ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ನವೆಂಬರ್ 26, 2017

ವ್ಯಕ್ತಿತ್ವ - ಅಸಲಿಯೋ ನಕಲಿಯೋ? (Personality)


     "ಅವರು ದೊಡ್ಡ ಮನುಷ್ಯರಾದರೂ ಎಷ್ಟೊಂದು ಸರಳವಾಗಿದ್ದಾರೆ! ಎಂಥವರಿಗಾದರೂ ನೋಡಿದರೆ ಕೈಮುಗಿಯಬೇಕು ಅನ್ನಿಸುತ್ತದೆ" - ಆ ವ್ಯಕ್ತಿಯನ್ನು ನೋಡಿದವರೊಬ್ಬರು ತಮ್ಮ ಸ್ನೇಹಿತನ ಬಳಿಯಲ್ಲಿ ಹೀಗೆ ಹೇಳಿದಾಗ ಅವನ ಸ್ನೇಹಿತ ನಗುತ್ತಾ, "ಅವನಾ? ಅವನೊಬ್ಬ ಛತ್ರಿ, ಆಷಾಡಭೂತಿ" ಎಂದು ಅವನ ಗುಣಗಳ ಅನಾವರಣ ಮಾಡಿದಾಗ ತಬ್ಬಿಬ್ಬಾಗಿದ್ದರು. ಮುಖವಾಡಗಳನ್ನೇ ಧರಿಸಿರುವ ಜನರ ನಡುವೆ ಅಸಲಿ ಮುಖ ಯಾವುದು, ನಕಲಿ ಯಾವುದು ಎಂದು ತಿಳಿಯುವುದು ಸುಲಭವಲ್ಲ. ನಾನು ತಹಸೀಲ್ದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಮ್ಮೆ ಅಂಬೇಡ್ಕರ್ ಜಯಂತಿಯಂದು ಸಾಮೂಹಿಕ ಭೋಜನದ ವ್ಯವಸ್ಥೆ  ಮಾಡಲಾಗಿತ್ತು. ಕ್ಷೇತ್ರದ ಶಾಸಕರು ಪಕ್ಕದಲ್ಲಿ ಕುಳಿತಿದ್ದ ನನಗೆ ಕಿವಿಯಲ್ಲಿ ಪಿಸುಗುಟ್ಟಿದ್ದರು, "ಊಟದ ಶಾಸ್ತ್ರ ಮಾಡಿ. ಐಬಿಯಲ್ಲಿ ಬೇರೆ ಊಟ ಇದೆ". ಮರುದಿನದ ಪತ್ರಿಕೆಗಳಲ್ಲಿ ನಮ್ಮ ಸಹಭೋಜನದ ಫೋಟೋ ಪ್ರಕಟವಾಗಿತ್ತು. ಅಸಲಿ ಆಭರಣಗಳಿಗಿಂತ ನಕಲಿ ಆಭರಣಗಳೇ ಸುಂದರವಾಗಿ, ಅಸಲಿಗಿಂತ ಚೆನ್ನಾಗಿ ಕಾಣುತ್ತವೆ. ಖೋಟಾ ನೋಟುಗಳನ್ನು ಪತ್ತೆ ಹಚ್ಚುವುದೇ ಕಷ್ಟವೆಂಬಷ್ಟು ಅಸಲಿಯಂತೆ ಕಾಣುತ್ತವೆ. ನಮ್ಮ ಎದುರಿಗೆ ಅತ್ಯಂತ ಸ್ನೇಹದಿಂದ ಮಾತನಾಡಿ, ಬೆನ್ನ ಹಿಂದೆ ನಮ್ಮನ್ನು ದೂರುವವರೂ ಇರುತ್ತಾರೆ. ಅಸಲಿ ಮತ್ತು ನಕಲಿತನಗಳನ್ನು ಗುರುತಿಸುವುದಕ್ಕೆ ಕೆಳಗೆ ತಿಳಿಸಿರುವ ಅಂಶಗಳು ಸಹಾಯಕವಾಗಬಹುದು.
೧. ಗೌರವ ತೋರಿಸುವ ರೀತಿ:
     ಯಾರು ತಮ್ಮ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಗೌರವದಿಂದ, ಪ್ರೀತಿಯಿಂದ ಕಾಣುತ್ತಾರೋ ಅವರು ಅಸಲಿಗಳು. ಅವರು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಅಥವ ತಾವು ಮೇಲಿನವರೆಂದು ತೋರಿಸಿಕೊಳ್ಳುವುದಿಲ್ಲ. ಆದರೆ ನಕಲಿಗಳು ಅಧಿಕಾರದಲ್ಲಿರುವವರನ್ನು ಮತ್ತು ತಮಗೆ ಪ್ರಯೋಜನಕ್ಕೆ ಬರುವವರೆನ್ನು ಮಾತ್ರ ಗೌರವಿಸುತ್ತಾರೆ. ಯಾರನ್ನು ಗೌರವಿಸಬೇಕು ಎಂಬ ವಿಚಾರದಲ್ಲಿ ಅವರು ಲೆಕ್ಕಾಚಾರ ಹಾಕುತ್ತಾರೆ. ಉಳಿದವರನ್ನು ನಿಕೃಷ್ಟವಾಗಿ ಕಾಣುತ್ತಾರೆ ಅಥವ ನಿರ್ಲಕ್ಷ್ಯಿಸುತ್ತಾರೆ. 
೨. ಮೆಚ್ಚುಗೆಯ ನಿರೀಕ್ಷೆ:
     ತುಂಬಿದ ಕೊಡದಂತಹ ವ್ಯಕ್ತಿತ್ವದವರು ತಾವಾಗಿಯೇ ಇನ್ನೊಬ್ಬರನ್ನು ಮೆಚ್ಚಿಸಲು, ಅವರ ಗಮನ ಸೆಳೆಯಲು ಹೋಗುವುದಿಲ್ಲ. ಅವರು ತಾವಿದ್ದಂತೆಯೇ ತಾವು ಸಂತುಷ್ಟರಾಗಿರುತ್ತಾರೆ ಮತ್ತು ಇನ್ನೊಬ್ಬರ ಮೆಚ್ಚುಗೆಗಾಗಲೀ, ನಿಂದನೆಗಾಗಲೀ ಮಹತ್ವ ಕೊಡುವುದಿಲ್ಲ. ಆದರೆ ನಕಲಿಗಳು ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ಜನರನ್ನು ಮೆಚ್ಚಿಸುವುದಕ್ಕಾಗಿ ತಮ್ಮ ಮಿತಿ ಮೀರಿ ಹೋಗುತ್ತಾರೆ. ಅನುಕೂಲವಾಗುತ್ತದೆ ಎನ್ನಿಸಿದರೆ ಎಂತಹವರನ್ನೂ ಓಲೈಸುತ್ತಾರೆ, ಲಾಬಿ ಮಾಡುತ್ತಾರೆ, ಹಾಡಿಹೊಗಳುತ್ತಾರೆ. ಅಧಿಕಾರದಲ್ಲಿರುವವರನ್ನು ಇಂದ್ರ, ಚಂದ್ರ, ದೇವೇಂದ್ರ ಎನ್ನುತ್ತಾ, ಅವರ ವಿರೋಧಿಗಳನ್ನು ವಾಚಾಮ ಗೋಚರವಾಗಿ ನಿಂದಿಸುವ ಕಾಯಕದಲ್ಲಿ ತೊಡಗುತ್ತಾರೆ. ದುರಂತವೆಂದರೆ ಆಡಳಿತದಲ್ಲಿರುವವರು ತಮ್ಮ ಸ್ವಾರ್ಥಸಾಧನೆಗಾಗಿ ಇಂತಹ ನಕಲಿಗಳನ್ನು ಪ್ರೋತ್ಸಾಹಿಸುತ್ತಾರೆ, ಪ್ರಶಸ್ತಿಗಳನ್ನು ಕೊಡುತ್ತಾರೆ, ಉನ್ನತ ಸ್ಥಾನಗಳ ಬಳುವಳಿ ನೀಡುತ್ತಾರೆ.
೩. ಗಮನ ಸೆಳೆಯುವುದು:
     ನೈಜ ವ್ಯಕ್ತಿತ್ವದವರು ತಾವು ಜನರ ಆಕರ್ಷಣೆಯ ಕೇಂದ್ರವಾಗಿರಬೇಕೆಂದು ಬಯಸುವುದಿಲ್ಲ. ತಾವು ಇರುವಂತೆಯೇ ಇರಬಯಸುವವರು ಅವರು. ತಾವು ಮಾಡುತ್ತಿರುವ ಕೆಲಸಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಹೋಗುವ ಮನಸ್ಥಿತಿಯವರು ಆ ಕಾರಣಕ್ಕಾಗಿಯೇ ಗೌರವಿಸಲ್ಪಡುತ್ತಾರೆ. ಆದರೆ ಪ್ರಚಾರದ ಹಪಾಹಪಿಯಿರುವವರು ದೊಡ್ಡ ಗಂಟಲಿನಲ್ಲಿ ಸ್ವಪ್ರಚಾರ ಮಾಡಿಕೊಳ್ಳುತ್ತಾ ಮುಂಚೂಣಿಯಲ್ಲಿರಬಯಸುತ್ತಾರೆ. ಅವರು ಜನರು ತಮ್ಮ ಸುತ್ತಲೇ ಇದ್ದು, ತಮ್ಮನ್ನು ಗೌರವಿಸುತ್ತಾರೆಂಬ ಭ್ರಮೆ ಹೊಂದಿರುತ್ತಾರೆ.
೪. ಸಾಧನೆಯ ಪ್ರಕಟೀಕರಣ:
     ನಿಜವಾದ ಸಾಧಕರು ತಮ್ಮ ಸಾಧನೆಯನ್ನು ಕೊಚ್ಚಿಕೊಳ್ಳುವುದಿಲ್ಲ. ಏಕೆಂದರೆ ಅದನ್ನು ಅವರು ಮೆಚ್ಚುಗೆ ಗಳಿಸಿಕೊಳ್ಳುವುದಕ್ಕಾಗಿ ಮಾಡಿರುವುದಿಲ್ಲ. ಅವರು ಸಾಮಾನ್ಯವಾಗಿ ವಿನೀತರಾಗಿರುತ್ತಾರೆ ಮತ್ತು ಸರಳರಾಗಿರುತ್ತಾರೆ. ಆದರೆ ಅರೆಬೆಂದ ವ್ಯಕ್ತಿತ್ವದವರು ತಾವು ಮಾಡಿದ, ಮಾಡಲು ಪ್ರಯತ್ನಿಸಿದ ಸಾಧನೆಗಳ ಬಗ್ಗೆ ದೊಡ್ಡದಾಗಿ ಕೊಚ್ಚಿಕೊಳ್ಳುತ್ತಿರುತ್ತಾರೆ. ಅಷ್ಟೇನೂ ಮಹತ್ವದ್ದಲ್ಲದ ಸಂಗತಿಯನ್ನೂ ಮಹತ್ವದ್ದೆಂಬಂತೆ ಬಿಂಬಿಸುತ್ತಿರುತ್ತಾರೆ. 
೫. ಅಭಿಪ್ರಾಯ ತಿಳಿಸುವ ರೀತಿ:
     ಮುಚ್ಚುಮರೆ ಮಾಡದ ಸ್ವಭಾವದವರು ತಮಗೆ ಅನ್ನಿಸಿದುದನ್ನು ನೇರವಾಗಿ ಹೇಳಿಬಿಡುತ್ತಾರೆ. ಅವರ ಅಭಿಪ್ರಾಯಗಳಲ್ಲಿ ಕಪಟತನವಾಗಲೀ, ಏನನ್ನೋ ಮುಚ್ಚಿಡುವುದಾಗಲೀ ಇರುವುದಿಲ್ಲ. ಇದ್ದುದನ್ನು ಇದ್ದಂತೆ ಪ್ರಾಮಾಣಿಕವಾಗಿ ಹೇಳುತ್ತಾರೆ. ಅದರೆ ದ್ವಿಮುಖ ವ್ಯಕ್ತಿತ್ವ ಹೊಂದಿದವರು ಎದುರಿಗೆ ಒಂದು ತರಹ ಮತ್ತು ಹಿಂದೆ ಮತ್ತೊಂದು ತರಹ ಹೇಳುತ್ತಾರೆ. ಗಾಳಿಮಾತುಗಳನ್ನು ಹರಡುವುದರಲ್ಲಿ ಅವರು ಆನಂದ ಕಾಣುತ್ತಾರೆ. 
೬. ಮಾತು ಮತ್ತು ಕೃತಿ: 
     ಸರ್ವಜ್ಞನ ನುಡಿ, ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ. ಅಧಮ ತಾನಾಡಿಯೂ ಮಾಡದವ ಎಂಬ ಮಾತು ಸಾರ್ವಕಾಲಿಕ ಸತ್ಯ. ಮಾಡಬೇಕೆಂದುದನ್ನು ಹೇಳದೇ ಸದ್ದಿಲ್ಲದೆ ಮಾಡುವ ಸಾಧಕರುಗಳು ನೋಡುವ ಕಣ್ಣುಗಳಿಗೆ ಕಾಣುತ್ತಾರೆ. ಆದರೆ ಆಡುವುದೇ ಒಂದು. ಮಾಡುವುದೇ ಮತ್ತೊಂದು ಎನ್ನುವವರ ಸಂಖ್ಯೆ ಹೆಚ್ಚು. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಭರವಸೆ ಕೊಡುವ ಬಹುತೇಕ ರಾಜಕಾರಣಿಗಳು ಅದನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುದು ತಿಳಿದ ವಿಚಾರವೇ ಆದರೂ ಜನರು ಮೋಸ ಹೋಗುತ್ತಾರೆ. 
೭. ಅಭಿಪ್ರಾಯ ವ್ಯಕ್ತಪಡಿಸುವ ರೀತಿ:
     ಪ್ರಾಮಾಣಿಕರು ಪೂರ್ವಾಗ್ರಹ ಪೀಡಿತರಾಗಿರದೆ ಯಾವುದೇ ಒಳ್ಳೆಯ ಸಂಗತಿ ಯಾರಿಂದಲೇ ಬಂದರೂ ಸ್ವೀಕರಿಸುತ್ತಾರೆ, ಮೆಚ್ಚುತ್ತಾರೆ, ಕೆಟ್ಟ ಕೃತ್ಯಗಳನ್ನು ಯಾರೇ ಮಾಡಿರಲಿ, ಖಂಡಿಸುತ್ತಾರೆ. ನಕಲಿ ವ್ಯಕ್ತಿತ್ವದವರು ಪೂರ್ವಾಗ್ರಹ ಪೀಡಿತರಾಗಿದ್ದು, ತಮ್ಮವರ ಮತ್ತು ತಮ್ಮ ಗುಂಪಿನವರ ವಿಚಾರಗಳನ್ನು ಮಾತ್ರ ಒಪ್ಪುತ್ತಾರೆ. ತಮ್ಮವರು ಎಂದು ಭಾವಿಸದವರ ಒಳ್ಳೆಯ ವಿಚಾರಗಳಲ್ಲೂ ಕೊಂಕು ಹುಡುಕುತ್ತಾರೆ. ತಮ್ಮವರ ಕೆಟ್ಟ ಕೃತ್ಯಗಳನ್ನು ಕಂಡೂ ಕಾಣದವರಂತಿರುತ್ತಾರೆ. ಮಾಧ್ಯಮಗಳು ಬುದ್ಧಿಜೀವಿಗಳು, ಪ್ರಗತಿಪರರು, ಇತ್ಯಾದಿ ವಿಶೇಷಣಗಳೊಂದಿಗೆ ಬಿಂಬಿಸಿ ಮುನ್ನೆಲೆಗೆ ತಂದಿರುವ ಅನೇಕ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು ಇಂತಹ ನಕಲಿ ವ್ಯಕ್ತಿತ್ವದವರಾಗಿರುವುದು ದೌರ್ಭಾಗ್ಯವೇ ಸರಿ. ಇಂತಹವರು ಇತರರನ್ನು ಟೀಕಿಸಿ ಕೆಟ್ಟವರೆಂದು ಪ್ರಚಾರ ಮಾಡಿ ಅವರ ನೋವಿನಲ್ಲಿ ಸಂತೋಷ ಕಾಣುವ ವಿಕೃತರಾಗಿರುತ್ತಾರೆ.
೮. ನೆರವು ನೀಡುವ ರೀತಿ:
     ಸಜ್ಜನರು ತಮ್ಮ ಸುತ್ತಮುತ್ತಲಿನವರಿಗೆ ವೈಯಕ್ತಿಕ ಅಭಿಲಾಷೆಗಳಿಲ್ಲದೆ ಷರತ್ತಿಲ್ಲದ ನೆರವು ನೀಡಲು ಮುಂದಾಗುತ್ತಾರೆ. ಎಲ್ಲರೂ ಚೆನ್ನಾಗಿರಲಿ ಎಂಬ ಮನೋಭಾವ ಅವರದಾಗಿರುತ್ತದೆ. ಆದರೆ ಸಮಯಸಾಧಕರು ತಮಗೆ ಪ್ರತಿಫಲ ಸಿಗುವಂತಹ ಸಂದರ್ಭಗಳಲ್ಲಿ ಮಾತ್ರ ಸಹಾಯಹಸ್ತ ಚಾಚುತ್ತಾರೆ. ತಮಗೆ ಪ್ರಯೋಜನವಿಲ್ಲ ಎಂದಾದರೆ ಇತರರು ಸಾಯುತ್ತಿದ್ದರೂ ತಿರುಗಿ ನೋಡದ ಅಮಾನವೀಯ ಗುಣದವರಾಗಿರುತ್ತಾರೆ. 
     ನಕಲಿಗಳನ್ನು ಅಸಲಿಗಳನ್ನಾಗಿಸುವುದು ಸಾಧ್ಯವೇ? ಈ ಜಗತ್ತು ಅಸಲಿಯೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ನಕಲಿಗಳಿಂದ ತುಂಬಿಹೋಗಿದೆ. ನಮ್ಮ ಸುತ್ತಲೂ, ಇದರಲ್ಲಿ ನಾವೂ ಸೇರಿರಬಹುದು, ಇಂತಹ ನಕಲಿಗಳು ಕಾಣಸಿಗುತ್ತಾರೆ. ಅವರು ನಮ್ಮ ಸ್ನೇಹಿತರಾಗಿರಬಹುದು, ಕುಟುಂಬದವರಾಗಿರಬಹುದು, ಸಹಪಾಠಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ಜಾತಿಯವರಾಗಿರಬಹುದು, ಸಹೋದ್ಯೋಗಿಗಳಾಗಿರಬಹುದು, ಯಾರೇ ಆಗಿರಬಹುದು ಎಂಬುದನ್ನು ಯಾರೂ ತಳ್ಳಿಹಾಕಲಾರರು. ಜನರೂ ಸಹ ನಕಲಿಗಳಾಗಿರುವುದನ್ನು ಒಪ್ಪಿಕೊಂಡುಬಿಡುತ್ತಾರೆ, ಏಕೆಂದರೆ ಅಸಲಿಗಿಂತ ನಕಲಿಯೇ ಹೆಚ್ಚು ಜನಾಕರ್ಷಕವಾಗಿರುತ್ತದೆ ಮತ್ತು ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸುತ್ತಾರೆ. ನೀವು ನಿಮ್ಮ ಒಬ್ಬ ಸ್ನೇಹಿತ ಮೊದಲು ನಿಮ್ಮನ್ನು ಮೆಚ್ಚಿಸಿ, ನಂತರ ನಿಮಗೆ ಮೋಸ ಮಾಡಿದರೆ ಒಪ್ಪುತ್ತೀರಾ? ಇಲ್ಲವೆಂದಾದರೆ ನಕಲಿಗಳನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಿ. ಫೇಸ್ ಬುಕ್ಕಿನಲ್ಲಿ ಒಂದು ಅಸಲಿ ಮತ್ತೊಂದು ನಕಲಿ ಖಾತೆ ಹೊಂದಿರುವವರು ಬಹಳ ಜನರಿದ್ದಾರೆ, ಅವರ ಒಂದೊಂದು ಮುಖಕ್ಕೆ ಒಂದರಂತೆ! ಅವರ ನಕಲಿ ಖಾತೆಯೇ ಅವರ ಅಸಲಿತನದ ದರ್ಶನ ಮಾಡಿಸುತ್ತದೆ. ಕಪಟಿ ಸ್ನೇಹಿತನಿಗಿಂತ ಪ್ರಾಮಾಣಿಕ ಶತ್ರುವೇ ಮೇಲು, ಅರ್ಥಾತ್ ನಕಲಿಗಿಂತ ಅಸಲಿಯೇ ಎಂದೆಂದಿಗೂ ಮೇಲು!
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 21, 2017

ಸಂಬಂಧಗಳ ಅಳಿವು ಮತ್ತು ಉಳಿವು (Relations)


     "ಏಯ್ ಮುಟ್ಠಾಳ, ಅವನ ಜೊತೆ ಯಾಕೆ ಮಾತಾಡ್ತಿದ್ದೆ? ಅವನಮ್ಮಂಗೂ ನಂಗೂ ಆಗಲ್ಲ ಅಂತ ನಿಂಗೆ ಗೊತ್ತಿಲ್ವಾ?" - ಒಬ್ಬ ತಾಯಿ ತನ್ನ ಮಗನನ್ನು ಗದರಿಸುತ್ತಿದ್ದರೆ, ಆ ಮಗು ಉತ್ತರಿಸಿತ್ತು, "ಅಮ್ಮಾ, ಅವನಮ್ಮ ನಿಂಗೆ ಎನೆಮಿ ಆದರೆ ಅವನ್ಯಾಕೆ ನಂಗೆ ಎನೆಮಿ ಆಗ್ತಾನಮ್ಮ? ಅವನು ನನ್ನ ಬೆಸ್ಟ್ ಫ್ರೆಂಡ್". ವಾಕಿಂಗಿಗೆ ಹೋಗುವ ಸಂದರ್ಭದಲ್ಲಿ ದಾರಿಯಲ್ಲಿ ಕೇಳಿ ಬಂದ ತಾಯಿ-ಮಗನ ಈ ಸಂಭಾಷಣೆ ನನಗೆ ಸಂಬಂಧಗಳ ಕುರಿತು, ಮನುಷ್ಯ ಸ್ವಭಾವದ ಕುರಿತು ಯೋಚಿಸುವಂತೆ ಮಾಡಿತ್ತು. ನಾವು ನಮ್ಮ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳುತ್ತೇವೆ, ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಮತ್ತು ನಮ್ಮ ಸಂಬಂಧಿಗಳ ಸಂತೋಷ ಅವಲಂಬಿಸಿರುತ್ತದೆ. ಸಂಬಂಧ ಉಳಿಸಿಕೊಂಡರೆ ಸಂತೋಷ, ಕಳೆದುಕೊಂಡರೆ ದುಃಖ ಸಹಜವಾಗಿ ಹಿಂಬಾಲಿಸುವ ಸಂಗತಿಗಳಾಗಿವೆ.
    ಅವರು ತಾವು ತಾವಾಗಿರುವುದಾದರೆ, ಒಬ್ಬರನ್ನು ಕಂಡು ಮತ್ತೊಬ್ಬರು ನಗದೆ ಜೊತೆಗೇ ನಕ್ಕರೆ, ಒಬ್ಬರಿಗಾಗಿ ಮತ್ತೊಬ್ಬರು ಅತ್ತರೆ, ಮತ್ತೊಬ್ಬರು ತಮ್ಮ ಕಾರಣದಿಂದ ಅಳುವಂತೆ ಆಗದಿದ್ದರೆ ಇಬ್ಬರ ನಡುವಿನ ಸಂಬಂಧಗಳು ಉತ್ತಮ ಪ್ರೀತಿಯ ಸಂಬಂಧಗಳಾಗಿರುತ್ತವೆ ಎನ್ನಬಹುದು. ಸಂಬಂಧಗಳು ಉತ್ತಮವಾಗಿರಬೇಕಾದರೆ ಒಬ್ಬರ ಸ್ವಾತಂತ್ರ್ಯವನ್ನು ಮತ್ತೊಬ್ಬರು ಗೌರವಿಸಬೇಕು. ಪ್ರೀತಿಸುತ್ತೇನೆ ಎಂಬ ಕಾರಣಕ್ಕಾಗಿ ಒಬ್ಬರು ತಾವು ಹೇಳಿದಂತೆ ಮತ್ತೊಬ್ಬರು ಕೇಳಬೇಕು ಎಂದು ಬಯಸುವುದು ಸಂಬಂಧಗಳಿಗೆ ಹಾನಿ ತರುತ್ತದೆ. ಇಂತಹ ಹಕ್ಕು ಸಾಧಿಸುವ (ಪೊಸೆಸಿವ್) ಗುಣ ಹೊಂದಿರುವವರು ತಾವು ಇಷ್ಟಪಡುವ ಜನರು ಅಥವ ವಸ್ತುಗಳನ್ನು ತಾನು ಪ್ರೀತಿಸುವವರೂ ಇಷ್ಟಪಡಬೇಕು, ತಾನು ದ್ವೇಷಿಸುವವರನ್ನು ಅವರೂ ದ್ವೇಷಿಸಬೇಕು ಎಂದು ಸಾಧಿಸುವುದನ್ನು ಕಾಣುತ್ತಿರುತ್ತೇವೆ. ಇಂತಹ ಅತಿ ಪ್ರೀತಿಯ ಕಾರಣದ ದ್ವೇಷವೂ ಸಂಬಂಧಗಳನ್ನು ಕೆಡಿಸುವುದರಲ್ಲಿ, ಸಂತೋಷ ಹಾಳು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 
     ಸಂಬಂಧಗಳ ತಾಳಿಕೆಗೆ ಇರುವ ದೊಡ್ಡ ಸಮಸ್ಯೆ ಎಂದರೆ ಏನನ್ನಾದರೂ ಪ್ರತಿಫಲವಾಗಿ ಬಯಸುವ ಕಾರಣದಿಂದ ಸಂಬಂಧಗಳನ್ನು ಹೊಂದುವುದು; ಬಯಸಿದುದು ಸಿಗದಿದ್ದರೆ ಅಥವ ಅದರಲ್ಲಿ ಕೊರತೆಯಾದರೆ ಸಂಬಂಧಕ್ಕೆ ಧಕ್ಕೆ ತಗಲಬಹುದು. ವಾಸ್ತವವಾಗಿ ಸಂಬಂಧ ಉಳಿಯಬೇಕೆಂದರೆ ಬಯಸುವುದಕ್ಕಿಂತ ಕೊಡುವುದಕ್ಕೆ ಆದ್ಯತೆ ಕೊಡಬೇಕು. ನಿರೀಕ್ಷಿಸುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿರುತ್ತದೆ. ನಾವು ಯಾವುದೋ ಒಂದು ಕೆಲಸವನ್ನು ಮಾಡಬೇಕೆಂದುಕೊಂಡಿದ್ದು, ಒಬ್ಬರೇ ಮಾಡಲಾಗದಿದ್ದಾಗ ಅದನ್ನು ಪೂರ್ಣಗೊಳಿಸಲು ಇನ್ನೊಬ್ಬರ ಸಹಾಯ ಪಡೆಯುತ್ತೇವೆ, ಬಯಸುತ್ತೇವೆ. ಆಗಲೂ ಆ ಕೆಲಸ ಪೂರ್ಣವಾಗದೆ ಉಳಿದರೆ ಅದಕ್ಕೆ ಅವರನ್ನು ದೂಷಿಸುತ್ತೇವೆ. ಬೇರೆ ಮತ್ತೊಬ್ಬರ ಸಹಾಯ ಪಡೆದೆವೆಂದು ಇಟ್ಟುಕೊಳ್ಳೋಣ. ಆಗಲೂ ನಮ್ಮ ಇಷ್ಟದಂತೆ ಪೂರ್ಣವಾಗಿ ಕೆಲಸ ಆಗದಿದ್ದರೆ? ಅವರನ್ನೂ ದೂಷಿಸುತ್ತೇವೆ. ಆ ಕೆಲಸ ಪರಿಪೂರ್ಣವಾಗಿ ಆಗದಿರುವುದಕ್ಕೆ ಮೂಲಕಾರಣ ನಾವೇ ಎಂಬ ಅರಿವು ಮೂಡುವಾಗ ವಿಳಂಬವಾಗಿಬಿಟ್ಟಿರುತ್ತದೆ. ಸಹಾಯಕರು, ಜೊತೆಗಾರರು ಯಾರೇ ಅಗಲಿ, ನಮ್ಮ ಕೆಲಸಕ್ಕೆ ಒತ್ತಾಸೆಯಾಗಬಹುದು, ಸಹಕರಿಸಬಹುದು. ಆದರೆ ಅದರ ಹೊಣೆ ನಮ್ಮದೇ ಎಂಬುದನ್ನು ಅರಿತಾಗ ಜೊತೆಗಾರರನ್ನು ದೂರುವ ಪ್ರವೃತ್ತಿ ದೂರವಾಗುತ್ತದೆ, ಸಂಬಂಧ ಉಳಿಯುತ್ತದೆ. ಎಲ್ಲಾ ರೀತಿಯ ಸಂಬಂಧಗಳು ಬೊಗಸೆಯಲ್ಲಿರುವ ಮರಳಿನಂತೆ! ತೆರೆದ ಕೈಗಳಲ್ಲಿ ಮರಳು ಇರುವಾಗ ಅದು ಹಾಗೆಯೇ ಇರುತ್ತದೆ. ಕೈಗಳನ್ನು ಮಡಿಸಿದಾಗ ಮತ್ತು ಮುಷ್ಟಿ ಬಿಗಿ ಹಿಡಿದಾಗ ಸ್ವಲ್ಪವೇ ಮರಳು ಉಳಿಯುವುದಾದರೂ, ಹೆಚ್ಚು ಭಾಗ ಚೆಲ್ಲಿ ಹೋಗುತ್ತದೆ. ಸಂಬಂಧಗಳೂ ಹಾಗೆಯೇ! ಹಗುರವಾಗಿದ್ದಾಗ, ಇನ್ನೊಬ್ಬರ ಸ್ವಾತಂತ್ರ್ಯ, ಅಭಿಪ್ರಾಯಗಳನ್ನು ಗೌರವಿಸಿದಾಗ ಸಂಬಂಧ ಬಾಳುತ್ತದೆ. ನಮ್ಮ ವಿಚಾರವನ್ನು ಅವರ ಮೇಲೆ ಹೇರಹೊರಟಾಗ, ಹಕ್ಕು ಸಾಧಿಸಲು ಪ್ರಯತ್ನಿಸಿದಾಗ ಸಂಬಂಧಗಳು ನಶಿಸುತ್ತವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಹಾಳಾಗುತ್ತವೆ.
     ಸೀತಾಮಾತೆಯನ್ನು ಹುಡುಕಿಹೊರಟ  ಹನುಮಂತ ಆಕೆಯನ್ನು ಅಶೋಕವನದಲ್ಲಿ ಗುರುತಿಸಿ ಶ್ರೀರಾಮ ಕೊಟ್ಟ ಚೂಡಾಮಣಿಯನ್ನು ಆಕೆಗೆ ತಲುಪಿಸಿ ಬರುತ್ತಾನೆ.  ನಂತರದಲ್ಲಿ ಶ್ರೀರಾಮನಿಗೆ ಅಲ್ಲಿನ ವಿಚಾರಗಳು, ಸೀತಾಮಾತೆಯ ಶೋಕ ಕುರಿತು ತಿಳಿಸುತ್ತಾನೆ. ಶ್ರೀ ರಾಮ ಹನುಮನನ್ನು ಆಲಂಗಿಸಿಕೊಂಡು ಹೇಳುತ್ತಾನೆ, "ಪ್ರಿಯ ಹನುಮಂತ, ನೀನು ನನಗೆ ಮಾಡಿದ ಈ ಉಪಕಾರವನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನೀನು ಮಾತ್ರ ಇದನ್ನು ಮರೆತುಬಿಡು. ಎಂದೂ ಈ ಉಪಕಾರಕ್ಕೆ ಪ್ರತ್ಯುಪಕಾರ ಬಯಸಬೇಡ. ನೀನು ಮಾಡಿದ ಉಪಕಾರ ಇಲ್ಲೇ ಜೀರ್ಣವಾಗಲಿ. ಏಕೆಂದರೆ, ಪ್ರತ್ಯುಪಕಾರವನ್ನು ಬಯಸುವ ವ್ಯಕ್ತಿ ತನಗರಿವಿಲ್ಲದಂತೆ ವಿಪತ್ತನ್ನೂ ಬಯಸುತ್ತಿರುತ್ತಾನೆ." ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳುವುದೂ ಇದನ್ನೇ, "ನಾವು  ಉಪಕಾರವನ್ನೋ ಅಥವಾ ದಾನವನ್ನೋ ಮಾಡುವುದಾದರೆ,  ಯಾರು ಅದಕ್ಕೆ ಪ್ರತಿಯಾಗಿ ಪ್ರತ್ಯುಪಕಾರ ಮಾಡಲು ಸಾಧ್ಯವಿಲ್ಲವೋ ಅಂತಹವರಿಗೆ ಮಾತ್ರ ಮಾಡಬೇಕು." ಇಂತಹ ಮನೋಭಾವ ಸಾಧ್ಯವಿರುವವರು ಮಹಾನುಭಾವರೇ ಸರಿ.
     ಒಂದು ವ್ಯಾವಹಾರಿಕವಾದ ಉದಾಹರಣೆಯನ್ನು ತೆಗೆದುಕೊಳ್ಳೋಣ. ನಿಮಗೆ ಏನೋ ಒಂದು ಕೆಲಸ ನನ್ನಿಂದ ಆಗಬೇಕಿರುತ್ತದೆ. ನನ್ನನ್ನು ನೀವು ಹೊಗಳುತ್ತೀರಿ, ಉಬ್ಬಿಸುತ್ತೀರಿ ಎಂದಿಟ್ಟುಕೊಳ್ಳಿ. ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ನನ್ನನ್ನು ಹೊಗಳುತ್ತಿದ್ದೀರೆಂದು ನಾನು ನಿಮ್ಮನ್ನು ನಂಬುವುದಿಲ್ಲ. ನನ್ನ ಕೆಲಸ ನೀನು ಮಾಡುವುದಿಲ್ಲ, ನೀನು ಸರಿಯಿಲ್ಲ ಎಂದು ನೀವು ದೂಷಿಸಿದರೆ ನಾನು ನಿಮ್ಮನ್ನು ಇಷ್ಟಪಡುವುದಿಲ್ಲ ಮತ್ತು ನಿಮ್ಮ ಕೆಲಸ ಮಾಡಿಕೊಡುವುದೂ ಇಲ್ಲ. ಕೆಲಸ ಹೇಗೂ ಮಾಡಿಕೊಡುವುದಿಲ್ಲವೆಂದು ನೀವು ನನ್ನನ್ನು ಅಲಕ್ಷಿಸಿದರೆ ನಿಮ್ಮನ್ನು ನಾನು ಕ್ಷಮಿಸುವುದಿಲ್ಲ. ಆದರೆ, ನೀವು ನನ್ನನ್ನು ಇಷ್ಟಪಡುವವರಾದರೆ, ನನ್ನನ್ನು ಪ್ರೀತಿಸುವುವರಾದರೆ ನಿಮ್ಮನ್ನು ನಾನೂ ಇಷ್ಟಪಡಬೇಕಾಗುತ್ತದೆ ಮತ್ತು ಕಷ್ಟವಾದರೂ ನಿಮ್ಮ ಕೆಲಸವನ್ನು ನಾನು ಮಾಡಿಕೊಡಬೇಕಾಗುತ್ತದೆ. ವ್ಯತ್ಯಾಸ ತಿಳಿಯಿತಲ್ಲವೇ? ಸಂಬಂಧಗಳನ್ನು ಬೆಸೆಯುವ, ಇಷ್ಟಾರ್ಥಗಳನ್ನು ಪೂರೈಸುವ ಸಂಗತಿ ಪ್ರೀತಿಯೇ ಹೊರತು ಮತ್ತಾವುದೂ ಅಲ್ಲ.
     ಸಾಮಾನ್ಯವಾಗಿ ಕಂಡುಬರುವ ಕಹಿಸತ್ಯ ಒಂದಿದೆ. ಅದೆಂದರೆ, ಯಾರು ಪ್ರೀತಿಸುತ್ತಾರೋ, ಯಾರು ಆತ್ಮೀಯರಾಗಿರುತ್ತಾರೋ ಅವರೇ ಹೆಚ್ಚು ನೋವು ಅನುಭವಿಸುವವರು! ಗೊತ್ತಿಲ್ಲದವರನ್ನು ಹೊಗಳುತ್ತಾರೆ, ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರೀತಿಪಾತ್ರರಿಗೇ ವಿವೇಕರಹಿತರಾಗಿ ಪೆಟ್ಟು ಕೊಡುತ್ತಾರೆ. ಸಂಬಂಧಗಳು ಉಳಿಯಬೇಕೆಂದರೆ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮನ್ನು ಇತರರು ಇಷ್ಟಪಡಬೇಕೆಂದರೆ ನಾವು ಅವರನ್ನು ಇಷ್ಟಪಡಬೇಕು. ಕ್ಷಮಿಸುವ ಗುಣವಿರಬೇಕು. ಒಳ್ಳೆಯವರೆನಿಸಿಕೊಳ್ಳಬೇಕೆಂದರೆ ಇತರರ ಒಳ್ಳೆಯತನವನ್ನು ಗುರುತಿಸುವ ಕೆಲಸ ಮಾಡಬೇಕು. ಒಳ್ಳೆಯ ಮಾತುಗಳನ್ನು ಕೇಳಬೇಕೆಂದರೆ ನಾವು ಒಳ್ಳೆಯ ಮಾತುಗಳನ್ನಾಡಬೇಕು. ಒಳ್ಳೆಯ ಮಾತುಗಳನ್ನು ಆಡುವುದು ಅಭ್ಯಾಸವಾಗಬೇಕು. ಕೆಟ್ಟ ಮಾತುಗಳನ್ನು ಆಡದಿರುವ ಸುಲಭ ಉಪಾಯವೆಂದರೆ ಮೌನವಾಗಿರುವುದು! ಮೌನವಾಗಿರುವುದಕ್ಕೆ ಖರ್ಚಿಲ್ಲ. ಬೇರೆಯವರು ನಮಗೆ ಏನು ಮಾಡಬಾರದೆಂದು ಬಯಸುತ್ತೇವೆಯೋ ಅದನ್ನು ಬೇರೆಯವರಿಗೆ ಮಾಡದಿರುವುದು! ಒಟ್ಟಿನಲ್ಲಿ ಹೇಳಬೇಕೆಂದರೆ, ಸಂಬಂಧಗಳನ್ನು ಸೃಷ್ಟಿಸುವ ಬ್ರಹ್ಮರು, ಉಳಿಸಿಕೊಳ್ಳುವ ವಿಷ್ಣುಗಳು ಮತ್ತು ಲಯಗೊಳಿಸುವ ಮಹೇಶ್ವರರು ನಾವೇನೇ! ನಾವೇ ಬ್ರಹ್ಮ, ವಿಷ್ಣು, ಮಹೇಶ್ವರರು!!
-ಕ.ವೆಂ. ನಾಗರಾಜ್.

ಗುರುವಾರ, ನವೆಂಬರ್ 9, 2017

ಪರಿಹಾರವಿಲ್ಲದ ಸಮಸ್ಯೆಗಳಿಲ್ಲ


     ಜೀವನದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ, ಕೆಲವು ಸಲ ಸೋಲುತ್ತೇವೆ, ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಹತಾಶರಾಗುತ್ತೇವೆ, ಕೈಚೆಲ್ಲುತ್ತೇವೆ, ಕೆಲವೊಮ್ಮೆ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೂ ಮನಸ್ಸು ಚಂಚಲವಾಗುತ್ತದೆ. ಆದರೆ, ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಉತ್ತಮವಾದ ರೀತಿ. ಸವಾಲುಗಳನ್ನು ಎದುರಿಸುವುದೇ ಜೀವನ, ಸವಾಲುಗಳಿಲ್ಲದ ಜೀವನ ಜೀವನವೇ ಅಲ್ಲ. ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಗಳಿಸಿಕೊಳ್ಳುವುದು ಸುಲಭವಲ್ಲವಾದರೂ ಅಸಾಧ್ಯವೇನಲ್ಲ. ಇದಕ್ಕೆ ಅನುಕೂಲವಾಗುವ ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಾವು ಅನುಸರಿಸಬಹುದಾದ ಮಾರ್ಗ ನಮಗೇ ತಿಳಿಯುತ್ತಾ ಹೋಗಬಹುದು.
೧. ಸವಾಲುಗಳಿಂದ ದೂರ ಹೋಗದಿರುವುದು: 
     ಯಾವುದಾದರೂ ಸಮಸ್ಯೆ ಎದುರಾದರೆ ಅದನ್ನು ಎದುರಿಸದೆ ದೂರವಿದ್ದಷ್ಟೂ ಸಮಸ್ಯೆ ದೊಡ್ಡದಾಗುತ್ತಾ ಹೋಗುತ್ತದೆ. ಉದಾಹರಣೆಗೆ, ಕಾನೂನು-ಸುವ್ಯವಸ್ಥೆ ಸಮಸ್ಯೆ, ಶಾಂತಿಭಂಗದ ಸಮಸ್ಯೆಗಳು ಉದ್ಭವಿಸಿದಾಗ ಅಧಿಕಾರಿಗಳು ಕೊಠಡಿಯಲ್ಲಿ ಕುಳಿತು ಸಂಬಂಧಿಸಿದವರಿಗೆ ದೂರವಾಣಿ ಮೂಲಕ ಸಲಹೆ, ಸೂಚನೆಗಳನ್ನು ಕೊಡುವುದರ ಬದಲು, ಅವರೇ ಸ್ವತಃ ಸ್ಥಳಕ್ಕೆ ಹೋಗಿ ಪರಿಶೀಲಿಸುವುದರಿಂದ ಕಾರ್ಯನಿರತ ಸಿಬ್ಬಂದಿಗೆ ಹೆಚ್ಚು ನೈತಿಕ ಬೆಂಬಲ ಸಿಗುತ್ತದೆ ಮತ್ತು ಪರಿಸ್ಥಿತಿ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ. ಅರ್ಧ ಸಮಸ್ಯೆ ಸ್ಥಳದಲ್ಲೇ ಬಗೆ ಹರಿಯುತ್ತದೆ. ಇದೇ ನೀತಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೂ ಅನ್ವಯವಾಗುತ್ತದೆ. ಹೆದರಿದರೆ ಹೆದರಿಸುವವರು ಮತ್ತಷ್ಟು ಹೆದರಿಸುತ್ತಾರೆ. ತಿರುಗಿ ನಿಂತರೆ? ಸಮಸ್ಯೆಯ ಪ್ರಮಾಣ ಖಂಡಿತ ಕುಗ್ಗುತ್ತದೆ. ಒಂದು ನಾಯಿಯೋ, ಕೋತಿಯೋ ರಸ್ತೆಯಲ್ಲಿ ಹೋಗುತ್ತಿರುವಾಗ ಅಟ್ಟಿಸಿಕೊಂಡು ಬಂದಿತೆಂದು ಓಡಿದರೆ ಅವು ಮತ್ತಷ್ಟು ಆರ್ಭಟ ಮಾಡುತ್ತಾ ಬೆನ್ನು ಹತ್ತುತ್ತವೆ. ತಿರುಗಿ ನಿಂತು ಕೆಳಗೆ ಬಗ್ಗಿ ಕಲ್ಲು ಆರಿಸಿಕೊಂಡರೆ ಅಥವ ಆರಿಸಿಕೊಂಡಂತೆ ಮಾಡಿದರೆ ಗಕ್ಕನೆ ನಿಂತು ಬಾಲ ಮುದುರಿ ಹಿಂತಿರುಗುತ್ತವೆ.
೨. ಸಮಸ್ಯೆಯ ಮೂಲ ತಿಳಿಯುವುದು: 
     ಪ್ರತಿಯೊಂದು ಸಮಸ್ಯೆಗೂ ಕಾರಣಗಳು ಇರುತ್ತವೆ. ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಿಂತ ಸಮಸ್ಯೆಗೆ ಮೂಲ ಕಾರಣ ತಿಳಿದು ಅದನ್ನು ನಿವಾರಿಸಿಕೊಳ್ಳುವುದು ಉತ್ತಮ. ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾದರೆ, ತೇಪೆ ಹಾಕುವುದಕ್ಕಿಂತ ಅದಕ್ಕೆ ಕಾರಣವಾದ ಅಂಶ -ಅದು ಮತ್ಸರವೋ, ಮೇಲರಿಮೆಯೋ ಅಥವ ಹಣಕಾಸಿನ ವ್ಯವಹಾರವೋ ಮತ್ತೊಂದೋ- ಗಮನಿಸದಿದ್ದರೆ ಕಂಟಕ ಬರದೇ ಇರುವುದಿಲ್ಲ.
೩. ಧನಾತ್ಮಕ ಮನೋಭಾವ ಹೊಂದುವುದು: 
     ನಾವು ಸಾಮಾನ್ಯವಾಗಿ ಋಣಾತ್ಮಕ ನಿಲುವಿನಿಂದ ನರಳುತ್ತೇವೆ. ನಮಗೆ ಆಗದವರಿರಬಹುದು, ಪರಿಚಯವಿರದವರು ಇರಬಹುದು ಅಂತಹವರ ಬಗ್ಗೆ ನಮಗೆ ಸಕಾರಾತ್ಮಕ ನಿಲುವು ಹೊಂದದಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರಪಂಚವನ್ನು, ಸುತ್ತಮುತ್ತಲಿನವರನ್ನು ಒಳ್ಳೆಯ ಭಾವನೆಯಿಂದ ನೋಡುವುದನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಸಮಸ್ಯೆಯ ಮೂಲವೇ ನಿವಾರಣೆಯಾಗುತ್ತದೆ.
೪. ಹಿಂದಿನ ಯಶಸ್ಸಿನ ಸಂಗತಿಗಳನ್ನು ನೆನಪಿಸಿಕೊಳ್ಳುವುದು: 
     ಹಿಂದಿನ ಕೆಲವು ಘಟನೆಗಳ ಸಂದರ್ಭದಲ್ಲಿ ನಂಬಿಕೆ ಕಳೆದುಕೊಂಡು ಹತಾಶರಾಗಿದ್ದ ಸಂದರ್ಭದಲ್ಲೂ ಅನಿವಾರ್ಯವಾಗಿ ಅದನ್ನು ಎದುರಿಸ ಬೇಕಾಗಿ ಬಂದು ಯಶಸ್ವಿಯಾಗಿದ್ದುದನ್ನು ನೆನಪಿಸಿಕೊಂಡರೆ ಭರವಸೆ ಮೂಡುತ್ತದೆ. ನಿಮ್ಮ ಕೈಗಳು ತಂತಾನೇ ಮುಷ್ಟಿ ಬಿಗಿ ಹಿಡಿಯುತ್ತವೆ ಮತ್ತು ನಿಮ್ಮ ಮನಸ್ಸು ಎದುರಾದ ಸಮಸ್ಯೆಯನ್ನು ಎದುರಿಸಲು ಸಜ್ಜಾಗುತ್ತದೆ.
೫. ಇನ್ನೊಬ್ಬರ ಸ್ಥಾನದಲ್ಲಿ ನಿಲ್ಲುವುದು: 
     ನಮಗೆ ಬಂದಂತಹ ಸಮಸ್ಯೆ ನಾವು ಮೆಚ್ಚುವಂತಹ ವ್ಯಕ್ತಿಗೆ ಬಂದಿದ್ದರೆ ಆತ ಹೇಗೆ ಪ್ರತಿಕ್ರಿಯಿಸುತ್ತಿದ್ದ, ಹೇಗೆ ಎದುರಿಸುತ್ತಿದ್ದ ಎಂಬುದನ್ನು ಕಲ್ಪಿಸಿಕೊಂಡರೆ ನಮಗೆ ಅದೇ ರೀತಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಇಂತಹುದೇ ಸಮಸ್ಯೆ ಇನ್ನು ಬೇರೆ ಯಾರಿಗಾದರೂ ಬಂದಿದ್ದು, ಅವರು ಅದನ್ನು ಹೇಗೆ ನಿಭಯಿಸಿದರು ಎಂಬುದನ್ನು ತಿಳಿದರೂ ನಮಗೆ ಹೊರಬರುವ ದಾರಿ ಕಾಣಿಸುತ್ತದೆ.
೬. ಎದೆ ಎತ್ತಿ ನಿಲ್ಲುವುದು: 
     ಸಮಸ್ಯೆ ಬಂದಿತೆಂದು ಕುಗ್ಗಿದರೆ ಮಾನಸಿಕವಾಗಿಯೂ ನಾವು ಬಲ ಕಳೆದುಕೊಳ್ಳುತ್ತೇವೆ. ಏನೂ ನಡೆದೇ ಇಲ್ಲವೇನೋ ಎಂಬಂತೆ ಅಥವ ಸಮಸ್ಯೆಯಿಂದ ನಾವು ಹೆದರಿಲ್ಲ ಎಂಬ ಭಾವನೆಯನ್ನು ಹೊರಗೆ ತೋರಿಸಿಕೊಂಡು ಎದೆ ಎತ್ತಿ ನಡೆದರೆ ನಮ್ಮ ಮನಸ್ಸೂ ಅದರಿಂದ ಮತ್ತಷ್ಟು ಬಲ ಗಳಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ, ಸಮಸ್ಯೆ ಎದುರಿಸುವುದು ಕಷ್ಟವೆನಿಸುವುದಿಲ್ಲ.
೭. ಆತ್ಮವಿಶ್ವಾಸದ ಭಾಷೆ ಬಳಸುವುದು: 
     ಅಯ್ಯೋ, ನನ್ನ ಆರೋಗ್ಯವೇ ಸರಿಯಿಲ್ಲ. ಏನು ಮಾಡಲೂ ಆಗುವುದಿಲ್ಲ ಎಂಬರ್ಥದ ಮಾತನಾಡುವವರನ್ನು ಗಮನಿಸಿದರೆ ಅವರು ನಿಶ್ಶಕ್ತಿಯಿಂದ ನಿಧಾನವಾಗಿ ನಡೆದಾಡುತ್ತಾರೆ, ಯಾವ ಕೆಲಸದಲ್ಲೂ ಉತ್ಸಾಹಿಗಳಾಗಿರುವುದಿಲ್ಲ. ಅದೇ ವ್ಯಕ್ತಿಯನ್ನು ಇನ್ನೊಂದು ಸಂದರ್ಭದಲ್ಲಿ, ನಿಮಗೆ ವಯಸ್ಸಾಗಿರುವುದೇ ಗೊತ್ತಾಗುವುದಿಲ್ಲ. ನಿಮ್ಮ ವಯಸ್ಸಿನವರು ಬೇರೆಯವರು ಮೂಲೆ ಹಿಡಿದಿರುತ್ತಾರೆ. ನೀವು ಚಟುವಟಿಕೆಯಿಂದ ಇದ್ದೀರಿ ಎಂದರೆ ಅವರಿಗೆ ಖುಷಿಯಾಗುತ್ತದೆ, ಎದೆ ಎತ್ತರಿಸುತ್ತಾರೆ, ಚಟುವಟಿಕೆಯಿಂದ ಹೆಜ್ಜೆ ಹಾಕುತ್ತಾರೆ. ಸಮಸ್ಯೆಯ ವಿಷಯವೂ ಹಾಗೆಯೇ. ನನ್ನ ಕೈಲಿ ಆಗದು ಎಂಬರ್ಥದಲ್ಲಿ ನಿರುತ್ಸಾಹದ ಮಾತುಗಳನ್ನಾಡದೆ, ಎಷ್ಟೋ ಸಮಸ್ಯೆಗಳಿದ್ದವು, ಬಗೆಹರಿದಿಲ್ಲವೇ, ಇದೇನು ಮಹಾ ಎಂಬ ರೀತಿಯಲ್ಲಿ ಮಾತುಗಳಿದ್ದರೆ ಸಮಸ್ಯೆಯೇ ಹೆದರದಿದ್ದೀತೆ? ಸಮಸ್ಯೆ ಬಂದಾಗ, ಇದರಿಂದ ಪಾರಾಗುವುದು ಹೇಗಪ್ಪಾ? ಎಂದು ಯೋಚಿಸದೆ, ನನ್ನಲ್ಲಿ ಏನು ತಪ್ಪಾಯಿತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರ ಹೊಳೆಯುತ್ತದೆ.
೮. ಕಾರ್ಯಯೋಜನೆ ಹಾಕಿಕೊಳ್ಳುವುದು: 
     ಯಾವುದಾದರೂ ವಿಷಯದ ಕುರಿತು ಮಾತನಾಡಿದರೆ, ಅದು ಕನಸು! ಅದನ್ನು ಸಾಕಾರಗೊಳಿಸಲು ನಿರ್ಧರಿಸಿದರೆ, ಅದು ಸಾಧ್ಯ! ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರೆ, ಅದು ವಾಸ್ತವ! ಸಮಸ್ಯೆ ಬಂದಾಗ ಅದನ್ನು ಎದುರಿಸುವ ರೀತಿ ಕುರಿತು ಚಿಂತಿಸಿ ಕಾರ್ಯಯೋಜನೆ ಹಾಕಿಕೊಂಡು ಮುಂದುವರೆದರೆ ಸಮಸ್ಯೆಗೆ ಉಳಿಗಾಲ ಇರದು.
೯. ಧ್ಯಾನ ಮಾಡುವುದು, ಪ್ರಕೃತಿಯೊಂದಿಗೆ ಇರುವುದು: 
     ಸಂಶೋಧನೆಗಳು ಧ್ಯಾನದಲ್ಲಿರುವವರ ಮೆದುಳಿನ ಭಾಗಗಳು ಧ್ಯಾನ ಮಾಡದವರಿಗಿಂತ ಹೆಚ್ಚು ಕ್ರಿಯಾಶೀಲವಾಗಿರುತ್ತವೆಯೆಂದು ಧೃಡಪಡಿಸಿವೆ. ದಿನದಲ್ಲಿ ೧೦ ನಿಮಿಷಗಳಾದರೂ ಧ್ಯಾನ ಮಾಡುವುದರಿಂದ, ಮೌನವಾಗಿ ಕುಳಿತುಕೊಳ್ಳುವುದರಿಂದ ಮನಸ್ಸಿನ ಕೇಂದ್ರೀಕರಣಕ್ಕೆ ಸಹಾಯವಾಗುತ್ತದೆ, ಪರಿಹಾರ ಕಾಣಲು ಮನಸ್ಸು ಸಶಕ್ತವಾಗುತ್ತದೆ. ವ್ಯಾಯಾಮ, ಯೋಗಾಸನಗಳೂ ಹಿತಕಾರಿ. ಗಿಡ-ಮರಗಳು, ಪ್ರಕೃತಿಯ ಸೌಂದರ್ಯ ಅನುಭವಿಸುತ್ತಾ ಕುಳಿತುಕೊಳ್ಳುವುದರಿಂದಲೂ ಮನಸ್ಸು ಹಗುರಗೊಳ್ಳುತ್ತದೆ. ಸಂದರ್ಭದ ಶಿಶುವಾಗುವ ಬದಲಿಗೆ ನಮ್ಮಂತೆ ನಾವಾಗುವ ಪ್ರೇರಣೆ ಸಿಗುತ್ತದೆ. ನಿಯಮಿತ ಅಭ್ಯಾಸಗಳು ಬಲ ಕೊಡುತ್ತವೆ.
೧೦. ಸೂಕ್ತ ಆಹಾರ ಸೇವನೆ: 
     ನಾವು ಸೇವಿಸುವ ಆಹಾರವೂ ಸವಾಲುಗಳನ್ನು ಎದುರಿಸಲು ಸಹಕಾರಿ. ಆಹಾರವೆಂದರೆ ನಮ್ಮ ಮೇಲೆ ಪರಿಣಾಮ ಬೀರುವ ತಿನ್ನುವುದು, ನೋಡುವುದು, ಕೇಳುವುದು ಸಹ ಒಳಗೊಳ್ಳುತ್ತದೆ. ಮಾದಕ ಪದಾರ್ಥಗಳು, ಹಳಸಿದ ಮತ್ತು ತಂಗಳು ಆಹಾರ ಸೇವನೆ ಮೆದುಳನ್ನು ದುರ್ಬಲಗೊಳಿಸುತ್ತದೆ. ನಮ್ಮನ್ನು ಹುರಿದುಂಬಿಸುವ ಸಂಗತಿಗಳನ್ನೇ ನೋಡುವುದು, ಕೇಳುವುದು, ಓದುವುದು, ಶಕ್ತಿದಾಯಕ ಆಹಾರ ಸೇವಿಸುವುದು ಮಾಡಿದರೆ ನಾವು ಧೃಡಗೊಳ್ಳುತ್ತೇವೆ.
೧೧. ಕೌಟುಂಬಿಕ ಸಮಸ್ಯೆಗಳು: 
     ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿ ನಂಬಿಕೆಯ ಕೊರತೆ, ಅಭದ್ರತೆಯ ಭಾವನೆ, ಮತ್ಸರ ಇತ್ಯಾದಿಗಳಿಂದ ಉದ್ಭವಿಸುತ್ತವೆ. ಸಂಬಂಧಿಸಿದವರು ಪರಸ್ಪರ ಮುಖಾಮುಖಿ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ ಮಾರ್ಗ. ಸಾಧ್ಯವಾಗದಾದಾಗ ಸಂಬಂಧಿಸಿದವರಿಗೆ ಒಪ್ಪಿತವಾಗುವ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಬಹುದು. ಕೌಟುಂಬಿಕ ಆಪ್ತ ಸಮಾಲೋಚನಾ ಕೇಂದ್ರಗಳ ನೆರವೂ ಪಡೆಯಬಹುದು. ಆಪ್ತ ಸಮಾಲೋಚನೆ ಮಾನಸಿಕ ರೋಗಿಗಳಿಗೆ ಮಾತ್ರ ಎಂಬ ಭಾವನೆ ಕೆಲವು ಶಿಕ್ಷಿತರಲ್ಲೂ ಕಂಡುಬರುತ್ತದೆ. ಅವರ ದೃಷ್ಟಿಯಲ್ಲಿ ತಾವೇ ಸರಿ, ತಮ್ಮದೇ ಸರಿ ಎಂಬ ಭಾವವಿರುತ್ತದೆ. ಅಂತಹ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರಾದರೂ ಸಮಾಲೋಚಕರ ಸಲಹೆಯಂತೆ ಮುಂದುವರೆಯುವುದು ಸೂಕ್ತ. ಋಣಾತ್ಮಕ(ನೆಗೆಟಿವಿಟಿ) ಭಾವಕ್ಕೆ  ಒತ್ತು ಕೊಡದೆ ಧನಾತ್ಮಕ(ಪಾಸಿಟಿವ್) ಅಂಶಗಳಿಗೆ ಒತ್ತು ಕೊಡುವುದು ಇಂತಹ ಸನ್ನಿವೇಶಗಳಲ್ಲಿ ಅತ್ಯಂತ ಅಗತ್ಯದ ಸಂಗತಿ.
     ಒಟ್ಟಾರೆಯಾಗಿ ಹೇಳಬೇಕೆಂದರೆ, ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ಅಸಾಧ್ಯ ಎಂಬುದೂ ಇಲ್ಲ. ಎಲ್ಲವೂ ನಮ್ಮ ಮನಸ್ಥಿತಿ ಮತ್ತು ಎದುರಿಸುವ ರೀತಿಯನ್ನು ಅವಲಂಬಿಸಿದೆ.
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 7, 2017

ತಾವರೆ ಎಲೆಯ ಮೇಲಿನ ನೀರು


ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ|
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ||
     ಈ ಜಗತ್ತಿನಲ್ಲಿ ನಡೆಯುವ ಜೀವನ ನಾಟಕಗಳು ಒಂದಕ್ಕಿಂತ ಒಂದು ಭಿನ್ನ, ರಮ್ಯ. ನವರಸಗಳೂ ತುಂಬಿ ತುಳುಕುವ ಈ ನಾಟಕದಲ್ಲಿ ಪ್ರತಿಯೊಬ್ಬರೂ ಪಾತ್ರಧಾರಿಗಳೇ. ವಿಶೇಷವೆಂದರೆ ಯಾರೊಬ್ಬರಿಗೂ ಇದು ನಾಟಕ ಎಂದು ಅನ್ನಿಸುವುದೇ ಇಲ್ಲ. ಪಾತ್ರವೇ ತಾವೆಂದು ತನ್ಮಯರಾಗಿ ನಟಿಸುವಾಗ ಉಸಿರು ನಿಲ್ಲುವವರೆಗೂ ನಾಟಕದಲ್ಲಿ ತಮ್ಮ ಪಾತ್ರ ಒಂದೊಮ್ಮೆ ಮುಕ್ತಾಯವಾಗುತ್ತದೆ ಎಂದು ಭಾವಿಸುವುದೇ ಇಲ್ಲ. ನಾಟಕದಲ್ಲಿನ ತಮ್ಮ ಪಾತ್ರ ಒಂದೊಮ್ಮೆ ಮುಗಿಯುತ್ತದೆ ಎಂದು ಮುಂಚೆಯೇ ಗೊತ್ತಿದ್ದರೆ, ಪಾತ್ರದ ಅಭಿನಯದಲ್ಲಿ ಮತ್ತಷ್ಟು ಜೀವಕಳೆ ತುಂಬುತ್ತಿದ್ದರೇನೋ! ಇದು ನಾಟಕ, ನಾವು ಪಾತ್ರಧಾರಿಗಳು ಎಂದು ಗೊತ್ತಾದರೆ ಪಾತ್ರ ಅನುಭವಿಸುವ ಕಷ್ಟ-ನಷ್ಟಗಳನ್ನು ಸಹಿಸಿಕೊಳ್ಳಲು ಅವಕಾಶವಾಗುತ್ತಿತ್ತು. ಭಗವದ್ಗೀತೆಯ ಒಂದು ಶ್ಲೋಕದಲ್ಲಿ (೫.೧೦) ನಿರ್ಲಿಪ್ತ ಭಾವದಿಂದ, ಫಲ ನಿರಪೇಕ್ಷೆಯಿಂದ ಕರ್ಮಗಳನ್ನು ಮಾಡುವವರಿಗೆ ತಾವರೆಯ ಎಲೆಯ ಮೇಲೆ ನೀರು ತನ್ನ ಇರುವನ್ನು ತೋರಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ, ಅವರಿಗೆ ಪಾಪಗಳು, ಕಷ್ಟಗಳು ತೊಂದರೆ ಕೊಡಲಾರವು ಎಂದು ಹೇಳಿದೆ. ಒಂದೆರಡು ಪ್ರಸಂಗಗಳನ್ನು ಗಮನಿಸೋಣ.
ಪ್ರಸಂಗ ೧:
     ಅದೊಂದು ಸಂತೃಪ್ತ, ಶ್ರೀಮಂತ ಕುಟುಂಬವಾಗಿತ್ತು. ಗಂಡ, ಹೆಂಡತಿ ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳು. ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವರು ಅನ್ನುವ ಹಾಗೆ ಬೆಳೆದ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದರು. ಮಕ್ಕಳಿಬ್ಬರಿಗೂ ಮುಂದೆ ಅಮೆರಿಕಾದಲ್ಲಿ ಒಳ್ಳೆಯ ಕೆಲಸಗಳೂ ಸಿಕ್ಕಿದವು. ಮದುವೆಯೂ ಆಗಿ ಅಲ್ಲಿಯೇ ನೆಲೆಸಿದರು. ಮಕ್ಕಳು ಆಗಾಗ್ಯೆ ಬಂದು ಹೋಗಿ ಮಾಡುತ್ತಿದ್ದರು. ಬರುಬರುತ್ತಾ ಬಂದು ಹೋಗುವುದು ಕಡಿಮೆಯಾಗುತ್ತಾ ಹೋಯಿತು. ಕೆಲವು ವರ್ಷಗಳಲ್ಲಿ ತಂದೆ ತೀರಿಹೋದರು. ತಾಯಿ ಒಂಟಿಯಾದರು. ಯಾವ ಕಾರಣಕ್ಕೋ ಏನೋ, ಒಂಟಿ ತಾಯಿಯನ್ನು ತಮ್ಮೊಂದಿಗೆ ಮಕ್ಕಳು ಕರೆದುಕೊಂಡು ಹೋಗಲು ಮನಸ್ಸು ಮಾಡಲಿಲ್ಲ. ಅಡಿಗೆಯವರು, ಕೆಲಸದವರುಗಳು ಇದ್ದರೂ ತಮ್ಮವರು ಎಂಬುವವರಿಲ್ಲದ ಬಾಧೆ ಅವರನ್ನು ಕಾಡುತ್ತಿತ್ತು. ಮಕ್ಕಳೂ ಹಣ ಕಳಿಸುತ್ತಿದ್ದು, ದೂರದಿಂದಲೇ ಮಾತನಾಡುತ್ತಿದ್ದರೂ ಒಂಟಿತನದಿಂದ ಕೊರಗುತ್ತಿದ್ದ ಆ ತಾಯಿ ಮಕ್ಕಳ ಸಲಹೆಯಂತೆ ವೃದ್ಧಾಶ್ರಮಕ್ಕೆ ಸೇರಿಕೊಂಡರು. ತಾವಿದ್ದ ವೃದ್ಧಾಶ್ರಮಕ್ಕೂ ಅವರು ಲಕ್ಷ, ಲಕ್ಷ ಹಣ ದಾನ ಮಾಡಿದ್ದರು. ಉದಾಸ ಭಾವದಿಂದ ಸೂರು ದಿಟ್ಟಿಸುತ್ತಾ ಕುಳಿತಿರುತ್ತಿದ್ದ ಅವರು ಮುಂದೊಮ್ಮೆ ಅನಾರೋಗ್ಯದಿಂದ ಕಾಲವಶರಾದಾಗ ಅವರ ಮಕ್ಕಳು ಅವರ ಜೊತೆಯಲ್ಲಿರಲಿಲ್ಲ. ಇಲ್ಲಿ ಯಾರದು ತಪ್ಪು ಎಂಬ ವಿಶ್ಲೇಷಣೆಗಿಂತ ಎಲ್ಲಿ ತಪ್ಪಾಗಿದೆ ಎಂಬುದು ಗಮನಿಸಬೇಕಾಗಿದೆ. ನೈತಿಕ ಮೌಲ್ಯಗಳನ್ನು ಬೋಧಿಸದ ಶಿಕ್ಷಣ ಪದ್ಧತಿ, ಸಂಸ್ಕಾರಗಳಿಗೆ ಮಹತ್ವ ಕೊಡದ ಕುಟುಂಬಗಳಿಂದಾಗಿ ಸಂಬಂಧಗಳ ಮಹತ್ವ ಕ್ಷೀಣವಾಗಿ ಇಂತಹ ಮತ್ತು ಇದಕ್ಕಿಂತ ದುರಂತ ಸ್ಥಿತಿಯಲ್ಲಿರುವ ಕುಟುಂಬಗಳು ಕಂಡು ಬರುತ್ತವೆ.
ಪ್ರಸಂಗ ೨:
     ಒಬ್ಬರು ಸಂತರನ್ನು ಒಮ್ಮೆ ಗೃಹಸ್ಥರೊಬ್ಬರು ತಮ್ಮ ಮನೆಗೆ ಆಹ್ವಾನಿಸಿದ್ದರು. ಆ ಕುಟುಂಬದವರೆಲ್ಲರೂ ಆ ಸಂತರ ಶಿಷ್ಯರು, ಅಭಿಮಾನಿಗಳು. ಆ ಮನೆಯಲ್ಲಿದ್ದ ಸುಮಾರು ೯೦-೯೨ರ ವಯಸ್ಸಿನ ವೃದ್ಧೆಯೊಬ್ಬರು ಸಂತರಿಗೆ ನಮಸ್ಕರಿಸಿ, ಪೂಜ್ಯರೇ, ನನಗೆ ಇನ್ನೇನೂ ಆಸೆಯಿಲ್ಲ. ನಿಮ್ಮ ಪಾದದ ಬಳಿಯಲ್ಲಿ ತಲೆಯಿಟ್ಟು ಪ್ರಾಣ ಬಿಡಬೇಕೆಂಬ ಆಸೆಯಿದೆ ಎಂದು ಹೇಳಿದಾಗ, ಆ ಸಂತರು ಕೂಡಲೇ ಸರಿಯಾಗಿ ಕುಳಿತುಕೊಂಡು, ಹಾಗೆಯೇ ಮಾಡಿ ಎಂದುಬಿಟ್ಟರು. ಗಾಬರಿಯಾದ ವೃದ್ಧೆ, ಅಯ್ಯೋ ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗನ ಮದುವೆ ನೋಡಬೇಕು. ಅವನ ಮಗುವನ್ನು ಎತ್ತಿ ಆಡಿಸಬೇಕು. ಆನಂತರ . .  ಎಂದು ರಾಗ ಎಳೆದರು. ಆಹಾ, ಮಾಯಾಮೋಹಿನಿಯ ಆಟವೇ ಆಟ! ಎಷ್ಟೇ ವಯಸ್ಸಾದರೂ ಮೋಹದ ಬಂಧ ಸಡಿಲಾಗುವುದೇ ಇಲ್ಲವಲ್ಲಾ!
ಪ್ರಸಂಗ ೩:
     ವೃದ್ಧ ವ್ಯಾಪಾರಿಯೊಬ್ಬ ಮರಣಶಯ್ಯೆಯಲ್ಲಿದ್ದು ಇನ್ನೇನು ಕೊನೆಯುಸಿರು ಎಳೆಯುತ್ತಾನೆ ಎಂಬ ಸ್ಥಿತಿಗೆ ತಲುಪಿದಾಗ, ಆತನ ಮಕ್ಕಳೆಲ್ಲರಿಗೂ ಬರಲು ಹೇಳಿಕಳುಹಿಸಿದರು. ಎಲ್ಲರೂ ಮನೆಗೆ ಧಾವಿಸಿ ಬಂದರು. ಹಿರಿಯ ಮಗನನ್ನು ಕಂಡ ಆ ವೃದ್ಧರು ಆತನಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಬಾಯಿಯಿಂದ ಸ್ವರ ಹೊರಡುತ್ತಿರಲಿಲ್ಲ. ಬಹಳ ಪ್ರಯತ್ನದ ನಂತರ ಕ್ಷೀಣವಾಗಿ ಹೇಳಿದ್ದೇನೆಂದರೆ, ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ? ಎಂದು! ಇಷ್ಟು ಹೇಳಿ ಅವರು ತಲೆ ವಾಲಿಸಿಬಿಟ್ಟರು. ಲೋಭದ ಅತ್ಯುನ್ನತ ಸ್ಥಿತಿ ಇದು. ಅವರಿಗೆ ಸಾಯುವ ಸಮಯದಲ್ಲಿಯೂ ಸಾಕು ಎಂಬ ಭಾವ ಬರಲೇ ಇಲ್ಲ.
     ಮೊದಲ ಪ್ರಸಂಗದಲ್ಲಿ ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಮತ್ತು ಸುಯೋಗ್ಯ ಸಂಸ್ಕಾರದ ಕೊರತೆ ಆ ಸ್ಥಿತಿಗೆ ಕಾರಣವಾಗಿದ್ದರೂ, ಮಕ್ಕಳನ್ನು ಸಾಕಿ ಸಲುಹಿದ್ದಕ್ಕೆ ಪ್ರತಿಯಾಗಿ ಮಕ್ಕಳು ತಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳಬೇಕೆಂಬ ನಿರೀಕ್ಷೆಯೇ ಆ ತಾಯಿಯನ್ನು ನೋವಾಗಿ ಕಾಡಿದ್ದುದು. ಅಂತಹ ನಿರೀಕ್ಷೆ ಇಟ್ಟುಕೊಂಡಿರದಿದ್ದಲ್ಲಿ ಬಹುಷಃ ದುಃಖದ ಪ್ರಮಾಣ ಕಡಿಮೆಯಿರುತ್ತಿತ್ತೇನೋ! ಇಂದಿನ ದಿನಮಾನಗಳಲ್ಲಿ ಮಕ್ಕಳನ್ನು ಬೆಳೆಸುವುದು ಕರ್ತವ್ಯ ಎಂಬ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ, ಪ್ರತಿಯಾಗಿ ಅವರು ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳದಿರುವುದು ಒಳಿತು. ಈ ಭಾವ ಬರಬೇಕೆಂದರೆ ಅಂಟಿಯೂ ಅಂಟದಂತೆ, ತಾವರೆ ಎಲೆಯ ಮೇಲಿನ ನೀರಿನಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಎರಡನೆಯ ಪ್ರಸಂಗದಲ್ಲಿ, ಒಟ್ಟು ಕುಟುಂಬದ ಹಿರಿಯರು ಇಳಿವಯಸ್ಸಿನ ಸಂದರ್ಭದಲ್ಲಿ ಕೌಟುಂಬಿಕ ಮೋಹಗಳನ್ನು ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯ ತೋರಿಸುತ್ತದೆ. ವಯೋಸಹಜ ಭಾವನೆಗೂ, ವಾಸ್ತವತೆಗೂ ಇರುವ ಅಂತರವನ್ನು ಆ ವೃದ್ಧೆಯ ಮಾತುಗಳೇ ಬಿಂಬಿಸುತ್ತವೆ. ಇನ್ನು ಮೂರನೆಯ ಪ್ರಸಂಗದಲ್ಲಿ ವಯಸ್ಸಾದಂತೆ ಪಕ್ವಗೊಳ್ಳಬೇಕಾಗಿದ್ದ ಮನಸ್ಸು ಲೋಭದ ಕಾರಣದಿಂದಾಗಿ ಕುಬ್ಜವಾಗಿಯೇ ಉಳಿದಿರುವುದರ ಸಂಕೇತ.
     ಮಾನವನ ಆರು ವೈರಿಗಳೆಂದೇ ಕರೆಯಲ್ಪಡುವ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳ ಹಿತವಾದ ಒಡನಾಟವಿದ್ದರೆ ಬದುಕು ಹಿತವಾಗಿರುತ್ತದೆ. ಯಾವುದಾದರೂ ಅತಿಯಾದರೆ ಹಾನಿ ಕಟ್ಟಿಟ್ಟ ಬುತ್ತಿ. ಇದಕ್ಕೆ ನಿದರ್ಶನವಾಗಿ ಹೇರಳವಾದ ಉದಾಹರಣೆಗಳು ಸಿಗುತ್ತವೆ ಮತ್ತು ಅವು ಪ್ರತ್ಯಕ್ಷವಾಗಿ ನಾವೇ ನಮ್ಮ ಜೀವನದಲ್ಲಿ ಕಾಣಬಹುದಾದಂತಹ ಸಂಗತಿಗಳಾಗಿವೆ. ನಮ್ಮ ಅನುಭವಗಳೇ ಗುರುವಾಗಿ ನಮ್ಮನ್ನು ತಿದ್ದಿದರೆ, ಅಂಟಿಯೂ ಅಂಟದಂತಿರುವ ಸ್ವಭಾವ ಬೆಳೆಸಿಕೊಂಡರೆ ನಾವು ಸಾಧಕರಾಗುತ್ತೇವೆ. ಇಂತಹ ಸಾಧನೆ ಸರಳವಲ್ಲ, ಆದರೆ ಅಸಾಧ್ಯವೂ ಅಲ್ಲ.
-ಕ.ವೆಂ.ನಾಗರಾಜ್.


ಗುರುವಾರ, ನವೆಂಬರ್ 2, 2017

ಆತ್ಮಸ್ಥೈರ್ಯ ಹೆಚ್ಚಿಸುವ ಶಿಕ್ಷಣ ಪದ್ಧತಿಯ ಅಗತ್ಯ


     ನಾನು ಆರ್ಥಿಕ ತಜ್ಞನೂ ಅಲ್ಲ, ಶಿಕ್ಷಣ ತಜ್ಞನೂ ಅಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ಶಿಕ್ಷಣಕ್ಕೂ, ಉದ್ಯೋಗಕ್ಕೂ ಇರವ ಸಂಬಂಧ, ಇಂದಿನ ನಿರುದ್ಯೋಗ ಸಮಸ್ಯೆ ಬಗ್ಗೆ ನನಗೆ ಅನ್ನಿಸಿದುದನ್ನು ಹಂಚಿಕೊಳ್ಳುತ್ತಿರುವೆ. 2012ರಲ್ಲಿ ಇದ್ದಂತೆ ಭಾರತದ ಜನಸಂಖ್ಯೆಯ ಶೇ. 65ರಷ್ಟು ಜನರು ಯುವಕರಾಗಿದ್ದು ಉದ್ಯೋಗ ಮಾಡುವ ವಯಸ್ಸಿನವರು. ಭಾರತ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದರೂ, ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಉದ್ಯೋಗ ಕಲ್ಪಿಸುವಲ್ಲಿ ಹಿಂದಿರುವುದಂತೂ ಸತ್ಯ. ಶೈಕ್ಷಣಿಕವಾಗಿಯೂ ಸಹ ಸಾಧಿತ ಪ್ರಗತಿ ಆಶಾದಾಯಕವಾಗಿಲ್ಲ. ವಿದ್ಯಾವಂತ ನಿರುದ್ಯೋಗಿಗಳಿಗಿಂತ ಅನಕ್ಷರಸ್ಥ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಸುಮಾರು ಶೇ. 30ರಿಂದ 35ರಷ್ಟು ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲಿಯೇ ವಿದ್ಯಾಭ್ಯಾಸ ಬಿಟ್ಟುಹೋಗುತ್ತಿರುವುದು ತಿಳಿದು ಬರುತ್ತದೆ. 
     ಶಿಕ್ಷಣ ಅನ್ನುವುದು ವ್ಯಾಪಾರವಾಗಿರುವಾಗ ಇದರ ಆಮೂಲಾಗ್ರ ಬದಲಾವಣೆ ಮಾಡುವ ಅಗತ್ಯವಿದೆ. ಓದಬಯಸುವ ಎಲ್ಲರಿಗೂ ಓದುವ ಅವಕಾಶ ಜಾತಿ, ಮತ, ಪಂಥ, ಇತ್ಯಾದಿಗಳ ಹಂಗಿಲ್ಲದೆ ಸಿಗುವಂತಾಗಬೇಕು. ವೃತ್ತಿಪರ ಶಿಕ್ಷಣಗಳಾದ ಡಿಪ್ಲೊಮಾ, ಇಂಜನಿಯರಿಂಗ್, ವೈದ್ಯಕೀಯ ವಿಭಾಗಗಳಿಗೂ ಸಹ ಈಗಿರುವಂತೆ ಪ್ರಭಾವಿಗಳಿಗೆ, ಹಣ ಉಳ್ಳವರಿಗೆ ಮಾತ್ರ ಓದುವ ಅವಕಾಶ ಎಂಬ ಸ್ಥಿತಿ ತೊಲಗಿ, ಬಡವರೂ, ಆಸಕ್ತರೂ ಈ ವಿಷಯಗಳಲ್ಲಿ ಶಿಕ್ಷಣ ಪಡೆಯುವ ಸ್ಥಿತಿ ಬಂದರೆ ಅದು ಆದರ್ಶದ ಸ್ಥಿತಿಯಾಗುತ್ತದೆ. ಆದರೆ ಬಹುತೇಕ ರಾಜಕೀಯ ಪುಡಾರಿಗಳೇ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದು ಇದಕ್ಕೆ ಅವಕಾಶ ಮಾಡಿಕೊಟ್ಟಾರೆಯೇ ಎಂಬುದು ಯಕ್ಷಪ್ರಶ್ನೆ. ಜಾತಿ ಆಧಾರಿತ ಅವೈಜ್ಞಾನಿಕ ಮೀಸಲಾತಿ ನೀತಿ ಸಹ ಪ್ರತಿಭೆಗೆ ಅಡ್ಡಗಾಲಾಗಿದೆ. ಜಾತಿ, ಮತ, ಪಂಥ, ಧರ್ಮದ ಹೆಸರಿನಲ್ಲಿ ಭೇದ ಮಾಡಬಾರದೆಂಬ ನಮ್ಮ ಪವಿತ್ರ ಸಂವಿಧಾನದ ಆಶಯಕ್ಕೂ ಇದು ವಿರುದ್ಧವಾಗಿದೆ. ಆರ್ಥಿಕ ಆಧಾರಿತ ಮೀಸಲಾತಿ ಸಮಾನತೆಗೆ ಪೋಷಕಕಾರಿಯಾಗಿದ್ದರೂ, ಜಾತಿ ಆಧಾರಿತ ರಾಜಕೀಯ ಮಾಡುವವರಿಗೆ ಇದು ಅಪಥ್ಯವೆನಿಸಿದೆ. 
     ವಿದ್ಯಾವಂತ ನಿರುದ್ಯೋಗಿಗಳು, ನಿರಕ್ಷರಸ್ಥ ಉದ್ಯೋಗರಹಿತರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ರೀತಿ-ನೀತಿಗಳನ್ನು ರೂಪಿಸುವುದು ಮಹತ್ವದ್ದಾಗಿದೆ. ಕೇವಲ ಕಣ್ಣೊರೆಸುವ ಕ್ರಮಗಳು, ಅಲ್ಪಕಾಲಿಕ ಲಾಭ ನೀಡುವ ಯೋಜನೆಗಳು, ರಾಜಕೀಯ ಮುನ್ನಡೆಯ ಸಲುವಾಗಿ ಉಚಿತ ಸವಲತ್ತುಗಳನ್ನು ಒದಗಿಸುವ ಭಾಗ್ಯ ಯೋಜನೆಗಳು ಸಾರ್ವಜನಿಕರ ಹಣದ ದುರುಪಯೋಗ ಮಾಡುವುದಕ್ಕೇ ಸೀಮಿತವಾಗುತ್ತವೆ ಮತ್ತು ಇದರಿಂದಾಗಿ ದೀರ್ಘಕಾಲಿಕ ಪರಿಹಾರ ನೀಡುವ ಯೋಜನೆಗಳಿಗೆ ಹೊಡೆತ ಬೀಳುತ್ತವೆ. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಉದ್ಯೋಗ ಭರವಸೆ ಯೋಜನೆ, ಕೂಲಿಗಾಗಿ ಕಾಳು ಮುಂತಾದ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳುವಲ್ಲಿ ಸ್ವಹಿತಾಸಕ್ತ ರಾಜಕಾರಣಿಗಳು, ಗುತ್ತಿಗೆದಾರರುಗಳು ಮತ್ತು ಅಧಿಕಾರಿಗಳ ಕೂಟದ ಭ್ರಷ್ಠಾಚಾರವೂ ತೊಡಕಾಗಿದೆ. ಸುಳ್ಳು ಬಿಲ್ಲುಗಳು, ಸುಳ್ಳು ಕಾಮಗಾರಿಗಳು, ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಮಾಡಿಸಿದ ಹಗರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಸುಯೋಗ್ಯ, ಭ್ರಷ್ಠಾಚಾರ ರಹಿತ ಆಡಳಿತ ಬರಬೇಕಾದರೆ ಜನರು ಜಾಗೃತರಾದರೆ ಮಾತ್ರ ಸಾಧ್ಯ.
     ಸೀಮಿತ ಅವಕಾಶಗಳಿರುವಾಗ ತಮ್ಮ ಓದಿಗೆ ತಕ್ಕ ಉದ್ಯೋಗ ಎಲ್ಲರಿಗೂ ಸಿಗುತ್ತದೆಯೆಂದು ನಿರೀಕ್ಷಿಸಲಾಗದು. ಸಿಕ್ಕ ಸಣ್ಣ ಅವಕಾಶಗಳನ್ನು ಕೈಚೆಲ್ಲದೆ ತಮ್ಮ ಕಾಲಿನ ಮೇಲೆ ತಾವು ನಿಂತು ಮುಂದೆ ಹೆಚ್ಚಿನ ಅವಕಾಶಗಳಿಗಾಗಿ ಪ್ರಯತ್ನಿಸುವುದು ಒಳ್ಳೆಯದು. ಧೃಢ ವಿಶ್ವಾಸ, ಸತತ ಪ್ರಯತ್ನಗಳಿದ್ದರೆ ಎಂತಹವರೂ ಮುಂದೆ ಬರಲು ಅವಕಾಶ ಸಿಕ್ಕೇಸಿಗುತ್ತದೆ. ಅಂತರ್ಜಾಲ ಸಮುದಾಯ ತಾಣವೊಂದರಲ್ಲಿ ಓದಿದ ಸಂಗತಿ ಪ್ರೇರಕವಾಗಿದೆ. ಅವನೊಬ್ಬ ಬಡತನದ ಕುಟುಂಬದಿಂದ ಬಂದಿದ್ದ ವ್ಯಕ್ತಿ. ಹೊಟ್ಟೆಯ ಪಾಡಿಗೆ ನಗರದ ಒಂದು ದೊಡ್ಡ ಹೋಟೆಲಿನಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡ. ಅವನಿಗೆ ಗಿರಾಕಿಗಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡಲು ಬರುತ್ತಿರಲಿಲ್ಲವೆಂಬ ಕಾರಣಕ್ಕೆ ಸ್ವಲ್ಪ ದಿನಗಳಲ್ಲೇ ಮಾಲಿಕ ಅವನನ್ನು ಕೆಲಸದಿಂದ ತೆಗೆದು ಹಾಕಿದ. ಎದೆಗುಂದದ ಆತ ತನ್ನ ಗುಡಿಸಲಿನಂತಹ ಮನೆಯಲ್ಲಿಯೇ ತಿಂಡಿಗಳನ್ನು ತಯಾರಿಸಿ ಮಾರಲು ಪ್ರಾರಂಭಿಸಿದ. ರುಚಿಯಾದ ತಯಾರಿಕೆ, ನಗುಮುಖದ ಸೇವೆಯಿಂದ ಬರುವ ಜನರ ಸಂಖ್ಯೆ ಏರುತ್ತಾ ಹೋಯಿತು. ಸಹಾಯಕ್ಕೆ ಇಬ್ಬರು, ಮೂವರು ಸಹಾಯಕರನ್ನೂ ನೇಮಿಸಿಕೊಂಡ. ಒಂದೇ ವರ್ಷದಲ್ಲಿ ಇದ್ದ ಕಟ್ಟಡವನ್ನು ಅಭಿವೃದ್ಧಿಗೊಳಿಸಿದ. ಮತ್ತಷ್ಟು ಜನರನ್ನು ನೇಮಿಸಿಕೊಂಡು ಕೇಟರಿಂಗ್ ವ್ಯವಸ್ಥೆ, ಚಪಾತಿಗಳನ್ನು ಸಿದ್ಧಪಡಿಸಿ ಇತರ ಹೋಟೆಲುಗಳು, ವಸತಿ ಗೃಹಗಳು ಇತ್ಯಾದಿಗಳೆಡೆಗೆ ಒದಗಿಸುವ ಕೆಲಸವೂ ಆರಂಭವಾಯಿತು. ನೋಡ ನೋಡುತ್ತಿದ್ದಂತೆ ಆತ ದೊಡ್ಡ ಕುಳವಾಗಿ ಬೆಳೆದ. ಆದರೆ, ಅವನು ಬೆಳೆಯುವುದಕ್ಕೆ ಕಾರಣವಾದ ಸೌಜನ್ಯದ ನಡವಳಿಕೆಯನ್ನು ಅವನು ಬಿಡಲಿಲ್ಲ. ಈಗ ಅವನು ಒಂದು ಪ್ರತಿಷ್ಠಿತ ಐದು ನಕ್ಷತ್ರದ ಹೋಟೆಲ್ ಸಮುಚ್ಛಯದ ಒಡೆಯ. ಆತನಿಗೆ ಇಂಗ್ಲಿಷ್ ಮಾತನಾಡಲು ಬರದಿದ್ದ ಬಗ್ಗೆ ಆಶ್ಚರ್ಯಗೊಂಡ ಒಬ್ಬರು, ನಿಮಗೆ ಇಂಗ್ಲಿಷ್ ಬರದಿದ್ದರೂ ಇಷ್ಟೊಂದು ಮುಂದುವರೆದಿದ್ದೀರಿ. ಇಂಗ್ಲಿಷ್ ಬಂದಿದ್ದರೆ ಇನ್ನೇನು ಆಗಿರುತ್ತಿದ್ದಿರೋ ಎಂದು ಉದ್ಗರಿಸಿದ್ದರು. ಈ ಮಾತಿಗೆ ಆತ ಪ್ರತಿಕ್ರಿಯಿಸಿದ್ದು ಹೀಗೆ: ನನಗೆ ಇಂಗ್ಲಿಷ್ ಬರುತ್ತಿದ್ದರೆ ಬಹುಷಃ ಇದೇ ಹೋಟೆಲಿನಲ್ಲಿ ಲೆಕ್ಕ ಬರೆದುಕೊಂಡು ಇರುತ್ತಿದ್ದೆನೇನೋ! ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯೂ ಆಗಿದ್ದ ಡಾ. ಅಬ್ದುಲ್ ಕಲಾಂ ಆಜಾದರು ಚಿಕ್ಕಂದಿನಲ್ಲಿ ಮನೆ ಮನೆಗೆ ವೃತ್ತಪತ್ರಿಕೆ ಹಾಕುವ ಕೆಲಸವನ್ನೂ ಮಾಡಿದ್ದವರು. ಇಂತಹವರ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಯಾವ ಕೆಲಸವೂ ಚಿಕ್ಕದಲ್ಲ. ಮನಸ್ಸಿದ್ದರೆ ಮಾರ್ಗವಿದೆ ಎಂಬುದು ಸುಳ್ಳಲ್ಲ.
     ಮೇಲಿನ ಪ್ಯಾರಾದಲ್ಲಿ ಹೇಳಿದಂತಹ ವ್ಯಕ್ತಿಗಳ ಮನೋಭಾವ ಎಲ್ಲರಲ್ಲೂ ಬರಬೇಕಾದರೆ ಅದಕ್ಕೆ ತಕ್ಕಂತಹ ಶಿಕ್ಷಣ ಪದ್ಧತಿಯಿಂದ ಮಾತ್ರ ಸಾಧ್ಯ. ವೇದಕಾಲದಲ್ಲಿ ಇದ್ದಂತಹ ಶಿಕ್ಷಣ ಪದ್ಧತಿಯ ಸ್ವರೂಪವನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಸೂಕ್ತವಾಗಿ ರೂಪಿಸುವುದಾದರೆ ಇದು ಅಸಾಧ್ಯದ ಕೆಲಸವೇನಲ್ಲ. ವೇದೋತ್ತರ ಕಾಲದಲ್ಲಿ ಶಿಥಿಲಗೊಂಡರೂ ಉಳಿದುಕೊಂಡು ಬಂದಿದ್ದ ಈ ವ್ಯವಸ್ಥೆ ಸಂಪೂರ್ಣ ನಾಶ ಮಾಡಿದ್ದು ಬ್ರಿಟಿಷರು. ಅದರೊಂದಿಗೆ ಗುಮಾಸ್ತರು, ಗುಲಾಮರನ್ನು ತಯಾರಿಸುವ ಕಾರ್ಖಾನೆಗಳಾಗಿ ಶಾಲೆಗಳು ರೂಪಿತವಾದವು. ಮಕ್ಕಳು ತಿರುಚಿದ ಇತಿಹಾಸವನ್ನು ಕಲಿಯುತ್ತಿದ್ದಾರೆ. ಬರುಬರುತ್ತಾ ಮೌಲ್ಯವರ್ಧನೆಗೆ, ವ್ಯಕ್ತಿತ್ವ ವಿಕಸನಕ್ಕೆ ನೀಡುತ್ತಿದ್ದ ಮಹತ್ವವನ್ನೂ ವ್ಯವಸ್ಥಿತವಾಗಿ ಹಾಳುಗೆಡವುವ ಕೆಲಸ ಪಟ್ಟಭದ್ರರಿಂದ ಆಗುತ್ತಿದೆ. ವೇದಕಾಲದಲ್ಲಿ ಮಕ್ಕಳಿಗೆ ಎಂಟು ವರ್ಷಗಳಾದಾಗ ಅವರಿಗೆ ಉಪನಯನ ಸಂಸ್ಕಾರ ನೀಡಿ ಗುರುಕುಲಕ್ಕೆ ಕಳಿಸಿಕೊಡಲಾಗುತ್ತಿತ್ತು. ಎಲ್ಲಾ ಗಂಡು ಮತ್ತು ಹೆಣ್ಣು ಮಕ್ಕಳಿಗೂ ಈ ಸಂಸ್ಕಾರ ನೀಡಲಾಗುತ್ತಿತ್ತು. ಆಗ ಈಗಿನಂತೆ ಹುಟ್ಟಿನ ಆಧಾರದ ಜಾತಿಗಳಿರಲಿಲ್ಲ. ಎಲ್ಲಾ ಮಕ್ಕಳು, ಅವರು ಸಾಮಾನ್ಯರ ಮಕ್ಕಳಾಗಲೀ, ರಾಜಮನೆತನದವರಾಗಲೀ, ಶ್ರೀಮಂತರಾಗಿರಲಿ, ಆಶ್ರಮದ ನಿಯಮಗಳನ್ನು ಸಮಾನವಾಗಿ ತಪ್ಪದೆ ಪಾಲಿಸಬೇಕಾಗುತ್ತಿತ್ತು. ಆಶ್ರಮಕ್ಕೆ ಬೇಕಾದ ನೀರು ಒದಗಿಸುವುದು, ಉರುವಲು, ಸಮಿತ್ತುಗಳನ್ನು ತರುವುದು, ಇತ್ಯಾದಿ ದೈಹಿಕಶ್ರಮದ ಕೆಲಸಗಳನ್ನು ಎಲ್ಲರೂ ಮಾಡಬೇಕಾಗಿದ್ದಿತು. ಆಶ್ರಮಕ್ಕೆ ಬೇಕಾದ ಸವಲತ್ತುಗಳನ್ನು ಗೃಹಸ್ಥರು ತಮ್ಮ ಜವಾಬ್ದಾರಿಯೆಂಬಂತೆ ಒದಗಿಸುತ್ತಿದ್ದರು. ಸಿರಿವಂತರ ಮಕ್ಕಳೂ ಸಹ ಭಿಕ್ಷಾಟನೆಯಿಂದ ತಮ್ಮ ಮತ್ತು ಆಶ್ರಮವಾಸಿಗಳ ದೈನಿಕ ಅಗತ್ಯತೆಯನ್ನು ಒದಗಿಸಿಕೊಳ್ಳಬೇಕಿದ್ದಿತು. ಆಶ್ರಮದಲ್ಲಿ ಶಾಸ್ತ್ರ ವಿದ್ಯೆಯಲ್ಲದೆ, ಶಸ್ತ್ರವಿದ್ಯೆ, ವ್ಯಾಕರಣ, ಜೋತಿಷ್ಯ, ಗಣಿತ, ಇತಿಹಾಸ ಇತ್ಯಾದಿಗಳನ್ನೂ ಗುರುಗಳು ಹೇಳಿಕೊಡುತ್ತಿದ್ದರು. ಶಿಷ್ಯರು ವಿದ್ಯಾಭ್ಯಾಸ ಮುಗಿಯುವವರೆಗೂ ಗುರುಗಳ ಜೊತೆಯಲ್ಲಿಯೇ ಆಶ್ರಮದಲ್ಲಿದ್ದು ಪಾಂಡಿತ್ಯ ಗಳಿಸಿದ ನಂತರ ಗುರುಗಳ ಆಶೀರ್ವಾದದೊಂದಿಗೆ ಹಿಂತಿರುಗುತ್ತಿದ್ದರು. ಹೀಗೆ ಬಂದವರು ಆತ್ಮಸ್ಥೈರ್ಯ, ಧೃಢವಿಶ್ವಾಸಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ಬಾಳಲು ಶಕ್ತರಾಗಿರುತ್ತಿದ್ದರು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ವರ್ಧಿಸುವ, ಆತ್ಮಸ್ಥೈರ್ಯ ಹೆಚ್ಚಿಸುವ ಅಂಶಗಳ ಕೊರತೆ ಎದ್ದುಕಾಣುತ್ತದೆ. ಇವನ್ನು  ಒಳಗೊಂಡಂತೆ ಸೂಕ್ತ ಶಿಕ್ಷಣ ಪದ್ಧತಿ ಜಾರಿಗೆ ಬರಲೆಂಬ ಆಶಯ ಇಟ್ಟುಕೊಳ್ಳಬಹುದಷ್ಟೆ. ಜ್ಞಾನವಂತರು ಮತ್ತು ಆಡಳಿತಗಾರರ ಸಮ್ಮಿಲಿತ ಧೃಢಸಂಕಲ್ಪ ಮಾತ್ರ ಇದನ್ನು ಸಾಕಾರಗೊಳಿಸಲು ಸಾಧ್ಯ. 
-ಕ.ವೆಂ.ನಾಗರಾಜ್.