುವಂತೆ ಮಾಡುತ್ತೆ. ಸ್ನೇಹಿತರು, ಬಂಧುಗಳೇ ಶತ್ರುಗಳಂತೆ ಕಾಣಿಸುವಂತೆ ಮಾಡುತ್ತೆ. ಈ ಹೆಸರು ದುಂಬಿ ಇದ್ದಂತೆ. ಅದು ಹಾಡೂ ಹೇಳುತ್ತೆ. ಚುಚ್ಚಿಯೂ ಚುಚ್ಚುತ್ತೆ."
     "ನಿಜ, ನಿಜ. ಈಗಿನ ರಾಜಕಾರಣಿಗಳನ್ನು ನೋಡಿದರೇ ಗೊತ್ತಾಗುತ್ತೆ."
     "ಬರೀ ರಾಜಕಾರಣಿಗಳೇನು, ಸಾಹಿತಿಗಳು, ಅಧಿಕಾರಿಗಳು, ವರ್ತಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಇಂಥವರು, ಅಂಥವರು, ನಾವು ಎಲ್ಲರೂ ಹೀಗೆ ಮಾಡುವವರೇ. ಅವರಿಗೂ ಶಾಂತಿಯಿಲ್ಲ, ಅವರಿಂದ ಬೇರೆಯವರಿಗೂ ಶಾಂತಿಯಿಲ್ಲ."
     "ಹಂಗಂತೀಯ??"
     "ಹಂಗನ್ನದೆ ಇನ್ನು ಹ್ಯಾಂಗನ್ನಲಿ, ಮಂಕಣ್ಣ. ಇನ್ನೊಂದು ವಿಷಯ ಗೊತ್ತಾ? ಈ ಹೆಸರು ಬಂದವರು ಇದ್ದಾರಲ್ಲಾ, ಅವರು ಮೊದಲು ಇದ್ದಂತೆ ಇರುವುದಿಲ್ಲ. ತಾವು ಎಲ್ಲರಿಗಿಂತ ಮೇಲು ಅಂದುಕೊಂಡು ಬೇರೆಯವರನ್ನು, ಬೇರೆಯವರಿರಲಿ, ತನ್ನ ಸ್ನೇಹಿತರು, ಬಂಧುಗಳನ್ನೇ ಹಗುರವಾಗಿ ಕಂಡು ಅವಮಾನ ಮಾಡುತ್ತಾರೆ. ಈ ಸ್ವಭಾವದಿಂದ ವಿನಾಕಾರಣ ಇತರರ ದ್ವೇಷ ಕಟ್ಟಿಕೊಳ್ಳುತ್ತಾರೆ."
     "ಅಯ್ಯಪ್ಪಾ! ನನಗೆ ಹಾರ ಹಾಕದಿದ್ದದ್ದೇ ಒಳ್ಳೆಯದಾಯಿತು ಬಿಡು."
     "ಈಗ ಹಾಕದಿದ್ದರೇನಂತೆ, ಮುಂದೆ ಒಂದು ದಿನ ಹಾಕುತ್ತಾರೆ, ಬಿಡು. ಈ ಹೆಸರಿನ ಹಂಬಲ ಇದೆಯಲ್ಲಾ, ಇದು ಎಂಥಾ ದೊಡ್ಡ ವ್ಯಕ್ತಿಗಳನ್ನೂ ಬಿಡುವುದಿಲ್ಲ. ಹೆಸರು, ಅಧಿಕಾರಕ್ಕಾಗಿ ಅವರು ಸ್ವಂತ ವ್ಯಕ್ತಿತ್ವವನ್ನೇ ಮರೆತುಬಿಡುತ್ತಾರೆ."
     "ಅದೇನೋ ಸರಿ, ಈಗಿನ ದೇಶದ ನಾಯಕರು ಇರೋದೇ ಹಾಗೆ. ಆದರೂ ಅವರು ನಾಯಕರು. ನೀನು ಮಾತನ್ನು ಎಲ್ಲೆಲ್ಲಿಗೋ ತಿರುಗಿಸುತ್ತಿದ್ದೀಯಾ. ಈಗಿನ ಸಂದರ್ಭದ ಬಗ್ಗೆ ಮಾತನಾಡು. ಕೊನೆಯ ಪಕ್ಷ ಬಾಯಿಮಾತಿನಲ್ಲಾದರೂ ಹಾಳು ಬಿದ್ದು ಹೋಗಲಿ ಅಂದುಕೊಂಡು ನನ್ನ ಬಗ್ಗೆ ಎರಡು ಒಳ್ಳೆಯ ಮಾತು ಹೇಳಬಹುದಿತ್ತಲ್ಲವಾ?"
      "ಹೇಳಿದ್ದರೆ ನಿನಗೆ ಏನು ಸಿಗುತ್ತಿತ್ತು? ಅವರಿಗೆ ಹೇಳಲು ಬೇಕಿಲ್ಲದಿರಬಹುದು. ನಿನ್ನನ್ನು ಹೊಗಳಿದರೆ ಅವರಿಗೆ ಬೆಲೆ ಕಡಿಮೆ ಆಗುತ್ತೆ ಅಂದುಕೊಂಡಿರಬಹುದು. ಸೇರಿರುವ ಜನ ಯಾರನ್ನು ಯಾರು ಗೌರವಿಸಿದರೂ ಅಷ್ಟೆ, ಗೌರವಿಸದಿದ್ದರೂ ಅಷ್ಟೆ, ತಲೆ ಕೆಡಿಸಿಕೊಳ್ಳದವರು. ಹಾಗಿರುವಾಗ ನಿನಗೆ ಅವರಿಂದ ಗೌರವಿಸಿಕೊಳ್ಳಬೇಕು ಅನ್ನುವ ಹಂಬಲ ಯಾಕೆ? ಒಂದು ಮಾತು ಹೇಳ್ತೀನಿ ಕೇಳು, ಪ್ರತಿಭೆ ಅನ್ನುವುದು ದೇವರ ಕೊಡುಗೆ. ದೇವರಿಗೆ ತಲೆಬಾಗಬೇಕು. ಗೌರವ ಜನರು ಕೊಡುವುದು. ಕೊಟ್ಟರೆ  ಅವರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ನಮಗೆ ನಾವೇ ಕೊಟ್ಟುಕೊಳ್ಳುವುದು. ಎಚ್ಚರವಿರಬೇಕು."
     ಅಷ್ಟರಲ್ಲಿ ಧ್ವನಿವರ್ಧಕದಲ್ಲಿ ಮೊಳಗಲು ಪ್ರಾರಂಭವಾಯಿತು, "ಮಂಕಣ್ಣನವರು ಎಲ್ಲಿದ್ದರೂ ಬರಬೇಕು. ಮಾನ್ಯ ಅತಿಥಿಗಳು ಅವರಿಗೆ ಮಾಲಾರ್ಪಣೆ ಮಾಡಲಿದ್ದಾರೆ". ಮಂಕಣ್ಣ ಕೂಡಲೇ ಅಡ್ಡವಿದ್ದವರನ್ನು ಪಕ್ಕಕ್ಕೆ ಸರಿಸುತ್ತಾ ವೇದಿಕೆಯ ಕಡೆಗೆ ಧಾವಿಸಿದ! ಹಾರ ಹಾಕಿಸಿಕೊಂಡು ಬೀಗುತ್ತಾ ಬಂದ ಮಂಕನನ್ನು ಮೂಢ ಕೆಣಕಿದ, "ಅಂತೂ ಹಾರ ಹಾಕಿಸಿಕೊಂಡೆಯಲ್ಲಾ! ಸಮಾಧಾನವಾಯಿತಾ?" ಈ ಮಾತು ಕೇಳಿ ಮಂಕಾದ ಮಂಕನನ್ನು ಕಂಡು ಮರುಕಪಟ್ಟು ಹೇಳಿದ:
     "ನಿಜ, ನೀನು ನಿಜವಾಗಿಯೂ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೀಯಾ. ಆದರೆ ಅಲ್ಲಿ ವೇದಿಕೆಯ ಮೇಲೆ ಕುಳಿತವರನ್ನೊಮ್ಮೆ ನೋಡು. ಅವರು ನಿನ್ನ, ನಿನ್ನಂತಹವರ ಶ್ರಮದಲ್ಲಿ ಕೆಲಸ ಮಾಡದೇ ಗೌರವ ಪಡೆಯುತ್ತಿದ್ದಾರೆ. ಜನ ಅವರಿಗೇ ಹಾರ ಹಾಕಿ, ಅವರ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ. ಅದು ಅವರ ಸಾಮರ್ಥ್ಯ. ಎಲ್ಲರಿಗೂ ಅದು ಬರಲ್ಲ."
     "ಅದೇನೋ ಸರಿ ಬಿಡು. ನಾನು ಪಡೆದದ್ದು ನನಗೆ. ಅವರು ಪಡೆದದ್ದು ಅವರಿಗೆ."
     "ಕನ್ನಡದ ಸುಪ್ರಸಿದ್ಧ ಗೀತ ರಚನಕಾರ ಎಸ್.ಕೆ. ಕರೀಮ್‌ಖಾನರ ಹೆಸರು ಕೇಳಿದ್ದೀಯಲ್ಲವಾ? ಅವರ ಬಡತನವನ್ನು ದುರುಪಯೋಗಿಸಿಕೊಂಡು ಅವರಿಂದ ಗೀತೆಗಳನ್ನು ಬರೆಸಿ ತಮ್ಮ ಹೆಸರಿನಲ್ಲಿ ಹಾಕಿಕೊಂಡು ಪ್ರಸಿದ್ಧರಾದವರೂ ಈ ನೆಲದಲ್ಲಿ ಇದ್ದರು."
     "ಹೌದಾ?"
     "ನಿಜ ಕಣೋ. ಈಗ ಹೆಸರಿನ ಹಿಂದೆ ಡಾಕ್ಟರ್ ಅಂತ ಸೇರಿಸಿಕೊಳ್ಳೋದು ಕಷ್ಟವೇನಿಲ್ಲ. ಹಣ ಖರ್ಚು ಮಾಡಿದರೆ ಡಾಕ್ಟೊರೇಟ್ ಕೊಡಿಸುವ ದಲ್ಲಾಳಿಗಳು ಡಾಕ್ಟೊರೇಟ್ ಕೊಡಿಸುತ್ತಾರೆ. ನೀನು ಸಾಹಿತಿಯಾಗಿ ಒಂದೆರಡು ಪುಸ್ತಕ ಬರೆದು, ಲೇಖನಗಳನ್ನು ಬರೆದುಬಿಟ್ಟೆಯೋ ನಿನ್ನ ಅಂತಸ್ತು ಸ್ವಲ್ಪ ಏರುತ್ತದೆ. ಶ್ರಮ ಪಟ್ಟರೆ, ರಾಜಕಾರಣಿಗಳ ಬೆನ್ನು ಬಿದ್ದರೆ ಪ್ರಶಸ್ತಿಯೂ ಸಿಕ್ಕಿಬಿಡುತ್ತದೆ."
     "ಹಾಗಾದರೆ ಪ್ರಶಸ್ತಿ ಪಡೆದವರೆಲ್ಲಾ ಹೀಗೆಯೇ ಪಡೆದವರಾ?"
     "ಛೇ, ಛೇ. ಹಾಗೆಂದರೆ ಬಾಯಲ್ಲಿ ಹುಳ ಬೀಳುತ್ತದೆ. ಅರ್ಹತೆಯಿದ್ದು ಪ್ರಶಸ್ತಿ ಪಡೆದವರು ತಮ್ಮ ತೂಕ ಉಳಿಸಿಕೊಂಡಿರುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಹಾಗೆ. ಆದರೆ ಲಾಬಿ ಮಾಡಿ ಪ್ರಶಸ್ತಿ ಪಡೆದವರ ತಲೆಯೇ ನಿಲ್ಲುವುದಿಲ್ಲ. ಎಡಬಿಡಂಗಿ ಹೇಳಿಕೆಗಳನ್ನು ಕೊಡುತ್ತಾ, ವಿವಾದ ಸೃಷ್ಟಿಸುತ್ತಾ ಸದಾ ತಮ್ಮ ಹೆಸರು ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿರುತ್ತಾರೆ."
     "ದೊಡ್ಡವರ ವಿಷಯ ನಮಗೇಕೆ ಬಿಡು. ಭೋಗಿ ಪಡೆದಿದ್ದು ಭೋಗಿಗೆ, ಜೋಗಿ ಪಡೆದಿದ್ದು ಜೋಗಿಗೆ."
     "ಹೋಗಲಿ ಬಿಡು. ಏನೋ, ಹಾರ ಹಾಕಲಿಲ್ಲ ಅಂತ ನೀನು ಪೇಚಾಡ್ತಾ ಇದ್ದಿಯಲ್ಲಾ, ಅದಕ್ಕೆ ನಾಲ್ಕು ಮಾತಾಡಿದೆ ಅಷ್ಟೆ. ಈ ಮನುಷ್ಯರ ಪ್ರಪಂಚ ನಡೀತಿರೋದೇ ಈ ನಾನು, ನಾನು ಅನ್ನೋ ಹೆಸರಿನ ಹಂಬಲದಿಂದ. ನಾನೂ, ನೀನೂ ಇದಕ್ಕೆ ಹೊರತಾದವರೇನಲ್ಲ."
     ಅಕ್ಕ ಪಕ್ಕದಲ್ಲಿದ್ದವರಿಗೆ ಇವರ ಮಾತುಗಳಿಂದ ಕಿರಿಕಿರಿಯಾಗುತ್ತಿದ್ದರಿಂದ ಇವರನ್ನು ಅಸಹನೆಯಿಂದ ನೋಡುತ್ತಿದ್ದರು. ಇದನ್ನು ಗಮನಿಸಿದ ಇವರೂ ಸುಮ್ಮನೆ ಕುಳಿತು ಸಭಾಕಲಾಪ ವೀಕ್ಷಿಸತೊಡಗಿದರು.


-ಕ.ವೆಂ.ನಾಗರಾಜ್.
**************
13.7.2015ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.




ಮಂಗಳವಾರ, ಜುಲೈ 14, 2015

ಸಹನೆಯ ಮಿತಿ


     "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು ಸಹಿಸಿಕೊಳ್ಳಲಾಗುವುದಿಲ್ಲ' ಎಂಬುದೇ ಆಗಿದೆ. ಸಹನೆಯ ಮಹತ್ವ ಕಾಣಬರುವುದು ಇಲ್ಲಿಯೇ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||
     ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಪ್ರಯೋಗಗಳನ್ನು ಮಾಡುತ್ತಾ ಮಾಡುತ್ತಾ, ವಿಫಲರಾದರೂ ಪ್ರಯತ್ನ ಮುಂದುವರೆಸಿ ಯಶಸ್ವಿಯಾದವರ ಪಟ್ಟಿ ದೊಡ್ಡದಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ಆ ಒಂದು ಸಾವಿರ ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುವುದೂ ದೊಡ್ಡ ಸಂಗತಿಯೇ ಅಲ್ಲವೇ? ಛಲ ಬಿಡದ ತ್ರಿವಿಕ್ರಮರೆನಿಸಿಕೊಳ್ಳಲು ಸಹನೆ ಇರಲೇಬೇಕು. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ಅದನ್ನು ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಹೀಗೆ ಸಹನೆ ಮೊಳಕೆಯೊಡೆಯುತ್ತದೆ. ಯಾವುದೇ ಸಾಧನೆಗೆ ಸಹನೆ ಬೇಕೇಬೇಕು. ಅಟ್ಟ ಹತ್ತಲಾಗದವನು ಬೆಟ್ಟ ಹತ್ತಲಾರ. ಯಾವುದೇ ದೊಡ್ಡ ಸಾಧನೆ ಕಾರ್ಯರೂಪಕ್ಕೆ ಬರುವುದು ಯಾರೂ ಗಮನಿಸದ ಒಂದು ಮೊದಲಿನ ಸಣ್ಣ ಹೆಜ್ಜೆಯಿಂದಲೇ ಎಂಬುದನ್ನು ನೆನಪಿಡೋಣ.
     ಧಾರ್ಮಿಕವಾಗಿಯೂ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು, ಕಟ್ಟಳೆಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆಯೆಂದರೆ ತಪ್ಪಲ್ಲ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. 'ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು' ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠವೇ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. 'ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ' ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಅರ್ಥಾತ್ ಸಹನಾಮುಯಾಗಿರಬೇಕು. ಪರಿಪೂರ್ಣತೆಯ ಸಾಧನೆಗೆ ತಾಳ್ಮೆ ಅತ್ಯಂತ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
     ಸನಾತನ ಧರ್ಮವಂತೂ ಸಹಿಷ್ಣುತೆಗ ಪ್ರಾಧಾನ್ಯತೆ ನೀಡಿದ ಧರ್ಮವಾಗಿದೆ. ಇದರಲ್ಲಿ ಸಹಿಷ್ಣುತೆಗೆ ೧೦ ಪರೀಕ್ಷೆಗಳಿವೆ. ಅವೆಂದರೆ:
೧. ಅಹಿಂಸೆ (ಯಾರನ್ನೂ ದೈಹಿಕವಾಗಿ, ಮಾನಸಿಕವಾಗಿ, ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ, ಇನ್ನು ಯಾವುದೇ ರೀತಿಯಲ್ಲಾಗಲೀ ನೋಯಿಸದಿರುವುದು.)
೨. ಸತ್ಯ,
೩. ಅಸ್ತೇಯ (ಇತರರ ವಸ್ತುಗಳನ್ನು ಭೌತಿಕವಾಗಿಯಾಗಲೀ, ಮಾನಸಿಕವಾಗಿಯಾಗಲಿ ಕದಿಯದಿರುವುದು),
೪. ಬ್ರಹ್ಮಚರ್ಯ (ಮದುವೆಯಾಗದೆ ಇರುವುದು ಎಂಬ ಅರ್ಥ ಮಾತ್ರವಲ್ಲದೆ, ಬ್ರಹ್ಮ=ಆಧ್ಯಾತ್ಮಿಕ ವಿಚಾರದಲ್ಲಿ ಸಂಚರಿಸುವುದು ಎಂಬ ಅರ್ಥವೂ ಇದೆ)
೫. ದಯೆ,
೬. ಮೋಸ ಮಾಡದಿರುವುದು,
೭. ಕ್ಷಮಾಗುಣ,
೮. ಧೃತಿ (ಯಾವುದೇ ಸಂದರ್ಭದಲ್ಲಿ, ಹಾನಿ, ನಷ್ಟ, ಅವಮಾನ, ಇತ್ಯಾದಿ ಸಂದರ್ಭಗಳಲ್ಲಿ ಧೃಢಚಿತ್ತತೆ)
೯. ಮಿತಾಹಾರ (ಅಗತ್ಯವಿರುವಷ್ಟೇ ಆಹಾರ ಸೇವನೆ) ಮತ್ತು
೧೦. ಶೌಚ (ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು).
     ಮೇಲಿನ ೧೦ ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರದೇ ಇರಲಾರದು.
     ಇಷ್ಟಾದರೂ ಮತೀಯ, ಧಾರ್ಮಿಕ ಅಸಹನೆಗಳು ಇಂದು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ತಿಳಿದು ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತವೆಂದರೆ ಅತಿಶಯೋಕ್ತಿಯಲ್ಲ. ಸಹನೆಯಿದ್ದಲ್ಲಿ ಸಮಸ್ಯೆಗಳಿಗೆ ಸ್ಥಳವಿರುವುದಿಲ್ಲ.
     ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ ಎಂಬುದನ್ನು ಅರಿತೆವು. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ ಎಂಬುದೂ ಅನುಭವದ ಮಾತು. ಸಹನೆಯ ವಿರುದ್ಧ ಗುಣವಾದ ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ಸಂಘರ್ಷವಲ್ಲ, ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ ಕೊಡಬಲ್ಲದು.
     ನಿರಂತರವಾದ ಕಿರುಕುಳ, ಯಾವುದೋ ಒಂದು ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ, ಇತ್ಯಾದಿಗಳು ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಇನ್ನು ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಸಂಬಂಧಿಸಿದ ಯಾರಿಗೂ ಹಿತವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಟ್ಟಿಗೊಳಗಾದ ವ್ಯಕ್ತಿ ರಾಕ್ಷಸನಂತೆಯೇ ವರ್ತಿಸುತ್ತಾನೆ. ಅವನ ಸ್ಥಿತಿ ಹೇಗಿರುತ್ತದೆಂದರೆ:
ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
     ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲ ಎಂಬುದು ಸಹನೆಯ ಕಟ್ಟೆ ಒಡೆದವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ.  ವಿವೇಚನಾಶಕ್ತಿ ನಾಶವಾಗಿರುವ ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
     ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಹುಳುಕು ಹುಡುಕುವವರು ವಿಷ ಕಕ್ಕುತ್ತಾರೆ, ಒಳಿತು ಕಾಣುವವರು ಅಮೃತ ಸುರಿಸುತ್ತಾರೆ ಎಂಬುದು ಅನುಭವಿಗಳ ನುಡಿ. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಲೇಖನದಲ್ಲಿ ತಿಳಿಸಿರುವ ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು.
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||
      "ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ."
-ಕ.ವೆಂ.ನಾಗರಾಜ್.
**************
ದಿನಾಂಕ 6.07.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: