ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 30, 2010

ಮೂಢ ಉವಾಚ -31

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆಂಬುದು ಜ್ಞಾನ|
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ ಮಾನ್ಯ ಮೂಢ||


ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು|
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||


ಪ್ರೀತಿಯಂದಲೆ ನಲಿವು ಪ್ರೀತಿಯಿಂದಲೆ ನೋವು
ಪ್ರೀತಿಯಂದಲೆ ರಕ್ಷೆ ಪ್ರೀತಿಯಿಂದಲೆ ಭಯವು|
ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ
ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ||


ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು
ದುಃಖ ಭಯಗಳೆಲ್ಲಿ ಆಸೆಗಳ ತೊರೆದವಗೆ|
ಸಂತಸದ ಬೆನ್ನೇರಿ ದುಃಖ ಭಯ ಬರದಿರದೆ
ಬುದ್ಧವಾಣಿಯಿದು ಮರೆಯದಿರು ಮೂಢ||
***************
-ಕವಿನಾಗರಾಜ್.

2 ಕಾಮೆಂಟ್‌ಗಳು: