ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ನವೆಂಬರ್ 29, 2010

ಮೂಢ ಉವಾಚ -30

ಪರರ ಮೆಚ್ಚಿಸಲು ಸಾಧ್ಯವೇ ಜಗದೊಳು
ಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು|
ತಾಳುವವ ದುರ್ಬಲ ಗಟ್ಟಿಗ ಕ್ರೂರಿಯೊಲು
ಕಾಣಲಚ್ಚರಿ ಪಡುವುದೇಕೋ ಮೂಢ ||


ಜೀವನದಲರ್ಧ ನಿದ್ದೆಯಲಿ ಕಳೆಯುವೆ
ಕಾಲುಭಾಗ ಬಾಲ್ಯ ಮುಪ್ಪಿನಲಿ ಕಳೆಯೆ|
ಕಷ್ಟ ಕೋಟಲೆ ಕಾಯಿಲೆ ಉದರಭರಣೆಗೆ
ಕಳೆದುಳಿದ ಬಾಳು ಹಾಳಾಗದಿರಲಿ ಮೂಢ||


ಒಂದು ಕಾಲದ ಭವ್ಯ ನಗರ ರಾಜರುಗಳೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ|
ಆ ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಮ್ಮ ಕಥೆಯದೇನು ಹೊರತೆ ಮೂಢ||


ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು|
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲಿಹರು ತಿಳಿಯೋ ಮೂಢ||
***************
-ಕವಿನಾಗರಾಜ್.

2 ಕಾಮೆಂಟ್‌ಗಳು:

  1. "ಆಟದಂತ್ಯದಲಿ" ಎಲ್ಲವೂ ಶೂನ್ಯವೆನ್ನುವುದು ನಮಗೆ ಮನದಟ್ಟಾಗುವಂತೆ ಬರೆದುಕೊಟ್ಟ ನೀವೇ ಶ್ರೇಷ್ಠರು.
    ನಮ್ಮಂತಹ ಮೂಢಾರಿಗೆ ಕಂದನಿಗೆ ಹಾಲುಣಿಶೋ ತಾಯ ಒಲುಮೆಯಲಿ ತಿದ್ದು ಕಾವ್ಯವ ಕೊಡುವ ನೀವೇ ಮಾನ್ಯರು.

    ಪ್ರತ್ಯುತ್ತರಅಳಿಸಿ