ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ನವೆಂಬರ್ 27, 2010

ಮೂಢ ಉವಾಚ -29: ಮುಪ್ಪು

ಮದಭರಿತ ಯೌವನವ ಮುಪ್ಪು ತಿನ್ನುವುದು
ಸಾಕೆಂಬ ಭಾವವನು ಬೇಕೆಂಬುದಳಿಸುವುದು|
ಗುಣವನಸೂಯೆ ತಿನ್ನುವುದು ಒಂದನಿನ್ನೊಂದು
ನುಂಗದಿರುವುದಿದೆಯೇ ಜಗದಿ ಮೂಢ||


ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು
ಮುಪ್ಪು ಬಂದಡರಿ ಕೈಕಾಲು ನಡುಗಿಹುದು|
ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು
ತೀರದಿಹ ಆಸೆಗೆ ಮುಪ್ಪಿಲ್ಲವೋ ಮೂಢ||


ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಂದವಾಗಿರಲು|
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ||


ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು|
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ||
****************
-ಕವಿನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ