ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಮಾರ್ಚ್ 17, 2012

ತಿಳಿದೆ ನಾನು


ತಿಳಿದೆ ನಾನು
ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು
ತಿಳಿದೆ ನಾನು
ಕೆಲರು ಒಡನಿರುವರು ನಾನು ಬೇಕೆಂದಲ್ಲ 
ಅವರಿಗೆ ನಾನು ಬೇಕಿತ್ತೆಂದು
ತಿಳಿದೆ ನಾನು 
ಯಾರನ್ನು ಇಷ್ಟಪಡುವೆನೋ ಅವರಿಂದ
ದೂರಲ್ಪಡುವೆನೆಂದು
ತಿಳಿದೆ ನಾನು
ಪ್ರಿಯರ ಸಣ್ಣ ಸುಳ್ಳು ಹೃದಯ ಒಡೆಸೀತೆಂದು
ತಿಳಿದೆ ನಾನು
ಆಸರೆಯ ಭುಜವಿಲ್ಲದೆ ಅಳುವುದು ಕಷ್ಟವೆಂದು
ತಿಳಿದೆ ನಾನು
ಇರುವ ಪ್ರೀತಿಯನ್ನೆಲ್ಲಾ ಕಳೆದುಕೊಳ್ಳದೆ
ಸ್ವಂತಕ್ಕೂ ಸ್ವಲ್ಪ ಉಳಿಸಿಕೊಳ್ಳಬೇಕೆಂದು
ತಿಳಿದೆ ನಾನು
ಎಲ್ಲರೊಡನಿದ್ದರೂ ಒಂಟಿಯಾಗಿರುವೆನೆಂದು
ತಿಳಿದೆ ನಾನು
ಬದಲಾಗಬೇಕಾದ್ದು ನಾನೇ ಎಂದು
ತಿಳಿದೆ ನಾನು
ಬಯಸಿದಂತೆ ನಡೆಯುವುದು ಕಷ್ಟವೆಂದು
ತಿಳಿದೆ ನಾನು
ಬಹಿರಂಗ ಅಂತರಂಗವ ನುಂಗಿ ನೀಗೀತೆಂದು
ತಿಳಿದೆ ನಾನು
ಏಕಾಂತ ಮಾತ್ರ ನನ್ನತನವನುಳಿಸೀತೆಂದು
ತಿಳಿದೆ ನಾನು
ತಿಳಿದದ್ದು ಸ್ವಲ್ಪ ತಿಳಿಯದಿರುವುದು ಬಹಳವೆಂದು
ತಿಳಿದೆ ನಾನು
. . . . . . . . . . . . . . . . . . . . . . . . . . . . . .! 
. . . . . . . . . . . . . . . . . . . . . . . . . 
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: