ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 5, 2011

ಮೂಢ ಉವಾಚ - 58

ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ ||


ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು |
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನು ಮೂಢ ||


ತಪನಿರತಗಾಸಕ್ತಿ ಕಾಮಿತಫಲದಲಿ
ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ |
ಕರ್ಮಿಗಿಹುದಾಸಕ್ತಿ ಬರುವ ಫಲದಲಿ
ಯೋಗಿಗಾಸಕ್ತಿ ಪರಮಪದದಲ್ಲಿ ಮೂಢ ||


ಫಲವ ಬಯಸದೆ ಮಾಡುವನು ಕರ್ಮ
ಸಮಚಿತ್ತದೆಸಗಿದ ಮಮರಹಿತ ಕರ್ಮ |
ರಾಗ ರೋಷಗಳ ಸೋಂಕಿರದ ಕರ್ಮ
ಕರ್ಮಯೋಗಿಯ ಮರ್ಮವಿದುವೆ ಮೂಢ ||
******************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ