ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಫೆಬ್ರವರಿ 27, 2013

ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ


     ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಅವರುಗಳು, ವಿಶೇಷವಾಗಿ ಸ್ತ್ರೀಯರು, ಸಿಲುಕಿದ್ದಾರೆ. ರಾಷ್ಟ್ರೀಯತೆಯ ಸಮಸ್ಯೆ, ಪಾಸ್ ಪೋರ್ಟ್ ಪಡೆಯಲು ಸಮಸ್ಯೆ, ಆಸ್ತಿ-ಪಾಸ್ತಿಗಳ ಹಕ್ಕು ವರ್ಗಾವಣೆ ಸಮಸ್ಯೆ, ದೇಶದೊಳಗೆಯೇ ಪ್ರಯಾಣ ಮಾಡಲೂ ಸಮಸ್ಯೆ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಘೋರ ಸಮಸ್ಯೆ ಎಂದರೆ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಅಪಹರಿಸಿ, ಮತಾಂತರಿಸಿ, ಬಲವಂತ ವಿವಾಹಗಳನ್ನೂ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂ ಸ್ತ್ರೀಯರ ರಕ್ಷಣೆಗೆ ಅಲ್ಲಿ ಸೂಕ್ತ ಕಾನೂನುಗಳೇ ಇರದಿರುವುದು. ಭಾರತದಲ್ಲಿ ಎಲ್ಲರಿಗೂ ಜಾತಿ-ಮತ ಭೇದವಿಲ್ಲದೆ ಸಮಾನ ಸಿವಿಲ್ ಮತ್ತು ಕ್ರಿಮಿನಲ್ ಕಾಯದೆಗಳಿರಬೇಕೆಂಬ ಒತ್ತಾಯಕ್ಕೆ ವಿರೋಧವಿರುವುದು ಮುಸಲ್ಮಾನರಿಂದಲೇ ಮತ್ತು ಅವರನ್ನು ಬೆಂಬಲಿಸುವ ಬುದ್ಧೂಜೀವಿಗಳು ಮತ್ತು ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಿಂದಲೇ. ಭಾರತದಲ್ಲಿ ಮುಸ್ಲಿಮರ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಅವರಿಗೇ ಪ್ರತ್ಯೇಕ ಕಾನೂನು-ಕಾಯದೆಗಳನ್ನು ಅವರ ಶರೀಯತ್ ಪ್ರಕಾರವೇ ರಚಿಸಲಾಗಿದೆ. ನೂರಾರು ಜನರ ಬಲಿ ತೆಗೆದುಕೊಂಡ/ತೆಗೆದುಕೊಳ್ಳುವ ಉಗ್ರರಿಗೂ ಇಲ್ಲಿ ರಕ್ಷಣೆಯಿದೆ. ಆದರೆ ಅಮಾಯಕ ಅತ್ಯಂತ ಅಲ್ಪಸಂಖ್ಯಾತರೆನಿಸಿರುವ ಹಿಂದೂಗಳಿಗೆ ಕನಿಷ್ಠ ಮೂಲಭೂತ ಸ್ವಾತಂತ್ರ್ಯವನ್ನೂ ಪಾಕಿಸ್ತಾನದಲ್ಲಿ ನಿರಾಕರಿಸಲಾಗಿದೆ. ಹಿಂದೂ ವಿವಾಹಗಳನ್ನು ಮಾನ್ಯ ಮಾಡಲು ಸೂಕ್ತ ಕಾನೂನು ರಚಿಸಬೇಕೆಂಬ ಒಟ್ಟು ಜನಸಂಖ್ಯೆಯ ಕೇವಲ ಶೇ. 3ರಷ್ಟು ಮಾತ್ರ ಉಳಿದಿರುವ ಹಿಂದೂಗಳ ಕೂಗು ಅಲ್ಲಿನ ಸರ್ಕಾರದ ಕಿವುಡು ಕಿವಿಗಳಿಗೆ ಇದುವರೆವಿಗೂ ಮುಟ್ಟಿಲ್ಲ. ಮಾನವ ಹಕ್ಕುಗಳ ಆಯೋಗದವರು, ಬುದ್ಧಿಜೀವಿಗಳೆನಿಸಿಕೊಂಡವರು, ಮುಂತಾದವರಿಗೆ ಇದು ಯೋಚಿಸಬೇಕಾದ ಸಂಗತಿಯೇ ಆಗಿಲ್ಲ.
     ಕಳೆದ ವರ್ಷ ಪಾಕಿಸ್ತಾನದ ಹೈದರಾಬಾದಿನಲ್ಲಿ ಪ್ರೆಸ್ ಕ್ಲಬ್ ಎದುರಿಗೆ ಒಂದು ವಿನೂತನ ವಿವಾಹ ನಡೆಯಿತು. ಒಬ್ಬ ಹಿಂದೂ ಯುವಕ ಮುಖೇಶ್ ಮತ್ತು ಹಿಂದೂ ಯುವತಿ ಪದ್ಮಾ ಅಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಸತಿಪತಿಗಳಾದರು. ಎರಡು ಉದ್ದೇಶಗಳು ಅಲ್ಲಿ ನಡೆದ ಮದುವೆಯಲ್ಲಿದ್ದವು; ಒಂದು, ತಾವು ಸತಿ-ಪತಿಗಳೆಂದು ಜಗತ್ತಿಗೆ ಸಾರುವುದು; ಮತ್ತೊಂದು, ಪಾಕಿಸ್ತಾನದಲ್ಲಿ ತಮ್ಮ ಮದುವೆಯನ್ನು ಪರಿಗಣಿಸಲು ಕಾನೂನು ರಚನೆಗೆ ಒತ್ತಾಯಿಸುವುದು. ಮದುವೆಗೆ ಬಂದಿದ್ದವರು ಸೂಕ್ತ ಕಾಯದೆ ರಚನೆಯಾಗುವವರೆಗೆ ತಮ್ಮ ವಿವಾಹಗಳನ್ನು ಸಿಂಧುವೆಂದು ಪರಿಗಣಿಸಿ ಆದೇಶ ಹೊರಡಿಸುವಂತೆ ಅಧ್ಯಕ್ಷ ಜರ್ದಾರಿಯವರನ್ನು ಒತ್ತಾಯಿಸಿ ಘೋಷಣೆಗಳನ್ನು ಹಾಕಿದರು. ಅಲ್ಲಿ ಹಾಜರಿದ್ದ ಸಪ್ನಾದೇವಿ ಎಂಬ ಮಹಿಳೆ ಹೇಳಿದ್ದೇನೆಂದರೆ: "ನನ್ನ ಮದುವೆ ಆಗಿ 17 ವರ್ಷಗಳಾಗಿವೆ. ನಮ್ಮ ಮದುವೆ ಸಿಂಧುವೆಂದು ಪರಿಗಣಿಸಿಲ್ಲ. ಒಂದು ವೇಳೆ ನನ್ನ ಗಂಡ ಸತ್ತರೆ, ದೇವರೇ ಹಾಗಾಗದಿರಲಿ, ಗಂಡನ ಆಸ್ತಿ ನನ್ನ ಹೆಸರಿಗೆ ಆಗುವುದಿಲ್ಲ." ಹೊಸದಾಗಿ ಮದುವೆಯಾದ ಹಿಂದೂಗಳ ಪೈಕಿಯ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದ ಈ ಸತಿ-ಪತಿ ಖೈರಪುರ ಜಿಲ್ಲೆಯವರಾಗಿದ್ದು, 'ಈ ಮದುವೆಯನ್ನು ಈ ರೀತಿ ಆಚರಿಸಿ ತಾವು ದಾಂಪತ್ಯಜೀವನಕ್ಕೆ ಕಾಲಿರಿಸಿದ್ದು, ಸೂಕ್ತ ಕಾನೂನು ವಂಚಿತರಾಗಿರುವುದನ್ನು ಪ್ರತಿಭಟಿಸುವ ಸಲುವಾಗಿ' ಎಂದು ಹೇಳಿದ್ದರು. 1998ರ ಜನಗಣತಿ ಪ್ರಕಾರ ಪಾಕಿಸ್ತಾನದಲ್ಲಿರುವ 3.4 ಮಿಲಿಯನ್ ಹಿಂದೂಗಳ ಪೈಕಿ ಮೂರನೆಯ ಒಂದು ಭಾಗಕ್ಕೂ ಹೆಚ್ಚು ಜನರು ಹಿಂದುಳಿದ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದ ಪಾರ್ಲಿಮೆಂಟಿನಲ್ಲಿ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಎಂಟು ಸದಸ್ಯರಿದ್ದರೂ ಅವರ ಮಾತನ್ನು ಕೇಳುವವರೇ ಇಲ್ಲವಾಗಿದೆ. ದೇವರ ರಾಜ್ಯದಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲವೇ? ಮಾನವತೆ ಅನ್ನುವುದು ಎಲ್ಲಾ ಧರ್ಮಗಳ ತಿರುಳು ಅನ್ನುತ್ತಾರೆ. ಹಾಗಿದ್ದರೆ ಅದರ ಹೆಸರಿನಲ್ಲೇ ಮಾನವತ್ವ ಕಳೆದುಕೊಳ್ಳುತ್ತಿರುವುದರ ಕಾರಣವಾದರೂ ಏನು? ಇದಕ್ಕೆ ಪರಿಹಾರವಾದರೂ ಏನು? ಮಾನವತ್ವ ಪೋಷಿಸುವ ಧರ್ಮ ಮಾತ್ರ ನಮಗಿರಲಿ. "ಸಬಕೋ ಸನ್ಮತಿ ದೇ ಭಗವಾನ್, ಅಲ್ಲಾಹ್, ಜೀಸಸ್, ಬುದ್ಧ, . . . .!"
-ಕ.ವೆಂ.ನಾಗರಾಜ್.
ಆಧಾರ: ಪಾಕಿಸ್ತಾನದ 'ಟ್ರಿಬ್ಯೂನ್' ಪತ್ರಿಕೆಯ ವರದಿ. ಚಿತ್ರ ಸಹ ಅಲ್ಲಿಯದೇ.
ಲಿಂಕ್:http://tribune.com.pk/story/206929/love-hurts-hindu-couple-marries-outside-press-club-as-a-sign-of-protest/

4 ಕಾಮೆಂಟ್‌ಗಳು:

  1. ಸಾಹೇಬರೇ,ಇದುವರೆವಿಗೂ ನನಗೆ ಗೊತ್ತೀಲ್ಲದ ವಿಷಯವನ್ನೂ ತಿಳಿಸಿದ್ದಕ್ಕಾಗಿ ತಮಗೆ ಅನಂತ, ಅನಂತ ದನ್ಯವಾದಗಳು.........

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ದನ್ಯವಾದ ಚಂದ್ರಕುಮಾರರೇ, ಪಾಕಿಸ್ತಾನದ ಹಿಂದೂಗಳ ದುಸ್ಥಿತಿ ಊಹಾತೀತವಾಗಿದೆ. ನಮ್ಮ ನೇತಾರರ ನಿರ್ಲಕ್ಷ್ಯ ಖಂಡನಾರ್ಹ.

      ಅಳಿಸಿ
  2. ಮಾನ್ಯರೇ, ಹಿಂದುಗಳಿಗೆ ಒಂದಿಷ್ಟೂ ಧರ್ಮ ಸ್ವಾತಂತ್ರ್ಯ ಇಲ್ಲದ ಮೇಲೆ ಇನ್ನು ಆ ನರಕದಲ್ಲಿ ನಮ್ಮ ಹಿಂದುಗಳು ಏಕಿರಬೇಕು? ಒಂದಲ್ಲ ಒಂದು ರೀತಿಯಲ್ಲಿ ಹಿಂದುಗಳು ನಶಿಸುವ ಬದಲು ನಮ್ಮ ದೇಶಕ್ಕೆ ಹಿಂತಿರುಗಲಿ. ನಮ್ಮ ದೇಶದಲ್ಲಿ ಯಾರ್ಯಾರೋ, ಯಾವ ಧರ್ಮದವರೋ ವಲಸೆ ಬಂದು ಇಲ್ಲಿಯೇ ನೆಲೆಸುತ್ತಾರೆ.ವಲಸಿಗರು ತಮ್ಮ ಧರ್ಮಾಚರಣೆಗೆ ಯಾವುದೇ ತೊಂದರೆ ಇಲ್ಲದೇ ಬದುಕುತ್ತಿದ್ದಾರೆ. ೧೯೪೭ರಿಂದಲೂ ಧರ್ಮ ಸ್ವಾತಂತ್ರ್ಯ ಇಲ್ಲದ ಮೇಲೆ ಹಿಂದುಗಳೆಲ್ಲರೂ ನಮ್ಮ ದೇಶಕ್ಕೆ ಹಿಂತಿರುಗಲಿ. ಭಾರತ ದೇಶದ ಸರಕಾರ ಮತ್ತು ಧರ್ಮಗುರುಗಳು ಸಭೆ ಸೇರಿ ಪಾಕಿಸ್ತಾನದ ನಮ್ಮ ಹಿಂದುಗಳನ್ನು ಬರಮಾಡಿಕೊಂಡು ಅವರು ನಮ್ಮವರಾಗಿ ನಮ್ಮ ದೇಶದಲ್ಲಿ ಸುಖ ಜೀವನ ನಡೆಸಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಂಜುಂಡರಾಜುರವರೇ, ನಿಮ್ಮ ಕಳಕಳಿ ಅಭಿನಂದನೀಯ. ಈ ಮಾತನ್ನು ನಾವು, ನೀವು ಹೇಳಿದರೆ ಆರೆಸ್ಸೆಸ್ ಎಂದು ಬ್ರಾಂಡ್ ಮಾಡುತ್ತಾರೆ. ನೈಜಸ್ಥಿತಿಯನ್ನು ಕಡೆಗಣಿಸಿ ಬೇರೆಡೆಗೆ ಗಮನ ಹರಿಯುವಂತೆ ಮಾಡುತ್ತಾರೆ. ನಮ್ಮ ಬುದ್ಧೂ ಜೀವಿಗಳೂ ತಾಳ ಹಾಕುತ್ತಾರೆ. ಇತರ ದೇಶಗಳಲ್ಲಿರುವ ಭಾರತೀಯರ ಬಗ್ಗೆ ಕಾಳಜಿ ವಹಿಸುವ ಮನೋಭಾವ ನಮ್ಮ ನೇತಾರರಲ್ಲಿದ್ದರೆ ಪಾಕ್ ಮತ್ತು ಇತರ ಮುಸ್ಲಿಮ್ ದೇಶಗಳಲ್ಲಿನ ಜೈಲುಗಳಲ್ಲಿರುವ ಸಾವಿರಾರು ಭಾರತೀಯರನ್ನು ಬಿಡಿಸಲು ಪ್ರಯತ್ನ ಮಾಡುತ್ತಿತ್ತು, ಜಾಗತಿಕ ಮಟ್ಟದಲ್ಲಿ ಒತ್ತಡ ಹಾಕುತ್ತಿತ್ತು. ಇಟಲಿಯಂತಹ ಸಣ್ಣ ದೇಶದ ನಾವಿಕರು ಇಬ್ಬರು ಭಾರತೀಯ ಬೆಸ್ತರನ್ನು ಭಾರತ ದೇಶದ ಎಲ್ಲೆಯಲ್ಲಿಯೇ ಗುಂಡಿಟ್ಟು ಕೊಂದರೂ ಅವರನ್ನು ರಕ್ಷಿಸಲು ನಮ್ಮ ದೇಶದ ಉನ್ನತ ಸ್ಥಾನದಲ್ಲಿರುವವರೇ ಮಾಡುತ್ತಾರೆ! ಇದೊಂದು ಕ್ರೂರ ವಿಡಂಬನೆ.

      ಅಳಿಸಿ