ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಫೆಬ್ರವರಿ 20, 2018

ಸತ್ಯವಿಠಲ ವಿರಚಿತ 'ಸಮಗ್ರ ಭಾಮಿನೀ ಕಾವ್ಯಗಳು' - ಸಂಪುಟ-1


     'ಸತ್ಯವಿಠಲ' ನಾಮಾಂಕಿತದಲ್ಲಿ ಹೆಸರಾಗಿರುವ ಶ್ರೀ ಬಿ.ವಿ ಸತ್ಯನಾರಾಯಣರಾವ್ ಮೂಲತಃ ಶಿರಾ ತಾಲ್ಲೂಕು ಬುಕ್ಕಾಪಟ್ಟಣದವರು. ಈಗ ಬೆಂಗಳೂರಿನಲ್ಲಿ ವಾಸ. ಮೆಕ್ಯಾನಿಕಲ್ ಇಂಜನಿಯರ್ ಪದವಿ ಪಡೆದು, ಎಲೆಕ್ಟ್ರಿಕಲ್ ಇಂಜನಿಯರ್ ವೃತ್ತಿಯಲ್ಲಿದ್ದವರು. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯಲ್ಲಿ ಉಪಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತರಾದವರು. ಇವರ ಸಾಹಿತ್ಯಿಕ ಸಾಧನೆ ಬೆರಗುಗೊಳಿಸುವಂತಹದು. 
     ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮೈಸೂರಿನ 'ಮಾದವ ಕೃಪಾ'ದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಸತ್ತಿನ ಎರಡು ದಿನಗಳ ಕಾರ್ಯಾಗಾರದಲ್ಲಿ ಶ್ರೀ ಸತ್ಯನಾರಾಯಣರಾಯರೂ ಭಾಗವಹಿಸಿದ್ದರು. ಆಗ ನನಗೆ ಅವರ ಸಾಹಿತ್ಯಿಕ ಬರಹಗಳ ಮತ್ತು ಅವರ ವೈಯಕ್ತಿಕ ಪರಿಚಯ ಇರಲಿಲ್ಲ. ತಮ್ಮ ವಿಸಿಟಿಂಗ್ ಕಾರ್ಡ್ ಅನ್ನು ಕೊಟ್ಟು ಪರಿಚಯಿಸಿಕೊಂಡಿದ್ದರು. ಉಭಯ ಕುಶಲೋಪರಿ ಮಾತನಾಡಿದ್ದೆವು, ಅಷ್ಟೆ. ಈ ತಿಂಗಳ 10ರಂದು ರಾಮನಗರ ಅ.ಭಾ.ಸಾ.ಪ. ವತಿಯಿಂದ ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರಿಗೆ ರಾಮನಗರದಲ್ಲಿ ಸನ್ಮಾನ ಕಾರ್ಯಕ್ರಮವಿದ್ದು, ನನ್ನನ್ನು ಪ್ರಾಸ್ತಾವಿಕ ನುಡಿಗಳನ್ನಾಡಲು ಆಹ್ವಾನಿಸಿದ್ದರು. ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಆ ಸಂದರ್ಭದಲ್ಲಿ ಸ್ಮರಣಿಕೆಯಾಗಿ ಕೊಟ್ಟಿದ್ದ ಪುಸ್ತಕವೇ 'ಸತ್ಯವಿಠಲ ವಿರಚಿತ 'ಸಮಗ್ರ ಭಾಮಿನೀ ಕಾವ್ಯಗಳು' - ಸಂಪುಟ-1'. ಇದಕ್ಕಾಗಿ ರಾಮನಗರ ಅ.ಭಾ.ಸಾ.ಪ.ದ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ. 800 ಪುಟಗಳ ಬೃಹತ್ ಪುಸ್ತಕದ ಗಾತ್ರವೇ ಅದರ ಹಿರಿಮೆ ಹೇಳುತ್ತದೆ. ಶ್ರೀ ಬೆಳವಾಡಿ ಮಂಜುನಾಥರವರು ಸಂಪಾದಿಸಿದ ಮತ್ತು ಅವರ 'ಭಾಮಿನೀ ಭಾಸ್ಕರನಿಗೆ ನಮಸ್ಕಾರ' ಎಂಬ ಶೀರ್ಷಿಕೆಯಲ್ಲಿ ಬರೆದ ಅವರ 'ಸತ್ಯವಿಠಲ'ರ ಕೃತಿಗಳ ವಿಮರ್ಶಾತ್ಮಕ ಬರಹವೇ 250 ಪುಟಗಳದ್ದಾಗಿರುವುದು ವಿಶೇಷ.
     ಶ್ರೀ ಸತ್ಯನಾರಾಯಣರಾಯರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಇಪ್ಪತ್ತು ಸಂಸ್ಕೃತ ಕೃತಿಗಳು. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಭಾಮಿನೀ ಕಾವ್ಯಗಳನ್ನು ಬರೆದವರು ಬಹುಷಃ ಇವರೇ ಇರಬೇಕು. ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ಇವರ ಬರಹಗಳು ಚೇತೋಹಾರಿಯಾಗಿವೆ, ಸರಳವಾಗಿವೆ. ಗಮಕಿಗಳು ವಾಚಿಸಲು, ವ್ಯಾಖ್ಯಾನಿಸಲು ಇವರ ಕೃತಿಗಳನ್ನು ಆರಿಸಿಕೊಳ್ಳಬಹುದು.
     ಈ ಪುಸ್ತಕದಲ್ಲಿ ಪ್ರಕಟಗೊಂಡಿರುವ ಭಾಮಿನೀ ಕಾವ್ಯಗಳು ಇವು:
1. ಸಂಪೂರ್ಣ ದೇವೀ ಮಹಾತ್ಮೆ,
2. ಶ್ರೀ ಪೂರ್ಣೇ ಲಲಿತಾಂಬಿಕಾ ಶತಕಂ
3. ಧರ್ಮಸ್ಥಳ ಯಶೋಗಾಥೆ
4. ಬಕುಳೇಶ್ವರ ಸತ್ಯನಾಥ ವಿಲಾಸಂ
5. ರಾಘವೇಂದ್ರ ಸರಿತ್ಸಾಗರ
6. ಗಾಯತ್ರೀ ರಾಮಾಯಣ
7. ಬೆಳವಾಡಿ ಸ್ವಯಂಭೂ ಗಣಪ
8. ಬಾಹುಬಲಿ ಚರಿತಂ
9. ಬಸವೇಶ ನಮನಂ
10. ಶ್ರೀ ಶಿವಕುಮಾರಸ್ವಾಮಿ ಗುರು ಚರಿತ್ರಂ
11. ಶ್ರೀ ಶಿರಡಿ ಸಾಯಿಬಾಬಾ.
     ಲೇಖಕರ ಪರಿಶ್ರಮ, ಸುಲಲಿತ ರಚನೆ, ಅರ್ಥವಾಗುವ ಸರಳಗನ್ನಡದ ಕಾವ್ಯ ಸಾಹಿತ್ಯಿಕ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ. ಲೇಖಕರಿಗೆ, ಸಂಪಾದಕರು ಮತ್ತು ವಿಮರ್ಶಕರಿಗೆ ನಮನಗಳು.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ