ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 18, 2010

ಮೂಢ ಉವಾಚ -26

ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು
ಚಾಡಿಯನು ಹೇಳುವರು ಸಂಬಂಧ ಕೆಡಿಸುವರು|
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು
ಸಂಬಂಧ ಉಳಿಸಿ ಬೆಳೆಸುವರವರು ಮೂಢ||


ಕ್ಷಮಿಸುವರು ನರರು ಬಲಹೀನತೆಯಿಂದ
ಆಸೆ ಪಡದಿಹರು ದೊರೆಯದಿರುವುದರಿಂದ|
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ
ನಿರ್ಮೋಹತೆಗೆ ಬಲವುಂಟು ಮೂಢ||


ದೇವರನು ಅರಸದಿರಿ ಗುಡಿ ಗೋಪುರಗಳಲ್ಲಿ
ದೇವನಿರುವನು ನಮ್ಮ ಹೃದಯ ಮಂದಿರದಲ್ಲಿ|
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮನೊಲಿಯದಿಹನೇ ಮೂಢ||


ಕೋಲುಗಳು ಕಲ್ಲುಗಳು ದೇಹವನು ಘಾತಿಪವು
ಸಿಟ್ಟಿನಾ ಮಾತುಗಳು ಮನಸನು ನೋಯಿಪವು|
ಮಡುಗಟ್ಟಿದಾ ಮೌನ ಹೃದಯವನು ತಿಂದಿರಲು
ಕೆಡುಕನೆಣಿಸಿದವರಿಗೊಳಿತನೆ ಬಯಸು ಮೂಢ||
**************
-ಕವಿನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ