ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಸೆಪ್ಟೆಂಬರ್ 9, 2014

ತಿರುವುಗಳು


     ಪ್ರತಿಯೊಬ್ಬರ ಜೀವನದಲ್ಲೂ ತಿರುವುಗಳು ಇದ್ದೇ ಇರುತ್ತವೆ. ಅವು ಬಾಳಿನ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ಭಾರತದ ಅತ್ಯುತ್ತಮ ಗ್ರಂಥಪಾಲಕರು ಮತ್ತು ಜಗತ್ತಿನ ಅತ್ಯುತ್ತಮ ಹತ್ತು ಗ್ರಂಥಪಾಲಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟವರು, ಕೇಂಬ್ರಿಡ್ಜಿನ ಅಂತರರಾಷ್ಟ್ರೀಯ ಬಯೋಗ್ರಾಫಿಕ್ ಕೇಂದ್ರದಿಂದ ಪ್ರಪಂಚದ ಅತ್ಯಂತ ಗುಣಾನ್ವಿತರಲ್ಲಿ ಒಬ್ಬರೆಂದು ಕರೆಯಲ್ಪಟ್ಟವರು, ಅಮೆರಿಕಾದ ಅಂತರರಾಷ್ಟ್ರೀಯ ಸಂಸ್ಥೆಯಿಂದ ಸಹಸ್ರಮಾನದ ವ್ಯಕ್ತಿಯೆಂಬ ಬಿರುದು ಗಳಿಸಿದವರು ಮತ್ತು ಬಿರುದಿನೊಂದಿಗೆ ಬಂದ ೩೦ ಕೋಟಿ ರೂ. ಹಣವನ್ನೂ ಸ್ವಂತಕ್ಕಾಗಿ ಇಟ್ಟುಕೊಳ್ಳದೆ ಬಡವರಿಗಾಗಿ ವಿನಿಯೋಗಿಸಿದವರು, ಗ್ರಂಥಪಾಲಕ ಹುದ್ದೆಯಿಂದ ಬಂದ ಸಂಬಳ, ಪೆನ್ಶನ್, ಇತ್ಯಾದಿಗಳನ್ನು ಸ್ವಂತಕ್ಕಾಗಿ ಬಳಸದೆ ಪೂರ್ಣವಾಗಿ ದೀನ ದಲಿತರಿಗಾಗಿ ಖರ್ಚು ಮಾಡಿದ ಏಕೈಕ ಅಪರೂಪದ ವ್ಯಕ್ತಿಯೇ ಪಾಲಮ್ ಕಲ್ಯಾಣಸುಂದರಮ್. ಅವರ ಜೀವನ ಶೈಲಿ ಬದಲಾದುದೇ ಈ ಬೆಳವಣಿಗೆಗಳಿಗೆ ಕಾರಣವಾಗಿದೆ. ಅಷ್ಟಕ್ಕೂ ಅವರಲ್ಲಿ ಈ ಬದಲಾವಣೆ ಬರಲು ಕಾರಣವಾದ ಘಟನೆಯೂ ಸ್ವಾರಸ್ಯಕರವಾಗಿದೆ. ಹಿಂದೆ ಚೀನಾ-ಭಾರತ ಯುದ್ಧ ನಡೆದ ಸಂದರ್ಭದಲ್ಲಿ ಇನ್ನೂ ವಿದ್ಯಾರ್ಥಿಯಾಗಿದ್ದ ಕಲ್ಯಾಣಸುಂದರಮ್ ಆಗಿನ ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಯುದ್ಧ ಸಂತ್ರಸ್ತರ ನಿಧಿಗಾಗಿ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದುಕೊಟ್ಟಿದ್ದ. ನಂತರ ಆನಂದವಿಕಟನ್ ಪತ್ರಿಕೆಯ ಸಂಪಾದಕರಲ್ಲಿ ಹೋಗಿ ತಾನು ಚಿನ್ನದ ಸರ ಕೊಟ್ಟ ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದ್ದ. ಪತ್ರಿಕೆಯ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್ ಅವನಿಗೆ, "ನೀನು ಸ್ವತಃ ದುಡಿದು ದಾನ ಕೊಡುತ್ತೀಯಲ್ಲಾ, ಆಗ ಬಂದು ಹೇಳು, ಪ್ರಕಟಿಸುತ್ತೇನೆ" ಎಂದು ಹೇಳಿ ವಾಪಸು ಕಳಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಆ ತರುಣ. ಪತ್ರಿಕಾ ಸಂಪಾದಕರ ಆ ಮಾತು ಅವನ ಬಾಳಿನ ದಿಕ್ಕನ್ನೇ ತಿರುಗಿಸಿಬಿಟ್ಟಿತು. ಮುಂದೆ ಆತ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶ್ರೀವೈಕುಂಠಮ್ ಕಲಾ ಕಾಲೇಜಿನ ಗ್ರಂಥಪಾಲಕನಾಗಿ ಸುಮಾರು ೩೫ ವರ್ಷಗಳ ಕಾಲ ಕೆಲಸ ಮಾಡಿದಾಗ ಆತ ಮಾಡಿದ್ದೇನೆಂದರೆ ಆತ ತಾನು ದುಡಿದಿದ್ದ ಹಣವನ್ನು ಸ್ವಂತಕ್ಕೆ ಬಳಸದೆ ಪೂರ್ಣವಾಗಿ ಬಡಬಗ್ಗರಿಗಾಗಿ ಬಳಸಿದ್ದು. ಅದರ ಪರಿಣಾಮವೇ ಆತನನ್ನು ಮೇಲೆ ಹೇಳಿದ ಪ್ರಶಸ್ತಿಗಳು ಅರಿಸಿಕೊಂಡು ಬಂದದ್ದು. ದೌರ್ಭಾಗ್ಯವೆಂದರೆ ನಮ್ಮ ಜನಕ್ಕೆ ಸಿನೆಮಾ, ಕಿರುತೆರೆಗಳಲ್ಲಿನ ನಾಯಕರುಗಳು, ಬಿಗ್ ಬಾಸುಗಳೆನಿಸಿಕೊಳ್ಳಲು ಚಿತ್ರ ವಿಚಿತ್ರ ಸರ್ಕಸ್ ಮಾಡುವವರ ವೈಯಕ್ತಿಕ ಬದುಕುಗಳ ಬಗ್ಗೆ ಇರುವ ಆಸಕ್ತಿಯಲ್ಲಿನ ಸ್ವಲ್ಪ ಅಂಶವಾದರೂ ಕಲ್ಯಾಣ ಸುಂದರಮ್‌ನಂತಹ ನಿಜವಾದ ಹೀರೋಗಳ ಬಗ್ಗೆ ಇಲ್ಲದಿರುವುದು!
     ಬಾಳದಾರಿಯಲ್ಲಿ ಸಾಗುವಾಗ ಕೆಲವು ಸಂದರ್ಭಗಳಲ್ಲಿ ಹಲವು ಕವಲೊಡೆದ ದಾರಿಗಳಿರುವ ಕೂಡುಸ್ಥಳ ಎದುರಾಗುತ್ತದೆ. ಆ ಸಂದರ್ಭಗಳಲ್ಲಿ ಯಾವ ದಾರಿ ಆರಿಸಿಕೊಳ್ಳುತ್ತೇವೆ ಎಂಬುದು ಮುಂದಿನ ಜೀವನವನ್ನು ನಿರ್ದೇಶಿಸುತ್ತದೆ. ಪಡೆಯುವ ಶಿಕ್ಷಣ, ಮಾಡುವ ಕೆಲಸ, ಆರಿಸಿಕೊಳ್ಳುವ ಸಂಗಾತಿ, ಪ್ರವೃತ್ತಿ, ಹವ್ಯಾಸಗಳು, ಪರಿಸರ, ಸಹವಾಸ, ಸಂಭವಿಸುವ ಘಟನೆಗಳು, ಅನಿರೀಕ್ಷಿತ ಸಂಗತಿಗಳು, ಸೋಲುಗಳು, ಅವಮಾನಗಳು, ಇತ್ಯಾದಿಗಳು ಜೀವನದ ದಿಕ್ಕನ್ನು ಬದಲಾಯಿಸಬಲ್ಲವು. ಆರಿಸಿಕೊಳ್ಳುವ ದಾರಿ ಕುರಿತು ಜಾಗೃತರಾಗಿರಬೇಕು. ಏಕೆಂದರೆ ನಮ್ಮ ಮಕ್ಕಳೂ ಸಹ ಆ ದಾರಿಯಲ್ಲಿ ಸಾಗುತ್ತಾರೆ ಎಂಬ ಅರಿವಿರಬೇಕು. ದಾರಿ ಒಳ್ಳೆಯದಿದ್ದರೆ ಮಕ್ಕಳಿಗೂ, ಸಮಾಜಕ್ಕೂ ಒಳಿತು. ದಾರಿ ಸರಿಯಿರದಿದ್ದರೆ ಸಮಾಜವಿರಲಿ, ಮಕ್ಕಳೂ ನಮ್ಮನ್ನು ಶಪಿಸುತ್ತಾರೆ.
     ನಾವು ಗೌರವಿಸುವ ಅನೇಕ ಮಹಾಮಹಿಮರು ಏಕಾಏಕಿ ಮಹಾಮಹಿಮರಾದವರಲ್ಲ. ಬದುಕಿನಲ್ಲಿ ಅವರುಗಳು ಎದುರಿಸಿದ ಸಂದರ್ಭಗಳು, ಸಂಗತಿಗಳು ಅವರನ್ನು ಆ ಸ್ಥಾನಕ್ಕೆ ಏರಿಸಿದವು ಅನ್ನುವುದು ಹೆಚ್ಚು ಸಮಂಜಸವಾದೀತು. ರಾಮ, ಕೃಷ್ಣ, ಏಸುಕ್ರಿಸ್ತರ ದೇವತ್ವಕ್ಕೆ ಸಹ ಇವೇ ಕಾರಣಗಳು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ವರ್ಣಬೇಧ ನೀತಿಯಿಂದ ಎದುರಿಸಿದ ಹಿಂಸೆ, ಅನ್ಯಾಯಗಳು ಅವರನ್ನು ಗಟ್ಟಿಗೊಳಿಸಿದವು. ಆಚರಣೆಯಲ್ಲಿದ್ದ ತಾರತಮ್ಯಗಳಿಂದ ನೊಂದ ಬಸವಣ್ಣ ತಾರತಮ್ಯರಹಿತ ಸಮಾಜನಿರ್ಮಾಣಕ್ಕೆ ಮುಂದುವರೆದರು. ಹಿಂದುಳಿದವರ, ದಲಿತರ ಹರಿಕಾರರಾಗಿ ಅಂಬೇಡ್ಕರ್ ಹೊರಹೊಮ್ಮಿದ್ದೂ ಸಹ ಹೀಗೆಯೇ! 
     ಕುಪ್ರಸಿದ್ಧ ವ್ಯಕ್ತಿಗಳು ತಯಾರಾಗುವುದಕ್ಕೂ ಕಾರಣಗಳಿರುತ್ತವೆ. ಭ್ರಷ್ಠ ಆಡಳಿತ ವ್ಯವಸ್ಥೆ, ಭ್ರಷ್ಠ ಇಲಾಖೆಗಳು, ಭ್ರಷ್ಠ ನಾಯಕರುಗಳು ಖಳನಾಯಕರುಗಳ ನಿರ್ಮಾಣಕ್ಕೆ ಸಹಕಾರಿಗಳು. ಕೆಲವು ಸಂದರ್ಭಗಳಲ್ಲಿ ಪೋಲಿಸ್ ಠಾಣೆಗಳು ಮತ್ತು ಬಂದೀಖಾನೆಗಳೂ ಪಾತಕಿಗಳ ಉಗಮಕ್ಕೆ ಕಾರಣವಾಗುತ್ತವೆ. ನನ್ನ ಮನಸ್ಸಿನಲ್ಲಿ ಹುದುಗಿದ್ದ ಸಂಗತಿಯೊಂದನ್ನು ಹೊರಗೆಡವಿಬಿಡುತ್ತೇನೆ. ೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದೆನೆಂಬ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರದಿಂದ ನಾನು ಅನುಭವಿಸಿದ ಅಕಾರಣ ತೊಂದರೆಗಳು, ಹಿಂಸೆಗಳು, ಜೈಲುವಾಸ, ಸುಖಾಸುಮ್ಮನೆ ಹಾಕಿದ್ದ ಸುಳ್ಳು ಕ್ರಿಮಿನಲ್ ಮೊಕದ್ದಮೆಗಳು, ನನ್ನ ಮನೆಯವರು ಹಾಕಿದ್ದ ಕಣ್ಣೀರುಗಳು, ಇತ್ಯಾದಿಗಳು ನನ್ನನ್ನು ಒಬ್ಬ ಹಿಂಸಾವಾದಿಯನ್ನಾಗಿಸಲು, ಉಗ್ರಗಾಮಿಯಾಗಿಸಲು ಸಾಕಿತ್ತು. ನಿಮಗೆ ಆಶ್ಚರ್ಯವಾಗಬಹುದು, ನಾನು ಒಬ್ಬ ಜಿಲ್ಲಾಧಿಕಾರಿ ಮತ್ತು ಒಬ್ಬ ಪೋಲಿಸ್ ಅಧಿಕಾರಿಯೂ ಸೇರಿದಂತೆ ನನಗೆ ಬಹಳ ತೊಂದರೆ ನೀಡಿದ ಎಂಟು ಜನರನ್ನು ಕೊಲೆ ಮಾಡಲು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. ಅಷ್ಟು ರೋಸಿಹೋಗಿದ್ದೆ. ನನ್ನ ನೌಕರಿ ಹೋಗಿತ್ತು. ಮತ್ತೆ ಸಿಗುತ್ತದೆಯೆಂಬ ಆಸೆ ಇರಲಿಲ್ಲ. ಜೈಲಿನ ಗೋಡೆಗೊರಗಿ ಕುಳಿತು ಯಾರನ್ನು ಹೇಗೆ ಮುಗಿಸಬೇಕೆಂಬ ಯೋಜನೆ ಮನದಲ್ಲೇ ರೂಪುಗೊಳ್ಳುತ್ತಿತ್ತು. ಯಾವ ಆರೆಸ್ಸೆಸ್ಸನ್ನು ಹಿಂಸೆಗೆ ಪ್ರಚೋದಿಸುವವರೆಂದು ಕೆಲವು ಪೀತ ಮಾಧ್ಯಮಗಳು, ಸ್ವಘೋಷಿತ ಪ್ರಗತಿಪರರೆಂದುಕೊಳ್ಳುವವರು, ಪೂರ್ವಾಗ್ರಹ ಪೀಡಿತರು ದೂಷಿಸುತ್ತಾರೋ, ಆ ಆರೆಸ್ಸೆಸ್ಸಿನ ಹಿರಿಯರ ನಡವಳಿಕೆಗಳು ಮತ್ತು ಮಾರ್ಗದರ್ಶನಗಳು ನನ್ನನ್ನು ಹಿಂಸಾಮಾರ್ಗದಿಂದ ವಿಮುಖ ಮಾಡಿದವೆಂಬುದು ಸತ್ಯಸಂಗತಿ. ಒಂದೊಮ್ಮೆ ನಾನು ಎಡವಿದ್ದರೆ ಹಿಂದೆ ಬರಲಾಗದಂತೆ ಅದೇ ದಾರಿಯಲ್ಲಿ ಮುಂದುವರೆಯಬೇಕಾದ ಅನಿವಾರ್ಯತೆ ನನಗೆ ಬಂದೊದಗಿರುತ್ತಿತ್ತು. (ಪೂರ್ಣ ವಿವರಗಳನ್ನು 'ಆದರ್ಶದ ಬೆನ್ನು ಹತ್ತಿ. .' ಪುಸ್ತಕದಲ್ಲಿ ದಾಖಲಿಸಿರುವೆ.) ನಕ್ಸಲೀಯರು, ಉಗ್ರಗಾಮಿಗಳು ತಯಾರಾಗುವುದು ಹೀಗೆಯೇ!  
     ಭಾರತದ ಶಿರೋಭಾಗ ಕಾಶ್ಮೀರ ಕಣಿವೆಯ ದುರಂತ ಸ್ಥಿತಿಗೆ ಕಾರಣ, ಸಮಸ್ಯೆಯನ್ನು ಸರಿಯಾಗಿ ಗ್ರಹಿಸದೆ ಅಪಕ್ವವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದೇ ಎಂಬುದು ನಿರ್ವಿವಾದವಾಗಿದೆ. ಪರಿಸ್ಥಿತಿಗೆ ಬಲಿಯಾಗಿ ಮುಸ್ಲಿಮನಾಗಿದ್ದ ಕಾಳಿಚರಣ ಮರಳಿ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದ್ದರು. ಕೆರಳಿದ ಕಾಳಿಚರಣ ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿಸಿದ. ಇಂದು ಕಣಿವೆ ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿ ಕಾಶ್ಮೀರಿ ಪಂಡಿತರು ನಿರ್ವಸಿತರಾಗಬೇಕಾಗಿ ಬಂದ ಸ್ಥಿತಿಗೆ ಇವನ ಕೊಡುಗೆ ಮಹತ್ವದ್ದಾಗಿದೆ. ಒಂದು ವೇಳೆ ಕಾಳಿಚರಣ ಮಾತೃಧರ್ಮಕ್ಕೆ ಹಿಂತಿರುಗಲು ಅವಕಾಶವಾಗಿದ್ದಿದ್ದರೆ? ಇದನ್ನೇ ತಿರುವು ಅನ್ನುವುದು. ಇಂತಹ ತಿರುವುಗಳೇ ಭಾರತವನ್ನು ಹಿಂದೆ ಮುಸಲ್ಮಾನರ ಮತ್ತು ನಂತರ ಬ್ರಿಟಿಷರ ದಾಸ್ಯಕ್ಕೆ ದೂಡಿತ್ತು ಎಂಬುದು ಇತಿಹಾಸದ ಅಧ್ಯಯನದಿಂದ ತಿಳಿದುಬರುತ್ತದೆ. ಪ್ಲಾಸಿ ಕದನದಲ್ಲಿ ರಾಬರ್ಟ್ ಕ್ಲೈವನಿಗೆ ಸಹಾಯ ಮಾಡಿದ ಮೀರ್ ಜಾಫರನಿಂದಾಗಿ ಭಾರತ ಮುಂದಿನ ಎರಡು ಶತಮಾನಗಳ ಕಾಲ ದಾಸ್ಯಕ್ಕೊಳಗಾಗಬೇಕಾಯಿತು. ಬ್ರಿಟಿಷರು ಮತ್ತು ಸಿಖ್ಖರ ನಡುವಣ ಯುದ್ಧದಲ್ಲಿ ಬ್ರಿಟಿಷರಿಗೆ ನೆರವಾದ ಲಾಭಸಿಂಗ್, ಪೃಥ್ವಿರಾಜನನ್ನು ದ್ವೇಷಿಸುತ್ತಿದ್ದ ರಾಜ ಜಯಸಿಂಗನ ದ್ರೋಹದಿಂದಾಗಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟ ಭಾರತ, ಟಿಪ್ಪುವಿಗೆ ದ್ರೋಹ ಬಗೆದು ಬ್ರಿಟಿಷರಿಗೆ ಸಹಾಯ ಮಾಡಿದ ಮೀರ್ ಸಾದಿಕ್, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಜೊತೆಗಾರ ಕ್ರಾಂತಿಕಾರರನ್ನೇ ಹಿಡಿದುಕೊಟ್ಟ ಸಹಚರರು, ಭಾರತದ ವಿಮುಕ್ತಿಗಾಗಿ ಸೈನ್ಯವನ್ನೇ ಕಟ್ಟಿ ಹೋರಾಡುತ್ತಿದ್ದ ನೇತಾಜಿ ಸುಭಾಷ ಚಂದ್ರಬೋಸರ ವಿರುದ್ಧ ಮಸಲತ್ತು ಮಾಡಿದ ಕಾಂಗ್ರೆಸ್ ನಾಯಕರ ಕುತಂತ್ರಗಳು ದೇಶದ ಕಾಲೆಳೆದವು. ಇಂತಹ ಅಸಂಖ್ಯ ಉದಾಹರಣೆಗಳು ನಮ್ಮ ಮನ ನೋಯಿಸದೆ ಇರವು. 
     ಭಯೋತ್ಪಾದಕರ ಉಪಟಳ ಇಂದು ಮೇರೆ ಮೀರಿದೆ. ನಮ್ಮ ದೇಶದಲ್ಲೇ ಇದ್ದು, ನಮ್ಮ ದೇಶದ ಉಪ್ಪು ತಿಂದು ಬೆಳೆಯುತ್ತಿರುವ ಅನೇಕರು ಬಹಿರಂಗವಾಗಿ ದೇಶವನ್ನು ಹೀನಾಯವಾಗಿ ಟೀಕಿಸುವುದು, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟರುಗಳಲ್ಲೂ ಬಹಿರಂಗವಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಿರುವುದು ಅವರಿಗೆ ನಮ್ಮ ನೇತಾರರುಗಳೆನಿಸಿಕೊಂಡವರಿಂದ, ಎಡಬಿಡಂಗಿಗಳಿಂದ ಸಿಗುತ್ತಿರುವ ಬೆಂಬಲ, ಸಹಕಾರಗಳ ವಿಕಟದರ್ಶನ ಮಾಡಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ಉತ್ತಮ ಶಿಕ್ಷಣ ಪದ್ಧತಿ ಮತ್ತು ಅಭಿವೃದ್ಧಿಯ ಕಡೆಗೆ ಗಮನಗಳು ಮಾತ್ರ ದೇಶವನ್ನು ಉತ್ತಮ ತಿರುವಿಗೆ ತಂದು ನಿಲ್ಲಿಸಬಲ್ಲವು. ಕೇಸರೀಕರಣವೆಂಬ ಗುಮ್ಮನನ್ನು ಮುಂದೆ ತೋರಿಸಿ ಬದಲಾವಣೆಯನ್ನು ವಿರೋಧಿಸುವ ಅರಾಜಕತಾವಾದಿಗಳ ಹಿಡಿತದಲ್ಲಿ ಮಾಧ್ಯಮಗಳು ಇವೆಯೇನೋ ಎಂದು ಭಾಸವಾಗುತ್ತದೆ. ಕೇಸರೀಕರಣ, ಹಸಿರೀಕರಣ, ಎಡವಾದ, ಬಲವಾದ, ಇತ್ಯಾದಿಗಳನ್ನು ಬದಿಗಿಟ್ಟು ಪೂರ್ವಾಗ್ರಹಪೀಡಿತರಾಗದೆ ಇಂದು ದೇಶಕ್ಕೆ ಅಗತ್ಯವಿರುವುದಾದರೂ ಏನು ಎಂಬ ಬಗ್ಗೆ ಚಿಂತಿಸಿ ಮುನ್ನಡೆಯುವುದು ಸೂಕ್ತವಾಗಿದೆ.
     ಇಂದು ಎಲ್ಲಾ ಕ್ಷೇತ್ರಗಳೂ ಕಲುಷಿತಗೊಂಡಿವೆ. ಎಲ್ಲಾ ವಿಷಯಗಳನ್ನೂ ಅಧಿಕಾರ, ಹಣ, ಹೆಸರು, ಇತ್ಯಾದಿಗಳ ದೃಷ್ಟಿಯಿಂದ ನೋಡುವ ಪರಿಪಾಠ ಬೆಳೆಸಿಬಿಟ್ಟಿದ್ದಾರೆ. ಒಟ್ಟು ಸಾಮಾಜಿಕ ಹಿತವನ್ನು ಗೌಣವಾಗಿಸಿ ಜಾತಿ, ಮತ, ಪಂಥ, ಲಿಂಗ, ಎಡವಿಚಾರ, ಬಲವಿಚಾರ ಎಂಬ ಸುಳಿಗಳಲ್ಲಿ ಜನರನ್ನು ಸಿಲುಕಿಸಿ ದೇಶವನ್ನು ಪಾತಾಳಕ್ಕೆ ಜಾರಿಸುವವರ ಕೈ ಮೇಲಾಗಿದೆ. ಒಂದು ಸಣ್ಣ ಆದರೆ ಗಂಭೀರವಾದ, ಪತ್ರಿಕೆಯಲ್ಲಿ ಸುದ್ದಿಯಾಗಿರುವ ಉದಾಹರಣೆ ಕೊಡಬಯಸುವೆ. ಶಿಕ್ಷಕರ ದಿನಾಚರಣೆಯಂದು ಕೊಡುವ ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಲು ಇಚ್ಛಿಸದವರು ಅರ್ಜಿ ಹಾಕುವುದಿಲ್ಲ. ಲಾಬಿ ಮಾಡಲು ಶಕ್ಯವಿಲ್ಲದವರೂ, ಜಾತಿಬೆಂಬಲವಿಲ್ಲದವರು, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬೆಂಬಲವಿಲ್ಲದವರೂ ಅರ್ಜಿ ಹಾಕುವುದಿಲ್ಲ. ಇನ್ನು ಯಾರು ಅರ್ಜಿ ಸಲ್ಲಿಸುತ್ತಾರೆ ಮತ್ತು ಪ್ರಶಸ್ತಿಗಳು ಯಾರ ಪಾಲಿಗೆ ಸೇರಬಹುದು, ಯೋಚಿಸಿ. ಇದು ದುರಂತ! 
     ಉತ್ತಮ ಆಧರ್ಶಗಳನ್ನು ಇಟ್ಟುಕೊಳ್ಳುವ, ನೈತಿಕತೆಗೆ ಬೆಲೆ ಕೊಡುವ ಸಮಾಜ ಮಾತ್ರ ಏಳಿಗೆ ಸಾಧಿಸಬಲ್ಲದು. ಪರಸ್ಪರರ ಏಳಿಗೆಯನ್ನು ಬಯಸುವ ಜನರೇ ನಿಜವಾದ ನಾಗರಿಕರೆನಿಸಬಲ್ಲರು. ಜಾತಿ, ಮತ, ಧರ್ಮ, ಪಂಥ, ಇತ್ಯಾದಿಗಳು ವೈಯಕ್ತಿಕ ಆಚರಣೆಗಳಿಗಷ್ಟೇ ಸೀಮಿತಗೊಳ್ಳಬೇಕು. ಒಟ್ಟು ದೇಶದ, ಸಮಾಜದ ಹಿತ ಪರಿಗಣನೆಗೆ ಬಂದಾಗ ಇವಾವುದೂ ಅಡ್ಡಿಯಾಗಬಾರದು. ಹಿಂದುಳಿದವರು, ಅಶಕ್ತರು, ದುರ್ಬಲರು, ಹೀನ-ದೀನ ಸ್ಥಿತಿಯಲ್ಲಿರುವವರು ಯಾರೇ ಆಗಲಿ ಅವರನ್ನು ಜಾತಿ/ಧರ್ಮಗಳ ಕನ್ನಡಕಗಳಿಂದ ನೋಡದೇ ಮುಂದೆ ತರುವ ಪ್ರಾಮಾಣಿಕ ಪ್ರಯತ್ನ ನಡೆದರೆ ಮಾತ್ರ ದೇಶದ ಉದ್ಧಾರ ಸಾಧ್ಯ, ಇಲ್ಲದಿದ್ದರೆ ಖಂಡಿತಾ ಸಾಧ್ಯವಿಲ್ಲ. ಅಂತಹ ತಿರುವನ್ನು ತರುವ ಶಿಕ್ಷಣ ಪದ್ಧತಿ ರೂಪುಗೊಳ್ಳಲು ಪ್ರಜ್ಞಾವಂತರು ಶ್ರಮಿಸಲೇಬೇಕು. ವೇದದ ಈ ಕರೆ ಸಕಾಲಿಕವಾಗಿದ್ದು ಅನುಕರಣೀಯವಾಗಿದೆ:
 ಸತ್ಯಂ ಬೃಹದೃತಮುಗ್ರಂ ದೀಕ್ಷಾ ತಪೋ ಯಜ್ಞಃ ಪೃಥಿವೀಂ ಧಾರಯಂತಿ |
ಸಾ ನೋ ಭೂತಸ್ಯ ಭವ್ಯಸ್ಯ ಪತ್ನ್ಯುರುಂ ಲೋಕಂ ಪೃಥಿವೀ ನಃ ಕೃಣೋತು || (ಅಥರ್ವ.೧೨.೧.೧.)
     ಸತ್ಯ, ಮನೋವೈಶಾಲ್ಯ, ನ್ಯಾಯ, ಪರಾಕ್ರಮ, ವ್ರತನಿಷ್ಠೆ, ಕಷ್ಟಸಹಿಷ್ಣುತೆ, ವೇದಜ್ಞಾನ ಮತ್ತು ತ್ಯಾಗಭಾವಸಂಪನ್ನ ಸತ್ಕರ್ಮ ಇವು ಭೂಮಿಯನ್ನು ಉದ್ಧರಿಸುತ್ತವೆ. ನಮ್ಮ ಅತೀತದ ಮತ್ತು ಭವಿಷ್ಯದ ಪಾಲಿಕೆಯಾದ ಆ ಭೂಮಿಯು ನಮಗಾಗಿ ವಿಶಾಲವಾದ ರಾಷ್ಟ್ರವನ್ನು ಉಂಟುಮಾಡಲಿ ಎಂಬುದು ಇದರ ದಿವ್ಯ ಸಂದೇಶವಾಗಿದೆ. ಈ ಎಂಟು ಗುಣಗಳನ್ನು ಮೈಗೂಡಿಸುವ ನೈಜ ಶಿಕ್ಷಣವನ್ನು ನಮ್ಮ ಮಕ್ಕಳಾದರೂ ಪಡೆಯುವ ಸಲುವಾಗಿ ಶ್ರಮಿಸುವ ಹೊಣೆ ನಮ್ಮ ಮೇಲಿದೆಯೆಂದು ಅರಿತರೆ ಅದೇ ಮಹತ್ವದ ತಿರುವಾಗುತ್ತದೆ.
-ಕ.ವೆಂ.ನಾಗರಾಜ್.
**************
ದಿನಾಂಕ 8.9.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಸೆಪ್ಟೆಂಬರ್ 6, 2014

ಆಕಾಶವೋ? ದೇವರ ಕಣ್ಣೋ?


     ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು. 
ಆಗಸದ ನಿಜಬಣ್ಣ ತೋರುವಂತಿಹುದೇನು?
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಆಗಸದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ? ||
     ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ - ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ;
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ಅದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.)
     ಇದರ ಅರ್ಥ, ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ. 
     ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು 'ಕಣ್ಣಿಲ್ಲದೇ ಕಾಣಬಲ್ಲ ದೇವರ ಕಣ್ಣು' ಎಂದು ಭಾವಿಸಬಹುದೆಂದು ಅನ್ನಿಸಿದಾಗ ನನಗೆ ಏನೋ ಬೆಳಕು ಹೊಳೆದಂತಾಯಿತು. ಸ್ವಾಮಿ ವಿವೇಕಾನಂದರು ತಾವು ಭೇಟಿಯಾದ ಎಲ್ಲಾ ಸಾಧು-ಸಂತ-ಸನ್ಯಾಸಿಗಳನ್ನು ಒಂದು ಪ್ರಶ್ನೆ ಕೇಳುತ್ತಿದ್ದರು - "ಸ್ವಾಮಿ, ತಾವು ದೇವರನ್ನು ಕಂಡಿದ್ದೀರಾ?" ಇದೇ ಪ್ರಶ್ನೆಗೆ ಶ್ರೀ ರಾಮಕೃಷ್ಣ ಪರಮಹಂಸರು ನೀಡಿದ್ದ ಉತ್ತರವೆಂದರೆ -"ಹೌದು, ನಾನು ಕಂಡಿದ್ದೇನೆ. ದೇವರೊಂದಿಗೆ ಮಾತನ್ನೂ ಆಡಿದ್ದೇನೆ". ಈ ಪ್ರಸಂಗದ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತವೆನಿಸೀತು. ನಾನಂತೂ ಪರಮಾತ್ಮನನ್ನು ಕಂಡಿಲ್ಲ, ಆದರೆ ಪರಮಾತ್ಮ ನನ್ನನ್ನು ಕಂಡಿದ್ದಾನೆ, ಕಾಣುತ್ತಿದ್ದಾನೆಂದು ನನಗೆ ಖಾತ್ರಿಯಾಗಿದೆ. ನನ್ನ ಅರಿವಿನ ಪರಿಮಿತಿಯಲ್ಲಿ ಪರಮಾತ್ಮನ ಇರುವಿಕೆಯ ರೀತಿಯನ್ನು ಅರ್ಥೈಸಿಕೊಂಡಿದ್ದೇನೆಂದು ಭಾವಿಸಿದ್ದೇನೆ. ಬುದ್ಧನಿಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಇವನಿಗೂ ಮನೆಯ ತಾರಸಿ ಮೇಲೆ ಕುಳಿತು ಆಕಾಶ ನೋಡುತ್ತಾ ಜ್ಞಾನೋದಯವಾಗಿರಬೇಕು ಎಂದು ತಮಾಷೆ ಮಾಡುವುದಾದರೆ ನನ್ನ ಅಭ್ಯಂತರವಿಲ್ಲ. 
     ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವಲ್ಲವೇ? ಹಾಗಾದರೆ ದೇವರು ಆಕಾಶರೂಪದಲ್ಲಿ ಪ್ರಕಟನಾಗಿದ್ದಾನೆ ಅನ್ನಬಹುದಲ್ಲವೇ? ದೇವರ ವಿಶ್ವರೂಪ ದರ್ಶನವೆಂದರೆ ಇದೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು, ವಸ್ತುವನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ ಅವನ ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು.  
ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ತ್ವ ಅರಿತವರು ಯಾರು
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ ||
     ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವೇ ಇಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲುದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು ಒಳ್ಳೆಯ ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ,ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದು ಆಕಾಶ ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆಯೆಂದು ಅನ್ನಿಸುವುದಿಲ್ಲವೇ? 
     ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು ಮೇಲೆ ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ ಮೇಲೆ ಇದೆ ಎಂದು ಭಾವಿಸಿದಂತೆ. ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಕೈಗೆ ಸಿಗಲಾರದ ವಸ್ತುವನ್ನು ಗಗನಕುಸುಮವೆಂದು ವರ್ಣಿಸುತ್ತೇವೆ. ಆದರೆ, ಸದಾ ನಮ್ಮನ್ನು ಹೊಂದಿಕೊಂಡೇ ಇರುವ, ಆವರಿಸಿರುವ ಆಕಾಶವನ್ನು ಗಮನಿಸದ ನಾವುಗಳೇ ನಿಜವಾದ ಗಗನಕುಸುಮಗಳು. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ? 
     ನಾಟಕದಲ್ಲಿ ವಿವಿಧ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನ ನಾಟಕದಲ್ಲಿ? 'ಜಗದೀಶನಾಡುವಾ ಜಗವೇ ನಾಟಕರಂಗ' ಎಂಬ ಹಾಡು ಕೇಳಿದ್ದೇವೆಲ್ಲವೇ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ ಯಾರು ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ.  ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
     ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲವೆಂದು ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು. 
-ಕ.ವೆಂ.ನಾಗರಾಜ್.
*********** **
26.8.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ: