ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 30, 2015

ಮನಸೇ ದೇವಾಲಯ


     ದೇವಸ್ಥಾನ, ಮಠ, ಚರ್ಚು, ಮಸೀದಿ ಇತ್ಯಾದಿಗಳ ಮೂಲ ಉದ್ದೇಶ ಮರೆಯಾಗಿಬಿಟ್ಟಿದೆಯೇನೋ ಎಂಬ ಭಾವನೆ ಈ ಲೇಖನಕ್ಕೆ ಪ್ರೇರಣೆಯಾಗಿದೆ. ದೇವಸ್ಥಾನವೆಂದರೆ ದೇವರು ಇರುವ ಸ್ಥಳ ಎಂಬ ಕಲ್ಪನೆಗೆ ಹೆಚ್ಚು ಒತ್ತು ಬಂದಿರುವುದು ಎಷ್ಟು ಸರಿ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ವೇದಕಾಲ ಎಂದು ಪರಿಗಣಿಸುವ ಸಮಯದ ಆರಂಭದಲ್ಲಿ ದೇವಸ್ಥಾನಗಳಿರಲಿಲ್ಲ. ಆಗ ದೇವರಿಗೆ ಯಜ್ಞ, ಹೋಮ, ಹವನಗಳನ್ನು ಮಾಡುತ್ತಾ ಅಗ್ನಿಯ ಮೂಲಕವಾಗಿ ದೇವರಿಗೆ ಹವಿಸ್ಸು ಅರ್ಪಿಸುವುದು ಸಾಮಾನ್ಯವಾದ ಕ್ರಮವಾಗಿತ್ತು. ಈಗಲೂ ಈ ಕ್ರಿಯೆಗಳು ನಡೆಯುತ್ತಿವೆ. ಬೌದ್ಧಧರ್ಮದ ಉಗಮದ ಸಂದರ್ಭದಲ್ಲಿ ದೇವಸ್ಥಾನಗಳ ನಿರ್ಮಾಣ, ವಿಗ್ರಹಪೂಜೆಗಳಿಗೆ ಆದ್ಯತೆ ಸಿಕ್ಕಿತು. ಅದು ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆಯೆನ್ನಿಸುತ್ತಿದೆ. ವಿಗ್ರಹಾರಾಧನೆಯನ್ನು ಒಪ್ಪದ ಮುಸ್ಲಿಮರೂ ಮಸೀದಿಗಳನ್ನು ಕಟ್ಟುತ್ತಾರೆ. ಏಕದೇವಾರಾಧನೆ ಮಾಡುವ ಕ್ರಿಶ್ಚಿಯನರೂ ಚರ್ಚುಗಳನ್ನು ನಿರ್ಮಿಸುತ್ತಾರೆ. ಬಹುದೈವಾರಾಧಕರಾದ ಹಿಂದೂಗಳೂ ಮಂದಿರಗಳ ನಿರ್ಮಾಣ ಮಾಡುತ್ತಾರೆ. ಅವರು ಬಹುದೇವಾರಾಧಕರಾದರೂ ಸಹ ದೇವರು ಒಬ್ಬನೇ, ಅವನನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ ಎಂಬುದನ್ನು ಒಪ್ಪುವುದು ವಿಶೇಷವಾಗಿದೆ. (ಏಕಂ ಸತ್ ವಿಪ್ರಾಃ ಬಹುಧಾ ವದಂತಿ). ಹಿಂದೂ, ಮುಸ್ಲಿಮ್, ಕ್ರಿಶ್ಚಿಯನರು ನಿರ್ಮಿಸುವ ಮಂದಿರ, ಮಸೀದಿ, ಚರ್ಚುಗಳಲ್ಲಿ  ಒಂದು ಸಮಾನವಾದ ಅಂಶವನ್ನು ಗಮನಿಸಬಹುದು. ಅದೆಂದರೆ ಈ ಸ್ಥಳಗಳು ಎಲ್ಲವೂ ದೇವರನ್ನು ಆರಾಧಿಸುವ ಸ್ಥಳಗಳಾಗಿರುವುದು.
     ದೇವಾಲಯಗಳೆಂದರೆ ದೇವರು ವಾಸಿಸುವ ಸ್ಥಳ ಎಂಬುದು ತಪ್ಪು ಕಲ್ಪನೆ ಅಥವ ಗ್ರಹಿಕೆಯಾಗಿದೆ. ದೇವರು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತ ಎಂದಿರುವಾಗ ಅವನು ಒಂದು ಪುಟ್ಟ ಸ್ಥಳದಲ್ಲಿ ಇರುತ್ತಾನೆ ಎಂಬ ಗ್ರಹಿಕೆಯೇ ಸರಿಯಲ್ಲ. ವಾಸ್ತವವಾಗಿ ದೇವಾಲಯಗಳು ಆ ಸರ್ವಶಕ್ತ ದೇವರನ್ನು ಕುರಿತು ಧ್ಯಾನಿಸುವ, ಪೂಜಿಸುವ, ಗೌರವಿಸುವ ಸ್ಥಳಗಳಷ್ಟೇ ಆಗಿವೆ. ಹಿಂದೂಗಳು ತಮ್ಮ ಮನೆಗಳಲ್ಲಿಯೂ ದೇವರನ್ನು ಆರಾಧಿಸಲು ಒಂದು ಸ್ಥಳವನ್ನು ನಿಗದಿಸಿರುತ್ತಾರೆ. ಅದನ್ನು ಪೂಜಾಗೃಹ, ಪೂಜಾಸ್ಙಳ ಎಂದು ಭಕ್ತಿಭಾವನೆಗಳಿಂದ ನಡೆದುಕೊಳ್ಳುತ್ತಾರೆ. ದೇವರ ವಿಗ್ರಹ, ಫೋಟೋ, ಇತ್ಯಾದಿಗಳನ್ನಿಟ್ಟು ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುತ್ತಾರೆ. ಪೂಜೆ, ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ದೇವಸ್ಥಾನಗಳಿಗೆ ವಿಶೇಷ ಸಂದರ್ಭಗಳಲ್ಲಿ ಹೋಗುತ್ತಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನರು ನಿಗದಿತ ಅವಧಿ, ದಿನಗಳಲ್ಲಿ ಮಸೀದಿ, ಚರ್ಚುಗಳಿಗೆ ಭೇಟಿ ಕೊಡುವುದು ಕಡ್ಡಾಯವಾಗಿರುವಂತೆ, ಹಿಂದೂಗಳಿಗೆ ಅಂತಹ ಕಡ್ಡಾಯ ಸಂಪ್ರದಾಯಗಳಿಲ್ಲ. ಅವರು ಮನೆಯಲ್ಲೇ ಪೂಜೆ, ಪುನಸ್ಕಾರಗಳನ್ನು ಸಲ್ಲಿಸುತ್ತಾರೆ ಮತ್ತು ಮೊದಲು ಹೇಳಿರುವಂತೆ ವಿಶೇಷ ಹಬ್ಬ, ಹರಿದಿನ, ಶುಭ ಸಂದರ್ಭಗಳಲ್ಲಿ, ವಿಶೇಷ ದಿನಗಳಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ. ನಿಯಮಿತವಾಗಿ ದೇವಸ್ಥಾನಗಳಿಗೆ ಜನರು ಬರಲೆಂಬ ಕಾರಣದಿಂದ ದೇವಸ್ಥಾನಗಳಲ್ಲಿ ಭಜನಾಮಂಡಳಿಗಳ ಸ್ಥಾಪನೆ, ಸಂಕಷ್ಟಹರ ಗಣಪತಿ ಪೂಜೆ, ಸತ್ಯನಾರಾಯಣಪೂಜೆ, ಇಂತಹವುಗಳನ್ನು ಏರ್ಪಡಿಸುವುದು ಈಗ ರೂಢಿಯಾಗಿ, ಸಂಪ್ರದಾಯವಾಗಿ ಬೆಳೆದುಬರುತ್ತಿದೆ.
     ದೇವಸ್ಥಾನಗಳು ಜನರು ಒಂದೆಡೆ ಸೇರುವ, ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳುವ ಕೇಂದ್ರಗಳಾಗಿ ರೂಪುಗೊಳ್ಳುತ್ತಾ ಹೋದವು. ಪ್ರಾರಂಭದಲ್ಲಿ ಸಾಮಾನ್ಯವಾಗಿ ಊರಿನ ಪ್ರಧಾನ ಸ್ಥಳಗಳಲ್ಲಿ, ವಿಶೇಷವಾಗಿ ನದಿತಟಗಳಲ್ಲಿ, ಬೆಟ್ಟ-ಗಡ್ಡಗಳ ಮೇಲ್ಭಾಗದಲ್ಲಿ, ಸಮುದ್ರದ ದಡದ ಹತ್ತಿರದಲ್ಲಿ ನಿರ್ಮಿಸಲ್ಪಟ್ಟಿರುವುದನ್ನು ಗಮನಿಸಬಹುದು. ಈಗಂತೂ ಎಲ್ಲೆಂದರೆ ಅಲ್ಲಿ ಮಂದಿರ, ಮಸೀದಿ, ಚರ್ಚುಗಳು ತಲೆಯೆತ್ತುತ್ತಿವೆ. ರಸ್ತೆ ಬದಿಗಳಲ್ಲಿ, ಗಿಡಮರಗಳ ಕೆಳಗೆ, ಹೊಸ ಹೊಸ ಬಡಾವಣೆಗಳಲ್ಲಿ, ಹೇಳಬೇಕೆಂದರೆ ಪ್ರತಿ ಬಡಾವಣೆ, ಮೊಹಲ್ಲಾಗಳಲ್ಲಿ ಈ ಕಟ್ಟಡಗಳಿವೆ. ಜನರಿಗೆ ದೇವರ ಮೇಲಿನ ಭಕ್ತಿ ಜಾಸ್ತಿಯಾಯಿತೋ ಎಂಬಂತೆ ಪೈಪೋಟಿಯಲ್ಲಿ ಮಂದಿರ, ಮಸೀದಿ, ಚರ್ಚುಗಳು ನಿರ್ಮಾಣವಾಗುತ್ತಿವೆ ಮತ್ತು ಹಲವು ಸಲ ಇವು ಶಾಂತಿ, ಸೌಹಾರ್ದಗಳ ಕದಡುವಿಕೆಗೂ ಕಾರಣವಾಗಿ ಕಾನೂನು-ಸುವ್ಯವಸ್ಥೆಯ ಸಮಸ್ಯೆಗಳೂ ಉಂಟಾಗುವುದನ್ನೂ ಕಾಣುತ್ತಿದ್ದೇವೆ.
     ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಮುಖವಾಗಿ 6 ಭಾಗಗಳನ್ನು ಗುರುತಿಸಬಹುದು. ದೇವಸ್ಥಾನದ ಗೋಪುರ, ಗರ್ಭಗೃಹ, ಪ್ರಾಂಗಣ, ಮುಂಭಾಗ, ಪ್ರದಕ್ಷಿಣೆ ಬರುವ ಸ್ಥಳ ಮತ್ತು ಕಲ್ಯಾಣಿ - ಇವೇ ಆ ಆರು ಭಾಗಗಳು. ದೇವಸ್ಥಾನದ ಗೋಪುರಗಳು ಸಾಮಾನ್ಯವಾಗಿ ದೇವಸ್ಥಾನದ ವಿಸ್ತೀರ್ಣವನ್ನು ಅವಲಂಬಿಸಿ ಇರುತ್ತದೆ. ದೊಡ್ಡ ವಿಸ್ತೀರ್ಣದ ದೇವಸ್ಥಾನಗಳಲ್ಲಿ ದೊಡ್ಡ ಗೋಪುರಗಳು ಇರುತ್ತವೆ. ಗೋಪುರಗಳು ಆಕರ್ಷಣೀಯ ರೀತಿಯಲ್ಲಿ ಕೆತ್ತನೆಯ ಶಿಲ್ಪಗಳನ್ನು ಒಳಗೊಂಡಂತೆ ಎತ್ತರವಾಗಿದ್ದು ಮೇರು ಪರ್ವತವನ್ನು ಪ್ರತ್ತಿನಿಧಿಸುತ್ತದೆ ಎನ್ನುತ್ತಾರೆ. ಸಾಮಾನ್ಯವಾಗಿ ಗೋಪುರದ ತುದಿ ತ್ರಿಶೂಲದ ರೀತಿಯಲ್ಲಿ ಕಾಣುವಂತೆ ನಿರ್ಮಿಸಿರುತ್ತಾರೆ. ಅದೇನೇ ಇರಲಿ ಜನರಲ್ಲಿ ಔನ್ನತ್ಯದ ಭಾವನೆ ಜಾಗೃತವಾಗಲಿ ಎಂಬುದು ಇದರ ಉದ್ದೇಶವಿರಬಹುದು. ಗರ್ಭಗೃಹಗಳಲ್ಲಿ ದೇವರ ವಿಗ್ರಹ, ಮೂರ್ತಿಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಇಲ್ಲಿಗೆ ಸಾಮಾನ್ಯವಾಗಿ ಅರ್ಚಕರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶವಿರುವುದಿಲ್ಲ. ಗರ್ಭಗೃಹದ ಮುಂದಿನ ಸಭಾಂಗಣದಲ್ಲಿ ಜನರು ಕುಳಿತುಕೊಂಡು ಅಥವ ನಿಂತು ದೇವರಿಗೆ ಸಲ್ಲುವ ಪೂಜೆ, ಇತ್ಯಾದಿಗಳನ್ನು ವೀಕ್ಷಿಸಬಹುದಾಗಿರುತ್ತದೆ. ಮುಂಭಾಗದಲ್ಲಿ ಗಂಟೆಗಳನ್ನು ಇಳಿಬಿಡುವುದಿದ್ದು ದೇವಸ್ಥಾನಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಭಕ್ತರು ಗಂಟಾನಾದ ಮಾಡಿ ಬರುತ್ತಾರೆ ಮತ್ತು ಹೋಗುತ್ತಾರೆ. ಗರ್ಭಗುಡಿಯ ಸುತ್ತಲೂ ಮತ್ತು ದೇವಸ್ಥಾನದ ಹೊರಭಾಗದಲ್ಲೂ ಅವಕಾಶವಿದ್ದರೆ ಭಕ್ತರು ಪ್ರದಕ್ಷಿಣೆ ಮಾಡುವ ಮಾರ್ಗವಿರುತ್ತದೆ. ಸಮೀಪದಲ್ಲಿ ಒಂದು ನೀರಿನ ಕೊಳ (ಕಲ್ಯಾಣಿ) ಇರುತ್ತದೆ. ಅಲ್ಲಿಯ ನೀರನ್ನು ದೇವಸ್ಥಾನದ ಪೂಜೆ, ಪುನಸ್ಕಾರಗಳಿಗೆ, ದೇವಸ್ಥಾನದ ಸ್ವಚ್ಛತೆಯ ಸಲುವಾಗಿ ಬಳಸಿಕೊಳ್ಳುತ್ತಾರೆ. ಈಗ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನಿರ್ಮಾಣವಾಗುತ್ತಿರುವ ಮಂದಿರಗಳಲ್ಲಿ ಇವೆಲ್ಲವೂ ಇರುತ್ತದೆ ಎನ್ನಲಾಗುವದಿಲ್ಲ. ಕಲೆ, ಸೌಂದರ್ಯಗಳು ಮೇಳವಿಸಿರುವ ಅನೇಕ ದೇವಾಲಯಗಳು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇದ್ದು ಭಕ್ತರ, ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ. ವಿವಿಧ ಮತಗಳು, ಸಂಪ್ರದಾಯಗಳು, (ಶೈವ, ವೈಷ್ಣವ, ಶಾಕ್ತ ಮುಂತಾಗಿ) ಇತ್ಯಾದಿಗಳಿಗೆ ಅನುಸಾರವಾಗಿ ದೇವಸ್ಥಾನಗಳು ತಲೆಯೆತ್ತಿವೆ, ಎತ್ತುತ್ತಿವೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ಸ್ಥಳ ಪುರಾಣ ರಚಿತವಾಗಿಬಿಟ್ಟಿದೆ.
     ಅತಿ ಪುರಾತನ ಕಾಲದ ದೇವಸ್ಥಾನಗಳು ಕಲ್ಲು, ಇಟ್ಟಿಗೆಗಳಿಂದ ರಚಿತವಾದುದ್ದಾಗಿರದೆ ಮಣ್ಣಿನ ಗೋಡೆಗಳು ಮತ್ತು ತಡಿಕೆಗಳನ್ನು ಹಾಕಿದ, ಹುಲ್ಲು, ಎಲೆಗಳ ಛಾವಣಿಗಳಿಂದ ಕೂಡಿದ್ದುದಾಗಿದ್ದವು. ಆ ಸಮಯದಲ್ಲಿ ವಾಸದ ಮನೆಗಳೂ ಸಹ ಗುಡಿಸಲುಗಳ ರೀತಿಯಲ್ಲಿರುತ್ತಿದ್ದವು, ನಾಡಹೆಂಚುಗಳ ಬಳಕೆಯೂ ಇದ್ದಿತು. ಕಾಲಕ್ರಮೇಣ ಶಿಲಾಮಯವಾದ ದೇವಸ್ಥಾನಗಳು, ಇಟ್ಟಿಗೆಗಳನ್ನು ಬಳಸುವುದು ಪ್ರಾರಂಭವಾಯಿತು. ಹಿಂದಿನ ರಾಜ-ಮಹಾರಾಜರುಗಳು ದೇವಸ್ಥಾನಗಳನ್ನು ಕಟ್ಟಿಸುವುದು, ಜೀರ್ಣೋದ್ಧಾರ ಮಾಡಿಸುವುದುಗಳನ್ನು ಆದ್ಯತೆಯ ಮೇಲೆ ಮಾಡುತ್ತಿದ್ದರು. ಚೋಳರು, ಪಲ್ಲವರು, ಚಾಲುಕ್ಯರು, ಹೊಯ್ಸಳರು ಮುಂತಾದವರ ಕಾಲದಲ್ಲಿ ರಚಿತವಾದ ದೇವಾಲಯಗಳು ತಮ್ಮದೇ ಆದ ರೀತಿಯ ಶೈಲಿಗಳಿಂದಾಗಿ ಪ್ರಸಿದ್ಧವಾಗಿವೆ. ಬೌದ್ಧ ಮಂದಿರಗಳು, ಜೈನ ಬಸದಿಗಳು, ಗುರುದ್ವಾರಗಳು, ಮಸೀದಿಗಳು, ಚರ್ಚುಗಳು ತಮ್ಮ ರಚನಾಶೈಲಿ, ಆಕರ್ಷಕ ಚಿತ್ರಗಳು, ಕೆತ್ತನೆಗಳು, ಇತ್ಯಾದಿಗಳ ಕಾರಣದಿಂದ ಹೆಸರುವಾಸಿಯಾಗಿದ್ದು ಪ್ರವಾಸಿಗರನ್ನು ಸೆಳೆಯುತ್ತಿವೆ.
     ಮಾನವನ ಉತ್ಕರ್ಷದಲ್ಲಿ ಜ್ಞಾನ, ಕರ್ಮ, ಉಪಾಸನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಉಪಾಸನೆ ಅರ್ಥಾತ್ ದೇವರ ಕುರಿತ ಅರಿವು, ದೇವರ ಚಿಂತನೆ, ಧ್ಯಾನಗಳಿಗಾಗಿ ದೇವಸ್ಥಾನಗಳು ಆಶ್ರಯತಾಣಗಳಾಗಬೇಕು. ಆದರೆ ಇಂದು ದೇವಸ್ಥಾನಗಳು ಇದಕ್ಕೆ ಸಹಕಾರಿಯಾಗಿವೆಯೇ ಎಂದರೆ ಇಲ್ಲವೆಂದೇ ವಿಷಾದದಿಂದ ಅಭಿಪ್ರಾಯಿಸಬೇಕಾಗುತ್ತದೆ. ಏಕಾಂತದ ಸ್ಥಳಗಳು, ಪ್ರಶಾಂತವಾದ ಪರಿಸರ ಉಪಾಸನೆಗೆ ಸೂಕ್ತವಾಗಿರುತ್ತದೆ. ಮನೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಇಂತಹ ವಾತಾವರಣ ಸಿಗಲಾರದಾಗಿದ್ದು ಕನಿಷ್ಠ ದೇವಸ್ಥಾನಗಳಲ್ಲಾದರೂ ಇದಕ್ಕೆ ಅವಕಾಶವಿರಬೇಕಾದುದು ಸೂಕ್ತವಾಗಿರುತ್ತದೆ. ಇಂದು ದೇವಸ್ಥಾನಗಳು ವ್ಯಾವಹಾರಿಕ ಕೇಂದ್ರಗಳಂತೆ ಆಗಿವೆ. ಪ್ರವೇಶಕ್ಕೆ ಹಣ, ಹಣ್ಣು-ಕಾಯಿ ನೈವೇದ್ಯಕ್ಕೆ ಹಣ, ವಿವಿಧ ರೀತಿಯ ಪೂಜೆಗಳಿಗೆ ವಿವಿಧ ರೀತಿಯ ಶುಲ್ಕಗಳನ್ನು ನಿಗದಿಸಿ ಫಲಕಗಳನ್ನು ಪ್ರದರ್ಶಿಸಿರುತ್ತಾರೆ. ದೇವಸ್ಥಾನಗಳ ನಿರ್ವಹಣೆಗೆ. ಅರ್ಚಕರ ಮತ್ತು ಇತರ ಪರಿಚಾರಕರ ಸಂಬಳ, ಇತ್ಯಾದಿಗಳಿಗಾಗಿ ಹಣದ ಅಗತ್ಯವನ್ನು ಈ ರೀತಿ ಭರಿಸಿಕೊಳ್ಳುತ್ತಾರೇನೋ! ಕೋಟಿಗಟ್ಟಲೆ ಆದಾಯವಿರುವ ಶ್ರೀಮಂತ ದೇವಸ್ಥಾನಗಳು ಇರುವಂತೆ, ದೇವರಿಗೆ ದೀಪ ಹಚ್ಚಲು ಎಣ್ಣೆಗೂ ಕಷ್ಟವಿರುವ ದೇವಸ್ಥಾನಗಳೂ ಇವೆ. ಒಂದೇ ಊರಿನಲ್ಲಿ ಹಾಳು ಬಿದ್ದ ದೇವಸ್ಥಾನಗಳೂ ಇರುತ್ತವೆ, ವೈಭವೋಪೇತವಾದ ಮಂದಿರಗಳೂ ಇರುತ್ತವೆ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಜನರು ಶ್ರೀಮಂತ ದೇವಸ್ಥಾನಗಳನ್ನೇ ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ಅಲ್ಲಿ ಸೇರುವ ಜನರ ಗಿಜಿ ಗಿಜಿ, ನೂಕುನುಗ್ಗಲುಗಳನ್ನು ನೋಡಿದರೆ ಅಲ್ಲಿ ವ್ಯವಧಾನದಿಂದ ದೇವರಿಗೆ ಕೈಮುಗಿಯುವುದೂ ಕಷ್ಟವೆಂಬಂತೆ ಇರುತ್ತದೆ. ಆದರೂ ಜನರು ಅಂತಹ ದೇವಸ್ಥಾನಗಳಿಗೆ ಹೋಗಿ ಧನ್ಯರಾದೆವೆಂದುಕೊಳ್ಳುತ್ತಾರೆ.
     ಉಪಾಸನೆಗೆ ನೆರವಾಗಬೇಕಾದ ಹೆಚ್ಚಿನ ದೇವಾಲಯಗಳ ಇಂದಿನ ಸ್ಥಿತಿ-ಗತಿಗಳು ಜನರನ್ನು ಆಧ್ಯಾತ್ಮಿಕತೆಗೆ ಪ್ರೇರಿಸುವ ಬದಲಿಗೆ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರೆ ಸಾಕು, ಒಳ್ಳೆಯದಾಗುತ್ತದೆ ಎಂಬುದಕ್ಕೆ ಒತ್ತು ಕೊಡುತ್ತಿವೆ. ಭಗವದ್ಗೀತೆ ಬೋಧಿಸುವ ಕರ್ಮ ಸಿದ್ಧಾಂತಕ್ಕೆ, ವೇದದ ಆಶಯಗಳಿಗೆ ಇದು ಪೂರಕವಾಗದು. ಈ ವೇದಮಂತ್ರ ಗಮನಿಸಿ:  ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ | ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)      ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಹೀಗಿರುವಾಗ ನಮಗೆ ಒಳ್ಳೆಯದಾಗಬೇಕೆಂದರೆ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕಷ್ಟೆ! ಹಲವರ ತಲೆ ಒಡೆದು ಅನ್ಯಾಯ ಮಾರ್ಗದಲ್ಲಿ ಹಣ ಸಂಪಾದಿಸಿ ದೇವರ ವಿಗ್ರಹಕ್ಕೆ ಚಿನ್ನದ ಆಭರಣಗಳನ್ನು ಮಾಡಿಸಿಕೊಟ್ಟರೆ ಪಾಪ ಪರಿಹಾರವಾಗುವುದಾದರೆ ಎಲ್ಲರೂ ಈ ಮಾರ್ಗವನ್ನೇ ಆರಿಸಿಕೊಳ್ಳುತ್ತಾರಲ್ಲವೇ?
     ದೇವರಲ್ಲಿ ಭಕ್ತಿ, ಪೂಜೆ ಇತ್ಯಾದಿ ಹೆಸರುಗಳಿಂದ ಹೇಳಲಾಗುವ ಉಪಾಸನೆಯ ಮೂಲ ಉದ್ದೇಶವೆಂದರೆ ಮಾನವ ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಹೊರತಂದು, ರೂಪ, ರಸ, ಗಂಧ, ಶಬ್ದ, ಸ್ಪರ್ಷ -  ಈ ಪಂಚೇಂದ್ರಿಯಗಳ ವಿಷಯಗಳಿಂದಲೂ ಅದನ್ನು ಒಳಕ್ಕೆಳೆದುಕೊಂಡು, ಏಕಾಗ್ರಗೊಳಿಸಿ ಅದನ್ನು ಪರಮಾತ್ಮನಲ್ಲಿ ನಿಲ್ಲಿಸಿ, ದೇವರ ಸಾಮೀಪ್ಯವನ್ನು ಅನುಭವಿಸಿ ಸಿಗುವ ಆನಂದವನ್ನು ಪಡೆಯುವ ಕ್ರಿಯೆಯಾಗಿದೆ. ಇದಕ್ಕೆ ಅನುಕೂಲವಾಗುವಂತೆ ದೇವಾಲಯಗಳಲ್ಲಿ ಏಕಾಂತದಲ್ಲಿ ಧ್ಯಾನ ಮಾಡಲು ಅವಕಾಶವಿರುವ ಧ್ಯಾನಮಂದಿರಗಳು, ಕುಟೀರಗಳ ಅಗತ್ಯವಿರುತ್ತದೆ. ಗೌಜು, ಗದ್ದಲಗಳಿಗಿಂತ ಶಾಂತತೆ, ನಿಶ್ಶಬ್ದತೆಗಳಿಗೆ ಅಲ್ಲಿ ಆದ್ಯತೆ ಇರಬೇಕಾಗುತ್ತದೆ. ಅಧ್ಯಯನಕ್ಕೆ ಅನುಕೂಲವಾಗುವಂತೆ ವೇದಮಂತ್ರಗಳು, ಧಾರ್ಮಿಕ ಗ್ರಂಥಗಳ ಅಧ್ಯಯನ, ಕಲಿಕೆ, ಚಿಂತನ, ಮಂಥನಗಳಿಗೆ ಅವಕಾಶ ಮಾಡಿಕೊಡಬೇಕಿರುತ್ತದೆ. ಈ ತತ್ವ ಚರ್ಚು, ಮಸೀದಿಗಳಿಗೂ ಅನ್ವಯವಾಗುತ್ತದೆ. ಬೈಬಲ್ಲು, ಕುರಾನುಗಳ ಅಧ್ಯಯನಕ್ಕೆ ಅಲ್ಲಿ ಆದ್ಯತೆ ಸಿಗಬೇಕಿರುತ್ತದೆ. ನಾವು ತಿರುಳನ್ನು ಅವಗಣಿಸಿ, ಸಿಪ್ಪೆಗೆ ಮಹತ್ವ ಕೊಡುತ್ತಿದ್ದೇವೆ. ತಿರುಳಿನ ರಕ್ಷಣೆಗೆ ಸಿಪ್ಪೆ ಇರಬೇಕು, ಆದರೆ ಸಿಪ್ಪೆಯೇ ಪ್ರಧಾನವಾಗಬಾರದು.
     ದೇವಾಲಯಗಳು ಕೇವಲ ಸಾಧನಾಪಥದಲ್ಲಿನ ಮೆಟ್ಟಲಾಗಿವೆಯೇ ಹೊರತು ಅದೇ ಗಮ್ಯವಲ್ಲವೆಂಬ ಅರಿವು ನಮ್ಮಲ್ಲಿ ಮೂಡಬೇಕು. 'ಮನೆಯೇ ಮಂತ್ರಾಲಯ, ಮನಸೇ ದೇವಾಲಯ' ಎಂಬ ಹಾಡಿನ ಸಾಲು ಅರ್ಥಪೂರ್ಣವಾಗಿದೆ. ಬಸವಣ್ಣನವರು ಹೇಳಿದಂತೆ, 'ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ' ಎಂಬುದರ ಒಳಾರ್ಥವೂ ಇದೇ ಆಗಿದೆ. ಪರಮಾತ್ಮನ ನಿರ್ಮಿತಿಯಾದ ಜೀವಿಯ ಶರೀರವೆಂಬ ನವರಸಗಳ ದೇಗುಲವನ್ನು ಸ್ವಚ್ಛ, ಸುಂದರವಾಗಿರಿಸಿಕೊಂಡರೆ ಆ ದೇಗುಲದೊಳಗೆ ಸ್ವತಃ ಪರಮಾತ್ಮನೇ ಬಂದು ನೆಲೆಸುತ್ತಾನೆ. ಹೀಗಾದಾಗ ಹೊರಗಿನ ದೇವಾಲಯಗಳ ಅವಶ್ಯಕತೆ ಬರುವುದಿಲ್ಲ.
ರಾಗರಹಿತ ಮನ ದೀಪದ ಕಂಬವಾಗಿ
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹದೆ ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 29.6.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜೂನ್ 25, 2015

1975-77ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ [Role of Hassan district in the struggle against Emergency -1975-77]


     ಪರಕೀಯರ ಸಂಕೋಲೆಯಿಂದ 1947ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ 28 ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ 1975ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ ತುರ್ತುಪರಿಸ್ಥಿತಿಯ ಅವಧಿ ದೇಶದ ಅತ್ಯಂತ ಕಲಂಕಿತ ಅವಧಿಯಾಗಿದ್ದು, ಇಂದು ಕಂಡುಬರುತ್ತಿರುವ ಅಧಿಕಾರದ ಹಪಾಹಪಿಗೆ ಭದ್ರ ತಳಪಾಯ ಒದಗಿಸಿತ್ತು. ಅಲಹಾಬಾದ್ ಉಚ್ಚನ್ಯಾಯಾಲಯವು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಮೇಲಿದ್ದ ಭ್ರಷ್ಠಾಚಾರದ ಆರೋಪವನ್ನು ಎತ್ತಿ ಹಿಡಿದು ಅವರ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ್ದಲ್ಲದೆ ಮುಂದಿನ ಆರು ವರ್ಷಗಳು ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದನ್ನು ಅವರು ಲೆಕ್ಕಿಸದೆ ಹೇಯಮಾರ್ಗ ಹಿಡಿದು ದೇಶದ ಮೇಲೆ ಅನಗತ್ಯವಾದ ತುರ್ತುಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಅಟ್ಟಹಾಸದಿಂದ ಮೆರೆದರು. ಕಹಿಯಾದ ಕಠಿಣ ಸತ್ಯವೆಂದರೆ ಭ್ರಷ್ಠಾಚಾರ ತಪ್ಪಲ್ಲವೆಂಬ ಭಾವನೆಗೆ, ಭ್ರಷ್ಠಾಚಾರ ಇಂದು ಮುಗಿಲೆತ್ತರಕ್ಕೆ ಬೆಳೆದಿರುವುದಕ್ಕೆ ಅಂದು ಹಾಕಿದ್ದ ಈ ಭದ್ರ ಬುನಾದಿಯೇ ಕಾರಣ. ಕಾಯದೆ, ಕಾನೂನುಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಯಿತು. ಲೋಕಸಭೆಯ ಅವಧಿ ಪೂರ್ಣಗೊಂಡರೂ ಸಂಸತ್ತಿನಲ್ಲಿ ನಿರ್ಣಯ ಮಾಡಿ ಮತ್ತೆ ಎರಡು ವರ್ಷಗಳ ಅವಧಿಗೆ ಮುಂದುವರೆಸಲಾಯಿತು. ಅತ್ಯಂತ ಪವಿತ್ರವೆಂದು ಭಾವಿಸಲಾಗಿರುವ ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ಮಾರಕವೆನಿಸುವ ಹಲವು ತಿದ್ದುಪಡಿಗಳನ್ನು ಮಾಡಲಾಯಿತು. 1975ರ ಜೂನ್ 26ರ ಬೆಳಕು ಹರಿಯುವಷ್ಟರಲ್ಲಿ ಭಾರತದ ಸ್ವತಂತ್ರತೆ ನಿರ್ಬಂಧಿಸಲ್ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಲೇಖನ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸ್ವಂತ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ, ಇತ್ಯಾದಿ ಎಲ್ಲಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ದೇಶಾದ್ಯಂತ ನೂರಾರು ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಸೆರೆಯಲ್ಲಿರಿಸಿದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಅಂಜುವಂತೆ ಆಯಿತು. ಆಕಾಶವಾಣಿ ಇಂದಿರಾವಾಣಿ ಆಯಿತು, ದೂರದರ್ಶನ ಇಂದಿರಾದರ್ಶನವಾಯಿತು. ಇಂದಿರಾ ಪರ ಸುದ್ದಿಗಳಿಗೆ ಮಾತ್ರ ಅವಕಾಶ. 'ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ' ಆಗಿಹೋಯಿತು. 'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ' ಎಂಬ ಜಾಹಿರಾತಿನ ಹಾಡು ಎಲ್ಲರಿಗೂ ಬಾಯಿಪಾಠವಾದಂತಾಗಿತ್ತು.
     ಹಾಸನದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ಬೀಗಮುದ್ರೆ ಬಿದ್ದಿತು. ಅದಕ್ಕೆ ಮುಂಚೆಯೇ ಎಚ್ಚೆತ್ತಿದ್ದ ಸಂಘದ ಕಾರ್ಯಕರ್ತರು ಕಟ್ಟಡದಲ್ಲಿದ್ದ ವಸ್ತುಗಳನ್ನು ಬೇರೆಡೆಗ ಸಾಗಿಸಿಬಿಟ್ಟಿದ್ದರು. ಸಂಘದ ಪ್ರಚಾರಕರುಗಳು, ಹಿರಿಯ ನಾಯಕರು ಭೂಗತರಾಗಿದ್ದರು. ಆರೆಸ್ಸೆಸ್ ನಿಷೇಧದ ಹಿನ್ನೆಲೆಯಲ್ಲಿ ದಿ. ಬಿ.ಆರ್.ಕೃಷ್ಣಮೂರ್ತಿ, ದಿ. ಎಸ್.ವಿ.ಗುಂಡೂರಾವ್, ಕರಿಬಸಪ್ಪ, ಮುಂತಾದವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ತುರ್ತುಪರಿಸ್ಥಿತಿ ವಿರೋಧಿಸಲು ಲೋಕನಾಯಕ ಜಯಪ್ರಕಾಶ ನಾರಾಯಣರ  ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಜನ್ಮ ತಾಳಿತು. ಅದರ ಬೆನ್ನೆಲುಬು ಆರೆಸ್ಸೆಸ್ಸೇ ಆಗಿತ್ತು. ಹಾಸನ ಜಿಲ್ಲೆಯಲ್ಲೂ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಚಟುವಟಿಕೆಗಳನ್ನು ಸಂಘದ ಕಾರ್ಯಕರ್ತರು ಆರಂಭಿಸಿದರು. 'ಕಹಳೆ' ಹೆಸರಿನಲ್ಲಿ ತುರ್ತು ಪರಿಸ್ಥಿತಿಯ ಕರಾಳ ಮುಖಗಳ ಅನಾವರಣ ಮಾಡುವ ಪತ್ರಿಕೆಯನ್ನು ಗುಪ್ತವಾಗಿ ಹಂಚುವ ಕೆಲಸ ಆರಂಭವಾಯಿತು. ಮುದ್ರಿತ ಪತ್ರಿಕೆಗಳನ್ನು ತರುವ, ವಿತರಿಸುವ ಕೆಲಸ ಬಂಧನವನ್ನು ಎದುರಿಸುವ ಭೀತಿಯಲ್ಲೇ ಜಿಲ್ಲೆಯ ಎಲ್ಲಾ ಮೂಲೆಗೂ ತಲುಪಿಸುವ ಕೆಲಸವನ್ನು ಅನಾಮಧೇಯ ಸಂಘದ ಹುಡುಗರು ಯಶಸ್ವಿಯಾಗಿ ಮಾಡುತ್ತಿದ್ದರು. 1975ರ ಜುಲೈ 4ರಂದು ಹಾಸನದ ಗ್ರಂಥಾಲಯದಲ್ಲಿ ಕಹಳೆ ಪತ್ರಿಕೆಯ ಪ್ರತಿ ಹಾಕುತ್ತಿದ್ದನೆಂದು ಶ್ರೀನಿವಾಸ ಎಂಬ ವಿದ್ಯಾರ್ಥಿಯ ಬಂಧನವಾಯಿತು. ಮರುದಿನ ಹಾಸನ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಫುಡ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಆರೆಸ್ಸೆಸ್ ಕಾರ್ಯಕರ್ತನಾಗಿ ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಿದ್ದೆನೆಂದು ಆರೋಪಿಸಿ ಬಂಧಿಸಿದರು. ನಾನು ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದು, ನನ್ನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಯಿತು. (ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ನಂತರದಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ನನ್ನನ್ನು ದೂರದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿಗೆ ವರ್ಗಾಯಿಸಿದ್ದರು.) ಜಿಲ್ಲೆಯಲ್ಲಿ ಬಂಧನಗಳ ಸರಣಿಗೆ ಚಾಲನೆ ಚುರುಕುಗೊಂಡಿತು. ಪಾರಸಮಲ್ ಸೇರಿದಂತೆ ಹಲವರ ಬಂಧನ ಮುಂದಿನ ವಾರಗಳಲ್ಲಿ ಆಯಿತು. ನವೆಂಬರ್ 14ರಿಂದ ಸತ್ಯಾಗ್ರಹ ನಡೆಸಿ ಬಂಧನಕ್ಕೊಳಗಾಗುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲು ಲೋಕ ಸಂಘರ್ಷ ಸಮಿತಿ ನಿರ್ಧಾರದಂತೆ ಜಿಲ್ಲೆಯಲ್ಲೂ ಚಳುವಳಿ ಪ್ರಾರಂಭಿಸುವ ಬಗ್ಗೆ ಚರ್ಚಿಸಲು  9-11-1075ರಂದು ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಜನಾರ್ಧನ ಐಯಂಗಾರ್, ಕಛ್ ರಾಮಚಂದ್ರ, ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ ಇವರೆಲ್ಲರೂ ಚಂದ್ರಶೇಖರರ ಮನೆಯಲ್ಲಿ ಸೇರಿದ್ದಾಗ ನಮ್ಮ ಜೊತೆಯಲ್ಲೇ ಇದ್ದ ಇನ್ನೊಬ್ಬ ಸ್ನೇಹಿತ (ಆತನ ಹೆಸರನ್ನು ಉದ್ದೇಶಪೂರ್ವಕ ಉಲ್ಲೇಖಿಸಿಲ್ಲ) ಕೊಟ್ಟಿದ್ದ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಭದ್ರತಾ ಕಾಯದೆ ಅನ್ವಯ ಬಂಧಿಸಿ ಜೈಲಿಗೆ ತಳ್ಳಿದರು. ಮಾಹಿತಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸದೆ ಆತನನ್ನು ನಮ್ಮ ವಿರುದ್ಧ ಸಾಕ್ಷಿಯಾಗಿ ಪೋಲಿಸರು ಬಳಸಿಕೊಂಡರು. ಪೋಲಿಸರ ಭಯಕ್ಕೆ ಆತ ಕೋರ್ಟಿನಲ್ಲಿ ನಮ್ಮ ವಿರುದ್ಧ ಸಾಕ್ಷಿಯನ್ನೂ ಹೇಳಿದ್ದ. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದ ಕಾರಣ ಪ್ರಕರಣ ಮುಗಿಯುವವರೆಗೂ ಹಲವು ತಿಂಗಳು ಹಾಸನದ ಜೈಲಿನಲ್ಲೆ ಕಳೆಯಬೇಕಾಯಿತು. ಚಳುವಳಿ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ಬಂಧಿತರಾದ ನಮ್ಮನ್ನು 'ಮಂಗಳಪಾಂಡೆ ತಂಡ' ಎಂದು ಹಾಸ್ಯ ಮಾಡುತ್ತಿದ್ದರು. ಹೀಗೆ ಘೋಷಿತ ದಿನಾಂಕದ ಮೊದಲೇ ಹಾಸನದಲ್ಲಿ ಚಳುವಳಿ ಉದ್ಘಾಟನೆಯಾದಂತಾಗಿತ್ತು.
     ಹಾಸನದ ಜೈಲಿನ ಸ್ಥಿತಿ ಅನುಭವಿಸಿದವರಿಗಷ್ಟೇ ಗೊತ್ತು. ಬಂಧಿತರಾದವರ ಜನಿವಾರ, ಉಡುದಾರ, ಶಿವದಾರ, ಇತ್ಯಾದಿಗಳನ್ನು ಕಿತ್ತು ಬಿಸಾಡಲಾಗುತ್ತಿತ್ತು. ಜೇಬಿನಲ್ಲಿದ್ದ ಪುಡಿಕಾಸು, ಗಡಿಯಾರ, ಇತ್ಯಾದಿಗಳನ್ನು ವಶಪಡಿಸಿಕೊಂಡು ಗಬ್ಬು ವಾಸನೆ ಬರುತ್ತಿದ್ದ ತಿಗಣೆಗಳು, ಕೂರೆಗಳು ಹರಿದಾಡುತ್ತಿದ್ದ ಹರಕು ಕಂಬಳಿ, ನೆಗ್ಗಿ ನುಗ್ಗೇಕಾಯಿ ಆಗಿರುತ್ತಿದ್ದ ಅಲ್ಯೂಮಿನಿಯಮ್ ಚಂಬು, ತಟ್ಟೆಗಳನ್ನು ಕೊಟ್ಟು ಬ್ಯಾರಕ್ಕಿನ ಒಳಗೆ ದಬ್ಬುತ್ತಿದ್ದರು. ಮಲಗಲು ಸಿಮೆಂಟಿನ ಒಂದು ಅಡಿ ಎತ್ತರದ ಕಟ್ಟೆಗಳಿದ್ದವು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ನಮ್ಮನ್ನು ಇತರ ಕಳ್ಳಕಾಕರು, ಕೊಲೆಗಾರರು, ಇತ್ಯಾದಿ ಅಪರಾಧಿಗಳೊಂದಿಗೇ ಕೂಡಿ ಹಾಕಿದ್ದರು. ಕಟ್ಟೆಗಳನ್ನು ಸಮಾಧಿ ಎನ್ನಲಾಗುತ್ತಿತ್ತು. ಕೈದಿಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಕಟ್ಟೆಗಳ ನಡುವಣ ಜಾಗದಲ್ಲೂ ಕೈದಿಗಳು ಮಲಗಬೇಕಾಗುತ್ತಿತ್ತು. ಅದನ್ನು ಸಮಾಧಿಯ ಒಳಗೆ ಅನ್ನುತ್ತಿದ್ದರು. ನನಗೆ ಸಮಾಧಿಯ ಒಳಗೆ ಜಾಗ ಸಿಕ್ಕಿತ್ತು. ಬ್ಯಾರಕ್ಕಿನ ಒಂದು ಮೂಲೆಯಲ್ಲಿ ಇದ್ದ ಬಾಗಿಲಿಲ್ಲದ ಶೌಚಾಲಯ ಕಟ್ಟಿಕೊಂಡು ಹೊರಗೆಲ್ಲಾ ತುಂಬಿಕೊಂಡಿದ್ದು, ಆ ಗಬ್ಬು ವಾಸನೆಯ ನಡುವೆಯೇ ಅಲ್ಲಿರಬೇಕಿತ್ತು. ಅದನ್ನು ನೆನೆಸಿಕೊಂಡರೆ ಈಗಲೂ ವಾಕರಿಕೆ ಬರುತ್ತದೆ. ಊಟಕ್ಕೆ ಬಿಟ್ಟಾಗ ಕೊಡುತ್ತಿದ್ದ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ಅರ್ಧಂಬರ್ಧ ಬೆಂದ ಬೇಳೆ ಸಾರುಗಳನ್ನು ಹಸಿವು ತಡೆಯದೆ ತಿನ್ನಲೇಬೇಕಿತ್ತು. ಸ್ನಾನ ಮಾಡಲು, ತಟ್ಟೆ ತೊಳೆಯಲು, ಮುಖ ತೊಳಯಲು ಇದ್ದ ತೊಟ್ಟಿಯ ನೀರು ಚರಂಡಿಯ ನೀರಿನಂತೆ ಕಾಣುತ್ತಿತ್ತು. ಕಟ್ಟಿಸಿದಾಗಿನಿಂದ ಅದನ್ನು ಬಹುಷಃ ಶುಚಿ ಮಾಡಿರಲಿಕ್ಕಿಲ್ಲ.
     ಹಾಸನ ಜಿಲ್ಲೆಯಲ್ಲೂ ನಿಗದಿತ ದಿನಾಂಕದಿಂದ ಚಳುವಳಿ ಆರಂಭವಾಗೇ ಬಿಟ್ಟಿತು. ಇಂತಹ ಸ್ಥಳದಲ್ಲಿ ಇಂತಹವರ ನಾಯಕತ್ವದಲ್ಲಿ ಚಳುವಳಿ ಮಾಡಲಾಗುವುದೆಂದು ಮೊದಲೇ ಕರಪತ್ರಗಳನ್ನು ಹಂಚಿ ಆ ಸಮಯಕ್ಕೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಚಳುವಳಿ ಮಾಡಲಾಗುತ್ತಿತ್ತು. ಹಾಸನದ ಗುಂಡೂರಾಯರು, ವೆಂಕಟರಮಣೇಗೌಡ, ಕರಿಬಸಪ್ಪ, ಅರಸಿಕೆರೆಯ ದುರ್ಗಪ್ಪಶೆಟ್ಟಿ, ಶ್ರೀನಿವಾಸಮೂರ್ತಿ, ಬಸವರಾಜು, ರಾಮಚಂದ್ರ, ಮರುಳಸಿದ್ದಪ್ಪ, ಛಾಯಾಪತಿ, ಆಲೂರಿನ ಮರಸು ಮಂಜುನಾಥ್, ಬಸವೇಗೌಡ, ಅರಕಲಗೂಡು ಹಿರಣ್ಣಯ್ಯ, ಅನಂತರಾಮು, ಬೇಲೂರಿನ ರವಿ, ನಾರಾಯಣ ಕಾಮತ್, ಚ.ರಾ.ಪಟ್ಟಣದ ಮಳಲಿಗೌಡ, ಸಕಲೇಶಪುರದ ಲೋಕೇಶಗೌಡ, ಹುರುಡಿ ವಿಶ್ವನಾಥ್, ಸತ್ಯನಾರಾಯಣ ಗುಪ್ತ, ವಿ.ಎಸ್.ಭಟ್, . . ಅಬ್ಬಾ, ಹೆಸರುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ, (ಎಲ್ಲರ ಹೆಸರುಗಳನ್ನು ನಮೂದಿಸಲಾಗದಿರುವುದಕ್ಕೆ ಕ್ಷಮೆಯಿರಲಿ) ಇವರೆಲ್ಲರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಚಳುವಳಿಗಳು ನಡೆದೇ ನಡೆದವು. ಬಂಧನಕ್ಕೊಳಗಾಗಿ ಸತ್ಯಾಗ್ರಹಿ ತಂಡಗಳು ಜೈಲಿಗೆ ಬರುತ್ತಿದ್ದಂತೆ ಒಳಗಿದ್ದ ಕೈದಿಗಳಿಂದ ಅವರಿಗೆ ವೀರೋಚಿತ ಸ್ವಾಗತ ಕಾದಿರುತ್ತಿತ್ತು. ಹಾಗೆಂದು ಇದೇನೂ ಸುಲಲಿತವಾಗಿ ನಡೆಯುತ್ತಿದ್ದ ಚಳುವಳಿಗಳೇನೂ ಅಲ್ಲ. ಭಾಗವಹಿಸಿದವರಿಗೆ ಪೋಲಿಸ್ ಠಾಣೆಯಲ್ಲಿ ಭಯಂಕರವಾದ, ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಆತಿಥ್ಯ ಸಿಗುತ್ತಿತ್ತು. ಸಕಲೇಶಪುರದಲ್ಲಿ ಹುರುಡಿ ವಿಶ್ವನಾಥ್ ಮತ್ತು ಸಂಗಡಿಗರ ಮೇಲೆ ಪೋಲಿಸರು ಅಮಾನುಷವಾಗಿ ವರ್ತಿಸಿದ್ದರಿಂದ ಅವರುಗಳು ಹಲವು ದಿನಗಳವರೆಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು. ಈರೀತಿ ಅಮಾನುಷವಾಗಿ ವರ್ತಿಸಿದ್ದ ಸಕಲೇಶಪುರದ ಪೋಲಿಸರ ವಿರುದ್ಧ ಪ್ರತಿಭಟಿಸಿದ್ದ ಹಲವರುಗಳನ್ನೂ ಸಹ ರಕ್ಷಣಾ ಕಾಯದೆ ಅನ್ವಯ ಬಂಧಿಸಿ ಸೆರೆಗೆ ತಳ್ಳಿದ್ದರು. ಚಳುವಳಿ ಮಾಡಿದ ಎಲ್ಲರನ್ನೂ ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಲಾಗುತ್ತಿತ್ತು. ವಿಚಾರಣೆ ವಿಳಂಬವಾಗಿ ಮಂದಗತಿಯಲ್ಲಿ ಸಾಗುತ್ತಿತ್ತು, ವರ್ಷಕ್ಕೂ ಮೀರಿದ ಅವಧಿಯವರೆಗೂ ವಿಚಾರಣೆಗಳು ಮುಂದುವರೆದಿದ್ದಿದೆ.
     ಮೊದಲೇ ಚಳುವಳಿಯ ಸ್ಥಳ, ಸಮಯ ಮತ್ತು ಭಾಗವಹಿಸುವವರ ವಿವರಗಳನ್ನು ಪ್ರಕಟಿಸುತ್ತಿದ್ದರಿಂದ ಪೋಲಿಸರು ಚಳುವಳಿ ತಡೆಯಲು ಮತ್ತು ಚಳುವಳಿ ಮಾಡುವುದಕ್ಕೆ ಮೊದಲೇ ಬಂಧಿಸಲು ಸಹಾಯವಾಗುತ್ತಿದ್ದರಿಂದ ನಂತರದ ದಿನಗಳಲ್ಲಿ ತಂತ್ರ ಬದಲಿಸಿ ಬೇರೆ ಬೇರೆ ಸ್ಥಳಗಳಲ್ಲಿ ಚಳುವಳಿಗಳು ನಡೆಯುತ್ತಿದ್ದವು. ಲೇಖನ ವಿಸ್ತಾರದ ಭಯದಿಂದ ಒಂದೆರಡು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮಾತ್ರ ಉಲ್ಲೇಖಿಸುವೆ. ಅರಸಿಕೆರೆಯಲ್ಲಿ ಒಂದು ಶವಯಾತ್ರೆ ನಡೆದಿತ್ತು. ದುಃಖತಪ್ತರು ವಾದ್ಯಸಮೇತ ಮೆರವಣಿಗೆಯಲ್ಲಿ ಸಾಗಿದ್ದರು. ಮೆರವಣಿಗೆ ಬಸ್ ಸ್ಟ್ಯಾಂಡ್ ಸಮೀಪ ಬರುತ್ತಿದ್ದಂತೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳು ಮೆರವಣಿಗೆಯಲ್ಲಿದ್ದವರಿಂದ ಮೊಳಗಲಾರಂಭಿಸಿದವು. ಪೋಲಿಸರಿಗೆ ಇದು ಸತ್ಯಾಗ್ರಹ ಎಂದು ಅರಿವಾಗಿ ಧಾವಿಸುವಷ್ಟರಲ್ಲಿ ಶವದ ಆಕಾರದ ಗೊಂಬೆಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿಬಿಟ್ಟಿದ್ದರು. ಆ ಬೊಂಬೆಯಲ್ಲಿ ಹುದುಗಿಸಿಟ್ಟಿದ್ದ ಸರಪಟಾಕಿಗಳು ಕಿವಿ ಗಡಚಿಕ್ಕುವ ಶಬ್ದ ಹೊರಡಿಸಲು ಪ್ರಾರಂಭಿಸಿದಾಗ ಪೋಲಿಸರು ಕಕ್ಕಾಬಿಕ್ಕಿಯಾಗಿದ್ದರು. 
     ಹಾಸನದ ನರಸಿಂಹರಾಜವೃತ್ತದಲ್ಲಿ ಸಕಲೇಶಪುರದ ಲೋಕೇಶಗೌಡರ ನೇತೃತ್ವದಲ್ಲಿ ಚಳುವಳಿ ನಡೆಯುವುದೆಂದು ಪ್ರಚುರವಾಗಿತ್ತು. ಅದನ್ನು ಶತಾಯ ಗತಾಯ ತಡೆಯಲು ಪೋಲಿಸರು ಎಲ್ಲೆಡೆ ಕಟ್ಟೆಚ್ಚರದಿಂದ ಕಾಯುತ್ತಿದ್ದರು. ಆ ರಸ್ತೆಯಲ್ಲಿ ಸಂಚಾರವನ್ನೇ ಸ್ಥಗಿತಗೊಳಿಸಿ ಬೇರೆ ದಾರಿಯಿಂದ ಸಂಚರಿಸಲು ವ್ಯವಸ್ಥೆ ಮಾಡಿದ್ದರು. ಜನರು ಒಟ್ಟಿಗೆ ಓಡಾಡದಂತೆ, ಅಲ್ಲಿ  ನಿಂತುಕೊಳ್ಳದಂತೆ ಪೋಲಿಸರು ತಾಕೀತು ಮಾಡುತ್ತಿದ್ದರು. ಹೀಗಿದ್ದಾಗ ಅಲ್ಲಿಗೆ ಒಂದು ಮೆಟಡಾರ್ ಅಲ್ಲಿಗೆ ಬಂದಿತು. ಬೇರೆ ದಾರಿಯಲ್ಲಿ ಹೋಗುವಂತೆ ಪೋಲಿಸರು ಸೂಚಿಸುವಾಗ ಅವರಿಗೆ ಅದರಲ್ಲಿ ಮೈಗೆಲ್ಲಾ ಬ್ಯಾಂಡೇಜ್ ಹಾಕಿಕೊಂಡಿದ್ದರೂ ರಕ್ತ ಒಸರುತ್ತಿದ್ದ ಅಪಾಯ ಸ್ಥಿತಿಯಲ್ಲಿದ್ದ ವ್ಯಕ್ತಿ ಮತ್ತು ಆತನ ಬಂಧುಗಳಿದ್ದುದು ಕಂಡುಬಂದಿತ್ತು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದಾಗ ಮಾನವೀಯತೆಯಿಂದ ಆ ವಾಹನವನ್ನು ಮುಂದೆ ಹೋಗಲು ಬಿಟ್ಟರು. ಸ್ವಲ್ಪ ದೂರ ಹೋದ ಆ ವಾಹನ ಸರ್ಕಲ್ ಸಮೀಪದಲ್ಲೇ ಕೆಟ್ಟು ನಿಂತುಬಿಟ್ಟಿತು. ಬೇರೆ ವಾಹನ ತರುವುದಾಗಿ ಹೇಳಿ ವ್ಯಾನಿನಲ್ಲಿದ್ದವರು ನಾಲ್ಕು ಭಾಗಗಳಾಗಿ ನಾಲ್ಕು ರಸ್ತೆಗಳಲ್ಲಿ ಸ್ವಲ್ಪ ಮುಂದೆ ಸಾಗಿ ಅಂಗಿಯ ಒಳಗೆ ಹುದುಗಿಸಿಟ್ಟಿದ್ದ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ವ್ಯಾನಿನ ಒಳಗೆ ಇದ್ದ ಬ್ಯಾಂಡೇಜ್ ಸುತ್ತಿಕೊಂಡಿದ್ದ ವ್ಯಕ್ತಿ ಒಂದು ಕೈಯಲ್ಲಿ ಭಗವಾದ್ವಜ ಇನ್ನೊಂದು ಕೈಲ್ಲಿ ತ್ರಿವರ್ಣ ದ್ವಜ ಹಿಡಿದು ಹೊರಗೆ ಬಂದು ಸರ್ಕಲ್ಲಿನ ಮಧ್ಯದಲ್ಲಿ ನಿಂತು, 'ಭಾರತಮಾತಾ ಕಿ ಜೈ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ' ಎಂದು ಘೋಷಿಸಲು ಪ್ರಾರಂಭಿಸಿತ್ತು. ಆತ ಮತ್ಯಾರೂ ಆಗಿರದೇ ಲೋಕೇಶಗೌಡರೇ ಆಗಿದ್ದರು! ಪೋಲಿಸರಿಗೆ ಕೆಲಕ್ಷಣ ಯಾರನ್ನು ಬಂಧಿಸಬೇಕು ಎಂದು ತಿಳಿಯದೆ ಪರದಾಡಿ, ಕೊನೆಗೆ ಎಲ್ಲರನ್ನೂ ಬಂಧಿಸಿ ಹಾಸನದ ಸೆರೆಮನೆಗೆ ಅಟ್ಟಿದ್ದರು. 
     ಅರಕಲಗೂಡಿನ ಅನಂತ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭ ಏರಿ ಅಲ್ಲಿ ಕಪ್ಪು ಬಾವುಟ ಹಾರಿಸಿ ಕೆಳಗೆ ಇಳಿದು ಬರುತ್ತಾ ಕಂಬಕ್ಕೆ ಗ್ರೀಸ್ ಮೆತ್ತಿ ಬಂದಿದ್ದ. ಮರುದಿನ ಬೆಳಿಗ್ಗೆ ಆ ಕಪ್ಪು ಬಾವುಟ ಇಳಿಸಿ ರಾಷ್ಟ್ರದ್ವಜ ಹಾರಿಸಲು ಅಧಿಕಾರಿಗಳು ಪಟ್ಟಿದ್ದ ಪಾಡು ಅಷ್ಟಲ್ಲ. ಹೊಳೆನರಸಿಪುರದ ಭಗವಾನ್ ಎಂಬ ಬಾಲಕ ಸಂತೆಯಲ್ಲಿ, 'ಕಹಳೆ ಓದಿ, ಇಂದಿರಾಗಾಂಧಿ ಮಾಡಿದ ಅವಾಂತರ ನೋಡಿ' ಎಂದು ಜನರಿಗೆ ಪತ್ರಿಕೆ ಹಂಚುತ್ತಿದ್ದುದನ್ನು ಕಂಡು ಪೋಲಿಸರು ಅವನನ್ನು ಬಂಧಿಸಿ ವಿಚಾರಿಸಿದಾಗ, 'ಯಾರು ಕೊಟ್ಟರೋ ಗೊತ್ತಿಲ್ಲ, ಹಂಚು ಅಂದರು, ಹಂಚುತ್ತಿದ್ದೆ' ಎಂದು ಉತ್ತರಿಸಿದ್ದ. ಇನ್ನೂ ಚಿಕ್ಕವನಾಗಿದ್ದರಿಂದ ಅವನಿಗೆ ಎಚ್ಚರಿಕೆ ಕೊಟ್ಟು ಹಿಂಭಾಗಕ್ಕೆ ಎರಡು ಬಾರಿಸಿ ಬಿಟ್ಟುಕಳಿಸಿದ್ದರು. ಇಂತಹ ಯಾವುದೇ ಸುದ್ದಿಗಳು ಆಕಾಶವಾಣಿಯಲ್ಲಾಗಲೀ, ಪತ್ರಿಕೆಯಲ್ಲಾಗಲೀ ಪ್ರಕಟವಾಗುತ್ತಲೇ ಇರಲಿಲ್ಲ. ಕೇವಲ ಭೂಗತ ಪತ್ರಿಕೆ 'ಕಹಳೆ'ಯ ಮೂಲಕ ಮಾತ್ರ ಸುದ್ದಿ ಹೊರಜಗತ್ತಿಗೆ ತಿಳಿಯುತ್ತಿತ್ತು. ಜನರು ಆ ಪತ್ರಿಕೆಯನ್ನು ಓದಲು, ಕೈಯಲ್ಲಿ ಹಿಡಿದುಕೊಳ್ಳಲೂ ಹೆದರುತ್ತಿದ್ದರೆಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಚಳುವಳಿಯಲ್ಲಿ ಅರಸಿಕೆರೆ ತಾಲ್ಲೂಕು ಮುಂಚೂಣಿಯಲ್ಲಿತ್ತು. ಬಂಧಿತರು, ಭಾಗವಹಿಸಿದವರಲ್ಲಿ ಅವರದೇ ಸಿಂಹಪಾಲು. ಉಳಿದ ತಾಲ್ಲೂಕುಗಳೂ ಗಣನೀಯ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಭಾಗವಹಿಸಿದವು. ಆದರೆ ಇತರ ಎಲ್ಲಾ ತಾಲ್ಲೂಕುಗಳಿಗೆ ಹೋಲಿಸಿದರೆ  ಹೊಳೆನರಸಿಪುರ ತಾಲ್ಲೂಕಿನಲ್ಲಿ ವ್ಯಕ್ತವಾದ ಪ್ರತಿಭಟನೆ ಸ್ವಲ್ಪ ಸಪ್ಪೆಯೆಂದೇ ಹೇಳಬೇಕಾಗುತ್ತದೆ.
     ಭಾರತ ರಕ್ಷಣಾ ಕಾಯದೆ (ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್) ಅನ್ನು ಡಿಫೆನ್ಸ್ ಆಫ್ ಇಂದಿರಾ ರೂಲ್ಸ್ ಮತ್ತು ಆಂತರಿಕ ಭದ್ರತಾ ಶಾಸನ (ಮೀಸಾ-ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್) ಅನ್ನು ಮೈಂಟೆನೆನ್ಸ್ ಆಫ್ ಇಂದಿರಾ ಸಂಜಯ್ ಆಕ್ಟ್ ಎಂದು ವ್ಯಂಗ್ಯವಾಗಿ ಆಡಿಕೊಳ್ಳಲಾಗುತ್ತಿತ್ತು. ಎರಡು ವರ್ಷಗಳ ಕಾಲ ಯಾವುದೇ ವಿಚಾರಣೆಯಿಲ್ಲದೆ, ನ್ಯಾಯಾಲಯಕ್ಕೆ ಯಾವುದೇ ಕಾರಣ ಕೊಡದೆ ಬಂಧಿಸಲು ಅವಕಾಶ ಕೊಡುವ ಮೀಸಾ ಕಾಯದೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಸರಿಯಾಗಿ ಮೀಸೆಯೇ ಬರದಿದ್ದ ವಿದ್ಯಾರ್ಥಿಗಳಾದ ಹಾಸನದ ಪಾರಸಮಲ್, ಅರಕಲಗೂಡಿನ ಪಟ್ಟಾಭಿರಾಮರನ್ನು ಬಂಧಿಸಿದ್ದರು. ಇತರ ಮೀಸಾ ಬಂದಿಗಳೆಂದರೆ, ದಿ. ಎಸ್.ವಿ.ಗುಂಡೂರಾವ್, ದಿ. ವೆಂಕಟರಮಣೇಗೌಡ, ದಿ. ಎನ್.ಕೆ.ಗಣಪಯ್ಯ, ಸಕಲೇಶಪುರದ ತರುಣ ಸತ್ಯನಾರಾಯಣಗುಪ್ತ, ಅರಸಿಕೆರೆಯ ಶ್ರೀನಿವಾಸಮೂರ್ತಿ, ದುರ್ಗಪ್ಪಶೆಟ್ಟಿ, ಆಲೂರು ತಾ.ನ ದಿ. ಬಸವೇಗೌಡ, ಮರಸು ಮಂಜುನಾಥ್, ಆರೆಸ್ಸೆಸ್ಸಿನ ಜಿಲ್ಲಾ ಪ್ರಚಾರಕ ದಿ. ಪ್ರಭಾಕರ ಕೆರೆಕೈ, ಅರೆಹಳ್ಳಿಯ ನಾರಾಯಣ ಕಾಮತ್, ಡಾ. ವಿ.ಎಸ್.ಭಟ್, ಸಕಲೇಶಪುರ. ಇವರ ಪೈಕಿ ಗಣಪಯ್ಯನವರು ಭಾರತೀಯ ಲೋಕದಳಕ್ಕೆ ಸೇರಿದವರಾಗಿದ್ದು ಉಳಿದವರೆಲ್ಲರೂ ಆರೆಸ್ಸೆಸ್ಸಿನವರು. ನನ್ನನ್ನೂ ಮೀಸಾ ಪ್ರಕಾರ ಬಂಧಿಸಲು ಆಗಿನ ಎಸ್.ಪಿ.ಯವರು ಶಿಫಾರಸು ಮಾಡಿದ್ದರೂ, ಆಗಿನ ಜಿಲ್ಲಾಧಿಕಾರಿ ಶ್ರೀ ಧೀರೇಂದ್ರಸಿಂಗರು ಅವರ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಮೀಸಾ ಬಂದಿಯಾಗಿಸಲು ಒಪ್ಪದ ಕಾರಣ ಮೀಸಾಬಂದಿಯಾಗಿ ಬಳ್ಳಾರಿ ಜೈಲಿಗೆ ಹೋಗುವುದು ತಪ್ಪಿತ್ತು. ದೇವೇಗೌಡರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಸರ್ಕಾರ ಮುಂಜಾಗ್ರತೆಯಾಗಿ ಬಂಧಿಸಿ ಬೆಂಗಳೂರಿನ ಜೈಲಿನಲ್ಲಿಟ್ಟಿದ್ದು, ಹಾಸನ ಜಿಲ್ಲೆಯಲ್ಲಿ ಬಂಧಿತರಾದವರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಭಾರತ ರಕ್ಷಣಾ ಕಾಯದೆಯನ್ವಯ ಜಿಲ್ಲೆಯಲ್ಲಿ ಸುಮಾರು ೩೦೦ ಜನರು ಬಂಧಿತರಾಗಿದ್ದು ಅವರೆಲ್ಲರೂ ಆರೆಸ್ಸೆಸ್ಸಿನ ಮೂಲದವರೇ ಆಗಿದ್ದು ವಿಶೇಷವೇ ಸರಿ. ಇದಲ್ಲದೆ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ವಿವಿಧ ಪ್ರಕರಣಗಳಲ್ಲಿ ಒಳಗೊಂಡವರು, ಜೈಲುಗಳಲ್ಲಿ ಸ್ಥಳವಿಲ್ಲದೆ ಹೆದರಿಸಿ, ಬೆದರಿಸಿ ಬಿಡಲ್ಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ವಿವಿಧ ಕಾಲೇಜಿನ ತರುಣರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ. ಬಂಧನಕ್ಕೆ ಒಳಗಾಗದೆ, ಭೂಗತರಾಗಿ ಚಳುವಳಿಗೆ ಪ್ರೇರಿಸುವ, ಜನಜಾಗೃತಿ ಮಾಡುವ ಆರೆಸ್ಸೆಸ್ಸಿನ ತರುಣರ, ಪ್ರಚಾರಕರುಗಳ ಸಂಖ್ಯೆ ಮತ್ತು ಅವರು ತುರ್ತು ಪರಿಸ್ಥಿತಿ ತೆರವಿಗೆ ಮಾಡಿದ ಕೆಲಸ ಶ್ಲಾಘನೀಯವಾದುದಾಗಿದೆ. ಬಂಧನದ ಕಾಲದಲ್ಲಿ ಕಿರುಕುಳಕ್ಕೆ ಒಳಗಾಗಿದ್ದ ಜಿಲ್ಲಾ ಪ್ರಚಾರಕ ಪ್ರಭಾಕರ ಕೆರೆಕೈ ನಂತರದಲ್ಲಿ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಮೃತಪಟ್ಟರು. 
     ದೇಶದೆಲ್ಲೆಡೆ ತುರ್ತುಪರಿಸ್ಥಿತಿ ವಿರುದ್ಧ ಜನರ ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ಇಂದಿರಾ ಸರ್ಕಾರ ತುರ್ತು ಪರಿಸ್ಥಿತಿ ತೆರವುಗೊಳಿಸಿ ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ಮೇಲಿನ ನಿಷೇಧ ರದ್ದು ಪಡಿಸಲೇಬೇಕಾತು. ಲೋಕಸಭೆ ವಿಸರ್ಜಿಸಿ ಚುನಾವಣೆ ನಡೆಸಿ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮದು ಸರಿಯಾದ ಕ್ರಮವಾಗಿತ್ತೆಂದು ಸಮರ್ಥಿಸಿಕೊಳ್ಳಬಹುದೆಂದು ಎಣಿಸಿದ್ದ ಅವರ ಎಣಿಕೆ ತಲೆಕೆಳಗಾಯಿತು. ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಒಗ್ಗೂಡಿ ಜನತಾಪಕ್ಷ ರಚಿಸಿಕೊಂಡು ಚುನಾವಣೆ ಎದುರಿಸಿ ಯಶಸ್ವಿಯಾದವು. ಕೇಂದ್ರದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರ ನೀಡಿತು. ಕರ್ನಾಟಕದಲ್ಲಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ಮತ್ತು ಹಾಸನದಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರು. ಹಾಸನದ ಎಸ್. ನಂಜೇಶಗೌಡರು ಅಲ್ಪ ಬಹುಮತದಿಂದ ಜಯಗಳಿಸಿದ್ದು ಜಿಲ್ಲೆಯ ಜನತೆಯ ಪ್ರಜಾಫ್ರಭುತ್ವದ ಒಲವನ್ನು ಎತ್ತಿ ತೋರಿಸಿತ್ತು, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಬೆಂಬಲಿಸಿದಂತಿತ್ತು.
     ಸುಮಾರು ಮೂರು ವರ್ಷಗಳ ಹಿಂದೆ, ದಿನಾಂಕ 29-12-2012ರಂದು ತುರ್ತುಪರಿಸ್ಥಿತಿಯ ನೆನಪುಗಳಿಗೆ ಸಂಬಂಧಿಸಿದ ಲೇಖಕನ "ಆದರ್ಶದ ಬೆನ್ನು ಹತ್ತಿ. ." ಕೃತಿ ಬಿಡುಗಡೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡವರ ಸಮಾವೇಶ ಏರ್ಪಡಿಸಲಾಗಿತ್ತು. (ಪುಸ್ತಕದ ಪ್ರತಿ ಬೇಕಿದ್ದವರು ಲೇಖಕರನ್ನು ಸಂಪರ್ಕಿಸಬಹುದು.) ಎಷ್ಟೋ ಜನರು ಸತ್ತೇ ಹೋಗಿದ್ದರು, ಎಷ್ಟೋ ಜನರು ಊರು ಬಿಟ್ಟು ಹೋಗಿದ್ದು ಅವರ ವಿಳಾಸ ತಿಳಿದಿರಲಿಲ್ಲ. ಹಾಗಾಗಿ ಅಂದು ತರುಣರಾಗಿದ್ದು, ಈಗ ಜೀವನ ಸಂಧ್ಯಾಕಾಲದಲ್ಲಿರುವ ಜಿಲ್ಲೆಯ ಸುಮಾರು 100 ಜನರನ್ನು ಶ್ರಮವಹಿಸಿ ಒಟ್ಟಿಗೆ ಸೇರಿಸಿದ್ದು ಮರೆಯಲಾಗದ ಅನುಭವ ನೀಡಿತ್ತು. 1975-77ರ ಅವಧಿಯಲ್ಲಿ ಬಂಧಿತರಾಗಿದ್ದಾಗ ಕಂಡಿದ್ದವರು ಸುಮಾರು 35 ವರ್ಷಗಳ ನಂತರದಲ್ಲಿ ಪರಸ್ಪರ ಮುಖಾಮುಖಿಯಾದಾಗ ಅವರುಗಳಿಗೆ ಆದ ಅನುಭವ, ಆನಂದ ಅವರ್ಣನೀಯ. ಪರಸ್ಪರರನ್ನು ತಬ್ಬಿಕೊಂಡು, 'ಅಯ್ಯೋ, ನೀನಿನ್ನೂ ಬದುಕಿದ್ದೀಯೇನೋ, ಸತ್ತೇ ಹೋಗಿದ್ದಿಯೇನೋ ಅಂದುಕೊಂಡಿದ್ದೆ' ಎಂದು ಆನಂದಭಾಷ್ಪ ಸುರಿಸಿದ್ದರು. ಎಲ್ಲರೂ ಹಿಂದಿನ ತಾರುಣ್ಯದ ಕಾಲಕ್ಕೆ ಜಾರಿದ್ದರು. ಜೈಲಿನಲ್ಲಿ ಹಾಡುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಹಾಡನ್ನು ಎದೆಯುಬ್ಬಿಸಿ ಸಾಮೂಹಿಕವಾಗಿ ಹಾಡಿದಾಗ ಕಣ್ಣಂಚಿನಲ್ಲಿ ನೀರಾಡಿದ್ದವು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ಉಳಿವಿಗೆ ಕಾರಣ ಎಂಬ ಸಂದೇಶ ಬಿತ್ತರವಾಗಿತ್ತು.
-ಕ.ವೆಂ.ನಾಗರಾಜ್.
*****
ತುರ್ತು ಪರಿಸ್ಥಿತಿ ಹಿಂತೆಗೆತವಾಗಿ ಆರೆಸ್ಸೆಸ್ಸಿನ ಮೇಲಿನ ನಿಷೇಧ ತೆರವಾದಮೇಲೆ ಹಾಸನ ನಗರದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟಿಸಿ ಜೈಲುವಾಸ ಅನುಭವಿಸಿದ ಗೆಳೆಯರು ಒಟ್ಟಿಗೆ ತೆಗೆಸಿಕೊಂಡಿದ್ದ 38 ವರ್ಷಗಳ ಹಿಂದಿನ ಅಪರೂಪದ ಫೋಟೋ  

ನಿಂತಿರುವವರು: ನಾಗಭೂಷಣ, ವಾಸುದೇವ, . . . . ,ರವಿಕುಮಾರ್, ಸತ್ಯಮೂರ್ತಿ, ಕುಮಾರ್, ಫಾಲಾಕ್ಷ, ಶ್ರೀರಾಮ, ಸುಬ್ರಹ್ಮಣ್ಯ, ಪ್ರಸನ್ನ, ಹಿರಿಯಣ್ಣ, ರಾಮಶಂಕರಬಾಬು, ಸುವರ್ಣ, ಪುರುಷೋತ್ತಮ
ಕುಳಿತಿರುವವರು: ಎ.ವಿ. ಚಂದ್ರಶೇಖರ್, ಶಿವರಾಮ್, ಬಸವರಾಜು, ಪಾರಸಮಲ್, ಜಯಪ್ರಕಾಶ್, ಕರಿಬಸಪ್ಪ, ಎಸ್.ವಿ. ಗುಂಡೂರಾವ್, ರಾಜಶೇಖರ್, ಜನಾರ್ಧನ ಐಯ್ಯಂಗಾರ್, ಚಂದ್ರಶೇಖರ್, ಶಾಂತಿಲಾಲ್, ಲೇಖಕ ಕ.ವೆಂ.ನಾಗರಾಜ್, ರಾಮಚಂದ್ರ.
****
     ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಾಸನದಲ್ಲಿ 28-02-2014 ಮತ್ತು 01-03-2014ರಂದು ನಡೆದ 14ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿನ  ವಿಶೇಷ ತ್ರೈಮಾಸಿಕ 'ಹೊಯ್ಸಳ ಸಿರಿ'ಯಲ್ಲಿ ಪ್ರಕಟ:


ದಿನಾಂಕ 25.6.2015ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ:



ಪ್ರಜ್ಞಾಚಕ್ಷು ವಿರಜಾನಂದರ ಸಾಧನೆ


      ಮಹರ್ಷಿ ದಯಾನಂದ ಸರಸ್ವತಿಯವರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಹುಟ್ಟು ಕುರುಡರು. ಮೂಲತಃ ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯವರನ್ನು ಕಳೆದುಕೊಂಡಿದ್ದರು. ಅವರ ಅತ್ತಿಗೆ, ಅಣ್ಣ ಈ ಕುರುಡ ಹುಡುಗನನ್ನು 'ಏಕೆ ಈ ಶನಿಯನ್ನು ನಮ್ಮ ತಲೆಗೆ ಕಟ್ಟಿಹೋದರೋ ಅಪ್ಪ, ಅಮ್ಮ, ಇವನು ಎತ್ತಲಾದರೂ ತೊಲಗಿ ಹೋಗಬಾರದೇ' ಎಂದು ಪ್ರತಿನಿತ್ಯವೆನ್ನುವಂತೆ ಹಂಗಿಸುತ್ತಿದ್ದರು, ರೇಗುತ್ತಿದ್ದರು. ಈ ಬಯ್ಗಳವನ್ನು ಇನ್ನು ಸಹಿಸುವುದು ಕಷ್ಟ ಎಂಬ ಸ್ಥಿತಿಗೆ ತಲುಪಿದ ಆ ಬಾಲಕ ಒಂದು ದಿನ ಮನೆಯಿಂದ ಹೊರಟೇಬಿಟ್ಟ. ಆಗ ಆತನಿಗೆ ಕೇವಲ ಎಂಟು ವರ್ಷ. ಒಂದು ಕೈಯಲ್ಲಿ ಲಾಠಿ ಹಿಡಿದುಕೊಂಡು ನಡೆದೇ ನಡೆದ. ಊಹಿಸುವುದೂ ಕಷ್ಟವಾಗುತ್ತದೆ. ಈಗಿನಂತೆ ರಸ್ತೆಗಳಿಲ್ಲದ, ಕಾಡು-ಮೇಡುಗಳಿಂದ ಕೂಡಿದ ಪ್ರದೇಶಗಳಲ್ಲಿ ಕೋಲಿನ ಆಧಾರದಲ್ಲಿ ತಡವರಿಸಿ ನಡೆಯುತ್ತಾ ಸುಮಾರು 2000 ಮೈಲುಗಳಷ್ಟು ದೂರ ಕ್ರಮಿಸಿ ಆತ ತಲುಪಿದ್ದು ಹರಿದ್ವಾರವನ್ನು!  ಕಣ್ಣಿರುವವರು, ಧೃಢಕಾಯರೂ ಆ ರೀತಿ ಕ್ರಮಿಸಲು ಹಿಂಜರಿಯುವ ಕಾಲವದು. ಆ ಅಂಧ ಬಾಲಕ ಅದನ್ನು ಮಾಡಿದ್ದೇ ಒಂದು ದೊಡ್ಡ ಕೆಲಸ. ಆತನ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಆತನ ಬುದ್ಧಿ ಎಷ್ಟು ತೀಕ್ಷ್ಣ ಅಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, 'ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ'. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಅವರ ಅದ್ಭುತ ಗ್ರಹಣ ಶಕ್ತಿಯಿಂದಾಗಿ ಒಂದು ಸಲ ಕೇಳಿದರೆ ಸಾಕು, ಅದು ಅವರಿಗೆ ಮನದಟ್ಟಾಗಿಬಿಡುತ್ತಿತ್ತು. ನಂತರದಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರಾಗಿದ್ದ ಸ್ವಾಮಿ ಪೂರ್ಣಾನಂದರ ಶಿಷ್ಯರಾಗಿ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತರು ಎಂದು ಹೇಳುತ್ತಾರೆ. ಹಿಂದೂ ತತ್ತ್ವದರ್ಶನಗಳ ಮೂಲವಿಚಾರಗಳನ್ನು ಮನನ ಮಾಡಿಕೊಂಡವರು ಅವರು. ಪವಿತ್ರ ಗಾಯತ್ರಿ ಮಂತ್ರವನ್ನು ವರ್ಷಗಳ ಕಾಲ ಪಠಿಸುತ್ತಿದ್ದ ಅವರಿಗೆ ಪ್ರಾಪ್ತವಾದ ದಿವ್ಯದೃಷ್ಟಿಯಿಂದ ಜ್ಞಾನೋದಯವಾಗಿ ಅವರಿಗೆ ಆಧ್ಯಾತ್ಮಿಕ ಉನ್ನತಿ ಮತ್ತು ಮಂತ್ರಗಳಲ್ಲಿ ಸ್ವಾಮಿತ್ವ ದೊರಕಿತು ಎನ್ನಲಾಗಿದೆ. ಇದು ಏನೇ ಇರಲಿ, ಕುರುಡರಾಗಿದ್ದರೂ ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಹೊಂದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು.  ಕಣ್ಣಿರುವವರಿಗೂ ಕಷ್ಟವಾದ ಈ ಜ್ಞಾನ ಪ್ರಜ್ಞಾಚಕ್ಷುವಾಗಿದ್ದ ವಿರಜಾನಂದರಿಗೆ ಲಭ್ಯವಾಗಿತ್ತು.
     ಮೋಕ್ಷ ಸಾಧನೆಗೆ ಮೂರ್ತಿಪೂಜೆಯ ಅಗತ್ಯವಿಲ್ಲವೆಂದು ತಮ್ಮ ಶಿಷ್ಯರಿಗೆ ಹೇಳುತ್ತಿದ್ದ ಅವರು ದೇವರನ್ನು ತಮ್ಮ ಸುತ್ತಮುತ್ತಲಿನಲ್ಲೇ ಎಲ್ಲಾ ಜೀವಿಗಳಲ್ಲಿ, ವಸ್ತುಗಳಲ್ಲಿ, ಸ್ವತಃ ತಮ್ಮ ಹೃದಯಗಳಲ್ಲೇ ಕಾಣಬೇಕೆಂದು, ಅವನನ್ನು ಕೇವಲ ದೇಗುಲಗಳಲ್ಲಿನ ವಿಗ್ರಹಗಳಲ್ಲಿ ಮಾತ್ರ ಕಾಣಲು ಪ್ರಯತ್ನಿಸಬಾರದೆಂದು ಒತ್ತಿ ಹೇಳುತ್ತಿದ್ದರು. ಕಷ್ಟದಲ್ಲಿದ್ದರೂ ವಿರಜಾನಂದರು ವಿನೋದ ಪ್ರವೃತ್ತಿಯವರೂ ಆಗಿದ್ದರು. ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಭಕ್ತರು ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗುತ್ತಾ ಹೋಗುತ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, "ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?" ವಿರಜಾನಂದರು ನಗುತ್ತಲೇ ಹೇಳಿದ್ದರು, "ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಪಕ್ಕಕ್ಕೆ ಸರಿಯೋಕೆ ಆಗ್ತಾ ಇರಲಿಲ್ವಾ?"
     ಅದ್ವಿತೀಯ ಸಂನ್ಯಾಸಿ ದಯಾನಂದ ಸರಸ್ವತಿ ಗುರುವನ್ನು ಅರಸುತ್ತಾ ಸ್ವಾಮಿ ವಿರಜಾನಂದರ ಬಳಿಗೆ ಬಂದಾಗ ದಯಾನಂದರಿಗೆ 36 ವರ್ಷ ವಯಸ್ಸು. ಮಥುರಾದ ವಿಶ್ರಾಂತ್ ಘಾಟಿಗೆ ಹೋಗುವ ದಾರಿಯಲ್ಲಿದ್ದ ವಿರಜಾನಂದರ ಶಾಲೆಯ ಬಳಿಗೆ ಬಂದ ದಯಾನಂದರು ಬಾಗಿಲು ಬಡಿದಿದ್ದರು. ಒಳಗಿನಿಂದ ಒಂದು ಗಂಭೀರ ಧ್ವನಿ ಕೇಳಿಬಂದಿತು, "ಯಾರದು?"
ದಯಾನಂದ: ಗುರುದೇವಾ, ನಾನು ನಿಮ್ಮ ಸೇವಕ. ನನ್ನನ್ನು ದಯಾನಂದ ಸರಸ್ವತಿ ಎಂದು ಕರೆಯುತ್ತಾರೆ.
ವಿರಜಾನಂದ: ನಿನಗೇನು ಬೇಕು?
ದಯಾನಂದ: ಜ್ಞಾನದ ಬೆಳಕಿಗಾಗಿ ನಿಮ್ಮನ್ನು ಹುಡುಕಿಕೊಂಡು ಬಂದಿರುವೆ.
ವಿರಜಾನಂದ: ನಿನಗೆ ವ್ಯಾಕರಣ ಗೊತ್ತಿದೆಯೇ?
ದಯಾನಂದ: ನಾನು ಕೌಮುದಿ ಮತ್ತು ಸಾರಸ್ವತಗಳನ್ನು ಓದಿಕೊಂಡಿದ್ದೇನೆ. (ಎರಡು ಸಂಸ್ಕೃತ ವ್ಯಾಕರಣದ ಪ್ರಸಿದ್ಧ ಗ್ರಂಥಗಳು.)
ವಿರಜಾನಂದ: ಏನು? ಕೌಮುದಿ, ಸಾರಸ್ವತ? ಇಲ್ಲಿಂದ ಹೊರಟು ಹೋಗು. ಆ ಉಪಯೋಗವಿಲ್ಲದ ಪುಸ್ತಕಗಳು! ಅವನ್ನು ಯಮುನಾ ನದಿಯಲ್ಲಿ ಬಿಸಾಕು, ಆಮೇಲೆ ಬಾ. ಆ ನಂತರವೇ ನಾನು ಬಾಗಿಲು ತೆಗೆಯುವೆ.
     ಗುರುವಿನ ಆದೇಶದಂತೆ ದಯಾನಂದರು ನೇರವಾಗಿ ಯಮುನಾ ನದಿಯ ಬಳಿಗೆ ಹೋದರು. ನೂರಾರು ಮೈಲುಗಳು ದೂರ ಪ್ರಯಾಣ ಮಾಡುತ್ತಾ ಅವರು ಈ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ತಂದಿದ್ದರು. ಆದರೆ ಈಗ ಅವುಗಳ ಕುರಿತು ಯಾವುದೇ ವ್ಯಾಮೋಹ ಇಟ್ಟುಕೊಳ್ಳದೆ ನದಿಗೆ ಎಸೆದುಬಿಟ್ಟರು ಮತ್ತು ಗುರುಗಳ ಮನೆಗೆ ಹಿಂತಿರುಗಿ ಬಂದು ಹೇಳಿದರು, "ಗುರುದೇವಾ, ನಿಮ್ಮ ಆದೇಶವನ್ನು ಪಾಲಿಸಿದ್ದೇನೆ." ಶಿಷ್ಯನಿಗಾಗಿ ಗುರುಗಳ ಶಾಲೆಯ ಬಾಗಿಲು ತೆರೆಯಲ್ಪಟ್ಟಿತು.
     ದಯಾನಂದರು ಒಳಗೆ ಪ್ರವೇಶಿಸಿ ನೋಡಿದರೆ ಗುರು ವಿರಜಾನಂದರು ಕೃಷ್ಣಾಜಿನದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಿದ್ದರು. ಕೇವಲ ಚರ್ಮ ಮತ್ತು ಮೂಳೆಗಳು ಕಾಣುತ್ತಿದ್ದ ಕೃಷಕಾಯದ ವಿರಜಾನಂದರ ಮುಖ ತೇಜಸ್ಸಿನಿಂದ ಕೂಡಿತ್ತು. ಆ ವೈರಾಗ್ಯನಿಧಿಯ ಪಾದಗಳಿಗೆ ನಮಿಸಿದ ದಯಾನಂದರ ತಲೆಯ ಮೇಲೆ ಗುರು ಪ್ರೀತಿಪೂರ್ವಕವಾಗಿ ಕೈಯಾಡಿಸಿದರು. ದಯಾನಂದರು ಅಂಧರಾಗಿದ್ದ ಗುರುಗಳ ಕಡೆಗೆ ಆಶ್ಚರ್ಯದಿಂದ ನೋಡಿದರು. ಕುರುಡರಾಗಿದ್ದ ಗುರುಗಳು ಒಂದು ಅಕ್ಷರವನ್ನೂ ಓದಲು ಸಾಧ್ಯವಿರಲಿಲ್ಲ. ಆದರೆ ಅವರು ಜ್ಞಾನಸಮೃದ್ಧತೆಯ ಜೀವಂತ ಪ್ರತಿರೂಪವಾಗಿದ್ದರು ಮತ್ತು ಶಿಷ್ಯರ ಎಲ್ಲಾ ಸಂದೇಹಗಳನ್ನು ವೇದಗಳ, ಎಲ್ಲಾ ಗ್ರಂಥಗಳ ಮಂತ್ರಗಳು, ಉದಾಹರಣೆಗಳೊಂದಿಗೆ ಸಾಧಾರವಾಗಿ ಪರಿಹರಿಸುತ್ತಿದ್ದರು. ಯೋಗ್ಯ ಗುರುಗಳಿಗಾಗಿ 15 ವರ್ಷಗಳಿಂದ ನಡೆಸಿದ್ದ ದಯಾನಂದರ ಹುಡುಕಾಟ ಕೊನೆಗೊಂಡಿತ್ತು. ಗುರುವಿನ ಪಾದತಲದಲ್ಲಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡುಬಿಟ್ಟರು.
     ದಯಾನಂದರ ಅರ್ಪಣಾ ಮನೋಭಾವ, ಕಲಿಯುವ ಆಸಕ್ತಿಗಳು ಅವರನ್ನು ಗುರುವಿನ ಮೆಚ್ಚಿನ ಶಿಷ್ಯರನ್ನಾಗಿಸಿದವು. ದಯಾನಂದರು ಪ್ರತಿದಿನ ಬೆಳಿಗ್ಗೆ ಚಳಿಯಿರಲಿ, ಬಿಸಿಲಿರಲಿ, ಮಳೆಯಿರಲಿ ಯಮುನಾ ನದಿಯಿಂದ ಗುರುಗಳ ಸ್ನಾನಕ್ಕೆ ಮತ್ತು ಇತರ ಉಪಯೋಗಗಳಿಗಾಗಿ ನೀರು ಹೊತ್ತು ತರುತ್ತಿದ್ದರು. ನೆಲವನ್ನು ಗುಡಿಸಿ, ಸಾರಿಸುವ ಕೆಲಸವೂ ಅವರದೇ ಆಗಿತ್ತು. ಯಾವುದೇ ಕೆಲಸವನ್ನೂ ಅಳುಕಿಲ್ಲದೆ, ಹಿಂದೆ ಮುಂದೆ ನೋಡದೆ, ಹಿಂಜರಿಯದೆ ಮಾಡುತ್ತಿದ್ದ ಅವರನ್ನು ಕಂಡರೆ ಗುರುವಿಗೆ ವಿಶೇಷ ಅಕ್ಕರೆಯಿತ್ತು.
     ಒಮ್ಮೆ ವಿರಜಾನಂದರು ಪಾಠ ಹೇಳಿಕೊಡುತ್ತಿದ್ದಾಗ ಯಾವುದೋ ಕಾರಣಕ್ಕೆ ದಯಾನಂದರ ಮೇಲೆ ಸಿಟ್ಟು ಬಂದು ಅವರ ಬೆನ್ನಿನ ಮೇಲೆ ಬಲವಾಗಿ ಹೊಡೆದಿದ್ದರು. ಹಾಗೆ ಹೊಡೆದಿದ್ದರಿಂದ ಕೇವಲ ಚಕ್ಕಳ-ಮೂಳೆಯ ಕೃಷದೇಹಿ ಗುರುವಿನ ಕೈಯಿಗೇ ನೋವಾಯಿತು. ಕೆಲಕ್ಷಣದ ನಂತರ ದಯಾನಂದರು ನಿಧಾನವಾಗಿ ಗುರುಗಳ ಬಳಿಗೆ ಬಂದು ವಿನೀತರಾಗಿ ಹೇಳಿದ್ದರು, "ಗುರುದೇವಾ, ನನ್ನ ದೇಹ ಕಲ್ಲಿನಂತಿದೆ. ನೀವು ಹೊಡೆದರೆ ಅದಕ್ಕೆ ನೋವಾಗುವುದಿಲ್ಲ. ನಿಮ್ಮ ಕೈಗಳಿಗೇ ನೋವಾಗುತ್ತದೆ. ಇನ್ನು ಮುಂದೆ ನನ್ನನ್ನು ಶಿಕ್ಷಿಸಬೇಕಾದಾಗ ನಿಮ್ಮ ಕೈಗಳ ಬದಲಾಗಿ ಒಂದು ಕೋಲಿನಿಂದ ಹೊಡೆಯಿರಿ." ಹೀಗೆ ಹೇಳಿ ಒಂದು ಕೋಲನ್ನು ತಂದುಕೊಟ್ಟಿದ್ದರು. ಅಂದಿನ ಗುರು-ಶಿಷ್ಯರ ಸಂಬಂಧವನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ದಯಾನಂದರ ಕೋರಿಕೆ ವ್ಯರ್ಥವಾಗಲಿಲ್ಲ. ಮುಂದೊಮ್ಮೆ ವಿರಜಾನಂದರು ಸಿಟ್ಟಿನಲ್ಲಿ ದಯಾನಂದರ ಭುಜದ ಮೇಲೆ ಬಲವಾಗಿ ಬಾರಿಸಿದ್ದರು. ಇದನ್ನು ಕಂಡ ಸಹವಿದ್ಯಾರ್ಥಿ ನಯನಸುಖ ಗುರುವಿಗೆ ಹೇಳಿದ್ದ, "ಗುರುದೇವಾ, ಇಂತಹ ದೊಡ್ಡ ಸಂನ್ಯಾಸಿಯನ್ನು ಈ ರೀತಿ ದಂಡಿಸುವುದು ತರವಲ್ಲ. ಅವರನ್ನು ಗೌರವದಿಂದ ಕಾಣಬೇಕು." ಪಾಠ ಮುಗಿದ ಮೇಲೆ ದಯಾನಂದರು ನಯನಸುಖನಿಗೆ ಆಕ್ಷೇಪಿಸಿ ಹೇಳಿದ್ದರು, "ಗುರುದೇವರು ನನಗೆ ದ್ವೇಷದಿಂದ ಹೊಡೆದರೆಂದು ಭಾವಿಸಿರುವೆಯಾ? ಕುಂಬಾರ ಮಣ್ಣನ್ನು ತುಳಿದು ಹದ ಮಾಡಿ ಅದನ್ನು ಸುಂದರ ಮಡಿಕೆಯನ್ನಾಗಿಸುವಂತೆ, ಗುರು ತನ್ನ ಶಿಷ್ಯರನ್ನು ಹೊಡೆದು, ತಿದ್ದಿ ಶಿಷ್ಯರ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಗುರುಗಳಿಗೆ ನೀನು ಆ ರೀತಿ ಮಾತನಾಡಬಾರದಿತ್ತು." ಮುಂದೆ ದಯಾನಂದರು ಮಹರ್ಷಿಯೆನಿಸಿ ಜನರಿಗೆ ಉಪದೇಶ ನೀಡುತ್ತಿದ್ದ ಸಂದರ್ಭದಲ್ಲಿ ತಮ್ಮ ಭುಜದ ಮೇಲೆ ಗುರುಗಳು ಹೊಡೆದಿದ್ದರಿಂದ ಆಗಿದ್ದ ಗುರುತನ್ನು ತೋರಿಸಿ ಹೇಳುತ್ತಿದ್ದರು, "ಇವು ನನ್ನ ಗುರುವಿಗೆ ನಾನು ಯಾವಾಗಲೂ ಕೃತಜ್ಞನಾಗಿರಬೇಕೆಂದು ನೆನಪಿಸುತ್ತವೆ."
     ಆರ್ಯಸಮಾಜ ಸ್ಥಾಪಕರಾಗಿ ವೇದದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಅಗ್ರಪಾತ್ರ ವಹಿಸಿದ, ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆಯಲು ಸತತ ಪ್ರಯತ್ನ ಮಾಡುತ್ತಾ, ಸತ್ಯಾರ್ಥ ಪ್ರಕಾಶದಂತಹ ಜನರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವ ಗ್ರಂಥ ರಚಿಸಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಬಲಿದಾನ ಮಾಡಿದ ಮಹರ್ಷಿ ದಯಾನಂದ ಸರಸ್ವತಿಯವರ ವೈಚಾರಿಕ ಪ್ರಖರತೆಯ ಮೂಲ ವಿರಜಾನಂದ ಸರಸ್ವತಿಯವರೇ ಆಗಿದ್ದರು ಎಂಬುದರಲ್ಲಿ ಎರಡು ಮಾತಿರಲಾರದು. 1868ರಲ್ಲಿ 90 ವರ್ಷದವರಿದ್ದಾಗ ವಿರಜಾನಂದರ ದೇಹಾಂತ್ಯವಾಯಿತು. ಕಣ್ಣುಗಳಿದ್ದೂ ಕುರುಡರಾಗಿರವವರೇ ಹೆಚ್ಚಾಗಿರುವಾಗ, ಹುಟ್ಟು ಕುರುಡರಾಗಿದ್ದರೂ ಪ್ರಜ್ಞಾಚಕ್ಷುವಾಗಿದ್ದ, ಅಂತರಂಗದ ದೃಷ್ಟಿಯಿಂದ ಸಕಲವನ್ನೂ ಅರಿತಿದ್ದ ವಿರಜಾನಂದ ಸರಸ್ವತಿಯವರು ಸಾಧಕರಿಗೆ ಅನುಪಮ ಮಾರ್ಗದರ್ಶಿಯಾಗಿದ್ದಾರೆ.
ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗ ತೋರುವನೆ ಗುರುವು |
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವೆ ದೇವರೂಪಿಯೋ ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 22.5.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಜೂನ್ 16, 2015

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4


ಹೆಜ್ಜೆ 16:
     "ನಮ್ಮ ಅಸ್ತಿತ್ವ ಅನ್ನುವುದು ಎಲ್ಲಕ್ಕಿಂತಲೂ ದೊಡ್ಡದು, ಅದಿರುವುದರಿಂದಲೇ ಜಗತ್ತಿನ ಎಲ್ಲಾ ಸಂಗತಿಗಳಿಗೆ ಅರ್ಥ ಬಂದಿರುವುದು ಎಂಬುದನ್ನು ತಿಳಿದೆವು. ಈ ಅಸ್ತಿತ್ವಕ್ಕಿಂತಲೂ ದೊಡ್ಡ ಸಂಗತಿ ಇದೆಯೇ?"
     "ಒಂದಕ್ಕಿಂತ ಮತ್ತೊಂದು ದೊಡ್ಡದು ಇದ್ದೇ ಇರುತ್ತದೆ. ಹಾಗೆಯೇ ಅಸ್ತಿತ್ವಕ್ಕೆ ಕಾರಣವಾದ ಅಂಶ ಅಸ್ತಿತ್ವಕ್ಕಿಂತಲೂ ದೊಡ್ಡದು. ಈ ಅಸ್ತಿತ್ವ ಅನ್ನುವುದು ತನ್ನಿಂದ ತಾನೇ ಪರಿಪೂರ್ಣವಲ್ಲ. ಅಸ್ತಿತ್ವದಲ್ಲಿರುವ ಬಯಕೆ ಅದಕ್ಕೂ ಮೊದಲು ಇರುವುದಾಗಿದ್ದು ಅಸ್ತಿತ್ವ ಅದನ್ನು ಅವಲಂಬಿಸಿದೆ. ನಾವು ಒಂದು ರೀತಿಯ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ 'ಆಸೆ'ಯೇ ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ 'ಆಸೆ'! ಇಂದು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ. ಇದು ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ.
     ಸಾಯಬಯಸುವ ಯಾವುದೇ ಜೀವಿ -ಅದು ಮಾನವನಿರಬಹುದು, ಪ್ರಾಣಿಯಿರಬಹುದು, ಕ್ರಿಮಿ-ಕೀಟವಿರಬಹುದು, ಗಿಡ-ಮರಗಳಿರಬಹುದು- ಇದೆಯೇ? ಆತ್ಮಹತ್ಯೆ ಮಾಡಿಕೊಳ್ಳುವವರು ಇರುತ್ತಾರೆ ಎಂದು ಹೇಳಬಹುದು. ಅವರು ಸಾಯುವುದೂ, ಸಾಯಬಯಸುವುದೂ 'ಬದುಕಲಿಕ್ಕಾಗಿಯೇ' ಆಗಿರುತ್ತದೆ. ಎಷ್ಟು ದೀರ್ಘಕಾಲದವರೆಗೆ ಬದುಕಲು ಸಾಧ್ಯವೋ ಅಷ್ಟೂ ಕಾಲ ಜನರು ಬದುಕಿರಬಯಸುತ್ತಾರೆ.      ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ಶರೀರದ ಮೂಲಕ ಹೊಂದಿರುವ ಅಸ್ತಿತ್ವವನ್ನೇ ನಮ್ಮ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತ ಅಲ್ಲಿರುತ್ತದೆ.. ಈ ಕಾರಣದಿಂದಲೇ ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಸಂಗ್ರಹಿಸುತ್ತಾ ಹೋಗುವುದು ಮತ್ತು ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ನಮ್ಮ ಪ್ರಾಪ್ತಿಯನ್ನು ಮತ್ತು ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಬಯಸುವುದೇ ನಮ್ಮ ಆಸೆಯಾಗಿದೆ. ಇದಕ್ಕಾಗಿಯೇ ಎಲ್ಲಾ ಚಟುವಟಿಕೆಗಳು! ಇರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೇವೆ. ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಮ್ಮದಾಗಬೇಕೆಂಬುವವರೆಗೆ ಈ ಆಸೆ ಅನ್ನುವುದು ಅಪ್ರಜ್ಞಾತ್ಮಕವಾಗಿ ಸುಪ್ತವಾಗಿರುತ್ತದೆ. ಬದುಕುವ ಆಸೆ ಜೀವಿಯನ್ನು ಬದುಕಿಸಿದೆ, ಬದುಕಿಸುತ್ತಿದೆ."
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||
ಹೆಜ್ಜೆ 17:
     "ಬದುಕಿರುವುದು ದೊಡ್ಡದು, ಅದಕ್ಕಿಂತಲೂ ದೊಡ್ಡದು ಬದುಕುವ ಆಸೆ ಎಂಬುದನ್ನು ಅರ್ಥ ಮಾಡಿಸಿದಿರಿ. ಇದಕ್ಕಿಂತಲೂ ಮಹತ್ವದ ಸಂಗತಿ ಕುರಿತು ಹೇಳುವಿರಾ?"
     "ಬದುಕಿರುವುದಕ್ಕೆ ಕಾರಣವಾದ ಸಂಗತಿ ಅದಕ್ಕಿಂತಲೂ ದೊಡ್ಡದಾಗಿರಲೇಬೇಕಲ್ಲವೇ? ಅದೇ 'ಪ್ರಾಣ' ಅಥವ 'ಜೀವ'! ಇದು ನಿಗೂಢವಾಗಿದ್ದು, ಅದರೊಂದಿಗೇ ಇದ್ದರೂ ಅದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಪ್ರಾರಂಭವಾದೊಡನೆ ಅಂತ್ಯದೆಡೆಗೆ ಸಾಗುವ, ಅಂತ್ಯವಾದೊಡನೆ ಪ್ರಾರಂಭದೆಡೆಗೆ ಧಾವಿಸುವ, ಅಂತ ಮತ್ತು ಅನಂತದ ಸಂಗಮ ಸ್ಥಳದಲ್ಲಿ ಇರುವುದೇ ಈ ಜೀವ! ಇದು ಅಂತವನ್ನೂ ಪ್ರತಿನಿಧಿಸುತ್ತದೆ ಮತ್ತು ಅನಂತವನ್ನೂ ಪ್ರತಿನಿಧಿಸುತ್ತದೆ.
     'ಅವರು ನಮ್ಮ ತಂದೆ/ತಾಯಿ', 'ಇವನು ನನ್ನ ಅಣ್ಣ/ತಮ್ಮ', ಇತ್ಯಾದಿ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ'! ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ಬದುಕಿರುವವರೆಗೆ ಮಾತ್ರ ಬೆಲೆ. ಪ್ರಾಣವಿರದಾಗ ನಾವು ಏನೂ ಅಲ್ಲ. ಬದುಕಿದ್ದಾಗ ನಮ್ಮ ಶರೀರವನ್ನು 'ನಾವು' ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ 'ನಾವು' ಆಗಿರುವುದಿಲ್ಲ, ಅದು 'ಪ್ರಾಣ'ವೇ ಆಗಿರುತ್ತದೆ.
     'ಜನರನ್ನು ನೋಯಿಸಬೇಡಿ' ಎನ್ನುತ್ತೇವಲ್ಲಾ, ಈ 'ಜನರು' ಅಂದರೆ ಯಾರು? 'ನೋಯಿಸುವುದು' ಅಂದರೆ ಏನು? ಜನರು ಅಂದರೆ ಖಂಡಿತ ಶರೀರಗಳಂತೂ ಅಲ್ಲ! ಅಸಭ್ಯ ವ್ಯಕ್ತಿಯಿಂದ ಯಾರಿಗಾದರೂ ನೋವಾಗುತ್ತದೆ ಎಂದರೆ ಅವನ ಪ್ರಾಣತತ್ತ್ವಕ್ಕೆ ಘಾಸಿಯಾಗಿದೆ ಎಂದರ್ಥ. ಬಿಡಿಸಿ ಹೇಳಬೇಕೆಂದರೆ ವ್ಯಕ್ತಿಯೆಂದರೆ ಆತನು ಹೊಂದಿರುವ ಶರೀರವಲ್ಲ, ಅವನಲ್ಲಿರುವ 'ಪ್ರಾಣ'ವೇ ಹೊರತು ಬೇರೆ ಅಲ್ಲ. ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅವರುಗಳು ಹೊಂದಿರುವ ಶರೀರವನ್ನು ಅಗೌರವಿಸಿದಂತೆ ಅಲ್ಲ, ಅವರಲ್ಲಿರುವ ಪ್ರಾಣತತ್ತ್ವವನ್ನು ಅಗೌರವಿಸಿದಂತೆ! ಅವರುಗಳ ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರೂ 'ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ' ಎಂದು ಆಕ್ಷೇಪಿಸುವುದಿಲ್ಲ. ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? "ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ" ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ಇದೇ ವ್ಯತ್ಯಾಸ! ನಾವು ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು!"
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ||
ಹೆಜ್ಜೆ 18:
     "ನಾವು ಎಂದರೆ ಶರೀರವಲ್ಲ, ನಮ್ಮೊಳಗಿನ ಜೀವ ಎಂಬುದು ಸರಿ. ಮುಂದಿನ ವಿಷಯದ ಬಗ್ಗೆ ತಿಳಿಯಲು ಕುತೂಹಲವಿದೆ. ತಿಳಿಸಬಹುದೇ?"
     "ಬದುಕಿನ ಉದ್ದೇಶ, ಮಹತ್ವ ಅರಿಯುವುದೇ ಮುಂದಿನ ಹೆಜ್ಜೆಯಾಗಿದೆ. ಈ ಹೆಜ್ಜೆಯನ್ನು ಇಡಲು ನಮ್ಮ ಜೀವನವೆಂಬ ಪಾಠಶಾಲೆ ಕಲಿಸಿದ, ಕಲಿಸುವ ಪಾಠಗಳೇ ಅರ್ಥಾತ್ ಅನುಭವಗಳೇ ಮಾರ್ಗದರ್ಶಿಯಾಗಿವೆ. ಬದುಕುವ ಆಸೆ ನಮ್ಮನ್ನು ಬದುಕಿಸುತ್ತದೆ, ಈಗಿನ ಸ್ಥಿತಿಗಿಂತ ಉನ್ನತ ಸ್ಥಿತಿಗೆ ಏರುತ್ತೇವೆಂಬ ಒಳ ಆಸೆ ನಮ್ಮಲ್ಲಿ ಜಾಗೃತವಾಗಿದ್ದು ಬದುಕಿಗೆ ಪ್ರೇರಿಸುತ್ತದೆ ಎಂಬ ಸತ್ಯವನ್ನು ಅರಿತೆವಲ್ಲವೇ? ಇದರ ಮುಂದುವರೆದ ಸ್ಥಿತಿಯೇ ಆತ್ಮನನ್ನು, ಪರಮಾತ್ಮನನ್ನು ಅರಿಯುವ ಕ್ರಿಯೆಯಾಗಿದ್ದು, ಇದು ಸುಪ್ತವಾಗಿರುತ್ತದೆ. ಇದೇ ಸತ್ಯಾನ್ವೇಷಣೆ. ಇದು ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣದಲ್ಲಿದ್ದು ಅವರವರ ಸಾಧನೆ ಅನುಸರಿಸಿ ಮುನ್ನಡೆಯುತ್ತಿರುತ್ತದೆ. ಇದು ನಿರಂತರ ಕ್ರಿಯೆಯಾಗಿದೆ. ಈ ದೇವರನ್ನು ಕಾಣುವ, ಕಾಣಬೇಕೆನ್ನಿಸುವ, ಅರಿಯಬೇಕೆನ್ನಿಸುವ, ಸತ್ಯ ತಿಳಿಯಬೇಕೆನ್ನುವ ವಿಚಾರವನ್ನು ನಮ್ಮ ತಲೆಯಲ್ಲಿ ತುರುಕಿದವರು ಯಾರು? ಈ ವಿಷಯದಲ್ಲಿ ಅನೇಕ ಮಹಾಮಹಿಮರು, ಸಾಧು-ಸಂತರು, ದಾರ್ಶನಿಕರು, ಧಾರ್ಮಿಕರು ಅನೇಕ ರೀತಿಯ ಮಾರ್ಗದರ್ಶನಗಳು, ವಿಚಾರಗಳನ್ನು ನೀಡಿದ್ದಾರೆ, ನೀಡುತ್ತಿರುತ್ತಾರೆ. ಸಾಧಕರು ಇವೆಲ್ಲವನ್ನೂ ಜ್ಞಾನ ಗಳಿಸುವ ಸಲುವಾಗಿ ತಿಳಿದುಕೊಳ್ಳುತ್ತಾರೆ, ಮನನ ಮಾಡಿಕೊಳ್ಳುತ್ತಾರೆ, ಮಥಿಸುತ್ತಾರೆ, ಧ್ಯಾನಿಸುತ್ತಾರೆ, ಅಂತಿಮವಾಗಿ ಸತ್ಯವನ್ನು ಕಂಡುಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ತಿಳಿದಷ್ಟಕ್ಕೇ ಸಾಕು ಅಂದುಕೊಳ್ಳುವವರು, ತಿಳಿದದ್ದೇ ಸತ್ಯ ಎಂದ ವಾದಿಸುವವರು, 'ನಮ್ಮ ಗುರುಗಳು ಹೇಳಿದ್ದಾರಲ್ಲಾ, ಅವರು ಹೇಳಿದ ಮೇಲೆ ಮುಗಿಯಿತು, ಅದು ಸತ್ಯವೇ' ಎಂದು ವಿಚಾರ ಮಾಡದಿರುವವರು, ತಿಳಿಯುವ ಕುತೂಹಲವನ್ನೇ ತೋರದವರು, ಎಲ್ಲಾ ಸುಳ್ಳು ಅನ್ನುವವರು, ತಿಳಿಯಲು ಇಚ್ಛಿಸದವರು, ಹೀಗೆ ವಿವಿಧ ವಿಚಾರಿಗಳಿರುತ್ತಾರೆ. ಆದರೆ, ಒಂದಂತೂ ನಿಜ, ಯಾವ ಪ್ರಮಾಣದಲ್ಲೇ ಆಗಲಿ, 'ಇದು ಏನು?' ಎಂದು ತಿಳಿಯುವ ಕುತೂಹಲವಂತೂ ಸುಪ್ತವಾಗಿ ವಿವಿಧ ಪ್ರಮಾಣಗಳಲ್ಲಿ ಅಂತರ್ಗತವಾಗಿರುವುದಂತೂ ಸತ್ಯ. ಈ ಸತ್ಯಾನ್ವೇಷಣೆ ಅನ್ನುವುದು ಬಹಳ ದೊಡ್ಡ ವಿಷಯವಾಗಿದ್ದು ಸುದೀರ್ಘವಾಗಿ ಚರ್ಚಿಸಬಹುದಾದ, ಚರ್ಚಿಸಬೇಕಾದ ಸಂಗತಿಯಾಗಿದೆ. ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! 'ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಆವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ.' (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ."
ಮುಂದಿನ ಹೆಜ್ಜೆಗಳು:
     "ನಿಮ್ಮವೇ ಆಗಿವೆ. ಸಾಕಷ್ಟು ಹೆಜ್ಜೆಗಳನ್ನಿಟ್ಟಿದ್ದೀರಿ. ಮುಂದುವರೆಯಬಲ್ಲಿರಿ. ಹೆಜ್ಜೆಗಳನ್ನಿಡುವ ಮೊದಲು ನಿಲ್ಲಿರಿ, ಸುತ್ತಲೂ ಅವಲೋಕಿಸಿರಿ, ಮುಂದುವರೆಯಿರಿ."
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಜೂನ್ 9, 2015

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -3


ಹೆಜ್ಜೆ 12:
     "ಪಂಚಶಕ್ತಿಗಳ ಪೈಕಿ ನೆಲ ಮತ್ತು ಜಲತತ್ತ್ವಗಳಿಗಿಂತ ಅಗ್ನಿತತ್ತ್ವ ದೊಡ್ಡದಿರಬಹುದೇ?"
     "ನಿಮ್ಮ ಅನಿಸಿಕೆ ಸರಿಯಾಗಿದೆ. ಈ ಅಗ್ನಿ ಸೃಷ್ಟಿ, ಸ್ಥಿತಿ, ಲಯಕಾರಕ ಗುಣಗಳನ್ನು ಹೊಂದಿದೆ. ಸೃಷ್ಟಿಗೂ ಅಗ್ನಿ ಬೇಕು, ಬಾಳಲೂ ಅಗ್ನಿ ಬೇಕು ಮತ್ತು ನಾಶಕ್ಕೂ ಅಗ್ನಿ ಬೇಕು! ಸೂರ್ಯ ಅಗ್ನಿತತ್ತ್ವದ ಪ್ರಧಾನ ಪ್ರತಿನಿಧಿಯೆನ್ನಬಹುದು. ಅವನು ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಮಳೆ ಹೇಗೆ ಬರುತ್ತದೆ ಮತ್ತು ಸೂರ್ಯ ಅದಕ್ಕೆ ಹೇಗೆ ಕಾರಣಕರ್ತ ಎಂಬುದು ತಿಳಿದೇ ಇದೆ. ಈ ಮಳೆಯ ಚಕ್ರ ಏರಪೇರಾಗಲು ನೀವು ಜಲಮೂಲಗಳನ್ನು ಮುಚ್ಚುತ್ತಿರುವುದು, ಕಾಡುಗಳನ್ನು ನಾಶಪಡಿಸುತ್ತಿರುವುದು ಮುಖ್ಯ ಕಾರಣವಾಗಿದೆ. ಮಾಡುವುದನ್ನೆಲ್ಲಾ ಮಾಡಿ ದೇವರನ್ನು ದೂಷಿಸಿಬಿಡುತ್ತೀರಿ!
     ಐದು ವಿಧದ ಅಗ್ನಿಯನ್ನು ಗುರುತಿಸುತ್ತಾರೆ - ಕಾಲಾಗ್ನಿ (ಸಮಯ), ಕ್ಷುದ್ಧಾಗ್ನಿ (ಹಸಿವು), ಶೀತಾಗ್ನಿ (ಶೀತಲ), ಕೋಪಾಗ್ನಿ (ಕೋಪ) ಮತ್ತು ಜ್ಞಾನಾಗ್ನಿ(ಜ್ಞಾನ). ಜೀವನದಲ್ಲಿ ಅನುಭವಕ್ಕೆ ಬರುವ ನವರಸಗಳೂ ಅಗ್ನಿಯ ಪ್ರತಿರೂಪವಾಗಿರುತ್ತವೆ. ಕಾಮಾಗ್ನಿ, ವಿರಹಾಗ್ನಿ, ಮೋಹಾಗ್ನಿ ಮುಂತಾದ ಪದಬಳಕೆಯನ್ನು ಗಮನಿಸಿ. ಬೆಂಕಿ ಉಗುಳುವ ಮಾತುಗಳು, ಕಣ್ಣಿನಲ್ಲೇ ಸುಡುವ ನೋಟ, ಹೊಟ್ಟೆಯುರಿ (ಮತ್ಸರ) ಮುಂತಾದವುಗಳೂ ಸಹ ಅಗ್ನಿಯ ಜೊತೆಗೂಡಿರುವುದನ್ನು ಕಾಣಬಹುದು. ಅಂದರೆ ಅಗ್ನಿ ನಮ್ಮತನವನ್ನು ಪ್ರತಿನಿಧಿಸುವ ಸಂಗತಿಯಾಗಿದೆ. ಅಗ್ನಿ ನೀರಿನಿಂದ ಉದುಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎನ್ನುತ್ತಾರೆ. ವಿಷಯದ ಆಳಕ್ಕೆ ಹೋದರೆ ಇದರ ಅರ್ಥ ತಿಳಿಯಬಹುದು. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾಗಿದೆ. ಜಲಜನಕ ಶೀಘ್ರವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿಯಾಗಿರುತ್ತದೆ ಅಲ್ಲವೇ? ಪ್ರತಿ ಶುಭ, ಅಶುಭ ಕಾರ್ಯಗಳಿಗೆ ಅಗ್ನಿ ಸಾಕ್ಷಿಯಾಗಿರುತ್ತದೆ. ಅಂತ್ಯ ಸಂಸ್ಕಾರದ ಕ್ರಿಯೆಯಲ್ಲಿ ಶವದಹನಕ್ಕೂ ಅಗ್ನಿ ಬೇಕು. ವೈವಾಹಿಕ ಜೀವನಕ್ಕೆ ಕಾಲಿಡುವಾಗಲೂ ಅಗ್ನಿಸಾಕ್ಷಿಯಾಗಿ ಕೈ ಹಿಡಿಯುವುದು ಅನ್ನುತ್ತಾರೆ. ಅಗ್ನಿ ಪಾವಿತ್ರ್ಯದ ಸಂಕೇತವೂ ಆಗಿದೆ, ಪರಮಾತ್ಮನಂತೆ ದಾರಿ ತೋರುವ ಗುಣವನ್ನೂ ಹೊಂದಿದೆ."
     "ಹೌದು. ದೇವರನ್ನು ಜ್ಯೋತಿರ್ಮಯ ಅನ್ನುವುದು ಇದೇ ಕಾರಣಕ್ಕೇ ಇರಬೇಕು. ಓ, ಜ್ಯೋತಿರ್ಮಯನೇ ನಮಸ್ಕಾರ!"
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಶತ ವಂದನೆ ||
ಹೆಜ್ಜೆ 13:
     "ನೆಲ, ಜಲ, ಅಗ್ನಿತತ್ತ್ವಗಳಿಗಿಂತ ವಾಯು ಮತ್ತೂ ಹಿರಿದಾದುದಾಗಿದೆ. ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಈ ವಾಯುವುನಿಂದಾಗಿಯೇ! ಮನುಷ್ಯನ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಉಸಿರು ಹೇಗೆ ನಮ್ಮ ಜೀವನಾಧಾರವಾಗಿದೆಯೋ ಹಾಗೆಯೇ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲೂ ಸಹಕಾರಿಯಾಗಿದೆ. ಕೋಪ ಬಂದಾಗ ಭುಸುಗುಡುತ್ತಾ ವೇಗವಾಗಿ ಉಸಿರಾಡುತ್ತಾರೆ. ಶೋಕದಲ್ಲಿದ್ದಾಗ, ಸಂತೋಷದಲ್ಲಿದ್ದಾಗ, ಶಾಂತವಾಗಿದ್ದಾಗ ಉಸಿರಾಡುವ ರೀತಿಗಳೇ ಬೇರೆಯಾಗಿರುತ್ತವೆ. ಶಾಂತವಾಗಿರುವಾಗ ಉಸಿರಾಟ ಬಹಳ ನಿಧಾನವಾಗಿರುತ್ತದೆ. ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ದೀರ್ಘ ಉಸಿರಾಟ ದೀರ್ಘ ಆಯಸ್ಸಿನ ರಹಸ್ಯವೆಂದು ಹೇಳುತ್ತಾರೆ. ದೀರ್ಘಕಾಲ ಬದುಕುವ ಆಮೆ ಬಹಳ ನಿಧಾನವಾಗಿ ಉಸಿರಾಡುತ್ತದೆ. ಸುಗಂಧವಾಗಲೀ, ದುರ್ಗಂಧವಾಗಲೀ, ತರಂಗಗಳನ್ನಾಗಲೀ ಎಲ್ಲೆಡೆ ಪಸರಿಸುವ ಕೆಲಸ ಈ ವಾಯವಿನದೇ ಆಗಿದೆ."
     "ಹೌದು, ವಾಯುವಿನ ಮಹಿಮೆ ದೊಡ್ಡದೇ ಸರಿ."
     "ನಿಲ್ಲಿ, ನಾನಿನ್ನೂ ಮುಗಿಸಿಲ್ಲ. ಜೀವನಾಧಾರವಾದ ವಾಯುವನ್ನು ಶುದ್ಧವಾಗಿಡಬೇಕಾದುದು ಮಾನವನ ಕರ್ತವ್ಯ. ಆದರೆ ಈಗ ಏನಾಗುತ್ತಿದೆ? ಇಡೀ ಜಗತ್ತು ವಾಯುಮಾಲಿನ್ಯದಿಂದ ತತ್ತರಿಸುವಂತೆ ಮಾಡಿ, ರೋಗ-ರುಜಿನಗಳ ಬೀಡಾಗುವಂತೆ ಮಾಡುತ್ತಿರುವುದು ಎಷ್ಟು ಸರಿ? ವಾಯುವೂ ಸೇರಿದಂತೆ ಪಂಚಭೂತಗಳನ್ನು ಸಂರಕ್ಷಿಸುವ ಕೆಲಸ ಮಾಡಿದರೆ ಅದೇ ದೇವಋಣವನ್ನು ತೀರಿಸಿದಂತೆ ಎಂಬದನ್ನು ನೆನಪಿಟ್ಟುಕೊಳ್ಳಿ."
ಹೆಜ್ಜೆ 14:
     "ವಾಯುವಿನ ಹಿರಿಮೆ ಮನದಟ್ಟು ಮಾಡಿದಿರಿ. ಉಳಿದದ್ದು ಆಕಾಶ. ಅದೇ ಎಲ್ಲಕ್ಕಿಂತ ಹಿರಿದು ಅಲ್ಲವೇ?"
     "ಸತ್ಯಸ್ಯ ಸತ್ಯವಿದು. ಹೀಗೊಮ್ಮೆ ಕಲ್ಪಿಸಿಕೊಳ್ಳಿ. ಒಂದೊಮ್ಮೆ ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ, ಎಲ್ಲೆಲ್ಲೂ ಆಕಾಶ, ಅಷ್ಟೆ! ಪ್ರಳಯ ಎಂಬ ಕಲ್ಪನೆ ಸಹ ಇದನ್ನೇ ಹೇಳುತ್ತದೆ. ಅಂತಿಮವಾಗಿ ಉಳಿಯುವ ಆಕಾಶ ಮಾತ್ರ ಕಾಣುವ ಸತ್ಯ, ಎಲ್ಲವನ್ನೂ ಒಳಗೊಳ್ಳಬಲ್ಲ, ಸೇರಿಸಿಕೊಳ್ಳಬಲ್ಲ, ಎಲ್ಲೆಲ್ಲೂ ಇರುವಂತಹ ವಿಶಾಲ ಶಕ್ತಿಯಾಗಿರುತ್ತದೆ. ಹೀಗಾಗಿ ಇದು ಸರ್ವವ್ಯಾಪಿ, ಎಂದೆಂದೂ ನಾಶವಾಗದ ಸಂಗತಿಯಾಗಿದೆ.
     ಆಕಾಶದ ಮಹತ್ವ ಅರಿವಾಗುವುದು ಅದು ಇರುವುದರಿಂದಲೇ! ಎಲ್ಲದರ ಅಸ್ತಿತ್ವಕ್ಕೆ ಅವಕಾಶವಾಗಿರುವುದು ಆಕಾಶದಿಂದಲೇ. ಪ್ರತಿಯೊಂದೂ ಪರಿಣಾಮಸ್ವರೂಪವಾಗಿ ಆಕಾಶದಿಂದಲೇ ಬರುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಗುಡುಗು, ಸಿಡಿಲು, ಇಂತಹದು ಇದೆ, ಇಂತಹದು ಇಲ್ಲನ್ನುವಂತಿಲ್ಲದೆ ಪ್ರತಿಯೊಂದಕ್ಕೂ ಅವಕಾಶ ಮಾಡಿಕೊಟ್ಟಿರುವುದು ಆಕಾಶವೇ. ಇರಲು ಜಾಗವಿರದಿರುತ್ತಿದ್ದರೆ ನಾವು ಎಲ್ಲಿರುತ್ತಿದ್ದೆವು? ನಮ್ಮ ಸುಖ-ದುಃಖಗಳು ಎಲ್ಲಿರುತ್ತಿದ್ದವು? ಆಕಾಶವಿರದಿದ್ದರೆ ಯಾವುದೇ ವಸ್ತುಗಳು ಇರುತ್ತಿರಲಿಲ್ಲ, ಸುಖ-ದುಃಖಗಳ ಅನುಭವವೂ ನಮಗೆ ಇರುತ್ತಿರಲಿಲ್ಲ. ಜೀವನದಲ್ಲಿ ನಾವು ಅನುಭವಿಸುವ ನವರಸಗಳಿಗೂ, ತೃಪ್ತಿ, ಅತೃಪ್ತಿಗಳಿಗೂ ಆಕಾಶ ಕಾರಣವೆಂದರೆ ಅತಿಶಯೋಕ್ತಿಯಲ್ಲ. ಭೂಮಿಯಿಂದ ಬೆಳೆಯುವ ಗಿಡ-ಮರಗಳಿಗೂ ಬೆಳೆಯಲು ಆಕಾಶವಿರುವುದರಿಂದಲೇ ಸಾಧ್ಯವಾಗಿದೆ. ಆಕಾಶದ ಕುರಿತು ಎಷ್ಟು ಹೆಚ್ಚು ವಿವರಣೆ ನೀಡಿದರೂ ಅದು ಕಡಿಮೆಯೇ ಆಗುತ್ತದೆ, ಏನೋ ಕೊರತೆ ಇದ್ದೇ ಇರುತ್ತದೆ. ಅದನ್ನು ವಿವರಿಸುವುದು ಕಷ್ಟ.
     ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂ ಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಆಕಾಶ ಎಲ್ಲರನ್ನೂ, ಎಲ್ಲವನ್ನೂ ಹೊಂದಿಕೊಂಡೇ ಇದೆ! ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ -ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ- ಕೂಡಿದ್ದುದಾಗಿದ್ದು, ಆಕಾಶ ಒಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ? ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ಎಲ್ಲರ ತಾಯಿಯಾದರೆ, ಸದಾ ಎಲ್ಲರೊಡನಿದ್ದು ಎಲ್ಲರನ್ನೂ ಗಮನಿಸುವ ಆಕಾಶವೇ ತಂದೆ! ಜೊತೆಗೇ ಇದ್ದರೂ ತನ್ನ ಇರುವನ್ನು ಪ್ರಕಟಿಸದ, ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಕಾಶಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ?"
ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರು?
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ ||
ಹೆಜ್ಜೆ 15:
     "ವಿವರಣೆಗೆ ನಿಲುಕದ, ಎಲ್ಲೆಯಿರದ ಆಕಾಶಕ್ಕಿಂತ ದೊಡ್ಡದು ಇರಲು ಸಾಧ್ಯವೇ ಇಲ್ಲ, ಅಲ್ಲವೇ?"
     "ಏಕಿಲ್ಲ? ಆಕಾಶಕ್ಕಿಂತಲೂ ಹಿರಿದಾದುದು ಇದೆ. ಅದೇ ನಿಮ್ಮ 'ಸ್ವಂತ ಅಸ್ತಿತ್ವ'. ಹುಚ್ಚು ಹುಚ್ಚಾಗಿ ಬಡಬಡಿಸುತ್ತಿದ್ದಾನೆ ಅಂದುಕೊಳ್ಳಬೇಡಿ. ಈ ಆಕಾಶ ದೊಡ್ಡದು ಎಂಬ ಅರಿವು ನಮಗೆ ಬರಬೇಕಾದರೆ ನಮಗೆ ನಮ್ಮ ಅಸ್ತಿತ್ವದ ಬಗ್ಗೆ ಅರಿವು ಇರಬೇಕು. ಅಸ್ತಿತ್ವದ ಅರಿವು ಮೊದಲು ಬರುತ್ತದೆ, ನಂತರ ಹೊರಗಿನ ಆಕಾಶದ ಅರಿವು! ನಾವು ಮೊದಲು ಇದ್ದರೆ ತಾನೇ ಆಕಾಶ ಅನ್ನುವುದು ಇರುವುದು! ನೋಡಿ, ನಾವೇ ಇಲ್ಲದಿದ್ದರೆ, ಆಕಾಶ ಇದೆಯೋ ಇಲ್ಲವೋ ಅನ್ನುವ ಪ್ರಶ್ನೆಯೇ ಬರುವುದಿಲ್ಲ. ಯಾರಾದರೂ ತಮ್ಮ ಅಸ್ತಿತ್ವದ ಅರಿವನ್ನು ಕಳೆದುಕೊಂಡರೆ, ಅರ್ಥಾತ್ ತಾವು ಯಾರು ಎಂಬುದರ ಅರಿವೇ ಇಲ್ಲದಿದ್ದರೆ, ಅಂತಹವರಿಗೆ ಆಕಾಶದ ಕುರಿತು ಜಿಜ್ಞಾಸೆಯಾಗಲೀ, ಹೇಳುವುದಾಗಲೀ, ಕೇಳುವುದಾಗಲೀ, ಯೋಚಿಸುವುದಾಗಲೀ, ಅರ್ಥ ಮಾಡಿಕೊಳ್ಳುವ ಪ್ರಶ್ನೆಯಾಗಲೀ ಉದ್ಭವಿಸುವುದಿಲ್ಲ. ಸ್ವಪ್ರಜ್ಞೆ ಇಲ್ಲದಿದ್ದರೆ ಯಾವುದೇ ಉಪಯುಕ್ತವಾದ ಕ್ರಿಯೆಗಳಾಗಲೀ, ಕೆಲಸಗಳಾಗಲೀ ಅಸಾಧ್ಯವಾಗುತ್ತದೆ. ಎಲ್ಲೆಲ್ಲಿ ಸ್ವಪ್ರಜ್ಞೆ ಜಾಗೃತವಾಗಿರುತ್ತದೋ, 'ನಮ್ಮತನ' ಅನ್ನುವುದು ಹಾಜರಿರುತ್ತದೆಯೋ ಅಲ್ಲಿ ಎಲ್ಲಾ ವಿಧವಾದ ಜ್ಞಾನ ಲಭಿಸುತ್ತಾ ಹೋಗುತ್ತದೆ. ಅಲ್ಲಿ ಯೋಚಿಸುವ ಪ್ರಕ್ರಿಯೆ ಇರುತ್ತದೆ, ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ, ಕೇಳುವ, ತಿಳಿಯುವ ಕೆಲಸ ಆಗುತ್ತದೆ. ನಮ್ಮ ಎಲ್ಲಾ ಚಟುವಟಿಕೆಗಳು, ಕ್ರಿಯೆಗಳು ಅಸ್ತಿತ್ವದ ಅರಿವಿನ ಫಲಗಳಾಗಿವೆ. ಇದು ಇಲ್ಲದಿದ್ದರೆ ಇಡೀ ಜಗತ್ತೇ ಶೂನ್ಯ!
ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ ||
     ಅಸ್ತಿತ್ವದ ಮಹತ್ವವನ್ನು ತಿಳಿಯಲು ಗಾಢನಿದ್ದೆಯಲ್ಲಿ ಸ್ಥಿತಿ ಹೇಗಿರುತ್ತದೆಯೆಂಬುದನ್ನು ಕಲ್ಪಿಸಿಕೊಂಡರೆ ಸಾಕು. ಗಾಢ ನಿದ್ದೆಯಲ್ಲಿದ್ದಾಗ ನಮಗೆ ನಮ್ಮ ಅರಿವೇ ಇರುವುದಿಲ್ಲ. ಇನ್ನು ದೇವರು, ಜಗತ್ತು, ಆಕಾಶ ಮುಂತಾದವುಗಳು ಸಹ ಇವೆಯೋ, ಇಲ್ಲವೋ ಎಂಬುದರ ಯೋಚನೆ ಸಹ ಬರುವುದಿಲ್ಲ. ಆ ಸಮಯದಲ್ಲಿ ಸುಖ-ದುಃಖ, ಲಾಭ-ನಷ್ಟ, ನೋವು-ನಲಿವುಗಳ ಸುಳಿವೂ ಇರುವುದಿಲ್ಲ. ಯಾವ ಜಂಜಾಟವೂ ಇರುವುದೇ ಇಲ್ಲ. ನಿದ್ದೆಯಿಂದ ಎಚ್ಚರವಾದ ತಕ್ಷಣದಲ್ಲಿ 'ನಾನು' ಎದ್ದುಬಿಡುತ್ತದೆ! ಸುತ್ತಮುತ್ತಲ ಪ್ರಪಂಚವೂ ಎದ್ದುಬಿಡುತ್ತದೆ! 'ನಾನು' ಏಳದಿದ್ದರೆ ಯಾವುದರ ಅಸ್ತಿತ್ವವೂ ಇರುವುದೇ ಇಲ್ಲ. ಇದು ಅಸ್ತಿತ್ವದ ವಿಸ್ಮಯಕಾರಿ ಗುಣ. ನಮ್ಮ ತಡಕಾಟ, ಹುಡುಕಾಟಗಳು ಬಹುತೇಕ ಹೊರಗೆ ಇರುತ್ತವೆ. ಏನು ಹುಡುಕುತ್ತಿದ್ದೇವೆಯೋ ಅದು ಹೊರಗಿಲ್ಲ, ನಮ್ಮೊಳಗೇ ಇದೆ ಎಂಬ ಅರಿವು ಮೂಡತೊಡಗಿದಾಗ ಸ್ವಲ್ಪ ಸ್ವಲ್ಪವಾಗಿ ಬೆಳಕು ಮೂಡತೊಡಗುತ್ತದೆ. ಅಂತರಂಗದ ಕರೆಗೆ ಓಗೊಟ್ಟರೆ ಸ್ಪಷ್ಟವಾಗಿ ತಿಳಿಯುತ್ತದೆ: "ನಾವು ಇದ್ದರೆ ಎಲ್ಲವೂ ಇರುತ್ತದೆ; ನಾವು ಇಲ್ಲದಿದ್ದರೆ ಏನೂ ಇರುವುದಿಲ್ಲ. ಇದು ಅಸ್ತಿತ್ವದ ಮಹತ್ವ!"
-ಕ.ವೆಂ.ನಾಗರಾಜ್.
***************
ದಿನಾಂಕ 08.10.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಜೂನ್ 1, 2015

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -2


'ಮುಂದಿನದೆಲ್ಲಾ ಅಂತರಂಗದ ತರಂಗಗಳು; ಪ್ರಶ್ನೆಯೂ ಅಲ್ಲಿಯದೇ, ಉತ್ತರವೂ ಅದರದೇ!'
ಹೆಜ್ಜೆ 7:
     "ಧ್ಯಾನದ ಮಹಿಮೆಯನ್ನು ಅರ್ಥ ಮಾಡಿಕೊಂಡವರು ಇತರರ ಮಾತುಗಳನ್ನು ಆಲಿಸುವುದರೊಂದಿಗೆ ತಮ್ಮೊಳಗೇ ಅಂತರಂಗದ ಮಾತುಗಳಿಗೆ ಕಿವಿಗೊಡುತ್ತಾರೆ. ಮನಸ್ಸನ್ನು ಒಂದು ವಿಷಯದ ಬಗ್ಗೆ ಕೇಂದ್ರೀಕರಿಸಿ ಮತ್ತು ಸತತ ಸಾಧನೆಯಿಂದ ಆ ವಿಷಯವನ್ನು ಬಿಟ್ಟು ಮನಸ್ಸನ್ನು ಬೇರೆಡೆಗೆ ಹೊರಳದಂತೆ ನೋಡಿಕೊಳ್ಳುವ, ನಮ್ಮ ಧೀ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಯಶಸ್ಸಿನ ಯಾನವೇ ಧ್ಯಾನ ಎಂಬುದು ಸರಿ. ಧ್ಯಾನವೆಂದರೆ ಕೇವಲ ಶುಚಿರ್ಭೂತರಾಗಿ ವಿಭೂತಿ ನಾಮ, ಪಟ್ಟೆಗಳನ್ನು, ಮುದ್ರೆಗಳನ್ನು, ಕುಂಕುಮವನ್ನು ಧರಿಸಿಕೊಂಡು ಕಣ್ಣುಮುಚ್ಚಿ ಕುಳಿತು ಯಾವುದೋ ಮಂತ್ರವನ್ನು ಜಪಿಸುವುದು ಮಾತ್ರವೇ ಅನ್ನಲಾಗದು. ಅದು ಮನಸ್ಸನ್ನು ಹತೋಟಿಯಲ್ಲಿಡುವ ಸಾಧನ. ಧ್ಯಾನದ ವಿಷಯದಲ್ಲಿ, ಅಂದರೆ ಯಾವುದರ ಕುರಿತು ಧ್ಯಾನಿಸುತ್ತೇವೆಯೋ ಆ ಕುರಿತು, ಸ್ಪಷ್ಟ ಕಲ್ಪನೆ ಇರದಿದ್ದರೆ ಧ್ಯಾನ ಪೂರ್ಣವಾಗದು. ಅಸ್ಪಷ್ಟ ಗುರಿ/ಕೇಂದ್ರವಿದ್ದರೆ ಮನಸ್ಸು ಅದರ ಮೇಲೆ ಹೇಗೆ ನಿಂತೀತು? ಧ್ಯಾನ ಎಂಬುದರ ಸ್ಪಷ್ಟ ಕಲ್ಪನೆ ಬರಬೇಕೆಂದರೆ 'ಭೂಮಿ ಧ್ಯಾನಿಸುತ್ತಿದೆ' ಎಂಬ ಹೇಳಿಕೆ ಕುರಿತು ಗಮನಿಸೋಣ. ಭೂಮಿ ಧ್ಯಾನಿಸುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಧ್ಯಾನದ ಒಳಾರ್ಥವನ್ನು ಗ್ರಹಿಸಿದರೆ ಇದರಲ್ಲಿ ಸತ್ಯ ಕಾಣುತ್ತದೆ. ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುತ್ತಾ ಸೂರ್ಯನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದೆ. ನಿರ್ದಿಷ್ಟ ಪಥದಲ್ಲಿ, ನಿರ್ದಿಷ್ಟ ವೇಗ ಮತ್ತು ಸಮಯಗಳಲ್ಲಿ ಈ ಕೆಲಸ ಆಗುತ್ತಿದೆ. ಇದರಲ್ಲಿ ವ್ಯತ್ಯಯವಾಗುತ್ತಿದೆಯೇ? ತನ್ನ ಮೇಲೆ ಮಾನವ ನಡೆಸುತ್ತಿರುವ ಘೋರ ಅಪಚಾರಗಳನ್ನೂ ಸಹಿಸಿ ಭೂಮಿ ತನ್ನ ಕಾರ್ಯ ನಡೆಸಿದೆಯೆಂದರೆ ಅದು ಭೂಮಿ ತನ್ನ ನಿಶ್ಚಿತ ಪಥದಿಂದ ಸರಿಯದೆ ಧ್ಯಾನಿಸುತ್ತಿದೆಯೆಂದು ಹೇಳಬಹುದಲ್ಲವೇ? ಧಾರಣಾಶಕ್ತಿಯಿಲ್ಲದಿದ್ದರೆ, ಚಂಚಲತೆಯಿಂದಿದ್ದರೆ ಏನಾಗುತ್ತಿತ್ತು? ಭೂಮಿ ಹೇಗೆ ಹೇಗೋ ತಿರುಗಿದ್ದರೆ? ಒಮ್ಮೆ ವೇಗವಾಗಿ, ಒಮ್ಮೆ ನಿಧಾನವಾಗಿ ಚಲಿಸಿದ್ದರೆ? ಅದರ ಪರಿಣಾಮ ಊಹಿಸಲು ಸಾಧ್ಯವೇ? ಧ್ಯಾನ ಎಂದರೆ ನೀವು ಮಾಡುವ ಯಾವುದೇ ಕೆಲಸವನ್ನು ತನ್ಮಯತೆಯಿಂದ, ಶ್ರದ್ಧೆಯಿಂದ ಅದು ಪೂರ್ಣಗೊಳ್ಳುವವರೆಗೂ ಮಾಡುವುದು ಅಷ್ಟೆ. ನಿಮಗೇ ಅನುಭವಕ್ಕೆ ಬಂದಿರುವಂತೆ, ನೀವು ಯಾವುದೋ ಇಷ್ಟವಾದ ಕೆಲಸ ಮಾಡುತ್ತಿರುವಾಗ, ಅದು ಮುಗಿಯುವವರೆಗೂ ನಿಮಗೆ ಬೇರೆ ವಿಷಯಗಳ ಬಗ್ಗೆ ಪರಿವೆಯಿರುವುದಿಲ್ಲ. ಊಟ ಮಾಡುವಾಗಲೂ, ಬೇರೆ ಕೆಲಸಗಳಲ್ಲಿ ತೊಡಗಿರುವಾಗಲೂ ನಿಮ್ಮ ಇಷ್ಟದ ವಿಷಯದ ಬಗ್ಗೆಯೇ ಚಿಂತಿಸುತ್ತಿರುತ್ತೀರಿ ಮತ್ತು ಅವಕಾಶ ಮಾಡಿಕೊಂಡು ಪುನಃ ಆ ಕೆಲಸದಲ್ಲಿ ತೊಡಗುತ್ತೀರಿ ಅಲ್ಲವೇ? ಇದೇ ನಿಜವಾದ ಧ್ಯಾನ ಮತ್ತು ಧ್ಯಾನದ ಕುರಿತ ಅರಿವು! ಗುರಿ ನಿರ್ಧರಿಸಿ, ಅದನ್ನು ಈಡೇರಿಸಲು ತೊಡಗಿ. ಇದೇ ಯಶಸ್ಸಿನ ಮುಂದಿನ ಹೆಜ್ಜೆಯಾಗಿದೆ."
ಹೆಜ್ಜೆ 8: 
     "ಹೌದು, ಮೇಲೆ ಹೇಳಿದ ಎಲ್ಲವೂ ಒಂದಕ್ಕಿಂತ ಒಂದು ಮೇಲಿನ ಸಂಗತಿಯಾಗಿವೆ. ಇವುಗಳಿಗಿಂತ ಮೇಲಿನದು ಯಾವುದು?"
     "ಶಕ್ತಿ, ದೈಹಿಕ ಮತ್ತು ಪೂರಕವಾಗಿ ಮಾನಸಿಕ ಶಕ್ತಿ, ಮೇಲಿನ ಎಲ್ಲವುಗಳಿಗಿಂತಲೂ ಮೇಲಿನದು. ಶಕ್ತಿ ಎಂದರೆ ಮನಸ್ಸು ಮತ್ತು ದೇಹದ ಕಾರ್ಯಗಳ ಹಿತಕರ ಮಿಶ್ರಣದ ಫಲ. ದೇಹ ಮತ್ತು ಮನಸ್ಸುಗಳು ಒಟ್ಟಾದರೆ ಒಂದು ಶ್ರೇಷ್ಠ ಚೈತನ್ಯದ ಉದಯವಾಗುತ್ತದೆ. ಒಬ್ಬ ವ್ಯಕ್ತಿಗೆ ಅಸಾಧಾರಣ ಮನೋಬಲವಿದ್ದು, ಆರೋಗ್ಯಕರ ಶರೀರವಿಲ್ಲದಿದ್ದರೆ ಆತನ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅವನು ಅಸಮರ್ಥನಾಗುತ್ತಾನೆ. ಕಾಯಿಲೆಗಳಿಂದ ನರಳುತ್ತಿರುವ, ಸಾಯುವ ಹಂತದಲ್ಲಿರುವವರು ತಮ್ಮ ಇಚ್ಛೆಗಳನ್ನು ತಾವು ಬಯಸಿದಂತೆ ಕ್ರಿಯಾರೂಪಕ್ಕೆ ತರಲಾರರು. ಒಬ್ಬ ಆರೋಗ್ಯಕರ, ಸಧೃಢಕಾಯ ವ್ಯಕ್ತಿ ಸಹ ಶಕ್ತ ಮನೋಬಲವಿಲ್ಲದಿದ್ದರೆ ಏನನ್ನೂ ಸಾಧಿಸಲಾರ. ಹೀಗಾಗಿ ಬಲವೆಂದರೆ ಅದು ಮನಸ್ಸು ಮತ್ತು ದೇಹಗಳ ಸಂಯುಕ್ತ ಕ್ರಿಯೆಯಾಗಿದೆ. ಬಲವಾಗಿರುವವರ ತಂಟೆಗೆ ಯಾರೂ ಹೋಗುವದಿಲ್ಲ. ಅಗಾಧ ಪಾಂಡಿತ್ಯವುಳ್ಳ ಒಬ್ಬ ಸಣಕಲನ ಮಾತಿಗಿಂತ ಅವಿದ್ಯಾವಂತನಾದರೂ ತೋಳ್ಬಲವುಳ್ಳ ರಾಜಕೀಯ ಪುಡಾರಿಯ ಮಾತಿಗೆ ಜನ ಇಷ್ಟವಿಲ್ಲದಿದ್ದರೂ ಬೆಲೆ ಕೊಡುತ್ತಾರೆ. 
     ಪ್ರಪಂಚದಲ್ಲಿನ ಎಲ್ಲಾ ದುಃಖಗಳ, ಅಸಂತೋಷಗಳ ಕಾರಣ ದುರ್ಬಲತೆ ಎಂದು ವೇದಾಂತ ಸಾರುತ್ತದೆ. ನಾವು ಅಸಹಾಯಕರಾಗುವುದು, ಸುಳ್ಳು ಹೇಳುವುದು, ಕೊಲೆಗಾರರಾಗುವುದು, ಇನ್ನಿತರ ಅಪರಾಧಗಳನ್ನು ಮಾಡುವುದು, ಇತ್ಯಾದಿಗಳ ಮೂಲ ಕಾರಣವೆಂದರೆ ದುರ್ಬಲರಾಗಿರುವುದು. ದುರ್ಬಲರಾಗಿರುವ ಭಯ ಕೀಳರಿಮೆಗೆ, ಪಾಪ ಮಾಡುವುದಕ್ಕೆ ನಿಶ್ಚಿತ ಮೂಲಕಾರಣವಾಗಿದೆ.  ದುರ್ಬಲರಾಗಿರುವುದರಿಂದ ನಾವು ಸಾಯುತ್ತೇವೆ. ನಮ್ಮನ್ನು ದುರ್ಬಲಗೊಳಿಸುವಂತಹದು ಏನೂ ಇಲ್ಲವೆಂದರೆ, ಅಲ್ಲಿ ಸಾವಿಲ್ಲ, ದುಃಖವಿಲ್ಲವೆಂಬದು ವಿವೇಕಾನಂದರ ನುಡಿ. ಶಕ್ತಿಯೆಂಬುದು ಜೀವನ, ಶಕ್ತಿಯೆಂಬುದು ಪುಣ್ಯ; ದುರ್ಬಲತೆಯೆಂಬುದು ಮರಣ, ದುರ್ಬಲತೆಯೆಂಬುದು ಪಾಪ. ತೋಳ್ಬಲ, ಮನೋಬಲ ಮತ್ತು ಜ್ಞಾನಬಲವಿರುವವರು ಮುಂಚೂಣಿಯಲ್ಲಿರುತ್ತಾರೆ. ಎಲ್ಲಿ ಬ್ರಾಹ್ಮಶಕ್ತಿ (ಜಾತಿಯಲ್ಲ) ಮತ್ತು ಕ್ಷಾತ್ರಶಕ್ತಿ (ಜಾತಿಯಲ್ಲ) ಒಟ್ಟುಗೂಡುವುದೋ ಅಲ್ಲಿನ ದೇಶ ಬಲಿಷ್ಠವಾಗಿರುತ್ತದೆ. ಬಲಕ್ಕೇ ಬೆಲೆಯಿರುವಾಗ ಸಜ್ಜನಶಕ್ತಿ ಬಲಶಾಲಿಯಾದರೆ ಮಾತ್ರ ಸಮಾಜಕ್ಕೆ ಮತ್ತು ದೇಶಕ್ಕೆ ಹಿತ."
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
ಹೆಜ್ಜೆ 9: 
     "ನಿಜ, ನಿಜ. ಈ ಜಗತ್ತಿನಲ್ಲಿ ಬಲಕ್ಕೇ ಬೆಲೆ. ಅದು ಸರಿ, ಈ ಬಲಕ್ಕಿಂತಲೂ ಹೆಚ್ಚಿನದು ಯಾವುದಾದರೂ ಇದೆಯೇ?"
     "ಯಾಕಿಲ್ಲ? ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ಮಿಗಿಲಲ್ಲವೇ? ನಮಗೆ ಶಕ್ತಿ ಕೊಡುವುದೇ ಅನ್ನ! ಅನ್ನವೆಂದರೆ ಆಹಾರ ಎಂದೇ ಅರ್ಥ. ಅದು ಅಕ್ಕಿಯಿರಬಹುದು, ಗೋಧಿಯಿರಬಹುದು,     
ಮತ್ತೇನೋ ಆಗಿರಬಹುದು, ಮಾನಸಿಕ ವಸ್ತುವೂ ಆಗಿರಬಹುದು. ಬೆಳವಣಿಗೆಗೆ, ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿಯೂ ಅನ್ನವೇ! ವಿಶಾಲವಾಗಿ ಯೋಚಿಸಿ, ಗಾಳಿಯಿಲ್ಲದೆ ನಮಗೆ ಉಸಿರಾಡಲಾಗುವುದಿಲ್ಲ. ಶ್ವಾಸಕೋಶಗಳಿಲ್ಲದಿದ್ದರೂ ಉಸಿರಾಡಲಾಗುವದಿಲ್ಲ. ಸಾಮಾಜಿಕ ಜೀವನಕ್ಕೂ ಇದು ಅನ್ವಯವಾಗುತ್ತದೆ. ನಮ್ಮ ಜೀವನಕ್ಕೆ ಪ್ರಕೃತಿಯ ಶಕ್ತಿಗಳು, ಸಹಜೀವಿಗಳ ಶಕ್ತಿಗಳೂ ಪೂರಕವಾಗಿ ಸಹಕಾರಿಯಾಗಿರುತ್ತವೆ. ಪರಸ್ಪರ ಬಾಳುವುದಕ್ಕೆ ಸಹಾಯ ಮಾಡುವ, ಸಹಾಯವಾಗುವ ಪ್ರಕ್ರಿಯೆಗಳೂ ಸಹ ಅನ್ನವೇ!
     'ಅನ್ನ'ವೆಂದರೆ ಕೇವಲ ತಿನ್ನುವ ಆಹಾರವಲ್ಲ. ಅದು ವಿಶ್ವದ ಉಗಮದ ಪ್ರತೀಕವಾಗಿದೆ. ಶಕ್ತಿಯ ಮೂಲವಾದ ಆಹಾರವೆಂದರೆ ಅದರಲ್ಲಿ ನಾವು ಸ್ವೀಕರಿಸುವುದೆಲ್ಲವೂ ಸೇರುತ್ತದೆ, ಅಂದರೆ ನಾವು ನೋಡುವುದು, ಕೇಳುವುದು, ತಿನ್ನುವುದು, ಇತ್ಯಾದಿಗಳೆಲ್ಲವೂ ಆಹಾರವೆಂದೇ ತಿಳಿಯಬೇಕು. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ನಾವು ಶಕ್ತಿ ಗಳಿಸಿಕೊಳ್ಳುತ್ತೇವೆ. ನಾವು ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಅದು. ಪ್ರಾಣಿಲೋಕದಲ್ಲೂ ಸಹ ಸಸ್ಯಾಹಾರಿ ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ಗುಣ, ಲಕ್ಷಣ ಮತ್ತು ಸ್ವಭಾವಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಬಹುದಾಗಿದೆ. ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿರುತ್ತಾರೆ. ಅವರು ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ನೀವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಲ್ಲಿರಿ. ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಿಯಸಿಕೊಳ್ಳುವ ಜೀವನಶೈಲಿಯಿಂದ ನೀವು ಅದನ್ನು ಪಡೆದುಕೊಳ್ಳಬಲ್ಲಿರಿ. ಇದೇ 'ಅನ್ನ'ದ ಮಹತ್ವ!"
ಹೆಜ್ಜೆ 10: 
     "ಒಂದಕ್ಕಿಂತ ಒಂದು ಹೆಚ್ಚಿನದು. ಮೇಲೆ ಹೇಳಿದ್ದಕ್ಕಿಂತಲೂ ಮೇಲಿನದು ಯಾವುದು?"
     "ಪಂಚಭೂತಗಳು! ನೆಲ, ಜಲ, ವಾಯು, ಅಗ್ನಿ ಮತ್ತು ಆಕಾಶಗಳೆಂದು ಕರೆಯಲ್ಪಡುವ ಪಂಚಶಕ್ತಿಗಳು ಜೀವಿಗಳ ಅಸ್ತಿತ್ವಕ್ಕೆ ಆಧಾರವಾಗಿವೆ. ಈ ಪಂಚಶಕ್ತಿಗಳೂ ಸಹ ಒಂದಕ್ಕಿಂತ ಒಂದು ಮಿಗಿಲಾಗಿವೆ. ಈಗ ಭೂಮಿಯ ಕುರಿತೇ ನೋಡಿ. ಅದು ಜೀವಿಗಳೆಲ್ಲದಕ್ಕೂ ಆಧಾರ, ಆಸರೆಯಾಗಿವೆ. ಹಿಂದಿನ ಹೆಜ್ಜೆಯ ಅರ್ಥದಲ್ಲಿ ನೋಡಿದರೆ ನಮಗೆಲ್ಲಾ ಆಧಾರಪ್ರಾಯವಾಗಿರುವ ಭೂಮಿ 'ಅನ್ನ'ವನ್ನು ಪ್ರತಿನಿಧಿಸುತ್ತದೆ. ಇಂತಹ ಘನತತ್ತ್ವವಾದ ಭೂಮಿ/ಪೃಥ್ವಿ/ನೆಲವನ್ನು 'ತಾಯಿ' ಎನ್ನುತ್ತೇವೆ. ಈ ತಾಯಿಯನ್ನು ಈಗಿನ ಮತ್ತು ಮುಂದಿನ ಪೀಳಿಗೆಯ ದೃಷ್ಟಿಯಿಂದ ಗೌರವಿಸುವುದು, ಉಳಿಸುವುದು, ಸಂರಕ್ಷಿಸುವುದು ಮಕ್ಕಳಾದ ಜೀವಿಗಳ ಕರ್ತವ್ಯವಾಗಿದೆ." 
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಧರಿತ್ರಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ ಎಂಬುದನ್ನು ಸಾಧಕ ಮಾತ್ರ ಅರಿಯಬಲ್ಲ!
ಹೆಜ್ಜೆ 11: 
     "ನೆಲಕ್ಕಿಂತ ಜಲ ಮೇಲಿನದಾಗಿದೆ. ಈ ಭೂಮಿ ಸಹ ದ್ರವಮೂಲದಿಂದಲೇ ಉಗಮವಾದುದ್ದಾಗಿದೆ. ಕೇವಲ ಭೂಮಿಯಲ್ಲ, ವಿಶ್ವದ ಯಾವುದೇ ಘನರೂಪದ ಕಾಯವಾಗಲೀ, ವಸ್ತುವಾಗಲೀ ಮೊದಲು ದ್ರವರೂಪದಲ್ಲಿ ಇದ್ದುದಾಗಿದೆ. ಈ ದ್ರವರೂಪದಲ್ಲಿದ್ದ ವಸ್ತು ಅದಕ್ಕೂ ಮೊದಲು ಅನಿಲರೂಪದಲ್ಲಿದ್ದಿತ್ತು. ಹೀಗಾಗಿ 'ಜಲ' ಎಂಬ ಪದದಲ್ಲಿ ಸಂಬೋಧಿಸಬಹುದಾದ ಈ ಸಂಗತಿ ಭೂಮಿಗಿಂತ ಮೇಲಿನದಾಗಿದೆ. 
     ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ. 'ಅನ್ನ'ದ ಕುರಿತು ಹೇಳಿದ ಎಲ್ಲಾ ಸಂಗತಿಗಳೂ ಜಲಕ್ಕೂ ಅನ್ವಯಿಸುತ್ತದೆ. ಪ್ರಪಂಚದ ನಾಗರಿಕತೆಗಳು ಬೆಳೆದದ್ದು, ಉಳಿದದ್ದು ನದಿ ತಟಗಳಲ್ಲಿಯೇ! ಭೂಮಿಯಲ್ಲಿ ಲಭ್ಯವಿರುವ ಒಟ್ಟು ನೀರಿನ ಪ್ರಮಾಣದಲ್ಲಿ ಕೇವಲ ಶೇ.1ರಿಂದ2ರಷ್ಟು ಮಾತ್ರ ಉಪಯೋಗಕ್ಕೆ ಯೋಗ್ಯವೆಂದು ಹೇಳಲಾಗಿದೆ. ಉಳಿದ ನೀರೆಲ್ಲವೂ ಸಾಗರಗಳಲ್ಲಿರುವಂತಹ ಉಪ್ಪು ನೀರಾಗಿದೆ ಅಥವ ಹೆಪ್ಪುಗಟ್ಟಿದ, ಉಪಯೋಗಿಸಲಾಗದ ನೀರಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆ ಸಹ ಹೆಚ್ಚಾಗುತ್ತಿದೆ. ನೀರಿನ ಬಳಕೆಯನ್ನು ಎಚ್ಚರದಿಂದ, ಜಾಣತನದಿಂದ ಮಾಡದೆ, ಉಪಯೋಗಿಸಬಹುದಾದ ನೀರಿನ ಜಲಮೂಲಗಳಾದ ಕೆರೆ, ಕಟ್ಟೆಗಳನ್ನು ಮುಚ್ಚಿ, ಅತಿಕ್ರಮಿಸಿ, ನಾಶಪಡಿಸಲಾಗುತ್ತಿದೆ. ಕೊಳವೆ ಬಾವಿಗಳನ್ನು ವಿವೇಚನೆಯಿಲ್ಲದೆ ತೋಡುತ್ತಾ ಅಂತರ್ಜಲದ ಮಟ್ಟವನ್ನು ತಗ್ಗಿಸಲಾಗುತ್ತಿದೆ. ಹೀಗೇ ಆದರೆ ಮುಂದೊಮ್ಮೆ ಪ್ರಕೃತಿಯ ಸಮತೋಲನ ತಪ್ಪಿ ಅನಾಹುತಗಳಾಗುವುದು ಶತಃಸ್ಸಿದ್ಧ. ಮನುಕುಲದ ಉಳಿವಿಗಾಗಿ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ನೀರನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ!"
-ಕ.ವೆಂ.ನಾಗರಾಜ್.
***************
ದಿನಾಂಕ 01.06.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: