ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಮೇ 24, 2013

ಶೌಚಾಲಯವೂ, ಭ್ರಷ್ಟಾಚಾರವೂ !!



     ಹಾಸನ ನಗರದ ಸ್ಟೇಡಿಯಮ್ಮಿನಲ್ಲಿ ಒಂದು ಆಧುನಿಕ ಶೌಚಾಲಯ ನಿರ್ಮಾಣವಾಗಿ ೪-೫ ವರ್ಷಗಳಾಗಿವೆ. ಆಗ ಈ ಕಾಮಗಾರಿಗೆ ಸುಮಾರು ೫-೧೦ ಲಕ್ಷ ರೂ. ಖರ್ಚು ತೋರಿಸಿರಬಹುದು, ಅಥವ ಇನ್ನೂ ಹೆಚ್ಚು ತೋರಿಸಿರಲೂಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲವೆಂದು ಅದನ್ನು ಕಟ್ಟಿಸಿದವರಾಗಲೀ, ಜನರಾಗಲೀ ಇದುವರೆವಿಗೂ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳು ಇವೆಯೇ ಎಂದರೆ ಅದೂ ಇಲ್ಲ. ದಿನ ನಿತ್ಯ ನೂರಾರು ಜನರು ಅಲ್ಲಿ ವಾಯುಸೇವನೆಗೆ, ವಿಶ್ರಾಂತಿಗೆ ಬಂದು ಹೋಗುತ್ತಾರೆ. ಹಲವಾರು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಮುಂತಾದ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುವುದು ಇಲ್ಲಿಯೇ. ಆಗ ಸಾವಿರಾರು ಜನರು ಸೇರುತ್ತಾರೆ. ಇಲ್ಲಿನ ಶಾಸಕರ ಮನೆ ಇರುವುದೂ ಸ್ಟೇಡಿಯಮ್ ಸಮೀಪದ ಬಡಾವಣೆಯಲ್ಲಿಯೇ. ಅವರು ಇದೇ ಮಾರ್ಗವಾಗಿ ಓಡಾಡುತ್ತಾರೆ. ಆದರೂ ಶೌಚಾಲಯ ಉಪಯೋಗಕ್ಕೆ ತೆರೆದಿಲ್ಲ ಮತ್ತು ಜನರಿಗೂ ಅದು ಬೇಕಿಲ್ಲವೆಂದರೆ ಏನೆನ್ನಬೇಕು? ಇಲ್ಲಿ ಶೌಚಾಲಯದ ಅಗತ್ಯವಿಲ್ಲವೇ ಎಂದರೆ ತುಂಬಾ ಅಗತ್ಯವಿದೆ. ಗಂಡಸರು ಎಲ್ಲೋ ದಿಬ್ಬದ ಮರೆಯಲ್ಲಿ, ಗಿಡದ ಮರೆಯಲ್ಲಿ ಮತ್ತು ವಿಶೇಷವೆಂದರೆ ಇದೇ ಶೌಚಾಲಯದ ಹಿಂಬದಿಯಲ್ಲಿ ಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಹೆಂಗಸರು ಏನು ಮಾಡಬೇಕು? ಸ್ತ್ರೀಶಕ್ತಿ ಸಂಘಗಳು, ಪ್ರಬುದ್ಧ ಮಹಿಳಾಮಣಿಗಳೂ ಈ ಬಗ್ಗೆ ಚಕಾರವೆತ್ತಿಲ್ಲ. ಜನರು ಇದೇ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಶೌಚಾಲಯದ ನಿರ್ಮಾಣಕ್ಕೆ ಆದ ವೆಚ್ಚ ವ್ಯರ್ಥವಾದಂತಾಯಿತಲ್ಲವೇ? ಇದು ಸಾರ್ವಜನಿಕರ ಹಣದ ದುರುಪಯೋಗವಲ್ಲವೇ? ಇದು ಭ್ರಷ್ಟಾಚಾರವಲ್ಲವೇ? ಜನರು ಜಾಗೃತರಾಗಿದ್ದರೆ ಈ ಶೌಚಾಲಯಕ್ಕೆ ಆದ ವೆಚ್ಚ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವಂತೆ ನೋಡಿಕೊಳ್ಳುತ್ತಿದ್ದರು ಮತ್ತು ತೆರೆದ ನಂತರವೂ ಅದು ಸರಿಯಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು ಅಥವ ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇಲ್ಲಿ ಹಾಗಾಗಿಲ್ಲ. ಹಾಗಾದರೆ ಭ್ರಷ್ಟಾಚಾರಕ್ಕೆ ನಿಜವಾದ ಹೊಣೆಗಾರರು ಯಾರು? ನಾವೇ ಅಲ್ಲವೇ? ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರದ ಮೂಲಬೇರು ಎಲ್ಲಿದೆಯೆಂದರೆ ಜನರಿಗೆ ಅಗತ್ಯವಾದ ಮೂಲಭೂತ ಕಾರ್ಯಕ್ರಮಗಳ ಜಾರಿ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಗಮನಿಸುವಲ್ಲಿನ ವೈಫಲ್ಯದಲ್ಲಿ, ನಮ್ಮ ಅಜಾಗರೂಕತೆಯಲ್ಲಿ, ಅನ್ಯಾಯವೆಂದು ಗೊತ್ತಿದ್ದೂ ಸಹಿಸಿಕೊಂಡಿರುವಲ್ಲಿ!
-ಕ.ವೆಂ.ನಾಗರಾಜ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ