ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಸೆಪ್ಟೆಂಬರ್ 10, 2012

ಮೂಢ ಉವಾಚ - 89


ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳೂ ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ || ..೩೦೯

ತಿನಿಸ ಕಂಡೊಡನೆ ಹಸಿವು ಹಿಂಗುವುದೆ
ಜಠರಾಗ್ನಿ ತಣಿದೀತು ಸೇವಿಸಲು ತಾನೆ? |
ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
ಅನುಭವಿಸಿ ಕಾಣಬೇಕವನ ಮೂಢ || ..೩೧೦

ದುರ್ಜನರ ಸಂಗವದು ರಾಗದ್ವೇಷಕೆ ದಾರಿ
ಒಳಕರೆಗೆ ಕಿವುಡಾಗಿ ಬೀಳುವರು ಜಾರಿ |
ಕುಜನರಿಂ ದೂರಾಗಿ ಸುಜನರೊಡನಾಡೆ
ಮೇಲೇರುವ ದಾರಿ ಕಂಡೀತು ಮೂಢ || .೩೧೧

ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ
ರುದ್ರಾಕ್ಷಿ ಸರವೇಕೆ ಜಪಮಣಿಯು ಬೇಕೆ |
ತೋರಿಕೆಯ ನಡೆ ಸಲ್ಲ ನುಡಿಯು ಬೇಕಿಲ್ಲ
ಅಂತರಂಗದ ಭಾವ ಸಾಕೆಲ್ಲ ಮೂಢ || ..೩೧೨
****************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
    ಅನುಭವಿಸಿ ಕಾಣಬೇಕವನ ಮೂಢ ||

    ಒಳಕರೆಗೆ ಕಿವುಡಾಗಿ ಬೀಳುವರು ಜಾರಿ |

    ಅಂತರಂಗದ ಭಾವ ಸಾಕೆಲ್ಲ ಮೂಢ

    ಈ ಮೇಲಿನ ನಿಮ್ಮ ಸಾಲುಗಳು ಅತ್ಯದ್ಭುತ. ಜ್ಞಾನದ ಅಂತರಂಗದಿಂದ ಮೂಡಿ ಬಂದ ನುಡಿಗಳು.
    ನಾಗರಾಜ್ ನಿಮಗೆ ನೀವೇ ಸಾಟಿ.
    ನೀವು ನಿಮ್ಮ ನುಡಿಗಳ ಸಂಗ್ರಹವನ್ನು ಪ್ರಕಟಿಸುತ್ತೀರಾ?

    ಪ್ರತ್ಯುತ್ತರಅಳಿಸಿ
  2. ಸುಮಾರು 2 ವರ್ಷಗಳ ಹಿಂದೆ 250 ಉವಾಚಗಳ ಒಂದು ಸಂಗ್ರಹ ಪ್ರಕಟಿಸಿರುವೆ. ಧನ್ಯವಾದಗಳು, ರವಿಯವರೇ.

    ಪ್ರತ್ಯುತ್ತರಅಳಿಸಿ