ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಮಾರ್ಚ್ 27, 2011

ಮೂಢ ಉವಾಚ -46 : ವಿವೇಕವಾಣಿ

ಛಲ
ಗುರಿಯ ಅರಿವಿರಲು ಅಡಿಯಿಟ್ಟು ಮುಂದೆನಡೆ
ತಪ್ಪಿರಲು ತಿದ್ದಿ ನಡೆ ಒಪ್ಪಿರಲು ಸಾಗಿ ನಡೆ |
ಛಲಬಿಡದೆ ನಡೆ ಮುಂದೆ ಅಡೆತಡೆಯ ಲೆಕ್ಕಿಸದೆ
ಹಂಬಲದ ಹಕ್ಕಿಗೆ ಬೆಂಬಲವೆ ರೆಕ್ಕೆ ಮೂಢ ||


ದುರ್ಬಲತೆ
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||


ಹೆದರಿಕೆ
ಹೆದರದಿರೆ ಅಳುಕದಿರೆ ಅದ್ಭುತವ ಮಾಡುವೆ
ನೀನೊಬ್ಬ ಸೊನ್ನೆ ಹೆದರಿದ ಮರುಕ್ಷಣವೆ |
ಅಂಜುವವ ಹಿಂಜರಿವ ಅಂಜದವ ಮುನ್ನಡೆವ
ಅಂಜದವ ಅಳುಕದವ ನಾಯಕನು ಮೂಢ ||

ಸುಖ
ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||
**********************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ