ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಏಪ್ರಿಲ್ 23, 2013

ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗ



     ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾಸದಲ್ಲಿ ತೊಡಗಿರುವ ವೇದಾಧ್ಯಾಯಿಗಳ ಸಂಘಟಿತ ಶ್ರಮ ಫಲ ನೀಡಿದೆ. ಮಕ್ಕಳಲ್ಲೂ ವೇದಾಧ್ಯಯನದ ಕಡೆಗೆ ಆಸಕ್ತಿ, ಅವರಲ್ಲಿ ದೇಶಭಕ್ತಿ, ಸಾಮಾಜಿಕ ಪ್ರಜ್ಞೆ ಜಾಗೃತಿಗೊಳಿಸುವುದರೊಂದಿಗೆ ಉತ್ತಮ ಸಂಸ್ಕಾರ ನೀಡಲು ಶಿಬಿರದಲ್ಲಿ ಒತ್ತು ನೀಡಲಾಯಿತು. ಕೇವಲ 40 ಮಕ್ಕಳಿಗೆ ಪ್ರವೇಶಾವಕಾಶ ಕೊಡಬೇಕೆಂದು ನಿರ್ಧರಿಸಿದ್ದರೂ, ಪೋಷಕರ ಒತ್ತಾಯಕ್ಕೆ ಮಣಿದು 80 ಮಕ್ಕಳನ್ನು ಶಿಬಿರಕ್ಕೆ ಸೇರಿಸಿಕೊಳ್ಳಬೇಕಾಯಿತು.
     ದೇಶಭಕ್ತರ, ಸಾಧು-ಸಂತರ, ಉತ್ತಮ ನೀತಿ ಸಾರುವ ಸುಭಾಷ ಚಂದ್ರ ಬೋಸ್, ಮದನ ಲಾಲ್ ಧಿಂಗ್ರಾ, ಶಿವಾಜಿ, ವಿವೇಕಾನಂದ, ಧ್ರುವ, ನಚಿಕೇತ ಮುಂತಾದವರ ಕಥೆಗಳನ್ನು ಹೇಳಲಾಯಿತು. ಪ್ರತಿನಿತ್ಯ ವಿವಿಧ ರೀತಿಯ ಆಟಗಳನ್ನು ಆಡಿಸಲಾಯಿತು. ದೇಶಭಕ್ತಿ ಗೀತೆಗಳನ್ನು ಹೇಳಿಕೊಡಲಾಯಿತು. ತಮ್ಮಲ್ಲಿನ ಪ್ರತಿಭೆಗಳನ್ನು ಮಕ್ಕಳು ಹಾಡು ಹೇಳುವ, ನೃತ್ಯ ಮಾಡುವ, ಏಕಪಾತ್ರಾಭಿನಯ ಮಾಡುವ, ಆಶುಭಾಷಣದಲ್ಲಿ ಭಾಗವಹಿಸುವ ಮೂಲಕ ವ್ಯಕ್ತಪಡಿಸಿದರು. ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆ ಮೆರೆದರು. ಕಾಗದದಿಂದ ಕರಕುಶಲಕಲೆಗಳನ್ನು ಅವರಿಂದ ಮಾಡಿಸಲಾಯಿತು. ಅಂತ್ಯಾಕ್ಷರಿ, ಹಾಡು, ಭಜನೆ, ಸಂವಾದಗಳಲ್ಲೂ ಅವರನ್ನು ತೊಡಗಿಸಲಾಯಿತು. ಇಷ್ಟೆಲ್ಲಾ ಆಸಕ್ತಿಕರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಪ್ರತಿನಿತ್ಯ ಸುಮಾರು ಒಂದು ಗಂಟೆಯ ಕಾಲ ಅವರಿಗೆ ಸರಳ ವೇದ ಮಂತ್ರಗಳನ್ನು ವೇದಾಧ್ಯಾಯಿಗಳಾದ ಶ್ರೀಯುತ ಅನಂತನಾರಾಯಣ, ಪ್ರಸಾದ್ ಮತ್ತು ವಿಶ್ವನಾಥ ಶರ್ಮರವರು ಅರ್ಥಸಹಿತ ಹೇಳಿಕೊಟ್ಟರು.  ಸುಮಾರು 25 ಮಂತ್ರಗಳನ್ನು ಕಲಿತ ಮಕ್ಕಳು ಸಮಾರೋಪ ದಿನದಂದು ಸಾಮೂಹಿಕವಾಗಿ ವೇದಮಂತ್ರಗಳನ್ನು ಸ್ವರಸಹಿತ ಹೇಳಿದಾಗ ಪೋಷಕರು, ಕಾರ್ಯಕ್ರಮದಲ್ಲಿ ಹಾಜರಿದ್ದವರು ಬೆರಗಾಗಿದ್ದರು.
     14-04-2013ರಂದು ಮಕ್ಕಳು ತಮ್ಮ ತಾಯಿ-ತಂದೆ, ಪೋಷಕರನ್ನು ನಮಸ್ಕರಿಸಿ ಗೌರವಿಸುವ ಮತ್ತು ಭಾರತಮಾತೆಯ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ ಜೋಡಿಸಲಾಗಿತ್ತು. ಇದು ಮಕ್ಕಳ, ಪೋಷಕರ ಮತ್ತು ಕಾರ್ಯಕ್ರಮ ವೀಕ್ಷಿಸಿದವರ ಮೇಲೆ ಉತ್ತಮ ಪ್ರಭಾವ ಬೀರಿತು. ಪತ್ರಿಕೆಗಳು, ದೃಷ್ಯಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಯಿತು. ಸಮಾರೋಪ ದಿನದಂದು ಮಕ್ಕಳು ಮತ್ತು ಅವರ ಪೋಷಕರು ವ್ಯಕ್ತಪಡಿಸಿದ ಅನಿಸಿಕೆಗಳು ಶಿಬಿರದ ಯಶಸ್ಸಿಗೆ ಕನ್ನಡಿಯಾಗಿತ್ತು. ಉದ್ಘಾಟನೆಯ ದಿನ, ಮಾತೃವಂದನಾ ಕಾರ್ಯಕ್ರಮದ ದಿನ ಮತ್ತು ಸಮಾರೋಪದ ದಿನಗಳಂದು ಪೋಷಕರನ್ನೂ ಆಹ್ವಾನಿಸಿ ಮಕ್ಕಳನ್ನು ಸುಸಂಸ್ಕಾರದಿಂದ ಬೆಳೆಸುವ ಹೊಣೆಗಾರಿಕೆ ಕುರಿತು ಹಾಗೂ ಮನೆಯೇ ಮೂಲತಃ ಸಂಸ್ಕಾರಗಳನ್ನು ಪೋಷಿಸುವ ಕೇಂದ್ರಗಳಾಗಬೇಕಾದ ಅಗತ್ಯತೆ ಕುರಿತು ಅವರ ಗಮನ ಸೆಳೆಯಲಾಯಿತು. 40 ಮಕ್ಕಳೂ ಸೇರಿದಂತೆ ಸುಮಾರು 80-100 ಪೋಷಕರೂ ಸಹ ವೇದಭಾರತೀ ವತಿಯಿಂದ ನಡೆಸಲಾಗುತ್ತಿರುವ ನಿತ್ಯ ವೇದಾಭ್ಯಾಸ ಕಾರ್ಯಕ್ರಮಕ್ಕೆ ಇನ್ನು ಮುಂದೆ ಬರುವುದಾಗಿ ನಿರ್ಧರಿಸಿ ತಿಳಿಸಿದ್ದು ವಿಶೇಷ. ಉತ್ತಮ ರೀತಿಯಲ್ಲಿ ಶಿಬಿರ ಯಶಸ್ವಿಯಾಗಿ ಸಂಪನ್ನಗೊಳ್ಳಲು ಶ್ರೀ ಹರಿಹರಪುರ ಶ್ರೀಧರ ಮತ್ತು ಶ್ರೀ ಕ.ವೆಂ.ನಾಗರಾಜರ ಮಾರ್ಗದರ್ಶನದಲ್ಲಿ ಉತ್ತಮ ಸಹಕಾರ ನೀಡಿದ ವೇದಭಾರತಿಯ ಎಲ್ಲಾ ವೇದಾಭ್ಯಾಸಿಗಳೂ, ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ ಎಲ್ಲಾ ಮಿತ್ರರುಗಳೂ ಕಾರಣರಾಗಿದ್ದು, ಅವರೆಲ್ಲರೂ ಅಭಿನಂದನಾರ್ಹರಾಗಿದ್ದಾರೆ.
     ಶಿಬಿರದ ಕೆಲವು ದೃಷ್ಯಗಳು:

ಶಿಬಿರಾರ್ಥಿಗಳು
ದೇಶಭಕ್ತಿ ಗೀತೆಗಳ ಕಲಿಕೆ
 ಮೊಳಗಿತು ಓಂಕಾರ - ವೇದಾಧ್ಯಾಯಿಗಳ ಮಾರ್ಗದರ್ಶನದಲ್ಲಿ
  ಸಹಕಾರಿಗಳು, ಸಂಪನ್ಮೂಲ ವ್ಯಕ್ತಿಗಳು - ಇವರಷ್ಟೇ ಅಲ್ಲ!
 ತಾಯಿ-ತಂದೆ, ಪೋಷಕರಿಗೆ ಗೌರವಾರ್ಪಣೆ

 ಪೋಷಕರು
 ಭಾರತ ಮಾತೆಗೆ ನಮನ

 ಶಿಬಿರಾರ್ಥಿಗಳ, ಪೋಷಕರ ಅನಿಸಿಕೆ
 ಒಂದು ಚಮತ್ಕಾರ ಪ್ರದರ್ಶನ - ಶಿಬಿರಾರ್ಥಿಗಳಿಂದ
 ಅಗ್ನಿಹೋತ್ರ -  ಪ್ರಾತ್ಯಕ್ಷಿಕೆ
 ನಿತ್ಯ ಮಕ್ಕಳಿಗೆ ಉಪಾಹಾರ, ಪಾನೀಯ ವಿತರಣೆ

ಹರಿಹರಪುರ ಶ್ರೀಧರರ ಸಾಂದರ್ಭಿಕ ನುಡಿ, ವೇದಿಕೆಯಲ್ಲಿ ಕವಿನಾಗರಾಜ್, 
ಸಿ.ಎಸ್.ಕೃಷ್ಣಸ್ವಾಮಿ ಮತ್ತು ಡಾ. ವಾಮನರಾವ್ ಬಾಪಟ್.


ಶುಕ್ರವಾರ, ಏಪ್ರಿಲ್ 19, 2013

ಜೀವಂತ ಇತಿಹಾಸದ ನೈಜ ಪ್ರತಿನಿಧಿ ಪಂ. ಸುಧಾಕರ ಚತುರ್ವೇದಿಯವರಿಗೆ 117ನೆಯ ವರ್ಷದ ಜನ್ಮದಿನದ ಶುಭ ಹಾರೈಕೆಗಳು


     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (19-04-2013) 116 ವಸಂತಗಳನ್ನು ಕಂಡು 117ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ 1897ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು 6-7 ವರ್ಷದವರಾಗಿದ್ದಾಗ -ಅಂದರೆ ಸುಮಾರು 110 ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ 13ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು 15 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಜೀವಂತ ಇತಿಹಾಸದ ನೈಜ ಪ್ರತಿನಿಧಿ.

     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ 117 ವರ್ಷಗಳ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ 5ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. 286/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.

ಶುಕ್ರವಾರ, ಏಪ್ರಿಲ್ 5, 2013

ದೂರವಾಣಿ ಮೂಲಕ ಕಲಿತ ವೇದ ಮಂತ್ರ


ದೂರವಾಣಿ ಮೂಲಕ ಹಾಸನದ ತಾತನಿಂದ ಕಲಿತ ವೇದ ಮಂತ್ರಗಳನ್ನು ಹೇಳುತ್ತಿರುವ ಮೊಮ್ಮಗಳು ಅಕ್ಷಯ:



-ಬಿಂದು ರಾಘವೇಂದ್ರ, ಬೆಂಗಳೂರು.

ಬುಧವಾರ, ಏಪ್ರಿಲ್ 3, 2013

ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಏನು ಹೇಳಿದೆ?


     ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ(ರ)ರವರು ಪವಿತ್ರ ಕುರ್ ಆನಿನ ಭಾವಾನುವಾದ ಮತ್ತು ಸಂಕ್ಷಿಪ್ತ ವಿವರಣೆಯನ್ನು ಉರ್ದುವಿನಲ್ಲಿ ಮಾಡಿದ್ದು, ಇದನ್ನು ಶ್ರೀ ಎಸ್. ಅಬ್ದುಲ್ ಗಫ್ಫಾರ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಮೌಲಾನಾ ಸಯ್ಯದ್ ಯೂಸುಫ್, ಇಬ್ರಾಹಿಮ್ ಸಯೀದ್ ಮತ್ತು ಮುಹಮ್ಮದ್ ಸಾದುಲ್ಲಾರವರು ಸಮೀಕ್ಷಿಸಿದ್ದಾರೆ. ಈ ಕೃತಿಯಲ್ಲಿ ಕುರ್ ಆನಿನ ಪದಶಃ ಅನುವಾದ ಮಾಡದೆ ಅದರ ಭಾವಾನುವಾದವನ್ನು ಸಂಕ್ಷಿಪ್ತ ಅಡಿ ಟಿಪ್ಪಣಿಗಳೊಂದಿಗೆ ಮಾಡಲಾಗಿದೆ. ಪದಶಃ ಅನುವಾದದಲ್ಲಿ ಪೂರ್ಣ ಮತ್ತು ಸರಿಯಾದ ಅರ್ಥ ಹೊರಹೊಮ್ಮುವುದು ಕಷ್ಟವೆಂಬ ಕಾರಣದಿಂದ, ಅಲ್ಲದೆ ಪದಶಃ ಅನುವಾದದ ಕೃತಿಗಳು ಲಭ್ಯವೂ ಇರುವುದರಿಂದ ಈ ರೀತಿ ಮಾಡಲಾಗಿದೆಯೆಂದು ಅನುವಾದಕರು ನಿವೇದಿಸಿಕೊಂಡಿದ್ದಾರೆ. 
    ಈ ಕೃತಿಯಲ್ಲಿ ತಿಳಿಸಿರುವಂತೆ, ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಬರುವ ಉಲ್ಲೇಖಗಳ ಭಾವಾನುವಾದ ಮತ್ತು ಅಡಿ ಟಿಪ್ಪಣಿಗಳು ಹೀಗಿವೆ: