ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಆಗಸ್ಟ್ 24, 2014

ಮಾತನಾಡಿದ ಶವಗಳು - 1

     ಸುಮಾರು ೧೪ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಕೊಣನೂರಿನ ಸಬ್‌ಇನ್ಸ್‌ಪೆಕ್ಟರರಿಂದ ಫೋನು ಬಂದಿತು. ಹಿಂದಿನ ದಿನ ಕೇರಳಾಪುರದಲ್ಲಿ ಒಬ್ಬ ಹೆಣ್ಣುಮಗಳು ನೇಣು ಹಾಕಿಕೊಂಡು ಸತ್ತಿದ್ದಾಳೆಂದೂ, ಕೂಡಲೇ ಬಂದು ಶವತನಿಖೆ ನಡೆಸಿಕೊಡಬೇಕೆಂದೂ ಅವರು ಕೋರಿದ್ದರು. ಸರಿ, ಭಾನುವಾರದ ಕಥೆ ಮುಗಿಯಿತು ಎಂದು ಅಂದುಕೊಂಡು ಬಟ್ಟೆ ಹಾಕಿಕೊಂಡು ಜೀಪಿಗೆ ಕರೆಕಳುಹಿಸಿದೆ. ಗುಮಾಸ್ತರೊಬ್ಬರನ್ನು ಜೊತೆಗೆ ಕರೆದುಕೊಂಡು ಕೇರಳಾಪುರ ತಲುಪಿದಾಗ ಅಲ್ಲಿನ ಒಂದು ಮನೆಯ ಮುಂದೆ ಜನರ ದೊಡ್ಡ ಗುಂಪು ಕೂಡಿತ್ತು. ಪೋಲಿಸರು ಜನರನ್ನು ನಿಯಂತ್ರಿಸುತ್ತಿದ್ದರು. ನಾನು ಜೀಪಿನಿಂದ ಇಳಿದ ತಕ್ಷಣ ಜನರ ಗುಂಪು 'ಸಾಹೇಬರು ಬಂದರು' ಎನ್ನುತ್ತಾ ಅಕ್ಕ ಪಕ್ಕ ಸರಿದು ನನಗೆ ಮನೆಯ ಒಳಗೆ ಹೋಗಲು ದಾರಿ ಮಾಡಿಕೊಟ್ಟರು. ನಾನು ಮನೆಯ ಒಳಗೆ ಹೋದಾಗ ನನ್ನ ಹಿಂದೆ ಒಬ್ಬ ಪೋಲಿಸ್ ಪೇದೆ, ಗುಮಾಸ್ತ ಮತ್ತು ಒಬ್ಬ ಫೋಟೋಗ್ರಾಫರ್ ಬಂದರು. ನಾನು ಮನೆಯ ಒಳ ಕೊಠಡಿಗೆ ಹೋಗುತ್ತಾ ಬಾಗಿಲ ಪಕ್ಕದಲ್ಲಿ ನಿಂತಿದ್ದ ಒಬ್ಬ ಹೆಂಗಸಿಗೆ 'ಎಲ್ಲಮ್ಮಾ?' ಎನ್ನುತ್ತಾ ಎರಡು ಹೆಜ್ಜೆ ಮುಂದಿಟ್ಟವನು ಗಕ್ಕನೆ ನಿಂತು ಹಿಂತಿರುಗಿದೆ. ನಾನು ಯಾರನ್ನು ವಿಚಾರಿಸಿ ಮುಂದೆ ಹೋಗಿದ್ದೆನೋ ಅದೇ ಹೆಣವಾಗಿತ್ತು. ಮನೆಯಲ್ಲಿ ನೀರವ ಮೌನ ಆವರಿಸಿತ್ತು.
     ವಿಷಯ ಮುಂದುವರೆಸುವ ಮುನ್ನ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರುವುದು ಅಗತ್ಯವಾಗಿದೆ. ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಮ್ಯಾಜಿಸ್ಟ್ರೇಟರು ಮತ್ತು ಮೇಲ್ಪಟ್ಟ ಅಧಿಕಾರಿಂದ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರು ಮುಂದಿನ ವಿವರವಾದ ತನಿಖೆ ನಡೆಸಿ ಮುಂದುವರೆಯುತ್ತಾರೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳನ್ನು ಯಾರ ಗಮನಕ್ಕೂ ಬರದಂತೆ ಮುಚ್ಚಿಹಾಕುವುದು, ಹಣದ ವಿನಿಮಯ, ರಾಜಕಾರಣಿಗಳ ಮಧ್ಯಪ್ರವೇಶದಿಂದ ರಾಜಿ ಮಾಡಿಕೊಂಡು ಬಿಡುವುದು, ಇತ್ಯಾದಿಗಳೂ ನಡೆಯುತ್ತವೆ. ಕೆಲವು ವೈದ್ಯರುಗಳೂ ಸಹ ಹಣದ ಪ್ರಭಾವದಿಂದ ಸುಳ್ಳು ಪೋಸ್ಟ್ ಮಾರ್ಟಮ್ ವರದಿ ಕೊಟ್ಟ ಪ್ರಕರಣಗಳೂ ಇಲ್ಲವೆನ್ನಲಾಗುವುದಿಲ್ಲ. ಪ್ರಕರಣ ಮುಚ್ಚಿಹಾಕಲು ಕೆಲವು ಪ್ರಕರಣಗಳಲ್ಲಿ ಪೋಲಿಸರ ಸಹಕಾರ ಸಹ ಇಲ್ಲವೆಂದು ಹೇಳಲಾಗುವುದಿಲ್ಲ. ಮುಖ್ಯವಾಗಿ ಪ್ರಕರಣ ಮುಚ್ಚಿಹಾಕುವಂತಹ ಪ್ರಸಂಗದಲ್ಲಿ ಪ್ರಮುಖ ಪಾತ್ರ ವಹಿಸುವುದು ರಾಜಕಾರಣ ಮತ್ತು ಹಣ ಎಂಬುದಂತೂ ಗೊತ್ತಿರುವ ಸತ್ಯ. ಈಗ ಇಷ್ಟು ಮಾಹಿತಿ ಸಾಕು. ಮೂಲ ವಿಷಯ ಮುಂದುವರೆಸುವೆ.
     ಎಲ್ಲರ ಗಮನ ನನ್ನ ಮೇಲಿತ್ತು. ನಾನು ಶವವನ್ನು, ಶವವಿದ್ದ ಸ್ಥಿತಿಯನ್ನು ಗಮನಿಸಿದೆ. ಬಾಗಿಲಿನ ಪಕ್ಕದಲ್ಲಿದ್ದ ತೊಲೆಯಿಂದ ಪ್ಲಾಸ್ಟಿಕ್ ಹಗ್ಗದಲ್ಲಿ ನೇತಾಡುತ್ತಿದ್ದ ಶವದ ಕಾಲುಗಳು ಮುಂಚಾಚಿ ಇನ್ನೇನು ನೆಲವನ್ನು ಸೋಕುವಂತಿತ್ತು. ನೇಣು ಹಾಕಿಕೊಳ್ಳುವವರು ಅಷ್ಟು ಕಡಿಮೆ ಎತ್ತರದಿಂದ ನೇಣು ಹಾಕಿಕೊಳ್ಳಲಾರರು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಅಲ್ಲದೆ ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಸೀರೆ ಮುಂತಾದುವನ್ನು ಬಳಸಬಹುದೇ ಹೊರತು ಪ್ಲಾಸ್ಟಿಕ್ ಹಗ್ಗ ಬಳಸುವುದು ಕಡಿಮೆ. ನಾನು ಪರೀಕ್ಷಿಸಲು ಅನುಕೂಲವಾಗುವಂತೆ ಪೋಲಿಸ್ ಪೇದೆ ಶವವನ್ನು ಪಕ್ಕಕ್ಕೆ ಸರಿಸಿದ್ದರಿಂದ ಅಲ್ಲಾಡುತ್ತಿದ್ದ ಶವ 'ನೀವಂದುಕೊಂಡಿರುವುದು ಸರಿ' ಎಂದು ಹೇಳುವಂತಿತ್ತು. ಶವದ ನಾಲಿಗೆ ಹೊರಚಾಚಿದ್ದು ಹಲ್ಲುಗಳಿಂದ ಕಚ್ಚಿಕೊಂಡಿದ್ದು, ಬಾಯಿಂದ ನೊದ್ಲೆ ಹೊರಬಂದಿತ್ತು. ತೊಲೆಯಿಂದ ನೆಲಕ್ಕೆ ಇದ್ದ ಅಂತರ ಸುಮಾರು ೭ ಅಡಿ ಇತ್ತು. ಹೆಣದ ಕುತ್ತಿಗೆಯ ಗಂಟಿಗೂ ತೊಲೆಗೂ ಇದ್ದ ಅಂತರ ಸುಮಾರು ಎರಡೂವರೆ ಅಡಿ ಇದ್ದು, ಕೆಳಗಿನ ಪಾದಕ್ಕೂ ನೆಲಕ್ಕೂ ಇದ್ದ ಅಂತರ ಸುಮಾರು ಒಂದೂವರೆ ಇಂಚು ಇತ್ತು. ತೊಲೆಗೆ ಮೂರು ಎಳೆಯಲ್ಲಿ ಸುತ್ತಿ ಹಗ್ಗವನ್ನು ಗಂಟು ಹಾಕಲಾಗಿತ್ತು. ಶವದ ಕುತ್ತಿಗೆಯಲ್ಲಿದ್ದ ಹಗ್ಗವೂ ಮೂರು ಎಳೆಯಿಂದ ಸುತ್ತಿ ಗಂಟು ಹಾಕಿದ್ದಾಗಿತ್ತು. ಆ ಸ್ಥಿತಿಯಲ್ಲಿ ಕೆಲವು ಫೋಟೋಗಳನ್ನು ಸ್ಥಳೀಯ ಫೋಟೋಗ್ರಾಫರನ ಸಹಾಯದಿಂದ ತೆಗೆಸಿದೆ. ಹೆಣದ ಫೋಟೋ ತೆಗೆಯಲು ಹೆದರುತ್ತಿದ್ದ ಅವನಿಗೆ ಗದರಿಸಿ ಧೈರ್ಯ ಹೇಳಬೇಕಾಯಿತು. ನಂತರದಲ್ಲಿ ಹೆಣವನ್ನು ಕೆಳಗೆ ಇಳಿಸಿ ಒಂದು ಚಾಪೆಯ ಮೇಲೆ ಮಲಗಿಸಿ ಹಲವು ಕೋನಗಳಿಂದ ಫೋಟೋ ತೆಗೆಸಿದೆ. ಕುತೂಹಲದಿಂದ ಗುಂಪು ಕೂಡಿದ್ದ ಜನರನ್ನು ಹೊರಕಳುಹಿಸಿ ಒಬ್ಬರು ಹೆಂಗಸನ್ನು ಕರೆಸಿ ಶವದ ಬಟ್ಟೆ ಸರಿಸಿಸಿ ದೇಹದಲ್ಲಿ ಏನಾದರೂ ಗಾಯಗಳಾಗಿವೆಯೇ, ಗಮನಿಸುವಂತಹ ಅಸಹಜ ಸಂಗತಿಗಳಿವೆಯೇ ಎಂಬುದನ್ನು ನೋಡಿದೆ. ಅದು ನನ್ನ ಕರ್ತವ್ಯವಾಗಿತ್ತು. ಕುತ್ತಿಗೆಯ ಬಲಭಾಗದಿಂದ ಗಂಟಲವರೆಗೆ ಸುಮಾರು ೧೦ ಇಂಚು ಉದ್ದ, ಅರ್ಧ ಇಂಚು ಆಳ ಕೊರೆದಿರುವ ಲಿಗೇಚರ್ ಮಾರ್ಕು ಇತ್ತು. ಕುತ್ತಿಗೆಯ ಎಡಭಾಗದಲ್ಲೂ ಸುಮಾರು ೯ ಇಂಚು ಉದ್ದ, ಅರ್ಧ ಇಂಚು ಆಳದ ಕೊರೆದ ಗುರುತು ಇತ್ತು. ಎರಡು ಕೈಗಳೂ ದೇಹಕ್ಕೆ ಅಂಟಿಕೊಂಡಂತೆ ಇದ್ದು ನೀಳವಾಗಿದ್ದವು. ಮರ್ಮಸ್ಥಾನಗಳಿಂದ ತ್ಯಾಜ್ಯ ಹೊರಬಂದಿರಲಿಲ್ಲ. ಬಲಗೈಯಲ್ಲಿ ಒಂದು ಕೇಸರಿ ಬಣ್ಣದ ಗಾಜಿನ ಬಳೆಯಿತ್ತು. ಘಟನೆ ನಡೆದ ಸ್ಥಳಸಹಿತ ಪೂರ್ಣ ಮನೆಯ ಸ್ಥಿತಿ ಗಮನಿಸಿದೆ. ಮುಂಭಾಗದ ಕೊಠಡಿಯಲ್ಲಿ ಒಂದೆರಡು ಕೇಸರಿ ಬಳೆಗಳ ಚೂರುಗಳಿದ್ದುದನ್ನು ಗಮನಿಸಿದೆ. ಮೃತೆ ಸುಮಾರು ೨೨ ವರ್ಷದವಳಾಗಿದ್ದು ಮದುವೆಯಾಗಿ ಕೇವಲ ೯ ತಿಂಗಳಾಗಿತ್ತು. ಮದುವೆಗೆ ಮುನ್ನ ಆಗಿದ್ದ ಮಾತುಕತೆಯಂತೆ ಹುಡುಗಿಯ ಮನೆಯವರು ೧೦೦ ಗ್ರಾಮ್ ಚಿನ್ನ ಮತ್ತು ರೂ. ೧,೦೦,೦೦೦/- ನಗದು ಕೊಡಬೇಕಾಗಿದ್ದು, ಅವರು ೧೦೦ ಗ್ರಾಮ್ ಚಿನ್ನ ಮತ್ತು ೭೫೦೦೦/- ಹಣ ಕೊಟ್ಟಿದ್ದರಂತೆ. ಉಳಿದ ರೂ. ೨೫೦೦೦/- ಕೊಡಲು ಒತ್ತಾಯಿಸಿ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರಂತೆ. ಮೃತಳ ತಾಯಿ, ತಮ್ಮರೂ ಸೇರಿದಂತೆ ಕೆಲವರ ಹೇಳಿಕೆ ಪಡೆದೆ. ಪಂಚರ ಸಮಕ್ಷಮದಲ್ಲಿ ವಿವರವಾದ ಶವತನಿಖಾ ವರದಿ ಬರೆಸಿದೆ. ಅಗತ್ಯದ ಇತರ ನಿಗದಿತ ನಮೂನೆಗಳಲ್ಲಿ ಮಾಹಿತಿ ಸಿದ್ಧಪಡಿಸಿ, ಶವಪರೀಕ್ಷೆ ನಡೆಸಿ ವರದಿ ಕೊಡಲು ಕೇರಳಾಪುರದ ಸರ್ಕಾರೀ ವೈದ್ಯಾಧಿಕಾರಿಗೆ ಸೂಚಿಸಿದೆ. ಮುಂದಿನ ತನಿಖೆ ನಡೆಸಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿ, ಶವತನಿಖಾ ವರದಿಯನ್ನು ನನ್ನ ಅನಿಸಿಕೆಯೊಂದಿಗೆ ಜ್ಯುಡಿಶಿಯಲ್ ನ್ಯಾಯಾಧೀಶರಿಗೆ ಕಳಿಸಿದೆ.
     ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬವಾದಷ್ಟೂ ನ್ಯಾಯಕ್ಕೆ ಅನ್ಯಾಯವಾಗುತ್ತದೆ ಎಂಬುದು ಸತ್ಯ. ವಿಳಂಬಕ್ಕೆ ನಾನಾ ಕಾರಣಗಳಿರುತ್ತವೆ. ಈ ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳ ನಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನನಗೆ ಸಾಕ್ಷಿ ಹೇಳಲು ಸಮನ್ಸ್ ಬಂದಿತ್ತು. ಸಾಕ್ಷಿ ಹೇಳಿಕೆ ಕೊಟ್ಟಿದ್ದೆ. ಸರ್ಕಾರಿ ವಕೀಲರು ಖಾಸಗಿಯಾಗಿ ನನಗೆ ದೂರು ಅರ್ಜಿದಾರರು ಮತ್ತು ಆರೋಪಿಗಳು ರಾಜಿಯಾಗಿದ್ದಾರೆಂದು ಹೇಳಿ, ಆರೋಪಿಗಳು ಆರೋಪದಿಂದ ಮುಕ್ತರಾಗಿ ಹೊರಬರಬಹುದೆಂದೂ ತಿಳಿಸಿದ್ದರು. ಕೊನೆಯಲ್ಲಿ ನ್ಯಾಯಾಲಯದ ತೀರ್ಪು ಏನಾಯಿತು ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ.
     ಸುಮಾರು ಎಂಟು ವರ್ಷಗಳ ಹಿಂದಿನ ಸಂಗತಿಯಿದು. ಆಗ ನಾನು ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದೆ. ಒಂದು ಅನುಕೂಲಸ್ಥ ಕುಟುಂಬದ ನಿರುದ್ಯೋಗಿ ಯುವಕನಿಗೆ ಆತನ ಮನೆಯ ಶ್ರೀಮಂತಿಕೆ ಕಂಡು ಮಗಳು ಸುಖವಾಗಿರುತ್ತಾಳೆಂದು ಭಾವಿಸಿ ಹೆತ್ತವರು ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಜಮೀನು ಇತ್ತು, ಹುಡುಗನ ಅಣ್ಣಂದಿರು ಉತ್ತಮವಾದ ಸರ್ಕಾರಿ ಹುದ್ದೆಗಳಲ್ಲಿದ್ದರು. ಐಬೆಂದರೆ ಮದುವೆಯಾದ ಹುಡುಗ ಮಾತ್ರ ಉಡಾಳನಾಗಿ ಜವಾಬ್ದಾರಿಯಿಲ್ಲದವನಾಗಿದ್ದ. ಮದುವೆಯಾದರೆ ಸರಿಯಾಗುತ್ತಾನೆಂದು ಮದುವೆ ಮಾಡಿದ್ದರು. ಕೆಲವು ತಿಂಗಳುಗಳು ಎಲ್ಲವೂ ಚೆನ್ನಾಗಿ ನಡೆದಿತ್ತು. ನಂತರದಲ್ಲಿ ಆ ಹುಡುಗಿಯನ್ನು ಎಲ್ಲರೂ ತಾತ್ಸಾರದಿಂದ ನೋಡತೊಡಗಿದ್ದರು. ಬೇಜವಾಬ್ದಾರಿ ಗಂಡನ ಹೆಂಡತಿಯಾಗಿ ಆಕೆ ಮನೆಯಲ್ಲಿ ಜೀತದಾಳಿನಂತೆ ದುಡಿಯಬೇಕಾಯಿತು. ಗಂಡನಿಗೆ ಏನಾದರೂ ಕೆಲಸ ಹುಡುಕಿಕೊಳ್ಳಿ ಎಂದು ಆಕೆಯ ಒತ್ತಾಯ ಹೆಚ್ಚಿದಾಗ ಕೆಲಸ ಹುಡುಕುವ ಸಲುವಾಗಿ ಹೆಂಡತಿಯನ್ನೂ ಕರೆದುಕೊಂಡು ಮೈಸೂರಿನಲ್ಲಿದ್ದ ಒಬ್ಬ ಅಣ್ಣನ ಮನೆಗೆ ಹೋಗಿ ಸ್ವಲ್ಪ ಸಮಯ ಇದ್ದ. ಅಲ್ಲಿಯೂ ಅವಳನ್ನು ಕಸಮುಸುರೆ ಮಾಡಲು ಬಳಸಿಕೊಂಡು ಹೀನಾಯವಾಗಿ ನಡೆಸಿಕೊಂಡರು. ಸರಿ, ಅಲ್ಲಿಂದ ಬೆಂಗಳೂರಿನಲ್ಲಿ ಕಾಲೇಜು ಲೆಕ್ಚರರ್ ಆಗಿದ್ದ ಇನ್ನೊಬ್ಬ ಅಣ್ಣನ ಮನೆಗೆ ಹೋದರೆ ಅಲ್ಲಿಯೂ ಅದೇ ಕಥೆಯ ಪುನರಾವರ್ತನೆ. ಉಡಾಳನಾದರೋ ಕೆಲಸ ಹುಡುಕುವ ನಾಟಕ ಮಾಡುತ್ತಿದ್ದು, ಅಣ್ಣನ ಮನೆಯಲ್ಲಿ ಕವಳ ಕತ್ತರಿಸುತ್ತಿದ್ದ. ಹಿಂಸೆ ತಾಳಲಾರದೆ ಹುಡುಗಿ ಪ್ರತಿಭಟಿಸಿದಾಗ ಲೆಕ್ಚರರ್ ಮತ್ತು ಅವನ ಹೆಂಡತಿ ಮನಬಂದಂತೆ ಥಳಿಸಿದರೂ ಗಂಡ ಎನಿಸಿಕೊಂಡವನು ಸುಮ್ಮನಿದ್ದುದಲ್ಲದೆ ಅವನೂ ಅವರ ಜೊತೆ ಅವಳನ್ನು ದಂಡಿಸಲು ಪಾಲುಗೊಂಡ. ಎಲ್ಲರೂ ಸೇರಿ ಯಾವ ರೀತಿ ಹಿಂಸೆ ಕೊಟ್ಟರೆಂದರೆ ಆ ಹುಡುಗಿ ಸತ್ತೇಹೋದಳು. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳೆಂದು ನೆಂಟರಿಷ್ಟರಿಗೆ ಸುದ್ದಿ ಕೊಟ್ಟು, ಅವರು ಬರುವಷ್ಟರ ಒಳಗೆ ಅವಳ ದೇಹವನ್ನು ಬೆಂಗಳೂರಿನಿಂದ ಸುಮಾರು ೨೦೦ ಕಿ.ಮೀ. ದೂರದ ಹಳ್ಳಿಗೆ ಮಾರುತಿ ವ್ಯಾನಿನಲ್ಲಿ ತಂದು ಜಮೀನಿನಲ್ಲಿ ದಫನ್ ಮಾಡಲು ಸಿದ್ದತೆ ನಡೆಸಿದ್ದರು. ಹುಡುಗಿಯ ಬಂಧುಗಳು ಅಲ್ಲಿಗೂ ಧಾವಿಸಿ ಸಕಾಲದಲ್ಲಿ ತಡೆದಿದ್ದರಿಂದ ಪೋಲಿಸ್ ಕೇಸು ಆಯಿತು. ಆ ಹಳ್ಳಿ ನಾನು ಕೆಲಸ ಮಾಡುತ್ತಿದ್ದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತಿದ್ದರಿಂದ ಪೋಲಿಸ್ ಕೋರಿಕೆಯ ಮೇರೆಗೆ ಶವತನಿಖೆ ನಡೆಸಿದೆ. ಮೇಲುನೋಟಕ್ಕೆ ದೈಹಿಕ ಹಿಂಸೆಯಿಂದ ಸಾವನ್ನಪ್ಪಿದ್ದುದು ಗೊತ್ತಾಗುತ್ತಿತ್ತು. ದೇಹದ ಮೇಲಿದ್ದ ಗಾಯದ ಗುರುತುಗಳು, ಎಳೆದಾಡಿದ ತರಚು ಗೀರುಗಳು, ಬಾಸುಂಡೆಯ ಗುರುತುಗಳು, ಅಲ್ಲಲ್ಲಿ ಹೆಪ್ಪುಗಟ್ಟಿದ ರಕ್ತ, ಊದಿದ ಕೆನ್ನೆ, ಇತ್ಯಾದಿ ಕಂಡು ಸಾಯುವ ಮುನ್ನ ಆಕೆ ಅನುಭವಿಸಿರಬಹುದಾದ ಹಿಂಸೆಯನ್ನು ನೆನೆದು ನನ್ನ ಕಣ್ಣಿನಲ್ಲಿ ನೀರೂರಿತ್ತು. ವರದಿಯಲ್ಲಿ ಗಮನಿಸಿದ್ದೆಲ್ಲವನ್ನೂ ದಾಖಲಿಸಿದೆ. ಸಂಬಂಧಿಗಳ ಹೇಳಿಕೆಗಳನ್ನು ಪಡೆದೆ. ಮುಂದೊಮ್ಮೆ ಬೆಂಗಳೂರಿನ ತ್ವರಿತಗತಿ ಸೆಷನ್ಸ್ ನ್ಯಾಯಾಲಯದಲ್ಲೂ ಸಾಕ್ಷ್ಯ ನುಡಿದಿದ್ದೆ. ಸಾಕ್ಷ್ಯ ನುಡಿಯುವ ಮುನ್ನ ಸರ್ಕಾರಿ ಪ್ರಾಸಿಕ್ಯೂಟರ್ ಜೊತೆಗೆ ಚರ್ಚಿಸಿದ ಸಂದರ್ಭದಲ್ಲಿ ಅವರು 'ಪಾಪ, ಕಾಲೇಜು ಲೆಕ್ಚರರ್ ಮತ್ತು ಅವರ ಮನೆಯವರು, ಗಂಡ ಎರಡು ವರ್ಷದಿಂದ ಸುಮ್ಮನೆ ಜೈಲಿನಲ್ಲಿದ್ದಾರೆ. ದುಡ್ಡಿನ ಆಸೆಗೆ ಹುಡುಗಿಯ ತಂದೆ ಗೋಳಾಡಿಸುತ್ತಿದ್ದಾರೆ' ಎಂದಾಗ ಕೇಸು ಯಾವ ಹಾದಿ ಹಿಡಿದಿತ್ತೆಂದು ನನಗೆ ಗೊತ್ತಾಗಿತ್ತು. ನಂತರದಲ್ಲಿ ಏನಾಯಿತು ಎಂಬುದು ನನಗೆ ತಿಳಿಯಲಿಲ್ಲ. "ಹೆತ್ತಪ್ಪ-ಅಮ್ಮದಿರಾ, ನಿಮ್ಮ ಕುಡಿಯನ್ನು ಹಣಕ್ಕಾಗಿ ಬಾಯಿ ಬಿಡುವವರಿಗೆ ಕೊಡಬೇಡಿ, ಶ್ರೀಮಂತರ ಮನೆಯೆಂದು ಉಡಾಳರಿಗೆ ಒಪ್ಪಿಸಿಬಿಡಬೇಡಿ, ನಮ್ಮಂತಹವರನ್ನು ನೋಡಿಯಾದರೂ ಬುದ್ದಿ ಕಲಿಯದಿದ್ದರೆ ನಮ್ಮಂತಹ ಇನ್ನಷ್ಟು ಜೀವಗಳು ಬಲಿಯಾದಾವು" ಎಂಬುದು ಮೃತರ ಮೌನ ಸಂದೇಶವಾಗಿದೆ.
     ನನ್ನ ಸೇವಾವಧಿಯಲ್ಲಿ ಇಂತಹ ಸುಮಾರು ೭೦-೮೦ ಶವತನಿಖೆಗಳನ್ನು ಮಾಡಿದ್ದೇನೆ. ಆ ಶವಗಳು ಹೇಳಿದ ದಾರುಣ ಕಥೆಗಳಿಗೆ ಕಿವಿ ಕೊಟ್ಟಿದ್ದೇನೆ, ಅನುಭವಿಸಿದ ನೋವುಗಳನ್ನು, ಯಾತನೆಗಳನ್ನು ವಿವರಿಸಿದಾಗ ಮರುಗಿ ಒಳಗೇ ಕಣ್ಣೀರು ಹಾಕಿದ್ದೇನೆ. ನನ್ನ ಮಿತಿಯಲ್ಲಿ ಅವು ಹೇಳಿದ ಸಂಗತಿಗಳನ್ನು ದಾಖಲಿಸಿಕೊಂಡು, ನನ್ನ ಕೈಲಾದಷ್ಟು ನ್ಯಾಯ ಒದಗಿಸಲು ಪ್ರಯತ್ನಿಸುವೆನೆಂದು ಆಶ್ವಾಸನೆ ಕೊಟ್ಟಿದ್ದೇನೆ. ಪೋಲಿಸರಿಗೂ ನ್ಯಾಯಯುತವಾಗಿ ತನಿಖೆ ಮುಂದುವರೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ತಿಳಿಸಿದ್ದೇನೆಂದು ಹೇಳಿದ್ದೇನೆ. ಹಾಗೂ ಅವರುಗಳಿಗೆ ನ್ಯಾಯ ಸಿಗದಿದ್ದರೆ ಅದರಲ್ಲಿ ನನ್ನ ಪಾತ್ರವಿರುವುದಿಲ್ಲವೆಂದೂ ಒಪ್ಪಿಸಿದ್ದೇನೆ. ಶವತನಿಖೆಗಳನ್ನು ನಡೆಸಿದ ಸಂದರ್ಭಗಳಲ್ಲಿ ದಾರುಣ ಅಂತ್ಯವನ್ನು ಕಣ್ಣಾರೆ ಕಂಡು ಕೆಲವು ದಿನಗಳು ಸರಿಯಾಗಿ ಊಟ, ತಿಂಡಿ ಮಾಡಲಾಗದೆ ಇದ್ದುದೂ ಇದೆ. ನೊಂದ ಜೀವಗಳೇ, ನಿಮ್ಮೆಲ್ಲರ ನೆನಪಾಗಿ ಕಣ್ಣು ತೇವವಾಗಿವೆ. ಅಗಲಿದ ಆತ್ಮಗಳೇ, ನಿಮ್ಮನ್ನು ನೆನೆಸಿಕೊಂಡು, ನಿಮಗೆ ಸದ್ಗತಿ ಕೋರುವ ಸಲುವಾಗಿ ಈ ಕೆಲವು ಸಾಲುಗಳನ್ನು ಬರೆದಿರುವೆ.
-ಕ.ವೆಂ.ನಾಗರಾಜ್.
**************
27.8.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

7 ಕಾಮೆಂಟ್‌ಗಳು:

  1. ಯಾಕೋ ಈ ಸಾವು ನ್ಯಾಯವೇ ಅನಿಸಿತು. ಮಾನವ ಮೃಗಗಳ ಕ್ರೂರತೆಗೆ ಈ ಆತ್ಮಹತ್ಯಾ ಪ್ರಕರಣವು ಕನ್ನಡಿಯಂತಿದೆ.

    ಘಟನೆಯ ಎಳೆ ಎಳೆಯನ್ನೂ ನೆನಪಿನಂಗಳದಿಂದ ಬಿಚ್ಚಿಡುವ ನಿಮ್ಮ ಅನನ್ಯ ಶೈಲಿ ಮತ್ತು ಹಲವು ಕೋನಗಳಿಂದ ವಿಮರ್ಷಿಸುವ ಪರಿಪೂರ್ಣತೆ ನೆಚ್ಚಿಗೆಯಾದವು.

    ಮುಂದುವರೆಸಿರಿ...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಆತ್ಮೀಯ ಬದರೀನಾಥರೇ, ನನ್ನ ಅನಿಸಿಕೆಯಂತೆ ಲೇಖನದಲ್ಲಿ ಉಲ್ಲೇಖಿತ ಪ್ರಕರಣಗಳು ಕೊಲೆಯಾಗಿದ್ದವು, ಆತ್ಮಹತ್ಯೆಗಳಾಗಿರಲಿಲ್ಲ. ತಮ್ಮ ಪ್ರತಿಕ್ರಿಯೆ ಮುದ ನೀಡಿ ಪ್ರೋತ್ಸಾಹಿಸುವಂತಹದು. ಧನ್ಯವಾದಗಳು.

      ಅಳಿಸಿ
    2. nageshamysore
      ಸತ್ತವರೆ ನಿಜವಾಗಿಯೂ ಎದ್ದು ಬಂದು ಸಾಕ್ಷ್ಯ ನುಡಿದರೂ ಅದನ್ನು ಬುಡಮೇಲಾಗಿಸುವ ತರ್ಕದ ಮೇಧಾವಿತನವನ್ನು ಹೇಗೊ ಸಾಕ್ಷಾತ್ಕರಿಸಿಕೊಳ್ಳುವ ಹಣ ಮತ್ತು ಅಧಿಕಾರದ ಪ್ರಭಾವ ಇರುವತನಕ ಎಷ್ಟು ಜನಕ್ಕೆ ನಿಜವಾಗಿಯೂ ನ್ಯಾಯ ಸಿಗುವುದೊ ಹೇಳಲಾಗದು. ಆದರೆ ನೀವು ಅವರ ಗೋಳಿನ ಕಥಾನಕವನ್ನು ಬರಹಕ್ಕಿಳಿಸಿದ ರೀತಿ ಮಾತ್ರ ಮನನೀಯ. ಧನ್ಯವಾದಗಳು ಕವಿಗಳೆ.

      kavinagaraj
      ಸುಳ್ಳಿಗೆ ಸಿಗುವ ಮನ್ನಣೆ ಸತ್ಯಕ್ಕೆ ಸಿಗುವಂತಾದಾಗ ಮಾತ್ರ ಬದಲಾವಣೆ ಸಾಧ್ಯ. ವಂದನೆಗಳು, ನಾಗೇಶರೇ.

      H A Patil
      ಕವಿ ನಾಗರಾಜ ರವರಿಗೆ ವಂದನೆಗಳು
      'ಮಾತನಾಡಿದ ಶವಗಳು' ಲೇಖನ ಮಾಲೆಯ ಪ್ರಾರಂಭ ಚೆನ್ನಾಗಿದೆ, ನೀವು ಒಬ್ಬ ತಾಲೂಕು ದಂಡಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವುದರಿಂದ ಲೇಖನ ಸತ್ಯವಾಗಿ ಮತ್ತು ವಸ್ತುನಿಷ್ಟವಾಗಿ ಬರುತ್ತಿದೆ, ನಿಮ್ಮ ಅನುಭವದ ಗಣಿ ವಿಪುಲ ಜೊತೆಗೆ ಅನನ್ಯವಾದುದು, ಅದು ಸಂಪದಿಗರಿಗೆ ಓದಲು ದೊರೆಯುತ್ತಿರುವುದು ಸಂತಸ ತಂದಿದೆ, ಧನ್ಯವಾದಗಳು.

      kavinagaraj
      ಸಹೃದಯಿ ಪಾಟೀಲರಿಗೆ ವಂದನೆಗಳು.

      ಅಳಿಸಿ
    3. bhalle
      :-(((((((((((

      kavinagaraj
      :))

      ಗಣೇಶ
      >>>ನೊಂದ ಜೀವಗಳೇ, ನಿಮ್ಮೆಲ್ಲರ ನೆನಪಾಗಿ ಕಣ್ಣು ತೇವವಾಗಿವೆ. ಅಗಲಿದ ಆತ್ಮಗಳೇ, ನಿಮ್ಮನ್ನು ನೆನೆಸಿಕೊಂಡು, ನಿಮಗೆ ಸದ್ಗತಿ ಕೋರುವ ಸಲುವಾಗಿ ಈ ಕೆಲವು ಸಾಲುಗಳನ್ನು ಬರೆದಿರುವೆ.
      ಕವಿನಾಗರಾಜರೆ,
      ನಿಮ್ಮ ಕಳಕಳಿ, ಈ ಮಾತಿನ ಹಿಂದಿನ ನೋವು ಅಳೆಯಲಸಾಧ್ಯ..
      ನಮ್ಮ ನ್ಯಾಯಾಂಗ ವ್ಯವಸ್ಥೆ ಇನ್ನೂ ಓಬೀರಾಯನ ಕಾಲದಲ್ಲಿದೆ. ಆದ್ದರಿಂದಲೇ ಹಣವಂತರು, ರಾಜಕಾರಣಿಗಳು, ಅಧಿಕಾರಿಗಳು, ಗೂಂಡಾಗಳು ಕೊಬ್ಬಿರುವುದು. ನಿಮಿಷಗಳಲ್ಲಿ ಯಾವ ವರದಿಯನ್ನು ಬೇಕಾದರೂ ತರಿಸಬಹುದಾದ ಈ ಜೆಟ್ ಯುಗದಲ್ಲಿ, ಒಂದು ಸಣ್ಣ ಚಿಪ್‌ನಲ್ಲಿ ನೂರಾರು ಕೇಸುಗಳ ವರದಿಯನ್ನು ಸಂಗ್ರಹಿಸಿ ಬೇಕಾದುದನ್ನು ಕ್ಷಣದಲ್ಲಿ ತೆಗೆಯಬಹುದಾದ ಈ ಕಾಲದಲ್ಲಿ -ತೀರ್ಪು ಸಿಗಲು ವರ್ಷಗಳೇ ಕಳೆಯುವುದಲ್ಲಾ..ಇದು ನ್ಯಾಯವಾ?
      ಕೇಸು ಹೀಗೆ ವರ್ಷಗಟ್ಟಲೆ ಮುಂದುವರೆದು, ತನ್ನೆದುರೇ ಅನ್ಯಾಯ/ಕೊಲೆ/ವ್ಯಭಿಚಾರ ಮಾಡಿದಾತ ನಗುತ್ತಾ ಓಡಾಡುತ್ತಿರುವುದನ್ನು ನೋಡಿದವ- ಒಂದೋ ಈ ವ್ಯವಸ್ಥೆ ಬಗ್ಗೆ ರೇಜಿಗೆ ಬಂದು, ದೇವರೇ ಶಿಕ್ಷೆ ನೀಡಲಿ ಎಂದು ದೇವರಿಗೆ ಮೊರೆಹೋಗಬಹುದು, ಇಲ್ಲಾ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡಿಯಾನು.
      ತೀರ್ಪು ನ್ಯಾಯದ ಕಡೆ ಶೀಘ್ರ ಬಂದಲ್ಲಿ, ತಪ್ಪು ಮಾಡಲು ಭಯವೂ, ನ್ಯಾಯವಂತರಿಗೆ ಬಲವೂ ಸಿಗುವುದು. ಕೊಲೆ, ಹೊಡೆದಾಟಗಳು ಕಮ್ಮಿಯಾಗುವುದು. ಸದ್ಯಕ್ಕೆ ಇದು ಆಗುವಂತಹ ಮಾತಲ್ಲ.

      kavinagaraj
      ಆತ್ಮೀಯ ಗಣೇಶರಿಗೆ ವಂದನೆಗಳು. ಮುಂದೆ ಒಳ್ಳೆಯದಾಗುತ್ತದೆ ಎಂಬುದು ಸಾಮಾನ್ಯನ ನಿರೀಕ್ಷೆ. ಹಾಗಾಗಲಿ.

      ಅಳಿಸಿ
  2. ನಿಮ್ಮ ಪ್ರಾಮಾಣಿಕ ಕಳಕಳಿ ಮನಮುಟ್ಟುವಂತಿದೆ ಹಿರಿಯರೆ, ಮಾನವನ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಸಹಾಯಕ ಹೆಣ್ಣೊಬ್ಬಳನ್ನು ಮತ್ತೊಂದು ಹೆಣ್ಣು ಮುಂದೆ ನಿಂತು ಕೊಲ್ಲಿಸುವುದನ್ನು ಕಂಡಾಗ ಏನು ಹೇಳಬೇಕೆನ್ನುವುದೇ ತೋಚದಂತಾಗಿದೆ!

    ಪ್ರತ್ಯುತ್ತರಅಳಿಸಿ