ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಡಿಸೆಂಬರ್ 25, 2017

ಬದ್ಧತೆ (Commitment)


     1924ರಲ್ಲಿ ಜಪಾನಿನ ಟೋಕಿಯೋ ವಿಶ್ವವಿದ್ಯಾಲಯದ ಒಬ್ಬರು ಪ್ರೊಫೆಸರ್ ಒಂದು ಕಂದು ಬಣ್ಣದ ಮುದ್ದಾದ ನಾಯಿಯನ್ನು ಸಾಕಲು ತಂದರು. ಇಬ್ಬರಿಗೂ ಒಂದು ರೀತಿಯ ಪ್ರೀತಿಯ ಅನುಬಂಧ ಬೆಳೆಯಿತು. ಪ್ರತಿನಿತ್ಯ ಟ್ರೈನಿನಲ್ಲಿ ಕೆಲಸದ ಸ್ಥಳಕ್ಕೆ ಹೋಗಿಬರುತ್ತಿದ್ದ ಅವರು ಸಾಯಂಕಾಲ ಮರಳಿ ಬರುವಾಗ ಹತ್ತಿರವೇ ಇದ್ದ ಶಿಬುಯ ರೈಲ್ವೆ ನಿಲ್ದಾಣಕ್ಕೆ ಹೋಗಿ ಕಾಯುತ್ತಿದ್ದ 'ಹಚಿಕೋ' ಎಂಬ  ಹೆಸರಿನ ಆ ನಾಯಿ ಪ್ರತಿ ದಿನ ಅವರನ್ನು ಸ್ವಾಗತಿಸಿ ಅವರೊಂದಿಗೆ ಮನೆಗೆ ಬರುತ್ತಿತ್ತು. ಒಂದು ದಿನವೂ ತಪ್ಪದ ಈ ಕ್ರಮ ಒಂದು ವರ್ಷದವರೆಗೂ ಮುಂದುವರೆಯಿತು. ಮೇ, 1925ರಲ್ಲಿ ಆ ಪ್ರೊಫೆಸರ್ ಪಾಠ ಮಾಡುತ್ತಿದ್ದಾಗಲೇ ಕುಸಿದು ಮೃತರಾದರು. ಅಂದೂ ಸಹ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಹಚಿಕೋ ರೈಲು ಬಂದರೂ ಒಡೆಯ ಬಾರದುದನ್ನು ಕಂಡು ನಿರಾಶೆಯಿಂದ ಮರಳಿತ್ತು. ಮರುದಿನವೂ ಹೋಗಿ ಬಂದಿತು. ನಂತರದ ದಿನಗಳಲ್ಲೂ ತಪ್ಪದೆ ಹೋಗಿಬರುತ್ತಿತ್ತು. ಆಶ್ಚರ್ಯವಾಗುತ್ತದೆ, ಮುಂದಿನ 9 ವರ್ಷಗಳವರೆಗೆ ಒಂದು ದಿನವೂ ತಪ್ಪದ ಈ ಕಾಯುವಿಕೆ ಆ ನಾಯಿ ಸಾಯುವರೆಗೂ ಸಾಗಿತ್ತು. ಅದನ್ನು ಗಮನಿಸುತ್ತಿದ್ದ ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರು ಸಹ ಅದರ ಬಗ್ಗೆ ವಿಶೇಷ ಅಕ್ಕರೆ ಹೊಂದಿದ್ದರು. ಆ ನಾಯಿಯ ನೆನಪಿಗಾಗಿ ಪ್ರತಿಮೆಯನ್ನು ನಿಲ್ದಾಣದ ಪ್ರವೇಶದ್ವಾರದ ಬಳಿ ಸ್ಥಾಪಿಸಿ ಆ ದ್ವಾರಕ್ಕೆ 'ಹಚಿಕೋ ದ್ವಾರ' ಎಂದು ಹೆಸರಿಟ್ಟಿದ್ದಾರೆ. ಅದು ಈಗಲೂ ಒಂದು ವೀಕ್ಷಣೀಯ ಸ್ಥಳವಾಗಿದೆ. ಆ ನಾಯಿಯ ನಡವಳಿಕೆಯನ್ನು ಪ್ರೀತಿ ಎನ್ನುವುದೋ, ಬದ್ಧತೆ ಎನ್ನುವುದೋ? ಪ್ರೀತಿಯಿಂದ ಒಡಮೂಡಿದ ಬದ್ಧತೆ ಎನ್ನುವುದೇ ಸೂಕ್ತ!
     ಬದ್ಧತೆ ಅಂದರೆ ಒಂದು ನಿಶ್ಚಿತವಾದ ನಡವಳಿಕೆ, ಕ್ರಮ, ರೀತಿಗಳಿಗೆ ಬದ್ಧರಾಗುವುದು ಅನ್ನಬಹುದು. ಸ್ವಂತದ ಬದ್ಧತೆ ಎಂದರೆ ನಾನು ಹೀಗಿರಬೇಕು, ಹಾಗಿರಬೇಕು ಎಂದು ಕಟ್ಟುಪಾಡುಗಳನ್ನು ಹಾಕಿಕೊಳ್ಳುವುದು. ಪ್ರತಿನಿತ್ಯ ಬೆಳಿಗ್ಗೆ ಬೇಗ ಏಳುತ್ತೇನೆ, ವಾಕಿಂಗ್/ವ್ಯಾಯಾಮ ಮಾಡುತ್ತೇನೆ, ಸ್ನಾನ ಮಾಡಿದ ನಂತರವೇ ತಿಂಡಿ ತಿನ್ನುತ್ತೇನೆ, ತಪ್ಪದೆ ದೇವಸ್ಥಾನಕ್ಕೆ ಹೋಗುತ್ತೇನೆ, ಗಳಿಕೆಯ ಸ್ವಲ್ಪ ಭಾಗವನ್ನು ದೀನ-ದಲಿತರಿಗೆ ವೆಚ್ಚ ಮಾಡುತ್ತೇನೆ ಇತ್ಯಾದಿ ನಿರ್ಧಾರಗಳನ್ನು ಮಾಡಿಕೊಂಡು ಅದಕ್ಕೆ ಅನುಸಾರವಾಗಿ ನಡೆಯುವುದೇ ಸ್ವಂತದ ಬದ್ಧತೆ ಎನ್ನಿಸುತ್ತದೆ. ಈ ಕೆಲಸ ಆದರೆ ತಿರುಪತಿಗೆ ಹೋಗಿ ಮುಡಿ ಕೊಡುತ್ತೇನೆ, ಮಗ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ ಸೈಕಲ್ ತೆಗೆಸಿಕೊಡುತ್ತೇನೆ ಇತ್ಯಾದಿವ ಷರತ್ತು ಬದ್ಧ ಬದ್ಧತೆಗಳೂ ಇರುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಆಡಿದಂತೆ/ನಿರ್ಧರಿಸಿದಂತೆ ನಡೆಯುವುದೇ ಬದ್ಧತೆ. ಮದುವೆಯ ಸಂದರ್ಭದಲ್ಲಿ 'ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ' ಎಂದು ಪರಸ್ಪರ ಆಶ್ವಾಸನೆ ಕೊಟ್ಟುಕೊಳ್ಳುವುದೂ ಶಾಸ್ತ್ರೋಕ್ತ ಬದ್ಧತೆಯೇ! ಹೀಗೆ ನಡೆದಾಗ ಸಿಗುವುದೇ ಆತ್ಮ ಸಂತೋಷ.
     ರಮೇಶ, ಸುರೇಶ, ಗಣೇಶ ಮೂವರು ಸ್ನೇಹಿತರು. ಗಣೇಶ ತನ್ನ ಮನೆಯಲ್ಲಿ ಮರುದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೆ ತಪ್ಪದೆ ಬರಬೇಕೆಂದು ರಮೇಶ, ಸುರೇಶರನ್ನು ಆಹ್ವಾನಿಸುತ್ತಾನೆ. ಖಂಡಿತಾ ಬರುವುದಾಗಿ ಇಬ್ಬರೂ ಹೇಳುತ್ತಾರೆ. ಕಾರ್ಯಕ್ರಮದ ದಿನ ಭಾರಿ ಮಳೆ ಸುರಿಯುತ್ತದೆ. ರಸ್ತೆಗಳಲ್ಲಿ ನೀರು ಮೊಣಕಾಲೆತ್ತರದಲ್ಲಿ ಹರಿಯುತ್ತಿರುತ್ತದೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. 'ತಲೆ ಮೇಲೆ ತಲೆ ಬಿದ್ದರೂ ತಪ್ಪದೆ ಬರುತ್ತೇನೆ' ಎಂದಿದ್ದ ರಮೇಶ ದೂರವಾಣಿ ಮೂಲಕ, 'ತಪ್ಪು ತಿಳಿಯಬೇಡ. ಇಂತಹ ಮಳೆಯಲ್ಲಿ ಬರಲಾಗುತ್ತಿಲ್ಲ' ಎಂದು ತಿಳಿಸುತ್ತಾನೆ. 'ಬರುತ್ತೇನೆ' ಎಂದಷ್ಟೇ ತಿಳಿಸಿದ್ದ ಸುರೇಶ ಮಳೆಯಲ್ಲಿ ನೆಂದು ತೊಪ್ಪೆಯಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾನೆ. ರಮೇಶನಿಗೆ ತಪ್ಪಿಸಿಕೊಳ್ಳಲು ಸಕಾರಣವಿರುತ್ತದೆ. ಅದನ್ನು ತಪ್ಪೆನ್ನಲಾಗುವುದಿಲ್ಲ. ಆದರೆ ಸುರೇಶನ ಬದ್ಧತೆ ಮಾತ್ರ ಮೆಚ್ಚುವಂತಹದು. ನನ್ನ ಚಿಕ್ಕ ವಯಸ್ಸಿನಲ್ಲಿನ ಒಂದು ಉದಾಹರಣೆ ಹಂಚಿಕೊಳ್ಳಬೇಕೆನಿಸಿದೆ. ನಾನು ಆರೆಸ್ಸೆಸ್ಸಿನ ಒಂದು ಪ್ರಭಾತ ಶಾಖೆಯ ಮುಖ್ಯ ಶಿಕ್ಷಕನಾಗಿದ್ದೆ. ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ಮೈದಾನದಲ್ಲಿ ನಿಂತು ಶಾಖೆ ಪ್ರಾರಂಭದ ಸೂಚನೆಯಾಗಿ ನಾನು ಒಬ್ಬನೇ ಇರಲಿ, ಹಲವಾರು ಜನರಿರಲಿ ಸೀಟಿ ಊದುತ್ತಿದ್ದೆ. ಮೈದಾನದ ಬದಿಯಲ್ಲಿನ ಮನೆಗಳಲ್ಲಿ ಮುಂಭಾಗದಲ್ಲಿ ಗುಡಿಸುವುದು, ನೀರು ಚಿಮುಕಿಸಿ ರಂಗೋಲಿ ಹಾಕುವುದು, ಇತ್ಯಾದಿ ಚಟುವಟಿಕೆಗಳೂ   ಅದೇ ಸಮಯದಲ್ಲಿ ಪ್ರಾರಂಭವಾಗುತ್ತಿದ್ದವು. ನನಗೆ ಜ್ವರ ಬಂದಿದ್ದರಿಂದ ಎರಡು ದಿನಗಳು ನನಗೆ ಶಾಖೆಗೆ ಹೋಗಲಾಗಿರಲಿಲ್ಲ. ಮೂರನೆಯ ದಿನ ಶಾಖೆ ಮುಗಿಸಿ ಹೋಗುವಾಗ ಒಬ್ಬ ಗೃಹಿಣಿ ನನ್ನನ್ನು ಕರೆದು "ಎರಡು ದಿನಗಳು ಏಕೆ ಬರಲಿಲ್ಲ? ನಿನ್ನ ಸೀಟಿ ಕೇಳಿದ ಮೇಲೇ ನಾನು ಏಳುತ್ತಿದ್ದೆ. ನೀನು ಸೀಟಿ ಊದದೇ ಇದ್ದರಿಂದ ನಾನು ಏಳುವುದು ತಡವಾಯಿತು" ಎಂದು ಹೇಳಿದ್ದರು! ಸಮಯಕ್ಕೆ ಸರಿಯಾಗಿ ಸೀಟಿ ಊದುವುದು ನನ್ನ ಬದ್ದತೆಯಾಗಿದ್ದರೆ, ಸೀಟಿ ಕೇಳಿ ಏಳುವುದು ಅವರು ರೂಢಿಸಿಕೊಂಡ ಬದ್ಧತೆಯಾಗಿತ್ತೇನೋ ಎನ್ನಿಸಿ ನಗು ಬಂದಿತ್ತು.
     ಸರ್ವಜ್ಞನ ವಚನ 'ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಅಧಮ ತಾನಾಡಿಯೂ ಮಾಡದವನು' ಎಂಬುದು ಬದ್ಧತೆಯ ಮಹತ್ವವನ್ನು ಎತ್ತಿಹಿಡಿದಿದೆ. ಬದ್ಧತೆ ಮತ್ತು ವಿಶ್ವಾಸಾರ್ಹತೆಗಳು ಜೊತೆಗಾರರು. ಬದ್ಧತೆಯಿರುವವರು ಜನರ ಮನ್ನಣೆ, ನಂಬಿಕೆಗೆ ಪಾತ್ರರಾಗುತ್ತಾರೆ. ಬದ್ಧತೆಯಿಲ್ಲದವರು ಬೊಗಳೆದಾಸರು ಎಂದು ಕರೆಯಿಸಿಕೊಳ್ಳುತ್ತಾರೆ. ಬಹುತೇಕ ರಾಜಕಾರಣಿಗಳು, ಪ್ರಚಾರದ ಹಂಗಿಗೆ ಬಿದ್ದ ಹಲವರು ಬೊಗಳೆದಾಸರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ವೈಯಕ್ತಿಕವಾಗಿ ಬದ್ಧತೆಯಿರುವವರು ಸುಯೋಗ್ಯ ನಾಗರಿಕರಾಗಿರುತ್ತಾರೆ. ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಹ ಉತ್ತಮ ವ್ಯಕ್ತಿಗಳು ಬದ್ಧತೆ ಹೊಂದಿರುತ್ತಾರೆ. ಕುಟುಂಬ, ಸಮಾಜ, ದೇಶದ ಹಿತದೃಷ್ಟಿಯಿಂದ ಕೆಲವೊಂದು ಬದ್ಧತೆಗಳನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಕುಟುಂಬ, ಸಮಾಜ, ದೇಶ ಪತನ ಹೊಂದುತ್ತದೆ.
     ಬದ್ಧತೆಯ ಮತ್ತಷ್ಟು ರೂಪಗಳೂ ಇವೆ. ಮಾತಿನ ಭರವಸೆಯಲ್ಲಿ ನಂಬಿಕೆ ಇರುತ್ತದೆ. ವ್ಯವಹಾರಗಳಲ್ಲಿ ಲಿಖಿತ ಬಾಂಡುಗಳಲ್ಲಿ ಒಪ್ಪಂದಗಳು, ಷರತ್ತುಗಳನ್ನು ವಿಧಿಸಿ ಅದಕ್ಕೆ ಭಾಗಿದಾರರು ಬದ್ಧರಾಗುತ್ತಾರೆ. ಜಾರಿಯಲ್ಲಿರುವ ಹಲವಾರು ಕಾನೂನುಗಳು, ಕಟ್ಟಳೆಗಳು, ಕಾಯದೆಗಳೂ ಸಹ ನಾಗರಿಕರನ್ನು ಅದರ ವ್ಯಾಪ್ತಿ ಮೀರಿ ಹೋಗದಂತೆ ನಿರ್ಬಂಧಿಸುತ್ತವೆ. ಅದಕ್ಕೆ ಒಳಪಡಬೇಕಾದುದೂ ಬದ್ಧತೆಯೇ ಆಗುತ್ತದೆ. ಪ್ರೀತಿಯ ಬದ್ದತೆ, ಭಕ್ತಿಯ ಬದ್ದತೆ, ಹಿರಿಯರಿಗೆ ಸಲ್ಲಿಸುವ ಗೌರವದ ಬದ್ಧತೆ, ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಬದ್ಧತೆ ಕಂಡುಬರುತ್ತದೆ. ಬದ್ಧತೆ ಇರುವಲ್ಲಿ ಭರವಸೆ, ನಂಬಿಕೆ, ವಿಶ್ವಾಸ, ನಿರಾತಂಕ, ಪ್ರೀತಿ ಇರುತ್ತದೆ. ನಮ್ಮ ನಡವಳಿಕೆಗಳಲ್ಲಿ ಕಂಡು ಬರುವ ಬದ್ಧತೆಯ ಪ್ರಮಾಣ ಅನುಸರಿಸಿ ನಮ್ಮ ವ್ಯಕ್ತಿತ್ವ ನಿರ್ಧರಿತವಾಗುತ್ತದೆ. ಬದ್ಧತೆ ಇರುವವರು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ರಾಜಿ ಮಾಡಿಕೊಳ್ಳುವವರು ಬದ್ಧತೆ ಇರುವವರಲ್ಲ. ರಾಜಿ ಮಾಡಿಕೊಳ್ಳುವ ಸ್ವಭಾವದವರು ತಮಗೇ ಸದಾ ಪಾಲಿಸಲು ಸಾಧ್ಯವಿಲ್ಲ ಅನ್ನಿಸುವಂತಹ ವಿಷಯಗಳನ್ನು ಪಾಲಿಸಲು ಇತರರಿಗೆ ಹೇಳದಿರುವುದು ಒಳಿತು. ವೈಯಕ್ತಿಕ ಬದ್ಧತೆ ಗುಂಪಿನ, ತಂಡದ, ಆಡಳಿತದ, ಸಮಾಜದ ಮತ್ತು ದೇಶದ ಯಶಸ್ಸಿಗೆ ತಳಪಾಯವಾಗಿದೆ.
     ನಾವು ಸಂತೋಷವಾಗಿರಬಹುದಾದ ಸರಳ ಉಪಾಯವೆಂದರೆ, ನಮಗೆ ಇಷ್ಟವೆನಿಸುವ, ನಮಗೆ ಗೌರವವಿರುವ ಯಾವುದೇ ವಿಚಾರ, ವ್ಯಕ್ತಿ, ಸಂಗತಿ ಕುರಿತು ಹೊಯ್ದಾಟವಿರದಂತಹ ಬದ್ಧತೆ ಹೊಂದಿರುವುದು. ಇಂತಹ ಬದ್ಧತೆ ಯಶಸ್ಸಿಗೂ ರಹದಾರಿ. ನಮ್ಮ ಅಂತರಂಗಕ್ಕೆ ಅದು ಸರಿ ಅನ್ನಿಸುವಾಗ ನಮಗೆ ಸಿಗುವುದು ಸಂತೋಷವೇ! ಸಂತೋಷ ಅನ್ನುವುದು ನಮ್ಮ ಮಾನಸಿಕ ಸ್ಥಿತಿ ಆಗಿರುವಾಗ ಅದನ್ನು ಇತರರ ಅನಿಸಿಕೆ, ಅಭಿಪ್ರಾಯಗಳನ್ನು ಅನುಸರಿಸಿ ನಿರ್ಧರಿಸಿಕೊಳ್ಳಬೇಕೇಕೆ? ನಮ್ಮ ಬದ್ಧತೆಯಿಂದ ನಾಲ್ಕು ಜನಕ್ಕೆ ಒಳ್ಳೆಯದಾಗುವುದಾದರೆ ಅದಕ್ಕಿಂತ ದೊಡ್ಡ ಸಮಾಧಾನ, ಸಂತೋಷ ಬೇರೆ ಏನಿದೆ?
-ಕ.ವೆಂ.ನಾಗರಾಜ್.

ಮಂಗಳವಾರ, ಡಿಸೆಂಬರ್ 12, 2017

ಘನತೆ (Dignity)


     'ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದರೂ ಅದರ ಬುದ್ದಿ ಬಿಟ್ಟೀತೇ' ಎಂಬುದು ಪ್ರಸಿದ್ಧ ಆಡುಮಾತು! ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸುವುದರಿಂದ ನಾಯಿಯ ಘನತೆ ಹೆಚ್ಚಬಹುದೇನೋ, ಆದರೆ ಸಿಂಹಾಸನದ ಘನತೆಗೆ ಮಾತ್ರ ಖಂಡಿತಾ ಕುಂದು ಬರುತ್ತದೆ. ವಿಧಾನಸೌಧದ ಬಾಗಿಲನ್ನು ಕಾಲಿನಿಂದ ಜಾಡಿಸಿ ಒದ್ದವರು ಪ್ತತಿಷ್ಠಿತ ಕುರ್ಚಿಯಲ್ಲಿ ಕುಳಿತಿರುವವರು ಇರುವಂತೆಯೇ, ಲೋಕಸಭೆಗೆ ಪ್ರಥಮವಾಗಿ ಕಾಲಿರಿಸಿದ ಸಂದರ್ಭದಲ್ಲಿ ಮೆಟ್ಟಲನ್ನು ಮುಟ್ಟಿ ನಮಸ್ಕರಿಸಿದವರೂ ಇದ್ದಾರೆ. ಕೆಲವರಿಂದ ಕುರ್ಚಿಗೆ, ಪ್ರಶಸ್ತಿಗಳಿಗೆ ಘನತೆ ಹೆಚ್ಚಿದರೆ ಕೆಲವರಿಂದ ಕುರ್ಚಿಯ ಮತ್ತು ಪ್ರಶಸ್ತಿಗಳ ಘನತೆ ತಗ್ಗುತ್ತದೆ. ಘನತೆ ಎಂಬ ಪದ ಹಿರಿದು, ಮೌಲ್ಯಯುತವಾದದ್ದು ಎಂಬ ಅರ್ಥ ಹೊರಡಿಸುತ್ತದೆ. ಸೌಜನ್ಯತೆ, ಗಾಂಭೀರ್ಯ, ಔನ್ನತ್ಯ, ದೊಡ್ಡತನ, ಗೌರವ, ಹಿರಿಮೆ, ಒಳ್ಳೆಯ ಗುಣ, ಒಳ್ಳೆಯ ನಡವಳಿಕೆ, ಆತ್ಮಾಭಿಮಾನ, ಆತ್ಮಗೌರವ, ಒಳ್ಳೆಯ ನಿಲುವು, ಸ್ಥಾನ-ಮಾನ, ಸುಸಂಸ್ಕೃತಿ, ವಿಶಿಷ್ಟತೆ, ವಿಶೇಷತೆ, ನಾಯಕತ್ವದ ಗುಣ, ಪರಿಪೂರ್ಣತೆ, ಅಂತಸ್ತು, ಸುಸಂಪನ್ನ, ಪ್ರಾಮುಖ್ಯತೆ, ಸುಜ್ಞಾನ ಹೀಗೆ ಹತ್ತು ಹಲವಾರು ವಿಶೇಷಣೆಗಳು ಘನತೆ ಪದದ ಅರ್ಥ ಮತ್ತು ಘನತೆಗಳನ್ನು ಸಾರುತ್ತವೆ. 
     ವ್ಯಕ್ತಿಯ ಗೌರವಕ್ಕೆ, ಅರ್ಥಾತ್ ಘನತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯವಾಗಿದೆ. ಭಾರತದ ಸಂವಿಧಾನದ ೧೫(೧) ಮತ್ತು (೨)ರ ವಿಧಿ ಸರ್ಕಾರವು ಯಾವುದೇ ಪ್ರಜೆಯನ್ನು ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಊರು, ಇತ್ಯಾದಿ ಯಾವುದೇ ಕಾರಣದಿಂದ ತಾರತಮ್ಯದಿಂದ ನೋಡದಿರಲು ಸ್ಪಷ್ಟ ನಿರ್ದೇಶನ ನೀಡುತ್ತದೆ. ಆದರೆ ಜನರ ಘನತೆಗೆ ಕುಂದು ತರುವ, ಧಕ್ಕೆ ನೀಡುವಂತಹ ಹಲವು ತಾರತಮ್ಯದ ಕ್ರಮಗಳನ್ನು ಆಡಳಿತ ಮಾಡುವವರೇ ಅನುಸರಿಸುತ್ತಿರುವುದು ಸಂವಿಧಾನ ವಿರೋಧಿ ಕ್ರಮವೆನ್ನದೆ ಇರಲಾಗದು. ಇಂತಹ ಕ್ರಮಗಳನ್ನು ವಿರೋಧಿಸುವವರನ್ನು ಅಧಿಕಾರಬಲ ಉಪಯೋಗಿಸಿ ಹತ್ತಿಕ್ಕುವುದೂ ಸಾಮಾನ್ಯವೆನಿಸಿಬಿಟ್ಟಿದೆ. ಇಂತಹ ಕ್ರೂರ ವ್ಯವಸ್ಥೆ ಅನಿವಾರ್ಯವೆಂಬಂತೆ ಜನರೂ ಒಗ್ಗಿ ಹೋಗುತ್ತಿದ್ದಾರೆ.
     ರಾಜಕೀಯ ಸ್ವಾರ್ಥದ ಕಾರಣಗಳಿಗಾಗಿ ಅನೇಕರ ಘನತೆಯನ್ನು ಕುಗ್ಗಿಸುವ, ಚಾರಿತ್ರ್ಯ ಹರಣ ಮಾಡುವ ಕೃತ್ಯಗಳು ಅಧಿಕಾರಸ್ಥ ರಾಜಕಾರಣಿಗಳೇ ಮಾಡಿರುವುದು, ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಸಾಧ್ವಿ ಪ್ರಜ್ಞಾರನ್ನು ಮತ್ತು ಹಲವಾರು ಹಿರಿಯ ಅಧಿಕಾರಿಗಳನ್ನು ಸುಳ್ಳು ಆರೋಪಗಳ ಮೇಲೆ ವರ್ಷಗಳವರೆಗೆ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಲ್ಲದೆ, ಚಿತ್ರಹಿಂಸೆಗೆ ಒಳಪಡಿಸಿದ ಅಕ್ಷಮ್ಯ ಅಪರಾಧ ಎಸಗಿದವರು ಅದನ್ನು ಜೀರ್ಣಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ಮುಂತಾದವರ ಪ್ರಕರಣಗಳಲ್ಲಿ ಎಗ್ಗಿಲ್ಲದೆ ಸಾಕ್ಷ್ಯನಾಶ, ಚಾರಿತ್ರ್ಯ ಹರಣ ಮುಂತಾದ ಕೃತ್ಯಗಳಲ್ಲಿ ಹಿರಿಯ ಮಂತ್ರಿಗಳು, ಉನ್ನತ ಅಧಿಕಾರಿಗಳ ಹೆಸರುಗಳು ಕೇಳಿಬರುತ್ತಿರುವುದು ಬೇಲಿಯೇ ಹೊಲ ಮೇಯುವಂತೆ ಆದುದಕ್ಕೆ ಈಚಿನ ಉದಾಹರಣೆಗಳು. ನ್ಯಾಯ ಕೊಡಬೇಕಾದವರೇ ಅಪರಾಧಿಗಳನ್ನು ರಕ್ಷಿಸುವ ಆರೋಪ ಹೊತ್ತಿದ್ದಾರೆ. ಅವರವರೇ ವಿಚಾರಣೆಯ ನಾಟಕ ನಡೆಸಿ ಶುದ್ಧ ಹಸ್ತರೆಂದು ಪ್ರಮಾಣ ಪತ್ರ ಕೊಟ್ಟುಕೊಂಡುಬಿಡುತ್ತಾರೆ ಎಂಬುದು ಜನಸಾಮಾನ್ಯರ ಮಾತು. 
     ರಾಜಕೀಯದ ಸಲುವಾಗಿ ಒಂದು ವರ್ಗವನ್ನು ಓಲೈಸುವುದೂ ತಾರತಮ್ಯದ ಕೃತ್ಯವಾಗಿದ್ದು, ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆಡಳಿತ ನಡೆಸುವವರು ತಾವು ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಸಮನಾಗಿ ಕಾಣುತ್ತಿದ್ದೇವೆಂದು ತೋರಿಸಿಕೊಳ್ಳುವುದೂ ಅತ್ಯಗತ್ಯ. ಯಾವುದೋ ವರ್ಗವನ್ನು ಓಲೈಸಿದರೆ ಅದು ಇನ್ನೊಂದು ವರ್ಗವನ್ನು ಕೀಳಾಗಿ ಕಂಡಂತೆ ಆಗುತ್ತದೆ. ಟಿಪ್ಪೂ ಜಯಂತಿಯನ್ನು ಮಾಡಲು ಮುಸ್ಲಿಮರೇ ಒತ್ತಾಯಿಸದಿದ್ದರೂ, ಸರ್ಕಾರ ಪ್ರಬಲ ಜನವಿರೋಧವನ್ನೂ ಕಡೆಗಣಿಸಿ, ಪೊಲೀಸ್ ಭದ್ರ ಕಾವಲಿನಲ್ಲಿ ಟಿಪ್ಪೂ ಜಯಂತಿ ಮಾಡುತ್ತದೆ. ಮುಸ್ಲಿಮರ ಹಬ್ಬ ಹರಿದಿನಗಳಿಗೆ ಎಲ್ಲಾ ರೀತಿಯ ಸವಲತ್ತುಗಳು, ಸಹಕಾರಗಳನ್ನು ಕೊಡುತ್ತಾರೆ, ಹಿಂದೂ ಹಬ್ಬಗಳು, ಉತ್ಸವಗಳಿಗೆ ಶಾಂತಿ, ಸುವ್ಯವಸ್ಥೆಯ ಹೆಸರಿನಲ್ಲಿ ಹಲವು ನಿರ್ಬಂಧಗಳನ್ನು ಹೇರುತ್ತಾರೆ, ಅಡ್ಡಿಪಡಿಸುತ್ತಾರೆ ಎಂಬ ಆರೋಪ ಬರುವಂತೆ ಆಡಳಿತದಲ್ಲಿರುವವರು ಅವಕಾಶ ಕೊಡಬಾರದು. ಈದ್ ಮಿಲಾದ್ ಮತ್ತು ಹನುಮ ಜಯಂತಿ ಉತ್ಸವಗಳಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ನಡೆದುಕೊಂಡ ರೀತಿ ತಾರತಮ್ಯದಿಂದ ಕೂಡಿದೆ ಎಂಬ ಅಪವಾದಕ್ಕೆ ಗುರಿಯಾಗಿದೆ.
     ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮತ್ತು ನಂತರದಲ್ಲಿ ಮುಖ್ಯಮಂತ್ರಿಯ ಕನಸು ಕಂಡು ಸದ್ಯ ತುರಂಗವಾಸದಲ್ಲಿರುವ ಶಶಿಕಲಾರವರ ಕಾಲಿಗೆ ಸರತಿಯ ಸಾಲಿನಲ್ಲಿ ನಿಂತು ನಡುಬಗ್ಗಿಸಿ ಪಾದಮುಟ್ಟಿ ನಮಸ್ಕಾರ ಮಾಡುತ್ತಿದ್ದ ಶಾಸಕರು, ಅಧಿಕಾರಸ್ಥರುಗಳನ್ನು ಕಂಡಿದ್ದೇವೆ. ಇದು ಅವರ ಘನತೆಯ ಪ್ರದರ್ಶನವಾಗಿರದೆ ಸಲಾಮು ಮಾಡುತ್ತಿದ್ದವರು ಸ್ವಾರ್ಥ ಮತ್ತು ಅಧಿಕಾರದ ಸಲುವಾಗಿ ಕಳೆದುಕೊಂಡಿದ್ದ ಘನತೆಯನ್ನು ಬಿಂಬಿಸುತ್ತದೆ. ಅಧಿಕಾರದ ಮುಂದೆ ಅಭಿಮಾನವೂ ನಿಕೃಷ್ಟವಾಗಿಬಿಡುತ್ತದೆ! ಇನ್ನು ಸಾಮಾಜಿಕವಾಗಿ ನೋಡುವುದಾದರೆ ಕೆಲವು ವರ್ಗದವರ ಬಗ್ಗೆ ಅಸ್ಪೃಷ್ಯತೆ, ಪ್ರವೇಶ ನಿಷೇಧ ಮುಂತಾದವು ಘನತೆಗೆ ಕುಂದು ತರುವ ಕೃತ್ಯಗಳಾಗಿವೆ. ಧಾರ್ಮಿಕವಾಗಿ ಸಹ ಕೆಲವು ಆಚರಣೆಗಳು ಪುರುಷ ಪ್ರಧಾನವಾಗಿರುವುದೂ ಕಂಡುಬರುತ್ತದೆ. ಉಡುಪು ಧರಿಸುವಿಕೆ, ಶಿಕ್ಷಣ. ವೈವಾಹಿಕ ಕಟ್ಟುಪಾಡುಗಳು ಇತ್ಯಾದಿಗಳಲ್ಲಿ ಧಾರ್ಮಿಕವಾಗಿ ಸಹ ಇರುವ ಕೆಲವು ಧರ್ಮಗಳಲ್ಲಿನ ಹಲವು ಕಟ್ಟುಪಾಡುಗಳು ಸ್ತ್ರೀ ತಾರತಮ್ಯಕ್ಕೆ ಉದಾಹರಣೆಗಳಾಗಿವೆ.
     ವೈಯಕ್ತಿಕವಾಗಿ, ಕೌಟುಂಬಿಕವಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸಿ ಅವರ ಘನತೆಗೆ ಕುಂದು ತರುವ ಕೃತ್ಯಗಳನ್ನೂ ಕಾಣುತ್ತಿರುತ್ತೇವೆ. ಕಾರ್ಯಕ್ರಮಕ್ಕೋ, ಸಮಾರಂಭಕ್ಕೋ ಎಲ್ಲರನ್ನೂ ಆಹ್ವಾನಿಸಿ ಕೆಲವರನ್ನು ಬೇಕೆಂದೇ ಕರೆಯದಿರುವುದು, ಕರೆದರೂ ಬಂದಾಗ ಅವರನ್ನು ಮಾತನಾಡಿಸದೇ ನಿರ್ಲಕ್ಷಿಸುವುದು ಮಾಡಿದಾಗ ಸಂಬಂದಿಸಿದವರು ಕುಗ್ಗಿಹೋಗುತ್ತಾರೆ. ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಲ್ಲಿ ಹಳೆಯ ಪರಿಚಯಸ್ಥರೊಬ್ಬರನ್ನು ಕಂಡು ವಿಶ್ವಾಸದಿಂದ ಅವರನ್ನು ಮಾತನಾಡಿಸಿದರೆ ಅವರು ಉತ್ತರಿಸದೆ, ಗಮನಿಸದಂತೆ ಮುಂದೆ ಹೋದರೆ ಹೇಗೆ ಅನ್ನಿಸುತ್ತದೆ? ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವೆ. ದೂರದ ಊರಿಗೆ ವರ್ಗವಾಗಿದ್ದ ನಾನು ಪ್ರಯತ್ನ ಪಟ್ಟು ನನ್ನ ಕುಟುಂಬ ವಾಸವಿದ್ದ ಜಿಲ್ಲಾಕೇಂದ್ರಕ್ಕೆ ವರ್ಗ ಮಾಡಿಸಿಕೊಂಡಿದ್ದೆ. ನಾನು ಅಲ್ಲಿಗೆ ಬಂದದ್ದು ಆಗ ಇದ್ದ ಜಿಲ್ಲಾಮಂತ್ರಿಗಳಿಗೆ ಇಷ್ಟವಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಅವರ ಕ್ಷೇತ್ರದಲ್ಲಿ ಹಲವು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದಾಗ ಅವರ ತಾಳಕ್ಕೆ ಕುಣಿಯುತ್ತಿರಲಿಲ್ಲ ಮತ್ತು ಅವರು ಹೇಳಿದ್ದ ಕಾನೂನಿಗೆ ವಿರುದ್ಧವಾದ ಕೆಲಸವನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಮಂಗಳೂರಿಗೆ ವರ್ಗಾಯಿಸಿದ್ದರು. ಅದನ್ನು ನೆನಪಿನಲ್ಲಿಟ್ಟಿದ್ದ ಅವರು ಜಿಲ್ಲಾಧಿಕಾರಿಯವರಿಗೆ ನನ್ನನ್ನು ಕೂಡಲೇ ವಾಪಸು ಕಳಿಸಲು ತಿಳಿಸಿದ್ದರು. ಜಿಲ್ಲಾಧಿಕಾರಿಗೆ ಆ ಅಧಿಕಾರವಿರಲಿಲ್ಲ. ಸರ್ಕಾರದ ಮಟ್ಟದಲ್ಲೇ ನನ್ನ ವರ್ಗಾವಣೆ ಆದೇಶ ಆಗಬೇಕಿತ್ತು. ನನ್ನ ಬಗ್ಗೆ ವಿಶ್ವಾಸವಿದ್ದ ಜಿಲ್ಲಾಧಿಕಾರಿಯವರು ನನ್ನನ್ನು ಕರೆದು, ಹೋಗಿ 'ಅವರಿಗೆ ಒಂದು ಸಲಾಮು ಹಾಕಿಬಾ. ಇಲ್ಲೇ ಉಳಿಸಲು ಕೇಳಿಕೋ' ಎಂದು ಸಲಹೆ ನೀಡಿದ್ದರು. ಅದರಿಂದ ಪ್ರಯೋಜನವಾಗದು ಎಂಬ ಅರಿವಿದ್ದ ನಾನು ಅವರನ್ನು ಕಂಡಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ನನಗೆ ಶಿವಮೊಗ್ಗಕ್ಕೆ ವರ್ಗಾಯಿಸಿದ ಆದೇಶ ಕೈಸೇರಿತ್ತು. ನನ್ನ ಇಂತಹ ಸ್ವಭಾವದಿಂದಾಗಿ ನನ್ನ ಸೇವಾವಧಿಯಲ್ಲಿ ಇಪ್ಪತ್ತಾರು ವರ್ಗಾವಣೆಗಳನ್ನು ಕಂಡಿದ್ದೆ. 
     ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಘೋಷಣೆಯಲ್ಲಿ, ಎಲ್ಲಾ ಮಾನವ ಜೀವಿಗಳೂ ಘನತೆ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನರು. ವಿವೇಚನೆ ಮಾಡುವ ಶಕ್ತಿ ಮತ್ತು ಅಂತಃಪ್ರಜ್ಞೆ ಇರುವ ಅವರು ಪರಸ್ಪರ ಒಬ್ಬರನ್ನೊಬ್ಬರನ್ನು ಸೋದರಭಾವದಿಂದ ಕಾಣಬೇಕು ಎಂದು ಹೇಳಿದೆ. ನಮ್ಮ ನಮ್ಮ ವೈಯಕ್ತಿಕ ಘನತೆ, ಗೌರವಗಳನ್ನು ಕಾಪಾಡಿಕೊಳ್ಳೋಣ. ಹಾಗೆಯೇ ಇತರರ ಘನತೆ, ಗೌರವಗಳಿಗೆ ಧಕ್ಕೆ ಬರದಂತೆ ವರ್ತಿಸೋಣ. ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಕೌಟುಂಬಿಕವಾಗಿ ಅಥವ ವೈಯಕ್ತಿಕವಾಗಿ ಇನ್ನೊಬ್ಬರ ಘನತೆಗೆ ಕುಂದು ಎಣಿಸಿದರೆ ಅದರ ಪರಿಣಾಮ ದ್ವೇಷ ಮತ್ತು ಸಂಘರ್ಷವಲ್ಲದೆ ಮತ್ತೇನೂ ಅಲ್ಲ. ಇದು ವಿನಾಶದ ಹಾದಿ. ಪರಸ್ಪರ ಗೌರವಿಸುವುದನ್ನು ಕಲಿಯೋಣ. ಇದು ವಿಕಾಸದ ಹಾದಿ.
-ಕ.ವೆಂ.ನಾಗರಾಜ್.

ಭಾನುವಾರ, ನವೆಂಬರ್ 26, 2017

ವ್ಯಕ್ತಿತ್ವ - ಅಸಲಿಯೋ ನಕಲಿಯೋ? (Personality)


     "ಅವರು ದೊಡ್ಡ ಮನುಷ್ಯರಾದರೂ ಎಷ್ಟೊಂದು ಸರಳವಾಗಿದ್ದಾರೆ! ಎಂಥವರಿಗಾದರೂ ನೋಡಿದರೆ ಕೈಮುಗಿಯಬೇಕು ಅನ್ನಿಸುತ್ತದೆ" - ಆ ವ್ಯಕ್ತಿಯನ್ನು ನೋಡಿದವರೊಬ್ಬರು ತಮ್ಮ ಸ್ನೇಹಿತನ ಬಳಿಯಲ್ಲಿ ಹೀಗೆ ಹೇಳಿದಾಗ ಅವನ ಸ್ನೇಹಿತ ನಗುತ್ತಾ, "ಅವನಾ? ಅವನೊಬ್ಬ ಛತ್ರಿ, ಆಷಾಡಭೂತಿ" ಎಂದು ಅವನ ಗುಣಗಳ ಅನಾವರಣ ಮಾಡಿದಾಗ ತಬ್ಬಿಬ್ಬಾಗಿದ್ದರು. ಮುಖವಾಡಗಳನ್ನೇ ಧರಿಸಿರುವ ಜನರ ನಡುವೆ ಅಸಲಿ ಮುಖ ಯಾವುದು, ನಕಲಿ ಯಾವುದು ಎಂದು ತಿಳಿಯುವುದು ಸುಲಭವಲ್ಲ. ನಾನು ತಹಸೀಲ್ದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಮ್ಮೆ ಅಂಬೇಡ್ಕರ್ ಜಯಂತಿಯಂದು ಸಾಮೂಹಿಕ ಭೋಜನದ ವ್ಯವಸ್ಥೆ  ಮಾಡಲಾಗಿತ್ತು. ಕ್ಷೇತ್ರದ ಶಾಸಕರು ಪಕ್ಕದಲ್ಲಿ ಕುಳಿತಿದ್ದ ನನಗೆ ಕಿವಿಯಲ್ಲಿ ಪಿಸುಗುಟ್ಟಿದ್ದರು, "ಊಟದ ಶಾಸ್ತ್ರ ಮಾಡಿ. ಐಬಿಯಲ್ಲಿ ಬೇರೆ ಊಟ ಇದೆ". ಮರುದಿನದ ಪತ್ರಿಕೆಗಳಲ್ಲಿ ನಮ್ಮ ಸಹಭೋಜನದ ಫೋಟೋ ಪ್ರಕಟವಾಗಿತ್ತು. ಅಸಲಿ ಆಭರಣಗಳಿಗಿಂತ ನಕಲಿ ಆಭರಣಗಳೇ ಸುಂದರವಾಗಿ, ಅಸಲಿಗಿಂತ ಚೆನ್ನಾಗಿ ಕಾಣುತ್ತವೆ. ಖೋಟಾ ನೋಟುಗಳನ್ನು ಪತ್ತೆ ಹಚ್ಚುವುದೇ ಕಷ್ಟವೆಂಬಷ್ಟು ಅಸಲಿಯಂತೆ ಕಾಣುತ್ತವೆ. ನಮ್ಮ ಎದುರಿಗೆ ಅತ್ಯಂತ ಸ್ನೇಹದಿಂದ ಮಾತನಾಡಿ, ಬೆನ್ನ ಹಿಂದೆ ನಮ್ಮನ್ನು ದೂರುವವರೂ ಇರುತ್ತಾರೆ. ಅಸಲಿ ಮತ್ತು ನಕಲಿತನಗಳನ್ನು ಗುರುತಿಸುವುದಕ್ಕೆ ಕೆಳಗೆ ತಿಳಿಸಿರುವ ಅಂಶಗಳು ಸಹಾಯಕವಾಗಬಹುದು.
೧. ಗೌರವ ತೋರಿಸುವ ರೀತಿ:
     ಯಾರು ತಮ್ಮ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಗೌರವದಿಂದ, ಪ್ರೀತಿಯಿಂದ ಕಾಣುತ್ತಾರೋ ಅವರು ಅಸಲಿಗಳು. ಅವರು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಅಥವ ತಾವು ಮೇಲಿನವರೆಂದು ತೋರಿಸಿಕೊಳ್ಳುವುದಿಲ್ಲ. ಆದರೆ ನಕಲಿಗಳು ಅಧಿಕಾರದಲ್ಲಿರುವವರನ್ನು ಮತ್ತು ತಮಗೆ ಪ್ರಯೋಜನಕ್ಕೆ ಬರುವವರೆನ್ನು ಮಾತ್ರ ಗೌರವಿಸುತ್ತಾರೆ. ಯಾರನ್ನು ಗೌರವಿಸಬೇಕು ಎಂಬ ವಿಚಾರದಲ್ಲಿ ಅವರು ಲೆಕ್ಕಾಚಾರ ಹಾಕುತ್ತಾರೆ. ಉಳಿದವರನ್ನು ನಿಕೃಷ್ಟವಾಗಿ ಕಾಣುತ್ತಾರೆ ಅಥವ ನಿರ್ಲಕ್ಷ್ಯಿಸುತ್ತಾರೆ. 
೨. ಮೆಚ್ಚುಗೆಯ ನಿರೀಕ್ಷೆ:
     ತುಂಬಿದ ಕೊಡದಂತಹ ವ್ಯಕ್ತಿತ್ವದವರು ತಾವಾಗಿಯೇ ಇನ್ನೊಬ್ಬರನ್ನು ಮೆಚ್ಚಿಸಲು, ಅವರ ಗಮನ ಸೆಳೆಯಲು ಹೋಗುವುದಿಲ್ಲ. ಅವರು ತಾವಿದ್ದಂತೆಯೇ ತಾವು ಸಂತುಷ್ಟರಾಗಿರುತ್ತಾರೆ ಮತ್ತು ಇನ್ನೊಬ್ಬರ ಮೆಚ್ಚುಗೆಗಾಗಲೀ, ನಿಂದನೆಗಾಗಲೀ ಮಹತ್ವ ಕೊಡುವುದಿಲ್ಲ. ಆದರೆ ನಕಲಿಗಳು ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ಜನರನ್ನು ಮೆಚ್ಚಿಸುವುದಕ್ಕಾಗಿ ತಮ್ಮ ಮಿತಿ ಮೀರಿ ಹೋಗುತ್ತಾರೆ. ಅನುಕೂಲವಾಗುತ್ತದೆ ಎನ್ನಿಸಿದರೆ ಎಂತಹವರನ್ನೂ ಓಲೈಸುತ್ತಾರೆ, ಲಾಬಿ ಮಾಡುತ್ತಾರೆ, ಹಾಡಿಹೊಗಳುತ್ತಾರೆ. ಅಧಿಕಾರದಲ್ಲಿರುವವರನ್ನು ಇಂದ್ರ, ಚಂದ್ರ, ದೇವೇಂದ್ರ ಎನ್ನುತ್ತಾ, ಅವರ ವಿರೋಧಿಗಳನ್ನು ವಾಚಾಮ ಗೋಚರವಾಗಿ ನಿಂದಿಸುವ ಕಾಯಕದಲ್ಲಿ ತೊಡಗುತ್ತಾರೆ. ದುರಂತವೆಂದರೆ ಆಡಳಿತದಲ್ಲಿರುವವರು ತಮ್ಮ ಸ್ವಾರ್ಥಸಾಧನೆಗಾಗಿ ಇಂತಹ ನಕಲಿಗಳನ್ನು ಪ್ರೋತ್ಸಾಹಿಸುತ್ತಾರೆ, ಪ್ರಶಸ್ತಿಗಳನ್ನು ಕೊಡುತ್ತಾರೆ, ಉನ್ನತ ಸ್ಥಾನಗಳ ಬಳುವಳಿ ನೀಡುತ್ತಾರೆ.
೩. ಗಮನ ಸೆಳೆಯುವುದು:
     ನೈಜ ವ್ಯಕ್ತಿತ್ವದವರು ತಾವು ಜನರ ಆಕರ್ಷಣೆಯ ಕೇಂದ್ರವಾಗಿರಬೇಕೆಂದು ಬಯಸುವುದಿಲ್ಲ. ತಾವು ಇರುವಂತೆಯೇ ಇರಬಯಸುವವರು ಅವರು. ತಾವು ಮಾಡುತ್ತಿರುವ ಕೆಲಸಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಹೋಗುವ ಮನಸ್ಥಿತಿಯವರು ಆ ಕಾರಣಕ್ಕಾಗಿಯೇ ಗೌರವಿಸಲ್ಪಡುತ್ತಾರೆ. ಆದರೆ ಪ್ರಚಾರದ ಹಪಾಹಪಿಯಿರುವವರು ದೊಡ್ಡ ಗಂಟಲಿನಲ್ಲಿ ಸ್ವಪ್ರಚಾರ ಮಾಡಿಕೊಳ್ಳುತ್ತಾ ಮುಂಚೂಣಿಯಲ್ಲಿರಬಯಸುತ್ತಾರೆ. ಅವರು ಜನರು ತಮ್ಮ ಸುತ್ತಲೇ ಇದ್ದು, ತಮ್ಮನ್ನು ಗೌರವಿಸುತ್ತಾರೆಂಬ ಭ್ರಮೆ ಹೊಂದಿರುತ್ತಾರೆ.
೪. ಸಾಧನೆಯ ಪ್ರಕಟೀಕರಣ:
     ನಿಜವಾದ ಸಾಧಕರು ತಮ್ಮ ಸಾಧನೆಯನ್ನು ಕೊಚ್ಚಿಕೊಳ್ಳುವುದಿಲ್ಲ. ಏಕೆಂದರೆ ಅದನ್ನು ಅವರು ಮೆಚ್ಚುಗೆ ಗಳಿಸಿಕೊಳ್ಳುವುದಕ್ಕಾಗಿ ಮಾಡಿರುವುದಿಲ್ಲ. ಅವರು ಸಾಮಾನ್ಯವಾಗಿ ವಿನೀತರಾಗಿರುತ್ತಾರೆ ಮತ್ತು ಸರಳರಾಗಿರುತ್ತಾರೆ. ಆದರೆ ಅರೆಬೆಂದ ವ್ಯಕ್ತಿತ್ವದವರು ತಾವು ಮಾಡಿದ, ಮಾಡಲು ಪ್ರಯತ್ನಿಸಿದ ಸಾಧನೆಗಳ ಬಗ್ಗೆ ದೊಡ್ಡದಾಗಿ ಕೊಚ್ಚಿಕೊಳ್ಳುತ್ತಿರುತ್ತಾರೆ. ಅಷ್ಟೇನೂ ಮಹತ್ವದ್ದಲ್ಲದ ಸಂಗತಿಯನ್ನೂ ಮಹತ್ವದ್ದೆಂಬಂತೆ ಬಿಂಬಿಸುತ್ತಿರುತ್ತಾರೆ. 
೫. ಅಭಿಪ್ರಾಯ ತಿಳಿಸುವ ರೀತಿ:
     ಮುಚ್ಚುಮರೆ ಮಾಡದ ಸ್ವಭಾವದವರು ತಮಗೆ ಅನ್ನಿಸಿದುದನ್ನು ನೇರವಾಗಿ ಹೇಳಿಬಿಡುತ್ತಾರೆ. ಅವರ ಅಭಿಪ್ರಾಯಗಳಲ್ಲಿ ಕಪಟತನವಾಗಲೀ, ಏನನ್ನೋ ಮುಚ್ಚಿಡುವುದಾಗಲೀ ಇರುವುದಿಲ್ಲ. ಇದ್ದುದನ್ನು ಇದ್ದಂತೆ ಪ್ರಾಮಾಣಿಕವಾಗಿ ಹೇಳುತ್ತಾರೆ. ಅದರೆ ದ್ವಿಮುಖ ವ್ಯಕ್ತಿತ್ವ ಹೊಂದಿದವರು ಎದುರಿಗೆ ಒಂದು ತರಹ ಮತ್ತು ಹಿಂದೆ ಮತ್ತೊಂದು ತರಹ ಹೇಳುತ್ತಾರೆ. ಗಾಳಿಮಾತುಗಳನ್ನು ಹರಡುವುದರಲ್ಲಿ ಅವರು ಆನಂದ ಕಾಣುತ್ತಾರೆ. 
೬. ಮಾತು ಮತ್ತು ಕೃತಿ: 
     ಸರ್ವಜ್ಞನ ನುಡಿ, ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ. ಅಧಮ ತಾನಾಡಿಯೂ ಮಾಡದವ ಎಂಬ ಮಾತು ಸಾರ್ವಕಾಲಿಕ ಸತ್ಯ. ಮಾಡಬೇಕೆಂದುದನ್ನು ಹೇಳದೇ ಸದ್ದಿಲ್ಲದೆ ಮಾಡುವ ಸಾಧಕರುಗಳು ನೋಡುವ ಕಣ್ಣುಗಳಿಗೆ ಕಾಣುತ್ತಾರೆ. ಆದರೆ ಆಡುವುದೇ ಒಂದು. ಮಾಡುವುದೇ ಮತ್ತೊಂದು ಎನ್ನುವವರ ಸಂಖ್ಯೆ ಹೆಚ್ಚು. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಭರವಸೆ ಕೊಡುವ ಬಹುತೇಕ ರಾಜಕಾರಣಿಗಳು ಅದನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುದು ತಿಳಿದ ವಿಚಾರವೇ ಆದರೂ ಜನರು ಮೋಸ ಹೋಗುತ್ತಾರೆ. 
೭. ಅಭಿಪ್ರಾಯ ವ್ಯಕ್ತಪಡಿಸುವ ರೀತಿ:
     ಪ್ರಾಮಾಣಿಕರು ಪೂರ್ವಾಗ್ರಹ ಪೀಡಿತರಾಗಿರದೆ ಯಾವುದೇ ಒಳ್ಳೆಯ ಸಂಗತಿ ಯಾರಿಂದಲೇ ಬಂದರೂ ಸ್ವೀಕರಿಸುತ್ತಾರೆ, ಮೆಚ್ಚುತ್ತಾರೆ, ಕೆಟ್ಟ ಕೃತ್ಯಗಳನ್ನು ಯಾರೇ ಮಾಡಿರಲಿ, ಖಂಡಿಸುತ್ತಾರೆ. ನಕಲಿ ವ್ಯಕ್ತಿತ್ವದವರು ಪೂರ್ವಾಗ್ರಹ ಪೀಡಿತರಾಗಿದ್ದು, ತಮ್ಮವರ ಮತ್ತು ತಮ್ಮ ಗುಂಪಿನವರ ವಿಚಾರಗಳನ್ನು ಮಾತ್ರ ಒಪ್ಪುತ್ತಾರೆ. ತಮ್ಮವರು ಎಂದು ಭಾವಿಸದವರ ಒಳ್ಳೆಯ ವಿಚಾರಗಳಲ್ಲೂ ಕೊಂಕು ಹುಡುಕುತ್ತಾರೆ. ತಮ್ಮವರ ಕೆಟ್ಟ ಕೃತ್ಯಗಳನ್ನು ಕಂಡೂ ಕಾಣದವರಂತಿರುತ್ತಾರೆ. ಮಾಧ್ಯಮಗಳು ಬುದ್ಧಿಜೀವಿಗಳು, ಪ್ರಗತಿಪರರು, ಇತ್ಯಾದಿ ವಿಶೇಷಣಗಳೊಂದಿಗೆ ಬಿಂಬಿಸಿ ಮುನ್ನೆಲೆಗೆ ತಂದಿರುವ ಅನೇಕ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು ಇಂತಹ ನಕಲಿ ವ್ಯಕ್ತಿತ್ವದವರಾಗಿರುವುದು ದೌರ್ಭಾಗ್ಯವೇ ಸರಿ. ಇಂತಹವರು ಇತರರನ್ನು ಟೀಕಿಸಿ ಕೆಟ್ಟವರೆಂದು ಪ್ರಚಾರ ಮಾಡಿ ಅವರ ನೋವಿನಲ್ಲಿ ಸಂತೋಷ ಕಾಣುವ ವಿಕೃತರಾಗಿರುತ್ತಾರೆ.
೮. ನೆರವು ನೀಡುವ ರೀತಿ:
     ಸಜ್ಜನರು ತಮ್ಮ ಸುತ್ತಮುತ್ತಲಿನವರಿಗೆ ವೈಯಕ್ತಿಕ ಅಭಿಲಾಷೆಗಳಿಲ್ಲದೆ ಷರತ್ತಿಲ್ಲದ ನೆರವು ನೀಡಲು ಮುಂದಾಗುತ್ತಾರೆ. ಎಲ್ಲರೂ ಚೆನ್ನಾಗಿರಲಿ ಎಂಬ ಮನೋಭಾವ ಅವರದಾಗಿರುತ್ತದೆ. ಆದರೆ ಸಮಯಸಾಧಕರು ತಮಗೆ ಪ್ರತಿಫಲ ಸಿಗುವಂತಹ ಸಂದರ್ಭಗಳಲ್ಲಿ ಮಾತ್ರ ಸಹಾಯಹಸ್ತ ಚಾಚುತ್ತಾರೆ. ತಮಗೆ ಪ್ರಯೋಜನವಿಲ್ಲ ಎಂದಾದರೆ ಇತರರು ಸಾಯುತ್ತಿದ್ದರೂ ತಿರುಗಿ ನೋಡದ ಅಮಾನವೀಯ ಗುಣದವರಾಗಿರುತ್ತಾರೆ. 
     ನಕಲಿಗಳನ್ನು ಅಸಲಿಗಳನ್ನಾಗಿಸುವುದು ಸಾಧ್ಯವೇ? ಈ ಜಗತ್ತು ಅಸಲಿಯೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ನಕಲಿಗಳಿಂದ ತುಂಬಿಹೋಗಿದೆ. ನಮ್ಮ ಸುತ್ತಲೂ, ಇದರಲ್ಲಿ ನಾವೂ ಸೇರಿರಬಹುದು, ಇಂತಹ ನಕಲಿಗಳು ಕಾಣಸಿಗುತ್ತಾರೆ. ಅವರು ನಮ್ಮ ಸ್ನೇಹಿತರಾಗಿರಬಹುದು, ಕುಟುಂಬದವರಾಗಿರಬಹುದು, ಸಹಪಾಠಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ಜಾತಿಯವರಾಗಿರಬಹುದು, ಸಹೋದ್ಯೋಗಿಗಳಾಗಿರಬಹುದು, ಯಾರೇ ಆಗಿರಬಹುದು ಎಂಬುದನ್ನು ಯಾರೂ ತಳ್ಳಿಹಾಕಲಾರರು. ಜನರೂ ಸಹ ನಕಲಿಗಳಾಗಿರುವುದನ್ನು ಒಪ್ಪಿಕೊಂಡುಬಿಡುತ್ತಾರೆ, ಏಕೆಂದರೆ ಅಸಲಿಗಿಂತ ನಕಲಿಯೇ ಹೆಚ್ಚು ಜನಾಕರ್ಷಕವಾಗಿರುತ್ತದೆ ಮತ್ತು ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸುತ್ತಾರೆ. ನೀವು ನಿಮ್ಮ ಒಬ್ಬ ಸ್ನೇಹಿತ ಮೊದಲು ನಿಮ್ಮನ್ನು ಮೆಚ್ಚಿಸಿ, ನಂತರ ನಿಮಗೆ ಮೋಸ ಮಾಡಿದರೆ ಒಪ್ಪುತ್ತೀರಾ? ಇಲ್ಲವೆಂದಾದರೆ ನಕಲಿಗಳನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಿ. ಫೇಸ್ ಬುಕ್ಕಿನಲ್ಲಿ ಒಂದು ಅಸಲಿ ಮತ್ತೊಂದು ನಕಲಿ ಖಾತೆ ಹೊಂದಿರುವವರು ಬಹಳ ಜನರಿದ್ದಾರೆ, ಅವರ ಒಂದೊಂದು ಮುಖಕ್ಕೆ ಒಂದರಂತೆ! ಅವರ ನಕಲಿ ಖಾತೆಯೇ ಅವರ ಅಸಲಿತನದ ದರ್ಶನ ಮಾಡಿಸುತ್ತದೆ. ಕಪಟಿ ಸ್ನೇಹಿತನಿಗಿಂತ ಪ್ರಾಮಾಣಿಕ ಶತ್ರುವೇ ಮೇಲು, ಅರ್ಥಾತ್ ನಕಲಿಗಿಂತ ಅಸಲಿಯೇ ಎಂದೆಂದಿಗೂ ಮೇಲು!
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 21, 2017

ಸಂಬಂಧಗಳ ಅಳಿವು ಮತ್ತು ಉಳಿವು (Relations)


     "ಏಯ್ ಮುಟ್ಠಾಳ, ಅವನ ಜೊತೆ ಯಾಕೆ ಮಾತಾಡ್ತಿದ್ದೆ? ಅವನಮ್ಮಂಗೂ ನಂಗೂ ಆಗಲ್ಲ ಅಂತ ನಿಂಗೆ ಗೊತ್ತಿಲ್ವಾ?" - ಒಬ್ಬ ತಾಯಿ ತನ್ನ ಮಗನನ್ನು ಗದರಿಸುತ್ತಿದ್ದರೆ, ಆ ಮಗು ಉತ್ತರಿಸಿತ್ತು, "ಅಮ್ಮಾ, ಅವನಮ್ಮ ನಿಂಗೆ ಎನೆಮಿ ಆದರೆ ಅವನ್ಯಾಕೆ ನಂಗೆ ಎನೆಮಿ ಆಗ್ತಾನಮ್ಮ? ಅವನು ನನ್ನ ಬೆಸ್ಟ್ ಫ್ರೆಂಡ್". ವಾಕಿಂಗಿಗೆ ಹೋಗುವ ಸಂದರ್ಭದಲ್ಲಿ ದಾರಿಯಲ್ಲಿ ಕೇಳಿ ಬಂದ ತಾಯಿ-ಮಗನ ಈ ಸಂಭಾಷಣೆ ನನಗೆ ಸಂಬಂಧಗಳ ಕುರಿತು, ಮನುಷ್ಯ ಸ್ವಭಾವದ ಕುರಿತು ಯೋಚಿಸುವಂತೆ ಮಾಡಿತ್ತು. ನಾವು ನಮ್ಮ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳುತ್ತೇವೆ, ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಮತ್ತು ನಮ್ಮ ಸಂಬಂಧಿಗಳ ಸಂತೋಷ ಅವಲಂಬಿಸಿರುತ್ತದೆ. ಸಂಬಂಧ ಉಳಿಸಿಕೊಂಡರೆ ಸಂತೋಷ, ಕಳೆದುಕೊಂಡರೆ ದುಃಖ ಸಹಜವಾಗಿ ಹಿಂಬಾಲಿಸುವ ಸಂಗತಿಗಳಾಗಿವೆ.
    ಅವರು ತಾವು ತಾವಾಗಿರುವುದಾದರೆ, ಒಬ್ಬರನ್ನು ಕಂಡು ಮತ್ತೊಬ್ಬರು ನಗದೆ ಜೊತೆಗೇ ನಕ್ಕರೆ, ಒಬ್ಬರಿಗಾಗಿ ಮತ್ತೊಬ್ಬರು ಅತ್ತರೆ, ಮತ್ತೊಬ್ಬರು ತಮ್ಮ ಕಾರಣದಿಂದ ಅಳುವಂತೆ ಆಗದಿದ್ದರೆ ಇಬ್ಬರ ನಡುವಿನ ಸಂಬಂಧಗಳು ಉತ್ತಮ ಪ್ರೀತಿಯ ಸಂಬಂಧಗಳಾಗಿರುತ್ತವೆ ಎನ್ನಬಹುದು. ಸಂಬಂಧಗಳು ಉತ್ತಮವಾಗಿರಬೇಕಾದರೆ ಒಬ್ಬರ ಸ್ವಾತಂತ್ರ್ಯವನ್ನು ಮತ್ತೊಬ್ಬರು ಗೌರವಿಸಬೇಕು. ಪ್ರೀತಿಸುತ್ತೇನೆ ಎಂಬ ಕಾರಣಕ್ಕಾಗಿ ಒಬ್ಬರು ತಾವು ಹೇಳಿದಂತೆ ಮತ್ತೊಬ್ಬರು ಕೇಳಬೇಕು ಎಂದು ಬಯಸುವುದು ಸಂಬಂಧಗಳಿಗೆ ಹಾನಿ ತರುತ್ತದೆ. ಇಂತಹ ಹಕ್ಕು ಸಾಧಿಸುವ (ಪೊಸೆಸಿವ್) ಗುಣ ಹೊಂದಿರುವವರು ತಾವು ಇಷ್ಟಪಡುವ ಜನರು ಅಥವ ವಸ್ತುಗಳನ್ನು ತಾನು ಪ್ರೀತಿಸುವವರೂ ಇಷ್ಟಪಡಬೇಕು, ತಾನು ದ್ವೇಷಿಸುವವರನ್ನು ಅವರೂ ದ್ವೇಷಿಸಬೇಕು ಎಂದು ಸಾಧಿಸುವುದನ್ನು ಕಾಣುತ್ತಿರುತ್ತೇವೆ. ಇಂತಹ ಅತಿ ಪ್ರೀತಿಯ ಕಾರಣದ ದ್ವೇಷವೂ ಸಂಬಂಧಗಳನ್ನು ಕೆಡಿಸುವುದರಲ್ಲಿ, ಸಂತೋಷ ಹಾಳು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 
     ಸಂಬಂಧಗಳ ತಾಳಿಕೆಗೆ ಇರುವ ದೊಡ್ಡ ಸಮಸ್ಯೆ ಎಂದರೆ ಏನನ್ನಾದರೂ ಪ್ರತಿಫಲವಾಗಿ ಬಯಸುವ ಕಾರಣದಿಂದ ಸಂಬಂಧಗಳನ್ನು ಹೊಂದುವುದು; ಬಯಸಿದುದು ಸಿಗದಿದ್ದರೆ ಅಥವ ಅದರಲ್ಲಿ ಕೊರತೆಯಾದರೆ ಸಂಬಂಧಕ್ಕೆ ಧಕ್ಕೆ ತಗಲಬಹುದು. ವಾಸ್ತವವಾಗಿ ಸಂಬಂಧ ಉಳಿಯಬೇಕೆಂದರೆ ಬಯಸುವುದಕ್ಕಿಂತ ಕೊಡುವುದಕ್ಕೆ ಆದ್ಯತೆ ಕೊಡಬೇಕು. ನಿರೀಕ್ಷಿಸುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿರುತ್ತದೆ. ನಾವು ಯಾವುದೋ ಒಂದು ಕೆಲಸವನ್ನು ಮಾಡಬೇಕೆಂದುಕೊಂಡಿದ್ದು, ಒಬ್ಬರೇ ಮಾಡಲಾಗದಿದ್ದಾಗ ಅದನ್ನು ಪೂರ್ಣಗೊಳಿಸಲು ಇನ್ನೊಬ್ಬರ ಸಹಾಯ ಪಡೆಯುತ್ತೇವೆ, ಬಯಸುತ್ತೇವೆ. ಆಗಲೂ ಆ ಕೆಲಸ ಪೂರ್ಣವಾಗದೆ ಉಳಿದರೆ ಅದಕ್ಕೆ ಅವರನ್ನು ದೂಷಿಸುತ್ತೇವೆ. ಬೇರೆ ಮತ್ತೊಬ್ಬರ ಸಹಾಯ ಪಡೆದೆವೆಂದು ಇಟ್ಟುಕೊಳ್ಳೋಣ. ಆಗಲೂ ನಮ್ಮ ಇಷ್ಟದಂತೆ ಪೂರ್ಣವಾಗಿ ಕೆಲಸ ಆಗದಿದ್ದರೆ? ಅವರನ್ನೂ ದೂಷಿಸುತ್ತೇವೆ. ಆ ಕೆಲಸ ಪರಿಪೂರ್ಣವಾಗಿ ಆಗದಿರುವುದಕ್ಕೆ ಮೂಲಕಾರಣ ನಾವೇ ಎಂಬ ಅರಿವು ಮೂಡುವಾಗ ವಿಳಂಬವಾಗಿಬಿಟ್ಟಿರುತ್ತದೆ. ಸಹಾಯಕರು, ಜೊತೆಗಾರರು ಯಾರೇ ಅಗಲಿ, ನಮ್ಮ ಕೆಲಸಕ್ಕೆ ಒತ್ತಾಸೆಯಾಗಬಹುದು, ಸಹಕರಿಸಬಹುದು. ಆದರೆ ಅದರ ಹೊಣೆ ನಮ್ಮದೇ ಎಂಬುದನ್ನು ಅರಿತಾಗ ಜೊತೆಗಾರರನ್ನು ದೂರುವ ಪ್ರವೃತ್ತಿ ದೂರವಾಗುತ್ತದೆ, ಸಂಬಂಧ ಉಳಿಯುತ್ತದೆ. ಎಲ್ಲಾ ರೀತಿಯ ಸಂಬಂಧಗಳು ಬೊಗಸೆಯಲ್ಲಿರುವ ಮರಳಿನಂತೆ! ತೆರೆದ ಕೈಗಳಲ್ಲಿ ಮರಳು ಇರುವಾಗ ಅದು ಹಾಗೆಯೇ ಇರುತ್ತದೆ. ಕೈಗಳನ್ನು ಮಡಿಸಿದಾಗ ಮತ್ತು ಮುಷ್ಟಿ ಬಿಗಿ ಹಿಡಿದಾಗ ಸ್ವಲ್ಪವೇ ಮರಳು ಉಳಿಯುವುದಾದರೂ, ಹೆಚ್ಚು ಭಾಗ ಚೆಲ್ಲಿ ಹೋಗುತ್ತದೆ. ಸಂಬಂಧಗಳೂ ಹಾಗೆಯೇ! ಹಗುರವಾಗಿದ್ದಾಗ, ಇನ್ನೊಬ್ಬರ ಸ್ವಾತಂತ್ರ್ಯ, ಅಭಿಪ್ರಾಯಗಳನ್ನು ಗೌರವಿಸಿದಾಗ ಸಂಬಂಧ ಬಾಳುತ್ತದೆ. ನಮ್ಮ ವಿಚಾರವನ್ನು ಅವರ ಮೇಲೆ ಹೇರಹೊರಟಾಗ, ಹಕ್ಕು ಸಾಧಿಸಲು ಪ್ರಯತ್ನಿಸಿದಾಗ ಸಂಬಂಧಗಳು ನಶಿಸುತ್ತವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಹಾಳಾಗುತ್ತವೆ.
     ಸೀತಾಮಾತೆಯನ್ನು ಹುಡುಕಿಹೊರಟ  ಹನುಮಂತ ಆಕೆಯನ್ನು ಅಶೋಕವನದಲ್ಲಿ ಗುರುತಿಸಿ ಶ್ರೀರಾಮ ಕೊಟ್ಟ ಚೂಡಾಮಣಿಯನ್ನು ಆಕೆಗೆ ತಲುಪಿಸಿ ಬರುತ್ತಾನೆ.  ನಂತರದಲ್ಲಿ ಶ್ರೀರಾಮನಿಗೆ ಅಲ್ಲಿನ ವಿಚಾರಗಳು, ಸೀತಾಮಾತೆಯ ಶೋಕ ಕುರಿತು ತಿಳಿಸುತ್ತಾನೆ. ಶ್ರೀ ರಾಮ ಹನುಮನನ್ನು ಆಲಂಗಿಸಿಕೊಂಡು ಹೇಳುತ್ತಾನೆ, "ಪ್ರಿಯ ಹನುಮಂತ, ನೀನು ನನಗೆ ಮಾಡಿದ ಈ ಉಪಕಾರವನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನೀನು ಮಾತ್ರ ಇದನ್ನು ಮರೆತುಬಿಡು. ಎಂದೂ ಈ ಉಪಕಾರಕ್ಕೆ ಪ್ರತ್ಯುಪಕಾರ ಬಯಸಬೇಡ. ನೀನು ಮಾಡಿದ ಉಪಕಾರ ಇಲ್ಲೇ ಜೀರ್ಣವಾಗಲಿ. ಏಕೆಂದರೆ, ಪ್ರತ್ಯುಪಕಾರವನ್ನು ಬಯಸುವ ವ್ಯಕ್ತಿ ತನಗರಿವಿಲ್ಲದಂತೆ ವಿಪತ್ತನ್ನೂ ಬಯಸುತ್ತಿರುತ್ತಾನೆ." ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳುವುದೂ ಇದನ್ನೇ, "ನಾವು  ಉಪಕಾರವನ್ನೋ ಅಥವಾ ದಾನವನ್ನೋ ಮಾಡುವುದಾದರೆ,  ಯಾರು ಅದಕ್ಕೆ ಪ್ರತಿಯಾಗಿ ಪ್ರತ್ಯುಪಕಾರ ಮಾಡಲು ಸಾಧ್ಯವಿಲ್ಲವೋ ಅಂತಹವರಿಗೆ ಮಾತ್ರ ಮಾಡಬೇಕು." ಇಂತಹ ಮನೋಭಾವ ಸಾಧ್ಯವಿರುವವರು ಮಹಾನುಭಾವರೇ ಸರಿ.
     ಒಂದು ವ್ಯಾವಹಾರಿಕವಾದ ಉದಾಹರಣೆಯನ್ನು ತೆಗೆದುಕೊಳ್ಳೋಣ. ನಿಮಗೆ ಏನೋ ಒಂದು ಕೆಲಸ ನನ್ನಿಂದ ಆಗಬೇಕಿರುತ್ತದೆ. ನನ್ನನ್ನು ನೀವು ಹೊಗಳುತ್ತೀರಿ, ಉಬ್ಬಿಸುತ್ತೀರಿ ಎಂದಿಟ್ಟುಕೊಳ್ಳಿ. ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ನನ್ನನ್ನು ಹೊಗಳುತ್ತಿದ್ದೀರೆಂದು ನಾನು ನಿಮ್ಮನ್ನು ನಂಬುವುದಿಲ್ಲ. ನನ್ನ ಕೆಲಸ ನೀನು ಮಾಡುವುದಿಲ್ಲ, ನೀನು ಸರಿಯಿಲ್ಲ ಎಂದು ನೀವು ದೂಷಿಸಿದರೆ ನಾನು ನಿಮ್ಮನ್ನು ಇಷ್ಟಪಡುವುದಿಲ್ಲ ಮತ್ತು ನಿಮ್ಮ ಕೆಲಸ ಮಾಡಿಕೊಡುವುದೂ ಇಲ್ಲ. ಕೆಲಸ ಹೇಗೂ ಮಾಡಿಕೊಡುವುದಿಲ್ಲವೆಂದು ನೀವು ನನ್ನನ್ನು ಅಲಕ್ಷಿಸಿದರೆ ನಿಮ್ಮನ್ನು ನಾನು ಕ್ಷಮಿಸುವುದಿಲ್ಲ. ಆದರೆ, ನೀವು ನನ್ನನ್ನು ಇಷ್ಟಪಡುವವರಾದರೆ, ನನ್ನನ್ನು ಪ್ರೀತಿಸುವುವರಾದರೆ ನಿಮ್ಮನ್ನು ನಾನೂ ಇಷ್ಟಪಡಬೇಕಾಗುತ್ತದೆ ಮತ್ತು ಕಷ್ಟವಾದರೂ ನಿಮ್ಮ ಕೆಲಸವನ್ನು ನಾನು ಮಾಡಿಕೊಡಬೇಕಾಗುತ್ತದೆ. ವ್ಯತ್ಯಾಸ ತಿಳಿಯಿತಲ್ಲವೇ? ಸಂಬಂಧಗಳನ್ನು ಬೆಸೆಯುವ, ಇಷ್ಟಾರ್ಥಗಳನ್ನು ಪೂರೈಸುವ ಸಂಗತಿ ಪ್ರೀತಿಯೇ ಹೊರತು ಮತ್ತಾವುದೂ ಅಲ್ಲ.
     ಸಾಮಾನ್ಯವಾಗಿ ಕಂಡುಬರುವ ಕಹಿಸತ್ಯ ಒಂದಿದೆ. ಅದೆಂದರೆ, ಯಾರು ಪ್ರೀತಿಸುತ್ತಾರೋ, ಯಾರು ಆತ್ಮೀಯರಾಗಿರುತ್ತಾರೋ ಅವರೇ ಹೆಚ್ಚು ನೋವು ಅನುಭವಿಸುವವರು! ಗೊತ್ತಿಲ್ಲದವರನ್ನು ಹೊಗಳುತ್ತಾರೆ, ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರೀತಿಪಾತ್ರರಿಗೇ ವಿವೇಕರಹಿತರಾಗಿ ಪೆಟ್ಟು ಕೊಡುತ್ತಾರೆ. ಸಂಬಂಧಗಳು ಉಳಿಯಬೇಕೆಂದರೆ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮನ್ನು ಇತರರು ಇಷ್ಟಪಡಬೇಕೆಂದರೆ ನಾವು ಅವರನ್ನು ಇಷ್ಟಪಡಬೇಕು. ಕ್ಷಮಿಸುವ ಗುಣವಿರಬೇಕು. ಒಳ್ಳೆಯವರೆನಿಸಿಕೊಳ್ಳಬೇಕೆಂದರೆ ಇತರರ ಒಳ್ಳೆಯತನವನ್ನು ಗುರುತಿಸುವ ಕೆಲಸ ಮಾಡಬೇಕು. ಒಳ್ಳೆಯ ಮಾತುಗಳನ್ನು ಕೇಳಬೇಕೆಂದರೆ ನಾವು ಒಳ್ಳೆಯ ಮಾತುಗಳನ್ನಾಡಬೇಕು. ಒಳ್ಳೆಯ ಮಾತುಗಳನ್ನು ಆಡುವುದು ಅಭ್ಯಾಸವಾಗಬೇಕು. ಕೆಟ್ಟ ಮಾತುಗಳನ್ನು ಆಡದಿರುವ ಸುಲಭ ಉಪಾಯವೆಂದರೆ ಮೌನವಾಗಿರುವುದು! ಮೌನವಾಗಿರುವುದಕ್ಕೆ ಖರ್ಚಿಲ್ಲ. ಬೇರೆಯವರು ನಮಗೆ ಏನು ಮಾಡಬಾರದೆಂದು ಬಯಸುತ್ತೇವೆಯೋ ಅದನ್ನು ಬೇರೆಯವರಿಗೆ ಮಾಡದಿರುವುದು! ಒಟ್ಟಿನಲ್ಲಿ ಹೇಳಬೇಕೆಂದರೆ, ಸಂಬಂಧಗಳನ್ನು ಸೃಷ್ಟಿಸುವ ಬ್ರಹ್ಮರು, ಉಳಿಸಿಕೊಳ್ಳುವ ವಿಷ್ಣುಗಳು ಮತ್ತು ಲಯಗೊಳಿಸುವ ಮಹೇಶ್ವರರು ನಾವೇನೇ! ನಾವೇ ಬ್ರಹ್ಮ, ವಿಷ್ಣು, ಮಹೇಶ್ವರರು!!
-ಕ.ವೆಂ. ನಾಗರಾಜ್.

ಗುರುವಾರ, ನವೆಂಬರ್ 9, 2017

ಪರಿಹಾರವಿಲ್ಲದ ಸಮಸ್ಯೆಗಳಿಲ್ಲ


     ಜೀವನದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ, ಕೆಲವು ಸಲ ಸೋಲುತ್ತೇವೆ, ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಹತಾಶರಾಗುತ್ತೇವೆ, ಕೈಚೆಲ್ಲುತ್ತೇವೆ, ಕೆಲವೊಮ್ಮೆ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೂ ಮನಸ್ಸು ಚಂಚಲವಾಗುತ್ತದೆ. ಆದರೆ, ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಉತ್ತಮವಾದ ರೀತಿ. ಸವಾಲುಗಳನ್ನು ಎದುರಿಸುವುದೇ ಜೀವನ, ಸವಾಲುಗಳಿಲ್ಲದ ಜೀವನ ಜೀವನವೇ ಅಲ್ಲ. ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಗಳಿಸಿಕೊಳ್ಳುವುದು ಸುಲಭವಲ್ಲವಾದರೂ ಅಸಾಧ್ಯವೇನಲ್ಲ. ಇದಕ್ಕೆ ಅನುಕೂಲವಾಗುವ ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಾವು ಅನುಸರಿಸಬಹುದಾದ ಮಾರ್ಗ ನಮಗೇ ತಿಳಿಯುತ್ತಾ ಹೋಗಬಹುದು.
೧. ಸವಾಲುಗಳಿಂದ ದೂರ ಹೋಗದಿರುವುದು: 
     ಯಾವುದಾದರೂ ಸಮಸ್ಯೆ ಎದುರಾದರೆ ಅದನ್ನು ಎದುರಿಸದೆ ದೂರವಿದ್ದಷ್ಟೂ ಸಮಸ್ಯೆ ದೊಡ್ಡದಾಗುತ್ತಾ ಹೋಗುತ್ತದೆ. ಉದಾಹರಣೆಗೆ, ಕಾನೂನು-ಸುವ್ಯವಸ್ಥೆ ಸಮಸ್ಯೆ, ಶಾಂತಿಭಂಗದ ಸಮಸ್ಯೆಗಳು ಉದ್ಭವಿಸಿದಾಗ ಅಧಿಕಾರಿಗಳು ಕೊಠಡಿಯಲ್ಲಿ ಕುಳಿತು ಸಂಬಂಧಿಸಿದವರಿಗೆ ದೂರವಾಣಿ ಮೂಲಕ ಸಲಹೆ, ಸೂಚನೆಗಳನ್ನು ಕೊಡುವುದರ ಬದಲು, ಅವರೇ ಸ್ವತಃ ಸ್ಥಳಕ್ಕೆ ಹೋಗಿ ಪರಿಶೀಲಿಸುವುದರಿಂದ ಕಾರ್ಯನಿರತ ಸಿಬ್ಬಂದಿಗೆ ಹೆಚ್ಚು ನೈತಿಕ ಬೆಂಬಲ ಸಿಗುತ್ತದೆ ಮತ್ತು ಪರಿಸ್ಥಿತಿ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ. ಅರ್ಧ ಸಮಸ್ಯೆ ಸ್ಥಳದಲ್ಲೇ ಬಗೆ ಹರಿಯುತ್ತದೆ. ಇದೇ ನೀತಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೂ ಅನ್ವಯವಾಗುತ್ತದೆ. ಹೆದರಿದರೆ ಹೆದರಿಸುವವರು ಮತ್ತಷ್ಟು ಹೆದರಿಸುತ್ತಾರೆ. ತಿರುಗಿ ನಿಂತರೆ? ಸಮಸ್ಯೆಯ ಪ್ರಮಾಣ ಖಂಡಿತ ಕುಗ್ಗುತ್ತದೆ. ಒಂದು ನಾಯಿಯೋ, ಕೋತಿಯೋ ರಸ್ತೆಯಲ್ಲಿ ಹೋಗುತ್ತಿರುವಾಗ ಅಟ್ಟಿಸಿಕೊಂಡು ಬಂದಿತೆಂದು ಓಡಿದರೆ ಅವು ಮತ್ತಷ್ಟು ಆರ್ಭಟ ಮಾಡುತ್ತಾ ಬೆನ್ನು ಹತ್ತುತ್ತವೆ. ತಿರುಗಿ ನಿಂತು ಕೆಳಗೆ ಬಗ್ಗಿ ಕಲ್ಲು ಆರಿಸಿಕೊಂಡರೆ ಅಥವ ಆರಿಸಿಕೊಂಡಂತೆ ಮಾಡಿದರೆ ಗಕ್ಕನೆ ನಿಂತು ಬಾಲ ಮುದುರಿ ಹಿಂತಿರುಗುತ್ತವೆ.
೨. ಸಮಸ್ಯೆಯ ಮೂಲ ತಿಳಿಯುವುದು: 
     ಪ್ರತಿಯೊಂದು ಸಮಸ್ಯೆಗೂ ಕಾರಣಗಳು ಇರುತ್ತವೆ. ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಿಂತ ಸಮಸ್ಯೆಗೆ ಮೂಲ ಕಾರಣ ತಿಳಿದು ಅದನ್ನು ನಿವಾರಿಸಿಕೊಳ್ಳುವುದು ಉತ್ತಮ. ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾದರೆ, ತೇಪೆ ಹಾಕುವುದಕ್ಕಿಂತ ಅದಕ್ಕೆ ಕಾರಣವಾದ ಅಂಶ -ಅದು ಮತ್ಸರವೋ, ಮೇಲರಿಮೆಯೋ ಅಥವ ಹಣಕಾಸಿನ ವ್ಯವಹಾರವೋ ಮತ್ತೊಂದೋ- ಗಮನಿಸದಿದ್ದರೆ ಕಂಟಕ ಬರದೇ ಇರುವುದಿಲ್ಲ.
೩. ಧನಾತ್ಮಕ ಮನೋಭಾವ ಹೊಂದುವುದು: 
     ನಾವು ಸಾಮಾನ್ಯವಾಗಿ ಋಣಾತ್ಮಕ ನಿಲುವಿನಿಂದ ನರಳುತ್ತೇವೆ. ನಮಗೆ ಆಗದವರಿರಬಹುದು, ಪರಿಚಯವಿರದವರು ಇರಬಹುದು ಅಂತಹವರ ಬಗ್ಗೆ ನಮಗೆ ಸಕಾರಾತ್ಮಕ ನಿಲುವು ಹೊಂದದಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರಪಂಚವನ್ನು, ಸುತ್ತಮುತ್ತಲಿನವರನ್ನು ಒಳ್ಳೆಯ ಭಾವನೆಯಿಂದ ನೋಡುವುದನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಸಮಸ್ಯೆಯ ಮೂಲವೇ ನಿವಾರಣೆಯಾಗುತ್ತದೆ.
೪. ಹಿಂದಿನ ಯಶಸ್ಸಿನ ಸಂಗತಿಗಳನ್ನು ನೆನಪಿಸಿಕೊಳ್ಳುವುದು: 
     ಹಿಂದಿನ ಕೆಲವು ಘಟನೆಗಳ ಸಂದರ್ಭದಲ್ಲಿ ನಂಬಿಕೆ ಕಳೆದುಕೊಂಡು ಹತಾಶರಾಗಿದ್ದ ಸಂದರ್ಭದಲ್ಲೂ ಅನಿವಾರ್ಯವಾಗಿ ಅದನ್ನು ಎದುರಿಸ ಬೇಕಾಗಿ ಬಂದು ಯಶಸ್ವಿಯಾಗಿದ್ದುದನ್ನು ನೆನಪಿಸಿಕೊಂಡರೆ ಭರವಸೆ ಮೂಡುತ್ತದೆ. ನಿಮ್ಮ ಕೈಗಳು ತಂತಾನೇ ಮುಷ್ಟಿ ಬಿಗಿ ಹಿಡಿಯುತ್ತವೆ ಮತ್ತು ನಿಮ್ಮ ಮನಸ್ಸು ಎದುರಾದ ಸಮಸ್ಯೆಯನ್ನು ಎದುರಿಸಲು ಸಜ್ಜಾಗುತ್ತದೆ.
೫. ಇನ್ನೊಬ್ಬರ ಸ್ಥಾನದಲ್ಲಿ ನಿಲ್ಲುವುದು: 
     ನಮಗೆ ಬಂದಂತಹ ಸಮಸ್ಯೆ ನಾವು ಮೆಚ್ಚುವಂತಹ ವ್ಯಕ್ತಿಗೆ ಬಂದಿದ್ದರೆ ಆತ ಹೇಗೆ ಪ್ರತಿಕ್ರಿಯಿಸುತ್ತಿದ್ದ, ಹೇಗೆ ಎದುರಿಸುತ್ತಿದ್ದ ಎಂಬುದನ್ನು ಕಲ್ಪಿಸಿಕೊಂಡರೆ ನಮಗೆ ಅದೇ ರೀತಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಇಂತಹುದೇ ಸಮಸ್ಯೆ ಇನ್ನು ಬೇರೆ ಯಾರಿಗಾದರೂ ಬಂದಿದ್ದು, ಅವರು ಅದನ್ನು ಹೇಗೆ ನಿಭಯಿಸಿದರು ಎಂಬುದನ್ನು ತಿಳಿದರೂ ನಮಗೆ ಹೊರಬರುವ ದಾರಿ ಕಾಣಿಸುತ್ತದೆ.
೬. ಎದೆ ಎತ್ತಿ ನಿಲ್ಲುವುದು: 
     ಸಮಸ್ಯೆ ಬಂದಿತೆಂದು ಕುಗ್ಗಿದರೆ ಮಾನಸಿಕವಾಗಿಯೂ ನಾವು ಬಲ ಕಳೆದುಕೊಳ್ಳುತ್ತೇವೆ. ಏನೂ ನಡೆದೇ ಇಲ್ಲವೇನೋ ಎಂಬಂತೆ ಅಥವ ಸಮಸ್ಯೆಯಿಂದ ನಾವು ಹೆದರಿಲ್ಲ ಎಂಬ ಭಾವನೆಯನ್ನು ಹೊರಗೆ ತೋರಿಸಿಕೊಂಡು ಎದೆ ಎತ್ತಿ ನಡೆದರೆ ನಮ್ಮ ಮನಸ್ಸೂ ಅದರಿಂದ ಮತ್ತಷ್ಟು ಬಲ ಗಳಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ, ಸಮಸ್ಯೆ ಎದುರಿಸುವುದು ಕಷ್ಟವೆನಿಸುವುದಿಲ್ಲ.
೭. ಆತ್ಮವಿಶ್ವಾಸದ ಭಾಷೆ ಬಳಸುವುದು: 
     ಅಯ್ಯೋ, ನನ್ನ ಆರೋಗ್ಯವೇ ಸರಿಯಿಲ್ಲ. ಏನು ಮಾಡಲೂ ಆಗುವುದಿಲ್ಲ ಎಂಬರ್ಥದ ಮಾತನಾಡುವವರನ್ನು ಗಮನಿಸಿದರೆ ಅವರು ನಿಶ್ಶಕ್ತಿಯಿಂದ ನಿಧಾನವಾಗಿ ನಡೆದಾಡುತ್ತಾರೆ, ಯಾವ ಕೆಲಸದಲ್ಲೂ ಉತ್ಸಾಹಿಗಳಾಗಿರುವುದಿಲ್ಲ. ಅದೇ ವ್ಯಕ್ತಿಯನ್ನು ಇನ್ನೊಂದು ಸಂದರ್ಭದಲ್ಲಿ, ನಿಮಗೆ ವಯಸ್ಸಾಗಿರುವುದೇ ಗೊತ್ತಾಗುವುದಿಲ್ಲ. ನಿಮ್ಮ ವಯಸ್ಸಿನವರು ಬೇರೆಯವರು ಮೂಲೆ ಹಿಡಿದಿರುತ್ತಾರೆ. ನೀವು ಚಟುವಟಿಕೆಯಿಂದ ಇದ್ದೀರಿ ಎಂದರೆ ಅವರಿಗೆ ಖುಷಿಯಾಗುತ್ತದೆ, ಎದೆ ಎತ್ತರಿಸುತ್ತಾರೆ, ಚಟುವಟಿಕೆಯಿಂದ ಹೆಜ್ಜೆ ಹಾಕುತ್ತಾರೆ. ಸಮಸ್ಯೆಯ ವಿಷಯವೂ ಹಾಗೆಯೇ. ನನ್ನ ಕೈಲಿ ಆಗದು ಎಂಬರ್ಥದಲ್ಲಿ ನಿರುತ್ಸಾಹದ ಮಾತುಗಳನ್ನಾಡದೆ, ಎಷ್ಟೋ ಸಮಸ್ಯೆಗಳಿದ್ದವು, ಬಗೆಹರಿದಿಲ್ಲವೇ, ಇದೇನು ಮಹಾ ಎಂಬ ರೀತಿಯಲ್ಲಿ ಮಾತುಗಳಿದ್ದರೆ ಸಮಸ್ಯೆಯೇ ಹೆದರದಿದ್ದೀತೆ? ಸಮಸ್ಯೆ ಬಂದಾಗ, ಇದರಿಂದ ಪಾರಾಗುವುದು ಹೇಗಪ್ಪಾ? ಎಂದು ಯೋಚಿಸದೆ, ನನ್ನಲ್ಲಿ ಏನು ತಪ್ಪಾಯಿತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರ ಹೊಳೆಯುತ್ತದೆ.
೮. ಕಾರ್ಯಯೋಜನೆ ಹಾಕಿಕೊಳ್ಳುವುದು: 
     ಯಾವುದಾದರೂ ವಿಷಯದ ಕುರಿತು ಮಾತನಾಡಿದರೆ, ಅದು ಕನಸು! ಅದನ್ನು ಸಾಕಾರಗೊಳಿಸಲು ನಿರ್ಧರಿಸಿದರೆ, ಅದು ಸಾಧ್ಯ! ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರೆ, ಅದು ವಾಸ್ತವ! ಸಮಸ್ಯೆ ಬಂದಾಗ ಅದನ್ನು ಎದುರಿಸುವ ರೀತಿ ಕುರಿತು ಚಿಂತಿಸಿ ಕಾರ್ಯಯೋಜನೆ ಹಾಕಿಕೊಂಡು ಮುಂದುವರೆದರೆ ಸಮಸ್ಯೆಗೆ ಉಳಿಗಾಲ ಇರದು.
೯. ಧ್ಯಾನ ಮಾಡುವುದು, ಪ್ರಕೃತಿಯೊಂದಿಗೆ ಇರುವುದು: 
     ಸಂಶೋಧನೆಗಳು ಧ್ಯಾನದಲ್ಲಿರುವವರ ಮೆದುಳಿನ ಭಾಗಗಳು ಧ್ಯಾನ ಮಾಡದವರಿಗಿಂತ ಹೆಚ್ಚು ಕ್ರಿಯಾಶೀಲವಾಗಿರುತ್ತವೆಯೆಂದು ಧೃಡಪಡಿಸಿವೆ. ದಿನದಲ್ಲಿ ೧೦ ನಿಮಿಷಗಳಾದರೂ ಧ್ಯಾನ ಮಾಡುವುದರಿಂದ, ಮೌನವಾಗಿ ಕುಳಿತುಕೊಳ್ಳುವುದರಿಂದ ಮನಸ್ಸಿನ ಕೇಂದ್ರೀಕರಣಕ್ಕೆ ಸಹಾಯವಾಗುತ್ತದೆ, ಪರಿಹಾರ ಕಾಣಲು ಮನಸ್ಸು ಸಶಕ್ತವಾಗುತ್ತದೆ. ವ್ಯಾಯಾಮ, ಯೋಗಾಸನಗಳೂ ಹಿತಕಾರಿ. ಗಿಡ-ಮರಗಳು, ಪ್ರಕೃತಿಯ ಸೌಂದರ್ಯ ಅನುಭವಿಸುತ್ತಾ ಕುಳಿತುಕೊಳ್ಳುವುದರಿಂದಲೂ ಮನಸ್ಸು ಹಗುರಗೊಳ್ಳುತ್ತದೆ. ಸಂದರ್ಭದ ಶಿಶುವಾಗುವ ಬದಲಿಗೆ ನಮ್ಮಂತೆ ನಾವಾಗುವ ಪ್ರೇರಣೆ ಸಿಗುತ್ತದೆ. ನಿಯಮಿತ ಅಭ್ಯಾಸಗಳು ಬಲ ಕೊಡುತ್ತವೆ.
೧೦. ಸೂಕ್ತ ಆಹಾರ ಸೇವನೆ: 
     ನಾವು ಸೇವಿಸುವ ಆಹಾರವೂ ಸವಾಲುಗಳನ್ನು ಎದುರಿಸಲು ಸಹಕಾರಿ. ಆಹಾರವೆಂದರೆ ನಮ್ಮ ಮೇಲೆ ಪರಿಣಾಮ ಬೀರುವ ತಿನ್ನುವುದು, ನೋಡುವುದು, ಕೇಳುವುದು ಸಹ ಒಳಗೊಳ್ಳುತ್ತದೆ. ಮಾದಕ ಪದಾರ್ಥಗಳು, ಹಳಸಿದ ಮತ್ತು ತಂಗಳು ಆಹಾರ ಸೇವನೆ ಮೆದುಳನ್ನು ದುರ್ಬಲಗೊಳಿಸುತ್ತದೆ. ನಮ್ಮನ್ನು ಹುರಿದುಂಬಿಸುವ ಸಂಗತಿಗಳನ್ನೇ ನೋಡುವುದು, ಕೇಳುವುದು, ಓದುವುದು, ಶಕ್ತಿದಾಯಕ ಆಹಾರ ಸೇವಿಸುವುದು ಮಾಡಿದರೆ ನಾವು ಧೃಡಗೊಳ್ಳುತ್ತೇವೆ.
೧೧. ಕೌಟುಂಬಿಕ ಸಮಸ್ಯೆಗಳು: 
     ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿ ನಂಬಿಕೆಯ ಕೊರತೆ, ಅಭದ್ರತೆಯ ಭಾವನೆ, ಮತ್ಸರ ಇತ್ಯಾದಿಗಳಿಂದ ಉದ್ಭವಿಸುತ್ತವೆ. ಸಂಬಂಧಿಸಿದವರು ಪರಸ್ಪರ ಮುಖಾಮುಖಿ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ ಮಾರ್ಗ. ಸಾಧ್ಯವಾಗದಾದಾಗ ಸಂಬಂಧಿಸಿದವರಿಗೆ ಒಪ್ಪಿತವಾಗುವ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಬಹುದು. ಕೌಟುಂಬಿಕ ಆಪ್ತ ಸಮಾಲೋಚನಾ ಕೇಂದ್ರಗಳ ನೆರವೂ ಪಡೆಯಬಹುದು. ಆಪ್ತ ಸಮಾಲೋಚನೆ ಮಾನಸಿಕ ರೋಗಿಗಳಿಗೆ ಮಾತ್ರ ಎಂಬ ಭಾವನೆ ಕೆಲವು ಶಿಕ್ಷಿತರಲ್ಲೂ ಕಂಡುಬರುತ್ತದೆ. ಅವರ ದೃಷ್ಟಿಯಲ್ಲಿ ತಾವೇ ಸರಿ, ತಮ್ಮದೇ ಸರಿ ಎಂಬ ಭಾವವಿರುತ್ತದೆ. ಅಂತಹ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರಾದರೂ ಸಮಾಲೋಚಕರ ಸಲಹೆಯಂತೆ ಮುಂದುವರೆಯುವುದು ಸೂಕ್ತ. ಋಣಾತ್ಮಕ(ನೆಗೆಟಿವಿಟಿ) ಭಾವಕ್ಕೆ  ಒತ್ತು ಕೊಡದೆ ಧನಾತ್ಮಕ(ಪಾಸಿಟಿವ್) ಅಂಶಗಳಿಗೆ ಒತ್ತು ಕೊಡುವುದು ಇಂತಹ ಸನ್ನಿವೇಶಗಳಲ್ಲಿ ಅತ್ಯಂತ ಅಗತ್ಯದ ಸಂಗತಿ.
     ಒಟ್ಟಾರೆಯಾಗಿ ಹೇಳಬೇಕೆಂದರೆ, ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ಅಸಾಧ್ಯ ಎಂಬುದೂ ಇಲ್ಲ. ಎಲ್ಲವೂ ನಮ್ಮ ಮನಸ್ಥಿತಿ ಮತ್ತು ಎದುರಿಸುವ ರೀತಿಯನ್ನು ಅವಲಂಬಿಸಿದೆ.
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 7, 2017

ತಾವರೆ ಎಲೆಯ ಮೇಲಿನ ನೀರು


ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ|
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ||
     ಈ ಜಗತ್ತಿನಲ್ಲಿ ನಡೆಯುವ ಜೀವನ ನಾಟಕಗಳು ಒಂದಕ್ಕಿಂತ ಒಂದು ಭಿನ್ನ, ರಮ್ಯ. ನವರಸಗಳೂ ತುಂಬಿ ತುಳುಕುವ ಈ ನಾಟಕದಲ್ಲಿ ಪ್ರತಿಯೊಬ್ಬರೂ ಪಾತ್ರಧಾರಿಗಳೇ. ವಿಶೇಷವೆಂದರೆ ಯಾರೊಬ್ಬರಿಗೂ ಇದು ನಾಟಕ ಎಂದು ಅನ್ನಿಸುವುದೇ ಇಲ್ಲ. ಪಾತ್ರವೇ ತಾವೆಂದು ತನ್ಮಯರಾಗಿ ನಟಿಸುವಾಗ ಉಸಿರು ನಿಲ್ಲುವವರೆಗೂ ನಾಟಕದಲ್ಲಿ ತಮ್ಮ ಪಾತ್ರ ಒಂದೊಮ್ಮೆ ಮುಕ್ತಾಯವಾಗುತ್ತದೆ ಎಂದು ಭಾವಿಸುವುದೇ ಇಲ್ಲ. ನಾಟಕದಲ್ಲಿನ ತಮ್ಮ ಪಾತ್ರ ಒಂದೊಮ್ಮೆ ಮುಗಿಯುತ್ತದೆ ಎಂದು ಮುಂಚೆಯೇ ಗೊತ್ತಿದ್ದರೆ, ಪಾತ್ರದ ಅಭಿನಯದಲ್ಲಿ ಮತ್ತಷ್ಟು ಜೀವಕಳೆ ತುಂಬುತ್ತಿದ್ದರೇನೋ! ಇದು ನಾಟಕ, ನಾವು ಪಾತ್ರಧಾರಿಗಳು ಎಂದು ಗೊತ್ತಾದರೆ ಪಾತ್ರ ಅನುಭವಿಸುವ ಕಷ್ಟ-ನಷ್ಟಗಳನ್ನು ಸಹಿಸಿಕೊಳ್ಳಲು ಅವಕಾಶವಾಗುತ್ತಿತ್ತು. ಭಗವದ್ಗೀತೆಯ ಒಂದು ಶ್ಲೋಕದಲ್ಲಿ (೫.೧೦) ನಿರ್ಲಿಪ್ತ ಭಾವದಿಂದ, ಫಲ ನಿರಪೇಕ್ಷೆಯಿಂದ ಕರ್ಮಗಳನ್ನು ಮಾಡುವವರಿಗೆ ತಾವರೆಯ ಎಲೆಯ ಮೇಲೆ ನೀರು ತನ್ನ ಇರುವನ್ನು ತೋರಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ, ಅವರಿಗೆ ಪಾಪಗಳು, ಕಷ್ಟಗಳು ತೊಂದರೆ ಕೊಡಲಾರವು ಎಂದು ಹೇಳಿದೆ. ಒಂದೆರಡು ಪ್ರಸಂಗಗಳನ್ನು ಗಮನಿಸೋಣ.
ಪ್ರಸಂಗ ೧:
     ಅದೊಂದು ಸಂತೃಪ್ತ, ಶ್ರೀಮಂತ ಕುಟುಂಬವಾಗಿತ್ತು. ಗಂಡ, ಹೆಂಡತಿ ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳು. ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವರು ಅನ್ನುವ ಹಾಗೆ ಬೆಳೆದ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದರು. ಮಕ್ಕಳಿಬ್ಬರಿಗೂ ಮುಂದೆ ಅಮೆರಿಕಾದಲ್ಲಿ ಒಳ್ಳೆಯ ಕೆಲಸಗಳೂ ಸಿಕ್ಕಿದವು. ಮದುವೆಯೂ ಆಗಿ ಅಲ್ಲಿಯೇ ನೆಲೆಸಿದರು. ಮಕ್ಕಳು ಆಗಾಗ್ಯೆ ಬಂದು ಹೋಗಿ ಮಾಡುತ್ತಿದ್ದರು. ಬರುಬರುತ್ತಾ ಬಂದು ಹೋಗುವುದು ಕಡಿಮೆಯಾಗುತ್ತಾ ಹೋಯಿತು. ಕೆಲವು ವರ್ಷಗಳಲ್ಲಿ ತಂದೆ ತೀರಿಹೋದರು. ತಾಯಿ ಒಂಟಿಯಾದರು. ಯಾವ ಕಾರಣಕ್ಕೋ ಏನೋ, ಒಂಟಿ ತಾಯಿಯನ್ನು ತಮ್ಮೊಂದಿಗೆ ಮಕ್ಕಳು ಕರೆದುಕೊಂಡು ಹೋಗಲು ಮನಸ್ಸು ಮಾಡಲಿಲ್ಲ. ಅಡಿಗೆಯವರು, ಕೆಲಸದವರುಗಳು ಇದ್ದರೂ ತಮ್ಮವರು ಎಂಬುವವರಿಲ್ಲದ ಬಾಧೆ ಅವರನ್ನು ಕಾಡುತ್ತಿತ್ತು. ಮಕ್ಕಳೂ ಹಣ ಕಳಿಸುತ್ತಿದ್ದು, ದೂರದಿಂದಲೇ ಮಾತನಾಡುತ್ತಿದ್ದರೂ ಒಂಟಿತನದಿಂದ ಕೊರಗುತ್ತಿದ್ದ ಆ ತಾಯಿ ಮಕ್ಕಳ ಸಲಹೆಯಂತೆ ವೃದ್ಧಾಶ್ರಮಕ್ಕೆ ಸೇರಿಕೊಂಡರು. ತಾವಿದ್ದ ವೃದ್ಧಾಶ್ರಮಕ್ಕೂ ಅವರು ಲಕ್ಷ, ಲಕ್ಷ ಹಣ ದಾನ ಮಾಡಿದ್ದರು. ಉದಾಸ ಭಾವದಿಂದ ಸೂರು ದಿಟ್ಟಿಸುತ್ತಾ ಕುಳಿತಿರುತ್ತಿದ್ದ ಅವರು ಮುಂದೊಮ್ಮೆ ಅನಾರೋಗ್ಯದಿಂದ ಕಾಲವಶರಾದಾಗ ಅವರ ಮಕ್ಕಳು ಅವರ ಜೊತೆಯಲ್ಲಿರಲಿಲ್ಲ. ಇಲ್ಲಿ ಯಾರದು ತಪ್ಪು ಎಂಬ ವಿಶ್ಲೇಷಣೆಗಿಂತ ಎಲ್ಲಿ ತಪ್ಪಾಗಿದೆ ಎಂಬುದು ಗಮನಿಸಬೇಕಾಗಿದೆ. ನೈತಿಕ ಮೌಲ್ಯಗಳನ್ನು ಬೋಧಿಸದ ಶಿಕ್ಷಣ ಪದ್ಧತಿ, ಸಂಸ್ಕಾರಗಳಿಗೆ ಮಹತ್ವ ಕೊಡದ ಕುಟುಂಬಗಳಿಂದಾಗಿ ಸಂಬಂಧಗಳ ಮಹತ್ವ ಕ್ಷೀಣವಾಗಿ ಇಂತಹ ಮತ್ತು ಇದಕ್ಕಿಂತ ದುರಂತ ಸ್ಥಿತಿಯಲ್ಲಿರುವ ಕುಟುಂಬಗಳು ಕಂಡು ಬರುತ್ತವೆ.
ಪ್ರಸಂಗ ೨:
     ಒಬ್ಬರು ಸಂತರನ್ನು ಒಮ್ಮೆ ಗೃಹಸ್ಥರೊಬ್ಬರು ತಮ್ಮ ಮನೆಗೆ ಆಹ್ವಾನಿಸಿದ್ದರು. ಆ ಕುಟುಂಬದವರೆಲ್ಲರೂ ಆ ಸಂತರ ಶಿಷ್ಯರು, ಅಭಿಮಾನಿಗಳು. ಆ ಮನೆಯಲ್ಲಿದ್ದ ಸುಮಾರು ೯೦-೯೨ರ ವಯಸ್ಸಿನ ವೃದ್ಧೆಯೊಬ್ಬರು ಸಂತರಿಗೆ ನಮಸ್ಕರಿಸಿ, ಪೂಜ್ಯರೇ, ನನಗೆ ಇನ್ನೇನೂ ಆಸೆಯಿಲ್ಲ. ನಿಮ್ಮ ಪಾದದ ಬಳಿಯಲ್ಲಿ ತಲೆಯಿಟ್ಟು ಪ್ರಾಣ ಬಿಡಬೇಕೆಂಬ ಆಸೆಯಿದೆ ಎಂದು ಹೇಳಿದಾಗ, ಆ ಸಂತರು ಕೂಡಲೇ ಸರಿಯಾಗಿ ಕುಳಿತುಕೊಂಡು, ಹಾಗೆಯೇ ಮಾಡಿ ಎಂದುಬಿಟ್ಟರು. ಗಾಬರಿಯಾದ ವೃದ್ಧೆ, ಅಯ್ಯೋ ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗನ ಮದುವೆ ನೋಡಬೇಕು. ಅವನ ಮಗುವನ್ನು ಎತ್ತಿ ಆಡಿಸಬೇಕು. ಆನಂತರ . .  ಎಂದು ರಾಗ ಎಳೆದರು. ಆಹಾ, ಮಾಯಾಮೋಹಿನಿಯ ಆಟವೇ ಆಟ! ಎಷ್ಟೇ ವಯಸ್ಸಾದರೂ ಮೋಹದ ಬಂಧ ಸಡಿಲಾಗುವುದೇ ಇಲ್ಲವಲ್ಲಾ!
ಪ್ರಸಂಗ ೩:
     ವೃದ್ಧ ವ್ಯಾಪಾರಿಯೊಬ್ಬ ಮರಣಶಯ್ಯೆಯಲ್ಲಿದ್ದು ಇನ್ನೇನು ಕೊನೆಯುಸಿರು ಎಳೆಯುತ್ತಾನೆ ಎಂಬ ಸ್ಥಿತಿಗೆ ತಲುಪಿದಾಗ, ಆತನ ಮಕ್ಕಳೆಲ್ಲರಿಗೂ ಬರಲು ಹೇಳಿಕಳುಹಿಸಿದರು. ಎಲ್ಲರೂ ಮನೆಗೆ ಧಾವಿಸಿ ಬಂದರು. ಹಿರಿಯ ಮಗನನ್ನು ಕಂಡ ಆ ವೃದ್ಧರು ಆತನಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಬಾಯಿಯಿಂದ ಸ್ವರ ಹೊರಡುತ್ತಿರಲಿಲ್ಲ. ಬಹಳ ಪ್ರಯತ್ನದ ನಂತರ ಕ್ಷೀಣವಾಗಿ ಹೇಳಿದ್ದೇನೆಂದರೆ, ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ? ಎಂದು! ಇಷ್ಟು ಹೇಳಿ ಅವರು ತಲೆ ವಾಲಿಸಿಬಿಟ್ಟರು. ಲೋಭದ ಅತ್ಯುನ್ನತ ಸ್ಥಿತಿ ಇದು. ಅವರಿಗೆ ಸಾಯುವ ಸಮಯದಲ್ಲಿಯೂ ಸಾಕು ಎಂಬ ಭಾವ ಬರಲೇ ಇಲ್ಲ.
     ಮೊದಲ ಪ್ರಸಂಗದಲ್ಲಿ ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಮತ್ತು ಸುಯೋಗ್ಯ ಸಂಸ್ಕಾರದ ಕೊರತೆ ಆ ಸ್ಥಿತಿಗೆ ಕಾರಣವಾಗಿದ್ದರೂ, ಮಕ್ಕಳನ್ನು ಸಾಕಿ ಸಲುಹಿದ್ದಕ್ಕೆ ಪ್ರತಿಯಾಗಿ ಮಕ್ಕಳು ತಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳಬೇಕೆಂಬ ನಿರೀಕ್ಷೆಯೇ ಆ ತಾಯಿಯನ್ನು ನೋವಾಗಿ ಕಾಡಿದ್ದುದು. ಅಂತಹ ನಿರೀಕ್ಷೆ ಇಟ್ಟುಕೊಂಡಿರದಿದ್ದಲ್ಲಿ ಬಹುಷಃ ದುಃಖದ ಪ್ರಮಾಣ ಕಡಿಮೆಯಿರುತ್ತಿತ್ತೇನೋ! ಇಂದಿನ ದಿನಮಾನಗಳಲ್ಲಿ ಮಕ್ಕಳನ್ನು ಬೆಳೆಸುವುದು ಕರ್ತವ್ಯ ಎಂಬ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ, ಪ್ರತಿಯಾಗಿ ಅವರು ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳದಿರುವುದು ಒಳಿತು. ಈ ಭಾವ ಬರಬೇಕೆಂದರೆ ಅಂಟಿಯೂ ಅಂಟದಂತೆ, ತಾವರೆ ಎಲೆಯ ಮೇಲಿನ ನೀರಿನಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಎರಡನೆಯ ಪ್ರಸಂಗದಲ್ಲಿ, ಒಟ್ಟು ಕುಟುಂಬದ ಹಿರಿಯರು ಇಳಿವಯಸ್ಸಿನ ಸಂದರ್ಭದಲ್ಲಿ ಕೌಟುಂಬಿಕ ಮೋಹಗಳನ್ನು ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯ ತೋರಿಸುತ್ತದೆ. ವಯೋಸಹಜ ಭಾವನೆಗೂ, ವಾಸ್ತವತೆಗೂ ಇರುವ ಅಂತರವನ್ನು ಆ ವೃದ್ಧೆಯ ಮಾತುಗಳೇ ಬಿಂಬಿಸುತ್ತವೆ. ಇನ್ನು ಮೂರನೆಯ ಪ್ರಸಂಗದಲ್ಲಿ ವಯಸ್ಸಾದಂತೆ ಪಕ್ವಗೊಳ್ಳಬೇಕಾಗಿದ್ದ ಮನಸ್ಸು ಲೋಭದ ಕಾರಣದಿಂದಾಗಿ ಕುಬ್ಜವಾಗಿಯೇ ಉಳಿದಿರುವುದರ ಸಂಕೇತ.
     ಮಾನವನ ಆರು ವೈರಿಗಳೆಂದೇ ಕರೆಯಲ್ಪಡುವ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳ ಹಿತವಾದ ಒಡನಾಟವಿದ್ದರೆ ಬದುಕು ಹಿತವಾಗಿರುತ್ತದೆ. ಯಾವುದಾದರೂ ಅತಿಯಾದರೆ ಹಾನಿ ಕಟ್ಟಿಟ್ಟ ಬುತ್ತಿ. ಇದಕ್ಕೆ ನಿದರ್ಶನವಾಗಿ ಹೇರಳವಾದ ಉದಾಹರಣೆಗಳು ಸಿಗುತ್ತವೆ ಮತ್ತು ಅವು ಪ್ರತ್ಯಕ್ಷವಾಗಿ ನಾವೇ ನಮ್ಮ ಜೀವನದಲ್ಲಿ ಕಾಣಬಹುದಾದಂತಹ ಸಂಗತಿಗಳಾಗಿವೆ. ನಮ್ಮ ಅನುಭವಗಳೇ ಗುರುವಾಗಿ ನಮ್ಮನ್ನು ತಿದ್ದಿದರೆ, ಅಂಟಿಯೂ ಅಂಟದಂತಿರುವ ಸ್ವಭಾವ ಬೆಳೆಸಿಕೊಂಡರೆ ನಾವು ಸಾಧಕರಾಗುತ್ತೇವೆ. ಇಂತಹ ಸಾಧನೆ ಸರಳವಲ್ಲ, ಆದರೆ ಅಸಾಧ್ಯವೂ ಅಲ್ಲ.
-ಕ.ವೆಂ.ನಾಗರಾಜ್.


ಗುರುವಾರ, ನವೆಂಬರ್ 2, 2017

ಆತ್ಮಸ್ಥೈರ್ಯ ಹೆಚ್ಚಿಸುವ ಶಿಕ್ಷಣ ಪದ್ಧತಿಯ ಅಗತ್ಯ


     ನಾನು ಆರ್ಥಿಕ ತಜ್ಞನೂ ಅಲ್ಲ, ಶಿಕ್ಷಣ ತಜ್ಞನೂ ಅಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ಶಿಕ್ಷಣಕ್ಕೂ, ಉದ್ಯೋಗಕ್ಕೂ ಇರವ ಸಂಬಂಧ, ಇಂದಿನ ನಿರುದ್ಯೋಗ ಸಮಸ್ಯೆ ಬಗ್ಗೆ ನನಗೆ ಅನ್ನಿಸಿದುದನ್ನು ಹಂಚಿಕೊಳ್ಳುತ್ತಿರುವೆ. 2012ರಲ್ಲಿ ಇದ್ದಂತೆ ಭಾರತದ ಜನಸಂಖ್ಯೆಯ ಶೇ. 65ರಷ್ಟು ಜನರು ಯುವಕರಾಗಿದ್ದು ಉದ್ಯೋಗ ಮಾಡುವ ವಯಸ್ಸಿನವರು. ಭಾರತ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದರೂ, ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಉದ್ಯೋಗ ಕಲ್ಪಿಸುವಲ್ಲಿ ಹಿಂದಿರುವುದಂತೂ ಸತ್ಯ. ಶೈಕ್ಷಣಿಕವಾಗಿಯೂ ಸಹ ಸಾಧಿತ ಪ್ರಗತಿ ಆಶಾದಾಯಕವಾಗಿಲ್ಲ. ವಿದ್ಯಾವಂತ ನಿರುದ್ಯೋಗಿಗಳಿಗಿಂತ ಅನಕ್ಷರಸ್ಥ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಸುಮಾರು ಶೇ. 30ರಿಂದ 35ರಷ್ಟು ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲಿಯೇ ವಿದ್ಯಾಭ್ಯಾಸ ಬಿಟ್ಟುಹೋಗುತ್ತಿರುವುದು ತಿಳಿದು ಬರುತ್ತದೆ. 
     ಶಿಕ್ಷಣ ಅನ್ನುವುದು ವ್ಯಾಪಾರವಾಗಿರುವಾಗ ಇದರ ಆಮೂಲಾಗ್ರ ಬದಲಾವಣೆ ಮಾಡುವ ಅಗತ್ಯವಿದೆ. ಓದಬಯಸುವ ಎಲ್ಲರಿಗೂ ಓದುವ ಅವಕಾಶ ಜಾತಿ, ಮತ, ಪಂಥ, ಇತ್ಯಾದಿಗಳ ಹಂಗಿಲ್ಲದೆ ಸಿಗುವಂತಾಗಬೇಕು. ವೃತ್ತಿಪರ ಶಿಕ್ಷಣಗಳಾದ ಡಿಪ್ಲೊಮಾ, ಇಂಜನಿಯರಿಂಗ್, ವೈದ್ಯಕೀಯ ವಿಭಾಗಗಳಿಗೂ ಸಹ ಈಗಿರುವಂತೆ ಪ್ರಭಾವಿಗಳಿಗೆ, ಹಣ ಉಳ್ಳವರಿಗೆ ಮಾತ್ರ ಓದುವ ಅವಕಾಶ ಎಂಬ ಸ್ಥಿತಿ ತೊಲಗಿ, ಬಡವರೂ, ಆಸಕ್ತರೂ ಈ ವಿಷಯಗಳಲ್ಲಿ ಶಿಕ್ಷಣ ಪಡೆಯುವ ಸ್ಥಿತಿ ಬಂದರೆ ಅದು ಆದರ್ಶದ ಸ್ಥಿತಿಯಾಗುತ್ತದೆ. ಆದರೆ ಬಹುತೇಕ ರಾಜಕೀಯ ಪುಡಾರಿಗಳೇ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದು ಇದಕ್ಕೆ ಅವಕಾಶ ಮಾಡಿಕೊಟ್ಟಾರೆಯೇ ಎಂಬುದು ಯಕ್ಷಪ್ರಶ್ನೆ. ಜಾತಿ ಆಧಾರಿತ ಅವೈಜ್ಞಾನಿಕ ಮೀಸಲಾತಿ ನೀತಿ ಸಹ ಪ್ರತಿಭೆಗೆ ಅಡ್ಡಗಾಲಾಗಿದೆ. ಜಾತಿ, ಮತ, ಪಂಥ, ಧರ್ಮದ ಹೆಸರಿನಲ್ಲಿ ಭೇದ ಮಾಡಬಾರದೆಂಬ ನಮ್ಮ ಪವಿತ್ರ ಸಂವಿಧಾನದ ಆಶಯಕ್ಕೂ ಇದು ವಿರುದ್ಧವಾಗಿದೆ. ಆರ್ಥಿಕ ಆಧಾರಿತ ಮೀಸಲಾತಿ ಸಮಾನತೆಗೆ ಪೋಷಕಕಾರಿಯಾಗಿದ್ದರೂ, ಜಾತಿ ಆಧಾರಿತ ರಾಜಕೀಯ ಮಾಡುವವರಿಗೆ ಇದು ಅಪಥ್ಯವೆನಿಸಿದೆ. 
     ವಿದ್ಯಾವಂತ ನಿರುದ್ಯೋಗಿಗಳು, ನಿರಕ್ಷರಸ್ಥ ಉದ್ಯೋಗರಹಿತರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ರೀತಿ-ನೀತಿಗಳನ್ನು ರೂಪಿಸುವುದು ಮಹತ್ವದ್ದಾಗಿದೆ. ಕೇವಲ ಕಣ್ಣೊರೆಸುವ ಕ್ರಮಗಳು, ಅಲ್ಪಕಾಲಿಕ ಲಾಭ ನೀಡುವ ಯೋಜನೆಗಳು, ರಾಜಕೀಯ ಮುನ್ನಡೆಯ ಸಲುವಾಗಿ ಉಚಿತ ಸವಲತ್ತುಗಳನ್ನು ಒದಗಿಸುವ ಭಾಗ್ಯ ಯೋಜನೆಗಳು ಸಾರ್ವಜನಿಕರ ಹಣದ ದುರುಪಯೋಗ ಮಾಡುವುದಕ್ಕೇ ಸೀಮಿತವಾಗುತ್ತವೆ ಮತ್ತು ಇದರಿಂದಾಗಿ ದೀರ್ಘಕಾಲಿಕ ಪರಿಹಾರ ನೀಡುವ ಯೋಜನೆಗಳಿಗೆ ಹೊಡೆತ ಬೀಳುತ್ತವೆ. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಉದ್ಯೋಗ ಭರವಸೆ ಯೋಜನೆ, ಕೂಲಿಗಾಗಿ ಕಾಳು ಮುಂತಾದ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳುವಲ್ಲಿ ಸ್ವಹಿತಾಸಕ್ತ ರಾಜಕಾರಣಿಗಳು, ಗುತ್ತಿಗೆದಾರರುಗಳು ಮತ್ತು ಅಧಿಕಾರಿಗಳ ಕೂಟದ ಭ್ರಷ್ಠಾಚಾರವೂ ತೊಡಕಾಗಿದೆ. ಸುಳ್ಳು ಬಿಲ್ಲುಗಳು, ಸುಳ್ಳು ಕಾಮಗಾರಿಗಳು, ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಮಾಡಿಸಿದ ಹಗರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಸುಯೋಗ್ಯ, ಭ್ರಷ್ಠಾಚಾರ ರಹಿತ ಆಡಳಿತ ಬರಬೇಕಾದರೆ ಜನರು ಜಾಗೃತರಾದರೆ ಮಾತ್ರ ಸಾಧ್ಯ.
     ಸೀಮಿತ ಅವಕಾಶಗಳಿರುವಾಗ ತಮ್ಮ ಓದಿಗೆ ತಕ್ಕ ಉದ್ಯೋಗ ಎಲ್ಲರಿಗೂ ಸಿಗುತ್ತದೆಯೆಂದು ನಿರೀಕ್ಷಿಸಲಾಗದು. ಸಿಕ್ಕ ಸಣ್ಣ ಅವಕಾಶಗಳನ್ನು ಕೈಚೆಲ್ಲದೆ ತಮ್ಮ ಕಾಲಿನ ಮೇಲೆ ತಾವು ನಿಂತು ಮುಂದೆ ಹೆಚ್ಚಿನ ಅವಕಾಶಗಳಿಗಾಗಿ ಪ್ರಯತ್ನಿಸುವುದು ಒಳ್ಳೆಯದು. ಧೃಢ ವಿಶ್ವಾಸ, ಸತತ ಪ್ರಯತ್ನಗಳಿದ್ದರೆ ಎಂತಹವರೂ ಮುಂದೆ ಬರಲು ಅವಕಾಶ ಸಿಕ್ಕೇಸಿಗುತ್ತದೆ. ಅಂತರ್ಜಾಲ ಸಮುದಾಯ ತಾಣವೊಂದರಲ್ಲಿ ಓದಿದ ಸಂಗತಿ ಪ್ರೇರಕವಾಗಿದೆ. ಅವನೊಬ್ಬ ಬಡತನದ ಕುಟುಂಬದಿಂದ ಬಂದಿದ್ದ ವ್ಯಕ್ತಿ. ಹೊಟ್ಟೆಯ ಪಾಡಿಗೆ ನಗರದ ಒಂದು ದೊಡ್ಡ ಹೋಟೆಲಿನಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡ. ಅವನಿಗೆ ಗಿರಾಕಿಗಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡಲು ಬರುತ್ತಿರಲಿಲ್ಲವೆಂಬ ಕಾರಣಕ್ಕೆ ಸ್ವಲ್ಪ ದಿನಗಳಲ್ಲೇ ಮಾಲಿಕ ಅವನನ್ನು ಕೆಲಸದಿಂದ ತೆಗೆದು ಹಾಕಿದ. ಎದೆಗುಂದದ ಆತ ತನ್ನ ಗುಡಿಸಲಿನಂತಹ ಮನೆಯಲ್ಲಿಯೇ ತಿಂಡಿಗಳನ್ನು ತಯಾರಿಸಿ ಮಾರಲು ಪ್ರಾರಂಭಿಸಿದ. ರುಚಿಯಾದ ತಯಾರಿಕೆ, ನಗುಮುಖದ ಸೇವೆಯಿಂದ ಬರುವ ಜನರ ಸಂಖ್ಯೆ ಏರುತ್ತಾ ಹೋಯಿತು. ಸಹಾಯಕ್ಕೆ ಇಬ್ಬರು, ಮೂವರು ಸಹಾಯಕರನ್ನೂ ನೇಮಿಸಿಕೊಂಡ. ಒಂದೇ ವರ್ಷದಲ್ಲಿ ಇದ್ದ ಕಟ್ಟಡವನ್ನು ಅಭಿವೃದ್ಧಿಗೊಳಿಸಿದ. ಮತ್ತಷ್ಟು ಜನರನ್ನು ನೇಮಿಸಿಕೊಂಡು ಕೇಟರಿಂಗ್ ವ್ಯವಸ್ಥೆ, ಚಪಾತಿಗಳನ್ನು ಸಿದ್ಧಪಡಿಸಿ ಇತರ ಹೋಟೆಲುಗಳು, ವಸತಿ ಗೃಹಗಳು ಇತ್ಯಾದಿಗಳೆಡೆಗೆ ಒದಗಿಸುವ ಕೆಲಸವೂ ಆರಂಭವಾಯಿತು. ನೋಡ ನೋಡುತ್ತಿದ್ದಂತೆ ಆತ ದೊಡ್ಡ ಕುಳವಾಗಿ ಬೆಳೆದ. ಆದರೆ, ಅವನು ಬೆಳೆಯುವುದಕ್ಕೆ ಕಾರಣವಾದ ಸೌಜನ್ಯದ ನಡವಳಿಕೆಯನ್ನು ಅವನು ಬಿಡಲಿಲ್ಲ. ಈಗ ಅವನು ಒಂದು ಪ್ರತಿಷ್ಠಿತ ಐದು ನಕ್ಷತ್ರದ ಹೋಟೆಲ್ ಸಮುಚ್ಛಯದ ಒಡೆಯ. ಆತನಿಗೆ ಇಂಗ್ಲಿಷ್ ಮಾತನಾಡಲು ಬರದಿದ್ದ ಬಗ್ಗೆ ಆಶ್ಚರ್ಯಗೊಂಡ ಒಬ್ಬರು, ನಿಮಗೆ ಇಂಗ್ಲಿಷ್ ಬರದಿದ್ದರೂ ಇಷ್ಟೊಂದು ಮುಂದುವರೆದಿದ್ದೀರಿ. ಇಂಗ್ಲಿಷ್ ಬಂದಿದ್ದರೆ ಇನ್ನೇನು ಆಗಿರುತ್ತಿದ್ದಿರೋ ಎಂದು ಉದ್ಗರಿಸಿದ್ದರು. ಈ ಮಾತಿಗೆ ಆತ ಪ್ರತಿಕ್ರಿಯಿಸಿದ್ದು ಹೀಗೆ: ನನಗೆ ಇಂಗ್ಲಿಷ್ ಬರುತ್ತಿದ್ದರೆ ಬಹುಷಃ ಇದೇ ಹೋಟೆಲಿನಲ್ಲಿ ಲೆಕ್ಕ ಬರೆದುಕೊಂಡು ಇರುತ್ತಿದ್ದೆನೇನೋ! ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯೂ ಆಗಿದ್ದ ಡಾ. ಅಬ್ದುಲ್ ಕಲಾಂ ಆಜಾದರು ಚಿಕ್ಕಂದಿನಲ್ಲಿ ಮನೆ ಮನೆಗೆ ವೃತ್ತಪತ್ರಿಕೆ ಹಾಕುವ ಕೆಲಸವನ್ನೂ ಮಾಡಿದ್ದವರು. ಇಂತಹವರ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಯಾವ ಕೆಲಸವೂ ಚಿಕ್ಕದಲ್ಲ. ಮನಸ್ಸಿದ್ದರೆ ಮಾರ್ಗವಿದೆ ಎಂಬುದು ಸುಳ್ಳಲ್ಲ.
     ಮೇಲಿನ ಪ್ಯಾರಾದಲ್ಲಿ ಹೇಳಿದಂತಹ ವ್ಯಕ್ತಿಗಳ ಮನೋಭಾವ ಎಲ್ಲರಲ್ಲೂ ಬರಬೇಕಾದರೆ ಅದಕ್ಕೆ ತಕ್ಕಂತಹ ಶಿಕ್ಷಣ ಪದ್ಧತಿಯಿಂದ ಮಾತ್ರ ಸಾಧ್ಯ. ವೇದಕಾಲದಲ್ಲಿ ಇದ್ದಂತಹ ಶಿಕ್ಷಣ ಪದ್ಧತಿಯ ಸ್ವರೂಪವನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಸೂಕ್ತವಾಗಿ ರೂಪಿಸುವುದಾದರೆ ಇದು ಅಸಾಧ್ಯದ ಕೆಲಸವೇನಲ್ಲ. ವೇದೋತ್ತರ ಕಾಲದಲ್ಲಿ ಶಿಥಿಲಗೊಂಡರೂ ಉಳಿದುಕೊಂಡು ಬಂದಿದ್ದ ಈ ವ್ಯವಸ್ಥೆ ಸಂಪೂರ್ಣ ನಾಶ ಮಾಡಿದ್ದು ಬ್ರಿಟಿಷರು. ಅದರೊಂದಿಗೆ ಗುಮಾಸ್ತರು, ಗುಲಾಮರನ್ನು ತಯಾರಿಸುವ ಕಾರ್ಖಾನೆಗಳಾಗಿ ಶಾಲೆಗಳು ರೂಪಿತವಾದವು. ಮಕ್ಕಳು ತಿರುಚಿದ ಇತಿಹಾಸವನ್ನು ಕಲಿಯುತ್ತಿದ್ದಾರೆ. ಬರುಬರುತ್ತಾ ಮೌಲ್ಯವರ್ಧನೆಗೆ, ವ್ಯಕ್ತಿತ್ವ ವಿಕಸನಕ್ಕೆ ನೀಡುತ್ತಿದ್ದ ಮಹತ್ವವನ್ನೂ ವ್ಯವಸ್ಥಿತವಾಗಿ ಹಾಳುಗೆಡವುವ ಕೆಲಸ ಪಟ್ಟಭದ್ರರಿಂದ ಆಗುತ್ತಿದೆ. ವೇದಕಾಲದಲ್ಲಿ ಮಕ್ಕಳಿಗೆ ಎಂಟು ವರ್ಷಗಳಾದಾಗ ಅವರಿಗೆ ಉಪನಯನ ಸಂಸ್ಕಾರ ನೀಡಿ ಗುರುಕುಲಕ್ಕೆ ಕಳಿಸಿಕೊಡಲಾಗುತ್ತಿತ್ತು. ಎಲ್ಲಾ ಗಂಡು ಮತ್ತು ಹೆಣ್ಣು ಮಕ್ಕಳಿಗೂ ಈ ಸಂಸ್ಕಾರ ನೀಡಲಾಗುತ್ತಿತ್ತು. ಆಗ ಈಗಿನಂತೆ ಹುಟ್ಟಿನ ಆಧಾರದ ಜಾತಿಗಳಿರಲಿಲ್ಲ. ಎಲ್ಲಾ ಮಕ್ಕಳು, ಅವರು ಸಾಮಾನ್ಯರ ಮಕ್ಕಳಾಗಲೀ, ರಾಜಮನೆತನದವರಾಗಲೀ, ಶ್ರೀಮಂತರಾಗಿರಲಿ, ಆಶ್ರಮದ ನಿಯಮಗಳನ್ನು ಸಮಾನವಾಗಿ ತಪ್ಪದೆ ಪಾಲಿಸಬೇಕಾಗುತ್ತಿತ್ತು. ಆಶ್ರಮಕ್ಕೆ ಬೇಕಾದ ನೀರು ಒದಗಿಸುವುದು, ಉರುವಲು, ಸಮಿತ್ತುಗಳನ್ನು ತರುವುದು, ಇತ್ಯಾದಿ ದೈಹಿಕಶ್ರಮದ ಕೆಲಸಗಳನ್ನು ಎಲ್ಲರೂ ಮಾಡಬೇಕಾಗಿದ್ದಿತು. ಆಶ್ರಮಕ್ಕೆ ಬೇಕಾದ ಸವಲತ್ತುಗಳನ್ನು ಗೃಹಸ್ಥರು ತಮ್ಮ ಜವಾಬ್ದಾರಿಯೆಂಬಂತೆ ಒದಗಿಸುತ್ತಿದ್ದರು. ಸಿರಿವಂತರ ಮಕ್ಕಳೂ ಸಹ ಭಿಕ್ಷಾಟನೆಯಿಂದ ತಮ್ಮ ಮತ್ತು ಆಶ್ರಮವಾಸಿಗಳ ದೈನಿಕ ಅಗತ್ಯತೆಯನ್ನು ಒದಗಿಸಿಕೊಳ್ಳಬೇಕಿದ್ದಿತು. ಆಶ್ರಮದಲ್ಲಿ ಶಾಸ್ತ್ರ ವಿದ್ಯೆಯಲ್ಲದೆ, ಶಸ್ತ್ರವಿದ್ಯೆ, ವ್ಯಾಕರಣ, ಜೋತಿಷ್ಯ, ಗಣಿತ, ಇತಿಹಾಸ ಇತ್ಯಾದಿಗಳನ್ನೂ ಗುರುಗಳು ಹೇಳಿಕೊಡುತ್ತಿದ್ದರು. ಶಿಷ್ಯರು ವಿದ್ಯಾಭ್ಯಾಸ ಮುಗಿಯುವವರೆಗೂ ಗುರುಗಳ ಜೊತೆಯಲ್ಲಿಯೇ ಆಶ್ರಮದಲ್ಲಿದ್ದು ಪಾಂಡಿತ್ಯ ಗಳಿಸಿದ ನಂತರ ಗುರುಗಳ ಆಶೀರ್ವಾದದೊಂದಿಗೆ ಹಿಂತಿರುಗುತ್ತಿದ್ದರು. ಹೀಗೆ ಬಂದವರು ಆತ್ಮಸ್ಥೈರ್ಯ, ಧೃಢವಿಶ್ವಾಸಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ಬಾಳಲು ಶಕ್ತರಾಗಿರುತ್ತಿದ್ದರು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ವರ್ಧಿಸುವ, ಆತ್ಮಸ್ಥೈರ್ಯ ಹೆಚ್ಚಿಸುವ ಅಂಶಗಳ ಕೊರತೆ ಎದ್ದುಕಾಣುತ್ತದೆ. ಇವನ್ನು  ಒಳಗೊಂಡಂತೆ ಸೂಕ್ತ ಶಿಕ್ಷಣ ಪದ್ಧತಿ ಜಾರಿಗೆ ಬರಲೆಂಬ ಆಶಯ ಇಟ್ಟುಕೊಳ್ಳಬಹುದಷ್ಟೆ. ಜ್ಞಾನವಂತರು ಮತ್ತು ಆಡಳಿತಗಾರರ ಸಮ್ಮಿಲಿತ ಧೃಢಸಂಕಲ್ಪ ಮಾತ್ರ ಇದನ್ನು ಸಾಕಾರಗೊಳಿಸಲು ಸಾಧ್ಯ. 
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 23, 2017

ಪ್ರಗತಿಪರ ಪದದ ದುರ್ಬಳಕೆ ನಿಲ್ಲಲಿ!


     ಪ್ರಗತಿಪರರು, ಪ್ರಗತಿಪರ ಚಿಂತಕರು ಎಂಬ ಪದ ಮಾಧ್ಯಮ ವಲಯಗಳಲ್ಲಿ ಈಗ ಬಹುವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲದ ಅರ್ಥದಲ್ಲಿ ಬಳಕೆಯಾಗದೆ ಸವಕಲಾಗಿವೆ ಅಥವ ಅರ್ಥಹೀನವಾಗಿವೆ. ಹೀಗೆ ಸವಕಲಾಗಿರುವ ಜಾತ್ಯಾತೀತತೆ, ಸಮಾನತೆ, ಕೋಮುವಾದ, ಕೋಮುಸೌಹಾರ್ದ, ಬುದ್ಧಿಜೀವಿಗಳು ಇತ್ಯಾದಿ ಪದಗಳ ಸಾಲಿಗೆ ಈ ಪ್ರಗತಿಪರರು ಎಂಬುದೂ ಸೇರಿಬಿಟ್ಟಿದೆ. ಯಾರನ್ನು ಪ್ರಗತಿಪರರು ಎಂದು ಬಿಂಬಿಸಲಾಗುತ್ತಿದೆಯೋ ಅವರು ಹೇಳುವ ಮಾತುಗಳು, ಜೀವನಶೈಲಿ, ಅವರ ಸಂಸ್ಕಾರ, ಬರಹಗಳನ್ನು ಗಮನಿಸಿದರೆ ಪ್ರಗತಿಶೀಲ ಎಂದರೇನು ಎಂಬುದರ ಬಗ್ಗೆಯೇ ಸಂದೇಹ ಮೂಡುತ್ತದೆ. ಅವರು ಪ್ರಗತಿಪರರೆಂದಾದರೆ ಉಳಿದವರೆಲ್ಲಾ ಪ್ರಗತಿವಿರೋಧಿಗಳೇ? ಪ್ರಗತಿಪರರೆಂದು ಹೇಳಿಕೊಳ್ಳುವ ಕೆಲವರ ನಡೆ-ನುಡಿಗಳನ್ನು ನೋಡಿದರೆ ಭಯೋತ್ಪಾದಕರು ತಮ್ಮನ್ನು ತಾವು ಶಾಂತಿದೂತರು ಎಂದು ಕರೆದುಕೊಂಡಂತೆ ಇರುತ್ತದೆ.
     ಪ್ರಗತಿ ಎಂಬುದು ಮೂಲ ಸಂಸ್ಕೃತ ಪದ. ಪ್ರ ಎಂದರೆ ಮುಂದೆ, ಗತಿ ಎಂದರೆ ಚಲನೆ ಎಂಬುದು ಸರಳ ಅರ್ಥ. ಮುಂದಕ್ಕೆ ಹೋಗುವುದು ಅಂದರೆ ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದು ಎಂಬುದು ಈ ಪದ ಹೊಮ್ಮಿಸುವ ಉದ್ದೇಶ. ಮೌಲ್ಯ ವರ್ಧನೆ, ಶಕ್ತಿವರ್ಧನೆ, ಸಂಪತ್ತು ವರ್ಧನೆ, ಜ್ಞಾನ ವರ್ಧನೆ, ಹೀಗೆ ಹತ್ತು ಹಲವು ರಂಗಗಳಲ್ಲಿ ಮುಂದೆ ಹೋಗುವ ಕ್ರಿಯೆಯೇ ಪ್ರಗತಿ. ಇಂತಹ ಉದ್ದೇಶಕ್ಕಾಗಿ ಶ್ರಮಿಸುವವರು, ಅದರ ಪರವಾಗಿ ದ್ವನಿ ಎತ್ತುವವರನ್ನು ಪ್ರಗತಿಪರರು ಎನ್ನಬಹುದು. ಒಟ್ಟು ಸಮಾಜದ ಹಿತವನ್ನು ಗಮನದಲ್ಲಿಟ್ಟು ಅದರ ಪ್ರಗತಿಗೆ, ಅಭಿವೃದ್ಧಿಗೆ ಕಂಕಣ ಕಟ್ಟಿದವರನ್ನು ಪ್ರಗತಿಪರರು ಎನ್ನಬಹುದು. ಆದರೆ ಇಂದೇನಾಗುತ್ತಿದೆ?
     ಕಹಿಯೆನಿಸುವ ಸತ್ಯವೆಂದರೆ ಒಂದು ನಿರ್ದಿಷ್ಟ ಸಂಘಟನೆಗೆ ಸೇರಿದವರನ್ನು ಅಥವ ಅವರ ಪರ ಸಹಾನುಭೂತಿ ಹೊಂದಿದವರನ್ನು ವಿರೋಧಿಸುವವರು ತಮ್ಮನ್ನು ಪ್ರಗತಿಪರರು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಎಂದು ಕರೆದುಕೊಳ್ಳುತ್ತಿರುವುದು, ನಿರ್ದಿಷ್ಟ ರಾಜಕೀಯ ಪಕ್ಷದವರು ಮತ್ತು ಅವರ ಬೆಂಬಲಿಗರನ್ನು ಕೋಮುವಾದಿಗಳು ಎನ್ನುವುದು. ಇದು ಪ್ರಗತಿಪರ ಎಂಬ ಪದಕ್ಕೆ ಮಾಡುವ ಅವಮಾನವಲ್ಲದೆ ಮತ್ತೇನೂ ಅಲ್ಲ. ಯಾವುದೇ ವಿಷಯಕ್ಕೆ ಸಂಬಂದಿಸಿದಂತೆ ನಿಷ್ಪಕ್ಷಪಾತತೆಯಿಂದ ವಿಮರ್ಶಿಸಿ ಸರಿಯಿದ್ದರೆ ಬೆಂಬಲಿಸುವುದು, ಇಲ್ಲದಿದ್ದರೆ ವಿರೋಧಿಸುವುದು ಮಾಡಿದರೆ ಅದನ್ನು ಒಪ್ಪಿಕೊಳ್ಳಬಹುದು. ಅದನ್ನು ಬಿಟ್ಟು ಸರಿಯೋ, ತಪ್ಪೋ ನೋಡದೆ, ಪ್ರತಿಯೊಂದನ್ನೂ ವಿರೋಧಿಸುವ, ಅಡ್ಡಗಾಲು ಹಾಕುವ, ತಮ್ಮದೇ ದೇಶದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಶತಾಯ ಗತಾಯ ಪ್ರಯತ್ನ ಮಾಡುವವರು ತಮ್ಮನ್ನು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದು ಹಾಸ್ಯಾಸ್ಪದವೇ ಸರಿ.    
     ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಎರಡನೆಯದಾದ ದೇಶ ಇತರ ದೇಶಗಳೆದುರು ತನ್ನ ಮಾತು ನಡೆಯುವಂತೆ ನೋಡಿಕೊಳ್ಳಬೇಕು. ವಿದೇಶಗಳಲ್ಲಿ ಭಾರತವನ್ನು ಕಡೆಗಣಿಸುವ ಪರಿಸ್ಥಿತಿ ಹಿಂದೆ ಇದ್ದುದು ಈಗ ಬದಲಾವಣೆಯಾಗುತ್ತಿರುವುದು ಸಾಮಾನ್ಯರ ಗಮನಕ್ಕೇ ಬರುತ್ತಿದೆ. ಗಡಿಭಾಗದಲ್ಲಿ ಬಲಿಷ್ಠ ಚೀನಾದ ಎದುರಿಗೆ ಸಮ ಸಮನಾಗಿ ನಿಂತು ದೋಕ್ಲಾಮ್ ಕಗ್ಗಂಟನ್ನು ಎದುರಿಸಿದ ರೀತಿ ನಿಜಕ್ಕೂ ಹೆಮ್ಮೆ ಪಡುವಂತಹದು. ಆದರೆ ಬುದ್ಧಿಜೀವಿಗಳು ಎನಿಸಿಕೊಂಡವರು ಚೀನಾದ ಪರವಾಗಿ ನಿಂತು ನಮ್ಮವರ ಸ್ಥೆರ್ಯ ಕುಂದಿಸುವ ಪ್ರಯತ್ನ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡಲು ಪಾಕಿಸ್ತಾನದ ಕುಮ್ಮಕ್ಕು ಸ್ಪಷ್ಟವಾಗಿದ್ದರೂ, ಸಂಯಮದಿಂದ ವರ್ತಿಸಿ ಪರಿಸ್ಥಿತಿ ಸುಧಾರಣೆ ಮತ್ತು ಹತೋಟಿಗೆ ಕ್ರಮ ಅನುಸರಿಸಿದ್ದನ್ನು ವಿರೋಧಿಸುವ ಮತ್ತು ನಮ್ಮ ಸೈನಿಕರ ಕುರಿತು ಅವಹೇಳನಕರ ಮಾತುಗಳನ್ನಾಡುವ, ಅವರ ಮನೋಬಲ ಕುಂದಿಸುವ ಕೆಲಸ ಮಾಡಿದವರು ತಮ್ಮನ್ನು ಕರೆದುಕೊಂಡದ್ದು ಪ್ರಗತಿಪರ ಚಿಂತಕರೆಂದೇ, ಆಜಾದಿಯ ಹರಿಕಾರರೆಂದೇ! ವಿದೇಶಗಳ ಎದುರಿನಲ್ಲಿ ಭಾರತ ತಲೆ ಎತ್ತಿ ನಿಲ್ಲುವಂತಹ, ಒಂದು ಬಲಾಢ್ಯ ಶಕ್ತಿಯಾಗಿ ಗುರುತಿಸಿಕೊಳ್ಳುವಂತಹ ಕಾಲ ಬರುತ್ತಿರುವುದು ಪ್ರಗತಿಪರತೆಯೋ, ಅದನ್ನು ವಿರೋಧಿಸುವುದು ಪ್ರಗತಿಪರವೋ? ದೇಶವಿರೋಧಿ ಘೋಷಣೆಗಳನ್ನು ಕೂಗುವುದು, ದೇಶದ ಭದ್ರತೆಗೆ ಆತಂಕ ತರುವ ಕಾರ್ಯಕ್ರಮಗಳನ್ನು ಮಾಡುವುದು ಮತ್ತು ಅಂತಹುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮುಸುಕಿನಲ್ಲಿ ಸಮರ್ಥಿಸುವವರು, ಬೆಂಬಲಿಸುವವರು ಪ್ರಗತಿಪರರೇ?
     ರೂ.೫೦೦ ಮತ್ತು ರೂ.೧೦೦೦ದ ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಿದ ಕ್ರಮ ಕಪ್ಪುಹಣವನ್ನು ಹೊರತೆಗೆಯುವುದಷ್ಟೇ ಆಗಿರದೆ, ನೆರೆದೇಶಗಳಿಂದ ಬರುವ ಖೋಟಾ ನೋಟುಗಳನ್ನು ತಡೆಯುವುದೂ ಆಗಿದ್ದು ಆರ್ಥಿಕವಾಗಿ ಕ್ರಾಂತಿಕಾರಕವೆಂದು ಹೇಳಲಾಗಿದ್ದು, ತಮಗೆ ಕಷ್ಟವಾದರೂ ಜನಸಾಮಾನ್ಯರು ಮುಂದೆ ಒಳ್ಳೆಯದಾಗುವುದೆಂಬ ಕಾರಣಕ್ಕೆ ಸಹಿಸಿಕೊಂಡು ಸಹಕರಿಸಿದ್ದು ಈಗ ಇತಿಹಾಸ. ಅವರನ್ನು ಪ್ರತಿಭಟನೆಗೆ ಪ್ರಚೋದಿಸಲು, ಎತ್ತಿಕಟ್ಟಲು ಪ್ರಗತಿಪರರೆನಿಸಿಕೊಂಡವರು, ರಾಜಕೀಯ ನಾಯಕರು ಮತ್ತು ಕೆಲವು ಮಾಧ್ಯಮಗಳವರು ನಾನಾ ರೀತಿಯಲ್ಲಿ ಪ್ರಯತ್ನಿಸಿ ವಿಫಲವಾಗಿದ್ದುದನ್ನೂ ಕಂಡೆವು. ಈಗ ಅಪಮೌಲ್ಯಗೊಂಡ ನೋಟುಗಳ ಶೇ. ೯೫ಕ್ಕೂ ಹೆಚ್ಚು ಭಾಗ ಬ್ಯಾಂಕುಗಳಲ್ಲಿ ಜಮಾ ಅಗಿರುವುದೆಂದು ಹೇಳಲಾಗಿದ್ದು, ಇದು ಸರ್ಕಾರದ ಕ್ರಮದ ವಿಫಲತೆಯೆಂದು ಬಣ್ಣಿಸಲಾಗುತ್ತಿದೆ. ಹಣ ಬ್ಯಾಂಕಿನಲ್ಲಿ ಜಮೆ ಆಗಿದ್ದರೂ, ಅದಕ್ಕೆ ಲೆಕ್ಕವಿದೆ. ಅಕ್ರಮವಾಗಿ ಜಮಾ ಆದ ಹಣದ ಬಗ್ಗೆ ಸರಿಯಾದ ತನಿಖೆ ಆದರೆ ಆಗಲೂ ಅಕ್ರಮ ಹಣದ ಪತ್ತೆ ಮತ್ತು ಅಪರಾಧಿಗಳ ದಂಡನೆಗೆ ಅವಕಾಶ ಮುಕ್ತವಾಗಿದೆ. ಈಗಾಗಲೇ ಆ ಕ್ರಮ ಪ್ರಾರಂಭವಾಗಿದೆ. ಅಪನಗದೀಕರಣದಿಂದಾಗಿ ಹಲವಾರು ದೊಡ್ಡ ತಿಮಿಂಗಲಗಳು ನೆಲ ಕಚ್ಚಿರುವುದು, ಭಯೋತ್ಪಾದಕ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಬಿದ್ದಿರುವುದು ಗಮನಾರ್ಹವಾಗಿದೆ. ಸರ್ಕಾರಕ್ಕೆ ತೆರಿಗೆಯ ರೂಪದಲ್ಲಿ ಗಣನೀಯ ಪ್ರಮಾಣದಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದೆ. ಒಳ್ಳೆಯ ಉದ್ದೇಶದ ಕ್ರಮಕ್ಕೆ ಬೆಂಬಲಿಸುವುದು ಪ್ರಗತಿಪರವೋ, ಅದನ್ನು ವಿಫಲಗೊಳಿಸಲು ಪ್ರಯತ್ನಿಸುವುದು ಪ್ರಗತಿಪರವೋ?
     ಹಲವು ವಿದೇಶಗಳು ಈ ದೇಶದ ಮೇಲೆ ಅಘೋಷಿತ ಹತೋಟಿ ಹೊಂದುವ ಅಥವ ಇಲ್ಲಿನ ಸರ್ಕಾರವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಈ ದೇಶದಲ್ಲಿ ಹಲವಾರು ಸರ್ಕಾರೇತರ ಸಂಸ್ಥೆಗಳನ್ನು, ಸಂಘಟನೆಗಳನ್ನು ಸ್ಥಾಪಿಸಿ ಪ್ರತಿಷ್ಠಿತರು, ಗೌರವಾನ್ವಿತರು ಅನ್ನಿಸಿಕೊಂಡವರನ್ನು ಅದಕ್ಕೆ ನೇಮಿಸಿ ಹಣದ ಹೊಳೆ ಹರಿಸುತ್ತಾ ಇರುವುದು ಈಗ ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಸುಂದರ ಮುಖವಾಡದ ಹಿಂದೆ ಸರ್ಕಾರ ದುರ್ಬಲಗೊಳಿಸುವ ಕ್ರೂರ ಹುನ್ನಾರ ಹೊಂದಿರುವ ಚಿಂತಕರು ತಮ್ಮ ಪ್ರತಿಭೆಯನ್ನು ಹಣಕ್ಕಾಗಿ ಒತ್ತೆ ಇಟ್ಟಿದ್ದಾರೆ ಎಂಬ ಸತ್ಯವೂ ಹೊರಬರುತ್ತಿದೆ. ಹಲವರ ಮುಖವಾಡಗಳೂ ಕಳಚಿಬೀಳುತ್ತಿವೆ. ಇವರುಗಳು ಪ್ರಗತಿಪರರೋ ಅಥವ ಇವರುಗಳ ಬಣ್ಣ ಬಯಲು ಮಾಡುತ್ತಿರುವುದು ಪ್ರಗತಿಪರತೆಯೋ? ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರ ಹಿನ್ನೆಲೆಯಲ್ಲಿ ಹಣದ, ಅಧಿಕಾರದ, ವಶೀಲಿಯ, ಪ್ರಶಸ್ತಿಯ ಆಸೆ ಇರುವುದೂ ಇದೆ. ಆದರೆ ಇದನ್ನು ಸಾರಾಸಗಟಾಗಿ ಎಲ್ಲರ ವಿಷಯದಲ್ಲಿ ಹೇಳಲಾಗುವುದಿಲ್ಲವಾದರೂ ಕೆಲವರ ನಡೆ-ನುಡಿಗಳು ಇದನ್ನು ಸಮರ್ಥಿಸುತ್ತವೆ.
     ಮೇಲೆ ತಿಳಿಸಿದಂತಹ ಉದಾಹರಣೆಗಳು ಸಾಂಕೇತಿಕವಷ್ಟೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರಗತಿಪರರು ಎಂಬ ವಿಶೇಷಣವನ್ನು ಕೆಲವರ ಗುತ್ತಿಗೆಯೆಂಬಂತೆ ಬಳಸುವ ಪ್ರವೃತ್ತಿ ನಿಲ್ಲಬೇಕು. ಪ್ರಗತಿಪರತೆ ಎಂದರೆ ಯಾವುದೋ ಒಂದು ವಿಚಾರವನ್ನು ಸಮರ್ಥಿಸುವುದಲ್ಲ ಅಥವ ವಿರೋಧಿಸುವುದಲ್ಲ, ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರಾಗಬೇಕಿಲ್ಲ, ಜಾತಿ, ಧರ್ಮ, ಪಂಥದ ಹೆಸರಿನಲ್ಲಿ ಯಾರನ್ನೋ ತೆಗಳುವುದಲ್ಲ ಅಥವ ಓಲೈಸುವುದಲ್ಲ, ಒಂದೇ ಕಾನೂನನ್ನು ಬೆಂಬಲಿಗರಿಗೆ ಒಂದು ತರಹ, ವಿರೋಧಿಗಳಿಗೆ ಮತ್ತೊಂದು ತರಹ ಅನ್ವಯಿಸುವುದಲ್ಲ.  ಎಲ್ಲರನ್ನೂ ಮಾನವರನ್ನಾಗಿ ಕಾಣುವ ದೃಷ್ಟಿ ಹೊಂದಿ, ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದಕ್ಕೆ ಧ್ವನಿ ಎತ್ತುವವರು ನಿಜವಾಗಿ ಪ್ರಗತಿಪರರು. ಹೀಗೆ ಇರದವರು, ಸುಂದರ ಮುಖವಾಡ ಧರಿಸಿ ಮರುಳು ಮಾಡುವ ಢೋಂಗಿಗಳು. ಸಿಕ್ಕ ಸಿಕ್ಕವರನ್ನೆಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಚಿಂತಕರು ಎಂದು ಹೇಳುವ ಪ್ರವೃತ್ತಿಗೆ ಕಡಿವಾಣ ಬೀಳಲೇಬೇಕು.
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 22, 2017

ಕಥೆಯ ಕಥೆ (Story of a story)


     ಮಗುವೊಂದು ರಚ್ಚೆ ಹಿಡಿದು ಅಳುತ್ತಿತ್ತು. ಏನು ಮಾಡಿದರೂ, ಏನು ಕೊಟ್ಟರೂ ಅದಕ್ಕೆ ಸಮಾಧಾನವಾಗುತ್ತಿರಲಿಲ್ಲ. ಯಾರೆಷ್ಟೇ ಪ್ರಯತ್ನಿಸಿದರೂ ಅದಕ್ಕೆ ಏನು ಬೇಕೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಹೇಳಲು ತಿಳಿಯದ ಮಗುವೂ ಅಳು ನಿಲ್ಲಿಸುತ್ತಿರಲಿಲ್ಲ. ಪೇಪರ್ ಓದುತ್ತಾ ಕುಳಿತಿದ್ದ ಮಗುವಿನ ತಾತ ಪೇಪರ್ ತೆಗೆದಿಟ್ಟು, 'ಒಂದೂರಲ್ಲಿ ಒಂದು ಪಾಪ ಇತ್ತಂತೆ, ಆ ಪಾಪು ಏನ್ ಮಾಡ್ತೂ ಅಂದರೆ . .' ಎಂದು ಹೇಳತೊಡಗಿದಾಗ ಮಗು ಅಳು ನಿಲ್ಲಿಸಿ ತಾತನ ಕಡೆಗೆ ಗಮನ ಹರಿಸಿತ್ತು. ತಾತ ಮಗುವನ್ನು ಎತ್ತಿಕೊಂಡು ತೊಡೆಯ ಮೇಲೆ ಕೂರಿಸಿಕೊಂಡು ಕಥೆ ಮುಂದುವರೆಸಿದಾಗ ನಗುತ್ತಾ ಪ್ರತಿಕ್ರಿಯಿಸುತ್ತಿತ್ತು. ಕಥೆ ಕೇಳುತ್ತಾ ಇದ್ದಾಗ ಅಮ್ಮ ಅದಕ್ಕೆ ತುತ್ತು ತಿನ್ನಿಸುತ್ತಿದ್ದರೂ ಗಮನಿಸದೆ ತಿನ್ನುತ್ತಾ ಕಥೆ ಕೇಳುತ್ತಿತ್ತು. ಮಗುವಿನ ಹಸಿವೂ ಹಿಂಗಿತ್ತು, ಮನಸ್ಸಿಗೂ ಹಿತವಾಗಿತ್ತು, ಅಳು ಮರೆತೇ ಹೋಗಿತ್ತು. ತಾತ ಹೇಳಿದ್ದ ಕಥೆಗೆ ತುದಿಯೂ ಇರಲಿಲ್ಲ, ಬುಡವೂ ಇರಲಿಲ್ಲ. ಮಗುವಿಗೆ ಹಿತವಾಗುವ, ಇಷ್ಟಪಡುವ ಸಂಗತಿಗಳು ಮಾತ್ರ ಇದ್ದವು ಅಷ್ಟೆ. ಕಥೆಗಳು ಮಕ್ಕಳಿಗಿರಲಿ, ಎಲ್ಲರಿಗೂ ಇಷ್ಟವಾಗುವುದು ಈ ಕಾರಣಕ್ಕಾಗಿಯೇ, ತಾವು ಇಷ್ಟಪಡುವ ವಿಚಾರ ಅಲ್ಲಿ ಸಿಗುತ್ತದೆ, ಸಿಗಬಹುದು ಎಂಬ ಕಾರಣಕ್ಕಾಗಿ. ನನ್ನ ಚಿಕ್ಕಂದಿನಲ್ಲಿ ಸೋದರಮಾವನೊಬ್ಬ ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಧಾರಾವಾಹಿಯಾಗಿ ಕಟ್ಟುಕಥೆಯನ್ನು ಕಲ್ಪಿಸಿಕೊಂಡು ಸ್ವಾರಸ್ಯಕರವಾಗಿ ಹೇಳುತ್ತಿದ್ದರೆ ದೊಡ್ಡವರೂ ಸಹ ಗುಂಪುಕೂಡಿ ಕೇಳುತ್ತಿದ್ದರು. ಅದನ್ನೇ ಅವನು ಹರಿಕಥೆ ರೂಪದಲ್ಲೂ ಹೇಳುತ್ತಿದ್ದ. ಕಥೆಯನ್ನು ಸ್ವಾರಸ್ಯಕರ ಘಟ್ಟದಲ್ಲಿ ನಿಲ್ಲಿಸಿ, ತನ್ನ ಬಟ್ಟೆ ಇಸ್ತ್ರಿ ಮಾಡುವುದು ಮುಂತಾದ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳಿಂದಲೇ ಮಾಡಿಸಿಕೊಂಡು ನಂತರ ಕಥೆ ಮುಂದುವರೆಸುತ್ತಿದ್ದ. ಮಕ್ಕಳೂ ಕಥೆ ಕೇಳುವ ಕುತೂಹಲಕ್ಕೆ ದಡಬಡನೆ ಕೆಲಸ ಮುಗಿಸಿ ಓಡಿ ಬಂದು ಕೂರುತ್ತಿದ್ದವು. ಕಥೆಯಲ್ಲಿ ಹುರುಳಿರದಿದ್ದರೂ, ತಿರುಳಿರುತ್ತಿತ್ತು, ಒಳ್ಳೆಯವರಿಗೆ ಮೊದಲು ಕಷ್ಟವಾದರೂ ಕೊನೆಗೆ ಒಳ್ಳೆಯದಾಗುತ್ತದೆ ಎಂಬುದೇ ತಿರುಳು. ಹೇಳುವ ರೀತಿಯಲ್ಲಿ ಆಕರ್ಷಣೆಯಿರುತ್ತಿತ್ತಷ್ಟೆ.
     ಮೇಲಿನ ಉದಾಹರಣೆ ಕೊಡುವುದಕ್ಕೂ ಕಾರಣವಿದೆ. ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್ ಇರುವಂತೆ ಹಿಂದೂಗಳ ಪವಿತ್ರ ಗ್ರಂಥ ಯಾವುದು ಎಂದರೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಭಗವದ್ಗೀತೆ ಅನ್ನುತ್ತಾರೆ, ರಾಮಾಯಣ ಅನ್ನುತ್ತಾರೆ, ಮಹಾಭಾರತವೆನ್ನುತ್ತಾರೆ, ಶಿವಪುರಾಣ ಅನ್ನುತ್ತಾರೆ, ಹೀಗೆಯೇ ಇನ್ನೇನೋ ಹೇಳುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ವೇದಗಳು ನಮ್ಮ ಪವಿತ್ರ ಗ್ರಂಥವೆನ್ನಬೇಕು. 5000 ವರ್ಷಗಳ ಹಿಂದೆ ವೇದವ್ಯಾಸರು ವೇದಗಳನ್ನು ಲಿಖಿತರೂಪದಲ್ಲಿ ಲೋಕದ ಮುಂದಿಟ್ಟಿದ್ದು, ಇಂದಿಗೂ ಅದರಲ್ಲಿನ ಸಂಗತಿಗಳಲ್ಲಿ ಒಂದಕ್ಕೊಂದು ವಿರೋಧಾಭಾಸವಾದ ಅಂಶಗಳಿಲ್ಲ, ಲೋಕವಿರೋಧಿ ತತ್ವಗಳಿಲ್ಲ, ಸಕಲ ಜೀವರಾಶಿಯ ಹಿತ, ಶಾಂತಿ ಬಯಸುವ ಸಂಗತಿಗಳೇ ಸೂತ್ರ ರೂಪದಲ್ಲಿವೆ. ಹೀಗೆ ಲಿಖಿತ ರೂಪದಲ್ಲಿ ಬರುವ ಮುನ್ನ ವೇದ ಇರಲಿಲ್ಲವೇ? ಖಂಡಿತ ಇತ್ತು, ಋಷಿಮುನಿಗಳು, ದಾರ್ಶನಿಕರು ಅದನ್ನು ಮೌಖಿಕವಾಗಿ ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಮುಂದುವರೆಸಿಕೊಂಡು ಬರುತ್ತಿದ್ದರು. ಅದನ್ನೇ ವೇದವ್ಯಾಸರು ಜಗತ್ತಿಗೆ ಲಿಖಿತರೂಪದಲ್ಲಿ ಅರ್ಪಿಸಿದ್ದರು. ವೇದಗಳ ನಂತರದ ಸಾಹಿತ್ಯಗಳೇ, ಉಪನಿಷತ್ತುಗಳು, ಪುರಾಣಗಳು, ಪುಣ್ಯಕಥೆಗಳು, ರಾಮಾಯಣ, ಮಹಾಭಾರತದಂತಹ ಇತಿಹಾಸಗಳು, ಇತ್ಯಾದಿ. ಇವುಗಳು ವೇದದ ಸಾರವನ್ನು ಕಥೆ, ಪುರಾಣಗಳ ರೂಪದಲ್ಲಿ ತಿಳಿಸುವ ಪ್ರಯತ್ನಗಳು. ಅದನ್ನು ಹೇಳುವವರ, ಅರ್ಥೈಸುವವರ ಅನುಸಾರವಾಗಿ ಕೆಲವೊಮ್ಮೆ ವಿರೋಧಾಭಾಸಗಳೂ ಕಂಡುಬರುತ್ತವೆ. ಆದರೆ, ಮೂಲವೇದಗಳಲ್ಲಿ ಅಂತಹ ವಿರೋಧಾಭಾಸಗಳಿಲ್ಲ. ಆದ್ದರಿಂದ ವೇದಗಳೇ ಹಿಂದೂಗಳ ಧರ್ಮಗ್ರಂಥವೆಂದು ಕರೆಯಲ್ಪಡಲು ಅರ್ಹವಾಗಿದೆ. ವೈಚಾರಿಕತೆಗೆ ಮುಕ್ತ ಅವಕಾಶವಿರುವ ಚಲನಶೀಲ ಸನಾತನ ಧರ್ಮ, ಸ್ವಂತ ಅಧ್ಯಯನದಿಂದ ಸತ್ಯಾನ್ವೇಷಣೆಗೆ ಪ್ರೇರಿಸುವ ಧರ್ಮ ಬಹುಷಃ ಜಗತ್ತಿನಲ್ಲಿ ಇದೊಂದೇ ಆಗಿದೆ.
     ಅನೇಕ ಪುರಾಣಗಳಲ್ಲಿ ನಂಬಲು ಅಸಾಧ್ಯವೆನಿಸುವ, ಅರ್ಥರಹಿತವೆನಿಸುವ ಕೆಲವು ಘಟನೆಗಳ ಉಲ್ಲೇಖ ಕಂಡುಬರುತ್ತದೆ. ಇತರರು ಅದನ್ನು ಕುರಿತು ಗೇಲಿ ಮಾಡಿದರೆ, ಅದನ್ನು ಸಮರ್ಥಿಸಲು ಪಂಡಿತರು ಸಕಾರಣಗಳನ್ನು ಮುಂದಿಟ್ಟರೆ, ಸಾಮಾನ್ಯರು ಸುಮ್ಮನಾಗುವ ಸಂಗತಿಗಳೂ ಇವೆ. ಈ ಪುರಾಣ, ಪುಣ್ಯಕಥೆಗಳನ್ನು ಆಧರಿಸಿ ಅನೇಕ ಸಂಪ್ರದಾಯ, ಹಬ್ಬಗಳನ್ನೂ ಆಚರಿಸಲಾಗುತ್ತಿದೆ. ತಲೆ ತಲಾಂತರದಿಂದ ಆಚರಿಸಿಕೊಂಡು ಬರುವ ಸಂಪ್ರದಾಯಗಳ ಅರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದುವರೆಸಿಕೊಂಡು ಬರುವವರ ಸಂಖ್ಯೆ ಎಲ್ಲಾ ಧರ್ಮ, ಜಾತಿಗಳಲ್ಲೂ ಕಂಡುಬರುತ್ತದೆ. ಇಲ್ಲಿ ಇನ್ನೊಂದು ಅಂಶವನ್ನೂ ಪರಿಗಣಿಸಬೇಕಿದೆ. ವೇದದ ಸ್ಪಷ್ಟ, ನೇರ ವಿಚಾರಗಳು ಅಷ್ಟು ಸುಲಭವಾಗಿ ಜನರಿಗೆ ತಲುಪಲಾರವು. ಅಲ್ಲದೆ ಅಂತಹ ಸಂಗತಿಗಳು ಜನರಿಗೆ ರುಚಿಸುವುದೂ ಸುಲಭವಲ್ಲ. ಹಾಗಾಗಿ ರಂಜನೀಯವಾಗಿ ಕಥೆ, ಪುರಾಣಗಳ ರೂಪದಲ್ಲಿ ಹೇಳಿದರೆ ಜನರಿಗೆ ಪ್ರಿಯವೆನಿಸುವುದಲ್ಲದೆ, ಆ ಮೂಲಕ ವಿಚಾರಗಳನ್ನು ತಲುಪಿಸಬಹುದೆಂಬುದು ಇದರ ಉದ್ದೇಶವಿರಬಹುದು. ಕಥೆಗಳನ್ನು ಕೇಳುವವರ ಮನೋಸ್ಥಿತಿ, ಇಷ್ಟಾನಿಷ್ಟಗಳನ್ನು ಅನುಸರಿಸಿ ಹೇಳಬೇಕಾಗುತ್ತದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೂ, ಪದವಿ ಮಟ್ಟದಲ್ಲಿ ಓದುವ ವಿದ್ಯಾರ್ಥಿಗೂ ಒಂದೇ ರೀತಿಯಲ್ಲಿ ಪಾಠ ಹೇಳಿಕೊಡಬಹುದೆ? ಪುರಾಣಗಳು ಇತ್ಯಾದಿ ವೇದೋತ್ತರ ಕಾಲದ ರಚನೆಗಳನ್ನು ಒತ್ತಟ್ಟಿಗಿಟ್ಟರೆ, ಮೂಲವೇದಗಳಲ್ಲಿ ಸಕಲರ ಹಿತವೇ ಪ್ರಧಾನವಾಗಿರುವ ಸಂಗತಿಗಳಷ್ಟೇ ಕಂಡುಬರುತ್ತವೆ. ವೇದಗಳು ಸಾರುವ ಮಾನವಧರ್ಮದ ಸಾರ ಅರ್ಥ ಮಾಡಿಕೊಂಡರೆ ಯಾವ ಬೇರೆ ಧರ್ಮವೂ, ಹೊಸತಿರಲಿ, ಹಳೆಯದಿರಲಿ ಅಗತ್ಯವಿರುವುದಿಲ್ಲ.
     ಪುರಾಣ, ಪುಣ್ಯಕಥೆಗಳ ವಿಚಾರದಲ್ಲಿ ಹೇಳಬೇಕೆಂದರೆ, ಅವು ಸಾರುವ ತಿರುಳಿನ ಕಡೆಗೆ ಲಕ್ಷ್ಯವಹಿಸಬೇಕೇ ಹೊರತು, ಅಲ್ಲಿ ಬರುವ ಕೆಲವು ಸಂಗತಿಗಳ ಕುರಿತು ಅದು ಏಕೆ, ಹೇಗೆ ಎಂದು ಚರ್ಚಿಸಹೊರಟರೆ ನಾವು ಎಲ್ಲಿಗೂ ತಲುಪಲಾರೆವು. ಮಕ್ಕಳಿಗೆ ವರ್ಣಮಾಲೆ ಕಲಿಸುವಾಗ ಅ-ಅಗಸ, ಆ-ಆನೆ ಇತ್ಯಾದಿ ಹೇಳಿಕೊಡುತ್ತೇವೆ. ಇಂಗ್ಲಿಷಿನಲ್ಲಾದರೆ ಎ ಫಾರ್ ಆಪಲ್, ಬಿ ಫಾರ್ ಬಾಲ್, ಹೀಗೆ ಕಲಿಸುತ್ತೇವೆ. ಅಗಸ, ಆನೆಗಳಿಗೂ, ಅಆಇಈಗೂ, ಆಪಲ್, ಬಾಲ್‌ಗಳಿಗೂ ಎಬಿಸಿಡಿಗೂ ಏನಾದರೂ ಸಂಬಂಧವಿದೆಯೇ? ಮಕ್ಕಳಿಗೆ ಕಲಿಯುವ ಆಸಕ್ತಿ ಬರುವ ಸಲುವಾಗಿ ಹೀಗೆಲ್ಲಾ ಮಾಡುತ್ತೇವೆ. ಪುರಾಣ, ಪುಣ್ಯಕಥೆಗಳೂ ಅಷ್ಟೆ, ನಮ್ಮ ಸಾಧನೆಗೆ ಮೆಟ್ಟಲುಗಳಷ್ಟೆ. ಅಲ್ಲಿಂದ ಮುಂದಕ್ಕೆ ಹೋಗಬೇಕು. ಮೆಟ್ಟಲುಗಳಲ್ಲಿಯೇ ಕುಳಿತು ಬಿಟ್ಟರೆ ಮೇಲೇರುವುದಾದರೂ ಹೇಗೆ?
     ಭಗವದ್ಗೀತೆಯೂ ಒಂದು ಕಥೆಯೇ! ಮಹಾಭಾರತದ ಒಂದು ಭಾಗವಾದ ಇದು ಪಾಂಡವರು ಮತ್ತು ಕೌರವರ ನಡುವೆ ರಣರಂಗದಲ್ಲಿ ಏನು ನಡೆಯುತ್ತಿದೆಯೆಂಬುದನ್ನು ತನ್ನ ದಿವ್ಯದೃಷ್ಟಿಯಿಂದ ಸಂಜಯ ಧೃತರಾಷ್ಟ್ರನಿಗೆ ವಿವರಿಸುವ ಕಥೆ! ಅದರಲ್ಲಿ ಬರುವ ಅನೇಕ ಸಂಗತಿಗಳು, ವಿಚಾರಗಳು ಮೌಲ್ಯವನ್ನು ಪ್ರತಿಪಾದಿಸುವಂತಹವು, ಉತ್ತಮ, ಉನ್ನತ ಸ್ಥಿತಿಗೆ ಏರಲು ಪ್ರಚೋದಿಸುವಂತಹವು. ನಾವು ಆರಿಸಿಕೊಳ್ಳಬೇಕಾದುದು, ಅಳವಡಿಸಿಕೊಳ್ಳಬೇಕಾದುದು ಇವುಗಳನ್ನೇ ಹೊರತು, ಹಾಗೆ ನಡೆಯಿತೋ, ಇಲ್ಲವೋ, ಅದು ಸಾಧ್ಯವೇ, ಇತ್ಯಾದಿ ಒಣತರ್ಕದಲ್ಲಿ ತೊಡಗಿದರೆ ಪ್ರಯೋಜನ ಶೂನ್ಯ. ಋಗ್ವೇದದ ಈ ಮಂತ್ರ ನಾವು ಸಾಗಬಹುದಾದ ದಾರಿಯನ್ನು ತೋರಿಸುತ್ತಿದೆ: 'ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ| ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತ||' ಹೇ ಮಾನವರೇ, ಯಾವುದು ಪ್ರಾಚೀನವೋ ಅದನ್ನು ಗಮನಿಸಿರಿ. ಇತಿಹಾಸದಿಂದ ಪಾಠ ಕಲಿಯಿರಿ. ಯಾವುದು ನೂತನವೋ ಅದನ್ನೂ ಕೇಳಿರಿ. ಯಾವುದು ಶಾಸ್ತ್ರ ರೂಪದಲ್ಲಿ ಹೇಳಿದೆಯೋ ಅದನ್ನೂ ಕೇಳಿ. ನಿಮ್ಮ ಅಂತರಂಗ ನಿಮಗೆ ಏನು ಹೇಳುತ್ತದೋ ಅದನ್ನೂ ಕೇಳಿ. ಯಾರು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೋ ಅವರ ಹಿಂದೆಯೇ ನಿಮ್ಮ ಜೀವನ ರಥಗಳೂ ಸಾಗಲಿ ಎಂಬುದು ಇದರ ಅರ್ಥ. ವಿವೇಚಿಸಿ ಮುನ್ನಡೆಯುವ ಉದಾತ್ತತೆ ನಮ್ಮಲ್ಲಿ ಒಡಮೂಡಲಿ.
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 16, 2017

ಸ್ವರ್ಗವನ್ನೂ ನರಕವಾಗಿಸುವ ಋಣಾತ್ಮಕ ಮನೋಭಾವ (Negativity)


     ಆ ದೇವನ ಆಟವನ್ನು ಬಲ್ಲವರಾರು? ಅವನು ಮನುಷ್ಯನನ್ನು ಮನಸ್ಸು ಎಂಬ ವಿಚಿತ್ರ ಶಕ್ತಿಯ ಹಿಡಿತದಲ್ಲಿ ಸಿಕ್ಕಿಸಿಬಿಟ್ಟಿದ್ದಾನೆ. ಮನಸ್ಸಿನ ಒಡೆಯನಾಗಬೇಕಾದ ಮನುಷ್ಯ ಮನಸ್ಸಿನ ಆಳಾಗಿರುವುದೇ ಹತ್ತು ಹಲವು ಸಮಸ್ಯೆಗಳಿಗೆ ಮೂಲವಾಗಿದೆ. ಋಣಾತ್ಮಕ ಮನೋಭಾವ(ನೆಗೆಟಿವಿಟಿ) ಆ ಮನಸ್ಸಿನ ಆಟವೇ ಆಗಿದೆ. ಮನಸ್ಸಿನಲ್ಲಿ ಬೇರೂರಿ ಬೆಳೆಯುವ ಈ ಮನೋಭಾವ ಸ್ವರ್ಗವನ್ನೂ ನರಕವಾಗಿಸುತ್ತದೆ, ನರಕದ ಸ್ವರ್ಗವಾಗಿ ಮಾಡುತ್ತದೆ. ಈ ಮನೋಭಾವ ಮನುಷ್ಯನನ್ನು ಕುಬ್ಜನನ್ನಾಗಿಸಿ, ಅವನನ್ನು ಮಾತ್ರವಲ್ಲದೆ ಸಂಬಂಧಿಸಿದವರಿಗೂ ಹಾನಿ ಮಾಡುತ್ತದೆ. ವಸ್ತುಸ್ಥಿತಿಯನ್ನು ಒಪ್ಪದಿರುವುದು ಅಥವ ತಪ್ಪಾಗಿ ಭಾವಿಸುವುದು ಅಥವ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುವುದು ಮತ್ತು ತಪ್ಪು ಎಂದು ತಿಳಿದಿದ್ದರೂ ತಿದ್ದಿಕೊಳ್ಳದಿರುವುದು, ಇತ್ಯಾದಿ. ಋಣಾತ್ಮಕ ವಿಚಾರಧಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಂತೋಷದ ಹಾಲಿಗೆ ಹುಳಿ ಹಿಂಡುತ್ತದೆ, ಪ್ರಗತಿಗೆ ಅಡ್ಡಗಾಲಾಗುತ್ತದೆ, ಜೀವನ ಇಳಿಜಾರಿನಲ್ಲಿ ಸಾಗುತ್ತದೆ. ಋಣಾತ್ಮಕ ಮನೋಭಾವವನ್ನು ಹೋಗಲಾಡಿಸುವುದೆಂದರೆ ಭಯದ ವಿರುದ್ಧ ವಿಶ್ವಾಸ, ನಿರಾಶೆಯ ವಿರುದ್ಧ ಭರವಸೆ, ಸೋಲಿನ ವಿರುದ್ಧ ಗೆಲುವುಗಳ ಅಂತರ ತಿಳಿಯುವುದೇ ಆಗಿದೆ. ಋಣಾತ್ಮಕ ಮನೋಭಾವದ ಕೆಲವು ವಿಶಿಷ್ಟತೆಗಳನ್ನು ಗಮನಿಸೋಣ.
೧. ಕೀಳರಿಮೆ: ಸ್ವಂತವಾಗಿ ತಮ್ಮನ್ನು ತಾವು ಅಶಕ್ತರೆಂದು ಕರೆದುಕೊಳ್ಳುವುದು ವಿಶ್ವಾಸವನ್ನು ಕುಗ್ಗಿಸುತ್ತದೆ. ನನ್ನ ಕೈಯಲ್ಲಿ ಆಗಲ್ಲ, ನಾನು ಅಷ್ಟೊಂದು ತಿಳಿದವನಲ್ಲ, ನಾನು ಸೋತು ಹೋಗುತ್ತೇನೆ ಇತ್ಯಾದಿ ಮಾತುಗಳನ್ನು ಇನ್ನೊಬ್ಬರಿಗೆ ಹೇಳುವಂತೆ ಮಾಡುವುದೇ ಮನಸ್ಸಿನಲ್ಲಿ ಕುಳಿತಿರುವ ಋಣಾತ್ಮಕತೆ. ಯಾರಾದರೂ ನಿಮ್ಮ ಬಗ್ಗೆ, ನೀನೊಬ್ಬ ಮುಠ್ಠಾಳ, ಪ್ರಯೋಜನಕ್ಕೆ ಬಾರದವನು, ನಿನ್ನ ಕೈಯಲ್ಲಿ ಎಲ್ಲಿ ಆಗುತ್ತೆ, ಉಪಯೋಗಕ್ಕೆ ಬಾರದವನು ಎಂದರೆ ನಿಮಗೆ ಹೇಗೆ ಅನ್ನಿಸುತ್ತದೆ? ಇನ್ನೊಬ್ಬರು ಹೇಳಿದರೆ ಮುಜುಗರವಾಗುತ್ತದೆ, ನೋವಾಗುತ್ತದೆ. ಆದರೆ ಅದನ್ನು ನಮಗೆ ನಾವೇ ಹೇಳಿಕೊಂಡರೆ ಒಪ್ಪಿಕೊಳ್ಳುತ್ತೇವೆ, ಇದು ಸರಿಯೇ? ನಾನು ಅಶಕ್ತ, ನಾನು ಅಶಕ್ತ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಇದ್ದರೆ ಮನುಷ್ಯ ನಿಜಕ್ಕೂ ಅಶಕ್ತನೇ ಆಗುತ್ತಾನೆ ಎಂಬುದು ವಿವೇಕಾನಂದರು ಒತ್ತಿ ಹೇಳುತ್ತಿದ್ದ ಮಾತು. ಇದನ್ನು ಹೋಗಲಾಡಿಸುವುದು ಹೇಗೆ? ಋಣಾತ್ಮಕ ರೀತಿಯಲ್ಲಿ ಯೋಚಿಸುವುದನ್ನು ನಿಲ್ಲಿಸಿ ನಾನು ಮಾಡಬಲ್ಲೆ ಎಂಬ ವಿಶ್ವಾಸದ ಚಿಂತನೆಗಳು ಮೂಡುವಂತೆ ಮಾಡುವುದೇ ಇದಕ್ಕೆ ಪರಿಹಾರ. ಸತತ ಪ್ರಯತ್ನದಿಂದ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳೇ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾದರೆ ಕೀಳರಿಮೆಯಿಂದ ಹೊರಬರಲು ಸಾಧ್ಯವಿದೆ.
೨. ಋಣಾತ್ಮಕ ಭಾವನೆ: ಯಾವುದೇ ಸಂದರ್ಭ, ಪರಿಸ್ಥಿತಿಯನ್ನು ನಿರಾಶಾಭಾವದಿಂದ, ಹತಾಶೆಯಿಂದ ನೋಡುವುದರಿಂದ ಸಮಸ್ಯೆಯ ತಾಪ ಹೆಚ್ಚುವುದೇ ವಿನಃ ಕಡಿಮೆಯಾಗದು. ಬಿಲ್ಲು ಕಟ್ಟಲು ಹೋದರೆ ಅಲ್ಲಿ ದೊಡ್ಡ ಸರತಿಸಾಲು, ಈಗ ಎಲ್ಲದಕ್ಕೂ ಆಧಾರ್ ಕಾರ್ಡು ಕಡ್ಡಾಯ ಮಾಡಿರುವುದರಿಂದ ಆಧಾರ್ ನೋಂದಣೆಗೆ ಹೋದರೆ ಅಲ್ಲಿ ನೂಕು ನುಗ್ಗಲು, ಧಾರಾಕಾರ ಮಳೆ ಬರುತ್ತಿದೆ, ಎಲ್ಲೂ ಹೋಗಲಾಗುತ್ತಿಲ್ಲ ಇಂತಹ ಸಂಗತಿಗಳೆಲ್ಲಾ ಭೂತಾಕಾರದ ಸಮಸ್ಯೆಗಳೆನಿಸಿಬಿಡುತ್ತವೆ. ಹಾಗೆ ನೋಡಿದರೆ ಇಂತಹ ಪರಿಸ್ಥಿತಿಗಳಲ್ಲಿ ಋಣಾತ್ಮಕತೆಯೂ ಇಲ್ಲ, ಧನಾತ್ಮಕತೆಯೂ ಇಲ್ಲ. ಅವು ಹೇಗಿರಬಹುದೋ ಹಾಗೆಯೇ ಇವೆ. ಅದನ್ನು ನಾವು ನಿಭಾಯಿಸುವ ರೀತಿಯಲ್ಲಿ ಕೆಟ್ಟದ್ದೋ, ಒಳ್ಳೆಯದೋ ಇದೆ, ಸಂತೋಷವೋ, ಬೇಸರವೋ ಇದೆ. ನಿಧಾನವಾಗಿ ಪರಾಮರ್ಶಿಸಿದರೆ ಪರಿಹಾರ ಸಿಗುತ್ತದೆ. ಮಳೆಯ ಕಾರಣದಿಂದ ಇರುವಲ್ಲೇ ಇರುವಂತಾದರೆ ಒಳ್ಳೆಯ ಸಂಗೀತ ಹಾಕಿಕೊಂಡು ಕೇಳಬಹುದು, ಬಾಕಿ ಉಳಿದಿದ್ದ ಮತ್ತೇನೋ ಕೆಲಸಗಳನ್ನು ಮುಗಿಸುವಲ್ಲಿ ಗಮನ ಹರಿಸಬಹುದು.
೩. ಋಣಾತ್ಮಕ ಹೋಲಿಕೆ: ತಮ್ಮನ್ನು ತಾವೇ ಹಿಂದಿದ್ದೇವೆ ಎಂದು ಭಾವಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಸಂಗತಿಯೆಂದರೆ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಕುಗ್ಗುವುದು. ಇನ್ನೊಬ್ಬರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ, ಹೆಚ್ಚು ಸಾಧನೆ ಮಾಡಿದ್ದಾರೆ, ಇತ್ಯಾದಿ ಕಾರಣಗಳಿಂದ ಅವರೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು ಸುಲಕ್ಷಣವಲ್ಲ. ತಾನು ಏನನ್ನು ಹೊಂದಲು ಬಯಸಿರುವೆನೋ ಅದನ್ನು ಬೇರೊಬ್ಬರು ಹೊಂದಿದ್ದಾರೆ ಎಂಬ ಕಾರಣಕ್ಕೆ ಅಸೂಯೆಪಡುವುದು, ಕೀಳರಿಮೆಯಿಂದ ನರಳುವುದರಿಂದ ಋಣಾತ್ಮಕ ಭಾವ ಹೊಂದಿರುವುದು ಸ್ಪಷ್ಟವಾಗುತ್ತದೆ. ಇದರಿಂದಾಗಿ ಹೆಚ್ಚಿನ ಮನಸ್ಸಿನ ಒತ್ತಡ, ಕಾತರತೆ, ಖಿನ್ನತೆಗೆ ಒಳಗಾಗುವ ಅವಕಾಶಗಳಿವೆ. ಸತತ ಪರಿಶ್ರಮ, ಪಟ್ಟು ಬಿಡದ ಪ್ರಯತ್ನಕ್ಕೆ ಸಾಧಿಸಲಾಗದುದು ಏನೂ ಇಲ್ಲವೆಂಬ ಅರಿವಿನೊಂದಿಗೆ ಮುನ್ನಡೆದರೆ ಈ ಭಾವವನ್ನು ಹಿಮ್ಮೆಟ್ಟಿಸಬಹುದು.
೪. ಹಿಂದಿನ ಘಟನೆಗಳ ಛಾಯೆ: ಕೆಲವೊಮ್ಮೆ ಹಿಂದಿನ ಘಟನೆಗಳು, ಆಗು-ಹೋಗುಗಳು ಭೂತವಾಗಿ ಕಾಡುತ್ತಲೇ ಇದ್ದು ವರ್ತಮಾನಕ್ಕೆ ಅಡ್ಡಿಯಾಗಿ ನಿಲ್ಲುತ್ತಿರುತ್ತವೆ, ಸಾಧನೆಗೆ ಅಡ್ಡಿಯಾಗುತ್ತವೆ. ಇದು ನಿರಾಶೆಗೆ ಎಡೆ ಮಾಡಿ ಹೊಸ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡಿ ಸ್ಥೈರ್ಯ ಕುಗ್ಗಿಸುತ್ತದೆ. ಆಗಿಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲವೆಂಬುದನ್ನು ಅರಿತು ಧೃಢವಾಗಿ ನಿಲ್ಲಬೇಕು. ಏನು ಆಗಬೇಕಿದೆಯೋ ಆ ದಿಸೆಯಲ್ಲಿ ಮುನ್ನಡೆಯಬೇಕು. ಇಷ್ಟೇ ಇದಕ್ಕಿರುವ ಪರಿಹಾರ. ದಾರಿಹೋಕರ ತಲೆ ಒಡೆದು ಜೀವನ ಸಾಗಿಸುತ್ತಿದ್ದ ಡಕಾಯಿತನೊಬ್ಬನಿಗೆ ಸತ್ಯದ ಸಾಕ್ಷಾತ್ಕಾರವಾದಾಗ ಮುಂದೆ ಆತ ವಾಲ್ಮೀಕಿ ಎನಿಸಿ ಇಂದಿಗೂ ಪ್ರಸಿದ್ಧವಾಗಿರುವ ರಾಮಾಯಣ ರಚಿಸಿದ. ಅಬ್ರಹಾಂ ಲಿಂಕನ್ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗುವ ಮುನ್ನ ಎಂಟು ಚುನಾವಣೆಗಳಲ್ಲಿ ಸೋತಿದ್ದ, ವ್ಯಾಪಾರ ವಹಿವಾಟಿನಲ್ಲಿ ಎರಡು ಸಲ ವಿಫಲನಾಗಿ ಕುಸಿದುಹೋಗಿದ್ದ. ಹಳೆಯ ಅನುಭವಗಳಿಂದಾಗಿ ಆತ ನಿರಾಶೆಯಿಂದ ಕೈಚೆಲ್ಲಿದ್ದಿದ್ದರೆ ಇಂದು ಯಾರಿಗೂ ಆತನ ನೆನಪೂ ಇರುತ್ತಿರಲಿಲ್ಲ.
೫. ಬಲಿಷ್ಠರೆನಿಸಿಕೊಂಡವರು ಎದುರಾಳಿಗಳಾದಾಗ: ಕೆಲವು ಸಂದರ್ಭಗಳಲ್ಲಿ ಬಲಾಢ್ಯರೆನಿಸಿಕೊಂಡವರು ಸವಾಲೊಡ್ಡಿದಾಗ ತಮ್ಮ ತಪ್ಪಿಲ್ಲದಿದ್ದರೂ, ನ್ಯಾಯ ತಮ್ಮ ಕಡೆಗೆ ಇದ್ದರೂ ಹಿಂಜರಿಯುವ ಪ್ರವೃತ್ತಿ ಅಥವ ಸೋಲೊಪ್ಪಿಕೊಳ್ಳುವ ಮನೋಭಾವ ಉಂಟಾಗುತ್ತದೆ. ಬಲಾಢ್ಯರಿಗೆ ತಮಗಿರುವ ತೋಳ್ಬಲ, ಅಧಿಕಾರ, ಇತ್ಯಾದಿಯೇ ಆಸರೆಯಾಗಿದ್ದರೂ ಸತ್ಯ ತಮ್ಮ ಪಕ್ಷದಲ್ಲಿ ಇಲ್ಲದಿರುವ ಅಳುಕು ಇದ್ದೇ ಇರುತ್ತದೆ. ಎಂತಹ ಸಂದರ್ಭದಲ್ಲೂ ಎದೆಗುಂದದೆ ಸೂಕ್ತ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸುವ ಚಾಕಚಕ್ಯತೆ ಅಗತ್ಯವಿರುತ್ತದೆ. ಸರ್ವಾಧಿಕಾರವಿರುವ, ಮಿಲಿಟರಿ ಆಡಳಿತವಿರುವ ದೇಶಗಳಲ್ಲಿ ಕೆಲವೊಮ್ಮೆ ಸರ್ಕಾರವೇ ತನ್ನ ಪಾಶವೀಬಲವನ್ನು ಅಮಾಯಕರ ಮೇಲೆ ಪ್ರದರ್ಶಿಸುವುದಿದೆ. ಋಣಾತ್ಮಕ ಭಾವದವರು ಸೋತು ಸುಣ್ಣವಾದರೆ, ಮನೋಬಲವಿರುವವರು ತಮ್ಮಲ್ಲಿ ಶಕ್ತಿ ಇರುವವರೆಗೂ ಅದನ್ನು ತಾಳಿಕೊಳ್ಳುತ್ತಾರೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಮ್ಯಾನ್ಮಾರಿನ ಸೂಕಿ, ವೀರ ಸಾವರ್ಕರ್ ಮಹಾತ್ಮ ಗಾಂಧಿ ಮೊದಲಾದವರು ಇದಕ್ಕೆ ಉದಾಹರಣೆಗಳಾಗಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದ ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮೊದಲಾದ ಅಸಂಖ್ಯರು ನಗುನಗುತ್ತಾ ಪ್ರಾಣ ಕಳೆದುಕೊಂಡು ಅದ್ಭುತ ಮನೋಬಲ ತೋರಿಸಿದ್ದವರು. ೧೯೭೫-೭೭ರ ತುರ್ತು ಪರಿಸ್ಥಿತಿಯನ್ನು ಎದುರಿಸಿ ಕಷ್ಟ-ನಷ್ಟಗಳನ್ನು ಸಹಿಸಿದವರೂ ಮನೋಬಲಕ್ಕೆ ಉದಾಹರಣೆಗಳಾಗಿದ್ದಾರೆ.
೬. ದೂರುವ ಗುಣ: ಋಣಾತ್ಮಕತೆಯ ಮತ್ತೊಂದು ಅನಿಷ್ಟ ಲಕ್ಷಣವೆಂದರೆ ತಮ್ಮ ತಪ್ಪುಗಳಿಗೆ, ವಿಫಲತೆಗಳಿಗೆ ಬೇರೆಯವರನ್ನು ಹೊಣೆಗಾರರನ್ನಾಗಿಸಿ ದೂರುವುದು. ಆ ಬೇರೆಯವರು ತಂದೆ-ತಾಯಿಗಳಾಗಬಹುದು, ಗಂಡ/ಹೆಂಡತಿ ಆಗಬಹುದು, ರಕ್ತ ಸಂಬಂದಿಗಳಾಗಬಹುದು, ಮಿತ್ರರು, ಶತ್ರುಗಳು, ಹೀಗೆ ಯಾರು ಬೇಕಾದರೂ ಆಗಬಹುದು. ಭ್ರಷ್ಠ ರಾಜಕಾರಣಿಗಳು, ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ತಾವು ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ರಾಜಕೀಯ ದ್ವೇಷ ಎಂಬಿತ್ಯಾದಿ ಕಾರಣಗಳನ್ನು ಕೊಡುವುದನ್ನು ಗಮನಿಸಬಹುದು. ಆದರೆ ಈ ಕಾರಣಗಳು ತಾಳಿಕೆ ಬರುವುದು ಕಡಿಮೆ. ಅಂತಿಮವಾಗಿ ದೂರುವವರೇ ತಪ್ಪಿತಸ್ಥರೆಂದು ತಿಳಿದಾಗ ಅವರು ಕುಬ್ಜರಾಗುವರು, ಶಕ್ತಿ ಕಳೆದುಕೊಳ್ಳುವರು.
೭. ತಪ್ಪಿತಸ್ಥ ಮನೋಭಾವ: ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಕೆಲವು ಗಂಭೀರತರ ತಪ್ಪುಗಳಿಂದ, ದೋಷಯುತ ನಿರ್ಧಾರಗಳಿಂದ ಕೇವಲ ತಮಗಲ್ಲದೆ ಇತರರಿಗೂ ಕೆಡುಕಾಗಿರಬಹುದು. ಅದರಿಂದಾಗಿ ತಪ್ಪಿತಸ್ಥನೆಂಬ ಕೊರಗು, ಅಳುಕು ಉಳಿದು ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬಹುದು. ಇದರಿಂದ ಹೊರಬರಲು, ಹೌದು, ತಪ್ಪು ಮಾಡಿದ್ದೇನೆ. ಅದು ಆ ವಿಷಘಳಿಗೆಯಲ್ಲಿ ಮಾಡಿದ್ದು ಅದಕ್ಕಾಗಿ ಪಶ್ಚಾತ್ತಾಪವಿದೆ. ನಾನು ಕೆಟ್ಟವನಲ್ಲ. ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳಬೇಕು. ತಮ್ಮನ್ನು ತಾವೇ ಕ್ಷಮಿಸಿಕೊಳ್ಳದಿದ್ದರೆ ಇತರರು ಹೇಗೆ ಕ್ಷಮಿಸಿಯಾರು?
೮. ತಪ್ಪುಗಳನ್ನು ಮಾಡುವ ಭಯ: ತಪ್ಪುಗಳನ್ನು ಮಾಡುವ ಭಯ, ಪರಿಪೂರ್ಣವಾಗಿರಬೇಕೆಂಬ ಒತ್ತಡಗಳು ಮನಸ್ಸಿನ ಸಂತೋಷವನ್ನು ಕಿತ್ತುಕೊಳ್ಳುತ್ತವೆ. ನಮಗೆ ನಾವೇ ಉನ್ನತ ಮಾನದಂಡಗಳನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಾವಿಲ್ಲವೆಂದಾದಾಗ ಒಂದು ರೀತಿಯ ಕೀಳರಿಮೆ ಕಾಡದೇ ಇರದು. ಇದು ನಮ್ಮ ಶಕ್ತಿಯನ್ನು ಬಸಿದುಬಿಡುತ್ತದೆ. ಪರಿಪೂರ್ಣತೆಯ ಹಂಬಲ ಮತ್ತು ಅಸಂತೋಷಗಳಿಗೆ ಒಂದಕ್ಕೊಂದು ಸಂಬಂಧವಿದೆ. ಉನ್ನತ ಸ್ಥಿತಿಗೆ ಏರುವ ನಮ್ಮ ಪ್ರಯತ್ನಗಳ ಜೊತೆಗೆ ಇರುವ ಸ್ಥಿತಿಯಲ್ಲಿನ ಸಂತೋಷ ಕಡಿಮೆಯಾಗದಂತೆ ಎಚ್ಚರ ವಹಿಸಿದರೆ ಮನಸ್ಸಿಗೆ ಹಿತವಾದೀತು. ಎಷ್ಟಾದರೂ ನಾವು ಮಾನವರು, ಎಷ್ಟೇ ಪ್ರಯತ್ನಿಸಿದರೂ, ಎಲ್ಲಾಕಾಲಕ್ಕೂ ಪರಿಪೂರ್ಣತೆ ಸಿದ್ಧಿಸುವುದು ಸುಲಭವಲ್ಲ. ಇದನ್ನು ಒಪ್ಪಿ, ಇರುವ ಸ್ಥಿತಿಯಲ್ಲೇ ತೃಪ್ತಿ ಕಂಡರೆ ಅದೇ ದೊಡ್ಡದು.
-ಕ.ವೆಂ.ನಾಗರಾಜ್.

ಶನಿವಾರ, ಅಕ್ಟೋಬರ್ 14, 2017

ಘನತೆ ಮತ್ತು ಉಡುಪು

     ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ ಎಂಬ ಕನ್ನಡದ ಹಾಡು ಯಾರಿಗೆ ಗೊತ್ತಿಲ್ಲ? ನೀವು ವೇದದ ವಿಚಾರಗಳ ಬಗ್ಗೆ ಬರೆಯುತ್ತೀರಿ, ಮಾತನಾಡುತ್ತೀರಿ, ಆದರೆ ಪ್ಯಾಂಟು ಷರಟು ಹಾಕಿಕೊಳ್ಳುತ್ತೀರಲ್ಲಾ ಎಂದು ಹಿರಿಯರೊಬ್ಬರು ನನ್ನನ್ನು ವಿಚಾರಿಸಿದ್ದರು. ಇಂತಹವರು ಇಂತಹ ರೀತಿಯಲಿಯ್ಲೇ ದಿರಿಸು ಹಾಕಿಕೊಳ್ಳಬೇಕು ಎಂಬುದು ಜನರ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಸಾಹಿತಿಗಳ ಉಡುಗೆ, ರಾಜಕಾರಣಿಗಳ ಉಡುಗೆ, ಸಮಾಜಸೇವೆ ಮಾಡುವವರ ಉಡುಗೆ, ಸಾಂಪ್ರದಾಯಿಕರ ಉಡುಗೆ, ಹೀಗೆ ಅವರುಗಳ ವೃತ್ತಿ, ಪ್ರವೃತ್ತಿಗಳಿಗೆ ತಕ್ಕಂತೆ ವೇಷ ಇರಬೇಕು ಎಂಬುದು ಅವರ ಅಂತರಾಳದಲ್ಲಿ ಕುಳಿತುಬಿಟ್ಟಿದೆ. ಹೀಗಾಗಿ ನಾವು ಧರಿಸುವ ಬಟ್ಟೆಗೂ ಇಂದು ಸಾಮಾಜಿಕ ಪ್ರಾಧಾನ್ಯತೆಯಿದೆ. ವಸ್ತ್ರಸಂಹಿತೆ ಕುರಿತು ಲಿಖಿತ, ಅಲಿಖಿತ ನಿಯಮಗಳಿವೆಯೆಂದರೆ ಆಶ್ಚರ್ಯಪಡಬೇಕಿಲ್ಲ. ದಿನವೊಂದರಲ್ಲೇ ನಾವು ಹಲವು ರೀತಿಯ ಉಡುಪುಗಳನ್ನು ಧರಿಸುತ್ತೇವೆ. ಮನೆಯಲ್ಲಿರುವಾಗ ಒಂದು ತರಹ, ಹೊರಗೆ ಹೋಗುವಾಗ ಮತ್ತೊಂದು ತರಹ, ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗುವಾಗ, ಕಛೇರಿಯ ಕೆಲಸಕ್ಕೆ ಹೋಗುವಾಗ, ವಿಶೇಷ ಸಂದರ್ಭಗಳಲ್ಲಿ ಹೀಗೆ ಸಮಯ, ಸಂದರ್ಭಗಳಿಗೆ ತಕ್ಕಂತೆ ನಮ್ಮ ವೇಷ-ಭೂಷಣಗಳೂ ಬದಲಾಗುತ್ತಿರುತ್ತವೆ. ಸಮುದಾಯ, ಜಾತಿ, ಲಿಂಗ, ವರಮಾನ, ಉದ್ಯೋಗ, ರಾಜಕೀಯ, ಸಂಪ್ರದಾಯ, ಅನುಕೂಲತೆ, ವೈಶಿಷ್ಟ್ಯತೆ, ಅಂತಸ್ತು, ಪ್ರದೇಶ, ವಿದೇಶೀಯರ ಅಂಧಾನುಕರಣೆ, ಹವಾಮಾನ ಇತ್ಯಾದಿಗಳೂ ವಿವಿಧ ರೀತಿಯ ವಸ್ತ್ರ ಧರಿಸುವಿಕೆಗೆ ಕಾರಣಗಳಾಗಿವೆ.
     ಸುಮಾರು ೮೪ ಲಕ್ಷ ವಿವಿಧ ಜೀವಸಂಕುಲಗಳಲ್ಲಿ ಮಾನವ ಜೀವಿ ಮಾತ್ರ ಬಟ್ಟೆಗೆ ಮಹತ್ವ ನೀಡಿದ್ದಾನೆ. ಇದು ಅವನ ವಿವೇಚನಾಶಕ್ತಿಯ ಕಾರಣದಿಂದಿರಬಹುದು. ಬಟ್ಟೆ ಧರಿಸುವುದು ಕೇವಲ ತಮಗಾಗಿ ಅಲ್ಲದೆ ಇತರರ ಸಲುವಾಗಿಯೂ ಅಗಿರುವುದು ವಿಶೇಷ. ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಎಂಬ ಗಾದೆ ಬಂದಿರುವುದು ಈ ಕಾರಣದಿಂದಲೇ! ಬಟ್ಟೆಗಳ ವಿನ್ಯಾಸವೂ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ನಾಯಕರುಗಳು, ಕ್ರೀಡಾಪಟುಗಳು, ಸಿನೆಮಾ ತಾರೆಯರುಗಳ ಕೇಶ ಮತ್ತು ವಸ್ತ್ರವಿನ್ಯಾಸಗಳನ್ನು ಹಿಂಬಾಲಕರು ಮೆಚ್ಚುತ್ತಾರೆ, ಅನುಕರಿಸುತ್ತಾರೆ.
     ಧಾರ್ಮಿಕ ಸ್ಥಳಗಳಲ್ಲಿ ಅಲ್ಲಿನ ಪಾವಿತ್ರ್ಯ ಅಥವ ಮಹತ್ವಕ್ಕೆ ತಕ್ಕಂತೆ ಉಡುಪಿನ ಕೆಲವು ನಿರ್ಬಂಧಗಳು ಇರುವುದನ್ನು ಕಾಣುತ್ತೇವೆ. ವ್ಯಾಟಿಕನ್ನಿನ ಸಂತ ಬೆಸಿಲಿಯ ಚರ್ಚಿನ ಮುಂಭಾಗದಲ್ಲಿ ಚರ್ಚಿಗೆ ಭೇಟಿ ಕೊಡುವವರು ಧರಿಸಬೇಕಾದ ಕನಿಷ್ಠ ಉಡುಪುಗಳ ಕುರಿತು ಫಲಕವಿದೆ. ಕ್ವತಾರ್‌ನಲ್ಲಿ, ನೀವು ಈ ಪ್ರದೇಶದಲ್ಲಿದ್ದೀರಿ, ನೀವು ನಮ್ಮಲ್ಲಿ ಒಬ್ಬರು. ಆದ್ದರಿಂದ ಸಾರ್ವಜನಿಕ ಸಭ್ಯತೆಯನ್ನು ಗೌರವಿಸಿ ಎಂಬ ಫಲಕ ಗಮನ ಸೆಳೆಯುತ್ತದೆ. ಹಲವು ಮುಸ್ಲಿಮ್ ದೇಶಗಳಲ್ಲಿ ಅಲ್ಲಿನ ರೀತಿ-ನೀತಿಗಳಿಗೆ ತಕ್ಕಂತೆ ಉಡುಪು ಧರಿಸುವುದು ಕಡ್ಡಾಯವಾಗಿರುತ್ತದೆ. ಕೆಲವು ದೇವಸ್ಥಾನಗಳು, ಮಸೀದಿಗಳು ಮತ್ತು ಚರ್ಚುಗಳಲ್ಲೂ ಸಹ ಯಾವ ರೀತಿಯ ಉಡುಪು ಧರಿಸಿ ಪ್ರವೇಶಿಸಬೇಕೆಂಬ ಬಗ್ಗೆ ನಿರ್ಬಂಧಗಳಿರುವುದನ್ನು ಗಮನಿಸಬಹುದು. ಗಂಡಸರು ಮತ್ತು ಹೆಂಗಸರುಗಳು ಧರಿಸುವ ಉಡುಪುಗಳಲ್ಲೂ ಪ್ರತ್ಯೇಕತೆಗಳು ವಿಶೇಷವಾಗಿವೆ. ವಸ್ತ್ರವಿರಲಿ, ತಲೆಯ ಕೂದಲು ಬೆಳೆಸುವುದರಲ್ಲೂ ವಿಶೇಷತೆ ಗಮನಿಸಬಹುದು, ಹೆಂಗಸರಿಗೆ ಉದ್ದ ತಲೆಯಕೂದಲು ಮತ್ತು ಗಂಡಸರಿಗೆ ಗಿಡ್ಡ ತಲೆ ಕೂದಲುಗಳಿರುವುದು ಸಂಪ್ರದಾಯದಂತೆ ಆಗಿದೆ.
     ಸಮವಸ್ತ್ರಗಳೂ ಸಾಮಾನ್ಯವಾಗಿ ಬಳಕೆಯಲ್ಲಿವೆ. ಪೊಲೀಸ್, ಮಿಲಿಟರಿ, ಅಗ್ನಿಶಾಮಕ ದಳ, ವೈದ್ಯಕೀಯ ವೃತ್ತಿಯವರು, ವಕೀಲರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳವರು, ಕಾರ್ಖಾನೆಯ ಕೆಲಸಗಾರರು, ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಸಮವಸ್ತ್ರಗಳನ್ನು ಬಳಸುತ್ತಾರೆ. ಇದು ಅಗತ್ಯದ್ದೂ ಆಗಿದೆ. ಸಮವಸ್ತ್ರಗಳಿಂದಾಗಿ ಅವರುಗಳು ಗುರುತಿಸಲ್ಪಡುತ್ತಾರೆ. ಕೆಲವು ಪ್ರತಿಷ್ಠಿತ ಹೋಟೆಲುಗಳು, ಕ್ಲಬ್ಬುಗಳಲ್ಲಿ ಧರಿಸಬೇಕಾದ ವಸ್ತ್ರಗಳ ಕುರಿತೂ ನಿಬಂಧನೆಗಳನ್ನು ಮಾಡಿಕೊಂಡಿರುತ್ತಾರೆ. ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಕ್ಲಬ್ ಒಂದರ ಕಾರ್ಯಕ್ರಮಕ್ಕೆ ಪಂಚೆ, ಚಪ್ಪಲಿ ಧರಿಸಿ ಹೋಗಿದ್ದ ಪ್ರತಿಷ್ಠಿತರನ್ನು ಒಳಗೆ ಪ್ರವೇಶಿಸದಂತೆ ತಡೆ ಹಿಡಿದಿದ್ದು ದೊಡ್ಡ ಸುದ್ದಿಯಾಗಿತ್ತು.  
     ಧಾರ್ಮಿಕ, ಮತೀಯ, ಪಾರಂಪರಿಕ ಸಂಪ್ರದಾಯಗಳೂ ಉಡುಪಿನ ವಿಶಿಷ್ಠತೆಗೆ ಕಾಣಿಕೆಯಿತ್ತಿವೆ. ಮುಸ್ಲಿಮ್ ಪುರುಷರು ಧರಿಸುವ ಜುಬ್ಬಾ, ಪೈಜಾಮ, ತಲೆಗೆ ಹಾಕುವ ಟೋಪಿ ಇತ್ಯಾದಿಗಳು, ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಕಾ, ಸಿಕ್ಖರು ಧರಿಸುವ ಪೇಟ, ಜುಟ್ಟು ಕಟ್ಟುವ ರೀತಿ, ಹಾಕುವ ಉಡುಗೆಗಳಿಂದ ಅವರುಗಳನ್ನು ಸುಲಭವಾಗಿ ಗುರುತಿಸಬಹುದು. ಸ್ವಾತಂತ್ರ್ಯದ ಹೆಸರಿನಲ್ಲಿ ಬತ್ತಲೆಯಾಗಿರಬಯಸುವ ಅಥವ ಸ್ವೇಚ್ಛೆಯಾಗಿರಬಯಸುವ ಜನರಿಗಾಗಿ ಅಮೆರಿಕಾದಲ್ಲಿ ಕೆಲವು ಖಾಸಗಿ ಬೀಚುಗಳಲ್ಲಿ, ರೆಸಾರ್ಟುಗಳಲ್ಲಿ, ಕ್ಲಬ್ಬುಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ, ಮುಜಗರವಾಗದಂತೆ ಸಭ್ಯತೆಯ ಎಲ್ಲೆಯನ್ನು ಮೀರದಂತೆ ವಸ್ತ್ರ ಧರಿಸುವುದು ನಾಗರಿಕ ನಡವಳಿಕೆ. ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಚೋದನಕಾರಿ ಉಡುಪು ಧರಿಸುವುದು ಒಳ್ಳೆಯದಲ್ಲ. ವ್ಯಕ್ತಿಗೆ ಘನತೆ ತಂದುಕೊಡುವುದು ಆತ ಧರಿಸುವ ಉಡುಪು. ಸಾರ್ವಜನಿಕ ಕಛೇರಿಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಯೊಬ್ಬ ಟಿ ಷರ್ಟು, ಬರ್ಮುಡ ಧರಿಸಿ ಬಂದರೆ ಹೇಗಿದ್ದೀತು? ಮನೆಯಲ್ಲಿ, ಮಲಗುವ ಸಮಯದಲ್ಲಿ ಧರಿಸುವ ಉಡುಪುಗಳನ್ನು ಹೊರಗೆ ಹೋಗುವಾಗ ಹಾಕಿಕೊಳ್ಳಬಹುದೆ? ಉಡುಪಿನ ರೀತಿಯೂ ವ್ಯಕ್ತಿಯೊಬ್ಬ ಸರಳನೋ, ಶೋಕಿಲಾಲನೋ, ಶಿಸ್ತುಗಾರನೋ, ಸೋಮಾರಿಯೋ ಎಂಬುದನ್ನು ಬಿಂಬಿಸಬಲ್ಲದು. 
     ಸರಳ ಉಡುಪನ್ನು ಧರಿಸಿದವರನ್ನು ನಿಕೃಷ್ಟವಾಗಿ ಕಾಣುವ ಮನೋಭಾವದವರೂ ಇರುತ್ತಾರೆ. ಶ್ರೀಮತಿ ಸುಧಾ ನಾರಾಯಣಮೂರ್ತಿಯವರ ಸ್ವಂತದ ಅನುಭವವನ್ನು ಅವರ ಇತ್ತೀಚಿನ ಪುಸ್ತಕ ತ್ರೀ ಥೌಸಂಡ್ ಸ್ಟಿಚಸ್ನಲ್ಲಿ ಹಂಚಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ. ಅವರು ಲಂಡನ್ನಿನ ಹೀತ್ರೋ ವಿಮಾನನಿಲ್ದಾಣದಲ್ಲಿ ಸರತಿಯ ಸಾಲಿನಲ್ಲಿ ನಿಂತಿದ್ದಾಗ ಒಬ್ಬ ಠಾಕು ಠೀಕಾಗಿ ಉಡುಪು ಧರಿಸಿದ್ದ ಹೈಹೀಲ್ಡ್ ಮಹಿಳೆ ಅವರನ್ನು ಕುರಿತು, ಹೋಗಿ ಎಕಾನಮಿ ಶ್ರೇಣಿಯ ಸಾಲಿನಲ್ಲಿ ನಿಲ್ಲು. ಇದು ಬಿಸಿನೆಸ್ ಶ್ರೇಣಿಯ ಸಾಲು ಎಂದಳಂತೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆಕೆ, ಜಾನುವಾರು ಜಾತಿ ವ್ಯಕ್ತಿ(ಛಿಚಿಣಣಟe-ಛಿಟಚಿss ಠಿeಡಿsoಟಿ) ಎಂದು ಗೊಣಗಿದ್ದಳಂತೆ. ಸಲ್ವಾರ್ ಕಮೀಜ್ ಧರಿಸಿ ನಿಂತಿದ್ದ ದೊಡ್ಡ ಉದ್ಯಮಿ ನಾರಾಯಣಮೂರ್ತಿಯವರ ೬೬ ವರ್ಷಗಳ ಪತ್ನಿ ತಾಳ್ಮೆಗೆ ಹೆಸರಾದ ಸುಧಾಮೂರ್ತಿಯವರಿಗೆ ಕೋಪ ಬಂದರೂ ಸುಮ್ಮನಿದ್ದರು. ಅವರು ಧರಿಸಿದ್ದ ಉಡುಪಿನಿಂದಾಗಿ ಇಂತಹ ಉಡುಪು ಧರಿಸಿ ಬಿಸಿನೆಸ್ ಶ್ರೇಣಿಯ ಸಾಲಿನಲ್ಲಿ ನಿಲ್ಲುವುದಕ್ಕೆ ಲಾಯಕ್ಕಿಲ್ಲವೆಂದು ಆಕೆ ಭಾವಿಸಿದ್ದಕ್ಕಾಗಿ ಕೋಪಕ್ಕಿಂತ ಹೆಚ್ಚು ದುಃಖವೆನಿಸಿತು. ಅವರು ತಮ್ಮ ಬೋರ್ಡಿಂಗ್ ಪಾಸ್ ತೋರಿಸಿ ಮಹಿಳೆಯ ಅನುಮಾನ ಪರಿಹರಿಸಬಹುದಾಗಿದ್ದರೂ ಹಾಗೆ ಮಾಡಲಿಲ್ಲ. ಕಾಕತಾಳೀಯವೆಂಬಂತೆ ಅದೇ ಮಹಿಳೆ ಅಂದಿನ ದಿನವೇ ಇನ್ಫೋಸಿಸ್ ಸಂಸ್ಥೆ ಸರ್ಕಾರಿ ಶಾಲೆಯೊಂದರ ಜೀರ್ಣೋದ್ಧಾರಕ್ಕಾಗಿ ಹಣ ಪ್ರಾಯೋಜಿಸುವುದಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಿದ್ದಳು. ಅತಿ ಆಡಂಬರದ ದಿರಿಸು ಧರಿಸಿ ವಿಮಾನ ನಿಲ್ದಾಣದಲ್ಲಿದ್ದ ಆ ಮಹಿಳೆ ಸಭೆಯ ಉದ್ದೇಶಕ್ಕೆ ತಕ್ಕದೆಂಬಂತೆ ಖಾದಿ ಸೀರೆ ಧರಿಸಿ ಬಂದಿದ್ದಳು. ಸಭೆಯ ಅಧ್ಯಕ್ಷತೆಯನ್ನು ತಾನು ಯಾರನ್ನು ಜಾನುವಾರು ಜಾತಿ ಎಂದು ಹಂಗಿಸಿದ್ದಳೋ ಆ ಸುಧಾಮೂರ್ತಿಯವರೇ ವಹಿಸಿದ್ದುದನ್ನು ಕಂಡು ಅವಾಕ್ಕಾಗಿದ್ದಳು. ಅಂತಸ್ತು ಅನ್ನುವುದು ಹಣದಿಂದ ಬರುವುದಿಲ್ಲ, ಧರಿಸುವ ಆಡಂಬರದ ಉಡುಪಿನಿಂದ ಬರುವುದಿಲ್ಲ ಎಂಬ ಅರಿವು ಜನಕ್ಕೆ ಬರಬೇಕಾಗಿದೆ. ಹೆಚ್ಚು ಬೆಲೆಯ ಉಡುಪುಗಳ ಖರೀದಿಯ ಸಲುವಾಗಿಯೇ ಕೆಟ್ಟ ದಾರಿ ಹಿಡಿಯುವವರೂ ಇದ್ದಾರೆ ಎಂದು ಅವರು ತಮ್ಮ ಪುಸ್ತಕದಲ್ಲಿ ವಿಷಾದಿಸಿದ್ದಾರೆ. ಸಭ್ಯ ಉಡುಪು ಇರಬೇಕು, ಉಡುಪೇ ಎಲ್ಲವೂ ಅಲ್ಲ ಎಂಬ ಅರಿವೂ ಬರಬೇಕು!
ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||
-ಕ.ವೆಂ.ನಾಗರಾಜ್.

ಬುಧವಾರ, ಅಕ್ಟೋಬರ್ 11, 2017

ಸಜ್ಜನಶಕ್ತಿ ಜಾಗೃತವಾಗಲಿ!


     ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ ಕಟುಕರಿದ್ದಾರೆ, ನಯವಂಚಕರಿದ್ದಾರೆ, ಮುಖವಾಡಧಾರಿಗಳಿದ್ದಾರೆ, ಜಾತಿವಾದಿಗಳಿದ್ದಾರೆ, ವಿಚಾರವಾದಿಗಳಿದ್ದಾರೆ, ಕಾನೂನು-ಕಟ್ಟಳೆಗಳಿಗೆ ಬೆಲೆ ಕೊಡುವವರಿದ್ದಾರೆ, ಅದನ್ನು ಕಾಲಕಸವಾಗಿ ಕಾಣುವವರಿದ್ದಾರೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ, ಎಂಥೆಂತಹವರೋ ಇದ್ದಾರೆ.  ಅವರವರಿಗೆ ಅವರದೇ ಆದ ಮಾನದಂಡಗಳು, ಅವರವರ ಪಾಲಿಗೆ ಅವರದೇ ಸರಿ. ಎಲ್ಲರಿಗೂ ಸಮಾನವಾದ ಮಾನದಂಡ ಅನ್ನುವುದು ಪುಸ್ತಕದ ಬದನೆಕಾಯಿಯಷ್ಟೆ. 
     ಹಿಂದೆ ಪಿಪ್ಪಲಾದ ಎಂಬ ಋಷಿ ಇದ್ದನಂತೆ. ಆತನ ನಿಜವಾದ ಹೆಸರು ಏನಿತ್ತೋ ಗೊತ್ತಿಲ್ಲ. ಆದರೆ ಆತ ಮರದಿಂದ ಕಳಿತು ಕೆಳಗೆ ಬಿದ್ದಿದ್ದ ಹಣ್ಣು ಹಂಪಲುಗಳನ್ನು ಮಾತ್ರ ಆಯ್ದು ತಿನ್ನುತ್ತಿದ್ದರಿಂದ ಆತನಿಗೆ ಆ ಹೆಸರು ಬಂದಿತ್ತು. ಅದೇ ರೀತಿ ಅಕ್ಷಪಾದ (ಪಾದದಲ್ಲಿ ಕಣ್ಣುಳ್ಳವನು) ಎಂಬ ಹೆಸರಿನ ಋಷಿಗೂ, ಆತ ನಡೆಯುವಾಗ ಕಾಲಿನ ಕೆಳಗೆ ಯಾವ ಕ್ರಿಮಿ-ಕೀಟಗಳೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಡೆಯುತ್ತಿದ್ದರಿಂದ ಆ ಹೆಸರು ಬಂದಿತ್ತು. ಅಂತಹವರು ಇದ್ದ ಕಾಲದಲ್ಲೂ ಋಷಿಮುನಿಗಳು ಮಾಡುತ್ತಿದ್ದ ಯಜ್ಞ ಯಾಗಗಳ ಹೋಮಕುಂಡದಲ್ಲಿ ಮಾಂಸದ ತುಂಡುಗಳನ್ನು ಹಾಕಿ ಯಜ್ಞಗಳಿಗೆ ಭಂಗ ತರುತ್ತಿದ್ದವರೂ ಇದ್ದರು. ಅವರನ್ನು ರಾಕ್ಷಸರು ಅನ್ನುತ್ತಿದ್ದರು.  ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆ ಹೊಂದಿರುತ್ತಾರೋ, ದುರ್ವಿಚಾರಗಳನ್ನು ಹೊಂದಿರುತ್ತಾರೋ, ಯಾರು ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರು ರಾಕ್ಷಸರು, ಅಷ್ಟೆ. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸ ಎಂದು ಕರೆಯಲ್ಪಡುವ ರಾವಣ, ಕುಂಭಕರ್ಣ, ಶೂರ್ಪಣಖಿ ಇವರುಗಳ ತಂದೆ ವಿಶ್ರವಸು ಎಂಬ ಒಬ್ಬ ಮುನಿ, ವಿಪ್ರಕುಲಕ್ಕೆ ಸೇರಿದವನು. ಅವರುಗಳು ರಾಕ್ಷಸರೆನಿಸಲು ಪ್ರಮುಖ ಕಾರಣ ಅವರಲ್ಲಿದ್ದ ದುರ್ವಿಚಾರ, ದುರ್ಭಾವನೆ ಮತ್ತು ದುಷ್ಕಾರ್ಯಗಳು. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆ ಪ್ರಕಾರದ ಜೀವಿಯಲ್ಲ. ಹೀಗಿರುವಾಗ ಒಬ್ಬ ಮಾನವ ರಾಕ್ಷಸನಾಗುವುದು ಅಥವ ಆದರ್ಶ ಮಾನವನಾಗುವುದು ಆತನ ನಡವಳಿಕೆಯಿಂದ ಎಂಬ ಪ್ರಾಥಮಿಕ ಸಂಗತಿಯನ್ನು ಗಮನದಲ್ಲಿಡಬೇಕು. 
     ಇಂದಿನ ಸ್ಥಿತಿ-ಗತಿಗಳ ಕುರಿತು ನೋಡೋಣ. ಗೋವಿನ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಂಡವರಿದ್ದಾರೆ. ಅದು ನಮ್ಮ ಆಹಾರ ಅನ್ನುವವರೂ ಇದ್ದಾರೆ. ನಮ್ಮ ಸಂವಿಧಾನದಲ್ಲೂ ಗೋವಿನ ಬಗ್ಗೆ ಆದರ ಅಭಿಮಾನಗಳು ಲಿಖಿತವಾಗಿ ದಾಖಲಿತವಾಗಿದೆ. ಈಗ ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಬೆಂಬಲ ಮತ್ತು ಆಕ್ರೋಷಗಳೆರಡೂ ಅತಿರೇಕವಾಗಿ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿಪರೀತವೆನಿಸುವಷ್ಟು ಕೆಸರೆರಚಾಟಗಳು ನಡೆಯುತ್ತಿದೆ. ಬಹಿರಂಗವಾಗಿ ಗೋವನ್ನು ಕತ್ತರಿಸಿ ಹಸಿ ಹಸಿಯಾದ ಮಾಂಸವನ್ನು ಸಾರ್ವಜನಿಕವಾಗಿ ಭಕ್ಷಿಸುವ ಪ್ರತಿಭಟನೆಯೂ ಕೇರಳದಲ್ಲಿ ಯುವ ಕಾಂಗ್ರೆಸ್ಸಿಗರಿಂದ ಆಗಿದೆ. ಇದರಲ್ಲಿ ಗೋವಿನ ತಪ್ಪೇನಿದೆ? ಅದು ತನ್ನನ್ನು ಪೂಜೆ ಮಾಡಿ ಎಂದೂ ಹೇಳಿಲ್ಲ, ತನ್ನನ್ನು ಕಡಿದು ತಿನ್ನಿ ಎಂತಲೂ ಹೇಳಿಲ್ಲ. ಪಾಪ, ಅದಕ್ಕೆ ಅದು ಯಾವುದೂ ಗೊತ್ತೇ ಇಲ್ಲ. ಗೋವನ್ನು ಪೂಜ್ಯ ಭಾವನೆಯಿಂದ ಕಾಣುವವರನ್ನು ಕೆಣಕುವ ಏಕಮಾತ್ರ ಉದ್ದೇಶದ ಈ ಕೃತ್ಯ ರಾಕ್ಷಸೀಕೃತ್ಯ ಅಲ್ಲದೆ ಮತ್ತೇನು? ಪ್ರತಿಭಟನೆಗೂ ಯೋಗ್ಯ ಮಾರ್ಗಗಳಿವೆ, ಸಮಸ್ಯೆ ಇತ್ಯರ್ಥಕ್ಕೆ ಹಲವು ದಾರಿಗಳಿವೆ, ನ್ಯಾಯಾಲಯಗಳಿವೆ, ಶಾಸಕಾಂಗವಿದೆ. ಅವುಗಳಿಂದ ಇತ್ಯರ್ಥವಾಗದ ಸಂದರ್ಭಗಳಲ್ಲಿ ಅತಿರೇಕದ ನಡವಳಿಕೆಗಳು ಸಾಮಾನ್ಯವೆನಿಸಿದರೂ, ಈ ಪ್ರಸಂಗದಲ್ಲಿ ಅಂತಹ ರಕ್ಕಸ ನಡವಳಿಕೆಯ ತೋರ್ಪಡಿಕೆ ಅಗತ್ಯವಿರಲಿಲ್ಲ. 
     ಇಂದು ಸಮಾಜವನ್ನು, ದೇಶವನ್ನು ಜಾತಿಗಳ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ವಿವಿಧ ವಿಚಾರಗಳ ಹೆಸರಿನಲ್ಲಿ ಛಿದ್ರಗೊಳಿಸುವ ಕೆಲಸವನ್ನು ರಾಜಕಾರಣಿಗಳು, ಜಾತ್ಯಂಧರು ಮತ್ತು ಮತಾಂಧರುಗಳು ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಮಾನವೀಯತೆ ಅನ್ನುವುದೂ ಸಹ ದೇಶ, ಮತ, ಧರ್ಮ, ಜಾತಿ, ವಿಚಾರಗಳಿಗೆ ಥಳಕು ಹಾಕಿಕೊಂಡುಬಿಟ್ಟಿದೆ. ಮತಾಂಧ ಮುಸ್ಲಿಮ್ ಉಗ್ರ ಸಂಘಟನೆಗೆ ಸೇರಿದವರಿಗೆ ತಮ್ಮ ಮತದವರನ್ನು ಯಾರು ಟೀಕಿಸಿದರೂ ಸಹನೆಯಾಗುವುದಿಲ್ಲ. ಆದರೆ ಅವರು ಇತರ ಮತೀಯರನ್ನು ನಿರ್ದಯೆಯಿಂದ ಕತ್ತು ಸೀಳಿ ಕೊಲೆಗೈಯಬಲ್ಲರು. ಜನನಿಬಿಡ ಪ್ರದೇಶಗಳಲ್ಲಿ ಬಾಂಬು ಸಿಡಿಸಿ ನೂರಾರು ಜನರ ಹತ್ಯೆಯಾದರೂ ಅವರು ಅದರಿಂದ ಸಂಭ್ರಮಪಡುತ್ತಾರೆ. ತಮ್ಮವರು ಸತ್ತಾಗ ದುಃಖಿಸುವ ಅವರು ಇತರರು ಕೊಲೆಯಾದಾಗ ಸಂತೋಷಿಸುತ್ತಾರೆ. ಸತ್ತವರು ತಮ್ಮಂತೆಯೇ ಇರುವ ಮಾನವ ಜೀವಿಗಳು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಇದು ಮತ/ಧರ್ಮದ ಹೆಸರಿನಲ್ಲಿ ಮರೆಯಾಗಿರುವ ಮಾನವೀಯತೆ. ಕೇರಳದಲ್ಲಿ ಜಯಕೃಷ್ಣನ್ ಮಾಸ್ತರ್ ಎಂಬ ಶಿಕ್ಷಕರನ್ನು ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗಲೇ ಮಕ್ಕಳ ಎದುರಿನಲ್ಲೇ ಸಿ.ಪಿ.ಎಂ. ಕಾರ್ಯಕರ್ತರು ಕೊಚ್ಚಿ ಕೊಲೆ ಮಾಡಿದ್ದರು. ಅವರ ದೇಹದ ೪೮ ಕಡೆಗಳಲ್ಲಿ ಕೊಚ್ಚಲಾಗಿತ್ತು. ಇದಕ್ಕೆ ಕಾರಣ ವೈಚಾರಿಕ ಭಿನ್ನತೆ. ಅವರು ಆರೆಸ್ಸೆಸ್ಸಿನವರಾಗಿದ್ದರು ಎಂಬುದೊಂದೇ ಅವರ ಹತ್ಯೆಗೆ ಕಾರಣವಾಗಿತ್ತು. ಕೇರಳದಲ್ಲಿ ಇಂತಹ ವೈಚಾರಿಕ ವಿರೋಧಿಗಳ ಹತ್ಯೆ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಇತರೆಡೆಗಳಲ್ಲಿರುವ ಕಮ್ಯುನಿಸ್ಟರು ಮತ್ತು ಅವರ ಹಿತೈಷಿಗಳು ಖಂಡಿಸುವುದೇ ಇಲ್ಲ. ಆದರೆ ಹೈದರಾಬಾದಿನಲ್ಲಿ ಒಬ್ಬ ಕಮ್ಯುನಿಸ್ಟ್ ಹಿತೈಷಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದರ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆಯುತ್ತವೆ. ವೈಚಾರಿಕ ಭಿನ್ನತೆಯಿಂದ ಯಾರದಾದರೂ ಕೊಲೆಯಾದರೆ ಅದನ್ನು ಮಾನವೀಯ ಕಳಕಳಿ ಇರುವ ಯಾರಾದರೂ ಖಂಡಿಸಲೇಬೇಕು. ಎಡಪಂಥೀಯನಾಗಲೀ, ಬಲಪಂಥೀಯನಾಗಲೀ ದುಷ್ಕೃತ್ಯ ಯಾರೇ ಮಾಡಿದರೂ ಅದನ್ನು ಸಮಾನ ರೀತಿಯಲ್ಲಿ ನೋಡುವ ಪರಿಪಾಠ ಮರೆಯಾಗಿದೆ. ಇಲ್ಲಿ ಮಾನವತೆಯನ್ನು ವಿಚಾರವಾದ ನುಂಗಿಬಿಟ್ಟಿದೆ. ಸತ್ತವರು, ದೌರ್ಜನ್ಯಕ್ಕೊಳಗಾದವರ ಜಾತಿ, ಮತ, ರಾಜಕೀಯ ಪಕ್ಷ, ವೈಚಾರಿಕ ಒಲವು/ನಿಲುವುಗಳನ್ನು ಆಧರಿಸಿ ಅಂತಹ ದುರ್ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಇರುತ್ತದೆಯೆಂದರೆ ಅದು ಮಾನವೀಯತೆಯ ಒರತೆ ಬತ್ತುತ್ತಿರುವುದನ್ನು ತೋರಿಸುತ್ತದೆ.
     ಅಧಿಕಾರದ ಸಲುವಾಗಿ ಏನು ಮಾಡಲೂ ಹೇಸದ ರಾಜಕಾರಣಿಗಳು, ಮತಾಂಧರು, ಸ್ವಂತದ ಲಾಭಕ್ಕಾಗಿ ಸತ್ಯದ ಹತ್ಯೆ ಮಾಡಲು ಸಿದ್ಧರಾಗಿರುವ ವಿಚಾರವ್ಯಾಧಿಗಳು, ಹಣ ಮತ್ತು ಟಿ.ಆರ್.ಪಿ. ಸಲುವಾಗಿ ಋಣಾತ್ಮಕ ಸಂಗತಿಗಳಿಗೆ ನೀರೆರೆಯುತ್ತಿರುವ ಹಲವು ಮಾಧ್ಯಮಗಳವರು ಮತ್ತು ಇಂತಹವನ್ನು ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಸಹಿಸುವ ಸಜ್ಜನ ಸುಬ್ಬಣ್ಣರುಗಳು ಇಂದಿನ ಪರಿಸ್ಥಿತಿಗೆ ನೇರ ಕಾರಣರೆಂದರೆ ಅತಿಶಯೋಕ್ತಿಯಲ್ಲ. ನಮಗೆ ತೊಂದರೆಯಾದರೆ ಮಾತ್ರ ಗೊಣಗುಟ್ಟುವ, ನಮಗೇನೂ ತೊಂದರೆಯಿಲ್ಲವೆನಿಸಿದಾಗ ಮತ್ತು ಇತರರಿಗೆ ಮಾತ್ರ ತೊಂದರೆಯಾದಾಗ ಅದನ್ನು ಕಟ್ಟಿಕೊಂಡು ನಮಗೇನು ಎಂಬ ಭಾವ ತೋರುವವರ ಮನೋಭಾವ ಬದಲಾಗುವವರೆಗೆ ಇಂತಹ ಪರಿಸ್ಥಿತಿ ಇದ್ದೇ ಇರುತ್ತದೆ. ಕೆಟ್ಟವರು ಕೆಲವೇ ಜನರಿದ್ದರೂ ಅವರ ಉಪಟಳ, ಶಕ್ತಿ ಏಕೆ ಹೆಚ್ಚಾಗಿರುತ್ತದೆಯೆಂದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯವರು ನಮಗೇಕೆ ಅವರ ಉಸಾಬರಿ, ನಮಗೆ ಅವರಿಂದ ತೊಂದರೆಯಾಗದಿದ್ದರೆ ಸಾಕು ಎಂದು ಅಂದುಕೊಳ್ಳುವುದೇ ಆಗಿದೆ. ಸಜ್ಜನ ಶಕ್ತಿಯನ್ನು ಬಡಿದೆಬ್ಬಿಸಿ ಜಾಗೃತಗೊಳಿಸುವ ಕೆಲಸ ಈಗ ತುರ್ತಾಗಿ ಆಗಬೇಕಿದೆ.
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 9, 2017

ಅಪ್ಪ (Daddy)


     ಅಂತರ್ಜಾಲ ತಾಣಗಳಲ್ಲಿ ಇತ್ತೀಚೆಗೆ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ ನೆನಪುಗಳು ಉಮ್ಮಳಿಸಿ ಬರುವಂತೆ ಮಾಡುವಲ್ಲಿ ಗೀತೆಯ ಸಾಹಿತ್ಯ ಯಶಸ್ವಿಯಾಗಿದೆ. ಈ ಲೇಖನದ ವಿಷಯಕ್ಕೂ ಇದೇ ಪ್ರೇರಣೆ. ಭೋಗವಾದ, ಕೊಳ್ಳುಬಾಕತನ, ಸ್ವಾರ್ಥಪರತೆಯೇ ಆದ್ಯತೆಯಾಗಿ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರರಲ್ಲಿ ಬಾಂಧವ್ಯಗಳನ್ನು ನೆನಪಿಸುವ, ಬೆಸೆಯುವ ಇಂತಹ ಪ್ರಯತ್ನಗಳು ಅಭಿನಂದನೀಯ. ತಂದೆ-ತಾಯಿ-ಮಕ್ಕಳ ನಡುವಿನ ಸಂಬಂಧಗಳಿರಲಿ, ಗಂಡ-ಹೆಂಡಿರ ಸಂಬಂಧಗಳೂ ಅರ್ಥ, ಪಾವಿತ್ರ್ಯ ಕಳೆದುಕೊಳ್ಳುತ್ತಿರುವುದು ಸಮಾಜ ನೈತಿಕ ದಿವಾಳಿತನದತ್ತ ಜಾರುತ್ತಿದೆಯೇನೋ ಎಂದು ಭಾವಿಸುವಂತೆ ಮಾಡುತ್ತಿರುವ ದಿನಗಳಲ್ಲಿ ಇಂತಹ ಪ್ರಯತ್ನ ಕಾರ್ಮೋಡಗಳ ನಡುವಿನ ಮಿಂಚಿನಂತಿದೆ.
     ಅಪ್ಪ ಎನ್ನುವ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಕೇವಲ ಮಕ್ಕಳಿಗೆ ತಂದೆ ಎಂಬ ಅರ್ಥವಲ್ಲದೆ ಹಿರಿಯ, ಶ್ರೇಷ್ಠ, ಗುರು, ಸ್ವಾಮಿ, ದೇವರು ಇತ್ಯಾದಿ ಅರ್ಥಗಳಲ್ಲೂ ಈ ಪದ ಬಳಸಲ್ಪಡುತ್ತಿದೆ. ತಾಯಿಯನ್ನು ಭೂಮಿಗೆ ಹೋಲಿಕೆ ಮಾಡುವಂತೆ ತಂದೆಯನ್ನು ಆಕಾಶಕ್ಕೆ ಹೋಲಿಸುವ ಪರಿಪಾಠವೂ ಇದೆ. ಈ ಹೋಲಿಕೆಗಳು ಆದರ್ಶ ತಂದೆ-ತಾಯಿಗಳಿಗೆ ಅನ್ವಯವಾಗುತ್ತದೆ. ಸಕಲ ಜೀವಿಗಳಿಗೆ ಭೂಮಿ ಹೇಗೆ ಆಧಾರಪ್ರಾಯವಾಗಿದೆಯೋ ಹಾಗೆಯೇ ತಾಯಿ ತನ್ನ ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೂ ಅವರ ಪಾಲನೆ-ಪೋಷಣೆಗೆ ಹೆಚ್ಚಿನ ಗಮನ ನೀಡುತ್ತಾಳೆ. ಈ ಕಾರ್ಯಕ್ಕೆ ತಂದೆ ಆಧಾರಪ್ರಾಯನಾಗಿ, ಪೋಷಕನಾಗಿ ನಿಲ್ಲುತ್ತಾನೆ. ಅಮ್ಮನ ಮಹತ್ವ ಮಕ್ಕಳಿಗೆ ಹುಟ್ಟಿನ ಕ್ಷಣದಿಂದ ಅನುಭವಕ್ಕೆ ಬರುತ್ತದೆ. ಆದರೆ ಅಪ್ಪನ ಮಹತ್ವ ಮಕ್ಕಳಿಗೆ ತಿಳಿಯುವುದು ಅವರು ಸ್ವತಃ ಅಪ್ಪಂದಿರಾದ ನಂತರವೇ! ಆಕಾಶ ಹೇಗೆ ಭೂಮಿಯೂ ಸೇರಿದಂತೆ ಬ್ರಹ್ಮಾಂಡದ ಸಕಲ ಕಾಯಗಳಿಗೂ ಹೇಗೆ ಆಧಾರ ಮತ್ತು ಆಶ್ರಯಪ್ರಾಯವಾಗಿದೆಯೋ, ಹಾಗೆ ತಂದೆಯಾದವನು ಕುಟುಂಬಕ್ಕೆ ಆಶ್ರಯ ಮತ್ತು ಆಧಾರದಾತನಾಗಿರುತ್ತಾನೆ. ಆಕಾಶದ ಇರುವಿಕೆ ಹೇಗೆ ಗಮನಕ್ಕೆ ಬರುವುದಿಲ್ಲವೋ, ಹಾಗೆಯೇ ತಂದೆಯ ಮಹತ್ವ ಅಷ್ಟಾಗಿ ಮಕ್ಕಳ ಗಮನಕ್ಕೆ ಬರುವುದು ಕಡಿಮೆ. 
     ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರಗಳು ಪರಸ್ಪರ ಪೂರಕವಾಗಿರುವುದು ವಿಶೇಷವೇ ಸರಿ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ ತಂದೆ ಪ್ರಪಂಚವನ್ನು ಮಕ್ಕಳಿಗೆ ಪರಿಚಯಿಸುತ್ತಾನೆ. ತಾಯಿಯಿಂದ ಜೀವ, ತಂದೆಯಿಂದ ಜೀವನ! ಮಕ್ಕಳು ಕಷ್ಟಪಡಬಾರದೆಂದು ತಾಯಿ ಬಯಸಿದರೆ, ತಂದೆ ಕಷ್ಟಗಳನ್ನು ಎದುರಿಸಿ ಮುಂದೆಬರಲು ಹುರಿದುಂಬಿಸುತ್ತಾನೆ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ತಾಯಿ ಅವರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಅದಕ್ಕೆ ಪೋಷಕವಾಗಿ ಹಿನ್ನೆಲೆಯಲ್ಲಿ ತಂದೆಯ ಶ್ರಮವಿರುತ್ತದೆ. ತಾಯಿಯದು ಮಧುರಗಾನವಾದರೆ, ಗಾನಕ್ಕೆ ಕಳೆಕಟ್ಟುವ ಹಿಮ್ಮೇಳ ತಂದೆಯದು! ಈ ತಾಳ-ಮೇಳಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಮತ್ತು ಸಂಸಾರ ಹದಗೆಡುತ್ತದೆ. 
     ಎಲ್ಲಾ ವಿಷಯಗಳಿಗೂ ಅಪವಾದವಿರುತ್ತದೆಯಾದರೂ, ಹೆಚ್ಚಿನ ಕುಟುಂಬಗಳಲ್ಲಿ ಕುಟುಂಬದ ಸದಸ್ಯರುಗಳ ಭದ್ರತೆ, ಅಭಿವೃದ್ಧಿಗಳ ಬಗ್ಗೆ ತಂದೆಯ ಪಾತ್ರ ಪ್ರಧಾನವಾಗಿರುತ್ತದೆ. ಇರಲೊಂದು ಸೂರು, ಮಕ್ಕಳಿಗೆ ಶಿಕ್ಷಣ, ಅವರಗಳು ಸ್ವಂತ ಕಾಲಿನ ಮೇಲೆ ನಿಲ್ಲಿಸಲು ಶ್ರಮಪಡುವ ತಂದೆಯರು ಕುಟುಂಬದ ಮುಖ್ಯಸ್ಥರೆಂದೇ ಪರಿಗಣಿಸಲ್ಪಡುತ್ತಾರೆ. ಮಕ್ಕಳ ಮದುವೆಯಾಗಿ ಅವರುಗಳದೇ ಆದ ಸಂಸಾರ ಪ್ರಾರಂಭವಾದ ಮೇಲೆ ಅಪ್ಪಂದಿರ ಪಾತ್ರ ಅಷ್ಟೊಂದು ಗಣನೆಗೆ ಬರದೆ ಉಳಿದುಬಿಡುವುದನ್ನೂ ಕಾಣುತ್ತೇವೆ. ಎಲ್ಲರನ್ನೂ ದಡ ಸೇರಿಸುವಲ್ಲಿ ಸಫಲನಾಗುವ ಹೊತ್ತಿಗೆ ಹಣ್ಣಾಗಿರುವ ಅಪ್ಪನಿಗೆ ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಂಡಿರುತ್ತದೆ. ಹೊಳೆ ದಾಟಿದ ಮೇಲೆ ಅನ್ನುವ ಪರಿಸ್ಥಿತಿ ಬಾರದ ಅಪ್ಪಂದಿರೇ ಭಾಗ್ಯವಂತರು.
     ಅಪ್ಪನ ಸ್ಥಾನ ವಿವಾದಗಳಿಗೆ ತುತ್ತಾಗುವ ಉದಾಹರಣೆಗಳೂ ಸಿಗುತ್ತವೆ. ಅಕ್ರಮ ಸಂಬಂಧದಿಂದ ಜನಿಸುವ ಮಕ್ಕಳಿಗೆ ಅಪ್ಪನೆನಿಸಿಕೊಳ್ಳಲು ಹಿಂದೇಟು ಹಾಕುವವರು, ಅತ್ಯಾಚಾರ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಸಂಬಂಧಗಳಿಂದ ಜನಿಸುವ ಮಕ್ಕಳ ಅಪ್ಪಂದಿರು ಯಾರೆಂದು ತಿಳಿಯದ ಪ್ರಸಂಗಗಳು ಕಂಡುಬರುತ್ತಿರುತ್ತವೆ. ಪ್ರತಿಷ್ಠಿತರೆನಿಸಕೊಂಡವರೇ ಅಕ್ರಮ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಸೌಲಭ್ಯಗಳನ್ನು ಗುಟ್ಟಾಗಿ ಮಾಡಿಕೊಟ್ಟರೂ ಅವರನ್ನು ತಮ್ಮ ಮಕ್ಕಳೆಂದು ಒಪ್ಪಿಕೊಳ್ಳದ ಪ್ರಕರಣ, ಪಿತೃತ್ವ ಸಾಬೀತಿಗೆ ಮಕ್ಕಳೇ ನ್ಯಾಯಾಲಯದ ಮೆಟ್ಟಲೇರಿದ ಪ್ರಕರಣಗಳೂ ಇವೆ. ನೋವಿನ ಸಂದರ್ಭಗಳಲ್ಲಿ ಅಪ್ಪನೊಬ್ಬ ತನ್ನ ಮಕ್ಕಳಿಗೆ, ನಿಮಗಾಗಿ ಎಷ್ಟು ಕಷ್ಟಪಟ್ಟಿದ್ದೇನೆ, ಗೊತ್ತೆ? ಎಂಬರ್ಥದ ಮಾತುಗಳನ್ನು ಆಡಿದಾಗ ಪ್ರತಿಯಾಗಿ ಕೇಳಬಾರದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುವುದೂ ಇದೆ. ಇಂತಹವನ್ನು ಒತ್ತಟ್ಟಿಗಿಟ್ಟು ಸಾಮಾನ್ಯ ಅಪ್ಪಂದಿರ ಬಗ್ಗೆ ನೋಡೋಣ.
     ಒಬ್ಬ ಸಾಮಾನ್ಯ ಅಪ್ಪ ತನ್ನ ಕೈಯಲ್ಲಿ ಮಾಡಲಾಗದಿದ್ದ ಕೆಲಸಗಳನ್ನು ಮಕ್ಕಳು ಮಾಡಲೆಂದು ಬಯಸುತ್ತಾನೆ. ತಾನು ಆಸೆಪಟ್ಟು ಪಡೆಯಲಾಗದಿದ್ದುದನ್ನು ಮಕ್ಕಳಾದರೂ ಪಡೆಯಲೆಂದು ಆಶಿಸುತ್ತಾನೆ. ಅದರ ಸಲುವಾಗಿ ತಾನು ಮಾಡಬಹುದಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತಾನೆ, ಕಷ್ಟಪಡುತ್ತಾನೆ. ಅವರುಗಳ ಏಳಿಗೆಗಾಗಿ ಸ್ವಂತದ ಅವಶ್ಯಕತೆಗಳನ್ನು ತ್ಯಾಗ ಮಾಡುತ್ತಾನೆ. ಈ ಗುಣವೇ ಅಪ್ಪ-ಅಮ್ಮಂದಿರನ್ನು ಸಜ್ಜನರನ್ನಾಗಿ ರೂಪಿಸುವುದು, ಆದರ್ಶರನ್ನಾಗಿಸುವುದು. ನಮ್ಮ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಮರು ಹೇಳುತ್ತಿದ್ದ ಈ ಮಾತು ಪಾಲನೀಯವಾಗಿದೆ: ಒಂದು ದೇಶ ಭ್ರಷ್ಠಾಚಾರ ಮುಕ್ತವಾಗಬೇಕಾದರೆ, ಸುಂದರ ಮನಸ್ಸುಗಳಿಂದ ಕೂಡಿರಬೇಕೆಂದಾದರೆ ಮೂವರಿಂದ ಮಾತ್ರ ಸಾಧ್ಯ. ಆ ಮೂವರೆಂದರೆ ಅಪ್ಪ, ಅಮ್ಮ ಮತ್ತು ಶಿಕ್ಷಕ. ಈ ಮೂವರಲ್ಲಿ ಕುಟುಂಬದ ಮುಖ್ಯಸ್ಥನಾಗಿ ಅಪ್ಪನ ಜವಾಬ್ದಾರಿಯೇ ಹೆಚ್ಚಿನದಾಗಿದೆ. ಅವನ ನಡವಳಿಕೆ, ಮೇಲ್ಪಂಕ್ತಿ, ತೆಗೆದುಕೊಳ್ಳುವ ನಿರ್ಧಾರಗಳು ಗುರುತರವಾದ ಬದಲಾವಣೆ ತರಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಅವನು ನೋಡಿಕೊಳ್ಳಬೇಕಿದೆ. 
     ಮಕ್ಕಳ ದೃಷ್ಟಿಯಲ್ಲಿ ಅಪ್ಪ ಮಾದರಿಯಾಗಿರುತ್ತಾನೆ. ಮಕ್ಕಳ ಬೇಕು-ಬೇಡಗಳನ್ನು ಗಮನಿಸುವುದು, ಅವರ ರಕ್ಷಣೆ, ಭದ್ರತೆ ವಿಚಾರಗಳಿಗೆ ಗಮನ ಕೊಡುವುದು, ಇತ್ಯಾದಿಗಳಿಂದಾಗಿ ಅವರ ದೃಷ್ಟಿಯಲ್ಲಿ ಅವನೇ ಹೀರೋ ಆಗಿರುತ್ತಾನೆ. ಏನು ಆಗಿರದಿದ್ದರೂ, ತಾವು ಏನಾಗಬೇಕು ಎಂಬುದಕ್ಕೆ ಅಪ್ಪನೇ ಅವರಿಗೆ ಮಾರ್ಗದರ್ಶಿ, ಮಾನದಂಡ ಆಗಿರುತ್ತಾನೆ. ಅಪ್ಪ ಅನ್ನಿಸಿಕೊಳ್ಳುವುದೇ ಹೆಮ್ಮೆಯ ವಿಷಯ, ಅದರಲ್ಲೂ ಒಳ್ಳೆಯ ಅಪ್ಪ ಅನ್ನಿಸಿಕೊಂಡರೆ ಅದೊಂದು ಶ್ರೇಷ್ಠ ಸಾಧನೆಯೇ ಸರಿ. ದೇಶ ಸಧೃಢವಾಗಿರಬೇಕಾದರೆ ರಾಜ್ಯಗಳು ಸಧೃಢವಾಗಿರಬೇಕು. ರಾಜ್ಯಗಳು ಸಮೃದ್ಧಿಯಾಗಿರಬೇಕೆಂದರೆ ಜಿಲ್ಲೆಗಳು, ಜಿಲ್ಲೆಗಳಿಗೆ ತಾಲ್ಲೂಕುಗಳು, ತಾಲ್ಲೂಕುಗಳಿಗೆ ನಗರ, ಹಳ್ಳಿಗಳು! ನಗರ, ಹಳ್ಳಿಗಳು ಮಾದರಿ ಎನ್ನಿಸಿಕೊಳ್ಳಬೇಕಾದರೆ ಅಲ್ಲಿರುವ ಕುಟುಂಬಗಳು ನಾಗರಿಕ ಪ್ರಜ್ಞೆ ಹೊಂದಿರಬೇಕು. ಕುಟುಂಬಗಳು ಹೀಗಿರಬೇಕಾದರೆ ಆ ಕುಟುಂಬಗಳ ಮುಖ್ಯಸ್ಥರು, ಅಂದರೆ ಅಪ್ಪಂದಿರುಗಳು ಸುಯೋಗ್ಯರಾಗಿರಬೇಕು. ಒಟ್ಟಾರೆಯಾಗಿ, ದೇಶಕ್ಕೆ ಒಳ್ಳೆಯದಾಗಬೇಕೆಂದರೆ, ಕುಟುಂಬದ ಆಧಾರಗಳಾದ ಅಪ್ಪ-ಅಮ್ಮಂದಿರುಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
-ಕ.ವೆಂ.ನಾಗರಾಜ್.


ಶನಿವಾರ, ಅಕ್ಟೋಬರ್ 7, 2017

ಸಜ್ಜನಿಕೆ ಮತ್ತು ಕ್ಷಾತ್ರತೆ


     ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕೊಂಡ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಸುಮಾರು 1200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಲ್ಲೆಕೋರರ ಗುಂಪಿನಿಂದ ಸಂಭವಿಸಬಹುದಾಗಿದ್ದ 12 ಸೇನಾ ಸಿಬ್ಬಂದಿಯ ಜೀವಹಾನಿ ತಪ್ಪಿಸುವ ಸಲುವಾಗಿ ಸಾಂದರ್ಭಿಕವಾಗಿ ತೆಗೆದುಕೊಂಡ ಆ ನಿರ್ಧಾರ ಸರಿಯೆಂಬುದು ಬಹುತೇಕರ ಅಭಿಪ್ರಾಯವಾಗಿದೆ. ಮಾನವ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದವರೂ ಇದ್ದಾರೆ. ಸಾಮಾಜಿಕ ಅಂತರ್ಜಾಲ ತಾಣಗಳು, ಫೇಸ್ ಬುಕ್, ಟ್ಡಿಟರ್‌ಗಳಲ್ಲಿ ಸಹ ಚರ್ಚೆ ಗಂಭೀರ ಸ್ವರೂಪದಲ್ಲಿ ನಡೆದಿದೆ, ವೈಯಕ್ತಿಕ ಕೆಸರೆರಚಾಟಗಳೂ ನಡೆದಿವೆ. ಪಾಕಿಸ್ತಾನದ ನೇರ ಹಸ್ತಕ್ಷೇಪವೂ ಸಮಸ್ಯೆ ಬಿಗಡಾಯಿಸಲು ಕಾರಣವೆಂಬುದು ಸುಸ್ಪಷ್ಟ. ಸೇನೆಯ ಸ್ಥೈರ್ಯ ಕುಸಿಯುವಂತೆ ಮಾಡುವ ಕೆಲವು ಮಾಧ್ಯಮಗಳ ಜನರು ಹಾಗೂ ಒಂದು ಕಾಲದಲ್ಲಿ ಗಣ್ಯರೆನ್ನಿಸಿಕೊಂಡಿದ್ದವರ ಹೇಳಿಕೆಗಳು, ಪ್ರಯತ್ನಗಳು ಮಾತ್ರ ದೇಶದ ಹಿತದ ದೃಷ್ಟಿಯಿಂದ ಸಮರ್ಥನೀಯವೆನ್ನಿಸುವುದಿಲ್ಲ. ಟ್ವಿಟರಿನಲ್ಲಿ ಬರುವ ಹೇಳಿಕೆಗಳೂ ಒಂದಕ್ಕೊಂದು ಟಾಂಗ್ ಕೊಡುವ ರೀತಿಯಲ್ಲಿವೆ. ಉದಾಹರಿಸಬೇಕೆಂದರೆ, ಒಬ್ಬರು ಬರೆಯುತ್ತಾರೆ: ಕಣ್ಣು ಮುಚ್ಚಿಕೊಂಡು ಕಲ್ಪಿಸಿಕೊಳ್ಳಿ. ನಿಮ್ಮ ಕುಟುಂಬದ ಒಬ್ಬ ಸದಸ್ಯರನ್ನೇ ಸೈನ್ಯದ ಜೀಪಿನ ಮುಂದೆ ಕಟ್ಟಿ ಅಶಾಂತ ಸ್ಥಿತಿಯಿರುವ ಎಡೆಯಲ್ಲಿ ಕರೆದೊಯ್ಯುತ್ತಿದ್ದಾರೆಂದು ಕಲ್ಪಿಸಿಕೊಳ್ಳಿ. ಈಗ ಕಣ್ಣು ಬಿಡಿ. ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಇದಕ್ಕೆ ಪ್ರತಿಕ್ರಿಯೆಯೂ ಬರುತ್ತದೆ: ನಿಮ್ಮ ತಂದೆ ಜೀಪು ಚಾಲನೆ ಮಾಡುತ್ತಿದ್ದಾರೆ. ನಿಮ್ಮ ತಾಯಿ ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದಾರೆ. ಸಾವಿರಾರು ಜನರು ಗುಂಪು ಕೂಡಿ ಜೀಪಿನ ಮೇಲೆ ಕಲ್ಲುಗಳನ್ನು ತೂರುತ್ತಿದ್ದಾರೆ ಎಂಬ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಈಗ ನಿಮಗೆ ಏನು ಅನ್ನಿಸುತ್ತದೆ? ನಿಜವಾಗಿ ಹೇಳಿ. ಹಿಂದಿನ ದಶಕಗಳಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜೊತೆಗೆ ದೇಶಹಿತಕ್ಕಿಂತ ರಾಜಕೀಯ ಲಾಭದ ಕಡೆಗೆ ಹೆಚ್ಚಿನ ಗಮನ ಕೊಟ್ಟದ್ದೇ ಸಮಸ್ಯೆ ಉಲ್ಬಣಗೊಂಡು, ನುಸುಳುಕೋರರದೇ ಪ್ರಾಬಲ್ಯವಾಗಲು ಕಾರಣವಾಗಿದೆಯೆಂದರೆ ಅದರಲ್ಲಿ ಸುಳ್ಳಿಲ್ಲ. ಇಂತಹುದೇ ಸಮಸ್ಯೆ ಪಶ್ಚಿಮ ಬಂಗಾಳದಲ್ಲೂ ಇದೆ. ಪಶ್ಚಿಮ ಬಂಗಾಳವನ್ನೂ ಬಾಂಗ್ಲಾದೇಶದೊಂದಿಗೆ ಸೇರಿಸಿಕೊಳ್ಳುವ ಹುನ್ನಾರವೂ ಬಾಂಗ್ಲಾದೇಶೀಯರ ಅಕ್ರಮ ನುಸುಳುವಿಕೆಯ ಹಿನ್ನೆಲೆಯಲ್ಲಿದೆ. ಈಗ ದಿಟ್ಟ ಮತ್ತು ಧೃಢ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದೆ ಕೇರಳದಲ್ಲೂ ಈ ಸ್ಥಿತಿ ಬರಲಿದೆ. ಕ್ಯಾನ್ಸರ್ ರೋಗದಂತೆ ದೇಶದ ವಿವಿದೆಡೆಗಳಲ್ಲಿ ಸಮಸ್ಯೆ ಹರಡಿದರೂ ಆಶ್ಚರ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಸಮಗ್ರತೆ ಮತ್ತು ಹಿತಕ್ಕೆ ಧಕ್ಕೆ ಬರುವಂತಹ ನಡವಳಿಕೆಗಳನ್ನು ಪ್ರದರ್ಶಿಸುವವರ ವಿರುದ್ಧವೂ ಕಠಿಣ ಕ್ರಮ ಅನುಸರಿಸುವುದು ಕಾಲದ ಅಗತ್ಯವಾಗಿದೆ.
     ಭಾರತ ಶಾಂತಿಪ್ರಿಯ ರಾಷ್ಟ್ರ. ತಾನಾಗಿಯೇ ಅದು ನೆರೆ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಹೋಗಿಲ್ಲ. ಆದರೆ ಕೇವಲ ರಕ್ಷಣಾತ್ಮಕ ನೀತಿ ಅನುಸರಿಸಿದರೆ ಅದು ಒಂದು ರೀತಿಯಲ್ಲಿ ಸೋತಂತೆಯೇ ಎಂಬುದು ಇದುವರೆಗಿನ ಅನುಭವ. ಇಂತಹ ನೀತಿಯ ಅನುಸರಣೆಯಿಂದ ಭಾರತ ಕಳೆದುಕೊಂಡಿದ್ದೇ ಹೆಚ್ಚು. ಹಿಂದಿನ ಸರ್ಕಾರಗಳು ಸೇನೆಯ ಕೈಗಳನ್ನು ಕಟ್ಟಿಹಾಕಿದ್ದವು. ಒಂದು ಗುಂಡು ಹಾರಿಸಲೂ, ಪ್ರತೀಕಾರ ತೆಗೆದುಕೊಳ್ಳಲೂ ರಾಜಕಾರಣಿಗಳು ಬಿಡುತ್ತಿರಲಿಲ್ಲ. ಸೇನೆಗೆ  ಪ್ರತೀಕಾರ ತೆಗೆದುಕೊಳ್ಳಲು ಮುಕ್ತ ಹಸ್ತ ನೀಡಿದ್ದಿದ್ದರೆ ಸಮಸ್ಯೆ ತಾರ್ಕಿಕ ಅಂತ್ಯ ಕಂಡು ಬಹಳ ವರ್ಷಗಳಾಗಿರುತ್ತಿದ್ದವು. ಆದರೆ, ರಾಜಕೀಯ ಲಾಭವನ್ನು ಮಾತ್ರ ಗಮನದಲ್ಲಿರಿಸುವ ರಾಜಕಾರಣಿಗಳು ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥವಾಗದ ಹಂತಕ್ಕೆ ತಂದು ನಿಲ್ಲಿಸಿವೆ. ಪಾಕಿಸ್ತಾನ ತಾನು ಆಕ್ರಮಿಸಿದ ಕಾಶ್ಮೀರದ ಪ್ರಮುಖ ಭಾಗವನ್ನು ಚೀನಾಕ್ಕೆ ಧಾರೆಯೆರೆದಿದೆ. ತನ್ನ ವಶದಲ್ಲಿರುವ ಭಾಗವನ್ನು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸಲು ಬಳಸುತ್ತಿದೆ. ಪಾಕ್ ಸೇನೆ ನುಸುಳುವಿಕೆಗೆ ಬೆಂಗಾವಲಾಗಿದೆ. ಇಂತಹ ಸ್ಥಿತಿಯಲ್ಲಿ ಕಾಶ್ಮೀರ ಕಣಿವೆಯಲ್ಲಿದ್ದ ಮೂಲ ನಿವಾಸಿಗಳನ್ನು ಹೊರದೂಡಿರುವ ನುಸುಳುಕೋರರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸರ್ಕಾರವೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಅತ್ಯಂತ ತಾಳ್ಮೆಯಿಂದ ದೇಶ ಕಾಯುವ ಕೆಲಸ ಮಾಡುತ್ತಿರುವ ಯೋಧರು ಜೀವವನ್ನು ಅಂಗೈಯಲ್ಲಿ ಹಿಡಿದು ಕರ್ತವ್ಯ ಮಾಡುತ್ತಿದ್ದಾರೆ. ಹೊರದೂಡಲ್ಪಟ್ಟಿರುವ ಕಾಶ್ಮೀರಿ ಪಂಡಿತರ ಪುನರ್ವಸತಿ ಆಗಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಸೇನೆಯ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಮತ್ತು ಮಾನವ ಹಕ್ಕು ಉಲ್ಲಂಘನೆ, ಇತ್ಯಾದಿ ಮುಖವಾಡದ ಹಿನ್ನೆಲೆಯಲ್ಲಿ ಉಗ್ರರ ಮತ್ತು ನೆರೆರಾಷ್ಟ್ರದ ಪರವಾಗಿ ಪರೋಕ್ಷ ಬೆಂಬಲ ನೀಡುವ ಅನವಶ್ಯಕ ಮತ್ತು ಅನಪೇಕ್ಷಿತ ಹೇಳಿಕೆಗಳನ್ನು ಕೊಡುವ ಕಪಟಿಗಳನ್ನು ನಿಯಂತ್ರಿಸಬೇಕಿದೆ. ಪಾಕಿಸ್ತಾನ ನಿರಂತರವಾಗಿ ತನ್ನ ಚಟುವಟಿಕೆಗಳನ್ನು ನೇರ ಮತ್ತು ಪರೋಕ್ಷವಾಗಿ ಭಾರತದ ವಿರುದ್ಧ ನಡೆಸುತ್ತಲೇ ಇರುವಾಗ, ಶಾಂತಿಮಂತ್ರದ ಪಾಠ ಜಪಿಸಲು ಹೇಳುವ ಇಂತಹ ಕಪಟ ಮಾನವತಾವಾದಿಗಳು ಅಪಾಯಕಾರಿಗಳು ಎನ್ನಲೇಬೇಕಾಗುತ್ತದೆ. ಭಾರತಕ್ಕೆ ಹಾನಿಯಾದರೆ ಅದಕ್ಕೂ ಟೀಕಿಸುವುದು, ತಿರುಗಿಬಿದ್ದರೆ ಮಾನವ ಹಕ್ಕು ಉಲ್ಲಂಘನೆ ಅನ್ನುವುದು ಅವರ ನೀತಿಯಾಗಿದೆ.
     ಶಾಂತಿ ನಮ್ಮ ಮಂತ್ರವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಒಮ್ಮುಖವಾದರೆ ಪ್ರಯೋಜನವಿಲ್ಲ. ನಾವಾಗಿ ಆಕ್ರಮಣ ಮಾಡಬೇಕಿಲ್ಲ. ಆದರೆ ಏಟಿಗೆ ಪ್ರತಿ ಏಟು ಎಂಬುದು ನೀತಿಯಾಗಲೇಬೇಕು. ಹಾಗಾದರೆ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದೀತು. ಸಮಸ್ಯೆ ಇತ್ಯರ್ಥಕ್ಕೆ ದಾರಿಗಳು ಕಂಡಾವು. ಭಯೋತ್ಪಾದಕರಿಗೆ ನಮ್ಮ ದೇಶದೊಳಗಿನವರೇ ಬೆಂಬಲ ಕೊಡುತ್ತಿರುವುದು ಈಗ ಮುಚ್ಚುಮರೆಯಾಗಿ ಉಳಿದಿಲ್ಲ. ಅಂತಹ ಸಹಕಾರ ಕೊಡುವ ಜನರನ್ನು ಗುರುತಿಸಿ ನಿಯಂತ್ರಿಸಲೇಬೇಕು. ರಾಜಕೀಯದ ಕಾರಣಕ್ಕಾಗಿ ಮತ್ತು ಮತಗಳಿಕೆಯ ಸಲುವಾಗಿ ಇದನ್ನು ನಿರ್ಲಕ್ಷಿಸಿದ್ದೇ ಆದರೆ ಗಂಡಾಂತರ ತಪ್ಪಿದ್ದಲ್ಲ. ದೇಶ ಹಲವಾರು ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವಾಗ, ದೇಶದ ಬೆಂಗಾವಲಿಗಿರುವ ಸೇನೆಯ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಬೇಕಾಗಿರುವುದು ನಾಗರಿಕರೆನ್ನಿಸಿಕೊಂಡವರೆಲ್ಲರ ಕರ್ತವ್ಯವಾಗಿದೆ. ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ನಾವು ಸಜ್ಜನ ಸುಬ್ಬಣ್ಣರಾದರೆ ಪ್ರಯೋಜನವಿಲ್ಲ. ನಮಗೆ ಹೋರಾಡಲು, ಪ್ರತಿಭಟಿಸಲು ಶಕ್ತಿಯಿಲ್ಲದಿರಬಹುದು. ಆದರೆ ಅನ್ಯಾಯದ ವಿರುದ್ಧ ಧ್ವನಿಯೆತ್ತುವವರಿಗೆ ಬೆಂಬಲವಾಗಿ ಇರಲಾದರೂ ಸಾಧ್ಯವಿದೆಯಲ್ಲವೇ? ಅಂತಹವರ ಪರವಾಗಿ ನಿಲ್ಲುವವರ ಸಂಖ್ಯೆ ಹೆಚ್ಚಾಗಿದ್ದರೂ ತೋರ್ಪಡಿಸಿಕೊಳ್ಳಲು ಸಜ್ಜನಿಕೆ, ಹಿಂಜರಿಕೆ, ಭಯ ಅವರನ್ನು ತಡೆಯುತ್ತಿರಬಹುದು. ಇದನ್ನು ಮೆಟ್ಟಿ ನಿಂತರೆ, ಈಗ ಕ್ಷೀಣವಾಗಿ ಕೇಳಿಬರುತ್ತಿರುವ ಧ್ವನಿ ಮುಂದೊಮ್ಮೆ ಶತ್ರುವನ್ನು ನಡುಗಿಸುವ ಸಿಂಹಘರ್ಜನೆಯಾಗುತ್ತದೆ. ಸಜ್ಜನ ಶಕ್ತಿ ಮತ್ತು ಕ್ಷಾತ್ರ ಶಕ್ತಿ ಒಟ್ಟುಗೂಡಿದರೆ ದುಷ್ಟಶಕ್ತಿಗಳ ಆಟ ನಡೆಯುವುದಿಲ್ಲ.
-ಕ.ವೆಂ.ನಾಗರಾಜ್.