ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಫೆಬ್ರವರಿ 12, 2013

ಶ್ರಾದ್ಧ


ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದ ಬೆಳೆಯದ ನಾಶವಾಗದ 
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಸಾಮಾನ್ಯವಾಗಿ ಶ್ರಾದ್ಧ ಎಂದಾಕ್ಷಣ ನೆನಪಿಗೆ ಬರುವುದು ಮೃತರಾದ ಹಿರಿಯರ ನೆನಪಿನಲ್ಲಿ ಮಾಡುವ ಕ್ರಿಯಾಕರ್ಮಗಳು. ಶ್ರಾದ್ಧ ಪದದ ಅರ್ಥವೆಂದರೆ ಶ್ರದ್ಧೆಯಿಂದ ಮಾಡುವುದು ಎಂದು. ನಾವು ಶ್ರಾದ್ಧದ ಹೆಸರಿನಲ್ಲಿ ಮಾಡುವ ಕ್ರಿಯಾಕರ್ಮಗಳಿಂದ ಮೃತರಿಗೆ ನಿಜವಾಗಿಯೂ ಉಪಯೋಗವಾಗುವುದೇ ಎಂಬುದು ವಿಚಾರಾರ್ಹ ವಿಷಯ. ಮಾಡಬಾರದ ಪಾಪಗಳನ್ನು ಮಾಡಿ ದೇವರಿಗೆ 'ಕ್ಷಮಿಸಪ್ಪಾ' ಎಂದು ಕೇಳಿಕೊಂಡಾಕ್ಷಣ ಪಾಪ ಪರಿಹಾರವಾಗುತ್ತದೆ ಎಂದು ನಂಬುವಂತಹವರಿಗೆ ಇದು ಚರ್ಚಾರ್ಹ ವಿಷಯವೇ ಅಲ್ಲ. ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ದೇಹ(ಹೆಣ)ವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ದೇಹವನ್ನು  ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ತನ್ನ ಕರ್ಮಾನುಸಾರವಾಗಿ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ, ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ವೈಯಕ್ತಿಕ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಶ್ರಾದ್ಧಾದಿ ಕಾರ್ಯಗಳು ಮಾಡುವವರು ತಮ್ಮ ಹಿರಿಯರನ್ನು ನೆನೆಸಿಕೊಂಡು ಸಲ್ಲಿಸುವ ಕೃತಜ್ಞತೆಯೆನ್ನಬಹುದಷ್ಟೆ. ಅದರ ಫಲವೇನಿದ್ದರೂ ಮಾಡುವವರಿಗಷ್ಟೆ.  ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಪ್ರಳಯ, ಪ್ರವಾಹ, ಇತ್ಯಾದಿ ನೈಸರ್ಗಿಕ ಕಾರಣಗಳಿಂದ ಉತ್ತರಕ್ರಿಯೆ ಮಾಡುವವರೂ ಇಲ್ಲದಂತೆ ನಾಶವಾಗುವ ಸಹಸ್ರಾರು ಜೀವಗಳಿಗೆ ಸದ್ಗತಿ ದೊರೆಯುವುದಿಲ್ಲವೆಂದು ಹೇಳಲಾಗುವುದೆ? ಈಗಿನ ರೂಢಿಗತ ಸಂಪ್ರದಾಯ ಬಲವಾಗಿ ಬೇರೂರಿರುವ ಕಾಲಮಾನದಲ್ಲಿ  ಮುಂದಕ್ಕೆ ಯೋಚಿಸುವವರು ಸಾಮಾನ್ಯವಾಗಿ ಅಪಾರ್ಥಕ್ಕೆ ಒಳಗಾಗುತ್ತಾರೆ ಎಂಬ ಅರಿವು ನನಗಿದೆ. ಅಪಾರ್ಥಕ್ಕೆ ಒಳಗಾದರೂ ಪರವಾಗಿಲ್ಲ, ಸತ್ತ ನಂತರದಲ್ಲಿ ನನ್ನ ಶ್ರಾದ್ಧವನ್ನು ನನ್ನ ಮಕ್ಕಳು ಮಾಡದಿರಲಿ, ಬೇಕಾದರೆ ಬದುಕಿದ್ದಾಗ ಮಾಡಲಿ ಎಂಬುದು ನನ್ನ ಆಶಯ.

     ಶ್ರಾದ್ಧದ ಕುರಿತು ಪಂ. ಸುಧಾಕರ ಚತುರ್ವೇದಿಯವರ ಏನು ಹೇಳಿದ್ದಾರೆ, ನೋಡೋಣ:
     ಪಿತೃಯಜ್ಞ - ಈ ವಿಷಯದಲ್ಲಿ ಜನಸಾಮಾನ್ಯಕ್ಕೆ ಬಹಳ ಭ್ರಾಂತಿಯಿದೆ. ತೀರಿಹೋದ ತಂದೆ-ತಾಯಿಗಳಿಗೆ ಶ್ರಾದ್ದ ಮಾಡಿ, ಪಿಂಡದಾನ - ತಿಲತರ್ಪಣ ಕೊಡುವುದೇ ಪಿತೃಯಜ್ಞವೆಂಬ ಬುದ್ಧಿವಿರುದ್ದವೂ, ಅವೈದಿಕವೂ ಆದ ನಂಬಿಕೆ ಬಹುಮಂದಿಗಿದೆ. ಪ್ರತಿಯೊಬ್ಬ ಜೀವನೂ ತನ್ನ ಸತ್ಕರ್ಮ - ದುಷ್ಕರ್ಮಗಳಿಗೆ ಉತ್ತರದಾತೃ; ಪ್ರತಿಯೊಬ್ಬ ಜೀವನಿಗೂ ಅವನವನ ಕರ್ಮಾನುಸಾರ ಜನ್ಮಾಂತರದಲ್ಲಿ ಊರ್ಧ್ವಗತಿ-ಅಧೋಗತಿಗಳು ಪ್ರಾಪ್ತವಾಗುತ್ತವೆ. ಈ ವಿಷಯದ ಬಗೆಗೆ ಅನ್ಯರು ಮಾಡುವ ಯಾವ ಕರ್ಮವೂ ಭಗವಂತನ ಕರ್ಮಫಲದಾನದ ನ್ಯಾಯಸಿದ್ಧಾಂತವನ್ನು ಪರಿವರ್ತಿಸಲಾರದು. ಮೃತರಾದ ತಂದೆ-ತಾಯಿಗಳು ಪುಣ್ಯಾತ್ಮರಾಗಿದ್ದ ಪಕ್ಷದಲ್ಲಿ ಅವರ ಊರ್ಧ್ವಗತಿಗೆ ಇಲ್ಲಿ ಹಾಕುವ ಪಿಂಡ, ತಿಲತರ್ಪಣಗಳು ಅನಾವಶ್ಯಕ. ಅವರು ಪಾಪಾತ್ಮರಾಗಿದ್ದ ಪಕ್ಷದಲ್ಲಿ, ಅವರ ಅಧೋಗತಿಯನ್ನು ಇಲ್ಲಿನ ಶ್ರಾದ್ಧಕರ್ಮಗಳಿಂದ ತಪ್ಪಿಸಲು ಸಾಧ್ಯವಿಲ್ಲ. ಹೀಗೆ ಮೃತರ ಶ್ರಾದ್ಧ ಒಂದು ಅರ್ಥರಹಿತವಾದ ಆಡಂಬರ ಕ್ರಿಯೆ ಮಾತ್ರ. 
     ಶ್ರಾದ್ಧ ಎಂದರೆ, ಶ್ರದ್ಧೆಯಿಂದ ಸಲ್ಲಿಸುವ ಸೇವೆ, ತರ್ಪಣ ಎಂದರೆ ತೃಪ್ತಿ ನೀಡುವ ಕಾರ್ಯ. ಇವೆರಡೂ ಸಶರೀರರಾದ ಜೀವಂತರಾದ ಮಾತಾ-ಪಿತೃಗಳಿಗೆ ಸಲ್ಲಬೇಕಾದ ಸೇವೆಗಳೇ ಹೊರತು, ಮೃತರಿಗಲ್ಲ. ಮೃತರಿಗೆ ನಾವು ಸದ್ಗತಿಯನ್ನು ಕೊಡಲಾರೆವು. ಅವರಿಂದ ನಮಗಾದ ಉಪಕಾರಗಳನ್ನು ಸ್ಮರಿಸುವುದು; ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಯಾವುದಾದರೂ ಸತ್ಕಾರ್ಯ ಮಾಡುವುದು ತಪ್ಪಲ್ಲ. ಆದರೆ ಕರ್ಮಗತಿಯನ್ನು ಪರಿವರ್ತಿಸಬಲ್ಲೆವೆಂದು ಮಾತ್ರ ಕನಸಿನಲ್ಲಿಯೂ ಭಾವಿಸಬಾರದು.
     ಪಿತೃಯಜ್ಞ, ವೈದಿಕ ಸಿದ್ಧಾಂತಾನುಸಾರ, ಜೀವಂತ ಮಾತಾ-ಪಿತೃಗಳಿಗೆ ಮಕ್ಕಳು ಸಲ್ಲಿಸುವ ಸೇವೆ. ಗುರುಕುಲದಲ್ಲಿರುವ ಬ್ರಹ್ಮಚಾರಿಗಳಿಗೂ, ವಾನಪ್ರಸ್ಥಿಗಳಿಗೂ, ಸಂನ್ಯಾಸಿಗಳಿಗೂ ಇದು ಸಂಬಂಧಿಸುವುದಿಲ್ಲ. ಇದು ಕೇವಲ ಗೃಹಸ್ಥರಿಗೆ ಮಾತ್ರ ಸಂಬಂಧಿಸಿದ ಯಜ್ಞ. ಋಗ್ವೇದ ಹೇಳುತ್ತಲಿದೆ:-
ಸ ವಹ್ನೀ ಪುತ್ರಃ ಪಿತ್ರೋಃ ಪವಿತ್ರವಾನ್ ಪುನಾತಿ ಧೀರೋ ಭುವನಾನಿ ಮಾಯಯಾ || (ಋಕ್.೧.೧೬೦.೩)
[ಪಿತ್ರೋಃ] ಮಾತಾ-ಪಿತೃಗಳನ್ನು, ಸೇವಾಶುಶ್ರೂಷೆಗಳಿಂದ, [ವಹ್ನಿಃ] ಎತ್ತಿ ಹಿಡಿಯುವವನೇ, [ಪುತ್ರಃ] ನಿಜವಾದ ಮಗನು. [ಸ ಧೀರಃ] ಆ ಮಾತಾ-ಪಿತೃಸೇವಕನಾದ, ಬುದ್ಧಿಯಿಂದ ಪ್ರೇರಿತನಾದ ಸುಪುತ್ರನೇ, [ಮಾಯಯಾ] ತನ್ನ ಪ್ರಜ್ಞೆಯಿಂದ [ಪವಿತ್ರವಾನ್] ಪವಿತ್ರಶಕ್ತಿಯುತನಾಗಿ [ಭುವನಾನಿ ಪುನಾತಿ] ಲೋಕಗಳನ್ನು ಪವಿತ್ರಗೊಳಿಸುತ್ತಾನೆ. 
ಮಾತಾ-ಪಿತೃಗಳಿಗೆ ಭಕ್ತಿ ತೋರದ ಪುತ್ರ ಕೃತಘ್ನ. ಅವನಲ್ಲಿ ಪವಿತ್ರ ಭಾವನೆಗಳೇ ಉದಿಸವು. ಇನ್ನು ಅವನು ಜಗತ್ತನ್ನು ಪಾವನಗೊಳಿಸುವುದಾದರೂ ಹೇಗೆ?
     ಗೃಹಸ್ಥ-ಗೃಹಿಣಿಯರು, ಮನೆಯಲ್ಲಿರುವ ತಂದೆ-ತಾಯಿಗಳನ್ನು ತ್ರಿಕರಣಶುದ್ಧಿ ಪೂರ್ವಕವಾಗಿ ಉಪಚರಿಸಬೇಕು. ಅವರ ಮನಸ್ಸಿಗೆ ನೋವಾಗದಂತೆ, ಶರೀರಗಳಿಗೆ ಕಷ್ಟವಾಗದಂತೆ ನೋಡಿಕೊಳ್ಳಬೇಕು. ಪಾರಿವಾರಿಕ ಜೀವನವನ್ನು ಸುಖಮಯವಾಗಿ ಮಾಡಲು, ಅಥರ್ವವೇದ ಕೊಡುವ ಈ ಆದೇಶಗಳನ್ನು ನೆನಪಿನಲ್ಲಿಡಬೇಕಾದುದು ಆವಶ್ಯಕ.
ಅನುವ್ರತಃ ವಿತುಃ ಪುತ್ರೋ ಮಾತ್ರಾ ಭವತು ಸಂಮನಾ | 
ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಂತಿವಾಮ್ || (ಅಥರ್ವ.೩.೩೦.೨)
     [ಪುತ್ರಃ] ಮಗನು, [ಪಿತುಃ ಅನುವ್ರತಃ] ತಂದೆಗೆ ಅನುಕೂಲವಾದ ಸಂಕಲ್ಪವುಳ್ಳವನೂ, [ಮಾತ್ರಾ] ತಾಯಿಯೊಂದಿಗೆ [ಸಮ್ಮನಾಃ] ಸಮಾನ ಚಿತ್ತನೂ, [ಭವತು] ಆಗಿರಲಿ. [ಜಾಯಾ] ಪತ್ನಿಯು [ಪತ್ಯೇ] ಪತಿಗೆ [ಮಧುಮತೀಂ ಶಂತಿವಾಂ ವಾಚಮ್] ಮಧುರವೂ, ಶಾಂತಿದಾಯಕವೂ ಆದ ಮಾತನ್ನು, [ವದತು] ಆಡಲಿ.
ಮಾ ಭ್ರಾತಾ ಭ್ರಾತರಂ ದ್ವಿಕ್ಷನ್ಮಾ ಸ್ವಸಾರಮುತ ಸ್ವಸಾ | 
ಸಮ್ಯಂಚಃ ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ || (ಅಥರ್ವ.೩.೩೦.೩)
     [ಭ್ರಾತಾ] ಸೋದರನು [ಭ್ರಾತರಮ್] ಸೋದರನನ್ನು [ಮಾ ದ್ವಿಕ್ಷತ್] ದ್ವೇಷಿಸದಿರಲಿ. [ಉತ] ಅಂತೆಯೇ [ಸ್ವಸಾರಮ್] ಸಹೋದರಿಯು [ಸ್ವಸಾ] ಸಹೋದರಿಯೊಂದಿಗೆ (ದ್ವೇಷಭಾವನೆ ಹೊಂದದಿರಲಿ). [ಸಮ್ಯಂಚಃ] ಪರಸ್ಪರ ಪ್ರೀತಿಯುಕ್ತರೂ [ಸವ್ರತಾಃ] ಒಂದೇ ಸಂಕಲ್ಪವುಳ್ಳವರೂ [ಭದ್ರಯಾ] ಶುಭವಾದ ರೀತಿಯಲ್ಲಿ [ವಾಚಂ ವದತ] ಮಾತನ್ನಾಡಿರಿ.
     ಪತಿ-ಪತ್ನಿಯರಲ್ಲಿ, ಸೋದರ-ಸೋದರಿಯರಲ್ಲಿ ಪರಸ್ಪರ ವೈಮನಸ್ಯವಿದ್ದರೆ, ಅವರು ಮಾತಾ-ಪಿತೃಗಳನ್ನು ಉಪಚರಿಸುವುದಾದರೂ ಎಂತು? ಗೃಹದ ವಾತಾವರಣವನ್ನು ಮಧುರವಾಗಿಟ್ಟುಕೊಂಡು, ಪ್ರತಿದಿನವೂ ಮಾತಾ-ಪಿತೃಗಳನ್ನು ಎಲ್ಲ ರೀತಿಯಲ್ಲಿಯೂ ಪ್ರಸನ್ನರಾಗಿಯೂ, ತೃಪ್ತರನ್ನಾಗಿಯೂ ಇಟ್ಟುಕೊಂಡಿರುವುದೇ ನಿಜವಾದ ಪಿತೃಯಜ್ಞ.
ಹಿಂದಿನ ಲೇಖನಕ್ಕೆ ಲಿಂಕ್ದೇವಯಜ್ಞ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ