ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಡಿಸೆಂಬರ್ 21, 2013

ಹೈದರಾಲಿಯಿಂದ ಅಂತ್ಯವಾದ ಕನ್ನಡದ ಹೆಮ್ಮೆಯ ಕೆಳದಿ ಸಂಸ್ಥಾನ


     ೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಚೌಡಪ್ಪನಾಯಕನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಪತನಾನಂತರದಲ್ಲೂ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ ವಿಜೃಂಭಿಸಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿ, ಕಲೆ, ಸಾಹಿತ್ಯ, ಧಾರ್ಮಿಕ ವಿಚಾರಗಳ ಪೋಷಕರಾಗಿದ್ದಲ್ಲದೆ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದ್ದು ಜನಸಾಮಾನ್ಯರ ಮಟ್ಟಿಗೆ ನೆಮ್ಮದಿಯ ರಾಜ್ಯವೆನಿಸಿತ್ತು. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ವಿಸ್ತಾರವನ್ನು ಹೊಂದಿದ್ದಾಗಿದ್ದು ಸಂಪದ್ಭರಿತ ಸಂಸ್ಥಾನವಾಗಿತ್ತು. ಸದಾಶಿವನಾಯಕ, ಸಂಕಣ್ಣನಾಯಕ, ವೆಂಕಟಪ್ಪನಾಯಕ, ಶಿವಪ್ಪನಾಯಕ, ಭದ್ರಪ್ಪನಾಯಕ, ಚೆನ್ನಮ್ಮಾಜಿ, ಬಸವಪ್ಪನಾಯಕ ಮುಂತಾದ ವೀರಾಗ್ರಣಿಗಳು ಆಳಿದ ಈ ಸಂಸ್ಥಾನದ ಅರಸುಮನೆತನದಲ್ಲಿ ಕೊನೆಯದಾಗಿ ಆಳಿದವಳು ರಾಣಿ ವೀರಮ್ಮಾಜಿ. ಹೈದರಾಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಕೆಲಸಕ್ಕೆ ಸೇರಿ ಕ್ರಮೇಣ ಬಲ ವೃದ್ಧಿಸಿಕೊಂಡು ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರು ಸಂಸ್ಥಾನವನ್ನೇ ತನ್ನ ಕೈವಶ ಮಾಡಿಕೊಂಡ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಿದೆ. ನಂತರದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಯ ಕಾರ್ಯಾಚರಣೆ ಕೈಗೊಂಡು ಕೆಳದಿ ಸಂಸ್ಥಾನದ ಪತನದಲ್ಲಿ ಯಶಸ್ವಿಯಾಗಿದ್ದು ಇತಿಹಾಸ. ಕನ್ನಡನಾಡಿನ ಎರಡು ಹೆಮ್ಮೆಯ ಸಂಸ್ಥಾನಗಳಾಗಿದ್ದ ಮೈಸೂರು ಮತ್ತು ಕೆಳದಿಯ ಅರಸೊತ್ತಿಗೆ ಹೀಗೆ ಅಂತ್ಯಗೊಂಡವು.
    ಕ್ರಿ.ಶ. ೧೭೩೯ರಿಂದ ೧೭೫೫ರವರೆವಿಗೆ ಕೆಳದಿಯ ಅರಸನಾಗಿದ್ದ ಬಸವಪ್ಪನಾಯಕ ಮತ್ತು ಆತನ ರಾಣಿ ವೀರಮ್ಮಾಜಿಗೆ ಪುತ್ರ ಸಂತಾನವಿಲ್ಲದಿದ್ದರಿಂದ ನಿರ್ವಾಣಯ್ಯ ಅನ್ನುವವರ ಮೊಮ್ಮಗನೂ, ಗುರುವಪ್ಪ ಅನ್ನುವವರ ಮಗನೂ ಆದ ಚನ್ನಪ್ಪ ಅನ್ನುವವನನ್ನು ದತ್ತು ತೆಗೆದುಕೊಂಡು ಆತನಿಗೆ ಚೆನ್ನಬಸವಪ್ಪನಾಯಕನೆಂದು ಹೆಸರಿಟ್ಟು ಯುವರಾಜನನ್ನಾಗಿ ಮಾಡಿಕೊಂಡರು. ಬಸವಪ್ಪನಾಯಕ ಮೃತನಾದ ನಂತರದಲ್ಲಿ, ಪಟ್ಟಾಭಿಷಿಕ್ತನಾದ ಚೆನ್ನಬಸವಪ್ಪನಾಯಕ ತಾಯಿ ವೀರಮ್ಮಾಜಿಯ ಮಾರ್ಗದರ್ಶನದಲ್ಲಿ ವಿವೇಕದಿಂದ, ಬುದ್ಧಿಚಾತುರ್ಯದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಚೆನ್ನಬಸವಪ್ಪ ತನ್ನ ಕಾಲದಲ್ಲಿ ಇಕ್ಕೇರಿಯ ಮೇಲೆ ದಾಳಿ ಮಾಡಿದ್ದ ನಾನಾಜಿರಾಯನ ಪ್ರೇರಣೆಯಿಂದ ದಾಳಿ ಮಾಡಿದ್ದ ಮಾಧೋಜಿ ಪುರಂಧರನ ಮತ್ತು ತದನಂತರದಲ್ಲಿ ಗೋಪಾಲರಾಯನ ಸೈನ್ಯವನ್ನು ಸಂಧಿನಿಗ್ರಹದ ಮೂಲಕ ನಿವಾರಿಸಿಕೊಂಡಿದ್ದನು. ಬೇಲೂರಿನ ಅರಸ ಕೃಷ್ಣಪ್ಪನಾಯಕ ಕೊಡಗರ ದೊರೆ ವೀರರಾಜನಿಂದ ರಾಜ್ಯಭ್ರಷ್ಠನಾಗಿ ಚೆನ್ನಬಸವಪ್ಪನಾಯಕನ ಮೊರೆ ಹೋದಾಗ, ಮೊರೆ ಬಂದವರನ್ನು ರಕ್ಷಿಸುವ ರಾಜಧರ್ಮದಂತೆ ತನ್ನ ಸೈನ್ಯವನ್ನು ಕಳಿಸಿ ಕೊಡಗರ ಸೈನ್ಯವನ್ನು ಹಿಮ್ಮೆಟ್ಟಿಸಿ, ಕೊಡಗರ ದೊರೆಯನ್ನು ಸಾಮ, ದಾನ, ಬೇಧಗಳಿಂದ ಒಡಂಬಡಿಸಿ ಕೃಷ್ಣಪ್ಪನನ್ನು ಮತ್ತೆ ಬೇಲೂರಿನ ಒಡೆಯನನ್ನಾಗಿಸಿದನೆಂದು ಲಿಂಗಣ್ಣಕವಿಯ ಐತಿಹಾಸಿಕ ಕೃತಿ 'ಕೆಳದಿನೃಪ ವಿಜಯ'ದಲ್ಲಿ ಉಲ್ಲೇಖಿತವಾಗಿದೆ. ಈ ಚೆನ್ನಬಸವಪ್ಪನಾಯಕ ರೋಗಬಾಧೆಯಿಂದ ಕ್ರಿ.ಶ.೧೭೫೭ರಲ್ಲಿ ತೀರಿಕೊಂಡ ನಂತರದಲ್ಲಿ ವೀರಮ್ಮಾಜಿಯು ತನ್ನ ಸೋದರಮಾವನ ಕಿರಿಯ ಮಗನನ್ನು ದತ್ತು ತೆಗೆದುಕೊಂಡು, ಸೋಮಶೇಖರನಾಯಕನೆಂದು ಹೆಸರಿಸಿ ಆತನಿಗೆ ಪಟ್ಟಾಭಿಷೇಕ ಮಾಡಿಸಿದಳು. ಆತ ಚಿಕ್ಕವನಾದ್ದರಿಂದ ವಾಸ್ತವವಾಗಿ ವೀರಮ್ಮಾಜಿಯೇ ರಾಜ್ಯಾಡಳಿತದ ಸೂತ್ರವನ್ನು ಹಿಡಿದಿದ್ದಳು. ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ ೧೪ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:
ಇರುತಿರುತುಂ ತದ್ಧರಣೀ
ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ
ತರದೊಳ್ ಪರಿಣಯಮಿಲ್ಲದೆ
ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)
     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ. ಆದರೆ ಹೇಗೋ ಸಾವಿನಿಂದ ಚೆನ್ನಬಸವನಾಯಕ ಪಾರಾದನೆಂದು, ಆತನಿಗೆ ಅಧಿಕಾರ ಮರಳಿಸುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಚಿತ್ರದುರ್ಗದ ಮದಕರಿನಾಯಕ ಪ್ರಯತ್ನಿಸಿ ವಿಫಲನಾದನೆಂದು, ನಂತರ ಇದೇ ರೀತಿಯ ಪ್ರಯತ್ನವನ್ನು ಹೈದರಾಲಿ ಮಾಡಿದನೆಂದು ಇವರುಗಳು ಬರೆಯುತ್ತಾರೆ. ಹೈದರ್ ನಾಮಾದ ಪ್ರಕಾರ ಚಿತ್ರದುರ್ಗದ ಮದಕರಿನಾಯಕ ಹೈದರಾಲಿಗೆ ಚೆನ್ನಬಸವನಾಯಕನ ವೃತ್ತಾಂತ ತಿಳಿಸಿ ಒಂದು ರಹಸ್ಯ ಕಾರ್ಯತಂತ್ರ ರೂಪಿಸಿದರು. ಅದರಂತೆ ಚೆನ್ನಬಸವಪ್ಪನಾಯಕನಿಗೆ ಕೆಳದಿಯ ರಾಜ್ಯದ ಅಧಿಕಾರ ಮರಳಿ ಕೊಡಿಸುವ ನೆಪದಲ್ಲಿ ನಕಲಿ ಚೆನ್ನಬಸವಪ್ಪನಾಯಕನನ್ನು ಮುಂದಿಟ್ಟುಕೊಂಡು ಮದಕರಿನಾಯಕ ಮತ್ತು ಹೈದರಾಲಿ ಬಿದನೂರು ಕೋಟೆಯೆಡೆಗೆ ಧಾವಿಸಿದರೆಂದು ಹೇಳಲಾಗಿದೆ. ಇದರಲ್ಲಿ ಚೆನ್ನಬಸವನಾಯಕನನ್ನು false Raja’  ಎಂದೇ ಉಲ್ಲೇಖಿಸಲಾಗಿದೆ. (ಹೈ.ನಾ. ೨೬-೨೭).
     ಡಿ ಲಾ ಟೂರ್ ಪ್ರಕಾರ ರಾಣಿ ವೀರಮ್ಮಾಜಿಯ ಮಗನೇ ಹೈದರಾಲಿಯನ್ನು ಆತನ ಬಿಸ್ನಗರ (ಬಸವಾಪಟ್ಟಣ) ಕೋಟೆಯಲ್ಲಿ ಭೇಟಿ ಮಾಡಿ ತಾನು ಈಗ ಪ್ರಾಪ್ರ ವಯಸ್ಸಿಗೆ ಬಂದರೂ ತನಗೆ ರಾಜ್ಯಾಧಿಕಾರ ಕೊಡದೇ ರಾಣಿಯೇ ಆಡಳಿತ ನಡೆಸುತ್ತಿರುವ ಬಗ್ಗೆ ದೂರಿ ಅಧಿಕಾರ ಪಡೆಯಲು ಸಹಕರಿಸಲು ಕೋರುತ್ತಾನೆ. ಹೈದರಾಲಿ ರಾಣಿ ವೀರಮ್ಮಾಜಿಗೆ ಪತ್ರ ಬರೆದು ತನ್ನ ಮುಂದೆ ಹಾಜರಾಗಿ ವಿವರಣೆ ಕೊಡಲು ಹೇಳುತ್ತಾನೆ. ರಾಣಿ ವೀರಮ್ಮಾಜಿ ತಾನೇ ರಾಣಿಯಾಗಿದ್ದು ತನ್ನ ಮೇಲೆ ಹಕ್ಕು ಚಲಾಯಿಸಲು ಇತರರಿಗೆ ಅಧಿಕಾರವಿಲ್ಲವೆಂದು ಉತ್ತರಿಸುತ್ತಾಳೆ. ಯುದ್ಧ ಸಂಭವಿಸುತ್ತದೆ. (೧.೮೧-೮೨).
     ರೋಬ್ಸನ್ ಹೇಳುವಂತೆ, ಮದಕರಿನಾಯಕನಿಂದ ಚೆನ್ನಬಸವನಾಯಕನ ವೃತ್ತಾಂತ ತಿಳಿದ ಹೈದರಾಲಿಗೆ ಬಿದನೂರು ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವೆಂದು ಕಂಡಿತು. ಮದಕರಿನಾಯಕ, ಹೈದರಾಲಿ ಮತ್ತು ಚೆನ್ನಬಸವನಾಯಕರ ನಡುವೆ ರಹಸ್ಯ ಒಪ್ಪಂದವೇರ್ಪಟ್ಟು, ಅದರಂತೆ ಚೆನ್ನಬಸವನಾಯಕನಿಗೆ ಕೆಳದಿ ರಾಜ್ಯಾಧಿಕಾರ ಕೊಡಿಸುವುದಕ್ಕೆ ಪ್ರತಿಯಾಗಿ ೪೦ ಲಕ್ಷ ರೂ.ಗಳನ್ನು ಆತ ಕೊಡಬೇಕೆಂದು ನಿಗದಿಯಾಯಿತು. ಚೆನ್ನಬಸವನಾಯಕ ಮರುಮಾತಿಲ್ಲದೆ ಒಪ್ಪಿ, ನಂತರ ಯುದ್ಧ ಸಂಭವಿಸಿತು.
     ಕಿರ್ಮಾನಿಯ ಪ್ರಕಾರ ರಾಣಿ ವೀರಮ್ಮಾಜಿ ವಿಷಯಾಸಕ್ತೆಯಾಗಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಉಂಟಾಗಿತ್ತು. ಹೈದರಾಲಿ ತನ್ನ ಗೂಢಚಾರರಿಂದ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಮದಕರಿನಾಯಕನ ಮಾಹಿತಿಯಂತೆ ಚೆನ್ನಬಸವನಾಯಕ ಬದುಕಿದ್ದಾನೆಂಬ ಸಂಗತಿಗೆ ಒತ್ತು ಕೊಟ್ಟು ಅವನಿಗೆ ರಾಜ್ಯಾಧಿಕಾರ ವಹಿಸಿಕೊಡುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶಮಾಡಿಕೊಳ್ಳಲು ನಿರ್ಧರಿಸಿದ.


     ಹೈದರಾಲಿ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಚಾಣಾಕ್ಷ. ತನ್ನ ಗೂಢಚಾರರಿಂದ ಕೆಳದಿಯಲ್ಲಿನ ರಾಜಪರಿವಾರದಲ್ಲಿನ ಭಿನ್ನಮತಗಳು, ಒಳಮಸಲತ್ತುಗಳ ವಿವರ ಸಂಗ್ರಹಿಸಿದ್ದಲ್ಲದೆ, ಕೆಳದಿ ಅರಸರಿಂದ ಪರಾಜಿತನಾಗಿದ್ದ ಚಿತ್ರದುರ್ಗದ ಮದಕರಿನಾಯಕನ ನೆರವಿನೊಂದಿಗೆ, ಚೆನ್ನಬಸವನಾಯಕ ಬದುಕಿದ್ದಾನೆಂದು ಸುದ್ದಿ ಹಬ್ಬಿಸಿ ಮಾರುವೇಷದ ಚೆನ್ನಬಸವನಾಯಕನನ್ನು ಮುಂದಿರಿಸಿಕೊಂಡು ಬಿದನೂರು ಕೋಟೆಯ ಮೇಲೆ ದಾಳಿ ಮಾಡಿದ. ರಾಜಮನೆತನಕ್ಕೆ ಕೇಡು ಬಯಸಿದ್ದ ಮಂತ್ರಿ ಲಿಂಗಣ್ಣ ಕುಂಸಿಯ ಸೆರೆಮನೆಯಲ್ಲಿದ್ದು, ಆತನ ಕಾರಸ್ಥಾನಗಳೂ ಹೈದರನ ನೆರವಿಗೆ ಬಂದಿತು. ವಿಲ್ಕ್ಸ್ ಪ್ರಕಾರ ಹೈದರನ ಸೈನ್ಯದಲ್ಲಿ ೬೦೦೦೦ ಪದಾತಿಗಳು ಮತ್ತು ಅಶ್ವದಳ, ೩೦೦ ಆನೆಗಳು, ಫ್ರೆಂಚ್ ಅಧಕಾರಿಗಳನ್ನೊಳಗೊಂಡಂತೆ ಒಂದು ಪ್ರೆಂಚ್ ಸೈನ್ಯದ ತುಕಡಿಯಿತ್ತು. ಯುದ್ಧದಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ವೀರಮ್ಮಾಜಿ ಹೈದರನಿಗೆ ವರ್ಷಕ್ಕೆ ಒಂದು ಲಕ್ಷ ಪಗೋಡ ಕೊಡುವುದಾಗಿ ಹೇಳಿ ಸಂಧಿಗೆ ಆಹ್ವಾನಿಸಿದಳು. ಆದರೆ ಹೈದರ್ ವೀರಮ್ಮಾಜಿ ತನಗೆ ಶರಣಾದಲ್ಲಿ ಆಕೆಯನ್ನು ಶ್ರೀರಂಗಪಟ್ಟಣದ ಕೋಟೆಯಲ್ಲಿ ಹಿರಿಯ ಸ್ಥಾನ ನೀಡಿ ಗೌರವದಿಂದ ಬಾಳಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು ಆಕೆಯ ಸ್ವಾಭಿಮಾನವನ್ನು ಕೆಣಕಿತು. ಯುದ್ಧಕ್ಕೆ ನಿರ್ಧರಿಸಿದ ಆಕೆಗೆ ಸವಣೂರಿನ ಹಕೀಂ ಖಾನನ ೨೦೦೦ ಅಶ್ವಗಳು ಮತ್ತು ೪೦೦೦ ಪದಾತಿ ದಳದ ನೆರವೂ ಸಿಕ್ಕಿತು. ವೀರಾವೇಶದಿಂದ ಕಾದಾಡಿದ ಅಕೆ ಹೈದರನನ್ನು ಸೋಲಿಸಿ ಹಿಮ್ಮೆಟ್ಟಿಸಿದಳು. ಯುದ್ಧದಲ್ಲಿ ನೇರವಾಗಿ ಗೆಲ್ಲಲು ಅಸಾಧ್ಯವೆಂದು ಮನಗಂಡ ಹೈದರಾಲಿ ಪೀರ್ ಜಾದೇರ ಮೂಲಕ, ರಾಜದ್ರೋಹಿಗಳ ನೆರವಿನಿಂದ ವೀರಮ್ಮಾಜಿಯನ್ನು ಮೋಸದಿಂದ ಸೆರೆ ಹಿಡಿದದ್ದರಿಂದ ಕೆಳದಿ ಸಾಮ್ರಾಜ್ಯ ಅಂತ್ಯ ಕಾಣುವಂತಾಯಿತು. ಕುಂಸಿಯಲ್ಲಿ ಸೆರೆಯಾಳಾಗಿದ್ದ ಮಂತ್ರಿ ಲಿಂಗಣ್ಣ ಬಿದನೂರು ಕೋಟೆಯ ರಹಸ್ಯ ಮಾರ್ಗವನ್ನು ಹೈದರನಿಗೆ ತಿಳಿಸಿದ್ದನೆಂದು ಹೇಳುತ್ತಾರೆ. ಕೆಳದಿಯ ಡಾ. ಗುಂಡಾಜೋಯಿಸರು ೮೦ ವಿವಿಧ ಆಕರ ಗ್ರಂಥಗಳನ್ನು ಪರಿಶೀಲಿಸಿ ಬರೆದ 'ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ' ಎಂಬ ಅಧ್ಯಯನಾರ್ಹ ಪುಸ್ತಕ ಈ ವಿಚಾರದಲ್ಲಿ ಅಮೂಲ್ಯ ಮಾಹಿತಿಗಳನ್ನು  ಕ್ರೋಢೀಕರಿಸಿರುವುದು ಇತಿಹಾಸಾಸಕ್ತರಿಗೆ ಅನುಕೂಲವಾಗಿದೆ.
     ವೀರಮ್ಮಾಜಿ ಸೆರೆ ಸಿಕ್ಕ ನಂತರದಲ್ಲಿ ರಾಜನಿಷ್ಠ ಪ್ರಜೆಗಳು ಅಲ್ಲಲ್ಲಿ ಹೈದರನ ವಿರುದ್ಧ ದಂಗೆಯೆದ್ದಾಗ ಹೈದರ್ ದಂಗೆಯನ್ನಡಗಿಸಲು ವರ್ತಿಸಿದ ರೀತಿಯ ಬಗ್ಗೆ ರೋಬ್ಸನ್ ಹೇಳಿರುವುದು ಹೀಗೆ: He put to death one thousand of the principal inhabitants of Biddenoor, in the most cruel, inhuman  method he could invent; their mangled limbs were suspended on every tree in the environs of the city. His blood thirsty rage not being satisfied with the above cruelties, he ordered the chief  persons of every town or village of whom he had the least suspicion, to be butchered in like manner; besides many others, for the most trivial offences had their noses or ears cut off. . .”  ಇಂತಹ ಸ್ಥಿತಿಯಲ್ಲಿ ಸೆರೆ ಸಿಕ್ಕ ವೀರಮ್ಮಾಜಿಯನ್ನು ಹೇಗೆಲ್ಲಾ ಅವಮಾನಿತಗೊಳಿಸಲಾಯಿತೆಂದು ಊಹಿಸುವುದು ಕಷ್ಟವಾಗಲಾರದು. ಆಕೆ ಎಷ್ಟು ದೈಹಿಕ, ಮಾನಸಿಕ ಹಿಂಸೆಗಳನ್ನು ಅನುಭವಿಸಿರಬಹುದು, ಜರ್ಜರಿತಳಾಗಿರಬಹುದು, ಮೂಕವಾಗಿ ರೋದಿಸಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದು ಅಶಕ್ಯವೇ ಸರಿ.
     ಬಿದನೂರು ಕೋಟೆಯನ್ನು ಕುಟಿಲತನದಿಂದ ವಶಪಡಿಸಿಕೊಂಡ ಹೈದರ್ ಸುಮಾರು ೬೩೦ ಕೋಟಿ  ಗದ್ಯಾಣಗಳನ್ನು ದೋಚಿದನೆಂದು ಇತಿಹಾಸ ಹೇಳುತ್ತದೆ. ಕೆಳದಿ ಎಷ್ಟು ಸಂಪದ್ಭರಿತವಾಗಿತ್ತೆಂಬುದು ಇದರಿಂದ ಗೊತ್ತಾಗುತ್ತದೆ. ಬಿದನೂರು ವಶವಾದ ನಂತರ ಆ ನಗರಕ್ಕೆ 'ಹೈದರ್ ನಗರ'ವೆಂದು ಮರುನಾಮಕರಣ ಮಾಡಿದ ಹೈದರ್ ಅದನ್ನು ತನ್ನ ಸೈನಿಕನೆಲೆಯಾಗಿಸಿಕೊಂಡನು. (ಮ.ಕೆ.ಸಾ.-ಪು.೮). ಟಿಪ್ಪು ಹತನಾದ ನಂತರದಲ್ಲಿ ಆ ಹೈದರ್ ನಗರ ಪುನಃ ಬಿದನೂರಾಯಿತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿಗೆ ಸೇರಿದ ಈ ಬಿದನೂರನ್ನು ನಗರ ಎಂತಲೂ ಈಗ ಕರೆಯುತ್ತಿದ್ದು, ಹೊಸನಗರದಿಂದ ಸುಮಾರು ೧೨ ಕಿ.ಮೀ. ದೂರದಲ್ಲಿದೆ. ಈಗ ಅವಶೇಷವಾಗಿ ಉಳಿದಿರುವ ಕೋಟೆ ವೀಕ್ಷಣೀಯ ಸ್ಥಳವಾಗಿದ್ದು, ಒಂದೊಮ್ಮೆ ಹೇಗಿದ್ದಿರಬಹುದೆಂಬ ಕಲ್ಪನೆ ಕೊಡುತ್ತದೆ. ಕೋಟೆಯ ಕುರಿತು ಹೆಚ್ಚಿನ ವಿವರಣೆಯನ್ನು ಲೇಖನ ವಿಸ್ತಾರವಾಗುವ ಕಾರಣದಿಂದ ಇಲ್ಲಿ ಮುಂದುವರೆಸುವುದಿಲ್ಲ. ಬಿದನೂರು ಕೋಟೆಯ ಅವಶೇಷದ ಕೆಲವು ಚಿತ್ರಗಳನ್ನು ಗಮನಿಸಿ. (ಸುಮಾರು ೫-೬ ವರ್ಷಗಳ ಹಿಂದೆ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದಾಗ ತೆಗೆದಿದ್ದ ಫೋಟೋಗಳಿವು).
     ಹೈದರನಿಂದ ಶಿರಾ ಮತ್ತು ಮಧುಗಿರಿಗಳನ್ನು ಪೇಶ್ವೆಯವರು ವಶಪಡಿಸಿಕೊಂಡ ನಂತರದಲ್ಲಿ ಮಧುಗಿರಿಯಲ್ಲಿ ಬಂದೀಖಾನೆಯಲ್ಲಿದ್ದ ಕೆಳದಿ ರಾಣಿ ವೀರಮ್ಮಾಜಿ ಮತ್ತು ಯುವರಾಜನನ್ನು ಗೌರವಾದರಗಳಿಂದ ಬಿಡುಗಡೆಗೊಳಿಸಿದರೆಂದು ೨೩-೭-೧೭೬೭ರ ದಿನಾಂಕದ ದಾಖಲೆಯಿದೆ. ಈ ದಾಖಲೆಯಲ್ಲಿ ಕೆಳದಿಯ King and Queen’ ಎಂದು ಉಲ್ಲೇಖಿಸಲಾಗಿದೆ. ಮರಾಠರು ಕೆಳದಿಯ ಮೇಲೆ ಹಿಂದೆ ಪದೇ ಪದೇ ದಂಡೆತ್ತಿ ಬರುತ್ತಿದ್ದರೂ, ಅವರನ್ನು ಶತ್ರುಗಳಾಗಿ ಕಂಡಿದ್ದರೂ, ಸ್ತ್ರೀಯರನ್ನೂ, ಅಸಹಾಯಕರನ್ನೂ ಗೌರವದಿಂದ ಕಾಣುವ ಭಾರತೀಯ ಸಂಸ್ಕೃತಿಯ ಪರಿಪಾಲಕರಂತೆ ವೀರಮ್ಮಾಜಿಯನ್ನು ಗೌರವದಿಂದ ಕಂಡಿದ್ದು ಶ್ಲಾಘನೀಯವಾಗಿದೆ. ನಂತರದಲ್ಲಿ ವೀರಮ್ಮಾಜಿ ಪೂನಾಕ್ಕೆ ಹೋಗುವ ಮಾರ್ಗದಲ್ಲಿ ಬಳ್ಳಾರಿ ಜಿಲ್ಲೆಯ ಉಜನಿ ಎಂಬ ಗ್ರಾಮದಲ್ಲಿ ಅನಾಥಳಂತೆ ಇಹಲೋಕ ತ್ಯಜಿಸಿದಾಗ ವಿಷಯ ತಿಳಿದ ಗ್ರಾಮಸ್ಥರೇ ಆಕೆಯ ಅಂತ್ಯ ಸಂಸ್ಕಾರ ನಡೆಸಿ ಉಜನಿ ಮಠದ ಆವರಣದಲ್ಲಿ ಸಮಾಧಿ ಮಾಡಿದರು. ಈ ರೀತಿಯಲ್ಲಿ ಎರಡೂವರೆ ಶತಮಾನಗಳ ಕಾಲ ವೈಭವದಿಂದ ಬಾಳಿದ ಕೆಳದಿ ಸಂಸ್ಥಾನ ಮಣ್ಣುಪಾಲಾಯಿತು.
-ಕ.ವೆಂ.ನಾಗರಾಜ್.

ಆಧಾರ:
1. ಕವಿ ಲಿಂಗಣ್ಣನ ಕೆಳದಿನೃಪ ವಿಜಯ
4. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)
5. ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ (ಲೇ. ಕೆಳದಿ ಗುಂಡಾಜೋಯಿಸ್)
6. ಮರೆಯಲಾಗದ ಕೆಳದಿ ಸಾಮ್ರಾಜ್ಯ (ಲೇ. ಡಾ. ವೆಂಕಟೇಶ ಜೋಯಿಸ್)
7. The glorious Keladi (Dr. Gundajois)
8. Shimoga District Gazetteer
9. Life of Hyder Ali (Robson Captain Francis)

8 ಕಾಮೆಂಟ್‌ಗಳು:

  1. hamsanandi on December 21, 2013 - 6:54am
    ಕವಿನಾಗರಾಜರೇ, ಚನ್ನಬಸವನಾಯಕ ಹದಿನಾಲ್ಕನೇ ವಯಸ್ಸಿನಲ್ಲೇ ತೀರಿಹೋದನೆಂದು ಇಲ್ಲಿ ಹೇಳಿದ ಸಂಗತಿಗೂ, ಮಾಸ್ತಿಯವರ ಚೆನ್ನಬಸವನಾಯಕ ಕಾದಂಬರಿಯಲ್ಲಿ ಬರುವ ಚಿತ್ರಣಕ್ಕೂ ಬಹಳ ವ್ಯತ್ಯಾಸವಿರುವುದು ನೋಡಿ ಬಹಳ ಆಶ್ಚರ್ಯವಾಯಿತು!

    kavinagaraj on December 21, 2013 - 12:49pm
    ನಮಸ್ತೆ, ಹಂಸಾನಂದಿಯವರೇ. ಮಾಸ್ತಿಯವರ ಚೆನ್ನಬಸವನಾಯಕ ಕೃತಿ ವಿರೋದಾಭಾಸಗಳಿಂದ ಕೂಡಿದ ಮತ್ತು ಕುಚೋದ್ದದ ಕೃತಿಯಾಗಿದ್ದು ಅದರ ವಿರುದ್ಧ ದೊಡ್ಡ ಆಂದೋಳನವೇ ನಡೆದಿತ್ತು. ಅವರ ಚಿಕ್ಕವೀರರಾಜೇಂದ್ರ ಕೃತಿಯಲ್ಲೂ ಚಿಕ್ಕವೀರರಾಜೇಂದ್ರನನ್ನು ವಿರೋದಾಭಾಸ ಮತ್ತು ಕುಚೋದ್ಯದ ರೀತಿಯಲ್ಲಿ ಚಿತ್ರಿಸಿದ್ದರಿಂದ ಅವರಿಗೆ ಆ ಕೃತಿಗೆ ಕೊಡಬೇಕೆಂದಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಅವರ 'ಸಮಗ್ರ ಸಾಹಿತ್ಯ'ಕ್ಕೆ ಎಂದು ಬದಲಾಯಿಸಲಾಯಿತು. ಈ ವಿಚಾರವೇ ಬಹಳ ದೊಡ್ಡ ಸಂಗತಿಯಾದ್ದರಿಂದ ಮುಂದೊಮ್ಮೆ ಅವಕಾಶವಾದಾಗ ವಿಸ್ತೃತ ಲೇಖನ ಮಂಡಿಸುವೆ. ಕೆಳದಿ ಸಂಸ್ಥಾನದ ಆಸ್ಥಾನಕವಿ ಮತ್ತು ಅಂದಿನ ಸಮಕಾಲೀನನಾಗ ಕವಿಲಿಂಗಣ್ಣನ 'ಕೆಳದಿನೃಪ ವಿಜಯ' ಕೆಳದಿ ಇತಿಹಾಸಕ್ಕೆ ಅಧಿಕೃತ ಆಕರ ಗ್ರಂಥವೆಂದು ಇತಿಹಾಸಕಾರರು ನಿರ್ವಿವಾದವಾಗಿ ಒಪ್ಪಿಕೊಂಡಿದ್ದಾರೆ. ಕೆಳದಿಯ ಇತಿಹಾಸಕ಻ರ ಕವಿಲಿಂಗಣ್ಣ ದಾಖಲಿಸಿದ ಅಂಶಗಳಿಗೆ ವ್ಯತಿರಿಕ್ತವಾಗಿ ಮತ್ತು ಆಧಾರರಹಿತವಾಗಿ ಅವರು ತಮ್ಮ ಕಾದಂಬರಿಯಲ್ಲಿ :
    1. ಚನ್ನಬಸವನಾಯಕ ದತ್ತುಪುತ್ರನಾದರೂ ಮಾಸ್ತಿಯವರು ಅವನನ್ನು ವೀರಮ್ಮಾಜಿ ಹಡೆದ ಮಗನೆನ್ನುತ್ತಾರೆ.
    2. ಆತ 14ನೆಯ ವಯಸ್ಸಿನಲ್ಲೇ ಮೃತನಾದರೂ 19 ವರ್ಷದವನೆಂದು ಹೇಳುತ್ತಾರೆ.
    3. ಆತ ಮದುವೆಯಾಗದೆ ಸತ್ತನೆಂದು ದಾಖಲೆಯಿದ್ದರೂ ಜೈನಧರ್ಮದ ನೇಮಯ್ಯ ಎಂಬ ಕಾಲ್ಪನಿಕ ಪಾತ್ರ ಸೃಷ್ಟಿಸಿ ಆ ನೇಮಯ್ಯನ ತಮ್ಮನ ಮಗಳು ಶಾಂತವ್ವನೊಡನೆ ಮದುವೆಯಾಯಿತೆನ್ನುತ್ತಾರೆ.
    4 ನಂಬಯ್ಯನೆಂಬ ಗುರಿಕಾರನನ್ನು ಅರಮನೆಯ ಮನೆವಾರ್ತೆಯವನೆಂದು ಚಿತ್ರಿಸಿ ವೀರಮ್ಮಾಜಿ ಅವನೊಡನೆ ಆಕೆ ಅನೈತಿಕ ಸಂಬಂಧ ಹೊಂದಿದ್ದಳೆಂದು ಚಿತ್ರಿಸಿದ್ದಾರೆ.
    ಇಂತಹ ಅನೇಕ ನೈಜ ಇತಿಹಾಸಕ್ಕೆ ಅಪಚಾರವೆಸಗುವ ಸಂಗತಿಗಳನ್ನು ಮಾಸ್ತಿಯವರಂತಹ ಹಿರಿಯರು ಚಿತ್ರಿಸಿ, ಇತಿಹಾಸಕಾರರ ಮತ್ತು ಸಾಮಾನ್ಯರ ದೃಷ್ಟಿಯಲ್ಲಿ ಸಣ್ಣವರಾದುದು ವಿಷಾದದ ವಿಚಾರ. ಇಂತಹ ವಿತಂಡ ಕೃತಿಗೆ ಜನರ ಆಕ್ರೋಷ ಭುಗಿಲೆದ್ದು, ಅವರ ಕೃತಿಯನ್ನು ದೇಶದ ಇನ್ನಿತರ 13 ಭಾಷೆಗಳಿಗೆ ಅನುವಾದ ಹೊಂದಲು ನೀಡಿದ್ದ ಅನುಮತಿಯನ್ನು ಸರ್ಕಾರ ಹಿಂತೆಗೆದುಕೊಂಡಿತ್ತು. ಡಾ. ಕೆಳದಿ ಗುಂಡಾಜೋಯಿಸರು 'ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ' ಕೃತಿಯಲ್ಲಿ ವೀರಮ್ಮಾಜಿಯ ನೈಜ ವ್ಯಕ್ತಿತ್ವವನ್ನು ಲಭ್ಯ ದಾಖಲೆಗಳ ಆಧಾರದಲ್ಲಿ ಹೊರಗೆಡವಿದ್ದಾರೆ.
    ಧನ್ಯವಾದಗಳು.

    nageshamysore on December 21, 2013 - 7:22am
    ಕವಿಗಳೆ, ಹಾಗೆಯೆ ಕೇವಲ ಹದಿನಾಲ್ಕನೆ ವಯಸಿನಲ್ಲೆ ಆತನ ಹೆಸರಿನಲ್ಲಿ ನಡೆದ ಸಾಹಸಗಳು (ಉದಾಹರಣೆಗೆ ಕೊಡಗರ ಸೈನ್ಯ ಹಿಮ್ಮೆಟ್ಟಿಸಿದ್ದು) ಸಾಧ್ಯವೆ ಎಂಬ ಅನಿಸಿಕೆ ಕೂಡ - ಪ್ರಾಯಶಃ ಅವನ ಹೆಸರಿನಲ್ಲಿ ವೀರಮ್ಮಾಜಿಯು ನಡೆಸಿದ ಕಾರ್ಯಗಳಾಗಿರಬಹುದೇನೊ? ಅದು ಲೇಖನದಲ್ಲಿ ಸೂಚ್ಯವಾಗಿರುವಂತೆ ಕಂಡರೂ, ಸಂಶಯ ಬಗೆಹರಿಸಿಕೊಳ್ಳಲು ಈ ಪ್ರಶ್ನೆ :-)
    kavinagaraj on December 21, 2013 - 12:56pm
    ರಾಣಿ ವೀರಮ್ಮಾಜಿಯ ಮಾರ್ಗದರ್ಶನದಂತೆ ಆತ ರಾಜ್ಯಭಾರ ನಡೆಸುತ್ತಿದ್ದನೆಂದು ಕವಿಲಿಂಗಣ್ಣ ಹೇಳುತ್ತಾನೆ. ವೀರಮ್ಮಾಜಿ ಒಬ್ಬ ದಕ್ಷ ರಾಣಿ ಮತ್ತು ಧೈರ್ಯಶಾಲಿ ವ್ಯಕ್ತಿತ್ವ ಹೊಂದಿದ್ದವಳು. ಧನ್ಯವಾದ ನಾಗೇಶರೇ.

    ಪ್ರತ್ಯುತ್ತರಅಳಿಸಿ
  2. ಉತ್ತಮ ವಿಚಾರಗಳನ್ನೊಳಗೊಂಡ ಲೇಖನ. ಇಲ್ಲಿ ಪ್ರಸ್ತಾಪಿಸಿರುವ ಮಂತ್ರಿ ಲಿಂಗಣ್ಣ ಮತ್ತು ಕವಿ ಲಿಂಗಣ್ಣ ಬೇರೆ ಬೇರೆ ಎಂದು ಭಾವಿಸುವೆ. ಹಾಗಿದ್ದರೆ, ಈ ಹಿಂದೆ ಒಬ್ಬರು ಮಂತ್ರಿ ಲಿಂಗಣ್ಣನನ್ನೇ ಕವಿ ಲಿಂಗಣ್ಣ ಎಂದು ಭಾವಿಸಿ ಟಿಪ್ಪಣಿ ಮಾಡಿದ್ದು ನಿನಗೆ ನೆನಪಿರಬಹುದು. ಒಂದು ಸಮಗ್ರ ಲೇಖನವನ್ನು ಮುಂದಿನ ಕವಿಕಿರಣ ಪತ್ರಿಕೆಯಲ್ಲಿ ಪ್ರಕಟಿಸಲು ಪರಿಗಣಿಸಬಹುದು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಜ ಸುರೇಶ. ಕವಿಲಿಂಗಣ್ಣನೇ ಬೇರೆ, ಮಂತ್ರಿ ಲಿಂಗಣ್ಣನೇ ಬೇರೆ. ಲಿಂಗಣ್ಣಕವಿಯ ಕಾವ್ಯದಲ್ಲಿ ಬಸವಲಿಂಗಪ್ಪನೆಂಬ ಮಂತ್ರಿಯ ಉಲ್ಲೇಖ ಬರುತ್ತದೆ. ಚೆನ್ನಬಸವನಾಯಕನ ಅಂತ್ಯದ ನಂತರದಲ್ಲಿ ವೀರಮ್ಮಾಜಿ ಆಡಳಿತವನ್ನು ವಹಿಸಿಕೊಂಡ ಸಂದರ್ಭದಲ್ಲಿ ಬಸವಲಿಂಗಪ್ಪ ರಾಜದ್ರೋಹದ ಕೆಲಸ ಮಾಡಿದ್ದರಿಂದ ಆತನನ್ನು ಮಂತ್ರಿಪದವಿಯಿಂದ ತೆಗೆದು ಶಿವಲಿಂಗಪ್ಪನನ್ನು ಮುಖ್ಯಾಧಿಕಾರಿಯಾಗಿ ನೇಮಿಸಿಕೊಂಡಿದ್ದಳು. ಕುಂಸಿಯ ಸೆರೆಮನೆಯಲ್ಲಿದ್ದ ವ್ಯಕ್ತಿ ಮೂಡಬಿದರೆಯ ಲಿಂಗಪ್ಪನಲ್ಲದೆ,ರಾಜದ್ರೋಹಿ ಬಸವಲಿಂಗಪ್ಪನೇ ಇರಬಹುದು. ಬಸವಲಿಂಗಪ್ಪನನ್ನೂ ಲಿಂಗಪ್ಪನೆಂದೇ ಸಂಬೋಧಿಸಲಾಗುತ್ತಿದ್ದರಿಂದ ಲೇಖನದಲ್ಲಿ ಲಿಂಗಪ್ಪನೆಂದು ಉಲ್ಲೇಖಿಸಿದೆ.

      ಅಳಿಸಿ
  3. good article sir. thank you. just wondering as to why these facts are not brought about in the History which we studied in our school ? why do we give more importance to French, Russian revolutions etc and ignore history of our own people ? obviously these invaders, Haider, British etc would not have become so powerful if we were united and if our own people had not helped these outsiders for selfish interest.

    ಪ್ರತ್ಯುತ್ತರಅಳಿಸಿ